ಊರಿಂದ ಕಾಗದ ಬಂತು

  • ವತ್ಸಲ ರಾಮಮೂರ್ತಿ

ನಾನು ಈ ಸಲ ಬೆಂಗಳೂರಿಗೆ ಹೋದಾಗ ನಮ್ಮ ಫ್ರೆಂಡ್ ಮನೆಗೆ ಹೋಗಿದ್ದೆ. ಇದು ಅವರು ಹೇಳಿದ ಕಥೆ. ಆ ಮಾವಿನ ಕಾಯಿಗೆ ಒಂದಿಷ್ಟು ಉಪ್ಪು ಖಾರ ಹಚ್ಚಿ ಇಟ್ಟಿದ್ದೇನೆ. ಮೆಲ್ಲಿ, ಎಂಜಾಯ್ ಮಾಡಿ, ಚೆನ್ನಾಗಿತ್ತ ಹೇಳಿ.

ಚಳಿಗಾಲದ ದಿನ, ಹೊರಗಡೆ ಬೆಳಿಗ್ಗೆಯಷ್ಟೇ ಬಿದ್ದ ತೆಳ್ಳನೆಯ, ನವಿರಾದ ಹಿಮದ ಪದರದಲ್ಲಾವರಿಸಿದ ಹೊರಾಂಗಣ, ಒಣಗಿ ನಿಂತ ಮರಗಳು ಕಪ್ಪು-ಬಿಳುಪಿನ ಸುಂದರ ಚಿತ್ರದಂತಿತ್ತು. ಹಲವು ಕಾಲ ಮೋಡದ ಹಚ್ಚಡವನ್ನು ಹೊದ್ದು ಬಿದ್ದಿದ್ದ ಸೂರಜ್ ಕುಮಾರ್ ಈ ಮನೋಹರ ದೃಶ್ಯವನ್ನು ವೀಕ್ಷಿಸಲೆಂದೇ ಹಣಕಿ ಹಾಕಿದ್ದ. ಆತ ತಂದ ಹೊಂಬಿಸಿಲನ್ನು ಆಸ್ವಾದಿಸುತ್ತ ನಾನು ಕಿಟಕಿಯ ಪಕ್ಕದ ಆರಾಮಾಸನದಲ್ಲಿ ಒರಗಿ ತೂಕಡಿಸುತ್ತಿದ್ದೆ. ಬಾಗಿಲ ಬಳಿ ಟಪ್ ಎಂದು ಟಪಾಲು ಬಿದ್ದ ಸದ್ದಾಯಿತು. ಕುತೂಹಲ ತಾಳಲಾರದೇ ಹೋಗಿ ನೋಡಿದರೆ, ಇಂಡಿಯಾದಿಂದ ಬಂದ ಪತ್ರ! ಅದರಲ್ಲೂ ನನ್ನ ಪ್ರಿಯ ತಂಗಿಯ ಕೈಬರಹದಲ್ಲಿರುವ ಅಡ್ರೆಸ್!! ತೆಗೆದರೆ, ೬ ಪೇಜುಗಳ ಕಾಗದ. ಏನಪ್ಪಾ! ಅಂಥ ಮಹತ್ವದ್ದು, ಇಷ್ಟೂದ್ದದ್ದು ಎಂದು ಓದ ತೊಡಗಿದೆ. 

ಮಾತೃಶ್ರೀ ಸಮನಾಳದ ಅಕ್ಕನಿಗೆ ನಿನ್ನ ತಂಗಿಯಾದ ಗುಂಡಮ್ಮ ಮಾಡುವ ನಮಸ್ಕಾರಗಳು. ಉllಕುllಶಲೋಪರಿ ಸಾಂಪ್ರತ (ಪರವಾಗಿಲ್ವೇ, ಗೌರವಯುತವಾಗಿ ಬರೆದಿದ್ದಾಳೆ). ನಾವೆಲ್ಲ ಇಲ್ಲಿ ತಿಂದು, ಉಂಡು, ಹರಟೆ ಹೊಡೆದು, ಸಿನಿಮಾ ನೋಡಿಕೊಂಡು ಚೆನ್ನಾಗಿದ್ದೇವೆ (ನನಗೆ ಹೊಟ್ಟೆ ಉರಿ, ಈ ಚಳಿ ದೇಶದಲ್ಲಿ ಯಾವ ಕನ್ನಡ ಸಿನಿಮಾ ಬರುತ್ತೆಂತ). 

