ಬೆಕ್ಕಿನ ಬಾಣಂತನ – ಅನುಭವ ಕಥನ

ಬೆಕ್ಕಿನ ಬಾಣಂತನ
ಆಕೆಯ ಹೆಸರು ಐಶ್ವರ್ಯ!
ಮನೆಯ ಹತ್ತಿರವಿದ್ದ ಫಾರೆಸ್ಟ್ ಡಿಪೋ ದಾರಿಯಿಂದ ಹಾದು ಬರುತ್ತಿದ್ದಾಗ ನನ್ನ ಗೆಳತಿ ಮಂಗಲಾ ನನ್ನ ಕರೆದು. 'ಅಮಿತಾ ನಿನಗೆ
ಬೆಕ್ಕಿನ ಮರಿ ಬೇಕಾ?' ಎಂದು ಕೇಳಿದಳು. ಬೆಕ್ಕು, ನಾಯಿ ಎಂದರೆ ನಮ್ಮ ಜನ್ಮದ ಬಂಧುಗಳು. ಅವರನ್ನು ಬೇಡ ಎಂದು ಹೇಳಿ
ನಾನ್ಯಾವ ನರಕ ನೋಡಲಿ?

ಮನೆಯಲ್ಲಿ ಬೆಕ್ಕಿನ ಮರಿ ಇತ್ತಾದರೂ, ಮಂಗಲಾ ತೋರಿಸಿದ ಆ ಪುಟ್ಟ ಪುಟಾಣಿ ಮುದ್ದಿನ ಸೊಕ್ಕನ್ನ ನೋಡಿದ ಮೇಲೆ
ಇಲ್ಲವೆನ್ನಲು ಆಗಲೇ ಇಲ್ಲ.
ದಪ್ಪ ಬಾಲದ ಉದ್ದ ರೋಮಗಳ ಆ ಬೆಕ್ಕಿನ ಮರಿಯನ್ನ ಎತ್ತ್ಕೊಂಡ್ ಬಂದುಬಿಟ್ಟೆ.

ಆದರೆ ಈ ವಿಷಯವನ್ನು ಮನೆಯಲ್ಲಿ ಅಮ್ಮನ ಎದುರು ಹೇಳುವ ಧೈರ್ಯ ನಮ್ಮಲ್ಲಿ ಯಾರಿಗೂ ಇರ್ಲಿಲ್ಲ. ಈ ಸಾಕು ಪ್ರಾಣಿ
ವಿಷಯದಲ್ಲಿ ನನ್ನ ಅಮ್ಮನಿಗೆ ಅವಳದೇ ಆದ ಕೆಲವು ನಿಲುವು, ನಿಯಮಗಳಿದ್ದವು, ಈಗಲೂ ಆಕೆ ಅವನ್ನೆಲ್ಲ ಹಾಗೆಯೇ
ಪಾಲಿಸಿಕೊಂಡು ಬಂದಿದ್ದಾಳೆ.
ಆಕೆಯ ಪ್ರಕಾರ ಸಾಕು ಪ್ರಾಣಿಗಳನ್ನು ಪ್ರಾಣಿಗಳಂತೆಯೇ ನೋಡಬೇಕು, ಅವನ್ನು ಮನುಷ್ಯರಂತೆ ಒಳಮನೆ, ಅಡುಗೆಮನೆ, ಹಾಸಿಗೆ
ತನಕ ಕರೆದೊಯ್ದು ಮುದ್ದು ತೋರಿಸುವ ಅಗತ್ಯ ಇಲ್ಲ. ನೀವು ಹಾಸಿಗೆ ಕೊಡಿ, ಗೋಣಿಚೀಲ ಕೊಡಿ ಅವಕ್ಕೆ ಎರಡೂ ಒಂದೇ!
ಎಂದು ವಾದ ಮಂಡಿಸುವ ನನ್ನ ಅಮ್ಮ,
ಕೊಟ್ಟಿಗೆಯಲ್ಲಿದ್ದ ಬೆಳ್ಳಿ ಭಾಮು, ಪುಟ್ಟಿ, ಆದಿ ಎಂಬ ನಾಮಾಂಕಿತ ಗೋವುಗಳ ಜೊತೆಗೆ ಗಂಟೆಗಟ್ಟಲೆ ಏಕಮುಖ ಸಂವಹನ
ನಡೆಸುತ್ತಿದ್ದಳಾದರೂ, ಬೆಕ್ಕು, ನಾಯಿಗಳ ನೆರಳೂ ಆಕೆಗೆ ಆಗುತ್ತಿರಲಿಲ್ಲ.

ಇಂತಿಪ್ಪ ನನ್ನ ಅಮ್ಮನ ಸಮ್ಮುಖ ಈ ಹೊಸ ಬೆಕ್ಕನ್ನು ತಂದಿದ್ದನ್ನು ಅರುಹಿ ಸಂಭಾಳಿಸೋದು ಯಾರು ಎಂಬುದು ನಮ್ಮ
ಮುಂದಿದ್ದ ದೊಡ್ಡ ಪ್ರಶ್ನೆಯಾಗಿತ್ತು. ಜೊತೆಗೆ ಮನೆಯಲ್ಲಿ ಅದಾಗಲೇ ಗಿಳ್ಳಿ ಎಂಬ ಹಿಂದೆಂದೂ ಒಂದೂ ಇಲಿ ಹಿಡಿಯದ ಬೆಕ್ಕು
ಒಲೆಯ ಹಿಂದೆ, ಕೆಲವೊಮ್ಮೆ ಬೆಚ್ಚಗಿನ ಬೂದಿಯ ಮೇಲೆ ಮಲಗಲೆಂದು ಒಲೆಯನ್ನು ಕೆದರಿ ಹಾಕಿ ಅಮ್ಮನ ಕೋಪ ಕಟಾಕ್ಷಕ್ಕೆ
ಆಗಾಗ್ಯೆ ಗುರಿಯಾಗುತ್ತಿತ್ತು.

ಅಡಿಗೆ ಕೊಣೆಯಲ್ಲಿ ಓಡಾಡೋ ಅದನ್ನು ಅಮ್ಮ ಎಲ್ಲ ರೀತಿಯಿಂದಲೂ ಹೀಯಾಳಿಸುತ್ತಿದ್ದರೆ ಅದು ಮಾತ್ರ ನನಗೂ ಈ
ಬೈಗುಳಿಗೂ ಯಾವ ಸಂಬಂಧ ಇಲ್ಲ ಸರ್ ನಾ ತುಂಬಾ ಒಳ್ಳೆಯವನು ಎನ್ನುತ್ತಾ ಚಕ್ಕುಲಿಯಾಗಿ ಮತ್ತೂ ಗಾಢ ನಿದ್ದೆ
ಮಾಡುತ್ತಿತ್ತು.

