ರಾಷ್ಟ್ರಕವಿ ಜಿಎಸ್ಎಸ್ – ೯೫: ನುಡಿ-ಸ್ಮರಣೆ

ಸಹೃದಯರೆ, ನಾಳೆ ರಾಷ್ಟ್ರಕವಿ ಡಾ. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ (ಜಿಎಸ್ಎಸ್) ಅವರ ೯೫ನೆಯ ಜನ್ಮದಿನ. ಕನ್ನಡ ನವೋದಯ ಸಾಹಿತ್ಯದ ಆಧಾರಸ್ತಂಭಗಳಲ್ಲೊಬ್ಬರಾದ ಜಿಎಸ್ಎಸ್ ಕರ್ನಾಟಕದ ಹೆಸರಾಂತ ಕವಿಗಳಲ್ಲೊಬ್ಬರು, ಲೇಖಕರು, ಸಂಶೋಧಕರು. ಅವರ ಜನ್ಮದಿನದಂದು, ಅವರ ಸಾಹಿತ್ಯಿಕ ಕೊಡುಗೆಯನ್ನು ನೆನೆಯುವ ಮೂಲಕ ಮಹಾಕವಿಯ ಸ್ಮರಣೆ ಮಾಡೋಣ, ಬನ್ನಿ. ನಮ್ಮ ಅನಿವಾಸಿ ಯುಕೆ ಬಳಗದ ಸದಸ್ಯೆ-ಸದಸ್ಯರು, ತಮ್ಮಿಷ್ಟದ ಕವನಗಳನ್ನು ಆಯ್ಕೆ ಮಾಡಿಕೊಂಡು, ಹಾಡಿ, ಆ ಮೂಲಕ ಕವಿ ಜಿಎಸ್ಎಸ್ ಅವರಿಗೆ ನುಡಿ-ನಮನಗಳನ್ನು ಅರ್ಪಿಸಿದ್ದಾರೆ. ಆ ಕವನ-ಗಾಯನದ ವಿಡಿಯೊಗಳನ್ನು ಈ ಕೆಳಗೆ ಹಂಚಿಕೊಂಡಿದ್ದೇವೆ. ತಾವೆಲ್ಲರೂ ಅವನ್ನು ನೋಡಿ, ಆನಂದಿಸಿ, ಅನಿವಾಸಿ ಬಳಗದ ಅರ್ಪಣೆಯಲ್ಲಿ ಭಾಗಿಯಾಗಬೇಕೆಂದು ಕೋರುವೆ. ಈ ಪ್ರಸ್ತುತಿಯನ್ನು ಹುಟ್ಟುಹಾಕಿದ ಅಮಿತಾ ರವಿಕಿರಣ ಅವರಿಗೂ, ಕೊಟ್ಟ ಸಮಯದಲ್ಲೇ ಹಾಡಿ-ಅನಿಸಿಕೆ ಬರೆದು ಕಳಿಸಿದ ಅನಿವಾಸಿಯ ಕುಟುಂಬದವರಿಗೂ ಮತ್ತು ಮಾರ್ಗದರ್ಶನ ಕೇಳಿದಾಗ ಬೇಸರೆಯದೆ ಸಹಾಯಮಾಡಿದ ಶ್ರೀವತ್ಸ ದೇಸಾಯಿಯವರಿಗೂ ನಾನು ಆಭಾರಿ. – ಎಲ್ಲೆನ್ ಗುಡೂರ್ (ಸಂ.)

ಚಿತ್ರಕೃಪೆ: ಕರ್ನಾಟಕ.ಕಾಮ್ (ಮೂಲ: ಪ್ರಜಾವಾಣಿ)

*************************************************************************************************

ಶ್ರೀಮತಿ ಅನು ಆನಂದ್

ಎದೆ ತುಂಬಿ ಹಾಡಿದೆನು – ಈ ಕವನವನ್ನ ಮೊದಲ ಬಾರಿಗೆ ನಾನು ಕೇಳಿದ್ದು, ನಾನು middle school ನಲ್ಲಿ ಇದ್ದಾಗ. ಗಣೇಶನ ಹಬ್ಬವನ್ನ ನಮ್ಮ road ನಲ್ಲಿ ದೊಡ್ಡ ಪೆಂಡಾಲ್ ಹಾಕಿ, ೧೦ ದಿನ, ಬಹಳ ಅದ್ಧೂರಿಯಿಂದ ಆಚರಿಸ್ತಿದ್ವಿ. ಆಗ, ಪ್ರತಿ ವರುಷ, ಒಂದು ಸಂಜೆಯ ಕಾರ್ಯಕ್ರಮ ಮೈಸೂರ್ ಅನಂತಸ್ವಾಮಿ ಅವರ ತಂಡದಿಂದ ತಪ್ಪದೆ ನಡೆಯುತ್ತಿತ್ತು. ಸ್ವತಃ ಮೈಸೂರ್ ಅನಂತಸ್ವಾಮಿ ಅವರೇ ಈ ಕವನವನ್ನ ಹಾಡಿದ್ದನ್ನ, ಆ ಚಿಕ್ಕ ವಯಸ್ಸಿನಲ್ಲಿ ಕೇಳಿದ ನನಗೆ, ಈ ಕವನ, ಬಾಲ್ಯದ ಸವಿ ನೆನಪುಗಳನ್ನು ತರುತ್ತದೆ. ಹೃದಯದಾಳದಿಂದ ಹೊಮ್ಮಿದ ಸರಳ, ಸುಂದರ ಪದಗಳು, ಹೇಳಲು, ಕೇಳಲು ಆನಂದ! GSS ಅವರನ್ನ ನೋಡುವ ಭಾಗ್ಯ ನನಗೆ ಸಿಗಲಿಲ್ಲ. ಆದರೆ ಅವರ ರಚನೆಯಯನ್ನು ಮೈಸೂರ್ ಅನಂತಸ್ವಾಮಿಯವರಿಂದ ಕೇಳಿದ ಧನ್ಯತಾಭಾವ ಮನಸ್ಸಿಗೆ ಹಿತವನ್ನು ನೀಡುತ್ತದೆ. ನಂತರದ ನನ್ನ ಜೀವನದಲ್ಲಿ ಈ ಕವನವನ್ನ ಬಹಳಷ್ಟು ಮಂದಿ ಹಾಡಿರುವುದನ್ನು ಕೇಳಿ ಸಂತೋಷಪಟ್ಟಿದ್ದೇನೆ. ಆದರೆ ಬಾಲ್ಯದ ಆ ನೆನಪು ಸದಾ ಹಸಿರು, ಸದಾ ಸುಮಧುರ!!

ನಾನೂ ನನ್ನ ಹೃದಯ ತುಂಬಿ, ಸವಿ ನೆನಪುಗಳೊಳಗೂಡಿ ಆ ಕವನವನ್ನ ಹಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಕಿವಿ ಮುಚ್ಚದಂತಾಗದಿರಲಿ ಎಂಬುದೇ ನನ್ನ ಆಶಯ!