ಮುಖ್ಯ ವಿಷಯವೆಂದರೆ, ನಾನು, ನನ್ನೆಜಮಾನರು ವಿದೇಶ ಪ್ರವಾಸ ಮಾಡೋದಂತ ನಿಶ್ಚಯಿಸಿದ್ದೇವೆ. ನಿನಗೆ ಗೊತ್ತಿರುವ ಹಾಗೆ ನನ್ನ ಗಂಡನಿಗೆ ಪಿಂಚಣಿ ದೊರಕಿದೆ. ನೀನೇ  ಎಷ್ಟೋ ಸಲ “ಬಾರೆ, ನಮ್ಮೂರಿಗೆ, ಬೇಕಾದರೆ ಟಿಕೆಟ್ ಕಳಿಸ್ತೇನೆ” ಅಂತ ಕರೀತ್ಲೇ ಇರ್ತೀಯ. ನಾನೇ, “ಬೇಡ ಕಣೇ, ನಾವಿಬ್ಬರೂ ಬಹಳ ಮಡಿ, ಆಚಾರವಂತರು, ಸರಿ ಹೋಗಲ್ಲ” ಅಂತ ದೂಡಿದ್ದೇನೆ. ನೀನು, “ಪರವಾಗಿಲ್ಲ, ನಾನು ನೋಡ್ಕೋತೀನಿ” ಅಂತ ಧೈರ್ಯ ಕೊಟ್ಟಿದೀಯ. ನಮ್ಮ ಮಠದವರು ಮುದ್ರೆ ಒತ್ತಿ, ಪಂಚಗವ್ಯ ಕುಡಿಸಿ, “ದೇವರು ಕ್ಷಮಿಸುತ್ತಾನೆ, ಪರಂಗಿ ದೇಶ ಪ್ರವಾಸ ಮಾಡಿದ್ದಕ್ಕೆ” ಅಂತ ಅಭಯ ನೀಡಿದ್ದಾರೆ. ಈಗ ಹೊರಟಿದ್ದೇವೆ. ಟಿಕೆಟ್ಟಿಗೆ ೨ ಲಕ್ಷ ಆಗುತ್ತೆ. ನೀನೇ ಮಾಡಿಸಿ ಕಳಿಸಿಬಿಡು, ರಾಹು ಕಾಲದಲ್ಲಿ ಮಾತ್ರ ಟಿಕೆಟ್ ತೊಗೋಬೇಡ (ಗ್ರಹಚಾರ, ನನಗೇನು ಗೊತ್ತು, ರಾಹು ಕಾಲ ಯಾವಾಗ ಅಂತ). ನಾನು ಇಳಕಲ್ ಸೀರೆ ಕಚ್ಚೆ ಉಟ್ಟು,  ಗುಂಡಗೆ ಕುಂಕುಮ ಹಚ್ಚಿ, ಎಣ್ಣೆ ತೀಡಿ ತಲೆ ಬಾಚಿ, ಹೂವ ಮುಡಿದಿರುತ್ತೇನೆ. ಪ್ರತಿದಿನ ನನಗೆ ಮಲ್ಲಿಗೆ ಹೂವ ಬೇಕು, ತೆಗೆದಿಟ್ಟಿರು. ಬಾವನವರಿಗೆ ಗಂಧ ತೇಯ್ದು ಮುದ್ರೆ ಹಾಕಿಕೊಳ್ಳಲು ರೆಡಿ ಮಾಡಿಟ್ಟಿರು. ನಿಮ್ಮೂರಲ್ಲಿ ವಿಪರೀತ ಚಳಿ, ನಮ್ಮ ರೂಮು ಬಿಸಿಯಾಗಿರಬೇಕು. ನಮಗೆಂತ ೬ ಜೊತೆ ಕಾಲು ಚೀಲ, ಟೋಪಿ ಮತ್ತು ಮಫ್ಲರ್ ಇಟ್ಟಿರು. 

ನಮ್ಮ ದಿನಚರಿ ಹೀಗಿರುತ್ತೆ: ಬೆಳಗ್ಗೆ ೫ ಗಂಟೆಗೆ ಸುಪ್ರಭಾತ. ಸ್ನಾನಕ್ಕೆ ಬಿಸಿ ಬಿಸಿ ನೀರು ರೆಡಿ ಇರಲಿ. ಆಮೇಲೆ ಜೋರಾಗಿ ವಿಷ್ಣು ಸಹಸ್ರನಾಮ ಪಠನ (ದೇವರೇ ಗತಿ, ಪಕ್ಕದ ಮನೆ ಪೀಟರ್ ಏನೆಂದಾನು). ೬:೩೦ಕ್ಕೆ ಬೆಳಗಿನ ತಿಂಡಿ. ಉಪ್ಪಿಟ್ಟು, ದೋಸೆ, ಗೊಜ್ಜವಲಕ್ಕಿ, ಅಕ್ಕಿ ರೊಟ್ಟಿ-ಮಾವಿನಕಾಯಿ ಚಟ್ನಿ ಏನಾದರೂ  ಮಡಿಯಲ್ಲಿ ಮಾಡಿಟ್ಟಿರು. ಫಿಲ್ಟರ್ ಕಾಫಿ ಮರೀಬೇಡ. ೧೦:೩೦ಕ್ಕೆ ಒಂದು ರವೇ ಉಂಡೆ, ಒಂದು ಗ್ಲಾಸ್ ಬಾದಾಮಿ ಹಾಲು ಸಾಕು. ೧:೩೦ಕ್ಕೆ ಊಟ. ಈರುಳ್ಳಿ-ಗೀರುಳ್ಳಿ, ಕ್ಯಾರೆಟ್, ಬೀಟ್ ರೂಟ್ ಮಡಿಗೆ ಆಗಲ್ಲ. ಹುಳಿಗೆ ಪಡವಲ ಕಾಯಿ, ಗೋರಿಕಾಯಿ, ಸುವರ್ಣ ಗಡ್ಡೆ ಆದೀತು. ಖಾರವಾಗೇ ಇರಲಿ. ಜೊತೆಗೆ ಸಂಡಿಗೆ ಕರಿದು ಬಿಡು. ಚಟ್ನಿಪುಡಿ, ಮಾವಿನಕಾಯಿ ಮಿಡಿ ಉಪ್ಪಿನಕಾಯಿ, ಗೊಜ್ಜು ಎಲ್ಲ ಇಟ್ಟಿರು. ಬೆಣ್ಣೆ ಕಾಸಿದ ತುಪ್ಪ ಅವಶ್ಯ. ಊಟವಾದ ಮೇಲೆ ಮಲಗಲು ಚಾಪೆ, ದಿಂಬು ಸಾಕು. ಎದ್ದ ಮೇಲೆ, ಬಿಸಿ ಕಾಫಿ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಕೊಬ್ರಿ ಮಿಠಾಯಿ ಬಯೋ ಆಡ್ಸೋಕಿದ್ರೆ ಒಳ್ಳೇದು. ರಾತ್ರಿ ಊಟ ಸಿಂಪಲ್ಲಾಗೇ  ಇರಬೇಕು. ಅನ್ನ-ಸಾರು, ತೊವ್ವೆ, ಚಪಾತಿ, ಮೊಸರು. ಮಲಗೋಕ್ಮುಂಚೆ ಒಂದ್ಲೋಟ ಹಾಲು. ಇನ್ನೇನೂ ಬೇಡ ಕಣೆ, ನಿನಗೆ ತೊಂದ್ರೆ ಆಗ್ಬಿಡತ್ತೆ. ಆಮೇಲೆ ಊರು ತೋರಿಸ್ಬೇಕು. ರಾಣಿ ಅರಮನೇ, ಒಡವೆ ಎಲ್ಲಾನೂ ಬೆಚ್ಚಗಿನ ಕಾರಲ್ಲಿ ಕರಕೊಂಡು ಹೋಗೇ ಅಕ್ಕಮ್ಮ.

