ಉಮಾ ವೆಂಕಟೇಶ್ ಬರೆವ ವಿಜ್ಞಾನ ಮತ್ತು ವನಿತೆಯರು ಸರಣಿ: ಲೀಸ ಮೈಟ್ನರ್

ಲೇಖಕರು: ಉಮಾ ವೆಂಕಟೇಶ್

ಉಮಾ ವೆಂಕಟೇಶ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯ ಸಂಸ್ಥಾಪಕರಲ್ಲಿ ಒಬ್ಬರು. `ಕನ್ನಡವೆನೆ ಕಿವಿ ನಿಮಿರುವುದು` ಎಂದು ಕವಿ ಇವರನ್ನೇ ನೋಡಿ ಬರೆದಿರಬೇಕು. ಕನ್ನಡದ ಸೇವೆಗೆ ಎಲ್ಲಿದ್ದರೂ ಹಾಜರು. ಕನ್ನಡ ಸಾಹಿತ್ಯ, ಅದರಲ್ಲೂ ವೈಜ್ಞಾನಿಕ ಸಾಹಿತ್ಯ ಇವರ ಮುಖ್ಯ ಆಸಕ್ತಿ. ಇಂಗ್ಲಂಡಿನಲ್ಲಿ ವಿಜ್ಞಾನಿ ಪತಿಯೊಡನೆ `ಅನಿವಾಸಿ` ಬಳಗದ ಪ್ರಮುಖ ಪ್ರೇರಕಶಕ್ತಿಯಾಗಿದ್ದವರು, ಈಗ ಅಮೇರಿಕದಲ್ಲಿ ನೆಲೆಸಿದ್ದಾರೆ. ಆದರೂ ನಮ್ಮ ನಂಟನ್ನು ಬಿಟ್ಟುಕೊಟ್ಟಿಲ್ಲ ಎನ್ನುವುದಕ್ಕೆ ಈ ಲೇಖನ ಬರೆದು ಕೊಟ್ಟಿದ್ದಾರೆ.

ನೋಬೆಲ್ ಪಾರಿತೋಷಕ ವಂಚಿತ ಅಪ್ರತಿಮ ಪ್ರತಿಭಾಶಾಲಿ ಮಹಿಳೆ: ಪರಮಾಣು ವಿದಳನದ ಪ್ರಥಮಾನ್ವೇಷಕಿ ಲೀಸ ಮೈಟ್ನರ್

“ವಿಜ್ಞಾನವು ಸಾಮಾನ್ಯ ಮಾನವರನ್ನು ಸತ್ಯ ಮತ್ತು ವಸ್ತುನಿಷ್ಠತೆಯತ್ತ ನಡೆಯಲು ಪ್ರೇರೇಪಿಸಿ, ವಾಸ್ತವತೆಯನ್ನು ಆಶ್ಚರ್ಯ ಮತ್ತು ಮೆಚ್ಚುಗೆಯೊಂದಿಗೆ ಸ್ವೀಕರಿಸುತ್ತಾ ಮುನ್ನಡೆಯುವುದನ್ನು ಕಲಿಸಿದರೆ, ವಸ್ತುಗಳ ನೈಸರ್ಗಿಕ ಕ್ರಮವು ವಿಜ್ಞಾನಿಗಳಲ್ಲಿ ವಿಸ್ಮಯ ಮತ್ತು ಅತ್ಯಾನಂದದ ಭಾವನೆಗಳನ್ನು ಉಕ್ಕಿಸುತ್ತದೆ”.

1940ನೆ ಇಸವಿಯ ಶರತ್ಕಾಲದಲ್ಲಿ, ದಕ್ಷಿಣ ಆಫ಼್ರಿಕಾದ ನವತರುಣಿಯೊಬ್ಬಳು, ತಾನು ವಿಜ್ಞಾನಿಯಾಗುವ ಆಕಾಂಕ್ಷೆಯ ಹೊಂದಿರುವೆ ಎಂದು ವಿವರಿಸಿ, ಅಂದಿನ ಪ್ರಖ್ಯಾತ ಭೌತಶಾಸ್ತ್ರಜ್ಞನೆನಿಸಿದ್ದ ಸರ್ವಕಾಲಿಕ ಮಹಾಮೇಧಾವಿ ಆಲ್ಬರ್ಟ್ ಐನಸ್ಟೈನನಿಗೆ ಪತ್ರವೊಂದನ್ನು ಬರೆದಿದ್ದಳು. ಆ ಪತ್ರವನ್ನು ಕೊನೆಗೊಳಿಸುವಾಗ ದೈನ್ಯಭಾವದಿಂದ, “ನಾನೊಬ್ಬಳು ಹುಡುಗಿಯೆಂದು ನನ್ನ ಬಗ್ಗೆ ತಪ್ಪಾಗಿ ತಿಳಿಯುವುದಿಲ್ಲ ಎಂದು ಭಾವಿಸುತ್ತೇನೆ,” ಎನ್ನುತ್ತಾ ಮುಗಿಸಿದ್ದಳು. ಅಂದು ಐನಸ್ಟೈನನು ಆಕೆಗೆ ಬರೆದ ಆಶ್ವಾಸನೆಯ ಉತ್ತರದಲ್ಲಿ, ಆತನ ಅಸಾಮಾನ್ಯ ಬುದ್ಧಿವಂತಿಗೆ ಮತ್ತು ಲೋಕಜ್ಞಾನಗಳನ್ನು ಪ್ರತಿಬಿಂಬಿಸುವ ಮಾತುಗಳು ಇಂದಿಗೂ ಅನುರುಣಿಸುತ್ತದೆ: “ನೀನು ಒಬ್ಬಳು ಹುಡುಗಿ ಎನ್ನುವ ವಿಷಯದ ಬಗ್ಗೆ ನನಗೇನೂ ಆಕ್ಷೇಪಣೆಯಿಲ್ಲ; ಆದರೆ ಮುಖ್ಯ ವಿಷಯವೆಂದರೆ ಆ ಅಂಶದ ಕಡೆಗೆ ನೀನೂ ಕೂಡಾ ಗಮನಕೊಡಬಾರದು, ಆ ರೀತಿಯ ಕೀಳುಭಾವನೆಗೆ ಇಲ್ಲಿ ಯಾವ ಕಾರಣಗಳೂ ಇಲ್ಲ,” ಎಂದು ಬರೆದಿದ್ದ ಅವನ ಮಾತುಗಳ ಹಿಂದೆ, ಮಹಿಳೆಯರ ಬಗ್ಗೆ ಅವನಿಗಿದ್ದ ಗೌರವ ಮತ್ತು ವಿಶಾಲ ಮನೋಭಾವನೆಗಳು ವ್ಯಕ್ತವಾಗುತ್ತವೆ. ಆದಾಗ್ಯೂ, ಇಂತಹ ತಾರ್ಕಿಕ ಸಮರ್ಥನೆಗಳ ಹಿಂದೆ ಯಾವಾಗಲೂ ವಿವೇಚನೆ, ವಿವೇಕಗಳು ಇರುತ್ತವೆ ಎಂದು ಹೇಳಲಾಗದು.

ವಿಜ್ಞಾನದ ಇತಿಹಾಸಗಳ ಪುಟಗಳು, ಸ್ವತಃ ಈ ಪ್ರಪಂಚದ ಇತಿಹಾಸದಂತೆ, ಅಸಂಬದ್ಧ ಹಾಗೂ ಅಸಮತೆಗಳಿಂದ ಸುತ್ತುವರಿದ ಅಧಿಕಾರ ಮತ್ತು ಪ್ರಭಾವಗಳಿಂದ ತುಂಬಿಹೋಗಿವೆ. ಈ ಅಧಿಕಾರದ ದಮನಕಾರಿ ಪರಿಣಾಮಗಳ ಕಾರಣದಿಂದಲೇ, ಕೇವಲ ಬೆರಳೆಣಿಸುವಷ್ಟು ಮಹಿಳೆಯರು ಮಾತ್ರ ಇಂತಹ ವಿಜ್ಞಾನ ಪ್ರಪಂಚದಲ್ಲಿ, ತಮ್ಮ ಬುದ್ಧಿಶಕ್ತಿ, ದೃಢತೆ ಮತ್ತು ಅಸಾಮಾನ್ಯ ಪ್ರತಿಭೆಗಳ ಫಲವಾಗಿ ಉತ್ತುಂಗಕ್ಕೇರಲು ಸಾಧ್ಯವಾಗಿದೆ. ಇಂತಹ ಅತ್ಯುತ್ತಮರ ಸಾಲಿಗೆ ಸೇರಿದ್ದರೂ ಕೂಡಾ, ತನ್ನ ಪ್ರತಿಭೆ ಮತ್ತು ಬುದ್ದಿಶಕ್ತಿಗಳಿ ತಕ್ಕಷ್ಟು ಕೀರ್ತಿಯನ್ನು ಪಡೆಯದಿದ್ದ ಪ್ರಥಮಾನ್ವೇಷಕಿ ಮಹಿಳೆಯೇ ಆಸ್ಟ್ರಿಯಾ ದೇಶದ ಭೌತಶಾಸ್ತ್ರಜ್ಞೆ, ಲೀಸ ಮೈಟ್ನರ್ (ನವೆಂಬರ್ ೭, ೧೮೭೮-ಅಕ್ಟೋಬರ್ ೨೭, ೧೯೬೮). ಪರಮಾಣು ವಿದಳನ ಸಂಶೋಧನೆಯ (Atomic Fission) ತಂಡದ ನಾಯಕತ್ವ ವಹಿಸಿದ್ದ ಈಕೆಯನ್ನು, ಇದರ ಅನ್ವೇಷಣೆಯ ಸಲುವಾಗಿ ನೀಡಿದ ನೋಬೆಲ್ ಪಾರಿತೋಷಕದ ಹೆಸರಿನ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಸಣ್ಣ ಆಕೃತಿಯ ಈ ಯಹುದಿ ಮಹಿಳೆಯು, ಹಿಟ್ಲರನ ಸರ್ವಾಧಿಕಾರದಿಂದ ಪಾರಾಗಿ ತನ್ನ ಜೀವವನ್ನುಳಿಸಿಕೊಳ್ಳುವ ಸಲುವಾಗಿ, ತನ್ನ ದೇಶವನ್ನು ತೊರೆದಿದ್ದಳು. ಇವಳ ಬುದ್ದಿಮತ್ತೆ ಮತ್ತು ಸಾಹಸಗಳನ್ನು ಮೆಚ್ಚಿದ್ದ ಅಂದಿನ ಮಹಾಮೇಧಾವಿ ಐನಸ್ಟೈನ್, ಈಕೆಯನ್ನು “ಜರ್ಮನ್ ಭಾಷೆಯನ್ನಾಡುವ ನಮ್ಮ ಕಾಲದ ಮೇರಿ ಕ್ಯೂರಿ” ಎಂದು ಕೊಂಡಾಡಿದ್ದನು.

ಆಸ್ಟ್ರಿಯಾ ದೇಶದ, ವಿಯನ್ನಾ ನಗರದಲ್ಲಿ ಜನ್ಮತಳೆದ ಈಕೆ, ಸಣ್ಣ ವಯಸ್ಸಿನಲ್ಲೇ ಗಣಿತಶಾಸ್ತ್ರದಲ್ಲಿ ತನ್ನ ಪ್ರತಿಭೆಯನ್ನು ತೋರಿದ್ದಳು. ೧೯ನೆಯ ಶತಮಾನದ ಯೂರೋಪಿನಲ್ಲಿ, ಮಹಿಳೆಯರ ಕೌಶಲ್ಯ ಮತ್ತು ಬುದ್ದಿಮತ್ತೆಗಳಿಗೆ ಅಷ್ಟೇನೂ ಅವಕಾಶ ಮತ್ತು ಪ್ರಶಂಸೆಗಳು ದೊರಕುತ್ತಿರಲಿಲ್ಲ. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ವಿಯನ್ನಾದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಆಕೆಗೆ, ಹಲವು ವರ್ಷಗಳ ನಂತರ, ವಿಶ್ವವಿದ್ಯಾಲಯಗಳು ಮಹಿಳೆಯರನ್ನು ಸೇರಿಸಿಕೊಳ್ಳಲು ಪ್ರಾರಂಭಿಸಿದ ಮೇಲೆ, ಭೌತಶಾಸ್ತ್ರದ ಪದವಿಯಲ್ಲಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿತು. ಭೌತಶಾಸ್ತ್ರದಲ್ಲಿ ತನ್ನ ಭವಿಶ್ಯವನ್ನು ಹುಡುಕುತ್ತಾ, ಬರ್ಲಿನ್ ನಗರಕ್ಕೆ ಹೋದ ಮೈಟ್ನರಳಿಗೆ, ಅದೃಷ್ಟವಶಾತ್ ಪ್ರಸಿದ್ಧ ವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ಅಂತಹ ಒಬ್ಬ ಸ್ನೇಹಿತ ಮತ್ತು ಓಟ್ಟೋ ಹಾನ್ ಎನ್ನುವ ಒಬ್ಬ ರಸಾಯನಶಾಸ್ತ್ರಜ್ಞನು ಸಹಭಾಗಿಯ ರೂಪದಲ್ಲಿ ದೊರಕಿದರು. ಅವರಿಬ್ಬರೂ ವಿಕಿರಣಶೀಲತೆಯ ಸಂಶೋಧನೆಯಲ್ಲಿ ಸಾಕಷ್ಟು ಹೆಸರನ್ನೂ ಗಳಿಸಿದ್ದರು.

