ಕವನ ಮತ್ತು ಬದುಕು ಬದಲಿಸಿದ ಪುಸ್ತಕ.

ಆತ್ಮೀಯ ಓದುಗರೇ, 
ಈ ವಾರ ತಮ್ಮ ಓದಿಗೆ ಶ್ರೀಯುತ ವಿಜಯನರಸಿಂಹ ಅವರು ಶ್ರೀ ಶ್ರೀ ಸಿದ್ದಗಂಗಾ ಸ್ವಾಮೀಜಿ ಅವರ ಕುರಿತು ಬರೆದ ಕವಿತೆ ''ಸಿದ್ಧ ಪುರುಷ''.
ಮತ್ತು ಬದುಕು ಬದಲಿಸಿದ ಸರಣಿಗೆ ಅರ್ಪಿತಾ ಅಭಿರಾಮ ಅವರು ಇದೆ ಮೊದಲ ಬಾರಿಗೆ ಅನಿವಾಸಿಯಲ್ಲಿ ಬರೆದಿದ್ದಾರೆ. 
ಈವಾರದ ಎರಡೂ ಬರಹಗಳು ಚುಟುಕಾಗಿದ್ದರೂ ಚುರುಕಾಗಿವೆ. 
ಇದು ಅನಿವಾಸಿ ಸಂಪಾದಕಿಯಾಗಿ ನಾನು ನಿರೂಪಿಸುತ್ತಿರುವ ಕೊನೆಯ ಸಂಚಿಕೆ, ನನ್ನ ಸಂಪಾದಕತ್ವದ ಅವಧಿಯಲ್ಲಿ ಕಾಲಕಾಲಕ್ಕೆ ಅಕ್ಷರ ಬೊಕ್ಕಸಕ್ಕೆ ದೇಣಿಗೆ ಕಳಿಸಿ ಅಕ್ಷಯವಾಗಿಟ್ಟ ಎಲ್ಲ ಸಹೃದಯರಿಗೆ ಧನ್ಯವಾದಗಳು. ಮುಂದಿನ ವಾರದಿಂದ ಶ್ರೀಮತಿ ಗೌರಿ ಪ್ರಸನ್ನ ಅವರು ಅನಿವಾಸಿಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಆದರದ ಸ್ವಾಗತ. ಅವರ ಸಾರಥ್ಯದಲ್ಲಿ ಅನಿವಾಸಿಯ ಅಕ್ಷರತೇರು ಮೆರೆಯಲಿ ಎಂಬ ಸದಾಶಯದೊಂದಿಗೆ, ಈ ವಾರದ ಸಂಚಿಕೆಗೆ ತಮಗೆಲ್ಲ ಸ್ವಾಗತ. 
-ಸಂಪಾದಕಿ 

ಸಿದ್ಧ ಪುರುಷ

-ವಿಜಯನರಸಿಂಹ

ಹೆತ್ತ ಮಕ್ಕಳ ಹಸಿವನು ನೀಗಿಸಲು ಕಷ್ಟ 
ಎಂದರು ಹೆತ್ತವರು 

ನಮ್ಮ ಬಳಿ ಕಳಿಸಿ, ಅನ್ನದ ಅಕ್ಷಯವಿದೆ
ಎಂದು ಕೈಬೀಸಿ ಕರೆದರು 

ಅನ್ನಕ್ಕೆ ಸಾಕಾಗುತ್ತದೆ, ವಸನಕ್ಕೆ ಕಾಸಿಲ್ಲ
ಮಕ್ಕಳ ಮೈ-ಮಾನವ ಮುಚ್ಚಲಾರೆವು ಎಂದರು

ನಮ್ಮ ಬಳಿ ಕಳಿಸಿ ಮಾನಕ್ಕೆ ತಕ್ಕಂತೆ 
ಮಿತಿಗೆ ಮೀರದಂತೆ ಪವಿತ್ರದ ಸಮವಸ್ತ್ರವ ತೊಡಿಸಿ
ನಿತ್ಯ ಮೈ ಮನಸು ಶುಚಿಯಾಗಲಿದೆ ಎಂದು 
ಮನಬಿಚ್ಚಿ ಕರೆದರು 

