ಎಚ್. ಎಸ್. ವೆಂಕಟೇಶಮೂರ್ತಿಯವರೊಡನೆ ಒಂದು ಆತ್ಮೀಯ ಸಂವಾದ- ಡಾ,ಪ್ರೇಮಲತ ಬಿ.

(ಯು. ಕೆ. ಕನ್ನಡ ಬಳಗದ ದೀಪಾವಳಿ ಸಂದರ್ಭದಲ್ಲಿ ಎಚ್. ಎಸ್. ವೆಂಕಟೇಶಮೂರ್ತಿ (HSV) ಅವರೊಡನೆ ಆತ್ಮೀಯ ಸಂವಾದವನ್ನು ಪ್ರೇಮಲತಾ ಅವರು ನಡೆಸಿಕೊಟ್ಟು ಸುಮಾರು  2 ವರ್ಷ ಕಳೆದಿವೆ. ಸಂವಾದ ಹಳೆಯದಾದರೂ ಅದು ತನ್ನ ಪ್ರಸ್ತುತತೆಯನ್ನು ಇನ್ನು ಉಳಿಸಿಕೊಂಡಿದೆ. ಇನ್ನು ಹಲವಾರು ವರ್ಷಗಳ ಬಳಿಕ ಓದಿದರೂ ಕೇಳಿದರೂ ಈ ಸಂವಾದ ಎಲ್ಲರ ಆಸಕ್ತಿ ಹಾಗೂ ಆಲೋಚನೆಯನ್ನು ಕೆರಳಿಸಬಹುದು. ಪ್ರೇಮಲತಾ ಅವರು ಕೇಳಿರುವ ಪ್ರಶ್ನೆಗಳು ಸಮರ್ಪಕವಾಗಿವೆ.

HSV ಅವರು ನಮಗೆ ತಿಳಿದಂತೆ ಒಬ್ಬಉತ್ತಮ ವಾಗ್ಮಿ. ಅವರು ಯಾವುದೇ ವಿಚಾರವನ್ನು ಹೇಳಬೇಕಾದರೆ ಅದನ್ನು ವಿಶ್ಲೇಷಿಸಿ, ಸರಳವಾಗಿ ಶುಧ್ಧ ಕನ್ನಡದಲ್ಲಿ ಎಲ್ಲರಿಗೂ ನಿಲುಕುವಂತೆ ಉಚಿತವಾದ ಉದಾಹರಣೆಗಳೊಂದಿಗೆ ವಿವರಿಸುವ ಶಕ್ತಿ ಹಾಗೂ ಪ್ರತಿಭೆಯನ್ನು ಪಡೆದುಕೊಂಡಿದ್ದಾರೆ. ಕೆಲವು ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಡದೆ, ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರದೆ ಪ್ರಶ್ನೆಯ ಸಂದರ್ಭವನ್ನು (Context) ಎತ್ತಿಕೊಂಡು ಅದಕ್ಕೆ ಹಿನ್ನೆಲೆ ನೀಡಿ ಪ್ರಶ್ನೆ ಕೇಳಿದವರೇ ಉತ್ತರವನ್ನು ಕಂಡುಕೊಳ್ಳುವ ಒಂದು ಅವಕಾಶವನ್ನು ಕಲ್ಪಿಸುತ್ತಾರೆ. ಇದು ಅವರ ಸಂವಾದದ ವಿಶೇಷ ಶೈಲಿ.

ಈ ಸಂವಾದದಲ್ಲಿನ ಕೆಲವು ಗಮನಾರ್ಹ ಮಾತುಗಳನ್ನು ಇಲ್ಲಿ ಪ್ರಸ್ತಾಪ ಮಾಡಲಾಗಿದೆ, ಅವು ಹೀಗಿವೆ;

ಪರಿಸರದಲ್ಲಿ ಯಾವ  ಭಾಷೆ ಇರುತ್ತೋ ಅದೇ ನಮ್ಮ ಭಾಷೆಯೂ ಆಗುತ್ತೆ.

 ಬಳಸಿದಷ್ಟೂ ವೃದ್ಧಿಯಾಗೋದು ಭಾಷೆ ಮತ್ತು ದೀಪ’.

ಮನೆಯ ಹಲವು ಕಿಟಕಿ ಬಾಗಿಲುಗಳನ್ನು ತೆಗೆದಾಗ ಹೇಗೆ ಹೆಚ್ಚು ಬೆಳಕು ಬರುತ್ತೊ ಹಾಗೆ ಬೇರೆ ಬೇರೆ ಭಾಷೆಗಳನ್ನು ಕಲಿಯೋದು.

ಈ ಮೇಲಿನ ಮಾತುಗಳನ್ನು ಗಮನಿಸಿದಾಗ ಈ ವಿಚಾರಗಳು ಹೊಸತೇನು ಅಲ್ಲ ಆದರೆ ಅದನ್ನು ಹೇಳುವ ರೀತಿ ಬಹಳ ಸೊಗಸಾಗಿದೆ, ಎಷ್ಟು ನಿಜ! Very convincing! – ಸಂ )

***

ಎಚ್. ಎಸ್. ವೆಂಕಟೇಶಮೂರ್ತಿಯವರೊಡನೆ ಒಂದು ಆತ್ಮೀಯ ಸಂವಾದ- ಡಾ. ಪ್ರೇಮಲತ ಬಿ.

ಕನ್ನಡ ಬಳಗದ   ದೀಪಾವಳಿ ಕಾರ್ಯಕ್ರಮಗಳು 18-19/10/2014 ರಂದು ಚೆಸ್ಟರ್ ಫೀಲ್ದ ನ ವೈಂಡಿಂಗ್ ವ್ಹೀಲ್ ಸಭಾಂಗಣದಲ್ಲಿ ನಡೆಯಿತು. ವಿಶೇಷ ಅತಿಥಿಗಳಾಗಿ ಬಂದಿದ್ದ ಪ್ರಸಿಧ್ಧ ಮತ್ತು ವಿಶಿಷ್ಟ ಸಾಹಿತಿಗಳಾದ ಹೆಚ್.ಎಸ್.ವಿ.ಯವರೊಡನೆ ಒಂದು ಕಿರು ಸಂದರ್ಶನ ನಡೆಯಿತು.

ನಮ್ಮ ಈ ಅನಿವಾಸಿಯ ಪ್ರಥಮ ಸಭೆಯ ಅಧ್ಯಕ್ಷತೆಯನ್ನು ವಹಿಸಿ ನಮ್ಮೆಲ್ಲರಲ್ಲಿ  ಹೆಮ್ಮೆ ತಂದ ಕವಿ ಇವರು. ಇತ್ತೀಚೆಗೆ ಇವರ ರಾಮಾಯಣಕ್ಕೆ ಸಂಬಂಧಿಸಿದ ಮಹಾಕೃತಿ ಕೂಡ ಬಿಡುಗಡೆಯಾಗಿದೆ. ’ತೆರೆದಷ್ಟೂ ಬಾಗಿಲು…..’ ಎನ್ನುವ  ಅಂಕಣವನ್ನು  ಅವಧಿ ದಿನಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದು, ಯಾವುದು ಕಾವ್ಯ, ಅದರ ಬೆಳವಣಿಗೆ ಇತ್ಯಾದಿ ಕುರಿತು ಘನತರವಾದ ಪ್ರಬುದ್ಧ ಬರವಣಿಗೆಯ ಸರಣಿ ಬರಹದಲ್ಲಿ ತೊಡಗಿದ್ದಾರೆ. ಸರಳತೆ, ಪ್ರಬುದ್ಧತೆ ಮತ್ತು ನೈಜತೆಯನ್ನು ತುಂಬಿದ ಕವಿ ಮತ್ತು ಹೃದಯವಂತ ಕನ್ನಡಿಗರಿವರು. ’ಅನಿವಾಸಿ’ಗೆಂದೇ ಈ ಸಂದರ್ಶನವನ್ನು ಮಾಡಿದ್ದು.

ಈ ಸಂದರ್ಶನದ ಒಂದು ತುಣುಕನ್ನು ಯು ಟ್ಯೂಬಿ ನಲ್ಲಿ ನೋಡಬಹುದು. https://www.youtube.com/watch?v=zTJtHv599-Q

ಈ ಸಂದರ್ಶನವನ್ನು ರೆಕಾರ್ಡ್ ಮಾಡಿ, ಪರಿಷ್ಕೃತಗೊಳಿಸಿ, ಯು ಟ್ಯೂಬಿಗೇರಿಸಿದವರು ಡಾ. ಶ್ರೀವತ್ಸ ದೇಸಾಯಿಯವರು.

ಪ್ರೇಮಲತ –  ನಮಸ್ಕಾರ ಎಚ್, ಎಸ್.ವಿ ಯವರಿಗೆ. ನೀವು ಕಥೆ-ಪ್ರಬಂಧಗಳಿಂದ ಶುರುಮಾಡಿ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಬರೆದಿದ್ದೀರಿ. ಆದ್ರೆ ನೀವು ಕಥನ-ಕವನಗಳನ್ನ ಪ್ರಧಾನ ಮಾಧ್ಯಮ ಮಾಡಿಕೊಳ್ಳೋದಕ್ಕೆ ಏನಾದ್ರೂ ಕಾರಣಗಳಿವೆಯೇ? ಉದಾಹರಣೆಗೆ, ಸಾಹಿತ್ಯ ಪ್ರಕಾರಗಳಲ್ಲಿ ಆ ಮಾಧ್ಯಮಕ್ಕಿದ್ದ ಕೊರತೆ?

