ನೆನಪುಗಳ ಶ್ರಾವಣ 

ಎಲ್ಲರಿಗೂ ಆತ್ಮೀಯ ನಮಸ್ಕಾರ,
ಈ ವಾರದ ಅನಿವಾಸಿ ಸಂಚಿಕೆಯಲ್ಲಿ ಎರಡು ಪುಟ್ಟ ಬರಹಗಳಿವೆ. ಒಂದು ಶ್ರಾವಣ ಮಾಸದಲ್ಲಿ ಸಾರಸ್ವತ ಸಮುದಾಯದಲ್ಲಿ ಆಚರಿಸಲಾಗುವ ಚೂಡಿ ಪೂಜೆಯ ಕಿರು ಪರಿಚಯ ಮತ್ತು ಅನಿವಾಸಿ ಬ್ಲಾಗ್ ನಲ್ಲಿ ಇದೇ ಮೊದಲ ಸಲ ಬರೆಯುತ್ತಿರುವ ಶ್ರೀಮತಿ ರೇಖಾ ಪಾಟೀಲ್ ಅವರು, ನಮ್ಮನ್ನು ತಮ್ಮ ಅಜ್ಜನ ಮನೆಯ ನೆನಪುಗಳ ಜಾತ್ರೆಗೆ ಪದಗಳ ತೇರಿನಲ್ಲಿ ಕರೆದೊಯ್ಯಲಿದ್ದಾರೆ.
ಓದಿ ತಮ್ಮ ಅನಿಸಿಕೆಯನ್ನು ತಿಳಿಸುವುದನ್ನು ಮರೆಯಬೇಡಿ
ಪ್ರೀತಿಯಿಂದ
ಅಮಿತಾ ರವಿಕಿರಣ್ .
 ಚೂಡಿ-ಶ್ರಾವಣದ ವಿಶಿಷ್ಟ ಆಚರಣೆ.   
ಮೊನ್ನೆ ಮೊನ್ನೆಯಷ್ಟೇ ಯುಗಾದಿ ಆದಂತಿದೆ, ಅದೋ ಆಗಲೇ ಶ್ರಾವಣ ಬಂದು ಸಾಲು ಸಾಲು ಹಬ್ಬಗಳನ್ನು ತನ್ನೊಟ್ಟಿಗೆ ಕರೆದು ತಂದಿದೆ. ಭಾರತದಲ್ಲಿ ಮಳೆಗಾಲವೆಂಬ ಈ ಚೈತನ್ಯಪೂರ್ಣ ಕಾಲದಲ್ಲಿ ಹೊಲದಲ್ಲಿ ಗದ್ದೆ ತೋಟದಲ್ಲಿ ಮನೆಗಳಲ್ಲಿ ಮನಗಳಲ್ಲಿ ಎಲ್ಲೆಡೆ ಒಂದು ಬಗೆಯ ಸಂಭ್ರಮ. ಜಿರಾಪತಿ ಮಳೆಯಲ್ಲೂ ತಮ್ಮ ಜರಿಸೀರೆಯನ್ನುಟ್ಟು ಮನೆ ಮನೆಗೆ ಅರಿಶಿನ ಕುಂಕುಮಕ್ಕೆ ಹೋಗುವ ಆ ನೋಟವೇ ಚಂದ. ಜೊತೆಗೆ ನಾಗರ ಪಂಚಮಿ,ರಾಖಿ,ನೂಲು ಹುಣ್ಣಿಮೆ, ಕೃಷ್ಣಾಷ್ಟಮಿ, ವರಮಹಾಲಕ್ಷ್ಮಿ ಸಾಲು ಸಾಲು ಸಂಭ್ರಮಗಳ ಮಾಸ ಈ ಶ್ರಾವಣ. ಈ ಶ್ರಾವಣಮಾಸದಲ್ಲಿ ಬರುವ ಇನ್ನೊಂದು ವಿಶಿಷ್ಟ ಹಬ್ಬ, ಕೇವಲ ಸಾರಸ್ವತ ಸಮುದಾಯದವರು ಪಾಲಿಸಿಕೊಂಡು ಬಂದಿರುವ ಆಚರಣೆಯೇ ಚೂಡಿ ಪೂಜೆ.

ಸರಸ್ವತಿ ನದಿತೀರದಿಂದ ವಲಸೆ ಬಂದು ಮಹಾರಾಷ್ಟ್ರದ ರತ್ನಾಗಿರಿಯಿಂದ ಕೇರಳದ ತುದಿಯವರೆಗಿನ ಕೊಂಕಣ ಪಟ್ಟಿಯಗುಂಟ ಹೆಚ್ಹಾಗಿ ನೆಲೆಸಿರುವ ಸಾರಸ್ವತರು ಎದುರು ನೋಡುವುದು ಶ್ರಾವಣದ ಚೂಡಿ ಪೂಜೆಯನ್ನ. ಶ್ರಾವಣದ ಪ್ರತಿ ಶುಕ್ರವಾರ ಮತ್ತು ವಿಶೇಷವಾಗಿ ಭಾನುವಾರಗಳಂದು ಈ ಪೂಜೆ ತುಳಸಿಯ ಮುಂದೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ.