ಅಸನಕ್ಕೆ, ವಸನಕ್ಕೆ ಸಾಕಾದೀತಷ್ಟೆ, ವಿದ್ಯೆಗಿಲ್ಲ 
ನಮ್ಮಲ್ಲಿ ವ್ಯವಸ್ಥೆಯಿಲ್ಲ, ಕಲಿಸುವವರಿಲ್ಲ ಎಂದರು

ನಮ್ಮ ಬಳಿ ಕಳಿಸಿ, ಜ್ಞಾನ ದೇಗುಲವು ಇಲ್ಲಿದೆ 
ಶಿಕ್ಷಣದಿಂದ ಬದುಕು ಹಸನಾಗಲಿದೆ ಎಂದು
ಅಭಯಕೊಟ್ಟು ಕರೆದರು

ಕಾಯಕದಲಿ ಕೈಲಾಸ ಕಂಡು 
ಅನ್ನ, ಅರಿವೆ, ಅಕ್ಷರದ ತ್ರಿದಾಸೋಹದ
ಹರಿಕಾರನಾಗಿ ಸಿದ್ಧಗಂಗೆಯ ಸಿದ್ಧಪುರುಷನಾದ
ಗುರುವೆ ಇದೊ ನಿಮಗೆ ಮನ ಬಾಗಿ ವಂದನೆ!

ಬದುಕು ಬದಲಿಸಿದ ಪುಸ್ತಕ

-ಶ್ರೀಮತಿ ಅರ್ಪಿತಾ ಅಭಿರಾಮ್

(ಅರ್ಪಿತಾ ಮೂಲತಃ ಶಿವಮೊಗ್ಗೆಯವರು, ಎಂ. ಟೆಕ್ ಪದವೀಧರೆಯಾದ ಇವರು ಪ್ರಸ್ತುತ ಬೆಲ್ಫಾಸ್ಟ್ ನಗರದಲ್ಲಿ ಪತಿ ಅಭಿರಾಮ್ ಮತ್ತು ಮಗಳು ಆರಭಿಯೊಂದಿಗೆ ವಾಸವಾಗಿದ್ದಾರೆ. ಮಧುರ ಕಂಠದ ಗಾಯಕಿ, ಸಾಹಿತ್ಯ ಪ್ರೇಮಿ.ಸಂ)
ನನ್ನ ಬದುಕಿನ ಮೇಲೆ ಗಾಢ ಪರಿಣಾಮ ಬೀರಿದ ಒಂದೇ ಒಂದು ಪುಸ್ತಕವನ್ನು ಆಯ್ಕೆ ಮಾಡಬೇಕೆಂದರೆ ಅದು ಬಹಳ ಕಷ್ಟ ಏಕೆಂದೆರೆ ನನ್ನ ಬದುಕನ್ನ ರೂಪಿಸಿದ ಪುಸ್ತಕಗಳು ಅನೇಕ. ಅವಗಳಲ್ಲಿ ಒಂದನ್ನು ಹೇಳಲೇಬೇಕು ಅಂದರೆ ಅದು'ಯೋಗಿಯ ಆತ್ಮಕಥೆ'.
ಬಹುಶಃ ನಾನು ಹತ್ತು ವರ್ಷದವಳಿರುವಾಗ ಆ ಪುಸ್ತಕದ ಕೆಲವು ಪುಟಗಳನ್ನ ನನ್ನ ಮಾವನ ಮನೆಯಲ್ಲಿ ಓದಿದ್ದೆ. ಆಗಲೇ ಅದು ನನ್ನ ಮನದ ಮೇಲೆ ವಿಶೇಷವಾದ ಛಾಪನ್ನು ಬಿಟ್ಟಿತ್ತು.
ನಂತರ ನಾನು ಓದು ಮುಗಿಸಿ ಕೆಲಸಕ್ಕೆ ಹೋಗಲು ಶುರು ಮಾಡಿದಾಗ ಒಂದಷ್ಟು ಸಮಯ ಖಿನ್ನತೆಗೆ ಒಳಗಾಗಿದ್ದೆ. ಜೀವನ ನಿರರ್ಥಕ ನೀರಸ ಎನಿಸುತ್ತಿತ್ತು. ಉಣ್ಣು, ತಿನ್ನು, ಮಲಗು ಮತ್ತೆ ಕೆಲಸಕ್ಕೆ ಹೋಗು ಬರೀ ಇಷ್ಟೇನಾ ಜೀವನ ಎಂದೆನಿಸುತ್ತಿತ್ತು. ಎಲ್ಲ ಕಡೆ ಸಿಕ್ಕು ಸುಳಿಗಳು ಬಂಧನಗಳೇ ಕಾಣುತ್ತಿದ್ದವು. ಒಂದುಕಡೆ ಏನೋ ಸಂತೋಷ ಸಿಕ್ಕಿತು ಅನ್ನುವಷ್ಟರಲ್ಲಿ ಅದು ಮಾಯ. ಯಾವುದೂ ಶಾಶ್ವತವಲ್ಲ ಎಂಬ ಖಾಲಿ ಭಾವ ಆವರಿಸುತ್ತಿತ್ತು. 
ಆ ಸಮಯದಲ್ಲಿ 'ಯೋಗಿಯ ಆತ್ಮಕಥೆ' ಹಾಗೂ ಅದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನೂ ಓದಲು ಶುರುಮಾಡಿದೆ. ಆ ಓದು ನಾನು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿತು. ಜೀವನದ ಹಲವು ಆಯಾಮಗಳನ್ನೂ ಕೆಲವು ನಿತ್ಯ,ನಿರಂತರ ಅಭ್ಯಾಸಗಳಿಂದ ಪರಿಶೋಧಿಸಬಹುದು ಎಂಬುದನ್ನ ತೋರಿಸಿಕೊಟ್ಟಿತು. 
ಅಂದು ಪ್ರಾರಂಭಿಸಿದ ಆ ಅಭ್ಯಾಸ, ಸಾಧನಾ ಪಥ ಇಂದಿಗೂ ನನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯದಮೇಲೆ ಒಳ್ಳೆಯ ಪರಿಣಾಮ ಬೀರುತ್ತಲೇ ಬಂದಿದೆ. 
ಇಂದಿಗೂ ಯಾವುದೇ ಗೊಂದಲದಲ್ಲಿದ್ದಾಗ ಆ ಪುಸ್ತಕದ ಪುಟವೊಂದನ್ನು ತೆರೆಯುತ್ತೇನೆ, ಪ್ರತಿಬಾರಿಯೂ ಮನಸಿಗೆ ಚೈತನ್ಯವನ್ನು ತುಂಬಿ ಸಮಸ್ಯೆ ಎದುರಿಸುವ ಉತ್ಸಾಹ ಧೈರ್ಯ ಆ ಪುಸ್ತಕ ತುಂಬುತ್ತದೆ. 
  

