ನಾಡಹಬ್ಬದ ಸಂಭ್ರಮಕ್ಕೆ ‘ಅನಿವಾಸಿ’ಯ ಅಕ್ಷರ ತೇರು!

ನಲ್ಮೆಯ ಓದುಗರೇ, 

ತಮಗೆಲ್ಲರಿಗೂ ನಾಡಹಬ್ಬ ವಿಜಯದಶಮಿಯ ಶುಭಾಶಯಗಳು.ನವರಾತ್ರಿ- ದಸರಾ/ದಶೇರಾ, ದುರ್ಗಾಪೂಜಾ, ಎಂಬೆಲ್ಲ ಹೆಸರಿನಿಂದ ಕರೆಯಲ್ಪಡುವ ಈ ಹಬ್ಬವನ್ನು ಭಾರತದ ಉದ್ದಗಲಕ್ಕೂ ಹಲವು ರೀತಿಯಿಂದ ಆಚರಿಸಲಾಗುತ್ತದೆ. 

ಕನ್ನಡಿಗರಿಗೆ ದಸರಾ ಎಂದರೆ ಬರೀ ಒಂದು ಆಚರಣೆಯಲ್ಲ, ಅದು ನಮ್ಮನಾಡಹಬ್ಬ. ನಮ್ಮರಾಜ್ಯದ ಪ್ರತಿ ಭಾಗದಲ್ಲೂ ದಸರಾ ಆಚರಿಸುವ ರೀತಿ ಬೇರೆ ಬೇರೆ. ಉತ್ತರ ಕರ್ನಾಟಕದಲ್ಲಿ ನವರಾತ್ರಿಯ ನಸುಕುಗಳಲ್ಲಿ ಬನ್ನೀ ಮರಕ್ಕೆ (ಶಮೀ ವೃಕ್ಷ) ಪ್ರದಕ್ಷಿಣೆ ಹಾಕಿ ದಶಮಿಯ ಮುಂಜಾವಿನಂದು ಬನ್ನಿ ಎಲೆಗಳನ್ನು ತಂದು ‘’ಬನ್ನೀ ಕೊಟ್ಟು ಬಂಗಾರ ಧಾಂಗ ಇರೋಣು’’ಎಂದು ಹೇಳುತ್ತಾ ಪರಸ್ಪರ ಹಂಚಿಕೊಳ್ಳುತ್ತಾರೆ. 

ಕರಾವಳಿ ಭಾಗದಲ್ಲಿ ಸರಸ್ವತಿ ಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಉತ್ಸವ ಮಾಡಲಾಗುತ್ತದೆ. ಆಗ ತಾನೇ ತೆನೆ ಮೂಡಿಸಿಕೊಂಡು ಘಟ್ಟಿಯಾಗುತ್ತಿರುವ ಭತ್ತದ ಕದಿರನ್ನು ದಾರಂದಕ್ಕೆ ಕಟ್ಟಿ ಆ ಹಸಿ ಭತ್ತದ ಸಿಪ್ಪೆಯನ್ನು ಬಿಡಿಸಿ ಆ ದಿನ ಪಾಯಸದಲ್ಲಿ ಹಾಕುತ್ತಾರೆ.’ಹೊಸತು,’ ’ತೆನೆ ಕಟ್ಟುವುದು’ಎಂದು ಈ ಆಚರಣೆಯನ್ನು ಕರೆಯುತ್ತಾರೆ. 

ಆದರೆ ವಿಜಯದಶಮಿ ದಸರಾ ಎಂದರೆ ಪ್ರತಿಯೊಬ್ಬ ಕನ್ನಡಿಗನ ಮನಸಲ್ಲಿ ಮೂಡುವ ಚಿತ್ರಣ ಮೈಸೂರು ದಸರೆಯದು. ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ದಸರೆಯ ಉತ್ಸವದ ಕಂಪು ನಾಡು, ದೇಶದ ಗಡಿಗಳ ಮೇರೇ ದಾಟಿ ವಿಶ್ವವಿಖ್ಯಾತವಾಗಿದೆ. ನಮ್ಮನಾಡಿನ ಭವ್ಯ ಪರಂಪರೆಯನ್ನು ಅದರ ಉತ್ಕೃಷ್ಟತೆಯ ಮಹತ್ತನ್ನು ಪಸರಿಸಿದ ಮೈಸೂರು ದಸರಾ ಬಗ್ಗೆ, ಅಲ್ಲಿಯೇ ಹುಟ್ಟಿ ಬೆಳೆದ ಮೂರು ಮಹಿಳಾಮಣಿಗಳು ತಮ್ಮತವರುಮನೆಯ ಹಬ್ಬದ ಸಂಭ್ರಮದ ಕುರಿತು ಮನಸಿನ ಮಾತುಗಳನ್ನ ಅಕ್ಷರದ ಮೂಲಕ ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಅನಿವಾಸಿಯ ಸದಸ್ಯರಾದ ಶ್ರೀಮತಿ ರಮ್ಯಾ ಭಾದ್ರಿ ಅವರು ಕವಿತೆಯ ಮೂಲಕ ಮೈಸೂರು ದಸರಾ ದರ್ಶನ ಮಾಡಿಸಿದ್ದಾರೆ. 

‘ಅನಿವಾಸಿ’ಯ ಅಂಗಳಕ್ಕೆ ಮೊದಲ ಸಲ ಹಬ್ಬದ ದಿನವೇ ಅಡಿಯಿಟ್ಟಿರುವ ಶ್ರೀಮತಿ ಶ್ರೀರಂಜನಿ ವರುಣ್ ಮತ್ತು ಶ್ರೀಮತಿ ರಂಜನಾ ನಿರಂಜನ್ ಹೆಗಡೆ ಅವರು ದಸರಾ ಹಬ್ಬದ ನೆನಪುಗಳ ಬುತ್ತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.   

ಈ ಎಲ್ಲ ಬರಹಗಳಿಗೆ ಗರಿ ಇಟ್ಟಂತೆ ಅನಿವಾಸಿ ಬಳಗದ ನವ ಪೀಳಿಗೆಯ ಪುಟ್ಟ ಬರಹಗಾರ್ತಿ ಕುಮಾರಿ ಯಾಮಿನಿ ಗುಡೂರ್ ತಮ್ಮ ಮನೆಯ ದಸರಾ ಹಬ್ಬದ ಸಂಭ್ರಮದ ಬಗ್ಗೆ ಅದರ ಹಿನ್ನೆಲೆಯ ಕುರಿತು ತಾವು ತಿಳಿದು ಕೊಂಡಿದ್ದನ್ನು ತುಂಬಾ ಮುದ್ದಾಗಿ ಮನ ಮುಟ್ಟುವಂತೆ ಬರೆದಿದ್ದಾರೆ. 

ಜೊತೆಗೆ ಶ್ರೀಮತಿ ಸ್ಮಿತಾ ಕದಡಿ, ಮತ್ತು ಡಾ ಲಕ್ಷ್ಮಿನಾರಾಯಣ್ ಗುಡೂರ್, ಅವರು ತಮ್ಮ ಮನೆಯ ಗೊಂಬೆ ಹಬ್ಬದ ಸುಂದರ ಚಿತ್ರಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಈ ವಾರದ ದಸರಾ ವಿಶೇಷ ಸಂಚಿಕೆಯ ಓದಿಗೆ ನಿಮಗೆಲ್ಲರಿಗೂ ಆದರದ ಸ್ವಾಗತ.

-ಸಂಪಾದಕಿ

ನಾ ಕಂಡ ಮೈಸೂರು ದಸರಾ -  ರಮ್ಯಾ ಭಾದ್ರಿ
 
ಪಾಡ್ಯದ ಮೂಡಲದಲ್ಲಿ ಮೂಡುವ ಹೊಂಬೆಳಕು 
ಹರಿಯುತಾ ಸರಿಸಲು ಮುಂಜಾವಿನ ಮುಸುಕು 
ಬೆಟ್ಟದ ತುದಿಯಿಂದ ಜಾರಿ ಕಳೆಯುತ ನಸುಕು 
ಬೆಳಗುವುದು  ನಾಡನು  ನೀಗುತ ಅಂಧಕಾರದಳುಕು 
 
ನಾಡಿಗೆನಾಡೇ ನವರಾತ್ರಿಯ ಸಂಭ್ರಮದಲಿ ತೊಯ್ದಿರಲು
ಮದುಮಗಳಂತೆ ಮೈಸೂರು ಸಜ್ಜಾಗಿ ಕಾದಿರಲು  
ಮನೆಮನ ದೇಗುಲಗಳಲಿ ಮಂತ್ರಘೋಷ ಮೊಳಗಿರಲು
ಧಾವಿಸುವಳು ಚಾಮುಂಡಿ ದೀನರಿಗೆ ನವ ಚೈತನ್ಯ ತುಂಬಲು

ದೇವರಾಜ ಕಟ್ಟೆಯಲ್ಲಿ ನಿಂದ ಬಣ್ಣದ ಗೋಪುರಗಳಿಂದ 
ತಟ್ಟೆಯಲ್ಲಿ ತಲೆಯೆತ್ತ ಸಿಹಿತಿನಿಸುಗಳ ಆಕಾರಗಳಂದ 
ಗಾಳಿಯಲ್ಲಿ ಬೆರೆತ ಮಲ್ಲೆಯ ಗಂಧ ,ಕುಸುಮಗಳ ಸುಗಂಧ 
ಬಾಯಲ್ಲಿ ಕರಗುವ ತುಪ್ಪದ ಮೈಸೂರ್ ಪಾಕೇ ಚಂದ 
 
