ಆತ್ಮೀಯ ಓದುಗರೇ,
''ನಾನು ಅಲ್ಪ ಎಂದು, ಕುಗ್ಗಿ ಮುದುಗಬೇಡವೋ,
ಓ ಅಲ್ಪವೇ, ಅನಂತದಿಂದ ಗುಣಿಸಿಕೊ,
ನೀನ್ ಆನಂತವಾಗುವೆ!''
ಎಂಬ ಸುಂದರ, ಮಹತ್ತರ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಕನ್ನಡಿಗರು ವಿಶ್ವಮಾನವ ದಿನವೆಂದು ಆಚರಿಸುತ್ತಾರೆ. ಕರ್ನಾಟಕ ರತ್ನ, ಪದ್ಮವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಸಋಷಿ, ರಾಷ್ಟ್ರಕವಿಗೆ ೨೦೨೧ನೇ ವರುಷದ ಕೊನೆಯ ವಾರದ, ಅನಿವಾಸಿ ಬರಹಗಳು ಅರ್ಪಣೆ.
ಈ ಸಂಚಿಕೆಯಲ್ಲಿ ಶ್ರೀಮತಿ ಗೌರಿ ಪ್ರಸನ್ನ ಅವರು ಕುವೆಂಪು ಅವರ ಕುರಿತು ಬರೆದಿರುವ ಲೇಖನದಲ್ಲಿ ಅವರಿಗೆ ಕೆವಿ ಪುಟ್ಟಪ್ಪನವರ ಮೇಲಿರುವ ಭಕ್ತಿ, ಆರಾಧನೆ, ಪ್ರೀತಿ ಎದ್ದು ಕಾಣುತ್ತದೆ. ಅಂತೆಯೇ ಅವರು ವಾಚಿಸಿರುವ ''ಸ್ವರ್ಗದ್ವಾರದಿ ಯಕ್ಷ ಪ್ರಶ್ನೆ'' ಕವನ ಕೂಡ ಅತೀ ಸುಂದರವಾಗಿದೆ ಚಂದದ ಕಿರುಗತೆಯಂತೆ ಭಾಸವಾಗುತ್ತದೆ.
ಡಾ ಶಿವಶಂಕರ ಮೇಟಿ ಅವರು ಕುವೆಂಪು ಅವರ ಅನಿಕೇತನ ಪದ್ಯವನ್ನು ಭಾವಪೂರ್ಣವಾಗಿ ಹಾಡಿದ್ದಾರೆ.
ಡಾ ಲಕ್ಷ್ಮಿನಾರಾಯಣ ಗುಡೂರ್ ಅವರು ವಾಚಿಸಿರುವ- ''ನಾ ನಿನಗೆ ನೀ ನನಗೆ ಜೇನಾಗುವ'' ಮತ್ತು ''ಬನವೆಲ್ಲ ಕೊನರೊಡೆದು'' ಮತ್ತೆ ಮತ್ತೆ ಕೇಳಬೇಕೆನ್ನುವಷ್ಟು ಮಧುರವಾಗಿವೆ.
ಡಾ ದಾಕ್ಷಾಯಣಿ ಗೌಡ ಅವರು ಹಾಡಿರುವ ''ದೂರ ಬಹು ದೂರ'' ನಿಮ್ಮನ್ನು ಭಾವಲೋಕದಲ್ಲಿ ತೇಲಿಸುತ್ತದೆ.
ಬನ್ನಿ ನಿಮಗೆ ರಸಋಷಿಯ ಜನ್ಮದಿನದ ವಿಶೇಷ ಸಂಚಿಕೆಗೆ ಸ್ವಾಗತ.
-ಸಂಪಾದಕಿ
ಕನ್ನಡಕಾವ್ಯಾರಾಮದಕೋಗಿಲೆ-ಕುವೆಂಪು.
ಶ್ರೀಮತಿ ಗೌರಿ ಪ್ರಸನ್ನ.
ರನ್ನ-ಷಡಕ್ಷರಿ, ಪೊನ್ನ, ಪಂಪ, ಲಕುಮಿಪತಿ, ಜನ್ನರಂತಹ ಕವಿಕೋಗಿಲೆಗಳ ಪುಣ್ಯಾರಾಮವಾದ, ವಿದ್ಯಾರಣ್ಯ-ಬಸವಣ್ಣರ ದಿವ್ಯಾರಣ್ಯವಾದ, ಕೃಷ್ಣೆ-ಶರಾವತಿ-ತುಂಗೆ-ಕಾವೇರಿಯರ ವರರಂಗವಾದ ಭಾರತ ಜನನಿಯ ತನುಜಾತೆಯಾದ ಕನ್ನಡಮ್ಮನಿಗೆ ವಂದಿಸಿ ಜಗದ ಕವಿ, ಯುಗದ ಕವಿ ಕುವೆಂಪುರವರ ಜನುಮದಿನದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ತನ್ಮೂಲಕ ಇಡಿಯ ಮಾನವಕುಲಕ್ಕೆ ಅವರಿತ್ತ ಅಪಾರ ಕೊಡುಗೆಗಳ ಋಣಭಾರವನ್ನು ವಿನೀತಳಾಗಿ ಹೊತ್ತು ಈ ಹೊತ್ತು ಅವರನ್ನು ಸ್ಮರಿಸುತ್ತಿದ್ದೇನೆ.
ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ
ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ದಿಗ್ ದಿಗಂತವಾಗಿ ಏರಿದ ಮಹಾನ್ ಚೇತನ ಕುವೆಂಪು ಅವರದು. ಕನ್ನಡಮ್ಮನ ಚರಣಾರವಿಂದಕ್ಕೆ ಮೊದಲ ಜ್ಞಾನಪೀಠದ ಕೊಡುಗೆಯನ್ನು ಸಲ್ಲಿಸಿದ ಕೀರ್ತಿ ಇವರದು. ಕನ್ನಡ ಕಾವ್ಯಾರಾಮದ ಕೋಗಿಲೆ ಎಂದೇ ಹೆಸರಾದ ಕುವೆಂಪುರವರ ಹೆಸರಿನಲ್ಲಿಯೇ ಕೋಗಿಲೆಯ ಕೂಜನದ ಇಂಪಿದೆ. ಅವರ ಒಂದೊಂದು ಕವಿತೆಯಲ್ಲಿಯೂ ಕೊಳಲಿನ ಮಾಧುರ್ಯವಿದೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಕುವೆಂಪು ಕೈಯಾಡಿಸದ ಸಾಹಿತ್ಯ ಪ್ರಕಾರವೇ ಇಲ್ಲ. ಮಹಾಕಾವ್ಯ, ಕಾದಂಬರಿ, ನಾಟಕ, ಗೀತ, ಲೇಖನ, ವಿಮರ್ಶೆ, ಮಕ್ಕಳ ಸಾಹಿತ್ಯ ..ಎಲ್ಲದಕ್ಕೂ ಜೀವ ನೀಡಿದವರು;ಕಸುವ ತುಂಬಿದವರು. ಮಹಾಕಾವ್ಯದ ಯುಗ ಮುಗಿದೇಹೋಯ್ತು ಎನ್ನುವ ಕಾಲಘಟ್ಟದಲ್ಲಿ ‘ಶ್ರೀರಾಮಾಯಣ ದರ್ಶನಂ’ ದಂಥ ಮಹಾಛಂದಸ್ಸಿನ ಅದ್ಭುತ ಮಹಾಕಾವ್ಯವನ್ನು ಸೃಷ್ಟಿಸಿದರೂ ತಾನದನ್ನು ಸೃಜಿಸಿಲ್ಲ, ಅದುವೇ ತನ್ನನ್ನು ಸೃಷ್ಟಿಸಿತು, “ಕುವೆಂಪುವ ವಿರಚಿಸಿದೀ ರಾಮಾಯಣ ದರ್ಶನಂ” ಎಂದು ಹೇಳಿ ವಿನಯವನ್ನು ಮೆರೆದವರು. ’ಈ ಪುಟ್ಟ ಕನ್ನಡದ ಪೊಸಸುಗ್ಗಿ ಬನದ ಪರಪುಟ್ಟ’ ಎಂದು ‘ವಿದ್ಯಾ ವಿನಯೇನ ಶೋಭತೆ’ ಎಂಬ ಮಾತಿಗೆ ನಿದರ್ಶನವಾದವರು.
