ಶ್ರೀಮತಿ ಮೈದಾಸ – ಗೌರಿ ಪ್ರಸನ್ನ

ಐನೂರು ಆವೃತ್ತಿ ದಾಟಿದ ಅನಿವಾಸಿಯ ಬ್ಲಾಗಿಗೆ ಮತ್ತೊಮ್ಮೆ ನಿಮಗೆಲ್ಲ ಸ್ವಾಗತ, ನಮಸ್ಕಾರಗಳೊಂದಿಗೆ. ಇವತ್ತಿನ ಅಂಚೆಯಲ್ಲಿ ಶ್ರೀಮತಿ ಗೌರಿ ಪ್ರಸನ್ನ ಬರೆದ “ಶ್ರೀಮತಿ ಮೈದಾಸ” ಅನ್ನುವ ಕವನವಿದೆ. ಅವರೇ ಹೇಳಿರುವಂತೆ, ಇದು ಇಂಗ್ಲೀಷಿನ “Carol Ann Duffy ಯವರ Mrs Maidas ನಿಂದ ಪ್ರೇರಿತ. ಅದರ ಭಾಷಾಂತರವೋ, ಭಾವಾನುವಾದವೋ ಖಂಡಿತ ಅಲ್ಲ. A level ನಲ್ಲಿ English literature ಕಲಿಯುತ್ತಿರುವ ಮಗಳು ಅಕ್ಷತಾ ಕೆಲ ದಿನಗಳ ಹಿಂದೆ ತನ್ನ syllabus ನಲ್ಲಿರುವ ಈ ಹಾಡಿನ ಬಗ್ಗೆ ಮಾತಾಡಿದ್ದೇ ತಡ. Mrs.Maidas ಮನದಲ್ಲಿ ಗಟ್ಟಿಯಾಗಿ ನಿಂದು ತಲೆ ತಿನ್ನಲಾರಂಭಿಸಿದ್ದೇ ಈ ಪ್ರಯತ್ನದ ನಾಂದಿ.” ವ್ಯಾಲೆಂಟೈನ್ ದಿವಸ ಹತ್ತಿರ ಬಂದಂತೆ, ಸ್ವಲ್ಪ ಪ್ರೇಮಿಗಳ / ಪ್ರೇಮಕಾವ್ಯಗಳ ಹಾವಳಿ ಸಹಜವಾಗಿಯೇ ಹೆಚ್ಚಾಗುತ್ತದೆ. ಆದರೆ ಇಲ್ಲಿ, ಮುಟ್ಟಿದ್ದೆಲ್ಲ ಬಂಗಾರ ಮಾಡುವ ಇನಿಯನ ಪ್ರಿಯೆಯ ಕಷ್ಟಗಳ ಅಳಲಿದೆ, ಹತ್ತಿರವಿದ್ದೂ ಕೈಹಿಡಿಯಲಾಗದ ಪರಿಸ್ಥಿತಿಯ ಸಂಕಟವಿದೆ. ಬನ್ನಿ, ಓದೋಣ, ಓದಿ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳೋಣ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).

ಜೂನ್ ತಿಂಗಳ ಮೊದಲ ಮುಂಗಾರು ಮಳೆ.. 
ಬಿದ್ದ ತಟಪಟ ಹನಿಗೆ ತೊಯ್ದು ತುಟಿದೆರೆದ ಇಳೆ..
ಬೆಳ್ಳನೆ ತಟ್ಟೆ ಇಡ್ಲಿಯ ನಸು ಬೆಚ್ಚನೆಯ ಹಬೆ, ಚಟ್ನಿಗೆಂದು ಕಾಸಿದ ಇಂಗು-ಕರಿಬೇವಿನೊಗ್ಗರಣೆಯ ಘಮ,ಕುದಿಯುತ್ತಿರುವ ಚಹಾದ ತುಸು ಕಹಿ ಒಗರು..ತಾಟು, ಬಟ್ಟಲು, ಚಮಚೆ,ಲೋಟ,ಕಪ್ ಗಳ, ಹೆಚ್ಚಿಟ್ಟ ಅರ್ಧ ನಿಂಬೆ, ಕರಿಬೇವ ಕಡ್ಡಿಗಳ.. ಸಂತೆಯ ಮಾಳ ನನ್ನ ಅಡುಗೆ ಕಟ್ಟೆ..
ತುಂಬು ಸಜೀವತೆಯ ಪ್ರತೀಕ..
ಪ್ರೀತಿ - ರೀತಿಗಳ ನಿತ್ಯಸತ್ಯ ಲೋಕ

ಅಡರಿದ್ದ ಮಿಶ್ರ ಘಮಟು ಹೊರಹೋಗಲನುವಾಗಲೆಂದು
ತುಸುದೆರೆದ ಕಿಟಕಿಯ ಇನ್ನಷ್ಟು ತೆರೆದೆ..
ನಮ್ಮನೆ ಪುಟ್ಟ ಕೈ ತೋಟದಲಿ .. ಅದೋ .ನನ್ನ ಮೈದಾಸ,ಜೀವದ ಜೀವ.. ನನ್ನೊಲವು..
ನಾವೇ ನೆಟ್ಟ ಮಲ್ಲಿಗೆಯ ಬಳ್ಳಿಗೀಗ ಮೈತುಂಬ ಹೂವು..
ಟೊಂಗೆ ಟೊಂಗೆಯಲಿ ತೂಗುತಿದೆ ಗಿಣಿ ಕಡಿದ ಗಿಣಿಮೂತಿ ಮಾವು
ಗಿಡಗಂಟೆಗಳ ಕೊರಳಲ್ಲಿ ಗುಬ್ಬಚ್ಚಿ ಮರಿಯ ಚೀಂವ್ ಚೀಂವು..
ಅರೇ! ಇದೇನಿದು!!..