ಬರಿಯ ಪೂಜೆ ಅಂದ್ರೆ ಅದರಲ್ಲೇನು ವಿಶೇಷ ಅಂದ್ರಾ? ಆ ಪೂಜೆಯಲ್ಲಿ ಬಳಸುವ ವಸ್ತುಗಳು ಈ ಆಚರಣೆಯನ್ನು ವಿಶೇಷವಾಗಿಸುತ್ತವೆ. ಮಳೆಗಾಲದಲ್ಲಿ ಭೂಮಾತೆ ಹಸಿರುಟ್ಟು ನಗುವಾಗ ಅವಳಲ್ಲಿ ದೊರೆಯುವ ಅಪರೂಪದ ಹದಿನಾರು ಬಗೆಯ ಎಲೆಗಳು, ಜೊತೆಗೆ ಸೇವಂತಿಗೆ, ಗರಿಕೆ ,ಹೊಲದ ಬದುವಿನಲ್ಲಿ ಸಿಗುವ ನೆಲನೆಲ್ಲಿ,ಲಾಯಾ ಮಡ್ಡಿ,ರತ್ನಗಂಧಿ,ವಿಷ್ಣುಕಾಂತಿ ,ಸುಗಂಧಿ,ಕಾಗಿ ಕಾಲು ಗುಬ್ಬಿ ಕಾಲು ,ಹುಲಿ ಉಗುರು.ಬೆಕ್ಕಿನ ಕಾಲು,ಮಿಟಾಯಿ ಹೂ ,ಗೌರಿ ಮುತ್ತು,ಗೌರಿ ಹೂವು,ರಥದ ಹೂ ಎಂಬ ವಿಚಿತ್ರ ಜನಪದ ಹೆಸರಿನ ಸಸ್ಯಗಳನ್ನು ತಂದು ಕೂಡಿಸಿ ಗುಚ್ಛ ಕಟ್ಟಿದರೆ ಚೂಡಿ ಸಿದ್ಧ. ಚೂಡಿ ಎಂಬುದು ಕಲಾತ್ಮಕತೆಯ ಕನ್ನಡಿಯೂ ಹೌದು. ಲಭ್ಯ ಇರುವ ಸಸ್ಯಗಳನ್ನು ಹೂ ಎಲೆಗಳನ್ನು ಬಣ್ಣದ ಹೊಂದಾಣಿಕೆ ಮತ್ತು ಆಕಾರ ಗಾತ್ರ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಟ್ಟ ಬೇಕಾಗುತ್ತದೆ. ಚೂಡಿಯನ್ನು ಕಟ್ಟುವಾಗ ಬಾಳೇನಾರನ್ನು ನೆನೆಸಿ ಅದರಿಂದ ದಾರದ ಎಳೆಗಳನ್ನು ತೆಗೆದು ಅದರಿಂದಲೇ ಕಟ್ಟಲಾಗುತ್ತದೆ.ಇತ್ತೀಚಿಗೆ ಸಾರಸ್ವತ ಸಮಾಜ ಮಂದಿರಗಳಲ್ಲಿ ದೇವಳಗಳಲ್ಲಿ ಚೂಡಿ ಸ್ಪರ್ಧೆ ಏರ್ಪಡಿಸುವುದೂ ಉಂಟು.