1904 ಡಿಸೆಂಬರ, 29ರಂದು ಶಿವಮೊಗ್ಗೆಯ ಹಿರೇಕೂಡಿಗೆಯಲ್ಲಿ ಜನಿಸಿದ ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂದು. ಪುರೋಹಿತಶಾಹಿಯ ಬಿಗಿಯಾದ ಕಪಿಮುಷ್ಟಿಯಲ್ಲಿ, ಕುಗ್ರಾಮವಾದ ಕುಪ್ಪಳ್ಳಿಯಲ್ಲಿ ಬೆಳೆದ, ಒಕ್ಕಲಿಗ ತುಂಬು ಕುಟುಂಬದ ಪೋರನೊಬ್ಬ ಮುಂದೆ ವಿಶ್ವವಿದ್ಯಾಲಯವೊಂದರ ಉಪಕುಲಪತಿಯ ಹುದ್ದೆಯನ್ನಲಂಕರಿಸಿ, ‘ರಾಷ್ಟ್ರಕವಿ’ ಮನ್ನಣೆಗೆ ಪಾತ್ರವಾಗುವುದು ಕಡಿಮೆ ಸಾಧನೆಯೇನಲ್ಲ. ‘ಕನ್ನಡದ ಆಸ್ಥಾನಕವಿ’ ಎಂದೇ ಹೊಗಳಿಸಿಕೊಳ್ಳುವ ಕುವೆಂಪು ಪಡೆದ ಪ್ರಶಸ್ತಿಗಳು ಅಸಂಖ್ಯಾತ.1968 ರಲ್ಲಿ ಜ್ಞಾನಪೀಠದ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಪಂಪ ಪ್ರಶಸ್ತಿ, ಪದ್ಮವಿಭೂಷಣ, ‘ಕರ್ನಾಟಕ ರತ್ನ’, ಗೌರವ ಡಾಕ್ಟರೇಟ್, ಇವೆಲ್ಲ ಇವರನ್ನರಸಿ ಬಂದವು. ನವಿಲು, ಕೊಳಲು, ಪಾಂಚಜನ್ಯ, ಕಲಾಸುಂದರಿ, ಪ್ರೇಮಕಾಶ್ಮೀರ ಇತ್ಯಾದಿ ಇವರ ಪ್ರಸಿದ್ಧ ಕವನ ಸಂಕಲನಗಳು. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಬೃಹತ್ ಕಾದಂಬರಿಗಳು. ರಕ್ತಾಕ್ಷಿ, ಜಲಗಾರ, ಬೆರಳ್ಗೆ ಕೊರಳ್, ಸ್ಮಶಾನ ಕುರುಕ್ಷೇತ್ರಂ, ಯಮನ ಸೋಲು ಇತ್ಯಾದಿ ನಾಟಕಗಳು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ.
ಕುವೆಂಪು ಕಾವ್ಯ ಕಬ್ಬಿಣದ ಕಡಲೆ, ಅವರು ಬಳಸುವ ಭಾಷೆ ಸುಲಭಕ್ಕೆ ಅರ್ಥವಾಗುವುದಿಲ್ಲ.. ಎಂಬಿತ್ಯಾದಿಟೀಕೆ-ಟಿಪ್ಪಣೆಗಳೂ ಇವೆ. ಆದರೆ ಜನತಾ ಜನಾರ್ಧನನ ಸಂತುಷ್ಟಿ, ಸಂಪುಷ್ಟಿಗಾಗಿಯೇ ಮಹಾಕವಿಯ ಕಾವ್ಯಯೋಗ. ನಗರ ಸಂಕ್ಷೋಭೆಯಿಂದ ದೂರವಾದ ನಿರ್ಜನಾರಣ್ಯದಲ್ಲಿ ತಪೋನಿರತನಾಗುವ ಋಷಿಯ ಗುರಿ ಜಗತ್ಕಲ್ಯಾಣ ಸಂಸಿದ್ಧಿಯೇ ಹೊರತು ಕೇವಲ ವೈಯಕ್ತಿಕ ಮೋಕ್ಷಸಾಧನೆಯಲ್ಲ. ವಲ್ಮೀಕ ಪ್ರವೇಶವಿಲ್ಲದೇ ವಾಲ್ಮೀಕಿಯಾಗುವುದು ಸಾಧ್ಯವಾಗಲಾರದು. ಆದ್ದರಿಂದ ಕುವೆಂಪು ಜನತೆಗೆ ದೂರವೆನಿಸಿದಂತೆ ತೋರಿದರೂ ವಾಸ್ತವವಾಗಿ ಹತ್ತಿರವೇ ಆಗಿದ್ದಾರೆ; ಹತ್ತಿರವಾಗುವುದಕ್ಕೋಸ್ಕರವೇ ದೂರವಾಗಿದ್ದಾರೆಂದರೆ ಸಮರ್ಪಕವಾದೀತೆಂಬುದು ಪ್ರಾಜ್ಞರ ಅಭಿಪ್ರಾಯ.
ಕುವೆಂಪು ಅಪ್ಪಟ ನಿಸರ್ಗ ಕವಿ. ಇವರ ಕಾವ್ಯದಲ್ಲಿ ಚಿತ್ರಿತವಾದಷ್ಟು ಸುಂದರವಾಗಿ ಪ್ರಕೃತಿ ಮತ್ತೆಲ್ಲೂ ಚಿತ್ರಿತವಾಗಿಲ್ಲವೆಂದರೆ ಅತಿಶಯೋಕ್ತಿಯೇನಲ್ಲ. ‘ಸೃಷ್ಟಿಯೊಲ್ಮೆಯೇ ಸೃಷ್ಟಿಕರ್ತಂಗೆ ಪೂಜೆಯಯ್’ ಎಂದಿವರು ಸಾರುತ್ತಾರೆ. ಹೊನ್ನಗಿಂಡಿಯ ಹಿಡಿದು ಕೈಯಲಿ ಹೇಮವಾರಿಯ ಚಿಮುಕಿಸಿ, ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ’ ಎಂಬ ದೋಣಿಹಾಡಿನ ಬಣ್ಣನೆ ಮೈನವಿರೇಳಿಸುವಂಥದು. ಹಾರುತಿಹ ಬೆಳ್ಳಕ್ಕಿಗಳ ಸಾಲು ಇವರ ಕಂಗಳಿಗೆ ದೇವರ ರುಜುವಿನಂತೆ ಕಾಣುತ್ತದೆ. ಗಿಳಿಗೊರವಂಕ ಹಕ್ಕಿಗಳಿಂಚರ ಕಿವಿಹಾಯ್ದು ಎದೆ ಮುಟ್ಟುತ್ತದೆ.