೧೯೨೦ರ ದಶಕದಲ್ಲಿ, ಮೈಟ್ನರ್, ತಾನೆ ಸ್ವತಂತ್ರವಾಗಿ ಪರಮಾಣು ಭೌತಶಾಸ್ತ್ರದ ಸಂಶೋಧನೆಯನ್ನು ಪ್ರಾರಂಭಿಸಿ, ಆಗ ತಾನೆ ಮೊಳೆಯುತ್ತಿದ್ದ ಆ ಕ್ಷೇತ್ರದಲ್ಲಿ ತಾನೇ ಪ್ರಥಮಾನ್ವೇಷಕಿ ಎನ್ನುವ ಖ್ಯಾತಿಯನ್ನೂ ಪಡೆದಿದ್ದಳು. ಬರ್ಲಿನ್ ನಗರದ ಭೌತಶಾಸ್ತ್ರ ವಲಯದಲ್ಲಿ, ಐನಸ್ಟೈನನು ಆಕೆಯನ್ನು ಮೇರಿ ಕ್ಯೂರಿಗೆ ಹೋಲಿಸಿ ಪ್ರಶಂಸಿಸಿದ್ದ ಕಾರಣ, ಅಂದಿನ ಭೌತಶಾಸ್ತ್ರಜ್ಞರು ಆಕೆಯನ್ನು ಆ ದಿನಗಳ ಅತ್ಯುತ್ತಮ ಪ್ರಾಯೋಗಿಕ ವಿಜ್ಞಾನಿಯೆಂದು ಪರಿಗಣಿಸಿದ್ದರು. ಬಹಳ ನಾಚಿಕೆಯ ಸ್ವಭಾವದವಳಾಗಿದ್ದ ಆಕೆ, ಆತ್ಮವಿಶ್ವಾಸ ತುಂಬಿದ, ದೃಢಮನೋಭಾವದ ಪ್ರಾಧ್ಯಾಪಕಳಾಗಿ ಹೆಸರು ಗಳಿಸಿದ್ದಳು. ಅವಳ ಸೋದರ ಸಂಬಂಧಿಕರು ಅವಳನ್ನು, “ಕುಳ್ಳಕಾಯದ, ಶ್ಯಾಮಲವರ್ಣದ, ಬಲುಜೋರಿನ ಹೆಂಗಸು” ಎಂದು ಕುಚೋದ್ಯ ಮಾಡುತ್ತಿದ್ದರು. ಆದಾಗ್ಯೂ, ಅನೇಕ ಬಾರಿ ಆಕೆಯನ್ನು ಒಂದು ರೀತಿಯ ಅಸ್ಥಿರ ಮನೋಭಾವ ಕಾಡುತ್ತಿದ್ದು, ಆಕೆ ಜೀವನದಲ್ಲಿ ಮದುವೆಯಾಗಲಿಲ್ಲ, ಯಾವ ಪುರುಷನೊಡನೆಯೂ ಗಂಭೀರವಾದ ಪ್ರಣಯ ಸಂಬಂಧವನ್ನು ಬೆಳಸಲೇ ಇಲ್ಲ. ಆದರೂ ಕೂಡಾ, ಆಕೆಯ ಜೀವನ ಒಂದು ರೀತಿಯಲ್ಲಿ ಸಂಪೂರ್ಣವೆನಿಸಿದ್ದು, ಒಬ್ಬ ನಿಷ್ಠಾವಂತ ಸ್ನೇಹಿತೆಯೆನಿಸಿದ್ದ ಆಕೆಯ ಸುತ್ತಾ ಸದಾಕಾಲ “ಮಹಾನ್ ಮತ್ತು ಪ್ರೀತಿಯುಳ್ಳ ಜನರು ಇರುತ್ತಿದ್ದರು”. ಇಂತಹ ವ್ಯಕ್ತಿಗಳ ನಡುವೆ ಶೋಭಿಸುತ್ತಿದ್ದ ಲೀಸ ಮೈಟ್ನರ್ ತನ್ನ ಜೀವನವನ್ನು ವಿಜ್ಞಾನಕ್ಕೆ ಮುಡಿಪಾಗಿಟ್ಟಿದ್ದಳು. ವಿಜ್ಞಾನದ ಗೀಳು ಅವಳನ್ನು ಅದೆಷ್ಟು ಮರುಳುಮಾಡಿತ್ತೆಂದರೆ, ಆಕೆ ತಾಳ್ಮೆಯಿಂದ ಎಲ್ಲವನ್ನೂ ಎದುರಿಸುತ್ತಾ, ಸಕಲ ಅಡಚಣೆಗಳನ್ನೂ ಮೀರಿ, ವಿಜ್ಞಾನದೊಂದಿಗೆ ತನಗಿದ್ದ ಅನುರಕ್ತತೆಯನ್ನು ಬೆಳೆಸುತ್ತಾ ಮುನ್ನಡೆದಿದ್ದಳು. ೧೯೦೫ನೆಯ ಇಸವಿಯಲ್ಲಿ, ಆಸ್ಟ್ರಿಯಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದ ಮೈಟ್ನರ್, ಅಂದಿನ ಕಾಲಕ್ಕೆ ಅಂತಹ ಸಾಧನೆಯನ್ನು ಮಾಡಿದ್ದ ಬೆರಳೆನಿಸುವಷ್ಟು ಮಹಿಳೆಯರಲ್ಲಿ ಒಬ್ಬಳಾಗಿದ್ದಳು.

೨೯ ವಯಸ್ಸಿನ ಮೈಟ್ನರ್, ಬರ್ಲಿನ್ ನಗರಕ್ಕೆ ಬಂದಾಗ, ಜರ್ಮನಿಯ ವಿಶ್ವವಿದ್ಯಾಲಯಗಳು ಮಹಿಳೆಯರನ್ನು ಇನ್ನೂ ಒಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ, ಮ್ಯಾಕ್ಸ್ ಪ್ಲಾಂಕನ ಉಪನ್ಯಾಸಗಳಿಗೆ ಹಾಜರಾಗಲು, ಮೈಟ್ನರ್ ವಿಶೇಷವಾದ ಅನುಮತಿಯನ್ನು ಪಡೆಯಬೇಕಾಗಿತ್ತು. ೧೯೦೭ರ ಶರತ್ಕಾಲದಲ್ಲಿ, ಅವಳು ತನ್ನಂತೆಯೇ ವಿಕಿರಣಶೀಲತೆಯಲ್ಲಿ ಆಸಕ್ತಿಯುಳ್ಳ, ತನಗಿಂತಲೂ ೪ ತಿಂಗಳು ಕಿರಿಯವನಾಗಿದ್ದ, ಓಟ್ಟೋ ಹಾನ್ (Otto Hahn), ಎನ್ನುವ ಜರ್ಮನ್ ರಸಾಯನಶಾಸ್ತ್ರಜ್ಞನನ್ನು ಭೇಟಿಯಾದಳು. ಆಗಿನ ಸಮಯಕ್ಕೆ ಹೊರತು ಎನ್ನುವಂತಹ ವಿಶಾಲಮನೋಭಾವನೆಯನ್ನು ಹೊಂದಿದ್ದ ಹಾನ್, ಮಹಿಳೆಯೊಂದಿಗೆ ಸಂಶೋಧನೆ ನಡೆಸಲು ಯಾವ ಅಭ್ಯಂತರವನ್ನು ಹೊಂದಿರಲಿಲ್ಲ. ಆದರೆ, ಅಂದು ಮಹಿಳೆಯರಿಗೆ ಬರ್ಲಿನ್ ರಾಸಾಯನಿಕ ಪ್ರಯೋಗಾಲಯ ಸಂಸ್ಥೆಯಲ್ಲಿ ಒಳಗೆ ಪ್ರವೇಶಿಸಲು ಅನುಮತಿಯಿರಲಿಲ್ಲ. ಹಾಗಾಗಿ, ಮೈಟ್ನರ್ ಮತ್ತು ಹಾನ್, ಸಂಶೋಧನೆಯಲ್ಲಿ ಸಹಭಾಗಿತ್ವ ನಡೆಸಲು, ಅಲ್ಲಿನ ಮರಗೆಲಸದ ಅಂಗಡಿಯೊಂದರ ನೆಲಮಾಳಿಗೆಯನ್ನು ಪ್ರಯೋಗಾಲಯವಾಗಿ ಪರಿವರ್ತಿಸಿದ್ದ ಸ್ಥಳದಲ್ಲಿ ತಮ್ಮ ಪ್ರಯೋಗಗಳನ್ನು ನಡೆಸಬೇಕಾಗಿತ್ತು. “ಜೀವನದಲ್ಲಿ ಅಂದು ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೇರುವ ಅವಕಾಶ ಮತ್ತು ಅನುಮತಿಗಳು, ಕೇವಲ ಹಾನನಿಗೆ ಇತ್ತೇ ಹೊರತು, ಲೇಸ ಮೈಟ್ನರಳಿಗೆ ಇರಲಿಲ್ಲ”. ಇಂತಹ ಕಠೋರವಾದ ವಾಸ್ತವತೆ ರೂಪಕೋಕ್ತಿಯ ಪರಮಾವಧಿಯನ್ನೇ ಮೀರಿಸುವಂತಿತ್ತು.

ಈ ಇಬ್ಬರು ವಿಜ್ಞಾನಿಗಳ ನಡುವಿನ ಅಂತರವನ್ನು, ಅವರ ಅಭಿರುಚಿಗಳು ಮತ್ತು ವಿಜ್ಞಾನದ ಬಗ್ಗೆ ಅವರಿಗಿದ್ದ ಒಲವು ಕಡಿಮೆಮಾಡಿತ್ತು. ಭೌತಶಾಸ್ತ್ರದಲ್ಲಿ ಉತ್ತಮ ತರಬೇತಿ ಪಡೆದ ಮೈಟ್ನರ್, ಒಬ್ಬ ತಜ್ಞ ಗಣಿತಶಾಸ್ತ್ರಜ್ಞೆಯೂ ಆಗಿದ್ದಳು. ಹಾಗಾಗಿ, ಅವಳು ಕಲ್ಪನಾತ್ಮಕವಾಗಿ ಆಲೋಚಿಸುವ ಪ್ರತಿಭೆ ಇದ್ದು, ತನ್ನ ಕಲ್ಪನೆಗಳನ್ನು ಒರೆಹಚ್ಚಿನೋಡುವಂತಹ ಸೃಜನಶೀಲ ಪ್ರಯೋಗಗಳನ್ನು ಸರಾಗವಾಗಿ ವಿನ್ಯಾಸಮಾಡುವ ತಿಳುವಳಿಕೆ ಅವಳಲ್ಲಿತ್ತು. ರಸಾಯನಶಾಸ್ತ್ರದಲ್ಲಿ ಪಳಗಿದ್ದ ಹಾನನು, ಪ್ರಯೋಗಾಲಯದ ಅತಿಸೂಕ್ಷ್ಮ ಕಾರ್ಯಗಳಲ್ಲಿ ಶ್ರೇಷ್ಠತೆ ಉಳ್ಳವನಾಗಿದ್ದನು. ಸುಮಾರು ೩೦ ವರ್ಷಗಳ ಕಾಲ ಇವರಿಬ್ಬರೂ ಸಹಭಾಗಿತ್ವದಲ್ಲಿ ಕೆಲಸಮಾಡಿ, ವಿಕಿರಣಶೀಲತೆಯ ಸಂಶೋಧನಾ ಕಾರ್ಯದಲ್ಲಿ ಆದ್ಯಪ್ರವರ್ತಕ ವಿಜ್ಞಾನಿಗಳಾಗಿ ಕೀರ್ತಿಪಡೆದರು. ಅಂತಿಮವಾಗಿ ಮೈಟ್ನರ್, ಹಾನನಿಂದ ಮುಕ್ತಿಪಡೆದು, ೧೯೨೧ರಿಂದ, ೧೯೩೪ರ ನಡುವೆ, ತಾನೇ ಸ್ವತಂತ್ರವಾಗಿ ಸುಮಾರು ೫೬ ಸಂಶೋಧನಾ ಪ್ರಬಂಧಗಳನ್ನು ಬರೆದು ಪ್ರಕಟಿಸಿದ್ದಳು.

ಬರ್ಲಿನ್ನಿನಲ್ಲಿರುವ ಸ್ಮಾರಕ

ಈ ರೀತಿಯಲ್ಲಿ ಅವಳ ವೈಜ್ಞಾನಿಕ ವೃತ್ತಿಯು ಯಶಸ್ವಿಯಾಗಿ ಮುನ್ನಡೆದಿದ್ದ ಸಮಯದಲ್ಲೇ, ನಾಟ್ಝಿ ಜರ್ಮನರು, ಯೂರೋಪನ್ನು ಕಬಳಿಸಲು ಪ್ರಾರಂಭಿಸಿದ್ದರು. ಮೈಟ್ನರ್, ಹಾನ್ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ಮೂರನೆಯ ಸಹಭಾಗಿ ವಿಜ್ಞಾನಿ, ಫ಼್ರಿಟ್ಝ್ ಸ್ಟ್ರಾಸ್ಮನ್ (Fritz Strassman), ಈ ನಾಟ್ಝಿಗಳ ಸಂಸ್ಥೆಯನ್ನು ಸೇರಲು ನಿರಾಕರಿಸಿ ಈಗಾಗಲೇ ತೊಂದರೆಯಲ್ಲಿ ಸಿಕ್ಕಿಕೊಂಡಿದ್ದನು. ೧೯೩೮ರಲ್ಲಿ ಈ ಮೂರು ಪ್ರತಿಭಾನ್ವಿತ ವಿಜ್ಞಾನಿಗಳು, ತಮ್ಮ ಅತ್ಯಂತ ಸೃಜನಶೀಲ ಪ್ರಯೋಗಗಳನ್ನು ನಡೆಸುತ್ತಿದ್ದಾಗಲೇ, ನಾಟ್ಝಿ ಸೇನೆಯವರು ಆಸ್ಟ್ರಿಯಾ ದೇಶವನ್ನು ಆಕ್ರಮಿಸಿಕೊಂಡರು. ಮೈಟ್ನರಳು ತನ್ನ ಯಹುದಿ ಪರಂಪರೆಯನ್ನು ಗೋಪ್ಯವಾಗಿಡಲು ನಿರಾಕರಿಸಿದಳು. ಆಗ ಅವಳ ಪಾಲಿಗೆ ಇದ್ದ ಒಂದೇ ಉಪಾಯವೆಂದರೆ, ಜರ್ಮನಿಯನ್ನು ತೊರೆದು ಬೇರೆ ದೇಶಕ್ಕೆ ಪಲಾಯನ ಮಾಡುವುದಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ, ನಾಟ್ಝಿ ಸರಕಾರವು, ಯಹುದಿ-ವಿರುದ್ಧವಾದ ಕಾನೂನನ್ನು ಜಾರಿಗೆ ತಂದು, ಜರ್ಮನಿಯಲ್ಲಿದ್ದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ದೇಶ ತೊರೆಯುವುದನ್ನು ಬಹಿಷ್ಕರಿಸಿದ್ದರು. ೧೯೩೮ರ ಜುಲೈ ೧೩ರಂದು, ಮೈಟ್ನರ್ ತನ್ನ ಸಹೋದ್ಯೋಗಿ ಹಾನ್ ಮತ್ತು ಇತರ ವಿಜ್ಞಾನಿ ಸ್ನೇಹಿತರ ಸಹಾಯದಿಂದ, ಕೂದಲೆಳೆಯಷ್ಟು ಅಂತರದಲ್ಲಿ ಉಪಾಯದಿಂದ ಜರ್ಮನಿಯ ಗಡಿಯನ್ನು ದಾಟಿ, ಹಾಲೆಂಡ್ ದೇಶಕ್ಕೆ ಹೊರಟುಹೋದಳು. ನಂತರ ಹಾಲೆಂಡಿನಿಂದಲೂ ಹೊರಟು, ಡೆನ್ಮಾರ್ಕ್ ದೇಶಕ್ಕೆ ವಲಸಿಗಳಾಗಿ ಪ್ರಯಾಣಮಾಡಿದಳು. ಅಲ್ಲಿ ತನ್ನ ಸ್ನೇಹಿತನಾಗಿದ್ದ ಪ್ರಸಿದ್ಧ ವಿಜ್ಞಾನಿ ನೀಲ್ಸ್ ಭೋರ್ ಕುಟುಂಬದೊಂದಿಗೆ ಸ್ವಲ್ಪಕಾಲ ವಾಸವಾಗಿದ್ದಳು. ಮುಂದೆ ಸ್ವೀಡನ್ನಿನ ನೋಬೆಲ್ ಭೌತಶಾಸ್ತ್ರ ಸಂಸ್ಥೆಯಲ್ಲಿ, ತನ್ನ ಖಾಯಂ ಆಗಿ ನೆಲಸಿದಳು.