ಇನ್ನ ೩ ಪೇಜ್ ಇದೇರಿ. ಬರೀ  ಊಟ ತಿಂಡಿಗೇ ಈ ಪಾಟಿ ಗಲಾಟೆ ಮಾಡಿದ್ದಾಳಲ್ಲ! ನಮ್ದೋ ಸೆಮಿ ಡಿಟ್ಯಾಚ್ಡ್ ಮನೆ; ದೇವರ ಮನೆಯಿಲ್ಲ, ತುಳಸಿ ಗಿಡವಿಲ್ಲ. ಏನಂತಾಳೋ, ಯಾರಿಗ್ಗೊತ್ತು? ಅದಕ್ಕೆ ಒಂದು ಪಿಲಾನು ಮಾಡಿದೆ. ತಕ್ಷಣವೇ, ಉತ್ತರ  ಬರೆಯಲು ಕುಳಿತೆ. 

ಪ್ರೀತಿಯ ತಂಗಚ್ಚಿಯಾದ ಗುಂಡು ಬಾಯಿಗೆ, ನಿನ್ನ ಅಕ್ಕ ಮಾಡುವ ಅನಂತ ಆಶೀರ್ವಾದಗಳು. ನೀನು ಬರುತ್ತಿ ಅಂತ ತಿಳಿದು, ವಿಪರೀತ ಸಂತೋಷವಾಗಿ ಕುಣಿದುಬಿಟ್ಟೆ. ನಮ್ಮ ಮನೆಗೆ ಖಂಡಿತ ಬಾರೆ. ಭಾವನವರನ್ನು ಕರೆದು ತಾರೆ. ನಮ್ಮ ಕುಟೀರ ನಿಮಗೆ ಇಷ್ಟವಾಗಬಹುದೆಂದು ಆಶಿಸುವೆ. ನಾವಿರುವುದು ಸೆಮಿ ಡಿಟ್ಯಾಚ್ಡ್ ಮನೆ, ಅಂದರೆ ಒಂದಕ್ಕೆ ಒಂದು ಅಂಟಿಕೊಂಡಿರುವ ಎರಡು ಮನೆಗಳಲ್ಲಿ ಒಂದು. ಪಕ್ಕದ ಮನೆಯಲ್ಲಿರುವವರು ಇಂಗ್ಲೀಷ್ ಜನ. ಅವರಿಗೆ ಕನ್ನಡ ಬರಲ್ಲ. ನೀನು ಬೆಳ್ಳಂಬೆಳಗ್ಗೆ ವಿಷ್ಣು ಸಹಸ್ರನಾಮ ಪಠಿಸಿದರೆ, ಪೋಲೀಸಿಗೆ ಕಂಪ್ಲೇಂಟ್ ಕೊಟ್ಟಾರು. ಒಳ್ಳೇ ಚಳಿಗಾಲದಲ್ಲಿ ಬರಬೇಕು ಅಂತೀಯ. ಇಲ್ಲಿ ಈಗ ಕಿಟಕಿ ಮೇಲೆಲ್ಲಾ ಮಂಜು ಮುಸುಕಿದೆ. ಗಡಗಡ ನಡುಗಿಸುವ ಅಸಾಧ್ಯ ಚಳಿ ಕಣೆ. ಹಲ್ಲು ಕಟಕಟಗುಟ್ಟುತ್ತೆ. ನಿನ್ನ ಕಚ್ಚೆ ಸೀರೆ ನಡಿಯಲ್ಲ. Trousers, leggings, sweaters ಅತ್ಯವಶ್ಯ. ಕಾಲಿಗೆ ದೊಡ್ಡ ಬೂಟು ಹಾಕಬೇಕು. ಮನೆ ಹೊರಗೆ ಕಾಲಿಟ್ಟಾಗ, ಮಂಜಿನ ಮೇಲೆ ಕಾಲು ಜಾರಿ ಬಿದ್ದು, ನಿನ್ನ, ಭಾವನವರ ಸೊಂಟ, ಮಂಡಿ ಮೂಳೆ ಮುರಿದ್ರೇನು ಮಾಡೋದು? ಆಸ್ಪತ್ರೇಲಿ ಮ್ಲೇಚ್ಛರ ಮಧ್ಯ ಬಿದ್ಕೊಂಡು ಸೂಪು, ಬ್ರೆಡ್ಡು ತಿನ್ಬೇಕಷ್ಟೇ; ಮೇಲಿಂದ ಚೀಸ್ ಉದುರಿಸಿ ಕೊಟ್ಟೇನು. ಮನೆಯಲ್ಲಿ ಟಿ.ವಿ ಬಿಟ್ಟರೆ ಇನ್ನೇನಿಲ್ಲ. ಅದರಲ್ಲೂ ಕನ್ನಡ ಬರಲ್ಲ; ಹತ್ರದಲ್ಲೆಲ್ಲೂ ಕನ್ನಡ ಸಿನಿಮಾ ಬರಲ್ಲ ಕಣೇ. ಪಕ್ಕದ ಮಾನೆಯವರ್ಯಾರೂ ಹರಟೆ ಕೊಚ್ಕೋಕೆ ಬರಲ್ಲ ಕಣೇ, ಅವಕ್ಕೆ ಕನ್ನಡ ಬಂದ್ರೆ ತಾನೇ? ಆದ್ರೂನೆ, ನೀನು ಅಪರೂಪಕ್ಕೆ ಬರೋದು ಅಪಾರ ಸಂತೋಷ ಕಣೆ. ಖಂಡಿತ ಬಾರೆ. ಎಲ್ಲ ರೆಡಿ ಮಾಡಿಟ್ಟಿರ್ತೇನೆ. ಇತಿ ನಿನ್ನ ಪ್ರೀತಿಯ ಅಕ್ಕ, ವೆಂಕೂಬಾಯಿ 

ಈ ಪತ್ರಕ್ಕಿನ್ನೂ ಗುಂಡಮ್ಮನ ಉತ್ತರ ಬಂದಿಲ್ಲ. ಹ್ಹ, ಹ್ಹ, ಹ್ಹ ! ಹೇಗಿದೆ ನನ್ನ ಪಿಲ್ಯಾನು? 

