ಐನೂರು ಆವೃತ್ತಿ ದಾಟಿದ ಅನಿವಾಸಿಯ ಬ್ಲಾಗಿಗೆ ಮತ್ತೊಮ್ಮೆ ನಿಮಗೆಲ್ಲ ಸ್ವಾಗತ, ನಮಸ್ಕಾರಗಳೊಂದಿಗೆ. ಇವತ್ತಿನ ಅಂಚೆಯಲ್ಲಿ ಶ್ರೀಮತಿ ಗೌರಿ ಪ್ರಸನ್ನ ಬರೆದ “ಶ್ರೀಮತಿ ಮೈದಾಸ” ಅನ್ನುವ ಕವನವಿದೆ. ಅವರೇ ಹೇಳಿರುವಂತೆ, ಇದು ಇಂಗ್ಲೀಷಿನ “Carol Ann Duffy ಯವರ Mrs Maidas ನಿಂದ ಪ್ರೇರಿತ. ಅದರ ಭಾಷಾಂತರವೋ, ಭಾವಾನುವಾದವೋ ಖಂಡಿತ ಅಲ್ಲ. A level ನಲ್ಲಿ English literature ಕಲಿಯುತ್ತಿರುವ ಮಗಳು ಅಕ್ಷತಾ ಕೆಲ ದಿನಗಳ ಹಿಂದೆ ತನ್ನ syllabus ನಲ್ಲಿರುವ ಈ ಹಾಡಿನ ಬಗ್ಗೆ ಮಾತಾಡಿದ್ದೇ ತಡ. Mrs.Maidas ಮನದಲ್ಲಿ ಗಟ್ಟಿಯಾಗಿ ನಿಂದು ತಲೆ ತಿನ್ನಲಾರಂಭಿಸಿದ್ದೇ ಈ ಪ್ರಯತ್ನದ ನಾಂದಿ.” ವ್ಯಾಲೆಂಟೈನ್ ದಿವಸ ಹತ್ತಿರ ಬಂದಂತೆ, ಸ್ವಲ್ಪ ಪ್ರೇಮಿಗಳ / ಪ್ರೇಮಕಾವ್ಯಗಳ ಹಾವಳಿ ಸಹಜವಾಗಿಯೇ ಹೆಚ್ಚಾಗುತ್ತದೆ. ಆದರೆ ಇಲ್ಲಿ, ಮುಟ್ಟಿದ್ದೆಲ್ಲ ಬಂಗಾರ ಮಾಡುವ ಇನಿಯನ ಪ್ರಿಯೆಯ ಕಷ್ಟಗಳ ಅಳಲಿದೆ, ಹತ್ತಿರವಿದ್ದೂ ಕೈಹಿಡಿಯಲಾಗದ ಪರಿಸ್ಥಿತಿಯ ಸಂಕಟವಿದೆ. ಬನ್ನಿ, ಓದೋಣ, ಓದಿ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳೋಣ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).
ಜೂನ್ ತಿಂಗಳ ಮೊದಲ ಮುಂಗಾರು ಮಳೆ.. ಬಿದ್ದ ತಟಪಟ ಹನಿಗೆ ತೊಯ್ದು ತುಟಿದೆರೆದ ಇಳೆ.. ಬೆಳ್ಳನೆ ತಟ್ಟೆ ಇಡ್ಲಿಯ ನಸು ಬೆಚ್ಚನೆಯ ಹಬೆ, ಚಟ್ನಿಗೆಂದು ಕಾಸಿದ ಇಂಗು-ಕರಿಬೇವಿನೊಗ್ಗರಣೆಯ ಘಮ,ಕುದಿಯುತ್ತಿರುವ ಚಹಾದ ತುಸು ಕಹಿ ಒಗರು..ತಾಟು, ಬಟ್ಟಲು, ಚಮಚೆ,ಲೋಟ,ಕಪ್ ಗಳ, ಹೆಚ್ಚಿಟ್ಟ ಅರ್ಧ ನಿಂಬೆ, ಕರಿಬೇವ ಕಡ್ಡಿಗಳ.. ಸಂತೆಯ ಮಾಳ ನನ್ನ ಅಡುಗೆ ಕಟ್ಟೆ.. ತುಂಬು ಸಜೀವತೆಯ ಪ್ರತೀಕ.. ಪ್ರೀತಿ - ರೀತಿಗಳ ನಿತ್ಯಸತ್ಯ ಲೋಕ
ಅಡರಿದ್ದ ಮಿಶ್ರ ಘಮಟು ಹೊರಹೋಗಲನುವಾಗಲೆಂದು ತುಸುದೆರೆದ ಕಿಟಕಿಯ ಇನ್ನಷ್ಟು ತೆರೆದೆ.. ನಮ್ಮನೆ ಪುಟ್ಟ ಕೈ ತೋಟದಲಿ .. ಅದೋ .ನನ್ನ ಮೈದಾಸ,ಜೀವದ ಜೀವ.. ನನ್ನೊಲವು.. ನಾವೇ ನೆಟ್ಟ ಮಲ್ಲಿಗೆಯ ಬಳ್ಳಿಗೀಗ ಮೈತುಂಬ ಹೂವು.. ಟೊಂಗೆ ಟೊಂಗೆಯಲಿ ತೂಗುತಿದೆ ಗಿಣಿ ಕಡಿದ ಗಿಣಿಮೂತಿ ಮಾವು ಗಿಡಗಂಟೆಗಳ ಕೊರಳಲ್ಲಿ ಗುಬ್ಬಚ್ಚಿ ಮರಿಯ ಚೀಂವ್ ಚೀಂವು.. ಅರೇ! ಇದೇನಿದು!!..
ಮಾವು ಕೀಳಲೆಂದು ಅವ ಬಗ್ಗಿಸಿದ ಟೊಂಗೆಯ ಎಲೆಯ ಹಸಿರೊಮ್ಮೆಗೇ ಪೀತ ವರ್ಣ.ಕಿತ್ತ ಬಿಳಿಯ ಮಲ್ಲಿಗೆಗೆ ಬಂಗಾರ ಬಣ್ಣ ‘ಸುವರ್ಣ ಪುಷ್ಪ ದಕ್ಷಿಣಾಂ ಸಮರ್ಪಯಾಮಿ’ ಮಂತ್ರದನುರಣ
ಅರೇ,ಇದೇನಿದು ಅಂಗೈಲ್ಹಿಡಿದ ಮಾವಿಗೂ ನೂರು ಕ್ಯಾಂಡಲ್ ಬಲ್ಬ್ ಪ್ರಭೆ.. ಅನತಿ ದೂರದಿಂದಲೂ ಕಂಡ ಅವನ ವಿಜಯದ ನಗೆಗೆ ನಾನು ಅಪ್ರತಿಭ ಪುಟ್ಟ ತೋಟದ ಕಟ್ಟಿಗೆಯ ಗೇಟು ದೂಡಿದನಷ್ಟೇ..ಅದೂ ಚಿನ್ನದಂತೆ ಥಳಥಳ..
ದಣಿದ ದೇಹ ಚೆಲ್ಲಿ ಅವ ಕೂತ ಹಾಲ್ ನ ಹಳೆಯ ಕಂದು ಈಸಿ ಚೇರ್ ಬಟ್ಟೆ .. ಕ್ಷಣ ಮಾತ್ರದಲಿ ಹೊಂಬಣ್ಣದ ಪಟ್ಟೆ.