ಅದೇ ರೀತಿಯಲ್ಲೇ, ಮೂರು ಶತಮಾನಗಳ ಹಿಂದೆ, ಗೆಲಿಲಿಯೋನಿಗೆ ವ್ಯಾಟಿಕನ್ ಚರ್ಚಿನ ಅಧಿಕಾರಿಗಳು ನೀಡಿದ ಕಿರುಕುಳವನ್ನು ಕಂಡಿದ್ದ ಡೆಸ್ಕಾರ್ಟೆಸನೂ ಸಹಾ, ಇದೇ ರೀತಿಯಲ್ಲೇ ಸ್ವೀಡನ್ನಿಗೆ ಪಲಾಯನಮಾಡಿದ್ದನಂತೆ! ಆ ವರ್ಷದ ನವೆಂಬರ್ ತಿಂಗಳಲ್ಲಿ, ಮೈಟ್ನರ್, ಹಾನ್ ಮತ್ತು ಸ್ಟ್ರಾಸ್ಮನ್ ಮೂವರೂ, ಗೋಪ್ಯವಾಗಿ ಕೋಪೆನಹೇಗಿನಲ್ಲಿ ಸಂಧಿಸಿ, ಹಾನ್ ಮತ್ತು ಸ್ಟ್ರಾಸ್ಮನ್ನರ ಪ್ರಯೋಗಗಳಲ್ಲಿ ದೊರೆತಿದ್ದ ಹಲವು ಅದ್ಭುತವಾದ ಫಲಿತಾಂಶಗಳನ್ನು ಚರ್ಚಿಸಿದರು. ಅವರ ಪ್ರಯೋಗಗಳಲ್ಲಿ, ಯುರೇನಿಯಮ್ ಪರಮಾಣುವಿನ ಬೀಜಕಣಕೇಂದ್ರವನ್ನು (Nucleus) (ಪರಮಾಣು ಸಂಖ್ಯೆ ೯೨), ಒಂದು ಒಂಟಿ ನ್ಯೂಟ್ರಾನ್ ಕಣದಿಂದ ಅಪ್ಪಳಿಸಿದಾಗ, ಅವರಿಗೆ ಪರಮಾಣು ಸಂಖ್ಯೆ ೮೮ರ ರೇಡಿಯಮ್ ಬೀಜಕಣಕೇಂದ್ರವು (Radium atomic number-88), ದೊರೆತಿತ್ತು. ಈ ಮಾಂತ್ರಿಕ ಪರಿವರ್ತನೆಯು ಅವರಿಗೆ ಭೌತಿಕವಾಗಿ ಅಸಾಧ್ಯವೆಂದು ತೋರಿತ್ತು. ಮಂದ ಗತಿಯಲ್ಲಿ ಚಲಿಸುವ, ಅಂತಹ ಒಂದು ಸಣ್ಣ ನ್ಯೂಟ್ರಾನ್ ಕಣವು, ಪರಮಾಣುವಿಂತಹ ದೃಢವಾದ ವಸ್ತುವನ್ನು ನುಚ್ಚುನೂರಾಗಿಸಿ, ಅದರ ಪರಮಾಣು ಸಂಖ್ಯೆಯನ್ನು ಕೆಳಕ್ಕಿಳಿಸಿ, ಅದರ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿ, ಅದನ್ನು ಒಂದು ಹೊಸ ಮೂಲಧಾತುವಿಗೆ ಬದಲಾಯಿಸುವ ಆ ಪ್ರಕ್ರಿಯೆಯು, ನಿಜಕ್ಕೂ ಒಂದು ಕಲ್ಪಿತ ಭ್ರಮಾಚಿತ್ರವೆನಿಸಿತ್ತು.

ಆ ಸಮಯದಲ್ಲಿ, ಮೈಟ್ನರ್ ಒಬ್ಬ ಅತ್ಯುತ್ತಮ ಭೌತಶಾಸ್ತ್ರಜ್ಞೆಯೆಂತಲೂ ಮತ್ತು ಹಾನನು ಒಬ್ಬ ಪ್ರಸಿದ್ಧ ರೇಡಿಯೋ-ರಸಾಯನಶಾಸ್ತ್ರಜ್ಞನೆನ್ನುವ ಪ್ರಖ್ಯಾತಿ ಪಡೆದಿದ್ದರು. ಮೈಟ್ನರ್ ಆಗ, ಆ ಪ್ರಯೋಗದ ರಾಸಾಯನಿಕ ಪ್ರಕ್ರಿಯೆಯು, ಭೌತಿಕವಾದ ಯಾವ ಆಧಾರದಿಂದಲೂ ಸಾಧ್ಯವಿಲ್ಲ, ಆದ್ದರಿಂದ ನೀನು ಮತ್ತೊಮ್ಮೆ ಈ ಪ್ರಯೋಗವನ್ನು ನಡೆಸು ಎಂದು ಸ್ಪಷ್ಟವಾಗಿ ಸಲಹೆ ನೀಡಿದಳು. ಈ ಅನಿರೀಕ್ಷಿತವಾದ ಫಲಿತಾಂಶಗಳಿಂದ ಸಂಪೂರ್ಣವಾಗಿ ದಿಗ್ಭ್ರಾಂತಳಾಗಿದ್ದ ಮೈಟ್ನರ್, ಇದರ ಬಗ್ಗೆ ತನ್ನ ಪರ್ಯಾಲೋಚನೆಯನ್ನು ಮುಂದುವರೆಸಿದಳು. ಕಡೆಗೆ ಕ್ರಿಸ್ಮಸ್ ಹಬ್ಬದಂದು ತನ್ನ ಸೋದರಳಿಯ ಮತ್ತು ಸಹಭಾಗಿ ರಾಬರ್ಟ್ ಫ಼್ರಿಷ್ ಜೊತೆಯಲ್ಲಿ ಹಿಮದ ಮೇಲೆ ನಡೆದಾಡುತ್ತಿದ್ದ ಸಮಯದಲ್ಲಿ ಅವಳಿಗೆ ಈ ಫಲಿತಾಂಶದ ಬಗ್ಗೆ ಸಾಕ್ಷಾತ್ಕಾರವಾಯಿತು. ಓಟ್ಟೋ ರಾಬರ್ಟ್ ಫ಼್ರಿಶ್, ತನ್ನ ಆತ್ಮಚರಿತ್ರೆಯಲ್ಲಿ ಆ ಘಟನೆಯ ಬಗ್ಗೆ ಬರೆಯುತ್ತಾ, ಯಾವ ರೀತಿಯಲ್ಲಿ ಮಹಿಳೆಯರು ವಿಜ್ಞಾನದಲ್ಲಿ ತಮ್ಮ ಪುರುಷ ಸಮಾನಸ್ಕಂದರಿಗಿಂತ ಪ್ರಗತಿ ಸಾಧಿಸುತ್ತಾರೆ ಎನ್ನುವ ಬಗ್ಗೆ, ಅನುದ್ದಿಶ್ಯವಾಗಿ ಒಂದು ಅತ್ಯಂತ ಪರಿಪೂರ್ಣವಾದ ರೂಪಕೋಕ್ತಿಯನ್ನು ನೀಡಿದ್ದಾನೆ: (“ನಾವು ಹಿಮದ ಮೇಲೆ ಹಾಗೇ ಅಡ್ಡಾಡುತ್ತಿದ್ದೆವು. ನಾನು ನೀರ್ಗಲ್ಲು-ಹಾವುಗೆಗಳನ್ನು ಧರಿಸಿದ್ದೆ, ಮೈಟ್ನರ್ ಕೇವಲ ತನ್ನ ಪಾದಗಳಲ್ಲಿಯೇ ಚಲಿಸುತ್ತಾ, ನಾನು ಹೀಗೆ ರಭಸವಾಗಿ ನಡೆದು ಮುಂದುವರೆಯುತ್ತೇನೆ ಎಂದಿದ್ದಳು”).

ತಮಗೆ ದೊರೆತಿದ್ದ ಅಸಂಬಂದ್ಧವಾದ ಫಲಿತಾಂಶಗಳನ್ನು ಪರಾಮರ್ಷಿಸುತ್ತಾ ಕಡೆಗೆ, ಮೈಟ್ನರ್ ಮತ್ತು ಫ಼್ರಿಶ್, ಆ ಪ್ರಕ್ರಿಯೆಯನ್ನು ಪರಮಾಣು ವಿದಳನವೆಂದು (Atomic Fission) ಕರೆಯಲು ತೀರ್ಮಾನಿಸಿದರು. ಆ ತಿಂಗಳ ಕೊನೆಯಲ್ಲಿ ಅವರು ಪ್ರಕಟಿಸಿದ ಪ್ರಬಂಧದ ೭ನೆಯ ಪ್ಯಾರಾದಲ್ಲಿ ಮೊದಲ ಬಾರಿಗೆ ಆ ಪದವನ್ನು ಬಳಸಿದ್ದರು. ಪರಮಾಣುವಿನ ನ್ಯೂಕ್ಲಿಯಸ್ ವಿಭಜನೆಯಾಗಿ, ಮತ್ತೊಂದು ನೂತನ ಮೂಲಧಾತುವಾಗಿ ಮಾರ್ಪಡುವ ವಿಚಾರವು ಅತ್ಯಂತ ತೀವ್ರವಾದ ಕಲ್ಪನೆಯಾಗಿತ್ತು. ಆ ಸಮಯಕ್ಕೆ ಆ ಚಿಂತನೆಯನ್ನು ಅರ್ಥಮಾಡಿಕೊಳ್ಳುವುದೇನೂ ಸುಲಭವಾದ ವಿಷಯವಾಗಿರಲಿಲ್ಲ. ಮೈಟ್ನರ್ ಈ ಪ್ರಕ್ರಿಯೆ ಹೇಗೆ ಸಂಭವಿಸುತ್ತದೆ ಎನ್ನುವುದಕ್ಕೆ ಮೊಟ್ಟಮೊದಲಬಾರಿ ತಿಳುವಳಿಕೆಯನ್ನು ನೀಡಿದ್ದಳು. ಪರಮಾಣು ವಿದಳನವು, ಮಾನವಕುಲದ ಇತಿಹಾಸದಲ್ಲಿ ಕಂಡುಹಿಡಿದ ಅತ್ಯಂತ ಅಪಾಯಕಾರಿ ಮತ್ತು ಶಕ್ತಿಶಾಲಿ ಅನ್ವೇಷಣೆಯೆಂದು ಸಾಬೀತಾಗುವುದರಲ್ಲಿತ್ತು, ಅಷ್ಟೇ ಅಲ್ಲದೆ, ಈ ಶೋಧನೆಯು ಉತ್ತಮ ಮತ್ತು ದುಷ್ಟ ಕಾರ್ಯಗಳಿಗೆ ತುತ್ತಾಗಬಹುದಾದ ಮಾನವನ ಉಭಯ ಸಾಮರ್ಥ್ಯಗಳನ್ನು ಹೊರಗೆಡುಹಿತ್ತು. ಮಾನವನ ಇತಿಹಾಸದಲ್ಲಿ ತಯಾರಾದ ಮಾರಣಾಂತಿಕ ಅಸ್ತ್ರಕ್ಕೆ ಬಲವಾದ ಅಡಿಪಾಯವನ್ನು ಹಾಕಿತ್ತು.

ಮೈಟ್ನರಳ ಈ ಅನ್ವೇಷಣೆಯು ಕೇವಲ ವೈಜ್ಞಾನಿಕವಾದ ಹಿತಾಸಕ್ತಿಯನ್ನು ಹೊಂದಿತ್ತು. ಆದರೆ, ಅದರ ಬಳಕೆಯನ್ನು ಮುಂದೇ ಅನೇಕ ವರ್ಷಗಳ ನಂತರ, ಮಾನವನ ಸರ್ವನಾಶದ ಕಾರ್ಯಕ್ಕೆ ನಡೆಸಿದರೂ ಕೂಡಾ, ಸಮಾಜ ಮಾತ್ರ ಅವಳನ್ನು, “ಪರಮಾಣು-ಬಾಂಬಿನ ಯಹುದಿ-ಮಾತೆ,” ಎಂದು ಕ್ರೂರವಾಗಿ ಉಲ್ಲೇಖಿಸಿತ್ತು. ಒಮ್ಮೆ ತನ್ನ ಅನ್ವೇಷಣೆಯ ನಿಯಮವನ್ನು ನಾಶಕಾರಿ ಕಾರ್ಯಕ್ಕೆ ಬಳಸಿದ್ದನ್ನು ಕಂಡ ಲೀಸ್ ಮೈಟ್ನರ್, ಮುಂದೆ ಪರಮಾಣು ಬಾಂಬಿನ ಕಾರ್ಯದಲ್ಲಿ ತಾನು ಭಾಗಿಯಾಗುವುದಿಲ್ಲವೆಂದು ಬಹಳ ನಿಷ್ಠುರವಾಗಿ ನುಡಿದು ಅದರಿಂದ ತನ್ನನ್ನು ದೂರವಿರಿಸಿಕೊಂಡಿದ್ದಳು. ಪ್ರಪಂಚದಲ್ಲಿ ಉಳಿದವರಂತೆ, ಅವಳೂ ಕೂಡಾ “ಪರಮಾಣು ಬಾಂಬಿನ ಪ್ರಯೋಗವು” ಮಾನವಕುಲದ ಇತಿಹಾಸದಲ್ಲಿ ಸಂಭವಿಸಿದ ಒಂದು ಚಿಂತಾಜನಕವಾದ ತಿರುವೆಂದು ಭಾವಿಸಿದ್ದಳು. ಮುಂದೆ ಅನೇಕ ವರ್ಷಗಳ ನಂತರ, ಈ ಮಹತ್ತರ ವೈಜ್ಞಾನಿಕ ಬೆಳವಣಿಗೆಯ ಮೂಲಕ, ಈ ಕಾಲಮಾನದ ಅಂತ್ಯವಾದ ಬಗ್ಗೆ ಕಹಿ-ಸಿಹಿ ಮಿಶ್ರಭಾವನೆಗಳ ವಿಷಾದವನ್ನು ವ್ಯಕ್ತಪಡಿಸಿದ್ದಳು. ಅವಳ ಸಂದೇಶದಲ್ಲಿ “ಮಹತ್ತರವಾದ ಸುಂದರ ವೈಜ್ಞಾನಿಕ ಅನ್ವೇಷಣೆಯ ದುರುಪಯೋಗವಾಗಿ, ಅದರಿಂದ ಭವಿಶ್ಯದಲ್ಲಿ ಮಾನವ ಪೀಳಿಗೆಯು ಹೆದರಿಕೆಯ ನೆರಳಿನಲ್ಲಿ ಜೀವಿಸುವಂತಾಗಬಾರದು”, ಎನ್ನುವ ಸಮ್ಮಿಶ್ರ ಭಾವನೆಗಳನ್ನು ವ್ಯಕ್ತಪಡಿಸಿದ್ದಳು.