ಕನ್ನಡ ಪ್ರೇಮವಂತೂ ಇವರ ಉಸಿರಾಗಿದೆ.’ಕನ್ನಡ ಎನೆ ಕುಣಿದಾಡುವುದೆನ್ನೆದೆ. ಕನ್ನಡ ಎನೆ ಕಿವಿ ನಿಮಿರುವುದು’ ಎಂದು ಹಾಡುವ ಇವರು ‘ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಗೋವರ್ಧನಗಿರಿಯಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅದು ಪಾಂಚಜನ್ಯವಾಗುತ್ತದೆ' ಎಂದು ಎದೆ ತಟ್ಟಿ ಹೇಳಿದವರು. ಎಲ್ಲಾದರೂ ಇರು..ಎಂತಾದರೂ ಇರು..ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹರಸಿದವರು. ನನಗಿಲ್ಲಿ ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದಲ್ಲಿನ ಒಂದು ಘಟನೆ ಹೇಳಲೇಬೇಕು. ತೇಜಸ್ವಿ, ಚೈತ್ರ ಚಿಕ್ಕವರಿದ್ದಾಗಿನ ಪ್ರಸಂಗ. ಅವರಿಬ್ಬರೂ ಅದ್ಯಾ ವುದೋ ನಾಯಿಯೊಡನಾಡುತ್ತ ಅದಕ್ಕೆ ಆದೇಶ ಕೊಡುತ್ತಿರುತ್ತಾರೆ. ‘ಕಮಾಂಡಾ, ಕಮಾಂಡಾ’..ಎಂದೆಲ್ಲ. ಕುವೆಂಪುಗೆ ಎಷ್ಟು ತಲೆಕೆಡಿಸಿಕೊಂಡರೂ ಅದ್ಯಾವ ಶಬ್ದದ ಅಪಭ್ರಂಶ ಈ ‘ಕಮಾಂಡಾ’ ಅರ್ಥವಾಗುವುದಿಲ್ಲ. ಕೊನೆಗೆ ಮಕ್ಕಳನ್ನೇ ಕರೆದು ಕೇಳಿದಾಗ ಅವರು ಇದು ಇಂಗ್ಲೀಷ್ ನಾಯಿಯೆಂತಲೂ, ಬಾ ಅಂತ ಕನ್ನಡದಲ್ಲೆಲ್ಲ ಮಾತಾಡಿದರೆ ಅದಕ್ಕೆ ತಿಳಿಯುವುದಿಲ್ಲವಾದ್ದರಿಂದ ‘ಕಮಾಂಡಾ’ ಎಂದು ಇಂಗ್ಲೀಷ್ ನಲ್ಲಿ ಕರೆಯಬೇಕೆಂದು ‘ಜಾನಪ್ಪ’ ಹೇಳಿಕೊಟ್ಟಿದ್ದಾನೆಂತಲೂ ವಿವರಿಸುತ್ತಾರೆ. ಇದು ‘come on dog’ ದ ಅಪಭ್ರಂಶವೆಂದು ಅರ್ಥವಾಗುವುದರ ಜೊತೆಗೆ ಕನ್ನಡಕ್ಕಾದ ಅಪಮಾನದಿಂದ ಅವರ ಮೈ ಉರಿದುಹೋಗುತ್ತದೆ. “ನಮ್ಮ ಪಂಪ ಇಲ್ಲಿ ಮಹಾಕಾವ್ಯ ಬರೆಯುತ್ತಿದ್ದಾಗ ನಿಮ್ಮ ದೊರೆಗಳಿನ್ನೂ ತೊಗಟೆಯುಟ್ಟುಕೊಂಡು ಅಡವಿಯಲ್ಲಿ ಅಲೆಯುತ್ತಿದ್ದರು ಎಂದು ಹೋಗಿ ಹೇಳಿ ನಿಮ್ಮ ಆ ಜಾನಪ್ಪನಿಗೆ’' ಎಂದು ಗರ್ಜಸುತ್ತಾರಂತೆ. ನನಗೆ ಈ ಪ್ರಸಂಗವನ್ನೆಷ್ಟು ಸಲ ಓದಿದರಷ್ಟೂ ಸಲವೂ ಮೈಮೇಲೆ ಮುಳ್ಳು..ಕಣ್ಣಲ್ಲಿ ನೀರೊಡೆಯುತ್ತದೆ.
ಕುವೆಂಪು ದಾರ್ಶನಿಕ ಕವಿಯೂ ಹೌದು. ಜೀವನದ ಸಣ್ಣಪುಟ್ಟದರಲ್ಲಿಯೂ ಉದಾತ್ತತೆಯನ್ನೂ, ಅನಂತತೆಯನ್ನು ಕಾಣುವ ಕವಿ ನಮಗೂ ಅದನ್ನು ತೋರಿಸುತ್ತಾರೆ. ‘ಬೃಂದಾವನಕೆ ಹಾಲನು ಮಾರಲು’ ಅಂಥದೇ ಒಂದು ಭಾವಪೂರ್ಣ ಗೀತೆ. ಗೋಪಿಯೊಬ್ಬಳು ತನ್ನ ಸಖಿಗೆ ಬೃಂದಾವನಕೆ ಹಾಲನು ಮಾರಲು ತನ್ನೊಡನೆ ಬರಲು ಕರೆಯುತ್ತಿದ್ದಾಳೆ. ಆ ಸಖಿಗೋ ಪರಮಾಶ್ಚರ್ಯ! ಹಾಲು-ಹೈನಿನಿಂದ ಸಮೃದ್ಧವಾದ ಆ ಬೃಂದಾವನದಲ್ಲಿ ತಮ್ಮ ಹಾಲನ್ನು ಯಾರು ಕೇಳಿಯಾರು ಎಂಬ ಚಿಂತೆ ಅವಳದು. ಈ ಮುಗುದೆಗೋ ಹಾಲು ಮಾರುವುದೊಂದು ನೆಪ. ಅವಳ ಜೀವವೆಲ್ಲ ಶ್ರೀಕೃಷ್ಣನಲ್ಲಿ. ಹಾಲನು ಮಾರುವ ನೆವದಿಂದ ಹರಿಯ ಮೋಹಿಸಿ ಕರೆಯುವುದೇ ಅವಳ ಉದ್ದೇಶ. ಜೊತೆಗೇ ಗೋವಿಂದ ಹಾಲನು ಕೊಂಡು ಅದಕ್ಕೆ ಪ್ರತಿಯಾಗಿ ತನ್ನನೇ ನೀಡುವನೆಂಬ ಬಲವಾದ ನಂಬಿಕೆ. ಈ ಗೀತೆಗೊಂದು ನೃತ್ಯ ರೂಪಕದ ಗುಣವಿದೆ; ದರ್ಶನದ ಹೊಳಹಿದೆ. ‘ನಾವು ಲೀಲಾ ಮಾತ್ರ ಜೀವರು ನಮ್ಮ ದೇವನ ಲೀಲೆಗೆ..ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’ ಎಂಬಲ್ಲಿ ಸಂಪೂರ್ಣ ಶರಣಾಗತಿಯ ಸೊಗವಿದೆ. ರಾಮಾಯಣ ದರ್ಶನಂದಲ್ಲಿ ಅಹಲ್ಯೋದ್ಧಾರ ಸಂದರ್ಭದ ‘ಕಲ್ಲಾದರೇನ್, ತೀವ್ರತಪದಿಂದೆ ಚೇತನಸಿದ್ಧಿಯಾಗದೇ ಜಡಕೆ? ಜಡವೆಂಬುದು ಬರಿ ಸುಳ್ಳು..ಚೇತನ ಮೂರ್ತಿಯು ಈ ಕಲ್ಲು’ ಎಂದು ಚೈತನ್ಯ ಪೂಜೆ ಮಾಡುತ್ತಾರೆ. ‘'ಕಡೆಯದೆಯೇ ಕೇಳ್ ಬೆಣ್ಣೆ ಹೊಮ್ಮುವುದೇ? ಮೂಡುತಿರ್ದುವೇ ಮಹಾರತ್ನಗಳ್, ಪೇಳ್ ಮಥಿಸದಿರೆ ಮಂಥರೆಯ ವಾಸುಕಿ, ಮಹಾಮಮತೆ ತಾಂ ಕೈಕೆ ಮಂದರದಿಂದಮಾ ತ್ರೇತಾ ಸಮುದ್ರಮಂ” ಎಂದು ‘ಪ್ರಾಕೃತ ಘಟನೆಗಳ್ಗೆ ಪ್ರಕೃತಿ ಕಾರಣದಂತೆ ದೇವಕಾರಣಮಿರ್ಪುದು’ ಎಂಬ ರಹಸ್ಯವನ್ನರುಹುತ್ತಾರೆ. ‘ಲೇಸನೆಸಗುವ ವಿಧಿಗೆ ಬಹು ಪಥಗಳುಂಟು ನಡೆಯಲ್’ ಎಂದು ಕಂಗೆಟ್ಟವರನ್ನು ಸಂತೈಸುತ್ತಾರೆ. ‘ ರಸಜೀವನಕೆ ಮಿಗಿಲು ತಪಮಿಹುದೇ? ರಸಸಿದ್ಧಿಗಿಂ ಮಿಗಿಲೇ ತಾನ್ ಸಿದ್ಧಿ’ ಎಂದು ರಸದ ಹೊನಲನ್ನೇ ಹರಿಸುತ್ತಾರೆ.
