ಬಾಲ್ಯದ ನೆನಪುಗಳು – ಜಿ ಎಸ್ ಶಿವಪ್ರಸಾದ್

ಪ್ರಿಯರೇ, ಬಾಲ್ಯದ ನೆನಪುಗಳ ಸರಣಿಯ ಪರಿಣಾಮ ಹೇಗಿದೆಯೆಂದರೆ, ಅನಿವಾಸಿಯ ಸ್ಥಾಪಕ-ಸದಸ್ಯರಲ್ಲೊಬ್ಬರಾದ ಜಿ ಎಸ್ ಶಿವಪ್ರಸಾದ್ ತಮ್ಮ ನೆನಪಿನ ಅಟ್ಟ ಹತ್ತಿ, ಒಂದಷ್ಟು ಕಡತಗಳನ್ನು ಝಾಡಿಸಿ ಕೆಳಗಿಳಿಸಿ, ಕೆಲವು ಮರೆಯದಂಥ ಸ್ವಾರಸ್ಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅದರೊಡನೆ ಆಯ್ದ ಚಿತ್ರಗಳನ್ನೂ ಅಲ್ಲಲ್ಲಿ ಹೆಣೆದಿದ್ದಾರೆ. ಓದಿ, ನಕ್ಕು ಮಜಾ ತೊಗೊಳ್ಳೋಣ ಬನ್ನಿ. – ಎಲ್ಲೆನ್ ಗುಡೂರ್ (ಸಂ.)

೧. ಅಣ್ಣ ಜಯದೇವನೊಂದಿಗೆ. ೨. ಸ್ಕೂಟರ್ ಸವಾರಿ

1963ರ ವೇಳೆಗೆ ಮೈಸೂರು ಯುನಿವರ್ಸಿಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆಯವರಿಗೆ ಹೈದರಾಬಾದಿನ ಉಸ್ಮಾನಿಯಾ ಯುನಿವರ್ಸಿಟಿಯಲ್ಲಿ ಬೋಧಕರಾಗುವ ಕರೆ ಬಂದಿತ್ತು.  ಅವರು ಮುಂಚಿತವಾಗಿ ಅಲ್ಲಿ ತೆರಳಿ  ಯುನಿವೆರ್ಸಿಟಿ ಕ್ಯಾಂಪಸ್ಸಿನಲ್ಲಿ ಒಂದು ಮನೆಮಾಡಿ ನಮ್ಮನ್ನೆಲ್ಲಾ ಕರೆದುಕೊಂಡು ಹೋಗುವುದಕ್ಕೆ ಸಿದ್ಧತೆ ಮಾಡಿಕೊಂಡರು.  ನನಗೆ ಆಗ ಏಳು ವರ್ಷ ವಯಸ್ಸಾಗಿತ್ತು.  ದೂರದ ಹೈದರಾಬಾದಿಗೆ ಆಗಿನ ಕಾಲಕ್ಕೆ ದೀರ್ಘ ಪ್ರಯಾಣ ಎನ್ನಬಹುದು.  ಹೊಸ ಜಾಗ, ಹೊಸ ಭಾಷೆ ಇವುಗಳ ಬಗ್ಗೆ ನಾನು ಬಹಳ ಪುಳಕಿತನಾಗಿದ್ದೆ.

ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಹೈದರಾಬಾದಿಗೆ ರೈಲು ಪ್ರಯಾಣ ಕೈಗೊಂಡೆವು.   ಚಿಕ್ಕಂದಿನಿಂದ ನನಗೆ ರೈಲು  ಮತ್ತು ರೈಲು ಪ್ರಯಾಣ ಬಹಳ ವಿಸ್ಮಯವನ್ನು ಮತ್ತು ಸಂತೋಷವನ್ನು ನೀಡಿದ್ದವು.  ಇದಕ್ಕೆ  ಕೆಲವು  ಕಾರಣಗಳಿದ್ದವು.  ನನ್ನ ಬಾಲ್ಯದಲ್ಲಿ ಬೇಸಿಗೆ ರಜವನ್ನು ತರೀಕೆರೆಯಲ್ಲಿದ್ದ  ನನ್ನ ಅಜ್ಜನ  (ತಾಯಿಯ ಕಡೆ) ಮನೆಯಲ್ಲಿ ಕಳೆಯುತ್ತಿದ್ದೆವು.  ಅಜ್ಜನ ಮನೆ ಹತ್ತಿರವೇ ರೈಲ್ವೆ ಹಳಿ  ಇದ್ದು ಹಲವಾರು ಬಾರಿ ಶಿವಮೊಗ್ಗಕ್ಕೆ ಸಾಗುವ ರೈಲು ಹಾದುಹೋಗುತ್ತಿತ್ತು.  ರೈಲಿನ ‘ಕೂ’ ಎಂಬ ಶಬ್ದ ಕೇಳಿದ ಕೂಡಲೇ ನಾನು ಮತ್ತು ನನ್ನ ಕಸಿನ್ (ಚಿಕ್ಕಮ್ಮನ ಮಗಳು) ಮಾಡುತ್ತಿದ್ದುದನ್ನು ಬಿಟ್ಟು ರೈಲ್ವೆ ಹಳಿ ಬಳಿ ಓಡಿಹೋಗಿ ನಿಂತು ‘ಡಬ ಡಬ’ ಎಂದು ಶಬ್ದ ಮಾಡುತ್ತಿದ್ದ ರೈಲನ್ನು ಬೆರಗಿನಿಂದ ನೋಡಿ ಎಂಜಿನ್ ಡ್ರೈವರುಗಳಿಗೆ, ಪ್ರಯಾಣಿಕರಿಗೆ ಕೈ ಬೀಸಿ ಟಾಟಾ ಮಾಡಿ ರೈಲು ದೂರ ಸಾಗುವವರೆಗೆ ದೃಷ್ಟಿಸಿ, ಅದು ಮರೆಯಾದಾಗ ಖುಷಿಯಿಂದ ಧನ್ಯತೆಯಿಂದ ಮನೆಗೆ ವಾಪಸ್ಸಾಗುತ್ತಿದೆವು.  ಕೆಲವೊಮ್ಮೆ ರೈಲು ಬರುವ ಮುಂಚಿತವಾಗಿ ಅಲ್ಲಿ ನಮ್ಮ ಬಿಡಿ ಪೈಸೆಗಳನ್ನು ಹಳಿಯ ಮೇಲೆ ಇಟ್ಟು  ರೈಲು ಹೋದಮೇಲೆ ಅದು ಚಪ್ಪಟ್ಟೆಯಾಗುವುದನ್ನು ನೋಡಿ ರೈಲಿನ ಅಗಾಧವಾದ ಶಕ್ತಿಯನ್ನು ಕಣ್ಣಾರೆ ಕಂಡು ಬೆರಗಾಗುತ್ತಿದ್ದೇವು.  ಈ ವಿಚಾರದ ಬಗ್ಗೆ ಅಪ್ಪ,  ಅಮ್ಮ ಅಥವಾ ಅಜ್ಜನಿಗೆ ಸುಳಿವು ಕೊಡುತ್ತಿರಲಿಲ್ಲ.