ಅಡುಗೆ – ಅಡುಗೆಮನೆ ಸರಣಿ: ವತ್ಸಲಾ ರಾಮಮೂರ್ತಿ ಮತ್ತು ಶ್ರೀವತ್ಸ ದೇಸಾಯಿಯವರ ಬರಹಗಳು

“Cooking is like snow skiing: If you don’t fall at least 10 times, then you’re not skiing hard enough. ಅಡುಗೆ ಮಾಡುವುದೆಂದರೆ ಸ್ಕೀಯಿಂಗ್ ಮಾಡಿದಂತೆ; ಒಂದು ೧೦ ಬಾರಿಯಾದರೂ ಬಿದ್ದಿಲ್ಲವೆಂದಾದರೆ, ನೀವು ಸ್ಕೀಯಿಂಗ್ ಸರಿಯಾಗಿ ಮಾಡುತ್ತಿಲ್ಲವೆಂದೇ!”

ನಮಸ್ಕಾರ. ಅಡುಗೆ ಅನ್ನೋ ಕೆಲಸ ಒಂದು ದೊಡ್ಡ equalizer ಅನ್ನಬಹುದು, ನೋಡಿ. ಪೂರ್ವ-ಪಶ್ಚಿಮಗಳ, ಬಡವ-ಬಲ್ಲಿದರ ಜಾತಿ-ಪಾತಿಗಳ ಭೇದವಿಲ್ಲದೇ ಎಲ್ಲರನ್ನೂ ಒದ್ದಾಡಿಸುವುದು ಅಡುಗೆ! ಇಷ್ಟಪಟ್ಟು ಮಾಡುವುದಾದರೆ ಸರಿ … ಆದರೆ ಬಾಯಿರುಚಿಯ ಚಪಲಕ್ಕೋ, ನಿರ್ವಾಹವಿಲ್ಲದೆಯೋ ಅಡುಗೆಮನೆಗೆ ಹೋದಿರೋ, ಕಾದಿದೆ ನೂರಾರು ತೊಂದರೆಗಳ ಹರ್ಡಲ್ಸ್ ಓಟ. ನಮ್ಮ ಅಡುಗೆ – ಅಡುಗೆಮನೆ ಸರಣಿಯ ಮುಂದಿನ ಲೇಖಕರು, ಅನಿವಾಸಿಯ ಹಿರಿಯ ಸದಸ್ಯರಾದ ವತ್ಸಲಾ ರಾಮಮೂರ್ತಿ ಮತ್ತು ಶ್ರೀವತ್ಸ ದೇಸಾಯಿ ತಮ್ಮ ಅಡುಗೆಯ ಅವಾಂತರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನೀವೂ ಬರೆದು ಕಳಿಸಿ, ಎಲ್ಲರನ್ನು ನಗಿಸಿ! – ಎಲ್ಲೆನ್ ಗುಡೂರ್ (ಸಂ.)

ಒಂದು ಲಾಸಾನ್ಯದ (Lasagne) ಕಥೆ! – ವತ್ಸಲಾ ರಾಮಮೂರ್ತಿ

ನನಗೂ ನನ್ನ ಚಿಕ್ಕಮ್ಮನಿಗೂ ತುಂಬ ಸಲಿಗೆ.  ಅವಳೇ ನಮ್ಮನೆಲ್ಲ ಚಿಕ್ಕರವರಾಗಿದ್ದಾಗ ಜಡೆ ಹಾಕಿ ಹೂವು ಮುಡಿಸಿ, ಸಮವಸ್ತ್ರ ಹಾಕಿ ಸ್ಕೂಲ್ಗೆ ಕಳಿಸುತಿದ್ದಳು.  ಪಾಪ! ಅವಳು ಬಾಲವಿಧವೆ.  ಶಾಲೆಗೆ ಹೋಗಿಲ್ಲ.  ಹಾಗೂ ಹೀಗೂ ಮಾಡಿ ನಮ್ಮ ಹತ್ತಿರ ಕನ್ನಡ ಓದಲು ಬರೆಯಲು ಕಲಿತಿದ್ದಳು. ಆಂಗ್ಲಭಾಷೆ ಗೊತ್ತಿಲ್ಲ.  ನಾನು ಯುಕೆಗೆ ಬಂದಮೇಲೆ ವಾರಕ್ಕೊಮ್ಮೆ ಮಾತನಾಡುತ್ತೇನೆ. 

ಒಂದು ದಿನ ಹೀಗೆ ಮಾತನಾಡುತ್ತಿರುವಾಗ “ಇವತ್ತು ಏನು ಅಡುಗೆ?” ಅಂತ ಕೇಳಿದಳು.  ನಾನು “ಲಾಸಾನ್ಯ ಮಾಡುತ್ತೇನೆ” ಅಂತ ಹೇಳಿದೆ .

“ಹಾಗೆ ಅಂದರೆ ‘ಅಪಹಾಸ್ಯ’ನಾ?” ಅಂದಳು.  

“ಅಲ್ಲ ಕಣೆ ಅದು ಒಂದು ತರಹದ ತಿಂಡಿ” ಅಂದೆ.  

“ಹಾಗಾದರೆ ನನಗೂ ತೋರಿಸು” ಅಂತ ಕೇಳಿದಳು.

ನಾನು, “ಹೋಗೇ, ನಿನಗೆ ಅರ್ಥವಾಗುವುದಿಲ್ಲ” ಎಂದು ಜಂಬ ಹೊಡೆದೆ.

“ಇಲ್ಲ ಕಣೆ, ಅರ್ಥ ಮಾಡಿಕೂಳ್ಳುತ್ತೇನೆ” ಅಂತ ಗೋಗರೆದಳು.

ಸರಿ ಅಂದು ನನ್ನ ತಮ್ಮನಿಗೆ ಹೇಳಿ ಲೈವ್ ವಿಡಿಯೋ setup ಮಾಡಿಸಿದೆ.

ಮುಂದಿನದೇ ನಾಟಕ.

ನಾನು: “ನೋಡೇ ಲಾಸ್ಯಾನ್ಯ ಹಾಳೆಗಳನ್ನು ಕುದಿಸಬೇಕು”

ಚಿಕ್ಕಮ್ಮ: “ಯಾಕೆ ರಟ್ಟಿನ ತರ ಇದೆ? ಹಲಸಿನ ಹಪ್ಪಳನಾ?” 

