ಅನಿವಾಸಿಗಳಾದ ನಮಗೆ ನಮ್ಮ ಜನ್ಮಭೂಮಿ ಭೇಟಿ ಮಾಡುವ ಅವಕಾಶ ಒದಗಿ, ಒಂದಷ್ಟು ದಿನ ತಾಯಿನೆಲದ ಗಾಳಿ ಬೆಳಕಿನಲ್ಲಿ ನಾವು ತೋಯ್ದು ಬರುವ ಗಳಿಗೆಗಳು ಒದಗಿ ಬಂದಾಗ ವ್ಯಕ್ತಪಡಿಸಲಾಗದ ಒಂದು ಖುಷಿ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಅದಕ್ಕೆ ನಾನು ಕೂಡ ಹೊರತಲ್ಲ. ನಾನು ಈ ಬಾರಿ ಭಾರತಕ್ಕೆ ಭೇಟಿ ಕೊಟ್ಟಿದ್ದು ನಾಲ್ಕು ವರ್ಷ ಒಂಬತ್ತು ತಿಂಗಳುಗಳ ಧೀರ್ಘ ಅಂತರದ ನಂತರ. ಯುಕೆ ಗೆ ಬಂದ ನಂತರ ನಾನು ಭಾರತಕ್ಕೆ ಹೋಗಿದ್ದು ಮೂರೇ ಬಾರಿ ಹೋದಾಗಲೆಲ್ಲ ಕೆಲವು ಜವಾಬ್ದಾರಿಗಳನ್ನು ಹೊತ್ತುಕೊಂಡೇ ಹೋಗಿದ್ದೆ, ತಂಗಿ ಮದುವೆ, ಮಗನ ಉಪನಯನ, ಪುಟ್ಟ ಮಗಳನ್ನು ಎತ್ತಿಕೊಂಡು ಹೀಗೆ ಏನಾದರೊಂದು ಕಾರಣಗಳಿಂದ ನನಗೆ ಬೇಕಾದೆಡೆ ಬೇಕಾದಂತೆ ನನ್ನ ರಜಾ ಕಾಲವನ್ನು ಕಳೆಯುವುದು ಸಾಧ್ಯವಾಗಿರಲಿಲ್ಲ. ಜೊತೆಗೆ ಅದು ಅಗತ್ಯ ಅಂತ ಕೂಡ ಅನಿಸಿರಲಿಲ್ಲ. ಹೋದಾಗಲೆಲ್ಲ ಅಮ್ಮನ ಕಯ್ಯಡಿಗೆ ತಿಂದು. ಅತ್ತೆಮನೆಗೆ ಹೋದಾಗ ಏಕಮೇವ ಸೊಸೆಯಾದ ಕಾರಣ ಅವರ ಇಚ್ಛೆ, ಬಯಕೆಗಳಂತೆ ಸುತ್ತಮುತ್ತಲಿನ ದೇವಸ್ಥಾನ ಸುತ್ತಿ ,ಸಂಬಂಧಿಕರ ಮನೆಗೆ ಹೋಗಿ ಅವಕಾಶ ಆದರೆ ಯಾವುದೋ ಒಂದೆರಡು ಪೂಜೆಯಲ್ಲಿ ಆರತಿ ಹಾಡು ಹೇಳಿದರೆ ನನ್ನ ಭಾರತ ಪ್ರಯಾಣ ಮುಗಿದಿರುತ್ತಿತ್ತು. ಇದಕ್ಕಿಂತ ಭಿನ್ನವಾಗಿ ನಾನು ಕೂಡ ಎಂದೂ ಯೋಚಿಸಿಯೂ ಇರಲಿಲ್ಲ.
ಆದರೆ ಈ ಬಾರಿ ಭಾರತ ಭೇಟಿ ನನ್ನ ಪಾಲಿಗೆ ಅತೀ ವಿಶೇಷ, ಕೋವಿಡ್,lockdown ಅಂತೆಲ್ಲ ಎರಡುಬಾರಿ ನನ್ನ ವಿಮಾನ ರದ್ದಾಗಿತ್ತು,ಮಕ್ಕಳ ಶಾಲೆ ,ಪತಿಯ ಉದ್ಯೋಗ ,ಇದೆಲ್ಲ ನನ್ನ ಮನಸಿಗೆ ಬಂದಾಗ ಟ್ರಿಪ್ ಪ್ಲಾನ್ ಮಾಡಲು ಸಹಕಾರಿಯಾಗಿರಲಿಲ್ಲ. ಹೀಗಾಗಿ ನಾಲ್ಕು ವರ್ಷ ಒಂಬತ್ತು ತಿಂಗಳ ನಂತರ ನಾನು ತಾಯ್ನೆಲವನ್ನು ನೋಡಲಿದ್ದೆ , ತನ್ನ ಪರಿವಾರ ಕುಟುಂಬವನ್ನು ಭೇಟಿಯಾಗಲಿದ್ದೆ. ಗೋವಿನ ಹಾಡು ಪೂರ್ಣ ಪಾಠವನ್ನ ರೆಕಾರ್ಡ್ ಮಾಡಬೇಕೆನ್ನುವ ಪೂರ್ವ ನಿಯೋಜನೆ ಬಿಟ್ಟರೆ ನಾನು ಬೇರೆ ಯಾವುದೇ ಪ್ಲಾನ್ಗಳನ್ನು ಮಾಡದೆ ಸುಮ್ಮನೆ ಹೋಗಿದ್ದೆ. ಸಮಷ್ಟಿ ತನ್ನಷ್ಟಕ್ಕೆ ತಾನೇ ನನ್ನ ೫೦ ದಿನಗಳನ್ನು ಅತ್ಯಂತ ಸುಂದರವಾಗಿ ಯೋಜಿಸಿ ಕೊಟ್ಟಿತ್ತು . ನಾನು ಖುಷಿಯನ್ನ ಆಸ್ವಾಧಿಸಲೋ ಸಮಷ್ಟಿಗೆ ಧನ್ಯವಾದ ಹೇಳಲೋ ತಿಳಿಯದಾಗಿತ್ತು . ಸಿಕ್ಕ ಗಳಿಗೆಗಳನ್ನು ನನ್ನ ಪುಟ್ಟ ಕ್ಯಾಮರಾದಲ್ಲಿ ಫ್ರೀಜ್ ಮಾಡಿ ಇಡುವುದೊಂದೇ ನನಗಿದ್ದ ಆಯ್ಕೆ ಎಷ್ಟೋ ಬಾರಿ ಅದು ಕೂಡ ಆಗಲಿಲ್ಲ. ಅನಿವಾಸಿ ಗುಂಪು ನನ್ನ ಮಟ್ಟಿಗೆ ನನ್ನ ಯುಕೆಯ ತವರುಮನಿ ಇದ್ದಂತೆ, ನನ್ನ ಪುಟ್ಟ ಪುಟ್ಟ ಪ್ರಯತ್ನಗಳನ್ನು ಶ್ಲಾಘಿಸಿ ಮತ್ತಷ್ಟು ಸಾಧನೆಗೆ, ಓದಿಗೆ ಹಚ್ಚುವ ನನ್ನ ಅತ್ಯಾಪ್ತ ಬಳಗ, ನಿಮ್ಮೆಲ್ಲರೊಂದಿಗೆ ನನ್ನ ಭಾರತ ಭೇಟಿಯ ಅತ್ಯಂತ ಖುಷಿಯ ಕೆಲ ತಾಸುಗಳ ಅನುಭವ ಹಂಚಿಕೊಳ್ಳುವ ಇಚ್ಛೆ ನನ್ನದು.