ಮೆತ್ತಗಿನ ಮೃದು ಇಡ್ಲಿಗೆ ಅವನ ಕೈ ಸೋಕಿತಷ್ಟೇ..ಅದುವೂ ಇದೀಗ ಹಳದಿ ಲೋಹದ ಮುದ್ದೆ.
‘ಓಹ್! ದೇವರೇ’ ನಿಡುಸುಯ್ದ ಅವನ ಮೊಗದ ತುಂಬ ಕಳವಳ ‘ಇದೇನಾಗುತಿದೆ?’ ನನ್ನೆದೆಯ ಗೂಡಲ್ಲೂ ಭಯ, ಆತಂಕ,ತಳಮಳ ಅಳುಕುತ್ತಲೇ ಮುಟ್ಟಿದ ಚೀನೀಮಣ್ಣಿನ ಕಪ್ ನ ಚಹಾ ತಾನಾಯಿತು ಕ್ಷಣಾರ್ಧದಲೇ ಕನಕ ಭೂಷಿತ ಹಿಡಿಯ ಕಪ್ಪಿನ ಹಳದಿದ್ರವ
‘ನಿಲ್ಲು, ಹಿಂದೆ ಸರಿ. ಮುಟ್ಟದಿರು ನನ್ನ’- ಚೀರಿದ. ನನ್ನ ಕೈಕಾಲೆಲ್ಲ ನಡುಕ, ಕಣ್ಣು ಕತ್ತಲೆ.. ಕುಸಿದೆ ‘ಮ್ಯಾಂವ್ ಎಂದು ಒಡೆಯನ ತೊಡೆಯೇರ ಬಂದ ಟಾಮಿಯ ಕಂಡೆ..ಧಡಕ್ಕನೆದ್ದೆ – ಕೊಠಡಿಯಲಿ ಕೂಡಿ ಕೊಂಡಿ ಜಡಿದೆ.
‘ಅತ್ಯಾಸೆ ಗತಿಗೇಡೆಂದು ದೃಷ್ಟಾಂತ ಕೊಡುತ್ತದೆ ಜಗತ್ತು ಇರಲಿಲ್ಲವೇನು ಹಲಕೆಲವು ಅನಿವಾರ್ಯತೆ – ಜರೂರತ್ತು ಬಣ್ಣ ಬೇಡುವ ಗೋಡೆ, ಬಳಕೆಗೊಂದು ಗಾಡಿ, ದುರಸ್ತಿಗೆ ಬಂದ ಛತ್ತು ‘ನನ್ನದೇನೂ ತಪ್ಪಿಲ್ಲ’ – ಅನ್ನಲಾರೆ ಖಂಡಿತ.ಮದುವೆ ಛತ್ರದಲ್ಲೋ, ಹಬ್ಬ ಸಮಾರಂಭದಲೋ ಕಂಡು ಓರಗೆಯವರ ಸೀರೆ,ಒಡವೆ, ದೌಲತ್ತು.. ನಾನೂ ರಗಳೆ ಮಾಡಿ ಮಾಡಿ ಅವನ ಕಂಗೆಡಿಸಿದ್ದಿದೆ ಕಿಂಚಿತ್ತು
ಅವನಿಗೀಗ ಚಿನ್ನದ್ಹಾಸಿಗೆಯಲಿ ನಿದ್ದೆಯಿಲ್ಲದ ಹೊರಳಾಟ ಇನಿಯನಪ್ಪುಗೆಯಿಲ್ಲದ ಸುಪ್ಪತ್ತಿಗೆಯಲ್ಲಿ ನನ್ನ ಗೋಳಾಟ ನಲ್ಲನಪ್ಪುಗೆಗೆ ಕಾಡುವ ದೇಹ-ಮನ-ಆತ್ಮಗಳ ಸಂಭಾಳಿಸಲಾಗದೇ ಒದ್ದಾಡುತ್ತಿದ್ದೇನೆ. ಶಾಪ, ಅಭಿಶಾಪಗಳಂತಿರಲಿ.. ವರವೂ ಹೀಗೆ ಶಾಪವಾಗುವ ಪರಿಗೆ ಕಂಗಾಲಾಗಿದ್ದೇನೆ.
ಬಲುಬಾರಿ ಅನ್ನಿಸುವುದುಂಟು.. ಏನಾದರಾಗಲಿ, ಒಮ್ಮೆ ಅವನ ಬಿಗಿದಪ್ಪಿ ಪುತ್ಥಳಿಯಾಗಿ ಕುಳಿತುಬಿಡಲೇ ಪಕ್ಕದಲೆ ಎಲ್ಲ ತೊಳಲಾಟ, ನರಳಾಟ, ನೋವು, ಹಿಂಸೆಗಳಿಗೆ ಮಂಗಳ ಹಾಡಿಬಿಡಲೇ?
ಛೇ!ಛೇ!! ಈ ಆಪತ್ತಿನ ಸಮಯದಲಿ ಇಂಥ ಸ್ವಾರ್ಥಿಯಾಗಲಾರೆ. ನಮ್ಮೊಲವ ಸಾಂಗತ್ಯ, ಸಿಹಿಕಹಿ ದಾಂಪತ್ಯ ತೊರೆಯಲಾರೆ ಕಣ್ಣಿನಲೇ ಅವನ ಮುಟ್ಟಿ, ಮೈದಡವಿ ಸಂತೈಸದಿರಲಾರೆ ಧರ್ಮೇಚ-ಅರ್ಥೇಚ-ಕಾಮೇಚ.. ಕೊಟ್ಟ ವಚನ ನಿಭಾಯಿಸದಿರಲಾರೆ.
ರುಚಿಯಾದ ಅಡಿಗೆ ಮಾಡುವದು ಕಷ್ಟವೆಂದರೆ ಮಾಡಿದ್ದನ್ನು ತಿನ್ನುವುದೂ ಕೂಡ ಕಷ್ಟವೆಂಬುವುದು ಬಹು ಜನರಿಗೆ ಗೊತ್ತಿರಿಲರಾರದ ಸಂಗತಿ ಇರಬಹುದು . ಪ್ರಪಂಚದ ಬೇರೆ ಬೇರೆ ದೇಶಗಲ್ಲಿ ತಿನ್ನುವ ಆಹಾರ ವಿಭಿನ್ನವಾಗಿದ್ದರೆ, ತಿನ್ನುವ ಪದ್ಧತಿ ಕೂಡ ಅಷ್ಟೇ ವಿಭಿನ್ನವಾಗಿದೆ. ನಾನು ಮೊದಲು ಸಲ ಈ ದೇಶಕ್ಕೆ ಬಂದಾಗ ಫೋರ್ಕ್ ಮತ್ತು ಚಮಚ ಹಿಡಿದು ತಿನ್ನಲು ಹೋಗಿ ಹಾಗು ಜಪನೀಸ ನೂಡಲ್ಸನ್ನು ಕಡ್ಡಿಯಿಂದ ಎತ್ತಲು ಹೋಗಿ ನಗೆಪಾಡಾಗಿದ್ದು ಇನ್ನೂ ನೆನಪು. ಡೈನಿಂಗ್ ಟೇಬಲ್ ಮೇಲೆ ಕುಳಿತು ಆರಾಮವಾಗಿ ತಿನ್ನುವವರಿಗೆ ನಮ್ಮ ಹಳ್ಳಿಗೆ ಕರೆದೊಯ್ದು ಹಾಸಿದ ಚಾಪೆಯ ಮೇಲೆ ಕುಳಿತು ತಿನ್ನಲು ಹೇಳಿದರೆ ಎಂಥ ಕಷ್ಟವಾದೀತು? ಇಂಥ ವಿಷಯದ ಮೇಲೆ ಸರಾಳವಾಗಿ ಜುಳು ಜುಳು ನೀರಿನಂತೆ ಹರಿಯುವ ‘ ಹರಟೆ ‘ ಓದಲು ಸಿಕ್ಕರೆ ಮನಸಿಗೆ ಎಷ್ಟೊಂದು ಖುಷಿ ! ಇಷ್ಟು ಸಲೀಸಾಗಿ ಹರಟೆಯನ್ನು ಬರೆಯಲು ಗೌರಿ ಪ್ರಸನ್ನನವರನ್ನು ಬಿಟ್ಟರೆ ಇನ್ನ್ಯಾರಿಗೆ ಸಾಧ್ಯ? ಬನ್ನಿ, ತಪ್ಪದೆ ಅವರ ಹರಟೆಯನ್ನು ಓದಿ ಆನಂದಿಸಿ .