ಈ ಸಾಲಿನ ಟಿ ಎಸ್ ಏಲಿಯಟ್ ಪ್ರಶಸ್ತಿ ವಿಜೇತೆ ಸಾರಾ ಹೋವ್ ಬರೆದ ಎರಡು ಕವಿತೆಗಳು – ಉಮಾ ವೆಂಕಟೇಶ್ ಮತ್ತು ಕೇಶವ ಕುಲಕರ್ಣಿ

ಸಾರಾ ಹೋವ್ (Sarah Howe), ಬ್ರಿಟಿಷ್ ಕವಿ, ತಮ್ಮ ಮೂವತ್ತರ ಹರೆಯದಲ್ಲೇ, ತಮ್ಮ ಪ್ರಥಮ ಕವನ ಸಂಕಲನಕ್ಕೇ (Loop Of Jade) ಪ್ರತಿಷ್ಟಿತ ಟಿ ಎಸ್ ಏಲಿಯಟ್ ಪ್ರಶಸ್ತಿಯನ್ನು ಈ ವರ್ಷ ಪಡೆದಿದ್ದಾರೆ. ಹಾಂಕಾಂಗಿನಲ್ಲಿ ಹುಟ್ಟಿ (ಇಂಗ್ಲೀಷ್ ತಂದೆ, ಚೈನೀ ತಾಯಿ), ಚಿಕ್ಕವರಿರುವಾಗಲೇ ಇಂಗ್ಲಂಡಿಗೆ ಬಂದವರು. ಇಂಗ್ಲೀಷ್ ಮತ್ತು ಚೀನಾದ ಪರಂಪರೆಯನ್ನು ಕವಿತಗಳಲ್ಲಿ ಅರಸುತ್ತಾರೆ.