ಹೀಗೆ ಹೊತ್ತಲ್ಲದ ಹೊತ್ತಲ್ಲಿ ಮತ್ತೊಂದು ಬೆಕ್ಕು ತಂದು ಮನೆಗೆ ಸೇರಿಕೊಳ್ಳುವ ಬಯಕೆ ಆದಾಗಲೆಲ್ಲ ನಮ್ಮದೊಂದು
ಪುಟ್ಟ ಡ್ರಾಮಾ ಟೀಂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿತ್ತು. ಅಮ್ಮ ಒಬ್ಬಳು ಬಿಟ್ಟು ಇನ್ನುಳಿದವರಿಗೆಲ್ಲ ಅವರವರ ಪಾತ್ರ,
ಸಂಭಾಷಣೆ ನೀರು ಕುಡಿದಷ್ಟೇ ಸರಳವಾಗಿ ರೂಢಿಯಾಗಿತ್ತು.

ಹಿತ್ತಲ ಬಾಗಿಲಿಂದ ಬೆಕ್ಕನ್ನು ಒಳಗೆ ಬಿಟ್ಟು, ಮುಂದಿನ ಪಡಸಾಲೆಯಲ್ಲಿ ಏನೇನೂ ಗೊತ್ತಿಲ್ಲದವರಂತೆ ಬಂದು ಕೂತು
ಬಿಡುತ್ತಿದ್ದೆವು. ಮನೆಗೆ ಬೆಕ್ಕು ತಾನಾಗೇ ಬಂದು ಸೇರಿದರೆ ಒಳ್ಳೇದು ಎಂದು ಅಮ್ಮನಿಗೆ ಅವರಮ್ಮ ಅದ್ಯಾವುದೋ ಕಾಲದಲ್ಲಿ
ಹೇಳಿದ ಮಾತನ್ನು, ಅದ್ಯಾವುದೋ ಒಂದು ಗಳಿಗೆಯಲ್ಲಿ ನಮ್ಮ ಮುಂದೆ ಹೇಳಿದ್ದೇ ತಪ್ಪಾಗಿತ್ತು. ನಾವು ಹೀಗೆ ಹಿತ್ತಲ
ಬಾಗಿಲಿನಿಂದ ಮನೆಗೆ ಸೇರಿಸಿ ತಾನಾಗೇ ಬೆಕ್ಕು ಬಂತು ಎಂದಾಗ ಉಪಾಯ ಇಲ್ಲದೆ ಪಾಪದ ನನ್ನಮ್ಮ, ಅವರಮ್ಮನ ಮಾತನ್ನು
ನೆನೆದು, ಬೆಕ್ಕನ್ನು ಒಲ್ಲದ ಮನಸಲ್ಲೇ ಆದರೂ ಒಳಗೆ ಸೇರಿಸಿಕೊಳ್ಳಲೇ ಬೇಕಾಗುತ್ತಿತ್ತು.

ಆಮೇಲೆ ಬೆಕ್ಕಿನ ತಲೆಗೆ ಸ್ವಲ್ಪ ತೆಂಗಿನ ಎಣ್ಣೆ ಸವರಿ ಅಡಿಗೆ ಒಲೆಯ ಸುತ್ತ ೩ ಬಾರಿ ಅದನ್ನ ಹಿಡಿದು ತಿರುಗಿಸಿದರೆ ಆ ದಿನದಿಂದ
ಅದು ನಮ್ಮ ಬೆಕ್ಕು.

ಹಾಗೆ ಬಂದ ನಂತರ ಅದಕ್ಕೆ ನಾಮಕರಣವೂ ಆಗಬೇಕಲ್ಲ. ಸಾಮಾನ್ಯವಾಗಿ ಯಾವ ದಿನ ತಂದಿದ್ದೆವೋ ಆ ವಾರದ ಹೆಸರಿನ
ಆರಂಭದ ಅಕ್ಷರದಲ್ಲೇ ಹೆಸರಿಡೋದು ನಮ್ಮ ಮನೆಯ ಅಲಿಖಿತ ನಿಯಮ. ಆದರೆ ಈ ಬಾರಿ ಆ ಬೆಕ್ಕಿನ ಮರಿಯ ಅದಾ,ನಜಾಕತ್,
ನೋಡಿ ಅದಕ್ಕೆ ಐಶ್ವರ್ಯ ಅನ್ನೋ ಹೆಸರಿಟ್ಟಿದ್ದೆವು. ಆಕೆ ನಾವು ಆ ತನಕ ನೋಡಿದ, ನಮ್ಮ ಮನೆಯಲ್ಲಿ ಸಾಕಿದ ಬೆಕ್ಕುಗಳಲ್ಲಿ
ಚಂದ ರೂಪಿನವಳು. ಜಗದೇಕ ಸುಂದರಿ

ಹಾಗೆ ಬಂದು ಮನೆ ಸೇರಿದ ‘ಬಿಲ್ಲಿ’ ನಮ್ಮ ಮನೆಯ ಎಲ್ಲರ ಮುದ್ದು ಮರಿಯಾಗಿಬಿಟ್ಟಳು.
ಆಕೆಯನ್ನ ಹೇಗೆ ಮುದ್ದೆ ಮಾಡಿ ತೀಡಿ ಹೇಗೆ ತಿರುಚಿ ಮಲಗಿಸಿದರು ಆಕೆ ಅದೇ ಆಕಾರದಲ್ಲಿ ಮಲಗಿರುತ್ತಿದ್ದಳು. ಮೈ ಶಾಖ,
ಅಡುಗೆ ಒಲೆಯ ಹಿಂದಿನ ಬಿಸಿಗೆ ಮಲಗುವುದೆಂದ್ರೆ ಅದಕ್ಕೆ ಪ್ರಾಣ...
ದಿನಕಳೆದಂತೆ ಇನ್ನು ಚಂದ, ಮತ್ತೂ ಚಂದ ಆಗುತ್ತಾ ಹೋದಳು. ಅವತ್ತು ಪಪ್ಪನ ಸ್ನೇಹಿತರು ಮನೆಗೆ ಬಂದಾಗ ಐಶ್ವರ್ಯಳನ್ನು
ನೋಡಿ, ಅರೇ ಈ ಬೆಕ್ಕು ಎಲ್ಲಿಂದ ತಂದಿರಿ? ಇದು German long hair ಅನ್ನುವ ತಳಿ, ಭಾರತದಲ್ಲಿ ಅಪರೂಪವೇ, ಎಂದು
ಆಶ್ಚರ್ಯ ಪಟ್ಟಾಗ. ಆಕೆಗೆ ಐಶ್ವರ್ಯ ಎಂದು ಹೆಸರಿಟ್ಟಿದ್ದು ಸಾರ್ಥಕ ಅನಿಸಿತ್ತು.