ಒಬ್ಬೊಬ್ಬರ ಜೀವನದಲ್ಲೂ ಇನ್ನೊಬ್ಬ ಪ್ರಭಾವಿತ ವ್ಯಕ್ತಿಯ ಪ್ರಭಾವ ಇರುವದು ಸಹಜ. ನನ್ನ ಚಿಕ್ಕ ವಯಸಿನಲ್ಲಿ ಕನ್ನಡ ಸಾಹಿತ್ಯದತ್ತ ಅಭಿರುಚಿ ಬೆಳೆಯಲು ಕಾರಣರಾದವರು ನನ್ನ ನೆಚ್ಚಿನ ಕಾದಂಬರಿಕಾರ್ತಿ ‘ತ್ರಿವೇಣಿ’ ಯವರು . ಸೆಪ್ಟೆಂಬರ್ ೧ ಅವರ ಹುಟ್ಟುದಿನ . ಈ ಸಮಯದಲ್ಲಿ ನಾನು ಅವರಿಗೊಂದು ಹೃತ್ಪೂರ್ವಕ ನಮನ ಸಲ್ಲಿಸಲು ಸಣ್ಣ ಬರಹವನ್ನು ಬರೆದಿರುವೆ , ತಾವೆಲ್ಲಾ ಓದುವಿರೆಂದು ಭಾವಿಸಿರುವೆ
ದಯವಿಟ್ಟು ಎರಡೂ ಬರಹಗಳನ್ನು ಸಮಯ ಸಿಕ್ಕಾಗ ಓದಿ , ಹಾಗೆಯೇ ಎರಡಕ್ಷರದ ಅನಿಸಿಕೆಯನ್ನು ಬರೆಯಲು ಮರೆಯಬೇಡಿ
– ಸಂಪಾದಕ
ಒಂದೋ ಎರಡೋ ಬಾಳೆಲೆ ಹರಡೋ
– ಗೌರಿ ಪ್ರಸನ್ನ
‘ಒಂದೋ ಎರಡೋ ಬಾಳೆಲೆ ಹರಡೋ’ ಅನ್ನುವ ಹಾಡಿನಿಂದಲೇ ನಮ್ಮ ಒನ್ನೆತ್ತಾ ಶುರುವಾಗಿ ನಾವು ರಾಕ್ಷಸ ಗಣದಿಂದ ಸಾಕ್ಷರರಾಗುವತ್ತ ಮೊದಲ ಹೆಜ್ಜೆಯಿಟ್ಟದ್ದು. ನಮಗೆ ಆಗಲೂ, ಈಗಲೂ ಊಟದ ಆಟ ಕೊಟ್ಟಷ್ಟು ಖುಷಿ ಬೇರಾವುದೂ ಕೊಟ್ಟಿಲ್ಲ ಅನಬಹುದು. ನಾ ಎಷ್ಟೋ ಸಲ ವಿಚಾರ ಮಾಡತಿರತೀನಿ. ಈ ‘ಊಟ’ ಅನ್ನೂದು ಇರಲಿಲ್ಲಂದ್ರ ಕೆಲಸನs ಇರತಿರಲಿಲ್ಲ ಅಂತ. ನಾವೂ ಗಿಡಮರಬಳ್ಳಿಗಳ ಗತೆ ಅಥವಾ ಕೋಯಿಮಿಲ್ ಗಯಾದ ‘ಜಾದೂ’ ನ ಗತೆ ಬರೀ ಸೂರ್ಯನ ಬಿಸಿಲೋ, ನೀರೋ ಇವುಗಳಿಂದನೇ ಬದುಕೂ ಹಂಗಿದ್ರ ಯಾವ ಕೆಲಸದ ರಗಳೆನೇ ಇರತಿರಲಿಲ್ಲ. ಕನಿಷ್ಠ ಪಕ್ಷ ಪಶುಪಕ್ಷಿಗಳ ಗತೆ ಸೊಪ್ಪು, ಹುಲ್ಲು, ಹಣ್ಣುಹಂಪಲ, ಹಸಿಮಾಂಸಗಳನ್ನು ಹಂಗೇ ನೇರವಾಗಿ ತಿನ್ನೂ ಹಂಗಿದ್ರ ಹೆಂಗಿರತಿತ್ತು..?! ಆವಾಗ ಈ ಭಾಂಡಿ ತೊಳಿ, ಕಟ್ಟಿ ಒರಸು, ಕಿರಾಣಿ ತಗೊಂಬಾ, ಕಾಸು, ಕಟ್ಟು, ಕುದಿಸು, ಬೇಯಿಸು, ಹೆಚ್ಚು, ಕೊಚ್ಚು, ತೊಳಿ, ಬಳಿ ಅನ್ನೋ ಯಾವ ಉಸಾಬರಿನೂ ಇರತಿರಲಿಲ್ಲ. ಹಂಗಂದ್ರ ಈ ಊಟನೇ ಎಲ್ಲಾದಕ್ಕೂ ಮೂಲ ಅಂದ್ಹಂಗಾತು. ದಾಸರೂ ಸಹಿತ ಅದಕ್ಕಾಗೇ ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಅಂತ ಇನ್ ಡೈರೆಕ್ಟ್ ಆಗಿ ಈ ಊಟದ ಬಗ್ಗೆನೇ ಹೇಳ್ಯಾರ ಅನಸತದ. ‘ತಂಡುಲದ ಹಿಡಿಯೊಂದು, ತುಂಡು ಬಟ್ಟೆಯದೊಂದು ಅಂಡಲೆತವಿದಕೇನೋ ಮಂಕುತಿಮ್ಮ’ ಅಂತಾರ ನಮ್ಮ ತಿಮ್ಮ ಗುರು.