ಪರಮಾಣು ವಿದಳನದ ಅವಿಷ್ಕಾರವು, ಮಾನವ ಸಂಶೋಧನೆಯ ಒಂದು ಸುಂದರವಾದ ಉದಾಹರಣೆಯಾಗಿದೆ. ಪ್ರಕೃತಿಯ ರಹಸ್ಯಗಳನ್ನು ಬೇಧಿಸುವಲ್ಲಿ ಮಾನವ ಗಳಿಸಿದ ಜಯಕ್ಕೆ ಹಾಗೂ ಸೃಜನಾತ್ಮಕ ಕ್ರಿಯೆಯ ವ್ಯಾಖ್ಯಾನಕ್ಕೆ ಒಂದು ಉತ್ತಮವಾದ ಪುರಾವೆಯಾಗಿದೆ. ಹಾನನ ಅಸಂಬದ್ಧವಾದ ಪ್ರಾಯೋಗಿಕ ಫಲಿತಾಂಶಗಳಿಗೆ, ಅರ್ಥವತ್ತಾದ ವಿವರಣೆ ನೀಡಿ, ಆ ಫಲಿತಾಂಶಗಳಲ್ಲಿ ಅಡಗಿದ್ದ, ಮಹೋನ್ನತವಾದ ತೊಡಕಿನ ತತ್ವವನ್ನು ಅನ್ವೇಷಿಸಿದ್ದ ಲೀಸ್ ಮೈಟ್ನರಳ ಅಭೂತಪೂರ್ವ ಒಳನೋಟದ ಫಲಿತಾಂಶವನ್ನು ಕದ್ದು ಪಲಾಯನ ಮಾಡಿದ ಹಾನನು, ಅವಳ ಹೆಸರನ್ನು ಉಲ್ಲೇಖಿಸದೆ, ಸಂಶೋಧನ ಪ್ರಬಂಧವನ್ನು ತನ್ನ ಹೆಸರಿನಲ್ಲಿ ಮಾತ್ರಾ ಪ್ರಕಟಿಸಿದನು. ವಯಕ್ತಿಕ ಮಾತ್ಸರ್ಯ ಮತ್ತು ರಾಜಕೀಯ ಹೇಡಿತನದ ವಿಶ್ವಾಸಘಾತ ಕೃತ್ಯವು ಮೈಟ್ನರಳ ಮನಸ್ಸಿಗೆ ಬಹಳ ಆಳವಾದ ಆಘಾತವನ್ನುಂಟು ಮಾಡಿತು. ಇದರ ಬಗ್ಗೆ ತನ್ನ ಸೋದರ ವಾಲ್ಟರನಿಗೆ ಪತ್ರದಲ್ಲಿ, “ನಮ್ಮ ಸಹಭಾಗಿತ್ವದಲ್ಲಿ ನಡೇದ ಸಂಶೋಧನೆಯ ಕಾರ್ಯ ಪ್ರಕಟವಾಗಿರುವುದು ನನಗೆ ಬಹಳ ಸಂತೋಷದ ವಿಷಯ. ಹಾನನಿಗೆ ಸಿಕ್ಕ ಮನ್ನಣೆ ನನ್ನಲ್ಲಿ ಹೆಮ್ಮೆಯುಂಟು ಮಾಡಿದೆ. ಆದರೆ ಈ ಕಾರ್ಯದಲ್ಲಿ ನನ್ನ ವೈಜ್ಞಾನಿಕ ಕೊಡುಗೆಗೆ ಯಾವ ಮನ್ನಣೆ ಗೌರವಗಳನ್ನು ನೀಡದ ಅವನ ಬಗ್ಗೆ ನನ್ನ ಮನದಲ್ಲಿ ಅಸಹ್ಯವಾದ ಭಾವನೆ ಮೂಡಿದೆ ಮತ್ತು ನನ್ನ ಆತ್ಮವಿಶ್ವಾಸ ಸಂಪೂರ್ಣವಾಗಿ ಕುಂದಿಹೋಗಿದೆ”, ಎಂದು ಬರೆದಿದ್ದಳು.

೧೯೪೪ರಲ್ಲಿ, ಪರಮಾಣು ವಿದಳನದ ಅವಿಷ್ಕಾರಕ್ಕೆ, ಕೇವಲ ಹಾನನಿಗೆ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ನಾಝಿ ಜರ್ಮನಿಯ ಆಳ್ವಿಕೆಯಲ್ಲಿ ನಡೆದ ಇಂತಹ ದುಷ್ಕೃತ್ಯಗಳು ಮತ್ತು ಅದರ ಪರಿಣಾಮಗಳನ್ನು ಹೇರಳವಾಗಿ ಕಾಣಬಹುದು. ವೈಜ್ಞಾನಿಕ ಗುಣಲಕ್ಷಣಗಳ ಯಾವುದೇ ಮಾನದಂಡದಿಂದ ಅಳೆದರೂ, ಪರಮಾಣು ವಿದಳನದ ಸಂಶೋಧನೆಯಲ್ಲಿ, ಲೀಸ್ ಮೈಟ್ನರಳು ವಹಿಸಿದ ಪಾತ್ರ ಮತ್ತು ಕೊಡುಗೆಯ ಬಗ್ಗೆ ಯಾವುದೇ ಸಂದೇಹವಿರಲಿಲ್ಲ. ಪ್ರಕಟಿತ ದಾಖಲೆಗಳು ಮತ್ತು ವೈಯಕ್ತಿಕ ಪತ್ರವ್ಯವಹಾರಗಳನ್ನು ನೋಡಿದರೆ, ಲೀಸ್ ಮೈಟ್ನರಳು ಈ ಸಂಶೋಧನೆಯ ಎಲ್ಲಾ ಹಂತಗಳಲ್ಲೂ ಪ್ರಮುಖವಾದ ಪಾತ್ರ ವಹಿಸಿದ್ದಳೆಂಬುದು ಸ್ಪಷ್ಟವಾಗಿದೆ. ಮೈಟ್ನರಳು ನಾಝಿ ಜರ್ಮನಿಯಿಂದ ಬಲಾತ್ಕಾರವಾದ ಪಲಾಯನವಿಲ್ಲದಿದ್ದರೆ, ಅವಳ ಕೊಡುಗೆಯನ್ನು ಇಷ್ಟೊಂದು ಸುಲಭವಾಗಿ ಅಲಕ್ಷಿಸಲು ಸಾಧ್ಯವಿರಲಿಲ್ಲ. ಯಾವ ರಾಜಕೀಯ ವ್ಯವಸ್ಥೆಗಳು, ಮೈಟ್ನರಳನ್ನು ಜರ್ಮನಿಯಿಂದ ಓಡಿಹೋಗುವಂತೆ ಒತ್ತಾಯಿಸಿದವೋ, ಅದೇ ವರ್ಣನೀತಿಗಳು, ಹಾನ್ ಮತ್ತು ಸ್ಟ್ರಾಸ್ಮನ್ನಿನ ಸಂಶೋಧನೆಯ ಸಹಭಾಗಿತ್ವದ ಪ್ರಕಟಿತ ಪ್ರಬಂಧದಲ್ಲೂ ಅವಳ ಕೊಡುಗೆಯನ್ನು ಸಂಪೂರ್ಣವಾಗಿ ಅಳಿಸಿಹಾಕಿತ್ತು. ಈ ಅವಿಷ್ಕಾರ ನಡೆದ ಹಲವು ವಾರಗಳಲ್ಲೇ, ಹಾನನು ಈ ಸಂಶೋಧನೆಯ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಿದನಲ್ಲದೇ, ಅದನ್ನು ಕೇವಲ ರಸಾಯನಶಾಸ್ತ್ರದ ಅವಿಷ್ಕಾರವೆಂದು ಘೋಷಿಸಿಕೊಂಡಿದ್ದನು. ಹ್ಯಾನ್ಸನ ಈ ಅಪ್ರಾಮಾಣಿಕತೆಯು ಈ ಅವಿಷ್ಕಾರದ ದಾಖಲೆಯನ್ನು ವಿರೂಪಗೊಳಿಸಿತಲ್ಲದೇ, ಇತಿಹಾಸದಲ್ಲಿ ಲೀಸ್ ಮೈಟ್ನರಳ ಹೆಸರು ಮತ್ತು ಸ್ಥಾನವನ್ನು ಸಂಪೂರ್ಣವಾಗಿ ಅಳಿಸಿಹಾಕಿತು. ಮುಂದೆ ಮೈಟ್ನರ್ ಅನೇಕ ಪುರಸ್ಕಾರಗಳನ್ನು ಪಡೆದಳು; ಅವಳ ಮರಣಾಂನಂತರ ಮೈಟ್ನೀರಿಯಮ್ ಎನ್ನುವ ರಾಸಾಯನಿಕ ಧಾತುವನ್ನು ಅವಳ ಹೆಸರಿನಿಂದ ಕರೆದರು; ಆದರೂ, ಅವಳ ವೈಜ್ಞಾನಿಕ ವೃತ್ತಿಯಲ್ಲಿ ಸಾಧಿಸಿದ ಅದ್ಭುತವಾದ ಸಾಧನೆಯೊಂದಕ್ಕೆ ಅರ್ಹವಾದ ಮನ್ನಣೆ ದೊರಕಲಿಲ್ಲ. ಇಲ್ಲಿ ನೋಬೆಲ್ ಪುರಸ್ಕಾರ ಸಮಿತಿ ಮತ್ತೊಮ್ಮೆ ಎಡವಿತಲ್ಲದೇ, ಅರ್ಹವಾದ ಮಹಿಳೆಯ ಸಾಧನೆಯನ್ನು ಗುರ್ತಿಸಲಿಲ್ಲ. ತನ್ನ ವೈಜ್ಞಾನಿಕ ಶಿಕ್ಷಣವನ್ನು ಮುಂದುವರೆಸಲು ಪ್ರತಿಕೂಲವಾದ ಅಡಚಣೆಗಳನ್ನು ಎದುರಿಸಿದ್ದಳು; ನಾಝಿ ಶೋಷಣೆಯಲ್ಲಿ ಬದುಕುಳಿದಿದ್ದಳು; ದೇಶಭ್ರಷ್ಟತೆಯ ದುಃಖವನ್ನು ಅನುಭವಿಸಿದ್ದಳು; ಈ ಎಲ್ಲಾ ಅನ್ಯಾಯಗಳಿಗಿಂತಲೂ, ನೋಬೆಲ್ ಸಮಿತಿಯಿಂದಾದ ಅನ್ಯಾಯ ಆಕೆಯನ್ನು ಬಹಳವಾಗಿ ಕಾಡಿತ್ತು.

ಆಕೆ ತನ್ನ ಆತ್ಮಚರಿತ್ರೆಯನ್ನು ಬರೆಯಲಿಲ್ಲ; ಇತರರಿಗೆ ಬರೆಯುವ ಅಧಿಕಾರವನ್ನೂ ನೀಡಲಿಲ್ಲ; ತನ್ನ ಜೀವನದ ಹೋರಾಟದ ಬಗ್ಗೆ ಬಹಳ ಅಪರೂಪವಾಗಿ ಮಾತನಾಡಿದ್ದ ಆಕೆಯನ್ನು, ಇಳಿಯ ವಯಸ್ಸಿನಲ್ಲಿ ಅಭದ್ರತೆ ಮತ್ತು ಪ್ರತ್ಯೇಕತೆಗಳು ತೀವ್ರವಾಗಿ ಕಾಡಿದ್ದವು. ಒಬ್ಬ ಮಹಾನ್ ವಿಜ್ಞಾನಿಯಾಗಿದ್ದ ಲೀಸ್ ಮೈಟ್ನರ್, ತನ್ನ ಸಂಶೋಧನೆಯ ಎಲ್ಲಾ ವಿವರಗಳನ್ನು ಬಹಳ ನಿಖರವಾಗಿ ದಾಖಲಿಸಿದ್ದಳು. ಇಂತಹ ಶ್ರೀಮಂತವಾದ ಸಂಗ್ರಹದಿಂದ, ಆಕೆ ಜೀವನದಲ್ಲಿ ಎದುರಿಸಿದ ಅಸಾಧಾರಣವಾದ ಕಷ್ಟ-ನಷ್ಟಗಳ ಬಗ್ಗೆ ವಿವರಗಳು ದೊರಕಿವೆ. ನೋಬೆಲ್ ಸಮಿತಿಯ ಬಹಿಷ್ಕಾರವೊಂದೇ ಅಲ್ಲ, ಅವಳು ಬರ್ಲಿನ್ ಪ್ರಯೋಗಾಲಯದಲ್ಲಿ ಬಳಸಿದ್ದ ವಿದಳನ ಉಪಕರಣವನ್ನು ಮುಂದೆ ಬರ್ಲಿನ್ನಿನ ಮ್ಯೂಸಿಯಮ್ಮಿನಲ್ಲಿ ಇಟ್ಟಾಗಲೂ, ಸುಮಾರು ೩೫ ವರ್ಷಗಳ ಕಾಲ, ಅವಳ ಹೆಸರನ್ನು ಎಲ್ಲೂ ನಮೂದಿಸಿರಲಿಲ್ಲ.