****************************************************************************************************

ಶ್ರೀಮತಿ ರಮ್ಯಾ ಭಾದ್ರಿ

‘ಹಾಡು ಹಳೆಯದಾದರೇನು ಭಾವ ನವನವೀನ’ ಎಂದು ಬರೆದ ನಮ್ಮ ನೆಚ್ಚಿನ ರಾಷ್ಟ್ರಕವಿ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ (ಜಿಎಸ್ಎಸ್) ಅವರ ಸಾಲುಗಳು ಅದೆಷ್ಟು ಸೊಗಸು. ಇಂತಹ ಅಸಂಖ್ಯಾತ ಸುಂದರ ಮಧುರ ಕವನಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ನಾನಾ ಪ್ರಕಾರಗಳಲ್ಲಿ ಶ್ರೀಮಂತಗೊಳಿಸಿದ ಶ್ರೇಯಸ್ಸು ಜಿಎಸ್ಎಸ್ ಅವರದು. ಈ ಕವನಗಳಲ್ಲಿರುವ ಸರಳತೆ, ಪದಗಳಲ್ಲಿ ಹೊರಹೊಮ್ಮುವ ಭಾವ ಇಂದಿಗೂ ಎಂದಿಗೂ ಜನಮನಗಳಲ್ಲಿ ಅಚ್ಚಳಿಯದಂತೆ ಉಳಿದು ಹಾಡಾಗಿ ಹೊರಹೊಮ್ಮುತ್ತಲೇ ಇರುತ್ತದೆ.  ಜಿಎಸ್ಎಸ್ ಅವರ ೯೫ನೇ ಜನ್ಮದಿನದ ಸ್ಮರಣಾರ್ಥ ಅವರದೇ ಕವನದ ಸಾಲುಗಳನ್ನು ಹಾಡುವುದರ ಮೂಲಕ ಅವರಿಗೆ ಗಾನನಮನ ಸಲ್ಲಿಸುವ ನನ್ನ ಕಿರು ಪ್ರಯತ್ನ.  ನಾನು ಆಯ್ದುಕೊಂಡಿರುವ ಗೀತೆ  ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ’.  ಈ ಹಾಡಿನೊಂದಿಗಿನ ನಂಟು ಬಹಳ ಹಳೆಯದು.  ನನ್ನ ಶಾಲೆಯಲ್ಲಿ ಜರುಗಿದೆ ‘ಹಸಿರೇ ಉಸಿರು’ ಎಂಬ ನಾಟಕದಲ್ಲಿ ಕಂಡುಬಂದ ಹೃದಯಂಗಮ ದೃಶ್ಯ ಹಾಗೂ ಅದರಲ್ಲಿ ಮೂಡಿಬಂದ ಹಾಡುಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿದ್ದವು.  ಮಾನವ ತನ್ನ ಸ್ವಾರ್ಥಕ್ಕಾಗಿ ಹಸಿರನ್ನು ನಾಶಮಾಡಿದಾಗ (‘ನಾನು ಹಡೆದವ್ವ ಹೆಸರು ಪ್ರಕೃತಿ ಮಾತೆ’ ಹಾಡು ಹಾಡುತ್ತ ರೋದಿಸುವ ವನದೇವತೆ) ಅದರ ಪರಿಣಾಮವಾಗಿ  ಮಳೆ ಮಾಯವಾಗಿ, ಭೂಮಿ ಬರಡಾಗಿ, ಹನಿ ನೀರಿಗಾಗಿ ಎಲ್ಲೆಲ್ಲೂ ಹಾಹಾಕಾರವೇಳುವುದು.  ಆಗ ತಮ್ಮ ತಪ್ಪಿನ ಅರಿವಾಗಿ ನೊಂದು ಬೆಂದ ಜನ ಪರಿತಪಿಸುತ್ತ ಮೋಡಗಳೆಡೆ ಮುಖ ಮಾಡಿ ಈ ಹಾಡನ್ನು ಹಾಡಿದಾಗ ಮೋಡಗಳು ಕರಗಿ ಮಳೆಯಾಗಿ ಸುರಿದ ಇಳೆಗೆ ತಂಪೆರೆದು, ಮತ್ತೆ ಚಿಗುರೊಡೆದು ಹಸಿರಾಗಲು ಜನರ ಹಸಿವ ನೀಗಿಸುತೆ ಉಸಿರುನೀಡುವುದು.  ಹೀಗೆ ಹಸಿರೇ ಉಸಿರು ಎಂಬ ಕೂಗು ಮುಗಿಲು ಮುಟ್ಟುತ್ತ ನಾಟಕ ಕೊನೆಯಾಗುವುದು.  ಕೈಗೆ ಎಟುಕದ, ಕೂಗಿದರು ಧ್ವನಿಗೆ ನಿಲುಕದಷ್ಟು ದೂರದಲ್ಲಿರುವ ಮೋಡಗಳನ್ನು ಮಳೆಯಾಗಿ ಸುರಿಸಿದ ಈ ಹಾಡಿಗೆ ಅದೆಷ್ಟು ಶಕ್ತಿಯಂದು ಆಗ ಯೋಚಿಸಿದ ನನ್ನ ಮುಗ್ದ ಮನಸ್ಸಿನಲ್ಲಿ ಬೇರೊರಿಬಿಟ್ಟಿತು.  ಪ್ರತಿಬಾರಿ ಈ ಹಾಡು ಕೇಳಿದಾಗಲೆಲ್ಲ ನಾಟಕದ ಆ ದೃಶ್ಯ ಕಣ್ಣಮುಂದೆ  ಹಾದು ಹೋಗುವುದು.  ಕರುಣಾರಸ ಭರಿತವಾದ, ನನ್ನ ತಂಗಿಯಿಂದ ಕಲಿತ ಈ  ಹಾಡನ್ನು ಹಾಡುವ ಪ್ರಯತ್ನ ಮಾಡಿರುವೆನು.  ಜಿಎಸ್ಎಸ್ ಅವರ ಮಾತುಗಳಲ್ಲಿ ಹೇಳುವುದಾದರೆ ಎದೆ ತುಂಬಿ ಹಾಡಿರುವೆನು ಇಂದು ನಾನು ಮನವಿಟ್ಟು ಕೇಳುವಿರಿ ಅಲ್ಲಿ ನೀವು ಎನ್ನುವ ಆಶಯದಲ್ಲಿ.

***************************************************************************************************

ಶ್ರೀಮತಿ ಸುಮನಾ ಧ್ರುವ

ಹುಚ್ಚು ಖೋಡಿ ವಯಸ್ಸಿನವಳಾಗಿದ್ದೆ ಆಗ, ಇನ್ನೂ ನೆನಪಿದೆ ಆಗಿನ ಮನಸ್ಥಿತಿ — ಜಗತ್ತೆಲ್ಲ ತಪ್ಪು, ನಾನು ಮಾತ್ರ ಸರಿ!!  ಎಲ್ಲರನ್ನು ವಿರೋಧಿಸಬಲ್ಲೆ, ಗೆಲ್ಲ ಬಲ್ಲೆ ಅನ್ನುವಂಥ ಹುಂಬ ಧೈರ್ಯ ಧಗೆ, ಎದೆಯಲ್ಲಿ.  

ಮರೆಯಲಾಗದು ಮಳೆಯ ಮುಂಜಾನೆಗಳು.  ಅಡುಗೆ ಮನೆಯಿಂದ ಅಮ್ಮ “ಏಳೇ ಸುಮಾ ಸ್ಕೂಲಿಗೆ ಹೊತ್ತಾಯಿತು” ಅಂತ ಕೂಗೋವಾಗ, ಹಿಂದೆ ಸಣ್ಣಗೆ ವಿವಿಧಭಾರತಿಯ ಭಾವ ಸಂಗಮ ಕಾರ್ಯಕ್ರಮದಲ್ಲಿ, ಜಿ.ಎಸ್.ಎಸ್ ಅವರ “ಧಗೆ ಆರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು” ಅಂತ ಬಿ.ರ್ ಛಾಯಾ ಹಾಡ್ತಿದ್ರೆ ಅದೇನೇನೋ ವಿಚಿತ್ರ ಭಾವನೆಗಳು, ಹೊಂದಿಕೆ ಆಗದೆ ಉಳಿದು ಹೋದ ಪಜಲ್ನಂತೆ ಎಲ್ಲ ಗೋಜಲು ಗೋಜಲು.  ಅದೇ ಹಾಡನ್ನ ಈಗ ಮೆಲುಕು ಹಾಕಿದ್ರೆ, ಆಗ ಸಿಕ್ಕುಸಿಕ್ಕಾಗಿದ್ದು ಈಗ ಅಯ್ಯೋ ಅದೆಷ್ಟು ಸರಳ ಅನಿಸುತ್ತದೆ.

***********************************************************************************************

ಡಾ. ದಾಕ್ಷಾಯಿಣಿ ಗೌಡ

ವೇದಾಂತಿ ಹೇಳಿದನು… ರಾಷ್ಟ್ರಕವಿ  ಶ್ರೀಯುತ ಜಿ.ಸ್. ಶಿವರುದ್ರಪ್ಪನವರ ಪ್ರಸಿದ್ಧ ಮತ್ತು ಜನಪ್ರಿಯ ಕವನಗಳಲ್ಲಿ ಒಂದು.

ಈ ಕವಿತೆಯಲ್ಲಿ ಜೀವನದ ತತ್ವವನ್ನು ಎರಡು ವಿಭಿನ್ನ ರೀತಿಯ ದೃಷ್ಟಿಕೋನದಲ್ಲಿ, ಪ್ರತಿಯೊಬ್ಬ ಓದುಗನಿಗೂ ಅರ್ಥವಾಗುವ ಪರಿಯಲ್ಲಿ ಕವಿ ಪರಿಚಯಿಸುತ್ತಾನೆ. “ಜೀವನದಲ್ಲಿ ಎಲ್ಲವೂ ನಶ್ವರ” ಎಂದು ವೇದಾಂತಿ ಹೇಳಿದರೆ “ಕಾಣುವುದೆಲ್ಲ ಸುಂದರ” ಎಂದು ಹಾಡಿ, ಕನವರಿಸಿ, ಸಾರಿ ಹೇಳುತ್ತಾನೆ ಕವಿ.