ಕನ್ನಡ ಬೃಹತ್ ಸಂಸ್ಕೃತಿಯ ಪುಟ್ಟ ಪ್ರತಿಬಿಂಬ, ಬೊಂಬೆಮನೆ 
ಪಟ್ಟದ ಬೊಂಬೆಗಳ ಆಳ್ವಿಕೆಯ ಪುಟ್ಟ ಸಾಮ್ರಾಜ್ಯಕ್ಕಿಲ್ಲ ಎಣೆ 
ದಶಾವತಾರದಿಂದ ದಸರಾವರೆಗಿನ ದೃಶ್ಯಾವಳಿಗಳ ಕಿರುನೋಟ 
ವರ್ಣರಂಜಿತ ಬೊಂಬೆಗಳಾಟ ಕಣ್ಣುಗಳಿಗೆ ರಸದೂಟ
 
ಶತಮಾನಗಳ ಗತವೈಭವ ಮೈಸೂರು ಅರಮನೆ 
ಅರಸರ ಪರಂಪರೆಯ ಬಣ್ಣಿಸುವ ಅದ್ಬುತ ಶಿಲ್ಪಕಲೆ 
ನಂದಿಧ್ವಜಕ್ಕೆ ನಮಿಸುತ  ನಾಡಹಬ್ಬವನ್ನಾರಂಭಿಸುವ ಒಡಯರು 
ವಿಶೇಷವಾಗಿ ನಡೆಸುವರು ವಿಧಿವತ್ತವಾದ  ಖಾಸಗಿ ದರ್ಬಾರು 
 
ನೇಸರನು ನಂದಿನಿಗೆ ವಂದಿಸುತ್ತಾ ನಿಸ್ತೇಜನಾಗುತ್ತಿದಂತೆಯೇ
ಕತ್ತಲಲಿ ಹೊಳೆಯುತ  ನಗರವು ಇಂದ್ರಪುರಿಯಂತಾಗುವುದು
ಅರಮನೆಯ ಲಕ್ಷ ದೀಪಗಳು ಒಮ್ಮೆಲೆ ಬೆಳಗುವ  ಕ್ಷಣ
ವೀಕ್ಷಕರ ನರನಾಡಿಗಳಲ್ಲಿ  ಮೂಡುವುದು ವಿದ್ಯುತ್ ಸಂಚಲನ
 
ಕಾದಿಹಳು ಕಾತುರದಿ ನಡೆಸುತ್ತಾ ದಶಮಿಯ ತಯಾರಿ 
ವಿಜಯನಗರ ಸಾಮ್ರಾಜ್ಯದಲ್ಲಿ ವಿಜೃಂಭಿಸಿದ ಸುಕುಮಾರಿ 
ಒಡೆಯರ ನಾಡಿನಲಿ ಜಗದೊಡತಿಯ ಮೆರೆಸುವ ಪಟ್ಟದೈಸಿರಿ 
ಚಾಮುಂಡಿ  ರಾರಾಜಿಸುವ ಚಿನ್ನದಂಬಾರಿ ಬರುವಳು ಆನೆಯನ್ನೇರಿ 

ಮೈಸೂರು ದಸರಾ ಕಾಣಲು ಕಿಕ್ಕಿರಿದ ಜನಸಾಗರ 
ಸಿಂಹವಾಹಿನಿಯ ಜಂಬುಸವಾರಿ ನಯನ ಮನೋಹರ
ಹಿಂಬಾಲಿಸುತ  ನಡೆವ ಗಜಪಡೆಯ ರಾಜ ಗಾಂಭೀರ್ಯ 
ಶ್ರೀಮಂತ ಕಲೆಯ ಬಿಂಬಿಸುವ ಸ್ತಬ್ದ ಚಿತ್ರಗಳ ಸೌಂದರ್ಯ
 
ಅರಮನೆ, ಬನ್ನಿಮಂಟಪದ ನಡುವಿನ ದಸರಾ ಮೆರವಣಿಗೆಗೆ  
ಸಾಕ್ಷಿಯಾಗುವ ಭಾಗ್ಯ ,ಬಾಳಿನ  ಸಾರ್ಥಕತೆಯ ಸುಂದರ ಘಳಿಗೆ
ನಾಡಗಣ್ಯರಿಗೆ ವಂದಿಸುತ ಬೀಳ್ಕೊಡುವ ಪಂಜಿನ ಕವಾಯಿತು 
ಮತ್ತೆ ಬರುವೆನೆಂದು ದಸರಾ ಸಂಭ್ರಮಕ್ಕೆ ತೆರೆ ಎಳೆಯುತ್ತಾ ನಿರ್ಗಮಿಸಿತು. 
 *****************************************************************************************

ಶ್ರೀರಂಜಿನಿ ಸಿಂಹ ಅವರು ಲಂಡನ್ ಗೆ ಬಂದು ಆರು ತಿಂಗಳಾದವು .ಇವರು Bachelor of Engineering in Industrial Production ಅಧ್ಯಯನ ಮುಗಿಸಿ ನಂತರ ಸ್ನಾತಕೊತ್ತರ ಪದವಿಯನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪಡೆದು, ಈಗ ಮಕ್ಕಳಿಗೆ online ಸಂಗೀತ ಪಾಠ ಹಾಗೂ ಬೆಂಗಳೂರಿನ L Subramaniun Academy of performing arts ನಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. -ಸಂ

ನಮ್ಮ ಮನೆಯ ದಸರಾ – ಅಂದು-ಇಂದು

ದಸರಾ ಎಂದರೆ ನಮಗೆ ಎಲ್ಲಿಲ್ಲದ ಸಂಭ್ರಮ,ಸಡಗರ. ಮೈಸೂರಿನಲ್ಲಿ ಇದ್ದಾಗ ದಸರಾ ಕೇವಲ ಮನೆಯ ಹಬ್ಬವಲ್ಲ ನಾಡಹಬ್ಬ. ಸಾಂಸ್ಕೃತಿಕ ಕಾರ್ಯಕ್ರಮಗಳು, ಮನೆಮನೆಗೆ ಹೋಗಿ ಗೊಂಬೆ ಅಲಂಕಾರ ನೋಡುವುದು, ದೀಪಾಲಂಕಾರ, ಅರಮನೆ ಉತ್ಸವಗಳು, ದೇವಸ್ಥಾನದಲ್ಲಿ ಪ್ರತಿ ದಿನ ದೇವಿಗೆ ಮಾಡುವ ಅಲಂಕಾರ, ಪ್ರಸಾದ, ಚರ್ಪು(ಗೊಂಬೆ ಬಾಗಿನ)ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮನೆಯಲ್ಲಿ ಗೊಂಬೆ ಅಲಂಕಾರ ಮಾಡುವ ಉತ್ಸಾಹ. ವರ್ಷಕೊಮ್ಮೆ ಬರುವ ಈ ಹಬಕ್ಕೆ ನನ್ನ ಮನಸು ನವ ನವೀನ “theme /concept” ಹುಡುಕುತ್ತಿತ್ತು .ಈ ನಿಟ್ಟಿನಲ್ಲಿ ನನಗೆ ಪ್ರೇರಣೆ ಸಿಕ್ಕಿದ್ದು ಮೈಸೂರಿನ ಪ್ರಖ್ಯಾತ ಓದುಗರು,ಬರಹಗಾರರು ಆದ “ಬೊಂಬೆ ಮನೆಯ’’ಯ ಜ್ಞಾನಿ ಸರ್ ಅವರಿಂದ.

 ಮೈಸೂರಿನಿಂದ ಸ್ವಲ್ಪ ದೂರದಲ್ಲಿ ಇರುವ ಚಾಮರಾಜಪೇಟೆ ಜಿಲ್ಲೆಯಲ್ಲಿ ಸಪ್ತಮಾತ್ರಿಕೆ ದೇವಿಯರ ದೇವಾಲಯವಿದೆ. ಇದರ ಪ್ರತಿಕೃತಿಯಂತೆ ಮೈಸೂರಿನ ವಿಜಯನಗರ ಬಡಾವಣೆಯಲ್ಲೂ ಸಪ್ತಮಾತ್ರಿಕೆ ದೇವಿ ದೇವಸ್ಥಾನವಿದೆ. ನಾನು ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಎಂಜಿನಿಯರಿಂಗ್  ಅಲ್ಲಿ ಪದವಿ ಪಡೆದಿದ್ದು. ನನ್ನ ಕಾಲೇಜ್ ಹಾಗು ಈ ದೇವಸ್ಥಾನ ಬಹಳ ಹತ್ತಿರ. ಆ ವರ್ಷ ಈ ದೇವಿಯರ ಗೊಂಬೆಗಳನ್ನು ಜೊಡಿಸಿ, ದೇವಿಯ ಶ್ಲೋಕಗಳನ್ನು ಕನ್ನಡಲ್ಲಿ ಬರೆದು, ಗೊಂಬೆ ನೊಡಲು ಬಂದವರು ಶ್ಲೋಕಗಳನ್ನ ಜಪಿಸುವಂತೆ ಮಾಡಿದ್ದೆ. 

ನಾನು ಸಂಗೀತ ಸ್ನಾತಕೊತ್ತರ ಪದವಿ ಶಿಕ್ಷಣಕ್ಕೆ ಸೇರಿದಾಗ ಶ್ರೀ.ತ್ಯಾಗರಾಜರ ರಾಮ ಭಕ್ತಿಯ ಬಗ್ಗೆ ಗೊಂಬೆಗಳನ್ನು ಗುಂಪು ಮಾಡಿದ್ದೆ. ಹೀಗೆ ಪ್ರತಿ ವರ್ಷವೂ ಒಂದು ಹೊಸ ಥೀಮ್ ಆಯ್ದುಕೊಂಡು ಕ್ರಿಯಾತ್ಮಕವಾಗಿ ಕಲಾತ್ಮಕತೆಯಿಂದ ಈ ಗೊಂಬೆಗಳನು ಜೋಡಿಸಿ ಹಬ್ಬವನ್ನು ಆಚರಿಸುವಾಗ ನಮಗೆ ಅರಿವಿಲ್ಲದಂತೆ ನಮ್ಮ ಸಂಸ್ಕೃತಿ ಕುರಿತಾಗಿ ಆಸಕ್ತಿ, ಜ್ಞಾನ, ಹಾಗು ಸಂಪ್ರದಾಯಗಳ ಮೇಲೆ ತಿಳುವಳಿಕೆ ಹೆಚ್ಚಾಗುತ್ತದೆ.