ಕೊನೆಯದಾಗಿ ನಾನಿಲ್ಲಿ ಬರೆಯುತ್ತಿರುವುದು ಕವಿಯೊಡನೆ ನನ್ನ ನಂಟಿನ ಬಗ್ಗೆ; ಆ ಮಹಾಕವಿ ಒಂದಿನಿತು ನನಗೂ ದಕ್ಕಿದ ಬಗ್ಗೆ. ‘ಹಿಂದೆ ಕುಳಿದವಳೆಂಬ ನಿಂದೆಯ ಸಹಿಸಿ ನೊಂದಿಹೆ ಬಲ್ಲೆನು; ಆದರೊಲಿಯೆನು ಅನ್ಯರ..ಚಿನ್ನವೊಲಿದಿಹ ಧನ್ಯರ’ ಎಂದು ಪ್ರಾಥಮಿಕ ಶಾಲೆಯಲ್ಲಿ ಬಾಯಿಪಾಠ ಮಾಡಿ ಹಾಡಿ, ಇದನ್ನು ಬರೆದವರು ಕುವೆಂಪು, ಅವರ ಪೂರ್ಣ ಹೆಸರು......’ ಇತ್ಯಾದಿಯೊಂದಿಗೆ ಶುರುವಾದದ್ದು ಕುವೆಂಪುರವರ ನಂಟು. ಬಾಲ್ಯದ ಆದಿನಗಳಲ್ಲಿ ದೇಶಭಕ್ತಿ, ನಾಡು-ನುಡಿಯ ಬಗ್ಗೆ ಅಭಿಮಾನ, ಪ್ರೇಮ ಹೀಗೆಲ್ಲ ಗರಿಮೂಡಿದ್ದೇ ಅವರ ಜಯಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ ಇತ್ಯಾದಿ ಗೀತೆಗಳಿಂದ..ನನ್ನ ಹೈಸ್ಕೂಲಿನ ಮಾಸ್ತರರೊಬ್ಬರು ‘ವಿದ್ಯಾರ್ಥಿಗಳು ಭತ್ತ ತುಂಬುವ ಗೋಣಿ ಚೀಲಗಳಾಗಬಾರದು; ಭತ್ತ ಬೆಳೆಯುವ ಗದ್ದೆಗಳಾಗಬೇಕು’ ಎನ್ನತ್ತಾರೆ ಕುವೆಂಪು ಎಂದು ನಮ್ಮ ಅಭ್ಯಾಸದ ಪರಿಯನ್ನು ತಿದ್ದಿದ ರೀತಿ ನನಗಿಂದಿಗೂ ನೆನಪಿದೆ. ಶಾಲೆಯಲ್ಲಿ ಏರ್ಪಡಿಸಿದ್ದ ‘ನನ್ನ ನೆಚ್ಚಿನ ಕವಿ’ ನಿಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ನಾ ಪಡೆದಿದ್ದ ಸ್ಟೀಲ್ ಲೋಟವೊಂದು ಇನ್ನೂ ಅಮ್ಮನ ಮನೆಯಲ್ಲಿದೆ.
ನಂತರ ಕ್ಯಾಸೆಟ್ಟಿನ ಆ ಸುವರ್ಣಯುಗದಲ್ಲಿ ಅಶ್ವತ್ಥ, ಮೈಸೂರು ಅನಂತಸ್ವಾಮಿ, ರಾಜಕುಮಾರ್, ಮಾಲತಿ ಶರ್ಮ,ರತ್ನಮಾಲಾ ಪ್ರಕಾಶ್ ಅವರೆಲ್ಲರ ಸಿರಿಕಂಠದಿಂದ ಹರಿದು ಬಂದ ಕುವೆಂಪು ಗೀತೆಗಳು ನನ್ನನ್ನು ಬೇರೆಯದೇ ಲೋಕಕ್ಕೆ ಒಯ್ದದ್ದು ಸುಳ್ಳಲ್ಲ. ‘ಎಲ್ಲಿಯೂ ನಿಲ್ಲದಿರು..ಮನೆಯನೆಂದೂ ಕಟ್ಟದಿರು’, ‘ನೀನು ಹೊಳೆದರೆ ನಾನು ಹೊಳೆವೆನು’, ‘ಚಿನ್ನವ ಕೊಡನೇ ರನ್ನವ ಕೊಡನೇ ತನ್ನನೇ ಕೊಡುವನು ಕೇಳೆ ಸಖಿ’..ಇಂಥ ಗೀತೆಗಳಲ್ಲಿ ಮುಳುಗಿ ಕಳೆದುಹೋದದ್ದೆಷ್ಟು ಬಾರಿಯೋ? ಕೆರೆಯ ಅಂಚಿನ ಮೇಲೆ ಮಿಂಚುವ ಹಿಮಮಣಿಗಳ ಚಿತ್ರಣಕ್ಕೆ ಮನಸೋತಿದ್ದೆಷ್ಟು ಬಾರಿಯೋ? ಬೇಸರದ ಬದುಕಿಗುಸುರ ತುಂಬಲು ‘ಅಂತಾದರೂ ಬಾ, ಇಂತಾದರೂ ಬಾ, ಎಂತಾದರೂ ಬಾ ಬಾ’ ಎಂದು ಎದೆಬಾಗಿಲು ತೆರೆದಿಟ್ಟು ಆ ಅತಿಥಿಯನ್ನು ಧ್ಯಾನಿಸಿದ್ದೆಷ್ಟು ಸಲವೋ? ಮುಂದೆ ನಲ್ಲನೊಬ್ಬ ಒಲಿದಾಗ ‘ಆವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು’ ಎಂದು ಮನತುಂಬಿದ ಭಾವ ಈ ಕವಿಯ ಸಾಲುಗಳದ್ದೇ. ಮಲೆಗಳಲ್ಲಿ ಮದುಮಗಳು ಓದುತ್ತಿದ್ದಾಗ ನಾ ಚೊಚ್ಚಲ ಬಸುರಿ. ಅದರಲ್ಲಿ ಮೇಲಿಂದ ಮೇಲೆ ಬರುವ ತುಂಡು, ಕಡುಬು, ಕಳ್ಳುಗಳ ವರ್ಣನೆ ಇಷ್ಟು ನನ್ನ ಮನ ಹೊಕ್ಕಿಬಿಟ್ಟಿತ್ತೆಂದರೆ ಅದ ತಿನ್ನುವ, ಕುಡಿವ ಬಯಕೆ ಎಡೆಬಿಡದೇ ಕಾಡಿದ್ದು, ಅದನ್ನೇ ಹತ್ತು ಸಲ ಹಲುಬಿ ಅಮ್ಮನಿಂದ ಬೈಸಿಕೊಂಡದ್ದು ಮಧುರ ನೆನಪು. ಕಾನೂರ ಹೆಗ್ಗಡತಿಯಂತೂ ಆಗ ನಿದ್ದೆಯಲ್ಲೂ ಬಂದು ಕಾಡಿದ್ದಳು. ರಾಮಾಯಣ ದರ್ಶನಂ ಅಂತೂ ಸದೈವ ಕಾಲ ಇಷ್ಟದೇವತಾ ಪಟದಂತೆ ನನ್ನ ಕಣ್ಣೆದಿರು ಇರಲೇಬೇಕು..ನನ್ನ ಟೇಬಲ್ ಮೇಲೆ. ಅದು ಮಾಡಿದ ಪ್ರಭಾವದ ಬಗ್ಗೆ ಇಲ್ಲಿ ಬರೆಯಲಾಗದು. ‘ರಾಮಾಯಣಂ ಅದು ವಿರಾಮಯಣಂ ಕಣಾ’.