ಲಿಂಗಬೇಧದ ಅನ್ಯಾಯವನ್ನು ಕವಿತೆಗಳಲ್ಲಿ ಬೆರಗುಗೊಳಿಸುವಂತೆ ಅನ್ವೇಷಣೆ ಮಾಡುತ್ತಾರೆ ಎಂದು ಪ್ರಶಸ್ತಿ ಪ್ರಕಟಣೆಯ ಸಮಯದಲ್ಲಿ ಹೇಳಿದ್ದಾರೆ. ಅವರು ಹೆಂಗಸಾಗಿರುವುದರಿಂದ, ಬಿಳಿಯರಲ್ಲದಿರುವುದರಿಂದ, ವಯಸ್ಸಾಗದಿರುವುದರಿಂದ ಈ ಪ್ರಶಸ್ತಿ ಕೊಟ್ಟಿದ್ದಾರೆ ಎಂದು ಕುಹುಕ ಕೂಡ ಕೇಳಿಬಂದಿದೆ.

ಕೆಲವೇ ಕೆಲವು ಸಾಲುಗಳಲ್ಲಿ ಏನೆಲ್ಲವನ್ನು ಹೇಳಬಹುದು ಎನ್ನುವುದಕ್ಕೆ `ಉನ್ಮತ್ತ` ಕವನ ಒಂದು ಒಳ್ಳೆಯ ಉದಾಹರಣೆ. ವಿಜ್ಞಾನದ ಕ್ಲಿಷ್ಟಕರ ವಿಷಯಗಳನ್ನೂ ಕವಿತೆಯಾಗಿಸಬಹುದು ಎನ್ನುವುದಕ್ಕೆ `ಸಾಪೇಕ್ಷತೆ` ಒಂದು ಉತ್ತಮ ನಿದರ್ಶನ.

ಒಂದೇ ಓದಿಗೆ ಈ ಕವಿತೆಗಳು ದಕ್ಕುವುದಿಲ್ಲ. ಹಾಗಂತ ಪೂರ್ತಿ ಅರ್ಥವಾಗದೆಯೂ ಇರುವುದಿಲ್ಲ. ಒಂದೊಂದೇ ಸಾಲುಗಳನ್ನು ನಮ್ಮದಾಗಿಸಿಕೊಂಡು ಕವಿತೆ ಮೂಡಿಸುವ ಅಮೂರ್ತ ಚಿತ್ರಗಳಲ್ಲಿ ಕಳೆದುಹೋದರೆ ಕವಿತೆ ಸಾರ್ಥಕ.

————————————
ಕನ್ನಡಕ್ಕೆ: ಕೇಶವ ಕುಲಕರ್ಣಿ

ಉನ್ಮತ್ತ

ಅದುಮಿಡುವುದು
ಒಂಥರದ

ಅಗತ್ಯ? ನಾನರೆ
ಹಣ್ಣಾದ ಹಣ್ಣು

ನೀ ಹುಲಿ
ನಿನ್ನುಗುರು ನೀನೇ ಕಚ್ಚುತ್ತ

ನಾವ್ ಮದುವೆಯಾದ ದಿನ
ಮರಗಳದುರಿದವು, ಅವಕೆ

ಮೈಮೇಲೆ ದೆವ್ವ ಬಂದಂತೆ –
ದಯೆಯಿರಲೆನ್ನ ಮೇಲೆ, ಎಂದೆ ನೀ.

(ಮೂಲ ಕವನ: Frenzied ಓದಲು ಇಲ್ಲಿ ಒತ್ತಿ)

————————————–
ಕನ್ನಡಕ್ಕೆ: ಉಮಾ ವೆಂಕಟೇಶ್

ಸಾಪೇಕ್ಷತೆ

ಕತ್ತಲಲ್ಲಿ ಭಯದ ಭಾವ ಸ್ಪರ್ಶಿಸಿದಾಗ ಎಚ್ಚೆತ್ತ ನಮ್ಮ
ಕಣ್ಣಾಲಿಗಳು ಪರಿಚಿತವಾದ ಆಕಾರಗಳನ್ನೇ ತಡಕಾಡುತ್ತವೆ.

ಓಟದ ಹಾದಿಯಲ್ಲಿ ಹರಿಬಿಟ್ಟ ಬೇಟೆನಾಯಿಗಳಂತೆ, ಕಂಡಿಯಿಂದ ಮುಕ್ತವಾಗುವ
ಫೋಟಾನುಗಳಿಂದ ಬೆಳಕಿನ ಜೋಡುಸ್ವರೂಪ ಪ್ರಕಟಿಸುತ್ತಾ ಸ್ಫುರಿಸುವ ನೆರಳುಗಳು

ಮಬ್ಬುಪ್ರಯೋಗಾಲಯದ ಗೋಡೆಮೇಲೆ ಪಟ್ಟೆಯಂತೆ ಮೂಡುವಷ್ಟರಲ್ಲಿ-
ಕಣಗಳಲ್ಲ ಅವು-ಅಲೆಗಳಾಗಿ ಸಮಸ್ತ ಖಚಿತವಾದಗಳಿಗೂ ವಿದಾಯ.

