ಅಡುಗೆ – ಅಡುಗೆಮನೆ ಸರಣಿ: ದಾಕ್ಷಾಯಣಿ ಗೌಡ ಮತ್ತು ರಾಧಿಕಾ ಜೋಶಿ.

ನಮಸ್ಕಾರ. ಅಡುಗೆ – ಅಡುಗೆಮನೆ ಸರಣಿಯ ಮುಂದಿನ ಕಂತು ಇಲ್ಲಿದೆ. ಡಾ. ದಾಕ್ಷಾಯಣಿ ಗೌಡ ಅವರು ಬಿಸಿಬೇಳೆ ಭಾತಿನ ಮಸಾಲೆಯನ್ನು ಬಡಿಸಿದರೆ, ರಾಧಿಕಾ ಜೋಶಿಯವರು ಮಸಾಲೆಗಳ ಸುಂದರ ರಾಣಿಯ ಬಗ್ಗೆ ಬರೆಯುತ್ತಾರೆ. ಓದಿ ನೋಡಿ, ನಿಮ್ಮ ಅನಿಸಿಕೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತೀರೆಂದುಕೊಂಡಿದ್ದೇನೆ. ದಯವಿಟ್ಟು ನೀವೂ ನಿಮ್ಮ ಅನುಭವಗಳನ್ನು ಬರೆದು ಕಳುಹಿಸಿ.

ಈ ಸಂಚಿಕೆ ನನ್ನ ಸಂಪಾದಕೀಯದ ಕೊನೆಯ ಪ್ರಸ್ತುತಿ. ನನಗೆ ಈ ಅವಕಾಶ ಕೊಟ್ಟ ಅನಿವಾಸಿಯ ಪದಾಧಿಕಾರಿಗಳಿಗೆ ನನ್ನ ಅಭಿವಾದನಗಳು. ಕಳೆದ ಹೆಚ್ಚು-ಕಡಿಮೆ ಆರು ತಿಂಗಳ ಅವಧಿಯಲ್ಲಿ ಲೇಖನಗಳನ್ನು ಬರೆದುಕೊಟ್ಟವರಿಗೂ, ಕೇಳಿದಾಗೆಲ್ಲ ಸಹಾಯ ಮತ್ತು ಮಾರ್ಗದರ್ಶನ ಮಾಡಿದವರಿಗೂ ನಾನು ಆಭಾರಿ. ನನ್ನ ಕೈಯಿಂದ ಸಂಪಾದಕನ ದಂಡವನ್ನು (baton) ಇಸಿದುಕೊಂಡು ಈ ಬ್ಲಾಗಿನ ಚುಕ್ಕಾಣಿ ಹಿಡಿಯಲಿರುವವರು ಡಾ. ದಾಕ್ಷಾಯಣಿ ಗೌಡ. – ಎಲ್ಲೆನ್ ಗುಡೂರ್ (ಸಂ.)

*********************************************************************************************

ಹೊಸ ಬಿಸಿಯ ಬಿಸಿಬೇಳೆ ಭಾತು – ದಾಕ್ಷಾಯಣಿ ಗೌಡ

ನನ್ನ ಈ ಅಡಿಗೆಯ ಬರಹಕ್ಕೆ ಪೀಠಿಕೆಯ ಅಗತ್ಯವಿದೆ.

ನಮ್ಮ ಮದುವೆಯಾಗಿ ಕೆಲ ತಿಂಗಳ ನಂತರ,  ಮದುವೆ ಮಾಡಿದ ನಮ್ಮ ತಂದೆತಾಯಿಗಳಿಗೆ ನಮ್ಮಿಂದಾದ ಓಳ್ಳೆಯ ಉಡುಗೊರೆಯನ್ನು ಕೊಡಬೇಕೆಂದು ನಾವಿಬ್ಬರೂ ನಿರ್ಧರಿಸಿದವು.  ನಾವು ಕೊಡಿಟ್ಟಿದ್ದ ಸ್ವಲ್ಪ ಹಣದಲ್ಲಿ ಅವರಿಗೆ  ಕಾಶಿಯಾತ್ರೆ ಮಾಡಿಸುವುದೆನ್ನುವ ಯೋಜನೆಯನ್ನ ಹಾಕಿಕೊಂಡೆವು.  ಈಗ ಹಿಂತಿರುಗಿ ನೋಡಿದರೆ ಅವರಿಗೆ ಕಾಶಿಯಾತ್ರೆಯ ವಯಸ್ಸಾಗಿರಲಿಲ್ಲ.  ನಮ್ಮ ಅಮ್ಮಂದಿರಿಬ್ಬರಿಗೂ ಆಗ ೫೦ ವರ್ಷ ಮತ್ತು ಅಪ್ಪಂದಿರಿಬ್ಬರಿಗೂ ೬೦ಕ್ಕಿಂತ ಕಡಿಮೆ ವಯಸ್ಸು.

ನಮ್ಮ ಸಣ್ಣ ಉಳಿತಾಯದಲ್ಲಿ ಕಾಶಿಯ ಜೊತೆಗೆ, ಅವರನ್ನು ಉತ್ತರಭಾರತದ ಯಾತ್ರೆ (ಕಾಶಿ, ಹರಿದ್ವಾರ, ಡೆಲ್ಲಿ, ಜಯಪುರ, ಅಗ್ರಾ, ಮಥುರಾ) ಮಾಡಿಸುವುದೆಂದು ನಿರ್ಧರಿಸಿ, ಅವರೊಡನೆ ಹಂಚಿಕೊಂಡಾಗ, ಅವರೂ ಖುಷಿಯಾಗಿ ಹೊರಟೇಬಿಟ್ಟರು. ಈಗಿನ ಹಾಗೆ ಇಂಟರ್ನೆಟ್ ಇರಲಿಲ್ಲ,  ಟೂರ್ ಕಂಪನಿಗಳೂ ಬಹಳ ಕಡಿಮೆ ಇದ್ದವು.  ಕಂಪನಿಗಳು ಇದ್ದರೂ ನಾವು ಕೊಡಿಟ್ಟ ಹಣ ಅದಕ್ಕೆಲ್ಲ ಸಾಕಾಗುತ್ತಿರಲಿಲ್ಲ.  ಏನಿರದಿದ್ದರೂ ಆಗ ಭಂಡದೈರ್ಯಕ್ಕೆ ಕೊರತೆಯಿರಲಿಲ್ಲ ಎಂದು ಈಗ ಅರ್ಥವಾಗುತ್ತದೆ.

ರೈಲ್ವೆ ಟಿಕೆಟ್ ಮಾತ್ರ ಪ್ರಯಾಣಕ್ಕೆ ಮೊದಲೆ ಬುಕ್ ಮಾಡಿದ್ದೆವು.  ಈ ಪ್ರವಾಸಕ್ಕೆ ನನ್ನ ನಾದಿನಿ (ಪತಿಯ ಅಕ್ಕ) ತನ್ನ ೧೦ ಮತ್ತು ೧೨ ವರ್ಷದ ಮಕ್ಕಳ ಜೊತೆ ಬರುವುದಾಗಿ ಹೇಳಿದಾಗ ಸ್ವಲ್ಪ ಭಯವೇ ಆಯಿತು.  ಆಕೆಯ ಪತಿ ತನ್ನ ಕೆಲಸದ ಒತ್ತಡದ ಕಾರಣ ಬರುವುದಿಲ್ಲವೆಂದರು.  ನನ್ನ ನಾದಿನಿ ತನ್ನ ಖರ್ಚನ್ನು ತಾನೇ ಕೊಡುವುದಾಗಿ ಹೇಳಿದಾಗ ಬೇಡ ಎನ್ನುವಷ್ಟು ಹಣ ನಮ್ಮಲ್ಲಿರದುದರಿಂದ ಆಯಿತು ಎಂದು ಸಂಕೋಚಿಸದೆ ಒಪ್ಪಿಕೊ೦ಡೆವು.  ಇದು ೧೯೯೧ ನೇ ವರ್ಷ.  ನಮ್ಮ ಬಳಿ ಮೊಬೈಲ್ ಫೋನಿರಲಿ, ಮನೆಯಲ್ಲಿ ದೂರವಾಣಿ ಸಹ ಇರಲಿಲ್ಲ. ನಮ್ಮ ದೂರವಾಣಿಯ ಕೋರಿಕೆಯ ಪತ್ರದ ಜೊತೆಗೆ ಲಂಚದ ಹಣವನ್ನು ಲಗತ್ತಿಸಿರಲಿಲ್ಲದ ಕಾರಣ ಅದು, ಅಧಿಕಾರಿಗಳ ಮೇಜಿನಿಂದ ಮುಂದಕ್ಕೆ ಸರಿದಿರಲಿಲ್ಲ.