ಹಾಗೆ ಲಾಸ್ಯ, ಲಾವಣ್ಯಗಳಿಂದ, ನಯ ನಾಜೂಕನ್ನೇ ಹೊದ್ದು ಆಕರ್ಷಣೀಯವಾಗಿ ಇದ್ದ ಐಶ್ವರ್ಯಾ ಹೊಟ್ಟೆ ದಿನದಿಂದ ದಿನಕ್ಕೆ
ದೊಡ್ಡದಾಗುತ್ತಾ ಬಂತು.
ನಮಗೆಲ್ಲರಿಗೂ ಖುಷಿ! ಬೆಕ್ಕು ಮುಚ್ಚಿಟ್ಟ ಮರಿಗಳನ್ನು ಹುಡುಕಿ, ಕಣ್ಣು ಬಿಡುವ ತನಕ ದಿನವೂ ಅವನ್ನು ಎಣಿಸಿ ಮುದ್ದಿಸಿ
ಬರುವ ಕಾತುರದಲ್ಲಿ ನಾವಿದ್ದೆವು. (ನಾವು=ನಾನು,ತಂಗಿ, ಅತ್ತೇ, ಅಜ್ಜಿ, ಪಪ್ಪ, ಚಿಕ್ಕಪ್ಪ)
ಥೇಟ್ ಮುದ್ದಿನ ಮಗಳು ಬಾಣಂತನಕ್ಕೆ ಬಂದಂಥ ಸಂಭ್ರಮ ಅದು.

ಬೆಕ್ಕುಗಳು ಕತ್ತಲಲ್ಲೇ ಮರಿ ಹಾಕುತ್ತವೆ ಹಾಕಿದ ಮೊದಲ ಮರಿ ತಿಂದು ಮುಗಿಸುತ್ತವೆ, ೭ ಜಾಗೆ ಬದಲಿಸುತ್ತವೆ ಹೀಗೆ ಬೆಕ್ಕಿನ
ಬಾಣಂತನದ ಕುರಿತು ಏನೇನೋ ನಂಬಿಕೆಗಳಿವೆ ಐತಿಹ್ಯಗಳೂ ಇವೆ. ಆದರೆ ಅದೆಲ್ಲ ಸುಳ್ಳು ಅನ್ನೋದನ್ನ ನನಗೆ ಮನವರಿಕೆ
ಮಾಡಿಕೊಟ್ಟಿದ್ದೆ ಐಶ್ವರ್ಯ.

ಆ ದಿನ ನಮ್ಮ ಮನೆಯ ಮೂಲೆಯ ಕೋಣೆಯಲ್ಲಿ ಓದುತ್ತ ಕುಳಿತಿದ್ದೆ. ನಮ್ಮ ಮುದ್ದು ಐಶು ಬಂದು ನನ್ ಕಾಲ್ ಮೇಲೆ
ಮಲಗಿತು. ಅದು ಆಕೆಯ ಯಾವತ್ತಿನ ರೂಡಿ. ಆದರೆ ಇವತ್ತು ಪ್ರತಿದಿನದಂತಲ್ಲ ಏನೋ ಹೇಳೋರ್ ಥರ ಪುಸ್ತಕ ವನ್ನ
ಪರಚೋದು ಕಾಲು ಒಮ್ಮೆಲೇ ನೆಟ್ಟಗೆ ಮಾಡಿ ವಿಚಿತ್ರ ದನಿಯಲ್ಲಿ ಕೂಗೋದು. ಮಲಗಿದ ಕಡೆಯೇ ಕಾಲಿನಿಂದ ಕೆದರಿ ಉಗುರು
ಹೊರ ತೆಗೆಯುವುದು ಹೀಗೆಲ್ಲ ವಿಚಿತ್ರ ವರ್ತನೆ ಮಾಡೋಕೆ ಶುರು ಮಾಡಿತು.

ಅದು ಮಾಡ್ತಿರೋದನ್ನ ನೋಡಿದ್ರೆ ಅದಕ್ಕೆ ಹೊಟ್ಟೆನೋವು ಬಂದಿದೆ ಎಂದು ಅನಿಸತೊಡಗಿತ್ತು ಆದರೆ ಆಯಾ ತನಕ ಕೇಳಿದ
ಕಥೆಗಳ ಪ್ರಕಾರ ಮರಿ ಹಾಕಲು ಬೆಕ್ಕಿಗೆ ಕತ್ತಲೆ ಜಾಗ ಬೇಕಲ್ಲ? ಇದನ್ನ ನಾನೇ ಒಯ್ದು ಅಟ್ಟದ ಮೇಲಿದ್ದ ಹಳೇ ಹಿತ್ತಾಳೆ
ಹಂಡೆಯ ಒಳಗೆ ಇಟ್ಟು ಬರಲಾ? ಎದ್ದು ಬಿಡಲ? ಎನ್ನುವ ಯೋಚನೆ ಬಂತಾದರೂ, ನನ್ನ ಮೈಯ್ಯ ಮೇಲಂತೂ ಮರಿ ಹಾಕಲ್ಲ
ಅನ್ನೋ ಒಂದು ವಿಶ್ವಾಸದೊಂದಿಗೆ ಅದನ್ನ ತೊಡೆಯ ಮೇಲೆ ಮಲಗಿಸಿ ಕೊಂಡು ಸುಮ್ಮನೆ ಅದರ ತಲೆ, ಹೊಟ್ಟೆ ಕೊರಳನ್ನ ಸವರುತ್ತ ಕುಳಿತೆ. ಹೀಗೆ ಅಂದುಕೊಂಡು ಗಳಿಗೆಯೂ ಕಳೆದಿಲ್ಲ ನನ್ನ ಅರಿವಿಗೆ ಬರುವ ಮೊದಲೇ ನನ್ನ ತೊಡೆಮೇಲೆ ನಮ್ಮ ಬಿಲ್ಲು, ಮರಿ ಹಾಕಿಬಿಟ್ಟಿತ್ತು. ಆ ಅನುಭವ ಬೇಕೆಂದರೂ ಸಿಗುವಂತದ್ದಲ್ಲ.
ಕೆಲವರಿಗೆ ಹೇಸಿಗೆ, ಕೆಲವರಿಗೆ ಅಯ್ಯೋ ರಾಮ್ ರಾಮನ ನೆನಪು, ಕೆಲವರಿಗೆ ನನ್ ಡ್ರೆಸ್ ಚಿಂತೆ,ನಾನು ಮಾತ್ರ ಆ ಗಳಿಗೆಗಳನ್ನು ಆಸ್ವಾಧಿಸುವುದರಲ್ಲಿ ಮಗ್ನಳಾಗಿದ್ದೆ.
ನನಗೆ ಆ ಅನುಭವ ಎಷ್ಟು ರೋಮಾಂಚನ ತಂದಿತ್ತು ಎಂದರೆ, ಮುಂದಿನ ೩ ಮರಿಗಳನೂ ಅದು ನನ್ ತೊಡೆ ಮೇಲೆ ಹೆತ್ತು, ಕೆಳಗೆ
ನಿಂತು ಹೊಕ್ಕಳ ಬಳ್ಳಿಯನ್ನು ತನ್ನ ಹಲ್ಲಿನಿಂದ ತುಂಡು ಮಾಡಿ ಮತ್ತೆ ತೊಡೆ ಮೇಲೆ ಬಂದು ಮಲಗಿ ಮತ್ತೆ ನೋವು
ಕೊಡುತ್ತಿತ್ತು. ನಾನು ಪ್ರತಿಸಲ ಅದು ಹುಡುಗಿಯಿಂದ ಅಮ್ಮನಾಗಿ ಪರಿವರ್ತನೆ ಗೊಂಡ ರೀತಿಯನ್ನು ಆ ಜವಾಬ್ದಾರಿ
ನಿರ್ವಹಿಸುತ್ತಿದ್ದ ಪರಿ ಕಂಡು ಮೂಕ ವಿಸ್ಮಿತಳಾಗಿದ್ದೆ.