ಮಾವು ಕೀಳಲೆಂದು ಅವ ಬಗ್ಗಿಸಿದ ಟೊಂಗೆಯ ಎಲೆಯ ಹಸಿರೊಮ್ಮೆಗೇ ಪೀತ ವರ್ಣ.ಕಿತ್ತ ಬಿಳಿಯ ಮಲ್ಲಿಗೆಗೆ ಬಂಗಾರ ಬಣ್ಣ
‘ಸುವರ್ಣ ಪುಷ್ಪ ದಕ್ಷಿಣಾಂ ಸಮರ್ಪಯಾಮಿ’ ಮಂತ್ರದನುರಣ

ಅರೇ,ಇದೇನಿದು ಅಂಗೈಲ್ಹಿಡಿದ ಮಾವಿಗೂ ನೂರು ಕ್ಯಾಂಡಲ್ ಬಲ್ಬ್ ಪ್ರಭೆ..
ಅನತಿ ದೂರದಿಂದಲೂ ಕಂಡ ಅವನ ವಿಜಯದ ನಗೆಗೆ ನಾನು ಅಪ್ರತಿಭ
ಪುಟ್ಟ ತೋಟದ ಕಟ್ಟಿಗೆಯ ಗೇಟು ದೂಡಿದನಷ್ಟೇ..ಅದೂ ಚಿನ್ನದಂತೆ ಥಳಥಳ..

ದಣಿದ ದೇಹ ಚೆಲ್ಲಿ ಅವ ಕೂತ ಹಾಲ್ ನ ಹಳೆಯ ಕಂದು ಈಸಿ ಚೇರ್ ಬಟ್ಟೆ .. ಕ್ಷಣ ಮಾತ್ರದಲಿ ಹೊಂಬಣ್ಣದ ಪಟ್ಟೆ.

ಮೆತ್ತಗಿನ ಮೃದು ಇಡ್ಲಿಗೆ ಅವನ ಕೈ ಸೋಕಿತಷ್ಟೇ..ಅದುವೂ ಇದೀಗ ಹಳದಿ ಲೋಹದ ಮುದ್ದೆ.

‘ಓಹ್! ದೇವರೇ’ ನಿಡುಸುಯ್ದ ಅವನ ಮೊಗದ ತುಂಬ ಕಳವಳ
‘ಇದೇನಾಗುತಿದೆ?’ ನನ್ನೆದೆಯ ಗೂಡಲ್ಲೂ ಭಯ, ಆತಂಕ,ತಳಮಳ
ಅಳುಕುತ್ತಲೇ ಮುಟ್ಟಿದ ಚೀನೀಮಣ್ಣಿನ ಕಪ್ ನ ಚಹಾ ತಾನಾಯಿತು
ಕ್ಷಣಾರ್ಧದಲೇ ಕನಕ ಭೂಷಿತ ಹಿಡಿಯ ಕಪ್ಪಿನ ಹಳದಿದ್ರವ

‘ನಿಲ್ಲು, ಹಿಂದೆ ಸರಿ. ಮುಟ್ಟದಿರು ನನ್ನ’- ಚೀರಿದ.
ನನ್ನ ಕೈಕಾಲೆಲ್ಲ ನಡುಕ, ಕಣ್ಣು ಕತ್ತಲೆ.. ಕುಸಿದೆ
‘ಮ್ಯಾಂವ್ ಎಂದು ಒಡೆಯನ ತೊಡೆಯೇರ ಬಂದ ಟಾಮಿಯ ಕಂಡೆ..ಧಡಕ್ಕನೆದ್ದೆ – ಕೊಠಡಿಯಲಿ ಕೂಡಿ ಕೊಂಡಿ ಜಡಿದೆ.

ಕೊಪ್ಪರಿಗೆಯೋ, ಕೊಳಗವೋ, ಕ್ವಿಂಟಲ್ಲೋ ಬೇಡಿದರಾಗುತ್ತಿರಲಿಲ್ಲವೇ?
ಬೇಡುವವ ಮೂರ್ಖನಾದರೇನಂತೆ ನೀಡುವವಗಾದರೂ ಬುದ್ಧಿ ಬೇಡವೇ?
‘ಮುಟ್ಟಿದ್ದೆಲ್ಲ ಚಿನ್ನ’ವಾಗಿಸುವ ದುರಾಸೆ ಏಕೆ ಬೇಕಿತ್ತು?
ಗೆರೆ ದಾಟಿದ ಮೇಲಷ್ಟೇ ಅರಿವಾಗುವುದಲ್ಲವೇ ಆಪತ್ತು?

