ಹೀಗೂ ಒಬ್ಬ ರಾಜಕುಮಾರ- ಡಾ.ಜಿ.ಎಸ್.ಶಿವಪ್ರಸಾದ್ ಅವರ ರಚನೆ

ಮನಸೆಂಬ ಮಾಯಾವಿಗೆ ಕೊಟ್ಟ ಮಾತು ತಪ್ಪಲಾಗದ ಅನಿವಾರ್ಯತೆಯಿಂದಲೂ, ಬದುಕುವ ಛಲದಿಂದಲೂ,ಕಛೇರಿಗೆ ಕಾಲನ್ನೋ ಕಾರನ್ನೋ ಎಳೆದುಕೊಂಡು ಹೋಗಿ, ದಿನವೆಲ್ಲಾ ದುಡಿದು ಚಿಂತೆ ಆತಂಕ,ಆಯಾಸಗಳು ಮೇಳೈಸಿರುವ ಬೇಸರವೆಂಬ ಬೇತಾಳವನ್ನು ಬೆನ್ನಿಗೇರಿಸಿಕೊಂಡು ಮರಳಿ ಮನೆಗೆ ಬಂದಿರುವ ಆಧುನಿಕ ಯುಗದ ವಿಕ್ರಮಾದಿತ್ಯರಾದ ನಿಮ್ಮೆಲ್ಲರಿಗೆ ನಿಮ್ಮ ಬೇಸರ ಕಳೆಯುವಂಥ ಕವಿತೆ ಹೇಳುತ್ತೇನೆ ಕೇಳಿ.
ಜಿ.ಎಸ್.ಶಿವಪ್ರಸಾದರು ಬರೆದ ಈ ಕವಿತೆಯನ್ನು ಓದುತ್ತಾ ಸಾಗಿದರೆ , ಭಾಷೆಯ ಸೌಂದರ್ಯದಿಂದಲೂ, ವಿಷಯ ಲಾಲಿತ್ಯದಿಂದಲೂ ಇದ್ದೂ ಇರದಂತೆ ಸುಪ್ತವಾಗಿರುವ ವಿಡಂಬನೆಯಿಂದಲೂ ಖಂಡಿತವಾಗಿಯೂ ನಿಮ್ಮ ಆಯಾಸ ಪರಿಹಾರವಾಗುತ್ತದೆ. ಪದ್ಯವನ್ನು ಓದಿ ಮುಗಿಸಿದಾಗ ಅದು ಯಾರನ್ನು ಕುರಿತು ಎಂಬ ರಹಸ್ಯ ನಿಮಗೆ ತಾನೇ ತಾನಾಗಿ ಹೊಳೆದಿರುತ್ತದೆ. ಇದನ್ನು ಓದಿ, ಉತ್ತರದ ಜೊತೆಗೆ ವಿಮರ್ಶೆಯನ್ನು ನಮ್ಮ ಜಾಲಜಗುಲಿಯಲ್ಲಿ ಬಿತ್ತರಿಸದೇ ಇದ್ದ ಪಕ್ಷದಲ್ಲಿ, ಜಡತ್ವವನ್ನು ತೊರೆದು ಬರೆಯದೇ ಹೋದಲ್ಲಿ ನಿಮ್ಮಲ್ಲಿ ಅಡಗಿ ಕುಳಿತಿರುವ  ತಾಮಸ (ಆಲಸಿ ಪ್ರವೃತ್ತಿ) ಗುಣ ನುಚ್ಚುನೂರಾಗಿ ಸಿಡಿದು ಹೋದೀತು ……………. ಎಂದ ಅನಿವಾಸಿ ಕವಿತೆಯನ್ನು ತಮಗೆಲ್ಲರಿಗೂ ಪ್ರಸ್ತುತಪಡಿಸತೊಡಗಿತು……….

ಹೀಗೂ ಒಬ್ಬ ರಾಜಕುಮಾರ 

ಚಾಣಾಕ್ಷ, ಸುಂದರಾಂಗ, ಸದ್ಗುಣ ಸಂಪನ್ನ

ಪರಿಸರ ಪ್ರೇಮಿ

ಬಹು ಜನಪ್ರಿಯ ರಾಜಕುಮಾರ

 

ವಿಜೃಂಭಣೆಯ ದಶಕದ ಮದುವೆ

ಬೆಡಗಿನ ಹೆಂಡತಿಯ ಪ್ರೀತಿಸಲಾರದೆ

ಓರ್ವಪ್ರೇಮಿಗೆ ಕಾದು

ಪ್ರೇಮಲೋಕದಲ್ಲಿ ಕೈಗೊಂಡ ವನವಾಸ!