ಹೆಚ್.ಎಸ್.ವಿ.- ೧೯೫೦ ರಲ್ಲಿ ಅಡಿಗರಿಂದ ನವ್ಯಸಾಹಿತ್ಯದ ಉದಯವಾದ ಮೇಲೆ ಹಳೆ ಸಾಹಿತ್ಯ ಪ್ರಕಾರಗಳು ಹಿಂದೆ ಬಿದ್ದವು. ಸಾನೆಟ್ ಗಳ ರಚನೆ, ಭಾವಗೀತೆಗಳ ರಚನೆ, ಕಥನ-ಕವನಗಳು ಇವನ್ನು ಬರೆಯುವವರು ವಿರಳವಾದ್ರು. ೧೯೭೦ ರ ವೇಳೆಗೆ ಈ ಕಳೀತಾ ಇದ್ದ ಪ್ರಕಾರಗಳ ಪುನರುತ್ಥಾನದ ಸಂಕಲ್ಪ ತೊಟ್ಟೆ.

ಮಾಸ್ತಿ, ಎಕ್ಕುಂಡಿ, ಗೋವಿಂದ ಪೈ, ಕಡೆಂಗೋಡ್ಲು ಶಂಕರಭಟ್ಟರು ಕಥನ-ಕವನಗಳನ್ನು ಬರೆದಿದ್ದರು. ರಾಜರತ್ನಂ ಇನ್ನಿತರರ ನಂತರ ಮಕ್ಕಳ ಸಾಹಿತ್ಯಕ್ಕೂ ಕೊರತೆ ಇತ್ತು. ೧೯೭೭ ರಲ್ಲಿ  ನನ್ನ ಸಿಂದಾಬಾದನ ಆತ್ಮಕತೆ-೩ ನೀಳ್ಗತೆಗಳನ್ನು ಒಳಗೊಂಡ ಕಥನ-ಕವನ ಹೊರಬಂತು.

ಪ್ರೇಮಲತ– ಹೋದಿಗೆರೆ, ಹೊಳಲ್ಕೆರೆ, ಚಿತ್ರದುರ್ಗದ ಹಿನ್ನೆಲೆ ಇರೋ ನಿಮ್ಮ ಕೆಲವು  ಬರಹದಲ್ಲಿ ಜಾನಪದ ಮತ್ತು ಯಕ್ಷಗಾನದ ಪ್ರಭಾವ ಇದೆ. ಆದ್ರೆ ಬೆಂಗಳೂರಿನ ಆಡುನುಡಿಯನ್ನು ಕೂಡ ನೀವು ಇನ್ನಿಲ್ಲ ಅನ್ನುವಂತೆ ಉಪಯೊಗಿಸಿದ್ದೀರಿ. ಇದು ಅಳವಡಿಕೆ ತಂತ್ರನೇ ಅಥವಾ ಪರಿಸರದ ಪ್ರಭಾವವೇ?

ಹೆಚ್.ಎಸ್.ವಿ.- ವಸ್ತು ಯಾವ ಭಾಷೆಯನ್ನು ಅಪೇಕ್ಷಿಸುತ್ತೆ ಅನ್ನೋದರ ಮೇಲೆ ನನ್ನ ಬರವಣಿಗೆ ಅವಲಂಬಿಸುತ್ತೆ. ಅನೇಕ ಭಾಷಾವಲಯಗಳು ನಮ್ಮ ಮನಸ್ಸಲ್ಲಿ ಜಾಗೃತವಾಗಿರುತ್ತವೆ. ’ಏಕಂ ಸತ್” ಅನ್ನೋದ್ರಲ್ಲಿ ನನಗೆ ನಂಬಿಕೆಯಿಲ್ಲ, ’ಆನೇಕಂ ಸತ್” ಅನ್ನೋದೆ ನಿಜ. ಕನ್ನಡದಲ್ಲಿ ಅನೇಕ ತರದ ಕನ್ನಡಗಳಿವೆ. ಧಾರವಾಡ ಕನ್ನಡ, ದಾವಣಗೆರೆ ಕನ್ನಡ, ಮೈಸೂರು ಕನ್ನಡ ಹೀಗೇ ಹಲವು ತರದ ಕನ್ನಡದಲ್ಲಿ ಬರೀಬಹುದು. ನವೋದಯಕ್ಕಿಂತ ಮೊದಲು, ಕುವೆಂಪು ಅವರು ’ಕನ್ನಡವೊಂದೇ ಸತ್ಯ’ ಅಂತ ಹೇಳಿದ್ದಾರೆ. ಒಂದು ಕನ್ನಡ ಮಾಡ್ಬೇಕು ಅಂತ ಬೇಂದ್ರೆ ಕೂಡ ಕರೆ ಕೊಟ್ಟರು. ಆದ್ರೆ ಬೇಂದ್ರೆಯವರ ಧಾರವಾಡ ಕನ್ನಡ ಮಿಶ್ರಿತ ಕವನಗಳು ಜನಪ್ರಿಯವಾದಂತೆ ಸಂಸ್ಕೃತ  ಕವನಗಳು ಜನಪ್ರಿಯವಾಗಲಿಲ್ಲ.

hsv-interview
ಛಾಯಾ ಚಿತ್ರ-ಡಾ.ಶ್ರೀವತ್ಸ ದೇಸಾಯಿ

 

ಪ್ರೇಮಲತ– ಪ್ರಾಥಮಿಕ ಶಿಕ್ಷಣವನ್ನು  ಕನ್ನಡದಲ್ಲಿ ಪಡೆದಿರೋ ಜನ, ಪ್ರಪಂಚದ ಯಾವುದೇ ಮೂಲೆನಲ್ಲಿದ್ರೂ, ಸಾಹಿತ್ಯವನ್ನು ಭಾಷೆಯನ್ನು ಉಳಿಸೋಕೆ ಪ್ರಯತ್ನ ಮಾಡೋದು ನಿಮ್ಮ ಗಮನಕ್ಕೆ ಬಂದಿರಬಹುದು. ನೀವು ಬಹಳಷ್ಟು ಮಕ್ಕಳ ಸಾಹಿತ್ಯ ಬರೆದಿದ್ಡೀರಿ. ಭಾಷೆ ಮತ್ತು ಸಾಹಿತ್ಯನ ಉಳಿಸೋಕೆ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಬೇಕು ಅನ್ನೋ ಜನದ ನಿಲುವು ನಿಮಗೆ ಸರಿ ಅನ್ನಿಸುತ್ತಾ?

ಹೆಚ್.ಎಸ್.ವಿ. -ಆರಂಭದಲ್ಲಿ ನಾವು ಯಾವುದನ್ನು ಅನುಕರಣೆಯಿಂದ ಕಲೀತೀವೋ ಅದೇ ನಮ್ಮ ಭಾಷೆಯಾಗುತ್ತೆ. ಅಂತರಂಗದ ದ್ರವ್ಯವಾಗುತ್ತೆ. ದಂಡಿ ಹೇಳ್ತಾನೆ, ಭಾಷೆಯಿಲ್ಲದಿದ್ರೆ ಇಡೀ ಜಗತ್ತು ಅಂಧಕಾರದಲ್ಲಿ ಮುಳುಗುತ್ತೆ ಅಂತ.

ಭಾಷೆ ಸಹಜವಲ್ಲ. ಅಂದ್ರೆ ಹುಟ್ಟಿನಿಂದ ಬಂದದ್ದಲ್ಲ. ಅಳು-ನಗುವಿನಂತಲ್ಲ. ಅನುಕರಣೆಯಿಂದ ಬರುವಂತದ್ದು. ಇದು ಶಿಕ್ಷಣದಿಂದ ಮಾತ್ರ ಬರುವಂತದ್ದಲ್ಲ. ಪರಿಸರದಲ್ಲಿ ಯಾವ  ಭಾಷೆ ಇರುತ್ತೋ ಅದೇ ನಮ್ಮ ಭಾಷೆಯೂ ಆಗುತ್ತೆ. ಆ ಭಾಷೆಯಲ್ಲೆ ನಾವು ಚಿಂತಿಸೋದು, ಕನಸು ಕಾಣುವುದು.

ಪ್ರೇಮಲತ– ಕಾಲ ಬದಲಾಗಿದೆ. ಸಾಮೂಹಿಕ  ಮಾಧ್ಯಮಗಳಲ್ಲಿ  ಮತ್ತು ಜನಪ್ರಿಯ ಎಲೆಕ್ಟ್ರಾನಿಕ್  ಉಪಕರಣಗಳಲ್ಲಿ ಕನ್ನಡದ ಬಳಕೆ ಸಲೀಸಾದರೆ, ಹೆಚ್ಚಾದರೆ ಕನ್ನಡ ಇನ್ನಷ್ಟು ಕಾಲ ಉಳಿಯುತ್ತೆ ಅನಿಸುತ್ತಾ?

ಹೆಚ್.ಎಸ್.ವಿ.- ಬಳಸಿದಷ್ಟೂ ವೃದ್ಧಿಯಾಗೋದು ಭಾಷೆ ಮತ್ತು ದೀಪ. ಅದಕ್ಕೆಂದೇ ’ಹಚ್ಚೇವು ಕನ್ನಡದ ದೀಪ’ ಅಂತ ಹೇಳೋದು. ಹೆಚ್ಚು ಹೆಚ್ಚು ರೀತಿಯಲ್ಲಿ ಬಳಸಿದಷ್ಟೂ ಕನ್ನಡದ ವೃದ್ಧಿ ಯಾಗುತ್ತೆ.