‘ಅತ್ಯಾಸೆ ಗತಿಗೇಡೆಂದು ದೃಷ್ಟಾಂತ ಕೊಡುತ್ತದೆ ಜಗತ್ತು
ಇರಲಿಲ್ಲವೇನು ಹಲಕೆಲವು ಅನಿವಾರ್ಯತೆ – ಜರೂರತ್ತು
ಬಣ್ಣ ಬೇಡುವ ಗೋಡೆ, ಬಳಕೆಗೊಂದು ಗಾಡಿ, ದುರಸ್ತಿಗೆ ಬಂದ ಛತ್ತು
‘ನನ್ನದೇನೂ ತಪ್ಪಿಲ್ಲ’ – ಅನ್ನಲಾರೆ ಖಂಡಿತ.ಮದುವೆ ಛತ್ರದಲ್ಲೋ, ಹಬ್ಬ ಸಮಾರಂಭದಲೋ ಕಂಡು ಓರಗೆಯವರ ಸೀರೆ,ಒಡವೆ, ದೌಲತ್ತು..
ನಾನೂ ರಗಳೆ ಮಾಡಿ ಮಾಡಿ ಅವನ ಕಂಗೆಡಿಸಿದ್ದಿದೆ ಕಿಂಚಿತ್ತು

ಅವನಿಗೀಗ ಚಿನ್ನದ್ಹಾಸಿಗೆಯಲಿ ನಿದ್ದೆಯಿಲ್ಲದ ಹೊರಳಾಟ
ಇನಿಯನಪ್ಪುಗೆಯಿಲ್ಲದ ಸುಪ್ಪತ್ತಿಗೆಯಲ್ಲಿ ನನ್ನ ಗೋಳಾಟ
ನಲ್ಲನಪ್ಪುಗೆಗೆ ಕಾಡುವ ದೇಹ-ಮನ-ಆತ್ಮಗಳ ಸಂಭಾಳಿಸಲಾಗದೇ ಒದ್ದಾಡುತ್ತಿದ್ದೇನೆ.
ಶಾಪ, ಅಭಿಶಾಪಗಳಂತಿರಲಿ.. ವರವೂ ಹೀಗೆ ಶಾಪವಾಗುವ ಪರಿಗೆ ಕಂಗಾಲಾಗಿದ್ದೇನೆ.

ಬಲುಬಾರಿ ಅನ್ನಿಸುವುದುಂಟು.. ಏನಾದರಾಗಲಿ, ಒಮ್ಮೆ ಅವನ ಬಿಗಿದಪ್ಪಿ ಪುತ್ಥಳಿಯಾಗಿ ಕುಳಿತುಬಿಡಲೇ ಪಕ್ಕದಲೆ
ಎಲ್ಲ ತೊಳಲಾಟ, ನರಳಾಟ, ನೋವು, ಹಿಂಸೆಗಳಿಗೆ ಮಂಗಳ ಹಾಡಿಬಿಡಲೇ?

ಛೇ!ಛೇ!! ಈ ಆಪತ್ತಿನ ಸಮಯದಲಿ ಇಂಥ ಸ್ವಾರ್ಥಿಯಾಗಲಾರೆ.
ನಮ್ಮೊಲವ ಸಾಂಗತ್ಯ, ಸಿಹಿಕಹಿ ದಾಂಪತ್ಯ ತೊರೆಯಲಾರೆ
ಕಣ್ಣಿನಲೇ ಅವನ ಮುಟ್ಟಿ, ಮೈದಡವಿ ಸಂತೈಸದಿರಲಾರೆ
ಧರ್ಮೇಚ-ಅರ್ಥೇಚ-ಕಾಮೇಚ.. ಕೊಟ್ಟ ವಚನ ನಿಭಾಯಿಸದಿರಲಾರೆ.


- ಗೌರಿ ಪ್ರಸನ್ನ

*************************************

ಯಾ ದೇವಿ ಸರ್ವಭೂತೇಷು 

ಮಾತೃರೂಪೇಣ ಸಂಸ್ಥಿತಾ..