ರೈಲು ಸೋಮವಾರ ಸಾಯಂಕಾಲ ಡೆಲ್ಲಿಗೆ ಹೊರಡುವುದಿತ್ತು.  ಭಾನುವಾರ ಸಂಜೆ ಯಾವ ರೀತಿಯ ಕುರುಹು ಕೊಡದೆ, ನನ್ನ ಅತ್ತೆ, ಮಾವ, ನಾದಿನಿ, ಅವರ ಮಕ್ಕಳು ಮತ್ತು ನನ್ನ ಅಪ್ಪ, ಅಮ್ಮ ದಢೀರನೆ ಮನೆಗೆ ಬಂದಿಳಿದರು.  ಪ್ರತಿ ಭಾನುವಾರ ನಾವಿಬ್ಬರೂ ಹೋಟೆಲ್ಲಿನಲ್ಲಿ ಅಥವಾ ಸ್ನೇಹಿತರ ಮನೆಗಳಲ್ಲಿ ಊಟಮಾಡುವುದು ಆಗ ನಮ್ಮ ಪರಿಪಾಠವಾಗಿತ್ತು.  ಹಾಗಾಗಿ ಅಡಿಗೆ ಮಾಡುವ ಯಾವ ತಯಾರಿಯನ್ನು ನಾನು ಮಾಡಿರಲಿಲ್ಲ.  ಇವರುಗಳು ಸೋಮವಾರ ಮಧ್ಯಾಹ್ನ ಬರಬಹುದೆಂದು ನಮ್ಮ ಊಹೆಯಾಗಿತ್ತು.

ಮನೆಗಿಳಿದ ಜನರ ದಂಡನ್ನು ನೋಡಿ ನಾನು ಹೌಹಾರಿಬಿಟ್ಟೆ.  ನನ್ನ ಮೊದಲ ಚಿಂತೆ ಇಷ್ಟೊಂದು ಜನರಿಗೆ ರಾತ್ರಿಯ ಊಟಕ್ಕೆ ಹೇಗೆ ಅಡಿಗೆ ಮಾಡುವುದು ಎಂದು. ಹೋಟೆಲಿಗೆ ಹೋಗೋಣ ಎಂದು ಹೇಳುವ ಧೈರ್ಯ ನಮ್ಮಿಬ್ಬರಿಗೂ ಬರಲಿಲ್ಲ.   ನನ್ನ ಮುಖ ನೋಡಿದ ನನ್ನ ನಾದಿನಿ ”ದಾಕ್ಷಾಯಿಣಿ ಯೋಚನೆ ಮಾಡಬೇಡ, ರಾತ್ರಿ ಅಡಿಗೆ ನಾನು ಮಾಡುತ್ತೇನೆ” ಎಂದಾಗ ನನ್ನ ಮುಖ ಅರಳಿತು ಮತ್ತು ಆಕೆ ”ಬಿಸಿಬೇಳೆ ಭಾತ್ ಮಾಡುತ್ತೇನೆ” ಅಂದಾಗ ಮನಸ್ಸೂ ಅರಳಿಬಿಟ್ಟಿತು.  ನನ್ನ ನಾದಿನಿ ಅಂದು ಮತ್ತು ಇಂದಿಗೂ ಬಹುರುಚಿಯ ಬಿ.ಬೇ.ಭಾ. (ಬಿಸಿಬೇಳೆಭಾತ್ ) ಮಾಡುವುದರಲ್ಲಿ ನಿಪುಣಿ.

ನಾದಿನಿ ಕೊಟ್ಟ ತರಕಾರಿಯ ಲಿಸ್ಟ್ ಹಿಡಿದು ಸ್ಕೂಟರ್ ಹತ್ತಿ ವ್ಯಾಪಾರ ಮಾಡಿಕೊಂಡು ಬಂದಾಯಿತು.  ಆಕೆ ’ಕಾರದ ಪುಡಿ’ ಕೊಡು ಅಂದಾಗಲೆ ನಮ್ಮ ಮನೆಯಲ್ಲಿ ಅದು ಮುಗಿದಿದೆ ಎನ್ನುವ ನೆನಪು ನನಗೆ ಬಂದದ್ದು.  ಹಸಿಮೆಣಸಿನಕಾಯಿಯೂ ಮನೆಯಲ್ಲಿರಲಿಲ್ಲ.  ಕಾರಕ್ಕೆ ಏನು ಮಾಡುವುದೆಂದು ಚಿಂತಿಸುತ್ತಿರುವಾಗ, ನಮ್ಮ ಅಪಾರ್ಟ್ಮೆಂಟ್ ಕೆಳಗೆ ಯಾವಾಗಲೋ ನೋಡಿದ್ದ ಮೆಣಸಿನಕಾಯಿಯ ಗಿಡ ನನ್ನ ನೆನಪಿಗೆ ಬಂತು.  ನಾದಿನಿ ಹೇಳಿದ ಹಾಗೆ ಕೆಂಪಗಿರುವ ೬-೮ ಮೆಣಸಿನಕಾಯಿ ಕಿತ್ತು ತಂದಾಗ ಸಮಯಕ್ಕೆ ಸರಿಯಾಗಿ ಯೋಚಿಸಿದ ಬಗ್ಗೆ, ನನ್ನ ಬೆನ್ನು ನಾನೆ ತಟ್ಟಿಕೊಂಡಿದ್ದಾಯಿತು.

ಅಂತೂ, ಇಂತೂ ಭಾತು ತಯಾರಾಯಿತು.  ನಮ್ಮ ಮನೆಯಲ್ಲಿದ್ದ ಬೇರೆ ಬೇರೆ ಸೈಜಿನ ತಟ್ಟೆ-ಲೋಟಗಳೊಂದಿಗೆ, ಹಸಿದ ಹೊಟ್ಟೆಯೊಂದಿಗೆ, ನಾವೆಲ್ಲ ಚಾಪೆಯ ಮೇಲೆ ಕಾತುರದಿಂದ ಕುಳಿತಾಯಿತು.  ಘಮಘಮವೆನ್ನುವ ಭಾತು ತಟ್ಟೆಗೆ ಬಿತ್ತು.  ಬಾಯಿಗಿಟ್ಟಿದ್ದೇ ತಡ ಎಲ್ಲರ ಕೈಗಳು ನೀರಿನ ಕಡೆಗೆ.  ಕಣ್ಣಿನಲ್ಲಿ ನೀರು, ಮಾತನಾಡಲು ಬಾಯಿ ತೆರೆದರೆ ಕೆಮ್ಮು.  ನೀರು ಕುಡಿದು, ಹೊಟ್ಟೆಯ ಕರೆ ತಡೆಯಲಾಗದೆ ಮತ್ತೊಂದು ತುತ್ತು ಬಾಯಿಗಿಟ್ಟಾಗ ನೀರಿನ ಬದಲು ಸಕ್ಕರೆ ಡಬ್ಬಕ್ಕೆ ಕೈ ಹಾಕುವ ಹಾಗಾಯಿತು.  ಮಾಡಿದ್ದೆಲ್ಲ ಚೆಲ್ಲಿ ಮರುದಿನ ಪ್ರಯಾಣಕ್ಕೆಂದು ತಂದಿದ್ದ ಬಿಸ್ಕತ್ತು, ಬಾಳೆಹಣ್ಣುಗಳಲ್ಲಿ ಹೊಟ್ಟೆ ತುಂಬಿಸಿಕೊಂಡಿದ್ದಾಯಿತು.