ಈ ಬಾರಿ ಲಂಡನ್ ನಲ್ಲಿ ನನ್ನ ಮೊದಲ ವರ್ಷದ ನವರಾತ್ರಿ/ಗೊಂಬೆ ಹಬ್ಬ ಸರಳತೆಯಿಂದ ಆಚರಿಸುತ್ತಿರುವೆ ಮತ್ತು ತಂದೆ-ತಾಯಿಯರ ಆಶೀರ್ವಾದಗಳೊಂದಿಗೆ ಪಟ್ಟದ ಗೊಂಬೆಗಳು ಮೈಸೂರಿನಿಂದ ಲಂಡನ್ ತಲುಪಿವೆ. ಮೊದಲನೆ ದಿನದಿಂದ ನಾವು ನಮೆಲ್ಲರ ನೆಚ್ಚಿನ ಸಿಹಿ ಕಹಿ ಚಂದ್ರು ಸರ್ ಅವರು ನಡೆಸಿಕೊಡುವ ’ಬೊಂಬಾಟ್ ಭೋಜನ’ ಎನ್ನುವ ಕಾರ್ಯಕ್ರಮವನ್ನ ನೋಡಿ ನೊಡಿ ವಿಧ ವಿಧದ ಪ್ರಸಾದಗಳನ್ನು ಮಾಡಿ ದೇವಿಗೆ ಅರ್ಪಿಸುತಿದ್ದೇವೆ. ನಾವು(ನಾನು ಮತ್ತು ನನ್ನ ಪತಿ ವರುಣ್) ಡಿಡಿ ಚಂದನ ವಾಹಿನಿಯಲ್ಲಿ ಚಿನ್ನದ ಅಂಬಾರಿ ಹೊತ್ತುನಡೆಯಲಿರುವ ಅಭಿಮನ್ಯುವನ್ನು ನೊಡಲು ಕಾತುರದಿಂದ ಕಾಯುತ್ತಿದ್ದೇವೆ. ನಿಮ್ಮೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.

***********************************************************************************************

ಶ್ರೀಮತಿ ರಂಜನಾ ನಿರಂಜನ್ ಹೆಗಡೆ  ಅವರು ಹುಟ್ಟಿ ಬೆಳದದ್ದು ಮೈಸೂರಿನಲ್ಲಿ,ಇಂಜಿನಿಯರಿಂಗ್ ಕಾಲೇಜ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ರಂಜನಾ ಅವರು ಕಳೆದ ಎಂಟು ವರ್ಷಗಳಿಂದ ಬೆಲ್ಫಾಸ್ಟ್ ನಿವಾಸಿ.-ಸಂ   

ನನ್ನೂರ ದಸರಾ ನೆನಪುಗಳು 

ನನಗೆ ನಮ್ಮ ನಾಡಹಬ್ಬ ಮೈಸೂರು ದಸರಾ ಅಂದಾಗಲೆಲ್ಲ ನೆನಪಾಗೋ ಸಂಗತಿ ಅಂದ್ರೆ, ನಾನು ಅಪ್ಪ ಇಬ್ಬರೂ   ಅರಮನೆಯ ದೀಪಾಲಂಕಾರ ಹಾಗೆಯೇ ಅಲ್ಲಿ ಆನೆಗಳು ಅಂಬಾರಿ ಹೊರುವ ಅಭ್ಯಾಸ ಮಾಡುವುದನ್ನು ನೋಡಿಕೊಂಡು, ಪಕ್ಕದಲ್ಲೇ ಆಯೋಜಿಸಿದ್ದ ಫಲ ಪುಷ್ಪ ಪ್ರದರ್ಶನಕ್ಕೆ ಭೇಟಿಕೊಟ್ಟು, ಆಮೇಲೆ ಎಲ್ಲಾ ಪ್ರಮುಖ ಕಟ್ಟಡ ಮತ್ತು ರಸ್ತೆಯ ಬಣ್ಣ ಬಣ್ಣದ ದೀಪಾಲಂಕಾರ ನೋಡ್ತಾ ಆಹಾರ ಮೇಳಕ್ಕೆ ಹೋಗಿ ಜೋಳದ ರೊಟ್ಟಿ ಬದ್ನೇಕಾಯಿ ಎಣಗಾಯಿ, ಮೈಸೂರು ಬೆಣ್ಣೆ ಮಸಾಲೆ ದೋಸೆ ತಿಂದು ಮನೆಗೆ ಹೋಗ್ತಿದ್ವಿ. 

ವಿಜಯದಶಮಿ ದಿನ ಎಲ್ಲಾ ಒಟ್ಟಿಗೆ ಕೂತು ಟಿವಿಯಲ್ಲಿ ದಸರಾ ಮೆರವಣಿಗೆ ನೋಡೋದೇ ದೊಡ್ಡ ಸಂಭ್ರಮವಾಗಿತ್ತು. ದಸರಾ ವಸ್ತುಪ್ರದರ್ಶನಕ್ಕೆ , ಸ್ನೇಹಿತರ ಜೊತೆ ಹೋಗಿ ದೊಡ್ಡ ಜೋಕಾಲಿ, ‘ಕಪ್ ಸಾಸರ್ ’ಎಲ್ಲಾ ಆಡಿಕೊಂಡು, ಶಾಪಿಂಗ್ ಮಾಡ್ಕೊಂಡು,ಕಾಟನ್ ಕ್ಯಾಂಡಿ, ಚುರಮುರಿ, ಕೊನೆಯಲ್ಲಿ ಡೆಲ್ಲಿ ಹಪ್ಪಳ ತಿನ್ನೋ ಮಜಾ ನೇ ಬೇರೆ. ದಸರಾ ಹಬ್ಬದ ನೆನಪುಗಳು ತುಂಬಾ ಸುಂದರ ಅವು ಬರೀ ನೆನಪುಗಳಲ್ಲ ನಮ್ಮ ವ್ಯಕ್ತಿತ್ವದ ಒಂದು ಭಾಗವೇ ಆಗಿಹೋಗಿದೆ. ಮೈಸೂರು ದಸರಾ ಎಂದರೆ ಹಾಗೆ. 

 ಈಗ ಈ ದೇಶದಲ್ಲಿ ದಸರಾ ಸಡಗರವನ್ನ ಇಲ್ಲಿಯ ಸ್ನೇಹಿತರ ಜೊತೆ ದೇವಸ್ಥಾನದಲ್ಲಿ ಗರ್ಬಾ ನೃತ್ಯ, ದುರ್ಗಾ ಪೂಜೆ, ಬತುಕಮ್ಮ ಸಂಭ್ರಮದಲ್ಲಿ ಭಾಗವಹಿಸಿ, ಹಬ್ಬದ ಆಚರಣೆ ಮಾಡುತ್ತೇವೆ. ಈಗಲೂ ವಿಜಯದಶಮಿಯ ದಿನ ಟಿವಿಯಲ್ಲಿ  ಮನೆಯ ಎಲ್ಲ ಸದಸ್ಯರು ಸೇರಿ ಜಂಬೂ ಸವಾರಿ ನೋಡುತ್ತಾ ಖುಷಿ ಪಡುತ್ತೀವಿ. ಮನೆಯಲ್ಲಿ ಆಯುಧ ಪೂಜೆ ಮಾಡಿ ಸಿಹಿ ತಿಂಡಿ ತಿನಿಸು ಮಾಡಿ. ಶಾರದಾ ಪೂಜೆಯ ದಿನ ಸ್ನೇಹಿತೆಯರ ಮನೆಗೆ ಕುಂಕುಮಕ್ಕೆ ಹೋಗಿ ಎಲ್ಲಾ ಒಟ್ಟಿಗೆ ಕಾಲ ಕಳೆದು ಬರುತ್ತೇವೆ. ಆದರೂ ಮೈಸೂರಿನ ಆ ಆಡಂಬರವನ್ನ, ದೀಪಾಲಂಕಾರ, ಬಗೆ ಬಗೆಯ ಆಹಾರ, ಅಲ್ಲಿಯ ಸ್ನೇಹಿತರನ್ನ ಬಹಳ ನೆನಪು ಮಾಡಿಕೊಳ್ಳುತ್ತೇನೆ. ಮತ್ತೆ ಯಾವಾಗ ಮೈಸೂರಿಗೆ ಹೋಗುತ್ತೇನೆ ಎಂದು ಕಾಯುತ್ತಿರುತ್ತೇನೆ!

ಶ್ರೀಮತಿ ರಂಜನಾ ನಿರಂಜನ್ ಹೆಗಡೆ 

***************************************************************************************

ಯಾಮಿನಿ ಗುಡೂರ್ ಅವರು ‘ಅನಿವಾಸಿ’ ಯ ಉತ್ಸಾಹಿ, ಕ್ರಿಯಾಶೀಲ ಸದಸ್ಯರಾದ ಡಾ ಲಕ್ಷ್ಮೀನಾರಾಯಣ್ ಗುಡೂರ್ ಮತ್ತು ಶಾರದಾ ಅವರ ದ್ವಿತೀಯ ಪುತ್ರಿ.
ಯಾಮಿನಿ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ. – ಸಂ

ದಸರಾ ಹಬ್ಬ 

ಪ್ರತಿವರುಷ ದಸರಾ ಯಾವಾಗ ಬರುತ್ತದೋ ಅಂತ ಕಾಯುತ್ತಿರುತ್ತೇವೆ.  ಬೊಂಬೆಗಳನ್ನ ಜೋಡಿಸೋದು, ರುಚಿ ರುಚಿಯಾದ ಊಟ (ಎಲ್ಲಕ್ಕಿಂತ ಹೆಚ್ಚು ಮಜಾ ಕೊಡುವುದು ಇದೇ!), ಮತ್ತೆ ಗೆಳತಿಯರು ಮತ್ತವರ ಮನೆಯವರ ಭೆಟ್ಟಿ ಇವೆಲ್ಲ ನೆನಪಾಗುತ್ತವೆ.  ಈ ವರ್ಷದ ದಸರಾ ಗುರುವಾರ, 14ನೇ ಅಕ್ಟೋಬರ್ ನಂದು.