ಮಕ್ಕಳಿಗೆ ಒಟ್ಟಿಗೇ ಹಲವು ಭಾಷೆಗಳನ್ನು ಕಲಿವ ಶಕ್ತಿಯಿದೆ. ಕಲಿವಾಗ ತಪ್ಪು ಮಾಡುವ ಚಿಂತೆ ಮಕ್ಕಳಿಗಿಲ್ಲ. ಹಿರಿಯರಲ್ಲಿ ಅವಮಾನದ ಅಂಜಿಕೆ ಇರೋದರಿಂದ  ಭಾಷೆ ಕುಂಠಿತವಾಗುತ್ತೆ. ಇಲ್ಲಿನ ಮಕ್ಕಳ ಪರಿಸರದಲ್ಲಿ ಅವರು ಇಂಗ್ಲೀಷ್ ಕಲೀಲಿ ಅದರ ಜೊತೆ ಕನ್ನಡವನ್ನು ಕೂಡ ಹೇಳಿಕೊಡಿ. ಮಕ್ಕಳಿಗೆ ಭಾಷೆ ಭಾರ ಆಗೋದಿಲ್ಲ. ಮನೆಯ ಹಲವು ಕಿಟಕಿ ಬಾಗಿಲುಗಳನ್ನು ತೆಗೆದಾಗ ಹೇಗೆ ಹೆಚ್ಚು ಬೆಳಕು ಬರುತ್ತೊ ಹಾಗೆ ಬೇರೆ ಬೇರೆ ಭಾಷೆಗಳನ್ನು ಕಲಿಯೋದು.

ಮಾತೃ ಭಾಷೆ ಅಂದ್ರೆ ಅಮ್ಮ ಮಾತಾಡೋ ಭಾಷೆ ಅಲ್ಲ. ಎಷ್ಟೋ ಬಾರಿ ಇದು ಪರಿಸರದ ಭಾಷೆಯಾಗಿಬಿಡತ್ತೆ

ಮಾಸ್ತಿಯವರ ಮನೆ ಮಾತು ತಮಿಳು ಆದ್ರೆ ಬೀದಿ ಮಾತು ಕನ್ನಡ. ಬೇಂದ್ರೆ ಯವರ ಮನೆ ಮಾತು ಮರಾಠಿ. ಪುತಿನ ಅವರ ಮನೆ ಮಾತು ತಮಿಳು. ನಾ. ಕಸ್ತೂರಿಯವರು ಮಲೆಯಾಳಂ ನಲ್ಲಿ ಬರೀಲಿಲ್ಲ. ಸಿದ್ಧಯ್ಯ ಪುರಾಣಿಕರು ಹೈದ್ರಾಬಾದ್ ಕರ್ನಾಟಕದಲ್ಲಿದ್ರು ಬರೆದದ್ದು ಕನ್ನಡದಲ್ಲಿ. ಪ್ರಜ್ಞೆ ಮತ್ತು ಪರಿಸರ ಎರಡು ಅವಿಚ್ಛಿನ್ನ ಭಾಗಗಳು. ಅನಂತಮೂರ್ತಿಯವರು ಇದನ್ನೆ ಹೇಳ್ತಾರೆ. ನಿಮ್ಮ ಈ ವಾತಾವರಣದಲ್ಲಿ ನೀವು ಹಾಲುಡಿಸಿದಂತೆ ಕನ್ನಡ ಕಲಿಸೋದು. ನೀವು ಕೊಟ್ಟಷ್ಟು ಅವರಿಗೆ ದಕ್ಕುತ್ತೆ.

ಪ್ರೇಮಲತ– ಕನ್ನಡ ಸಾಹಿತ್ಯಕ್ಕೆ ನಿಮ್ಮ ಕೊಡುಗೆ ಅದ್ಭುತವಾದ್ದು. ನಿಮ್ಮ ಮುಂದಿನ ರಚನೆ-ಬರವಣಿಗೆ ಏನು ಅಂತ ಕೇಳಬಹುದಾ?

ಹೆಚ್.ಎಸ್.ವಿ.- ತಿಳಿಗನ್ನಡದಲ್ಲಿ ಪಂಪನ ’ಆದಿಪುರಾಣ” ಬರೀಬೇಕು ಅಂತಿದೆ. ’ಬುದ್ಧಸ್ಮಿತ’ ಅನ್ನೋ ಬುದ್ಧನ ಬಗೆಗಿನ ಮಹಾಕಾವ್ಯವೊಂದನ್ನು ರಚಿಸೋ ಕನಸಿದೆ.ಆದ್ರೆ ಏನು ಬರೀತೀನೆ ಅನ್ನೋದು ನಿಜಕ್ಕು ಅಸ್ಪಷ್ಟ ಮತ್ತು ನಿಗೂಢ!

ಪ್ರೇಮಲತ– ಹೊರದೇಶದ ಕನ್ನಡಿಗರಾದ ನಾವು, ಕನ್ನಡ ಉಳಿಸೋಕೆ ಮಾಡೋ ಪ್ರಯತ್ನಗಳ ಬಗ್ಗೆ ನಿಮ್ಮ ಸಲಹೆ ಏನು?

ಹೆಚ್.ಎಸ್.ವಿ.- ನಿಮಗಿರೋ ಕನ್ನಡದ ಅಭಿಮಾನ ಬೆಂಗಳೂರಿನವರಿಗಿಲ್ಲ. ನನ್ನ ಸಲಹೆ ಇಷ್ಟೆ, ಕನ್ನಡದಲ್ಲಿ ಮಾತಾಡಿ, ಕನ್ನಡದಲ್ಲಿ ಕೆಲಸಮಾಡಿ. ಇಲ್ಲಿ ಎಲ್ಲ ಚಟುವಟಿಕೆಗಳನ್ನು ಕನ್ನಡದಲ್ಲಿ ಮಾಡ್ತಿರೋದನ್ನು ನೋಡಿ ನನಗೆ ತುಂಬ ಆಶ್ಚರ್ಯ. ಕನ್ನಡದಲ್ಲಿ ಮಾತಾಡಿ ಕನ್ನಡದಲ್ಲಿ ಕೆಲಸಮಾಡ್ತಾ ಹೋಗಿ, ಕನ್ನಡ ಖಂಡಿತಾ ಉಳಿಯುತ್ತದೆ.

*              *               *                *            *

ಸಂದರ್ಶನದ ಒಂದು ತುಣುಕನ್ನು ಯು ಟ್ಯೂಬಿ ನಲ್ಲಿ ನೋಡಿ:

 

ಬಿ.ಆರ್.ಛಾಯ ಮತ್ತು ಪದ್ಮಪಾಣಿ ‘ಜೋಡಿ’ಯ ಸ್ಪೆಷಲ್

ಕನ್ನಡ ಬಳಗ ಯು.ಕೆ. ಈ ವರ್ಷ ಕೂಡ ಯಶಸ್ವಿಯಾಗಿ ‘ದೀಪಾವಳಿ ೨೦೧೬’  ಕಾರ್ಯಕ್ರಮವನ್ನು ನಡೆಸಿತು. ಅದರ ವಿಶೇಷ ವರದಿ, ವಿವರಗಳು, ಅನಿಸಿಕೆಗಳು ಸದ್ಯದಲ್ಲೇ ನಿಮ್ಮನ್ನು ತಲುಪಲಿವೆ. ಈ ವಾರ ನಿಮ್ಮ ಮುಂದಿರುವುದು ‘ಬಿ.ಆರ್.ಛಾಯ ಮತ್ತು ಪದ್ಮಪಾಣಿ ಜೋಡಿಯ ಸ್ಪೆಷಲ್’. ‘ಅನಿವಾಸಿ’ ಬಳಗದ ಹಲವಾರು ಸದಸ್ಯರುಗಳು ಒಟ್ಟುಗೂಡಿ ಇದನ್ನು ಸಿದ್ಧಪಡಿಸಿದ್ದಾರೆ.  ಏನಿದೆ ಈ ಸ್ಪೆಷಲ್ ನಲ್ಲಿ?? ಓದಿ ನೀವೇ ಹೇಳಿ!!