ಬುದ್ಧಿಗೆ ಅತೀತವಾದುದನ್ನು ಭಾವದಿಂ ಗ್ರಹಿಸುವ ಶಕ್ತಿ ಕರುಣಿಸಿದ್ದಕ್ಕೆ, ಎದೆಯ ತಿಳಿವಿಗೂ ಮಿಗಿಲು ಶಾಸ್ತ್ರವಿಹುದೇ ಎಂದು ಎದೆಯ ಮಾತಾಲಿಸಲು ಕಲಿಸಿದ್ದಕ್ಕೆ ಕವಿಗೆ ಮಣಿಯುತ್ತಿದ್ದೇನೆ.
ಮುಗಿದಿರಲಿ ಕೈ; ಮಣಿದಿರಲಿ ಮುಡಿ; ಮತ್ತೆ ಮಡಿಯಾಗಿರಲಿ ಬಾಳ್ವೆ..ಕವಿವಾಕ್ಯ ಸದಾ ನನ್ನ ಪೊರೆಯಲೆಂಬ ಆಶಯ.
ನಮಸ್ಕಾರ. ಅಡುಗೆ – ಅಡುಗೆಮನೆ ಸರಣಿಯ ಮುಂದಿನ ಕಂತು ಇಲ್ಲಿದೆ. ಡಾ. ದಾಕ್ಷಾಯಣಿ ಗೌಡ ಅವರು ಬಿಸಿಬೇಳೆ ಭಾತಿನ ಮಸಾಲೆಯನ್ನು ಬಡಿಸಿದರೆ, ರಾಧಿಕಾ ಜೋಶಿಯವರು ಮಸಾಲೆಗಳ ಸುಂದರ ರಾಣಿಯ ಬಗ್ಗೆ ಬರೆಯುತ್ತಾರೆ. ಓದಿ ನೋಡಿ, ನಿಮ್ಮ ಅನಿಸಿಕೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತೀರೆಂದುಕೊಂಡಿದ್ದೇನೆ. ದಯವಿಟ್ಟು ನೀವೂ ನಿಮ್ಮ ಅನುಭವಗಳನ್ನು ಬರೆದು ಕಳುಹಿಸಿ.
ಈ ಸಂಚಿಕೆ ನನ್ನ ಸಂಪಾದಕೀಯದ ಕೊನೆಯ ಪ್ರಸ್ತುತಿ. ನನಗೆ ಈ ಅವಕಾಶ ಕೊಟ್ಟ ಅನಿವಾಸಿಯ ಪದಾಧಿಕಾರಿಗಳಿಗೆ ನನ್ನ ಅಭಿವಾದನಗಳು. ಕಳೆದ ಹೆಚ್ಚು-ಕಡಿಮೆ ಆರು ತಿಂಗಳ ಅವಧಿಯಲ್ಲಿ ಲೇಖನಗಳನ್ನು ಬರೆದುಕೊಟ್ಟವರಿಗೂ, ಕೇಳಿದಾಗೆಲ್ಲ ಸಹಾಯ ಮತ್ತು ಮಾರ್ಗದರ್ಶನ ಮಾಡಿದವರಿಗೂ ನಾನು ಆಭಾರಿ. ನನ್ನ ಕೈಯಿಂದ ಸಂಪಾದಕನ ದಂಡವನ್ನು (baton) ಇಸಿದುಕೊಂಡು ಈ ಬ್ಲಾಗಿನ ಚುಕ್ಕಾಣಿ ಹಿಡಿಯಲಿರುವವರು ಡಾ. ದಾಕ್ಷಾಯಣಿ ಗೌಡ. – ಎಲ್ಲೆನ್ ಗುಡೂರ್ (ಸಂ.)
ನಮ್ಮ ಮದುವೆಯಾಗಿ ಕೆಲ ತಿಂಗಳ ನಂತರ, ಮದುವೆ ಮಾಡಿದ ನಮ್ಮ ತಂದೆತಾಯಿಗಳಿಗೆ ನಮ್ಮಿಂದಾದ ಓಳ್ಳೆಯ ಉಡುಗೊರೆಯನ್ನು ಕೊಡಬೇಕೆಂದು ನಾವಿಬ್ಬರೂ ನಿರ್ಧರಿಸಿದವು. ನಾವು ಕೊಡಿಟ್ಟಿದ್ದ ಸ್ವಲ್ಪ ಹಣದಲ್ಲಿ ಅವರಿಗೆ ಕಾಶಿಯಾತ್ರೆ ಮಾಡಿಸುವುದೆನ್ನುವ ಯೋಜನೆಯನ್ನ ಹಾಕಿಕೊಂಡೆವು. ಈಗ ಹಿಂತಿರುಗಿ ನೋಡಿದರೆ ಅವರಿಗೆ ಕಾಶಿಯಾತ್ರೆಯ ವಯಸ್ಸಾಗಿರಲಿಲ್ಲ. ನಮ್ಮ ಅಮ್ಮಂದಿರಿಬ್ಬರಿಗೂ ಆಗ ೫೦ ವರ್ಷ ಮತ್ತು ಅಪ್ಪಂದಿರಿಬ್ಬರಿಗೂ ೬೦ಕ್ಕಿಂತ ಕಡಿಮೆ ವಯಸ್ಸು.