ಹೈದರಾಬಾದಿಗೆ ಸುಮಾರು 24 ಗಂಟೆಗಳ ಪಯಣ. ಆಂಧ್ರಪ್ರದೇಶದ ಅನಂತಪುರ, ಗುಂತಕಲ್, ಕರ್ನೂಲ್  ಹೀಗೆ ಅನೇಕ ಊರುಗಳನ್ನು ದಾಟಿ ಸಾಗುವ ಪಯಣದಲ್ಲಿ ಅನೇಕ ರೈಲ್ವೆ ಸ್ಟೇಷನ್ನು,  ಅಲ್ಲಿಯ  ತರಾವರಿ ಪ್ರಯಾಣಿಕರು, ತಿಂಡಿಗಳನ್ನು ಮಾರುವವರು, ವಾಸನೆ  ಮತ್ತು  ನೋಟ  ನನ್ನ ಪಂಚೇಂದ್ರಿಯಗಳನ್ನು ಚುರುಕುಗೊಳಿಸಿದ್ದವು.  ರೈಲಿನ ಬೋಗಿಯಲ್ಲಿ  ಮೂರು ಮಜಲಿದ್ದ ಸ್ಲೀಪರ್ ನಮ್ಮ ಸಂಸಾರಕ್ಕೆ ಸೂಕ್ತವಾಗಿತ್ತು. ಕಿಟಕಿ ಬದಿಯಲ್ಲಿ ಕೂರಲು ನಾನು, ಅಣ್ಣ ಮತ್ತು ಅಕ್ಕನ ಜೊತೆ ಜಗಳವಾಡಿ ಜಾಗ ಗಿಟ್ಟಿಸಿಕೊಳ್ಳುತ್ತಿದ್ದೆ.  ಊಟದ ಸಮಯಕ್ಕೆ ಸರಿಯಾಗಿ ರೈಲ್ವೆ ಸಿಬ್ಬಂದಿಗಳು ಒಂದರ ಮೇಲೊಂದು 8-10  ಸ್ಟೀಲ್ ಊಟದ ತಟ್ಟೆಗಳನ್ನು  ಸರ್ಕಸ್ ಮಾಡುತ್ತಾ ಹೊತ್ತು ತರುತ್ತಿದ್ದರು.  ಕೆಲವು ಸಮಯದ ನಂತರ ಇನ್ನೊಬ್ಬ ಬಂದು ತಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ .  ಸಂಜೆ ವೇಳೆಗೆ ಮತ್ತೊಬ್ಬ ಸಿಬ್ಬಂದಿ 6 ಕಾಫಿ ಮತ್ತು ಟೀ ಲೋಟಗಳನ್ನು ವರ್ತುಲಾಕಾರದ  ಲೋಹದ ಹಿಡಿಯೊಳಗೆ ಹಿಡಿದು ತರುತ್ತಿದ್ದ.  ಧೀರ್ಘ ಪ್ರಯಾಣ ಮಾಡುವವರು ರೈಲನ್ನು ಇಳಿಯುವ ಪ್ರಮೇಯವೇ ಇರಲಿಲ್ಲ. ಕೂತಲ್ಲೇ ಎಲ್ಲ ಸರಬರಾಜಾಗುತ್ತಿತ್ತು. ಇನ್ನೊಂದು ವಿಚಾರ ನಾನು ಗಮನಿಸಿದ್ದು;  ಮೈಸೂರು ಶಿವಮೊಗ್ಗ ರೈಲುಗಳಲ್ಲಿ ಕಾಣುತ್ತಿದ್ದ ಮತ್ತು ಕಾಡುತ್ತಿದ್ದ ಅಂಧ ಭಿಕ್ಷುಕರು, ಹಾರ್ಮೋನಿಯಂ ಹಿಡಿದು ಸಿನಿಮಾ ಹಾಡುಗಳನ್ನು ಅಥವಾ ದಾಸರ ಪದಗಳನ್ನು ಹಾಡುತ್ತ ಬರುತ್ತಿದ್ದ  ವ್ಯಕ್ತಿ ಮತ್ತು ಅವನೊಡನೆ ಚಿಲ್ಲರೆ ಸಂಗ್ರಹಿಸಲು ಒಂದು ಲೋಹದ  ಮಗ್ಗನ್ನು (Mug)   ಹಿಡಿದು ಚಿಲ್ಲರೆ ಕಾಸುಗಳನ್ನು   ‘ಝಲ್  ಝಲ್’  ಎಂದು ಕುಲುಕುತ್ತಾ ದೈನ್ಯ ದೃಷ್ಟಿಯನ್ನು ಬೀರುತ್ತಾ ಬರುವ ಪುಟ್ಟ ಬಾಲಕಿ ಈ  ಬೆಂಗಳೂರು-ಹೈದರಾಬಾದ್ ಎಕ್ಸ್ ಪ್ರೆಸ್  ರೈಲುಗಳಲ್ಲಿ  ಕಾಣುತ್ತಿರಲಿಲ್ಲ. ಇಲ್ಲಿ ಎಲ್ಲವು ಒಂದು ರೀತಿ ವ್ಯವಸ್ಥಿತವಾಗಿದ್ದವು. ಕರಿಯ ಬ್ಲೇಜರ್ ಧರಿಸಿ ಶಿಫ್ಟಿನಲ್ಲಿ ಕೆಲಸ ಮಾಡುತ್ತಿದ್ದ ಟಿಕೆಟ್ ಕಲೆಕ್ಟರುಗಳು ಎರಡು ಮೂರು ಬಾರಿ ಟಿಕೆಟ್ಟುಗಳನ್ನು ಪರೀಕ್ಷಿಸುತ್ತಿದ್ದರು.  ಆಗಿನ  ಕಾಲಕ್ಕೆ  ಒಂದು ಇಂಚಿನ  ದಪ್ಪ ಕಾಗದದ ರೈಲು ಟಿಕೆಟ್ಗಳು ಚಾಲನೆಯಲ್ಲಿದ್ದವು. ಟಿ.ಸಿ.ಗಳು ಅದನ್ನು ತೂತುಮಾಡಿ ಹಿಂತಿರುಗಿಸುತ್ತಿದ್ದರು.  ಪ್ರತಿ ಸ್ಟೇಷನ್ನುಗಳಲ್ಲಿ ರೈಲು ಹೊರಡುವ ಮುಂಚೆ ಗಾರ್ಡ್ ಶಿಳ್ಳೆ ಊದಿ, ಹಸಿರು ಬಾವುಟ ಅಲುಗಿಸಿ, ರೈಲು ‘ಕೂ’ ಎಂದು ಒಮ್ಮೆ ಶಬ್ದ ಮಾಡಿ ನಿಧಾನವಾಗಿ ಚಕ್ರಗಳು ಉರುಳುವ ಈ ಕ್ರಮಬದ್ಧ ಪದ್ಧತಿ ಮತ್ತು ಶಿಷ್ಟಾಚಾರಗಳು ನನ್ನನ್ನು ಬಹಳ ಆಕರ್ಷಿಸಿದ್ದವು.   ಹಿಂದೆ ಸ್ಟೀಮ್ ರೈಲುಗಳಿಗಿದ್ದ ವೈಭವ, ಆರ್ಭಟ, ವಿನ್ಯಾಸ, ಡೈನಮಿಸಂ ಈಗಿನ ಕಾಲದಲ್ಲಿ ಸದ್ದಿಲ್ಲದೇ ಹಾವಿನಂತೆ ಹರಿಯುವ ಡೀಸಲ್ ಅಥವಾ ಎಲೆಕ್ಟ್ರಿಕ್ ರೈಲುಗಳಿಗೆ ಇಲ್ಲವೆನ್ನಬಹುದು. 

ಕೃಪೆ: ಗೂಗಲ್ ಇಮೇಜ್ ಸರ್ಚ್

ಚಲಿಸುತ್ತಿರುವ ರೈಲಿನ  ಕಿಟಕಿಯ ಮೂಲಕ ಆಚೆ ತಲೆ ಹಾಯಿಸಿ ರೈಲಿನ ಉದ್ದಗಲವನ್ನು ನೋಡುವ ತವಕ ನನಗೆ. ಹಾಗೆ ಬೀಸುವ ಹಿತವಾದ ಗಾಳಿಗೆ ತಲೆಯೊಡ್ಡುವುದು ಅದೊಂದು ಖುಷಿ.  ಅಪ್ಪ ಅಮ್ಮ ಬೇಡವೆಂದರೂ ನಾನು, ಅಣ್ಣ ಮತ್ತು ಅಕ್ಕ ಆಗಾಗ್ಗೆ ಕಿಟಕಿಯ ಹೊರಗೆ ತಲೆಹಾಕಿದ್ದುಂಟು.  ಆಗಿನಕಾಲಕ್ಕೆ ಬರಿಯ ಸ್ಟೀಮ್ ಎಂಜಿನ್ ಗಳಿದ್ದು  ಸಣ್ಣ ಸಣ್ಣ ಕಲ್ಲಿದ್ದಿನ ಚೂರುಗಳು ಎಂಜಿನ್ ಕಡೆಯಿಂದ ಗಾಳಿಯಲ್ಲಿ ತೇಲಿ ಬಂದು ಕಣ್ಣಿಗೆ ಬೀಳುತಿತ್ತು.  ನಾವು ‘ಹಾ’ ಎನ್ನುವಷ್ಟರಲ್ಲಿ ಅಮ್ಮ ನಮ್ಮ ರೆಪ್ಪೆಗಳನ್ನು ಬಿಡಿಸಿ ಉಫ್ ಎಂದು ಊದಿ, ಅದು ವಿಫಲವಾದಲ್ಲಿ ತಮ್ಮ ಸೀರೆ ಸೆರೆಗಿನ ತುದಿಯನ್ನು ಬತ್ತಿಯಂತೆ ಹೊಸೆದು, ಚೀಪಿ  ‘ಕಣ್ಣು ಬಿಡು, ಕಣ್ಣು ಉಜ್ಜಬೇಡ , ತಲೆ ಎತ್ತು’ ಎಂದು ಹೇಳುತ್ತಾ ಕಲ್ಲಿದ್ದಿನ ತುಣುಕನ್ನು ಸರಿಸಿ ತೆಗೆದುಬಿಡುತ್ತಿದ್ದರು. ನಮ್ಮ ಈ ಪ್ರಯಾಣದಲ್ಲಿ ಅಮ್ಮ ನಮ್ಮ ನೇತ್ರತಜ್ಞರಾಗಿಬಿಟ್ಟರು!

ಹೈದರಾಬಾದಿಗೆ ಸುಮಾರು ಅರ್ಧದಷ್ಟು ಪ್ರಯಾಣ ಮಾಡಿದ ಮೇಲೆ ಗುಂತಕಲ್ ಜಂಕ್ಷನಿನಲ್ಲಿ  ರೈಲು ಸ್ವಲ್ಪ ಸಮಯದವರೆಗೆ ನಿಲ್ಲುತ್ತಿತ್ತು.  ಅಲ್ಲಿ ರೈಲಿಗೆ ನೀರು ತುಂಬುತ್ತಿದ್ದರು.  ಆ ಒಂದು ಅರ್ಧ ತಾಸು ಜನರು ಇಳಿದು ಕೈಕಾಲಾಡಿಸಬಹುದಾಗಿತ್ತು.  ನಾನು ಅಪ್ಪನನ್ನು ಕಾಡಿ ಅವರ ಉಸ್ತುವಾರಿಯಲ್ಲಿ ರೈಲ್ವೆ ಎಂಜಿನ್ ಬಳಿ ಅಡ್ಡಾಡಿ ಎಂಜಿನ್ನಿನ ದೊಡ್ಡ ಮತ್ತು ಸಣ್ಣ ಚಕ್ರಗಳ ಬೆಸುಗೆ, ಪಿಸ್ಟನಿನ್ನಿಂದ ಆಗಾಗ್ಗೆ ‘ಚುಸ್’ ಎಂದು ಹೊರಬರುತ್ತಿದ್ದ ಬಿಳಿ ಸ್ಟೀಮನ್ನು, ಮತ್ತು ಎಂಜಿನ್ ಒಳಗೆ ಕಲ್ಲಿದ್ದಲನ್ನು ಸ್ಪೇಡಿನಿಂದ  ಎತ್ತಿ ಉರಿಯುತ್ತಿರುವ ಬೆಂಕಿಯೊಲೆಗೆ ಹಾಕುತ್ತಿದ್ದ ಡ್ರೈವರುಗಳನ್ನು ಬಹಳ ಕುತೂಹಲದಿಂದ ವೀಕ್ಷಿಸುತ್ತಿದ್ದೆ.   ಶಿರಡಿ ಬಾಬಾ ರೀತಿಯಲ್ಲಿ ಅವರು ತಲೆಗೆ ಕರ್ಚಿಫ್ ಕಟ್ಟಿದ್ದು, ಕಲ್ಲಿದ್ದಲ ಮಸಿಯಿಂದ ಅವರ ಕರಿಬಡಿದ ಮುಖ ಅದರೊಳಗೆ ಕಾಣುತ್ತಿದ್ದ ಬಿಳಿ ಕರಿ ಪಿಳಿ ಪಿಳಿ ಕಣ್ಣು ನನ್ನ ನೆನಪಿನಲ್ಲಿ ಇಂದಿಗೂ ಉಳಿದಿದೆ.  ಅಷ್ಟು ದೊಡ್ಡದಾದ ರೈಲನ್ನು ನಿಯಂತ್ರಿಸುತ್ತಿದ್ದ ರೈಲ್ವೆ ಡ್ರೈವರುಗಳು ನನ್ನ ಪಾಲಿಗೆ ಹೀರೋಗಳಾಗಿದ್ದರು.  ಹೀಗಾಗಿ ನಾನು ನನ್ನ ಎಳೆವಯಸ್ಸಿನಲ್ಲಿ ಅಪ್ಪ, ಅಮ್ಮ ಮತ್ತು ಪರಿವಾರದ ಮಿತ್ರರ ಬಳಿ ಮುಂದಕ್ಕೆ ದೊಡ್ಡವನಾದ ಮೇಲೆ ರೈಲ್ವೆ ಎಂಜಿನ್ ಡ್ರೈವರ್ ಆಗುವೆನೆಂದು ಕೊಚ್ಚಿಕೊಳ್ಳುತ್ತಿದ್ದೆ.   ಆ ಸಂದರ್ಭದಲ್ಲಿ ಅಪ್ಪ ಅಮ್ಮ ಮುಸಿ ಮುಸಿ ನಕ್ಕಿದ್ದು ಮಬ್ಬಾಗಿ ನೆನಪಿದೆ.  Rest is history!