14657402_1284578304932105_1475829304451788245_n
ಫೇಸ್ ಬುಕ್ ಚಿತ್ರ

ಪದ್ಮಪಾಣಿ ಜೋಡಿದಾರ್ ಮತ್ತು ಬಿ.ಆರ್.ಛಾಯ ದಂಪತಿ

ಕನ್ನಡ ಬಳಗ ಯು.ಕೆ.ಯ 2016 ದೀಪಾವಳಿ ಕಾರ್ಯಕ್ರಮಕ್ಕೆ ಆಗಮಿಸಿದ ಬಿ. ಆರ್. ಛಾಯಾ ಅವರ ಸಂದರ್ಶನ

                                                – ಶ್ರೀವತ್ಸ ದೇಸಾಯಿ

’ಕರ್ನಾಟಕದ ನೈಟಿಂಗೇಲ್’ ಎಂದೇ ಸಂಗೀತಪ್ರಿಯರಿಗೆಲ್ಲ ಚಿರಪರಿಚಿತರಾದ ಬೆಂಗಳೂರು ರಾಮಮೂರ್ತಿ ಛಾಯಾ ಅವರು ಇದೇ ವರ್ಷ ನವೆಂಬರ್ 5 ರಂದು ಯು ಕೆ ಕನ್ನಡಬಳಗಕ್ಕೆ ಬಂದು ತಮ್ಮ ಸಂಗೀತದ ರಸದೂಟದಿಂದ ಕನ್ನಡಿಗರ ಹೃದಯವನ್ನು ಗೆದ್ದರು. ಕಳೆದ ನಾಲ್ಕು ದಶಕಗಳಲ್ಲಿ ತಮ್ಮ ಕನ್ನಡ ಭಾವಗೀತೆ, ಮಕ್ಕಳ ಗೀತೆ, ವಿವಿಧ ಭಾಷೆಗಳ ಚಲನ ಚಿತ್ರಗೀತೆಗಳು, ಹಿನ್ನೆಲೆ ಗಾಯನದಿಂದ ದೇಶ-ವಿದೇಶಗಳಲ್ಲಿ ಮನೆಮಾತಾಗಿದ್ದಾರೆ. ಚಿಕ್ಕಂದಿನಿಂದಲೂ ಸಂಗೀತ-ಹಾಡು ಇವೇ ತಮ್ಮ ಜೀವನವೆಂದುಕೊಂಡು ಈಗಲೂ ಪ್ರತಿ ಹಾಡಿನಲ್ಲಿಯೂ ಹೊಸ ಅನುಭವವನ್ನು ತಾವೂ ಪಡೆದು ಕೇಳುಗರಿಗೂ ಉಣಿಸಿ ತೃಪ್ತಿಪಡಿಸುವ ಅಸಾಧಾರಣ ವ್ಯಕ್ತಿತ್ವ ಅವರದು. ಈ ಬಾರಿ ಅವರು ಇಂಗ್ಲೆಂಡಿನಲ್ಲಿ ಕೊಟ್ಟ ಎರಡು ಸಂಗೀತ ಕಾರ್ಯಕ್ರಮಗಳ ನಂತರ ಮೂರು ವಾರಗಳ ಅಮೇರಿಕೆಯ ಪ್ರವಾಸಕ್ಕೆ ಹೊರಡುವ ಯೋಜನೆಯಿತ್ತು. ಇಂಗ್ಲೆಂಡಿನಿಂದ ಹೊರಡುವ ಮುನ್ನಾದಿನ ನನಗೆ ಅವರ ಸಂದರ್ಶನ ಪಡೆಯುವ ಸದವಕಾಶ ಸಿಕ್ಕಿತು. ಅವರ ಮತ್ತು ಸಂಗೀತದ ಜೋಡಿ ಒಂದು ತರವಾದರೆ, ಛಾಯಾ ಮತ್ತು ಜೋಡಿದಾರರ (ಅವರ ಪತಿ ಪದ್ಮಪಾಣಿ) ಆತ್ಮೀಯ ಜೋಡಿ ಇನ್ನೊಂದು ತರ.

ನೇರವಾಗಿ ನಾನು ಅವರ ಸಂಗೀತ ಯಾತ್ರೆಯ ಆದಿಯಿಂದಲೇ ಸಂದರ್ಶನ ಪ್ರಾರಂಭ ಮಾಡಿದೆ.

ಶ್ರೀವತ್ಸ: ನೀವು ಶಾಲೆಯಲ್ಲಿದ್ದಾಗಿನಿಂದಲೇ ನಿಮಗೆ ಹಾಡುಗಾರಿಕೆ-ಸಂಗೀತದಲ್ಲಿದ್ದ ಪ್ರತಿಭೆಯನ್ನು ಪ್ರತ್ಯಕ್ಷ ಕಂಡದ್ದನ್ನು ನಮ್ಮ ಕನ್ನಡ ಬಳಗದ ವಿಶ್ವನಾಥ್ ಮತ್ತು ವಿನತೆ ನೆನಪಿಸಿಕೊಂಡಿದ್ದಾರೆ. (ಅವರ ಬರಹಗಳು ಈ ಸಂದರ್ಶನದ ನಂತರ ಇವೆ). ಅದು ಹೇಗೆ ಶುರುವಾಯಿತು?

ಛಾಯಾ: ಬಹುಶಃ ನನ್ನ ಅಜ್ಜಿಯಿಂದಿರಬೇಕು. ಅವರ ಹೆಸರು ಭಾಗೀರತಮ್ಮ. ಅವರಲ್ಲಿ ನಿಂತ ನಿಂತಲ್ಲೆ ಹಾಡುಕಟ್ಟಿ ಸುಶ್ರಾವ್ಯವಾಗಿ ಹಾಡುವ ಕಲೆಯಿತ್ತು. ಬಹಳ ಚೆನ್ನಾಗಿ ಹಾಡುತ್ತಿದ್ದರು. ನನ್ನ ತಾತ ಕೃಷ್ಣರಾವ್ ಗುಬ್ಬಿ ಕಂಪನಿಯಲ್ಲಿ ಹಾರ್ಮೋನಿಯಂ ನುಡಿಸುತ್ತಿದ್ದರು. ಅವರಿಬ್ಬರ ಪ್ರಭಾವವಿರಬೇಕು. ಅದಲ್ಲದೆ ನನ್ನ ತಂದೆ ತಾಯಿ ಸಹ ಸಂಗೀತಪ್ರಿಯರಾಗಿದ್ದರು. ತಂದೆಯವರು ನನ್ನನ್ನು ಎಲ್ಲ ಕಡೆ ಸಂಗೀತಕ್ಕೆ ಕರೆದೊಯ್ಯುತ್ತಿದ್ದರು. ಹೀಗೆಯೇ ಹಾಡಿನ ಹುಚ್ಚು ಶುರುವಾದದ್ದು.

thumbnail_chaya-singing
ನವೆಂಬರ್ ೫ರಂದು ಯು.ಕೆ. ಕನ್ನಡ ಬಳಗದಲ್ಲಿ ಹಾಡುತ್ತಿರುವ ಛಾಯಾ; ವಿಶ್ವನಾಥ್ ಮಂದಗೆರೆ ತೆಗೆದ ಚಿತ್ರ

ನಂತರ ಶಾಸ್ತ್ರೀಯ ಸಂಗೀತ ಕಲಿತು (ಅವರ ಗುರುಗಳು ಶ್ರೀಮತಿ ಜಗನ್ಮಾತಾ ಮತ್ತು ವಿಜಯವಾಣಿ) ಹತ್ತು ವರ್ಷಕ್ಕೂ ಮೊದಲೇ ಸೀನಿಯರ್ ಪರೀಕ್ಷೆ ಪಾಸು ಮಾಡಿದ್ದೆ. ಆ ನಂತರ ನಾಲ್ಕು ವರ್ಷ ಅಭ್ಯಾಸ ನಿಂತು ಹೋಗಿತ್ತು. ಮಕ್ಕಳ ಸಂಗೀತ ಸ್ಫರ್ಧೆಗಳಲ್ಲೆಲ್ಲ ನಾನೇ ಫರ್ಸ್ಟ್. ನನ್ನ ಶಾಲೆಗೇ ಬಹುಮಾನ ಬರುತ್ತಿತ್ತು (ವಿಶ್ವನಾಥರ, ವಿನತೆಯ ನೆನಪುಗಳನ್ನು ಓದಿ). ಒಮ್ಮೆ ಚೆನ್ನೈಗೆ ನನ್ನ ತಂದೆಯವರೊಡನೆ ಮ್ಯೂಸಿಕ್ ರೆಕಾರ್ಡಿಂಗ್ ನೋಡಲು ಸ್ಟೂಡಿಯೋಗೆ ಹೋಗಿದ್ದೆ. ಆಗ ತಂದೆಯವರು ಇಳೆಯರಾಜಾ ಅವರ ಎದುರಿಗೆ ’ಇವಳಿಗೂ ಹಾಡುವದರಲ್ಲಿ ಬಹಳ ಆಸ್ಥೆ’ ಅಂದರು. ಅಂದ ಕೂಡಲೇ ಅವರು ನನ್ನಿಂದ ಹಾಡಿಸಿದರು. ಆಗಲೇ ತಮ್ಮ ತಮಿಳು ’ಜೋತಿ’ ಚಿತ್ರಕ್ಕಾಗಿ ನನ್ನ ಮೂರು ಹಾಡುಗಳ ಧ್ವನಿಮುದ್ರಣ ಮಾಡಿಕೊಂಡರು (1982 ರಲ್ಲಿ). ಆನಂತರ ನಾಲ್ಕು ವರ್ಷದ ಗ್ಯಾಪ್. ಹದಿನಾರು ವರ್ಷದವಳಿದ್ದಾಗ ಮತ್ತೆ ಚೆನ್ನೈಗೆ ಒಂದು ಹಾಡುಗಾರಿಕೆಯ ಸ್ಫರ್ಧೆಗೆ ಹೋಗಿದ್ದೆ. ಅದಕ್ಕೆ ನಿರ್ಣಾಯಕರಾಗಿ ಪಿ.ಬಿ. ಶ್ರೀನಿವಾಸ್, ವಿಜಯಭಾಸ್ಕರ ರಾವ್ ಮುಂತಾದವರಿದ್ದರು. ನನಗೇ ಫರ್ಸ್ಟ್ ಪ್ರೈಸ್! ಅವರು ನನಗೆ ಸಿನಿಮಾದಲ್ಲಿ ಹಾಡುವ ಇಚ್ಚೆಯಿದೆಯೇ ಎಂದು ಕೇಳಿದಾಗ ಯಾರು ಒಲ್ಲೆ ಅಂದಾರು? ಪುಟ್ಟಣ್ಣ ಕಣಗಾಲರ ’ಅಮೃತ ಘಳಿಗೆ’ ಚಿತ್ರದಲ್ಲಿ ಮೂರು ಹಾಡುಗಳನ್ನು ನನ್ನಿಂದ ಹಾಡಿಸಿದವರು ಮ್ಯೂಸಿಕ್ ಡೈರೆಕ್ಟರ್ ’’ಸ್ವರ ಸಮ್ರಾಟ್” ವಿಜಯಭಾಸ್ಕರ್ ಅವರು. ನಾನು ಅವರನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ.