ನಾನು: “ಇಲ್ಲ ಕಣೆ ಇದನ್ನ ಲಸಾನ್ಯಾ ಹಾಳೆ ಅಂತಾರೆ.  ಇದನ್ನ ಕುದಿಸಿ ಮೆತ್ತಗೆ ಮಾಡಬೇಕು.”

ಹಾಳೆಗಳು ಬೆಂದ ಮೇಲೆ ತೆಗೆಯಲು ನೋಡಿದೆ.  ಎಲ್ಲ ಅಂಟಿಗೊಂಡುಬಿಟ್ಟಿವೆ.

ಚಿಕ್ಕಮ್ಮ: “ಮಹಾತಾಯಿ ಎಲ್ಲ ಮುದುಡಿದೆ, ಏನು ಮಾಡುವೆ ಈಗ?” ನನಗೆ ಕೋಪ ಬಂತು.

ನಾನು: “ಹೋಗೆ, ಅದನ್ನ ಬಿಡಿಸಬೇಕು” ಅಂತ ಹೇಳಿ ಕಿತ್ತಿದೆ.  ಚೂರುಚೂರಾಗಿ ಬಂತು.

ನನ್ನ ತಮ್ಮ ತಲೆ ಹಾಕಿ, “ಅಕ್ಕ, ಲಾಸ್ಯಾನ್ಯನ ಹಾಗೆಲ್ಲ ಹರಿಯಬಾರದು ಕಣೆ.  ಒಂದೊಂದೇ ಹಾಳೆ ಸಮವಾಗಿ ಬಿಡಿಸಬೇಕು.” ಇನ್ನೂ ರೇಗಿಸಿದ.

ಅದು ಗೋಂದಿನಂತೆ ಅಂಟಿಬಿಟ್ಟಿತ್ತು . ನನಗೆ ಬಿಡಿಸಲು ಆಗಲೇ ಇಲ್ಲ.  ಏನೋ ಮಾಡಿ ೪ ಚೂರು ಮಾಡಿದೆ.

ನಾನು: “ಚಿಕ್ಕಮ್ಮ ನೋಡು, ಈಗ ತಟ್ಟೆ ಮೇಲೆ ಹರಡಬೇಕು ಗೊತ್ತಾ? ಆಮೇಲೆ ಪಲ್ಯನ್ನ ಅದರ ಮೇಲೆ ಹರಡಬೇಕು.  ಹೀಗೆ ಒಂದರ ಮೇಲೆ ಒಂದು ಜೋಡಿಸಬೇಕು.  ಕಡೆಯಲ್ಲಿ ಚೀಸ್, ಮೈದಾ ಹಿಟ್ಟಿನ ಗಂಜಿ ಸುರಿಬೇಕು.”

ಅವಳು, “ಅಯ್ಯೋ ಭಗವಂತ! ಈ ಪಾಟಿ ಯಾಕೆ ಕಷ್ಟಪಡಬೇಕಾ? ನಂತರ ಹಂಚಿನ ಮೇಲೆ ಸುಡಬೇಕಾ?” ಅಂದಳು.

“ದಡ್ಡಿ, ಓವೆನ್ನಲ್ಲಿ ಇಡಬೇಕು” ಎಂದೆ.

ಅವಳು “ಹೋಗೆ, ನಾನಾಗಿದ್ದರೆ ನಾಲಕ್ಕು ದೋಸೆ, ಬಿಸಿ ಬಿಸಿ ಆಲೂಗಡ್ಡೆ-ಈರುಳ್ಳಿ ಪಲ್ಯ ಹಾಕಿ, ಒಂದರ ಮೇಲೆ ಒಂದು ಹೇರಿಸಿ, ಮೇಲೆ ಬೆಣ್ಣೆ ಹಚ್ಚಿ ಮಜವಾಗಿ ತಿಂತ ಇದ್ದೆ. ಹೋಗೆ, ನಿನ್ನ ಅಪಹಾಸ್ಯ ನೀನೇ ತಿನ್ನು” ಅನ್ನ ಬೇಕೇ?

ನನ್ನ ತಮ್ಮ ಮುಸಿಮುಸಿ ನಗುತ್ತಾ ಇದ್ದಾಗ ಚಿಕ್ಕಮ್ಮ ಹೊರಟುಹೋದಳು!

  • ವತ್ಸಲಾ ರಾಮಮೂರ್ತಿ.

******************************************************************************************

ಅಡುಗೆ ಮನೆಯಲ್ಲಿ ಅವಾಂತರಗಳು – ಶ್ರೀವತ್ಸ ದೇಸಾಯಿ

‘ಅನಿವಾಸಿ‘ ವಾಟ್ಸಪ್ಪಿನಲ್ಲಿ ಕಂಪ್ಲೇಂಟು: ‘ನಳ ಮಹಾಶಯರಿಂದ ಲೇಖನ ಬಂದಿಲ್ಲ’ ಅಂದರೆ ಗಂಡಸರಿಂದ ಅಂತ. ಅಡುಗೆಯಲ್ಲಿ ನಾನೇನೂ ನಳನಲ್ಲ, ಬರೀ ‘ಕಾಮಾ ಪೂರ್ತೇ’, ಎಷ್ಟು ಬೇಕೋ ಅಷ್ಟೇ ಅಡುಗೆ ಮಾಡಿಕೊಳ್ಳುವವ. ‘ರಸೋಯಿಘರ್ ಕಾ ರಾಜ’ ಅಲ್ಲ. ಈ ರಾಜ್ಯದ ಮಾತು ಬಂದದ್ದೇಕೆಂದರೆ ಈ ಅಡುಗೆ ಮನೆಯೆಂಬ ರಾಜ್ಯದ ಬಗ್ಗೆ ಒಂದೆರಡು ಮಾತು ಹೇಳೋಣ ಅಂತ.