ಯಾರು ಹೇಳಿಕೊಟ್ಟರು ಅದಕ್ಕೆ? ಕಣ್ಣು ಬಿಡದ ಆ ಮರಿಗಳನ್ನು ತನ್ನ ಮೊಲೆಗೆ ಅಂಟಿಸಿಕೊಂಡು ಹಾಲುಣಿಸುವ ಪರಿಯ,
ಮರಿಯ ಮಯ್ಯಸುತ್ತ ಇರೋ ಜಿಡ್ಡು ನೆಕ್ಕಿ ಅದನ್ನ ಶುಭ್ರ ಗೊಳಿಸೋ ಕ್ರಮವ? ಪ್ರಕೃತಿ ಅದೆಷ್ಟು ಅಧ್ಭುತ ಅಲ್ವಾ ?
ನನಗನಿಸಿದ ಮಟ್ಟಿಗೆ ಬೆಕ್ಕಿನ ಬಾಣಂತನದಷ್ಟು ಸ್ವಚ್ಛ ಶುಭ್ರ ಹೆರಿಗೆ, ಮತ್ತ್ಯಾವ ಜೀವಿಯೂ ಮಾಡಿಕೊಳ್ಳಲು ಸಾಧ್ಯವೇ
ಇಲ್ಲವೇನೋ.
ಏನೇ ಹೇಳಿ, ಇದೊಂದು ಜೀವಕಾಲದ ಅಮೂಲ್ಯ ಅನುಭವ. ಅದಕ್ಕೆ ಅಕ್ಷರ ರೂಪ ಕೊಡುವುದು ಕಷ್ಟ ಅನಿಸುತ್ತದೆ. ಆದರೆ ನೀವು
ನನ್ನನ್ನ ಎಂದಾದರೂ ಭೇಟಿ ಆದಾಗ, ಅದನ್ನ ಮಾತಲ್ಲಿ ವಿವರಿಸೋ ಪ್ರಯತ್ನ ಖಂಡಿತ ಮಾಡೇನು! ಆದರೆ ಅಕ್ಷರಗಳಿಗೆ ದಕ್ಕದ
ಭಾವಗಳನ್ನು ಮಾತಿನ ಮಾಲೆಯಲ್ಲಿ ಕಟ್ಟಿ ಹಾಕಲಾದೀತೆ?

ಅಲ್ಲಾದರೂ ನಾನೆ ಸೋಲುತ್ತೇನೆ!
ಐಶು ಈಗಿಲ್ಲ. ಆದ್ರೆ ಅವಳ ನೆನೆಪು, ನನಗೆ ಮೊದಲ ಬಾರಿ ಹೆರಿಗೆ ನೋವು ಬಂದಾಗ ಕಾಡಿದ್ದಂತೂ ನಿಜ.
ಇದು ನಮ್ಮ ಬೆಕ್ಕು ಐಶ್ವರ್ಯಳ ಚೊಚ್ಚಲ ಬಾಣಂತನದ ಕಥೆ.
- ಅಮಿತಾ ರವಿಕಿರಣ್
ಚಿತ್ರ ಕೃಪೆ: ಅಂತರ್ಜಾಲ

ರೇಡಿಯೋ ಕಳ್ಳನ ಕಥೆ!

ಆತ್ಮೀಯ ಓದುಗರೇ,

ಈ ಮೊದಲು ‘ಕಳ್ಳ ಮತ್ತು ಕಳ್ಳತನದ’ ಬಗ್ಗೆ ಪ್ರಕಟವಾಗಿದ್ದ ಹಾಸ್ಯ ಲೇಖನಗಳು ನಿಮ್ಮಲ್ಲಿ ಹಲವರಿಗೆ ನಿಮ್ಮ ಜೀವನದಲ್ಲಾದ ಘಟನೆಗಳನ್ನು ನೆನಪಿಸಿದ್ದಿರಬಹುದು,ಈ ಬಾರಿಯ ಸಂಚಿಕೆಯಲ್ಲಿ ಡಾ ಲಕ್ಷ್ಮೀನಾರಾಯಣ್ ಗುಡೂರ್ ಅವರು ತಮ್ಮ ಶಾಲಾದಿನಗಳಲ್ಲಿ ನಡೆದ ಅಂಥದ್ದೇ ಒಂದು ರೋಚಕ ಘಟನೆಯನ್ನ ಸುಂದರ ಶೈಲಿಯಲ್ಲಿ ವಿವರಿಸಿದ್ದಾರೆ. ಈ ಬರಹ ನಿಮಗೂ ನಿಮ್ಮ ಜೀವನದಲ್ಲಾದ ಇಂಥ ಯಾವುದಾದರು ಘಟನೆಯನ್ನು ನೆನಪಿಸಿದರೆ ದಯಮಾಡಿ ‘ಅನಿವಾಸಿ’ ಓದುಗರೊಂದಿಗೆ ಹಂಚಿಕೊಳ್ಳಿ. ಅನಿವಾಸಿಯ ಅಕ್ಷರ ಪಾತ್ರೆ ಅಕ್ಷಯವಾಗಲಿ ಎಂಬ ಆಶಯದೊಂದಿಗೆ