ಮಾಯಾಂಗನೆಯ ಮಧ್ಯರಾತ್ರಿಯ ರೋದನದಂತೆ ಅದೃಶ್ಯವಾಗುವ
ಡಾಪ್ಲರನ (Doppler’s shift) ಈ ವಿಶ್ವದಲ್ಲಿ ಖಚಿತವೆನ್ನುವುದಿದೆಯೇನು?

ರಭಸದಿಂದೋಡುವ ರೈಲುಗಾಡಿಯಿಂದ ಕಾಣುವ ಹೊಳೆಯುವ ಮಿಂಚೊಂದು,
ಸಮಯವೇಕೆ ಪರಿಪೂರ್ಣ ಮಧ್ಯಾಹ್ನದಂತೆ ಹಿಗ್ಗುವುದೆಂದು ವಿವರಿಸುವುದಂತೆ;

ಸಮಾನಾಂತರ ರೇಖೆಗಳೆಲ್ಲಿ ಸಂಧಿಸುವುವೋ, ಯಾವುದರ ಪೂರ್ಣ ಕ್ಷಿತಿಜದಲ್ಲಿ
ಪ್ರತಿಭಟಿಸಲಾಗದೆ ತಾರೆಯ ಬೆಳಕಿನ ಕಿರಣವೂ ತನ್ನ ಪಥದಲ್ಲಿ ಬಾಗುವುದೋ

ಅಂತಹ ಕೃಷ್ಣರಂಧ್ರಗಳಿರುವಿಕೆಯನ್ನು ಪ್ರವಾದಿಸುವರಲ್ಲಾ; ಇಷ್ಟೆಲ್ಲಾ ಆಳವಾಗಿ ಚಿಂತಿಸುವ
ನಮಗೆ; ನಮ್ಮ ಕಣ್ಗಳಿಗೆ, ಕತ್ತಲೆಗೆ ಹೊಂದಿಕೊಳ್ಳುವುದು ಸಾಧ್ಯವಿಲ್ಲವೇನು?