ಈ ನಶ್ವರ ಜಗತ್ತಿನ ಬಗ್ಗೆ ವೇದಾಂತಿ ಏನೇ ಹೇಳಲಿ, ಕವಿಹೃದಯದ ಶ್ರೀಮಂತಿಕೆ, ಆತನ ನೋಟದಲ್ಲಿ ಹುದುಗಿದ ಸೌಂದರ್ಯಕ್ಕೆ ಬೆರಗಾಗಿ, ಮರುಳಾಗಿ, ಓದುಗನೂ ಕವಿಯೊಡನೆ ತಾನೂ ಕಲ್ಪನಾಲೋಕದ ಸುರೆಯ ಅಮಲಿನಲ್ಲಿ ತೇಲುತ್ತಾನೆ.

ಮಾನಸ ಸರೋವರ ಎನ್ನುವ ಕನ್ನಡ ಚಲನಚಿತ್ರದಲ್ಲಿ ಈ ಕವಿತೆಯನ್ನು ಅಳವಡಿಸಿಕೊಳ್ಳಲಾಗಿದೆ.

**********************************************************************************************

ಡಾ. ಲಕ್ಷ್ಮೀನಾರಾಯಣ ಗುಡೂರ್

ಭಾವುಕ ಮನಸುಗಳಿಗೆ, ಭಾವುಕ ದನಿಗಳಿಗೆ ಭಾವನೆಯ ಶಬ್ದಗಳನ್ನು ಹೆಣೆದು ಕೊಟ್ಟ ರಾಷ್ಟ್ರಕವಿಗೆ ನನ್ನ ವಂದನೆಗಳು. ನಾನು ಮೊದಲಿನಿಂದಲೋ ಚಿತ್ರಕಲೆಯ ಕಡೆಗೆ ಒಲವಿದ್ದವನಾದರೂ, ಶಬ್ದಗಳಲ್ಲಿ ಚಿತ್ರಿಸಿದ ಚಿತ್ರಣದಂತೆ ತೋರುವ ಕವನಗಳೂ ಒಮ್ಮಿಂದೊಮ್ಮೆಲೆ ನನ್ನನ್ನು ಆಕರ್ಷಿಸತೊಡಗಿದವು. ಮೈಸೂರು ಅನಂತಸ್ವಾಮಿಯವರು ಹಾಡಿದ ಎದೆ ತುಂಬಿ ಹಾಡಿದೆನು ಅಂದು ನಾನು ಅಂಥ ಹಾಡುಗಳಲ್ಲಿ ಒಂದು. “ಹಾಡು ಹಳೆಯದಾದರೇನು ಭಾವ ನವನವೀನ” ಇದನ್ನು ನಾನು ಮೊದಲು ಕೇಳಿದ್ದು ಮಾನಸ ಸರೋವರ ಚಿತ್ರ ನೋಡಿದಾಗ. ಯಾವುದೇ ಪೇಂಟಿಂಗನ್ನು ತುಂಬಾ ಹತ್ತಿರದಿಂದ ನೋಡಿದರೆ ಸರಿಯಾಗಿ ಕಾಣುವುದಿಲ್ಲ – ಹಾಗೆಯೇ ಈ ಹಾಡಿನಲ್ಲೂ; ಉಪಯೋಗಿಸಿದ ಶಬ್ದಗಳು ಸರಳವಾದರೂ, ಪೂರ್ತಿ ಕೇಳುವಾಗ ಕವನ ಅರ್ಥಪೂರ್ಣವೆನಿಸುತ್ತದೆ ನನಗೆ.

ರಾಷ್ಟ್ರಕವಿಗೆ ನನ್ನ ನಮನಗಳು …….. ಹಾಡಿನ ಈ ನನ್ನ ಪ್ರಯತ್ನದೊಂದಿಗೆ.

**********************************************************************************************

ಶ್ರೀಮತಿ ಶಾಂತಲಾ ರಾವ್

ಈ ಹಾಡಿನ ಪ್ರತಿಯೊಂದು ಶಬ್ದ ನನ್ನ ಆಧ್ಯಾತ್ಮಿಕ ಪಯಣವನ್ನ ಪರಿಚಯಿಸತೇತಿ. ನನ್ನ ಹುಡುಕಾಟಾನೂ ಇದs ರೀ. ನಾನು ಆ ಪರಬ್ರಹ್ಮನ ಒಂದು ಸಣ್ಣ ಅಂಶ. ಆ ಪರಮಾತ್ಮನೊಳಗ ಸೇರಿಕೊಳ್ಳಾಕ, ಕೂಡಿಕೊಳ್ಳಾಕ ಎಷ್ಟ್ ಚಡಪಡಸಾಕತ್ತೇನಿ ಅನ್ನು ವಿಷಯವನ್ನ ಈ ಕವನ ಭಾಳ್ ಚಂದ್ ಹೇಳ್ತೇತಿ ಅಂತ ನನಗ ಅನಸ್ತೇತಿ. ನನ್ನ ಮನಸ್ನ್ಯಾಗ ಕಡಲು ಅಂದ್ರ ಆ ಪರಮಾತ್ಮಾ ಹೆಂಗ್ ಇರ್ರ್ಬೆಕ್ ಅಂತ ಚಿತ್ರಾ, ಮತ್ತ ವಿಚಾರ ಬರ್ರ್ತಾವು ಮತ್ತ ಅವನ್ನ ಹೆಂಗ್ ಸೇರುವುದೋ ಅನ್ನು ಕುತೂಹಲ ಭಾಳ್ ಐತ್ರಿ.
ಇಷ್ಟೆಲ್ಲಾ ಜನಾ ನಾವ್ ಅದೇವೆಲ್ಲ, ಎಲ್ಲಾರೂ ಒಂದ್ ಒಂದ್ ಹೊಳಿ ಇದ್ದಹಂಗ. ಆದ್ರೂ ಒಂದs ಥರಾ ಅದೇವಿ ಅಂದ್ರ ಎಲ್ಲಾರ ಒಳಗ ಅದs ಪರಮಾತ್ಮನ್ ಅಂಶ ಇದ್ದದ್ದಕ್ಕ ನಾವೆಲ್ಲಾ ಒಂದ ಅನ್ನು ವಿಚಾರ. ಶಿವರುದ್ರಪ್ಪ ಅಜ್ಜಾರು ನನ್ ಮನಸ್ನ್ಯಾಗಿನ್ ವಿಚಾರ ಹೆಂಗ್ ತಿಳ್ಕೊಂಡರೋ ಏನೊ. ಅವ್ರಿಗೆ ನನ್ನ ಅನಂತಾನಂತ ಧನ್ಯವಾದಗಳು.
ಈ ಹಾಡ್ ಹಾಡಿರು ಅಶ್ವಥ್ ಅವ್ರ ಧ್ವನಿ ಅಂತೂ ಕೇಳಿದ್ರ ಮನಸಿಗೆ ಹೋಳಿಗಿ ತಿಂದ್ಹಂತಾ ಖುಷೀ ರಿ.
ಈ ಹಾಡು ಹಾಡಿದ್ ನನ್ ಪುಣ್ಯಾ ಅನ್ಕೋತೇನ್ರಿ.
ಸ್ವರಾ ಹೆಚ್ಚು ಕಡಿಮಿ ಇದ್ದಿದ್ದ್ಕ ಕ್ಷಮಸ್ರಿ.

*********************************************************************************************

ಶ್ರೀಮತಿ ಅಮಿತಾ ರವಿಕಿರಣ

“ನಾವಿಬ್ಬರು ಅಂದು ಹೊಳೆಯ ದಡದಲಿ ನಿಂದು”

ರಾಷ್ಟ್ರಕವಿ ಜಿ ಎಸ ಶಿವರುದ್ರಪ್ಪ ನವರ ಈ ಕವಿತೆ ನನಗೆ ತುಂಬಾ ಇಷ್ಟ. ಈ ಹಾಡನ್ನ ನನ್ನ ತಂದೆಯವರು ಹಾಡುವಾಗ ನಾನು ಇದನ್ನ ಕೇಳಿ ಕೇಳಿ ಕಲಿತೆ. ಇದು ನಾನು ಕಲಿತ ಮೊದಲ ಭಾವಗೀತೆ ಭಾವಗೀತೆಗಳೆಂದರೇನು ಎಂದು ಅರ್ಥವಾಗುವ ಮೊದಲು ಕಲಿತು ಹಾಡಿದ್ದು. ಪ್ರತಿ ಗೀತೆಯನ್ನು ಹಾಡುವಾಗ ಹಾಡುಗಾರರ ಮನಸ್ಸಲ್ಲಿ ಒಂದು ಚಿತ್ರ ಓಡುತ್ತಿರುತ್ತದೆ. ನನಗೆ ಈ ಹಾಡು ಹೇಳುವಾಗೆಲ್ಲ ನನ್ನ ಅಜ್ಜಿ ಮನೆಯ ಮುಂದೆ ಇದ್ದ ಪುಟ್ಟ ಹೊಳೆ, ಅಲ್ಲಿ ಮರಳಲ್ಲಿ ಆಡುತ್ತಿದ್ದ ನಮ್ಮ ಚಿತ್ರಗಳು ಕಣ್ಣ ಮುಂದೆ ಬರುತ್ತದೆ; ಈಗಲೂ ಅದೇ ಚಿತ್ರ.