ಆಚರಣೆ -ವಿಧಿ ವಿಧಾನ
ಪ್ರತ್ಯೇಕ ಚೂಡಿಯನ್ನು ವೀಳ್ಯದೆಲೆಯೊಂದಿಗೆ ತುಳಸಿ ಮುಂದೆ ಇಟ್ಟು, ದೀಪ ಹಚ್ಹಿ ಹಣ್ಣು ಕಾಯಿ ಸಮರ್ಪಿಸಿ ತುಳಸಿಗೆ ಪ್ರದಕ್ಷಿಣೆ ಹಾಕಲಾಗುತ್ತದೆ. ಜೊತೆಗೆ ಮತ್ತೊಂದು ವಿಶೇಷ ಎಂದರೆ ಇಲ್ಲಿ ಪೂಜೆಗೆ ಅರಿಶಿನ ಕುಂಕುಮ ದೊಂದಿಗೆ ''ರುವಣ'' ಎಂದು ಕರೆಯಲಾಗುವ ಸುಣ್ಣ ಮತ್ತು ಗಂಧ ಅರಿಶಿನದ ಮಿಶ್ರಣವನ್ನು ಬಳಸುವುದು. ಆಗತಾನೇ ಚಿಗುರೊಡೆದು ನಿಂತಿರುವ ಅರಿಸಿನದ ಎಲೆ ತಂದು ಅದರ ಮೇಲೆ ಅಕ್ಕಿಯನ್ನು ಹರಡಿ. ಅದರ ಮೇಲೆ ಅಡಿಕೆ ಬೆಟ್ಟವನ್ನು ಇಟ್ಟು ಅದರ ಎದುರಿಗೆ ೫,೭.೧೧.೨೧.ಹೀಗೆ ಚೂಡಿಯನ್ನಿಟ್ಟು ಪೂಜಿಸಿ ೧೬.೩೨ ರಂತೆ ಗರಿಕೆಯನ್ನು ಕಟ್ಟಿ ಸೆರಗಿನ ತುದಿಯಿಂದ ಅದನ್ನು ಹಿಡಿದು ಸೂರ್ಯನಿಗೆ ಅರ್ಘ್ಯ ನೀಡುತ್ತಾರೆ. ನಂತರ ಬಾವಿ ಕಟ್ಟೆಗೆ ಮನೆಯ ಸೂರಿಗೆ, ತೆಂಗಿನ ಮರಕ್ಕೆ, ಮನೇ ಹೊಸಿಲಿಗೆ ವಿಳ್ಯದೊಂದಿಗೆ ಇವನ್ನು ಇಟ್ಟು ಪೂಜಿಸುತ್ತಾರೆ. ಸೌಭಾಗ್ಯ ಸಮೃದ್ಧಿ ವೃದ್ಧಿಸುವಂತೆ ಹೆಂಗಳೆಯರು ಪ್ರಾರ್ಥಿಸುತ್ತಾರೆ. ಭತ್ತದ ಅರಳು ಮತ್ತು ಬೆಲ್ಲವನ್ನ ನೇವೇದ್ಯ ಮಾಡಿ ಹೊಸಿಲ ಮೇಲೆ ಚೂಡಿಯನ್ನು ಇಟ್ಟು ಆರತಿ ಮಾಡುತ್ತಾರೆ..
ಕೆಲವೊಂದು ಮನೆಯ ಸಂಪ್ರದಾಯದಲ್ಲಿ, ಪೂಜೆಯನ್ನು ದೇವರ ಮುಂದೆ ಮಾಡಿ ಸಂಜೆ ಸಮಯದಲ್ಲಿ ತುಳಸಿಯ ಮುಂದೆ ಚೂಡಿ ಯನ್ನುವಿಸರ್ಜಿಸಲಾಗುತ್ತದೆ. ಘಟ್ಟದ ಕೆಳಗೆ ಮತ್ತು ಘಟ್ಟದ ಮೇಲಿನ ಆಚರಣೆಯಲ್ಲಿ ಕೆಲವು ವ್ಯತ್ಯಾಸಗಳು ಕಾಣಸಿಗುತ್ತವೆ.

ಮದುವೆಯ ನಂತರ ಬರುವ ಮೊದಲ ಚೂಡಿಯನ್ನು ಮದುಮಗಳೊಂದಿಗೆ ಸಮಾಜದ ಎಲ್ಲಾ ಬಂಧು ಭಗಿನಿಯರು ಸೇರಿ ಆಚರಿಸುತ್ತಾರೆ. ಮತ್ತು ಮದುಮಗಳು ಎಲ್ಲಾ ಹಿರಿಯರಿಗೂ ಚೂಡಿ ಕೊಟ್ಟು ನಮಸ್ಕರಿಸಿದ ಮೇಲೆ ಆಕೆಗೆ ಉಡುಗೊರೆಯನ್ನು ನೀಡಲಾಗುತ್ತದೆ. ಪತಿ ಮತ್ತು ಇತರ ಹಿರಿಯರಿಗೆ ಕೇವಲ ವೀಳ್ಯದೆಲೆಯನ್ನು ನೀಡಿ ನಮಸ್ಕರಿಸಲಾಗುತ್ತದೆ. ಅನುಕೂಲಸ್ಥರು ಈ ದಿನ ಔತಣ ನೀಡುವುದೂ ಉಂಟು.ಸಂಜೆ ಮನೆ ಮನೆಗೆ ಹೋಗಿ ಹಿರಿಯ ಮುತ್ತೈದೆಯರಿಗೆ, ದೇವಸ್ಥಾನಗಳಿಗೂ ಚೂಡಿಯನ್ನು ಕೊಟ್ಟು ಬರುವ ನಿಯಮವಿದೆ. ದೂರವಿದ್ದವರು ಪೋಸ್ಟಿನ ಮೂಲಕ ಕಳಿಸುವುದೂ ಉಂಟು.ಇದು ಗೌರವ ಸೂಚಕವು ಹೌದು.