ಈಗಲೂ ಆ ಚಿಕ್ಕ ಮೆಣಸಿನಕಾಯಿಗಳನ್ನು ನೋಡಿದಾಗ ಹೊಟ್ಟೆಯಲ್ಲಿ ಅಸಿಡ್ ತಂತಾನೆ ಸ್ರವಿಸುತ್ತದೆ.  ”ಇದು ಜೀರಿಗೆ ಮೆಣಸಿನಕಾಯಿ ಅಂಥಾ ಕಾರವಿರುವುದಿಲ್ಲ” ಅಂತೆಲ್ಲ ಯಾರು ಹೇಳಿದರೂ ಅದರ ಕಡೆ ತಿರುಗಿ ನೋಡಲೂ ನನಗೆ ಭಯ.

ಕೇಳಿದವರು ಅತ್ತೆ, ಮಾವ ಮತ್ತು ಅಮ್ಮ, ಅಪ್ಪನನ್ನು ಜೊತೆಗೂಡಿಸಿ (ಬೀಗರ ಗುಂಪು ಸರಿಯಾದ ಜೊತೆಯಲ್ಲವೆಂದು ಜನ ಹೇಳುತ್ತಾರೆ) ಯಾತ್ರೆ ಮಾಡಿಸಿದ ಸಾಹಸ ನಮ್ಮದೆಂದು ಹೊಗಳುತ್ತಾರೆ.  ಎರಡು ವಾರ ಯಾವ ಅನುಭವವೂ, ಅನುಕೂಲವೂ ಇಲ್ಲದೆ, ನಮ್ಮ ಉಳಿತಾಯದಲ್ಲಿ, ಮದುವೆಯಾದ ಮೊದಲ ವರ್ಷದಲ್ಲೇ, ನಮ್ಮಿಬ್ಬರ ಪೋಷಕರನ್ನು ಉತ್ತರಭಾರತದ ಯಾತ್ರೆ ಮಾಡಿಸಿದ ಹೆಮ್ಮೆ ನಮ್ಮಿಬ್ಬರಿಗೆ ಇಂದಿಗೂ ಇದೆ.  ಇದೆಲ್ಲದರ ಜೊತೆಗೆ ಸಣ್ಣ ಮೆಣಸಿನಕಾಯಿಯ ಭಯವೂ ಬೇರುಬಿಟ್ಟಿದೆ.  ವರ್ಷಕ್ಕೊಮ್ಮೆ ತಪ್ಪದೇ ನಾದಿನಿಯ ಮನೆಯಲ್ಲಿ ಬಿ.ಬೇ.ಭಾ ತಿಂದಾಗೆಲ್ಲ ಇದು ನೆನಪಿಗೆ ಬರುತ್ತದೆ.

– ಡಾ. ದಾಕ್ಷಾಯಿಣಿ ಗೌಡ.

******************************************************************************************

ಸ್ವರ್ಗದ ಸೌಗಂಧಿಕಾ ಪುಷ್ಪ – ರಾಧಿಕಾ ಜೋಶಿ

ಇದು ನೋಡಲು ನಮ್ಮ ಹಿತ್ತಲಿನ ಕೈತೋಟದಲ್ಲಿ ಅನಾಯಾಸವಾಗಿ ಫೆಬ್ರುವರಿ ಮಾರ್ಚ್ ತಿಂಗಳಿನಲ್ಲಿ ಚಿಗುರುವ ನೇರಳೆ ಕ್ರೋಕಸ್ ಹೂವಿನಂತೆ ಕಾಣುತ್ತದೆ. ವರ್ಷದ ಕೇವಲ ೨ ವಾರಗಳಲ್ಲಿ ಕಾಶ್ಮೀರದ ಪರ್ವತ ಶ್ರೇಣಿಗಳ ನಡುವೆ ಹರಡಿದ ಫಲವತ್ತಾದ ಅತಿ ವಿಸ್ತಾರವಾದ ಜಮೀನಿನಲ್ಲಿ ಬೆಳೆಯುವುದು ಅತ್ಯದ್ಭುತವಾದ “ಕೆಂಪು ಬಂಗಾರ”. ಹಿಮಾಲಯದ ಗರ್ಭದಿಂದ  ಹೊರಹೊಮ್ಮುವ ನೇರಳೆ ಬಣ್ಣದ ಹೊದಿಕೆ ಹೊತ್ತ ಈ ಸುಂದರ ಹೂವಿನ ರತ್ನಗಂಬಳಿ “ಕೇಸರಿ”. ವಿಶ್ವದ ಅತ್ಯಂತ ಬೆಲೆಬಾಳುವ ಹಾಗು ಕೆಲವೇ ಪ್ರದೇಶದಲ್ಲಿ ಬೆಳೆಯುವ ಈ ಮಸಾಲೆ ಪದಾರ್ಥ ನೋಡಲು ಎಷ್ಟು ಮನೋಹರ ಅಷ್ಟೇ ಶೇಷ್ಠ ಹಾಗು ಉನ್ನತ. ಮೂಲತಃ ಇದು ಭಾರತ ದೇಶದ ಬೆಳೆಯಲ್ಲ. ಪರ್ಷಿಯಾ ,ಅಫ್ಘಾನ್ ಇಂದ ಬಂದಿರಬಹುದೆಂಬ ವಿಭಿನ್ನ ಕಥೆಗಳಿವೆ. ಹನ್ನೆರಡನೆಯ ಶತಮಾನದಲ್ಲಿ ಕೇಸರಿ ಗಡ್ಡೆಗಳನ್ನು ಸ್ಥಳೀಯ ಮುಖ್ಯಸ್ಥರಿಗೆ ಸೂಫಿ ಸಂತರಾದ ಖವಾಜಾ ಮಸೂದ್ ವಾಲಿ ಮತ್ತು ಶೇಖ್ ಷರೀಫ್-ಯು-ದಿನ್ ಉಡುಗೊರೆಯಾಗಿ ನೀಡಿದರು ಅನ್ನುವುದು ಒಂದು ಕಥೆಯಾದರೆ, ಪರ್ಷಿಯನ್ನರಿಂದ ಹಿಡಿದು ಹಿಂದೂ ತಾಂತ್ರಿಕ ರಾಜರವರೆಗೆ, ಪ್ರತಿಯೊಬ್ಬರಿಗೂ ಕೇಸರಿಯು ಕಣಿವೆಯವರೆಗೆ ಕೊಟ್ಟ ವರವೆಂದು ನಂಬುತ್ತಾರೆ. ಕೇಶರಕ್ಕೆ ಗುಣಗಳ ತಕ್ಕಂತೆ ಹಲವಾರು ಹೆಸರು: ಜಾಫ್ರಾನ್, ಕೇಸರ್, ಕಾಂಗ್ ಪೋಶ್ ಮತ್ತು ಕುಂಕುಮ ಅನ್ನುವುದು ಜನಪ್ರಿಯ. ಕಾಶ್ಮೀರದಲ್ಲಿ ಶರತ್ಕಾಲ ಮುಗಿಯಲು ಪ್ರಾರಂಭಿಸಿದಾಗ ಕಾಶ್ಮೀರಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ತಮ್ಮ ಹೊಲಗಳಲ್ಲಿ ಕಾಣುತ್ತಾರೆ. ಅವರು ಕೇಸರಿ ಕ್ರೋಕಸ್ ಎಂಬ ಸೂಕ್ಷ್ಮ ನೇರಳೆ ಹೂವನ್ನು ಆರಿಸಿಕೊಳ್ಳುವಾಗ ತಮ್ಮ ಬೆತ್ತದ ಬುಟ್ಟಿಗಳೊಂದಿಗೆ ಅವುಗಳನ್ನು ಬಾಚಿಕೊಳ್ಳುವ ದೃಶ್ಯ ಸುಂದರ. ಪಾರಿಜಾತದಂತೆ ಇರುವ ಈ ಸ್ವರ್ಗೀಯ ಗುಲಾಬಿ ನೇರಳೆ ಹೂವನ್ನು ಸೂಕ್ಷ್ಮವಾಗಿ ಆರಿಸಿಕೊಳ್ಳುವ ಈ ನೋಟ ಹಾಗು ಸ್ಪರ್ಶ ಒಂದು ಆಧ್ಯಾತ್ಮಿಕ ಅಭೌತಿಕ ಅನುಭವವೇ ಸರಿ! ಕೇಸರಿ ಹೂವಿನ ದಳಗಳನ್ನು ಸಾಮಾನ್ಯವಾಗಿ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಆದರೆ ಕೆಂಪು ಎಳೆಗಳ ಮಧ್ಯದಲ್ಲಿ ಇರುವುದೇ ಶುದ್ಧ ಕೇಸರಿ. ಪ್ರತಿಯೊಂದು ಹೂವು ಕೇವಲ ಮೂರು ಎಳೆಗಳನ್ನು ಉತ್ಪಾದಿಸುತ್ತದೆ. ಅಂತಹ ಸುಮಾರು 350 ಕೆಂಪು ಎಳೆಗಳಿಂದ ಒಂದು ಗ್ರಾಂ ಕೇಸರಿ ತಯಾರಾಗುತ್ತದೆ. ಇದನ್ನು ಎಲ್ಲಾ ರೀತಿಯ ಆಹಾರ ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತದೆ. ಹಾಲಿನಲ್ಲಿರುವ ಕೇಸರಿ ಎಳೆಯು ಹಿಮಾಲಯದ ಕಣಿವೆಯ ಸೂರ್ಯೋದಯವನ್ನು ನೆನಪಿಸುತ್ತದೆ. ಕೆಂಪು, ಕಿತ್ತಳೆ ಮತ್ತು ಚಿನ್ನದ ಬಣ್ಣಗಳು ಅತ್ಯಂತ ನಯಮನೋಹರವಾದ ಮುಂಜಾವಿನ ಆಕಾಶವನ್ನು ಹೋಲುತ್ತದೆ. ಅಪರೂಪದ ಮಸಾಲೆ, ಇದು ಭಾರತೀಯ ಪಾಕಪದ್ಧತಿಯ ಆತ್ಮದ ಅತ್ಯಂತ ಅಮೂಲ್ಯವಾದ ಅಂಶ. ಹಾಲು, ಚಹಾ, ಅನ್ನದ (ಬಿರಿಯಾನಿ, ಪುಲಾವ್) ವೈವಿಧ್ಯಗಳು ಮತ್ತು ಇತರ ಭಕ್ಷ್ಯಗಳಲ್ಲಿ ಹಲವಾರು ಸಿಹಿತಿಂಡಿಗಳ ರುಚಿಯನ್ನು ಅಮರಗೊಳಿಸಲು ಕೇಸರಿಯ ಬಳಕೆಯಾಗುತ್ತದೆ.