ನಲ್ಮೆಯ ಓದುಗರೇ ನಮಸ್ಕಾರ.
   ‘ಕೌಸಲ್ಯಾ ಸುಪ್ರಜಾ ರಾಮಾ’ ಎಂದು ಜಗದೊಡೆಯನನ್ನೂ ಕೌಸಲ್ಯೆಯ ಮಗನನ್ನಾಗಿ ಕಾಣುವ ಸಂಸ್ಕೃತಿಯಿಂದಲೇ ಅರ್ಥವಾಗುತ್ತದೆ ತಾಯ್ತನದ ಎತ್ತರ. ಜಗದೆಲ್ಲ ಬಂಧಗಳಿಂದ ಮುಕ್ತನಾದ ಸನ್ಯಾಸಿಯೂ ಮಾತೃಪಾದಗಳಿಗೆರಗುತ್ತಾನೆ. ಅದಕ್ಕೆಂದೇ ದೇವಕಿನಂದನ, ಯಶೋದಾಕಂದ, ಗೌರೀತನಯ, ಗಾಂಗೇಯ, ಕೌಂತೇಯ, ರಾಧೇಯ..ಇತ್ಯಾದಿ ಪುರಾಣೇತಿಹಾಸ ಪುರುಷರಿಂದ ಹಿಡಿದು ನಮ್ಮ ವರಕವಿ ಬೇಂದ್ರೆ ಸಹಿತ ತಮ್ಮನ್ನು ಗುರುತಿಸಿಕೊಂಡಿದ್ದು ‘ಅಂಬಿಕಾತನಯ'ರಾಗಿಯೇ. 
 ‘ಪಾತಾಳ ಕಂಡರೇನು? ಆ ತಾಯಿ ಬಿಡುವಳೇನು? ಕಾಯವನು ಹೆತ್ತ ಕರುಳು, ಕಾಯುವಳು ಹಗಲು ಇರುಳು’ ಎಂದು ನಮ್ಮನ್ನು ಪೊರೆವ ಮಾತೃವಾತ್ಸಲ್ಯದ ಬಗ್ಗೆ ಭಾವುಕರಾಗಿ ಬರೆಯುತ್ತಾರೆ ಅಂಬಿಕಾತನಯದತ್ತರು. 
‘ಹಸಿರು ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ..ಮರೆಯುವುದುಂಟೇ ಮರೆಯಲಿ ನಿಂತೇ ಕಾಯುವ ಕರುಣಾಮಯಿಯ’ ಎನ್ನುತ್ತಾರೆ ಎಚ್ಚೆಸ್ವಿ      
‘ನನ್ನವ್ವ ಫಲವತ್ತಾದ ಕಪ್ಪು ನೆಲ.
 ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ; 
ಸುಟ್ಟಷ್ಟು ಕಸುವು,ನೊಂದಷ್ಟೂ ಹೂ ಹಣ್ಣು – 
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ’..ಎಂಥ ಹೃದಯಸ್ಪರ್ಶಿ ಸಾಲುಗಳು ಲಂಕೇಶರ ‘ಅವ್ವ’ನದು! 
‘ಮೋಡದಲ್ಲಿ ಬಿಸಿಲಿನಲಿ ನೋಯದಂತಡಗಿ, 
ಮಾಯದಂತೆ ಕಾದು ಸ್ವಂತತನವ, ಕತ್ತಲಲ್ಲಿ ಹೊಳೆವ ಜೀವ. 
‘ಅಮ್ಮ’ ಎನ್ನುವ ಸುಖದ ನಿಟ್ಟುಸಿರ ಕರೆದು 
ಸವೆದೂ ಸವೆಯದ ಆ ಪದವ ನೆನೆದು ಆ ಪದವ ನೆನೆದು ..ಎಂದು ಹಲಬುತ್ತ ಅಮ್ಮನಿಗಾಗಿ ಹಂಬಲಿಸುತ್ತಾರೆ ವೈದೇಹಿಯವರು ‘ನನ್ನ ಅಮ್ಮನ ಸೀರೆ’ಯಲ್ಲಿ.
ಒಟ್ಟಿನಲ್ಲಿ ತನ್ನ ಗರ್ಭದಲ್ಲಿ ಹೊಸ ಚೈತನ್ಯವೊಂದಕ್ಕೆ ಜೀವ ನೀಡಿ ಪೊರೆವ ಶಕ್ತಿ ಬ್ರಹ್ಮನ ನಂತರ ಇರುವುದೆಂದಾದರೆ ಅದು ತಾಯಿಗಷ್ಟೇ.
ಜಗದೆಲ್ಲ ಅಮ್ಮಂದಿರಿಗೆ ಅಂತೆಯೇ ತಾಯ್ಮನದ,ಅಂತ:ಕರಣದ ಎಲ್ಲ ಜೀವಗಳಿಗೆ ಬರಲಿರುವ ‘ಮದರ್ಸ್ ಡೇ’ಯ ಹಾರ್ದಿಕ ಶುಭಾಶಯಗಳು.
‘ಕಲ್ಲಾಗು, ಗುಂಡಾಗು, ಕರಕೀ ಬೇರಾಗು, ಅಗಸೀ ಮುಂದಿನ ಬೋರ್ಗಲ್ಲಾಗು’ಎಂದು  ಹಗಲಿರುಳೂ ಶ್ರೀರಕ್ಷೆಯನ್ನೀಯುತ್ತ ಮಕ್ಕಳ ಕನಸು-ಆಸೆಗಳ ರೆಕ್ಕೆಗಳಿಗೆ ವೈನತೇಯ ಬಲ ತುಂಬುವ ಅಮ್ಮನನ್ನು ತಮ್ಮ ಕವನದ ಮೂಲಕ ಭಾವದುಂಬಿ ನೆನೆದಿದ್ದಾರೆ ರಮ್ಯಾ ಭಾದ್ರಿಯವರು. ಅದರೊಡನಿರುವ ಅವರೇ ಚಿತ್ರಿಸಿರುವ ಸುಂದರ ಸ್ಕೆಚ್ ಆ ಕವನಕ್ಕೆ ಕಳಸವಿಟ್ಟಂತಿದೆ.
 ದುರದೃಷ್ಟಕರವಾಗಿ ತಮ್ಮ ನೆಲ-ಮನೆಗಳನ್ನು ಕಳೆದುಕೊಂಡು, ಮಗನಿಂದಲೂ ಬೇರ್ಪಟ್ಟ ನೈಜೀರಿಯನ್ ರೆಫ್ಯೂಜಿ ಅಮ್ಮನ ಮನಮಿಡಿಯುವ ಸತ್ಯ ಘಟನೆಯೊಂದನ್ನು ಕಥೆಯಾಗಿ ನೇಯ್ದು ತಂದಿದ್ದಾರೆ ವತ್ಸಲಾ ರಾಮಮೂರ್ತಿಯವರು ತಮ್ಮ ‘ಕರುಳಿನ ಕರೆ’ಯಲ್ಲಿ. ಓದಿ ನೋಡಿ ಕಣ್ಣಂಚು ತೇವವಾಗುತ್ತದೆ. ಯಾವ ಕಂದನೂ ಅಮ್ಮನಿಂದ ಅಗಲದಿರಲಿ ಎಂಬ ಹಾರೈಕೆ ಮೂಡುತ್ತದೆ.
‘ಅಮ್ಮ’ ಎನ್ನುವ ಭಾವ ಎಷ್ಟು ಸಾರ್ವತ್ರಿಕವೋ ಅಷ್ಟೇ ವೈಯಕ್ತಿಕವೂ ಕೂಡ. ಎಲ್ಲರ ಅನುಭೂತಿ,ಭಾವ ಬಂಧಗಳು ತೀರ ಭಿನ್ನ ಹಾಗೂ ಸ್ವಂತ. ತಮ್ಮ ಅಮ್ಮನ ಕುರಿತು ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ ಪ್ರಸನ್ನ ಅವರು. ಬನ್ನಿ..ಓದಿ..ಅಮ್ಮನಂತ:ಕರಣದಲ್ಲಿ ಮಿಂದೇಳಿ.