ಊಟಾ ಏನೋ ಎಲ್ಲಾರೂ ಮಾಡತಾರ. ಮಾಡಿದ್ದಣ್ಣೋ ಮಹರಾಯ ಅಂತ ಕೆಲವರು ತಾವೇ ಕೈ ಸುಟಗೊಂಡು ಬಾಯಿನೂ ಸುಟಗೋತಾರ. ಇನ್ನ ಕೆಲವರು ಏನೂ ಬಿಸಿಯಿಲ್ಲದೇ ಖಮ್ಮಗ ಮತ್ತೊಬ್ಬರು ಮಾಡಿ ಹಾಕಿದ್ದನ್ನ ಸುಮ್ಮ ತಿಂದು ಬಿಮ್ಮಗಿರತಾರ. ಮತ್ತೂ ಕೆಲವರು ತಿನ್ನೂತನಾ ತಿಂದು ಆಮ್ಯಾಲೆ “ಹೋಳ ಭಾಳ ಹಣ್ಣ ಬೆಂದಾವ ಅಂತಲೋ, ಬ್ಯಾಳಿ ಬೆಂದೇ ಇಲ್ಲ” ಅಂತನೋ ಕಿಟಿಪಿಟಿ ನಡಸಿರತಾರ. ಅಂತೂ ಊಟ ಅಂಬೋ ಆಟ ಅವರವರದೇ ರೀತಿಯೊಳಗ ಎಲ್ಲಾರೂ ಆಡತಿರತಾರ. ಈ ಊಟ ಮಾಡೂ ರೀತಿ, ಅದರ ವಿಧಿ -ವಿಧಾನಗಳು ಎಷ್ಟೊಂದ ನಮೂನೀರಿ?! ಜಾಗಾದಿಂದ ಜಾಗಾಕ್ಕ ಈ ಊಟದ ರೀತಿ-ನೀತಿಗಳು ಬ್ಯಾರೆ ಬ್ಯಾರೆ ಆಗತಾವ ಅನ್ರಿ. ನಮ್ಮ ಕಡೆ ಅಂದ್ರ ದಕ್ಷಿಣ ಭಾರತದಾಗ ಬಾಳೆ ಎಲೆಗಳ ಸಂಭ್ರಮ. ಏನರೇ ಹಬ್ಬ-ಹುಣ್ಣಿಮಿ, ಮದುವಿ-ಮುಂಜಿವಿ, ಆರಾಧನಿ-ಸಮಾರಾಧನಿ ಅಂತೆಲ್ಲ ಇದ್ರ ಬಾಳೆಎಲೆ ಊಟ ಗ್ಯಾರಂಟೀರಿ. ನಾವು ಸಣ್ಣವರಿದ್ದಾಗ ರವಿವಾರಕ್ಕೊಮ್ಮೆ ಸಂತ್ಯಾಗ ಬಾಳಿ ಎಲಿ ತಂದು, ದಿಂಡ ತಗದು, ಅವನ್ನ ಹೆಚ್ಚಿ ಸಣ್ಣಸಣ್ಣ ಎಲೆಗಳನ್ನಾಗಿ ಮಾಡಿ ಒಂದು ತಟ್ಟಿನ ಚೀಲ ‘ನಮ್’ ಅನ್ನೂ ಅಷ್ಟು ಒದ್ದಿ ಮಾಡಿ ಅದರಾಗ ಸುತ್ತಿ ಇಡತಿದ್ರು ನಮ್ಮ ಮುದ್ದಣ್ಣ ಮಾಮಾ. 15-20 ದಿನಗಟ್ಟಲೇ ಛಲೋ ಇರತಿದ್ವು. ಸ್ವಲ್ಪ ಹಳದಿ ಒಡದ್ರೂ ನಮಗೇನ ಫರಕ ಬೀಳತಿರಲಿಲ್ಲ.( ಯಾಕಂದ್ರ ನಮ್ಮ ಕಣ್ಣೆಲ್ಲ ಎಲೆಯ ಮೇಲಿನ ಖಾದ್ಯಗಳ ಬಣ್ಣದೆಡೆ ನೆಟ್ಟಿರುತ್ತಿದ್ದವೆನ್ನಿ) ಊಟಾ ಆದಮ್ಯಾಲೆ ಅವೇ ಎಲೆಗಳು ಸಾಳುಂಕೆ ಅವರ ಮನೆಯ ಎಮ್ಮೆ-ಆಕಳುಗಳಿಗೆ ಸುಗ್ರಾಸ ಭೋಜನವಾಗುತ್ತಿದ್ದವು.
ಈ ಬಾಳೆ ಎಲಿ ಹೆಂಗ ಹಾಕಬೇಕು ಅನ್ನೂದೇ ಒಂದು ಸಮಸ್ಯೆ ಹಲವರಿಗೆ. ಉದ್ದ ಹಾಕಬೇಕೋ, ಅಡ್ಡ ಹಾಕಬೇಕೋ, ಅದರ ಮಾರಿ ಯಾವ ಕಡೆ ಇರಬೇಕು, ಕುಡಿ ಬಾಳೆ ಎಲಿ ಹಾಕಬೇಕೋ ಬ್ಯಾಡೋ ..ಹೀಂಗ ನೂರಾ ಎಂಟು ಪ್ರಶ್ನೆ ಇರತಾವರೀ ( ಯಾಕಂದ್ರ ಚೊಚ್ಚಲ ಗಂಡಸ ಮಕ್ಕಳಿದ್ದವರು ಕುಡಿ ಬಾಳಿ ಎಲ್ಯಾಗ ಉಣಬಾರದಂತ ಶಾಸ್ತ್ರ ಅದ ಅಂತರಿ). ಎಲಿ ಹಾಕಿದ ಮ್ಯಾಲೆ ಇನ್ನ ಸಾಲಕ ಉಪ್ಪಿನ ಹಿಡಕೊಂಡು ಚಟ್ಟಿ, ಕೋಸಂಬ್ರಿ, ಪಲ್ಯಾ, ಕಾರೇಸಾ, ಬುರಬುರಿ, ಪಾಯಸ, ಅನ್ನ, ತೊವ್ವೆಗಳಿಗಲ್ಲ ಅದರದರದೇ ನಿರ್ದಿಷ್ಟ ಜಾಗ ಇರತಾವರೀ. ಉಪ್ಪು ಎಡಕ್ಕ, ಪಾಯಸ ಬಲಕ್ಕ, ಅನ್ನದ ಬಲಬದಿಗೆ ತೊವ್ವೆ, ಅದರ ಮೇಲೆ ತುಪ್ಪ … ಹೀಂಗ ಏನೇನೋ. ಅವೆಲ್ಲ ಅದಲು ಬದಲು ಆಗೂ ಹಂಗಿಲ್ರೀ. ನೀವೇನರೇ ಪಾಯಸ ಎಡಕ್ಕ ಬಡಸಿದಿರೋ ‘ಹುಚ್ಚ ಖೋಡಿ’ ಅಂತ ಗ್ಯಾರಂಟಿ ಬಯ್ಯಿಸಿಕೋತಿರಿ. ಕೆಲವು ಮಂದಿ ಅಂತೂ ವಾಗತ್ಯ ಮಾಡಿಕೋತಾರ. ಹಂಗಂತ ಇದೇ ಸರಿ ಅಂತ ಅಲ್ರಿ. ಕೆಲವರಲ್ಲಿ ಉಪ್ಪಿಲ್ಲದೇ ಊಟ ಬಡಿಸುವಂತಿಲ್ಲ. ಇನ್ನ ಕೆಲವರಲ್ಲಿ ಮೊದಲು ಉಪ್ಪು ಹಾಕುವಂತಿಲ್ಲ. ಕೆಲವರಲ್ಲಿ ಪಾಯಸ- ಪರಮಾನ್ನದಿಂದ ಊಟ ಆರಂಭ ಆದ್ರ, ಇನ್ನ ಕೆಲವರಲ್ಲಿ ‘ಡೆಸರ್ಟ್’ಅಂತ ಊಟ ಆದಮ್ಯಾಲೆ ತಿಂತಾರ. ಕೆಲವೆಡೆ ಶುಭ ಸಂದರ್ಭಗಳಲ್ಲಿ ಮುದ್ದಿಪಲ್ಯ ನಿಷಿದ್ಧ. ಇನ್ನು ಕೆಲವೆಡೆ ಅದು ಕಂಪಲ್ಸರಿ ಇರಲೇಬೇಕು. ಕೆಲವರಿಗೆ ಭಕ್ರಿ-ಬದನೆಕಾಯಿ ಹಬ್ಬಹರಿದಿನಗಳಲ್ಲಿ ನಿಷಿದ್ಧ. ಇನ್ನು ಕೆಲವರಲ್ಲಿ ಮದುವೆ ಊಟಕ್ಕೂ ಅವು ಬೇಕು. ಹೀಂಗ ದೇಶ-ಕಾಲ ಭೇದಗಳು ಭಾಳ ಇರತಾವ್ರಿ ಈ ಊಟದಾಗ.