ನಮ್ಮ ಸಣ್ಣ ಉಳಿತಾಯದಲ್ಲಿ ಕಾಶಿಯ ಜೊತೆಗೆ, ಅವರನ್ನು ಉತ್ತರಭಾರತದ ಯಾತ್ರೆ (ಕಾಶಿ, ಹರಿದ್ವಾರ, ಡೆಲ್ಲಿ, ಜಯಪುರ, ಅಗ್ರಾ, ಮಥುರಾ) ಮಾಡಿಸುವುದೆಂದು ನಿರ್ಧರಿಸಿ, ಅವರೊಡನೆ ಹಂಚಿಕೊಂಡಾಗ, ಅವರೂ ಖುಷಿಯಾಗಿ ಹೊರಟೇಬಿಟ್ಟರು. ಈಗಿನ ಹಾಗೆ ಇಂಟರ್ನೆಟ್ ಇರಲಿಲ್ಲ, ಟೂರ್ ಕಂಪನಿಗಳೂ ಬಹಳ ಕಡಿಮೆ ಇದ್ದವು. ಕಂಪನಿಗಳು ಇದ್ದರೂ ನಾವು ಕೊಡಿಟ್ಟ ಹಣ ಅದಕ್ಕೆಲ್ಲ ಸಾಕಾಗುತ್ತಿರಲಿಲ್ಲ. ಏನಿರದಿದ್ದರೂ ಆಗ ಭಂಡದೈರ್ಯಕ್ಕೆ ಕೊರತೆಯಿರಲಿಲ್ಲ ಎಂದು ಈಗ ಅರ್ಥವಾಗುತ್ತದೆ.
ರೈಲ್ವೆ ಟಿಕೆಟ್ ಮಾತ್ರ ಪ್ರಯಾಣಕ್ಕೆ ಮೊದಲೆ ಬುಕ್ ಮಾಡಿದ್ದೆವು. ಈ ಪ್ರವಾಸಕ್ಕೆ ನನ್ನ ನಾದಿನಿ (ಪತಿಯ ಅಕ್ಕ) ತನ್ನ ೧೦ ಮತ್ತು ೧೨ ವರ್ಷದ ಮಕ್ಕಳ ಜೊತೆ ಬರುವುದಾಗಿ ಹೇಳಿದಾಗ ಸ್ವಲ್ಪ ಭಯವೇ ಆಯಿತು. ಆಕೆಯ ಪತಿ ತನ್ನ ಕೆಲಸದ ಒತ್ತಡದ ಕಾರಣ ಬರುವುದಿಲ್ಲವೆಂದರು. ನನ್ನ ನಾದಿನಿ ತನ್ನ ಖರ್ಚನ್ನು ತಾನೇ ಕೊಡುವುದಾಗಿ ಹೇಳಿದಾಗ ಬೇಡ ಎನ್ನುವಷ್ಟು ಹಣ ನಮ್ಮಲ್ಲಿರದುದರಿಂದ ಆಯಿತು ಎಂದು ಸಂಕೋಚಿಸದೆ ಒಪ್ಪಿಕೊ೦ಡೆವು. ಇದು ೧೯೯೧ ನೇ ವರ್ಷ. ನಮ್ಮ ಬಳಿ ಮೊಬೈಲ್ ಫೋನಿರಲಿ, ಮನೆಯಲ್ಲಿ ದೂರವಾಣಿ ಸಹ ಇರಲಿಲ್ಲ. ನಮ್ಮ ದೂರವಾಣಿಯ ಕೋರಿಕೆಯ ಪತ್ರದ ಜೊತೆಗೆ ಲಂಚದ ಹಣವನ್ನು ಲಗತ್ತಿಸಿರಲಿಲ್ಲದ ಕಾರಣ ಅದು, ಅಧಿಕಾರಿಗಳ ಮೇಜಿನಿಂದ ಮುಂದಕ್ಕೆ ಸರಿದಿರಲಿಲ್ಲ.
ರೈಲು ಸೋಮವಾರ ಸಾಯಂಕಾಲ ಡೆಲ್ಲಿಗೆ ಹೊರಡುವುದಿತ್ತು. ಭಾನುವಾರ ಸಂಜೆ ಯಾವ ರೀತಿಯ ಕುರುಹು ಕೊಡದೆ, ನನ್ನ ಅತ್ತೆ, ಮಾವ, ನಾದಿನಿ, ಅವರ ಮಕ್ಕಳು ಮತ್ತು ನನ್ನ ಅಪ್ಪ, ಅಮ್ಮ ದಢೀರನೆ ಮನೆಗೆ ಬಂದಿಳಿದರು. ಪ್ರತಿ ಭಾನುವಾರ ನಾವಿಬ್ಬರೂ ಹೋಟೆಲ್ಲಿನಲ್ಲಿ ಅಥವಾ ಸ್ನೇಹಿತರ ಮನೆಗಳಲ್ಲಿ ಊಟಮಾಡುವುದು ಆಗ ನಮ್ಮ ಪರಿಪಾಠವಾಗಿತ್ತು. ಹಾಗಾಗಿ ಅಡಿಗೆ ಮಾಡುವ ಯಾವ ತಯಾರಿಯನ್ನು ನಾನು ಮಾಡಿರಲಿಲ್ಲ. ಇವರುಗಳು ಸೋಮವಾರ ಮಧ್ಯಾಹ್ನ ಬರಬಹುದೆಂದು ನಮ್ಮ ಊಹೆಯಾಗಿತ್ತು.
ಮನೆಗಿಳಿದ ಜನರ ದಂಡನ್ನು ನೋಡಿ ನಾನು ಹೌಹಾರಿಬಿಟ್ಟೆ. ನನ್ನ ಮೊದಲ ಚಿಂತೆ ಇಷ್ಟೊಂದು ಜನರಿಗೆ ರಾತ್ರಿಯ ಊಟಕ್ಕೆ ಹೇಗೆ ಅಡಿಗೆ ಮಾಡುವುದು ಎಂದು. ಹೋಟೆಲಿಗೆ ಹೋಗೋಣ ಎಂದು ಹೇಳುವ ಧೈರ್ಯ ನಮ್ಮಿಬ್ಬರಿಗೂ ಬರಲಿಲ್ಲ. ನನ್ನ ಮುಖ ನೋಡಿದ ನನ್ನ ನಾದಿನಿ ”ದಾಕ್ಷಾಯಿಣಿ ಯೋಚನೆ ಮಾಡಬೇಡ, ರಾತ್ರಿ ಅಡಿಗೆ ನಾನು ಮಾಡುತ್ತೇನೆ” ಎಂದಾಗ ನನ್ನ ಮುಖ ಅರಳಿತು ಮತ್ತು ಆಕೆ ”ಬಿಸಿಬೇಳೆ ಭಾತ್ ಮಾಡುತ್ತೇನೆ” ಅಂದಾಗ ಮನಸ್ಸೂ ಅರಳಿಬಿಟ್ಟಿತು. ನನ್ನ ನಾದಿನಿ ಅಂದು ಮತ್ತು ಇಂದಿಗೂ ಬಹುರುಚಿಯ ಬಿ.ಬೇ.ಭಾ. (ಬಿಸಿಬೇಳೆಭಾತ್ ) ಮಾಡುವುದರಲ್ಲಿ ನಿಪುಣಿ.