~ ಸಂಪಾದಕಿ

ಅಮ್ಮ 

ಸುಂದರ ಘಳಿಗೆಯಲ್ಲಿ ಬೆಸೆದ ಕರುಳ ಬಂಧ  
ಸಕಲ ಸಂಬಂಧಗಳಿಗೂ ಶ್ರೇಷ್ಠ ಈ ಅನುಬಂಧ 
ಹಂಚಿದಷ್ಟು ಹೆಮ್ಮರವಾಗುವ   ಪ್ರೀತಿಯ  ಬಂಧ 
ಅನಂತ, ಅಪೂರ್ವ  ಈ ಋಣಾನುಬಂಧ 
ಅಮ್ಮ, ನಿನಗೆ ನಾ ಚಿರಋಣಿಯಮ್ಮ 

ಹೊತ್ತು, ಹೆತ್ತು ಜೊತೆಜೊತೆಗೆ ಹೆಜ್ಜೆ ಹಾಕಿದೆ 
ಎಡವಿದಾಗ ಮೈದಡವಿ ಕೈ ಹಿಡಿದು ಬೆಳೆಸಿದೆ 
ಮಮತೆಯ ಮಳೆಗರೆದು ಮಡಿಲಲ್ಲಿ ಆಡಿಸಿದೆ 
ಹೊತ್ತು ಗೊತ್ತೆನ್ನದೆ  ಅತ್ತಾಗ ಮುತ್ತಿಟ್ಟು ತುತ್ತುಣಿಸಿದೆ 
ಅಮ್ಮ , ನೀನೊಂದು ಅನರ್ಘ್ಯ ಮುತ್ತಮ್ಮ 

ಅಕ್ಕರೆಯ ಅಪ್ಪುಗೆಯಲಿ ಆಸರೆಯ ಶ್ರೀರಕ್ಷೆಯನ್ನಿತ್ತೆ 
ಮಾತನ್ನು ಕಲಿಸಿದೆ , ಕನಸುಗಳನ್ನು ಬಿತ್ತೆ 
ಹಾಲುಣಿಸಿ ಆಸೆಯ ರೆಕ್ಕೆಗಳಿಗೆ ಬಲವನ್ನೂ  ಇತ್ತೆ 
ಗುರುವಾಗಿ ಗುರುತರ ಮಾರ್ಗದ ಬೆಳಕಾಗಿ ನಿಂತೆ 
ಅಮ್ಮ, ನಿನ್ನಿಂದಲೇ  ಇಂದು ನಾನಮ್ಮ 

ಅಪೇಕ್ಷಗಳನ್ನರಿಯದ ನಿನ್ನ ನಿಸ್ವಾರ್ಥದೊಲುಮೆ 
ಕಂದನ ಆನಂದಕ್ಕಾಗಿಯೇ ನಿನ್ನೆಲ್ಲಾ ದುಡಿಮೆ 
ನೊಂದ ಮನಕೆ ಮದ್ದಾಗುವ ವಾತ್ಸಲ್ಯದ ಮಹಿಮೆ 
ಅಮ್ಮಾ .. ಎನ್ನಲು ಮನವರಳಿಸುವ ಉತ್ಸಾಹದ ಚಿಲುಮೆ 
ಅಮ್ಮ, ನನಗೆ ನೀನೆ ದೈವವಮ್ಮ 

ಹೇಳದೆಯೇ ಮನದಾಳದ ಭಾವವ ನೀ ಬಲ್ಲೆ 
ಕಾಣದಿದ್ದರೂ ಕಣ್ಮುಚ್ಚಲು ಕಂಡೆ ಎನ್ನ ಮನದಲ್ಲೇ 
ಕರೆದೊಡನೆ ಕರುಳರಿವ ನಿನ್ನ ಕಾರುಣ್ಯಕ್ಕಿಲ್ಲ ಎಲ್ಲೆ 
ಸಕಲವೂ ನಿನ್ನ ಮಡಿಲಲ್ಲೇ ,ಸ್ವರ್ಗವೂ ನಿನ್ನ ಪಾದದಲ್ಲೇ 
ಅಮ್ಮ, ನೀನೇ  ಸೌಭಾಗ್ಯವಮ್ಮ 