’ಪ್ರಾದೇಶಕೀಕರಣ”

ಅಡುಗೆ ಮನೆ ನನ್ನಾಕೆಯ ’ಡೊಮೇನ್’ ಆಗಿತ್ತು! ಯಾವಾಗಲಾದರೂ ನಾನು ಅಲ್ಲಿ ಹಣಿಕಿ ಹಾಕಿದರೆ ’ಇಲ್ಲಿ ಒಳಗs ಬಂದು ಅಡ್ಡಗೈ ಹಾಕಬೇಡ’ ಅಂತಿದ್ದಳು. ವರ್ತನ ಸಿದ್ಧಾಂತಿಗಳು (Behaviourists) ಹೇಳುವ ಮಾತೆಂದರೆ ಪ್ರಾಣಿಗಳು ಅಂದರೆ ಮನುಷ್ಯ ಸಹಿತ, ತಮ್ಮ ’ಪ್ರದೇಶವನ್ನು’ ಕಾಯುತ್ತವೆ, ಕಾಯಲು ಹೊಡೆದಾಡುತ್ತವೆ ಅಂತ. ಪ್ರಶ್ನೆ: ’Does man (or woman), like animal, also territorialize?’ ಆ ಪ್ರವೃತ್ತಿ ಪ್ರಾಣಿಗಳಲ್ಲಿ ’ಅಲಲಾ’ದಿಂದ ಹಿಡಿದು ಝಿಬ್ರಾದವರೆಗೆ ಕಾಣುತ್ತೇವೆ. ಮಾನವನಲ್ಲಿಯೂ ಆ ಪ್ರವೃತ್ತಿ ಇರಬಹುದು. ಇಲ್ಲಿ ನಾನು ವೈಜ್ಞಾನಿಕವಾಗಿ ಹೇಳುತ್ತಿಲ್ಲ. ನನ್ನ ಅನುಭವವನ್ನೇ ಲಘುವಾಗಿ ಹೇಳಿದ್ದೇನೆ. ನಾವು ಇಬ್ಬರೂ ವೈದ್ಯರು, ಕೆಲಸಮಾಡುತ್ತ ಮಕ್ಕಳ ಪಾಲನೆಯನ್ನೂ ಮಾಡುವಾಗ ಗಂಡನಿಗೆ ಪಾಕ ಶಾಸ್ತ್ರಜ್ಞಾನವಿರದಿದ್ದರೂ ಸ್ವಲ್ಪವಾದರೂ ಅನ್ನ-ಸಾರು-ಪಲ್ಯ ಮಾಡಲು ಕಲಿತರೆ ಸಹಾಯವಾಗದಿರದೇ?  ಅದೂ ಭಾರತದಲ್ಲಿದ್ದಂತೆ ಅವಿಭಕ್ತ ಕುಟುಂಬಗಳ ಸೌಲಭ್ಯ ಅನಿವಾಸಿಗಳಿಗೆ ಇಲ್ಲದಿರುವಾಗ ಈ ಪರಿಣತಿ ಆವಶ್ಯಕವೇ (ಟಿಪ್ಪಣಿ: ಈಗ ಅಲ್ಲೂ ಅವಿಭಕ್ತ ಕುಟುಂಬಗಳು ಕಡಿಮೆಯೇ, ಅದರಲ್ಲೂ ನಗರಗಳಲ್ಲಿ – ಸಂ.). ಹಿಂದೊಮ್ಮೆ ನಮ್ಮವರೇ ಪ್ರೇಮಾ ಸಾಗರ್ ಹೇಳಿದಂತೆ ಪತಿ ಕಾಫಿ ಮಾಡಲು ಕಲಿತರೂ ಸಾಕು. ಡಾಕ್ಟರಾಗಿದ್ದ ನನ್ನವಳು ಹಾಗೆ ಹೇಳಿದ್ದನ್ನು ಆಕೆಯೂ ಸೀರಿಯಸ್ಸಾಗಿ ತೊಗೊಳ್ಳಲಿಲ್ಲ, ನಾನು ಸಹ. ಅದಾದಮೇಲೆ ಕಿಚನ್ ಅಪ್ರೆಂಟಿಸ್ ಆಗಿ ಸ್ವಲ್ಪ ಸ್ವಲ್ಪ ’ಕಲಿನರಿ ಸ್ಕಿಲ್ಸ್’ ಕಲಿತೆ. ನಮ್ಮ ಸಂಸಾರ ನೌಕೆ ಸಾಗಲು ಸ್ವಲ್ಪ ಸಹಾಯವಾಯಿತು ಅನ್ನಿ. ಆದರೆ ನಮ್ಮ ಮನೆಯ ದೋಸೆ ಹೆಂಚುಗಳ, ಅಥವಾ ದೋಸೆ ಹಿಟ್ಟಿನ ’ಬಿಹೇವಿಯರ್’ ಮಾತ್ರ ನಮಗೆ ಕೊನೆಯವರೆಗೂ ಬಿಡಿಸಲಾಗದ ಗಂಟಾಗಿಯೇ ಉಳಿಯಿತು.

