ಅನಾಮಿಕ ಆತ್ಮನ ಅಂತರಾಳ (ಕಥೆ)

ಅನಾಮಿಕ ಆತ್ಮನ ಅಂತರಾಳ (ಕಥೆ)

 

Soul

ಪ್ರಿಯ ಓದುಗರೆ,
ನಾನೊಬ್ಬ ಹೆಸರಿಲ್ಲದ ಅತ್ಮ. ಅರೇ, ಇದೇನಿದು ಹೆಸರಿರುವ ಆತ್ಮಗಳೂ ಇರಬಹುದೇ, ಆತ್ಮಕ್ಕು ಹೆಸರಿಗೂ ಇದೇನಿದು ಸಂಬಂಧ ಎಂಬ ಅನುಮಾನ ಬಂತೇ? ಅದರಲ್ಲಿ ನಿಮ್ಮ ತಪ್ಪಿಲ್ಲ ಬಿಡಿ.ಆತ್ಮನೆಂದರೆ ನಿರಾಕಾರ ಎಂದಿತ್ಯಾದಿ ಓದಿರುತ್ತೀರೆಂದು ನನಗೂ ಗೊತ್ತು.ಆತ್ಮ ಎಂದರೆ ಏನೆಂದು ಬಹಳ ಜನ ಬಹು ಬಗೆಯ ಚಿಂತನೆ ನಡೆಸಿದ್ದಾರೆ.ಕಂಡವರು ಯಾರು ಕಾಣದವರಾರು ಎಂಬುದನ್ನು ನೀವ್ಯಾರೂ ಕಾಣಿರಿ. ನಾನು ಯಾರು-ಏನು ಎಂದು ತಿಳಿಯಬೇಕಾದರೆ ನಾನು ಈಗ ಹೇಳುವ ನನ್ನ ಕಥೆಯನ್ನು ಪೂರ್ತಿಯಾಗಿ ಓದಿದರೆ ಮಾತ್ರವೇ ಸಾಧ್ಯ.

ಈ ಪ್ರಪಂಚದಲ್ಲಿರುವ ಅರವತ್ತ ನಾಲ್ಕು ಕೋಟಿ ಜೀವರಾಶಿಗಳು ಜನನ-ಮರಣ ಚಕ್ರದಲ್ಲಿ ಸಿಲುಕಿ ಸುತ್ತುತ್ತಾ ಪೂರ್ವಾರ್ಜಿತ ಪಾಪ-ಪುಣ್ಯಗಳ ಫಲವಾಗಿ ಅರವತ್ತ ನಾಲ್ಕು ಜನ್ಮಗಳಲ್ಲಿ ಯಾವುದೋ ಒಂದರಲ್ಲಿ ಸಿಲುಕಿ ಮರುಜನ್ಮ ಪಡೆಯುವುದು ನಿಜವಷ್ಟೇ?ಹಾಗಾದಾಗ ಅವುಗಳು ತಳೆದ ದೇಹವೆಂಬ ಬೊಂಬೆ ಕರ್ಮ ಸವೆಸಲು ಭೂಮಿಗೆ ಬರುವಾಗ ಅವುಗಳಿಗೆ ಜೀವ ತುಂಬುವುದು ನಾನೇ.ಯಾವ ದೇಹದಲ್ಲಿ ಹೋಗಿ ಹೇಗೆ ಹೇಗೆ ವರ್ತಿಸಬೇಕೆಂದು ಬ್ರಹ್ಮನ ಬರವಣಿಗೆಗೆ ನಿಯುಕ್ತವಾಗಿ ಸಂಚಿತ ಕರ್ಮಾನುಸಾರ ನನಗೆ ಆದೇಶ ನೀಡಿ ಕಳಿಸುವುದು ಈ ಚಿತ್ರಗುಪ್ತ-ಯಮಧರ್ಮರೇ. ಚಿತ್ರಗುಪ್ತ, ಅವನ ಮೇಲಿನ ಯಮಧರ್ಮ ನನ್ನ ಮೇಲಧಿಕಾರಿಗಳು. ನನ್ನಷ್ಟಕ್ಕೆ ನಾನೇ, ಯಾವ ಜೀವಿಯ ಹಂಗೂ ಇರದಿದ್ದಾಗ ನಾನು ಪರಮಾತಮನಂತೇ ನಿರಾಕಾರ; ಅದರೆ ದೇಹದಲ್ಲಿ ಆವಾಹಿಸಿಕೊಂಡಾಗ ನಾನು ಪರಮಾತ್ಮನಿಂದ ವಿಭಿನ್ನ.!ಜೇನು ಮೇಣ ಅಥವಾ ಅರಗು ಕರಗಿದಾಗ ಎರಕದ ಆಕಾರವನ್ನೇ ಪಡೆದು ಕಾಣಿಸುವ ರೀತಿಯಲ್ಲಿ ನಾವು ಕೂಡಾ ಜೀವಾತ್ಮನ ಆಕಾರವನ್ನೇ ಪಡೆಯುತ್ತೇವೆ.ಇಲ್ಲಿಯವರೆಗೆ ಬರೀ ಇರುವೆ, ಕಪ್ಪೆ, ಇಲಿ,ಕತ್ತೆ, ಹುಳು, ಹುಪ್ಪಟೆ,ನರಿ, ತೋಳ,ಹಯೀನಾ, ಮುಂತಾದ ಕೇವಲ ಕ್ಷುದ್ರಪ್ರಾಣಿಗಳ ಆತ್ಮವಾಗಿ ಕೆಲಸ ನಿರ್ವಹಿಸಿ ಬಹಳಷ್ಟು ರೂಪಗಳನ್ನು ತಾಳಿರುತ್ತೇನೆ. ಹೇ,, ಇದೇನು ಪುರಾಣ ಕೊರೆಯುತ್ತಿದ್ದೇನೆಂದು ಅಕಳಿಸುತ್ತಿದ್ದೀರಾ?? ಸ್ವಲ್ಪ ಇರಿ ,ವಿಷಯಕ್ಕೆ ಇನ್ನೇನು ಬರತೇನೆ.ಇದು ನನ್ನ ಪರಿಚಯದ ಪೀಠಿಕೆ ಅಷ್ಟೆ.

trigunaನಿರಾಕಾರ ಸರಿ,ಆತ್ಮ ನಿರ್ಗುಣನೋ ಎಂಬ ಪ್ರಶ್ನೆಯ ಹುಳು ಈಗ ನಿಮ್ಮ ತಲೆಯನ್ನು ಕೊರೆದು ಹೊಕ್ಕಿದ್ದು ನನ್ನ ಕಣ್ನಿಗೆ ಬಿದ್ದೇ ಬಿತ್ತು. ನಾವು ನಿರ್ಗುಣರೋ ಇಲ್ಲಾ ಸಗುಣರೋ ಎಂಬುದನ್ನು ಪರಿಸ್ಥಿತಿಗೆ ಅನುಗುಣವಾಗಿ ಅವಲೋಕಿಸಬೇಕು ಸ್ವಾಮಿ. ಯಾವ ಜೀವಿಯ ಗೊಡವೆ ಇರದಿದ್ದಾಗ ನಾವೂ ನಿರ್ಗುಣರೇ.ಆದರೆ ಜೀವಿಗಳೆಂಬೋ ಬೊಂಬೆಯ ಒಳಗಿದ್ದಾಗ ಈ ತ್ರಿಗುಣಗಳನ್ನು ಆವಾಹಿಸಿಕೊಂಡಿರುತ್ತೇವೆ. ನಾವು ಹೋಗಿ ಸೇರಿದ ಜೀವಿಗಳಲ್ಲಿ ‘ರಾಜಸ-ತಾಮಸ-ಸಾತ್ವಿಕ’ ಗುಣಗಳ ರಸಮಿಶ್ರಣ ತಯಾರಿಸಿ ಅಭಿವ್ಯಕ್ತಿಗೊಳಿಸುವುದು ನಮ್ಮ ಕೆಲಸ. ಅವರವರ ಕರ್ಮಗಳಿಗೆ ಅನುಸಾರವಾಗಿ ಜೀವಿಗಳು ಜನ್ಮ ತಾಳುವುದು ನಿಜವಷ್ಟೆ? ನಾನು ಆ ಜನ್ಮಜಾತ ಜೀವಿಗಳಲ್ಲಿ ಕಾಯ ಪ್ರವೇಶ ಮಾಡಿ ಹೊಕ್ಕು ಅವರ ಕರ್ಮಾಫಲಕ್ಕೆ ಅನುಸಾರವಾಗಿ, ಚಿತ್ರಗುಪ್ತನು ಕಳಿಸಿದ ಅವರ ಕರ್ಮಾವಳಿಯ ಪಟ್ಟಿಯನ್ನು ಅವಲಂಬಿಸಿ ಆ ಮೂರು ಗುಣಗಳಿಲ್ಲವೇ?- ರಜಸ್ಸು, ತಮಸ್ಸು, ಸಾತ್ವಿಕ ಗುಣಗಳು- ಅವುಗಳಲ್ಲಿ ಯಾವುದಾದರೂ ಒಂದನ್ನು ಹೆಚ್ಚು ವ್ಯಕ್ತಗೊಳಿಸಿ ಆ ಜೀವಿಯ ಗುಣಲಕ್ಷಣಗಳನ್ನು ಸಾಕಾರಗೊಳಿಸುತ್ತೇನೆ. ಈ ತ್ರಿಗುಣಗಳೆಂಬ ಸೂತ್ರಗಳನ್ನು ಪಂಚೇಂದ್ರಿಯಗಳೆಂಬ ಬೆರಳುಗಳಿಗೆ ಕಟ್ಟಿ,ಅರಿಷಡ್ವರ್ಗಗಳೆಂಬ ಬಣ್ನಗಳನ್ನು ಉಪಯೋಗಿಸಿ ಆ ಬೊಂಬೆಯನ್ನು ಆಡಿಸುವುದು ನಾವೇ. ಈ ಎಲ್ಲ ಪದಪುಂಜಗಳು ನಿಮಗೆಲ್ಲಿ ಅರ್ಥವಾಗಬೇಕು! ಈಗೆಲ್ಲ ಮೊಬೈಲ್ ಫೊನು, ,ಲ್ಯಾಪ್ಟಾಪು,ಕಂಪ್ಯೂಟರ್ ಎಂದು ತಾಂತ್ರಿಕ ಜಗತ್ತಿನಲ್ಲಿ ನೀವುಗಳು ಕುಣಿದಾಡುವುದರಿಂದ ಅದರ ಪರಿಭಾಷೆಯಲ್ಲೇ ಹೇಳುತ್ತೇನೆ ಕೇಳಿ: ಮೊಬೈಲ್,ಲ್ಯಾಪುಟಾಪು, ಫೋನ್ ಇವುಗಳ ಹೊರ ಕವಚವೇ ನಿಮ್ಮ ದೇಹ. ಆದರೆ ಅದನ್ನು ಆಡಿಸುವ ಆಪರೇಟಿಂಗ್ ಸಿಸ್ಟಂ software ನಾನೇ- ಅಂದರೆ ಆತ್ಮ!
ನಮ್ಮ ಮೇಲಧಿಕಾರಿಗಳ ಆದೇಶದಂತೆ ನಮ್ಮ ಕೆಲಸ ಕಾರ್ಯ ಇದ್ದರೂ, ಕೆಲವು ಸಲ ನಮ್ಮ ಹಿಂದಿನ ಅನುಭವಗಳನ್ನು ಮುಂದಿನ ಜನ್ಮಜಾತ ಜೀವಿಗಳಲ್ಲಿ ತೋರಿಸುವುದುಂಟು! ಚೈನಾ ದಲ್ಲಿ ಹುಟ್ಟಿದ ಮಗು ಇಂಗ್ಲೀಷ್ ಭಾಷೆ ಎರಡು ವರ್ಷಕ್ಕೇ ಮಾತನಾಡಿದಂತೆ, ಕೊರಿಯಾದಲ್ಲಿ ಹುಟ್ಟಿದ ಮಗು ಅಮೇರಿಕಾದ ಯಾವುದೋ ಕಥೆ ಹೇಳಿದಂತೆ, ಪರಿಚಯವೇ ಇರದ ವ್ಯಕ್ತಿಗಳ ಗುಣ ಅವಗುಣಗಳನ್ನು ಅಭಿವ್ಯಕತಗೊಳಿಸಿದ ಕಥೆಗಳನ್ನು ನೀವು ಕೇಳಿಲ್ಲವೇ? ಹಾಗೆ. ಇದಕ್ಕೆಲ್ಲ ನಾವು ಸ್ಪೆಷಲ್ ಪರ್ಮಿಷನ್ ತಗೋಬೇಕು ಸ್ವಾಮಿ. ಹಾಗಾಗಿಯೇ ಇಂತಹ ಸಂಗತಿಗಳು ವಿರಳ.
ಇವನೇನು ಅನಾಮಿಕ ಆತ್ಮ ತಾನೆಂದು ಹೇಳಿಕೊಂಡು ಬೇಡದ ಬೂಸಿಯೆಲ್ಲಾ ಬಿಡುತ್ತಿದಾನೆಂದು ತಿಳಿದಿರೋ? ಹಾಗೇನಿಲ್ಲ ಬಿಡಿ. ಆ ರೀತಿ ವಿಷಯಾಂತರ ಮಾಡುವ ಆ(ತ್ಮ)ಸಾಮಿ ನಾನಲ್ಲ.