~ ರಮ್ಯ ಭಾದ್ರಿ 

ಕರುಳಿನ ಕರೆ

ನಾನು ಪಿಂಚಿನಿಯಾದ ಮೇಲೆ RedCross Volunteer ಕೆಲಸ ಶುರುಮಾಡಿದೆ. ಏನಾದರು ಮಾಡಬೇಕಲ್ಲ ಇನ್ನು ಆರೋಗ್ಯ ಇದೆ ಮತ್ತು  ತಲೆ ಓಡುತ್ತಿದೆ. ನನ್ನ ಮಗ “ಅಮ್ಮ ಏನಾದರೂ  ವಾಲಿಂಟಿಯರ್‌ ಕೆಲಸ ಮಾಡು ಸುಮ್ಮನೆ ಟಿ.ವಿ. ನೋಡುತ್ತಾ ಕುಳಿತು ಕೊಳ್ಳಬೇಡ  ಅಂತ ವರಾತ ಹಚ್ಚಿದ.  ನಾನು “ಹೋಗೋ  ವರ್ಷಗಟ್ಟಲೆ ಕೆಲಸ ಮಾಡಲಿಲ್ಲವೇ? ಈಗ ಖುಷಿಯಾಗಿ  Story books ಓದಿಕೊಂಡು,  ಮಸಾಲೆದೋಸೆ, ಜಾಮೂನು,ನಿಪ್ಪಟ್ಟು ತಿಂದುಕೊಂಡು ಮಜಮಾಡುತ್ತೇನೆ”  ಎಂದೆ. ಅವನು ಅದುಮಾಡು ಮತ್ತು ಇದುಮಾಡೆಂದ. ನಿಜ ಹೇಳಬೇಕೆಂದರೆ  ಮಸಾಲೆದೋಸೆ, ಜಾಮೂನು ಕನಸಿನಲ್ಲಿ ತಿನ್ನಬೇಕು ! ನಾನಿರುವ ಯು.ಕೆ.ಯ ಮೂಲೆಯಲ್ಲಿ  ನಮ್ಮಊರಿನ ತಿಂಡಿ ಬೇಕಾದರೆ ರೈಲು ಹತ್ತಿ ಲಂಡನ್‌ಗೆ ಹೋಗಬೇಕು. ಅಲ್ಲಿಗೆ ಮಗಿಯಿತು ಆ ಕನಸು. RedCross ನಲ್ಲಿ ತಪಾಸಣೆಗಳಲ್ಲಾ ಮುಗಿದಮೇಲೆ Volunteer ಯಾಗಿ ನೋಂದಾಯಿಸಿದರು. ನನ್ನ ಕೆಲಸ Day centre ನಲ್ಲಿ. Refugeeಗಳಿಗೆ ಊಟ,ತಿಂಡಿ ಮನೆಸಾಮನುಗಳು ಮತ್ತು ಪ್ರಯಾಣದ ಖರ್ಚಿಗೆದುಡ್ಡು, GP Registrationಗೆ , ಒಟ್ಟಿನಲ್ಲಿ ಆರ್ಥಿಕ, ಮಾನಸಿಕ, ಸಾಮಾಜಿಕವಾಗಿ ಬೆಂಬಲ ನೀಡುವುದು.

RedCrossಗೆ ಸೇರಿದಮೇಲೆ ನನ್ನ ಜೀವನದ  ದೃಷ್ಷಿಕೋನವೇ ಬದಲಾಯಿತು. Refugeeಗಳು ಅನುಭವಿಸಿದ  ದಾರುಣ ಕತೆಗಳು, ದೈಹಿಕ, ಮಾನಸಿಕ, ಹಿಂಸೆಗಳನ್ನು ಬರೆಯಲು ಈ ಲೇಖನಿಗೆ ಶಕ್ಯವಿಲ್ಲ. ಕೆಲವರ ಬೆನ್ನಮೇಲೆ ಲಾಟಿಚಾರ್ಜ್ ಬೊಬ್ಬೆಗಳು ಇನ್ನೂ ಇವೆ.
ಒಂದು ದಿನ ಒಬ್ಬ Nigerian ಮಹಿಳೆ ಹೊಸದಾಗಿ ನಮ್ಮ Day Centerಗೆ ಬಂದಳು. ಅವಳನ್ನು ನೋಡಿದರೆ ಸಂಬಾವಿತಳು,  ವಿದ್ಯಾವಂತಳ ಹಾಗೆ ಕಾಣುತ್ತಿದ್ದಳು.  ನಾವು ಕೊಡುವ ತಿಂಡಿ, ಸಾಮಾನುಗಳನ್ನು ತೆಗೆದುಕೊಳ್ಳಲು ಕುಗ್ಗಿಹೋಗುತ್ತಿದ್ದಳು. ಮುಖ ದುಗಡದಿಂದ ಮಂಕಾಗಿತ್ತು. ನಾನು ಆಕೆಯ ಪರಿಚಯ ಬೆಳೆಸಿ ಅವಳ ದಾರುಣ ಕತೆ ಕೇಳಿದೆ. ಎಲ್ಲ ವಿವರಣೆಗಳನ್ನು ಇಲ್ಲಿ ಬರಿಯಲು ಸಾದ್ಯವಿಲ್ಲ. ಮುಖ್ಯವಾಗಿ ಅವಳ ೧೫ ವರುಷದ ಮಗ ಕಾಣೆಯಾಗಿದ್ದಾನೆ. ಅವಳ ಮಗನ ಸಮಚಾರ ತಿಳಿಯದೆ ಒದ್ದಾಡುತ್ತಿದ್ದಾಳೆ.ಅವಳು ಲಾಯರ್‌ ಆಗಿ ಕೆಲಸ ಮಾಡುತ್ತಿದ್ದಳಂತೆ. ದುರಾದೃಷ್ಷದಿಂದ  U.K.ಗೆ Refugee ಯಾಗಿ ಬರಬೇಕಾಯಿತು. ಮಗ Londonನಲ್ಲಿ ಕಾಣೆಯಾದ. ನಾವು RedCrossನಿಂದ  ಕಾಣೆಯಾಗಿರುವರನ್ನು (missing person )ಹುಡುಕಿ ಅವರ ಸಂಸಾರದ ಜತೆ ಕೂಡಿಸುತ್ತೇವೆ. ಅವಳ ಮಗನ ಗುರುತಿನ ವಿವರಗಳನ್ನು ತಿಳಿದುಕೊಂಡೆವು. ಅವನ ಹಣೆಯಮೇಲೆ  ಹುಲಿ ಮಚ್ಚೆಯಿದೆ ಮತ್ತು English ಮಾತಾನಾಡಲು ಬರುತ್ತದೆಯೆಂದು ತಿಳಿಯಿತು. 