           (Please Click on the triangle in the middle to play the video above and the one below)

ಶ್ರೀವತ್ಸ: ”ಹಿಂದುಸ್ಥಾನವು ಎಂದೂ ಮರೆಯದ” ಹಾಡಿನಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದಿರಿ. ಮೊನ್ನೆ ನಮ್ಮ ಕನ್ನಡ ಬಳಗದಲ್ಲೂ ಅದನ್ನೇ ಮೊದಲನೆಯದಾಗಿ ಹಾಡಿ ನಮ್ಮಲ್ಲರ ಮನ ತಣಿಸಿದಿರಿ. ಕನ್ನಡ ಚಿತ್ರರಂಗದಲ್ಲೇನೋ ಸಾವಿರಾರು ಹಾಡುಗಳನ್ನು ಹಾಡಿ ಕನ್ನಡಿರ ಮನ ಸೂರೆಗೊಂಡಿದ್ದೀರಿ. ಹಿಂದಿ, ತುಳು,ತೆಲುಗು, ತಮಿಳು ಕೂಡಿ ಮುನ್ನೂರಕ್ಕು ಮೇಲಿನ ’ಎಂದೂ ಮರೆಯದ’ ಸಿನಿಮಾ ಗೀತಗಳನ್ನು ಹಾಡಿದ್ದೀರಿ. ನಿಮಗೆ ತೃಪ್ತಿ ಕೊಟ್ಟ ಹಾಡುಗಳು ಯಾವವು? ವಿಜಯ ಭಾಸ್ಕರ ರಾವ್ ಅವರು ನಿಮ್ಮನ್ನು ಬೆಳಕಿಗೆ ತಂದವರಲ್ಲವೆ? ಯಾರು ನಿಮ್ಮ ಅಚ್ಚುಮೆಚ್ಚಿನ ಸಂಗೀತದ ಡೈರೆಕ್ಟರ್? ಇವನ್ನು ಕೇಳಲೇ ಬೇಕಲ್ಲವೆ?

ಛಾಯಾ: ತಾಯಿಗೆ ಯಾವ ಮಗು ಹೆಚ್ಚು ಪ್ರೀತಿ ಅಂದ ಹಾಗಾಯಿತಲ್ಲ. (ಈ ಉತ್ತರ ಈ ಮೊದಲೇ ಅನಿರೀಕ್ಷಿಸಿತವಲ್ಲ ಎಂದುಕೊಂಡಿದ್ದೆ!). ನಾನು ಹೆಚ್ಚು ಕಡಿಮೆ ಎಲ್ಲ ಡೈರೆಕ್ಟರರೊಡನೆ, ಎಲ್ಲ ಕಲಾವಿದರ ಜೊತೆಗೆ ಹಾಡಿದ್ದೇನೆ. ಒಬ್ಬರು ಅಂತ ಹೆಸರು ಎತ್ತಿ ಹಿಡಿದು ಹೇಳಲಾರೆ. ನಾನು ಮುನ್ನೂರಕ್ಕೂ ಮೇಲೆ ಸಿನಿಮಾದಲ್ಲಿ, ಕನ್ನಡ ಭಾವಗೀತಗಳು, ಜನಪದ ಗೀತಗಳು, ಮಕ್ಕಳ ಹಾಡುಗಳಲ್ಲದೆ, ಸಿನಿಮಾ ಹಾಡುಗಳ ರೆಕಾರ್ಡಿಂಗ್ ಮಧ್ಯಂತರದಲ್ಲಿ ಕರ್ನಾಟಕದ ಮೂಲೆ ಮೂಲೆಗೆ ಅವರ ಆಮಂತ್ರಣದ ಮೇಲೆ ಹೋಗಿ ಕರ್ನಾಟಕದ ನೂರಾರು ಮಠ, ಮಂದಿರ ಇವುಗಳಿಗಾಗಿ ಪ್ರೈವೇಟ್ ರೆಕಾರ್ಡಿಂಗ್ ಮಾಡಿದ್ದುಂಟು, ಅವುಗಳ ಸಂಖ್ಯೆ 10 – 12,000 ವರೆಗೆ ಹೋಗಿರಬಹುದು. ಅವುಗಳು ಕೆಸೆಟ್ಟುಗಳಲ್ಲಿ, ಇಂಟರ್ನೆಟ್ಟಿನಲ್ಲಿ, ರೇಡಿಯೋದಲ್ಲಿ ಹುಡುಕಿದರೆ ಸಿಗಬಹುದು. ಕೆಲವೊಂದು ನನಗೇ ಲೆಕ್ಕಕ್ಕೆ ಸಿಗವಲ್ಲದಾಗಿವೆ!  (ಈ non-filmy songs  ಹನ್ನೆರಡು ಸಾವಿರದ ವರೆಗೆ ಮುಟ್ಟ ಬಹುದು. ಅದೊಂದು ಗಿನ್ನಿಸ್ ದಾಖಲೆಯಾಗಬಹು ಎಂದು ಅವರ ಪತಿ ಪದ್ಮಪಾಣಿಯವರ ಅಭಿಪ್ರಾಯ). ನನಗೇನೆಂದರೆ ಈ ದೇವರ ನಾಮಗಳು, ಭಗವಂತನ ಮೇಲಿನ ಭಕ್ತಿಯ ಹಾಡುಗಳನ್ನು ಹಾಡಲು ಒದಗಿದ ಸೌಭಾಗ್ಯ ನನಗೆ ಅತ್ಯಂತ ಸಮಾಧಾನ ಮತ್ತು ಸಂತೋಷ ತಂದಿದೆ. ನಾನು ಕೊಂಕಣಿ, ಕೊಡವ, ದಕ್ಖನಿ ಭಾಷೆಗಳಲ್ಲಲ್ಲದೆ ಒಂದು ಸಾವಿರದಷ್ಟು ತುಳು ಹಾಡುಗಳನ್ನು ಹಾಡಿದ್ದೇನೆ. ಆದರೆ ಒಂದು ಮಾತು ಹೇಳುತ್ತೇನೆ. ಯಾವುದೇ ಹಾಡಾದರೂ ನನಗೆನಿಸಿದ ಮಟ್ಟಿಗೆ ಡೈರೆಕ್ಟರರನ್ನು ಶೇಕಡಾ 40 ರಷ್ಟು ಮಾತ್ರ ತೃಪ್ತಿ ಪಡಿಸಲು ಸಾಧ್ಯವಾಗುತ್ತದೆ. ಏಕೆಂದರೆ ಅವರ ಮನಸ್ಸಿನಲ್ಲಿದ್ದುದನ್ನು ತಿಳಿದುಕೊಳ್ಳುವದು ಹಾಡುವವರಿಗೆ ಕಷ್ಟ. ಒಮ್ಮೊಮ್ಮೆ ರೆಕಾರ್ಡಿಂಗ್ ದಿನ ಆರೋಗ್ಯ ಸರಿಯಿರಲಿಕ್ಕಿಲ್ಲ, ಅಥವಾ ಆ ದಿನ ಇನ್ನೇನೋ ಅಡಚಣೆಗಳು ಆಗಬಹುದು. ಚಿತ್ರ ರಿಲೀಸ್ ಆದಮೇಲೆ ನೋಡಿದಾಗ, ಅಯ್ಯೋ ಅಲ್ಲಿ ಇನ್ನೂ ಚೆನ್ನಾಗಿ ಹಾಡಬಹುದಿತ್ತೇನೋ ಎಂದೆನಿಸುವುದು.

                                                                                    (Video ↑)

ಶ್ರೀವತ್ಸ: ಅದು ನಿಮ್ಮ ಪರಿಪೂರ್ಣತಾನ್ವೇಷಕ ಗುಣ! ಇಷ್ಟೆಲ್ಲ ಭಾಷೆಗಳ ಉಚ್ಛಾರದಲ್ಲಿ ತೊಂದರೆಯಿರುವುದಿಲ್ಲವೆ?

ಛಾಯಾ: ಇಲ್ಲ. ಏನೇನೂ ಇಲ್ಲ. ಸಂಗೀತಗಾರರಿಗೆ ಸಾಮಾನ್ಯವಾಗಿ ಆ ತೊಂದರೆ ಇರುವದಿಲ್ಲ. ನಾನು ಮೊನ್ನೆ ನಿಮ್ಮ ಕಾರ್ಯಕ್ರಮದಲ್ಲಿ ”ಟೈಟಾನಿಕ್” ಚಿತ್ರದ ಇಂಗ್ಲಿಷ್ ಹಾಡು ಹಾಡಿದ ನೆನಪು ಆಯಿತಾ? ಹಾಗೆಯೇ.

ಶ್ರೀವತ್ಸ: ನೀವು ಕನ್ನಡ ಹಾಡುಗಳಲ್ಲಿ, ಅದರಲ್ಲೂ ಜಾನಪದ ಗೀತಗಳಲ್ಲಿ ತುಂಬುವ ಆ ಅನೂಹ್ಯ ಭಾವ, ಹಾಡುವಾಗಿನ ಆ ತನ್ಮಯತೆ – ಇದರ ಗುಟ್ಟೇನು?

ಛಾಯಾ: ಓಹೋ, ನಿಮಗೆ ಹಾಗೆ ಅನಿಸಿತಾ? ನೋಡಿ ನನಗೆ ಹಾಡುವದೆಂದರೆ ಒಂದು ತರಹದ ಮೆಡಿಟೇಶನ್ ಅನ್ನಬಹುದು. ನಾನು ಅದರಲ್ಲೇ ಪೂರ್ತಿಯಾಗಿ ಮುಳುಗಿ ಹೋಗಿರುತ್ತೇನೆ. ನನಗೆ ಹಾಡುವಾಗ ಬಹಳಷ್ಟು ಏಕಾಗ್ರತೆ ಬೇಕು. ಯಾರಾದರೂ ಕಾನ್ಸೆಂಟ್ರೇಶನ್ ಗೆ ಭಂಗ ಮಾಡಿದರೆ ಸರಿ ಹೋಗುವದಿಲ್ಲ. ಬೇರೆಯವರು ಹಾಡುವಾಗಲೂ ಅಷ್ಟೇ ಇಷ್ಟ. ಸರಿಯಾಗಿ ಕೂತು ಕೇಳಿ ಸಂತೋಷ ಪಡುವೆ. ನನಗೆ ಮ್ಯೂಸಿಕ್ಕೇ ಜೀವ, ಅದೇ, ಬದುಕು. ಸಣ್ಣವರು, ದೊಡ್ಡವರು, ಯಾರೇ ಚೆನ್ನಾಗಿ ಹಾಡಿದರೂ ಕೇಳಿ ಖುಶಿ ಪಡುವೆ.