(ಅಡಿಬರಹ: ಔಪಚಾರಿಕ ಪರಿಭಾಷೆಯಲ್ಲಿ `ಸಾಪೇಕ್ಷತೆ -Relativity` ಕವನವನ್ನು ಒಂದು ಚತುರ್ದಶಪದಿ (ಸಾನೆಟ್) ಅನ್ನಬಹುದು. ತನ್ನ ಸಣ್ಣ ಕೋಣೆಯೊಳಗೆ, ಎಲ್ಲವನ್ನು ತನ್ನೊಳಗೆ ಕುಗ್ಗಿಸಿಕೊಂಡು, ತನ್ನದೇ ಗುರುತ್ವಾಕರ್ಷಣ ಬಲ ಪ್ರಯೋಗದಿಂದ ಪತನಗೊಂಡ ಒಂದು ಕೃಷ್ಣರಂಧ್ರದ ಸ್ವರೂಪವೆಂದು ಚಿಂತಿಸಿ ಪ್ರಾರಂಭಿಸಿದ ಕವನ. ಹೀಗಿದ್ದರೂ ಸಹಾ, ನನ್ನ ಚತುರ್ದಶಪದಿ ಬೃಹತ್ಪ್ರಮಾಣ ಗುರುತ್ವದ ಜಗತ್ತಿನಲ್ಲಿರುವ ಬೆಳಕಿನ ರೂಪದೊಂದಿಗೆ ಶುರುವಾಗದೆ, ಕ್ವಾಂಟಮ್ ಭೌತಶಾಸ್ತ್ರದ ಉಪಪರಮಾಣು ಮಟ್ಟದಲ್ಲಿ ಪ್ರಾರಂಭವಾಗುತ್ತದೆ. ಈ ಎರಡು ರಾಜಿಯಾಗದ ಸಿದ್ಧಾಂತಗಳನ್ನು ಅನ್ಯೋನ್ಯವಾಗಿರಿಸಿ ಪರಸ್ಪರ ಸಂಭಾಷಿಸುವಂತೆ ಪ್ರಯತ್ನಿಸುವುದು, ಸಮಕಾಲೀನ ಭೌತಶಾಸ್ತ್ರಜ್ಞರ ಪಾಲಿಗೆ ಒಂದು ಭಗೀರಥ ಪ್ರಯತ್ನವೆನಿಸಿದೆ. “ಸಾಪೇಕ್ಷತೆ” ಕವನದ ಮೊದಲ ಭಾಗವು, ಬೆಳಕಿನ ದ್ವಂದ್ವ ಜೀವನವನ್ನು ಪ್ರಮಾಣೀಕರಿಸುವ ಭೌತಿಕ ಪ್ರಯೋಗವನ್ನು ನಿರೂಪಿಸುತ್ತದೆ. ಬೆಳಕಿನ ಕಿರಣವೊಂದು ಸಮಾನಾಂತರ ಕಂಡಿಗಳ ಮೂಲಕ ಪ್ರಕಾಶಿಸುತ್ತದೆ: ಫೋಟಾನುಗಳು ಬೆಳಕು-ಕಂಡಿಯ ಮೂಲಕ ಹರಿಯುವುದನ್ನು ಗಮನಿಸಿದಾಗ ಅವು ಕಣಗಳಂತೆ ವರ್ತಿಸುತ್ತವೆ, ಕಂಡಿಗೆ ಎದುರಾಗಿರುವ ಪರದೆಯನ್ನು ಘರ್ಷಿಸುವಷ್ಟು ಸಮಯದಲ್ಲಿ ಅಡ್ಡವಾಗಿ ಬರುತ್ತಾ, ಅವು ಅಲೆಗಳಂತೆ ವರ್ತಿಸಲು ಪ್ರಾರಂಭಿಸಿ, ನನ್ನ ಕವನದ ಚರಣದ ಸಾಲುಗಳಂತೆ ಗಾಢ ಬಣ್ಣದ ಮತ್ತು ಡೊಂಕಾದ ಪಟ್ಟಿಗಳನ್ನು ಸೃಷ್ಟಿಸುತ್ತವೆ. ‘ತರಂಗ-ಕಣದ ಉಭಯತ್ವ’ (Wave-Particle Duality) ಎಂದು ಕರೆಯಲ್ಪಡುವ ಈ ವರ್ತನೆ, ಕ್ವಾಂಟಮ್ ವಸ್ತುಗಳು ನೀವು ಅವನ್ನು ಪತ್ತೆ ಮಾಡುವವರೆಗೂ ತರಂಗ ಅಥವಾ ಅಲೆಗಳಂತೆ ವರ್ತಿಸುತ್ತವೆ, ಒಮ್ಮೆ ನೀವು ಅವನ್ನು ಪತ್ತೆ ಮಾಡಿದ ತಕ್ಷಣದಲ್ಲೇ, ಆ ವರ್ತನೆ ಅದೃಶ್ಯವಾಗುತ್ತದೆ ಎನ್ನುವುದು ಒಂದು ಕಲ್ಪನೆಯಾಗಿದೆ. ಭೌತಶಾಸ್ತ್ರಜ್ಞರು ಈಗ ಈ ಕಲ್ಪನೆಯನ್ನು ನಂಬುತ್ತಾರೆ ಹಾಗೂ ಹೈಸನ್ಬರ್ಗನ (Werner Heisenberg) ಪ್ರಸಿದ್ಧವಾದ “ಅನಿಶ್ಚಿತ ತತ್ವ” (Uncertainty principle) ಎನ್ನುವುದು ಅದೇ ರೀತಿಯ ಅಂತರ್ನಿಹಿತ ವಿದ್ಯಮಾನದ ಮೇಲೆ ಆಧಾರಿತವಾದ ಕೇವಲ ಎರಡು ಅಭಿವ್ಯಕ್ತಿಗಳಾಗಿವೆ.