– ಸಂಪಾದಕಿ 

ನಾವೂ ಕಳ್ಳನನ್ನು ಹಿಡಿದೆವುಲಕ್ಷ್ಮೀನಾರಾಯಣ ಗುಡೂರ್, ಪ್ರೆಸ್ಟನ್

ನಾನು, ಮುರಲಿ ಇಬ್ಬರೂ ಕಲಬುರ್ಗಿಯಲ್ಲಿ ಅಜ್ಜಿ-ತಾತನ ಮನೆಯಲ್ಲಿದ್ದೆವು.  ನಾನಾಗ ಹತ್ತನೆಯ ತರಗತಿಯಲ್ಲಿದ್ದೆ, ನನ್ನ ಸೋದರತ್ತೆಯ ಮಗ ಮುರಲಿ ಪಿಯುಸಿ 1ನೇ ವರ್ಷ. ನಮ್ಮ ಮನೆಯಂಗಳದಲ್ಲಿ ಹಲವಾರು ಹಣ್ಣಿನ,ಹೂವಿನ ಗಿಡಗಳು ಇದ್ದು, ಕರಿಬೇವು, ಕಿರುನೆಲ್ಲಿಕಾಯಿ, ಪಾರಿಜಾತದ ಹೂಗಳು ಇತ್ಯಾದಿ ಯಥೇಚ್ಛ ಬೆಳೆಯುತ್ತಿದ್ದವು. ನೆಲ್ಲಿಕಾಯಂತೂ ಗಿಡ ಮುಟ್ಟಿದರೆ ಸಾಕು ಆಲಿಕಲ್ಲಿನ ಮಳೆ ಬಂದಂತೆ ನಮ್ಮ ತಲೆಯ ಮೇಲೆ ಉದುರುತ್ತಿದ್ದವು. ನಮ್ಮ ಮನೆಯಿದ್ದ ಜಾಗದ ಸುತ್ತಮುತ್ತ ಹಲವಾರು ಶಾಲೆಗಳಿದ್ದು, ಹುಡುಗರು ಹೊಗುವಾಗ, ಬರುವಾಗ, ಮಧ್ಯಂತರದಲ್ಲಿ ನಮ್ಮ ಮನೆಗೆ ಬಂದು ಅಜ್ಜಿ-ತಾತನನ್ನು ಕಾಡಿ, ಬೇಡಿ ನೆಲ್ಲಿಕಾಯಿ ಆಯ್ದುಕೊಂಡೊಯ್ಯಲು ಬರುತ್ತಿದ್ದರು. ನೆಲ್ಲಿಕಾಯಿಯ ಜೊತೆಗೆ, ಪಕ್ಕದಲ್ಲಿದ ನಿಂಬೆಹಣ್ಣು, ಕರಿಬೇವನ್ನೂ ಕೆಲವರು ಹೇಳದೇ ಕೇಳದೇ ಕಿತ್ತಿಕೊಂಡು ಹೋಗುವವರೂ ಇದ್ದರು. ಆದರೂ ಅಜ್ಜಿ-ತಾತ ಯಾರಿಗೂ ಇಲ್ಲವೆಂದದ್ದು ನಾನು ನೋಡಿರಲೇ ಇಲ್ಲ; ನೀವಿಬ್ಬರೇ ಇರುವಾಗ (ಇಬ್ಬರಿಗೂ 70+ ವಯಸ್ಸು, ಅಜ್ಜಿಯ ಬೆನ್ನು ಬಗ್ಗಿ ಮುಖ ನೆಲ ಮುಟ್ಟುತ್ತಿತ್ತು) ಯಾರನ್ನೂ ಮನೆಯೊಳಗೆ ಬಿಡಬೇಡಿ ಅಂದರೂ, “ಪಾಪ ಸಣ್ಣ ಹುಡುಗ್ರು, ತಿಂತಾವ ಬಿಡು; ನಮಗೇನು ಮಾಡ್ತಾವ” ಅಂದು ನಮ್ಮನ್ನು ಸುಮ್ಮನಾಗಿಸುತ್ತಿದ್ದರು. ಬಂದವರಲ್ಲಿ ಹೆಚ್ಚಿನ ಹುಡುಗರೂ ಅಜ್ಜಿ-ತಾತನನ್ನು ಗೌರವದಿಂದಲೇ ನೋಡುತ್ತಿದ್ದರೆನ್ನಿ; ಅಷ್ಟೇ ಅಲ್ಲ, ಪರೀಕ್ಷೆಯ ಹೋಗುವ ಮುನ್ನ ಅವರಿಗೆ ನಮಸ್ಕಾರ ಮಾಡಲೂ ಎಷ್ಟೋ ಮಕ್ಕಳು ಬರುತ್ತಿದ್ದರು. ಅವರಲ್ಲಿ ಕೆಲವರು ಕೇಳಿ ನೀರು ಕುಡಿಯುತ್ತಿದ್ದರು. 46 ಡಿಗ್ರಿಯ ಬಿಸಿಲಲ್ಲಿ ಬಂದವರಿಗೆ ನೀರು ಕೊಡಲೆಂದೇ ಬೋರ್ ವೆಲ್ಲಿನಿಂದ ಒಂದು ಕೊಡ ಹೆಚ್ಚೇ ತಂದು ಇಟ್ಟಿರುತ್ತಿದ್ದೆವು.


ಇಂಥ ಒಂದು ದಿನ, ಒಬ್ಬ ಹುಡುಗ ನೀರು ಕೇಳಿ ಬಾಗಿಲಿಗೆ ಬಂದ. ಅಜ್ಜಿ ಒಳಗೆ ಹೋಗಿ ನೀರು ತಂದು ಕೊಟ್ಟರು, ಹುಡುಗ ಕುಡಿದು ಹೋದ. ನಾನು ಸಾಯಂಕಾಲ ಮನೆಗೆ ಬಂದು ರೇಡಿಯೋ ಹಾಕೋಣವೆಂದು ನೋಡಿದರೆ, ಪಡಸಾಲೆಯ ಗಣಪತಿ / ಗೌರಿ / ರೇಡಿಯೋ ಮಾಡ ಖಾಲಿ ಹೊಡೆಯುತ್ತಿದೆ! ಟಿವಿಯಿಲ್ಲದ ಆ ಕಾಲದ ಮನೆಗಳಲ್ಲಿ, ರೇಡಿಯೊ ಮನೆಯವರೆಲ್ಲರ ಏಕಮಾತ್ರ ಎಂಟರ್ಟೇನ್ಮೆಂಟ್ ಫೆಸಿಲಿಟಿ ಆಗಿದ್ದು, ಅದಿಲ್ಲದ ನಮ್ಮ ದಿನಗಳು ಓಡುವುದು ಹೇಗೆ? ನಮ್ಮ ಚಿತ್ರಗೀತೆ, ಅಭಿಲಾಷಾ ಕಾರ್ಯಕ್ರಮಗಳೂ ಇಲ್ಲ; ತಾತನ ಮೂರು ಭಾಷೆಯ ಆರು ನ್ಯೂಸುಗಳೂ ಇಲ್ಲ! ಅಜ್ಜಿಯ ವಂದನಾ ಭಕ್ತಿಗೀತೆಗಳು, ನಮ್ಮೆಲ್ಲರ ಇಷ್ಟದ ರಾತ್ರಿ 9.30ರ ನಾಟಕಗಳು, 11ರ ವರೆಗಿನ ಶಾಸ್ತ್ರೀಯ ಸಂಗೀತ – ಒಟ್ಟಿನಲ್ಲಿ ರೇಡಿಯೋ ಇಲ್ಲದ ಒಂದು ಸಂಜೆ, ಮೊನ್ನೆಯ ವ್ಹಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಗಳಿಲ್ಲದ ಸಂಜೆಯಂತಾಗಿತ್ತು.