ನೋಬೆಲ್ ಸಮಿತಿಯ ಈ ಲಿಂಗ ಬೇಧ ನೀತಿಯ ಅನ್ಯಾಯಕ್ಕೆ ಒಳಗಾದ ಮಹಿಳೆ ಕೇವಲ ಮೈಟ್ನರ್ ಒಬ್ಬಳೇ ಅಲ್ಲಾ, ಮುಂದೆ ೫೦ ಮತ್ತು ೬೦ರ ದಶಕದಲ್ಲಿ, ಡಾರ್ಕ್ ಮ್ಯಾಟರ್ ಅಸ್ತಿತ್ವವನ್ನು ದೃಢ ಪಡಿಸಿದ ವೆರಾ ರೂಬಿನ್, ಪಲ್ಸಾರ್ ಅನ್ವೇಷಣೆಯಲ್ಲಿ ನಿಖರವಾದ ಪಾತ್ರ ವಹಿಸಿದ ಜೋಸಲೀನ್ ಬೆಲ್ ಜೊತೆಗೂ ಇಂತಹುದೇ ರೀತಿಯಲ್ಲಿ ವರ್ತಿಸಿದ ನೋಬೆಲ್ ಸಮಿತಿ, ಇತಿಹಾಸದ ಪುಟಗಳಲ್ಲಿ ಕುರೂಪದ ದಾಖಲೆಯನ್ನು ಸೃಷ್ಟಿಸಿದರು. ಈ ಎಲ್ಲಾ ಸನ್ನಿವೇಶಗಳಲ್ಲೂ, ವೈಜ್ಞಾನಿಕ ಮನೋಭಾವನೆ ಮತ್ತು ನ್ಯಾಯದ ನೆರಳು ಕಾಣಸಿಗುವುದಿಲ್ಲ. ಜಾನಾ ಲೆವಿನ್, ಒಬ್ಬ ಭೌತಶಾಸ್ತ್ರಜ್ಞೆ ಮತ್ತು ಕಾದಂಬರಿ ಲೇಖಕಿ, ತಾನು ಬರೆದ ಅತ್ಯುತ್ತಮ ಪ್ರಬಂಧವೊಂದರಲ್ಲಿ, “ವಿಜ್ಞಾನಿಗಳು ತಮ್ಮ ಜೀವನವನ್ನೆಲ್ಲಾ ಬ್ರಹ್ಮಾಂಡದ ತನಿಖೆಯ ಸಂಶೋಧನೆಯಲ್ಲಿ ವಿನಿಯೋಗಿಸುವುದು, ಕೇವಲ ಒಂದು ಪ್ರಶಸ್ತಿಗಾಗಿ ಅಲ್ಲಾ, ಆದರೆ, ಮಹತ್ತರವಾದ ಅನ್ವೇಷಣೆಯೊಂದನ್ನು ನಡೆಸಿದಾಗ ಅದಕ್ಕೆ ನ್ಯಾಯವಾದ ಪುರಸ್ಕಾರ ಪಡೆಯುವುದು ಅವರ ಆಜನ್ಮಸಿದ್ಧ ಹಕ್ಕು; ಕೇವಲ ಮಹಿಳೆ ಎಂಬ ಕಾರಣದಿಂದಾಗಿ ಅದರಿಂದ ವಂಚಿತರಾಗುವುದು ಅತ್ಯಂತ ವಿಷಾದನೀಯ ಹಾಗೂ ಅವಮಾನಕರ ಸಂಗತಿ”, ಎಂದು ಬರೆಯುತ್ತಾಳೆ. ಏನಾದರೇನು, ಈ ೨೧ನೆಯ ಶತಮಾನದಲ್ಲೂ ಇನ್ನೂ ಮಹಿಳೆಯರ ವಿರುದ್ಧ ಇಂತಹ ದೌರ್ಜನ್ಯಗಳು ಅವ್ಯಾಹತವಾಗಿ ಜರಗುತ್ತಲೇ ಇವೆ. ಅದು ವಿಜ್ಞಾನವೊಂದೇ ಏನು, ಸಮಾಜದ ಎಲ್ಲಾ ರಂಗಗಳಲ್ಲೂ ಇಂದಿಗೂ ನಡೆಯುತ್ತಿರುವುದು ಮಾನವ ಸಂತತಿಗೆ ಅವಮಾನ!

ಜಯಂತ್ ವಿಷ್ಣು ನಾರ್ಲೀಕರ್ (JVN)- ಭಾರತೀಯ ವಿಜ್ಞಾನ ಲೋಕದ ಹೊಳೆ ಹೊಳೆಯುವ ಧ್ರುವತಾರೆ – ಡಾ ಉಮಾ ವೆಂಕಟೇಶ್ ಬರೆದ ಲೇಖನ

 ನಮ್ಮ ಭಾರತ ದೇಶದಲ್ಲಿ ಜ್ಞಾನ ವಿಜ್ಞಾನದ ಬೆಳಕನ್ನು ಹರಡುವ ಅನೇಕ ಜ್ವಲಂತ ನಕ್ಷತ್ರಗಳಿವೆ. ಈ ನಕ್ಷತ್ರಗಳ ಹೊಳಪನ್ನು ಅನೇಕ ಕ್ಷೇತ್ರಗಳು ಪ್ರತಿಫಲಿಸುತ್ತಿವೆ. ಆರೋಗ್ಯದಲ್ಲಾದರೆ ಆಯುರ್ವೇದವಿದೆ; ಗಣಿತದಲ್ಲಾದರೆ ಶೂನ್ಯದ ಕೊಡುಗೆಯಿದೆ; ಪಾಕಶಾಸ್ತ್ರದಿಂದ ಹಿಡಿದು ಪರಿಪಕ್ವವಾದ ಅನೇಕ ಕಲೆಗಳು, ಸಂಗೀತ, ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆಗಳು, ಚಳವಳಿಗಳು – ಅನೇಕಾನೇಕ ಧಾರೆಗಳು ಹರಿದ ನೆಲವದು. ಅಂತಹ ಧಾರೆಗಳಲ್ಲಿ ಒಂದು ಮಿನುಗುವ ಧ್ರುವತಾರೆ ಜಯಂತ್ ನಾರ್ಲೀಕರ್. ವಿಶ್ವಮಟ್ಟದಲ್ಲಿ ಅತ್ಯುತ್ತಮ ಭೌತಶಾಸ್ತ್ರದ ವಿಜ್ಞಾನಿಯಾಗಿ ಜಯಂತ್ ನಾರ್ಲೀಕರ್ ಖಭೌತ ಶಾಸ್ತ್ರದಲ್ಲೂ ಮಹತ್ತರ ಕೊಡುಗೆಯಿತ್ತು ಭಾರತದ ಕೀರ್ತಿ ರತ್ನವಾಗಿದ್ದಾರೆ. ಅವರ ಬಗ್ಗೆ ಡಾ.ಉಮಾ ವೆಂಕಟೇಶ್ ಸವಿವರವಾಗಿ, ಸುಲಲಿತವಾಗಿ ಬರೆದಿದ್ದಾರೆ. ಅವರ ಈ ಮತ್ತೊಂದು ವಿಜ್ಞಾನ-ವಿಶೇಷದ ಲೇಖನವನ್ನು ಓದಿ. ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಇತರ ಸಹೃದಯ ಓದುಗರೊಡನೆ ಹಂಚಿಕೊಳ್ಳಿ. ಸಂ

1964 ಕೊನೆಯ ದಿನಗಳವು; ದೇಶದಾದ್ಯಂತ ಎಲ್ಲಾ ವೃತ್ತಪತ್ರಿಕೆಗಳೂ ತಮ್ಮ ಮೊದಲ ಪುಟದಲ್ಲಿ, ಪ್ರಸಿದ್ಧ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಒಬ್ಬ ಯುವ ಭಾರತೀಯ ಪ್ರಾಧ್ಯಾಪಕ, ಮತ್ತು ಅವನ ಹಿರಿಯ ಸಂಶೋಧನಾ ಸಹಭಾಗಿ ಇಬ್ಬರೂ, ತಮ್ಮ ನೂತನ ಗುರುತ್ವಾಕರ್ಷಣೆಯ ಸಿದ್ಧಾಂತದಲ್ಲಿ, ಐನಸ್ಟೈನನನ್ನೂ ಮೀರಿಸಿದ ಪ್ರತಿಪಾದನೆಯನ್ನು ಮಾಡಲು ಸಾಧ್ಯವಾಗಿತ್ತು ಎನ್ನುವ ಬಿಸಿ ಸುದ್ದಿಯನ್ನು ಸಿಡಿಸಿದ್ದರು. ಆಗ ತಾನೇ ಲಂಡನ್ನಿನ ಪ್ರತಿಷ್ಟಿತ ರಾಯಲ್ ಖಗೋಳ ಸೊಸೈಟಿಯ ಸಭೆಯಲ್ಲಿ ಘೋಷಿಸಲಾಗಿದ್ದ ಈ

ಜಯಂತ್ ವಿಷ್ಣು ನಾರ್ಲೀಕರ್
ಜಯಂತ್ ವಿಷ್ಣು ನಾರ್ಲೀಕರ್ b 1938

ಸುದ್ದಿಯನ್ನು, ವೈಜ್ಞಾನಿಕ ಪ್ರಪಂಚವು ಬಹಳ ಉತ್ಸಾಹದಿಂದಲೇ ಸ್ವಾಗತಿಸಿತ್ತು. ಬ್ರಿಟಿಷರ ದಾಸ್ಯದಿಂದ ವಿಮುಕ್ತವಾದ ತರುಣ ಭಾರತ ದೇಶಕ್ಕೆ, ಅಂತಹ ಭಾರಿ ಮನ್ನಣೆಯ ಅಗತ್ಯವಿತ್ತು. ಸ್ವತಂತ್ರ ಭಾರತವು ಸಮಾಜದ ಸರ್ವ ರಂಗಗಳಲ್ಲೂ, ಅದರಲ್ಲೂ ವೈಜ್ಞಾನಿಕ ವಲಯದಲ್ಲಿ ಪಾಶ್ಚಿಮಾತ್ಯ ದೇಶಗಳೊಂದಿಗೆ ಸರಿಸಮನಾಗಿ ಹೆಜ್ಜೆಹಾಕುತ್ತಾ ಮುಂದುವರೆಯುವ ಉತ್ಸಾಹ ಮತ್ತು ತವಕಗಳನ್ನು ಹೊಂದಿದ್ದು, ದೇಶವೊಂದರ ವಸ್ತುಪ್ರಗತಿಯಲ್ಲಿ, ವಿಜ್ಞಾನವು ಒಂದು ಪ್ರಮುಖ ಪರಿವರ್ತನಾ ವಾಹನವೆಂದು ನಂಬಲಾಗಿತ್ತು. ಭಾರತೀಯ ವಿಜ್ಞಾನ ದಿಗಂತದಲ್ಲಿ ಈ ರೀತಿಯ ಒಂದು ಮಹಾಸ್ಫೋಟದಂತೆ ತಮ್ಮ ಛಾಪನ್ನು ಒತ್ತಿದ ಆ ತರುಣ ವಿಜ್ಞಾನಿಯೇ ಜಯಂತ್ ವಿಷ್ಣು ನಾರ್ಲೀಕರ್. ರಾತ್ರೋರಾತ್ರಿ ಮನೆಮಾತಾದ ಅವರ ಯಶಸ್ಸಿನ ಕಥೆಯನ್ನು ತಿಳಿಯಲು ಓದುಗ ತನ್ನ ಕಲ್ಪನೆಯನ್ನು ಬಹಳ ವಿಸ್ತರಿಸಬೇಕಿಲ್ಲ. ಉದಯೋನ್ಮುಖ ಮತ್ತು ಮಹತ್ವಾಕಾಂಕ್ಷಿ ಭಾರತೀಯ ವಿಜ್ಞಾನ ಲೋಕದ ಉಜ್ವಲ ತಾರೆ, ಹಾಗೂ ಅಪ್ರತಿಮ ಆದರ್ಶ ಮಾದರಿಯಾದ ಜಯಂತ್ ನಾರ್ಲೀಕರ್, ತಮ್ಮ ಅಸಾಧಾರಣ ಪ್ರತಿಭೆ ಮತ್ತು ವೈಜ್ಞಾನಿಕ ಸಾಧನೆಗಳಿಗೆ ಭಾರತ ಸರ್ಕಾರದ ಅತ್ಯುತ್ತಮ ನಾಗರೀಕ ಪುರಸ್ಕಾರವಾದ ಪದ್ಮಭೂಷಣ ಪ್ರಶಸ್ತಿಯನ್ನು ತಮ್ಮ ಕಿರಿಯ ವಯಸ್ಸಿನಲ್ಲೇ ಪಡೆದ ಪ್ರತಿಭಾವಂತ ವ್ಯಕ್ತಿ, ಹಾಗೂ ಈ ಪ್ರಶಸ್ತಿಗೆ ಪಾತ್ರರಾದ ಅತ್ಯಂತ ಕಿರಿಯ ವ್ಯಕ್ತಿಯೂ ಹೌದು.

1938ರ ಜುಲೈ 19ರಂದು, ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಪಟ್ಟಣದಲ್ಲಿ (ಅಂದು ಕೊಲ್ಲಾಪುರ ಒಬ್ಬ ಸ್ವತಂತ್ರ ಅರಸನ ರಾಜ್ಯಾಡಳಿತಕ್ಕೆ ಒಳಪಟ್ಟಿತ್ತು) ಜನಿಸಿದ ಜಯಂತ್ ನಾರ್ಲೀಕರ್ (JVN) ಅವರ ತಂದೆ ವಿಷ್ಣು ವಾಸುದೇವ್ ನಾರ್ಲೀಕರ್ (VVN), ವಾರಾಣಾಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಒಬ್ಬ ಪ್ರಸಿದ್ಧ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ತಾಯಿ ಸುಮತಿ ಸಂಸ್ಕೃತ ವಿದ್ವಾಂಸರೆನಿಸಿದ್ದರು. ಹಾಗಾಗಿ ಜಯಂತ್ ಅವರಿಗೆ ಇಂದು ಬಹುತೇಕವಾಗಿ ನಮಗೆಲ್ಲಾ ಕೊರತೆಯಿರುವ, ಒಂದು ಸುಂದರವಾದ ಶಾಸ್ತ್ರೀಯ ಸ್ಪರ್ಶ ಮತ್ತು ಅಭಿರುಚಿಗಳ ಉತ್ತಮ ಸಂಯೋಜನೆಯಾದ ಸಂಸ್ಕೃತ ಭಾಷೆಯ ಒಂದು ಸುಸಂಸ್ಕೃತ ಹಾಗೂ ಆದರ್ಶ ಪಾಲನೆಯು ಅವರ ಪಾಲಿಗೆ ಲಭ್ಯವಾಗಿತ್ತು. ಆದ್ದರಿಂದಲೇ ಜಯಂತ್ ತಮ್ಮ ಮಾತುಕತೆಗಳ ಮಧ್ಯದಲ್ಲಿ ಸಂಸ್ಕೃತ ಭಾಷೆಯ ಸೂಕ್ತ ಹಾಗೂ ಶ್ರೇಷ್ಠ ಉಲ್ಲೇಖಗಳನ್ನು ಲೀಲಾಜಾಲವಾಗಿ ಬೆರೆಸುತ್ತಾ ನಡೆದಾಗ ಆಶ್ಚರ್ಯವೆನಿಸುವುದಿಲ್ಲ. ಭಾರತದಲ್ಲಿ ಅಂದು ಸಾಮಾನ್ಯ ಸಾಪೇಕ್ಷತೆಯ ಬಗ್ಗೆ (General Relativity) ನಡೆಸುತ್ತಿದ್ದ ಪ್ರಥಮಾನ್ವೇಷಕ ಸಂಶೋಧನೆಯಲ್ಲಿ ತೊಡಗಿದ್ದ  ವಿಜ್ನಾನಿಗಳಲ್ಲಿ, ಜಯಂತ್ ಅವರ ತಂದೆ ವಿಷ್ಣು ನಾರ್ಲೀಕರ ಮತ್ತು ಕಲ್ಕತ್ತಾದ ಎನ್.ಆರ್.ಸೆನ್ (N.R.Sen) ಸೇರಿದ್ದರು. ಹೀಗೆ ಜಯಂತ್ ನಾರ್ಲೀಕರ್ ಹುಟ್ಟುವಾಗಲೇ ಸಾಪೇಕ್ಷತೆಯನ್ನು ತಮ್ಮ ಮೊದಲ “ಜನ್ಮಘುಂಟಿ” ಅಂದರೆ ಮೊದಲ ನೀರಿನ ಗುಟುಕೆಂಬಂತೆ ಕುಡಿಯುತ್ತಲೇ ಬೆಳೆದಿದ್ದರೆನ್ನಬಹುದು. ಆದರೂ ಸಹಾ ಆಶ್ಚರ್ಯಕರವೆಂಬ ರೀತಿಯಲ್ಲಿ ಆ ಗಮನಾರ್ಹವಾದ ದೀಕ್ಷೆಗೆ ತಕ್ಕಂತೆಯೇ ತಮ್ಮ ಜೀವನದಲ್ಲಿ ವೈಜ್ಞಾನಿಕ ಸಾಧನೆಗೈದರು ಎನ್ನುವುದು ಇಲ್ಲಿ ಮುಖ್ಯ.