ಹಳ್ಳಿಗಳಲ್ಲಿ ಬೆಳದವರಿಗೆ, ಪವರ್ ಕಟ್, ಸಿಂಗಲ್ ಫ್ಯುಸ್ ಎಲ್ಲ ಚಿರಪರಿಚಿತ ಪದಗಳು. ಗುಬ್ಬಿ ಲ್ಯಾಂಟನ್  ಮಿನುಗಲ್ಲೇ  ತೆರೆದುಕೊಳ್ಳುವ ಸಂಜೆಗತ್ತಲು, ಪಪ್ಪಾನ ಜೊತೆಗೆ ದನಿಗೂಡಿಸಿ ಹಾಡುತ್ತಿದ್ದ ”ನೆನಪಿದೆಯೇ ನೆನಪಿದೆಯೇ” ನನ್ನ ಅತ್ಯಮೂಲ್ಯ ನೆನಪ ನಿಧಿ.

ಈ ಹಾಡನ್ನು ಯಶವಂತ್ ಹಳಬಂಡಿ ಅವರ ದನಿಯಲ್ಲಿ ಕೇಳುವುದೇ ಚಂದ. ”ಮುಂಗಾರು ಮಳೆ ಹೊಯ್ದು ನಾವಿಬ್ಬರು ತೋಯ್ದು” ಎನ್ನುವ ಸಾಲು ಹಾಡಿದ ನಂತರ ಅಲ್ಲಿ ಚಿಕ್ಕದೊಂದು ವಯೊಲಿನ್ ಮ್ಯೂಸಿಕ್ ಇತ್ತು, ಪಪ್ಪ ಅದನ್ನ ಮ್ಮ್ಮ್ ಮ್ಮ್ಮ್ ಮ್ಮ್ ಎಂದು ಹಾಡಿ ನನಗೆ ಹಿನ್ನೆಲೆ ಸಂಗೀತವನ್ನು ಕೊಡುತ್ತಿದ್ದರು.

ನಾನು ಹೊಸ ಶಾಲೆಗೆ ಸೇರಿದಾಗ ಇಡೀ ಶಾಲೆಯ ಮುಂದೆ ಅಚಾನಕ್ ಆಗಿ ಒಮ್ಮೆ ಹಾಡುವ ಅವಕಾಶ ಸಿಕ್ಕಾಗ ನಾನು ಇದೆ ಹಾಡನ್ನು ಹಾಡಿದ್ದೆ. ನಂತರ ಸಂಗೀತ ಕಲಿಸುತ್ತಿದ್ದ ಗ್ರೇಸಿ ಟೀಚರ್ ನನಗೆ ಈ ಹಾಡನ್ನು ಎಲ್ಲ ಮಕ್ಕಳಿಗೆ ಹೇಳಿಕೊಡಲು ಎರಡು ಸಂಗೀತ ತರಗತಿಗಳನ್ನು ಕೊಟ್ಟಿದ್ದರು. ಈಗ ಆ ಘಟನೆ ನೆನೆದಾಗಲೆಲ್ಲ  ಅದೊಂದು ಥರದ ಹೆಮ್ಮೆ, ಖುಷಿಯ ಅನುಭವ.

ಇಷ್ಟು ನೆನಪುಗಳನ್ನು, ಇನ್ನೂ ಎಷ್ಟೋ ಮರೆಯಲಾರದ ಸಣ್ಣ ಸಣ್ಣ ಸಾರ್ಥಕ ಘಳಿಗೆಗಳನ್ನು ನನ್ನಂಥ ಭಾವುಕ ಮನಸಿನ ಮಂದಿಗೆ ಅಕ್ಷರಗಳ ಮೂಲಕ ಒದಗಿಸಿಕೊಟ್ಟ ರಾಷ್ಟ್ರಕವಿಗೆ ಕೋಟಿ ನಮನಗಳು.

*********************************************************************************************

ಶ್ರೀಮತಿ ಸವಿತಾ ಸುರೇಶ್

ಸ್ತ್ರೀ ಅಂದರೆ ಅಷ್ಟೇ ಸಾಕೇ???

ರಾಷ್ಟ ಕವಿ ಜಿ.ಎಸ್.ಶಿವರುದ್ರಪ್ಪ ನವರ ವಿರಚಿತ ಈ ಕವಿತೆಯನ್ನು ಯಾವುದೇ ಸ್ತ್ರೀ ಓದುವಾಗ ಅಥವ ಇದರ ಹಾಡನ್ನು ಕೇಳಿ ಆಲಿಸುವಾಗ ಆಕೆಗೆ ಒಡನೆಯೇ ತನ್ನ ಬಗ್ಗೆ ಅಭಿಮಾನ, ಆತ್ಮಗೌರವ ಹೆಚ್ಚಾಗುತ್ತದೆ. ಏಕೆಂದರೆ ಕವಿಗಳು ಓರ್ವ ಸ್ತ್ರೀ ಜೊತೆಯಲ್ಲಿ ಪ್ರಕೃತಿ ಮಾತೆಯನ್ನು ಸಹ ಅಷ್ಟೇ ರೂಪರಚಿಸಿದ್ದಾರೆ. ಕವಿತೆಯ ಪ್ರಧಾನ ಆಶಯ ಮಾನವ ಕುಲವನ್ನು ಸಲಹುವ ಪಂಚಭೂತಗಳನ್ನೊಳಗೊಂಡ ಪ್ರಕೃತಿ ಮಾತೆ ಹಾಗೂ ಹೆಣ್ಣಿನ ತಾಯ್ತನದ ಆರಾಧನೆ. ನಾಲ್ಕು ಸಾಲಿನ ನಾಲ್ಕು ನುಡಿಗಳ ಈ ಕವಿತೆಯ ಸಾಹಿತ್ಯ ಸ್ವರೂಪದಲ್ಲಿ, ಮೊದಲ ಮೂರು ನುಡಿಗಳು ಪ್ರಕೃತಿ ಮಾತೆಯ ತಾಯ್ತನದ ಬಗ್ಗೆ ವಿಶ್ಲೇಷಿಸಿದರೆ ಕೊನೆಯ ನುಡಿ ಹೆಣ್ಣಿಗೆ – ಅಷ್ಟೇ ಸೊಗಸಾಗಿ ಪ್ರತಿ ಶಬ್ದಗಳಲ್ಲಿ ವಿಶ್ಲೇಷಿಸಿದ್ದಾರೆ!!

ಹಾಗಾಗಿ ಈ ಕವಿತೆಯನ್ನು ಪ್ರತಿ ಬಾರಿ ನಾನು ಹಾಡುವಾಗ ನನ್ನ ಬಗ್ಗೆ ನನಗೆ ಆತ್ಮ ಗೌರವ, ಅಭಿಮಾನ ಮತ್ತು ಹೆಗ್ಗಳಿಕೆ. ಇದರ ಸಾಹಿತ್ಯಕ್ಕನುಗುಣವಾಗಿ ಸಿ.ಅಶ್ವತ್ಥ್ ಅವರ ಮಿಶ್ರಭೌಳಿಯ ಅವರದೇ ಶೈಲಿಯ ರಾಗರಚನೆ ಅಣು ಅಣುವಾಗಿ ಮುದ ನೀಡುವುದು.