ಆಶಯ
ಮೇಲು ನೋಟದಲ್ಲಿ ಕೇವಲ ಪೂಜೆಯಾಗಿ ಕಾಣುವ ಈ ಆಚರಣೆ, ನಮ್ಮ ಜನಪದರ ಪ್ರಕೃತಿ ಪೂಜೆಯ ಮುಂದುವರಿಕೆ, ಸಮಷ್ಟಿ ಪ್ರಜ್ಞೆಯ ಮತ್ತೊಂದು ಉದಾಹರಣೆ ಎಂದರೂ ತಪ್ಪಲ್ಲ .ಎಲ್ಲೂ ಬಳಕೆ ಆಗದ ಸಸ್ಯಗಳು.ಈ ಆಚರಣೆಯಲ್ಲಿ ಬಳಸಲ್ಪಡುತ್ತವೆ. ಸಮಾಜದಲ್ಲಿ ಎಲ್ಲಾ ಸಮುದಾಯದ ಸಾಮರಸ್ಯದ ತತ್ವವನ್ನು ಇದು ಒಳಗೊಂಡಿದೆ.ಇದೊಂದು ಆಚರಣೆಯ ನಿಮಿತ್ಯ ತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ ಗೃಹಿಣಿ ತನ್ನ ಸರೀಕರೊಂದಿಗೆ ಬೆರೆತು ಕಷ್ಟ ಸುಖ ಮಾತಾಡುವ ಅವಕಾಶವನ್ನು ಮಾಡಿಕೊಡುವ ಉದ್ದೇಶದಿಂದಲೂ ಈ ನಿಯಮ ಮಾಡಿರಬಹುದು..
ಪದ್ಧತಿ ಸಂಪ್ರದಾಯಗಳು ಯಾವುದೊ ಒಂದು ಆಶಯ ದ ಹಿನ್ನೆಲೆಯಲ್ಲೇ ರೂಪುಗೊಂಡಿರುತ್ತವೆ.ಮತ್ತು ಮಾನವನಿಗೆ ಸಂಸ್ಕೃತಿಗೆ ಸನ್ನಿಹಿತವಾಗಿ ನಡೆಯಲು ಪ್ರೇರೇಪಿಸುತ್ತವೆ.ಅದನ್ನು ಅರಿತು ಮುನ್ನಡೆಸಿಕೊಂಡು ಹೋಗುವ ಮನಸ್ಸು ನಮಗಿರಬೇಕು ಅಷ್ಟೇ!

ನೆನಪಿನ ಅಂಗಳದಲ್ಲಿ


ರೇಖಾ ಪಾಟೀಲ. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ಊರಿನವರು. ಅವರ ಕರ್ಮಭೂಮಿಯಾದ ಬೆಂಗಳೂರು ಈಗ ಗಂಡನ ಮನೆ ಕೂಡ. ಸಾಹಿತ್ಯ, ಹಾಡು ಕೇಳುವುದು ಪ್ರವಾಸ, ಹರಟೆ,ಕನ್ನಡ ನಾಡು ನುಡಿ,ಅವರ  ಮನಸಿಗೆ ಖುಷಿ ಕೊಡುವ ವಿಚಾರಗಳು.
ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ನಿಮಿತ್ತ ಬೆಲ್ಫಾಸ್ಟ್ನಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ .


ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಶಾಲೆಯ ಕೊನೆಯ ದಿನ ಪರೀಕ್ಷೆ ಮುಗಿಸಿ ಬಂದವರೇ ಅಜ್ಜನ ಊರಿಗೆ ಹೋಗುವುದು ವಾಡಿಕೆಯಾಗಿತ್ತು.
ನನ್ನ ಅಜ್ಜನ ಊರು ಗಾಡಗೋಳಿ ಅನ್ನುವ ಹೆಸರಿನ, ಹೊಳೆ ಆಲೂರಿನ ಹತ್ತಿರ ಒಂದು ಹಳ್ಳಿ. ಭರ್ಜರಿ ೨ ತಿಂಗಳಿನ ಬೇಸಿಗೆ ರಜೆ ಕಳೆಯುವುದು ಅಲ್ಲೇ. ಅಲ್ಲಿಗೆ ಹೋಗುವುದಕ್ಕೆ ಕಾರಣ ಅಜ್ಜ,ಅಜ್ಜಿ,ಚಿಕ್ಕಮ್ಮ, ಮಾಮ ಅವರು ತೋರಿಸುವ ಪ್ರೀತಿ ಒಂದು ಕಡೆ ಆದರೆ ಊರಲ್ಲಿ ಹಾದು ಹೋಗುವ, ಊರಿನ ಜೀವ ನದಿ ಮಲಪ್ರಭೆ ಅತಿ ಮುಖ್ಯ ಮತ್ತು ಅಸಲಿ ಕಾರಣ ಅಂತ ಅನಿಸುತ್ತದೆ