***

ಹೈದರಾಬಾದಿನಲ್ಲಿ ದೊರಕುವ ದಪ್ಪ ಹಸಿರು ದ್ರಾಕ್ಷಿಗೆ ಅಂಗೂರ್ ಎಂದು ಸ್ಥಳೀಯರು ಕರೆಯುತ್ತಿದ್ದರು.  ಅದು ಮೈಸೂರು ಸೀಮೆಯಲ್ಲಿ ಸಿಗುವ ಕರಿದ್ರಾಕ್ಷಿಗೆ ಹೋಲಿಸಿದರೆ ಗಾತ್ರದಲ್ಲಿ ಮತ್ತು ಸಿಹಿಯಲ್ಲಿ ಹೆಚ್ಚಿನದು ಎನ್ನಬಹುದು. ಅಮ್ಮ ನನಗೆ, ಅಕ್ಕ ಮತ್ತು ಅಣ್ಣನಿಗೆ ಬಟ್ಟಲಲ್ಲಿ ಒಂದು ಹಿಡಿಯಷ್ಟು ದ್ರಾಕ್ಷಿಯನ್ನು ತಿನ್ನಲು ಕೊಟ್ಟಿದ್ದರು. ನನ್ನ ಅಣ್ಣ ಜಯದೇವ ಬಹಳ ಚೇಷ್ಟೆ ಹುಡುಗ (Trouble Maker), ಅವನಿಂದ ನಾನು ನಾನಾ ಚೇಷ್ಟೆಗಳನ್ನು ಕಲಿಯುತ್ತಿದ್ದೆ. ಅಮ್ಮ ಕೊಟ್ಟ ಈ ಅಂಗೂರ್ ಗಳನ್ನೂ ಸ್ವಲ್ಪ ಮೇಲಕ್ಕೆ ಎಸೆದು ಅದನ್ನು ಕೈ ಉಪಯೋಗಿಸದೆ ಬಾಯಿಯಲ್ಲಿ ಹಿಡಿಯುವ ಆಟ ಅಣ್ಣ ತೋರಿಸಿಕೊಟ್ಟ. ನಾವು ಆ ಆಟವನ್ನು ಆಡುತ್ತಿದ್ದೆವು.  ನಾನು ಒಂದೆರಡು ದ್ರಾಕ್ಷಿಯನ್ನು ಬಾಯಲ್ಲಿ ಹಿಡಿದಿದ್ದು ನನ್ನ ಆತ್ಮವಿಶ್ವಾಸ ಹೆಚ್ಚಾಯಿತು, ಆಟ ಮುಂದುವರೆಯಿತು.  ಅಲ್ಲಿ ಒಂದು ಅನಾಹುತ ಸಂಭವಿಸಿತು. ನಾನು ತಲೆಯೆತ್ತಿದ್ದಾಗ ತೆರೆದ ಬಾಯಲ್ಲಿ ಬಿದ್ದ ಒಂದು ದ್ರಾಕ್ಷಿ, ಬಾಯಲ್ಲಿ ನಿಲ್ಲದೆ ಸೀದಾ ಗಂಟಲಿಗೆ ಇಳಿದು ನನ್ನ ಉಸಿರಾಟದ ಕೊಳೆವೆಯ ದ್ವಾರದಲ್ಲಿ ಸಿಕ್ಕಿಕೊಂಡುಬಿಟ್ಟಿತು. ನಾನು ಎಷ್ಟು ಕೆಮ್ಮಿದರೂ  ದ್ರಾಕ್ಷಿ ಮೇಲಕ್ಕೆ ಬರುತ್ತಿಲ್ಲ! ಕೊನೆಗೆ ಕೆಮ್ಮಿನ ಜೊತೆ ಉಸಿರಾಟದ ಕಷ್ಟ ಶುರುವಾಯಿತು. ಇದನ್ನು ಗಮನಿಸಿದ ಅಕ್ಕ ಅಮ್ಮನಿಗೆ ತಿಳಿಸಿ ಅಮ್ಮ ಬಂದು ನೋಡಿ ಕೂಗಿಕೊಂಡರು. ಅಪ್ಪ ಮತ್ತು  ಅವರ ಒಬ್ಬ ಸ್ನಾತಕೋತ್ತರ ವಿದ್ಯಾರ್ಥಿ ಮುಂದಿನ ಕೋಣೆಯಲ್ಲಿ ಸಮಾಲೋಚನೆಯಲ್ಲಿ ತೊಡಗಿದ್ದು ಅಮ್ಮನ ಕೂಗು ಕೇಳಿ ಗಾಬರಿಯಿಂದ ಓಡಿಬಂದರು. ಅಪ್ಪನ ವಿದ್ಯಾರ್ಥಿ ಕೂಡಲೇ ನನ್ನ ಕುತ್ತಿಗೆಯನ್ನು ಬಗ್ಗಿಸಿ ಬೆನ್ನಿನ ಮೇಲ್ಭಾಗವನ್ನು ಹಲವಾರು ಬಾರಿ ಗುದ್ದಿದರು. ಆ ಗುದ್ದಿನ ಒತ್ತಡಕ್ಕೆ ಗಂಟಲಲ್ಲಿ ಸಿಕ್ಕಿಕೊಂಡ ದ್ರಾಕ್ಷಿ ಮೇಲೆ ಬಾಯಿಗೆ ಬಂದು ಕೂಡಲೇ ಅದನ್ನು ಹೊರಕ್ಕೆ ಉಗಿಯಲು ಸಾಧ್ಯವಾಯಿತು.  ಹಾಗೆಯೇ ಕೆಮ್ಮಿ ಕೆಮ್ಮಿ ಸುಸ್ತಾಗಿದ್ದ ನನಗೆ ಸರಾಗವಾಗಿ ಉಸಿರಾಡಲು ಸಾಧ್ಯವಾಯಿತು.  ನನ್ನ ಪ್ರಾಣಕ್ಕೆ ಅಪಾಯವಿದ್ದ ಪರಿಸ್ಥಿತಿಯಲ್ಲಿ ಅಪ್ಪನ  ವಿದ್ಯಾರ್ಥಿ ನನ್ನನ್ನು ಉಳಿಸಿದರು.  ಆ ಮಹನೀಯರಿಗೆ ನಾನು ಎಂದೆಂದೂ ಚಿರಋಣಿ.  ವೈದ್ಯರಾದವರಿಗೆ ಈ ಪರಿಸ್ಥಿತಿಯನ್ನು (Foreign Body Aspirations) ನಿಭಾಯಿಸಲು ಲೈಫ್ ಸಪೋರ್ಟ್ ಕೋರ್ಸ್ ಗಳಲ್ಲಿ ಕಡ್ಡಾಯ ತರಬೇತು ನೀಡುತ್ತಾರೆ. ಅದನ್ನು ಹೀಮ್ಲಿಕ್ಸ್ ಮೆನುವರ್ (Heimlich Manoeuvre) ಎಂಬ ಹೆಸರಿನಲ್ಲಿ ವೈದ್ಯರು ಗುರುತಿಸಬಹುದು.  ನಮ್ಮೆಲ್ಲರ  ಜೀವನದಲ್ಲಿ ಅಪಾಯದ ಅಂಚಿಗೆ ಹೋಗಿ ಬಂದಿರುವ ಹಲವಾರು ಘಟನೆಗಳಿರಬಹುದು, ಅದರಲ್ಲಿ ನನ್ನ ಈ ಘಟನೆಯೂ ಒಂದು ಎಂದು ಹೇಳಬಹುದು.  ಅಂದಹಾಗೆ ದ್ರಾಕ್ಷಿ ಹಣ್ಣು ನನಗೆ ಅತ್ಯಂತ ಪ್ರಿಯವಾದ ಹಣ್ಣು , ಅದನ್ನು ಇಂದಿಗೂ ಸವಿಯುತ್ತೇನೆ;  ಸ್ವಲ್ಪ ಎಚ್ಚರಿಕೆಯಿಂದ!