**********************************************************************************************

ಶ್ರೀ ಮುಕೇಶ್ ಕಣ್ಣನ್

ನಾನೊಬ್ಬ ಸಂಗೀತಗಾರ, ಯುಕೆಯ ಮ್ಯಾಂಚೆಸ್ಟರ್ ನಗರದ ವಾಸಿ. ಬರೆಯುವುದಿಲ್ಲವಾದರೂ ಸಾಕಷ್ಟು ಓದುತ್ತೇನೆ. ಅಮಿತಾ ರವಿಕಿರಣ ಅವರ ಮೂಲಕ ಅನಿವಾಸಿ ಬಳಗದ ಚಟುವಟಿಕೆಗಳ ಬಗ್ಗೆ, ಅವರ ಬ್ಲಾಗಿನಲ್ಲಿ ಬರುವ ಲೇಖನಗಳ ಬಗ್ಗೆ ತಿಳಿಯುತ್ತದೆ. ಕೆಲಸದ ಒತ್ತಡದ ಮಧ್ಯ ಬಿಡುವಾದಾಗ ಓದುತ್ತೇನೆ. ಈ ವಾರದ ಪ್ರಸ್ತುತಿ ರಾಷ್ಟ್ರಕವಿ ಡಾ. ಜಿಎಸ್ಎಸ್ ಅವರಿಗೆ ಅರ್ಪಿಸುತ್ತಿರುವ ನುಡಿ-ನಮನ ಅಂತ ಗೊತ್ತಾದಾಗ, ಅವರ ಎಷ್ಟೊಂದು ಜನಪ್ರಿಯ ಹಾಡುಗಳು ನೆನಪಾದವು. ನಾನೂ ಏನಾದರೂ ಸಂಗೀತ ರೂಪದಲ್ಲಿ ಭಾಗವಹಿಸಬಹುದೇ ಅಂತ ವಿಚಾರಿಸಿದೆ. ಅನಿವಾಸಿಯ ಸದಸ್ಯನಲ್ಲದಿದ್ದರೂ, ಬಳಗದ ಸಹೃದಯರ ಒಪ್ಪಿಗೆಯಿಂದ ನನ್ನ ಚಿಕ್ಕ ಪ್ರಸ್ತುತಿಯನ್ನು ಅರ್ಪಿಸುತ್ತಿದ್ದೇನೆ.

**********************************************************************************************

ಅಡುಗೆ – ಅಡುಗೆಮನೆ ಸರಣಿ: ಸವಿತಾ ಸುರೇಶ್ ಮತ್ತು ಶಾಂತಲಾ ರಾವ್

ಮಕರ ಸಂಕ್ರಮಣದ ಶುಭಾಶಯಗಳು, ಎಲ್ಲರಿಗೂ. ಸಂಕ್ರಾಂತಿ ಅಂದೊಡನೆ ನೆನಪಾಗುವುದು – ಕುಸುರೆಳ್ಳು ಸೇರಿಸಿದ ಎಳ್ಳು-ಬೆಲ್ಲ, ಎಳ್ಳು ಅಥವಾ ಶೇಂಗಾ ಹೋಳಿಗೆ, ಸೆಜ್ಜೆ ಭಕ್ಕರಿ (ರೊಟ್ಟಿ), ಬೆಣ್ಣೆ, ಶೇಂಗಾಹಿಂಡಿ, ಹುಗ್ಗಿ-ಗೊಜ್ಜು, ಸಿಹಿ ಪೊಂಗಲ್, ಸಕ್ಕರೆ ಅಚ್ಚುಗಳು, ಕಬ್ಬು; ಉತ್ತರ ಕರ್ನಾಟಕದವರಾದರೆ ಶೀತನಿ (ಜೋಳ / ಗೋಧಿಯ ಹಸಿ ಕಾಳುಗಳು) …. ಎಷ್ಟು ಅಂತ ಪಟ್ಟಿ ಮಾಡೋದು! ನನಗೆ ನೆನಪಿರುವಂತೆ, ಅಜ್ಜಿಗೆ ಭೋಗಿ ಬಾಗಿಣದ ಮೊರ ತಯಾರಿ ಮಾಡುವುದಕ್ಕೆ ಸಹಾಯ ಮಾಡುವ ನೆಪದಲ್ಲಿ, ಒಂದಷ್ಟು ಕಬ್ಬು, ಎಳ್ಳು-ಬೆಲ್ಲ, ಬಾರೆಹಣ್ಣು ತಿಂದು ಖಾಲಿ ಮಾಡಿದ್ದು! ಈಗ, ಅವೆಲ್ಲ ಯಾಕೆ ನೆನಪಾಯ್ತು ಅಂದರೆ, ನಮ್ಮ ಅನಿವಾಸಿ ಗುಂಪಿನ ಮಹಿಳಾಸದಸ್ಯರು ಉತ್ಸಾಹದಿಂದ ಹಂಚಿಕೊಂಡ ಅಡಿಗೆಯ ಫೋಟೊಗಳನ್ನ ನೋಡಿ. ಅದರಿಂದ ಹೊಟ್ಟೆ ಗುರ್ ಅಂದರೂ, ಕಣ್ಣು ತಂಪಾಯಿತೆನ್ನುವುದು ನಿಜ! ಸರಿ, ಎಲ್ಲರೂ ಇನ್ನೊಮ್ಮೆ ನೋಡಿ, ಸಂತೋಷ ಪಡೋಣ (ಕೊನೆಯಲ್ಲಿದೆ); ರಾಧಿಕಾ ಜೋಶಿಯವರ ಪುಟ್ಟ ಕವನದೊಂದಿಗೆ.

ಈಗ, ಹಬ್ಬದ ಪ್ರಯುಕ್ತ ಸಿಹಿ ಪದಾರ್ಥಗಳ ತಮ್ಮ ಅನುಭವಗಳನ್ನು ನಮಗೆ ಹಂಚುತ್ತಿದ್ದಾರೆ, ಸವಿತಾ ಸುರೇಶ್ ಮತ್ತು ಶಾಂತಲಾ ರಾವ್. ತಮ್ಮ ಅಡುಗೆಮನೆಯ ಪ್ರಯತ್ನವನ್ನು ಜಾಗತಿಕ ಮಾಧ್ಯಮಕ್ಕೆ ಒಯ್ದದ್ದನ್ನ ಸವಿತಾ ಅವರು ಹೇಳಿದರೆ, ಬಿಹಾರಿನ ಮೂಲೆಯಿಂದ ಧಾರವಾಡಕ್ಕೆ ತಂದು ಬೆಳೆಸಿದ ಫೇಡೆಯ ಬಗ್ಗೆ ಶಾಂತಲಾ ಅವರು ಬರೆದಿದ್ದಾರೆ. ಎರಡೂ ಅನೇಕರ ಪ್ರೀತಿಯ ತಿಂಡಿಗಳ ಬಗ್ಗೆಯೇ ಆಗಿವೆ. ಓದಿ, ಸವಿದು, ನಿಮ್ಮ ನಿಮ್ಮ ಅನಿಸಿಕೆಗಳನ್ನು ಬರೆದು ನಮಗೆ ತಿಳಿಸಿ. ನೀವೂ ಬರೆದು ಕಳಿಸಿ, ಅನಿವಾಸಿಯ ಬ್ಲಾಗಿಗೆ. – ಎಲ್ಲೆನ್ ಗುಡೂರ್ (ಸಂ.)

ಮೈಸೂರ್ ಪಾಕ್ ಪ್ರಯೋಗದ ಪಯಣ – ಸವಿತಾ ಸುರೇಶ್

ನನಗೆ ಸುಮಾರು ೭ ವರ್ಷ.  ಬಿಜಾಪುರಿಂದ ಬೆಂಗಳೂರಿಗೆ ಅಪ್ಪನ ವರ್ಗಾವಣೆ ಆದ್ಮೇಲೆ ಪ್ರತಿ ತಿಂಗಳು ೧ನೇ ತಾರೀಖು ಆಫೀಸ್ ಕೆಲಸದಿಂದ ಮನೆಗೆ ಬರುವಾಗ “ವೆಂಕಟೇಶ್ವರ ಭವನ್” ನಿಂದ ವೆಜಿಟೇಬಲ್ ಪಫ್ಸ್ ಹಾಗೂ ಸುಪ್ರಸಿದ್ಧ ಘಮ ಘಮ ಹೊಂಬಣ್ಣದ ಮೈಸೂರ್ ಪಾಕ್ ಅಪ್ಪ ಓಡಿಸುತ್ತಿದ್ದ  Yezdi ಯ ಸ್ಟೋರ್ ಬಾಕ್ಸ್ ನಲ್ಲಿ ತಪ್ಪದೇ ಹಾಜರು!  ೧ಕೆ.ಜಿ ಮೈಸೂರ್ ಪಾಕ್ ಬಾಕ್ಸ್ ತೆಗೆದ ಕೆಲವೇ ಕ್ಷಣಗಳಲ್ಲಿ ಸ್ವಾಹಾ!  ಏಕೆಂದರೆ ನಮ್ಮದು ೧೨ ಮಂದಿ ಇದ್ದ ಅವಿಭಕ್ತ ಕುಟುಂಬ. ಬಾಯಲ್ಲಿ ಬೆಣ್ಣೆಯಂತೆ ಕರ್ಗೋಗ್ತಿತ್ತು.