ನಾವ್ಯಾಕೆ ದಸರಾ ಆಚರಿಸುತ್ತೇವೆ? 

ನನ್ನ ಅಪ್ಪನ ಪ್ರಕಾರ ಈ ಹಬ್ಬ ಕೆಟ್ಟದರ ಮೇಲೆ ಒಳ್ಳೆಯದರ ಗೆಲುವನ್ನು ಪ್ರತಿನಿಧಿಸುತ್ತದಂತೆ.  ನಮ್ಮ ತಾತ-ಅಜ್ಜಿಯ ಮನೆಯಲ್ಲಿ ದಸರಾ ಜೋರಾಗಿರುತ್ತಿತ್ತಂತೆ. ಭಾರತದಲ್ಲೆಲ್ಲ ದಸರಾ ಮುಖ್ಯವಾದ ಹಬ್ಬ ಎಂದು ಕೇಳಿದ್ದೇನೆ.  ರಾಮಾಯಣದಲ್ಲಿ ರಾಮ ರಾವಣನನ್ನು ಗೆದ್ದದ್ದೂ ಆಗಲೇ ಅಂತೆ.  ಉತ್ತರ ಭಾರತದಲ್ಲಿ ಈ ಕಥೆಯನ್ನು ರಾಮಲೀಲಾ ಅಂತ ಆಡುತ್ತಾರಂತೆ.  ಕೊನೆಯಲ್ಲಿ ರಾವಣ, ಕುಂಭಕರ್ಣರ ಹುಲ್ಲಿನ ದೊಡ್ಡ ಬೊಂಬೆ ಮಾಡಿ, ಅದರಲ್ಲೆಲ್ಲ ಪಟಾಕಿ ತುಂಬಿ ಬಯಲಲ್ಲಿ ಸುಡುತ್ತಾರಂತೆ – ಒಮ್ಮೆ ಹೋಗಿ ನೋಡಬೇಕು ಅನ್ನಿಸುತ್ತದೆ.

ದಸರಾ ನನಗೆ ಏಕೆ ಇಷ್ಟ?

ನನಗೆ ಅತ್ಯಂತ ಇಷ್ಟವಾಗುವ ಭಾಗವೆಂದರೆ, ನಮ್ಮ ಮನೆಗೆ ಜನರು, ನನ್ನ ಗೆಳತಿಯರು ಬರುವುದು. ಎಲ್ಲರ ಮುಖದಲ್ಲೂ ಎಷ್ಟು ಸಂತೋಷವಿರುತ್ತದೆ!  ಅವರಿಗೆ ನಾವು, ನಮಗೆ ಅವರು ಒಬ್ಬರಿಗೊಬ್ಬರು ಉಡುಗೊರೆ ತರುತ್ತೇವೆ.  ಕೆಲವರು ದೇವರ ಕೋಣೆಗೆ ಬಂದು ಹಾಡನ್ನೋ, ಶ್ಲೋಕಗಳನ್ನೋ ಹೇಳುತ್ತಾರೆ. 

ಬೊಂಬೆಗಳನ್ನು ಜೋಡಿಸುವುದೂ ನನಗೆ ತುಂಬಾ ಇಷ್ಟದ ಕೆಲಸ. ವಿಷ್ಣುವಿನ ಹತ್ತು ಅವತಾರಗಳು, ಇನ್ನೂ ಬೇರೆ ಬೇರೆ ಬೊಂಬೆಗಳನ್ನು ಅಟ್ಟದಿಂದ (attic) ಕೆಳಗಿಳಿಸಿ, ಒರೆಸಿ ಸಾಲಾಗಿಡುವುದು.  ಇದರಲ್ಲಿ ಕೆಲವು ನಮ್ಮ ಅಜ್ಜಿಯ ಮನೆಯಿಂದ ತಂದದ್ದು.  ಗಂಡ-ಹೆಂಡತಿಯ ಜೋಡಿಬೊಂಬೆ ಅಮ್ಮನ ಮದುವೆಯಲ್ಲಿ ಅಜ್ಜಿ ಕೊಟ್ಟದ್ದಂತೆ – ಅಮ್ಮ ಹೇಳಿದ್ದು ನನಗೆ ನೆನಪಿದೆ.

ಇನ್ನು ಅಮ್ಮನ ಅಡುಗೆ, ಅದರಲ್ಲೂ ಹಬ್ಬದ ಅಡುಗೆಯೆಂದರೆ ನನಗೆ ಅಚ್ಚುಮೆಚ್ಚು.  ನನಗೆ ಸಾಧ್ಯವಾದಾಗೆಲ್ಲ ನಾನೂ ಅಡುಗೆ ಮನೆಯಲ್ಲಿ ಸಹಾಯಮಾಡುತ್ತೇನೆ – ತರಕಾರಿ ತೊಳೆದು ಹೆಚ್ಚುವುದು, ಹೇಳಿದಷ್ಟು ಉಪ್ಪು-ಬೆಲ್ಲ ಹಾಕುವುದು, ಏಲಕ್ಕಿ ಕುಟ್ಟುವುದು ಹೀಗೆ.

ಸಂಜೆಯಾದರೆ ಹೊಸ ಸುಂದರ ಬಟ್ಟೆ ಹಾಕಿಕೊಂಡು ತಯಾರಾಗುವುದು ನನಗೆ ಮಜಾ ಕೊಡುತ್ತದೆ.  ಬಂದವರಲ್ಲಿ ಚಿಕ್ಕ ಮಕ್ಕಳಿಗೆ ಸಿಹಿ ಹಂಚುವುದು, ಅಮ್ಮಂದಿರಿಗೆ ಉಡುಗೊರೆ ಕೊಡುವುದು ಇವೆಲ್ಲ ನಾನು ಮತ್ತು ಅಕ್ಕ ಮಾಡುತ್ತೇವೆ.

ಹೋದವರ್ಷ ಕೋವಿಡ್ ಬಂದು ಹೋಗಲಿಲ್ಲವಾದರೂ, ಪ್ರತಿವರ್ಷ ನಮ್ಮೂರಿನ ಗುಜರಾತಿ ಗುಡಿಗೆ ಹೋಗಿ ರಾಸ್ ಗರ್ಬಾ ಆಡುವುದೆಂದರೆ ಬಲು ಖುಶಿ ನಮಗೆ.  ಹಬ್ಬದ ಆಚರಣೆಯೊಂದಿಗೆ, ನಮ್ಮ ಡ್ಯಾನ್ಸಿಂಗ್ ಸ್ಕಿಲ್ಲನ್ನೂ ತೋರಿಸಿಕೊಳ್ಳಬಹುದು!

ಸರಸ್ವತಿ ಪೂಜೆಯ ದಿನ ನಮ್ಮ ಪುಸ್ತಕ, ಪೆನ್ನು ಎಲ್ಲ ಜೋಡಿಸಿಟ್ಟು ಪೂಜೆ ಮಾಡುತ್ತೇವೆ, ದಿನವೂ ಹೊಸದನ್ನು ಕಲಿಯುವ ಬುದ್ಧಿ ಕೊಡೆಂದು ಬೇಡಿಕೊಳ್ಳುತ್ತೇವೆ.

ಇನ್ನೊಂದು ವಿಷಯವೆಂದರೆ, ದುರ್ಗಾಷ್ಟಮಿಯ ದಿವಸ ಉತ್ತರಭಾರತದ ಕಡೆಯವರಾದ ನಮ್ಮ ಪಕ್ಕದ ಮನೆಯವರು ನಮ್ಮನ್ನು ಕರೆದು ಸಿಹಿ ಕೊಡುತ್ತಾರೆ. ಅವರು ಮಾಡುವ ಪೂರಿ-ಚನಾ-ಶಿರಾ ನನಗೆ ತುಂಬಾ ಸೇರುತ್ತದೆ – yummy! 

ಒಟ್ಟಿನಲ್ಲಿ ಹಬ್ಬಗಳು ಅಜ್ಜಿಯ ಮನೆಯ ನೆನಪು ತರುವುದರಿಂದ ನನಗೆ ತುಂಬಾ ಇಷ್ಟ.  ಹೊಸಬಟ್ಟೆ, ತಿಂಡಿಗಳಷ್ಟೇ ಅಲ್ಲ, ಹಬ್ಬಗಳ ಆಚರಣೆ ನನಗೆ ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಕಲಿಯಲೂ ಸಹಾಯಮಾಡುತ್ತದೆ.

ಚಿತ್ರಗಳು: ಡಾ ಲಕ್ಷ್ಮೀನಾರಾಯಣ್ ಗುಡೂರ್

********************************************************

ಶ್ರೀಮತಿ ಸ್ಮಿತಾ ಕದಡಿ ಅವರ ಮನೆಯಲ್ಲಿ ದಸರಾ ಗೊಂಬೆಗಳು.