ತಮ್ಮ ಶಾಲಾ ದಿನಗಳಿಂದಲೇ ಜೆ.ವಿ.ಎನ್ ಒಬ್ಬ ಅಸಾಧಾರಣನಾದ ಸರ್ವತೋಮುಖ ವಿದ್ಯಾರ್ಥಿಯಾಗಿದ್ದು, ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಕಗಳನ್ನು ಗಳಿಸುತ್ತಿದ್ದರು. ಅಷ್ಟೇ ಅಲ್ಲದೇ ಒಬ್ಬ ಕ್ರೀಡಾಳುವೂ ಆಗಿದ್ದು, ಉತ್ತಮ ಬ್ಯಾಡಮಿಂಟನ್ ಆಟಗಾರನಾಗಿದ್ದರು (ನಂತರ ದಿನಗಳಲ್ಲಿ ಟೆನಿಸ್ ಆಟಕ್ಕೆ ತಮ್ಮ ಆಸಕ್ತಿಯನ್ನು ಬದಲಿಸಿ, ಪುಣೆಯಲ್ಲಿ IUCAA ಸಂಸ್ಥೆಯ ನಿರ್ದೇಶಕರಾಗಿದ್ದಾಗ, ಪ್ರತಿ ದಿನ ಬೆಳಿಗ್ಗೆ ಟೆನಿಸ್ ಆಟದಲ್ಲಿ ಒಂದು ಸೆಟ್ ಆಡುವುದನ್ನು ತಪ್ಪಿಸುತ್ತಿರಲಿಲ್ಲ). ವಾರಾಣಾಸಿಯಲ್ಲಿ ಬೆಳೆದ ಜಯಂತ್ ಅವರು, ಉತ್ತರ ಭಾರತದ ಭಾಷೆ ಮತ್ತು ನಡವಳಿಕೆಗಳನ್ನು ರೂಢಿಸಿಕೊಂಡಿದ್ದರು. ತಮ್ಮ ಮಾತಾಪಿತೃಗಳಿಂದ ಬಳುವಳಿಯಾಗಿ ಬಂದಿದ್ದ ಮರಾಠಿಯ ನೇರವಾದ ಮತ್ತು ಶಿಸ್ತುಗಳೊಂದಿಗೆ ಮೇಳೈಸಿತ್ತಲ್ಲದೇ, ಮುಂದೆ ಅವರ ಕೇಂಬ್ರಿಡ್ಜಿನ ದಿನಗಳಲ್ಲೂ ಮತ್ತೊಮ್ಮೆ ಬಲವರ್ಧಿತವಾಗಿತ್ತು. ಅಷ್ಟೇ ಅಲ್ಲದೇ ಈ ಶಿಸ್ತು ಮನೆಯಲ್ಲಿ ಸದಾಕಾಲ ಅವರ ತಂದೆ ವಿಷ್ಣು ನಾರ್ಲೀಕರ್ ರೂಪದಲ್ಲಿ (VVN), ಮನೆಯಲ್ಲಿ ಒಂದು ಜೀವಂತ ಕೇಂಬ್ರಿಡ್ಜಿನಂತೆ ಕಂಡುಬರುತ್ತಿತ್ತು. ಈ ಸಾಂಸ್ಕೃತಿಕ ಮಾರ್ಗದರ್ಶನದ ಫಲಿತಾಂಶವನ್ನು, ಅವರ ಅದ್ಭುತವಾದ ವರ್ತನೆ ಮತ್ತು ನಡವಳಿಕೆಯ ವಿಶಿಷ್ಟತೆಯಲ್ಲಿ ಕಾಣಬಹುದಾಗಿತ್ತು. ಬನಾರಸ್ ವಿಶ್ವವಿದ್ಯಾಲಯದಂತಹ ಸ್ಥಳದ ಗತದಿನಗಳು, ಇಂತಹ ಸುಂದರವಾದ ಸಾಮಾಜಿಕ ತತ್ವಗಳನ್ನು ಪೋಷಿಸುತ್ತಿತ್ತು.

ಬನಾರಸ್ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದ ನಂತರ, ತಮ್ಮ ತಂದೆಯಂತೆ ಜೆವಿಎನ್ ಕೂಡಾ, ಪ್ರತಿಷ್ಟಿತ ಟಾಟಾ ವಿದ್ವತ್ ವೇತನವನ್ನು ಪಡೆದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಹೋದರು, ಹಾಗೂ ಅಲ್ಲಿನ ಅಸಾಧಾರಣವೆನಿಸಿದ ಗಣಿತದ ಟ್ರೈಪೋಸ್ ಪರೀಕ್ಷೆಯನ್ನು ದಾಖಲೆಯ ಸಮಯದಲ್ಲಿ ಮಾಡಿ ಮುಗಿಸಿ, ಸೀನಿಯರ್ ರಾಂಗ್ಲರ್ ಪದವಿ ಪಡೆದು ತಮ್ಮ ಕೀರ್ತಿಯನ್ನು ಮೆರೆದಿದ್ದರು. ಆ ಸಮಯದಲ್ಲಿ ಕೇಂಬ್ರಿಡ್ಜಿನಲ್ಲಿದ್ದ ಫ಼್ರೆಡ್ ಹಾಯ್ಲ್ ಎಂಬ ಪ್ರಸಿದ್ಧ ಭೌತಶಾಸ್ತ್ರಜ್ಞರು (Fred Hoyle), ಖಗೋಳಶಾಸ್ತ್ರದಲ್ಲಿ ಸಂಶೋಧನೆಗೆ ಹೆಸರುವಾಸಿಯಾಗಿದ್ದು, ಡಾಕ್ಟರೇಟ್ ಪದವಿಯ ಮಾರ್ಗದರ್ಶನಕ್ಕೆ ಬಹಳ ಬೇಡಿಕೆಯಲ್ಲಿದ್ದ ವ್ಯಕ್ತಿಯಾಗಿದ್ದರು. ಜಯಂತರ ಜೊತೆಯಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಬಳಗದಲ್ಲಿ, ಅತ್ಯಂತ ಪ್ರತಿಭಾವಂತರ ಸಾಲೇ ಇದ್ದು, ಅವರಲ್ಲಿ ಸ್ಟೀಫನ್ ಹಾಕಿನ್ಸ್ (Stephen Hawking), ಮಾರ್ಟಿನ್ ರೀಸ್ (Martin Rees), ಬ್ರಾಂಡನ್ ಕಾರ್ಟರ್ (Brandon Carter), ಮತ್ತು ಜಾರ್ಜ್ ಎಲ್ಲಿಸ್ (George Ellis) ರಂತಹ ಅತ್ಯಂತ ಸುಪ್ರಸಿದ್ಧರ ಗೋಷ್ಠಿಯೇ ಇತ್ತಲ್ಲದೇ, ಅವರೆಲ್ಲಾ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವ ವಿಜ್ಞಾನಿಗಳೆನಿಸಿದ್ದಾರೆ.

ಇಂತಹ ಅಸಾಧಾರಣ ಪ್ರತಿಭೆ, ಮತ್ತು ಬುದ್ಧಿವಂತಿಕೆಯ ಸಮೃದ್ಧಿಯ ಮಧ್ಯೆ, ಹಾಯ್ಲ್ ಅವರು, ಜಯಂತ್ ನಾರ್ಲೀಕರ್ ಅವರನ್ನು ತಮ್ಮ ಡಾಕ್ಟರೇಟ್ ವಿದ್ಯಾರ್ಥಿಯನ್ನಾಗಿ ಆರಿಸಿದ್ದು, ಒಬ್ಬ ವಿದ್ಯಾರ್ಥಿಯಾಗಿ ಅವರಿಗಿದ್ದ ಪ್ರಖ್ಯಾತಿ, ಅವರ ಬುದ್ದಿಮತ್ತೆ ಮತ್ತು ಸ್ಥಾನಮಾನಗಳನ್ನು ಎತ್ತಿ ತೋರುತ್ತದೆ. ಅಷ್ಟೇ ಅಲ್ಲದೇ, ಒಬ್ಬ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಗಣ್ಯನೀಯವೆನಿಸಿದ್ದ ಸ್ಮಿತ್ ಪ್ರಶಸ್ತಿಯನ್ನು ಪಡೆದಿದ್ದ ಜಯಂತ್, ಮುಂದೆ ಐದು ವರ್ಷಗಳ ನಂತರ ರೋಜರ್ ಪೆನ್ರೋಸ್ (Roger Penrose) ಮತ್ತು ಸ್ಟೀಫನ್ ಹಾಕಿನ್ಸ್ ಅಂತಹವರ ಭವ್ಯ ಸನ್ನಿಧಿಯಲ್ಲಿ ಗಳಿಸಿದ್ದ ಮತ್ತೊಂದು ಪ್ರತಿಷ್ಟಿತ ಪುರಸ್ಕಾರವಾದ ಆಡಮ್ಸ್ ಪ್ರಶಸ್ತಿ ಇಲ್ಲಿ ಖಂಡಿತವಾಗಿಯೂ ಉಲ್ಲೇಖಾರ್ಹವಾದ ಸಂಗತಿ. ತಮ್ಮ ಗುರು ಮತ್ತು ಮಾರ್ಗದರ್ಶಿ ಫ಼್ರೆಡ್ ಹಾಯ್ಲರಂತೆ, ಜಯಂತ್ ಕೂಡಾ ಸಂಪ್ರದಾಯಕವಲ್ಲದ, ಆದರೆ ಮೂಲಭೂತವೆನಿಸಿದ ವೈಜ್ಞಾನಿಕ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವುದನ್ನು ಇಷ್ಟಪಡುತ್ತಿದ್ದರು. ಖಗೋಳಶಾಸ್ತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುವ ಕಾರ್ಯವನ್ನು ಮುಂದುವರೆಸಿದ ಜಯಂತ್ ನಾರ್ಲೀಕರ್ ಅವರ ಕಾರ್ಯಕ್ಕೆ ದೊರೆಯಬೇಕಾಗಿದ್ದ ಅರ್ಹ ಮೆಚ್ಚುಗೆ ಸಿಗಲಿಲ್ಲ. ಅಂದು ಅವರು ನುಡಿದಿದ್ದ ಹಲವಾರು ಭವಿಷ್ಯವಾಣಿಗಳು ಮತ್ತು ಕಲ್ಪನೆಗಳು ಆ ಸಮಯಕ್ಕೆ ಮೀರಿದ ವಿಷಯಗಳೆನಿಸಿದ್ದು, ಅಂದು ಅವನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದಾಗ್ಯೂ ಮುಂದೆ ವೀಕ್ಷಣೆಗಳ ಮೂಲಕ ಪರಿಶೀಲಿಸಿದ ನಂತರ, ವೈಜ್ಞಾನಿಕ ಸಮುದಾಯದವರು ಆ ಕಲ್ಪನೆಗಳನ್ನು ಅಂಗೀಕರಿಸಿದ್ದಾರೆ. ವಿಜ್ಞಾನದಲ್ಲಿ ಯಾವುದೇ ಒಬ್ಬ ವಿಜ್ಞಾನಿಯ ಕಾರ್ಯದ ನಿಜವಾದ ಮಾಪನವು, ಹೊಸ ಕಲ್ಪನೆಯೊಂದನ್ನು ಪ್ರತಿಪಾದಿಸುವ, ಅಥವಾ ಯಾವುದೋ ಭೌತಿಕ ವಿದ್ಯಮಾನವೊಂದನ್ನು ಮುನ್ನುಡಿಯುವ ಸೃಜನಶೀಲತೆಯಾಗಿದ್ದು, ಅದನ್ನು ಒಂದಲ್ಲಾ ಒಂದು ದಿನ ವೈಜ್ಞಾನಿಕ ಪರಿಶೀಲನೆಗಳ ಮೂಲಕ ಎಲ್ಲರೂ ಸ್ವೀಕರಿಸುತ್ತಾರೆ. ಆ ರೀತಿಯಲ್ಲಿ ಜಯಂತ್ ನಾರ್ಲೀಕರ್ ಅವರ ಕೊಡುಗೆಗಳು ಇಂದಿಗೂ ಅತ್ಯಂತ ಉತ್ತಮವಾದ ವೈಜ್ಞಾನಿಕ ಸಾಧನೆಗಳ ನಡುವೆ ಇದೆಯಾದರೂ, ಅವುಗಳು ಅರ್ಹವಾದ ಗಮನ ಸೆಳೆಯುವಲ್ಲಿ ವಿಫಲವಾಗಿವೆ. ಖಗೋಳ ವೀಕ್ಷಣೆಗಳು ನಿರ್ಣಾಯಕ ಉತ್ತರಗಳನ್ನು ನೀಡುವಷ್ಟು ಸದಾ ತೀಕ್ಷ್ಣವಾಗಿಲ್ಲದಿರಬಹುದು, ಆದರೆ ಎಲ್ಲಾ ವೀಕ್ಷಣೆಗಳನ್ನು ಒಂದು ಸೈದ್ಧಾಂತಿಕ ಮಾದರಿಯ ಚೌಕಟ್ಟಿನಲ್ಲಿ ನಿರೂಪಿಸಲಾಗುತ್ತದೆ. ಈ ನಿರೂಪಣೆಗಳು ಅತ್ಯಂತ ಜಟಿಲ ಮತ್ತು ಸಂಕೀರ್ಣವಾದ ವಿಷಯವಾಗಿದೆ. ಪ್ರಾಮಾಣಿಕವಾಗಿ ಸತ್ಯವನ್ನರಸುವ ಪ್ರತಿಯೊಬ್ಬರ ಮನಸ್ಸು, ಒಂದು ಮೂಲಭೂತದ ಮಟ್ಟದಲ್ಲಿ ಮುಕ್ತವಾಗಿರಬೇಕು. ಆದರೆ ದುರದೃಷ್ಟವಶಾತ್ ಇಂದಿನ ವೈಜ್ಞಾನಿಕ ಸಮುದಾಯದಲ್ಲಿ ಇಂತಹದೊಂದು ಅಪೇಕ್ಷಣೀಯ ಮತ್ತು ತಾರ್ಕಿಕವಾದ ನಿಲುವು ಕಂಡುಬರುವುದಿಲ್ಲ. ಇಂದು ಪ್ರತಿಯೊಬ್ಬರ ಗಮನವೂ “ಗೆದ್ದೆತ್ತಿನ ಬಾಲಹಿಡಿಯುವ’’ ವಿಚಾರಗಳತ್ತ ಸೆಳೆಯಲ್ಪಟ್ಟಿದೆ, ಹಾಗೂ ಇತರ ಸಮರ್ಥವಾದ ಪರ್ಯಾಯಗಳನ್ನು ಯಾರೂ ಗೌರವಿಸದೆ ಬಹಿಷ್ಕರಿಸುತ್ತಿದ್ದಾರೆ. ಇದು ವಿಜ್ಞಾನಕ್ಕೆ ಮತ್ತು ಅದರ ಬೆಳವಣಿಗೆಗೆ ಆರೋಗ್ಯಕರವಲ್ಲ.