ಈ ಕೆಂಪು ಕಾಂಚಾಣದ ಉತ್ಪಾದನೆಯು ವೇಗವಾಗಿ ಕುಸಿಯುತ್ತಿದೆ. ನಾವೀನ್ಯತೆಯತ್ತ ಕೆಲವು ಹೆಜ್ಜೆಗಳ ಹೊರತಾಗಿಯೂ, ಈ ದೇಶೀಯ ಉದ್ಯಮವು ಹೆಣಗಾಡುತ್ತದೆ. ಕೇಸರಿಯ ಅಭಾವದ ಕಾರಣ ಮೂಲ ಕೇಸರಿಯು ಈಗ ರಾಸಾಯನಿಕ ಪದಾರ್ಥಗಳಿಂದ ಬೆರೆತು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಕೇಸರಿಯ ದೈವಿಕ ಸುಗಂಧವು ಈ ಗಡಿ ಸಮಸ್ಯೆಯ ಹೋರಾಟದ ತೀಕ್ಷ್ಣ ವಾಸನೆಯೊಂದಿಗೆ ಬೆರೆಯುತ್ತಿದೆ. ಒಟ್ಟಿನಲ್ಲಿ ನಮ್ಮ ಪಾಕಶಾಸ್ತ್ರ ಮತ್ತು ನೈಸರ್ಗಿಕ ಪರಂಪರೆಯು ಪುನರ್ಕಲಿಕೆಗೆ ಕಾಯುತ್ತಿದೆ.

– ರಾಧಿಕಾ ಜೋಶಿ.

******************************************************************************************

ಅಡುಗೆ – ಅಡುಗೆಮನೆ ಸರಣಿ: ವೆಂಕಟ್ ಶ್ರೀರಾಮುಲು ಮತ್ತು ಲಕ್ಷ್ಮೀನಾರಾಯಣ ಗುಡೂರ್

ನಮಸ್ಕಾರ ಅನಿವಾಸಿಗರೆ, ಇಲ್ಲಿರುವುದು ಅಡುಗೆ-ಅಡುಗೆಮನೆ ಸರಣಿಯ ಮುಂದಿನ ಕಂತು. ಅಡುಗೆಮನೆಯಲ್ಲಿ ಸಿಗುವ ಸಂತೋಷಗಳ ಬಗ್ಗೆಯೂ ಸ್ವಲ್ಪ ಓದೋಣವೇ? ಶ್ರೀ ವೆಂಕಟ್ ಶ್ರಿರಾಮುಲು ಮತ್ತು ನನ್ನ ಅಡುಗೆಮನೆಯ ನಂಟಿನ ಬಗೆಗಿನ ಬರಹಗಳು ಕೆಳಗಿವೆ. ಓದಿ ಏನನ್ನಿಸಿತು ತಿಳಿಸಿ. ಮತ್ತೆ ನಿಮ್ಮ ಅನುಭವಗಳನ್ನೂ ಹಂಚಿಕೊಳ್ಳೋದಕ್ಕೆ ತಯಾರಾಗಿ. – ಎಲ್ಲೆನ್ ಗುಡೂರ್ (ಸಂ.)

ನನ್ನ ಮೊದಲ ಉಪ್ಪಿಟ್ಟು ವೆಂಕಟ್ ಶ್ರೀರಾಮುಲು

ನಾನು ಮೊದಲೇ disclaimer ಡಿಕ್ಲೇರ್ ಮಾಡುವುದು ಉಚಿತ.  ಅಡುಗೆ ಮತ್ತು ಬರಹ ಎರಡರಲ್ಲೂ ಅನುನುಭವಿ.  ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಜೋಡಿಸುವುದಲ್ಲಿ ಸ್ವಲ್ಪ ಪರಿಣಿಯಿತಿ ಇರಬಹುದು. ಈ ಐದು ದಶಕಗಳ ದಾಂಪತ್ಯದಲ್ಲಿ ಅಕ್ಷರ ಪದ ಜೋಡಿಸಿವುದರಲ್ಲಿ ಅಷ್ಟಕಷ್ಟೆ.  ಅನಿವಾಸಿ ಓದುಗರೇ ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ; ಏನಾದರೂ ಎಡವಟ್ಟು ಇದ್ದಲ್ಲಿ ಕ್ಷಮಿಸಿ.  