ಶ್ರೀವತ್ಸ: ಈಗಿನ ಹೊಸ ಯುಗದ ಕನ್ನಡ ಚಿತ್ರಗಳ ಮ್ಯೂಸಿಕ್, (ಸಂಗೀತ ಅನ್ನಬಹುದೋ) ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅದಕ್ಕೆ ಭವಿಷ್ಯ ಇದೆಯೇ?

ಛಾಯಾ: ನನ್ನ ದೃಷ್ಟಿಯಲ್ಲಿ ಪರಿವರ್ತನೆಯೇ ಜಗದ ನಿಯಮ. ನಾವದನ್ನು ಒಪ್ಪಿಕೊಳ್ಳಲೇಬೇಕು. ಕಾಲ ಬದಲಾದಂತೆ ಶ್ರೋತೃಗಳ ರುಚಿ ಬದಲಾಗುತ್ತಿರುತ್ತದೆ. ಈಗಿನವರಿಗೆ ಅದೇ ಇಷ್ಟ. ಕೆಲವರು, ನಮ್ಮ ಹಿಂದಿನ ತಲೆಮಾರಿನವರು, ಹಳೆಯದೇ ಚಂದ ಎಂದು ಈಗಿನದನ್ನು ಟೀಕಿಸಬಹುದು. ಈಗಿನವರು, ಹಿಂದಿನದು ಅಯ್ಯೋ ಅದು ಎಷ್ಟು ಅಳುಬುರುಕು, ಅಂತ ಅನ್ನುತ್ತಾರೆ. ನನ್ನ ಮತ ಬೇರೆ. ಆದರೆ ಅಶ್ಲೀಲ ಶಬ್ದ, ಅರ್ಥ ಇದ್ದಂಥ ಹಾಡುಗಳನ್ನು ಹಾಡಲು ಮುಜುಗರ. ಆಗ ನಾನು ಒಲ್ಲೇ ಅನ್ನುತ್ತೇನೆ. ಅದಕ್ಕೆ ನನ್ನ ನಕಾರ.

ಶ್ರೀವತ್ಸ: ಅಂದರೆ ನೀವು ಮಡಿವಂತರಲ್ಲ, ಅಂದ ಹಾಗಾಯಿತು. ನಿಮ್ಮ ಪತಿ, ಮತ್ತು ಮಗಳು? ಅವರಿಗೂ ಸಂಗೀತದ ಸಂಪ್ರದಾಯವಿದೆಯೇ? ನಿಮ್ಮದು ಅತ್ಯಂತ ಅಪರೂಪದ ದಾಂಪತ್ಯ ಎಂದು ನಿಮ್ಮ ಹತ್ತಿರದವರಿಂದ ಕೇಳಿದ್ದೆ.

ಮಗಳು ಮೇಘಾಳ ಜೊತೆ ಅಪ್ಪ, ಅಮ್ಮ - ಲಕ್ಷ್ಮಿ ನಾಗರಾಜ್ ತೆಗೆದ ಚಿತ್ರ
ಮಗಳು ಮೇಘಾಳ ಜೊತೆ ಅಪ್ಪ, ಅಮ್ಮ – ಲಕ್ಷ್ಮಿ ನಾಗರಾಜ್ ತೆಗೆದ ಚಿತ್ರ

ಛಾಯಾ: ಅವಳು ಎಂ ಬಿ ಏ ಮಾಡಿ ಮನೆಯಿಂದಲೇ ಕೆಲಸ ಮಾಡುತ್ತಾಳೆ. ನನ್ನ ಮಗಳಿಗೆ ವೆಸ್ಟರ್ನ್ ಮ್ಯೂಸಿಕ್ ಇಷ್ಟ. ನನ್ನ ಅಭ್ಯಂತರವಿಲ್ಲ.

ಅವಳಿಗೆ ನನ್ನ ಜೋಡಿದಾರರಂತೆ ನನ್ನ ಮೇಲೆ ಬಹಳ ಅಕ್ಕರೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ನನ್ನ ಮದುವೆ ನಮ್ಮೊಬ್ಬ ಪರಸ್ಪರ ಪರಿಚಯದ ಮಿತ್ರರ ಮುಖಾಂತರ ಭೆಟ್ಟಿಯಾದ ಮೇಲೆ ಆದದ್ದು. ’ಪಾಣಿ’ಯವರು ಸಂಗೀತಗಾರರಲ್ಲವಾದರೂ ಆ ಲೋಕದಲ್ಲಿಯ ಮಣಗಟ್ಟಲೆ ವಿಷಯಗಳನ್ನು  ಅರಿತವರು. ಅವರು ಯಾವುದೇ ವಿಷಯ ತೆದುಕೊಂಡರೂ ಆಳವಾಗಿ ಅಭ್ಯಸಿಸುತ್ತಾರೆ. ಮದುವೆಯಾದಾಗಿನಿಂದ ನನ್ನನ್ನು ಅಡಿಗೆ ಮನೆಯ ಜವಾಬ್ದಾರಿಯಿಂದ ದೂರವಿಟ್ಟು ನನ್ನ ಸಂಗೀತಕ್ಕೆ, ನನ್ನ ಕರಿಯರ್ ಗೆ ಪ್ರೋತ್ಸಾಹ ಕೊಟ್ಟು ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ಮಗಳು ಮೇಘಾ ಸಹ ನನಗೆ ಯಾವಾಗಲೂ ಸಪೋರ್ಟ್ ಮಾಡುತ್ತಾಳೆ.

ಶ್ರೀವತ್ಸ: ನನಗಾಗಿ (ನಮಗಾಗಿ) ನಿಮ್ಮ ಸಮಯವನ್ನು ಮೀಸಲಿಟ್ಟು ನನ್ನ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದ ನಿಮಗೆ ಕನ್ನಡ ಬಳಗದ ಪರವಾಗಿ ನನ್ನ ಧನ್ಯವಾದಗಳು. ಅನಿವಾಸಿ ಬಳಗದಿಂದ ಪ್ರಕಟಿಸಿದ ಈ ಪುಸ್ತಕವನ್ನು (”ಅನಿವಾಸಿಗಳ ಅಂಗಳದಿಂದ”) ಈ ಭೇಟಿಯ ನೆನಪಿಗಾಗಿ ನಿಮಗೆ ಕೊಡುವೆ.

ಛಾಯಾ: ಧನ್ಯವಾದವೇಕೆ? ನನ್ನಲ್ಲಿ ಏನೋ ಕಲೆಯಿದೆಯೆಂದಲೇ ನನ್ನ ಹತ್ತಿರ ಬರುತ್ತೀರಿ. ರಸಿಕರೇ ನಮ್ಮ ಸಂಪತ್ತು ಅಲ್ಲವೆ?

ಶ್ರೀವತ್ಸ: ನಿಮ್ಮ ಯು ಕೆ ಪ್ರವಾಸದ ಹೈಲೈಟು?

ಛಾಯಾ ಮತ್ತು ಪದ್ಮಪಾಣಿ: ಯು ಕೆ ಕನ್ನಡಿಗರ ಕನ್ನಡತನ! ನಾವು ಕಂಡ ಭೇಟಿಯಾದ ಕನ್ನಡಿಗರೆಲ್ಲ ತೋರಿದ  ಆದರ, ಸೌಹಾರ್ದತೆ, ಪ್ರೀತಿ ನಮ್ಮ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದೆ!

ಶ್ರೀವತ್ಸ: ಅದು ನಿಮ್ಮ ದೊಡ್ಡ ಗುಣ. ವಂದನೆಗಳು.

– ಶ್ರೀವತ್ಸ ದೇಸಾಯಿ

 

ದೀಪಾವಳಿ ಸಮಾರಂಭದ ಮರುದಿನ ಛಾಯಾ ಮತ್ತು ಪದ್ಮಪಾಣಿ ಜೋಡಿ ನೊಟಿಂಗ್ಹ್ಯಾಮ್ ನಲ್ಲಿ ಮತ್ತೊಂದು ಸಂಗೀತ ಸಂಜೆ ‘ಮೇಘ ಮಲ್ಹಾರ್’ ಕೊಟ್ಟು, ಹಿಂದಿ ಭಾಷೆಯ ಹಾಡುಗಳನ್ನು ಹಾಡಿದರು.fb_img_1479383122774

ದೀಪಾವಳಿ ಸಮಾರಂಭದ ಮರುದಿನ ಛಾಯಾ ಮತ್ತು ಪದ್ಮಪಾಣಿ ಜೋಡಿ ನೊಟಿಂಗ್ಹ್ಯಾಮ್ ನಲ್ಲಿ ಮತ್ತೊಂದು ಸಂಗೀತ ಸಂಜೆಯನ್ನು ಕೊಟ್ಟರು. ಸವಿತಾ ಸುರೇಶ ತೆಗೆದ ಚಿತ್ರ ಕಾರ್ಯಕ್ರಮ ಬಹಳಾ ಸುಮಧುರವಾಗಿತ್ತು ಎಂದರು ಕನ್ನಡ ಬಳಗ ಸದಸ್ಯರು. ಎರಡೂ ಚಿತ್ರಗಳನ್ನ ತೆಗೆದವರು ಸವಿತಾ ಸುರೇಶ

Chaya visit ನೆನಪುಗಳು

-ವಿಶ್ವನಾಥ್ ಮಂದಗೆರೆ

B.R. Chaya… It was serendipitous that last year I happened to meet this singer super star. In late 2015, at the time of my visit to Bengaluru, I attended a wedding. As it happens in India, I did not know the bride or the groom or their parents but happened to know the bride’s uncle! He was my medical college friend and I had not seen him for 30 odd years. I thought it would be an opportunity to see him. It was a wise decision indeed! I was star struck at this wedding seeing many artists from the musical world because the father of the bride happened to be none other than Puttur Narasimha Nayak, the famous singer. As I was savouring the Konkani spread at the buffet, my friend pointed to the petite young lady with long black hair: ‘Look that is BR Chaya’.