ಊರಿಗೆ ಹೋದರೆ ಧಾರವಾಡಕ್ಕೆ ಹೋಗದಿದ್ದರೆ ನನ್ನ ಪ್ರವಾಸವೇ ಅಪೂರ್ಣ,ನನ್ನ ಊರಿಂದ ಧಾರವಾಡ ೭೦ಕಿಲೋಮೀಟರ ದೂರ, ಹೀಗೆ ಮನಸು ಬಂದಾಗಲೆಲ್ಲ ಹೋಗಿ ಬರಬಹುದು.ಮತ್ತು ಧಾರವಾಡ್ ಹೋಗಲು ಯಾವುದೇ ಕಾರಣ ನೆವಗಳು,ಬೇಡ ಇದೊಂದು ರೀತಿ ಮನಸು ಬಂದಾಗ ಗುಡಿಗೆ ಹೋಗುತ್ತೀವಲ್ಲ ಹಾಗೆ. ಆದರೆ ಈ ಸಲದ ಮೊದಲ ಧಾರವಾಡದ ಭೇಟಿ ಸಾಧ್ಯ ಆಗಿದ್ದು ಪ್ರಜಾವಾಣಿಯ ೭೫ನೇ ವರ್ಷದ ಸಂಭ್ರಮಾಚರಣೆಯ ನಿಮಿತ್ತ ಏರ್ಪಡಿಸಿದ್ದ ಒಂದು ಚಂದದ ಕವಿಗೋಷ್ಠಿ, ಮತ್ತು ಸಂಗೀತ ವಿದ್ಯಾಲಯದ ಮಕ್ಕಳಿಂದ ವಿಶೇಷ ಗಾಯನ ಕಾರ್ಯಕ್ರಮ ಜೊತೆಗೆ ನನ್ನ ಗಾಯನ ಕಾರ್ಯಕ್ರಮವನ್ನೂ ಆಯೋಜಿಸಿದ್ದರಿಂದ.
ಆನಂದಕಂದರು ಬರೆದ 'ನಲ್ವಾಡಗಳು' ಕವನ ಸಂಕಲನವನ್ನು ಕೆಲವರ್ಷಗಳಿಂದ ಹುಡುಕುತ್ತಿದ್ದೆ, ಎಲ್ಲಿ ಪ್ರಯತ್ನಿಸಿದರೂ ಸಿಗಲಿಲ್ಲ. ಫೇಸಬುಕ್ ನಿಂದ ಪರಿಚಿತರಾದ ರಾಜ್ ಕುಮಾರ್ ಮಡಿವಾಳರ್ ಅವರಿಗೆ ಬೆಲ್ಫಾಸ್ಟ್ ನಲ್ಲಿ ಇರುವಾಗಲೇ ಒಂದು ಮೆಸೇಜ್ ಮಾಡಿ ಕೇಳಿದ್ದೆ ನಿಮ್ಮಲ್ಲಿ ಅಪ್ಪಿತಪ್ಪಿ ನಲ್ವಾಡುಗಳು ಸಂಕಲನ ಇದ್ದರೇ ಅದರದೊಂದು copy ಸಿಗಬಹುದೇ ? ಎಂದು. ಬಂದಾಗ ಬರ್ರಿ ಐತಿ ಕೊಡ್ತೀನಿ ಅಂದ್ರು.
ಸಪ್ತಾಪುರದಲ್ಲಿ ಇರುವ ಅವರ ಅಂಗಡಿಗೆ ಹೋಗಿ ಪುಸ್ತಕ collect ಮಾಡಲು ಹೋದವಳು ಅವರು ಹೇಳುವ ಸಾಹಿತ್ಯ ಲೋಕದ ಚಂದದ ಕಥೆಗಳನ್ನ ಕೇಳುತ್ತ,ಹಾಡುಗಳ ಬಗ್ಗೆ ಮಾತಾಡುತ್ತ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಅವರಿಗೆ ಎಂದು ತಂದುಕೊಂಡಿದ್ದ ಬುತ್ತಿಯಲ್ಲಿ ನನಗೊಂದು ಪಾಲು ಕೊಟ್ಟು ಅವರ ಶ್ರೀಮತಿ ಸುಮಾ ಮತ್ತು ರಾಜ್ಕುಮಾರ್ ಅವರು ನನ್ನ ಜೀವ ಬಂಧುಗಳೇ ಆಗಿದ್ದರು.
ಇನ್ನೇನು ಹೊರಡಬೇಕು ಅನ್ನುವಾಗ 'ಇಲ್ಲೇ ಹಳ್ಳಿಯೊಳಗ ಒಂದು ಕನ್ನಡ ಸಾಲಿ ಐತ್ರಿ ನಿಮಗ ಆಗತದ ಅಂದ್ರ ಒಂದೈದು ನಿಮಿಷ ಹೋಗಿ ಬರೋಣ,?' ಅಂದ್ರು ನನಗೆ ಇಲ್ಲ ಅನ್ನುವ ಮನಸು ಇಚ್ಛೆ ಎರಡು ಇರಲಿಲ್ಲ. ಅವರ ಕಾಕಾನ ಕಾರಿನಲ್ಲಿ ನಾನು ಹೊರಟಿದ್ದು ಧಾರವಾಡ ಹತ್ತಿರದ ಹಳ್ಳಿ ಮುಗಧ ಕ್ಕೆ. ಹೆಸರಿನಷ್ಟೇ ಚಂದ ಊರು ಅದು. 'ಬೇಂದ್ರೆಯವರು ಮೇಘದೂತ ಬರೆಯಲು ಶುರು ಮಾಡಿದ್ದು ಇದೆ ಊರಿನ ದೇವಿ ಗುಡಿಯ ಕಟ್ಟಿ ಮ್ಯಾಲೆ' ಅನ್ನುವ ಮಾತು ಕೇಳುತ್ತಲೇ ನನಗೆ ಮಾತೆ ಹೊರಡಲಿಲ್ಲ .ಒಂದುರೀತಿಯ ಖುಷಿಯ ಗುಂಗು.
ಮುಗದದ ಶಾಲೆಯ ಅತೀ ಉತ್ಸಾಹಿ ,ಸಾಹಿತ್ಯಪ್ರೇಮಿ ಶಿಕ್ಷಕರು ನನ್ನನು ೧೦ ನೇ ತರಗತಿಯ ಮಕ್ಕಳೊಂದಿಗೆ ಮಾತಾಡಲು ತರಗತಿಗೆ ಕರೆದುಕೊಂಡು ಹೋದರು, ಮಕ್ಕಳು ಬೇಂದ್ರೆಯವರ ಎರಡು ಗೀತೆಗಳನ್ನು ಚಂದದ ರಾಗದಲ್ಲಿ ಹಾಡಿದರು. ಹಕ್ಕ್ಕಿಹಾರುತಿದೆ ನೋಡಿದಿರಾ? ಎಂಬ ಗೀತೆ ಕೇಳಿದ್ದ ನನಗೆ, ಮಕ್ಕಳು ಆ ಗೀತೆಯ ಹಿಂದೆಯೇ ಬೆಕ್ಕು ಹಾರುತಿದೆ ನೋಡಿದಿರಾ ಅಂತೇ ಅದೇ ರಾಗದಲ್ಲಿ ಹಾಡಿದಾಗ ಮತ್ತು ಈ ಗೀತೆಯು ಬೇಂದ್ರೆಯವರೇ ಬರೆದದ್ದು ಎಂದು ತಿಳಿದಾಗ ಅತೀವ ಆಶ್ಚರ್ಯವಾಯಿತು. ಮಕ್ಕಳಿಗೆ ನಾನೂ ಒಂದೆರಡು ಹಾಡು ಹೇಳಿಕೊಟ್ಟೆ. ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಉತ್ತರಿಸುವಾಗ , ಕೆಲವೇ ವರ್ಷಗಳ ಹಿಂದೆ ನಾನುಕೂಡ ಈ ಮಕ್ಕಳಂತೆ ಇಂಥದೇ ಶಾಲೆಯಲ್ಲಿ ಹೀಗೆ ಖುಷಿ ಖುಷಿಯಾಗಿ ಹಾಡು ಹೇಳುತ್ತಾ ಕುಳಿತಿದ್ದಿದು ನೆನಪಾಯಿತು. ಆ ಶಾಲೆಯಿಂದ ವಾಪಸ್ ಧಾರವಾದ ತಲುಪುವ ಹೊತ್ತಿಗೆ ಮನಸೆಲ್ಲ ಬೇಂದ್ರೆ , ಮೇಘದೂತ , ರಾಜಕುಮಾರ್ ಅಣ್ಣ ಹೇಳಿದ ಬೇಂದ್ರೆ ಅಜ್ಜನ ಕಥೆಗಳು. ಇಷ್ಟು ಹತ್ತಿರ ಬಂದು ಬೇಂದ್ರೆಅಜ್ಜನ ಮನೆಯ ಆವರಣಕ್ಕೆ ಒಮ್ಮೆ ಹೋಗಿ ಬರದಿದ್ದರೆ ಅಂತ ಅನ್ನಿಸಿದ್ದರೂ ಆದಿನ ಸಮಯ ಮೀರಿ ಹೋಗಿತ್ತಾದ್ದರಿಂದ ಸುಮ್ಮನೆ ಮನೆಗೆ ಮರಳಿದೆ.
ಇನ್ನೇನು ಸೂಟಿ ಮುಗೀತು ಮತ್ತ ಗಂಟುಮೂಟಿ ಕಟಗೊಂಡು ವಾಪಸ್ ಕರ್ಮಭೂಮಿಗೆ ಹೊರಡ್ಲಿಕ್ಕೆ ಬರೀ ಐದ ದಿನ ಉಳದಾವು ಅನ್ನೋ ಹೊತ್ತಿನಲ್ಲಿ ಮತ್ತೊಮ್ಮೆ ಧಾರವಾಡ ಹೋಗುವ ಗಳಿಗೆ ಕೂಡಿ ಬಂತು., ದೂರದಿಂದ ಬಂದ ಸ್ನೇಹಿತರೊಬ್ಬರಿಗೆ ಬೇಂದ್ರೆಯವರ ಮನೆ ನೋಡಬೇಕಿತ್ತು, ಬೇಂದ್ರೆ ಭವನದಲ್ಲಿ ಇದ್ದ ಸಿಬ್ಬಂದಿಯನ್ನು ಮನೆಯ ಗೇಟಿನೊಳಕ್ಕೆ ಹೋಗಲು ಅನುಮತಿ ಕೇಳಿದೆವು, ಆರಂ ಆಗಿ ಹೋಗಿ ಬರ್ರಿ , ನೀವು ಒಳಗೂ ಹೋಗಬಹುದು. ಅಲ್ಲೇ ಬೇಂದ್ರೆಯವರು ಬಳಸಿದ ವಸ್ತುಗಳು ಅದಾವು ಅದನ್ನೂ ನೋಡಿ ಬರ್ರಿ, ಆಮೇಲೆ ಅವರ ಭಾವಚಿತ್ರಗಳ ಸಂಗ್ರಹ ನೋಡ್ಲಿಕ್ಕೆ ಇಲ್ಲಿ ಬರ್ರಿ ಎಂದರು.
ನಾವು ಗೇಟಿನೊಳಗೆ ಕಾಲು ಇಟ್ಟಾಗ ಚಂದದ ಬೆಳಗು ಹಳದಿ ಗೋಡೆಯ ಮನೆಯನ್ನು ಇನ್ನೂ ಚಂದ ಮಾಡಿತ್ತು, ಅವರ ಮೊಮ್ಮೊಗಳು ಮತ್ತವರ ಪತಿ ತುಂಬಾ ಆತ್ಮೀಯವಾಗಿ ಮಾತನಾಡಿದರು, ನಾನು ಮೆತ್ತಗೆ 'ನಾನು ಹುಟ್ಟಿದ್ದು ಬೇಂದ್ರೆಯವರ ಜನ್ಮದಿನದಂದು' ಅಂದೆ. ಹಂಗಾದ್ರ ನೀವೂ ಬರೀತೀರಿ? ಅಂದ್ರು, ನಾನು `ಇಲ್ಲ ರೀ ಹಾಡ್ತೀನಿ` ಅಂದೇ, ಅದು ಹೆಂಗ ಸಾಧ್ಯ ? ಅವರ ಹುಟ್ಟಿದ ದಿನ ಹುಟ್ಟಿ ಬರೆಯಲ್ಲ ಅಂದ್ರ ? ಅಂದು ನಕ್ಕರು. ಫೋಟೋ ವಿಡಿಯೋಗ್ರಫಿ ಹುಚ್ಚು ಇರುವ, ಅದಕ್ಕಿಂತ ಹೆಚ್ಚು ಬೇಂದ್ರೆ ಅವರನ್ನು ಪ್ರೀತಿಸುವ ನನ್ನ ಸ್ನೇಹಿತರು `ನಾವು ಕೆಲ ಹಾಡುಗಳನ್ನ ರೆಕಾರ್ಡ್ ಮಾಡ್ಕೊಬಹುದಾ? ಎಂದು ಕೇಳಿದಾಗ ಬೇಂದ್ರೆ ಅಜ್ಜನ ಮೊಮ್ಮಗಳು ಅರ್ರೆ ,ಅದ್ಯಾಕ್ ಕೇಳ್ತೀರಿ ಮಾಡ್ಕೋರಿ ಅಂತ ಖುಷಿಯಿಂದ ಒಪ್ಪಿಕೊಂಡರು.
ಹಾಡುವ ಯಾವುದೇ ತಯಾರಿ ಮಾಡಿಕೊಳ್ಳದ ನಾನು ಅವರು ಹಾಡು ಅಂದ ತಕ್ಷಣ ನೆನಪಿಗೆ ಬಂದಿದ್ದು - ಇನ್ನು ಯಾಕ ಬರಲಿಲ್ಲವ್ವ ... ಕವಿತೆಯ ಸಾಲುಗಳು.
ವಾಹನಗಳ ಸದ್ದಿನ ನಡುವೆ ನಾನು ಹಾಡಿದ್ದು ಅದೆಷ್ಟು ಸರಿಯಾಗಿದೆಯೋ ಗೊತ್ತಿಲ್ಲ ,ಆದರೆ ಕನ್ನಡದ ಇಬ್ಬರು ಮೇರು ಕವಿಗಳು ವಾಸಿಸಿದ, ಓಡಾಡಿದ ಸ್ಥಳದಲ್ಲಿ ನನಗೆ ಅವರ ಹಾಡುಗಳನ್ನು ಹಾಡುವ ಅವಕಾಶ, ಅದೃಷ್ಟ ಭಗವಂತ ಒದಗಿಸಿಕೊಟ್ಟಿದ್ದಕ್ಕೆ ನಾ ಅವನಿಗೆ ಋಣಿ. (ಇಲ್ಲಿಗೆ ಬರುವ ಮೊದಲು ಮೈಸೂರಲ್ಲಿ ಕುವೆಂಪು ಅವರ ಮನೆಯ ಆವರಣದಲ್ಲಿ ಕೂತು ಸಹ ಅವರ ಒಂದು ಕವನವನ್ನು ಹಾಡಿದ್ದೆ.)
ನಲ್ಮೆಯ ಓದುಗರೇ ನಮಸ್ಕಾರ.
‘ಕೌಸಲ್ಯಾ ಸುಪ್ರಜಾ ರಾಮಾ’ ಎಂದು ಜಗದೊಡೆಯನನ್ನೂ ಕೌಸಲ್ಯೆಯ ಮಗನನ್ನಾಗಿ ಕಾಣುವ ಸಂಸ್ಕೃತಿಯಿಂದಲೇ ಅರ್ಥವಾಗುತ್ತದೆ ತಾಯ್ತನದ ಎತ್ತರ. ಜಗದೆಲ್ಲ ಬಂಧಗಳಿಂದ ಮುಕ್ತನಾದ ಸನ್ಯಾಸಿಯೂ ಮಾತೃಪಾದಗಳಿಗೆರಗುತ್ತಾನೆ. ಅದಕ್ಕೆಂದೇ ದೇವಕಿನಂದನ, ಯಶೋದಾಕಂದ, ಗೌರೀತನಯ, ಗಾಂಗೇಯ, ಕೌಂತೇಯ, ರಾಧೇಯ..ಇತ್ಯಾದಿ ಪುರಾಣೇತಿಹಾಸ ಪುರುಷರಿಂದ ಹಿಡಿದು ನಮ್ಮ ವರಕವಿ ಬೇಂದ್ರೆ ಸಹಿತ ತಮ್ಮನ್ನು ಗುರುತಿಸಿಕೊಂಡಿದ್ದು ‘ಅಂಬಿಕಾತನಯ'ರಾಗಿಯೇ.
‘ಪಾತಾಳ ಕಂಡರೇನು? ಆ ತಾಯಿ ಬಿಡುವಳೇನು? ಕಾಯವನು ಹೆತ್ತ ಕರುಳು, ಕಾಯುವಳು ಹಗಲು ಇರುಳು’ ಎಂದು ನಮ್ಮನ್ನು ಪೊರೆವ ಮಾತೃವಾತ್ಸಲ್ಯದ ಬಗ್ಗೆ ಭಾವುಕರಾಗಿ ಬರೆಯುತ್ತಾರೆ ಅಂಬಿಕಾತನಯದತ್ತರು.
‘ಹಸಿರು ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ..ಮರೆಯುವುದುಂಟೇ ಮರೆಯಲಿ ನಿಂತೇ ಕಾಯುವ ಕರುಣಾಮಯಿಯ’ ಎನ್ನುತ್ತಾರೆ ಎಚ್ಚೆಸ್ವಿ
‘ನನ್ನವ್ವ ಫಲವತ್ತಾದ ಕಪ್ಪು ನೆಲ.
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು,ನೊಂದಷ್ಟೂ ಹೂ ಹಣ್ಣು –
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ’..ಎಂಥ ಹೃದಯಸ್ಪರ್ಶಿ ಸಾಲುಗಳು ಲಂಕೇಶರ ‘ಅವ್ವ’ನದು!
‘ಮೋಡದಲ್ಲಿ ಬಿಸಿಲಿನಲಿ ನೋಯದಂತಡಗಿ,
ಮಾಯದಂತೆ ಕಾದು ಸ್ವಂತತನವ, ಕತ್ತಲಲ್ಲಿ ಹೊಳೆವ ಜೀವ.
‘ಅಮ್ಮ’ ಎನ್ನುವ ಸುಖದ ನಿಟ್ಟುಸಿರ ಕರೆದು
ಸವೆದೂ ಸವೆಯದ ಆ ಪದವ ನೆನೆದು ಆ ಪದವ ನೆನೆದು ..ಎಂದು ಹಲಬುತ್ತ ಅಮ್ಮನಿಗಾಗಿ ಹಂಬಲಿಸುತ್ತಾರೆ ವೈದೇಹಿಯವರು ‘ನನ್ನ ಅಮ್ಮನ ಸೀರೆ’ಯಲ್ಲಿ.
ಒಟ್ಟಿನಲ್ಲಿ ತನ್ನ ಗರ್ಭದಲ್ಲಿ ಹೊಸ ಚೈತನ್ಯವೊಂದಕ್ಕೆ ಜೀವ ನೀಡಿ ಪೊರೆವ ಶಕ್ತಿ ಬ್ರಹ್ಮನ ನಂತರ ಇರುವುದೆಂದಾದರೆ ಅದು ತಾಯಿಗಷ್ಟೇ.
ಜಗದೆಲ್ಲ ಅಮ್ಮಂದಿರಿಗೆ ಅಂತೆಯೇ ತಾಯ್ಮನದ,ಅಂತ:ಕರಣದ ಎಲ್ಲ ಜೀವಗಳಿಗೆ ಬರಲಿರುವ ‘ಮದರ್ಸ್ ಡೇ’ಯ ಹಾರ್ದಿಕ ಶುಭಾಶಯಗಳು.
‘ಕಲ್ಲಾಗು, ಗುಂಡಾಗು, ಕರಕೀ ಬೇರಾಗು, ಅಗಸೀ ಮುಂದಿನ ಬೋರ್ಗಲ್ಲಾಗು’ಎಂದು ಹಗಲಿರುಳೂ ಶ್ರೀರಕ್ಷೆಯನ್ನೀಯುತ್ತ ಮಕ್ಕಳ ಕನಸು-ಆಸೆಗಳ ರೆಕ್ಕೆಗಳಿಗೆ ವೈನತೇಯ ಬಲ ತುಂಬುವ ಅಮ್ಮನನ್ನು ತಮ್ಮ ಕವನದ ಮೂಲಕ ಭಾವದುಂಬಿ ನೆನೆದಿದ್ದಾರೆ ರಮ್ಯಾ ಭಾದ್ರಿಯವರು. ಅದರೊಡನಿರುವ ಅವರೇ ಚಿತ್ರಿಸಿರುವ ಸುಂದರ ಸ್ಕೆಚ್ ಆ ಕವನಕ್ಕೆ ಕಳಸವಿಟ್ಟಂತಿದೆ.
ದುರದೃಷ್ಟಕರವಾಗಿ ತಮ್ಮ ನೆಲ-ಮನೆಗಳನ್ನು ಕಳೆದುಕೊಂಡು, ಮಗನಿಂದಲೂ ಬೇರ್ಪಟ್ಟ ನೈಜೀರಿಯನ್ ರೆಫ್ಯೂಜಿ ಅಮ್ಮನ ಮನಮಿಡಿಯುವ ಸತ್ಯ ಘಟನೆಯೊಂದನ್ನು ಕಥೆಯಾಗಿ ನೇಯ್ದು ತಂದಿದ್ದಾರೆ ವತ್ಸಲಾ ರಾಮಮೂರ್ತಿಯವರು ತಮ್ಮ ‘ಕರುಳಿನ ಕರೆ’ಯಲ್ಲಿ. ಓದಿ ನೋಡಿ ಕಣ್ಣಂಚು ತೇವವಾಗುತ್ತದೆ. ಯಾವ ಕಂದನೂ ಅಮ್ಮನಿಂದ ಅಗಲದಿರಲಿ ಎಂಬ ಹಾರೈಕೆ ಮೂಡುತ್ತದೆ.
‘ಅಮ್ಮ’ ಎನ್ನುವ ಭಾವ ಎಷ್ಟು ಸಾರ್ವತ್ರಿಕವೋ ಅಷ್ಟೇ ವೈಯಕ್ತಿಕವೂ ಕೂಡ. ಎಲ್ಲರ ಅನುಭೂತಿ,ಭಾವ ಬಂಧಗಳು ತೀರ ಭಿನ್ನ ಹಾಗೂ ಸ್ವಂತ. ತಮ್ಮ ಅಮ್ಮನ ಕುರಿತು ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ ಪ್ರಸನ್ನ ಅವರು. ಬನ್ನಿ..ಓದಿ..ಅಮ್ಮನಂತ:ಕರಣದಲ್ಲಿ ಮಿಂದೇಳಿ.
~ ಸಂಪಾದಕಿ
ಅಮ್ಮ
ಸುಂದರ ಘಳಿಗೆಯಲ್ಲಿ ಬೆಸೆದ ಕರುಳ ಬಂಧ
ಸಕಲ ಸಂಬಂಧಗಳಿಗೂ ಶ್ರೇಷ್ಠ ಈ ಅನುಬಂಧ
ಹಂಚಿದಷ್ಟು ಹೆಮ್ಮರವಾಗುವ ಪ್ರೀತಿಯ ಬಂಧ
ಅನಂತ, ಅಪೂರ್ವ ಈ ಋಣಾನುಬಂಧ
ಅಮ್ಮ, ನಿನಗೆ ನಾ ಚಿರಋಣಿಯಮ್ಮ
ಹೊತ್ತು, ಹೆತ್ತು ಜೊತೆಜೊತೆಗೆ ಹೆಜ್ಜೆ ಹಾಕಿದೆ
ಎಡವಿದಾಗ ಮೈದಡವಿ ಕೈ ಹಿಡಿದು ಬೆಳೆಸಿದೆ
ಮಮತೆಯ ಮಳೆಗರೆದು ಮಡಿಲಲ್ಲಿ ಆಡಿಸಿದೆ
ಹೊತ್ತು ಗೊತ್ತೆನ್ನದೆ ಅತ್ತಾಗ ಮುತ್ತಿಟ್ಟು ತುತ್ತುಣಿಸಿದೆ
ಅಮ್ಮ , ನೀನೊಂದು ಅನರ್ಘ್ಯ ಮುತ್ತಮ್ಮ
ಅಕ್ಕರೆಯ ಅಪ್ಪುಗೆಯಲಿ ಆಸರೆಯ ಶ್ರೀರಕ್ಷೆಯನ್ನಿತ್ತೆ
ಮಾತನ್ನು ಕಲಿಸಿದೆ , ಕನಸುಗಳನ್ನು ಬಿತ್ತೆ
ಹಾಲುಣಿಸಿ ಆಸೆಯ ರೆಕ್ಕೆಗಳಿಗೆ ಬಲವನ್ನೂ ಇತ್ತೆ
ಗುರುವಾಗಿ ಗುರುತರ ಮಾರ್ಗದ ಬೆಳಕಾಗಿ ನಿಂತೆ
ಅಮ್ಮ, ನಿನ್ನಿಂದಲೇ ಇಂದು ನಾನಮ್ಮ
ಅಪೇಕ್ಷಗಳನ್ನರಿಯದ ನಿನ್ನ ನಿಸ್ವಾರ್ಥದೊಲುಮೆ
ಕಂದನ ಆನಂದಕ್ಕಾಗಿಯೇ ನಿನ್ನೆಲ್ಲಾ ದುಡಿಮೆ
ನೊಂದ ಮನಕೆ ಮದ್ದಾಗುವ ವಾತ್ಸಲ್ಯದ ಮಹಿಮೆ
ಅಮ್ಮಾ .. ಎನ್ನಲು ಮನವರಳಿಸುವ ಉತ್ಸಾಹದ ಚಿಲುಮೆ
ಅಮ್ಮ, ನನಗೆ ನೀನೆ ದೈವವಮ್ಮ
ಹೇಳದೆಯೇ ಮನದಾಳದ ಭಾವವ ನೀ ಬಲ್ಲೆ
ಕಾಣದಿದ್ದರೂ ಕಣ್ಮುಚ್ಚಲು ಕಂಡೆ ಎನ್ನ ಮನದಲ್ಲೇ
ಕರೆದೊಡನೆ ಕರುಳರಿವ ನಿನ್ನ ಕಾರುಣ್ಯಕ್ಕಿಲ್ಲ ಎಲ್ಲೆ
ಸಕಲವೂ ನಿನ್ನ ಮಡಿಲಲ್ಲೇ ,ಸ್ವರ್ಗವೂ ನಿನ್ನ ಪಾದದಲ್ಲೇ
ಅಮ್ಮ, ನೀನೇ ಸೌಭಾಗ್ಯವಮ್ಮ
~ ರಮ್ಯ ಭಾದ್ರಿ
ಕರುಳಿನ ಕರೆ
ನಾನು ಪಿಂಚಿನಿಯಾದ ಮೇಲೆ RedCross Volunteer ಕೆಲಸ ಶುರುಮಾಡಿದೆ. ಏನಾದರು ಮಾಡಬೇಕಲ್ಲ ಇನ್ನು ಆರೋಗ್ಯ ಇದೆ ಮತ್ತು ತಲೆ ಓಡುತ್ತಿದೆ. ನನ್ನ ಮಗ “ಅಮ್ಮ ಏನಾದರೂ ವಾಲಿಂಟಿಯರ್ ಕೆಲಸ ಮಾಡು ಸುಮ್ಮನೆ ಟಿ.ವಿ. ನೋಡುತ್ತಾ ಕುಳಿತು ಕೊಳ್ಳಬೇಡ ಅಂತ ವರಾತ ಹಚ್ಚಿದ. ನಾನು “ಹೋಗೋ ವರ್ಷಗಟ್ಟಲೆ ಕೆಲಸ ಮಾಡಲಿಲ್ಲವೇ? ಈಗ ಖುಷಿಯಾಗಿ Story books ಓದಿಕೊಂಡು, ಮಸಾಲೆದೋಸೆ, ಜಾಮೂನು,ನಿಪ್ಪಟ್ಟು ತಿಂದುಕೊಂಡು ಮಜಮಾಡುತ್ತೇನೆ” ಎಂದೆ. ಅವನು ಅದುಮಾಡು ಮತ್ತು ಇದುಮಾಡೆಂದ. ನಿಜ ಹೇಳಬೇಕೆಂದರೆ ಮಸಾಲೆದೋಸೆ, ಜಾಮೂನು ಕನಸಿನಲ್ಲಿ ತಿನ್ನಬೇಕು ! ನಾನಿರುವ ಯು.ಕೆ.ಯ ಮೂಲೆಯಲ್ಲಿ ನಮ್ಮಊರಿನ ತಿಂಡಿ ಬೇಕಾದರೆ ರೈಲು ಹತ್ತಿ ಲಂಡನ್ಗೆ ಹೋಗಬೇಕು. ಅಲ್ಲಿಗೆ ಮಗಿಯಿತು ಆ ಕನಸು. RedCross ನಲ್ಲಿ ತಪಾಸಣೆಗಳಲ್ಲಾ ಮುಗಿದಮೇಲೆ Volunteer ಯಾಗಿ ನೋಂದಾಯಿಸಿದರು. ನನ್ನ ಕೆಲಸ Day centre ನಲ್ಲಿ. Refugeeಗಳಿಗೆ ಊಟ,ತಿಂಡಿ ಮನೆಸಾಮನುಗಳು ಮತ್ತು ಪ್ರಯಾಣದ ಖರ್ಚಿಗೆದುಡ್ಡು, GP Registrationಗೆ , ಒಟ್ಟಿನಲ್ಲಿ ಆರ್ಥಿಕ, ಮಾನಸಿಕ, ಸಾಮಾಜಿಕವಾಗಿ ಬೆಂಬಲ ನೀಡುವುದು.
RedCrossಗೆ ಸೇರಿದಮೇಲೆ ನನ್ನ ಜೀವನದ ದೃಷ್ಷಿಕೋನವೇ ಬದಲಾಯಿತು. Refugeeಗಳು ಅನುಭವಿಸಿದ ದಾರುಣ ಕತೆಗಳು, ದೈಹಿಕ, ಮಾನಸಿಕ, ಹಿಂಸೆಗಳನ್ನು ಬರೆಯಲು ಈ ಲೇಖನಿಗೆ ಶಕ್ಯವಿಲ್ಲ. ಕೆಲವರ ಬೆನ್ನಮೇಲೆ ಲಾಟಿಚಾರ್ಜ್ ಬೊಬ್ಬೆಗಳು ಇನ್ನೂ ಇವೆ.
ಒಂದು ದಿನ ಒಬ್ಬ Nigerian ಮಹಿಳೆ ಹೊಸದಾಗಿ ನಮ್ಮ Day Centerಗೆ ಬಂದಳು. ಅವಳನ್ನು ನೋಡಿದರೆ ಸಂಬಾವಿತಳು, ವಿದ್ಯಾವಂತಳ ಹಾಗೆ ಕಾಣುತ್ತಿದ್ದಳು. ನಾವು ಕೊಡುವ ತಿಂಡಿ, ಸಾಮಾನುಗಳನ್ನು ತೆಗೆದುಕೊಳ್ಳಲು ಕುಗ್ಗಿಹೋಗುತ್ತಿದ್ದಳು. ಮುಖ ದುಗಡದಿಂದ ಮಂಕಾಗಿತ್ತು. ನಾನು ಆಕೆಯ ಪರಿಚಯ ಬೆಳೆಸಿ ಅವಳ ದಾರುಣ ಕತೆ ಕೇಳಿದೆ. ಎಲ್ಲ ವಿವರಣೆಗಳನ್ನು ಇಲ್ಲಿ ಬರಿಯಲು ಸಾದ್ಯವಿಲ್ಲ. ಮುಖ್ಯವಾಗಿ ಅವಳ ೧೫ ವರುಷದ ಮಗ ಕಾಣೆಯಾಗಿದ್ದಾನೆ. ಅವಳ ಮಗನ ಸಮಚಾರ ತಿಳಿಯದೆ ಒದ್ದಾಡುತ್ತಿದ್ದಾಳೆ.ಅವಳು ಲಾಯರ್ ಆಗಿ ಕೆಲಸ ಮಾಡುತ್ತಿದ್ದಳಂತೆ. ದುರಾದೃಷ್ಷದಿಂದ U.K.ಗೆ Refugee ಯಾಗಿ ಬರಬೇಕಾಯಿತು. ಮಗ Londonನಲ್ಲಿ ಕಾಣೆಯಾದ. ನಾವು RedCrossನಿಂದ ಕಾಣೆಯಾಗಿರುವರನ್ನು (missing person )ಹುಡುಕಿ ಅವರ ಸಂಸಾರದ ಜತೆ ಕೂಡಿಸುತ್ತೇವೆ. ಅವಳ ಮಗನ ಗುರುತಿನ ವಿವರಗಳನ್ನು ತಿಳಿದುಕೊಂಡೆವು. ಅವನ ಹಣೆಯಮೇಲೆ ಹುಲಿ ಮಚ್ಚೆಯಿದೆ ಮತ್ತು English ಮಾತಾನಾಡಲು ಬರುತ್ತದೆಯೆಂದು ತಿಳಿಯಿತು.
ಒಂದು ದಿನ ವಿರಾಮ ಸಮಯದಲ್ಲಿ ಮತಾನಾಡುತ್ತಾ ಕುಳಿತಿದ್ದೆವು.ಆಗ ನಮ್ಮSocialWorker ಒಬ್ಬ ಯುವಕನ ಜತೆಬಂದಳು. ೬ ಅಡಿಉದ್ದವಿದ್ದ ಆ ಯುವಕನ ನಡಿಗೆ ಮಾತುಕತೆ,ಅಗಾಧ ದುಃಖದ ಮುಖವಾಡ, ಸುಖವಾಗಿ ಬೆಳದ ಹುಡುಗ ಪಡಬಾರದ ಕಷ್ಷಕ್ಕೆ ಸಿಕ್ಕಿದ್ದಾನೆ ಅಂತ ನಾವೆಲ್ಲಾ ಮಾತನಾಡಿಕೊಂಡೆವು. ನಂಗೆ ಮಾತ್ರ ಯುವಕನ ಮುಖ, ನಡುವಳಿಕೆ ತುಂಬಾ ಪರಿಚಯೆನ್ನುವ ಬಾವನೆ. ನೆನಪು ಬರವಲ್ಲದು. ರಾತ್ರಿಯಿಲ್ಲಾ ನಿದ್ರೆಯಿಲ್ಲ. ಕಳವಳಿಸಿದೆ. ಒಂದು ವಾರದ ಮೇಲೆ ನೆನಪಿನ ಸುಳಿಬಿಚ್ಚಿತು. ಆ ಯವಕನಿಗೆ ಆ ಲಾಯರಿನ ಹೋಲಿಕೆಯಿದೆಂದು.ಅವಳ ಸಂಬಂಧಿ ಇರಬಹುದೆ? ಇತ್ತೀಚೆಗೆ ಆ ಹೆಂಗಸಿನ ಪತ್ತೆಯಿಲ್ಲ.ಸುಮಾರು ೩ ತಿಂಗಳಹಿಂದೆ localAuthourity ಅವಳನ್ನು ಬೇರೆ ಜಾಗಕ್ಕೆ ಕಳಿಸಿದ್ದಾರೆಯೆಂದು ತಿಳಿಯಿತು. ಅವಳ ನೆನಪು ಅಳಿಸಿ ಹೋಗಿದೆ. ನನ್ನ ಕಳವಳ ತಡಿಯಲಾರದೆ SocialWorkerನ ಮೂಲಕ ಮಾಹಿತಿ ದೊರೆಕಿಸಿಕೊಂಡೆ.ಆ ಯುವಕ ಸಹ ತಾಯಿಗಾಗಿ ಹಂಬಲಿಸಿ ಸೊರಗಿದ್ದಾನೆಂತ. ನಾನು SocialWorkerಗೆ ನನ್ನ ಅನಸಿಕೆ ವಿವರಿಸಿ ಹೇಳಿದೆ. ಆದರೆ ಆಕೆಗೆ ನನ್ನ ಮಾತಿನಲ್ಲಿ ನಂಬಿಕೆ ಬರಲಿಲ್ಲ. ಆ ವಿಷಯ ಮರೆತು ಹೋಯಿತು. ಸುಮಾರು 6 ತಿಂಗಳನಂತರ RedCrossಗೆ ಒಬ್ಬ ತಾಯಿಮಗ ಕೈ ಹಿಡಿದುಕೊಂಡು ಸಂತೋಷದಿಂದ ಬಂದರು. ನನಗೆ ನಂಬಲಾಗಲಿಲ್ಲ. ನಾನು ಕೊಟ್ಟ ಮಾಹಿತಿಯಿಂದ SocialWorker (Reluctantly looked for his mother ) .ಅಂತೂ ಪತ್ತೆಮಾಡಿ ಒಂದುಗೂಡಿಸಿದಳು. ಇವತ್ತು ತಾಯಿಗೆ Asylum status ದೊರಕಿದೆ. ಮಗ ಕಾಲೇಜ್ ಸೇರಿದ್ದಾನೆ. ಇದಲ್ಲವೇ ಕರುಳಿನ ಕರೆ!
~ ವತ್ಸಲಾ ರಾಮಮೂರ್ತಿ
ನಮ್ಮಮ್ಮ
ಸೂರ್ಯ , ಚಂದ್ರ, ಮುಂಜಾವು, ಮುಸ್ಸಂಜೆ , ಜಗಕೆಲ್ಲಾ ಒಂದೇ ಆದರೂ, ಅವುಗಳ ಬಗೆಗಿನ ನಮ್ಮ ನಮ್ಮ ಅನುಭವ ತೀರ ನಮ್ಮದೇ. ಹಾಗೆಯೇ ಅಮ್ಮ. ಅಮ್ಮ ದಿನ ನಿತ್ಯದ ಸಂಬಂಧ ಆಗಬಹುದು, ಮಧುರ ಭಾವನೆ ಆಗಬಹುದು, ಪ್ರೇರಣೆ ಆಗಬಹುದು , ಜಾಗತಿಕವೂ ಆಗಬಹುದು Mother Teresa ರಂತೆ.
ನನ್ನ ಅಮ್ಮ ಕೂಡ , ಜಗದೆಲ್ಲಾ ಅಮ್ಮಂದಿರಂತೆ Best mother in the world. ನನ್ನ ಮೊಟ್ಟ ಮೊದಲ ಅಚ್ಚರಿ ಅವಳನ್ನು ಕುರಿತಾಗಿದ್ದು , ಅವಳ ಹಣಕಾಸಿನ management skills. ಅಪ್ಪನ ೨೦೦ ತಿಂಗಳ ಸಂಬಳದಲ್ಲೂ, ೨೦೦೦೦ ದಲ್ಲೂ, ಅಂದೂ, ಇಂದೂ, ಮನೆ ಸಂತೃಪ್ತ , ಸಂತಸ , ನಗುವದು ಅವಳಿಂದಲೇ. ಹತ್ತನೇ ತರಗತಿ ಮುಗಿಸದ ಅಮ್ಮ, ನಮಗೆ ಯಾವ ಅಮರ್ತ್ಯ ಸೇನ, ಮನಮೋಹನರಿಗಿಂತ ಎಂದೂ ಕಡಿಮೆ ಅನ್ನಿಸಲಿಲ್ಲ.
ನನ್ನ ಒಂದು ಪ್ರಾಥಮಿಕ ಶಾಲಾ ವರ್ಷದ ನೆನಪು. ಅಂತಿಮ ಪರೀಕ್ಷಾ ಸಮಯ. ಅಮ್ಮ ನನ್ನನ್ನು ಕರೆದು ಹೇಳಿದಳು -ಈ ಬಾರಿ ಚನ್ನಾಗಿ ಓದಿಕೊಂಡು , ಪರೀಕ್ಷೆ ಬರೆದರೆ , ನನಗೆ ಏನೊ ಒಂದು ಬಹುಮಾನ ಕಾಯ್ದಿದೆ ಎಂದು. ಅಲ್ಲಿಯ ತನಕ ನನಗೆ ಎಂದೂ ಈ ರೀತಿಯ ಪ್ರಲೋಭನೆಯ ಪರಿಚಯವೇ ಇರಲಿಲ್ಲ. ನನಗೋ ಕಾತರ, ಸಂಭ್ರಮ, ಕೂತೂಹಲ. ಪರೀಕ್ಷೆಯ ನಂತರ ಸಿಕ್ಕ ಅಮರ ಚಿತ್ರ ಕಥಾ ಅವರ ದಶಾವತರ bumper comic book ಇಂದಿಗೂ ನನ್ನ ನೆನಪಿನಂಗಳದಲ್ಲಿ ನೆನ್ನೆಯೆ ನಡೆದಂತಿದೆ. ನನ್ನ ಅಮ್ಮ ನನಗೆ ಯಾವುದೇ motivational guru’s ಗಳಿಗಿಂತ ಕಡಿಮೆ ಏನಿಲ್ಲ.
ಅಮ್ಮನ ಬದುಕು ಅವಳ ಹುಮ್ಮಸ್ಸು , ಹೊಸತನ್ನು ಕಲಿಯುವ ಹುರುಪು ನನಗೆ ಸೋಜುಗ. ಇಂದಿಗೂ ಏನೋ ಒಂದು ಕಲಿಯುತ್ತಿರುತ್ತಾಳೆ ಅವಳು. Alternative healing Reiki ಆಗಲಿ, ವಿಪಶ್ಯನ ಧ್ಯಾನ ಪದ್ಧತಿಯಾಗಲಿ , ಇಂದಿನ social media aap ಆಗಲಿ, ತಾನೂ ಕಲಿತು , ಅಪ್ಪನಿಗೂ ಕಲಿಸಿ, ನಮಗೂ ತನ್ನ ಕಲಿಕೆಯ ಪ್ರಯೋಗಗಳನ್ನು ಕಲಿಸುವ ಹುಮ್ಮಸ್ಸು ಆಕೆಯದು. ನನಗೆ ಯಾವ Abdul Kalam, ಶಾರದಾ ಮಾತೆಗೂ ಕಡಿಮೆಯಲ್ಲ ಆಕೆ..
ನನ್ನ ಅಮ್ಮ ನನ್ನ ಜಗತ್ತು. ಆಕೆಯ ಪ್ರತಿಬಿಂಬ ನಾನು. ಮನುಷ್ಯನನ್ನು ರೂಪಿಸಿದ ಮಾತೃಶಕ್ತಿಗೆ ನಿತ್ಯ ನಮನ.
~ ಪ್ರಸನ್ನ