ದೈನಂದಿನ ನೀರಿನ ಎಲ್ಲ ಅವಶ್ಯಕತೆಗಳಿಗೆ ಇಡೀ ಊರೇ ನೆಚ್ಚಿಕೊಂಡಿದ್ದು ಮಲಪ್ರಭೆಯನ್ನೇ. ಅಜ್ಜನ ಮನೆಯಿಂದ ಹೊಳೆ 3 ರಿಂದ 4 ನಿಮಿಷದ ಕಾಲು ದಾರಿ. ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ದನ ಕರುಗಳಿಗೆ ನೀರು ಕುಡಿಸಲು ಹೀಗೆ ಹತ್ತು ಹಲವು ಕೆಲಸಗಳಿಗೆ ಊರಿನ ಜನ ಇಡೀ ದಿನ ಹೊಳೆಗೆ ಹೋಗಿ ಬರುವುದು ಸಾಮಾನ್ಯವಾಗಿತ್ತು. ಪ್ರತಿ ಸಲ ನಮ್ಮ ಮನೆಯಿಂದ ಯಾರಾದರೂ ಹೊಳೆಗೆ ಹೋದರೂ ನಾನು ಮತ್ತು ನನ್ನ ತಮ್ಮಂದಿರು ಅವರನ್ನು ಹಿಂಬಾಲಿಸುತ್ತಿದ್ದೆವು. ಕಾರಣ ನದಿಯಲ್ಲಿ ಈಜುವುದು.

ದಿನದ ಕನಿಷ್ಠ ಪಕ್ಷ, 4 ರಿಂದ 5 ಘಂಟೆಗಳ ಕಾಲ ಹೊಳೆಯಲ್ಲೇ ಕಳೆಯುತ್ತಿದ್ದೆವು. ಬಟ್ಟೆ ತೊಳೆಯುವುದಕ್ಕೆಂದು ಹೋದವರ ಜೊತೆ ಹೋಗಿ, ಬಟ್ಟೆ ತೊಳೆದು, ಮರಳಿನ ಮೇಲೆ ಹಾಕಿ ಬಟ್ಟೆ ಒಣಗಿಸಿ ಮಡಚಿದ ಮೇಲೆಯೇ ಮನೆಗೆ ಮರಳುವುದು. ಅಲ್ಲಿಯವರೆಗೂ ನೀರಲ್ಲೇ ಆಟ.
ಊರಿನಲ್ಲಿ ಕೆಲವೊಂದು ಮನೆಗೆ ನಲ್ಲಿಯ ವ್ಯವಸ್ಥೆ ಇತ್ತಾದರೂ ಸಾಕಾಗುವಷ್ಟು ಕುಡಿಯಲು ನೀರು ಸಿಗುತ್ತಿರಲಿಲ್ಲ. ಅದಕ್ಕೂ ಹೊಳೆ ದಾಟಿ ಮರಳನ್ನು ಬಗೆದು ವರ್ತಿ ತೋಡಿ ತಿಳಿಯಾದ ಕುಡಿಯುವ ನೀರನ್ನುತೆಗೆದುಕೊಂಡು ಹೋಗುತ್ತಿದ್ದರು.
ಆ ವರ್ತಿಯಲ್ಲಿ ಒಂದು ಚಿಕ್ಕ ಪಾತ್ರೆಯ ಸಹಾಯದಿಂದ ತಿಳಿಯಾದ ನೀರನ್ನು ಕೊಡಕ್ಕೆ ತುಂಬುವುದೇ ಒಂದು ಖುಷಿ. ಇದೆಲ್ಲ ಸಂಭ್ರಮವನ್ನು ನೋಡಲೆಂದೇ ತಾಯಿ ಮಲಪ್ರಭೆ ಊರನ್ನು ಶಾಂತವಾಗಿ ದಾಟಿ ಹೋಗುತ್ತಿದ್ದಳೇನೋ ಅನಿಸುತ್ತದೆ.

ಹೊಳೆ ಆಲೂರಿನಲ್ಲಿ ಹೊಳೆಗೆ ಅಡ್ಡವಾಗಿ ರೈಲ್ವೆ ಹಳಿ ಇದೆ. ಅದರ ಮೇಲೆ ಕೂಗಿಕೊಂಡು ಹೋಗುವ ರೈಲಿನ ಶಬ್ದ ಇಲ್ಲಿಗೂ ಕೇಳುತ್ತದೆ. ಆ ಕೂಗಿನೊಂದಿಗೆ ಜನ ಸಮಯವನ್ನು ಗುರುತಿಸುತ್ತಿದ್ದರು. 12ರ ಟಪಾಲ್ ಗಾಡಿ, 5ರ ಹಾಲಿನ ಗಾಡಿ ಹೀಗೆ. ಈಗ ನಾನಿರುವ ಮನೆಯ ಮೇಲೆ ಪ್ರತಿ 10 ರಿಂದ 15 ನಿಮಿಷಕ್ಕೊಂದು ವಿಮಾನ ಹಾರುತ್ತದೆ, ಅದರಿಂದ ನಾನು ಯಾವ ದಿನಚರಿಯನ್ನು ಗುರುತಿಸಿಕೊಂಡಿಲ್ಲವಾದರೂ ನನಗೆ ನೆನಪಾಗುವುದು ಟಪಾಲ್ ಗಾಡಿ ಮತ್ತು ಹಾಲಿನ ಗಾಡಿ.
ಒಂದಷ್ಟು ವರ್ಷಗಳ ನಂತರ ಪ್ರತಿ ಮನೆಗೆ ನಲ್ಲಿ ಸೌಕರ್ಯ ದೊರಕಿ ಹೊಳೆಗೆ ಹೋಗುವುದು ಕಡಿಮೆ ಆಯಿತು. ಅಷ್ಟೊತ್ತಿಗೆ ನಾವುಗಳು ಪ್ರೌಢ ಶಾಲೆಗೆ ಸೇರಿದ್ದರಿಂದ ರಜೆಗೆಂದು ಊರಿಗೆ ಹೋಗುವುದು ತೀರಾ ವಿರಳವಾಗಿತ್ತು. ಹೊಳೆಯಲ್ಲಿ ಮಣ್ಣೆತ್ತುವ ಕೆಲಸ ಭರದಿಂದ ಸಾಗಿ ಹೊಳೆಗೆ ಹೋಗುವುದೇ ಅಪಾಯ ಅನ್ನುವಂತಾಯಿತು. ಊರಿನ ಜನ ಹೊಳೆಯಾಚೆಗಿನ ಹೊಲಗಳನ್ನು ಮಾರಿಕೊಂಡರು.
2009ರ ಪ್ರವಾಹದಲ್ಲಿ ಮಲಪ್ರಭೆ ಇಡೀ ಊರನ್ನೇ ಆವರಿಸಿಕೊಂಡಳು. ಒಂದಿಡೀ ವಾರ ಪೂರ್ತಿ ಊರಿಗೆ ಊರೇ ನೀರಲ್ಲಿ ಮುಳುಗಿ ಹೋಯಿತು. ಊರ ಜನರೆಲ್ಲಾ ಗಂಜಿ ಕೇಂದ್ರಗಳಿಗೆ ಹೋಗಿ ಸೇರಿಕೊಂಡರು.ಈಗ ಊರನ್ನು ನದಿಯಿಂದ ದೂರ ಸ್ಥಳಾಂತರಿಸಲಾಗಿದೆ.
ಸುಮಾರಷ್ಟು ವರ್ಷಗಳಾದ ಮೇಲೆ ಮತ್ತೆ ಹೋದೆ ಅಜ್ಜನ ಮನೆ ಮತ್ತು ನಾವು ಜೀವದಂತೆ ಪ್ರೀತಿಸುತ್ತಿದ್ದ ಹೊಳೆ ನೋಡಲು. ಅಜ್ಜನಿಲ್ಲದ ಬಿದ್ದು ಹೋದ ಮನೆ ನೋಡಿ ಯಾಕೋ ಗಂಟಲಬ್ಬಿಬಂತು, ಮಾತೇ ಹೊರಡಲಿಲ್ಲ ಕಣ್ಣು ತುಂಬಿಕೊಂಡಿತ್ತು.

ಕವನ-ಭಾವಯಾನ

ಬರೆಯಬೇಕು!

ಬರೆಯಲೇಬೇಕು ಹಾಗೆಂದು ಮಾಡಿಟ್ಟುಕೊಂಡ ವಿಷಯಗಳ ಪಟ್ಟಿ ದಿನದಿಂದ ದಿನಕ್ಕೆ ಉದ್ದವಾಗುತ್ತಲೇ ಇದೆ ಆದರೆ ಬರೆಯಲು ಮಾತ್ರ
ಆಗುತ್ತಿಲ್ಲ. ನನ್ನ ಪ್ರಾಥಮಿಕ ಶಾಲೆಯಲ್ಲಿ ಇದ್ದ ಅಕ್ಕವರು ಇಂಥಹ ‘ಆಗಲ್ಲ ಆಗ್ತಿಲ್ಲ’ ಅನ್ನೋ ಪದಗಳನ್ನ ಕೇಳಿದಾಗ ಹೇಳುತ್ತಿದ್ದ
‘ಕಳ್ಳಂಗೊಂದು ಪಿಳ್ಳೆ ನೆವ’ ಅನ್ನೋ ಗಾದೆ ಇತ್ತೀಚಿಗೆ ಪದೇ ಪದೇ ನೆನಪಾಗುತ್ತದೆ.
ಸಮಯವೇ ಸಿಗ್ತಿಲ್ಲ ಎನು ಮಾಡಲಿ? ಅನ್ನುವ ಮಾತನ್ನು ಮನಸು ಬುದ್ಧಿಗೆ, ಬುದ್ಧಿ ಮನಸಿಗೆ ಆಗೀಗ ಹೇಳಿಕೊಳ್ಳುತ್ತಲೇ
ಪ್ರೌಡಶಾಲಾ ದಿನಗಳಲ್ಲಿ ಭೂಗೋಳ ಮತ್ತು ಕನ್ನಡ ಪಾಠ ಮಾಡುತ್ತಿದ್ದ ಲಕ್ಷ್ಮಣ್ ಸರ್ ‘ಸಮಯ ಯಾರಿಗೂ ಈ ತನಕ ಸಿಕ್ಕಿಲ್ಲ,
ಮಾಡ್ಕೋಬೇಕು, ಏನಾದ್ರೂ ಕಲೀಬೇಕು, ಸಾಧಿಸಬೇಕು, ಬೇಕು ಅಂದ್ರ!’ ಅಂತ ಹೇಳತಿದ್ದುದು ಕೂಡ ಇಂಥ ಸಂದರ್ಭದಲ್ಲಿ
ನೆನಪಾಗುತ್ತದೆ.
ಜೊತೆಗೆ ಈ ಸೋಶಿಯಲ್ ಮೀಡಿಯಾ ಅನ್ನುವ ವರರೂಪಿ ಶಾಪದ ಛಾಯೆಯಿಂದ ದೂರ ಉಳಿಯಬೇಕೆಂದರೂ ಆಗದು. ಅಲ್ಲೂ
ಕೆಲವರಂತೂ ಅದೆಷ್ಟು ಚಂದ ಬರೆಯುತ್ತಾರೆಂದರೆ, ಬರೀ ಎರಡೇ ಸಾಲುಗಳಲ್ಲಿ ಸೀದಾ ಮನದ ಬಾಗಿಲ ಕದ ತಟ್ಟಿಬಿಡುತ್ತಾರೆ. ಹೊಟ್ಟೆಕಿಚ್ಚು
ಹುಟ್ಟಿಸುತ್ತಾರೆ. ಮರೆತೇಹೋದಂತಿರುವ ಬರವಣಿಗೆಯ ಕಡೆಗೆ ಗಮನ ಕೊಡುವಂತೆ ಮಾಡುತ್ತಾರೆ. ಒಂದೂ ಮಾತಾಡದೆ ಸಾವಿರ
ವಿಷಯಗಳ ಹಚ್ಚೆ ಹಾಕಿಬಿಡುತ್ತಾರೆ.
ಇತ್ತೀಚಿಗೆ ಅಂತಹುದೇ ಒಂದು ಫೇಸ್ಬುಕ್ ಖಾತೆಯ ಪೋಸ್ಟುಗಳ ಮಾಯೆಗೆ ನಾನು ಒಳಗಾಗಿರುವೆ. ಬೆಟ್ಟದ ಹೂವು ಎಂಬ ಹೆಸರಿನಿಂದ
ಬರೆಯುವ ಇವರು ಅವಳೋ/ ಅವನೋ ಗೊತ್ತಿಲ್ಲ. ಹಿಂದಿ, ಉರ್ದು ಪದ್ಯಗಳ ಸಾಲುಗಳನ್ನು ತುಂಬಾ ಸುಂದರವಾಗಿ
ಅನುವಾದಿಸುತ್ತಾರೆ.
ಒಮ್ಮೆ ಓದಿದರೆ ಆಯ್ತು, ಮತ್ತೆ ನಾವೇ ಹುಡುಕಿ ಹೋಗಿ ಓದುವಷ್ಟು ಬೆಚ್ಚಗಿರುತ್ತವೆ ಆ ಅನುವಾದಗಳು, ಜೊತೆಗೆ ಅವರೂ ಆಗೀಗ
ಅವರ ಸ್ವಂತದ ಕವಿತೆಗಳನ್ನೂ ಪೋಸ್ಟ್ ಮಾಡುತ್ತಾರೆ. ಕೆಲವೊಮ್ಮೆ ಹೇಳದೆ ಕೇಳದೆ ಫೇಸ್ಬುಕ್ ಗೆ ರಜೆ ಹಾಕಿ ನಾಪತ್ತೆಯಾಗುತ್ತಾರೆ.
ಇಂಥಹ ಹಲವು ಅನಾಮಿಕ, ಅನಾಮಧೇಯ ಅಕೌಂಟ್ ಗಳು ಚಂದದ ಪದ್ಯಗಳನ್ನು ಪೋಸ್ಟ್ ಮಾಡುತ್ತವೆ. ಆದರೆ ನನಗೆ ಬರೆಯಲು
ಹಚ್ಚಿದ್ದು ಮಾತ್ರ ಈ ಬೆಟ್ಟದ ಹೂವು.
ಅವರ ಪೋಸ್ಟ್ಗಳಿಂದಾಗಿ ನಾನು ಗುಲ್ಜಾರ್ ರನ್ನು ಓದಲು ಶುರು ಮಾಡಿದೆ, ಮತ್ತೆ ಆಗೊಮ್ಮೆ ಈಗೊಮ್ಮೆ ಅವರ ಕವಿತೆ, ನುಡಿ,
ಶಾಯರಿ, ಗಝಲ್ಗಳ ಭಾವಾನುವಾದ ಮಾಡಲು ಪ್ರಯತ್ನಿಸಿದೆ. ನಿಮ್ಮ ಓದಿಗೆ ಈ ಸಂಚಿಕೆಯಲ್ಲಿ ನಾನು ಅಂತರ್ಜಾಲದಲ್ಲಿ ಓದಿ
ಭಾವಾನುವಾದ ಮಾಡಿರುವ ಕೆಲವನ್ನು ಇಲ್ಲಿ ಲಗತ್ತಿಸಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ಮರೆಯದಿರಿ.
ನಿಮ್ಮ
ಅಮಿತಾ ರವಿಕಿರಣ್

ತುಟಿಗಳಾಡಿದ ಪದಗಳಾಗಿದ್ದರೆ
ತಪ್ಪು ಹುಡುಕಬಹುದಿತ್ತು ಆದರೆ
ಅದೆಲ್ಲ ಹೇಳಿದ್ದು ಆಕೆಯ ಕಣ್ಣಾಲಿಗಳು.


ಕಣ್ಣುಗಳಾಗಿದ್ದಕ್ಕೆ ಸತ್ಯ ಹೇಳಿಬಿಟ್ಟವು,
ತುಟಿ ಉಸುರಿದ ಮಾತುಗಳಿಗಾಗಿ
ದೇವರ ಆಣೆ ಇತ್ತ ಮೇಲೂ
ವಾದ ವಿವಾದ ನಡೆಯುತ್ತವೆ ಇಲ್ಲಿ..


ಹೂವಿನಂತೆ ನಿನ್ನ ತುಟಿ ಅರಳಿ,
ನಿನ್ನ ದನಿಯ ಕಂಪು ಘಮಘಮಿಸಲಿ


ಈ ಒಂಟಿತನ ಎಷ್ಟು ಹಿತವಾಗಿದೆ ಗೊತ್ತಾ,
ಸಾವಿರ ಪ್ರಶ್ನೆಗಳ ಕೇಳುತ್ತಾದರೂ
ಉತ್ತರ ಬೇಕೆಂಬ ಹಠ ಮಾಡುವುದಿಲ್ಲ.


ಈ ಜಗದ ಕಣ್ಣಗೆ ನಾನು ವಿಚಿತ್ರ,
ವಿಕ್ಷಿಪ್ತಳೂ ಹೌದು
ಕಾರಣ, ನನಗೆಲ್ಲವೂ ನೆನಪಿರುತ್ತದೆ.


ನಿನ್ನಾ ಎಷ್ಟು ನಂಬ್ತೀನಿ ಗೊತ್ತಾ?
ತುಟಿ ಉಸುರುವಾಗ,
ಮನದ ತುಂಬಾ, ಸಂಶಯದ ಬಿಳಿಲುಗಳಲ್ಲಿ
ಭಯ ಜೋಕಾಲಿಯಾಡುತ್ತಿರುತ್ತದೆ.


ಪ್ರೀತಿ ಎಂದರೇನು?
ಎಂಬುದಷ್ಟೇ ನನ್ನ ಪ್ರಶ್ನೆಯಾಗಿತ್ತು.
ಅಸಫಲ ಇಚ್ಛೆಯ ನಿಟ್ಟುಸಿರು ಅನ್ನುವ ಉತ್ತರ
ನೀ ತೊರೆದ ಗಳಿಗೆ ತಿಳಿಸಿತು.


ಏನಾದರೊಂದು
ಮಾತಾಡುತ್ತಲೇ ಇರು,
ನೀ ಸುಮ್ಮನಿದ್ದರೆ
ಜನ ಕೇಳುತ್ತಾರೆ!