ಹೀಗೆ ನಾನು ೧೪ ವರ್ಷ ವಯಸ್ಸಿಗೆ ಬಂದಾಗ ಈ ಆಹ್ಲಾದಕರ ಮೈಸೂರ್ ಪಾಕ್ ಮಾಡುವುದನ್ನು ಮನೆಯಲ್ಲಿ ಕಲಿಯಬೇಕು ಎಂಬ ಇಚ್ಛೆ ಅಮ್ಮನಿಗೆ ಹೇಳಿದೆ.  ಆದ್ರೆ ಅಮ್ಮ ಕೂಡ ಎಂದೂ ಪ್ರಯತ್ನಿಸಿರಲಿಲ್ಲ.  ಅಡುಗೆ ಮನೆಗೂ ನನಗೆ ಪ್ರವೇಶ ನಿಷೇಧವಾಗಿತ್ತು.  ಏಕೆಂದರೆ ಆ rangeಗೆ ಅಮ್ಮ ಇಲ್ಲದೆ ಇರೋ ಸಮಯದಲ್ಲಿ ದಾಳಿ ಮಾಡ್ತಿದ್ದೆ.  ಆದರೆ ನನ್ನ ಈ ಬೇಡಿಕೆ ಮುಂದೆ ಇಟ್ಟಾಗ ಅಮ್ಮ ಸಾಥ್ ಕೊಟ್ರು.  ಹಾಗಾಗಿ ಬೇಸಿಗೆ ರಜೆಯಲ್ಲಿ ಅಮ್ಮ- ಮಗಳ ಮೈಸೂರ್ ಪಾಕ್ project ಶುರುವಾಯ್ತು.  ಕಡ್ಲೆಹಿಟ್ಟು, ಸಕ್ಕರೆ ಹಾಗೂ ತುಪ್ಪ – ಈ ಸುಲಭ ಸಾಮಗ್ರಿಗಳನ್ನೊಳಗೊಂಡ ಈ ಸಿಹಿತಿಂಡಿ ಮಾಡುವುದು ಬಹಳ ಕಠಿಣ.  ಅಲೆಕ್ಸಾಂಡರ್ ದಂಡಯಾತ್ರೆ ತರಹ ಬಹಳ ವ್ಯಾಯಾಮ ಮಾಡಿಸ್ತು….  ಏಕೆಂದರೆ ಮೈಸೂರ್ ಪಾಕ್ ಹೋಗಿ ಒಮ್ಮೆ ಕಡ್ಲೆ ಹಿಟ್ಟು ಹಲ್ವ, ಮತ್ತೊಮ್ಮೆ ಕಡ್ಲೆ ಹಿಟ್ಟಿನ ಇಟ್ಟಿಗೆ ಆಗ್ತಿತ್ತು.  ೧೨-೧೩ ಸತತ ಪ್ರಯತ್ನಗಳ ನಂತರ ಹಂಗೂ ಗೂಡ್ ಗೂಡ್ ಮೈಸೂರ್ ಪಾಕ್ ರೇಂಜ್ ಗೆ ಬಂತು ಹದ.  ಆದರೆ ವೆಂಕಟೇಶ್ವರ ಭವನದ ಮೈಸೂರ್ ಪಾಕ್ ಹದ ಬರ್ಲೇ ಇಲ್ಲ.  ಒಬ್ಬಳೇ ಪ್ರಯತ್ನಿಸಲು ಅಮ್ಮ ಬಿಡ್ತಾ ಇರ್ಲಿಲ್ಲ.  ಆಗ ದೂರದರ್ಶನ ಬಿಟ್ರೆ ಯಾವ ವಾಹಿನಿಯೂ ಇರ್ಲಿಲ್ಲ.  ಅಡುಗೆ ಕಾರ್ಯಕ್ರಮ ನೋಡಿದ್ದು ಜ್ಞಾಪಕ ಇಲ್ಲ.  ಆದ್ರೆ ಆ ಹದದಲ್ಲಿ ಮೈಸೂರ್ ಪಾಕ್ ಮಾಡುವುದು ಹೇಗೆ ಎಂಬೋದೆ ಸವಾಲಾಗಿತ್ತು.  ಮಾಡಲು ಬರುತ್ತಿದ್ದವರು ಯಾರೂ ನಮಗೆ ಗೊತ್ತಿರುವ ಪೈಕಿಯಲ್ಲಿ ಇರ್ಲಿಲ್ಲ.  ಪರಿಹಾರ ನಾವೇ ಕಂಡ್ಕೋಬೇಕಿತ್ತು.  ನಮ್ಮ ಈ ಪ್ರಯೋಗ ಅಪ್ಪ ಮನೆಯಲ್ಲಿ ಇಲ್ಲದೆ ಇರೋವಾಗ ಮಾಡ್ಬೇಕಿತ್ತು.  ಏಕೆಂದರೆ ಅಪ್ಪ ಸಕ್ಕತ್ Health conscious.  ಅವರೇನಾದರೂ ಮೈಸೂರ್ ಪಾಕ್ ಗೆ ಉಪಯೋಗಿಸುವ ತುಪ್ಪದ ಪ್ರಮಾಣ ನೋಡಿದ್ರೆ ಅಷ್ಟೇ ಕಥೆ!!  ಅಷ್ಟೋತ್ತರ, ಪೂಜೆ ಮಂಗಳಾರತಿ wholesale ಆಗಿ ಆಗೋ ಭಯ!  ಏಕೆಂದರೆ ಅಮ್ಮಮ್ಮ ಊರಿಂದ ಬೆಣ್ಣೆ ಕಳಿಸುತ್ತಿದ್ದರು.  ಅಂಗಡಿ ತುಪ್ಪ ಯಾರಿಗೂ ಸೇರ್ತಿರಲಿಲ್ಲ.  ನಮ್ಮ ಈ ಪ್ರಯೋಗದಲ್ಲಿ ಬಳಸ್ತಿದ್ದ ತುಪ್ಪ ವಿನಾಕಾರಣ ವ್ಯರ್ಥವಾಗ್ತಿತ್ತು ಎಂಬುದೇ ಚಿಂತೆ.  ಆದ್ರೂ ನಮ್ಮ ಪ್ರಯತ್ನ ಬಿಡಬಾರ್ದು ಎಂದು, ಮಾಡುವ ವಿಧಾನದಲ್ಲಿ ಚಿಕ್ಕ ಚಿಕ್ಕ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ನಾವು ಮಾಡುವ ಬಾಂಡ್ಲಿ, ಗಿರಣಿಯಲ್ಲಿ ಬೀಸಿಸಿಕೊಂಡು ಬಂದ ಕಡ್ಲೆ ಹಿಟ್ಟು, ಗ್ಯಾಸ್ ಉರಿಯ ಪ್ರಮಾಣ, ಪ್ರಮುಖವಾಗಿ ಸಕ್ಕರೆಪಾಕ ( ಈ ವಿಧಾನ ಸರಿ ಬಂದರೆ ಮೈಸೂರ್ ಪಾಕ್ ಬಂದ ಹಾಗೆ) ಎಲ್ಲ ನೋಡಿಕೊಂಡು ಒಂದು ಶುಕ್ರವಾರ ಶುರು ಮಾಡಿದ್ವಿ.  ಆ ದಿನ ನಮ್ಮ ಸಂತೋಷಕ್ಕೆ ಪಾರ್ವೇ ಇಲ್ಲ.  ಕೊನೆಗೂ ನಮ್ಮ ಕನಸು ನನಸಾಯ್ತು!  ಆದರೆ ಈ ಬಾರಿ ಸಣ್ಣ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಅಳತೆ ಮಾಡಿದ್ರು ಅಮ್ಮ.  ಆ ದಿನ ಅಮ್ಮಮ್ಮ ಕೂಡ ಊರಿಂದ ಬಂದಿದ್ದರು.  “ವೆಂಕಟೇಶ್ವರ ಭವನ್” ಮೈಸೂರ್ ಪಾಕ್ ಕೊನೆಗೂ ನಮ್ಮ ಮನೆಯಲ್ಲಿ ತಯಾರಾಯ್ತು.  ಸಂಜೆ ಪೂಜೆಗೆ ನೈವೇದ್ಯಕ್ಕಿಟ್ಟು ಪ್ರಸಾದದ ರೂಪದಲ್ಲಿ ಸಿಕ್ಕಿತು.  ಅಪ್ಪನಿಗೆ ಆ ದಿನ ನಮ್ಮ ಮೈಸೂರ್ ಪಾಕ್ ಪ್ರಯೋಗದ ಗುಟ್ಟು ರಟ್ಟಾಯ್ತು!  ಈ ಎಲ್ಲಾ ಪ್ರಯತ್ನದಲ್ಲಿ ಒಂದಂತೂ ಖಚಿತವಾಯ್ತು – ಮೈಸೂರ್ ಪಾಕ್ is not everybody’s cup of tea!