ಮಿಲ್ಟನ್ನನಿಗಿಂತ ಇತ್ತೀಚಿನ ಹಲವಾರು ಕವಿಗಳು ತಮ್ಮ ಪ್ರೇರಣೆಗಾಗಿ ವಿಜ್ಞಾನದ ಮೊರೆಹೋಗಿದ್ದಾರೆ. ಅವರಲ್ಲಿ ಮುಖ್ಯರಾದವರು– ಲವೀನಿಯಾ ಗ್ರೀನ್ಲಾ (Lavinia Greenlaw), ಗ್ವೆನಿಥ್ ಲೂಯಿಸ್ (Gwyneth Lewis), ಜೋರಿ ಗ್ರಹಾಮ್ (Jori Graham), ಜೆ.ಎಚ್ ಪ್ರಿನ್ (J.H.Prynn) ಇವರಲ್ಲಿ ಹಲವರೆನ್ನಬಹುದು. ‘ಸಾಪೇಕ್ಷತೆ’ (Relativity) ಕವನವನ್ನು ಬರೆಯುವ ಸಮಯದಲ್ಲಿ, ಟ್ರೇಸಿ ಸ್ಮಿತ್ತಳ (Tracy Smith) ಶ್ರೇಷ್ಠವೆನಿಸಿದ, ಪುಲಿಟ್ಝರ್ ಪ್ರಶಸ್ತಿ ವಿಜೇತ, Life on Mars ಎನ್ನುವ ಮೂರನೆಯ ಕವನ ಸಂಗ್ರಹದಲ್ಲಿನ, ಒಂದು ಕವನದಲ್ಲಿರುವ “ನಮ್ಮ ಕಣ್ಣುಗಳು ಕತ್ತಲಿಗೆ ಹೊಂದಿಕೊಳ್ಳುತ್ತವೆ” ಎನ್ನುವ ಸಾಲು ನನ್ನ ಮನವನ್ನು ಎಡಬಿಡದೆ ಕಾಡಿತ್ತು. ಟ್ರೇಸಿ ಸ್ಮಿತ್ತಳ ತಂದೆ, ಪ್ರತಿಷ್ಠಿತ ಹಬ್ಬಲ್ ಅಂತರಿಕ್ಷ ದೂರದರ್ಶಕದಲ್ಲಿ (Hubble Deep Space Telescope) ಇಂಜಿನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರಂತೆ. ಅವಳು ಬರೆದ ‘My God it is Full of Stars’ ಕವನದಲ್ಲಿ, ಆಕೆ ಹಬ್ಬಲ್ ದೂರದರ್ಶಕದ `ತಜ್ಞ-ಕಣ್ಣುಗಳು’, ಅಂತರಿಕ್ಷದ ಅಗಾಧ ತೆರಪಿನಲ್ಲಿ `ಅದರ ಅಂಚಿನವರೆಗೂ ತನ್ನ ದೃಷ್ಟಿ ಬೀರುತ್ತ’, ಅಲ್ಲಿರುವುದನ್ನೆಲ್ಲಾ ಅದ್ಭುತವಾಗಿ ಜ್ವಾಜ್ಯಲ್ಯಗೊಳಿಸುತ್ತಾ ಸ್ಪಷ್ಟಗೊಳಿಸುವುದನ್ನು ಕಲ್ಪಿಸಿಕೊಳ್ಳುತ್ತಾಳೆ. ನಮ್ಮ ಕಣ್ಣುಗಳು ಕತ್ತಲೆಗೆ ಹೊಂದಿಕೊಳ್ಳದಿರಬಹುದೇ? ಸ್ಮಿತ್ತಳ ಈ ಪದಗುಚ್ಛ ನನ್ನ ಕವನದ ಅಂತ್ಯದಲ್ಲಿ, ಒಂದು ಕಲ್ಪಿತವಾದ-ಮುಂದೂಡಲ್ಪಟ್ಟ, ಆದರೆ ಒಂದು ಆಶಾದಾಯಕ ಪ್ರಶ್ನೆಯಾಗಿ ಪುನರಾವರ್ತಿಸುತ್ತಾ, ಮಾರ್ದನಿಸಿದೆ. ಕಡೆಗೆ, ಗೆಲಿಲಿಯೋ ಮತ್ತು ಮಿಲ್ಟನ್ ಅಂತಹ ಕವಿಗಳ ಕುರುಡುತನವೂ ಕೂಡಾ, ಇತರ ರೀತಿಯ ಕಣ್ಣುಗಳನ್ನೇ ಅವಲಂಬಿಸಲಿಲ್ಲವೇ.)

(ಮೂಲಕವನ Relativity ಓದಲು ಇಲ್ಲಿ ಒತ್ತಿ)