ಅನಿವಾಸಿಯಲ್ಲಿ ”ಕಳ್ಳರ ಕಾರುಬಾರು”

ಆತ್ಮೀಯ ಓದುಗರೇ , 

ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ಕಳ್ಳರು, ಮತ್ತವರು ಎಸಗುವ ಕಳ್ಳತನ, ದರೋಡೆ ಕುರಿತಾದ ಸುದ್ದಿ ಕೇಳುತ್ತೇವೆ, ನಿಯತಕಾಲಿಕೆಗಳಲ್ಲಿ ಓದೇ ಇರುತ್ತೇವೆ, ಆ ಕ್ರೌರ್ಯ ತುಂಬಿದ ಕೃತ್ಯ ಎಸಗುವವರ ಕುರಿತು ಒಂದು ರೀತಿಯ ತಿರಸ್ಕಾರ ಮತ್ತು ಭಯವು ಬೇಡವೆಂದರೂ ಮನದಲ್ಲಿ ಮೂಡಿಬಿಡುತ್ತದೆ. ಜೊತೆಗೆ ಕಳ್ಳತನವಾದ ವಸ್ತು ಮರಳಿ ಸಿಗುವುದು ಅದೃಷ್ಟವೇ ಸರಿ! ಆ ಭಯ ಮತ್ತು ಅದೃಷ್ಟದ ಸುತ್ತಲೇ ಇರುವ ಎರಡು ರಂಜನೀಯ ಘಟನೆಗಳನ್ನು ಈ ವಾರ ಅನಿವಾಸಿ ಬಳಗದ ಇಬ್ಬರು ಹಿರಿಯ ಸದಸ್ಯರು ತಮ್ಮ ನೆನಪಿನ ಸಂಚಿಯಿಂದ ತೆಗೆದು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ವತ್ಸಲಾ ರಾಮಮೂರ್ತಿ ಅವರು ಬರೆದ ”ಕಳ್ಳ ಬಂದ”  ಮತ್ತು ಶ್ರೀವತ್ಸ ದೇಸಾಯಿ ಅವರ ”ಕಳ್ಳಬಂದ-ಕ್ಯಾಮರಾ ಹೋತು-ವಾಪಸ್ ಬಂತು”ಎಂಬೆರೆಡು ಲಘು ಹಾಸ್ಯ ಬರಹಗಳು ಈ ವಾರ ನಿಮ್ಮ ಓದಿಗಾಗಿ. ಈ ಬರಹಗಳು ನಿಮಗೂ, ನಿಮ್ಮ ಜೀವನದಲ್ಲಾದ ಇಂಥಹುದೇ ಅನುಭವಗಳನ್ನ ನೆನಪಿಸಿದರೆ ಅದಕ್ಕೆ ಅಕ್ಷರ ರೂಪ ಕೊಟ್ಟು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಮರೆಯದಿರಿ. ಸರ್ವರಿಗೂ ಶರನ್ನವರಾತ್ರಿಯ ಶುಭಾಶಯಗಳು.

– ಸಂಪಾದಕಿ

ಕಳ್ಳ ಬಂದ – ವತ್ಸಲಾ ರಾಮಮೂರ್ತಿ ಬರೆದ ಹಾಸ್ಯ ಬರಹ

ಆ ದಿನ ನಾನು, ನನ್ನ ಗಂಡ, ನನ್ನ ಸ್ನೇಹಿತೆ ಸುಮಾ (ಸುಮತಿ) ಮತ್ತು ಅವಳ ಗಂಡ ಅರವಿಂದ ನಾವೆಲ್ಲರೂ, ವಾಣಿವಿಲಾಸ ಹಾಸ್ಪಿಟಲ್ ಕೆಲಸ ಮುಗಿಸಿ
ಮನೆಗೆ ಹೊರೆಟೆವು. ಅರವಿಂದ “ನನಗೆ ಸುಸ್ತಾಗಿದೆ ಕಾಫಿ ಕುಡಿದು ಹೋಗೋಣ ಬನ್ನಿ “ ಎಂದು ಹೇಳಿದಾಗ ನನ್ನ ಪತಿರಾಯ
“ನಾನು ಬರಲ್ಲಪ್ಪ“  ಎಂದು ಹೊರಡಲು ಅನುವಾದರು. ನಾನು ಅವರ ಹಿಂದೆ ಬಾಯಿ ಮುಚ್ಚಿಕೊಂಡು ನಡೆದೆ. I was too tired to argue with him. 
ಗೆಳತಿ ಸುಮಾ ”ನಾನೂ ಬರುವುದಿಲ್ಲಪ್ಪ ಬೇಕಾದರೆ ನೀನು  ಹೋಗು ಆದರೆ ವಾಪಸ ಬಂದಾಗ ಮನೆ ಬಾಗಿಲು ತೆಗೆಯುವುದಿಲ್ಲ ನೋಡು ”
ಅಂದು ಸಿಡುಕಿದಳು. ಅರವಿಂದ ತುಂಬಾ ಹಠವಾದಿ “ಸರಿ ನೀನು ಹೋಗು ನಾನು ಮಸಾಲೆದೋಸೆ ತಿಂದು ಕಾಫಿ ಕುಡಿದು
ಬರುತ್ತೇನೆ “ಅಂತ ಹೇಳಿ ದಾಪುಗಾಲು ಹಾಕುತ್ತ ಹೋರಟೇ ಬಿಟ್ಟ . 
ನಾನು ಸುಮಾಳನ್ನು ಕುರಿತು “ಬಾರೆ ಅತಿ ಜಂಬ ಹೋಡಿತಾನೆ ನಾವು ಹೋಗೋಣ.“ ಎಂದು ನಮ್ಮ ಮನೆದಾರಿ ಹಿಡಿದೆವು.  ನಮ್ಮೆಲ್ಲರಿಗೂ ಗಳ್ಳಸ್ಯ, ಕಂಠಸ್ಯ. ನಾವು ನಮ್ಮ  ಪ್ರೌಢಶಾಲಾ ದಿನಗಳಿಂದಲೂ ಸಹಪಾಠಿಗಳು ,ಸ್ನೇಹಿತರು.
ನಮ್ಮ ಮನೆ ಮತ್ತು ಸುಮಾಳ ಮನೆ ಒಂದೇ ರಸ್ತೆಯಲ್ಲೇ ಇತ್ತು. ದಾರಿಯುದ್ದಕ್ಕೂ ಧುಮುಗುಡುತ್ತ  ಸುಮಾ ಮನೆ ಸೇರಿ ಬಾಗಿಲು ಜಡಿದಳು .
ನಾವಿಬ್ಬರು ನಮ್ ಮನೆಗೆ ಬಂದು ಬಿಸಿ ಬಿಸಿ ಕಾಫಿ, ಕೋಡುಬಳೆ ತಿನ್ನುತ್ತಾ ಟಿವಿ ನೋಡುತ್ತಾ ಇದ್ದೆವು .
ಒಂದು ಘಂಟೆ ಕಳೆದಿರಬಹುದು .ಫೋನ್ ಬಡಿದುಕೊಂಡಿತು. ಅಯ್ಯೋ! ಇದೊಂದು ಫೋನ್ ಕಾಟ, ಎಂದು ಗೊಣಗಾಡಿಕೊಂಡು “ಹಲೋ ಯಾರು ಮಾತನಾಡುವುದು ?” ಎಂದು ಖಾರವಾಗಿ ಕೇಳಿದೆ, ಅಸಮಾಧಾನ, ತುಸು ಕೋಪದ ಧ್ವನಿಯಲ್ಲಿ . ಆ ಕಡೆಯಿಂದ ನಡುಗುವ ಧ್ವನಿಯಲ್ಲಿ. ”ಲೇ ಲೇ ಪಾಪು “ ಎಂದು ನನ್ನ ಮನೆಯಲ್ಲಿ ಪ್ರೀತಿಯಿಂದ ಕರೆಯುವ ಹೆಸರಿನಿಂದ ಕರೆದಾಗ, ನಾನು ಇನ್ನೂ ಖಾರವಾಗಿ “ಯಾರ್ ನೀನು?“ ಎಂದೆ .
ಅಳು ಧ್ವನಿಯಲ್ಲಿ ”ನಾನು ಸುಮಾ ಕಣೇ, ನಮ್ಮ ಮನೆಗೆ ಕಳ್ಳ  ಬಂದಿದಾನೆ. ಮೇಲೆ  ನಡೆದಾಡುವ ಸದ್ದು ಕೇಳಿಸುತ್ತಾ ಇದೆ. ನನ್ನ ಎದೆ ನಡುಗುತ್ತಿದೆ ಹೆದರಿಕೆಯಿಂದ. ಬೇಗ ಬಾರೆ“ ಅಂತ ಮುಸು ಮುಸು ಅಳಲು ಶುರು ಮಾಡಿದಳು.  ಅವಳಿಗೆ ಕಳ್ಳ ಅನ್ನೋ ಆ ಪದ  ಕೇಳಿದರೆ ಮೈ ಬೆವರುತ್ತದೆ.
ಅವಳು ಮಗುವಾಗಿದ್ದಾಗ ಗಲಾಟೆ, ತುಂಟತನ ಮಾಡಿದಾಗೆಲ್ಲಾ  ಕಳ್ಳ ಬಂದು ಎತ್ತಿ ಕೊಂಡು ಹೋಗುತ್ತಾನೆ ನೋಡು  ಅಂತ ಹೆದರಿಸಿ ಹೆದರಿಸಿ, ಅದೇ ಅವಳ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ.
ಆ ವಿಚಾರದಲ್ಲಿ ಅವಳಿಗೆ ಇಷ್ಟು ತಿಳಿ ಹೇಳಿದರೂ ತಾರ್ಕಿಕವಾಗಿ ಯೋಚಿಸಲು ಸಾಧ್ಯವೇ ಆಗಿಲ್ಲ, ಎಷ್ಟು ತಮಾಷೆ,ಬುದ್ದಿವಾದ ಹೇಳಿದರೂ ಅವಳ ಭಯ ಹೋಗಿಲ್ಲ. ಅವಳ ಮನೋಭಯದ ಅರಿವಿರುವ ನಾನು, ನನ್ನ ಪತಿರಾಯನನ್ನ ಎಳೆದುಕೊಂಡು ಆಕೆ ಮನೆಕಡೆ ಹೊರಟೆ 
ಮನೆಬಾಗಿಲು ತಟ್ಟಿ “ನಾನು ಪಾಪು” ಅಂದಮೇಲೆಯೇ ಆಕೆ ನಡುಗುತ್ತ ಬಾಗಿಲು ತೆಗದದ್ದು.