*** 

ಕೃಪೆ: ಗೂಗಲ್ ಇಮೇಜ್ ಸರ್ಚ್

ಉಸ್ಮಾನಿಯಾ ಯುನಿವರ್ಸಿಟಿ ಹೈದರಾಬಾದಿನ ಹೊರವಲಯದಲ್ಲಿತ್ತು.  ಬಹಳ ಸುಂದರವಾದ ಕಟ್ಟಡ.  ರೀಡರ್ಸ್ ಕ್ವಾರ್ಟರ್ಸ್ ನಲ್ಲಿ ನಾವು ವಾಸವಾಗಿದ್ದು, ನಗರದ ನೃಪತುಂಗ ಶಾಲೆಯಲ್ಲಿ ಕನ್ನಡ ಕಲಿಯುವ ಅವಕಾಶವಿತ್ತು. ನಗರದ ಒಳಗೆ ಇದ್ದ ಶಾಲೆಗೆ ಮಕ್ಕಳಾದ ನಾವು ಒಟ್ಟಿಗೆ ಬಸ್ಸಿನಲ್ಲಿ ಹೋಗಿ ಬರುತ್ತಿದ್ದೆವು.  ನಮ್ಮ ಮನೆಯ ಸುತ್ತ  ಸಾಕಷ್ಟು ಬಯಲು.  ಎತ್ತರಕ್ಕೆ ಬೆಳೆಯುತ್ತಿದ್ದ ಹುಲ್ಲುಗಾವಲಿದ್ದು ಮಳೆಗಾಲದಲ್ಲಿ ಅಲ್ಲಲ್ಲಿ ಸಣ್ಣ ಕೊಳಗಳು  ಮೂಡುತ್ತಿದ್ದವು.  ಒಟ್ಟಾರೆ ನೋಡುವುದಕ್ಕೆ ಆಫ್ರಿಕಾದ ಹುಲ್ಲುಗಾವಲಿನಂತೆ (Savannah) ಇತ್ತು.  ಪಕ್ಕದ ಹಳ್ಳಿಗಳಿಂದ ಸಾಕಿದ ಹಂದಿಗಳು ಬಂದು ಹುಲ್ಲುಗಾವಲಿನ  ನಡುವೆ ಓಡಾಡಿಕೊಂಡಿರುತ್ತಿದ್ದವು.  ಒಂದು ದಿನ ಅಪ್ಪ ನಮ್ಮನ್ನು ‘ಹಟಾರಿ’ ಎಂಬ ಹಾಲಿವುಡ್ ಸಿನಿಮಾಗೆ ಕರೆದುಕೊಂಡು ಹೋಗಿ ಸಿನಿಮಾವನ್ನು ತೋರಿಸಿದರು.  ಆ ಸಿನಿಮಾದಲ್ಲಿ ಆಫ್ರಿಕಾದ ಘೇ೦ಡಾಮೃಗವನ್ನು ಸೆರೆ ಹಿಡಿಯುವ ದೃಶ್ಯ ಅತ್ಯಂತ ರೋಮಾಂಚಕಾರಿಯಾಗಿತ್ತು. ಆಫ್ರಿಕಾ ಹುಲ್ಲುಗಾವಲಿನಲ್ಲಿ ಜೀಪಿನ ಅಂಚಿನಲ್ಲಿ ಕುಳಿತ ಆಗಿನ ಕಾಲದ ಸೂಪರ್ ಹೀರೋ ಜಾನ್ ವೈನ್ ಒಂದು ಉದ್ದವಾದ ಗಳುವಿಗೆ  ಬಲವಾದ  ಹಗ್ಗದ ಕುಣಿಕೆಯನ್ನು ಹೊಂದಿಸಿ ಘೇ೦ಡಾಮೃಗಗಳನ್ನು ಅಟ್ಟಿಸಿಕೊಂಡು ಹೋಗಿ ಅದನ್ನು ಹಿಡಿದು ಮೃಗಾಲಯಗಳಿಗೆ ಸಾಗಿಸುವ ಕಥೆ ನಮಗೆ ಬಹಳ ವಿಸ್ಮಯವೆನಿಸಿತ್ತು.  ಬಹಳ ರೋಚಕವಾದ ಸಿನಿಮಾ, ಆಫ್ರಿಕಾದ ಬಲಿಷ್ಠ ಮತ್ತು ಅಪಾಯಕಾರಿಯಾದ ಘೇ೦ಡಾಮೃಗ ಮನುಷ್ಯರ ಮೇಲೆ ಧಾಳಿ ಮಾಡುವುದು, ಜೀಪುಗಳನ್ನು ಎತ್ತಿ ಉರುಳಿಸುವುದು ನಮ್ಮ ಕುತೂಹಲನ್ನು ಕೆರಳಿಸಿದ್ದವು.  ಸಿನಿಮಾ ನೋಡಿ ಬಂದ ಕೆಲವು ದಿನಗಳಲ್ಲಿ, ಅದೇ ಗುಂಗಿನಲ್ಲಿದ್ದ ನಮಗೆ ಮನೆ ಸುತ್ತ ಮುತ್ತ ಅಡ್ಡಾಡುತ್ತಿದ್ದ ಹಂದಿಗಳು ಮಿನಿ ಘೇ೦ಡಾಮೃಗಗಳಂತೆ ಕಾಣಿಸತೊಡಗಿದವು.  ಹಾಗೆ ಕೆಲವು ಸಾಹಸ ಆಲೋಚನೆಗಳು ಮನಸ್ಸಿನಲ್ಲಿ ಮೂಡತೊಡಗಿದವು.  ಸರಿ, ಅಣ್ಣ  ಜಯದೇವ ಅಪ್ಪನನ್ನು ಕಾಡಿ ಬೇಡಿ ಒಂದು ಬಾಡಿಗೆ ಸೈಕಲನ್ನು ತಂದುಬಿಟ್ಟ.  ಯಾಕೆ? ಏನು? ಎಂಬ ವಿಚಾರ ಅವರಿಂದ ಗುಟ್ಟಾಗಿಯೇ ಇಟ್ಟಿದ್ದೆವು.  ಉದ್ದವಾದ ಗಳುವನ್ನು ಹುಡುಕಿ ಒಂದು ಬಿಳಿ ಹಗ್ಗವನ್ನು ತೆಗೆದುಕೊಂಡು ಅದನ್ನು ಕುಣಿಕೆಯಾಗಿಮಾಡಿ ಹಾಟಾರಿ ಸಿನಿಮಾದಲ್ಲಿ ಕಂಡ ಘೇ೦ಡಾಮೃಗ ದೃಶ್ಯವನ್ನು ನಾವು ನಿಜ ಜೀವನದಲ್ಲಿ ಆಡಿಬಿಡೋಣ ಎಂದು ನಿರ್ಧರಿಸಿದೆವು.  ಸರಿ, ಅಣ್ಣ ನನ್ನ ಕೈಗೆ ರೆಡಿಯಿದ್ದ ಗಳು ಮತ್ತು ಹಗ್ಗವನ್ನು ಕೊಟ್ಟು ಹಿಂದಿನ ಕ್ಯಾರಿಯರ್ ಮೇಲೆ ಕುಳಿತು ಹಂದಿಗಳು ಹತ್ತಿರವಾದಾಗ ಗಳುವನ್ನು ಚಾಚಿ ಅದರ ಕುತ್ತಿಗೆಗೆ ಕುಣಿ ಸುತ್ತಿಕೊಂಡಾಗ ಹಗ್ಗವನ್ನು ಎಳೆಯಬೇಕೆಂದು ಸೂಚನೆ ನೀಡಿದ.  ಪುಳಕಿತಗೊಂಡಿದ್ದ ನಾನು ಸಂತಸದಿಂದ ಒಪ್ಪಿಕೊಂಡೆ.  ಅಣ್ಣ ಸೈಕಲ್ ಸಾರಥ್ಯದಲ್ಲಿ ತೊಡಗಿ ಹಂದಿಯನ್ನು ಅಟ್ಟಸಿಕೊಂಡು ಹೊರಟು ಸೈಕಲ್ ತುಳಿಯುತ್ತಿದ್ದ.   ನಾನು ಸರಿಯಾದ ಸಮಯಕ್ಕೆ ಕಾದು ಹಗ್ಗವನ್ನು ಹಂದಿಯ  ಕುತ್ತಿಗೆಗೆ ಹಿಡಿಯುವ ಪ್ರಯತ್ನ ನಡೆಸಿದೆ.  ಹಂದಿಗಳು ಒಂದೇ ದಿಕ್ಕಿನಲ್ಲಿ ನಮಗೆ ಅನುಕೂಲವಾಗುವಂತೆ ಓಡದೆ ಅಡ್ಡಾ ದಿಡ್ಡಿ ಓಡತೊಡಗಿದವು.  ಇನ್ನೇನು ಸಿಕ್ಕಿಬಿಟ್ಟಿತು ಎನ್ನವಷ್ಟರಲ್ಲಿ ಹಂದಿ ತಪ್ಪಿಸಿಕೊಂಡು ಬಿಡುತ್ತಿತ್ತು.  ಸ್ವಲ್ಪ ಸಮಯದ ನಂತರ ಆ ಜವುಗು ಪ್ರದೇಶದಲ್ಲಿ ಸೈಕಲ್ ಒಮ್ಮೆ ಕೊಚ್ಚೆಯಲ್ಲಿ ಸಿಕ್ಕು ಅಣ್ಣ ತನ್ನ ಆಯ ತಪ್ಪಿ ಇಬ್ಬರು ಕೊಚ್ಚೆಯಲ್ಲಿ ಬಿದ್ದೆವು.  ಬಟ್ಟೆ, ಕೈ, ಮೈ ಎಲ್ಲವು ಕೊಚ್ಚೆ!  ಅಂಗಿಗಳೆಲ್ಲಾ ವದ್ದೆ,  ಜೊಂಡು ನೀರಿನ ದುರ್ವಾಸನೆ.  ಅಲ್ಲಿದ್ದ ಹಂದಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಓಡಿಹೋದವು . ನಮ್ಮ ದುಸ್ಸಾಹಸ ಹೀಗೆ ಕೊನೆಗೊಂಡು, ಅಪ್ಪ ಅಮ್ಮನಿಗೆ ಯಾವ ಸಬೂಬು ಹೇಳುವುದೆಂದು ಚಿಂತಾಕ್ರಾಂತರಾಗಿ ಕೊನೆಗೆ ನಾನು ಸೈಕಲ್ ಕಲಿಯಲು ಹೋಗಿ ಹೀಗಾಯಿತೆಂದು ಹೇಳಿ ಬೈಸಿಕೊಂಡು ಸ್ನಾನಕ್ಕೆ ಇಳಿದೆವು. ಹಂದಿ ಹಿಡಿಯುವ ‘ಹಟಾರಿ’ ಪ್ರಸಂಗ ನಮ್ಮಿಬ್ಬರ ನಡುವೆ ಬಹಳ ವರ್ಷ ಗುಟ್ಟಾಗಿತ್ತು.