ಆದರೆ J.V.N ಯಾವಾಗಲೂ ಈ “ಗೆದ್ದೆತ್ತಿನ-ಬಾಲ ಹಿಡಿಯುವ ರೋಗಗ್ರಸ್ಥರ” ಒಂದು ಬಲಿಷ್ಠ ಸಮಾನಸ್ಕಂದರ ಗುಂಪನ್ನು ಕೆಣಕುವಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸುವುದರಲ್ಲಿ ಆಸಕ್ತಿಹೊಂದಿದ್ದು, ಆ ಗುಂಪಿನಲ್ಲಿ ಎದ್ದುಕಾಣುವ ವ್ಯಕ್ತಿಯೆನಿಸಿದ್ದಾರೆ. 1960ರ ಆರಂಭಿಕ ದಿನಗಳಲ್ಲಿ ಕೇಂಬ್ರಿಡ್ಜಿನಲ್ಲಿದ್ದ ಸಮಯದಿಂದಲೂ ಅವರಲ್ಲಿದ್ದ ಈ ವಿಶಿಷ್ಟ ಗುಣವನ್ನು ನಾವು, ಇಂದಿಗೂ ಕಾಣಬಹುದು. ಈ ಹಿಂದೆಯೇ ಹೇಳಿದಂತೆ, ಈ ಗುಣವನ್ನು ಅವರು ತಮ್ಮ ಗುರು ಫ಼್ರೆಡ್ ಹಾಯ್ಲರಿಂದ ಬಹುಶಃ ಸಂಪಾದಿಸಿರಬಹುದು. ಅದಕ್ಕಿಂತಲೂ ಮುಖ್ಯವಾಗಿ, ಹಾಯ್ಲರಂತೆಯೇ, ಜಯಂತ್ ನಾರ್ಲೀಕರ್ ಅವರಿಗೂ ತಮ್ಮದೇ ಆದ ಒಂದು ಸ್ವಂತಿಕೆಯಿದ್ದು, ಸದಾ ಕಾಲವೂ ತೀವ್ರವಾದ ಸ್ವತಂತ್ರ ಮನೋಭಾವ, ಹಾಗೂ ಗೆದ್ದೆತ್ತಿನ ಬಾಲವನ್ನನುಸರಿಸುವವರ ವಿರುದ್ಧ ಹೋರಾಡುವ ಒಂದು ಸ್ವಭಾವವಿದೆ. ಅಷ್ಟೇ ಅಲ್ಲದೇ, ತಮ್ಮ ಸ್ವಂತ ನಿರ್ಧಾರಣದ ಪ್ರಕಾರ, ಯಾವುದೇ ಒಂದು ದೃಢವಾದ ಸಿದ್ಧಾಂತವೂ, ಒಂದು ಸ್ವತಂತ್ರವಾದ, ಮತ್ತು ನಿಷ್ಪಕ್ಷವಾದ ಪರೀಕ್ಷೆಗೊಳಗಾಗಿ, ಅದನ್ನೆದುರಿಸಿ ನಿಲ್ಲದಿದ್ದಲ್ಲಿ, ಅದನ್ನು ಪ್ರಶ್ನಿಸಿ, ಅದಕ್ಕೆ ಸವಾಲೊಡ್ಡುವಂತಹ ಒಂದು ಧೈರ್ಯ ಮತ್ತು ಗಾಢ-ನಂಬಿಕೆಗಳು ಅವರಲ್ಲಿವೆ. ಇದನ್ನೇ ಅವರು ತಮ್ಮ ವೈಜ್ಞಾನಿಕ ವೃತ್ತಿಜೀವನದುದ್ದಕ್ಕೂ ನಡೆಸುತ್ತಲೇ ಬಂದಿದ್ದಾರೆ. ಅವರ ಆನಂತರದ ವೃತ್ತಿಪರ ಪ್ರತ್ಯೇಕೀಕರಣವು, ಸತ್ಯ ಮತ್ತು ತತ್ವಗಳನ್ನು ವಸ್ತುನಿಷ್ಠವಾಗಿ, ಹಾಗೂ ನಿಷ್ಪಕ್ಷಪಾತವಾಗಿ ಪರಿಶೀಲಿಸುವಾಗ, ಹಿಂಜರಿಯದೆ, ಖಚಿತವಾದ ನಿಷ್ಠೆಗೆ ಅಂಟಿಕೊಳ್ಳುವ ಒಂದು ಸ್ವಭಾವದಿಂದಲೇ ಉದ್ಭವಿಸಿದೆ ಎಂದು ಹೇಳಬಹುದು.

ಈಗಂತೂ ಬಿಗ್-ಬ್ಯಾಂಗ್ ಮಹಾಸ್ಫೋಟ ಸಿದ್ಧಾಂತದ ವಿರುದ್ಧ ದನಿಯೆತ್ತಿರುವ ಗುಂಪಿನ ಏಕೈಕ ಸದಸ್ಯರಾಗಿರುವ ಒಂದು ಹಾಸ್ಯಾಸ್ಪದ ಅಲ್ಪಸಂಖ್ಯಾತ ಕುಲದ JVN, ಅವರ ಪ್ರಚಲಿತ ವಿಶ್ವವಿಜ್ಞಾನದ ವಿರುದ್ಧದ ಟೀಕೆಯನ್ನು ಇನ್ನೂ ವಿಜ್ಞಾನಿಗಳು ಗೌರವದಿಂದ ಗಂಭೀರವಾಗಿಯೇ ಪರಿಗಣಿಸುತ್ತಿದ್ದಾರೆ. ಇದಕ್ಕೆ ಕಾರಣ ಅವರು ನೀಡಿರುವ ಹಲವಾರು ಮೂಲಭೂತ ಕೊಡುಗೆಗಳು. ಅವನ್ನು ಯಾರೂ ಕಡೆಗಣಿಸಲು ಸಾಧ್ಯವಾಗಿಲ್ಲ. ಅವುಗಳ ಸ್ವಂತಿಕೆ ಮತ್ತು ಸೃಜನಶೀಲತೆಯನ್ನು ಗುರ್ತಿಸಿರುವ ವೈಜ್ಞಾನಿಕ ಸಮುದಾಯವು, ಅವರನ್ನು 1994-1997ರ ಅವಧಿಯಲ್ಲಿ, ಅಂತರಾಷ್ಟ್ರೀಯ ಖಗೋಳಶಾಸ್ತ್ರ ಸಂಘದ, ವಿಶ್ವವಿಜ್ಞಾನ ಆಯೋಗದ ಅಧ್ಯಕ್ಷರನ್ನಾಗಿ ಚುನಾಯಿಸಿದ್ದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದೊಂದು ಆರೋಗ್ಯಕರ ಬೆಳವಣಿಗೆಯಾಗಿದ್ದು, ಪ್ರಾಮಾಣಿಕವಾಗಿ ಸತ್ಯವನ್ನರಸುವ ವಿಜ್ಞಾನದ ಅಭಿವೃದ್ಧಿಗೆ ಇದರ ಅವಶ್ಯಕತೆಯಿದೆ. JVN ನಿಜವಾಗಿಯೂ ಇಂತಹ ಪರಂಪರೆಯನ್ನು ಅನುಸರಿಸುತ್ತಾ ನಡೆದಿರುವ ಒಬ್ಬ ಆದರ್ಶ ವಿಜ್ಞಾನಿಯೆನಿಸಿದ್ದಾರೆ. ಜನಗಳ ನಿತ್ಯ ಜೀವನದಲ್ಲಿ ವಿಜ್ಞಾನವು ವಹಿಸಿರುವ ಅರ್ಥಪೂರ್ಣ ಪಾತ್ರದ ಬಗ್ಗೆ ಪ್ರವಚನಗಳನ್ನು ನೀಡಿ, ಅವರ ಮನಗಳಲ್ಲಿ ವೈಜ್ಞಾನಿಕ ಪದ್ಧತಿಗಳ ಬಗ್ಗೆ ತಿಳುವಳಿಕೆಯನ್ನು ನೀಡುವ ಕಾರ್ಯವನ್ನು, ಒಂದು ಪೂರ್ಣ ವಿಶ್ವಾಸ ಮತ್ತು ನಿಷ್ಠೆಯಿಂದ ನಡೆಸುತ್ತಾ ಬಂದಿರುವ ಜಯಂತ್ ನಾರ್ಲೀಕರ್, ಭಾರತದ ಜನಗಳ ಮನದಲ್ಲಿರುವ ಮೂಢನಂಬಿಕೆಗಳು, ಮತ್ತು ಜ್ಯೋತಿಶಾಸ್ತ್ರಗಳಲ್ಲಿರುವ ಅಂಧ ವಿಶ್ವಾಸದ ವಿರುದ್ಧ ತಮ್ಮ ಧ್ವನಿಯನ್ನು ನಿರಂತರವಾಗಿ ಎತ್ತಿ ಹಿಡಿದ ಒಬ್ಬ ಪ್ರಮುಖ ವಿಜ್ಞಾನಿಯೆನಿಸಿದ್ದಾರೆ.

photo-2

ತಮ್ಮ ಜನಪ್ರಿಯ ವಿಜ್ಞಾನ ಪ್ರವಚನಗಳನ್ನು ಎಲ್ಲಾ ವರ್ಗಗಳಲ್ಲೂ ನೀಡಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಗಳಲ್ಲಿ ತಮ್ಮ ಪ್ರಖ್ಯಾತಿಯನ್ನು ಮೆರೆದಿದ್ದಾರೆ. ಮೂಲಭೂತ ಭೌತಶಾಸ್ತ್ರ, ಖಭೌತಶಾಸ್ತ್ರ ಮತ್ತು ವಿಶ್ವವಿಜ್ಞಾನಗಳಲ್ಲಿ ಅವರು ನೀಡಿರುವ ಪ್ರಥಮಾನ್ವೇಷಕ ಕೊಡುಗೆಗಳು ಹಲವಾರು. ಅವರ ಅನೇಕ ಕಲ್ಪನೆಗಳು ಅವರು ಪ್ರತಿಪಾದಿಸಿದ ಸಮಯಕ್ಕೆ ಸ್ವಲ್ಪ ತೀವ್ರಗಾಮಿಯೆನಿಸಿದರೂ, ತರುವಾಯ ಸರಿಯೆಂದು ಸಾಬೀತಾಗಿವೆ. ಆದರೆ, ಆ ಕಲ್ಪನೆಗಳಿಗೆ ಸಿಕ್ಕಬೇಕಾದ ಅರ್ಹವಾದ ಮೆಚ್ಚುಗೆ ಇಲ್ಲಿಯವರೆಗೂ ದೊರೆತಿಲ್ಲದಿರುವುದು ಸ್ವಲ್ಪ ವಿಪರ್ಯಾಸವೇ ಅಲ್ಲದೇ, ಒಂದು ನಿಗೂಢವಾದ ವಿಷಯವೂ ಹೌದು.

ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವಿಶ್ವವಿಜ್ಞಾನದ ಸಂಶೋಧನೆಗೆ ಹೆಸರಾದ ಜಯಂತ್, ಜನಪ್ರಿಯ ಬಿಗ್-ಬ್ಯಾಂಗ್ ಮಾದರಿಗೆ ಪರ್ಯಾಯವಾದ, ಸ್ಥಿರಸ್ಥಿತಿ ವಿಶ್ವದ ಮಾದರಿಯನ್ನು ಹುಟ್ಟುಹಾಕಿದವರಲ್ಲಿ ಒಬ್ಬರು. ಗುರುತ್ವದ ಸರಹದ್ದುಗಳು, ಮತ್ತು ಮ್ಯಾಕ್ಸ್ ನಿಯಮಗಳು (Mach’s Principle), ಕ್ವಾಂಟಮ್ ವಿಶ್ವವಿಜ್ಞಾನ (Quantum Cosmology), ಹಾಗೂ ಭೌತಶಾಸ್ತ್ರದಲ್ಲಿ ಹಲವಾರು ಸಕ್ರಿಯವಾದ ಸಂಶೋಧನೆಗಳನ್ನು ನಡೆಸಿರುವ ಜಯಂತ್ ನಾರ್ಲೀಕರ್, ಇತ್ತೀಚೆಗೆ ಬಾಹ್ಯಾಕಾಶ ಸಂಶೋಧನೆಯಲ್ಲೂ ತಮ್ಮ ಹೆಗ್ಗಳಿಕೆಯನ್ನು ಮೆರೆದಿದ್ದಾರೆ. 1999ರಿಂದ, ಅಂತರಾಷ್ಟ್ರೀಯ ಖ್ಯಾತಿಯುಳ್ಳ ವಿಜ್ಞಾನಿಗಳ ತಂಡದ ನಾಯಕತ್ವವನ್ನು ವಹಿಸಿದ್ದಾರೆ. ಅವರು ನಡೆಸುತ್ತಿರುವ ಒಂದು ಪ್ರಥಮಾನ್ವೇಷಕ ಪ್ರಯೋಗದಲ್ಲಿ, ಸುಮಾರು 41 ಕಿಲೋಮೀಟರುಗಳವರೆಗಿನ ಎತ್ತರದವರೆಗೂ ವಾಯುವಿನ ನಮೂನೆಗಳನ್ನು ಸಂಗ್ರಹಿಸಿ, ಅದರಲ್ಲಿನ ಸೂಕ್ಷ್ಮಾಣು ಜೀವಿಗಳನ್ನು ವಿಶ್ಲೇಷಿಸಿ ನೋಡುತ್ತಿದ್ದಾರೆ. ಈ ರೀತಿಯಾಗಿ, 2001, ಮತ್ತು 2005ರಲ್ಲಿ ಸಂಗ್ರಹಿಸಿದ ಸ್ಯಾಂಪಲ್ಲುಗಳು, ಹಲವಾರು ಗುಂಪಿನ ಜೀವ ಕಣಗಳು, ಮತ್ತು ಬ್ಯಾಕ್ಟೀರಿಯಾಗಳನ್ನು ಪತ್ತೆಹಚ್ಚಿ, ನಮ್ಮ ಭೂಮಿಯನ್ನು ಸದಾಕಾಲ ಈ ಸೂಕ್ಷ್ಮಾಣುಜೀವಿಗಳು ಬಂದು ಅಪ್ಪಳಿಸುತ್ತವೆ, ಹಾಗೂ ಇಂತಹ ಜೀವಿಗಳೇ ನಮ್ಮ ಭೂಮಿಯಲ್ಲಿ ಜೀವದ ಬೀಜವನ್ನೂ ಬಿತ್ತಿರಬಹುದು ಎನ್ನುವ ಕುತೂಹಲಕರ ಸಾಧ್ಯತೆಗಳ ಬಗ್ಗೆ ವಿಚಾರವನ್ನು ಪ್ರಾರಂಭಿಸಿದೆ. ವ್ಹೀಲರ್-ಫ಼ೈನಮನ್ ಸಿದ್ಧಾಂತದ ಸಾಮಾನ್ಯೀಕರಣ (Generalization of Wheeler-Feynman’s Theory), ತಾರಾಗಣಗಳ ಕೇಂದ್ರಭಾಗದಲ್ಲಿ ಭಾರಿ ಕಪ್ಪುಕುಳಿಗಳಿರಬಹುದಾದ ಸಾಧ್ಯತೆಗಳು, ಕ್ವಾಂಟಮ್ ವಿಶ್ವವಿಜ್ಞಾನ ಮತ್ತು ವಿಶ್ವದ ವಿಸ್ತರಣೆಯ ಕಲ್ಪನೆಯನ್ನು 15 ವರ್ಷಗಳು ಮುಂಚಿತವಾಗಿ ನಿರೀಕ್ಷಣೆಮಾಡಿದ್ದ ವಿಚಾರ, ಹೀಗೆ ಅವರ ಹಲವಾರು ಪ್ರಥಮಾನ್ವೇಷಕ ಸಂಶೋಧನೆಗಳಿಗೆ ಸಿಗಬೇಕಾಗಿದ್ದ ಮನ್ನಣೆ ಅವರಿಗೆ ಸಿಕ್ಕಿಲ್ಲ.