ಮೆತ್ತಗೆ ಒಳಗೆ ಹೋದೆವು. ಮೇಲೆ ಬಾತ್ರೂಮ್ನಲ್ಲಿ ನೀರು ಬಿಟ್ಟಿರುವ ಸದ್ದು, ಸಣ್ಣ ಧ್ವನಿಯಲ್ಲಿ ಹಾಡುವ ಸದ್ದು ಕೇಳಿಸಿತು.
“ನೋಡಿದೆಯಾ ಈ ಕಳ್ಳ ಭಡವ! ಎಷ್ಟು ಕೊಬ್ಬು! ನಮ್ಮ ಬಾತ್ರೂಮ್ನಲ್ಲಿ  ‘ಇಳಿದು ಬಾ ತಾಯೆ ಹರನ ಜಡೆಯಿಂದ‘ ಅಂತ ಹಾಡುತ್ತಿದ್ದಾನೆ,“ ಎಂದು ಮತ್ತೆ ರೋಷಗೊಂಡಳು. ಆಕೆಗೆ ಸ್ವಲ್ಪ ಸಮಾಧಾನ ಮಾಡಿ ಮೊದಲು ನಾಯಿಯನ್ನು ಬಿಟ್ಟೆವು. ಅದು ಬೌ ಅಂತ ಮೇಲೆ ಹೋಗಿ, ೫ ನಿಮಿಷಕ್ಕೇ ಸಂತೋಷವಾಗಿ ವಾಪ್ಪಸ್ಸು ಬಂತು. ”ಕಳ್ಳ,ನಾಯಿಗೆ ಮ್ಯಾಜಿಕ್ ಮಾಡಿದ್ದಾನೆ” ಎಂದು ಹೇಳಿದ ಸುಮಾ ಸ್ವಲ್ಪ ಹೊತ್ತು ಮೌನವಾದಳು. ಮತ್ತೆ “ನನ್ನ ಅಮ್ಮ ಕೊಟ್ಟ ನೆಕ್ಲೆಸ್ನ ಹಾಸಿಗೆ ಒಳಗೆ ಬಚ್ಚಿ ಇಟ್ಟಿದ್ದೆ. ಸೇಫ್ ಡೆಪಾಸಿಟ್ ನಲ್ಲಿ ಇಡಬೇಕು ಅಂತ, ಕಳ್ಳ ಎಲ್ಲ ಒಡವೆಗಳು, ದುಡ್ಡು, ಮದುವೆ ಸೀರೆಗಳು ಎಲ್ಲ ಜಮಾಯಿಸುತಿದ್ದಾನೆ.“ ಎಂದು ಮತ್ತೆ  ಜೋರಾಗಿ ಕಿರಿಚಾಡಿದಳು. ನಾನು ನನ್ನ ಗಂಡನಿಗೆ, ನೀವೊಮ್ಮೆ ಹೋಗಿ ನೋಡಿಯಲ್ಲ, ಧೈರ್ಯವಿದ್ದರೆ ಅಂತ ಬೇಕಂತ ಕೆಣಕಿದೆ. ಆ ಮಾತಿನಿಂದ ಅವರಿಗೆ ಕೊಂಚ ಅಸಮಾಧಾನ ಆಯಿತಾದರೂ ಮರುಕ್ಷಣವೇ ದಬದಬ ಮೆಟ್ಟಿಲೇರಿ ಮಹಡಿಗೆ ಹೋದರು.  ಒಂದಷ್ಟು ಹೊತ್ತು ಸದ್ದೇ ಇಲ್ಲ. ಈಗ ನಮ್ಮಿಬ್ಬರಿಗೂ ನಿಜವಾಗಲೂ ಆತಂಕವಾಯಿತು. ಧೈರ್ಯ ಮಾಡಿ ನಾವಿಬ್ಬರೂ ಮಹಡಿ ಮೇಲೆ ಹೋದೆವು. ಅಲ್ಲಿ ನೋಡಿದರೆ ನನ್ನ ಪತಿರಾಯ ಮತ್ತು ಅರವಿಂದ ಏನು ಆಗಿಲ್ಲ ಅನ್ನೋ ಹಾಗೆ ನಗುತ್ತ ಹರಟೆ ಹೊಡೆಯುತ್ತ  ನಿಂತಿರುವುದನ್ನು ಕಂಡ ಸುಮತಿ ಕೆಂಡಾಮಂಡಲ ಸಿಟ್ಟು ತಾಳಿದಳು. ಸ್ವಲ್ಪ ಹೊತ್ತಿಗೆ ಎಲ್ಲವು ಸರಿಯಾಗಿ ಆಕೆಯೂ ಸಮಾಧಾನ ಗೊಂಡಳು.

ಹಾಗಾದರೆ ಆದದ್ದೇನು? ಅರವಿಂದ ತಿಂಡಿತಿಂದು ಮನೆಗೆ ಬಂದ. ಸುಮಾಳ ಕೋಪದ ಕಾವು ಈ ಮೊದಲೂ ಅನುಭವಿಸಿದ್ದರಿಂದ ಮತ್ಯಾಕೆ ರಗಳೆ ಎಂದು ಹಿಂದಿನ ಬಾಗಿಲಿನಿಂದ ಮನೆಗೆ ನುಸುಳಿಕೊಂಡ. ಆರಾಮವಾಗಿ ಸ್ನಾನ ಮಾಡಿ ನಿದ್ರೆಮಾಡಲು ತಯಾರಿ ನಡುಸುತಿದ್ದ . ಆದರೆ ಪಾಪ! ಸುಮಾಳ ಬಾಲ್ಯದ ಕಳ್ಳನ ಕುರಿತು ಇದ್ದ ಹೆದರಿಕೆಯ ಕೆಂಡ ಕೆದಕಿದ್ದ.
ಈ ಘಟನೆಯನ್ನು ಈಗಲೂ ನೆನೆಸಿಕೊಂಡು ನಾವೆಲ್ಲಾ ನಗುತ್ತೇವೆ. ಸುಮಾ ಮಾತ್ರ ” ಇವತ್ತಿಗೂ ನನಗೆ ಕಳ್ಳರ ಬಗ್ಗೆ ವಿಪರೀತ ಭಯ!
ದಯವಿಟ್ಟು ನನ್ನ ಗಂಡನಿಗೆ ಹೇಳಬೇಡಿ.” ಎಂದಾಗ ನಾವೆಲ್ಲ ನಗೆಗಡಲಲ್ಲಿ ತೇಲುತ್ತೇವೆ.

ಕಳ್ಳ ಬಂದ – ಕ್ಯಾಮರಾ ಹೋತು – ವಾಪಸ್ ಬಂತು!

ಶ್ರೀವತ್ಸ ದೇಸಾಯಿ ಅವರ ಅನನ್ಯ ಅನುಭವ ಕಥನ.

ಆಘಾತ -1 – ಕಳುವು

ಇದು ಎರಡು ದಶಕಗಳ ಹಿಂದಿನ ಘಟನೆ. ಆಗ ನಮ್ಮ ಮನೆಗೆ ಬರ್ಗ್ಲರ್ ಅಲಾರ್ಮ್ ಇರಲಿಲ್ಲ. ನನಗೆ ವಿಡಿಯೋ ಕ್ಯಾಮರಾದ ಹವ್ಯಾಸ ಶುರುವಾಗಿತ್ತು. ಶರತ್ಕಾಲದಲ್ಲಿ ಗಿಡ ಮರಗಳ ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತಿದ್ದವು. ಆ ಮಧ್ಯಾಹ್ನ ಅದರ ಶೂಟಿಂಗ್ ಮಾಡಿ ಮನೆಯಲ್ಲಿ ಅ ವಜ್ಜೆಯ ಕ್ಯಾಮರಾ ಇಟ್ಟು ಶಾಲೆಯಿಂದ ನನ್ನ ಹನ್ನೆರಡು ವರ್ಷದ ಮಗಳನ್ನು ಕರೆದುಕೊಂಡು ಬರಲು ಸ್ಕೂಲಿಗೆ ಓಡಿದೆ. ಮನೆಗೆ ಬಂದು ನೋಡುತ್ತೇನೆ, ತುಡುಗು ಆಗಿತ್ತು. ತೋಟದ ಕಡೆ ಮುಖಮಾಡಿದ್ದ ಕಿಡಕಿಯ ಗಾಜನ್ನು ಒಡೆದು ಒಳಗೆ ಬಂದು ನನ್ನ ಬೆಡ್ರೂಮಿನಲ್ಲಿಟ್ಟಿದ್ದ ಆ ಕ್ಯಾಮರಾ, ಮತ್ತು ಕೆಲ ಸಾಮಾನುಗಳನ್ನು ನನ್ನ ಆ ಅರ್ಧ ಗಂಟೆಯ ಅನುಪಸ್ಥಿತಿಯಲ್ಲಿ ಕದ್ದು ಮಾಯವಾಗಿದ್ದ ಆ ಕಳ್ಳ. ಆಗ ಹೆರಾಯಿನ್ ಮತ್ತಿತರ ಮಾದಕ ದ್ರವ್ಯಗಳ ಅಡಿಕ್ಟ್ ಆಗಿದ್ದ ಕಳ್ಳರ ಸಂಖ್ಯೆ ಹೆಚ್ಚಾಗಿತ್ತು ಅಂತ ಓದಿದ್ದೆ. ಮನೆಗೆ ಬಂದ ಕೂಡಲೆ ಮೊದಲು ಮಗಳಿಗೆ ತಿಂಡಿ ಕೊಡಬೇಕೆಂದು ನನ್ನ ಮನದ ತಲ್ಲಣ-ಕಳವಳವನ್ನು ತೋರಗೊಡದೆ ಕಳವಾದದ್ದು ಗೊತ್ತಾಗದೆ ತನ್ನ ಕೋಣೆಗೆ ಹೋಗಿದ್ದ ಅವಳನ್ನು ಕರೆದು ಸುದ್ದಿ ಹೇಳಿದೆ.