 

ಸ್ವರ್ಗಸ್ಥ ಹೆಂಡತಿಯಾದಳು

ಸಾಮಾನ್ಯರ ಕನಸಿನ ರಾಣಿ

ಮೊಮ್ಮಗ ಹುಟ್ಟಿದ್ದರೂ ತಾನು

ಇನ್ನು ರಾಜಕುಮಾರ!

 

ದೊರೆಯ ಪಟ್ಟಕ್ಕೆ

ಯಾವ ಯುದ್ಧವನ್ನು ಹೊಡಬೇಕಿಲ್ಲ

ಪಿತೂರಿ ಕೊಲೆಗಳ ಅಗತ್ಯವಿಲ್ಲ

ಯಾವ ನಾಡನ್ನು ಜಯಿಸಬೇಕಿಲ್ಲ

 

ಜಪಿಸಬೇಕು ಸಹನೆ ನಿರೀಕ್ಷೆಯ ಮಂತ್ರಗಳು

ಎಂಥ ಅನಿವಾರ್ಯ ರಾಜ ಸೂತ್ರಗಳು

ಗೆಲುವಿನಲ್ಲೂ ಇದೆಂತಹ ಸೋಲು

ದೊರೆಯಾಗುವ ಕನಸು ಮಾತ್ರ ತನ್ನ ಪಾಲು!

Dr.G.S.Shivaprasad.

ಸುಹಾಸ ಪಿ ಕರ್ವೆ ಅವರ ಮೂರು ಕವನಗಳು- ತಾಯಿ, ಮನುಜ & ನಿಸರ್ಗ- ಮದುಮಗಳು.

ನನ್ನ ಬಗ್ಗೆ ಒಂದಿಷ್ಟು….

ನಾನು ಸುಹಾಸ್ ಪುರುಷೋತ್ತಮ ಕರ್ವೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶವಾದ ಕಾರವಾರದ ಸದಾಶಿವಗಡ ಎಂಬ ಗ್ರಾಮದವನು.

Electronics & Communication ನಲ್ಲಿ ಇಂಜಿನಿಯರಿಂಗ್ ಪದವೀಧರನಾದ ಬಳಿಕ ‘ಟೆಕ್ ಮಹೀಂದ್ರಾ’ ದಲ್ಲಿ ‘Business Analyst’ ಆಗಿ ಉದ್ಯೋಗ. ವಾರಿಂಗ್ಟನ್ ನಲ್ಲಿ ನನ್ನ ಪತ್ನಿ ‘ಪ್ರತಿಮಾ’ ಹಾಗೂ ಮಗ ‘ಈಶಾನ’  ಜೊತೆಗೆ ವಾಸವಾಗಿರುವ ನಾನು; ಕವಿತೆ, ಹಾಡು ಹಾಗೂ ನಾಟಕದ ಹವ್ಯಾಸವನ್ನು ಬೆಳೆಸಿ ಬಂದವನು. 

++++++++++++++++++++++++++++++++++++++++++++++++++++++++++++++++++++++++++++++++

 || ತಾಯಿ ||

ನಾನು ತಾಯಿಯಾದೆ ಆನಂದದಲ್ಲಿ ತೇಲಾಡಿದೆ

ಕೂಸಿನ ಪ್ರತಿ ಕ್ಷಣದಲ್ಲೂ ನಾನು ಒಡನಾಡಿಯದೆ  || ಧ್ರ ||

 

ಮೊದಲ ಹೆಜ್ಜೆಯ ಮೊದಲ ದನಿಯ

ಶಾಲೆಗೆ ಹೊರಟಾಗ ನಮ್ಮಿಬ್ಬರ ಕಣ್ಣೀರ ಹನಿಯ

ಮರೆಯಲಿ ಹೇಗೆ? ಮರೆಯಲಾಗುವುದುಂಟೆ?

ಮೀಸೆ ಚಿಗುರಿದರೂ ಅದರ ಆರೈಕೆ ಕಡಿಮೆಯಾಗುವುದುಂಟೆ? || ೧ ||

 

ಸಪ್ತಸಮುದ್ರದಾಚೆ ಇಂದು ನನ್ನ ಕೂಸಿನ ವಾಸ

‘ತಾಯಿ’ ಎಂದು ಹತ್ತಿರ ಹೋದರೂ ಕೇವಲ ಕೆಲವೇ ತಿಂಗಳ ಸಹವಾಸ

ಜೊತೆಗಿರುವುದಕ್ಕೂ ಕೂಡ ಈಗ ಒಂದು ‘ಮಿತಿ’

ಕೂಸೇ.. ಬಾ ನೀನು ಮರಳಿ ನಾನಾಗಲಾರೆ ನಿನ್ನ ‘ಅತಿಥಿ’ || ೨ ||

 

