ಆತ್ಮೀಯ ಓದುಗರೇ, ಈ ವಾರ ವಾರ 'ಅನಿವಾಸಿಯಲ್ಲಿ ಡಾ ಶ್ರೀಕಾಂತ್ ಕೃಷ್ಣಮೂರ್ತಿ ಅವರು ರಚಿಸಿದ ''ಹೋಗಿ ಬರ್ತೀಯ ಅಪ್ಪ'' ಎನ್ನುವ ಕವನವಿದೆ. ಮನಸ್ಸನ್ನು ಆರ್ದ್ರಗೊಳಿಸುವ ಈ ಕವಿತೆಯ ಭಾವ ಖಂಡಿತ ಓದುಗರನ್ನು ಕಾಡುತ್ತದೆ. ಅದನ್ನು ಅವರೇ ಆಂಗ್ಲ ಭಾಷೆಯಲ್ಲಿ ಸಹ ಅಷ್ಟೇ ಸೊಗಸಾಗಿ ಅನುವಾದ ಮಾಡಿ ಕೊಟ್ಟಿದ್ದಾರೆ.ದಯವಿಟ್ಟು ಓದಿ ಪ್ರತಿಕ್ರಿಯಿಸಿ. ನಿಮ್ಮ ಕಥೆ,ಕವನ,ಅನುಭವ-ಪ್ರವಾಸ ಕಥನ, ಚಿತ್ರ- ಬರಹಗಳನ್ನು ಅನಿವಾಸಿಯ ಮಿಂಚಂಚೆ ವಿಳಾಸಕ್ಕೆ ತಪ್ಪದೆ ಕಳಿಸುತ್ತಿರಿ. ಅನಿವಾಸಿ ಅಕ್ಷರ ವೃಕ್ಷ ಸದಾ ಹಸಿರಾಗಿರಲಿ ಎಂಬ ಸದಾಶಯದೊಂದಿಗೆ. ಈ ವಾರದ ಓದಿಗೆ ನಿಮಗಿದೋ ಸ್ವಾಗತ. -ಸಂಪಾದಕಿ
ಹೋಗಿ ಬರ್ತೀಯಾ ಅಪ್ಪ! ಚಳಿಯೆಂದು ನಡುಗಿ ಕಂಬಳಿಯನ್ನು ಹೊದೆಯುತ್ತ ಕುಳಿತಿದ್ದೆ ಅಪ್ಪಾ ಈಗ್ಯಾಕೆ- ಮಲಗಿದ್ದೀ ಚಳಿಪೆಟ್ಟಿಕೆಯಲಿ ಜಡ್ಡಾಗಿ ಥಂಡಿ ತುಂಬಿದ ನಿನ್ನ ಕೊಂಡೊಯ್ದು ಮೆಲ್ಲಾಗೆ ಬಂಡೀಲಿ ಇಡುತಾ ಬಾಗಿಲು- ಕಾಲನ್ನ ತುಂಡಿಸೀತೆಂದು ತೊಡೆಕೊಟ್ಟೆ ಹಿಡಿ ಮಂತ್ರ ಹೇಳಾಯ್ತು ಮಡಕೆಯೂ ಒಡೆದಾಯ್ತು ಮುಡಿಕೊಟ್ಟು ಕೊಳ್ಳಿ ಮುಟ್ಟಿಸಿದಾಕ್ಷಣ ಸುಡುತಿದೆ ಎದೆಯೂ ಚುರ್ಕ್ಕಂತ ಬಾಳೆಲ್ಲ ಎತ್ತರದಾಳಿದ್ದೆ ಯಾತಕ್ಕೆ ಭಾಳ ಸೋತಿದ್ದೀ ಅಪ್ಪಾ ನೀ- ಈವತ್ತು ಮೂಳೆಯ ತುಣುಕು ಮೂರಾದೆ ಹರಿಗೋಲ ಒಳಗಿಂದ ತಿರುಗಿಯೂ ನೋಡದೆ ಹರಿಬಿಟ್ಟೆನಪ್ಪಾ ಪರವೂರಿಗೊಯ್ವಳು ಕರಕೊಂಡು ನಿನ್ನಾ ಕಾವೇರಿ ಶ್ರೀಕಾಂತ್ ಕೃಷ್ಣಮೂರ್ತಿ

So long dad! Cold, shivering, covered in a rug, you’d sit there. Why do you sleep now, rigid, in the ice-box! Taking the cold you, gently, placing in the hearse...might the door clip it? I place your foot on my lap Mantras muttered, pot shattered hair shaved off, soon as I light the pyre Ah it burns! My heart! All your life, a tall man you were How much you have shrunk appa! Today, to just a few shards of bones From the boat, not once looking back I set you adrift, away, off to another town Kaveri will lead you along! Shrikaanth Krishnamurthy

ಹೊಳೆ ಹೊಳೆವ, ಆಕರ್ಷಕ ಕೊಳ
ಎಲ್ಲಿಂದಲೋ ಬೀಸಿ ಬಂತಂದು ಮಾಳ
ತಂತು ಕಾರ್ಮೋಡದಿ ಹುದುಗಿದ್ದ ವರ್ಷಾ ಜಾಲ.
ಹನಿ ಹನಿಯಾಯ್ತು ಮುಸಲ ಧಾರೆ
ಹನಿಯಲ್ಲ; ಚಿತ್ತ ಕ್ಷೊಭೆ, ನಾ ತಾಳಲಾರೆ
ತಳದಲ್ಲಿ ಹಣಿ ನಿಂತ ಕಸ-ಮೃತ್ತಿಕೆ
ಮೇಲೆದ್ದು ಇರಿಯಿತು ಖಡ್ಗವ ಮನಕೆ
ಬೇಡೆನಗೆ ಈ ಚಿತ್ರಹಿಂಸೆ, ಮಳೆಗಿಲ್ಲ ಇದಾವುದರ ಚಿಂತೆ
ಕೊಡೆಯಿಲ್ಲೆಂಬ ಪರಿವಿಲ್ಲದೆ ಹೊಡೆಯುತಿದೆ ಭರ್ತಿ
ಹೋಗಿನ್ನು ಬರಬೇಡವೆನಲೂ ಎನಗಿಲ್ಲ ಶಕುತಿ
ಬರಗಾಲ ಬಂದೆಲ್ಲ ಬರಡಾದರೆಂಬ ಭೀತಿ
ಡೋಲಾಯಮಾನ ಮನ, ಕಣ್ಬರದು ಮುಂದಿನ ದಿನ
ಬೊಂಕಿಯಲಿ ಬೆಂದು, ಪ್ರಹಾರಗಳ ತಿಂದು
ಅಭರಣವಾದಂತೆ ಚಿನ್ನ
ಕಾರ್ಮೋಡದಂಚಿನಲಿ ನೇಸರನ ಬಣ್ಣ
************************************************************
ಹಗಲಿರುಳೆನ್ನದೆ
ಹಸಿವೆ ನಿದ್ರೆಗಳ ಲೆಕ್ಕಿಸದೆ
ತುರ್ತು ಕರೆಗಳಿಗೆ ಓಗೊಟ್ಟು
ಸಹನೆಯ ಕಿವಿಗೊಟ್ಟು
ಅನುಕಂಪೆಯ ಹಸ್ತವ ನೀಡಿ
ಸವಿಮಾತುಗಳನಾಡಿ
ಕರುಣೆಯ ಕಣ್ಗಳ ಹಾಯಿಸಿ
ಆಶ್ವಾಸನೆಗಳನಿರಿಸಿ
ಅಲ್ಲಿ ಇಲ್ಲಿ ತಡಕಿ
ದೇಹದಾಳಕೆ ಇಳಿದು
ರಕ್ತದಲ್ಲಿ ಕೈ ತೊಳೆದು
ವಿಧಿ ಲಿಖಿತ ದಿಕ್ಕುಗಳ ಬದಲಿಸುತ
ತನ್ನೆಚರದಲಿ
ನೊಂದ ಜೀವರಿಗೆ
ಮಿಡಿಯುವ ತುಡಿಯುವ
ವೈದ್ಯ ಯೋಗಿಗೆ ಶರಣು ಶರಣು
ರೋಗ ರುಜಿನಗಳು ಕಳೆದು
ನೋವು ತಾಪಗಳು ಅಳಿದು
ಧನ್ಯ ರೋಗಿಯು
ಕೈ ಮುಗಿವ ವೇಳೆಯಲಿ
ಗೆಲುವ ಛಲವ
ಮೇಲೆತ್ತಿ ಹಿಡಿಯುವ
ವೈದ್ಯ ವೃತ್ತಿಗೆ
ನೂರಾರು ನಮನಗಳು
*************************************************
1 ಭ್ರೂಣವಿದೆ
ಭ್ರೂಣದ ಎದೆಯೂ ಮಿಡಿಯುತ್ತಿದೆ’
ಎಂದು ಕಪ್ಪು ಬಿಳುಪಿನ ಚಿಕ್ಕ ಆಕೃತಿಯನ್ನು
ಸ್ಕ್ಯಾನಿನ ಸ್ಕ್ರೀನಿನ ಮೇಲೆ ತೋರಿಸುತ್ತಿದ್ದೆ.
‘ಕರೆಯಿರಿ ಅವರನ್ನು,’ ಎಂದಳಾಕೆ.
‘ಯಾರನ್ನು? ಗಂಡನನ್ನಾ?’
‘ಇಲ್ಲ, ನನ್ನ ಅತ್ತೆಯನ್ನು,
ಹತ್ತು ವರ್ಷದಿಂದ ಬಂಜೆ ಬಂಜೆ ಎಂದು ಹಂಗಿಸುತ್ತಿದ್ದಾಳೆ,’
ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಳು
2
‘ಇದು ಕಣ್ಣು
ಇದು ಮೂಗು
ಇದು ಬಾಯಿ
ಇದು ಕೈ
ಇದು ಕಾಲು,’
ಎಂದು ಸ್ಕ್ಯಾನ್ ಮಾಡುತ್ತ ತೋರಿಸುತ್ತಿದ್ದೆ
‘ಮೂಗು ನನ್ನಂತೆ
ಕಣ್ಣು ನನ್ನ ಅಪ್ಪನಂತೆ
ಬಾಯಿ ನನ್ನ ಅಜ್ಜಿಯಂತೆ,’ ಎಂದಳು
‘ಇಲ್ಲವೇ,
ಕಣ್ಣು ನನ್ನಂತೆ
ಮೂಗು ನನ್ನ ಅಮ್ಮನಂತೆ
ಬಾಯಿ ಮಾತ್ರ ನಿನ್ನಂತೆ,’ ಎಂದ
ಇಬ್ಬರೂ ಅಲ್ಲೇ ಸರಸದ ಜಗಳ ಶುರು ಮಾಡಿದರು
ಸ್ಕ್ಯಾನಿನಲ್ಲಿ ಕೈಕಾಲಾಡಿಸುತ್ತಿರುವ ಮಗು
ನಕ್ಕಂತಾಯಿತು
********************************************************
ಸುಡು ಬಿಸಿಲಿಗೆ ತನ್ನ ಮೈಯೊತ್ತಿ
ಬೀಸುವ ಬಿರುಗಾಳಿಗೆ ಕೈ ಎತ್ತಿ
ಬೆಳೆವ ಹಸಿರಲಿ ತೇಲುವ ಬಿಳಿ ಹತ್ತಿ
ಜತನದಲಿ ಬಿಡಿಸಿ ನೀವಲು ತಾ ಸುತ್ತಿ
ಎಣ್ಣೆಯಲಿ ಮುಳುಗಿ, ಮತ್ತೆ ನೆತ್ತಿಯನೆತ್ತಿ
ದೀಪಗಳ ಬೆಳಕಿನ ಬುತ್ತಿಯಾಯಿತು ಬತ್ತಿ
ಬೆಂಕಿ ತಾಗಲು ಬೆಳಕಾಗುವದದು ತಾ ಹೊತ್ತಿ
ಕತ್ತಲ ಇರುಳಲಿಟ್ಟು ನೂರು ಭರವಸೆಗಳ ತತ್ತಿ
ಚಿತ್ತದಾ ಚಿಪ್ಪಿನೊಳು ಮುತ್ತಿನಾ ಸರಪಳಿಯ ಸುತ್ತಿ
ತನ್ನೊಡಲ ತಾ ಕಾಯೆ ಹತ್ತಿ, ಅದು ಬತ್ತಿಗಳ ಗುತ್ತಿ
ಬತ್ತಿಯಾಗದೆ ಉರಿಯೆ ಹತ್ತಿ, ಬರಿ ಬೂದಿಯ ದತ್ತಿ!