ಆಘಾತ -2  ಸ್ಥಿತಪ್ರಜ್ಞ

ಅವಳ ತಾಯಿ ಇನ್ನೂ ಕೆಲಸದಿಂದ ಬಂದಿರಲಿಲ್ಲ. ನಾನೇ ಉಪಹಾರ ಕೊಡುತ್ತ ಸ್ಥಿತಪ್ರಜ್ಞನಂತೆ ’ಬ್ರೆಕ್ಕಿನ್ ನ್ಯೂಸ್’ (breaking news) ಹೇಳಿದೆ. We are burgled ಅಂತ. ವಿನೋಬಾ ಭಾವೆಯವರು ಶಿವಣಿ ಜೈಲಿನ ರಾಷ್ಟ್ರ ಭಕ್ತ ಕೈದಿಗಳಿಗೆ ಸಂಜೆಯ ಉಪನ್ಯಾಸ ಕೊಡುತ್ತಿದ್ದರಂತೆ ಭಗವದ್ಗೀತೆಯ ಮೇಲೆ. ಅವರ ಬೇಡಿಕೆಯ ಮೇರೆಗೆ ಎಲ್ಲ ಉಪನ್ಯಾಸಗಳನ್ನು ತಮ್ಮ ‘ಸ್ಥಿತಪ್ರಜ್ಞ ದರ್ಶನ’ ಪುಸ್ತಕದಲ್ಲಿ ಬರೆದಿದ್ದರು. ಅದನ್ನು ನನ್ನ ಅಜ್ಜ ಕನ್ನಡೀಕರಿಸಿದ್ದರು. 2,700 ಸಲ ಅಜ್ಜ ಭಗವದ್ಗೀತೆಯನ್ನು ಓದಿದ್ದರಂತೆ. ನಾನು ಆಗ ತಾನೆ ಮೊದಲ ಸಲ ಸ್ಥಿತಪ್ರಜ್ಞನ ಲಕ್ಷಣಗಳನ್ನು ಓದಲಾರಂಭಿಸಿದ್ದೆ (ಅಧ್ಯಾಯ 2, ಶ್ಲೋಕಗಳು 58-72). ಮಗಳು ಏನೇನೆಲ್ಲ ಹೋಗಿದೆ ಅಂತ ಕೇಳಿದಳು. ಬಹಳ ದಿನಗಳಿಂದಲೂ ನನಗೆ ಹೊಸತೊಂದು ಕ್ಯಾಮ್ ಕಾರ್ಡರ್ ಕೊಳ್ಳುವ ಮನಸ್ಸಿದೆ ಎಂಬುದು ಅನ್ನುವದು ಅವಳಿಗೂ ಗೊತ್ತಿತ್ತು. ಆಗಾಗ ತಮಾಷೆಗೆಂದು ಅದು ಕಳೆದು ಹೋದರೆ ಇನ್ಶೂರನ್ಸ್ ನಲ್ಲಿ ನನಗೆ ಹೊಸತು ಸಿಕ್ಕೀತೆಂದು ಹೇಳಿದ್ದು ನೆನಪಿಸಿಕೊಂಡು, ’ಇದೇನು ನಾಟಕವೋ? Have you set it up for insurance?’ ಅನ್ನಬೇಕೇ? ನಾನು ಕಳಕೊಂಡಿದ್ದಕ್ಕಿಂತ ಈ ಮಾತು ಹೆಚ್ಚು ಆಘಾತಕಾರಿಯಾಗಿತ್ತು! ನನ್ನ ಮಗಳೂ ಸಹ ನಂಬಲಾರಳೆ ನನ್ನ ಪರಿಸ್ಥಿತಿಯನ್ನು? ಲೌಂಜಿಗೆ ಕರೆದುಕೊಂಡು ಹೋಗಿ ಒಡೆದು ಅರ್ಧ ತೆರೆದ ಕಿಡಕಿ ಮತ್ತು ನೆಲದಮೇಲೆ ಚೆಲ್ಲಾಪಿಲ್ಲಿಯಾಗಿ ಪಸರಿಸಿದ ಗಾಜಿನ ಚೂರುಗಳನ್ನು ತೋರಿಸಿದೆ. ಇನ್ನು ಮುಂದೆ ಅವಳ ಅಮ್ಮನನ್ನು ನಂಬಿಸುವದು ಉಳಿದಿತ್ತು! ಪೋಲೀಸಿನವರಿಗೆ ಫೋನು ಮಾಡಿ ವಿವರ ಕೊಟ್ಟೆ. ಏನೇನೆಲ್ಲ ಹೋಗಿದೆ ಅಂತ ವರದಿ ಮಾಡಿದೆ. ಅವರು ಶಾಲೆಯ ಟೈಮ್ ನಲ್ಲೇ ಇಂಥ ಕಳುವುಗಳ ಹಾವಳಿ ಇರುತ್ತದೆ. ಯಾಕಂದರೆ ಕಳ್ಳರಿಗೆ ಗೊತ್ತು, ಆ  ಸಮಯದಲ್ಲಿ ಮನೆಯಲ್ಲಿ ಯಾರೂ ಇರುವುದಿಲ್ಲ ಅಂತ. ಹೊಂಚು ಹಾಕಿ ಕಾಯುತ್ತಿರುತ್ತಾರೆ, ಅಲಾರ್ಮ್ ಇಲ್ಲದ ಮನೆಗಳ ಬೇಟೆಯಾಡುತ್ತಿರುತ್ತಾರೆ. ಅದಕ್ಕೇ ಬರ್ಗ್ಲರ್ ಅಲಾರ್ಮ್ ಇಟ್ಟುಕೊಳ್ಳ ಬೇಕು ಇತ್ಯಾದಿ ಉಪದೇಶವನ್ನು ತಾಳ್ಮೆಯಿಂದ ಕೇಳಿಸಿಕೊಂಡೆ. ನನ್ನ ವೈಯಕ್ತಿಕ ವಿವರಗಳನ್ನು ಕೇಳಿ ಬರೆದು ಕೊಂಡು ನನ್ನ ವಿಳಾಸಕ್ಕೆ ಫಿಂಗರ್ ಪ್ರಿಂಟ್ ಎಕ್ಸ್ಪರ್ಟ್ ಮತ್ತು ಡಿಟೆಕ್ಟಿವ್ ಬರುತ್ತಾರೆ ಅಂತ ಭರವಸೆ ನೀಡಿದ ಸ್ವಿಚ್ ಬೋರ್ಡ್ನಲ್ಲಿ ಕುಳಿತಿದ್ದ ಪೋಲೀಸ್ ಆಫೀಸರ್.