ಆಧಾರವಾಗಿದ್ದೆ ಪುಟ್ಟ ಕಾಲ್ಗಳ ಓಟದ

ನೀ ‘ಒಲ್ಲೆ’ ಎಂದರೂ ಕೈತುತ್ತು ಊಟದ

ಬೇಕೆನಿಸುತ್ತಿದೆ ಮುದಿ ವಯಸ್ಸಿನಲ್ಲಿ ನಿನ್ನ ಆಸರೆ

ಸ್ವಾರ್ಥಿಯಲ್ಲ, ಮುಗ್ಧ ಮನಸ್ಸಿನ ಇದೊಂದು ಸಣ್ಣ ಅನಿಸಿಕೆ || ೩ ||

————————————————********************—————————–

|| ಮನುಜ ||

 

courtesy: innerself.com
ನಿನ್ನ ನೀನು ಮರೆತರೇನು ಸುಖವಿದೆ

 

ಹುಚ್ಚರ ಸಂತೆಯಲ್ಲಿ

ಹೆಚ್ಚೆಚ್ಚು ಬೇಕೆಂದು

‘ವಿಷಯಾ’ಸಕ್ತನಾಗಬೇಡೋ ಮನುಜ ಆಗಬೇಡ || ೧ ||

ಇದ್ದಷ್ಟರಲ್ಲೇ ಸಮಾಧಾನಿಯಾಗು

‘ಛಲ’ವಿದ್ದರೆ ದುಡಿದು ಸಂಪಾದಿಸು

‘ಮೋಸ’ಮಾಡಿ ಗಳಿಸಬೇಡೋ ಮನುಜ ಗಳಿಸಬೇಡ || ೨ ||

ಏಕೆ ದಿನವೂ ದೇವಾಲಯಕ್ಕೆ ಹೋಗಬೇಕು

ಕೂತಾಗ ನಿಂತಾಗ ದೇವರ ಧ್ಯಾನ ಸಾಕು

ದೇವರ ನೆನೆಯದೆ ‘ಫಲ’ ಬಯಸಬೇಡೋ ಮನುಜ ಬಯಸಬೇಡ || ೩ ||

ತಾನೇ ದೊಡ್ಡವನು ಎಂದು ಹೇಳಿಕೊಳ್ಳಬೇಡ

ಹಿರಿಯರ ಗೌರವ ಕೊಡಲು ಮರೆಯಬೇಡ

ನಡೆ-ನುಡಿಯಲಿ ಅಹಂಕರಿಯಾಗಬೇಡೋ ಮನುಜ ಆಗಬೇಡ || ೪ ||

————————————————-***********************—————————————-

llನಿಸರ್ಗ- ಮದುಮಗಳುll

ನಿಸರ್ಗವೇ ನೋಡಲು ನೀನು ಮದುಮಗಳು

ನೀನೇ….. ನನ್ನ ಕಾವ್ಯ ಕನ್ನಿಕೆ

ನಿನ್ನ ಸೌಂದರ್ಯ ವರ್ಣಿಸಲು ಸಾಲುವವೇ ಶಬ್ದಗಳು? || ಧ್ರ ||

 

ಈ ಬೆಟ್ಟದ ಸಾಲುಗಳು ನಿನ್ನ ಕಣ್ಣುಗಳಿದ್ದಂತೆ

ಸಾಲ್ಗಳ ನಡುವೆ ಮೂಡುವ ಅರುಣ ನಿನಗಿಟ್ಟ ಕುಂಕುಮದಂತೆ

ಈ ಗಿಡ-ಮರಗಳು ನಿನ್ನ ಭುಜ-ಬಾಹುಗಳು

ಮರಕ್ಕೆ ಸುತ್ತಿದ ಬಳ್ಳಿಗಳು ನಿನ್ನುದ್ದ ಜಡೆಗಳು || ೧ ||

 

ಹೊಳೆಯುವ ಆಭರಣಗಳು ಮುಂಜಾನೆ ಮಂಜಿನ ಹನಿಗಳು

ಮದುವೆಯ ಸೀರೆಯಂತಿರುವ ಸುಂದರ ಜಲಪಾತಗಳು

ರತ್ನಗಂಬಳಿಯಂತೆ ತಪ್ಪಲಲ್ಲಿ ಹರಿಯುವ ನದಿಗಳು

ನಿನಗಿಟ್ಟ ದ್ರಷ್ಟಿ ಬೊಟ್ಟಂತೆ ಈ ಅಮಾವಾಸ್ಯೆಗಳು || ೨ ||

 

ಸುಹಾಸ್ ಪುರುಷೋತ್ತಮ ಕರ್ವೆ.