ಅಡಿಗೆ ಅಂದ ಕ್ಷಣವೇ ಮನಸ್ಸಿಗೆ ಬರುವುದು, ರುಚಿ,ರುಚಿಯಾದ ಘಮಿ ಘಮಿಸುವ ಆಹಾರ ತಿಂಡಿಗಳು. ಅನಿವಾಸಿಯಲ್ಲ ಪ್ರಕಟವಾದ, ಸ್ವಾದಕರವಾದ ಲೇಖನಗಳನ್ನು ನೋಡಿ ನಾನು ಯಾಕೆ  ಒಂದು ಕೈ ಹಾಕಬಾರದು ಅನಿಸಿತು.  ಯಾರೋ ನೀವು ಶಾkAಹಾರಿಯೇ ಎಂದು ಕೇಳಿದರು, ಅಲ್ಲ ಆದರೆ ನನ್ನ ಅಡಿಗೆ ತಿಂದವರು shock ಆಗಿ ಹಾರುತ್ತಾರೆ.

ನನ್ನ ಈ ಲೇಖನದ ಬಗ್ಗೆ ನನ್ನಾಕೆಗೆ  ಹೇಳಿದರೆ ಇಮಾಂಸಾಬಿ ಮತ್ತು ಗೋಕುಲಾಷ್ಟಮಿ ಸಂಬಂಧ ಅಂಥ ಟೀಕ್ ಟಾಕ್ ಆಗಿ ಟೀಕೆ ಬರುತ್ತೆ ನಿರೀಕ್ಷಿಸಿದೆ.  ಆದರೆ ಬದಲಾಗಿ “ನೀವು ಕೆಲವರಿಗಿಂತ ಪರವಾಗಿಲ್ಲ ಬಿಡಿ, ಅವರಿಗೆ SATNAV ಬೇಕು ಅಡಿಗೆ ಮನೆಗೆ ಹೋಗೋಕೆ” ಅನ್ನಬೇಕೆ!

ಅದು ನಿಜ; ನಾನು ಸಾಕಷ್ಟು ವೇಳೆ ಅಡಿಗೆಮನೆಯಲ್ಲಿ ಕಳೆಯುತ್ತೇನೆ.  ಪಾಕಪ್ರವೀಣತೆಯಿಂದ ಅಲ್ಲ, ಮಾಡಿದ್ದನ್ನು ಟೇಸ್ಟ್ ಮಾಡುವ ಅಭ್ಯಾಸವಿಲ್ಲದ ನಮ್ಮಾಕೆಯ ಆ ಮಧುರವಾದ ಉಸ್ತುವಾರಿ ನನಗೆ ಸೇರಿದ್ದು.  ಒಂದು ತರಹ ವೈನ್ ಟೆಸ್ಟರ್ – ಅವನು ನುಂಗಲ್ಲ ಅಷ್ಟೇ!

ಲೊಕ್ಡೌನ್ ಪ್ರಯುಕ್ತ, ನನ್ನ job description ಬದಲಾಯಿಸ ಬೇಕಾದ ಪ್ರಸಂಗ ಬಂತು. ನನ್ನ ಪ್ರಪ್ರಥಮ ಸಾಹಸ, ದಕ್ಷಿಣ ಭಾರತದ ಪ್ರಸಿದ್ಧ ಉಪ್ಪಿಟ್ಟು, (ವಿವಿಧಾತ್ಮಕವಾದ ವಿಷಯ) ಮಾಡುವದಕ್ಕೆ ಸಿದ್ದವಾಗಿದ್ದು.  ಒಂದೆರಡು ಥಿಯರಿ ಕ್ಲಾಸೆಸ್ ಆದ ಮೇಲೆ ನನ್ನ ಪಾಕ ಪ್ರಯೋಗ ಪ್ರಾರಂಭ.  ಪ್ರಾರಬ್ಧಕರ್ಮಾ, ನನ್ನ ಕಲನರಿ ಕೌಶಲ್ಯತೆ ಕುಂಠಿತವಾಗಿ ಕೊನೆಗೊಂಡಿತು. ಫಲಿತಾಂಶ: ತಳ ಕಚ್ಚಿದ, ಹೆಸರಿಗೆ ತಕ್ಕಹಾಗೆ ಉಪ್ಪು ಮತ್ತು ಹಿಟ್ಟು!

Can we have take away today? ಮೇಲಿಂದ ಧ್ವನಿ.  ಅಂದು ಹೇಗೋ ನಿರ್ವಹಿಸಿದೆವು..

ಅಲ್ಲಿಂದ ಮುಂದುವರಿದಿದ್ದನೇ ಈಗ ನನ್ನ ಉಪ್ಪಿಟ್ಟು ನನ್ನವಳ ಮೆಚ್ಚುಗೆ, ಬಡ್ತಿ ಸಿಕ್ಕಿದೆ.  ಪ್ರಸ್ತುತ ನನ್ನ ಪ್ರಯೋಗ ಮೂಲಂಗಿ ಸಾಂಬಾರ್. ನಳಪಾಕ ಪ್ರವೀಣ ಮಿತ್ರನಿಂದ ಪ್ರಮಾಣ ಪತ್ರ ಸಹ ಸಿಕ್ಕಿದೆ.

ಅನಿವಾಸಿ ಓದುಗೆರಿಗಲ್ಲ ನನ್ನ ಕಿಚನ್ ಗೆ ಸ್ವಾಗತ. ನನ್ನ ಪಾಕ, ನಿಮ್ಮ ಪಚನ. ಏನಂತೀರಿ?

  • ಡಾ. ವಿ. ಶ್ರೀರಾಮುಲು  

******************************************************************************

ನನ್ನ ಅಡುಗೆ – ಊಟದ ನಂಟು!ಲಕ್ಷ್ಮೀನಾರಾಯಣ ಗುಡೂರ್

ಇಬ್ಬರು ತಂಗಿಯರು ಮತ್ತು ತಾಯಿ ಇದ್ದ ಮನೆಯ ಚೊಚ್ಚಲ ಮಗನಾದ ನನ್ನನ್ನು ಅಡುಗೆಮನೆಯಲ್ಲಿ ಬರದಂತೆ ತಡೆಯದಿದ್ದರೂ, ನನಗೆ ಅಡುಗೆ ಮಾಡುವುದನ್ನು ಕಲಿಯಲೇಬೇಕೆಂಬ ಜರೂರತ್ತೇನೂ ಇರಲಿಲ್ಲ.  ಆದರೆ, ಅಜ್ಜಿಯ ಮನೆಯಲ್ಲಿದ್ದು, ಅಮ್ಮನಿಂದ ದೂರವಿದ್ದ ನನಗೆ ಅಡುಗೆಮನೆಯಲ್ಲಿ ಸಮಯ ಕಳೆಯುವುದಕ್ಕೆ ಎರಡು ಕಾರಣಗಳಿದ್ದವು.  ಒಂದನೆಯ ಕಾರಣ, ಅಮ್ಮನ ಜೊತೆಗೆ ಅಡುಗೆಯಲ್ಲಿ ಸಹಾಯ ಮಾಡುತ್ತ ಹರಟೆ ಹೊಡೆಯುವ ಅಮ್ಮನ ಜೊತೆ ಹೊತ್ತು ಕಳೆಯುವುದು; ಎರಡನೆಯ ಕಾರಣ, ಅಜ್ಜಿಯ ಮನೆಯಲ್ಲಿ ಅಜ್ಜಿ ಮಡಿ ಅಡಿಗೆ ಮಾಡುವಾಗ ನಮಗೆ ಬೇಕಾದಂತೆ ಅವಲಕ್ಕಿ ಕಲಿಸಿಕೊಳ್ಳಲು ಅವಕಾಶವಿದ್ದುದು – ಅದಕ್ಕೆ ಯಾವ ಪುಡಿ, ಎಷ್ಟು ಎಣ್ಣೆ ಹುಯ್ದು ಯಾವ ರೀತಿ ರುಚಿಕಟ್ಟಾಗಿ ಮಾಡುವುದು ಅಂತ ಅಮ್ಮನಿಂದ ಹೇಳಿಸಿಕೊಳ್ಳುವುದು.  ಆಗ ಕಲಿತದ್ದು ಮುಂದೆ ಸಹಾಯಕ್ಕೆ ಬಂತೆನ್ನುವುದನ್ನೂ ನೊಡೋಣ.