ಈ ಬಾಳಿ ಎಲಿ ಊಟದ ಮಜಾನೇ ಬ್ಯಾರೆ ಇರತದ್ರಿ. ಮದುವಿ ಭೂಮದಾಗಂತೂ ಇಷ್ಟುದ್ದ ಏಕ ಎಲಿ ಮ್ಯಾಲೆ ಬಡಿಸಿದ ನಾನಾ ನಮೂನಿ ಸಂಡಿಗಿ-ಹಪ್ಪಳ-ಮಂಡಿಗೆಗಳು, ಶ್ಯಾವಿಗೆ-ಬಟವಿ ಪಾಯಸಗಳು, ಎಲೆ ಮುಂದೆ ಹಾಕಿದ ಬಣ್ಣಬಣ್ಣದ ಮನಸೆಳೆವ ರಂಗೋಲಿಗಳು, ಬೆಳಗುತ್ತಿರುವ ಸಮೆಗಳು… ನೋಡೂ ಹಂಗ ಇರತದ. ಆದ್ರ ಮಣೆ ಮ್ಯಾಲೆ ಕೂತು ಎಲೆ ತುದಿಯ ಖಾದ್ಯಗಳನ್ನೆಲ್ಲ ಬಗ್ಗಿ ಬಗ್ಗಿ ಹೆಕ್ಕಿ ತಿನ್ನೂದರಾಗ ದೊಡ್ಡ ಸರ್ಕಸ್ಸೇ ಆಗತದ. ಮೊನ್ನೆ ಇಲ್ಲೊಬ್ಬರ ಮನ್ಯಾಗ ವಾಸ್ತುಶಾಂತಿಗಂತ ಊಟಕ್ಕ ಕರದಿದ್ರು. ತಾಜಾ ಹಸರ ದೊಡ್ಡದೊಡ್ಡ ಬಾಳಿಎಲಿ ಮ್ಯಾಲೆ ಛಂದಾಗಿ ಬಡಸಿದ್ರು. ಆದ್ರ ಆ ಭಾರೀ ಜರದ ರೇಶ್ಮೆ ಸೀರೆ ಉಟಗೊಂಡು , ನಮ್ಮ ಗಜಗಾತ್ರದ ದೇಹ ಹೊತಗೊಂಡು , ಕೆಳಗ ನೆಲದ ಮ್ಯಾಲೆ ಕೂತು ಊಟಾ ಮಾಡೂದರಾಗ ‘ಊಟಾನೂ ಇಷ್ಟ ತ್ರಾಸಿಂದs’ ಅಂತ ಅನ್ನಿಸಿಬಿಡತರೀ. ಯಾಕಂದ್ರ ಕೋಸಂಬ್ರಿ, ಅಂಬೊಡೆ, ಮೈಸೂರ ಪಾಕು ಎಲ್ಲಾ ಮುಂದ ಹಾಕಿಬಿಟ್ಟಾರ್ರೀ. ಬಗ್ಗಬೇಕಂದ್ರ ನಮ್ಮ ಹೊಟ್ಟಿ ಅಡ್ಡ. ಕಡೀಕೆ ನಾ ಬಡಸಲಿಕ್ಕೆ ಬಂದವರಿಗೆ ಹೇಳೇಬಿಟ್ಟೆ. ’ಇಲ್ಲೇ ಇತ್ತತ್ತೇ ಹಾಕಿಬಿಡ್ರಿ. ಬಗ್ಗಲಿಕ್ಕೆ ಆಗಂಗಿಲ್ಲ’ ಅಂತ. ಅವರೂ ನನ್ನ ಮಾರಿ ನೋಡಿ ನಕ್ಕೋತ ಹಾಕಿ ಹೋದ್ರ ಬಿಡ್ರಿ. ಮತ್ತೇನ ಮಾಡೂದ್ರಿ? ಊಟದ ವಿಷಯ ನಾಚಿಕೊಂಡ ಕೂತರ ಹೆಂಗ ನಡೀತದ್ರೀ?
ಈ ಬಾಳಿ ಎಲಿ ಆವಾಂತರ ಒಂದೊಂದ ಅಲ್ರೀ. ಒಂದ ಸಲ ಶಿರಸಿಗೆ ನನ್ನ ಗೆಳತಿ ಊರಿಗೆ ಹೋಗಿದ್ದೆ. ಅಕಿ ಎಲ್ಲೋ ತಮ್ಮ ನೆಂಟರ ಮನಿಗೆ ನಮ್ಮನ್ನ ಕರಕೊಂಡು ಹೋಗಿದ್ಲು. ಅವರು ನಾವು ಬಯಲುಸೀಮಿಯಿಂದ ಬಂದವರು, ತಮ್ಮೂರಿನ ಸ್ಪೆಷಲ್ ತಿನಸಬೇಕೆಂದು ತೋಟದಿಂದ ತಾಜಾ ಬಾಳಿ ಎಲಿ ಕತ್ತರಿಸಿಕೊಂಡು ಬಂದು ಮನೆಯ ತೋಟದ ರುಚಿರುಚಿಯಾದ ಘಮಗುಡುವ ಮಾವಿನಹಣ್ಣಿನ ಸೀಕರಣೆಯನ್ನು ಹಲಸಿನ ಹಪ್ಪಳದ ಜೋಡಿಗೆ ಅದರಾಗ ಬಡಿಸಿದರು. ನಾ ಕಕ್ಕಾಬಿಕ್ಕಿ. ಬಾಳಿಎಲ್ಯಾಗ ಸೀಕರಣಿ ಹೆಂಗ ತಿನ್ನೂದ್ರಿ?! ಅದು ಹರಕೊಂಡು ಹೊಂಟದ. ಕೈಯಾಗ ತಗೊಂಡು ನೆಕ್ಕಲಿಕ್ಕ ಹೋದ್ರ ಮೊಣಕೈತನಾ ಸೋರಿ ಸೀರಿ ಮ್ಯಾಲೆ ಬೀಳಲಿಕ್ಹತ್ತೇದ. ಅವರು ಆದರ ಮಾಡಿ ಬಲವಂತ ಮಾಡಿದರೂ ಹಾಕಿಸಿಕೊಳ್ಳಲಾರದಂಥ ಪರಿಸ್ಥಿತಿ. ಒಂದ ಬಟ್ಟಲದಾಗೋ, ದೊನ್ನ್ಯಾಗೋ ಹಾಕಿಕೊಡಬಾರದs ಅಂತ ಮನಸಿನಾಗ ಬಯ್ಯಕೋತ ಅಂಥ ರುಚಿಯಾದ ಸೀಕರಣೀನ್ನ ಸುಡ್ಲಿ ಈ ಬಾಳಿ ಎಲ್ಯಾಗ ಬಡಿಸಿದ್ರು ಅಂತ ತಿನ್ನಲಾರದ ಬಿಡೂದಾತು.