ಎಲ್ಲರ ಮನೆಯ ದೋಸೆಗೂ …

ದೋಸೆಯೆಂದರೆ ಯಾವ ಭಾರತೀಯ, ಅದರಲ್ಲೂ ದಕ್ಷಿಣದವ ಬಾಯಿಬಿಡೊಲ್ಲ? ಊರಿಂದ ಈ ದೇಶಕ್ಕೆ ಬಂದು ವರ್ಷಗಳು ಕಳೆದಂತೆ ದೋಸೆ ತಿನ್ನುವ ಬಯಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಆದರೆ ನಮ್ಮ ಮನೆಯಲ್ಲಿ ಮಾತ್ರ ಎಂದೂ ದೋಸೆ ಏಳಲಿಲ್ಲ. ಬರೀ ಮುದ್ದೆ, ಮುದ್ದೆ! ಅಕಸ್ಮಾತ್ ಸ್ವಲ್ಪ ಎದ್ದರೆ, ಮಗುಚುವ ಕೈಯಲ್ಲೆತ್ತಿದ ಅರೆಬೆಂದ ದೋಸೆ ಒಂದೊಂದು ಸಲ ಒಂದೊಂದು ದೇಶದ ನಕಾಶೆಯಂತೆ ತೋರುವುದು! ಚಿಕಿತ್ಸೆಯಿರದ ರೋಗಕ್ಕೆ ಎಡತಾಕುವ ರೋಗಿಯಂತೆ ಮನೆ ಮನೆ ಅಲೆದಾಡಿ ದೋಸೆ ಹುಯ್ಯುವ ಪಟುಗಳ ಅಡ್ವೈಸ್ ಕೇಳಿದ್ದಕ್ಕೆ ಲೆಕ್ಕ ಇಲ್ಲ. ಆಕೆಯ ಹೆತ್ತ ತಾಯಿಯಿಂದ ಶುರುವಾಗಿ, ಎಲ್ಲ ಹಿರಿಯರು, ಸಂಬಂಧಿಕರು, (ಕೆಲಸದಾಕೆ ಸಹ!) ಮಿತ್ರರು, ಯಾರ್ಯಾರ ಮನೆಯಲ್ಲಿ ನಾಚಿಕೆಯಿಲ್ಲದೆ ಒಂದರಮೇಲೊಂದು ದೋಸೆ ಇನ್ನಷ್ಟು ಹಾಕಿಸಿಕೊಂಡು ತಿಂದ ಮೇಲೆ ನಿಮ್ಮ ರೆಸಿಪಿಯ ಗುಟ್ಟೇನು, ಯಾವ ಪ್ರಮಾಣದಲ್ಲಿ ಅಕ್ಕಿ- ಉದ್ದು ಹಾಕುತ್ತೀರಿ, ಎಷ್ಟು ಹೊತ್ತು, ಮತ್ತು ಎಲ್ಲಿ ಫರ್ಮೆಂಟಾಗಲು ಇಡುತ್ತೀರಿ, ಏರಿಂಗ್ ಕಬ್ಬರ್ಡ್ ನಲ್ಲಿಟ್ಟು ಮನೆಯವರಿಂದ ಬಟ್ಟೆಯೆಲ್ಲಾ ಏಕೆ ಗಬ್ಬು ವಾಸನೆ ಅಂತ ಅನಿಸಿಕೊಳ್ಳಲಿಲ್ಲವಾ? ಎಂಥ ಹೆಂಚು, ಊರಿಂದ ಯಾವ  ಅಂಗಡಿಯಿಂದ ತಂದದ್ದು, ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಸುರಿಮಳೆ, ವಿಚಾರಣೆ, ಅನ್ವೇಷಣೆ, ಎಲ್ಲವನ್ನೂ ಮಾಡಿದ್ದೇವೆ. ಇನ್ನು ದೋಸೆ ಹೆಂಚಿನ ವಿಷಯಕ್ಕೆ ಬಂದರೆ ಟೆಫ್ಲಾನ್, ಆಂಟಿ-ಸ್ಟಿಕ್ ಕೋಟಿಂಗ್ ಒಂದೇ ಎರಡೇ? ನಮ್ಮ ಪ್ಯಾಂಟ್ರಿ ತುಂಬ ಹೆಂಚುಗಳು, ಬೇರೆ ಬೇರೆ ಮಿಕ್ಸಿಗಳು, ರುಬ್ಬುವ ಕಲ್ಲಿನ ಮೆಶಿನ್, ಎಲ್ಲವನ್ನೂ ಪ್ರಯೋಗಿಸಿಯಾಯಿತು.  “ನಿಮ್ಮಲ್ಲಿ ಗ್ಯಾಸಿಲ್ಲ, ಇಲೆಕ್ಟ್ರಿಕ್ ಕುಕರ್ ಅದಕ್ಕ” ಅಂತ ಯಾರೋ ಡಯಗ್ನೋಸಿಸ್ ಕೊಟ್ಟರು ಒಬ್ಬರು. ಅಮೇರಿಕೆಯಿಂದ ಹೊತ್ತು ಕೊಂಡು ಬಂದ ಗ್ರಿಡಲ್ ಸಹ ಸೋತು ವಿಫಲವಾಗಿ ಇನ್ನೂ ಧೂಳು ಕುಡಿಯುತ್ತಾ ಪಾಂಟ್ರಿಯಲ್ಲೆಲ್ಲೋ ಸುದೀರ್ಘ ನಿದ್ರೆಯಲ್ಲಿದೆ. ನಮಗೇಕೆ ಈ ಶಾಪ ಎಂದು ನಾವು ಅಳುವುದೊಂದೇ ಉಳಿದಿತ್ತು.  ಎಲ್ಲ ತರದ ದೋಸೆಗಳ ಟ್ರಾಯಲ್ ಆಯಿತು. ಒಮ್ಮೊಮ್ಮೆ ರವೆ ದೋಸೆ ಮಾತ್ರ ಏಳುತ್ತಿತ್ತು. ಆಗಷ್ಟೇ ನನಗೆ ಕಿಚನ್ ಪ್ರವೇಶ ಸಿಕ್ಕು ಆಕೆಯನ್ನು ಕೂಡ್ರಿಸಿ ವರ್ಷಕ್ಕೊಮ್ಮೆ ಎರಡು ಸಲ ಒಂದೋ ಅಥವಾ ಎರಡೂವರೆ ರವೆ ದೋಸೆ ಮಾಡಿ ಹಾಕಿದಾಗ ತಿಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಳು. ಆಗ ರೆಡಿಮೇಡ್ ಹಿಟ್ಟು (batter) ಪ್ಲಾಸ್ಟಿಕ್ ಚೀಲಗಳಲ್ಲಿ ಬರುತ್ತಿರಲಿಲ್ಲ.  ಆಕೆಗೆ ಕೊನೆಯ ವರೆಗೆ ಶಾಪ ವಿಮೋಚನೆಯಾಗಿರಲಿಲ್ಲ. ಆಗ ದೋಸೆಗೆ ತೂತು ಇದ್ದರೆ ನಮ್ಮ ಅಭ್ಯಂತರವಿರಲಿಲ್ಲ, ಎಷ್ಟು ಬೇಕಾದರೂ ಇರಲಿ, ದೋಸೆ ಎದ್ದರೆ ಸಾಕು ಅಂತ ಬೇಡಿಕೊಳ್ಳುತ್ತಿದ್ದೆವು! ಈಗ ರೆಡಿಮೇಡ್ ಹಿಟ್ಟು ಬಂದ ಮೇಲೆ ಹೊಸ ಜಗತ್ತಿಗೇ ಬಂದಂತೆ ಆಗಿದೆ! ಎಷ್ಟು ಸುಲಭವಾಗಿ ದೋಸೆ ಏಳುತ್ತದೆ, ನನ್ನ ಮನೆಯಲ್ಲೂ!