ನಾವು ಹೈದರಾಬಾದಿನಲ್ಲಿದ್ದ ಕಾಲದಲ್ಲಿ ಎನ್ ಟಿ ರಾಮರಾವ್ ತಮ್ಮ ಸಿನಿಮಾ ಕ್ಷೇತ್ರದ ಉತ್ತುಂಗದಲ್ಲಿದ್ದು ಕೇಂದ್ರ ಬಿಂದುವಾಗಿದ್ದರು.  ಅವರು ನಟಿಸಿದ ಲವ-ಕುಶ, ನರ್ತನ ಶಾಲಾ ಚಿತ್ರಗಳು ಬಹಳ ಜನಪ್ರಿಯವಾಗಿದ್ದವು.  ಈ ಪೌರಾಣಿಕ ಚಿತ್ರಗಳನ್ನು ಅಪ್ಪ ಅಮ್ಮನ ಜೊತೆ ನೋಡಿದ ನಮಗೆ ಅಷ್ಟು ಹೊತ್ತಿಗೆ ತೆಲುಗು ಮತ್ತು ಹಿಂದಿ ಚೆನ್ನಾಗಿ ಮಾತನಾಡಲು ಬರುತ್ತಿತ್ತು.  ಅಮ್ಮ ಮನೆಗೆಲಸಕ್ಕೆ ಬರುತ್ತಿದ್ದವರಿಂದ ಮತ್ತು  ಅಕ್ಕಪಕ್ಕದವರೊಡನೆ ವ್ಯವಹರಿಸುತ್ತಾ ತೆಲುಗು ಕಲಿತುಬಿಟ್ಟರು.  ನಾವು  ಮಕ್ಕಳು ಶಾಲೆಯಲ್ಲಿ ತೆಲುಗು ಮತ್ತು ಹಿಂದಿ ಮಾತನಾಡಲು ಕಲಿತು ಬಿಟ್ಟೆವು.  ಅಪ್ಪ ಯುನಿವರ್ಸಿಟಿಯಲ್ಲಿ ಎಲ್ಲರೊಡನೆ ಇಂಗ್ಲೀಷಿನಲ್ಲಿ ವ್ಯವಹರಿಸುತ್ತಿದ್ದು ಅವರಿಗೆ ತೆಲುಗು ಮತ್ತು ಹಿಂದಿ ಸ್ವಲ್ಪ ಮಟ್ಟಿಗೆ ಅರ್ಥವಾಯಿತೇ ಹೊರತು ಮಾತನಾಡಲು ಸಾಧ್ಯವಾಗಲಿಲ್ಲ.  ಚಿಕ್ಕ ವಯಸ್ಸಿನಲ್ಲಿ ಒಟ್ಟಿಗೆ ಹಲವಾರು ಭಾಷೆಗಳನ್ನು ಕಲಿಯುವುದು ಸುಲಭ.  ಈ ಪೌರಾಣಿಕ ಚಿತ್ರ ಗಳ ಕ್ಲೈಮಾಕ್ಸ್ ಯುದ್ಧ ದೃಶ್ಯಗಳಲ್ಲಿ ಕಂಡ ಬಿಲ್ಲು ಬಾಣ, ಬ್ರಹ್ಮಾ ಸ್ತ್ರ ಇತ್ಯಾದಿಗಳು ನಮ್ಮನ್ನು ಪುಳಕಿತಗೊಳಿಸಿದ್ದವು.  ನಾನು ಅಣ್ಣ ಮನೆಯಲ್ಲಿ ಬಿಲ್ಲು ಬಾಣಗಳನ್ನು ತಯಾರಿಸಿ ಒಬ್ಬರ ಮೇಲೆ ಒಬ್ಬರು ಬಾಣಗಳನ್ನು ಬಿಟ್ಟು ಆಟವಾಡುತ್ತಿದ್ದೆವು.  ಸದ್ಯ ಯಾವ ಅನಾಹುತ ಜರುಗಲಿಲ್ಲ.  ಬಾಣಗಳಿಗಾಗಿ ಅಂಚಿಕಡ್ಡಿಗಳನ್ನು ಯಥೇಚ್ಛವಾಗಿ ಉಪಯೋಗಿಸಿ ಅಮ್ಮನ ಅಂಚಿಕಡ್ಡಿ ಪೊರಕೆ ಸೊರಗಿಹೋಗಿತ್ತು, ಅವರು ನಮ್ಮನ್ನು ಇದರ ಬಗ್ಗೆ ಪ್ರಶ್ನಿಸಿದಾಗ ನಾನು ಅಣ್ಣ ಗೊತ್ತಿಲ್ಲ ಎಂದು ತಲೆ ಅಲ್ಲಾಡಿಸಿಬಿಟ್ಟೆವು!  ಮಕ್ಕಳ ಮೇಲೆ ಸಿನಿಮಾ ಎಷ್ಟು  ಗಾಢವಾದ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಈ ಘಟನೆಗಳು ಒಳ್ಳೆಯ ಉದಾಹರಣೆ ಎನ್ನಬಹುದು.

***

ಕೃಪೆ: ನಾಸಾ ಜೆಟ್ ಪ್ರೊಪಲ್ಶನ್ ಲ್ಯಾಬ್ ಐತಿಹಾಸಿಕ ಚಿತ್ರಸಂಗ್ರಹ

ನಾವು ಹೈದರಾಬಾದಿನಲ್ಲಿದ್ದಾಗ 1965ರ ಚಳಿಗಾಲದ ಸಮಯ. ಅಪ್ಪ ನಮ್ಮನ್ನೆಲ್ಲಾ ಬೆಳಗಿನ ಜಾವ 4 ಗಂಟೆಗೆ ಎಚ್ಚರಿಸಿ ಮಕ್ಕಳಾದ ನಮ್ಮನ್ನು ಮತ್ತು ಅಮ್ಮನನ್ನು ಮನೆಯಿಂದ ಆಚೆ ರಸ್ತೆಯಲ್ಲಿ ನಾಲ್ಕು ಹೆಜ್ಜೆ ಕರೆದುಕೊಂಡು ಹೋಗಿ ನಿಸರ್ಗದ ಒಂದು ಅದ್ಭುತವನ್ನು ತೋರಿಸಿದರು. ಅದು ಆಕಾಶದಲ್ಲಿಯ ಒಂದು ಉಜ್ವಲವಾದ ಧೂಮಕೇತು!  ಅದಕ್ಕೆ ಒಂದು ದೊಡ್ಡ ತಲೆ ಇದ್ದು ಉದ್ದನೆಯ ಬಾಲವಿತ್ತು.  ಸುಮಾರು ಹೊತ್ತು  ಚಲಿಸುವಂತೆ  ಕಂಡು ಬೆಳಕು ಹರಿದಾಗ ಮಾಯವಾಗುತ್ತಿತ್ತು.  ಚಳಿಯಲ್ಲಿ ನಡುಗುತ್ತಾ ಶಾಲು ಹೊದ್ದು ಎಲ್ಲರ ಜೊತೆ ಧೂಮಕೇತುವನ್ನು ನೋಡಿದ್ದ ನೆನಪು  ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.  ಇದರ ಬಗ್ಗೆ ಇತ್ತೀಚಿಗೆ ಗೂಗಲ್ ಮಾಡಿದಾಗ ಇದರ ಹೆಸರು ‘ಇಕೆಯ–ಸೆಕಿ’ ಎಂದು ಗುರುತಿಸಲಾಗಿತ್ತು  ಮತ್ತು ಸಾವಿರಾರು ವರ್ಷದಲ್ಲಿ ಕಂಡ 9-10 ಪ್ರಖರವಾದ ಧೂಮಕೇತುಗಳಲ್ಲಿ ಇದೂ ಒಂದು ಎಂದು ದಾಖಲಿಸಲಾಗಿದೆ.  ಈ ಧೂಮಕೇತು ಕಾಣಿಸಿಕೊಂಡ ಮುಂದಿನ ಮೂರು ತಿಂಗಳಲ್ಲಿ ನಮ್ಮ ದೇಶದ ಆಗಿನ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ತಾಷ್ಕೆಂಟಿನಲ್ಲಿ ಅನಿರೀಕ್ಷಿತವಾಗಿ ತೀರಿಕೊಂಡರು.  ಜನ ಸಾಮಾನ್ಯರು ಧೂಮಕೇತು ಅಶುಭ ಸೂಚಕವೆಂದು ಶಾಸ್ತ್ರಿಯವರ ಅಕಾಲಮರಣಕ್ಕೆ ಕಾರಣವಾಯಿತು ಎಂದು ಅವೈಜ್ಞಾನಿಕ ವದಂತಿಯನ್ನು ಹಬ್ಬಿಸಿದರು.  ಗ್ರಹಣದಿಂದ ಹಿಡಿದು ಬಾಹ್ಯಾಕಾಶದಲ್ಲಿ ಸಂಭವಿಸುವ ನಿಸರ್ಗದ ಕ್ರಿಯೆಗಳನ್ನು ಅಶುಭವೆಂದು ಪರಿಗಣಿಸುವುದು ನಮ್ಮ ಸಂಸ್ಕೃತಿಗಳಲ್ಲಿ ಬೆಸೆದುಕೊಂಡು ಬಂದಿರುವ ವಿಚಾರ.

ಈ ಹಿನ್ನೆಲೆಯಲ್ಲಿ ಇನ್ನೊಂದು ಘಟನೆ ನನ್ನ ನೆನಪಿಗೆ ಬಂದಿದೆ.  ನನ್ನ ತರೀಕೆರೆ ಅಜ್ಜ ಸಂಪ್ರದಾಯಸ್ಥರು, ವ್ಯವಹಾರ ಚತುರರು, ಕನ್ನಡ ಓದು ಬರಹ ಬಲ್ಲವರು, ಅನುಕೂಲಸ್ಥರು; ಹಾಗೆಯೇ ತಮ್ಮ ಮುಗ್ಧತೆಯನ್ನು ಉಳಿಸಿಕೊಂಡವರು. 1969ರ ಜುಲೈ ತಿಂಗಳು ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಒಂದು ಸಣ್ಣ ಹೆಜ್ಜೆ ಇಟ್ಟು ಅದು ಮನುಕುಲದ ಮಹತ್ವದ ಹೆಜ್ಜೆಯಾಗಿತ್ತು.  ಆ ಹೊತ್ತಿಗೆ ಅಜ್ಜನಿಗೆ ಎಂಬತ್ತು ವರ್ಷ ಕಳೆದಿರಬಹುದು.  ನನ್ನ ಅಣ್ಣ ಜಯದೇವನಿಗೆ ವಿಜ್ಞಾನದಲ್ಲಿ ಬಹಳ ಆಸಕ್ತಿ.  ನ್ಯಾಷನಲ್ ಕಾಲೇಜಿನ ಡಾ. ಎಚ್ ಎನ್ ಅವರ ವಿದ್ಯಾರ್ಥಿಕೂಡ, ಅವನಿಗೆ ಇದು ಬಹಳ ರೋಮಾಂಚಕಾರಿಯಾಗಿದ್ದ ವಿಷಯ.  ಅಜ್ಜನ ಬಳಿ ಬಂದು ‘ಅಜ್ಜ, ಮನುಷ್ಯ ಚಂದ್ರನ ಮೇಲೆ ಕಾಲಿಟ್ಟಿದ್ದಾನೆ  ಗೊತ್ತಾ’ ಎಂದು ಸುದ್ದಿಯನ್ನು ಮುಟ್ಟಿಸಿದ.  ಅಜ್ಜ ಅವನು ತಮಾಷೆ ಮಾಡುತ್ತಿದ್ದಾನೆ ಎಂದು ನಕ್ಕು ‘ಹೋಗೊ ಹೋಗೊ ಅದು ಹೇಗೆ ಸಾಧ್ಯ’ ಎಂದು ಅಲ್ಲಗೆಳೆದರು.  ಅಣ್ಣ ಓಡಿಹೋಗಿ ಅವತ್ತಿನ ಪೇಪರ್ ಕೈಗೆತ್ತಿಕೊಂಡು ಅಂದು ಪ್ರಕಟವಾದ ಸುದ್ದಿಯನ್ನು ಅಜ್ಜನ ಮುಂದೆ ಹಿಡಿದುಬಿಟ್ಟ.  ಅಜ್ಜನ ನಂಬಿಕೆಗೆ ಒದಗಿದ ‘ಶಾಕ್ ‘ ನಮಗೆಲ್ಲಾ ಅರಿವಾಯಿತು.  ಅವರು ಬಹಳ ಹೊತ್ತು ಆ ಸುದ್ದಿಯನ್ನು ಮತ್ತೆ ಮತ್ತೆ ಓದಿ ಮೌನವಾಗಿ ಕುಳಿತುಬಿಟ್ಟರು.  ಅವರು ಪ್ರತಿ ದಿನ ಪೂಜೆ ಮಾಡುತ್ತಿದ್ದ ಚಿತ್ರದಲ್ಲಿನ ಗಂಗೆ ಮತ್ತು ಚಂದ್ರರಿಂದ ಅಲಂಕೃತ ತಲೆಯ ಶಿವನ ಸುಂದರ ಮುಖ ಮತ್ತು ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಸುದ್ದಿ ಅವರ ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡಿದ್ದಿರಬಹುದು.  ಅವರಿಗೆ ಆ ಪವಿತ್ರವಾದ ಚಂದ್ರನ ಮೇಲೆ ಮನುಷ್ಯ ಪಾದಾರ್ಪಣೆ ಮಾಡಿದ್ದು ಅಶುಭವೆಂದು ಅನಿಸಿರಬಹುದು.