ನಾದಿನಿ ಕೊಟ್ಟ ತರಕಾರಿಯ ಲಿಸ್ಟ್ ಹಿಡಿದು ಸ್ಕೂಟರ್ ಹತ್ತಿ ವ್ಯಾಪಾರ ಮಾಡಿಕೊಂಡು ಬಂದಾಯಿತು. ಆಕೆ ’ಕಾರದ ಪುಡಿ’ ಕೊಡು ಅಂದಾಗಲೆ ನಮ್ಮ ಮನೆಯಲ್ಲಿ ಅದು ಮುಗಿದಿದೆ ಎನ್ನುವ ನೆನಪು ನನಗೆ ಬಂದದ್ದು. ಹಸಿಮೆಣಸಿನಕಾಯಿಯೂ ಮನೆಯಲ್ಲಿರಲಿಲ್ಲ. ಕಾರಕ್ಕೆ ಏನು ಮಾಡುವುದೆಂದು ಚಿಂತಿಸುತ್ತಿರುವಾಗ, ನಮ್ಮ ಅಪಾರ್ಟ್ಮೆಂಟ್ ಕೆಳಗೆ ಯಾವಾಗಲೋ ನೋಡಿದ್ದ ಮೆಣಸಿನಕಾಯಿಯ ಗಿಡ ನನ್ನ ನೆನಪಿಗೆ ಬಂತು. ನಾದಿನಿ ಹೇಳಿದ ಹಾಗೆ ಕೆಂಪಗಿರುವ ೬-೮ ಮೆಣಸಿನಕಾಯಿ ಕಿತ್ತು ತಂದಾಗ ಸಮಯಕ್ಕೆ ಸರಿಯಾಗಿ ಯೋಚಿಸಿದ ಬಗ್ಗೆ, ನನ್ನ ಬೆನ್ನು ನಾನೆ ತಟ್ಟಿಕೊಂಡಿದ್ದಾಯಿತು.
ಅಂತೂ, ಇಂತೂ ಭಾತು ತಯಾರಾಯಿತು. ನಮ್ಮ ಮನೆಯಲ್ಲಿದ್ದ ಬೇರೆ ಬೇರೆ ಸೈಜಿನ ತಟ್ಟೆ-ಲೋಟಗಳೊಂದಿಗೆ, ಹಸಿದ ಹೊಟ್ಟೆಯೊಂದಿಗೆ, ನಾವೆಲ್ಲ ಚಾಪೆಯ ಮೇಲೆ ಕಾತುರದಿಂದ ಕುಳಿತಾಯಿತು. ಘಮಘಮವೆನ್ನುವ ಭಾತು ತಟ್ಟೆಗೆ ಬಿತ್ತು. ಬಾಯಿಗಿಟ್ಟಿದ್ದೇ ತಡ ಎಲ್ಲರ ಕೈಗಳು ನೀರಿನ ಕಡೆಗೆ. ಕಣ್ಣಿನಲ್ಲಿ ನೀರು, ಮಾತನಾಡಲು ಬಾಯಿ ತೆರೆದರೆ ಕೆಮ್ಮು. ನೀರು ಕುಡಿದು, ಹೊಟ್ಟೆಯ ಕರೆ ತಡೆಯಲಾಗದೆ ಮತ್ತೊಂದು ತುತ್ತು ಬಾಯಿಗಿಟ್ಟಾಗ ನೀರಿನ ಬದಲು ಸಕ್ಕರೆ ಡಬ್ಬಕ್ಕೆ ಕೈ ಹಾಕುವ ಹಾಗಾಯಿತು. ಮಾಡಿದ್ದೆಲ್ಲ ಚೆಲ್ಲಿ ಮರುದಿನ ಪ್ರಯಾಣಕ್ಕೆಂದು ತಂದಿದ್ದ ಬಿಸ್ಕತ್ತು, ಬಾಳೆಹಣ್ಣುಗಳಲ್ಲಿ ಹೊಟ್ಟೆ ತುಂಬಿಸಿಕೊಂಡಿದ್ದಾಯಿತು.
ಈಗಲೂ ಆ ಚಿಕ್ಕ ಮೆಣಸಿನಕಾಯಿಗಳನ್ನು ನೋಡಿದಾಗ ಹೊಟ್ಟೆಯಲ್ಲಿ ಅಸಿಡ್ ತಂತಾನೆ ಸ್ರವಿಸುತ್ತದೆ. ”ಇದು ಜೀರಿಗೆ ಮೆಣಸಿನಕಾಯಿ ಅಂಥಾ ಕಾರವಿರುವುದಿಲ್ಲ” ಅಂತೆಲ್ಲ ಯಾರು ಹೇಳಿದರೂ ಅದರ ಕಡೆ ತಿರುಗಿ ನೋಡಲೂ ನನಗೆ ಭಯ.
ಕೇಳಿದವರು ಅತ್ತೆ, ಮಾವ ಮತ್ತು ಅಮ್ಮ, ಅಪ್ಪನನ್ನು ಜೊತೆಗೂಡಿಸಿ (ಬೀಗರ ಗುಂಪು ಸರಿಯಾದ ಜೊತೆಯಲ್ಲವೆಂದು ಜನ ಹೇಳುತ್ತಾರೆ) ಯಾತ್ರೆ ಮಾಡಿಸಿದ ಸಾಹಸ ನಮ್ಮದೆಂದು ಹೊಗಳುತ್ತಾರೆ. ಎರಡು ವಾರ ಯಾವ ಅನುಭವವೂ, ಅನುಕೂಲವೂ ಇಲ್ಲದೆ, ನಮ್ಮ ಉಳಿತಾಯದಲ್ಲಿ, ಮದುವೆಯಾದ ಮೊದಲ ವರ್ಷದಲ್ಲೇ, ನಮ್ಮಿಬ್ಬರ ಪೋಷಕರನ್ನು ಉತ್ತರಭಾರತದ ಯಾತ್ರೆ ಮಾಡಿಸಿದ ಹೆಮ್ಮೆ ನಮ್ಮಿಬ್ಬರಿಗೆ ಇಂದಿಗೂ ಇದೆ. ಇದೆಲ್ಲದರ ಜೊತೆಗೆ ಸಣ್ಣ ಮೆಣಸಿನಕಾಯಿಯ ಭಯವೂ ಬೇರುಬಿಟ್ಟಿದೆ. ವರ್ಷಕ್ಕೊಮ್ಮೆ ತಪ್ಪದೇ ನಾದಿನಿಯ ಮನೆಯಲ್ಲಿ ಬಿ.ಬೇ.ಭಾ ತಿಂದಾಗೆಲ್ಲ ಇದು ನೆನಪಿಗೆ ಬರುತ್ತದೆ.