ಒಂದು ದಿನ ವಿರಾಮ ಸಮಯದಲ್ಲಿ ಮತಾನಾಡುತ್ತಾ ಕುಳಿತಿದ್ದೆವು.ಆಗ  ನಮ್ಮSocialWorker ಒಬ್ಬ  ಯುವಕನ ಜತೆಬಂದಳು. ೬ ಅಡಿಉದ್ದವಿದ್ದ ಆ ಯುವಕನ ನಡಿಗೆ ಮಾತುಕತೆ,ಅಗಾಧ ದುಃಖದ ಮುಖವಾಡ,  ಸುಖವಾಗಿ ಬೆಳದ ಹುಡುಗ ಪಡಬಾರದ ಕಷ್ಷಕ್ಕೆ ಸಿಕ್ಕಿದ್ದಾನೆ ಅಂತ ನಾವೆಲ್ಲಾ ಮಾತನಾಡಿಕೊಂಡೆವು. ನಂಗೆ ಮಾತ್ರ ಯುವಕನ ಮುಖ, ನಡುವಳಿಕೆ ತುಂಬಾ ಪರಿಚಯೆನ್ನುವ ಬಾವನೆ. ನೆನಪು ಬರವಲ್ಲದು.  ರಾತ್ರಿಯಿಲ್ಲಾ ನಿದ್ರೆಯಿಲ್ಲ. ಕಳವಳಿಸಿದೆ. ಒಂದು ವಾರದ ಮೇಲೆ ನೆನಪಿನ ಸುಳಿಬಿಚ್ಚಿತು. ಆ ಯವಕನಿಗೆ ಆ ಲಾಯರಿನ ಹೋಲಿಕೆಯಿದೆಂದು.ಅವಳ ಸಂಬಂಧಿ ಇರಬಹುದೆ?  ಇತ್ತೀಚೆಗೆ ಆ ಹೆಂಗಸಿನ ಪತ್ತೆಯಿಲ್ಲ.ಸುಮಾರು ೩ ತಿಂಗಳಹಿಂದೆ localAuthourity ಅವಳನ್ನು  ಬೇರೆ ಜಾಗಕ್ಕೆ ಕಳಿಸಿದ್ದಾರೆಯೆಂದು ತಿಳಿಯಿತು. ಅವಳ ನೆನಪು ಅಳಿಸಿ ಹೋಗಿದೆ. ನನ್ನ ಕಳವಳ ತಡಿಯಲಾರದೆ SocialWorkerನ ಮೂಲಕ ಮಾಹಿತಿ ದೊರೆಕಿಸಿಕೊಂಡೆ.ಆ ಯುವಕ ಸಹ ತಾಯಿಗಾಗಿ ಹಂಬಲಿಸಿ ಸೊರಗಿದ್ದಾನೆಂತ. ನಾನು SocialWorkerಗೆ ನನ್ನ ಅನಸಿಕೆ ವಿವರಿಸಿ ಹೇಳಿದೆ. ಆದರೆ ಆಕೆಗೆ ನನ್ನ ಮಾತಿನಲ್ಲಿ ನಂಬಿಕೆ ಬರಲಿಲ್ಲ. ಆ ವಿಷಯ ಮರೆತು ಹೋಯಿತು. ಸುಮಾರು 6 ತಿಂಗಳನಂತರ RedCrossಗೆ ಒಬ್ಬ ತಾಯಿಮಗ ಕೈ ಹಿಡಿದುಕೊಂಡು ಸಂತೋಷದಿಂದ ಬಂದರು. ನನಗೆ ನಂಬಲಾಗಲಿಲ್ಲ. ನಾನು ಕೊಟ್ಟ ಮಾಹಿತಿಯಿಂದ SocialWorker (Reluctantly looked for his mother ) .ಅಂತೂ ಪತ್ತೆಮಾಡಿ ಒಂದುಗೂಡಿಸಿದಳು. ಇವತ್ತು ತಾಯಿಗೆ Asylum status ದೊರಕಿದೆ. ಮಗ ಕಾಲೇಜ್‌ ಸೇರಿದ್ದಾನೆ. ಇದಲ್ಲವೇ ಕರುಳಿನ ಕರೆ!