B.R. Chaya….the famous singer!!! What excited me was not just her fame but the opportunity this rendezvous had brought in. Chaya happened to be my school friend, one year senior, and we had lived in the same neighbourhood for all our childhood in Doorvani Nagar or ITI colony in Bangalore. I had not seen her after I had left school but knew she had become a famous singer star. We spoke for some time that afternoon and I explored the possibility of her coming for a KBUK function in future.

B.R. Chaya… as it happens in southern India, we get identified not just by our names but by our initials as well. Chaya, in our school days was a popular singer winning many prizes for the school. To my knowledge, she was less trained in classical music but had would excel in film and bhavageete. Chaya was also a daring figure- one of the few girls who could ride a scooter! It was a shock to all of us in school on hearing the death of her mother while she was in the 9th standard and close to the exams. I don’t know how she managed to take the exams and pass them.

She had another classmate, Susheela, well trained in classical music, who would fiercely compete with her for the top prize and win it. We had a great drawing master, an arts teacher in other words, Radha Krishna Sir, who nurtured the musical talents of these two girls. Susheela, apparently has become the music professor at Bengaluru University. Chaya, as we all know, went on to become an extremely popular singer singing different genres of music, in languages and in the process breaking many records. She is, I believe, on the way to set a new Guinness Book of Records shortly. In her short stay with us, we talked about our school days and she reminded me the song, ‘ತೊಂಡೆಕಾಯಿ, ಬೆಂಡೆಕಾಯಿ ತೋಟದಲ್ಲಿದೆ, ಉಂಡೆ ಉಂಡೆ ಬೆಲ್ಲ… That song had brought our school a shield in those days. I was thrilled to hear this whole song she sung on stage at the KBUK function.

Padmapani Jodidar, an undiscovered gem of comedy world… I did not know about Padmapani till I met him after landing in Manchester. He is well read, knowledgeable and very unassuming. He is sharp and witty and has the great quality of being able to laugh at himself. As he entered our house he said ‘ಓಹ್, ನನ್ನ ಫೋಟೋ ಹಾಕ್ ಬಿಟ್ಟಿದ್ದೀರಾ.’ Looking at our perplexed face he continued ‘ಇದು ವಜ್ರಪಾಣಿ, ಮತ್ತಿದು ಪದ್ಮಪಾಣಿ’, pointing to paintings from Ajanta caves we had hung in our lounge and then to himself.

thumbnail_chaya-and-padmapani-with-swarna-and-vishwanath
ಸ್ವರ್ಣ, ಛಾಯ, ಪದ್ಮಪಾಣಿ, ವಿಶ್ವನಾಥ್

He tells a joke just to the point where you will understand, the rest unsaid. One of the audiences asked him why he does not tell the full joke. His reply, ‘ನೀವೆಲ್ಲಾ ಬುದ್ಧಿವಂತರು. ಬರೀ ದಡ್ಡರಿಗೆ ಮಾತ್ರ ನಾನು ವಿವರಿಸೋದು’. His ‘kannadisation’ of certain items were so funny. He would say ‘ನಂಗೊಂದು ಶಂಖ ಮತ್ತು ಎರಡು ಹೋಳಿಗೆ ಕೊಟ್ಬಿಡಿ’, meaning a croissant and crêpes with milk for breakfast!

The evening before the Kannada Balaga event, we had invited a few Manchester friends to meet them. He entertained us for a full two hours regaling stories of how people came for what he considered his crap advice but that would still make other people rich and successful.

Chaya and Padmapani- what a loving and talented couple! The conversation between them almost sounds like a dialogue in a play with a wit and sharpness you see in Jeeves and Wooster episodes.  We were talking about someone who had got divorced but remarried. The conversation wents like this –

‘ಛಾಯ ಅವ್ರೆ’

‘ಏನ್ರೀ ಪಾಣಿ?’

‘ಹಾಗಾದ್ರೆ ನಂಗೂ ಚಾನ್ಸ್ ಇದೇ…’,

‘ಹೋಗಪ್ಪ, ನಿನ್ನ ಯಾರು ಕಟ್ಟಿ ಹಾಕಿರೋದು’!

– ವಿಶ್ವನಾಥ್ ಮಂದಗೆರೆ

ಶ್ರೀವತ್ಸ ದೇಸಾಯಿ ತೆಗೆದ ಚಿತ್ರ
ಶ್ರೀವತ್ಸ ದೇಸಾಯಿ ತೆಗೆದ ಚಿತ್ರ

ನಮ್ಮ ವಿದ್ಯಾ ಮಂದಿರ ಶಾಲೆಯ ಹಾಡು ಹುಡುಗಿ ಬಿ.ಆರ್.ಛಾಯ

-ವಿನತೆ ಶರ್ಮ

ಕನ್ನಡ ಬಳಗ ಯು.ಕೆ. ನಡೆಸಲಿದ್ದ ‘ದೀಪಾವಳಿ ೨೦೧೬’ ಕಾರ್ಯಕ್ರಮದಲ್ಲಿ ಬಿ.ಆರ್. ಛಾಯ ಮತ್ತು ಅವರ ಪತಿ ಪದ್ಮಪಾಣಿ ಭಾಗವಹಿಸಲಿದ್ದಾರೆ ಎಂದು ಕೇಳಿದಾಗ ಮನಸ್ಸಿಗೆ ಡಬಲ್ ಖುಷಿ. ಒಂದು, ಛಾಯಾರವರ ಗಾನ, ಪದ್ಮಪಾಣಿಯವರ ಮಾತು, ಹಾಸ್ಯ ಕನ್ನಡ ಬಳಗಕ್ಕೆ ಸಿಕ್ಕತ್ತೆ; ಇನ್ನೊಂದು, ‘ನಮ್ಮ ಛಾಯ’ ಬರುತ್ತಿದ್ದಾರೆ ಎನ್ನುವುದು. ‘ನಮ್ಮ ಛಾಯ’  ಅಂದ್ರೆ ಏನು, ಏನ್ಕತೆ ಅಂತ ಸ್ವಲ್ಪ ಇಲ್ಲಿ ಹೇಳೇ ಹೇಳ್ಬೇಕು. ಯಾಕಂದ್ರೆ ಅವ್ರು ನಮ್ಮ “ಹಾಡು ಹುಡುಗಿ” ಆಲ್ವಾ!

ನಾನು ಬೆಳೆದಿದ್ದು ದೂರವಾಣಿ ನಗರದ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನ (ಐ ಟಿ ಐ) ಕ್ವಾರ್ಟರ್ಸ್ ನಲ್ಲಿ; ಓದಿದ್ದು ಅಲ್ಲೇ ಐ ಟಿ ಐ ವಿದ್ಯಾ ಮಂದಿರ ಶಾಲೆಯಲ್ಲಿ. ನನ್ನ ತಾಯಿ ಎಲ್. ಪದ್ಮಾವತಮ್ಮ (ಎಲ್.ಪಿ. ಟೀಚರ್) ಅದೇ ಶಾಲೆಯಲ್ಲಿ ಟೀಚರ್ ಆಗಿದ್ದರು.

ನಾವು ವಾಸವಾಗಿದ್ದ ಐ ಟಿ ಐ ಕ್ವಾರ್ಟರ್ಸ್ ನ ಈಸ್ಟ್ ೫ನೇ ಬೀದಿಯ ಮುಂದಿನ ಬೀದಿಯಲ್ಲಿ ಛಾಯಾರ ಕುಟುಂಬ ವಾಸವಾಗಿತ್ತು! ಅವರ ಮನೆಯಲ್ಲಿ ಸಾಕಿದ್ದ ಹಸುವಿನ ಹಾಲನ್ನು ನಾವು ಕೊಳ್ಳುತ್ತಿದ್ದೆವು. ಹಾಲು ತರಲು ಬೆಳಗ್ಗೆ ಚಿಕ್ಕ ಹುಡುಗಿ ನಾನು ನಿದ್ದೆ ಕಣ್ಣಿನಲ್ಲಿ ಅವರ ಮನೆಗೆ ಹೋಗುತ್ತಿದ್ದೆ. ಆಗಾಗಲೇ ತಂಬೂರಿ ಹಿಡಿದುಕೊಂಡು ಕೂತು ಸಂಗೀತಾಭ್ಯಾಸ ಮಾಡುತ್ತಿದ್ದ ದೊಡ್ಡ ಹುಡುಗಿ ಛಾಯಾರನ್ನು ನೋಡುತ್ತಾ ಶಬ್ದ ಮಾಡದೆ ನಿಂತು ಬಿಡುತ್ತಿದ್ದೆ. ಒಮ್ಮೊಮ್ಮೆ ಅವರು ಕೂಗು ಹಾಕುತ್ತಿದ್ದರು “ಎಲ್.ಪಿ ಟೀಚರ್ ಮಗಳು ಹಾಲ್ಗೋಸ್ಕರ ಕಾಯ್ತಾ ಇದ್ದಾಳೆ…”. “ಅಯ್ಯೋ ಪರವಾಗಿಲ್ಲ ಕಾಯ್ತೀನಿ” ಅಂತ ನಾನಂದರೂ ಯಾರಾದರೂ ಬಂದು ಹಾಲಿನ ಪಾತ್ರೆ ತುಂಬಿಸಿ ಕಳಿಸೇಬಿಡುತ್ತಿದ್ದರು. “ಯಾಕೇ ಲೇಟಾಯ್ತು, ಛಾಯಾ ಸಂಗೀತ ಕೇಳ್ತಾ ನಿಂತ್ ಬಿಟ್ಯಾ” ಅಂತ ಅಕ್ಕಂದಿರು ಗುರಾಯಿಸುತ್ತಿದ್ದರು. ದೊಡ್ಡಕ್ಕ, ಚಿಕ್ಕಕ್ಕನ ನಡುವಿನ ಕ್ಲಾಸ್ನಲ್ಲಿ  ಛಾಯ ಓದುತ್ತಿದ್ದದ್ದು. ನಮ್ಮಮ್ಮ ಅವರಿಗೆ ಹಿಂದಿ ಕ್ಲಾಸ್ ತೊಗೊಳ್ತಿದ್ದರಂತೆ. ಛಾಯಾನ ಅಮ್ಮ ತೀರಿಕೊಂಡಾಗ ನಮ್ಮಮ್ಮ, ನಮ್ಮ ಟೀಚರ್ ಗಳೆಲ್ಲಾ ತುಂಬಾ ಬೇಜಾರು ಮಾಡಿಕೊಂಡಿದ್ದರು.