ಈ ಬಾಳಿ ಎಲಿ ಊಟೇನೋ ಛಂದ. ಆದ್ರ ಆಮ್ಯಾಲೇನರೇ ಎಂಜಲಾಗ್ವಾಮಾ ಮಾಡೂ ಪಾಳಿ ಬಂತೋ .. ಭಾರೀ ತ್ರಾಸರೀ.
ಅಂತೂ ಊಟಾ ಮಾಡೂದು (ಅದೂ ಬಾಳೆ ಎಲಿದು) ಆಟಾ ಆಡೂದರಷ್ಟ ಸರಳ ಅಲ್ಲಾ ಅನ್ನೂದು ನನ್ನ ಅಂಬೋಣ. ನೀವೇನಂತೀರಿ?
ವಿ.ಸೂ. ಇನ್ನ ನನ್ನ ಕೊರೆತ ಮುಗದಿಲ್ಲಾ. ಈಗ ಒಂದೋ, ಎರಡೋ.. ಆಗೇದ. ಇನ್ನ ಮೂರೋ, ನಾಕೋ, ಐದೋ, ಆರೋ ಎಲ್ಲಾ ಬಾಕಿ ಅವ. ಮಾನಸಿಕವಾಗಿ ಸಿದ್ಧವಾಗಿರಿ ಕೊರೆಸಿಕೊಳ್ಳಲು..
ಮೂಲ ಕವಿಯ ಕ್ಷಮೆ ಯಾಚಿಸಿ..
ಒಂದೋ, ಎರಡೋ ..ಬಾಳೆಲೆ ಹರಡೋ
( ನೀರ ತಗೋರಿ..ಎರಡೆಳಿ ರಂಗೋಲಿ ಹಾಕ್ರಿ)
ಮೂರೋ, ನಾಕೋ ಅನ್ನವ ಹಾಕೋ
(ಚಟ್ನಿ,ಕೋಸಂಬ್ರಿ, ಪರಮಾನ್ನ??!!)
ಐದೋ, ಆರೋ ಬೇಳೆಯ ಸಾರೋ
(ತವ್ವಿ, ತುಪ್ಪ ತಗೋರಿ ಮದಲs)
ಏಳೋ, ಎಂಟೋ ಪಲ್ಯಕೆ ದಂಟೋ
(ಪಲ್ಯಾ ಮದಲs ಬರಬೇಕಿತ್ತಲ್ರೀ .)
ಒಂಬತ್ತೋ, ಹತ್ತೋ ಎಲೆ ಮುದುರೆತ್ತು
(ಸ್ವೀಟು, ಚಿತ್ರಾನ್ನ, ಮೊಸರನ್ನ ಎಲ್ರಿ?)
ಒಂದರಿಂದ ಹತ್ತು ಹೀಗಿತ್ತು..
(ಒಂದರಿಂದ ನೂರಿದ್ರೂ ನಡೀತಿತ್ರೀ..
ಯಾವುದೂ ಐಟಂ ಬಿಡಬಾರದಿತ್ರಿ)
ಊಟದ ಆಟವು ಮುಗಿದಿತ್ತು
(ಉಸಿರಿನ ಓಟವೂ ನಿಂತಿತ್ತು..)
ನನ್ನ ಮೆಚ್ಚಿನ ಲೇಖಕಿಗೊಂದು ಹೃತ್ಪೂರ್ವಕ ನಮನ
– ಶಿವಶಂಕರ ಮೇಟಿ
(ಚಿತ್ರ: ಗೂಗಲ್ ಕೃಪೆ)
ಸೆಪ್ಟೆಂಬರ್ ೧ ಕನ್ನಡದ ಕಾದಂಬರಿಗಾರ್ತಿಯರ ಇತಿಹಾಸದಲ್ಲಿ ನೆನಪಿಡುವ ದಿನ . ಏನಿದರ ವಿಶೇಷತೆ ಎನ್ನುತ್ತೀರಾ ?
ಇದು ಕನ್ನಡದ ಕಾದಂಬರಿ ಲೋಕ ಕಂಡ ಅಪರೂಪದ ಲೇಖಕಿ ತ್ರಿವೇಣಿಯವರ ಜನುಮ ದಿನ . ಬಾಲ್ಯದಿಂದಲೂ ನನಗೆ ಅವರ ಮೇಲಿರುವ ಅಪಾರ ಗೌರವದ ಋಣಿಯಾಗಿ, ಇದೊಂದು ಸಣ್ಣ ಲೇಖನದ ಮೂಲಕ ಅವರಿಗೊಂದು ನಮನ .
ಕನ್ನಡದ ‘ಜೇನ್ ಆಸ್ಟಿನ್ ‘ ಎಂದೇ ಹೆಸರಾಗಿದ್ದ ತ್ರಿವೇಣಿಯವರು ಹುಟ್ಟಿದ್ದು ಸೆಪ್ಟೆಂಬರ್ ೧ , ೧೯೨೮ ರಲ್ಲಿ . ಮೈಸೂರಿನ ಚಾಮರಾಜಪುರದಲ್ಲಿ ಜನನ . ಭಾಗೀರಥಿ ಜನ್ಮನಾಮವಾದರೂ ‘ಅನಸೂಯಾ’ ಆಗಿ ಶಾಲೆಗೆ ಸೇರಿ, ‘ತ್ರಿವೇಣಿ ‘ಎಂಬ ಲೇಖನಿ ಹೆಸರಿನಿಂದ ಕನ್ನಡ ಸಾಹಿತ್ಯಕ್ಕೆ ಚಿರ ಪರಿಚಿತರಾದವರು. ಸಾಹಿತ್ಯ ಸಂಸ್ಕೃತಿಯ ಮನೆಯ ವಾತಾವರಣದಲ್ಲಿ ಬೆಳೆದ ಅವರಿಗೆ ಬಾಲ್ಯದಿಂದಲೂ ಓದುವ ಹುಚ್ಚು ಸಹಜವಾಗಿತ್ತು ( ಬಿ ಎಂ ಶ್ರೀ ಚಿಕ್ಕಪ್ಪ ಮತ್ತು ವಾಣಿ ಸೋದರ ಸಂಬಂಧಿ ). ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಂಗಾರದ ಪದಕದೊಂದಿಗೆ ಬಿ. ಎ ಮುಗಿಸಿದ ಅವರಿಗೆ ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರದ ಬಗ್ಗೆ ತುಂಬ ಆಸಕ್ತಿ ಇತ್ತು.
ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರೂ ಅಂತರಾಳದಲ್ಲಿ ಅಡಗಿದ್ದ ಸಾಹಿತ್ಯದ ಒಲವು ಅವರನ್ನು ಕಾದಂಬರಿ ಲೋಕಕ್ಕೆ ಕರೆದುಕೊಂಡು ಹೋಗಿತ್ತು. ಹೆಣ್ಣಿನ ಆಸೆಗಳಿಗೆ ಪುರುಷ ಪ್ರಧಾನವಾದ ಸಮಾಜದಲ್ಲಿ ಬೆಲೆಯೇ ಇಲ್ಲವೆಂದು ಪ್ರತಿಪಾದಿಸುವ ಅವರ ಮೊದಲು ಕಾದಂಬರಿ ‘ ಅಪಸ್ವರ ‘ ೧೯೫೩ ರಲ್ಲಿ ಪ್ರಕಟವಾಯಿತು. ಹೆಣ್ಣಿನ ಮಾನಸಿಕ ತುಮುಲ, ಶೋಷಣೆ, ಸಮಾಜದಲ್ಲಿ ಅವಳೆದಿರಿಸುವ ಸಮಸ್ಯೆಗಳು ಅವರ ಕಾದಂಬರಿಯ ಜೀವಾಳವಾಗಿದ್ದವು . ಮಾನಸಿಕ ರೋಗಿ ಗುಣಮುಖವಾದರೂ ಸಮಾಜ ಅವರನ್ನು ನೋಡುವ ಪರಿಯನ್ನು ‘ ಶರಪಂಜರದಲ್ಲಿ ‘ ಬಿಂಬಿಸಿದ್ದರೆ, ಯೌವ್ವನದ ಹೊಳೆಯಲ್ಲಿ ಉಕ್ಕುವ ಕಾಮದಾಸೆ ಮತ್ತು ತಪ್ಪು ಪುರುಷನಿಗೆ ಮಾತ್ರ ಸೀಮಿತವಲ್ಲ ಹೆಣ್ಣಿಗೂ ಅನ್ವಯವಾಗುತ್ತದೆ ಹಾಗು ಒಬ್ಬರನೊಬ್ಬರು ಕ್ಷಮಿಸಿ ನಡೆದರೆ ಜೀವನ ಸಾರ್ಥಕವೆಂಬುವದನ್ನು ‘ಸೋತು ಗೆದ್ದವಳು’ ಎಂಬ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ‘ಹಣ್ಣೆಲೆ ಚಿಗುರಿದಾಗ’ ದಲ್ಲಿ ವಿಧವಾ ವಿವಾಹದ ವಿಷಯವಿದ್ದರೆ ‘ಹೂವು ಹಣ್ಣು’ ನಲ್ಲಿ ಅಸಹಾಯಕ ಹೆಣ್ಣು ವೇಶ್ಯಾ ವೃತ್ತಿಯ ಜಾಲದಲ್ಲಿ ಸಿಲುಕುವ ವ್ಯಥೆಯಿದೆ. ಅವರ ಒಂದೊಂದು ಕಾದಂಬರಿಗಳನ್ನು ವಿಮರ್ಶಿಸಲು ನೂರಾರು ಪುಟಗಳೇ ಬೇಕಾಗಬಹುದು . ಅವರು ಬರೆದ ೨೧ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದ ೨೧ ಮುತ್ತುಗಳು ಎಂದರೆ ತಪ್ಪಾಗಲಾರದು.
ಐವತ್ತರಿಂದ ಅರವತ್ತರ ದಶಕದಲ್ಲಿ ಬರೆದ ಅವರ ಕಾದಂಬರಿಗಳು ಹಳೆಯದಾದರೂ , ಕಾದಂಬರಿಯ ಕಥೆಗಳಲ್ಲಿ ಇರುವ ವಿಚಾರಧಾರೆ ಮತ್ತು ಪಾತ್ರಗಳು ಇಂದಿನ ಆಧುನಿಕ ಸಮಾಜದಲ್ಲೂ ನವ್ಯವೆಂದು ಅನಿಸುತ್ತವೆ. ಅವರ ಹಲವಾರು ಕಾದಂಬರಿಗಳು ಬೇರೆ ಭಾಷೆಗಳಲ್ಲಿ ಅನುವಾದಗೊಂಡಿವೆ. ಅವರ ಕಾದಂಬರಿಗಳು ಸಾಮಾನ್ಯ ಓದುಗರನ್ನು ಮಾತ್ರವಲ್ಲ ಪ್ರಸಿದ್ಧ ಚಿತ್ರ ನಿರ್ದೇಶಕರನ್ನು ಕೂಡಾ ಆಕರ್ಷಿಸಿದ್ದವು . ಇಪ್ಪತ್ತೊಂದರಲ್ಲಿ ಏಳು ಕಾದಂಬರಿಗಳು ಸುಪ್ರಸಿದ್ದ ಕನ್ನಡ ಚಿತ್ರಗಳಾಗಿ ಬೆಳ್ಳಿ ತೆರೆಯನ್ನು ಕಂಡಿವೆ. ಶರಪಂಜರ , ಬೆಕ್ಕಿನ ಕಣ್ಣು ಮತ್ತು ಬೆಳ್ಳಿಮೋಡ ಚಿತ್ರಗಳನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರೆ , ಹಣ್ಣೆಲೆ ಚಿಗುರಿದಾಗ, ಹೂವು ಹಣ್ಣು, ಕಂಕಣ ಮತ್ತು ಮುಕ್ತಿ ಬೇರೆ ಪ್ರಸಿದ್ಧ ನಿರ್ದೇಶಕರಿಂದ ತೆರೆಯನ್ನು ಕಂಡಿವೆ.
ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದವು . ‘ಅವಳ ಮನೆ’ ಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದರೆ , ‘ಕಂಕಣ’ ದ ಕಥೆಗೆ ಕರ್ನಾಟಕ ಮೋಶನ್ ಪಿಕ್ಚರ್ ಪ್ರಶಸ್ತಿ ಬಂದಿತ್ತು .
ಸಾಹಿತ್ಯ ಜೀವನದಲ್ಲಿ ಸವಿಯಿದ್ದರೂ ಅವರ ಸ್ವಂತ ಜೀವನದಲ್ಲಿ ನೋವಿನ ಅಲೆಯಿತ್ತು. ಮೆಚ್ಚಿ ಕೈ ಹಿಡಿದ ಪ್ರೋತ್ಸಾಹಕ ಪತಿಯಿದ್ದರೂ (ಪ್ರೊಫೆಸ್ಸರ್ ಶಂಕರ್), ಹನ್ನೆರಡು ವರ್ಷದ ದಾಂಪತ್ಯ ಜೀವನದಲ್ಲಿ ಮಕ್ಕಳಾಗಲಿಲ್ಲ ಎಂಬ ಕೊರಗು ಸದಾ ಅವರನ್ನು ಕೊರೆಯುತಲಿತ್ತು . ಎರಡು ಸಲ ಗರ್ಭಪಾತವಾದಾಗ ಅವರು ಕುಸಿದು ಹೋಗಿದ್ದರು. ತಮ್ಮ ಮಾನಸಿಕ ವೇದನೆಯನ್ನು ‘ಅತಿಥಿ ಬರಲೇ ಇಲ್ಲ’ ಎಂಬ ಕಥೆಯಲ್ಲಿ ತೋಡಿಕೊಂಡಿದ್ದಾರೆ.
ಆದರೆ ಕೊನೆಗೂ ಅತಿಥಿ ಬಂದಾಗ ವಿಧಿ ಅವರ ಅದೃಷ್ಟದ ಪುಟವನ್ನು ಬೇರೆ ರೀತಿಯಲ್ಲಿ ಬರೆದಿತ್ತು ಜುಲೈ ೧೯ , ೧೯೬೩ ರಲ್ಲಿ ಅವರು ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು. ಹತ್ತು ದಿನಗಳ ನಂತರ ಪಲ್ಮನರಿ ಎಂಬೋಲಿಸಂ (ಶ್ವಾಸಕೋಶದಲ್ಲಿ ಸಿಲುಕಿದ ರಕ್ತದ ಹೆಪ್ಪು) ಗೆ ಬಲಿಯಾಗಿ ಕೊನೆಯ ಉಸಿರನ್ನು ಎಳೆದರು . ಮೂವತ್ತೈದರ ಹರೆಯದಲ್ಲಿ ಇನ್ನೂ ಬಾಳಿ , ಬದುಕಿ ಹೆಮ್ಮರವಾಗಬೇಕಿದ್ದ ಪ್ರತಿಭೆಯ ಸಸಿ ಕಮರಿ ಹೋಯಿತು. ಕನ್ನಡದ ಕಾದಂಬರಿ ಲೋಕ ಒಬ್ಬ ಮಹಾನ್ ಲೇಖಕಿಯನ್ನು ಕಳೆದುಕೊಂಡಿತು. ಅವರು ಇನ್ನು ಹೆಚ್ಚಿಗೆ ಬಾಳಿ ಬದುಕಿದ್ದರೆ ಅದೆಷ್ಟು ಪ್ರಸಿದ್ಧ ಕಾದಂಬರಿಗಳು ಕನ್ನಡ ಸಾಹಿತ್ಯವನ್ನು ಸೇರುತ್ತಿದ್ದವೋ? ಇನ್ನೆಷ್ಟೋ ರಂಜಿತ ಚಲನ ಚಿತ್ರಗಳು ತೆರೆ ಕಾಣುತಿದ್ದವೋ ಎಂಬುದು ಕಲ್ಪನೆ ಮಾತ್ರ ಅವರು ಬದುಕಿರುವಾಗ ಅವರ ಯಾವುದೇ ಕಾದಂಬರಿಗಳು ಚಲನ ಚಿತ್ರಗಳಾಗಿರಲಿಲ್ಲ ಎಂಬುದು ವಿಷಾದನೀಯ .
ಅವರ ಮಗಳು ಮೀರಾ ಶಂಕರ್ ಇತ್ತೀಚಿಗೆ ತೆಗೆದುಕೊಂಡ ನಿರ್ಧಾರ ಶ್ಲಾಘನೀಯ. ಚಾಮರಾಜಪುರದಲ್ಲಿ ಸುಮಾರು ಇನ್ನೂರು ವರ್ಷದಷ್ಟು ಹಳೆಯದಾದ ಅವರ ಮನೆಯನ್ನು ‘ತ್ರಿವೇಣಿ ಮ್ಯೂಸಿಯಂ’ ಆಗಿ ಪರಿವರ್ತಿಸಲಿದ್ದಾರೆ. ಮ್ಯೂಸಿಯಂನ ಜೊತೆಗೆ ಅವರ ಹೆಸರು ನವ ಪೀಳಿಗೆಗೆ ಗೊತ್ತಾಗಲಿ ಮತ್ತು ಅಮರವಾಗಿ ಉಳಿಯಲಿ ಎಂಬುವದು ನನ್ನ ಆಸೆ.
ತ್ರಿವೇಣಿಯವರು ಇಂದಿಗೂ ನನ್ನ ನೆಚ್ಚಿನ ಲೇಖಕಿ . ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ದೊರೆತ ಅವರ ಎರಡು ಕಾದಂಬರಿಗಳು ನನಗೆ ಕನ್ನಡ ಸಾಹಿತ್ಯ ಲೋಕಕ್ಕೆ ದಾರಿಯನ್ನು ತೋರಿಸಿದ್ದವು . ಪುಸ್ತಕಗಳನ್ನು ಓದುವ ಹುಮ್ಮಸ್ಸವನ್ನು ಹುಟ್ಟಿಸಿದ್ದವು. ಅವರ ಉಳಿದ ಕಾದಂಬರಿಗಳನ್ನು ಓದುವ ತವಕ ಮನಸಿನಲ್ಲಿ ಸದಾ ಇತ್ತು ಆದರೆ ಅವಕಾಶ ಸಿಕ್ಕಿರಲಿಲ್ಲ . ಹೈಸ್ಕೂಲಿಗೆಂದು ಪಕ್ಕದ ಬೈಲಹೊಂಗಲಕ್ಕೆ ಸೇರಿದಾಗ ನಾನು ಮೊದಲು ಮಾಡಿದ ಕೆಲಸ ಗ್ರಂಥಾಲಯದ ಸದಸ್ಯನಾಗಿದ್ದು (ಸುಳ್ಳು ವಯಸ್ಸು ಹೇಳಿ ). ಅವರ ಎಲ್ಲ ಕಾದಂಬರಿಗಳು ಗ್ರಂಥಾಲಯದಲ್ಲಿ ಸಿಗದೇ ಇದ್ದರೂ ಸುಮಾರು ಪುಸ್ತಕಗಳು ಸಿಕ್ಕಿದ್ದು ಮನಸಿಗೆ ಖುಷಿ ತಂದಿತ್ತು. ತನ್ಮಯನಾಗಿ ಅವರ ಕಾದಂಬರಿಯನ್ನು ಓದುತ್ತಿದ್ದರೆ ನನಗೆ ಆ ಕಥೆ ಎಲ್ಲೋ ನಮ್ನ ಪಕ್ಕದ ಮನೆಯಲ್ಲಿಯೇ ನಡೆದಿದೆ ಎಂದು ಅನಿಸುತಿತ್ತು. ಕಾದಂಬರಿಯ ಕಥೆ ಅಷ್ಟೊಂದು ಸರಳ ಮತ್ತು ಸಹಜವಾಗಿರುತಿತ್ತು .
ಮುಂದೆ ಧಾರವಾಡದ ಕರ್ನಾಟಕ ಕಾಲೇಜು ಸೇರಿದಾಗ , ಅವರ ಉಳಿದ ಕಥೆಗಳನ್ನು ಓದಲು ಅವಕಾಶ ಸಿಕ್ಕಿದ್ದು ನನ್ನ ಜೀವನದ ಸಂತೋಷದ ಘಟನೆಗಳಲ್ಲಿ ಒಂದು ಎಂದು ಹೇಳಬಲ್ಲೆ . ಅವರ ಎಲ್ಲಾ ಪುಸ್ತಕದ ಕಿಟ್ಟು ಇಂದಿಗೂ ‘ಅಮೆಜಾನ್ ‘ ಮಾರುಕಟ್ಟೆಯಲ್ಲಿ ಐದು ಸ್ಟಾರ್ ರಿವ್ಯೂನೊಂದಿಗೆ ಮಾರಾಟವಾಗುತ್ತಿದೆ ಎಂಬುದು ಹೆಮ್ಮೆಯ ಸಂಗತಿ .