ಆಗ ನಮ್ಮನೆಗೆ, ನಮ್ಮ ಅಜ್ಜಿಯ ತಂಗಿ ಅಕ್ಕೂ ಅಜ್ಜಿಬಂದಿದ್ದರು. ಭಾರೀ ಚಾಲಾಕಿನ ಅಜ್ಜಿ ಅವರು. ಅವರಿಗೂ ರೇಡಿಯೋ ಇಲ್ಲದ ದಿನಗಳನ್ನು ಹೇಗೆ ಕಳೆಯುವುದೋ ಅನ್ನಿಸಿಬಿಟ್ಟಿತ್ತು, ಕೆಲವೇ ಗಂಟೆಗಳ ರೇಡಿಯೋ-ವಿರಹದಲ್ಲೇ! ಸರಿ, ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ತಯಾರಾದರು. “ಇಂದಕ್ಕಾ, ಬಾ ಇಲ್ಲಿ” ಅಂತ ಅವರಕ್ಕ, ನಮ್ಮ ಅಜ್ಜಿಯನ್ನು ಸಮನ್ ಮಾಡಿ, ಇಂಟೆರೊಗೇಶನ್ ಶುರು ಮಾಡಿದರು. ಮಧ್ಯಾನ ನಾವಿಲ್ಲದ ವೇಳೆ ಬಾಗಿಲು ತೆಗೆದಿಟ್ಟು ಮಡಿ ಅಡಿಗೆಯಲ್ಲಿ ಕೂತಿದ್ದೆಯಾ, ಹಿಂದೆ ಹೂವು ತರಲು ಹೋಗಿದ್ದೆಯಾ, ಊಟಕ್ಕೆ ಕೂತಾಗ ಬಾಗಿಲು ಹಾಕಿತ್ತೋ ಇಲ್ಲವೋ…… ಇತ್ಯಾದಿ, ಇತ್ಯಾದಿ ನಡೆಯಿತು ಸ್ವಲ್ಪ ಹೊತ್ತು. ಕೊನೆಗೂ ಅಜ್ಜಿಯಿಂದ ಮಧ್ಯಾಹ್ನ ನೆಲ್ಲಿಕಾಯಿಗೆ ಬಂದ ಹುಡುಗನಿಗೆ ನೀರು ಕೊಟ್ಟ ವಿಷಯವನ್ನು ಹೊರತೆಗೆದರು, ಅಕ್ಕೂ ಅಜ್ಜಿ. ಅಲ್ಲಿಂದ ಅವನ ಬಗ್ಗೆ ವಿವರವಾಗಿ ಪ್ರಶ್ನೆಗಳು ಶುರುವಾದವು – ಹೆಸರೇನು, ಯಾವ ಶಾಲೆ, ನೋಡಲು ಹೇಗಿದ್ದ, ಯೂನಿಫಾರ್ಮ್ ಹಾಕಿದ್ದನೋ, ಹಾಕಿದ್ದರೆ ಯಾವ ಬಣ್ಣದ್ದು ಮುಂತಾಗಿ ನಡೆಯಿತು. ಆಗ ನಮ್ಮಜ್ಜಿ ಅದುವರೆಗೂ ಮರೆತಿದ್ದ ಒಂದು ವಿಷಯ ಹೊರಬಿತ್ತು – ಆ ಹುಡುಗ ತನ್ನ ಹೆಸರು ಹೇಳಿದ್ದಲ್ಲದೇ, ತನ್ನ ಅಪ್ಪ-ಅಮ್ಮನ ಹೆಸರು, ಇರುವ ಓಣಿ ಇತ್ಯಾದಿ ಹೇಳಿ, ಅವರ ಅಪ್ಪ-ಅಮ್ಮ ತಾತಾ ಅಜ್ಜಿಯ ಪರಿಚಯದವರು ಎಂತಲೂ ಹೇಳಿಕೊಂಡಿದ್ದ (ನೆಲ್ಲಿಕಾಯಿ ಜಾಸ್ತಿ ಸಿಗುವ ಆಸೆಗೆ). ಸರಿ, ಪತ್ತೇದಾರಿಣಿ ಅಕ್ಕೂ ಅಜ್ಜಿ ಕಾಲಿಗೆ ಚಪ್ಪಲಿ ತೂರಿಸಿಕೊಂಡು ಹತ್ತಿರದ ವಿಟ್ಠಲ ಮಂದಿರಕ್ಕೆ. ಅರ್ಧ ಗಂಟೆಯಲ್ಲಿ, ಗೆಲುವಿನ ಮುಖದೊಂದಿಗೆ ವಾಪಸು ಬಂದು, ನಮ್ಮನ್ನು ಕರೆದು ಆ ಹುಡುಗನ ಹೆಸರು, ಅಡ್ರೆಸ್ಸು, ಮುಂಚೆ ಮಾಡಿದ ಕಳ್ಳತನದ ಇತಿಹಾಸ ಹೇಳಿ, ಅವನೇ ನಮ್ಮ ರೇಡಿಯೋ ಕಳ್ಳ ಅಂತ ತೀರ್ಪನ್ನೂ ಕೊಟ್ಟರು. ಮುಂದಿನ ಹಂತ ಅವನನ್ನು ಹಿಡಿತರುವುದು. ಮೊದಲು, ಪೋಲಿಸ್ ಸ್ಟೇಶನ್ನಿಗೆ ಹೋಗಿ, ನಮಗೆ ಗೊತ್ತಿದ್ದ ಒಬ್ಬ ಪೋಲಿಸರಿಗೆ ಕಂಪ್ಲೇಂಟ್ ಬರೆದು ಕೊಟ್ಟು ಬಂದೆವು. ಅವರು ಮರುದಿನ ಒಬ್ಬ ಪ್ಯಾದೆಯನ್ನು ಕಳಿಸುವುದಾಗಿ ಹೇಳಿದ ಮೇಲೆ, ಮನೆಗೆ ಬಂದು ಸುಖವಾಗಿ ಮಲಗಿದೆವು.