ಅರ್ಕಿಮಿಡಿಸ್ ತತ್ತ್ವಕ್ಕೂ ಒಗ್ಗರಣೆಗೂ ಏನು ಸಂಬಂಧ?

 ಈ ಸರಣಿಯಲ್ಲಿ ಇನ್ನೊಬ್ಬರು ಬರೆದಂತೆ ಒಗ್ಗರಣೆ ಮಾಡೋದು ಅದೆಂಥ ಕಷ್ಟ? ಇಂಗು ಸಾಸಿವೆ, ಬೇಳೆ, ಕರಿಬೇವು ಜೀರಿಗೆ, ಎಲ್ಲ ಒಂದೊಂದಾಗಿ ಹಾಕಿದರೆ ಆಯಿತು ಅನ್ನುವವರು ಹಿಂದೊಮ್ಮೆ ಎಣ್ಣೆ ಹೊತ್ತಿಸಿದ್ದನ್ನು ಮರೆತಿದ್ದಾರೆ ಅಥವಾ ಸುಳ್ಳು ಹೇಳುತ್ತಿದ್ದಾರೆ ಅಂತ ಅರ್ಥ. ಹಾಗೂ ಹೀಗೂ ನಾನು ಅದನ್ನು ಕಲಿತೆ. ಮೊಟ್ಟಮೊದಲು ಅದೆಷ್ಟೋ ಸಲ ಎಣ್ಣೆ ಕಾದಿದ್ದೂ ಗೊತ್ತಾಗದೆ, ಇನ್ನೊಮ್ಮೆ ಎಲ್ಲ ಹೊತ್ತಿ ಹೋಗಿ ’ಬಿನ್ನಿಗೆ’ ಒಗ್ಗರಣೆ ಸಂತರ್ಪಣೆ ಮಾಡುತ್ತ ಕಲಿತೆ.  ಇತ್ತೀಚಿನ ವರ್ಷಗಳಲ್ಲಿ ನಮ್ಮ ಕನ್ನಡ ಬಳಗದ ಪದಾಧಿಕಾರಿಯಾಗಿದ್ದ ಸುಧಾ ಅವರ ಪರಿಚಯ. ಮೇಲಿಂದ ಮೇಲೆ ಮೀಟಿಂಗ್, ಕಾರ್ಯಕ್ರಮಗಳ ವ್ಯವಸ್ಥೆ ಸಂಬಂಧದಲ್ಲಿ ಫೋನು ಮಾಡುತ್ತಿರುತ್ತಾರೆ. ಆಗ ಹೇಗೋ ನಾನು ಸಾಯಂಕಾಲದ ಅಡುಗೆಯ ಸಮಯದಲ್ಲಿ ಒಗ್ಗರಣೆ ಮಾಡುವ ಹಂತದಲ್ಲಿರುವುದು ಅವರಿಗೆ ಗೊತ್ತಾಗಿ ಬಿಟ್ಟಂತೆ ಅದೇ ಕಾಲಕ್ಕೆ ಅವರ ಫೋನು ಬರುತ್ತದೆ. ಒಮ್ಮೊಮ್ಮೆ ಬೇಗನೆಯೇ ಅಡುಗೆ ಶುರು ಮಾಡಿರಲಿ, ಅಥವಾ ತಡವಾಗಿಯೇ ಅಡುಗೆ ಪ್ರಾಂಭ ಮಾಡಿರಲಿ, ಸರಿಯಾಗಿ ಒಗ್ಗರಣೆ ಹಾಕುವಾಗಲೇ ಅವರ ಫೋನು. ಎಲ್ಲ ಸಮಾಚಾರ ಮಾತಾಡುತ್ತ ಮತ್ತೆ ಒಗ್ಗರಣೆ ಹೊತ್ತಿಸುವದು ಪ್ರಾರಂಭವಾಗಿದೆ.  ಬಹಳ ವರ್ಷಗಳ ಕೆಳಗೆ ನನ್ನ ಮಗ ಶಾಲೆಯಲ್ಲಿ  ಆರ್ಕಿಮಿಡಿಸ್ ತತ್ತ್ವ ಕಲಿತ ದಿನ ಫಿಸಿಕ್ಸ್ ಕ್ಲಾಸಿನಿಂದ ಮನೆಗೆ ಬಂದು ಹೇಳಿದ ಜೋಕು ನೆನಪಾಗುತ್ತದೆ: What happens when a body is immersed in water? ಉತ್ತರ? The phone rings! ಅದೇ ತರಹ ಸಧ್ಯದಲ್ಲಿ “ಸುಧಾ ತತ್ತ್ವ” ನನ್ನ ಒಗ್ಗರಣೆಗೆ ಬಹಳಷ್ಟು ಸಲ ಅಡ್ಡ ಬಂದಿದೆ! ಇನ್ನುಮುಂದೆ ಅವರಿಗೆ ಫೋನು ಮಾಡಿಯೇ ಒಗ್ಗರಣೆ ಹಾಕುವ ಶಪಥ ಕಟ್ಟಿದ್ದೇನೆ!

ಮೊನ್ನೆ ಯಾರ್ಕ್ ಶೈರ್ ಕನ್ನಡ ಬಳಗದ ಹರಟೆ ಕಟ್ಟೆಯಲ್ಲಿ ಇತ್ತಿತ್ತಲಾಗಿ ಕೊರೋನಾ ಮಾರಿಯಿಂದ ಮನೆಯಲ್ಲೇ ಬಂದಿಯಾಗಿ ತಿಂಗಳುಗಟ್ಟಲೆ ಕಳೆದ ಎಷ್ಟೋ ಗಂಡಸರು ’ನಳಪಾಕ’ ಸಾಧಿಸಿದ್ದಾರೆ ಅಂತ ಕೇಳಿರುವೆ. ಇದನ್ನು ಮನೆ ಹೆಂಗಸರೂ ಸ್ವಾಗತಿಸುವದರಲ್ಲಿ ಸಂದೇಹವಿಲ್ಲ!

– ಶ್ರೀವತ್ಸ ದೇಸಾಯಿ

*********************************************************************

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗುಡೂರ್