ಕವನ ಮತ್ತು ಬದುಕು ಬದಲಿಸಿದ ಪುಸ್ತಕ.

ಆತ್ಮೀಯ ಓದುಗರೇ, 
ಈ ವಾರ ತಮ್ಮ ಓದಿಗೆ ಶ್ರೀಯುತ ವಿಜಯನರಸಿಂಹ ಅವರು ಶ್ರೀ ಶ್ರೀ ಸಿದ್ದಗಂಗಾ ಸ್ವಾಮೀಜಿ ಅವರ ಕುರಿತು ಬರೆದ ಕವಿತೆ ''ಸಿದ್ಧ ಪುರುಷ''.
ಮತ್ತು ಬದುಕು ಬದಲಿಸಿದ ಸರಣಿಗೆ ಅರ್ಪಿತಾ ಅಭಿರಾಮ ಅವರು ಇದೆ ಮೊದಲ ಬಾರಿಗೆ ಅನಿವಾಸಿಯಲ್ಲಿ ಬರೆದಿದ್ದಾರೆ. 
ಈವಾರದ ಎರಡೂ ಬರಹಗಳು ಚುಟುಕಾಗಿದ್ದರೂ ಚುರುಕಾಗಿವೆ. 
ಇದು ಅನಿವಾಸಿ ಸಂಪಾದಕಿಯಾಗಿ ನಾನು ನಿರೂಪಿಸುತ್ತಿರುವ ಕೊನೆಯ ಸಂಚಿಕೆ, ನನ್ನ ಸಂಪಾದಕತ್ವದ ಅವಧಿಯಲ್ಲಿ ಕಾಲಕಾಲಕ್ಕೆ ಅಕ್ಷರ ಬೊಕ್ಕಸಕ್ಕೆ ದೇಣಿಗೆ ಕಳಿಸಿ ಅಕ್ಷಯವಾಗಿಟ್ಟ ಎಲ್ಲ ಸಹೃದಯರಿಗೆ ಧನ್ಯವಾದಗಳು. ಮುಂದಿನ ವಾರದಿಂದ ಶ್ರೀಮತಿ ಗೌರಿ ಪ್ರಸನ್ನ ಅವರು ಅನಿವಾಸಿಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಆದರದ ಸ್ವಾಗತ. ಅವರ ಸಾರಥ್ಯದಲ್ಲಿ ಅನಿವಾಸಿಯ ಅಕ್ಷರತೇರು ಮೆರೆಯಲಿ ಎಂಬ ಸದಾಶಯದೊಂದಿಗೆ, ಈ ವಾರದ ಸಂಚಿಕೆಗೆ ತಮಗೆಲ್ಲ ಸ್ವಾಗತ. 
-ಸಂಪಾದಕಿ 

ಸಿದ್ಧ ಪುರುಷ

-ವಿಜಯನರಸಿಂಹ

ಹೆತ್ತ ಮಕ್ಕಳ ಹಸಿವನು ನೀಗಿಸಲು ಕಷ್ಟ 
ಎಂದರು ಹೆತ್ತವರು 

ನಮ್ಮ ಬಳಿ ಕಳಿಸಿ, ಅನ್ನದ ಅಕ್ಷಯವಿದೆ
ಎಂದು ಕೈಬೀಸಿ ಕರೆದರು 

ಅನ್ನಕ್ಕೆ ಸಾಕಾಗುತ್ತದೆ, ವಸನಕ್ಕೆ ಕಾಸಿಲ್ಲ
ಮಕ್ಕಳ ಮೈ-ಮಾನವ ಮುಚ್ಚಲಾರೆವು ಎಂದರು

ನಮ್ಮ ಬಳಿ ಕಳಿಸಿ ಮಾನಕ್ಕೆ ತಕ್ಕಂತೆ 
ಮಿತಿಗೆ ಮೀರದಂತೆ ಪವಿತ್ರದ ಸಮವಸ್ತ್ರವ ತೊಡಿಸಿ
ನಿತ್ಯ ಮೈ ಮನಸು ಶುಚಿಯಾಗಲಿದೆ ಎಂದು 
ಮನಬಿಚ್ಚಿ ಕರೆದರು 

ಅಸನಕ್ಕೆ, ವಸನಕ್ಕೆ ಸಾಕಾದೀತಷ್ಟೆ, ವಿದ್ಯೆಗಿಲ್ಲ 
ನಮ್ಮಲ್ಲಿ ವ್ಯವಸ್ಥೆಯಿಲ್ಲ, ಕಲಿಸುವವರಿಲ್ಲ ಎಂದರು

ನಮ್ಮ ಬಳಿ ಕಳಿಸಿ, ಜ್ಞಾನ ದೇಗುಲವು ಇಲ್ಲಿದೆ 
ಶಿಕ್ಷಣದಿಂದ ಬದುಕು ಹಸನಾಗಲಿದೆ ಎಂದು
ಅಭಯಕೊಟ್ಟು ಕರೆದರು

ಕಾಯಕದಲಿ ಕೈಲಾಸ ಕಂಡು 
ಅನ್ನ, ಅರಿವೆ, ಅಕ್ಷರದ ತ್ರಿದಾಸೋಹದ
ಹರಿಕಾರನಾಗಿ ಸಿದ್ಧಗಂಗೆಯ ಸಿದ್ಧಪುರುಷನಾದ
ಗುರುವೆ ಇದೊ ನಿಮಗೆ ಮನ ಬಾಗಿ ವಂದನೆ!

ಬದುಕು ಬದಲಿಸಿದ ಪುಸ್ತಕ

-ಶ್ರೀಮತಿ ಅರ್ಪಿತಾ ಅಭಿರಾಮ್

(ಅರ್ಪಿತಾ ಮೂಲತಃ ಶಿವಮೊಗ್ಗೆಯವರು, ಎಂ. ಟೆಕ್ ಪದವೀಧರೆಯಾದ ಇವರು ಪ್ರಸ್ತುತ ಬೆಲ್ಫಾಸ್ಟ್ ನಗರದಲ್ಲಿ ಪತಿ ಅಭಿರಾಮ್ ಮತ್ತು ಮಗಳು ಆರಭಿಯೊಂದಿಗೆ ವಾಸವಾಗಿದ್ದಾರೆ. ಮಧುರ ಕಂಠದ ಗಾಯಕಿ, ಸಾಹಿತ್ಯ ಪ್ರೇಮಿ.ಸಂ)
ನನ್ನ ಬದುಕಿನ ಮೇಲೆ ಗಾಢ ಪರಿಣಾಮ ಬೀರಿದ ಒಂದೇ ಒಂದು ಪುಸ್ತಕವನ್ನು ಆಯ್ಕೆ ಮಾಡಬೇಕೆಂದರೆ ಅದು ಬಹಳ ಕಷ್ಟ ಏಕೆಂದೆರೆ ನನ್ನ ಬದುಕನ್ನ ರೂಪಿಸಿದ ಪುಸ್ತಕಗಳು ಅನೇಕ. ಅವಗಳಲ್ಲಿ ಒಂದನ್ನು ಹೇಳಲೇಬೇಕು ಅಂದರೆ ಅದು'ಯೋಗಿಯ ಆತ್ಮಕಥೆ'.
ಬಹುಶಃ ನಾನು ಹತ್ತು ವರ್ಷದವಳಿರುವಾಗ ಆ ಪುಸ್ತಕದ ಕೆಲವು ಪುಟಗಳನ್ನ ನನ್ನ ಮಾವನ ಮನೆಯಲ್ಲಿ ಓದಿದ್ದೆ. ಆಗಲೇ ಅದು ನನ್ನ ಮನದ ಮೇಲೆ ವಿಶೇಷವಾದ ಛಾಪನ್ನು ಬಿಟ್ಟಿತ್ತು.
ನಂತರ ನಾನು ಓದು ಮುಗಿಸಿ ಕೆಲಸಕ್ಕೆ ಹೋಗಲು ಶುರು ಮಾಡಿದಾಗ ಒಂದಷ್ಟು ಸಮಯ ಖಿನ್ನತೆಗೆ ಒಳಗಾಗಿದ್ದೆ. ಜೀವನ ನಿರರ್ಥಕ ನೀರಸ ಎನಿಸುತ್ತಿತ್ತು. ಉಣ್ಣು, ತಿನ್ನು, ಮಲಗು ಮತ್ತೆ ಕೆಲಸಕ್ಕೆ ಹೋಗು ಬರೀ ಇಷ್ಟೇನಾ ಜೀವನ ಎಂದೆನಿಸುತ್ತಿತ್ತು. ಎಲ್ಲ ಕಡೆ ಸಿಕ್ಕು ಸುಳಿಗಳು ಬಂಧನಗಳೇ ಕಾಣುತ್ತಿದ್ದವು. ಒಂದುಕಡೆ ಏನೋ ಸಂತೋಷ ಸಿಕ್ಕಿತು ಅನ್ನುವಷ್ಟರಲ್ಲಿ ಅದು ಮಾಯ. ಯಾವುದೂ ಶಾಶ್ವತವಲ್ಲ ಎಂಬ ಖಾಲಿ ಭಾವ ಆವರಿಸುತ್ತಿತ್ತು. 
ಆ ಸಮಯದಲ್ಲಿ 'ಯೋಗಿಯ ಆತ್ಮಕಥೆ' ಹಾಗೂ ಅದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನೂ ಓದಲು ಶುರುಮಾಡಿದೆ. ಆ ಓದು ನಾನು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿತು. ಜೀವನದ ಹಲವು ಆಯಾಮಗಳನ್ನೂ ಕೆಲವು ನಿತ್ಯ,ನಿರಂತರ ಅಭ್ಯಾಸಗಳಿಂದ ಪರಿಶೋಧಿಸಬಹುದು ಎಂಬುದನ್ನ ತೋರಿಸಿಕೊಟ್ಟಿತು. 
ಅಂದು ಪ್ರಾರಂಭಿಸಿದ ಆ ಅಭ್ಯಾಸ, ಸಾಧನಾ ಪಥ ಇಂದಿಗೂ ನನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯದಮೇಲೆ ಒಳ್ಳೆಯ ಪರಿಣಾಮ ಬೀರುತ್ತಲೇ ಬಂದಿದೆ. 
ಇಂದಿಗೂ ಯಾವುದೇ ಗೊಂದಲದಲ್ಲಿದ್ದಾಗ ಆ ಪುಸ್ತಕದ ಪುಟವೊಂದನ್ನು ತೆರೆಯುತ್ತೇನೆ, ಪ್ರತಿಬಾರಿಯೂ ಮನಸಿಗೆ ಚೈತನ್ಯವನ್ನು ತುಂಬಿ ಸಮಸ್ಯೆ ಎದುರಿಸುವ ಉತ್ಸಾಹ ಧೈರ್ಯ ಆ ಪುಸ್ತಕ ತುಂಬುತ್ತದೆ. 
  

ಋತುಗೀತೆಗಳು- ಅನಿವಾಸಿಯ ಮೂವರು ಕವಿಗಳಿಂದ..

ಚಿತ್ರ -ಅಮಿತ ರವಿಕಿರಣ

( ಋತುಚಕ್ರ ಬದಲಾದಂತೆ ನಮ್ಮ ಭಾವನಾ ಜಗತ್ತಿನ ಬಣ್ಣವೇ ಬದಲಾಗುವುದು ಕೂಡ ನಿಸರ್ಗದತ್ತವಾದ ಕ್ರಿಯೆಯಿರಬಹುದು.  ಚೈತ್ರದಲ್ಲಿ ಚಿಗುರುವ ಎಲೆಗಳು ಹೊಸತನ್ನು, ಭರವಸೆಯನ್ನು ಹೊತ್ತುತಂದರೆ, ಹನಿಯುವ ಮಳೆ, ಸೂರ್ಯನ ಕಿರಣ, ಕಮಾನು ಬಿಲ್ಲು  ವಸಂತಮಾಸದಲ್ಲಿ ಕನಸಿನ ಸಾಮ್ರಾಜ್ಯವನ್ನೇ ಸೃಷ್ಟಿಸಿಬಿಡುತ್ತವೆ. ತೀಡಿ ಬೀಸುವ ಗಾಳಿಯಲ್ಲಿ ಉದುರುವ ಶರತ್ಕಾಲದ ಚಿನ್ನದ ಬಣ್ಣದ ಎಲೆಗಳು ಇಡೀ ಜೀವನದ  ಕ್ಷಣಿಕತೆಯನ್ನೂ, ಅಗಾಧತೆಯನ್ನೂ, ಕಾಲಚಕ್ರದ ಪುನಾರಾವರ್ತನೆಯನ್ನೂ ಬಿಂಬಿಸಿ ಬದುಕಿನ ಎಲ್ಲ ಘಟ್ಟಗಳ, ಸಾವು-ಮರುಹುಟ್ಟುಗಳ ಆಧ್ಯಾತ್ಮಿಕ ದರ್ಶನಗಳನ್ನು ಭಾವುಕ ಜನರಲ್ಲಿ ಮೂಡಿಸುತ್ತವೆ.

ಇವೇ ವಿಚಾರಗಳು ಮತ್ತೆ ಕೆಲವರಲ್ಲಿ ಪರಿಸರದ ಬಗೆಗಿನ ಕಾಳಜಿಗಳನ್ನು ಮತ್ತು ಮನುಷ್ಯ ನಡೆದ ದಾರಿಯ ಮೌಲ್ಯಾವಲೋಕನವನ್ನು ಮಾಡಲು ಪ್ರಚೋದಿಸಬಹುದು.

ಇನ್ನು ಕೆಲವರಲ್ಲಿ ಶರತ್ಕಾಲದಲ್ಲಿ ಜಾರುತ್ತ ಹೋಗುವ ಹಗಲಿನ ಬೆಳಕು, ಬೆಳೆಯುತ್ತ ಹೋಗುವ ಕತ್ತಲಿನ ಕಪ್ಪು  ಮತ್ತು ಈ ಕತ್ತಲನ್ನು ಸೆಣೆಸಿ ಮತ್ತ ಬೆಳಕಿನೆಡೆ ತುಡಿವ ಮನುಷ್ಯನ ಮನಸ್ಸಿನ ಸಂಕಲ್ಪವಾಗಿ ಬರುವ ದೀಪಾವಳಿ-ಬೆರಗಿನ ಬಣ್ಣಗಳನ್ನು ಹರಡುತ್ತದೆ.

 ಈ ಋತುಮಾನಕ್ಕೆ ಹೊಂದುವಂತೆ ವಿಜಯ್ ನರಸಿಂಹ, ನಾನು ಮತ್ತು ಅರ್ಪಿತ ರಾವ್-ನಿಮಗಾಗಿ  ಅತಿ ಭಿನ್ನ ವಿಚಾರಗಳ ಮೂರು ಋತುಗೀತೆಗಳನ್ನು ಬರೆದು ನೀಡುತ್ತಿದ್ದೇವೆ.  ಮೊದಲ ಕವನಕ್ಕೆ ಶರತ್ಕಾಲದ ಸುಂದರ ಫೋಟೋಗಳನ್ನು ಒದಗಿಸದವರು ಶ್ರೀಮತಿ ಅಮಿತಾ ರವಿಕಿರಣ್. ಮಿಕ್ಕ ಚಿತ್ರಗಳು ಗೂಗಲ್ ಕೃಪೆ. ಓದಿ  ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ-ಸಂ)

 

  ಪುನರಪಿ ಜನನಂ ಪುನರಪಿ ಮರಣಂ…

ಶರತ್ಕಾಲದ ಷರತ್ತಿಗೆ ಬದ್ಧರಾಗಿ

ನಿನ್ನ ತೊರೆದು ಹಾರುತಿರುವ ಎಲೆಗಳು ನಾವು

ನಮ್ಮನು ಹೆತ್ತ ಗಿಡ, ಮರಗಳೇ

ನಿಮಗಿದೋ ಋತು ನಿಮಿತ್ತ ವಿದಾಯ

 

                          ಚಿತ್ರ -ಅಮಿತ ರವಿಕಿರಣ

ಚಿಗುರಾಗಿ, ಕಿರಿದಾಗಿ ಮುದುಡಿ

ದಿನಂಪ್ರತಿ ಹಿಗ್ಗಿ ಹಿರಿದಾಗಿ,

ತಿಳಿ ಹಸಿರು, ಪಚ್ಚೆ ಹಸಿರು

ಬಹುಕಾಲ ಮೈತಳೆದು

ಗಾಳಿಗೆ ಬಾಗುತ, ಮಳೆಯಲಿ

ತೋಯ್ದು ನಲಿಯುತ

ಬಿಸಿಲಿಗೆ ಮೈಯೊಡ್ಡಿ ನಿಲ್ಲುತ

ನಿನ್ನ ಮೈ ಹೊದಿಕೆಯಂತೆ

ಅಂಟಿಕೊಂಡು ನೀ ಹೆತ್ತ

ಫಲ ಪುಷ್ಪಗಳೊಡನೆ ಆಡಿ

ಕಳೆದೆವು ಒಂದು ಸಂವತ್ಸರ

ಇದೀಗ ಮುಗಿಯುತಿದೆ ಸಡಗರ

ಹಳದಿ, ನಸುಗೆಂಪು ರಕ್ತಚಂದನ

ಓಕುಳಿಯಾಡಿ ಹಣ್ಣೆಲೆಯೆಂಬ ಹೆಸರು ಹೊತ್ತು

ಕೊನೆಗೆ ತೊಟ್ಟು ಮುರಿದು

                              ಚಿತ್ರ -ಅಮಿತ ರವಿಕಿರಣ

ಒಂದೇ ಒಂದು ಸಂವತ್ಸರದ

ಅಲ್ಪಾಯುಷಿಗಳು ನಾವು

ನಿನ್ನ ತೊರೆಯುವ ಕಾಲ

ಇನ್ನು ಯಾವ ದಿಕ್ಕಿಗೊ?

ಯಾವ ಜಾಗಕೊ ?

ಗಾಳಿಯ ನಿರ್ಧಾರ

ಪುಣ್ಯವಿದ್ದರೆ ಮಣ್ಣೊಳಗೆ ಬೆರೆತು

ನಿನ್ನದೇ ಬೇರಿಗೆ ನೆರವಾಗಿ ವಸಂತದಲ್ಲಿ

ಪುನರ್ಜನ್ಮ ತಳೆಯುವೆವು 

‘ಪುನರಪಿ ಜನನಂ ಪುನರಪಿ ಮರಣಂ’

ಇಲ್ಲವಾದಲ್ಲಿ ಮತ್ತಾವುದೋ

ಮರ ಗಿಡಗಳಿಗೆ ನೆರವಾಗುವೆವು

ಕಾಲನ ಕರೆಗೆ ಓಗೊಡದವರು

ಯಾರಿಹರು ಹೇಳು?

ಋತುಚಕ್ರಕೆ ನಮಿಸುತ

ನಿಮಗಿದೋ ಪ್ರಕೃತಿ ನಿಮಿತ್ತ ವಿದಾಯ

                                                                                                     ✍ವಿಜಯನರಸಿಂಹ

(ಇದೀಗ  ಮತ್ತೆ ಭೂಗೋಲದ ಅರ್ಧಕ್ಕಿಂತಲೂ ಹೆಚ್ಚಿನ ಪ್ರಪಂಚಕ್ಕೆ ಶರತ್ಕಾಲ ಮತ್ತು ಚಳಿಗಾಲ ಕಾಲಿಕ್ಕಿದೆ.ಅದರ ಜೊತೆಯಲ್ಲೆ ಕೆಲವು ವಿಶ್ಲೇಷಣೆ ಮತ್ತು ವಿಶಾದಗಳು ಕೂಡ ಇಣುಕಿವೆ.

ಪರ್ ಫ್ಲೋರೋ ಕಾರ್ಬನ್ನುಗಳು ಇಂದು ನೀರು ನಿರೋಧಕ (water resistant) , ನೀರು ಪ್ರತಿರೋಧಕ (water repellent) ಮತ್ತು ಚಳಿಯನ್ನು ತಡೆಯಬಲ್ಲ ಹಲವು ಬಟ್ಟೆಗಳಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ. ಆದರೆ ಇದು ಪ್ರಕೃತಿಗೆ ಮಾರಕ  ಮತ್ತು ಕ್ಯಾನ್ಸರ್ ಕೊಡಬಲ್ಲ ಭೂತ ಎನ್ನುವ  ಹಲವು ಕಾಳಜಿಗಳು ಕೇಳಿಬರುತ್ತಿವೆ. ಮತ್ತೆ ಕೆಲವು ಮೂಲಗಳು, ಉತ್ಪಾದಕ ಘಟಕಗಳು ಮತ್ತು ಕೆಲವು ವೈಜ್ಞಾನಿಕ ಮೂಲಗಳು ಇದನ್ನು ಅಲ್ಲೆಗೆಳೆದರೂ ಈ ಬಗ್ಗೆ ಬಹಳಷ್ಟು ವಿವಾದಗಳಿವೆ. ಅದನ್ನು ಧರಿಸಿದಾಗ ಯಾವುದೇ ಹಾನಿಗಳಿಲ್ಲದಿದ್ದರೂ ತಯಾರಿಕೆಯ ವೇಳೆಯಲ್ಲಿ ಅದು ನಿಸರ್ಗಕ್ಕೆ ಮಾರಕವಾಗಬಲ್ಲದು ಎಂಬ ನಂಬಿಕೆಗಳಿವೆ. ಈ ಬಗ್ಗೆ ಓದುವಾಗ ಬರೆದ ಕವನ)

ಪರ್ ಫ್ಲೋರೋ ಕಾರ್ಬನ್ನುಗಳು…

ಇಲ್ಲೀಗ ಆಶಾಡ

ಸುಯ್ಯೆಂಬ ಗಾಳಿಯೊಡಗೂಡಿ ಎಲೆಗಳಿಗೆ

ನೆಲ ಸೇರುವ ಹುನ್ನಾರ…

ದೂರವಿಲ್ಲವಿನ್ನು ಚಳಿಗಾಲ….

ಕೋಟು, ಹ್ಯಾಟು, ಕೈ ಗ್ಲೋವು, ಬೂಟುಗಳು

ಹೊರಬರುವ ವರ್ಷದ ಪರಿಪಾಟ…

ಗೂಡಿನ ತುಂಬ ನೇತಾಡುವ ಬಟ್ಟೆಗಳು

ಗಾಳಿಯ ಹೊಡೆತಕ್ಕೆ ರಕ್ಷಣೆ

ಮಳೆಯ ಜಡಿತಕ್ಕೆ ಪ್ರತಿರೋಧ

ನೀರಹನಿಗಳನು ಹರಳುಗಟ್ಟಿಸಿ ಜಾರಿಸುವ

ಫ್ಲೋರೋಕಾರ್ಬನ್ನುಗಳ ಹೊರಕವಚಗಳು

ಯಾವುದುಡಲೆಂದು ಕಣ್ಣಾಡಿಸುತ್ತ

ಚರಿತ್ರೆಯ ತುಂತುರಲ್ಲಿ ಮೀಯುತ್ತ ನೆನೆದೆ

ಮನುಷ್ಯ ಮಾಡಿದನೆಂತ ಅಪರಾಧ… !

ಒಂದೊಮ್ಮೆ  ಆಫ್ರಿಕಾದಿಂದ ಉತ್ತರಕ್ಕೆ

ಶೀತಲಯುಗ ಕೊರೆದ ಬಿಳಿ ಹಿಮದ ಪಶ್ಚಿಮಕ್ಕೆ

ಸ್ಪರ್ಧೆಗಳಿಗೆ ಸ್ಪರ್ಧೆಯಾಗಿ ಹೋದ

ಬಯಸುತ್ತ ಬದಲಾವಣೆ ನಿರ್ದಯಿ ಅನ್ವೇಷಕ

ಸೀಲು-ತಿಮಿಂಗಲಗಳ  ಕೊಂದು

ತೊಗಲು -ಕೊಬ್ಬನ್ನು ಹೊದ್ದು

ದಾರಿಯುದ್ದಕ್ಕೂ ಬರೆಯುತ್ತ ತನ್ನದೇ ವಿಕಾರ

 

ಆಧುನಿಕತೆಯ ನೆಪದಲ್ಲಿ ಐವತ್ತರ ದಶಕದಲಿ

ಪರ್ ಫ್ಲೋರೋಕಾರ್ಬನ್ನುಗಳ ಉರುಳಲ್ಲಿ ಹೊರಳಿ..