ಎರಡು ದಿನ ಕಳೆಯಿತು. ಪರಿಚಯದ ಪೋಲಿಸಪ್ಪ ಬಂದು, “ನಾನs ಹೋಗಿದ್ದೆನ್ರೀ, ಪಾರ (ಹುಡುಗ) ಸಿಗಲಿಲ್ಲ; ಏನ ಮಾಡ್ಲಿಕಾಗಂಗಿಲ್ಲ, ಕಾಯssಬೇಕು” ಅಂತ ಹೇಳಿದ. ಮರುದಿನಕ್ಕೆ, ನಮ್ಮ ಕಮಾಂಡರ್ ಅಕ್ಕೂಅಜ್ಜಿಯ ಸಹನೆ ಮುಗಿದು, ಕಮಾಂಡೋ ಆಕ್ಷನ್ನೇ ಸರಿ; ನಾವೇ ಹೋಗಿ ಅವನನ್ನು ಹಿಡುಕೊಂಡು ಬರೋದು ಒಳ್ಳೇದು ಅಂತ ತೀರ್ಮಾನಿಸಿದರು. ನಾನು, ಮುರಲಿ ಮತ್ತು (ಸಾಕಷ್ಟು ಗಟ್ಟಿಮುಟ್ಟಾಗಿಯೇ ಇದ್ದ) ನಮ್ಮ ಸಣ್ಣಕಾಕಾ ಎರಡು ಬೈಸಿಕಲ್ಲು ತೊಗೊಂಡು ದಂಡಯಾತ್ರೆಗೆ ಹೊರಟವರಂತೆ ಹೊರಟೆವು, ರಾತ್ರಿ 9-30 ಕ್ಕೆ. ನಾಲ್ಕೈದು ಮೈಲಿ ಸೈಕಲ್ಲು ಹೊಡೆದುಕೊಂಡು ಅವರ ಮನೆಗೆ ಹೋಗಿ, ಮಲಗಿದ್ದವರನ್ನು ಬಾಗಿಲು ಬಡಿದು ಎಬ್ಬಿಸಿದೆವು. ನಿದ್ದೆಗಣ್ಣಲ್ಲಿದ್ದವರಿಗೆ ಎಲ್ಲವನ್ನೂ ಹೇಳಿ, ಅವರಿಂದ ಮಗನನ್ನು ನಮ್ಮ ವಶಕ್ಕೆ ತೆಗೆದುಕೊಂಡು, ಮತ್ತೆ 4 ಮೈಲಿ ಸೈಕಲ್ಲು ಹೊಡೆದುಕೊಂಡು ರೇಲ್ವೆಸ್ಟೇಶನ್ ಪೋಲಿಸ್ ಸ್ಟೇಶನ್ನಿಗೆ ಹೊರಟೆವು. ನಾನು ಮತ್ತು ಮುರಲಿ ಒಂದು ಸೈಕಲ್ಲಿನ ಮೇಲೆ ಇದ್ದರೆ, ಕಳ್ಳನನ್ನು ಮುಂದೆ ಕೂರಿಸಿಕೊಂಡು ನಮ್ಮ ಕಾಕಾ ಇನ್ನೊಂದು ಸೈಕಲ್ಲಿನ ಮೇಲೆ.

ಇನ್ನೇನು ಪೋಲಿಸ್ ಸ್ಟೇಶನ್ 200 ಮೀಟರ್ ಇದೆ, ಅದುವರೆಗೂ ಆರಾಮವಾಗಿ ಕೂತಿದ್ದ ಕಳ್ಳ ಒಮ್ಮೆಲೆ ಜೋರಾಗಿ ಸೈಕಲ್ಲಿನ ಹ್ಯಾಂಡಲನ್ನು ಅಲುಗಾಡಿಸಿದ. ನಮ್ಮ ಕಾಕಾ ಅದರ ಶಾಕಿನಿಂದ ಎಚ್ಚೆತ್ತುಕೊಳ್ಳುವುದರೊಳಗೆ ಕಳ್ಳ ಹಾರಿ, ಎದುರಿನ ಗಲ್ಲಿಯೊಳಗೆ ಓಡಿದ. ನಮ್ಮ ಕಾಕಾನನ್ನು ಸೈಕಲಿನ ಹತ್ತಿರಕ್ಕೆ ಬಿಟ್ಟು, ನಾವಿಬ್ಬರೂ ಹುಮ್ಮಸ್ಸಿನಿಂದ ತೆಲುಗು ಸಿನಿಮಾದಲ್ಲಿ ಮಧ್ಯರಾತ್ರಿ ಕತ್ತಲೆಯಲ್ಲಿ (’ಶಿವಾ’ ನೆನಪಿಸಿಕೊಳ್ಳಿ) ವಿಲನ್ನುಗಳ ಹಿಂದೆ ಓಡುವ ಹೀರೊ ಮತ್ತವನ ಪ್ರಾಣಸ್ನೇಹಿತನಂತೆ, ಪ್ರಾಣದ ಹಂಗು ತೊರೆದು ಕಳ್ಳನ ಹಿಂದೆ ಓಡಿದೆವು. ಆಗ ಸಮಯ ರಾತ್ರಿಯ ಹನ್ನೆರಡು-ಹನ್ನೆರಡೂವರೆ ಇರಬೇಕು. ನಾವಿಬ್ಬರೂ ಚಿಕ್ಕ ಚಿಕ್ಕ
ಗಲ್ಲಿಗಳ ನೆಟ್ವರ್ಕಿನಲ್ಲಿ ಹದಿನೈದು-ಇಪ್ಪತ್ತು ನಿಮಿಶ ಓಡಿದೆವು. ಅವನೇನೋ ತಪ್ಪಿಸಿಕೊಂಡ. ನಾವೂ ಸ್ವಲ್ಪ ಸುಧಾರಿಸಿಕೊಳ್ಳಲು ನಿಂತೆವು. ಆಗ ನಾವಿರುವ ಜಾಗದ ಅರಿವಾಯಿತು. ಅದೊಂದು ಅಷ್ಟೇನೂ ಒಳ್ಳೆಯ ಹೆಸರಿಲ್ಲದ ಭಾಗ; ಅಲ್ಲಿ ಹಾಡುಹಗಲೇ ಆಗುತ್ತಿದ್ದ ಹೊಡೆದಾಟ, ಬಡಿದಾಟಗಳ ಸುದ್ದಿಗಳು ನೆನಪಾದವು. ನಾವು ಓಡುತ್ತಿದ್ದ ಪರಿಗೆ, ಜನ ಎದ್ದು ನಮ್ಮನ್ನೇ ಹಾಕಿ ತದುಕಬಹುದು ಅನ್ನುವ ಜ್ಞಾನೋದಯವಾಗುತ್ತಿದ್ದಂತೆ ಬಂದದ್ದರ ಎರಡು ಪಟ್ಟು ವೇಗದಲ್ಲಿ ವಾಪಸ್ಸು ಓಡಿಬಂದೆವು.
ಬದುಕಿದೆಯಾ ಬಡಜೀವವೇ ಅಂತ ಮೇನ್ ರೋಡಿಗೆ ಬಂದು ಮುಟ್ಟಿದೆವು. ನಮ್ಮ ಕಾಕಾ ಇನ್ನೂ ನಾವು ಅಂಥ ಜಾಗದಲ್ಲಿ ಕಳ್ಳನ ಹಿಂದೆ ಓಡಿಹೋದ ರೀತಿಯನ್ನು ನೋಡಿದ ಶಾಕಿನಲ್ಲೇ ಇದ್ದ! ಸೈಕಲ್ಲುಗಳನ್ನು ತಳ್ಳಿಕೊಂಡು, ಸುಧಾರಿಸಿಕೊಳ್ಳುತ್ತಾ ಬೆಳಗಿನ ಜಾವ ಎರಡಕ್ಕೆ ಮನೆಗೆ ಬಂದು ಮುಟ್ಟಿದೆವು.