ತಮ್ಮ ಅದ್ಭುತವಾದ ಪುಸ್ತಕಗಳಿಂದ, ಜಗತ್ಪ್ರಸಿದ್ಧ ಶಿಕ್ಷಕರೆನಿಸಿರುವ ಜಯಂತ್ ನಾರ್ಲೀಕರ್, ಜನಪ್ರಿಯ ವಿಜ್ಞಾನದ ಪುಸ್ತಕಗಳನ್ನು ರಚಿಸಿ, ಎಳೆಯ ಮನಗಳನ್ನು ವಿಜ್ಞಾನದತ್ತ ಕೊಂಡೊಯ್ಯಲು ಪ್ರೇರೇಪಿಸುತ್ತಿದ್ದಾರೆ. ವಯಸ್ಸಿನಲ್ಲಿ ತಮಗಿಂತ ಹಿರಿಯ ಮತ್ತು ಕಿರಿಯರಿಬ್ಬರಿಗೂ ಒಬ್ಬ ಅಪೂರ್ವ ಮಾರ್ಗದರ್ಶಕರೆನಿಸಿರುವ ಅವರು, 1972ರಲ್ಲಿ ತಾವು  ಭಾರತಕ್ಕೆ ಮರಳಿದ ನಂತರ, ಕಲಕತ್ತಾದ ಪ್ರಸಿದ್ಧ ಪ್ರೆಸಿಡೆನ್ಸಿ ಕಾಲೇಜಿನ ಎ.ಕೆ. ರಾಯ್ ಚೌಧುರಿಯಂತಹ ಅಪೂರ್ವ ಪ್ರತಿಭೆಯನ್ನು ಹೊರತರುವುದರಲ್ಲಿ ಸಫಲರಾದರು. ಇಂದು ರಾಯ್ ಚೌಧುರಿಯ ಶಿಷ್ಯರು ತಮ್ಮ ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದವರಾಗಿದ್ದಾರೆ. ಜಯಂತ್ ಭೌತಶಾಸ್ತ್ರದ ತಮ್ಮ ತೀವ್ರ ಕಲ್ಪನೆಗಳನ್ನು ತಮ್ಮ ವಿದ್ಯಾರ್ಥಿಗಳ ಮೇಲೆ ಎಂದೂ ಹೇರಿದವರಲ್ಲ. ಅವರ ವಿದ್ಯಾರ್ಥಿಗಳಿಗೆ ತಮ್ಮ ಕಲ್ಪನೆಗಳನ್ನು ಮುಂದುವರೆಸಿ ಸಂಶೋಧನೆ ನಡೆಸುವ ಸಂಪೂರ್ಣ ಸ್ವಾತಂತ್ರ್ಯವಿದ್ದು, ಇದು ಜಯಂತ್ ಅವರ ಭೌತಿಕ  ದೃಢನಿಷ್ಠೆ ಮತ್ತು ಪ್ರಾಮಾಣಿಕತೆಗಳಿಗೆ ಜ್ವಲಂತ ಸಾಕ್ಷಿಯಾಗಿದೆ.

ಭಾರತೀಯ ವಿಜ್ಞಾನ ಪ್ರಪಂಚಕ್ಕೆ ಜಯಂತ್ ನಾರ್ಲೀಕರ್ ನೀಡಿರುವ ಅತ್ಯುತ್ತಮ ಕೊಡುಗೆಯೆಂದರೆ, ಪುಣೆಯ ವಿಶ್ವವಿದ್ಯಾಲಯದ ಆವರಣದಲ್ಲಿ, ಅವರು ಕಟ್ಟಿ ಬೆಳೆಸಿರುವ ವಿಶ್ವದ ಅಗ್ರಶ್ರೇಣಿಯ ಖಭೌತಶಾಸ್ತ್ರ ಸಂಸ್ಥೆಯಾದ, ಅಂತರ ವಿಶ್ವವಿದ್ಯಾಲಯ ಖಗೋಳಶಾಸ್ತ್ರ ಮತ್ತು ಖಭೌತಶಾಸ್ತ್ರ ಕೇಂದ್ರ (Inter University Center For Astronomy And Astrophysics-IUCAA), ಸಂಸ್ಥೆಯಾಗಿದೆ. ತಮ್ಮ ಕನಸುಗಳು ಮತ್ತು ದೃಷ್ಟಿಕೋನದಲ್ಲಿ, ಎಲ್ಲರನ್ನೂ ಸಮಭಾಗಿಯನ್ನಾಗಿ ಮಾಡುವ ಅವರ ಕಲೆ ನಿಜಕ್ಕೂ ಒಂದು ರೀತಿಯಲ್ಲಿ ಅಲೌಕಿಕವೆನ್ನಬಹುದು. ಸಂಸ್ಥೆಯ ಪ್ರಥಮ ನಿರ್ದೇಶಕರಾಗಿ, ಈ ಸಂಸ್ಥೆಯನ್ನು ಒಂದು ಉನ್ನತ ಮಟ್ಟದಲ್ಲಿ ನಿಲ್ಲಿಸುವ ಅವರ ಪ್ರಯತ್ನದಲ್ಲಿ ತಮ್ಮ ಸಹೋದ್ಯೋಗಿಗಳೊಡನೆ ಅವರ ಸಹಭಾಗಿತ್ವ ಸರ್ವರೀತಿಯಲ್ಲೂ ಪ್ರಜಾಪ್ರಭುತ್ವ ವಿಚಾರಕ್ಕೆ ಒಳಪಟ್ಟಿದೆ. ಇಂದು IUCAA ಸಂಸ್ಥೆಯ ಯುವ ವಿಜ್ಞಾನಿಗಳು, ಹಲವು ಹತ್ತು ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. ಸರಳತೆ ಮತ್ತು ಸಜ್ಜಿನಿಕೆಗಳ ಸಾಕಾರವಾಗಿರುವ ಜಯಂತ್, ನಾಲ್ಕು ತಲೆಮಾರಿನ ಯುವಜನತೆಗೆ ಆದರ್ಶಪ್ರಾಯವಾಗಿದ್ದು, ಪ್ರೇರಣೆಯಾಗಿದ್ದಾರೆ. ಭಾರತೀಯ ವಿಜ್ಞಾನ ಲೋಕದ ಅಪರೂಪ ತಾರೆಯೆನಿಸಿದ ಜಯಂತ್ ನಾರ್ಲೀಕರ್ ಅವರ ಸಾಧನೆಗಳಿಗೆ ದೊರೆತಿರುವ ಪ್ರಶಸ್ತಿ ಮತ್ತು ಪುರಸ್ಕಾರಗಳ ಒಂದು ಪಟ್ಟಿಯೇ ಇದೆ.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಗೌರವಕ್ಕೆ ಪಾತ್ರರಾದ ಇವರು ಇದುವರೆಗೂ, ಫ಼್ರೆಂಚ್ ಖಗೋಳ ಸಂಘದ ಅಸೊಸಿಯೇಟ್, ರಾಯಲ್ ಖಗೋಳಶಾಸ್ತ್ರ ಸಂಘದ ಅಸೋಸಿಯೇಟ್, UNESCO ಪ್ರಶಸ್ತಿ, ವರ್ಲ್ಡ್ ಅಕ್ಯಾಡೆಮಿ ಆಫ಼್ ಸೈನ್ಸಸ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇವರ ಪ್ರತಿಭೆಯನ್ನು ಮೆಚ್ಚಿ ಭಾರತ ಸರ್ಕಾರ ಇವರಿಗೆ 1965ರಲ್ಲಿ ಪದ್ಮಭೂಷಣ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಇವರಾಗಿದ್ದಾರೆ. ಇದರ ಜೊತೆಗೆ, ಭಾರತ ಸರ್ಕಾರದ ಮತ್ತೊಂದು ಮನ್ನಣೆ ಪದ್ಮವಿಭೂಷಣವನ್ನೂ 2004ರಲ್ಲಿ ನೀಡಲಾಯಿತು. ರೇಡಿಯೋ-ದೂರದರ್ಶನದ ಜನಪ್ರಿಯ ವಿಜ್ಞಾನ ಕಾರ್ಯಕ್ರಮಗಳ ಮೂಲಕವೂ ಇವರು ಮನೆಮಾತಾಗಿರುವ ವ್ಯಕ್ತಿ. ತಮ್ಮ ಮೊಮ್ಮಕ್ಕಳನ್ನು ನಮ್ಮ ದೇಶದ ಅಜ್ಜ-ಅಜ್ಜಿಯರು, ಜಯಂತ್ ನಾರ್ಲೀಕರಂತೆ ಕೀರ್ತಿವಂತನಾಗು ಎಂದು ಹರಸುವ ಮಟ್ಟಿಗೆ ಪ್ರಖ್ಯಾತಿ ಪಡೆದ ಜಯಂತ್ ನಾರ್ಲೀಕರ್, ಭಾರತೀಯ ವಿಜ್ಞಾನ ಲೋಕದ ಮಹಾಮೇಧಾವಿಗಳ ಸಾಲಿನಲ್ಲಿ ಅಗ್ರಪಂಕ್ತಿಯವರು ಎಂಬ ಮಾತಿನಲ್ಲಿ ಯಾವ ಸಂಶಯವೂ ಇಲ್ಲ.

ಈ ಅಪರೂಪದ ವಿಜ್ಞಾನಿ ಮತ್ತು ಅವರ ಸರಳತೆ ಮತ್ತು ಸಜ್ಜನಿಕೆಗಳನ್ನು ಬಹಳ ಹತ್ತಿರದಿಂದ ಕಾಣುವ ಸುವರ್ಣಾವಕಾಶ ನನಗೆ ದೊರೆತಿತ್ತು. ೧೯೯೧ರಲ್ಲಿ ಮದುವೆಯಾದಾಗ, ನನ್ನ ಪತಿ ಸತ್ಯಪ್ರಕಾಶ್ ಇದೇ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಾಗಾಗಿ ಈ ಲೇಖನದಲ್ಲಿ ಉಲ್ಲೇಖವಾಗಿರುವ ಜಯಂತ್ ನಾರ್ಲೀಕರ್ ಅವರ ವ್ಯಕ್ತಿತ್ವದ ಸಂಗತಿಗಳು ನೂರಕ್ಕೆ ನೂರು ಸತ್ಯವಾದ ವಿಷಯಗಳು. ಸುಮಾರು ೪ ವರ್ಷಗಳ ಕಾಲ, ಪುಣೆಯ Inter University For Astronomy and Astrophysics 1%e0%b2%9c%e0%b2%af%e0%b2%82%e0%b2%a4%e0%b3%8d-%e0%b2%a8%e0%b2%be%e0%b2%b0%e0%b3%8d%e0%b2%b2%e0%b3%80%e0%b2%95%e0%b2%b0%e0%b3%8d-%e0%b2%85%e0%b2%b5%e0%b2%b0-%e0%b2%aa%e0%b2%a4%e0%b3%8d%e0%b2%a8ಸಂಸ್ಥೆಯಲ್ಲಿ, ಜಯಂತ್ ನಾರ್ಲೀಕರ್ ಅವರ ಮನೆಯ ಪಕ್ಕದಲ್ಲೇ ವಾಸಿಸುತ್ತಿದ್ದ ನಮಗೆ, ಅವರ ವ್ಯಕ್ತಿತ್ವದ ಉತ್ತಮ ಪರಿಚಯವಿದೆ.

ಇಂದಿನ ವಿಜ್ಞಾನಿಗಳಲ್ಲಿ ಬಹಳ ವಿರಳವೆನಿಸಿದ ಅನೇಕ ಸದ್ಗುಣಗಳನ್ನು ಜಯಂತ್ ಅವರಲ್ಲಿ ಕಾಣಬಹುದು. ಇಂತಹ ಅಪರೂಪ ವ್ಯಕ್ತಿಯ ಮಡದಿ ಡಾ ಮಂಗಳಾ ನಾರ್ಲೀಕರ್, ಇವರಿಗೆ ತಕ್ಕ ಬಾಳಸಂಗಾತಿ. ಮಂಗಳಾ ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಅಷ್ಟೊಂದು ದೊಡ್ಡ ವಿಜ್ಞಾನಿಯ ಪತ್ನಿ, ಸ್ವತಃ ಉತ್ತಮ ಗಣಿತ ತಜ್ಞೆಯಾದ ಆಕೆಯ ಸರಳತೆಗೆ ನಾನು ಮಾರುಹೋಗಿದ್ದೇನೆ. ಪತಿ-ಪತ್ನಿಯರಿಬ್ಬರೂ ಆದರ್ಶಪ್ರಾಯರು. ಅವರ ಮೂವರು ಹೆಣ್ಣುಮಕ್ಕಳು ಅವರಿಂತ ಬೇರೆಯಲ್ಲ – ಇಂದು ವಿಜ್ಞಾನಿಗಳೆನಿಸಿ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯವನ್ನು ನಡೆಸಿದ್ದಾರೆ. ಇಂದಿನ ತರುಣ ಪೀಳಿಗೆಯ ವಿಜ್ಞಾನಿಗಳು ಇವರಿಂದ ಕಲಿಯಬೇಕಾದ ಬಹಳ ವಿಷಯಗಳಿವೆ. ಜಯಂತ್ ನಾರ್ಲೀಕರ್ ಅವರಂತಹ ವ್ಯಕ್ತಿಗಳನ್ನು ಇಂದಿನ ಸಮಯದಲ್ಲಿ ನೋಡುವುದು ಬಹಳ ಅಪರೂಪವೆನ್ನಬಹುದು.

( ಲೇಖನದ ಪ್ರೇರಣೆ : Living Legends in Indian Science- Jayant Vishnu Narlikar, by Dr Naresh Dadhich, Current Science, July 2014.)

ಡಾ ಉಮಾ ವೆಂಕಟೇಶ್ಸ್ಟೇಟ್ ಕಾಲೇಜ್, ಪೆನ್ಸಿಲ್ವೇನಿಯಾ, ಯು.ಎಸ್.ಎ