ಈ ಪ್ರಯೋಗ ಎಷ್ಟು ಉಪಯುಕ್ತವಾಯ್ತೆಂದರೆ, ಯು.ಕೆ.ಗೆ ಬಂದ ಮೇಲೆ ಎಲ್ಲಾ ಬರ್ತ್ ಡೇ ಪಾರ್ಟಿ, ಗೆಟ್ ಟುಗೆದರ್ ಗಳಿಗೆ, ಕ್ರಿಸ್ಮಸ್ ಪಾರ್ಟಿಗಳಿಗೆಲ್ಲ ಸ್ನೇಹಿತರ ಬೇಡಿಕೆ ಅದೇ ಆಯ್ತು!  ಎಷ್ಟು ಎಂದರೆ ೪ ವರ್ಷದ ಹಿಂದೆ ದೀಪಾವಳಿ ಹಬ್ಬದ ಸುಸಂದರ್ಭದಲ್ಲಿ BBC ಯಲ್ಲೂ ಸಹ ಬರುವಷ್ಟು!  ಚಿತ್ರೀಕರಣ ನನ್ನ ಅಡುಗೆ ಅರಮನೆಯಲ್ಲೇ ನಡೆಯಿತು ಎಂಬುದೇ ನನಗೆ ಹೆಮ್ಮೆಯ ಸಂಗತಿ.  ಚಿತ್ರೀಕರಣಕ್ಕೆ ಬಂದತಹ ಛಾಯಾಗ್ರಾಹಕ ಚಿತ್ರೀಕರಣ ಮಾಡಿದ ಅಂಶ ಯಾವುದು ಗೊತ್ತೇ?  ಮಿಠಾಯಿ ಟ್ರೇನಲ್ಲಿ ಹದವಾಗಿ ಸಜ್ಜಾದ ಮೈಸೂರ್ ಪಾಕ್ ಚೂರಲ್ಲ!  ಬದಲಾಗಿ ಮೈಸೂರು ಪಾಕ್ ಬಾಂಡ್ಲಿಯಲ್ಲಿ ಮಾಡುವಾಗ ಬುರು ಬುರು ಎಂದು ನೊರೆ ನೊರೆಯಾಗಿ ಉಕ್ಕುತ್ತಿದ್ದ, ಇನ್ನೂ ಅರ್ಧ ಹಂತವೂ ಮುಗಿಯದ ಮೈಸೂರ್ ಪಾಕ್!  ಪಾಂಡುರಂಗ!  “ಯಾಕಪ್ಪಾ?” ಎಂದು ಕೇಳಿದ್ರೆ, ಅವನು “That’s a mind blowing process to see.  We need a news angle.” ಅಂದ ಪುಣ್ಯಾತ್ಮ!!  ಹೀಗೂ ಚಿತ್ರೀಕರಣ ಮಾಡ್ತಾರಾ ಅನ್ಕೊಂಡೆ ಮನ್ಸಲ್ಲಿ.

BBC ಯಲ್ಲಿ ಬಂದ ನಂತರ ಮಕ್ಕಳ ಶಾಲೆಯಲ್ಲಿಯೂ ಸಹ ಬೇಡಿಕೆ ಆಯ್ತು.  ಈ ವಿಷಯ ಕೇಳಿದ ಅಮ್ಮನಿಗೆ ಸಂಭ್ರಮ, ಸಂತೋಷ, ಉನ್ಮಾದ ಎಲ್ಲವೂ ಆಯ್ತು!  ಪ್ರಯೋಗದ ಪಯಣ ಸಾರ್ಥಕ ಅಂತ ಮನಸ್ಸಿಗೆ ಮಹದಾನಂದವೂ ಆಯ್ತು!

– Saವಿ✍

*************************************************************************

ಧಾರವಾಡ ಫೇಡೇ – ಶಾಂತಲಾ ರಾವ್

ಪೇಡೇ ಅಂದ್ಕೂಡ್ಲೇ ಏನ್ ಅಕ್ಕೈತ್ರಿ?  ಬಾಯಾಗ್ ನೀರ್ ಬರ್ತಾವಾ??  ಅದಂತೂ ಆಗುದ ಬಿಡ್ರಿ… ಅದ್ ಅಲ್ದ?  ಧಾರವಾಡದ್ ನೆನಪಂತೂ ಬರsಬೇಕ ಅಲ್ರಿ?  ಮದ್ಲ ಕಣ್ಣಿನ ಮುಂದ ಬರೂದು ಬಾಬುಸಿಂಗ್ ಠಾಕೂರ್ ಅವ್ರ್ ಅಂಗಡಿ.  ಅದರ ಮುಂದ ಪಾಳೇ ಹಚ್ಚಿ ನಿಂತಿರೂ ಮಂದಿ… ಮತ್ತ ಲೈನ್ ಬಜಾರಿನ ಸಾಲ್ ಸಾಲಾಗಿರೂ ಅಂಗಡಿ ಕಾಣಸ್ತಾವು …

ಸುಭಾಸ್ ರೋಡಿನ ವಿಜಯ್ ಸ್ವೀಟ್ಸ್ ನ್ಯಾಗ ಒಬ್ರು ಅಜ್ಜಾ ಕುಂದರ್ತಿದ್ರು.  ‘ಮಿಶ್ರ ಅಜ್ಜಾ’ – ಅಲ್ಲಿನ್ ಪೇಡೇನೂ ಭಾಳ್ ರುಚಿ  ರೀ.  ಕ್ಯಾರಕೊಪ್ಪದಾಗ [ಧಾರವಾಡದ ಹತ್ತ್ರ ಹಳ್ಳಿ] ಅವ್ರ್ ಫ್ಯಾಕ್ಟರಿ ನಮ್ ಹೊಲದ್ ಮುಂದ ಐತಿ.  ನಮ್ ಅಜ್ಜಾ ಮತ್ತ ಮಿಶ್ರಾ ಅಜ್ಜಾ ದೋಸ್ತರಾಗಿದ್ರು. ಹಿಂಗಾಗಿ ಅವ್ರ್ ಅಂಗಡಿ ಪೇಡೇ ಮತ್ತ ಬ್ಯಾರೆ ಸಿಹಿ ತಿಂಡಿ, ಫರಾಳ ಭಾಳ್ ತಿಂದೇವಿ.  ಅವ್ರ್ ಸಮ್ಮಂಧಿಕ್ರ್ ಅಂಗಡಿನೂ ಅದಾವು – ಮಿಶ್ರಾ ಸ್ವೀಟ್ಸ್,  ದಿವ್ಯಾ ಸ್ವೀಟ್ಸ್,  ಬಿಗ್ ಮಿಶ್ರಾ, ನ್ಯೂ ವಿಜಯ್ ಸ್ವೀಟ್ಸ್ ಅಂತ. ಹೆಚ್ಚಾಗಿ  ಲೈನ್  ಬಜಾರ್  ಇಲ್ಲಂದ್ರ   ಸುಭಾಸ್  ರೋಡ್  ನ್ಯಾಗ ಅದಾವು. 