ಮರುದಿನ ಬೆಳಗ್ಗೆ ಎದ್ದು ನೋಡಿದರೆ, ನಮ್ಮ ಕಮಾಂಡರ್ ಅಜ್ಜಿ ನಾಪತ್ತೆ. “ಇಂದವ್ವಾ, ನಾ ಈಗ ಬಂದೆ” ಅಂತ ಹೇಳಿ ಹೋದವರು, ಮಟಮಟ ಮಧ್ಯಾಹ್ನ ಬಂದು “ಏ ಹುಡುಗ್ರಾ, ನಡೀರಿ ನಂಜೊತಿಗೆ” ಅಂದ್ರು. ಮತ್ತೆ ರಿಕ್ಷಾ ಹತ್ತಿ 5 ಮೈಲು ಹೋಗಿ ಅಲ್ಲಿದ್ದ ಒಂದು ಸ್ಲಮ್ಮಿಗೆ ಹೋದೆವು. ದಾರಿಯಲ್ಲಿ ಅಜ್ಜಿಯ ಪತ್ತೇದಾರಿಕೆಯ ವಿವರಗಳು ತಿಳಿದವು. ಪರಿಚಯದ ಪೋಲಿಸಪ್ಪನ ಜೊತೆಗೆ ಕಳ್ಳನ ಮನೆಗೆ ಹೋಗಿ, ಅವನ ಅಪ್ಪ-ಅಮ್ಮನನ್ನು ಒಳ್ಳೆಯದಾಗಿ ಮಾತಾಡಿಸಿ, ಆ ಹುಡುಗ ಮನೆಗೆ ಒಂದು ರೇಡಿಯೊ (ಗೆಳೆಯನದೆಂದು ಹೇಳಿ) ಹಿಡಿದುಕೊಂಡು ಬಂದದ್ದನ್ನೂ, ಆ ಗೆಳೆಯನಿಗೆ ಕೊಡಲು ಹೋಗಿರುವುದನ್ನೂ ತಿಳಿದುಕೊಂಡಿದ್ದರು. ರೇಡಿಯೊ ವಾಪಸ್ಸು ಬಂದರೆ, ಕೊಟ್ಟ ಕಂಪ್ಲೇಂಟ್ ವಾಪಸ್ಸು ತೆಗೆದುಕೊಳ್ಳುವದಾಗಿ ಹೇಳಿದ ಮೇಲೆ, ಗೆಳೆಯನ ಮನೆಯ ಪತ್ತೆಯೂ ಸಿಕ್ಕಿತ್ತು. ಪೋಲಿಸಪ್ಪನನ್ನು ಬ್ಯಾಕ್ ಅಪ್ ತರಲು ಕಳಿಸಿ, ನಮ್ಮನ್ನು ಕರೆಯಲು ಮನೆಗೆ ಬಂದಿದ್ದರು. ಅಲ್ಲಿಗೆ ಅವಾಂತರ ಮುಗಿದು ರೇಡಿಯೊ ಸಿಕ್ಕಿತೆಂದೆನಲ್ಲ, ಆ ಗೆಳೆಯ ಯಾರಿಗೋ ಮಾರಿಬಿಟ್ಟಿದ್ದ. ನಮ್ಮ ಜೊತೆ ಈಗ ಪೋಲಿಸರಿದ್ದರಲ್ಲ, ಕೈಯಲ್ಲಿನ ಕೋಲಿಗಿಂತ ಸಣಕಲಾದರೇನಂತೆ, ಜೋರಿಗೇನೂ ಕಡಿಮೆಯಿರಲಿಲ್ಲ, ಹಾಗಾಗಿ ಮಾರಿದ್ದ ರೇಡಿಯೋ ಕಿತ್ತಿಕೊಂಡು
ತಂದೆವು. ಅಷ್ಟೆ ಅಲ್ಲ, ಆ ಹುಡುಗ ನಮ್ಮ ಮನೆಯ ಕಡೆಗೇನಾದರೂ ಬಂದರೆ …… ಅಂತ ಹೆದರಿಸಿಯೂ ಬಂದೆವು.

ಮತ್ತೆ, ನಮ್ಮ ಮನೆಯಲ್ಲಿ ರೇಡಿಯೋದ ಪ್ರತಿಷ್ಠಾಪನೆಯಾಯಿತು, ಗಣಪತಿ ಮಾಡದಲ್ಲಿ. ಅದರಿಂದ ಹೊಮ್ಮಿದ ಸುದ್ದಿ, ಸಂಗೀತ, ನಾಟಕಗಳು ನಮ್ಮ ಜೀವನವನ್ನು ಸಂತೋಷಮಯಗೊಳಿಸಿದವು ಎನ್ನುವಲ್ಲಿಗೆ ರೇಡಿಯೋಕಳ್ಳನ ವೃತ್ತಾಂತವು ಮುಕ್ತಾಯವಾಯಿತು.
*ಶುಭಂ*