ಇದು ನೋಡಲು ನಮ್ಮ ಹಿತ್ತಲಿನ ಕೈತೋಟದಲ್ಲಿ ಅನಾಯಾಸವಾಗಿ ಫೆಬ್ರುವರಿ ಮಾರ್ಚ್ ತಿಂಗಳಿನಲ್ಲಿ ಚಿಗುರುವ ನೇರಳೆ ಕ್ರೋಕಸ್ ಹೂವಿನಂತೆ ಕಾಣುತ್ತದೆ. ವರ್ಷದ ಕೇವಲ ೨ ವಾರಗಳಲ್ಲಿ ಕಾಶ್ಮೀರದ ಪರ್ವತ ಶ್ರೇಣಿಗಳ ನಡುವೆ ಹರಡಿದ ಫಲವತ್ತಾದ ಅತಿ ವಿಸ್ತಾರವಾದ ಜಮೀನಿನಲ್ಲಿ ಬೆಳೆಯುವುದು ಅತ್ಯದ್ಭುತವಾದ “ಕೆಂಪು ಬಂಗಾರ”. ಹಿಮಾಲಯದ ಗರ್ಭದಿಂದ ಹೊರಹೊಮ್ಮುವ ನೇರಳೆ ಬಣ್ಣದ ಹೊದಿಕೆ ಹೊತ್ತ ಈ ಸುಂದರ ಹೂವಿನ ರತ್ನಗಂಬಳಿ “ಕೇಸರಿ”. ವಿಶ್ವದ ಅತ್ಯಂತ ಬೆಲೆಬಾಳುವ ಹಾಗು ಕೆಲವೇ ಪ್ರದೇಶದಲ್ಲಿ ಬೆಳೆಯುವ ಈ ಮಸಾಲೆ ಪದಾರ್ಥ ನೋಡಲು ಎಷ್ಟು ಮನೋಹರ ಅಷ್ಟೇ ಶೇಷ್ಠ ಹಾಗು ಉನ್ನತ. ಮೂಲತಃ ಇದು ಭಾರತ ದೇಶದ ಬೆಳೆಯಲ್ಲ. ಪರ್ಷಿಯಾ ,ಅಫ್ಘಾನ್ ಇಂದ ಬಂದಿರಬಹುದೆಂಬ ವಿಭಿನ್ನ ಕಥೆಗಳಿವೆ. ಹನ್ನೆರಡನೆಯ ಶತಮಾನದಲ್ಲಿ ಕೇಸರಿ ಗಡ್ಡೆಗಳನ್ನು ಸ್ಥಳೀಯ ಮುಖ್ಯಸ್ಥರಿಗೆ ಸೂಫಿ ಸಂತರಾದ ಖವಾಜಾ ಮಸೂದ್ ವಾಲಿ ಮತ್ತು ಶೇಖ್ ಷರೀಫ್-ಯು-ದಿನ್ ಉಡುಗೊರೆಯಾಗಿ ನೀಡಿದರು ಅನ್ನುವುದು ಒಂದು ಕಥೆಯಾದರೆ, ಪರ್ಷಿಯನ್ನರಿಂದ ಹಿಡಿದು ಹಿಂದೂ ತಾಂತ್ರಿಕ ರಾಜರವರೆಗೆ, ಪ್ರತಿಯೊಬ್ಬರಿಗೂ ಕೇಸರಿಯು ಕಣಿವೆಯವರೆಗೆ ಕೊಟ್ಟ ವರವೆಂದು ನಂಬುತ್ತಾರೆ. ಕೇಶರಕ್ಕೆ ಗುಣಗಳ ತಕ್ಕಂತೆ ಹಲವಾರು ಹೆಸರು: ಜಾಫ್ರಾನ್, ಕೇಸರ್, ಕಾಂಗ್ ಪೋಶ್ ಮತ್ತು ಕುಂಕುಮ ಅನ್ನುವುದು ಜನಪ್ರಿಯ. ಕಾಶ್ಮೀರದಲ್ಲಿ ಶರತ್ಕಾಲ ಮುಗಿಯಲು ಪ್ರಾರಂಭಿಸಿದಾಗ ಕಾಶ್ಮೀರಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ತಮ್ಮ ಹೊಲಗಳಲ್ಲಿ ಕಾಣುತ್ತಾರೆ. ಅವರು ಕೇಸರಿ ಕ್ರೋಕಸ್ ಎಂಬ ಸೂಕ್ಷ್ಮ ನೇರಳೆ ಹೂವನ್ನು ಆರಿಸಿಕೊಳ್ಳುವಾಗ ತಮ್ಮ ಬೆತ್ತದ ಬುಟ್ಟಿಗಳೊಂದಿಗೆ ಅವುಗಳನ್ನು ಬಾಚಿಕೊಳ್ಳುವ ದೃಶ್ಯ ಸುಂದರ. ಪಾರಿಜಾತದಂತೆ ಇರುವ ಈ ಸ್ವರ್ಗೀಯ ಗುಲಾಬಿ ನೇರಳೆ ಹೂವನ್ನು ಸೂಕ್ಷ್ಮವಾಗಿ ಆರಿಸಿಕೊಳ್ಳುವ ಈ ನೋಟ ಹಾಗು ಸ್ಪರ್ಶ ಒಂದು ಆಧ್ಯಾತ್ಮಿಕ ಅಭೌತಿಕ ಅನುಭವವೇ ಸರಿ! ಕೇಸರಿ ಹೂವಿನ ದಳಗಳನ್ನು ಸಾಮಾನ್ಯವಾಗಿ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಆದರೆ ಕೆಂಪು ಎಳೆಗಳ ಮಧ್ಯದಲ್ಲಿ ಇರುವುದೇ ಶುದ್ಧ ಕೇಸರಿ. ಪ್ರತಿಯೊಂದು ಹೂವು ಕೇವಲ ಮೂರು ಎಳೆಗಳನ್ನು ಉತ್ಪಾದಿಸುತ್ತದೆ. ಅಂತಹ ಸುಮಾರು 350 ಕೆಂಪು ಎಳೆಗಳಿಂದ ಒಂದು ಗ್ರಾಂ ಕೇಸರಿ ತಯಾರಾಗುತ್ತದೆ. ಇದನ್ನು ಎಲ್ಲಾ ರೀತಿಯ ಆಹಾರ ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತದೆ. ಹಾಲಿನಲ್ಲಿರುವ ಕೇಸರಿ ಎಳೆಯು ಹಿಮಾಲಯದ ಕಣಿವೆಯ ಸೂರ್ಯೋದಯವನ್ನು ನೆನಪಿಸುತ್ತದೆ. ಕೆಂಪು, ಕಿತ್ತಳೆ ಮತ್ತು ಚಿನ್ನದ ಬಣ್ಣಗಳು ಅತ್ಯಂತ ನಯಮನೋಹರವಾದ ಮುಂಜಾವಿನ ಆಕಾಶವನ್ನು ಹೋಲುತ್ತದೆ. ಅಪರೂಪದ ಮಸಾಲೆ, ಇದು ಭಾರತೀಯ ಪಾಕಪದ್ಧತಿಯ ಆತ್ಮದ ಅತ್ಯಂತ ಅಮೂಲ್ಯವಾದ ಅಂಶ. ಹಾಲು, ಚಹಾ, ಅನ್ನದ (ಬಿರಿಯಾನಿ, ಪುಲಾವ್) ವೈವಿಧ್ಯಗಳು ಮತ್ತು ಇತರ ಭಕ್ಷ್ಯಗಳಲ್ಲಿ ಹಲವಾರು ಸಿಹಿತಿಂಡಿಗಳ ರುಚಿಯನ್ನು ಅಮರಗೊಳಿಸಲು ಕೇಸರಿಯ ಬಳಕೆಯಾಗುತ್ತದೆ.
ಈ ಕೆಂಪು ಕಾಂಚಾಣದ ಉತ್ಪಾದನೆಯು ವೇಗವಾಗಿ ಕುಸಿಯುತ್ತಿದೆ. ನಾವೀನ್ಯತೆಯತ್ತ ಕೆಲವು ಹೆಜ್ಜೆಗಳ ಹೊರತಾಗಿಯೂ, ಈ ದೇಶೀಯ ಉದ್ಯಮವು ಹೆಣಗಾಡುತ್ತದೆ. ಕೇಸರಿಯ ಅಭಾವದ ಕಾರಣ ಮೂಲ ಕೇಸರಿಯು ಈಗ ರಾಸಾಯನಿಕ ಪದಾರ್ಥಗಳಿಂದ ಬೆರೆತು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಕೇಸರಿಯ ದೈವಿಕ ಸುಗಂಧವು ಈ ಗಡಿ ಸಮಸ್ಯೆಯ ಹೋರಾಟದ ತೀಕ್ಷ್ಣ ವಾಸನೆಯೊಂದಿಗೆ ಬೆರೆಯುತ್ತಿದೆ. ಒಟ್ಟಿನಲ್ಲಿ ನಮ್ಮ ಪಾಕಶಾಸ್ತ್ರ ಮತ್ತು ನೈಸರ್ಗಿಕ ಪರಂಪರೆಯು ಪುನರ್ಕಲಿಕೆಗೆ ಕಾಯುತ್ತಿದೆ.