soul-agesಇಷ್ಟೆಲ್ಲಾ ಬೊಗಳೆ ಹೊಡೆಯುವ ನಾನು ಏಕೆ ಅನಾಮಿಕ ಆತ್ಮ ಎಂದು ನಿಮಗೆ ಸಂದೇಹ ಬಂದಿರಬಹುದು, ಬಂದೇ ಇರುತ್ತದೆ.ಕಾರಣ ಇಷ್ಟೇ; ನಾನು ಅಸ್ತಿತ್ವಕ್ಕೆ ಬಂದಾಗಿನಿಂದ ಬರೀ ಇರುವೆ, ಕಪ್ಪೆ, ಹಂದಿ, ಕೋಳಿ,ಜೇಡ, ಹುಳು ಹುಪ್ಪಟೆ,ನರಿ, ತೋಳ,ಹಾಗೂ ಗಢವಕೋತಿ ಇಂತಹ ಹೆಸರೇ ಇಡದ ಪ್ರಾಣಿಗಳ ಆತ್ಮನಾಗಿ ಕೆಲಸ ಮಾಡಿದ ಕಾರಣ ನಾಮಕರಣದ ಯೋಗ ಬಂದೇ ಇಲ್ಲ ನೋಡಿ. ಕಡೆ ಪಕ್ಷ ನಾಯಿ, ಬೆಕ್ಕು, ಹಸು, ಸಾಕು ಕುದುರೆಯಾದರೂ ಆಗಿದ್ದಲ್ಲಿ ಟಾಮಿ, ರಾಮೂ, ಲಕ್ಕಿ, ಪಕ್ಕಿ ಎಂಬ ಹೆಸರಾದರೂ ಸಿಕ್ಕಿರುತ್ತಿತ್ತು. ನನಗೇನೂ ಅದರ ಹಂಬಲ ಇರಲಿಲ್ಲ. ಮಹತ್ವಾಕಾಂಕ್ಷೆಯುಳ್ಳ ಆತ್ಮ ನಾನಾಗಿರಲಿಲ್ಲ. ಮೊನ್ನೆ ಮೊನ್ನೆ ಕೋತಿಯ ದೇಹದಲ್ಲೇ ಇದ್ದಾಗ ದೇವಸ್ಥಾನದ ಕಟ್ತೆಯ ಮೇಲೆ ಕುಳಿತು ಬಾಳೆ ಹಣ್ಣು ತಿನ್ನುತ್ತಿದ್ದೆ. ಆಗ ಅಲ್ಲೊಂದು ಹಾಡು ಕೇಳಿಸಿತು- “ಮಾನವ ಜನ್ಮ ದೊಡ್ಡದು ಅದ ಹಾಳು ಮಾಡದಿರಿ ಹುಚ್ಚಪ್ಪಗಳಿರಾ ” ಎಂದು ಇತ್ತು. ಇಂಪಾಗಿತ್ತು. ನನಗೆ ಭಾಷೆ ಹೇಗೆ ಅರ್ಥವಾಯ್ತು ಎಂದಿರೋ,, ನನ್ನ ಪಕ್ಕದಲ್ಲಿ ಕುಳಿತ ಕೋತಿಯೊಂದು ಹಿಂದಿನ ಜನ್ಮ ದಲ್ಲಿ ಮಾನವನಾಗಿತ್ತಲ್ಲ, ಅದು ಕೋತಿಯ ಭಾಷೆಯಲ್ಲೇ ಅದರ ಅರ್ಥ ನನಗೆ ತಿಳಿಸಿ ಹೇಳಿದ್ದರಿಂದ ನನಗೆ ಮಾನವ ಜನ್ಮದ ರುಚಿ ನೋಡಬೇಕೆಂಬ ಅದಮ್ಯ ಬಯಕೆ ಹುಟ್ಟಿಯೇ ಬಿಟ್ಟಿತು. ಈ ಕೋತಿಯ ದೇಹಾಂತ್ಯದವರೆಗೂ ತಡೆದಿದ್ದು ನಂತರ ಯಮಧರ್ಮ-ಚಿತ್ರಗುಪ್ತರ ಸನ್ನಿಧಾನಕ್ಕೆ ಹಾರಿದೆ.ಆ ದಿನ ಅವರಿಗೂ ಹೆಚ್ಚಿನ ಕೆಲಸವಿರಲಿಲ್ಲ ,ಸುಮ್ಮನೆ ಕುಳಿತು ಹರಟುತ್ತಿದ್ದರು. ಯಮಧರ್ಮ ತುಂಬಿದ ಕೊಡ; ಆದರೆ ಸ್ವಲ್ಪ ಹುಂಬ. ಚಿತ್ರಗುಪ್ತನೋ, ಅಹಂಕಾರಿ. ಏನು ಚಿತಾವಣೆ ಬೇಕಾದರೂ ಮಾಡಿಡುತ್ತಾನೆ. ನಾನು ಹೋಗಿ ನಿಧಾನವಾಗಿ ನನ್ನ ಮನದಿಂಗಿತ ಬಿಚ್ಚಿಟ್ಟೆ. ಯಮಧರ್ಮ ತಲೆದೂಗಿದರೂ ಈ ಚಿತ್ರಗುಪ್ತ ಮೂಗು ಮುರಿದ. ನನ್ನ ಜನ್ಮ ಜಾಲಾಡಿ ಏನೋ ದೊಡ್ಡ ಮೇಧಾವಿಯಂತೆ ನನಗಿನ್ನೂ ಆ ಪರಿಪಕ್ವತೆ ಬಂದಿಲ್ಲವೆಂದೂ,ಇನ್ನೂ ಕಾಯಬೇಕೆಂದೂ ಸೂಚಿಸಿದ. ನಾನೂ ಪಟ್ಟು ಬಿಡಲಿಲ್ಲ.ಆಗ್ರಹ ಮಾಡಿದೆ. ಯಮನಿಗೆ ಏನೆನ್ನಿಸಿತೋ,ಸರಿ ಹೋಗು ನಿನ್ನಿಷ್ಟ ಅಂದ. ತನ್ನ ಮಾತು ನಡೆಯದ್ದಕ್ಕೆ ಆ ಮುದಿಯ ಚಿತ್ರಗುಪ್ತನಿಗೆ ಅಸಮಾಧಾನವಾಯ್ತು. ಆಗಲಿ, ನನಗೇನು. ಖುಷಿಯಿಂದ ಹೊರಟೆ. ಹಿಂದಿನಿಂದ ಎಚ್ಚರಿಕೆಯ ಸಂದೇಶ ಬಂತು. ಯಮನೇ ನುಡಿದ: ಎಲವೋ ಆತ್ಮವೇ, ಮನುಷ್ಯರ ವ್ಯವಹಾರಕ್ಕೆ ಇಳಿಯುತ್ತಿದ್ದೀ. ಎಚ್ಚರಿಕೆ ಇರಲಿ. ಎಲ್ಲ ಪಶು-ಪಕ್ಷಿಗಳಿಗಿಂತ ಅವರ ನಡೆ ನುಡಿ ವಿಭಿನ್ನ. ನೀನು ಇಲ್ಲಿಯವರೆಗೆ ಅವರೊಡನೆ ಒಡನಾಡಿಲ್ಲ. ಇಷ್ಟುದಿನ ಗಂಡು ಹೆಣ್ಣುಗಳು ಸೇರಿದರೆ ಅದು ಸಂತಾನೋತ್ಪತ್ತಿಗಾಗಿ ಎಂದೇ ನಿನ್ನ ಅನುಭವ. ಹಸಿವು, ನಿದ್ರೆ ಮೈಥುನಗಳ ನಿಯಮಾವಳಿ ಅವರ ಲೋಕದಲ್ಲಿ ಬೇರೆಯೇ. ಹಸಿವಿರದಿದ್ದರೂ ತಿನ್ನುವ, ತಿನ್ನದಿದ್ದರೂ ತೇಗುವ, ಬಾಯಾರಿಲ್ಲದೆಯೂ ಕುಡಿಯುವ, ಬರೀ ಮೋಜಿಗೆ ಮೈಥುನದಲ್ಲಿ ತೊಡಗುವ ವಿಚಿತ್ರ ಸಂಕುಲ ಅದು. ಸಂತಾನಕ್ಕಾಗಿ ಅವರು ಕೂಡಿದಾಗ್ಯೂ ಅದು ಕೈಗೂಡದೆ ಇರಬಹುದು. ಅದು ಅಲ್ಲದೆ ಅಲ್ಲಿ ಎಲ್ಲವು ಸ್ಪರ್ಧಾತ್ಮಕೆ, ಪೈಪೋಟಿಕರ. ಹಲವು ಆತ್ಮಗಳು ಕಾಯುತ್ತಾ ಹೊಂಚು ಹಾಕಿ ಕುಳಿತಿರುತ್ತವೆ. ಅಲ್ಲಿ ನೋಡು, ಆ ಬಸ್ಸಿನಲ್ಲಿ ನುಗ್ಗಿ ಸೀಟು ಹಿಡಿಯುತ್ತಿಲ್ಲವೇ ಹಾಗೆ.ಯಾರು ಮುನ್ನುಗ್ಗುವರೋ ಅವರಿಗೇ ಅವಕಾಶ. ನೀನೂ ನಿನ್ನ ಚಾಲಾಕಿತನ ತೋರಿಸಬೇಕು. ಜೋಭದ್ರ-ಜಡಭರತನಂತೆ ಇರಕೂಡದು. ಒಂಭತ್ತು ತಿಂಗಳ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ಸಫಲನಾಗದಿದ್ದರೆ ವಾಪಸ್ ಎಮ್ದು ತಾಕೀತು ಮಾಡಿದ. ಅವನು ಗುಡ್-ಲಕ್ ಹೇಳುವುದನ್ನು ಮರೆಯಲಿಲ್ಲ ನನಗೆ ಥ್ಯಾಂಕ್ಸ್ ಹೇಳುವುದು ಹೊಳೆಯಲಿಲ್ಲ!!
ಸರಿ, ಭೂಲೋಕಕ್ಕೆ ಜರ್ರೆಂದು ಜಾರಿ ಪುಣ್ಯಭೂಮಿ ಎಂಬ ಭಾರತವನ್ನೇ ಕ್ಷೇತ್ರವಾಗಿ ಅರಿಸಿದೆ. ಜನಸಂಖ್ಯೆಯಂತೆ ಆತ್ಮಗಳ ಸಂಖ್ಯೆಯೂ ಇಲ್ಲಿ ಅಗಣಿತ. ಎಲ್ಲೆಲ್ಲೂ ಹೊಂಚುಹಾಕಿ ಕಾಯುತ್ತಿರುವವೇ. ಇಲ್ಲಿ ಪೈಪೋಟಿ ಜಾಸ್ತಿ.ಅವರೊಟ್ಟಿಗೆ ಈರ್ಶ್ಯೆಇಂದಲೂ, ಅಸಡ್ಡೆಯಿಂದಲೂ ನೋಡಿ ಇಂಗ್ಲೆಂಡಿಗೆ ಹಾರಿದೆ. ಈ ರೀತಿಯ ಪ್ರತಿಭಾ ಪಲಾಯನ ಮಾನವರಲ್ಲೂ ಇದೆಯೆಂದು ಆನಂತರ ತಿಳಿಯಿತೆನ್ನಿ.
ಇಂಗ್ಲೆಂಡಿನಲ್ಲಿ ಅಷ್ಟೊಂದು ಆತ್ಮಾಪುಲೇಷನ್ (ಆತ್ಮ ಸಂಖ್ಯೆ) ಇರಲಿಲ್ಲ.ಇದೇ ಪ್ರಶಸ್ತ ಜಾಗವೆಂದು ಸುತ್ತ ತೊಡಗಿದೆ:
ಸಮಾಜದ ಸ್ಥಿತಿ-ಗತಿ,ಕೌಟುಂಬಿಕ ಪರಿಸರ, ಸಾಮಾಜಿಕ ಸ್ತರಗಳು, ಅವರ ಯೋಚನಾಧಾಟಿ ಇವುಗಳ ಸ್ಥೂಲ ಪರಿಚಯ ನನಗಾಯ್ತು. ಸರಿ ಅತ್ತಿತ್ತ ನೋಡಲು ಒಂದು ಜೋಡಿ ಕಾಣಿಸಿತು. ಎತ್ತರದ ನಿಲುವಿನ ಆತ್ಮ ವಿಶ್ವಾಸತುಂಬಿದ ಸ್ಫುರದ್ರೂಪಿ ಗಂಡು, ಅವನೊಟ್ಟಿಗೆ ಆಕರ್ಷಕ ರೂಪದ ಹೆಣ್ಣು. ಏನು ಪ್ರೀತಿ ಅವನ ಮಾತುಗಳಲ್ಲಿ! ಅವಳ ಕೈ ಹಿಡಿಯುವುದೇನು, ಸುತ್ತಾಡುವುದೇನು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದೇನು, ಅವಳು ಕೇಳಿದ್ದನ್ನು ಕೊಡಿಸುವುದೇನು, ಜೊತೆಯಲ್ಲಿ ಊಟ ಸವಿಯುವುದೇನು! ಅವಳಿಗೋ ಅವನದೇ ಧ್ಯಾನ. ಅವನು ಸ್ವಲ್ಪ ಭಿನ್ನ.ಸರಿ ಗಂಡು ಹೆಣ್ಣಿನ ಒಡನಾಟದ ಪರಾಕಾಷ್ಠೆಯ ಸಮಯ ಬಂದೇ ಬಂತು. ಇವರ ಮಗುವಿನ ಆತ್ಮ ನಾನಾದಲ್ಲಿ ನನಗೆ ಸಕಲ ಸೌಭಾಗ್ಯವೂ ದೊರೆಯುವುದೆಂಬ ಭಾವನೆ ಬಂತು. ನುಗ್ಗಿ ಪ್ರತಿಷ್ಠಾಪಿಸಿಕೊಂಡೆ. ವಾರಗಳು ಕಳೆದು ಆಕೆ ತನ್ನ ರಹಸ್ಯ ಬಿಚ್ಚಿದಳು. ಮಗುವಿನ ತಾಯಾಗುವುದರಿಂದ ಆತನು ಮದುವೆಯ ತಯಾರಿ ಮಾಡಬೇಕೆಂದಳು. ಅವನ ಮುಖ ಕಳೆಗುಂದಿತು. ತಾನು ಆಫ಼ೀಸರ್. ಅವಳು ಯಕಃಶ್ಚಿತ್ ಸೆಕ್ರೆಟರಿ. ಅವನಿಗೆ ಈಗಾಗಲೇ ಬೇರೆ ಮದುವೆ ನಿಶ್ಚಯವಾಗಿದೆಯಂತೆ!! ಅರೆ!! ನನಗೆ ಗೊಂದಲ. ಅವಳು ಮೊದಲು ಅತ್ತಳು.ಆದರೆ ಗಟ್ಟಿಗಿತ್ತಿ. ಬೆದರಿಸಿ ಚೆನ್ನಾಗಿ ದುಡ್ಡು ಕಿತ್ತಳು. ಅವನು ಪೀಡೆ ತೊಲಗಿದರೆ ಸಾಕೆಂದು ಕೊಟ್ಟ. ನನ್ನನ್ನು ನಿವಾರಿಸಿಕೊಂಡಳು. ನಾನು ಗೂಡಿನಿಂದ ದಬ್ಬಲ್ಪಟ್ಟ ಪಕ್ಷಿಯಂತೆ ಹೊರಬಂದು ಮತ್ತೆ ಹಾರತೊಡಗಿದೆ.

ಸರಿ, ಅಲ್ಲೊಂದು ಯುವ ಜೋಡಿ ಕಣ್ಣಿಗೆ ಬಿತ್ತು. ಅರೆ ಇದೇನು ಶಾಲೆಯ ಸಮವಸ್ತ್ರ ಧರಿಸಿ ಶಾಲೆಗೇ ಹೋಗದೆ ಸುತ್ತುತ್ತಿರುವರಲ್ಲ! ಹಿಂಬಾಲಿಸಿದೆ.ಅವರು ಈ ಲೋಕದ ಯಾವುದೇ ಜಾವಾಬುದಾರಿಯನ್ನು ಹೊತ್ತಿಲ್ಲದವರಾಗಿ ಓಡಾಡಿಕೊಂಡಿದ್ದರು. ಪ್ರೀತಿ-ನೀತಿ,ಕಾಮ-ಪ್ರೇಮಗಳ ಅರಿವನ್ನಾಗಲೀ ,ಪರಿಧಿಯನ್ನಾಗಲೀ ಅರಿಯವದವರ್ರಗಿ ಕಂಡುಬಂದರು. ಕ್ಲೇಶರಹಿತರಾದ ಇವರೇ ನನಗೆ ತಾಯಿ ತಂದೆಯಾಗಲು ಯೋಗ್ಯರೆಂದು ನಿರ್ಧರಿಸಿ ಕಾಯತೊಡಗಿದೆ.ಸಮಯ ಬಂತು;ನಾನು ನುಗ್ಗಿದೆ. ಆಶ್ಚರ್ಯವೆಂದರೆ ಒಂದೂ ಪೈಪೋಟಿಕಾರ ಆತ್ಮಗಳು ಕಾಣದಿದ್ದುದು!
ಸರಿ ಹುಡುಗಿ ವಾಕರಿಸಿದಳು, ವಾಂತಿ ಮಾಡಿಕೊಂಡಳು. ತಾಯಿಗೆ ಅನುಮಾನ ಬಂತು. ಜಬರ್ದಸ್ತಿ ಮಾಡಿದಳು, ಹುಡುಗಿ ಬಾಯಿ ಬಿಟ್ಟಳು. ಅವರೋ ಕರ್ಮಠ ಸಂಪ್ರದಾಯಿಕ ಮನೆತನದವರು. ಗಂಡನಿಗೆ ಹೇಳಲು ಹೌಹಾರಿ ಹಿಂಜರಿದು, ಹುಡುಗಿಯ ಮುಂದಿನ ವಿದ್ಯಾಭ್ಯಾಸಕ್ಕೂ, ಸಮಾಜದಲ್ಲಿ ಮುಖವೆತ್ತಿ ತಿರುಗಾಡುವುದಕ್ಕೂ,ಆರೋಗ್ಯದ ದೃಷ್ಟಿಯಿಂದಲೂ ಅಳೆದು ತೂಗಿ ಗರ್ಭಪಾತವೇ ಸರಿಯಾದ ದಾರಿಯೆಂದು ನಿಶ್ಚಯಿಸಿದಳು; ಕಾರ್ಯರೂಪಕ್ಕೂ ತಂದಳು. ಎಂಟು ವಾರವಾಗಿತ್ತೇನೋ, ನಾನು ಗಂಟು ಕಟ್ಟಿ ಹೊರಗೆ ಬಿದ್ದು ಬೀದಿ ಪಾಲಾದೆ.

ಸುತ್ತುತ್ತಾ, ಹತ್ತಿರದಲ್ಲಿದ್ದ ಮನೆ ಹೊಕ್ಕೆ. ಅಕಟಕಟಾ… ಏನು ಅವ್ಯವಸ್ಥೆ, ಏನು ಅಸ್ತವ್ಯಸ್ತ. ಜೀವನ ಹೀಗೂ ಮಾಡಬಹುದೇ ಎಂಬ ಸೋಜಿಗ ನನ್ನನು ಕಾಡದಿರಲಿಲ್ಲ.ಇಬ್ಬರೂ ೨೫-೨೬ ವಯಸ್ಸಿನವರಾದರೂ ನೋಡಲು ೪೫-೪೬ ರಂತೆ ಕಾಣುತ್ತಿದ್ದರು.ಎಂಥದ್ದೋ ಕೊಳವೆಯಂಥ ಉರಿಯುವ ಕಡ್ಡಿ,ಎಂಥದ್ದೋ ಪೀಪಾಯಿಯಂಥ ಶೀಶೆ.ಒಂದನ್ನು ದಂ ಎಳೆಯುವುದು, ಇನ್ನೊಂದನ್ನು ಹೀರುವುದು, ಓಲಾಡಿ ನಲಿಯುವುದು; ಆಗಾಗ ತಿನ್ನುವುದು. ಇಬ್ಬರಿಗೂ ಕೆಲಸವಿಲ್ಲ.ಆದರೆ ಅವರಿಗೆ ಹೇಗೋ ಸಹಾಯ ದೊರೆಯುತ್ತಿತ್ತು. ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಸರಕಾರ ಧನಸಹಾಯ ಕೊಡುವ ವಿಷಯ ನನಗೆ ತಿಳಿಯಿತು. ರಾಮರಾಜ್ಯದಲ್ಲಿ ಆರಾಮವಾಗಿ ರಾಮರಸವೆಂಬ ರಂ ಹೀರಿ, ಝಂ ಅಂತ ಇದ್ದು ಅಜರಾಮರರಾಗುವ ಪರಿ ನನಗೆ ಹಿಡಿಸಿತು. ಅಲ್ಲೇ ಗಸ್ತು ತಿರುಗತೊಡಗಿದೆ.
ಅವರಿಗೆ ಕೆಲಸವಿಲ್ಲದ್ದರಿಂದಲೂ, ದೇಹವೆಂಬೋ ಅಗ್ನಿಕುಂಡಕ್ಕೆ ಉದ್ದೀಪನೆಯ ಹವಿಸ್ಸು ಪ್ರದಾನವಾಗುತ್ತಿದ್ದುದರಿಂದಲೂ ನನ್ನ ಅರ್ಜಿ ಮೂರೇ ದಿನದಲ್ಲಿ ಮಂಜೂರ್. ನನ್ನ ಹೊಸಗೂಡಿನಲ್ಲಿ ಅಮಲೇರಿಸುವ ಅನುಭವ ಆಗತೊಡಗಿ ಅನಂದ ತುಂದಿಲನಾದೆ. ಎಲ್ಲಾ ಸರಿ, ಆದರೆ ಏನೋ ಸರಿಯಿಲ್ಲವೆಂದು ನನ್ನ ಮನಸ್ಸು ಹೇಳುತ್ತಿತ್ತು. ಇದೇನು ಆತ್ಮಕ್ಕೂ ಮನಸ್ಸೇ ಎಂದು ಮೂಗು ಮುರಿಯಬೇಡಿ. ನಮಗೂ ಅಂಥದ್ದೊಂದು ಇರುತ್ತೆ, ನಿಮ್ಮ ಪರಿಭಾಷೆಯಲ್ಲಿ ನೀವು ಮನಸ್ಸು ಎಂದು ಕರೆಯಬಹುದಷ್ಟೆ.

ಸರಿ ಒಂದು ಮುಂಜಾನೆ ಅವನಿಗೂ ಅವಳಿಗೂ ಜಗಳ ಹತ್ತಿ ಬಿಟ್ಟಿತು.ಮಹಾಶಯ ಎದ್ದು ತನ್ನ ಹೊಗೆ ಕಡ್ಡಿ ಹುಡುಕಿದ, ಸಿಗಲಿಲ್ಲ,ಅವಳನ್ನುಕೇಳಿದ (ಸಿಗರೇಟು ಎಂದು ಅದನ್ನು ಕರೆಯುತ್ತಾರಂತೆ). ಅವಳು ತನ್ನ ಬಳಿ ಇದ್ದರೂ ಕೊಡುವುದಿಲ್ಲ ಎನ್ನುವುದೇ.ಮಾತಿಗೆ ಮಾತು ಬೆಳೆದು ಹೊಡೆದಾಟ ಬಡಿದಾಟದ ವರೆಗೂ ಹೋಗಿ ಅವನು ಅವಳನ್ನು ಒದ್ದುಬಿಟ್ಟ.ನೋವಿನಿಂದ ಅವಳೂ, ಅವಳ ಒಳಗಡೆ ನಾನೂ ಒದ್ದಾಡಿಬಿಟ್ಟೆವು. ಆಸ್ಪತ್ರೆಗೇನೋ ಹೋದಳು. ಕಾಲ ಮಿಂಚಿತ್ತು. ನಾನು ಹೊರಗೆ ಬರಲೇ ಬೇಕಾಯ್ತು.
ಇದುವರೆಗಿನ ನನ್ನ ಅನುಭವ ಮದುವೆಯಾಗದ, ಯಾವ ಬದ್ಧತೆಗಳಿಲ್ಲದ ಜೋಡಿಗಳಿಗೆ ಸೀಮಿತವಾಗಿತ್ತು. ಸತತ ವೈಫಲ್ಯಗಳಿಂದ ಆತ್ಮದ ಆತ್ಮವಿಶ್ವಾಸವೇ ಕುಗ್ಗುತ್ತಿತ್ತು ನೋಡಿ ಸ್ವಾಮಿ. ಆದರೆ ನಾನು ಒಂದಾನೊಂದು ಕಾಲದಲ್ಲಿ ಬ್ರೂಸ್ ಎಂಬ ಸ್ಕಾಟ್ಲೆಂಡಿನ ರಾಜನಿಗೆ ತನ್ನ ಸತತ ಪರಿಶ್ರಮದಿಂದ ಬಲೆನೇಯ್ದು ಭರವಸೆ, ಉತ್ಸಾಹ ಮೂಡಿಸಿದ್ದ ಜೇಡವೊಂದರ ಆತ್ಮನಾಗಿದ್ದೆನಷ್ಟೆ! ಆ ಅನುಭವ ನನ್ನ ಕಣಕಣದಲ್ಲೂ ಇದ್ದುದರ ಕಾರಣ ಮರಳಿಯತ್ನವ ಮಾಡಲು ಮುನ್ನಡೆದೆ.

ಈ ಬಾರಿ ವೈವಾಹಿತ ಜೋಡಿಗಳನ್ನು ಮಾತ್ರವೇ ಆರಿಸಲು ನಿರ್ಧರಿಸಿದ್ದೆ.
ಆಹಾ… ಎಂತಹ ಅದ್ದೂರಿ ಮದುವೆ. ಹೇಳಿ ಮಾಡಿಸಿದಂಥ ಜೋಡಿ. ಸುಂದರ, ಸುಸಂಸ್ಕೃತರು. ಒಬ್ಬರನ್ನೊಬ್ಬರು ಒಡನಾಡಿ ಬಲ್ಲವರೆಂದು ತೋರುತ್ತಿದೆ.ಏನು ಪ್ರೀತಿ,ಏನು ವಿಶ್ವಾಸ. ಅವನಂತೂ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡುತ್ತಾನೆ.ಅವಳೂ ಅಷ್ಟೆ. ಆಹಾ ” ಆರಂಕುಶವಿಟ್ಟೊಡೇಂ, ನಾನಾಗುವೆನಮ್, ಇವರ್ ಕೂಸಿನ ಆತ್ಮನುಂ; ಅದರಾತ್ಮನಾದೊಡೆ ಪೆರತೇಮ್, ದೊರೆವುದೆಲ್ಲ ಜೀವನ ಸುಖಂ” ಎಂದೆನ್ನುತ್ತಾ ಅವರ ನೆರಳಂತೆ ಹಿಂಬಾಲಿಸ ತೊಡಗಿದೆ. ಅಲ್ಲಲ್ಲಿ ಪೈಪೋಟಿಗೆ ಕೆಲವು ಬಂದವಾದರೂ ಅವುಗಳೆಡೆಗೆ ಕೆಕ್ಕರಿಸಿ ನೋಡಿದೆ, ಹೆದರಿಸಿದೆ. ಅವು ಹಾಗೆಯೇ ದೂರ ಸರಿದವು,. ನನಗೆ ನಾನೇ ಶಭಾಷ್ ಹೇಳಿಕೊಂಡೆ. ಮಧುಚಂದ್ರಕ್ಕೆ ಹೋದಲ್ಲೆಲ್ಲಾ ಹಿಂಬಾಲಿಸಿದೆ.ಅವರು ಬೇಗನೆ ತಮ್ಮ ಕುಟುಂಬ ಬೆಳೆಸುವ ಆಸೆಯಲ್ಲಿದ್ದರು, ನನ್ನ ಘಳಿಗೆ ಕೂಡಿಬಂತು. ನಾನು ಸುಖಾಸೀನನಾದೆ. ದಿನ ಉರುಳಿದವು. ಎಲ್ಲ ಚೆನ್ನಾಗಿ ನಡೆದಿತ್ತು. ಅವನು ಬಹಳ ಮುಚ್ಚಟೆಯಿಂದ ಕಾಳಜಿ ಮಾಡಿದ.ಅವರಿಬ್ಬರ ತಂದೆ ತಾಯಿಯರೂ ಬಂದು ನೋಡಿಕೊಂಡರು. ಏಕಾಂತದಲ್ಲಿ ಅವರಿಬ್ಬರೂ ತಮ್ಮ ಭಾವೀ ಕೂಸಿನ ಬಗೆಗೆ ಕನಸು ಕಟ್ಟುವುದಿತ್ತು.ಮಗುವಿನ ಹೆಸರು ಕುರಿತು ಚರ್ಚಿಸುವುದಿತ್ತು.ನನಗಂತೂ ಬಹಳ ಖುಷಿ. ಆಹಾ ಎಂತಹ ದಂಪತಿಗಳು. ನಾನೆ ಧನ್ಯ ಎಂದು ಬೀಗುತ್ತಲಿದ್ದೆ.ಅವರಿಗೆ ತಮ್ಮ ಮಗು ಸಾತ್ವಿಕ ಗುಣ ಪ್ರಧಾನವಾದ, ಒಳ್ಳೆಯ ಹೃದಯದ ಪ್ರೇಮಮಯಿ ಆಗಬೇಕೆಂಬ ಬಯಕೆ; ಆದರೆ ಚಿತ್ರಗುಪ್ತನ ಲೆಕ್ಖಾಚಾರದಂತೆ ಅದು ರಜೋಗುಣ ಪ್ರಧಾನವಾದ ಜೀವ ಆಗಬೇಕೆಂದಿತ್ತು.ನಾನು ನನ್ನ ಅನುಭವದ ಮೂಸೆಯಿಂದ ಬೇಕಾದ ಕಸರತ್ತುಗಳನ್ನೆಲ್ಲಾ ತೆಗೆದು ಪ್ರಯೋಗಿಸಿ ಸಾತ್ವಿಕ ಗುಣ ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದೆ. ನನ್ನ ಮೇಲಧಿಕಾರಿಗಳಿಗೆ ಇರಿಸು ಮುರಿಸಾಗದಂತೆ ನನ್ನ ಈ ಕೆಲಸ ನಡೆಸುತ್ತಿದ್ದೆ. ನನಗೆ ಪ್ರೀತಿ-ಪ್ರೇಮ-ಮಮತೆ- ವಾತ್ಸಲ್ಯದ ಅನುಭವ ಚೆನ್ನಾಗಿಯೇ ಆಗುತ್ತಿತ್ತು. ಆದರೆ ಒಂದು ದಿನ ನನ್ನನ್ನು ಹೊತ್ತ ನನ್ನ ಭಾವೀ ತಾಯಿಗೆ ಉಸಿರಾಟದ ತೊಂದರೆ ಕಾಣಿಸಿತು. ವೈದ್ಯರು ಪರೀಕ್ಷಿಸಿ ಅದು ಹೃದಯ ಸಂಬಂಧೀ ಖಾಯಿಲೆಯೆಂದೂ, ಗರ್ಭ ಬೆಳೆದಂತೆಲ್ಲಾ ಅದು ಹೆಚ್ಚಾಗುವುದೆಂದೂ, ಆಕೆಯ ಜೀವಕ್ಕೇ ಅಪಾಯವೆಂದೂ ಘೋಷಿಸಿಬಿಟ್ಟರು. ಅವನು ಹೌಹಾರಿದ. ತನ್ನ ಜೀವದಂತಿರುವ ಹೆಂಡತಿಯನ್ನು ಕಳೆದುಕೊಳ್ಳಲು ಅವನು ತಯಾರಿರಲಿಲ್ಲ. ಇಂತಹ ಗಂಡಂದಿರು ಎಲ್ಲಿ ತಾನೇ ಸಿಗುವರು? ಬಹಳ ವೇದನೆಯಿಂದ ನಿರ್ಧಾರಕ್ಕೆ ಬಂದು ಗರ್ಭ ನಿವಾರಣೆ ಮಾಡಿಸಿದರು. ನಾನು ಮತ್ತೆ’ ’ಕೇರ್ ಆಫ ಫುಟ್-ಪಾತ್’ ಆದೆ. ಆಹಾ, ಇದೇನು ನಾನು ಇಂಗ್ಲೀಷ್ ಭಾಷೆ ಮಾತಾಡುತ್ತಿದ್ದೇನೆಂದು ಯೋಚಿಸಿದಿರೋ? ಇಷ್ಟು ದಿನ ಇಂಗ್ಲೆಂಡಿನಲ್ಲಿದ್ದ ಮೇಲೆ ಅವರ ಭಾಷೆ ಕಲಿಯದಿದ್ದರಾಗುವುದೇ?
ಈ ಮೊದಲು ಹೇಳಿದ ಅನುಭವ ನನ್ನಲ್ಲಿ ಸಾಕಷ್ಟು ಚಿಂತನೆಯ ತರಂಗಗಳನ್ನೆಬ್ಬಿಸಿತು.ಮಾನವ ಸಮಾಜ, ಅವರ ಜೀವನದ ಸಂಕೀರ್ಣತೆಗಳು,ಅವರ ಭಾವನೆಯ ವ್ಯಾಪ್ತಿಗಳು ನನಗೆ ಸಾಕಷ್ಟು ಅರ್ಥವಾಗಿದ್ದರೂ ಅವರ ನಿರ್ಧಾರಗಳು,ನಡತೆಗಳು ಗೊಂದಲ ಮೂಡಿಸುತ್ತಲೇ ಇದ್ದವು.ಈ ವೇಳೆಗಾಗಲೇ ನನ್ನ ಅವಧಿಯ ಆರು ತಿಂಗಳುಗಳು ಮುಗಿದೇ ಹೋಗಿದ್ದವು.ನನ್ನ ಡೆಪ್ಯೂಟೇಷನ್ ಮುಗಿಯುವ ಹಂತಕ್ಕೆ ಬರುತ್ತಿತ್ತು. ಇಷ್ಟರಲ್ಲಿ ನನ್ನ ಸಾಧನೆಗೆ ಪ್ರತಿಫಲ ಸಿಕ್ಕಿದರೆ ಸರಿ ಇಲ್ಲವಾದರೆ ಮತ್ತೆ ಕುರಿ-ಕೋಳಿಗಳ ಸಹವಾಸಕ್ಕೆ ಹೋಗಬೇಕಾಗಿತ್ತು.
ಭರದಿಂದ ಹುಡುಕಾಟಕ್ಕೆ ತೊಡಗಿದೆ. ಇಷ್ಟರಲ್ಲಿ ನನಗೆ ಆಯ್ಕೆ ಮಾಡಿಕೊಳ್ಳುವ ಅನುಭವ ಚೆನ್ನಾಗಿ ಆಗಿತ್ತು. ಬಹಳ ಮುತುವರ್ಜಿ ವಹಿಸಿ ಹುಡುಕಾಟಕ್ಕೆ ತೊಡಗಿದೆ.

ಆಹಾ,, ಕಣ್ಣಿಗೆ ಬಿದ್ದಳು. ಏನು ಮಮತಾಮಯಿ ಕಣ್ಣುಗಳು!! ಥೇಟು ನಮ್ಮ ದೇಶದ ಪಂಢರೀಬಾಯಿಯ ಹಾಗೆ!! ಸೌಮ್ಯ ಮುಖದ ತುಂಬ ಬರೀ ಮಂದಹಾಸ. ಹಣೆಯಲ್ಲಿ ಅಗಲ ಕುಂಕುಮ ಇಲ್ಲ ನೋಡಿ. ಈಕೆ ಹಿಂದೂ ಹೆಂಗಸಲ್ಲವಲ್ಲ!
ಉದ್ಯಾನವನದಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಆಡುತ್ತಿದ್ದಾಳೆ. ಮಕ್ಕಳೂ ಮುದ್ದಾಗಿವೆ. ತಾಯಿಯೊಡನೆ ಪ್ರೀತಿಯಿಂದ ಆಡುತ್ತಿವೆ. ಎಂಟು, ಆರು ಮತ್ತು ಮೂರು ವರ್ಷದ ಗಂಡು ಮಕ್ಕಳು. ಅವರುಗಳು ಧರಿಸಿರುವ ಬಟ್ಟೆ ಚೆನ್ನಾಗಿಲ್ಲ. ಕೆಲವು ಕಡೆ ಕಿತ್ತು ಹೊಗಿದೆ. ಆದರೇನು, ಸಂತೋಷಕ್ಕೆ ಕಡಿಮೆ ಇಲ್ಲ. ಇನ್ನೂ ಹತ್ತಿರ ಹೋದೆ. ಆ ಮಕ್ಕಳ ಸಿಹಿ ಮಾತುಗಳು ಕೇಳುತ್ತಿವೆ. ಮಕ್ಕಳು ತಾಯಿಯನ್ನು ಅಪ್ಪ ಯಾವಾಗ ಬರುತ್ತಾನೆಂದು ಕೇಳುತ್ತಿವೆ. ಸಂಸಾರವನ್ನು ನಡೆಸುವ ಅಂಬಿಗನಾಗಿ ಅವನು ಪಡುವ ಕಷ್ಟಗಳನ್ನು ಆ ಮಮತಾಮಯಿ ಅವುಗಳ ಭಾಷೆಯಲ್ಲಿ ತಿಳಿಸಿ ಹೇಳುತ್ತಿದ್ದಾಳೆ. ಇಂದು ಸಂಬಳದ ದಿನವಾದ್ದರಿಂದ, ಏನಾದರೂ ವಿಶೇಷ ತಿನಿಸು ತರಬಹುದೆಂಬ ಭರವಸೆಯನ್ನೂ ನೀಡುತ್ತಿದ್ದಾಳೆ. ಅಷ್ಟರಲ್ಲಿ, ಅಗೊ ನೋಡಿ, ಅವುಗಳ ಕಣ್ಣುಗಳಲ್ಲಿ ಬೆಳಕು! ಅವರಪ್ಪ ಬರುತ್ತಿರುವ. ಮಕ್ಕಳು ಅವನೆಡೆಗೆ ಓಡುತ್ತಿವೆ. ಅವನ ಬಟ್ಟೆ ಬಹಳ ಕೊಳೆಯೆಂದು ಕಾಣುತ್ತಿದೆ, ಯಾವುದೋ ಕಾರ್ಮಿಕನಿರಬೇಕು.ಅದರ ಪರಿವೆ ಅವರ್ಯಾರಿಗೂ ಇಲ್ಲ. ಮಕ್ಕಳು ಜೋತು ಬೀಳುತ್ತಿವೆ. ಆಕೆ ಅವನಿಗೆ ಮುತ್ತಿಡುತ್ತಿದ್ದಾಳೆ. ಎಲ್ಲರ ಮುಖದಲ್ಲೂ ಸಂತಸ ನೆಮ್ಮದಿ. ಚೀಲದಲ್ಲಿರುವ ಸಿಹಿತಿನಿಸು ಮಕ್ಕಳಿಗೆ ಕೊಡುತ್ತಿದ್ದಾನೆ. ಎಲ್ಲ ತಿಂದು ಆಡುತ್ತಿದ್ದಾರೆ. ರಾತ್ರಿಯಾಗುತ್ತಾ ಬಂತು.ಮನೆಗೆ ಹೋಗುತ್ತಿದ್ದಾರೆ. ಆಹಾ ಹುಟ್ಟಿದರೆ ಈ ತಾಯಿಯ ಮಡಿಲಲ್ಲಿ ಹುಟ್ಟಬೇಕು ಎಂದು ನಾನು ನಿರ್ಧರಿಸಿ ಅವರೊಡನೆ ಮನೆಗೆ ನುಗ್ಗಿದೆ. ಊಟವಾಗಿ ಮಲಗುವ ಸಿದ್ಧತೆ ನಡೆಸಿದ್ದಾರೆ. ಆ ಗಂಡ ಹೆಂಡಿರು ತಮಗೊಂದು ಹೆಣ್ಣುಮಗು ಇದ್ದರೆ ಚೆಂದವೆಂದು ಮಾತಾಡಿಕೊಳ್ಳುತ್ತಿದ್ದಾರೆ. ಆ ಸಮಯವೂ ಬಂತು. ನಾನು ಬೇರೆಲ್ಲ ಸೋಂಬೇರಿ ಆತ್ಮಗಳಿಗಿಂತಲೂ ಜಾಗೃತನಾಗಿದ್ದು ಎಣ್ಣೆ ಬರುವಾಗ ಕಣ್ಣು ಮುಚ್ಚಿಕೊಳ್ಳಲಿಲ್ಲ. ಸಮಯಕ್ಕೆ ಸರಿಯಾಗಿ ಎಚ್ಚರದಲ್ಲಿದ್ದು ಪ್ರತಿಷ್ಠಾಪಿತನಾದೆ. ಎಲ್ಲ ಸುಸೂತ್ರವಾಗಿ ನಡೆದಿತ್ತು.ಹತ್ತು ವಾರಗಳು ಕಳೆದಿದ್ದವು. ಆಕೆಗೆ ಮನೆಗೆಲಸದ ಜೊತೆಗೆ ಮಕ್ಕಳ ಆರೈಕೆ ಕಷ್ಟವಾಗತೊಡಗಿತು. ಸಹಾಯಕ್ಕೆ ಪಾಪ ಯಾರೂ ಇಲ್ಲ. ಅವನಾದರೋ ಖರ್ಚು ತೂಗಿಸಲು ಹಗಲಿರುಳು ದುಡಿಯುತ್ತಿದ್ದಾನೆ.ತನ್ನ ಮಕ್ಕಳ ಮೇಲಿನ ತನ್ನ ನಿಗಾ ಕಡಿಮೆಯಾಗುತ್ತಿರುವುದು ಅರಿವಾಗುತ್ತಲೇ ಈ ತಾಯಿಯ ಹೃದಯ ತಳಮಳಿಸತೊಡಗಿತು. ಅಪರಾಧೀ ಮನೋಭಾವ ಕಾಡುತ್ತಿದೆ. ಅವನಿಗೂ ಹೇಳಿದಳು. ಅವನಾದರೂ ಏನು ಮಾಡುತ್ತಾನೆ? ಅಸಹಾಯಕ. ಕಡೆಗೆ ಹೀಗೇ ಮುಂದುವರಿದಲ್ಲಿ ತನ್ನ ಮಕ್ಕಳಿಗೆ ತಾನು ನ್ಯಾಯ ಒದಗಿಸಲಾಗುವುದಿಲ್ಲವೆಂಬ ಜಿಜ್ಞಾಸೆಯಲ್ಲಿ ಬೆಂದು ಗರ್ಭ ನಿವಾರಣೆಗೆ ಮೊದಲಾಗುತ್ತಾಳೆ. ತನ್ನ ಈ ಅಸಹಾಯಕ ಸ್ಥಿತಿಗೆ ಮರುಗುತ್ತಾ , ಅಳುತ್ತಾ ಆಸ್ಪತ್ರೆಗೆ ನಡೆಯುತ್ತಾಳೆ. ವೈದ್ಯರು ನಿರ್ವಿಕಾರ ಮನೋಭಾವದಿಂದ ತಮ್ಮ ಕೆಲಸ ಮಾಡಿದ್ದಲ್ಲದೆ ನನ್ನನ್ನೂ ಉಚ್ಛಾಟಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲಿಗೆ ನನ್ನ ಅವಧಿ ಮುಗಿಯುತ್ತಾ ಬಂದಿತ್ತು. ನನಗೂ ಈ ಮನುಷ್ಯ ಜೀವನದ ಗೊತ್ತುವಳಿ ಇಲ್ಲದ ಗುರಿಗಳು, ಗುರಿಗಳೇ ಇಲ್ಲದ ನಿರ್ಧಾರಗಳು,ಪ್ರೀತಿ ಪ್ರೇಮದ ಹೊರತಾಗಿಯೂ ಉಳಿದ ಅಂಶಗಳು ಅವರ ಜೀವನವನ್ನು ನಿರ್ದೇಶಿಸುವ ಪರಿ,ಅವರ ಭಾವನೆಗಳು ಹರಿಯುವ ಲಹರಿ, ಬದುಕಿನ ಅನುಭವಗಳನ್ನು ಬೇಗನೆ ಪಡೆಯುವ ತರಾತುರಿ,ಅದರ ನಿಟ್ಟಿನಲ್ಲಿ ಅನುಭವಿಸುವ ಕಿರಿ ಕಿರಿ  “ಬಿಸಿಲಿಗಾರದ ಕೋತಿ ಬಂಡೆ ಮೇಲ್ ಕುಳಿತಂತೆ” ಎನ್ನುವ ಹಾಗೆ ನನ್ನನ್ನು ಹೈರಾಣ ಮಾಡಿದ್ದವು. ಸರಳತೆಯು ವಿರಳವಾಗಿ, ಸಂಕೀರ್ಣತೆಯು ಸಂಪೂರ್ಣವಾಗಿ ಆವರಿಸಿದ್ದ ಈ ಮನುಷ್ಯರ ಜೀವನ ನನ್ನಲ್ಲಿ ಭರವಸೆಯ ಆಶಾಕಿರಣಗಳನ್ನು ಉಳಿಸಿರಲಿಲ್ಲ ಅಷ್ಟೇಅಲ್ಲ, ಭ್ರಮನಿರಸನಗೊಳಿಸಿದ್ದವು.ಪ್ರಾಣಿಗಳೇ ವಾಸಿ.ನಿಷ್ಕಾಮ ಕರ್ಮವನ್ನು ಅದರ ಅರಿವಿಲ್ಲದೆಯೂ ಬಹುಮಟ್ಟಿಗೆ ಮನುಷ್ಯನ ವ್ಯಾಖ್ಯೆಗೆ ಮೀರಿ ಆಚರಿಸುತ್ತವೆ. ಈ ಅರಿವು ನನಗಾಗುತ್ತಿದ್ದಂತೆ ನಾನು ಪುನ್ಃ ಯಮಧರ್ಮನ ಆಸ್ಥಾನದ ಕಡೆಗೆ ಧಾವಿಸಿದೆ. ಯಮ ಆಸಕ್ತಿಯಿಂದ ಸ್ವಾಗತಿಸಿದ. ಚಿತ್ರಗುಪ್ತ ತನ್ನ ಬಿಳಿ ಮೀಸೆಯಡಿಯಲ್ಲಿ ಕುಹಕ ನಗೆ ಬೀರುತ್ತಿದ್ದುದು ನನ್ನರಿವಿಗೆ ಬಾರದೆ ಇರಲಿಲ್ಲ. ನನ್ನೀ ಅನುಭವದ ಹಿಂದೆ ಇವನ ಕುಟಿಲ ಕೈವಾಡವಿರಬಹುದೋ ಎಂಬ ಸಂದೇಹ ನನ್ನಲ್ಲಿ ಮೂಡದೆ ಇರಲಿಲ್ಲ. ಪುರಂದರ ದಾಸರ ಮಾನವ ಜನ್ಮ ದೊಡ್ಡದು ಎಂಬ ಹಾಡಿನಿಂದ ಪ್ರಾರಂಭವಾದ ನನ್ನೀ ಅನ್ವೇಷಣೆ “ಆದದ್ದೆಲ್ಲಾ ಒಳಿತೇ ಆಯಿತು” ಎಂಬ ಅವರ ಹಾಡಿನಿಂದಲೇ ಮುಕ್ತಾಯ ಸ್ವಾಮಿ.
ನನ್ನ ಅಂತರಾಳವನ್ನು ನಿಮ್ಮ ಮುಂದೆ ತೆರೆದಿಟ್ಟೆ. ನಿಮಗೇನಾದರೂ ಆತ್ಮನ ಬಗ್ಗೆ ತಿಳಿಯಿತೋ? ಸರಿ. ಇನ್ನೂ ತಿಳಿದಿಲ್ಲವಾದರೆ ಅಥವಾ ಮೊದಲೇ ಕಲಸಿದ್ದ ಮನಸಿಗೆ ಇದೊಂದು ಮೇಲೋಗರವಾಗಿದ್ದರೆ ನಿಮ್ಮ ಕ್ಷಮೆ ಇರಲಿ. ನಿಮ್ಮನ್ನು ನಾನು ಅರಿಯಲಾಗಲಿಲ್ಲ ಹಾಗೇ ನನ್ನನ್ನು ನೀವು!!!.

ಸುದರ್ಶನ ಗುರುರಾಜರಾವ್.

ನಸೀಬು (Pages from a doctor’s diary) – ಸುದರ್ಶನ ಗುರುರಾಜರಾವ್

ನಸೀಬು

Kssvv_3 (1)

ಮೇರೇ ನಸೀಬು ಮೆ ತೂ ಹೈ ಕಿ ಎ ನಹಿ
ತೇರೇ ನಸೀಬು ಮೆ ಮೈ ಹೂ ಕಿ ಎ ನಹೀ!!
ಎಂದು ನನ್ನ ಮೊಬೈಲ್ ನ ರಿಂಗ್ ಟೋನ್ ಒಂದೇ ಸಮನೆ ಬಡಿದುಕೊಂಡು ನನ್ನ ಕಣ್ಣು ತೆರೆಸಿದಾಗ ಅದು ಕನಸೋ ಇಲ್ಲ ನನಸೋ,ಭ್ರಮೆಯೋ ಇಲ್ಲ ವಾಸ್ತವವೋ ಪೂರ್ತಿ ನಿರ್ಧರಿಸುವ ಸ್ಠಿತಿಯಲ್ಲಿ ನಾನು ಇರಲಿಲ್ಲವೆಂದೇ ಹೇಳಬೇಕು.ಕಣ್ಣು ಬಿಟ್ಟು ಮೊಬೈಲ್ ಎಂಬ ಈ ಕರ್ಣಪಿಶಾಚಿಯ ಮುಖ ನೋಡುತ್ತಿದ್ದೆನಾದರೂ ಅದರ ಮೂತಿ ತೀಡಬೇಕೆಂದು ನನ್ನ ಮಂಪರು ಬುಧ್ಧಿಗೆ ಹೊಳೆಯಲೇ ಇಲ್ಲ!ಈದು ಸಾಧಾರಣ ಕರ್ಣ ಪಿಶಾಚಿಯಾಗಿರದೆ ಸ್ಮಾರ್ಟ್ ಕರ್ಣ ಪಿಶಾಚಿಯಾದ್ದರಿಂದ ಸ್ಪರ್ಶಸಂವೇದೀ ಪರದೆಯನ್ನು ಹೊಂದಿ ತನ್ನ ಸೌಂದರ್ಯ ಮೆರೆಯುತ್ತಿತ್ತು. ೨೦-೩೦ ಸೆಕೆಂಡುಗಳ ಕಾಲಾವಧಿಯಲ್ಲಿ ನಿಧಾನವಾಗಿ ಭ್ರಮನಿರಸನಗೊಂಡು ಮೂತಿ ತಿವಿದನಂತರದಲ್ಲಿ ದೂರವಾಣಿ ಕಾರ್ಯಪ್ರವೃತ್ತವಾಗಿ ಆ ಕಡೆಯಿಂದ ನನ್ನ ಕಿರಿಯ ಸಹಾಯಕ ವೈದ್ಯನ ಧ್ವನಿ ಕೇಳಿಸಿತು. ” ಡಾ.ಚಕ್ರಪಾಣಿ, ನಾನು ಗೌರಿಶಂಕರ್, ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದಿಂದ ಮಾತಾಡುತ್ತಿದ್ದೇನೆ. ಮೂರು ವರ್ಷದ ಮಗು ಉಸಿರಾಟದ ತೊಂದರೆಯಿಂದ ಬಂದಿದೆ. ಫರಿಸ್ಥಿತಿ ಗಂಭೀರವಾಗಿದೆ, ಪ್ರಥಮ ಚಿಕಿತ್ಸೆ ನೀಡಲಾಗಿದೆ, ನಿಮ್ಮ ಸಹಾಯ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ.ದಯವಿಟ್ಟು ತಕ್ಷಣ ಬನ್ನಿ” ಎಂದ. ಸ್ವರ್ಗದಿಂದ ಹೆಬ್ಬಾವಿನ ರೂಪದಿಂದ ಧರೆಗೆ ಬಿದ್ದ ನಹುಶನಂತೆ ಜರ್ರನೆ ವಾಸ್ತವಕ್ಕೆ ಇಳಿದು, ನಾನು ಬೇಗನೆ ಬರುವುದಾಗಿಯೂ ಅಷ್ಟರಲ್ಲಿ ಏನೇನು ಮಾಡಬೇಕು ಹಾಗೂ ಏನೇನು ಮಾಡಬಾರದು ಎಂದು ಸೂಚನೆಗಳನ್ನು ನೀಡಿ ಹಾಸಿಗೆಯಿಂದ ಎದ್ದೆ.

ಕಣ್ಣು ನಿದ್ರಾಹೀನತೆಯಿಂದ ಇನ್ನೂ ಎಳೆಯುತ್ತಿದ್ದವು.ಮೊಬೈಲಿನ ರಿಂಗ್ ಟೋನ್ ನನ್ನನ್ನು ಅಣಕಿಸುವಂತಿತ್ತು. ನನ್ನ ನಸೀಬಿನಲ್ಲಿ ನಿದ್ರೆ ಇಲ್ಲವೆಂದು ಅದು ನನಗೆ ಹೇಳಿದಂತೆಯೂ, ನಿದ್ರೆಯನ್ನು ಪಡೆಯುವ ಅದೃಷ್ಟ ನನಗಿಲ್ಲವೆಂದು ನಾನು ಕೊರಗಿದಂತೆಯೂ ಭಾಸವಾಗಿ ಅದನ್ನು ನಾನು ಬೇಡವೆಂದರೂ ಕರ್ಣಪಿಶಾಚಿಗಿ ಹಾಡಲು ಕಲಿಸಿದ ನನ್ನ ಮಿತ್ರನನ್ನು ಶಪಿಸುತ್ತಾ (ಅಮಿತಾಬ್ ನ ನಸೀಬ್ ಚಿತ್ರದ ಈ ಗಾನವನ್ನು ನನ್ನ ಮೊಬೈಲ್ ರಿಂಗ್ ಟೋನ್ ಆಗಿ ನನ್ನ ಮಿತ್ರ ಬೇಡವೆಂದರೂ ಹಾಕಿದ್ದ). , ಈ ಅವೇಳೆಯಲ್ಲಿ ಕರೆ ಬಂದದ್ದಕ್ಕೆ ಹಪಹಪಿಸುತ್ತ, ಈ ಆನ್ ಕಾಲ್ ಎಂಬ ಜೀವಶೋಷಕ ಕೆಲಸಕ್ಕೆ ಪರಿತಪಿಸುತ್ತ ಬಟ್ಟೆ ಬದಲಿಸಿ ತಯಾರಾಗತೊಡಗಿದೆ. ಹಿಂದಿನ ದಿನವು ನನ್ನ ಆನ್ ಕಾಲ್ ಬಹಳ ಬ್ಯುಸಿ ಇತ್ತು. ತುರ್ತು ಶಸ್ತ್ರಚಿಕಿತ್ಸೆಗಾಗಿ ಬಹಳಷ್ಟು ರೋಗಿಗಳು ದಾಖಲಾಗಿದ್ದು ಒಂದರ ಹಿಂದೆ ಇನ್ನೊಂದರಂತೆ ಸತತವಾಗಿ ನಡೆದು ನಾವೆಲ್ಲ ಸುಸ್ತು ಹೊಡೆದಿದ್ದೆವು. ಹೆಚ್ಚಿನ ರೋಗಿಗಳ ಪರಿಸ್ಥಿತಿ ಸಮಾಧಾನಕರವಾಗಿಲ್ಲದ ಕಾರಣಕ್ಕೆ ನಾನು ಅಲ್ಲೆ ಇದ್ದು ಸಹಾಯಕರಿಗೆ ಮಾರ್ಗದರ್ಶನ ಕೊಡುತ್ತಿದ್ದೆ. ಎಲ್ಲಾ ಒಂದು ಹಂತಕ್ಕೆ ಬಂದಾಗ ರಾತ್ರಿ ೧೧.೩೦. ಮನೆಗೆ ಬಂದು,ಸ್ವಲ್ಪ ಉಂಡ ಶಾಸ್ತ್ರ ಮಾಡಿ ಮಲಗಲು ಹೋದೆ. ಹೆಂಡತಿ ಮಕ್ಕಳು ಬೇರೆ ಕೋಣೆಯಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದರು. ನನ್ನ ಇರುವಿಕೆಗೂ ಬರುವಿಕೆಗೂ ಹೋಗುವಿಕೆಗೂ ಯಾವುದೇ ಸಂಬಧಿವಿಲ್ಲದಂತೆ ಮಲಗಿದ್ದರು. ದುಡಿಮೆಯ ಫಲಕ್ಕೆ ಮಾತ್ರ ಬಾಧ್ಯರಾಗಿ ಯಾವುದೇ ಕರ್ಮವನ್ನು ಹಂಚಿಕೊಳ್ಳಲು ಸಿಧ್ಧರಿರದ ವಾಲ್ಮೀಕಿಯ ಪೂರ್ವಾಶ್ರಮದ ಹೆಂಡತಿ ಮಕ್ಕಳಂತೆ ನನಗವರು ಗೋಚರವಾದರು. ಮನಸ್ಸಿನಲ್ಲಿ ನಸುನಕ್ಕು ಬೆಳಗಿನಿಂದ ತಲೆಯ ಮೂಲೆಯಲ್ಲಿ ತನ್ನಿರುವನ್ನು ಜ್ಯ್ನಾಪಿಸುತ್ತಿದ್ದ ಕವಿತೆಯೊಂದನ್ನು ಬರೆದುಬಿಡೋಣವೆಂದು ನನ್ನ ಟ್ಯಾಬ್ಲೆಟ್ ಕಂಪ್ಯೂಟರ್ ತೆಗೆದು ಕವಿತೆ ಬರೆದು ಮುಗಿಸಿ ಧನ್ಯತಾಭಾವದಿಂದ ಮಲಗಿದ್ದಷ್ಟೆ ಗೊತ್ತು. ಎಚ್ಚರವಾಗಿದ್ದು ಮೊದಲು ನಿವೇದಿಸಿದ ಕರ್ಣಪಿಶಾಚಿ ಪ್ರಹಸನದಿಂದಲೆ.

ಬಟ್ಟೆ ಬದಲಾಯಿಸಿದ್ದಾಗಿತ್ತು. ಬೆಳಗಿನ ಜಾವ ೪ ಘಂಟೆ. ತುರ್ತು ಪರಿಸ್ಥಿತಿ ಮಾತುಕತೆ ಬಹಳ ಇರುತ್ತದೆ ಸಲಹೆ ಕೇಳಬೇಕು,ನಿರ್ದೇಶನ ನೀಡಬೇಕು. ಬಾಯುಸಿರು ಸಹ್ಯವಾಗಿದ್ದಲ್ಲಿ ಎಲ್ಲರಿಗೂ ಅನುಕೂಲ ಹಾಗು ನಾನು ಕೂಡ ಮುಜುಗರಕ್ಕೊಳಗಾಗುವುದು ಬೇಡವೆಂದು ಚಕಚಕನೆ ಹಲ್ಲುಜ್ಜಿ,ಮುಖ ತೊಳೆದು ಕಾರೆಂಬೋ ಕುದುರೆಯನೇರಿ ಭರ್ರೆಂದು ಹೊರಟೆ.

ಗಡಿಬಿಡಿಯಿಂದ ಆಸ್ಪತ್ರೆಗೆ ಬಂದಾಗ ನನ್ನ ಕಿರಿಯ ಸಹಾಯಕರಿಬ್ಬರೂ ಕರ್ಣಪಿಶಾಚಿಯ ಮೂಲಕ ಕೊಡಮಾಡಿದ ಸೂಚನೆಗಳನ್ನು ಚಾಚೂತಪ್ಪದೆ ಮಾಡಿದ್ದರು. ರೋಗಿಯ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡಿತ್ತು ಆದರೂ ಪ್ರಾಣಾಪಾಯದ ಗಂಭೀರಸ್ಥಿತಿಯಿಂದ ಪಾರಾಗಿರಲಿಲ್ಲ.ತಾಯಿಯು ಅಲ್ಲೆ ಸ್ವಲ್ಪ ದೂರದಲ್ಲಿ ಕುಳಿತಿದ್ದಳು. ನನ್ನನ್ನು ಕಂಡು ಯಾರೆಂದು ನರ್ಸಮ್ಮನನ್ನು ಕೇಳಿದಳೆಂದೆನಿಸುತ್ತದೆ.ಆಕೆ ನಾನು ಅರಿವಳಿಕೆ ತಜ್ನ್ಯನೆಂದು ಹೇಳಿರಬೇಕು. ಆಪಾದಮಸ್ತಕ ನನ್ನನ್ನು ವಿಶ್ಲೇಷಿಸಿದಳು. ಆಕೆಗೆ ನಾನು ಯಾರು, ನನ್ನ ಕೆಲಸವೇನು ತಿಳಿದಿರಲಾರದು. ಜನಸಮಾನ್ಯರಿಗೆ ಅರಿವಳಿಕೆ (ಅನಸ್ಥೆಸಿಯ) ಶಾಸ್ತ್ರದ ಬಗ್ಗೆ ತಿಳುವಳಿಕೆ ಕಡಿಮೆ ಅಥವಾ ಇಲ್ಲವೆಂದೇ ಹೇಳಬೇಕು. ಎಷ್ಟೋ ಜನಕ್ಕೆ ನಾವು ವೈದ್ಯರೆಂಬುದು ಕೂಡಾಅರಿವಿರದು. ಈ ಬಗೆಯ ಅನುಭವಗಳು ನಮಗೆ ಹೊಸದೇನಲ್ಲ. ಏನೇ ಇರಲಿ,ಕೆಯಂತು ಕಬ್ಬ್ಬಿಣದಂಗಡಿಯಲ್ಲಿ ನೊಣಕ್ಕೇನು ಕೆಲಸ ಎಂಬಂತೆ ನನ್ನನ್ನು ನೋಡುತ್ತಿದ್ದಳು. ಮಗುವಿಗೆ ತುರ್ತಾಗಿ ಹಲವಾರು ಇಂಟರ್ವೆನ್ಷನ್ ಮಾಡಬೇಕಾದುದರಿಂದ ಆ ತಾಯಿಯನ್ನು ಹೊರಗಿನ ಕೋಣೆಯಲ್ಲಿ ಕೂಡಿಸಲು ನರ್ಸ್ ಒಬ್ಬಳಿಗೆ ಸೂಚಿಸಿ ಕಾರ್ಯಪ್ರವೃತ್ತನಾದೆ.

ಸಂಕ್ಷಿಪ್ತವಾಗಿ ರೋಗಿಯ ಬಗೆಗೆ ಕೇಳಿ ತಿಳಿದುಕೊಂಡೆ. ಇತ್ತೀಚೆಗೆ ಶುರುವಾದ ವಸಂತ ಋತುವಿನ ಪ್ರಭಾವ ಆ ಮಗುವಿನ ಮೇಲೆ ಚೆನ್ನಾಗಿಯೇ ಆಗಿತ್ತು. ವರ್ಷದೆಂಟು ತಿಂಗಳು ಚಳಿ ಮಳೆಯಲ್ಲಿ ಮುಳುಗಿರುವ ಈ ಬ್ರಿಟನ್ನಿನಲ್ಲಿ ವಸಂತನ ಸ್ಪರ್ಷವಾದ ತಕ್ಷಣ ಗಿಡ ಮರ ಬಳ್ಳಿಗಳು ನಳನಳಿಸಿ ಹೂ ಬಿಟ್ಟು ಪರಾಗರೇಣುಗಳನ್ನು ಪ್ರವಾಹದೋಪದಿಯಲ್ಲಿ ವಾತಾವರಣಕ್ಕೆ ಹರಿಯಗೊಟ್ಟದ್ದೆ, ಎಲ್ಲ ಬಗೆಯ ಅಲರ್ಜಿಗಳು ಮನುಷ್ಯಮಾತ್ರರಲ್ಲಿ ಉಲ್ಬಣಗೊಂಡು ಆಸ್ಪತ್ರೆಗಳು ಜನಜಾತ್ರೆಯಂತಾಗುತ್ತವೆ. ಈ ಮಗುವಿನ ಆಸ್ತಮ ದಿನದಿಂದ ದಿನಕ್ಕೆ ಹೆಚ್ಚಾಗಿ, ಔಷಧಿಗಳ ಪರಿಣಾಮ ಕಡಿಮೆಯಾಗಿ, ಉಸಿರಾಟದ ತೊಂದರಗೆ ಸಿಕ್ಕು ಇಲ್ಲಿ ಕರೆತಂದಿದ್ದರು. ಆ ವೇಳೆಗಾಗಲೇ ಮಗುವು ಜ್ನ್ಯಾನ ಕಳೆದುಕೊಂಡಿತ್ತೆಂದೂ, ನರ್ಸ್ ಹೋಗಿ ನೋಡಿದಾಗ ನೀಲಿ ಬಣ್ಣಕ್ಕೆ ತಿರುಗಿತ್ತೆಂದೂ, ಉಸಿರಾಟ ಇರಲಿಲ್ಲ, ಆದರೆ ಹೃದಯದ ಬಡಿತ ಇನ್ನೂ ಇತ್ತೆಂದೂ, ನರ್ಸ್ ತನ್ನ ಸಮಯಪ್ರಜ್ನೆಯಿಂದ (ಆಮ್ಲಜನಕ) ಆಕ್ಸಿಜೆನ್ ಕೊಟ್ಟಳೆಂದೂ, ಕೃತಕ ಉಸಿರಾಟದ ಪ್ರಕ್ರಿಯೆ ಶುರುಮಾಡಿದಳೆಂದೂ ಹಾಗಾಗಿ ಮಗುವು ಪೂರ್ಣಪ್ರಮಾಣದ ಹೃದಯಸ್ಥಂಭನದಿಂದ ಪಾರಾಯಿತೆಂದೂ ನನಗೆ ಪರಾಂಬರಿಸಿದರು. ನರ್ಸ್ ಗೆ ಸಲ್ಲಬೇಕಾದ ಅಭಿನಂದನೆಯನ್ನು ಸಲ್ಲಿಸಿ ಮುಂದಿನ ಶಶ್ರೂಶೆಗೆ ನಿರ್ದೇಶನ ಕೊಡತೊಡಗಿದೆ.

ಈ ರೀತಿಯ ಸಂದರ್ಭಗಳಲ್ಲಿ ನಿಗದಿತ ಸದಸ್ಯರ ತಂಡ ಒಂದೆಡೆ ಸೇರಿ ಸಾಮೂಹಿಕವಾಗಿ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಮಾಡುವುದು ವಾಡಿಕೆ. ಸಮಯ ಇದ್ದಲ್ಲಿ ಎಲ್ಲರು ತಮ್ಮನ್ನು ಪರಿಚಯಿಸಿಕೊಂಡು, ತಮ್ಮ ಪಾಲಿನ ಕೆಲಸ ಮೊದಲೇ ತಿಳಿದುಕೊಂಡು ರೋಗಿಯ ಆಗಮನದ ತಕ್ಷಣ ಆ ದಿಸೆಯಲ್ಲಿ ಕಾರ್ಯಪ್ರವೃತ್ತ ರಾಗುವುದು ಸಾಮಾನ್ಯ. ಶಿಶು ತಜ್ನರು, ಅನಸ್ಥೇಷಿಯ ತಜ್ಞರು, ನರ್ಸ್ಗಳು ತಂಡದಲ್ಲಿರುತ್ತಾರೆ. ನಮ್ಮ ನಮ್ಮ ಯೋಗ್ಯತಾನುಸಾರ ನಮ್ಮ ಕೆಲಸ. ಸಾಮಾನ್ಯವಾಗಿ ಅರಿವಳಿಕೆಶಾಸ್ತ್ರಜ್ಞರು ತಂಡದ ನೇತೃತ್ವ ವಹಿಸುವುದು ಅಲಿಖಿತ ಒಪ್ಪಂದ. ಯಾರೊಬ್ಬರ ಪ್ರತಿಷ್ಠೆಯೂ ಇಲ್ಲಿ ನಗಣ್ಯ. ಇವತ್ತು ಒಬ್ಬಬ್ಬರನ್ನು ಪರಿಚಯಿಸಿಕೊಳ್ಳಲು ಅವಕಾಶವಿರಲಿಲ್ಲ ಹಾಗಾಗಿ ನನ್ನ ಬರುವಿಗಾಗಿ ಎಲ್ಲರೂ ಕಾಯುತ್ತಿದ್ದುದರಿಂದ ನನ್ನ ನೇತೃತ್ವದಲ್ಲಿ ಕಾರ್ಯ ಮುಂದುವರಿಯಿತು.

ರೋಗಿಯನ್ನು ಒಮ್ಮೆ ಪರೀಕ್ಷಿಸಿ, ಪರಾಮರ್ಷಿಸಿ ಪಟ ಪಟನೆ ಯಾರು ಯಾವ ಯಾವ ಕೆಲಸಗಳನ್ನು ಮಾಡಬೇಕೆಂದು ಸದಸ್ಯರಿಗೆ ಮಾರ್ಗದರ್ಶನ ನೀಡಿ ಅವುಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಸಹಾಯಮಾಡುತ್ತಾ,ಮಗುವಿನ ಶಶ್ರೂಶೆ ಯನ್ನು ನಿರ್ದೇಶಿಸುತ್ತ,ಅದರ ಪರಿಣಾಮಗಳನ್ನು ಗಮನಿಸುತ್ತ , ಮಗುವಿನ ಪರಿಸ್ಥಿತಿಯಲ್ಲಾಗುತ್ತಿರುವ ಬೆಳವಣಿಗೆಗಳನ್ನು ವಿಶ್ಲೇಷಿಸುತ್ತ ನನ್ನ ಕಾರ್ಯನಿರ್ವಹಣೆ ನಡೆಸುತ್ತಿದ್ದೆ. ಸುಮಾರು ಎರಡು ಘಂಟೆಗಳ ಸತತ ಪರಿಶ್ರಮದ ಫಲವಾಗಿ ಮಗುವಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡಿತು. ತೀವ್ರ ಜೀವಾಪಾಯದಿಂದ ಪಾರಾಗಿದೆಯೆಂದು ನನ್ನ ಅನುಭವ ಹೇಳಿತು.
ಬ್ರಿಟನ್ನಿನ ಆಸ್ಪತ್ರೆಗಳಲ್ಲಿ ಹೊಸದಾಗಿ ಕೆಲಸ ಶುರುಮಾಡುವ ವೈದ್ಯರಿಗೆ ‘ಇಂಡಕ್ಷನ್ ಡೇ’ ಎಂದು ಒಂದು ದಿನ ಮೀಸಲಿಟ್ಟಿರುತ್ತಾರೆ. ಆ ದಿನ ಅಸ್ಪತ್ರೆಯನ್ನು ಭೌಗೋಳಿಕವಾಗಿ ಪರಿಚಯಿಸುವುದಲ್ಲದೆ, ಅವರವರ ಕಾರ್ಯ ವ್ಯಾಪ್ತಿಯನ್ನು, ಆಸ್ಪತ್ರೆಯ ಕಾರ್ಯ ವೈಖರಿಯನ್ನು ತಿಳಿಸುತ್ತಾರೆ. ಇಂತಹ ಒಂದು ಕಾರ್ಯಕ್ರಮದಲ್ಲಿ ಹತ್ತು ವರ್ಷಗಳ ಹಿಂದೆ ನಾನೂ ಭಾಗಿಯಾಗಿದ್ದೆ. ಆ ದಿನ ಅಲ್ಲಿನ ಮಹಾ ವೈದ್ಯ ನಿರ್ದೇಶಕರು ಹೇಳಿದ ಒಂದು ಕಿವಿಮಾತು ನನ್ನ ವ್ಯಕ್ತಿತ್ವದ ಮೇಲೆ ಬಹಳ ಪರಿಣಾಮ ಬೀರಿತು. ” ನೀವು ಎಲ್ಲೆ ಹೋಗಿ ಯಾವುದೇ ಕೆಲಸ ಮಾಡಿ, ಯಾರ ಜೊತೆಯಲ್ಲೇ ಇರಿ, ನಿಮ್ಮ ಧನಾತ್ಮಕ ಶಕ್ತಿಯನ್ನು ಕೊಂಡೊಯ್ದು ಸಂಚಯಿಸಿ. ನಿಮ್ಮಿಂದ ನಿಮ್ಮ ತಂಡದ ಎಲ್ಲರ ಸಾಧನೆಯ ಮಟ್ಟವನ್ನು ಹೊಸ ಎತ್ತರಕ್ಕೆ ಏರಿಸಿ. ಆಗ ನಿಮಗೆ ನಿಮ್ಮ ಕೆಲಸದ ದಣಿವು ಕಾಣಿಸದು”.( when you go to work, please take a positive attitude and energy with you. If you are happy people around you will be happy. Raise their energy with yours and therefroe performance. if you do so, you will not feel bored or tiered in your work) ಎಷ್ಟು ನಿಜ. ನಾನು ಕೆಲಸಕ್ಕೆ ಹೊರಡುವ ಮೊದಲು ಇದನ್ನು ಜ್ನಾಪಿಸಿಕೊಳ್ಳದೆ ಇಲ್ಲ!!

ಮಗುವಿನ ಪರಿಸ್ಥಿತಿಯ ಗಂಭೀರತೆ ಕಡಿಮೆಯಾದಂತೆ ವಾತಾವರಣವನ್ನು ಹಗುರಗೊಳಿಸುವ ತಿಳಿಹರಟೆ ಶುರುಮಾಡಿದೆ. ಅದೂ ಇದೂ ಮಧ್ಯದಲ್ಲಿ ಹರಟುತ್ತ ಅವರಿವರ ಕಷ್ಟ ಸುಖ ವಿಚಾರಿಸಿದೆ. ರಾತ್ರಿಯೆಲ್ಲ ದುಡಿದ ಕಿರಿಯ ವೈದ್ಯರಿಗೂ, ನಮ್ಮ ಸಹಾಯಕರಿಗೂ, ನರ್ಸ್ ಗಳಿಗೂ ವಿರಾಮದ ಅವಶ್ಯಕತೆ ಇದೆ ಎನ್ನಿಸಿ ಒಬ್ಬ ನರ್ಸ್ ಉಳಿದು ಮಿಕ್ಕವರು ಕಾಫಿಗಾಗಿ ಹೋಗಬಹುದೆಂದು ಅನಿಸಿತು. ತಾಯಿಯು ಹೊರಗೆ ಆತಂಕದಿಂದ ಕಾದಿರುವುದು ಅರಿವಿತ್ತು. ಸಾಮಾನ್ಯವಾಗಿ, ಮಕ್ಕಳ ಹಿರಿಯ ತಜ್ಞರು ಪೋಷಕರೊಂದಿಗೆ ವ್ಯವಹರಿಸುವುದು ವಾಡಿಕೆಯಾದ್ದರಿಂದ ಅವರಿಗಾಗಿ ಅರಸಿ ಕೇಳಿದೆ.  ”ಹ್ಹಾಂ, ನಾನು ಇಲ್ಲೆ ಇದ್ದೇನೆ. ನಿಮ್ಮ ಯೋಚನೆ ಸಮಂಜಸವಾಗಿದೆ. ಇವರೆಲ್ಲ ಕಾಫಿಗೆ ಹೋಗಲಿ ನಾನು ತಾಯಿಯೊಡನೆ ಮಾತಾಡುತ್ತೇನೆ” ಎಂಬುದಾಗಿ ಒಂದು ಹೆಣ್ಣು ಕಂಠ ಉಲಿಯಿತು. ಅತ್ತ ಕತ್ತು ಹೊರಳಿಸಿ ನೋಡಿದೆ. ಕಂಠದಷ್ಟೇ ಸುಂದರ ಭಾರತೀಯಳೆಂದು ಹೇಳಬಹುದಾದ ಮಕ್ಕಳ ತಜ್ಞೆ ನಿಂತಿದ್ದಳು. ತುಟಿಯ ಮೇಲೇ ತುಂಟ ಕಿರುನಗೆ- ಕೆನ್ನೆತುಂಬಾ ಕೆಂಡಸಂಪಿಗೆ. ನನಗಾದ ಆಶ್ಚರ್ಯ ಮುಖದ ಮೇಲೆ ತೋರಗೊಡದೆ ಆಕೆಯತ್ತ ಪ್ರಶ್ನಾರ್ಥಕ ದೃಷ್ಟಿ ಬೀರಲು, ”ಹಲೋ, ನಾನು ಕಿರಣ್ ಜೋಶಿ. ಪೀಡಿಯಾಟ್ರಿಕ್ಸ್ ಕಂನ್ಸಲ್ಟೆಂಟ್” ಎಂದು ಪರಿಚಯಿಸಿಕೊಂಡಳು. ಕೆಲಸದ ಆಯಾಸ ಪರಿಹಾರವಷ್ಟೆ ಅಗಲಿಲ್ಲ, ಹೊಸ ಹುಮ್ಮಸ್ಸೂ ಮೂಡಿ, ಆಯಾಚಿತವಾಗಿ ಕೈ ಚಾಚಿ ಹಸ್ತಲಾಘವ ಕೊಟ್ಟು ನನ್ನನೂ ಪರಿಚಯಿಸಿಕೊಂಡೆ.

ತಾನು ತಾಯಿಯೊಂದಿಗೆ ಮಾತನಾಡಿ ಬರುವುದಾಗಿ ಕಿರಣ ನರ್ಸ್ ಒಬ್ಬಳನ್ನು ಕರೆದುಕೊಂಡು ಹೋದಳು. ಉಳಿದವರು ಕಾಫಿಗೆ ಹೋದರು.ನನ್ನ ತಲೆ ಗಿರ್ರೆಂದು ತಿರುಗತೊಡಗಿತು.ನಾನು ಬಂದು ಮಗುವಿನ ಆರೋಗ್ಯ ಗಮನಿಸುವ ಗಡಿಬಿಡಿಯಲ್ಲಿ ಈಕೆಯನ್ನು ಗಮನಿಸಿರಲಿಲ್ಲ. ಎಂಥ ಆಕರ್ಷಕ ರೂಪ! ಅತಿ ಸುಂದರಿಯೆಂದೇನೂ ಅಲ್ಲ ಆದರೆ ಮತ್ತೊಮ್ಮೆ ನೋಡಬೇಕೆನ್ನುವಂಥದ್ದು. ಧ್ವನಿಯೂ ಸುಮಧುರ. ನನ್ನ ಇದುವರೆಗಿನ ಜೀವನದಲ್ಲಿ ಒಬ್ಬಳನ್ನು ಬಿಟ್ಟು ಕಿರಣ ಎನ್ನುವ ಹೆಸರಿನವರು ಅಂಥಾ ಛಾಪನ್ನೇನೂ ಉಳಿಸಿರಲಿಲ್ಲ – ಅದು ಮತ್ಯಾರೂ ಅಲ್ಲ ಕಿರಣ್ ಬೇಡಿ- ಬಿರು ಬೇಸಿಗೆಯ ಮದ್ಯಾಹ್ನದ ಸೂರ್ಯನ ಕಿರಣಗಳಂತೆ ಚುರ್ರೆನ್ನಿಸುವಂಥ ಕಿರಣ್ ಬೇಡಿ!!! ನಾನು ಚಂಡೀಗಢದ ಪ್ರತಿಷ್ಠಿತ ಅಸ್ಪತ್ರೆಯಲ್ಲಿ ಕಲಿಯುತ್ತಿದ್ದಾಗ ಆಕೆಯ ಸಂಪರ್ಕಕ್ಕೆ ಬಂದುದಿತ್ತು. ಹಾಗೆಂದು ನಾನೇನೂ ತಪ್ಪು ಮಾಡಿ ಆಕೆಯಿಂದ ಚುರುಕು ಮುಟ್ಟಿಸಿಕೊಂಡಿರಲಿಲ್ಲ. ಅವಳ ಹತ್ತಿರದ ಸಂಬಂಧಿಕರು ನಮ್ಮ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದು ಅವರನ್ನು ಕಾಣಲು ಅವಳಲ್ಲಿ ಬರುತ್ತಿದ್ದಳಷ್ಟೆ. ಈ ಕಿರಣ, ಮುಂಜಾನೆಯ ಸೂರ್ಯನ ಮುದ ನೀಡುವಂಥ ಅನುಭವ! ಬೆಳಗಿನ ಸಮಯ ಬೇರೆ. ಅವಳು ಬರುವುದನ್ನೇ ಕಾಯುತ್ತ ಮಗುವಿನ ಕಡೆಗೆ ದೃಷ್ಟಿ ಹಾಯಿಸುತ್ತ ಕಾಲ ಕಳೆದೆ. ಸ್ವಲ್ಪ ಸ್ವಲ್ಪ ಮಗುವು ಸುಧಾರಿಸುತ್ತಿತ್ತು.

ಸಹಜವಾಗಿಯೆ ಅವಳ ಬಗೆಗಿನ ನನ್ನ ಕುತೂಹಲ ಗರಿಗೆದರಿತ್ತು. ಹೇಗೆ ವಿಷಯ ಸಂಗ್ರಹಣೆ ಮಾಡಬೇಕೆಂದು ನನ್ನ ಮನಸ್ಸು ಪ್ರಶ್ನಾವಳಿಗಳ ತಾಲೀಮು ನಡೆಸುತ್ತಿತ್ತು. ಕಿರಣ ವಾಪಸ್ ಬಂದಳು. ತಾಯಿಗೆ ಎಲ್ಲ ವಿವರಿಸಿದ್ದಾಗಿಯೂ,ಮಗುವು ಸುಧಾರಿಸುವುದನ್ನು ತಿಳಿದು ಆಕೆ ಸಮಾಧಾನಗೊಂಡಿರುವುದಾಗಿಯೂ, ಬೇರೆ ಊರಿಗೆ ಮಗುವನ್ನು ಸಾಗಿಸುವ ಬಗೆಗೆ ಅಸಂತುಷ್ಟಳಾಗಿದ್ದಾಗಿಯೂ ಹೇಳಿದಳು.ನಾನು ಅದಕ್ಕೆ ಧನ್ಯವಾದ ತಿಳಿಸಿ ಆಂಬುಲನ್ಸ್ ಗೆ ನಾನು ಫೋನಾಯಿಸಲೋ ಅಥವ ನೀವೇ ಮಾಡುವಿರೋ ಎಂದೆ. ಎಲ್ಲಾ ನಿರ್ವಹಣೆ ನಿಮ್ಮದೇ ಆದ್ದರಿಂದ ನೀವೇ ಅವರೊಂದಿಗೆ ಮಾತನಾಡುವುದು ಉತ್ತಮ ಎಂದಳು. ಸರಿ ನೀವು ಮಗುವಿನ ಮೇಲೆ ನಿಗಾ ಇಡಿ ಎಂದು ಅವಳಿಗೆ ಮಗುವಿನ ಜವಾಬ್ದಾರಿ ಹಸ್ತಾಂತರಿಸಿ ನಾನು ಫೋನಾಯಿಸಲು ತೆರಳಿದೆ.

೧೦ ನಿಮಿಷಗಳ ನಂತರ ಎಲ್ಲ ಮುಗಿಸಿ ವಾಪಸ್ ಬಂದೆ. ನಮ್ಮ ಆಸ್ಪತ್ರೆಯಲ್ಲಿ ಮಕ್ಕಳ ತೀವ್ರ ನಿಗಾ ಘಟಕ ಇರದೆ ಇದ್ದುದರಿಂದ ಹತ್ತಿರದ ಆಸ್ಪತ್ರೆಗೆ ಮಗುವನ್ನು ವರ್ಗಾಯಿಸಬೇಕಿತ್ತು. ಆದಕ್ಕಾಗಿ ಆಂಬುಲನ್ಸ್ ಅವಶ್ಯಕತೆ ಇತ್ತು.
ಮಗುವಿನ ಪರಿಸ್ಥಿತಿ ಹಾಗೆ ಇತ್ತು. ಆಂಬುಲನ್ಸ್ ಬರಲು ಇನ್ನೂ ೨ ತಾಸು ಬೇಕಿರುವುದೆಂದೂ, ಅಲ್ಲಿಯ ವರೆಗೆ ಇಲ್ಲಿರುವುದು ಸೂಕ್ತವಲ್ಲವೆಂದೂ, ಮೇಲೆ ಆಪರೇಟಿಂಗ್ ಥಿಯೇಟರ್ ಆದರೆ ಅಲ್ಲಿ ವ್ಯವಸ್ಥೆ ಚೆನ್ನಾಗಿದ್ದು ಅಲ್ಲಿಗೆ ಮಗುವನ್ನು ಸಾಗಿಸಬೇಕೆಂದು ಕಿರಣಳಿಗೆ ಹೇಳಿದೆ. ಸರಿ. ಆದೂ ಒಳ್ಳೆ ಯೋಚನೆಯೆ ಎಂದು ಅನುಮೋದಿಸಿದಳು. ಕಾಫಿ ಕುಡಿದು ಬಂದ ನಂತರ ಮಾಡೋಣ ಎಂದಳು. ಸರಿ ಎಂದೆ.

ಎಲ್ಲಿಂದ ನನ್ನ ಸಂದರ್ಶನ ಶುರು ಮಾಡಲೆಂದು ನಾನು ಯೋಚಿಸುತ್ತಿರುವಾಗಲೇ ಆಕೆ, ಇತ್ತೀಚೆಗೆ ಈ ಅಸ್ಥಮಾ ರೋಗಿಗಳ ದಾಖಲಾತಿ ಹೆಚ್ಚಿದೆ ಎಂದೂ, ಇದು ಕಳೆದೆರೆಡು ದಿನಗಳಲ್ಲಿ ೧೦ ನೇ ರೋಗಿಯೆಂದೂ ಅದರೆ ಯಾರೂ ಇಷ್ಟೋಂದು ಗಂಭೀರ ಸ್ಥಿತಿಯಲ್ಲಿ ಬರಲಿಲ್ಲವೆಂದೂ ಹೇಳಿದಳು. ಮಾತಿಗೆ ವಸ್ತುಸಿಕ್ಕಂತಾಯಿತೆಂದು ನಾನು ಅದೂ ಇದೂ ಹರಟಿದೆ. ಹಾಗೇ ಅವಳ ಹಾವ ಭಾವಗಳನ್ನೂ ಗಮನಿಸುತ್ತಿದ್ದೆ. ಆಕರ್ಷಕ, ಆದರೆ ಸೌಮ್ಯ ಮುಖ. ಸುಂದರ ಕಣ್ಣುಗಳು ಹಾಗೂ ಪುಟ್ಟ ಬಾಯಿ. ಜಡೆ ಇತ್ತೆಂದು ಅನಿಸಿತು. ಮಾತನಾಡುವಾಗ ಕಂಡೂ ಕಾಣದಂತೆ ಕತ್ತು ಕೊಂಕಿಸುತ್ತಿದ್ದಳು ಅದು ಆಕೆಯ ಲಕ್ಷಣಕ್ಕೆಇನ್ನಷ್ಟು ಮೆರುಗು ನೀಡಿತ್ತು. ಮಾತಿನಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಯಾವ ಕೃತ್ರಿಮತೆಯೂ ನನಗೆ ಕಾಣಲಿಲ್ಲ. ಎಲ್ಲ ಸ್ವಾಭಾವಿಕವಾಗಿ ಬಂದಿರಬೇಕು. ಕರ್ಣ ಪಿಶಾಚಿಯನ್ನು ಶಪಿಸುತ್ತ ಮನೆಬಿಟ್ಟ ನನಗೆ ಈಗ ಅದನ್ನು ಅಭಿನಂದಿಸುವ ಮನಸ್ಸಾಗದೇ ಇರಲಿಲ್ಲ!! ಮ್ಮೀರ್ವರ ಮಧ್ಯದ ಮಂಜುಗಡ್ಡೆ ಸ್ವಲ್ಪ ಒಡೆದುದರ ಫಲವಾಗಿ ನಾನು ನನ್ನ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದ ಪ್ರಶ್ನಾವಳಿಗಳ ಗಂಟು ಬಿಚ್ಚಿದೆ. ‘ನಾನು ಈ ಸ್ಪತ್ರೆಯಲ್ಲಿ ೫ ವರ್ಷಗಳಿಂದ ಇದ್ದೇನೆ. ನಿಮ್ಮನ್ನು ಕಂಡ ಹಾಗಿಲ್ಲವಲ್ಲ’ ಎಂದೆ. ”ಹೌದು ನಾನು ಇಲ್ಲಿ ಆರು ತಿಂಗಳಿನಿಂದ ಇದ್ದೇನೆ ” ಎಂದಳು. ನನಗೆನೋ ಗಂಟು ಕಳೆದುಕೊಂಡಂತಾಯಿತು. ಛೆ, ಇಷ್ಟು ದಿನ ಸುಮ್ಮನೆ ದಂಡವಾಯಿತಲ್ಲ ಎಂದೆನ್ನಿಸದೆ ಇರಲಿಲ್ಲ. ಈಗಲೆ ಇವಳ ಪೂರ್ವಾಪರಗಳನ್ನು ಕೋಳಿಯಂತೆ ಕೆದಕುವುದು ಬೇಡವೆಂದು, ಕೆಲಸ ಹೇಗಿದೆ ಇಲ್ಲಿ , ಆಕೆಯ ಜಾಬ್ ಪ್ಲಾನ್ ಹೇಗೆ, ಮ್ಮಾಸ್ಪತ್ರೆಯ ಆರ್ಥಿಕ ಮುಗ್ಗಟ್ಟು, ಎಲ್ಲ ಬ್ರಿಟಿಷರೂ ಮಾಡುವಂತೆ ಹೊರಗಿನ ವಾತಾವರಣ, ಇನ್ನೂ ಮಳೆ ಬಿಡದಿರುವುದು ಹೀಗೆ ಮುಂತಾದ ನನ್ನ       ‘‘ ಕೆಲಸಕ್ಕ“ ಬಾರದ ಮಾತುಕತೆಯಾಡುತ್ತಿದ್ದೆ. ಮಗು ಪರಿಸ್ಥಿತಿ ಹಾಗೆ ಇತ್ತು. ಉಳಿದ ವಿಷಯಗಳನ್ನು ಕಾಫಿಗೆ ಹೋದಾಗ ಕೆದಕಿದರಾಯ್ತೆಂದು ಸುಮ್ಮ್ಮನಾದೆ. ನರ್ಸ್ ಅಲ್ಲೆಲ್ಲ ಒಪ್ಪಗೊಳಿಸುವುದರಲ್ಲಿ ಮಗ್ನಳಾಗಿದ್ದಳು.

ಕಾಫಿಗೆ ಹೋದ ತಂಡ ವಾಪಸ್ ಬಂತು. ಅವರೆಲ್ಲರಿಗೆ ಇಲ್ಲಿಯವರೆಗಿನ ಬೆಳವಣಿಗೆ ವಿವರಿಸಿ, ಅಗತ್ಯವಾಗಿ ಏನು ಮಾಡಬೇಕೆಂದು ಹೇಳಿ, ಥಿಯೇಟರ್ ಗೆ ಸಾಗಿಸುವ ಯೋಚನೆ ವಿವರಿಸಿ ಅದಕ್ಕಾಗಿ ಏನು ಸಿದ್ಧತೆ ಬೇಕೆಂದೂ ತಿಳಿಸಿ, ನಾನು ಹಾಗೂ ಕಿರಣ ಕಾಫಿಗೆ ಹೋಗುವುದಾಗಿಯೂ, ನಾದರೂ ಬೇಕಾದಲ್ಲಿ ಕರೆ ಮಾಡಬಹುದೆಂದೂ ತಿಳಿಸಿ ಕಿರಣಳನ್ನು ಆಹ್ವಾನಿಸಿದೆ. ತನಗೂ ಕಾಫಿಯ ಅವಷ್ಯಕತೆ ಇರುವುದಾಗಿ ಹೇಳಿ ಹೊರಟುಬಂದಳು.

ಅವಳೊಡನೆ ಕಾಫಿ ಲೌಂಜಿಗೆ ಹೊರಟ ನನಗೆ ಮುಂಜಾನೆಯ ಸೂರ್ಯನ ಕಿರಣಗಳಡಿಯಲ್ಲಿ ವಾಯುವಿಹಾರ ಮಾಡಿದಷ್ಟೇ ಖುಷಿಯಾಗುತ್ತಿತ್ತು!
ಆ ಜಾಗ ಆಕೆಗೆ ಹೊಸದಾದ್ದರಿಂದ, ನಾನೆ ಕಾಫಿ ಬೆರೆಸಿ ಕೊಟ್ಟು ಆಕೆಯ ಎದುರಿನ ಸೊಫ಼ಾದಲ್ಲಿ ಕುಳಿತು ಒಂದೆರೆಡು ಗುಟುಕು ಕುಡಿದು ನಂತರ ಹಿಂದೊರಗಿ ಕಣ್ಣುಮುಚ್ಚಿ ದೊಡ್ಡ ನಿಟ್ಟುಸಿರು ಬಿಟ್ಟೆ.

ಕಾಫಿಯನ್ನೂ ಎಮೆರ್ಜೆನ್ಸಿ ನಿಭಾಯಿಸಿದಷ್ಟೆ ಚೆನ್ನಾಗಿ ಮಾಡುತ್ತೀರೆಂದಳು! ನಾನು ಕಣ್ಣುಬಿಟ್ಟು ಅವಳಕಡೆಗೆ ನೋಡಿದೆ. ಕಾಫಿ ಹೀರುತ್ತಿದ್ದಳು. ಯಾವ ಕೃತ್ರಿಮತೆಯು ನನಗೆ ಕಾಣಲಿಲ್ಲ.
‘ನಿಮ್ಮ ಕಾರ್ಯ ವೈಖರಿ ತುಂಬಾ ಚೆನ್ನಾಗಿತ್ತು, ಐ ವಾಸ್ ವೆರಿ ಇಂಪ್ರೆಸ್ಸ್ಡ್’ ಎಂದಳು. ಥ್ಯಂಕ್ಸ್ , ಆದರೆ ಏಕೆ ಎಂದೆ. ‘ಯಾವುದೇ ಉದ್ವೇಗಕ್ಕೊಳಗಾಗದೆ, ಎಲ್ಲರನ್ನು ಒಳಗೊಂಡು ,ಯಾವ ಡ್ರಾಮಾ ಮಾಡದೆ ನಿಭಾಯಿಸಿದಿರಿ’ ಎಂದಳು. ಹೊಗಳಿಕೆಗೆ, ಅದರಲ್ಲು ಒಬ್ಬಳು ಸುಂದರಿ ಹೇಳಿದರೆ! ನಾನು ಉಬ್ಬಿದೆ.
ನೀವು ಎಲ್ಲಿ ತರಬೇತಿ ಪಡೆದಿದ್ದು ಎಂದದ್ದಕ್ಕೆ, ತಾನು ಇದೇ ಪ್ರ್ಯಾಂತ್ಯದಲ್ಲಿ ತರಬೇತುಗೊಂಡವಳೆಂದೂ, ಕೆಲಸಕ್ಕಾಗಿ ಬಹಳ ಕಷ್ಟ ಪಟ್ಟಳೆಂದೂ, ಕಡೆಗೆ ಇಲ್ಲಿ ಸೇರಿದ್ದೆಂದು ಹೇಳಿದಳು. ‘ನೀವು ಭಾರತದಿಂದ ಬಂದವರಿರಬೇಕು’ ಎಂದೆ. ತಾನು ಕರ್ನಾಟಕದವಳೆಂದು, ನನ್ನ ಕಾಲೇಜಿನಲ್ಲೆ ಕಲಿತಳೆಂದೂ, ಎಮ್ ಬಿ ಬಿ ಎಸ್ ಮಾಡುವಾಗ ನನ್ನನ್ನು ನೋಡಿದ್ದಳೆಂದೂ, ನನಗಿಂತ ೩ ವರ್ಷ ಚಿಕ್ಕವಳೆಂದೂ , ಈ ಆಸ್ಪತ್ರೆಯಲ್ಲಿ ನನ್ನನ್ನು ಈ ಮೊದಲೆ ತಾನು ಕಂಡಿದ್ದಾಗಿಯೂ, ಆದರೆ ಮಾತನಾಡಿಸಲು ಸಾಧ್ಯವಾಗದೆ ಸುಮ್ಮನಾಗಿದ್ದಳೆಂದೂ ಹೇಳಿದಳು. ಕ್ಷಣ ಕ್ಷಣಕ್ಕೂ ನನ್ನನು ಒಂದಿಲ್ಲೊಂದು ಬಲೆಯಲ್ಲಿ ಬೀಳಿಸುತ್ತಲೇ ಇದ್ದಳು!

ನಾನು ಆಶ್ಚರ್ಯ ತೋರಿಸುತ್ತ ,’ನಾನೇನೂ ಕಾಲೇಜಿನಲ್ಲಿ ಅಂಥ ದೊಡ್ಡ ಹೀರೋ ಆಗಿರಲಿಲ್ಲ ಬಿಡಿ’ ಎಂದೆ. ಆದಕ್ಕೆ, ‘ಇಲ್ಲ,ನೀವು ಒಮ್ಮೆ ‘ ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ‘ ಹಾಡಿದ್ದಿರಲ್ಲ, ಆಗ ನಾನೂ ಇದ್ದೆ ಎಂದಳಲ್ಲದೆ, ಆ ನಂತರವೂ ಹಲವಾರು ಬಾರಿ ಕಾಲೇಜಿನಲ್ಲಿ ನನ್ನನ್ನು ನೋಡಿದ್ದಾಗಿ ಹೇಳಿದಳು. ‘ಹಾಗಾದರೆ ನಿಮಗೆಂದೇ ಹಾಡಿದ್ದೆನೆಂದು ಕಾಣುತ್ತದೆ ಬಿಡಿ’ ಎಂದು ಚಟಾಕಿ ಹಾರಿಸಿದೆ. ಸುಂದರವಾಗಿ ನಕ್ಕಳು.

ತಮ್ಮ ತಂದೆ ತಾಯಿ ಬೆಂಗಲೂರಿನಲ್ಲೆ ಇರುವುದಾಗಿಯು ತಾನು ಇಲ್ಲಿಗೆ ೨೦ ಮೈಲಿ ದೂರದ ಊರಿನಿಂದ ಓಡಾಡುತ್ತಿರುವುದಾಗಿಯೂ, ಆನ್ ಕಾಲ್ ಇದ್ದಾಗ ಇಲ್ಲೆ ಅಸ್ಪತ್ರೆಯ ಹಾಸ್ಟೆಲ್ ನಲ್ಲಿ ತಂಗುವುದಾಗಿಯು ಹೇಳಿದಳು. ಸರಿ ನನಗೆ ಮದುವೆಯಾಗಿ  ಮಕ್ಕಳಿವೆಯೆಂದೂ, ಮನೆಯಿಲ್ಲೆ ೨ ಮೈಲಿ ದೂರದಲ್ಲಿದೆಯೆಂದೂ ಹೇಳಿಕೊಂಡೆ.ಉದ್ದೇಶ ನಿಮ್ಮ ಕಥೆ ಹೇಗೆ ಎಂಬುದನ್ನು ಕೆದಕುವುದೇ ಅಗಿತ್ತು. ತಾನು ಇನ್ನೂ ಒಂಟಿ ಎಂದೂ, ಮದುವೆ ಆಗಿಲ್ಲವೆಂದೂ, ಮನೆಯಲ್ಲಿ ಸಧ್ಯಕ್ಕೆ ತಾನೊಬ್ಬಳೆ ಇರುವುದೆಂದೂ,ಆಗಾಗ್ಗೆ, ಅಪ್ಪ ಅಮ್ಮ ಬಂದು ಹೋಗಿ ಮಾಡುವರೆಂದೂ ಹೇಳಿದಳಾದರೂ, ಎಲ್ಲೊ ಒಂದು ಖೇದದ ಎಳೆ ಇದೆಯೆಂದು ಅನ್ನಿಸಿತು. ಮೊದಲ ದಿನವೇ ಕೆದಕಿ ಮುಜುಗರಗೊಳಿಸುವುದು ಬೇಡವೆಂದು ಬೇರೆಡೆಗೆ ಮಾತು ಹೊರಳಿಸಿದೆ. ನ್ನೊಂದು ಕಪ್ಪು ಕಾಫಿ ತನಗೂ ನನಗೂ ಈ ಸಾರಿ ಅವಳೇ ಬೆರೆಸಿ ಕೊಟ್ಟಳು. ಕುಡಿದು ಮತ್ತೆ ತುರ್ತು ವಿಭಾಗಕ್ಕೆ ಬಂದೆವು. ಎಲ್ಲ ತಯಾರಾಗಿತ್ತು. ಮಗುವನ್ನು ಮೇಲಿನ ಮಜಲಿನ ಥಿಯೇಟರ್ಸ್ ಗೆ ಒಯ್ದು ಅಲ್ಲಿ ನಿಗಾ ವಹಿಸಲು ವ್ಯವಸ್ಥೆ ಮಾಡಿದೆವು. ನನ್ನ ಕೋಟು ಹಾಗೂ ಅವಳದ್ದನ್ನು ಅಲ್ಲಿದ್ದ ಒಂದೇ ಹ್ಯಂಗರಿಗೆ ಕಿರಣಳೆ ನೇತು ಹಾಕಿದಳು.ಮತ್ತೊಮ್ಮೆ ಎಲ್ಲ ವ್ಯವಸ್ಥೆಯನ್ನು ಪರಿಶೀಲಿಸಿದೆವು. ಮಗುವಿನ ಪರಿಸ್ಥಿತಿ ಸ್ಥಿಮಿತದಲ್ಲಿತ್ತು. ಯಾವುದೇ ಏರು ಪೇರುಗಳಿಲ್ಲದೆ ಸಮಾಧಾನಕರವಾಗಿತ್ತು.ಇನ್ನೇನಿದ್ದರೂ ಆಂಬುಲನ್ಸ್ ಬರುವ ವರೆಗೆ ಕಾಯುವುದಷ್ಟೇ ನಮ್ಮ ಕೆಲಸವಾಗಿತ್ತು. ಆದನ್ನು ಯಾರಾದರೂ ಒಬ್ಬರು ಮಾಡಬಹುದಾಗಿದ್ದರಿಂದ ನಾನು ಇಲ್ಲಿ ಇರುತ್ತೇನೆಂದೂ ನಿಮ್ಮ ಕೆಲಸ ಬೇರೇನಾದರೂ ಇದ್ದರೆ ಮುಗಿಸಬಹುದೆಂದೂ ಕಿರಣಳಿಗೆ ಹೇಳಿದೆ. ತಾನು ವಾರ್ಡ್ರೌಂಡ್ ಮುಗಿಸಿ ಬರುವುದಾಗಿ ಹೇಳಿ ಹೋದಳು. ರಾತ್ರಿ ಪಾಳಿಯ ಡಾಕ್ಟರ್ ಗಳು ಹೋಗಿ ಬೆಳಗಿನ ಪಾಳಿಯವರು ಬಂದಿದ್ದರು. ಅವರಿಗೆ ತ್ಂತಮ್ಮ ಕೆಲಸ ನೋಡಲು ಹೇಳಿ ಮಗುವಿನ ಬಳಿಯಲ್ಲಿ ಕುಳಿತೆ.

ನರ್ಸ್, ಹನುಮಂತನ ಬಾಲದಂಥ ಉದ್ದನೆಯ ಪಟ್ಟಿಯನ್ನು ಹಿಡಿದು ಬಂದಳು. ನಿನ್ನೆಗಿಂತಲೂ ಹೆಚ್ಚು ರೋಗಿಗಳು ಶಸ್ತ್ರಚಿಕಿತ್ಸೆಗಾಗಿ ಕಾದಿದ್ದರು. ತಂತಮ್ಮ ಕೇಸುಗಳನ್ನು ಮೊದಲು ಮಾಡಬೇಕೆಂದು ಅವಳ ಮೇಲೆ ಒತ್ತಡ ಹೇರುತ್ತಿದ್ದರೆಂದು ಕಾಣುತ್ತದೆ. ಆಕೆಗೆ ಸಹಜವಾಗಿಯೆ ದುಗುಡವಾಗಿತ್ತು. ಒಮ್ಮೆ ನಾನು ಬಿಡುವಾದ ನಂತರದಲ್ಲಿ ಸಮಾನಾಂತರವಾಗಿ ಇನ್ನೊಂದು ಥಿಯೇಟರ್ ನಡೆಸೋಣವೆಂದು ಹೇಳಿ, ಸರ್ಜನ್ ಗಳೊಂದಿಗೆ ಸಮಾಲೋಚಿಸಿ ಆದ್ಯತೆಯ ಪಟ್ಟಿ ಮಾಡಿ ಆಕೆಗೆ ಕೊಟ್ಟು ಯಾರಾದರೂ ಗಲಾಟೆ ಮಾಡಿದರೆ ನನ್ನ ಬಳಿ ಕಳಿಸಬೇಕೆಂದು ಧೈರ್ಯ ಕೊಟ್ಟು ಕಳಿಸಿದೆ. ಕಡೆಗೂ ಆಂಬುಲನ್ಸ್ ಬಂದು ಮಗುವನ್ನು ಅವರ ವಶಕ್ಕೆ ಒಪ್ಪಿಸಿ ನಾನು ಹೊರಬಂದೆ.

ನರ್ಸ್ ಬಳಿಹೋಗಿ ನನಗೆ ಅರ್ಧಘಂಟೆ ಸಮಯ ಬೇಕೆಂದೂ, ಇಲ್ಲೆ ಸ್ನಾನ ಮುಗಿಸಿ ಬರುವುದಾಗಿ ಹೇಳಿ ನಡೆದೆ.ನನ್ನ ಹಾಗೂ ಕಿರಣಳ ಕೋಟು ಅಲ್ಲೇ ಇದ್ದವು. ನಾನು ವಾಪಸು ಬರುವಷ್ಟರಲ್ಲಿ ಕಿರಣ ತನ್ನ ಕೋಟು ತೆಗೆದುಕೊಂಡು ನನ್ನದನ್ನು ನೀಟಾಗಿ ಹ್ಯಾಂಗರಿಗೇರಿಸಿ ಹೋಗಿದ್ದಳು. ನನ್ನ ಪೆನ್ ತೆಗೆಯಲು ಜೇಬಿಗೆ ಕೈ ಹಾಕಿದೆ. ಅರೆ, ಕರ್ಚೀಫ಼ು. ನಾನೆಂದೂ ಕರವಸ್ತ್ರ ಇಟ್ಟವನಲ್ಲ. ಇದು ಇಲ್ಲಿಗೆ ಹೇಗೆ ಬಂತು. ಕಿರಣಳದ್ದೇ ಇರಬೇಕು. ನನ್ನ ಜೇಬಿನಲ್ಲಿ ಯಾಕೆ? ಹೇಗೆ? ಉದ್ದೇಶಪೂರ್ವಕವೋ ಅಥವ ತಿಳಿಯದೆ ಬಿದ್ದಿದೆಯೋ ತಿಳಿಯದೆ,ಸಂತೋಷ, ಆಶ್ಚರ್ಯ, ಸೋಜಿಗ ಎಲ್ಲ ರೀತಿಯ ಭಾವನೆಗಳು ಬಂದು ಹೋದವು. ಆಮೇಲೆ ಕರೆ ಮಾಡಿ ಹಿಂತಿರುಗಿಸಿದರಾಯಿತು, ಆ ನೆಪದಲ್ಲಿ ಅವಳನ್ನು ಮತ್ತೆ ಭೇಟಿಯಾಗಬಹುದೆಂದು ಎಣಿಸಿದೆ. ಈ ಮದ್ಧ್ಯೆ ಅರೆ, ಒಂಟಿ ಹುಡುಗಿ, ಕನ್ನಡದವಳು, ಮನೆಗೆ ಊಟಕ್ಕಾದರೂ ಕರೆಯಬಹುದಿತ್ತು; ನನಗೆ ಹೊಳೆಯಲೇ ಇಲ್ಲ. ಮೊಬೈಲ್ ನಂಬರ್ ಕೇಳೊಣವೆಂದು ಅನ್ನಿಸಿತ್ತು. ಒಂಟಿ ಹುಡುಗಿ, ಮೊದಲ ಪರಿಚಯ, ಏನೆಂದುಕೊಂಡಾಳೋ ಎಂದು ಸುಮ್ಮನಾಗಿದ್ದೆ. ಈಗ ಹೊರಟುಹೋಗಿದ್ದಳು. ಆಮೇಲೆ ನೊಡಿದರಾಯ್ತು ಎಂದು ಉಳಿದ ಕೆಲಸದ ಕಡೆ ಗಮನ ಹರಿಸಿದೆ. ಕರ್ಚೀಫ಼ು ನನ್ನ ಎದೆಯ ಮುಂದಿನ ಜೇಬಿನಲ್ಲಿ ಭದ್ರವಾಗಿತ್ತು.

ಅಂದು ಕೂಡಾ ಪೂರ್ತಿ ದಿನ , ಮಧ್ಯ ರಾತ್ರಿ ವರೆಗೂ ಕೆಲಸ ಮುಗಿಸಿ ಮನೆಗೆ ಬಂದೆ. ಮರುದಿನ ರಜಾ. ಮಂಗಳವಾರ ನನಗೆ ಬರೀ ಆಫೀಸ್ ಕೆಲಸ ಇತ್ತು. ಒಂದಿಬ್ಬರು ವಿದ್ಯಾರ್ಥಿಗಳನ್ನು ಭೇಟಿಯಾಗುವುದಿತ್ತು. ಹೆಚ್ಚಿನ ಕೆಲಸ ಇರದ ಕಾರಣ ನಾನು ಕಿರಣಳನ್ನು ಕಾಣಲು ಮಕ್ಕಳ ವಿಭಾಗಕ್ಕೆ ಹೋದೆ. ಅಲ್ಲಿ ಅವಳ ಕಚೇರಿ ಕೋಣೆ ಯಾವುದೆಂದು ವಿಚಾರಿಸಲು, ಆ ವಾರ್ಡ್ ನ ಮೇಲ್ವಿಚಾರಕಿ ಬಂದು ಕಿರಣಳು ಇಲ್ಲಿ ಆರು ತಿಂಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದಳೆಂದೂ, ಆಕೆಯ ಸೇವಾವಧಿ ನೆನ್ನೆಗೆ ತೀರಿತೆಂದೂ, ವಾಪಸ್ ಹೋಗಿರಬಹುದೆಂದೂ ಹೇಳಿ ’ ಸಾರಿ ’ ಎಂದಳು. ಆಕೆಯ ಸ್ಸಾರಿ ಗೆ ನನ್ನ ಒಂದು ನಿಟ್ಟುಸಿರೂ ಸೇರಿ ಭಾರವಾಗಿ ಹೊರಬಂತು., ನೀನಲ್ಲಮ್ಮ ಸ್ಸಾರಿ, ನಾನು ಸ್ಸಾರಿ ಎಂಬುದಾಗಿ ಹೇಳಿ ಮನಸಿನಲ್ಲಿ ಕಸಿವಿಸಿ ಅನುಭವಿಸಿ, ಭಾರವಾದ ಹೆಜ್ಜೆ ಇಡುತ್ತ ವಾಪಸ್ ನಡೆದೆ. ಒಂದು ರೀತಿಯ ಶೂನ್ಯ ನನ್ನನ್ನು ಆವರಿಸಿದಂತಿತ್ತು. ಏನೋ ಕಳೆದುಕೊಂಡ ಭಾವ. ಆಕೆಯ ಸ್ನೇಹ ಇರಬಹುದು, ಮುಗುಳ್ನಗೆಯ ಮುಖವಿರಬಹುದು, ಮನಮೋಹಕ ಹಾವ,ಭಾವಗಳಿರಬಹುದು, ಇಂಪು ದನಿ ಇರಬಹುದು. ಸ್ಪಷ್ಟವಾಗಿ ಹೇಳಲಾರೆ. ಆಕೆ ನಾನು ಕೇಳಿದಷ್ಟಕ್ಕೆ ಉತ್ತರ ಕೊಟ್ಟಿದ್ದಳು. ಸುಳ್ಳೇನೂ ಹೇಳಿರಲಿಲ್ಲ, ವಿಷಯ ಉದ್ದೆಶಿತವಾಗಿ ಮರೆಮಾಚೂ ಇರಲಿಲ್ಲ. ಈಗ ಹೋಗಿಬಿಟ್ಟಿದ್ದಳು.

ನನ್ನ ಕಚೇರಿ ಕಡೆಗೆ ಹೆಜ್ಜೆ ಹಾಕತೊಡಗಿದೆ. ಚರ ದೂರವಾಣಿಯೆಂಬ ಕರ್ಣಪಿಶಾಚಿ ಮತ್ತೆ ಹಾಡತೊಡಗಿತು.
ಮೇರೇ ನಸೀಬು ಮೆ ತೂ ಹೈ ಕಿ ಎ ನಹಿ
ತೇರೇ ನಸೀಬು ಮೆ ಮೈ ಹೂ ಕಿ ಎ ನಹೀ!!
ಒಂದಲ್ಲ ಎರೆಡೆರೆಡು ಬಾರಿ ಹಾಡಿ ಸುಮ್ಮನಾಯಿತು. ಅದರ ಮೂತಿ ತಿವಿಯುವ ಗೊಡವೆಗೆ ನಾ ಹೋಗಲಿಲ್ಲ.