***

ಇಂಥವೇ ಎಷ್ಟೋ ಬಾಲ್ಯದ ನೆನಪುಗಳು ಮನದಲ್ಲಿ ಅಚ್ಚಳಿಯದಂತೆ ಮನೆಮಾಡಿವೆ. ಆಗಾಗ ಮನದ ಸ್ಕ್ರೀನಿನಲ್ಲಿ ಈ ಫೈಲುಗಳು ತಾನೇ ತಾನಾಗಿ ಸಿನಿಮಾದಂತೆ ಓಡಿ ಮುದ ಕೊಡುತ್ತವೆ. ಮುಂದೆ ಸಮಯ ಸಿಕ್ಕರೆ ಒಂದು ಪುಸ್ತಕವನ್ನೇ ಬರೆದುಬಿಡೋಣ ಅನ್ನಿಸುವಂತೆ ಮಾಡಿವೆ.

  • ಡಾ. ಜಿ ಎಸ್ ಶಿವಪ್ರಸಾದ್.

ಬಾಲ್ಯದ ನೆನಪುಗಳು – ಉಮಾ ವೆಂಕಟೇಶ್ ಹಾಗೂ ಸವಿತಾ ಸುರೇಶ್

ನಮಸ್ಕಾರ. ಎರಡು ವಾರಗಳ ಹಿಂದೆ `ಬಾಲ್ಯದ ನೆನಪುಗಳು` ಸರಣಿಯ ಲೇಖನಗಳು ಪ್ರಕಟವಾದಾಗ ಇವು ಈ ಸರಣಿಯ ಕೊನೆಯ ಲೇಖನಗಳು ಅಂತ ನಾನು ಬರೆದಿದ್ದು ನಿಮಗೆ ನೆನಪಿರಬಹುದು. ಆಗ ಅದಕ್ಕೆ ಕಾರಣವೂ ಇತ್ತು – ಅದಕ್ಕಾಗಿ ಬಂದಿದ್ದ ಲೇಖನಗಳ ಕಂತೆ ಖಾಲಿಯಾಗಿತ್ತು! ಆದರೆ ಆ ಸರಣಿಯಲ್ಲಿ ಬಂದ ರಸಪೂರ್ಣ ಬರಹಗಳು ಇನ್ನಷ್ಟು ಆಸಕ್ತರಲ್ಲಿ ಬರೆಯುವ ಉತ್ಸಾಹವನ್ನು ಮೂಡಿಸಿ, ಸರಣಿಯನ್ನು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ಬರುವಂತೆ ಮಾಡಿವೆ. ಸಂಪಾದಕನಾಗಿ ನನಗೇನೋ ಸಂತೋಷವೇ, ಇನ್ನಷ್ಟು ಪ್ರಕಟಣಾ ಸಾಮಗ್ರಿ ದೊರೆಯಿತೆಂದು! ಇದೋ, ಇಲ್ಲಿವೆ ಇನ್ನೆರಡು ಬರಹಗಳು. ಉಮಾ ವೆಂಕಟೇಶ್ ನಮ್ಮನ್ನು ಮೈಸೂರಿನ ತಮ್ಮ ಶಾಲೆಗೆ ಕರೆದೊಯ್ದು ತಮ್ಮೊಬ್ಬ ತುಂಟ ಸಹಪಾಠಿಯ ಪರಿಚಯ ಮಾಡಿಸಿದರೆ, ಸವಿತಾ ಸುರೇಶ್ ಅವರು ತಮ್ಮ ಬಾಲ್ಯದ ಹವ್ಯಾಸವನ್ನು ನೆನೆಯುತ್ತಾರೆ. ಎಂದಿನಂತೆ ಓದಿರಿ, ಆನಂದಿಸಿರಿ, ಕಮೆಂಟಿಸಿರಿ ಮತ್ತೂ ನೀವೂ ಬರೆದು ನನಗೆ ಕಳುಹಿಸಿರಿ – ಎಲ್ಲೆನ್ ಗುಡೂರ್ (ಸಂ.)