ಆಘಾತ -3

ಅಷ್ಟರಲ್ಲಿ ಕೆಲಸದಿಂದ ನನ್ನ ಹೆಂಡತಿ ಬಂದಳು. ಗಾಜಿನ ಚೂರುಗಳನ್ನು ನೋಡಿ ಹೌಹಾರಿದಳು. ನಗುತ್ತ ಬಂದವಳ ಮುಖಚರ್ಯೆಯೇ ಬದಲಾಯಿತು. ಏನಾಯಿತು ಅಂತ ಕೇಳಿದಳು. ಎಲ್ಲ ಹೇಳಿದೆ. ಏನು ಕಳಕೊಂಡೆ, ಅಂದಳು. ಯಾದಿ ಒಪ್ಪಿಸಿದೆ. ಮತ್ತೇನು ಅಂದಳು. ಈಗಾಗಲೇ ಬುದ್ಧಿ ಸ್ವಲ್ಪ ಸ್ತಿಮಿತ್ತಕ್ಕೆ ಬಂದು ಮತ್ತೆರಡು ಸಲ ಕಪಾಟು, ಡ್ರಾ ಎಳೆದು ಎಲ್ಲ ಹುಡುಕಾಡಿದ್ದೆ. ಸ್ವಲ್ಪ ಕ್ಯಾಶ್ ಹೋಗಿದೆ, ಅಂದೆ. ’’ಎಲ್ಲ ಅಲ್ಲಲ್ಲೇ ಒಗೆದಿರುತ್ತೀ. ನಿನಗೆ ನೂರು ಸಲ ಹೇಳಿದ್ದೆ, ಬರ್ಗ್ಲರ್ ಅಲಾರ್ಮ್ ಹಾಕಿಸು ಅಂತ, ಕೇಳಿದೆಯಾ?” ಪೂಜೆ ಶುರು. ”ಮತ್ತೆ ಎಲ್ಲ ಸರಿಯಾಗಿ ನೋಡಿದೆಯಾ?” ಗೋಣು ಅಲ್ಲಾಡಿಸುತ್ತ ಹೇಳಿದೆ: ”ನಮ್ಮ ಆಸ್ಪತ್ರೆಯ ಶತಮಾನೋತ್ಸವದ ಕಂಚಿನ ಮೆಡಲ್ ಕಾಣವಲ್ಲದು …’’ ಅಂತ ಮೆಲ್ಲಗೆ ಎಳೆಯಲಾರಂಭಿಸಿದೆ. ”ಎಲ್ಲಿ ಒಗೆದಿದ್ದೀಯೊ. ನಿನ್ನ ಅಶಿಸ್ತು ನನಗೆ ಗೊತ್ತಿಲ್ಲವೆ?’’ ಆಪಾದನೆ ನಂಬರ್  ನೂರಾ ಒಂದು. ”ಸರಿ ಏನಾದರೂ ತಿಂದು, ಕುಡಿ. ಆ ಇನ್ಸ್ಪೆಕ್ಟರ್ ಯಾವಾಗ ಬರುತ್ತಾನೋ, ಶನಿ.” ಈಗ ಪೂಜೆ ಆ ನಿಷ್ಪಾಪಿಯತ್ತ ಡೈವರ್ಟ್ ಆಗುತ್ತಿದೆ ಅನಿಸಿತು. ಕತ್ತಲಾಗುತ್ತಿದ್ದಂತೆ ಸ್ವಲ್ಪೇ ಹೊತ್ತಿನಲ್ಲಿ ಆತ ಬಂದ. ಒಳಗೆ ಕಾಲಿಡುತ್ತಿದ್ದಂತೆಯೇ. ’’ನೀವು ಸುದೈವಿಗಳಲ್ಲವೇ” ಅಂದ. ನನಗೋ ಮೊದಲೇ ರೇಗಿ ಹೋಗಿತ್ತು. ಇದನ್ನು ಕೇಳಿ ಇದೆಂಥ ನಿರ್ದಯಿ ಈತನ ಮಾತು ಅಂತ ನೆತ್ತಿಗೇರಿತು.”ಇದೇನು ಇಂದು ಕನ್ನ ಹಾಕಿದ ಮನೆಗೆ ಬಂದು ಹೀಗೆ ಹೇಳುವದೇ?’’ ಅಂತ ಖಾರವಾಗಿಯೇ ಕೇಳಿದೆ. ಆಮೇಲೆ ಅರ್ಥವಾಯಿತು ಅವನಂದುದರ ತಾತ್ಪರ್ಯ. ಅತ್ತ ಬೆರಳ ಗುರುತುಗಳ ಪ್ರತಿ ತೊಗೊಳ್ಳಲು ಕಿಡಕಿಗಳಿಗೆ ಎಲ್ಲ ಗ್ಲಾಸು, ಬಾಗಿಲು, ಗೋಡೆ ತುಂಬ ಬಿಳಿ ಪುಡಿಗಳನ್ನು ಪಸರಿಸಿ, ಇನ್ನೂ ಕತ್ತಲೆ ಮಾಡುವುದರಲ್ಲಿ ನಿರತಳಾಗಿದ್ದ ಸಹೋದ್ಯೋಗಿಯತ್ತ ನೋಡುತ್ತ ಎಲ್ಲ ಸರಿಯಾಗಿ ಮಾಡು ಅಂತ ಹೇಳುತ್ತ ನಮ್ಮ ಮನೆಯನ್ನು ದೋಚಿದ ಕಳ್ಳ ಈಗಾಗಲೆ ಅರೆಸ್ಟ್ ಆಗಿ ಲಾಕಪ್ಪಿನಲ್ಲಿದ್ದಾನೆ ಅನ್ನುವ ಸುದ್ದಿ ಹೇಳಿದ. ನನಗೆ ನಂಬಲೇ ಆಗಲಿಲ್ಲ. ಅದು ಹೇಗೆ ಇಷ್ಟು ಬೇಗನೆ ಅಂದೆ. ನನಗೆ ಆ ವಿಭಾಗದವರು ಹೇಳಿದ್ದೇನೆಂದರೆ ನಿಮ್ಮ ಮನೆಯಲ್ಲಿ ಕದ್ದು ಇಲ್ಲಿಂದ ಹೊರಟವ ಊರ ಮಧ್ಯದಲ್ಲಿ ಸಿಕ್ಕಿ ಬಿದ್ದ. ಆತನ ಕಾರಿನಲ್ಲಿ ಸಿಕ್ಕ ಸಾಮಾನುಗಳಲ್ಲಿ ನಿಮ್ಮ ಕ್ಯಾಮ್ ಕಾರ್ಡರಿನ ಮೇಲೆ ನೀವು ಢಾಳಾಗಿ ಇನ್ವಿಸಿಬಲ್ ಇಂಕ್ ಪೆನ್ನಿನಲ್ಲಿ ಬರೆದ ಪೋಸ್ಟ್ ಕೋಡ್ ಕಂಡು ನಿಮ್ಮದೆಂದು ಗುರುತಿಸಿದ್ದೇವೆ, ಅಂದ. ಆತ ಶಹಭಾಶ್ ಗಿರಿಗೆ ಕಾಯುತ್ತಿದ್ದ. ಅದೆಂಥ ನಿರಾಶೆ ನನಗೆ! ಹೊಸ ಕ್ಯಾಮರಾದ ಆಸೆಗೆ ಅಲ್ಲೇ ತಿಲಾಂಜಲಿ. ಆದರೂ ಸ್ಥಿತಪ್ರಜ್ಞನಂತೆ ಮುಖದಲ್ಲಿ ಅದನ್ನು ತೋರಗೊಡದೆ ’’ವಂಡರ್ ಫುಲ್! ನಿಮ್ಮ ಪತ್ತೇದಾರಿಗೆ ಅಭಿನಂದನೆಗಳು,’’ ಅಂತ ಕೈಕುಲುಕಿದೆ. (ಆಗ ಅದಕ್ಕೆ ಪರವಾನಗಿ ಇತ್ತು!). ಪೋಲೀಸ್ ಸ್ಟೇಶನ್ನಿಗೆ ನಾಳೆ ಬಂದು ರಿಪೋರ್ಟಿಗೆ ಸಹಿ ಮಾಡಿ, ರೆಡಿ ಮಾಡಿದ್ದರೆ ನಿಮ್ಮ ವಸ್ತುಗಳನ್ನು ಪಡೆದು ರಿಸೀಟ್ ಕೊಟ್ಟು ಹೋಗ ಬಹುದು ಅಂದಾಗ ತಾಯಿ ಮಗಳು ಕಣ್ಣು ಮಿಟುಕಿಸುತ್ತ ನನ್ನತ್ತ ನೋಡಿ ನಕ್ಕಿದ್ದು ಮರೆಯುವಂತಿಲ್ಲ.

ಆಮೇಲೆ ತಿಳಿದ ವಿಚಾರವೆಂದರೆ ಈ ಡ್ರಗ್ ವ್ಯಸನಿಗಳನ್ನು ಕಾಯದೇ ಪ್ರಕಾರ ಲಾಕಪ್ ಮಾಡುವದು ಸುಲಭವಲ್ಲವಂತೆ. ಅದಕ್ಕೇ ಅವರಿಗೆ ಗೊತ್ತಾಗಲಾರದಂತೆ ಅವರ ಮೇಲೆ ಕಣ್ಣು ಇಟ್ಟು ಅವರ ಬೆನ್ನು ಹತ್ತಿ ಕೈಗೆ ಸಿಕ್ಕಾಗ ವಿಚಾರಸುತ್ತಾ ಕಾರಿನಲ್ಲಿ ಕದ್ದ ಮಾಲುಗಳು ಸಿಕ್ಕಾಗ ಕಳುವಿನ ಅಪರಾಧಕ್ಕಾಗಿ ಅವರನ್ನು ಜೇಲಿಗೆ ಕಳಿಸಿ ಕೆಲವು ವಾರ, ಅಥವಾ ತಿಂಗಳಾದರೂ ಸಮಾಜದಿಂದ ದೂರ ಇಡುವ ಗತ್ತು ಇದು, ಅಂತ. ನನ್ನ ದುರದೃಷ್ಟ ನಮ್ಮ ಮನೆಯ ಕಳ್ಳನನ್ನು ಹಿಂಬಾಲಿಸಿರಬಹುದಾದ ಪೋಲೀಸರಿಗೆ ಕಳುವಿನ ಮಾಲು ಆ ದಿನವೇ ಸಿಗಬೇಕೇ? ಅದನ್ನೇ ಆ ಡಿಟೆಕ್ಟಿವ್ ಹೇಳಿದ್ದು.

 ಹಿನ್ನುಡಿ:

ನಮ್ಮ ವಿಡಿಯೋ ಕ್ಲಬ್ಬಿನ ’’EDIT” ಎನ್ನುವ ನಿಯತಕಾಲಿಕ ಪತ್ರಿಕೆಗೆ ಲೇಖನವೊಂದನ್ನು ಬರೆದೆ: ‘When a copper (ಪೋಲೀಸ) didn’t deserve a Gold (ಮೆಡಲ್)!’ ಬೆರಳ ಗುರುತುಗಳ ಬಿಳಿ ಹುಡಿಯನ್ನು ಮೆತ್ತಿದ ಆ ಕ್ಯಾಮ್ ಕಾರ್ಡರ್ ನನಗೇ ವಾಪಸ್ ಬಂದು ಇನ್ನೆಷ್ಟೋ ದಿನಗಳ ವರೆಗೆ ನನ್ನ ಹತ್ತಿರ ಇತ್ತು. ಮೋಬೈಲ್ ಫೋನ್ ಕ್ಯಾಮರಾ ಬರುವ ವರೆಗೆ ಎರಡು ಮೂರು ಬೇರೆ ಬೇರೆ ವಿಡಿಯೋ ಕ್ಯಾಮರಾ ಬದಲಾಯಿಸಿದ್ದೆ.

ಈಗ ಮನೆಗೆ ಬರ್ಗ್ಲರ್ ಅಲಾರ್ಮ್ ಇದೆ. ನನ್ನ ಕಳೆದು ಹೋಗಿದ್ದ ಆ ಅಸ್ಪತ್ರೆಯ ಸ್ಮರಣಾರ್ಥಕ ಮೆಡಲ್ ಮನೆಯಲ್ಲೇ ಸಿಕ್ಕಿದೆ! ಮೂರನೆಯ ಸುತ್ತಿನ ಗೀತಾ ಅಧ್ಯಯನದಲ್ಲಿ ನಾನು ಇನ್ನೂ ಎರಡನೆಯ (ಸ್ಥಿತಪ್ರಜ್ಞನ) ಅಧ್ಯಾಯದ ಅಧ್ಯಯನದಲ್ಲೇ ಇದ್ದೇನೆ. ಇನ್ನು ಬರೀ ಎರಡು ಸಾವಿರ ಚಿಲ್ಲರೆ ಸಲ ಅಷ್ಟೇ ಉಳಿದಿದೆ!

ಶ್ರೀವತ್ಸ ದೇಸಾಯಿ

ಡೋಂಕಾಸ್ಟರ್