ಆಶಾವಾದ – ಡಾ||ಸತ್ಯವತಿ ಮೂರ್ತಿ

ಆತ್ಮೀಯ ಓದುಗರೇ!!!
ಈ ಲೋಕದಲ್ಲಿ ಪ್ರತಿಯೊಬ್ಬ ಮಾನವ ಜೀವಿಯು ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಆಶಾವಾದಿಯಾಗಿ ಜೀವಿಸುತ್ತಾನೆ ಅಲ್ಲವೇ ? ಆಶಾವಾದದ ಕಿರಣವನ್ನು ನಮ್ಮ ಈ ವಾರದ ಸಂಚಿಕೆಯಲ್ಲಿ ಡಾ||ಸತ್ಯವತಿ ಮೂರ್ತಿಯವರು ತಮ್ಮ ಮೇಷ್ಟ್ರು ಜಿ.ವಿ ಅವರ ವಿರಚಿತ ‘ಹೋಪ್’ ಎಂಬ ಕವನದ ಭಾವಾನುವಾದ ‘ಆಶಾವಾದ’ ಶೀರ್ಷಿಕೆಯ ಕವನವನ್ನು ನಿಮ್ಮ ಮುಂದಿಟ್ಟಿದ್ದಾರೆ. ಓದಿ ಪ್ರತಿಕ್ರಿಯಿಸಿ. -ಸವಿ. ಸಂ

ಚಿತ್ರ ಕೃಪೆ : ಗೂಗಲ್

ಜೀವನ ತೋಟದ ಉಸ್ತುವಾರಿಯ ಬಂಟರು ನಾವು

ದೊರೆತಿಹುದೆಮಗೆ ನಾನಾತೆರನ ಕಾಳುಗಳ ಬಟ್ಟಲು

ನಮ್ಮದೇ ತೋಟವಿದು ನಮ್ಮಂತೆ ಬೆಳೆಯಬಹುದು

ಜೀವನವ ಸೊಗಯಿಸಲು ನಮ್ಮದೇ ಅಳತೆಗೋಲು

ಶಿಶಿರ ಋತುಬರಬಹುದು ಅಂಜಿಕೆಯ ತರಬಹುದು

ನೆನಪಿರಲಿ ಮುಂದಿಹುದು ವಸಂತ, ಶ್ರಮಿಸುವುದ ಬಿಡದಿರು

ತಾಳಬೇಕು ತಾಳಿಗೆಲ್ಲಬೇಕು , ಪಡೆಯಬೇಕು ಬಯಸಿದು

ದುಖಿನ್ನನಾಗದೆ ’ಸೋವಾಟ್?’ಎನುತ ನಗುತ ಮುನ್ನುಗ್ಗುತಿರು


ಪ್ರತಿಕೂಲದಲಿ ನೆನೆ ವಾಲ್ಮೀಕಿಯ ’ಮರಾ’ ದಲ್ಲಿದ್ದ’ರಾಮ’

ನೆಗೆತದಲಿ ನುರಿತವಗೆ ಉಂಟು ತಡಕೆ ಪಂದ್ಯದ ಜಯ

ಬಾಗಿಲೊಂದು ಮುಚ್ಚಿದೆಅಷ್ಟೆ, ತೆರೆದಿರುವುವಸೀಮ

ನೀರ ಕೊರತೆಯಲಿ ನೆಲವಗೆದು ತೆಗೆವಾ ತೋಳ್ಬಲಕೆ ಜಯ


ಹುಟ್ಟದಿದ್ದರೇನು ಅಮಿತ ಭಾಗ್ಯವ ಹೊತ್ತು

ಆತ್ಮನಂಬಿಕೆಯಿರೆ ಒಣಮರವು ಚಿಗುರುವುದು

ಸೋತರೇನು ತರಬಹುದದೇ! ಗೆಲುವಿನ ರಾಗದ ಸೊತ್ತು

 ನಾಗರ ಹೆಡೆಯಲೂ ಮಣಿಯ ಕಾಣ್ವ ಶಕ್ತಿ ಮೂಡುವುದು


ನಿರಾಶೆಯನು ಬದಿಗಿಡು, ಆಶಾವಾದಿಯಾಗಿರು ಸದಾ

ಕಮರಿಯಲಿ ಬಿದ್ದರೂ ಮೆಲೇರು ಭರವಸೆಯ ಹಗ್ಗಹಿಡಿದು

ಧೈರ್ಯದಲಿ ಮುನ್ನುಗ್ಗು ,ಹೊಸ ಹಾದಿ, ಬೆಳಕು ನಿನಾದ 

ನೂರಾರು ಕವಲುಗಳು , ಒಂದೊಂದೂ ಉಜ್ವಲವಹುದು

ನೆಲಕಂಟಿದ ಮರವಾಗದಿರು, ಅಸಹಾಯತೆಗೆ ಶರಣಾಗದಿರು

ಓಡಲು ಕಾಲುಗಳಿಗೆ ಬಲವುಂಟು, ರೆಕ್ಕೆಗಳುಂಟು ಹಾರಲು

ಹುಟ್ಟುಸ್ವತಂತ್ರ ನೀನು, ಹಿಡಿದಿಡುವ ಬಂಧನಕೆ ಬೆದರದಿರು

ಜಯದೇವಿಯಪ್ಪುವಳು ಸಾಧನೆಯ ಹಾದಿಯಲಿ ನೀನಿರಲು


-ಡಾ|| ಸತ್ಯವತಿ ಮೂರ್ತಿ

4 thoughts on “ಆಶಾವಾದ – ಡಾ||ಸತ್ಯವತಿ ಮೂರ್ತಿ

  1. ಸುಂದರ ಸಂದೇಶದ ಕವನ. ಪ್ರಾಸಬದ್ಧವಾಗಿದ್ದರೆ ಮತ್ತು ಛಂದೋಬದ್ಧವಾಗಿದ್ದರೆ ಅಮಿತಾ ಅವರು ಸ್ವರಸಂಯೋಜನೆಯನ್ನು ಮಾಡಿ ಹಾಡಿಬಿಡುತಿದ್ದರು. – ಕೇಶವ

    Like

  2. ಸತ್ಯವತಿಯವರ ಈ ವಾರದ ಅನುವಾದಿತ ಕವಿತೆ “ಆಶಾವಾದ“ ದಲ್ಲಿ ‘ಹೋಪ್‘ ಇದೆ, ಭಾಷೆಯ ಸೊಗಡು, ಹಿಡಿತದಿಂದ ಅದನ್ನು ಮುಟ್ಟಿಸುತ್ತದೆ. ಅನುವಾದಗಳ ಅನಿರ್ವಾರ್ಯತೆಯಿಂದ ಒಮ್ಮೊಮ್ಮೆ ಕಾಣಿಸದ ಮೂಲದ ಕೆಲವು ಸೂಕ್ಷ್ಮತೆಗಳನ್ನರಿಯಲು ಇಂಗ್ಲಿಷ್ ಮೂಲವನ್ನು ಇಲ್ಲಿ ಪೋಸ್ಟ್ ಮಾಡಬಹುದೇ?

    Like

Leave a comment

This site uses Akismet to reduce spam. Learn how your comment data is processed.