ಮೈಸೂರಿನ ವಾಣಿ ವಿದ್ಯಾಮಂದಿರಉಮಾ ವೆಂಕಟೇಶ್

ನೂರೊಂದು ನೆನಪು ಎದೆಯಾಳದಿಂದ, ಲೇಖನವಾಗಿ ಬಂತು ಆನಂದದಿಂದ: ಮೈಸೂರನ್ನು ನೆನೆದೊಡನೆ ಮುದಗೊಳ್ಳುವ ನನ್ನ ಮನದಲ್ಲಿ, ಬಾಲ್ಯದ ದಿನಗಳೊಂದಿಗೆ ಬೆಸದಿರುವ ನೆನಪುಗಳು ಸಾವಿರಾರು ತರಂಗಗಳಂತೆ ಹೊರಹೊಮ್ಮುತ್ತವೆ. ಈ ನೆನಪಿನ ತರಂಗಗಳಲ್ಲಿ ಮೈಸೂರಿನ ವಾಣಿ ವಿದ್ಯಾಮಂದಿರದ ಶಾಲೆಯಲ್ಲಿ ನಾನು ಕಳೆದ ೩ ವರ್ಷಗಳೂ ಸೇರಿವೆ. ನನ್ನ ತಂದೆ ಬಳ್ಳಾರಿಯಲ್ಲಿ ಭೂಗರ್ಭಶಾಸ್ತ್ರಜ್ಞರಾಗಿದ್ದರು. ಅಲ್ಲಿನ ಕೆಲಸ ಬಿಟ್ಟು ೧೯೬೯ರಲ್ಲಿ ನಮ್ಮ ತವರೂರಾದ ಮೈಸೂರಿಗೆ ಹಿಂತಿರುಗಿ ಬಂದಾಗ ನಾನಿನ್ನೂ ೫ನೆಯ ತರಗತಿಯಲ್ಲಿದ್ದೆ. ಅಕ್ಟೋಬರ್  ತಿಂಗಳಿನಲ್ಲಿ ವಾಪಸ್ ಬಂದಿದ್ದರಿಂದ ಅದು ಮಿಡ್ ಟರ್ಮ್ ಅವಧಿ. ಯಾವ ಶಾಲೆಗಳಲ್ಲೂ ಅಷ್ಟೊಂದು ಸುಲಭವಾಗಿ ಪ್ರವೇಶ ಸಿಗುತ್ತಿರಲಿಲ್ಲ. ನನ್ನ ಅಜ್ಜನಿಗೆ ವಾಣಿ ವಿದ್ಯಾಮಂದಿರದ ನಿರ್ವಾಹಕರಾಗಿದ್ದ ದಿ. ರಂಗಸ್ವಾಮಿ ಅಯ್ಯಂಗಾರ್ ಮತ್ತು ಅವರ ಸಹೋದರಿ ಪಂಕಜಮ್ಮ ಅವರ ಪರಿಚಯವಿತ್ತು. ರಂಗಸ್ವಾಮಿ ಅಯ್ಯಂಗಾರ್ ಅವರಿಗೆ ಕಾಲೇಜಿನಲ್ಲಿ ಸಹಪಾಠಿ ಆಗಿದ್ದರೆಂದು ಹೇಳುತ್ತಿದ್ದ ನೆನಪು. ಸರಿ, ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಮ್ಮ ಮನೆ ಇತ್ತು. ಈ ಶಾಲೆಯೂ ಅಲ್ಲೇ ಹತ್ತಿರದಲ್ಲಿ ಇದ್ದರಿಂದ ನಾವು ಮೂರು ಜನ ಮಕ್ಕಳಿಗೂ ಅದೇ ಶಾಲೆಯಲ್ಲಿ ಪ್ರವೇಶ ಸಿಕ್ಕಿತ್ತು. ಶಿಸ್ತು ಮತ್ತು ಉತ್ತಮ ಶಿಕ್ಷಕಿಯರಿದ್ದ ಆ ಶಾಲೆಯಲ್ಲಿ ವಿದ್ಯಾಭ್ಯಾಸದ ಮಟ್ಟ ಚೆನ್ನಾಗಿತ್ತೆಂದು ಎಲ್ಲರೂ ಹೇಳುತ್ತಿದ್ದ ಮಾತು ನಿಜವಾಗಿತ್ತು. ನನ್ನ ತರಗತಿಯಲ್ಲಿ ಸುಮಾರು ೪೦ ಜನ ಮಕ್ಕಳಿದ್ದ ನೆನಪು. ನನಗೆ ಎಲ್ಲರ ಹೆಸರೂ ನೆನಪಿಲ್ಲ. ಆದರೆ ತರಗತಿಯಲ್ಲಿ ತನ್ನ ತುಂಟತನ, ಪುಂಡಾಟಕ್ಕೆ ಹೆಸರಾಗಿದ್ದ ಚಂದ್ರಶೇಖರನ ಹೆಸರು ಮತ್ತು ಅವನು ನಡೆಸುತ್ತಿದ್ದ ಉಡಾಳತನ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಚಂದ್ರಶೇಖರ ಎಂದೂ ತರಗತಿಯಲ್ಲಿ ಪಾಠದ ಕಡೆಗೆ ಗಮನ ಕೊಟ್ಟವನಲ್ಲ. ಹೋಮ್ ವರ್ಕ್ ಮಾಡುವ ಜಾಯಮಾನವಂತೂ ಅವನದಾಗಿರಲಿಲ್ಲ. ಸದಾ ಜೊತೆಯಲ್ಲಿದ್ದ ಹುಡುಗ-ಹುಡುಗಿಯರನ್ನು ಕೀಟಲೆ ಮಾಡುತ್ತಾ, ಅವರ ಹೋಮ್ ವರ್ಕ್ ಮತ್ತು ಪಠ್ಯಪುಸ್ತಕಗಳ ಮೇಲೆ ಇಂಕ್ ಚೆಲ್ಲಿಯೋ, ಅವರನ್ನು ಚಿವುಟುತ್ತಲೋ ಗೋಳು ಹುಯ್ದುಕೊಳ್ಳುವ ಅವನ ನಡತೆ ಹಲವೊಮ್ಮೆ ನಮಗೆಲ್ಲಾ ಪ್ರಾಣಸಂಕಟವಾಗಿತ್ತು. ಆದರೆ ತರಗತಿಯಲ್ಲಿ ಟೀಚರ್ ಕೇಳುವ ಪ್ರಶ್ನೆಗಳಿಗೆ ಅವನು ನೀಡುತ್ತಿದ್ದ ಉತ್ತರದ ವೈಖರಿ ಹಲವು ಬಾರಿ ಇಡೀ ಕ್ಲಾಸಿನಲ್ಲಿ ನಗೆಯ ಬುಗ್ಗೆಯನ್ನೆಬ್ಬಿಸುತ್ತಿತ್ತು. ಒಮ್ಮೆ ನಮ್ಮ ಕನ್ನಡ ಟೀಚರ್ ಸುಬ್ಬುಲಕ್ಷ್ಮಿ, “ಲೋ ಚಂದ್ರಶೇಖರ, ಸಂಧಿ ಎಂದರೇನೋ?” ಎಂದು ಪ್ರಶ್ನಿಸಿದ್ದಾಗ, ಅವನು ಸಲೀಸಾಗಿ “ಟೀಚರ್, ನಮ್ಮ ಮನೆ ಮತ್ತು ಪಕ್ಕದ ಮನೆಯ ಕಾಂಪೋಂಡ್ ಮಧ್ಯೆ ಇರುವ ತೂತಿಗೆ ಸಂಧಿ ಎನ್ನುತ್ತಾರೆ” ಎಂದು ತನ್ನ ವಿದ್ವತ್ತನ್ನು ಮೆರೆದಿದ್ದ! ಯಾವ ವಿಷಯದ ಟೆಸ್ಟಿನಲ್ಲೂ ಅವನಿಗೆ ಒಂದಂಕಿಯಲ್ಲದೇ ಹೆಚ್ಚಿನ ಮಾರ್ಕ್ ದೊರಕುತ್ತಿರಲಿಲ್ಲ. ಇಷ್ಟಾದರೂ ಅವನೇನೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸದಾ ಹಸನ್ಮುಖಿಯಾಗೇ ತನ್ನ ದಿನನಿತ್ಯದ ತುಂಟಾಟಗಳನ್ನು ಮುಂದುವರೆಸುತ್ತಿದ್ದ ಅವನನ್ನು ಕಂಡು ಅನೇಕ ಬಾರಿ ಬೆರಗಾಗುತ್ತಿದ್ದೆವು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪಂಕಜಮ್ಮ ನಮ್ಮ ಇಂಗ್ಲೀಷ್ ಟೀಚರ್. ಬಹಳ ದರ್ಪ ಮತ್ತು ಶಿಸ್ತಿನ ಮಹಿಳೆ. ೬೦-೭೦ರ ದಶಕದಲ್ಲಿ, ಶಾಲೆಯ ಪುಸ್ತಕಗಳನ್ನು ಇಟ್ಟುಕೊಳ್ಳಲು ಹೊಸದಾಗಿ ಆಲುಮಿನಿಯಮ್ ಪೆಟ್ಟಿಗೆಗಳು ಮಾರುಕಟ್ಟೆಗೆ ಬಂದಿದ್ದವು. ಸರಿ ಮಧ್ಯಮ ವರ್ಗದ ಮನೆಯ ಮಕ್ಕಳ ಕೈಯಲ್ಲಿ ಈ ಆಲುಮಿನಿಯಮ್ ಪೆಟ್ಟಿಗೆಗಳು ರಾರಾಜಿಸಲಾರಂಭಿಸಿತ್ತು. ನಮ್ಮ ತಂದೆ ನಮ್ಮ ಮನೆಯಲ್ಲಿ ಮೂವರಿಗೂ, ನಮ್ಮ ಹೆಸರನ್ನು ಕೆತ್ತಿಸಿ ಮೂರು ಪೆಟ್ಟಿಗೆ ಖರೀದಿಸಿ ಕೊಟ್ಟಿದ್ದರು. ಅದನ್ನು ಶಾಲೆಗೆ ಒಯ್ಯುವುದೇ ನಮಗೆ ಒಂದು ಹೆಮ್ಮೆಯ ಕೆಲಸ. ಸರಿ ಹುಡುಗಿಯರು ಶಿಸ್ತಾಗಿ ಈ ಪೆಟ್ಟಿಗೆ ಹಿಡಿದು ಬರುತ್ತಿದ್ದದ್ದನ್ನು ಕಂಡ ಚಂದ್ರಶೇಖರನ ಕಣ್ಣುಗಳಿಗೆ ಇದು ಸಹನವಾಗಲಿಲ್ಲ. ನನ್ನ ಸಹಪಾಠಿ ಜಯಶ್ರೀಯ ಪೆಟ್ಟಿಗೆ ಅವನ ದಾಳಿಗೆ ತುತ್ತಾಯಿತು. ಅವಳ ಕೈಯಿಂದ ಪೆಟ್ಟಿಗೆ ಕಿತ್ತುಕೊಡದ್ದಲ್ಲದೇ, ಇದೇನು ಈ ಹಜಾಮನ ಪೆಟ್ಟಿಗೆ ತಂದಿದ್ದೀಯಾ ಎಂದು ಅಣಕಿಸಿದಾಗ, ಅವಳ ಕಣ್ಣಿನಲ್ಲಿ ಗಂಗಾ-ಕಾವೇರಿಯ ಧಾರೆಯೇ ಹರಿಯಿತು. ಸರಿ, ಪಂಕಜಮ್ಮ ಅವರಿಗೆ ದೂರು ತಲುಪಿತು. ಸಿಟ್ಟಿನಿಂದ ಕೆಂಡಾಮಂಡಲವಾದ ಆಕೆ, ಕೈಯ್ಯಲ್ಲಿ ದೊಡ್ಡ ರೂಲರ್ ಝಳಪಿಸುತ್ತಾ, ತಮ್ಮ ದೊಡ್ಡ ದರ್ಪದ ಧ್ವನಿಯಲ್ಲಿ, “ಭಡವಾ, ಸರಸ್ವತಿ ಇಟ್ಟು ತರುವ ಪೆಟ್ಟಿಗೆಯನ್ನು, ಹಜಾಮನ ಪೆಟ್ಟಿಗೆಗೆ ಹೋಲಿಸುತ್ತೀಯಾ” ಎಂದು ಘರ್ಜಿಸುತ್ತಾ, ಚಂದ್ರಶೇಖರನ್ನು ಬೆಂಚಿನ ಮೇಲೆ ನಿಲ್ಲಿಸಿದರು. ಅಲ್ಲೇ ಅಳುತ್ತಾ ನಿಂತಿದ್ದ ಜಯಶ್ರೀಯನ್ನು ಕರೆದು, ಅವನ ಎರಡೂ ಕೆನ್ನೆಗೆ ಹೊಡೆಯಲು ಆಣತಿ ಇತ್ತರು. ಮೊದಲು ಸ್ವಲ್ಪ ಹಿಮ್ಮೆಟ್ಟಿದ ಜಯಶ್ರೀ, ತನ್ನ ಪೆಟ್ಟಿಗೆಗಾದ ಅವಮಾನ ನೆನಪಾಗಿ ಧೈರ್ಯಮಾಡಿ ಅವನ ಕೆನ್ನೆಗೆ ಹೊಡೆದಾಗ ಅದನ್ನು ಸ್ವಲ್ಪ ಭಯದಿಂದಲೇ ನೋಡುತ್ತಿದ್ದ ನಮಗೆ, ಸರಿ ಇನ್ನು ಚಂದ್ರಶೇಖರನ ಪುಂಡಾಟ ಅವತ್ತಿಗೆ ಮುಗಿಯಿತು ಎಂದು ನಿಟ್ಟುಸಿರಿಟ್ಟೆವು.