~ ವತ್ಸಲಾ ರಾಮಮೂರ್ತಿ

ನಮ್ಮಮ್ಮ

ಸೂರ್ಯ , ಚಂದ್ರ, ಮುಂಜಾವು, ಮುಸ್ಸಂಜೆ , ಜಗಕೆಲ್ಲಾ ಒಂದೇ ಆದರೂ, ಅವುಗಳ ಬಗೆಗಿನ ನಮ್ಮ ನಮ್ಮ ಅನುಭವ ತೀರ ನಮ್ಮದೇ.  ಹಾಗೆಯೇ ಅಮ್ಮ. ಅಮ್ಮ ದಿನ ನಿತ್ಯದ ಸಂಬಂಧ ಆಗಬಹುದು, ಮಧುರ ಭಾವನೆ ಆಗಬಹುದು, ಪ್ರೇರಣೆ ಆಗಬಹುದು , ಜಾಗತಿಕವೂ ಆಗಬಹುದು Mother Teresa ರಂತೆ.  

ನನ್ನ ಅಮ್ಮ ಕೂಡ , ಜಗದೆಲ್ಲಾ ಅಮ್ಮಂದಿರಂತೆ Best mother in the world. ನನ್ನ ಮೊಟ್ಟ ಮೊದಲ ಅಚ್ಚರಿ ಅವಳನ್ನು ಕುರಿತಾಗಿದ್ದು , ಅವಳ ಹಣಕಾಸಿನ management skills. ಅಪ್ಪನ ೨೦೦ ತಿಂಗಳ ಸಂಬಳದಲ್ಲೂ, ೨೦೦೦೦ ದಲ್ಲೂ, ಅಂದೂ, ಇಂದೂ,  ಮನೆ ಸಂತೃಪ್ತ , ಸಂತಸ , ನಗುವದು ಅವಳಿಂದಲೇ. ಹತ್ತನೇ ತರಗತಿ ಮುಗಿಸದ ಅಮ್ಮ, ನಮಗೆ ಯಾವ ಅಮರ್ತ್ಯ ಸೇನ, ಮನಮೋಹನರಿಗಿಂತ ಎಂದೂ ಕಡಿಮೆ ಅನ್ನಿಸಲಿಲ್ಲ. 

ನನ್ನ ಒಂದು ಪ್ರಾಥಮಿಕ ಶಾಲಾ ವರ್ಷದ ನೆನಪು. ಅಂತಿಮ ಪರೀಕ್ಷಾ ಸಮಯ. ಅಮ್ಮ ನನ್ನನ್ನು ಕರೆದು ಹೇಳಿದಳು -ಈ ಬಾರಿ ಚನ್ನಾಗಿ ಓದಿಕೊಂಡು , ಪರೀಕ್ಷೆ ಬರೆದರೆ , ನನಗೆ ಏನೊ ಒಂದು ಬಹುಮಾನ ಕಾಯ್ದಿದೆ ಎಂದು. ಅಲ್ಲಿಯ ತನಕ ನನಗೆ ಎಂದೂ ಈ ರೀತಿಯ ಪ್ರಲೋಭನೆಯ ಪರಿಚಯವೇ ಇರಲಿಲ್ಲ. ನನಗೋ ಕಾತರ, ಸಂಭ್ರಮ, ಕೂತೂಹಲ. ಪರೀಕ್ಷೆಯ ನಂತರ ಸಿಕ್ಕ ಅಮರ ಚಿತ್ರ ಕಥಾ ಅವರ ದಶಾವತರ bumper comic book ಇಂದಿಗೂ ನನ್ನ ನೆನಪಿನಂಗಳದಲ್ಲಿ ನೆನ್ನೆಯೆ ನಡೆದಂತಿದೆ. ನನ್ನ ಅಮ್ಮ ನನಗೆ ಯಾವುದೇ motivational guru’s ಗಳಿಗಿಂತ ಕಡಿಮೆ ಏನಿಲ್ಲ. 

ಅಮ್ಮನ ಬದುಕು ಅವಳ ಹುಮ್ಮಸ್ಸು , ಹೊಸತನ್ನು ಕಲಿಯುವ ಹುರುಪು ನನಗೆ ಸೋಜುಗ. ಇಂದಿಗೂ ಏನೋ ಒಂದು ಕಲಿಯುತ್ತಿರುತ್ತಾಳೆ ಅವಳು. Alternative healing Reiki ಆಗಲಿ, ವಿಪಶ್ಯನ ಧ್ಯಾನ ಪದ್ಧತಿಯಾಗಲಿ , ಇಂದಿನ social media aap ಆಗಲಿ, ತಾನೂ ಕಲಿತು , ಅಪ್ಪನಿಗೂ ಕಲಿಸಿ, ನಮಗೂ ತನ್ನ ಕಲಿಕೆಯ ಪ್ರಯೋಗಗಳನ್ನು ಕಲಿಸುವ ಹುಮ್ಮಸ್ಸು ಆಕೆಯದು. ನನಗೆ ಯಾವ Abdul Kalam,  ಶಾರದಾ ಮಾತೆಗೂ ಕಡಿಮೆಯಲ್ಲ ಆಕೆ.. 

ನನ್ನ ಅಮ್ಮ ನನ್ನ ಜಗತ್ತು. ಆಕೆಯ ಪ್ರತಿಬಿಂಬ ನಾನು. ಮನುಷ್ಯನನ್ನು ರೂಪಿಸಿದ ಮಾತೃಶಕ್ತಿಗೆ ನಿತ್ಯ ನಮನ.

~ ಪ್ರಸನ್ನ