ಅವಲಕ್ಕಿಅವಲಕ್ಕಿಅವಲಕ್ಕಿ!

ಹೆಸರಿಗೆ ಅವಲಕ್ಕಿಯಾದರೂ (ಅವ-lucky) ಅಜ್ಜಿಯ ಮನೆಯಲ್ಲಿ ಅದಕ್ಕೆ ದೇವರ ನಂತರದ ಸ್ಥಾನವೇ ಸರಿ!  ಅಜ್ಜಿ-ತಾತನ ಮನೆಯಲ್ಲಿ ಧಾರ್ಮಿಕ ವಾತಾವರಣವಿದ್ದು, ದಿನವೂ ಸಾಂಗೋಪಾಂಗ ಪೂಜೆ-ನೈವೇದ್ಯವಿಲ್ಲದೇ ಊಟವಿರಲಿಲ್ಲ. ನಾನೋ ಬೆಳಗ್ಗೆ ಎಂಟಕ್ಕೆ ಕಾಲೇಜಿನಲ್ಲಿರಬೇಕು.  ಬೇರೆ ಯಾವ ಮುಸುರಿಯ ತಿಂಡಿಗಳಿಗೆ ಅವಕಾಶವಿರಲಿಲ್ಲ.  ಮತ್ತೇನು, ಅವಲಕ್ಕಿಯೇ ಗತಿ.  ಅದೂ ಒಣ ಅವಲಕ್ಕಿ.  ಹಾಗಂತ ಅವಲಕ್ಕಿ ಇಷ್ಟವಿಲ್ಲವೆಂದಲ್ಲ – ಅವಲಕ್ಕಿ ಯಾವತ್ತೂ ಬೇಜಾರಾಗಲಿಲ್ಲ.  ಅದು ಹೇಗೆ ಅಂತೀರಾ, ಅಮ್ಮನ ಅಡಿಗೆಮನೆಯ ಚಾಟ್ ಸೆಶನ್ನುಗಳ ಮಹಿಮೆ.  ಎಷ್ಟು ವಿಧದಲ್ಲಿ ಅವಲಕ್ಕಿ ಮಾಡಬಹುದು, ಆಹಾ!  ಹುರಿದು ಶೇಂಗಾ – ಪುಠಾಣಿ ಒಗ್ಗರಣೆ ಹಾಕಿ (ರಾಧಿಕಾ ಜೋಶಿಯವರು ಮುಂಚೆ ಹೇಳಿದಂತೆ ಹೊತ್ತಿಸದೇ) ಡಬ್ಬದಲ್ಲಿ ತುಂಬಿಟ್ಟು ವಾರಗಟ್ಟಲೆ ತಿನ್ನಬಹುದು.  ಅದಕ್ಕೆ ಎಷ್ಟು ಬೇಕೋ ಅಷ್ಟು ಸಿಂಗಾರ ಮಾಡಬಹುದು; ಉದಾಹರಣೆಗೆ – ಉಪ್ಪುಮೆಣಸಿನಕಾಯಿ ಕರಿದು ತುಂಡು ಮಾಡಿ ಹಾಕಬಹುದು, ಅರಳು ಸಂಡಿಗೆ ಹಾಕಿದರಂತೂ ಸರಿಯೇ ಸರಿ!  ಇಲ್ಲಾ, ದಿಢೀರನೆ ಮೆಂಥೆದಹಿಟ್ಟು, ಖಾರಪುಡಿ, ಪುಠಾಣಿಪುಡಿ, ಶೇಂಗಾಪುಡಿ, ಚಟ್ಣಿಪುಡಿ, ಗುರೆಳ್ಳುಪುಡಿ – ಯಾವುದು ಸಿಗುತ್ತದೋ ಅದನ್ನು ಹಾಕಿ, ಉಪ್ಪು-ಎಣ್ಣೆ ಹಾಕಿ ಕಲಿಸಿದರಾಯ್ತು.  ಅಥವಾ, ಅವಲಕ್ಕಿ ತೊಳೆದು ಮೇಲಿನ ರೀತಿಯಲ್ಲೇ ಕಲಿಸಿಕೊಂಡು ತಿನ್ನೋದು.  ಖಾರಪುಡಿಯ ಬದಲು ಮಾವಿನಕಾಯಿ ಉಪ್ಪಿನಕಾಯಿ ಇದ್ದರೆ ಅದನ್ನೇ ಉಪಯೋಗಿಸೋದು (ನನ್ನ ಫೇವರಿಟ್ಟು ಇದು).  ಬೇಡ ಅಂದರೆ, ತೊಳೆದು ಮೊಸರವಲಕ್ಕಿ ಮಾಡಿ ಮೇಲಿನ ಲಿಸ್ಟಿಂದ ಯಾವ್ದೋ ಒಂದು ಪುಡಿ ಹಾಕ್ಕೊಂಡು ಮಜಾ ತೊಗೋಬಹುದು.  ಅಂತೂ ನನ್ನ ಜೀವನದಾಗ ಒಂದಷ್ಟು ಟನ್ನು ಅವಲಕ್ಕಿ ತಿಂದಿರಬಹುದು; ಆದರೂ ಇನ್ನೂ ಅವಲಕ್ಕಿಯ ಪ್ರೀತಿ ಹೋಗಿಲ್ಲ.  ಅದರ ಚಟವನ್ನು ಮಕ್ಕಳಿಗೂ ಹಚ್ಚಿದ್ದೇವೆ.  ಇಲ್ಲೇ ಹುಟ್ಟಿ ಬೆಳೆದರೂ, ಅವಲಕ್ಕಿ ಅಂದರಾಯ್ತು ಆಸೆಪಟ್ಟು ತಿನ್ನುತ್ತಾರೆ.  ಅವಲಕ್ಕಿಯ ಬದಲು ಮಂಡಾಳಿನಂತೆ ಇಲ್ಲೇ ಸಿಗುವ ರೈಸ್ ಪಾಪ್ಸ್ (rice pops) ಹಾಕಿದರಂತೂ ಒಂದೆರಡು ದಿನಗಳಲ್ಲಿ ಡಬ್ಬಿಗಟ್ಟಲೆ ಖಾಲಿಯಾಗುತ್ತದೆ, ಸ್ನಾಕ್ಸ್ ತರಹ ಹೋಗ್ತಾ-ಬರ್ತಾ ತಿಂದು. 

|| ಇತಿ ಅಜ್ಜಿಮನಿಪುರಾಣೇ ತಿಂಡಿತೀರ್ಥಾಧ್ಯಾಯೇ ಅವಲಕ್ಕೀ ಮಹಾತ್ಮ್ಯಮ್ ಸಂಪೂರ್ಣಮ್ ||     

ಮೊದಲ ಕೆಲಸ – ಮೊದಲ ಮನೆ.