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗುಡೂರ್

ಆದರೆ, ಅಂದು ಶಾಲೆ ಮುಗಿಸುವವರೆಗೂ ಸ್ವಲ್ಪ ಮಂಕಾಗಿದ್ದ ಚಂದ್ರಶೇಖರ ಮನೆಗೆ ಹೊರಟಾಗ ಎಂದಿನಂತೆ ತನ್ನ ನಿತ್ಯಶೈಲಿಯಲ್ಲಿ ಇತರ ಹುಡುಗರನ್ನು ರಸ್ತೆಯಲ್ಲಿ ಗೋಳುಹುಯ್ದುಕೊಳ್ಳುತ್ತಿದ್ದ. ನಾನು, ನನ್ನ ಅಕ್ಕ ಅದನ್ನು ನೋಡಿದಾಗ, ಇದೇನು ಇವನಿಗೆ ಮನೆಯಲ್ಲಿ ತಂದೆ-ತಾಯಿ ಯಾವ ಕ್ರಮವನ್ನೂ ಕೈಗೊಳ್ಳದೆ ಒಳ್ಳೆ ಬೀದಿ ಬಸವನಂತೆ ಬಿಟ್ಟಿದ್ದಾರಲ್ಲ ಎಂದು ತಲೆಕೆಡಿಸಿಕೊಂಡಿದ್ದೆವು. ಹೀಗೆ ೩ ವರ್ಷ ಕಳೆದು ನಾವೆಲ್ಲಾ ೭ನೆಯ ತರಗತಿಗೆ ಕಾಲಿಟ್ಟೆವು. ಅದೇ ಕೊನೆಯ ವರ್ಷ. ಆಗೆಲ್ಲ ೭ನೆಯ ತರಗತಿಯ ಕೊನೆಯಲ್ಲಿ ಪಬ್ಲಿಕ್ ಪರೀಕ್ಷೆ ಇತ್ತು. ಅದು ನಮ್ಮ ಜೀವನದ ಮೊದಲ ದೊಡ್ಡ ಪರೀಕ್ಷೆ. ಹಾಗಾಗಿ ಮೊದಲಿನಿಂದಲೇ ಸ್ಪೆಶಲ್ ಕ್ಲಾಸಿನ ಕಾಟ. ಇದ್ದಕ್ಕಿದ್ದ ಹಾಗೆ ಚಂದ್ರಶೇಖರನ ನಡವಳಿಕೆಯಲ್ಲಿ ಬದಲಾವಣೆ ಕಾಣಿಸಲಾರಂಭಿಸಿತ್ತು. ಬಹುಶಃ ಪಂಕಜಮ್ಮ ಅವನ ತಂದೆ-ತಾಯಿಯರನ್ನು ಕರೆಸಿ, ಅವರಿಗೆ ultimate warning ಕೊಟ್ಟಿದ್ದರೇನೋ ಅನ್ನಿಸುತ್ತೆ. ಕ್ಲಾಸಿನಲ್ಲಿ ಗಂಭೀರವಾಗಿ ಕುಳಿತು ಪಾಠದ ಕಡೆಗೆ ಗಮನವೀಯುತ್ತಿದ್ದ ಚಂದ್ರಶೇಖರನಿಗೆ ಟೆಸ್ಟುಗಳಲ್ಲಿ ಸ್ವಲ್ಪ ಡೀಸೆಂಟ್ ಆಗಿ ಮಾರ್ಕುಗಳೂ ಬರಲಾರಂಭಿಸಿತ್ತು. ಅವನ ತುಂಟಾಟಗಳೂ ಹೆಚ್ಚುಕಡಿಮೆ ನಿಂತಿದ್ದವು. ಆದರೂ ಹಲವೊಮ್ಮೆ ಹುಡುಗಿಯರ ಜಡೆ ಎಳೆಯುವ ಚಟುವಟಿಕೆ ಮುಂದುವರೆದಿತ್ತು. ಶಾಲೆಯ ಕಡೆಯ ಟರ್ಮ್ ಶುರುವಾದಾಗ, ಸ್ಪೆಶಲ್ ಕ್ಲಾಸಿನ ಹಾವಳಿ ಹೆಚ್ಚಿ, ಅವನೂ ತಣ್ಣಗಾದ. ಪಬ್ಲಿಕ್ ಪರೀಕ್ಷೆಯಲ್ಲಿ ಅವನು ೪೦% ಮಾರ್ಕ್ ಬಂದು ಪಾಸಾಗಿದ್ದ ಎಂದು ತಿಳಿದಾಗ, ನಮಗೆಲ್ಲಾ ಸ್ವಲ್ಪ ಆಶ್ಚರ್ಯವಾಗಿತ್ತು. ಚಂದ್ರಶೇಖರನ ಯಶಸ್ಸಿಗೆ ನಮ್ಮ ಹಲವಾರು ನಮ್ಮ ಟೀಚರುಗಳ ಮುತುವರ್ಜಿ ಬಹುಶಃ ಕಾರಣವಾಗಿತ್ತು. ಶಾಲೆಯ ಕಡೆಯ ಸಮಾರಂಭ ಬೀಳ್ಕೊಡುಗೆಯ ದಿನ, ಅವನೂ ತನ್ನ ಆಟೋಗ್ರಾಫ್ ಎಲ್ಲರ ಮುಂದಿಟ್ಟಾಗ, ನಾವು ಅವನ ಹಿಂದಿನ ತುಂಟಾಟ ಪುಂಡಾಟವನ್ನು ಮರೆತು ಅದರಲ್ಲಿ Best Wishes ಬರೆದದ್ದು ಇಂದಿಗೂ ನನ್ನ ನೆನಪಿನಲ್ಲಿ ಹಸಿರಾಗಿದೆ. ವಾಣಿ ವಿದ್ಯಾ ಮಂದಿರ ಬಿಟ್ಟ ನಂತರ ನನ್ನ ಹೈಸ್ಕೂಲಿನ ದಿನಗಳಲ್ಲಿ ನಾನೆಂದೂ ಚಂದ್ರಶೇಖರನನ್ನು ನೋಡಲೇ ಇಲ್ಲಾ. ಅವನು ಎಲ್ಲಿ ತನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರೆಸಿದ ಎನ್ನುವ ಮಾಹಿತಿಯೂ ನನಗೆ ಸಿಗಲಿಲ್ಲ. ನನ್ನ ಶಾಲೆಯ ದಿನಗಳ ನೆನಪಾದಾಗಲೆಲ್ಲ, ಚಂದ್ರಶೇಖರ ಸುಳಿಯುತ್ತಿರುತ್ತಾನೆ. ಇತ್ತೀಚೆಗೆ ನನ್ನ ಅಕ್ಕನ ಕೈಯಲ್ಲಿ ಮಾತಾನಾಡುವಾಗ, ವಾಣಿ ವಿದ್ಯಾ ಮಂದಿರದ ಬಗ್ಗೆ ಮಾತನಾಡಿದ್ದೆವು. ಆಗಲೂ ಚಂದ್ರಶೇಖರ ನಮ್ಮ ಸಂಭಾಷಣೆಯಲ್ಲಿ ಸುಳಿದು ನಾವಿಬ್ಬರೂ ಅವನ ತುಂಟಾಟವನ್ನು ನೆನೆಸಿಕೊಂಡು ನಕ್ಕಿದ್ದೆವು. ಬಾಲ್ಯದ ಆಟ, ಆ ಹುಡುಗಾಟ ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ. ಇಂದು ಚಂದ್ರಶೇಖರ ನಮ್ಮಂತೆಯೇ ಸಂಸಾರಿಯಾಗಿ ಮಕ್ಕಳು-ಮೊಮ್ಮಕ್ಕಳೊಂದಿಗೆ ಜೀವನ ನಡೆಸುತ್ತಿರಬೇಕು.

– ಉಮಾ ವೆಂಕಟೇಶ್

***************************************************************

ನೆನಪಿನ ನೀರೆ – ಸವಿತ ಸುರೇಶ್

ಅಮ್ಮಮ್ಮ, ದೊಡ್ಡಮ್ಮ ಹಾಗು ಅಮ್ಮ ಹಾಕುತ್ತಿದ್ದ ಕಸೂತಿ ಕೆಲಸವನ್ನು ನೋಡುತ್ತಿದ್ದ ನನಗೆ ಕಸೂತಿ ಎಂದರೆ ಆಸಕ್ತಿ ಇತ್ತು. ಆದರೆ ಹಾಕಲು ಬಿಡುತ್ತಿರಲಿಲ್ಲ. ಏಕೆಂದರೆ ಸೂಜಿ ಕೈಗೆ ಬಹಳಷ್ಟು ಬಾರಿ ಚುಚ್ಚಿಕೊಂಡಿದ್ದೆ.

ಹಾಗಾಗಿ ೭ನೇ ತರಗತಿ ಯಲ್ಲಿ ಓದುತಿದ್ದಾಗ ನಮ್ಮ ಶಾಲೆಯಲ್ಲಿ ಕಸೂತಿ ಕಕ್ಷವಿತ್ತು. ಹೇಗಾದರೂ ಮಾಡಿ ಕಸೂತಿ ಹಾಕಲೇಬೇಕೆಂದು ನಿರ್ಧರಿಸಿ, ಅಮ್ಮನಿಗೆ ಗೊತ್ತಾಗದಂತೆ ಶಾಲೆಯಲ್ಲೇ ಕುಳಿತು ಹಾಕಿದಂತ ಕಸೂತಿ.ಬಹಳಷ್ಟು ಬಾಲ್ಯದ ಮುಗ್ಧ ನೆನಪಾಗುತ್ತದೆ.

ಕಸೂತಿ ಕಲಿಸುತ್ತಿದ್ದ ನಮ್ಮ Work Experience ಶಿಕ್ಷಕಿಯಾದ ಜಯಲಕ್ಷ್ಮಿ ಮಿಸ್. ನಾವು ಮಕ್ಕಳೆಲ್ಲ ಸೇರಿ ಆಡುತ್ತಿದ್ದ ಕೊಟ್ಟಡಿ; ನಾನು ‘ಕನ್ನಡ ಪ್ರಭ ‘ ದಿನಪತ್ರಿಕೆಯಿಂದ ಮುಖ್ಯಾಂಶಗಳನ್ನು ಆಯ್ದು  ಬರೆಯುತ್ತಿದ್ದ ಬೋರ್ಡ್; ಮಧ್ಯಾಹ್ನ ಊಟದ ಸಮಯದಲ್ಲಿ ನಾವು ಸ್ನೇಹಿತರೆಲ್ಲರೂ ಪರಸ್ಪರ ಡಬ್ಬಿಯ ಊಟವನ್ನು ಹಂಚಿಕೊಂಡು ಹರಟೆ ಹೊಡೆಯುತ್ತಿದ್ದ ಜಗುಲಿ; ಬೆಲ್ ಹೊಡೆದರೆ attender ಚಿಕ್ಕಣ್ಣ ನಮ್ಮನ್ನೆಲ್ಲಾ ಕೊಟ್ಟಡಿಗೆ ಓಡಿಸುತ್ತಿದ್ದ ಸನ್ನಿವೇಶ….. ಇನ್ನೂ ಅದೆಷ್ಟೋ!!!!!!.

ಒಂದು painting ತೆಗೆದುಕೊಂಡು ಹಾಕಿದ್ದ ಕಸೂತಿ ಇದು. ಜಯಲಕ್ಷ್ಮಿ ಮಿಸ್ ಯಿಂದ ‘ V Good’ ಎಂದು ಕೆಂಪು ಶಾಹಿಯಲ್ಲಿ ಬಿದ್ದ ಸಹಿ ಮನಸ್ಸಿಗೆ ಏನೋ ಸಾಧಿಸಿದ ಹಾಗೆ ಪರಮಾನಂದ.

ನಂತರ ಮನೆಗೆ ಬಂದು ಅಮ್ಮನಿಗೆ ತೋರಿಸಿ ಶಭಾಷ್ ಎಂದು ಪ್ರಶಂಸೆ ಪಡೆದ್ದದ್ದು. ಈ ಕಸೂತಿ ಹಾಕಿ  ೩೨ ವರ್ಷಗಳಾದರೂ, ಹಾಕಿದ ಸಂದರ್ಭ, ಛಲ, ಶ್ರದ್ಧೆ, ಬಾಲ್ಯದ ನೆನಪುಗಳು ಹಾಗೆ ಅಚ್ಚಹಸಿರಾಗಿಯೇ ಉಳಿದಿದೆ ಏಕೆಂದರೆ ಇದನ್ನು ನಾನು frame ಹಾಕಿ ನನ್ನ ಕೋಣೆಯಲ್ಲೇ ಇಟ್ಟಿದ್ದೇನೆ!!!!!!!!!!

✍ಸವಿತ ಸುರೇಶ್

******************************************************************