 

ಇದೀಗ ಪರಿಸರ ಕೆಟ್ಟಾಗ ನರಳಿ

ನೀರು ನಿರೋಧಕ, ಪ್ರಕೃತಿಗೆ ಮಾರಕ

ಸಾವಿರ ಬಗೆಯ ಕ್ಯಾನ್ಸರ್ಗಳಿಗೆ ಪೂರಕ

ಬಿಡಿಸಿಕೊಳ್ಳಲಾಗದೆ, ತೊಟ್ಟದ್ದ ಕಳೆದುಕೊಳ್ಳಲಾಗದೆ

ಚುಚ್ಚುವ ಅಪರಾಧಿ ಪ್ರಗ್ನೆಗಳು

ಪರ್ ಫ್ಲೋರೋ ಆಕ್ಟಾನಿಕ್ ಆಸಿಡ್ ಗಳು

ಒಂದೊಂದು ಧಿರಿಸಿನಲು ಸಾವಿರ ಕ್ಯಾನ್ಸರ್ ಕಣಗಳು

ಸಾಗರದ ನೀರು, ಉಣ್ಣುವನ್ನದಿ ಸೇರಿ

ಒಮ್ಮೆ ಉಸಿರೆಳೆದರೂ ಒಳ ಸೇರುವ ವಿಷಕ್ಕೆ

ಪರಿಹಾರ ಹುಡುಕುತ್ತ….

ದಕ್ಕದ ಉತ್ತರ, ಬಿಕ್ಕುವ ಎಚ್ಚರ

ಹೊರಬರಲಾಗದ ಕಂದಕಗಳಲಿ

ಮಳೆ, ಗಾಳಿ, ಚಳಿಗೆ ಮೈ ಮುಚ್ಚದೆ  ಇಂದು ವಿಧಿಯಿಲ್ಲ… !

                                                                                                       ————ಡಾ.ಪ್ರೇಮಲತ ಬಿ

ಹಣತೆ

ದೀಪ ಹಚ್ಚಬೇಕು
ಕೇವಲ ಬೆಳಕು ಹರಡಲಲ್ಲ
ಕತ್ತಲ ಮೂಲೆಯಲ್ಲಿ ಕುಳಿತು ಅವಿತಿರುವ ನಿನ್ನ
ಮನದ ಭಯವ ಹೊಡೆದೋಡಿಸಲು

ದೀಪ ಹಚ್ಚಬೇಕು
ಕೇವಲ ಅಜ್ಞಾನ ಹೋಗಲಾಡಿಸಲಲ್ಲ
ಜ್ಞಾನದ ದಾಹವನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸಲು

 

ದೀಪ ಹಚ್ಚಬೇಕು
ಕೇವಲ ಹಬ್ಬ ಆಚರಿಸಲಲ್ಲ
ಮನಸ್ಸಿನ ಖೇದವನ್ನು ತೊರೆದು ಹೊಸತನವನ್ನು ಪಡೆಯಲು

ದೀಪ ಹಚ್ಚಿ ಬೆಳಕು ಹರಿಸಿ
ಮನದ ಆಸೆ ನೀಗಿಸಲು , ಹೊಸತನವ ಪಡೆಯಲು .
ಹಣತೆಗೊಂದು ಹಣತೆ ತಾಗಿ ಸಣ್ಣ ಬೆಳಕು ದೊಡ್ಡದಾಗಿ
ಮನೆಯ ಮಿನುಗಿ  ಮನವ ಬೆಳಗಿ ಹರಿದು ಹರಿದು ಹೊಮ್ಮಿ ಚೆಲ್ಲಿ
ನವೋಲ್ಲಾಸ ನೀಡಲು , ದೀಪ ಬೆಳಗಬೇಕು ಜ್ಯೋತಿ  ಹರಡಬೇಕು 

                                                                                         ——————-  – ಅರ್ಪಿತ ರಾವ್, ಬ್ಯಾನ್ಬರಿ

( ಮುಂದಿನ ವಾರ- ಪಾರಿವಾಳದ ಕಣಿವೆ )