ಮಿಶ್ರಾ ಸ್ವೀಟ್ಸ್ ನ ಶ್ರೀ ಯೋಗೇಂದ್ರ ಮಿಶ್ರಾ, ಸಾಲ್ಯಾಗ ನನ್ನ ಸೀನಿಯರ್.  ಅವ್ರ್ ಹೇಳ್ತಿದ್ರು ಅವ್ರ್ ಅಜ್ಜಾರು – ಅವಧ್ ಬಿಹಾರಿ ಮಿಶ್ರಾ ಅವ್ರು ಕಿಶೆದಾಗ ೧ ರೂಪಾಯಿ ಇಟ್ಕೊಂಡು ಉತ್ತರ ಪ್ರದೇಶದಿಂದ ಧಾರವಾಡಕ್ ಬಂದಾಗ ಅವ್ರ್ ಕಿಶೆದಾಗ ಉಳ್ದದ್ದು ೩೩ ಪೈಸೆ ಅಂತ.  ಅವ್ರು ತೀರಿಕೊಂಡಾಗ ಅವ್ರಿಗೆ ೧೦೮ ವರ್ಷ ಅಂತ.  ನೋಡ್ರಿ ಅವ್ರು  ಹಚ್ಚಿದ್ ಗಿಡಾ, ಘಟ್ಟಿ ಬೇರೂರಿ ದೊಡ್ಡ ಗಿಡಾ ಆಗಿ ಬೆಳದ್ ಎಲ್ಲಾ ಕಡೆ ರುಚಿ ಹರಡೇತಿ… ಕಾಲಾ ಕಳಧಾಂಗ ಠಾಕೂರ್ ಪೇಢಾದವ್ರು ಅನಿಯಮಿತ ಪೇಡೇ ತಯಾರಿಸಿದ್ರ,  ಮಿಶ್ರಾ ಅವ್ರು ಧಾರ್ವಾಡಕ್ಕ ಅಷ್ಟ ಸೀಮಿತ ಆಗ್ದ ಕರ್ನಾಟಕದ್ ಉದ್ದಗಲಕ್ಕ ಪೇಡೇ ಸಿಹಿ ಹಂಚ್ಯಾರ.

ಇವೆಲ್ಲಾ ವಿಷಯಾ ನಿಮಗ ಅಂತರ್ಜಾಲದಾಗ ಸಿಗ್ಬಹುದು. ಪೇಡೇ ಮಾಡುದ್ ಹೆಂಗ್ ಅಂತನೂ ಸಾಕಷ್ಟ್ ವಿಡಿಯೋ / ವಿಧಾನ ಸಿಗ್ತಾವು.

ಇಲ್ಲೇ UK ನ್ಯಾಗ ಮಾಡಿದ್ದೆ ನಾನೂ.. ರುಚೀ ಆಗಿದ್ದ್ವು!  ನಂಗs ನಂಬ್ಕಿ ಬರ್ರ್ಲಿಲ್ಲ, ನಾನೂ ಮಾಡಬಹುದು ಇಷ್ಟ್ ರುಚೀ ಪೇಡೇ ಅಂತ … ಲೊಕ್ಡೌನಿನ್ಯಾಗ ಇನ್ನೇನ್ ರೀ ಮತ್ತ ಮಾಡೂದು? ಒಂದ್ ಫೋಟೋ ಐತ್ ನೋಡ್ರಿ ಇಲ್ಲೇ. ನಾ ಮಾಡಿದ್ ಪೇಡೇ…

ಆದ್ರ ಪೇಡೇ ಅಂದ್ರ ಮನಸ್ನ್ಯಾಗ ಏನ್ ವಿಚಾರಾ ಉಕ್ಕಿ ಬರ್ತಾವು ಅಂತ ಗೊತ್ತಾ ನಿಮಗ?  ಪೇಡೇ ಅಂದ್ರ ನಂಗ ಆಗೂ ನೆನಪು –

ಮಲೆನಾಡಿನ ಸೆರಗಾದ  ನನ್ನ ತವರಿನ ನೆನಪು. 

ಬ್ಯಾಸ್ಗಿಗೆ ಕಾದ್ ಉರದಿದ್ದ ಮಣ್ಣಿನ್ ಮ್ಯಾಲೆ ಬಿದ್ದ್ ಮದ್ಲನೇ ಮಳಿ ಹನಿಯ ಘಮ ಘಮದ ನೆನಪು.

ನಮ್ಮ್ ಅಪ್ಪಾಜಿ, ಮನ್ಯಾಗ್ ಕಾಲ್ ಇಟ್ ಕೂಡ್ಲೆ “ಮಗಳೇ” ಅಂತ ಕರ್ದಿದ್ – ಎದಿ ಮುಟ್ಟೂ ಧ್ವನಿಯ ನೆನಪು,

ನಮ್ಮ್ ಅವ್ವ ತೆಲಿ ಮ್ಯಾಲೆ ಕೈ ಸವರಿ ಹಾಡಿದ್ ಲಾಲಿ ಪದದ ನೆನಪು ..

ಪೇಡೇ ಬರೇ ಒಂದ್ ರುಚೀಯಾದ್ ತಿನ್ನೂ ದಿನಸ ಅಲ್ರಿ, ಧಾರ್ವಾಡದವರಿಗೆ.  ನಮಗ ಪೇಡೇ ಅಂದ್ರ ಖುಷಿ; ಪೇಡೇ ಅಂದ್ರ ಊರಿಂದ ದೂರ್ ಇರೂ ದುಃಖ್ಖ…

ಪೇಡೇ ಅಂದ್ರ ಅಜ್ಜಾ, ಅಮ್ಮನ್ ಆಶೀರ್ವಾದದ ನೆನಪಿನ ನೆರಳು .. ಕಾಕಾ, ಅತ್ತಿಗುಳ್ ಕರ್ರ್ಕೊಂಡ್ ಅಡ್ಡ್ಯಾಡ್ಸಿದ್ ಹಾದಿ -ಬೀದಿ ನೆನಪು ..

ಪೇಡೇ ಒಳಗಿನ್ ಹಾಲು – ನನ್ ಹಡೆದವ್ವನ ಊರಿನ ಅಕ್ಕರೆಯ ಕರೆ

ಪೇಡೇ ಒಳಗಿನ್ ಸಕ್ಕ್ರಿ – ನಮ್ಮಪ್ಪಾಜಿ ಮೀಶಿ ತಿರಿವಿ ನಗೂದ್ರಾಗ ಇರೂ ಸಿಹಿ, 

ಪೇಡೇ ಮಾಡು ಬೆಂಕಿ – ನನ್ ಗೆಳೆಯ, ಗೆಳತ್ಯಾರ್ ಸಂಬಂಧದ ಕಾವು

ಪೇಡೇ ಕೆಂಪ್ ಬಣ್ಣ – ನನ್ ಊರಿನ್ ಮಣ್ಣಿನ್ ಚಿತ್ರಣ

ಪೇಡೇ ಮ್ಯಾಲಿನ್ ಸಕ್ಕ್ರಿಪುಡಿ ನನ್ ಆ ಸಿಹಿಕಹಿ ದಿನಗಳ ನೆನಪುಗಳು – ಒಂದಿಷ್ಟ್ ಹತ್ತ್ಕೊಂಡ ಅದಾವು .. ಒಂದಿಷ್ಟ್ ಉದರಿ ಬಿದ್ದ್ ಹೋಗ್ಯಾವು …

❤🙏ನನ್ನ ಅಪ್ಪಾಜಿ ದಿ. ಸಂಗನಬಸವ ಮಟ್ಟಿ ಅವರಿಗೆ ಈ ಬರಹವನ್ನು ಅರ್ಪಿಸುವೆ 🙏❤

– Shantalawz

********************************************************************************

ಅನಿವಾಸಿಗಳ ಅಡಿಗೆಮನೆಯ ಪರಿಣತಿಯನ್ನು ತೋರುವ ಸಂಕ್ರಾಂತಿಯ ಹಬ್ಬದೂಟ. ಆನಿವಾಸಿ ಗುಂಪಿನಿಂದ ಆಯ್ದ ಚಿತ್ರಗಳ ಕೊಲಾಜ್.
ಸಂಕ್ರಾಂತಿಯ ಸಡಗರ... 

ಸಜ್ಜಿ ಭಕ್ರಿ ಗುರೆಳ್ಳು ಹಿಂಡಿ
ಶೇಂಗಾ ಎಳ್ಳು ಹೊಳ್ಗಿ
ಮಜ್ಜಗಿಯೊಳಗ ಅಲ್ಲದ ಒಗ್ಗರಣಿ
ಹುಗ್ಗಿಯ ತಿಂದು ಸುಗ್ಗಿಯ ಮಾಡಿ
ಖಬ್ಬು ಬಾಳೆಯ ನೆರಳಿನಾಗ
ಕೂತು ಭೋಗಿಯನುಂಡು
 
ಶೇಂಗಾ ಕುಸುರೆಳ್ಳು ಬೆಲ್ಲ
ಸಕ್ಕರೆ ಅಚ್ಚು ಕಬ್ಬಿನ ಜಲ್ಲೆ
ಕೈಯಲ್ಲಿ ಸಜ್ಜಾದ ತಟ್ಟೆ
ರೇಷ್ಮೆ ಲಂಗ ಉಟ್ಟು
ಮಕ್ಕಳ ಉತ್ಸಾಹದ ಮಿಶ್ರಣ 
ಭೋಗಿ ಮತ್ತು ಸಂಕ್ರಮಣ
 
- ರಾಧಿಕಾ ಜೋಶಿ

******************************************************************