ಆ ವರ್ಷಗಳಲ್ಲಿ ವಿದ್ಯಾ ಮಂದಿರ ಸ್ಕೂಲಿನ ಹೆಮ್ಮೆಯ “ಹಾಡು ಹುಡುಗಿ”ಯರು ಛಾಯ ಮತ್ತು ಸುಶೀಲ. ಟೀಚರ್ಸ್ ಎಲ್ಲರೂ ಇವರಿಬ್ಬರನ್ನ ತುಂಬಾ ಪ್ರೋತ್ಸಾಹ ಕೊಟ್ಟು ಬೆಳೆಸುತ್ತಿದ್ದರು. ಎಲ್ಲಿ ಹೋದರೂ ಈ ಇಬ್ಬರಿಗೆ ಮೆಡೆಲ್ ಕಟ್ಟಿಟ್ಟದ್ದು ಎಂದು ಅಮ್ಮ ಹೇಳುತ್ತಿದ್ದರು.ಆಗಾಗ ಬಹುಮಾನಗಳು, ಮೆಡೆಲ್ಗಳ ಜೊತೆ ಈ ಇಬ್ಬರನ್ನ ಕೂಡಿಸಿ ಫೋಟೋ ತೆಗೆಸುತ್ತಿದ್ದರು.

11856393_996283287094943_4540644356279741005_o
ಫೇಸ್ ಬುಕ್ ಚಿತ್ರ

ಛಾಯ ಶಾಲಾ ಓದು ಮುಗಿಸಿ, ಐ ಟಿ ಐ ಕ್ವಾರ್ಟರ್ಸ್ ಬಿಟ್ಟು ಹೋದ ನಂತರ ಕೂಡ ನಮ್ಮ ಶಾಲೆಯ ಜೊತೆಗಿನ ನಂಟನ್ನು ಬಿಡಲಿಲ್ಲ. ಆಗಾಗ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ಹಾಡುತ್ತಿದ್ದರು. ನಾನು SSLC ಮುಗಿಸಿದ ವರ್ಷ, ಅಂಥಾ ಒಂದು ಶಾಲಾ ಸಮಾರಂಭಕ್ಕೆ ಬಂದು “ಜೋಗದ ಸಿರಿ ಬೆಳಕಿನಲ್ಲಿ…” ಹಾಡಿದ್ದರು. ಮುಂದೆ ಅವರ ಪ್ರಸಿದ್ಧ “ಹಿಂದುಸ್ಥಾನವು ಎಂದೂ ಮರೆಯದ…” ಹಾಡನ್ನು ಕೂಡ ಶಾಲೆಯಲ್ಲಿ ಹಾಡಿದ್ದರು. ವಿಜಯ ಭಾಸ್ಕರ್ ಮತ್ತು ಇಳಯ ರಾಜ ಅವರನ್ನು ಪ್ರೋತ್ಸಾಹಿಸಿ ಚಲನಚಿತ್ರ ರಂಗಕ್ಕೆ ತಂದದ್ದು, ಅವರಿಗೆ ಮದುವೆಯಾದದ್ದು ಎಲ್ಲಾ ನ್ಯೂಸ್ ನಮಗೆ ನಮ್ಮ ವಿದ್ಯಾ ಮಂದಿರದ ಟೀಚರ್ಸ್ ಬಳಗದಿಂದ ತಿಳಿಯುತ್ತಿತ್ತು. ನಮ್ಮ ಶಾಲೆಯ ನನ್ನ ಕೆಲ ಗೆಳತಿಯರು ಅವರೊಂದಿಗೆ ಸ್ನೇಹವನ್ನು ಮುಂದುವರೆಸಿದ್ದರು.

ಅವರ ಮೆಡೆಲ್ ಗಳ ಜೊತೆಗಿನ  ಒಂದು ಫೋಟೋವನ್ನ (ನಮ್ಮ ಶಾಲೆಯಲ್ಲಿ ತೆಗೆದಿದ್ದು) ನಾನು ನನ್ನ ಫೇಸ್ ಬುಕ್ನಲ್ಲಿ ಹೋದ ವರ್ಷ ನೋಡಿದೆ. ಕೂಡಲೇ ನಾನೂ ಅವರ ಫೇಸ್ ಬುಕ್ ಫ್ರೆಂಡ್ ಆದೆ. ಆಗಾಗ ಪದ್ಮಪಾಣಿಯವರ ಪೋಸ್ಟ್ ಗಳನ್ನ ಓದುತ್ತಾ ಅವರ ಹಾಸ್ಯ ಪ್ರಜ್ಞೆ, ಓದಿನ ವಿಸ್ತಾರ, ಅವರ ಸಾಹಿತ್ಯ ಪ್ರೇಮ, ನಾನಾ ವಿಷಯಗಳ ಬಗ್ಗೆ ಇರುವ ಅವರ ಆಳ ಜ್ಞಾನ, ಕಾಮನ್ ಸೆನ್ಸ್ – ಇದೆಲ್ಲದರ ಪರಿಚಯ ಕೂಡ ಸ್ವಲ್ಪ ಆಯ್ತು. ಹೆಂಡತಿ-ಗಂಡ ಇಬ್ಬರ ಪೋಸ್ಟ್ ಗಳಿಗೂ ಲೈಕ್ ಒತ್ತುತ್ತಾ ಹೋದೆ! ಪಾಣಿಯವರನ್ನ ಇದೇ ತಿಂಗಳು ೫ರಂದು ನೋಡಿ ಮಾತನಾಡಿಸಿ, ಇಬ್ಬರ ಜೊತೆಯಲ್ಲೂ ಸ್ವಲ್ಪ ಸಮಯ ಕಳೆಯುವ ಅವಕಾಶ ಸಿಕ್ಕೇ ಬಿಟ್ಟಿತು. ಒಂದು ಸಂದರ್ಭದಲ್ಲಿ ಹಿಂದೆ ನಾನಿದ್ದ ಆಸ್ಟ್ರೇಲಿಯಾ ದೇಶ, ಅದನ್ನು ಆಕ್ರಮಿಸಿಕೊಂಡ ಬ್ರಿಟಿಷರು, colonisation – ಈ ಮಾತು ಬಂತು. ತಕ್ಷಣ ಪಕ್ಕಕ್ಕೆ ತಿರುಗಿ ಛಾಯ ಕೇಳಿದರು “ಅದ್ ಹೇಗೆ ಎಲ್ಲಾ ಕಡೆ ಅವ್ರೆ ರಾಜರಾಗಿಬಿಟ್ಟರು, ಪಾಣಿ?” ‘ಜೋಡಿ’ ದಾರರ ಉತ್ತರ ಮತ್ತು Postcolonialism ಬಗ್ಗೆ ಅವರ ವಿಶ್ಲೇಷಣೆ ಎರಡಕ್ಕೂ ನಾನು ಮೂಗಿನ ಮೇಲೆ ಬೆರಳಿಟ್ಟುಕೊಂಡೆ. ಮತ್ತೊಂದು ಸಂದರ್ಭದಲ್ಲಿ ಹಿಮಾಲಯ ಪರ್ವತಗಳಲ್ಲಿ ಆಗುವ ನೆಲ ಜಾರು (land slide) ವಿಷಯ ಬಂತು. ಛಾಯ ಕೇಳಿದರು, “ಅದ್ ಹೇಗೆ ಆಗತ್ತೆ, ಸ್ವಲ್ಪ ಹೇಳಪ್ಪಾ”; ಮತ್ತೆ ಅವರ ‘ಜೋಡಿ’ಯಿಂದ ಬಂತು ಸಮರ್ಪಕ ಉತ್ತರ! ನಾವೆಲ್ಲಾ ತಲೆತೂಗಿದೆವು.

ದೀಪಾವಳಿ ಸಮಾರಂಭ ಮುಗಿದು, ೬ರಂದು ನಾನು ಫೇಸ್ ಬುಕ್ ನಲ್ಲಿ ನಾನು, ಛಾಯ ಜೊತೆ ಇದ್ದ ಒಂದು ಫೋಟೋವನ್ನ ಹಾಕಿದೆ, ಎಷ್ಟೊಂದು ಲೈಕ್ ಗಳು!! ನಮ್ಮ ಶಾಲೆಯ ಗೆಳೆಯರ ಬಳಗ ಕಮೆಂಟ್ ಗಳನ್ನ ಕಳಿಸಿದ್ದೂ ಕಳಿಸಿದ್ದೇ! ಅದಕ್ಕೂ ಮಿಗಿಲಾಗಿ, ಉಳಿದಿರುವ ನಮ್ಮ ಕೆಲವೇ ಕೆಲವು ಟೀಚರ್ ಗಳ ಪೈಕಿ ಒಬ್ಬರಾದ ಶರ್ಲಿ ಟೀಚರ್ ಆ ಫೋಟೋವನ್ನ ನೋಡಿ “God bless you both, I am very proud of you two,” ಎಂದು ಆಶೀರ್ವಾದ ಕಳಿಸಿದರು!

  • ವಿನತೆ ಶರ್ಮ