ಎಂಬಿಬಿಎಸ್ ಮುಗಿಸಿದರೆ ಮುಗಿಯುವುದಿಲ್ಲವಲ್ಲ ಮೆಡಿಕಲ್ ಓದು!  ಡೊನೇಶನ್ ಕೊಡಲಾಗದ ಕೆಳ ಮಧ್ಯಮವರ್ಗದ ಹುಡುಗರ ಮುಂದಿನ ಕಾರ್ಯಕ್ರಮವೆಂದರೆ, ಆಲ್ ಇಂಡಿಯಾ ಅಥವಾ ಅಂಥದ್ದೇ ಹಲವಾರು ಪ್ರವೇಶ ಪರೀಕ್ಷೆಗಳಿಗೆ ತಯಾರಿ ಮಾಡುವುದು.  ಖಾಲಿ ಕೂತು ತಯಾರಿ ಮಾಡಲಾಗದು, ಎಲ್ಲೋ ಒಂದುಕಡೆ ಕೆಲಸಮಾಡುತ್ತ ಖರ್ಚಿಗೆ ಬೇಕಾಗುವಷ್ಟು ಗಳಿಸುತ್ತ ಓದಬೇಕು.  ಸರಿ, ನನ್ನ ಗೆಳೆಯರು ಸೇರಿದ್ದ ದಂತವೈದ್ಯ ಕಾಲೇಜಿನಲ್ಲೇ ಕೆಲಸ ಸಿಕ್ಕಿತು, ಅಧ್ಯಾಪಕನಾಗಿ.  ಆಗಿನ ನನ್ನ ಪರಿಸ್ಥಿತಿಗೆ ಒಳ್ಳೆಯ ಕೆಲಸವೇ – ವಾರಕ್ಕೆರಡು ತರಗತಿಗಳು, ಸಾಕಾಗುವಷ್ಟು ಸಂಬಳ ಅಲ್ಲದೇ ಪ್ರವೇಶ ಪರೀಕ್ಷೆಯ ತಯಾರಿಗೆ ಸಾಕಷ್ಟು ಸಮಯ.  ನಾವು ಮೂರು ಜನ ಒಂದು ಮನೆ ಮಾಡಿಕೊಂಡು ತಯಾರಾದೆವು.  ನಾನು ಬಂದು ಸೇರುವುದಕ್ಕೆ ಮೊದಲು ನನ್ನ ಮಿತ್ರರು ಹೊರಗಿನಿಂದ ಊಟ ತರಿಸಿಕೊಳ್ಳುತ್ತಿದ್ದರು.  ಅದರಲ್ಲಿ ಸ್ವಲ್ಪ ಹೆಚ್ಚೇ ಅನ್ನ ಕೊಡುತ್ತಿದ್ದರು ಅನ್ನಿ.  ನಾನು ಬಂದ ಮೊದಲನೇ ದಿನ ಬೆಳಗ್ಗೆ ಅವರು ಚೆಲ್ಲಲು ಪಕ್ಕಕ್ಕಿಟ್ಟಿದ್ದ ಹಿಂದಿನ ರಾತ್ರಿಯ ಅನ್ನಕ್ಕೆ, ಈರುಳ್ಳಿ-ಹಸಿಮೆಣಸಿನಕಾಯಿ-ಕರಿಬೇವು-ಕೊತ್ತಂಬರಿ ಹಾಕಿ ಚಿತ್ರಾನ್ನ ಮಾಡಿದೆ ನೋಡಿ – ಅಲ್ಲಿಂದ ಶುರುವಾಯ್ತು ನಮ್ಮ ಸ್ವಯಂಪಾಕ!  ಅವತ್ತೇ ಸಾಯಂಕಾಲ ಅಂಗಡಿಗೆ ಹೋಗಿ ಪಾತ್ರೆ-ಪಗಡ, ಸ್ಟವ್ವು ಮತ್ತಿತರ ಪರಿಕರಗಳನ್ನು ತಂದೆವು.  ಮುಂದಿನ ವಾರ ಊರಿಗೆ ಹೋದವರ ಜೊತೆಗೆ ಮನೆಯಲ್ಲಿ ಮಾಡಿದ ಸಾರಿನಪುಡಿ, ಹುಳಿಪುಡಿ, ಭಾತಿನಪುಡಿ, ಸಂಡಿಗೆ, ಹಪ್ಪಳ, ಉಪ್ಪು ಮೆಣಸಿನಕಾಯಿ, ಬೇಳೆಗಳೂ, ಇನ್ನೊಂದಷ್ಟು ಅನುಕೂಲವಾಗುವ ಝಾಲಿಸೌಟು ಇತ್ಯಾದಿ ಸಲಕರಣೆಗಳೂ ಬಂದವು.  ಅನ್ನಕ್ಕೆ ಒದಗುವ ಪುಡಿಗಳನ್ನೂ, ಉಪ್ಪಿನಕಾಯಿಗಳನ್ನೂ ಮರೆಯಲಾದೀತೇ?  ಮನೆಯಲ್ಲಿ ಕಾಯಿಸಿದ ತುಪ್ಪದ ಬಾಟಲಿಗಳೂ ಬೇಕಲ್ಲ, ಅನ್ನಕ್ಕೆ ಕಲಿಸಿಕೊಳ್ಳಲು?  ಇದರೊಂದಿಗೆ ಬೀದರಿನಲ್ಲಿ ಸಿಗುತ್ತಿದ್ದ ರತ್ನಸಾಗರ ಅನ್ನುವ ಸಣ್ಣಕ್ಕಿಯ ರುಚಿಯನ್ನು ಇನ್ನೂ ಮರೆತಿಲ್ಲ ನಾನು!  ಪ್ರತಿ ಸಲ ಊರಿಗೆ ಹೋದಾಗ, ನಾವು ಮೂವರೂ ನಮ್ಮ ಅಮ್ಮಂದಿರಿಂದ ಹೊಸ ರುಚಿ ಕಲಿತು ಬರೋದು, ಮಾಡಿ ತಿನ್ನೋದು.  ಅದೇ ಊರಿನವರಾದ ನಮ್ಮ ಸಹೋದ್ಯೋಗಿಗಳೂ ನಮ್ಮ ಮನೆಗೆ ಹೇಳಿಕೊಂಡು ಬಂದು ಊಟ ಮಾಡೋದು!

ಬೆಳಗಿನ ತಿಂಡಿ ಮನೆಯೆದುರಿಗಿದ್ದ ಒಂದು ಚಿಕ್ಕ ಹೋಟೆಲಿನಲ್ಲಿ ತಿನ್ನುತ್ತಿದ್ದೆವು.  ಊಟ ಮಧ್ಯಾಹ್ನ ಕಾಲೇಜಿನ ಕ್ಯಾಂಟೀನಿನಲ್ಲಿ.  ಮೂರೂ ಗೆಳೆಯರೂ ತಿಂದು ಬಿಲ್ಲಿನ ದುಡ್ಡನ್ನು ಸಮನಾಗಿ ಹಂಚಿಕೊಂಡು ಕೊಡುವ ರೂಢಿಯಿತ್ತು.  ಈ ಪದ್ಧತಿ ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು – ಕೆಟ್ಟದ್ದು ಯಾಕೆ ಅಂದ್ರಾ – ಸಮಾ ದುಡ್ಡು ಕೊಟ್ಟ ಮೇಲೆ ಮೂರೂ ಜನ ಸಮಾ… ತಿನ್ನದೇ ಇರುವುದು ಹೇಗೆ?  ಮೊದಲೇ ತಿಂಡಿಬಾಕರಿದ್ದ ನಾವು ಅದರಿಂದ ಸ್ವಲ್ಪ ಹೆಚ್ಚೇ ತಿನ್ನುತ್ತಿದ್ದೆವು ಅನ್ನಿ.  ನಮ್ಮ ಜೊತೆಗೆ ಹಂಚಿಕೊಂಡು ತಿಂಡಿಗೆ ಬರುತ್ತಿದ್ದ ಇನ್ನೊಬ್ಬ ಗೆಳೆಯ 3 ಪೂರಿ ತಿನ್ನುವುದರೊಳಗೆ, ನಾವು ಮೂವರೂ ಒಂಚೂರೂ ಕಷ್ಟವಿಲ್ಲದೇ ಮೂರು-ಮೂರು ಪ್ಲೇಟು ತಿಂದಿರುತ್ತಿದ್ದೆವು.  ಒಂದು ವಾರಕ್ಕೆ ನಮ್ಮ ಹೊಸ ಜೋಡಿದಾರ ನಮ್ಮ ಜಠರಾಗ್ನಿಗೆ ನಮಸ್ಕಾರ ಹಾಕಿ ಬರುವುದನ್ನು ಬಿಟ್ಟ!     

ಸಾಯಂಕಾಲ ನಮ್ಮ ಕೈಯಡಿಗೆ – ಅನ್ನ, ಹುಳಿ, ಪಲ್ಯ, ಖಾನಾವಳಿಯಿಂದ ತಂದ ಭಕ್ಕರಿ (ಜೋಳದ ರೊಟ್ಟಿ) / ಚಪಾತಿ ಮತ್ತು ಅಂಗಡಿಯ ಗಟ್ಟಿ ಮೊಸರು.  ಜೊತೆಗೆ ಮನೆಯಲ್ಲಿ ಕಾಯಿಸಿದ ಘಮ್ಮೆನ್ನುವ ತುಪ್ಪ!  ಸುಖವೋ ಸುಖ!  ಹುಳಿಪುಡಿಯ ಘಮದ ಅಡಿಗೆಯ ವಾಸನೆ ತಡೆಯಲಾಗದೇ ನಮ್ಮ ಮನೆಯ ಮಾಲೀಕರು ಒಂದಷ್ಟು ಸಲ ಏನ್ರೀ ಅಡಿಗೆ ಇವತ್ತು ಅಂದು ಬಂದು ನೋಡಿದ್ದೂ ಇದೆ.  ಮಾಡಿದ ಅಡಿಗೆ ಅವತ್ತಿಗೆ ಖಾಲಿ ಮಾಡುವುದೇ ಕೆಲಸ (“ಫುಲ್ ಜಸ್ಟಿಸ್”) .  ರಾತ್ರಿ 9 ಕ್ಕೆ ಹೊಟ್ಟೆ ತುಂಬಾ ಉಂಡು, ಮನೆಯಿಂದ ತಂದ ಅಡಿಕೆಪುಡಿ ಹಾಕಿಕೊಂಡು, ಕೈಯಲ್ಲಿ ರೇಡಿಯೋ ಹಿಡಿದುಕೊಂಡು ವಾಕಿಂಗ್ ಹೋಗುವುದು; ಅಲ್ಲಿಂದ ಬಂದು ಓದುವುದು.  ಇದು ನಮ್ಮ ನಿತ್ಯದ ದಿನಚರಿ.  ಎರಡು ದಿನಕ್ಕೆ ನಮ್ಮಲ್ಲಿರಲು ಬಂದ ಗೆಳೆಯನೊಬ್ಬ ಅವನ ಹೆಂಡತಿಯ ಕೈಯಡುಗೆಯನ್ನು ಬೈಯುತ್ತ, ನಮ್ಮ ಅಡಿಗೆಯ ರುಚಿಯನ್ನು ಹೊಗಳಿ ಹೋದ; ಅಷ್ಟೇ ಅಲ್ಲ ನಮ್ಮ ಕಾಲೇಜಿನ ಮಿತ್ರರಲ್ಲೆಲ್ಲ ಹಬ್ಬಿಸಿದ ಕೂಡ.

ಬೀದರಿನಲ್ಲಿರುವ ಪ್ರಸಿದ್ಧ ನಾನಕ್ ಝರಾದ ಗುರುದ್ವಾರಾದ ಹತ್ತಿರ ಇರುವ ಪಂಜಾಬಿ ಧಾಬಾಗಳಿಗೆ, ಪ್ರತಿ ರವಿವಾರ ಬೆಳಗ್ಗೆ 7.30ಕ್ಕೆ ಹಾಜರ್ ನಾವು ಮೂವರೂ! ಒಬ್ಬೊಬ್ಬರು ಎಂಟಿಂಚಿನ ಅಗಲದ 6 ಆಲೂ ಪರಾಠಾಗಳನ್ನು ಬೆಣ್ಣೆ-ಮೊಸರು-ಉಪ್ಪಿನಕಾಯಿಗಳೊಂದಿಗೆ ನುಂಗಿ ಬಂದು ಹೆಬ್ಬಾವಿನಂತೆ ಮಲಗಿದರೆ, ಒಮ್ಮೆಲೆ 3 ಗಂಟೆಗೆ ಎದ್ದು, ಚಹಾ ಕುಡಿದು – ಮತ್ತೆ ಸಾಯಂಕಾಲದ ಅಡಿಗೆಯ ತಯಾರಿಗೆ ರೆಡಿ!!  

ಓಡಾಡುವುದಕ್ಕೆ ಗೆಳೆಯ ಅನುರೂಪನ ಬಜಾಜ್ ಸ್ಕೂಟರ್ರು ಇತ್ತು.  ಮೊದಲು ಮೂರೂ ಜನ ಆರಾಮವಾಗಿ ಒಂದೇ ಸ್ಕೂಟರಿನ ಮೇಲೆ ಕೂತು ಓಡಾಡುತ್ತಿದ್ದೆವು.  ನಮ್ಮ ತಿಂಡಿ-ಊಟದ (ಫುಲ್ ಜಸ್ಟಿಸ್!) ಪರಿಣಾಮದಿಂದ, ಮೂವರೂ ಕೂತು ಓಡಿಸುತ್ತಿದ್ದ ಅನುರೂಪನ ಸ್ಕೂಟರಿನ ಹ್ಯಾಂಡಲ್ಲು ಹತ್ತಿರ ಹತ್ತಿರವೆನ್ನಿಸತೊಡಗಿತು.  “ಲೇ, ಸ್ವಲ್ಪ ಮುಂದೆ ಸರಿಯಲೇ, ಹಿಂದೆ ಜಾಗ ಇಲ್ಲ” ಅಂತ ನಾವನ್ನುವುದು, “ಜಾಗ ಎಲ್ಲದರಲೇ, ನಾನಿನ್ನು ಹ್ಯಾಂಡಲ್ ಆ ಕಡೆ ಹೋಗಬೇಕಷ್ಟೇ!” ಅಂತ ಅವನನ್ನುವುದೂ ಶುರುವಾಯ್ತು.  ನಮ್ಮ ಕಾಲೇಜಿನ ಸೀನಿಯರ್ ಹುಡುಗಿಯರು ನಮ್ಮನ್ನು ಒಂದೇ ಸ್ಕೂಟರಿನ ಮೇಲೆ ನೋಡುವ ರೀತಿ ಯಾಕೋ ಬದಲಾಗಿದೆ ಅನ್ನಿಸಲು ಶುರುವಾಗಿ ಅದನ್ನು ನಿಲ್ಲಿಸಿದೆವು.  ಆದರೆ, ದಿನಕ್ಕೆ ಇಬ್ಬರು ಸ್ಕೂಟರಿನ ಮೇಲೆ ಹೋಗುವುದು ಮತ್ತು ಮೂರನೆಯವರು ಕಾಲೇಜು ವ್ಯಾನಿನಲ್ಲಿ ಹೋಗುವುದೆಂದು ತೀರ್ಮಾನಿಸಿದೆವು.  ರೂಲ್ಸ್ ಪ್ರಕಾರ ಪ್ರತಿ ಮೂರನೆಯ ದಿನ (ಸ್ಕೂಟರಿಟ್ಟವನು ಅವನೇ ಆದರೂ) ಅನುರೂಪನನ್ನು ಎಬ್ಬಿಸಿ, ಬಸ್ಸಿಗೆ ಹೋಗಲು ಹೇಳುತ್ತಿದ್ದೆವು!

ಮುಂದೆ ಪುಣೆಯಲ್ಲಿ 3 ವರ್ಷ, ವೆಲ್ಲೂರಿನಲ್ಲಿ 1 ವರ್ಷ ಇದ್ದು ಚೆನ್ನಾಯಿಗೆ ಬಂದೆ.  ಚೆನ್ನಾಯಿಯಲ್ಲಿ ಒಂದು ದೊಡ್ಡ ಫ್ಲಾಟಿನಲ್ಲಿ 5 ಹುಡುಗರೊಂದಿಗೆ ಇದ್ದೆ.  ಅಲ್ಲಿ 2-3 ವಾರಕ್ಕೊಮ್ಮೆ ನಮ್ಮ ಮ್ಯಾಗ್ಗಿ ನೂಡಲ್ಸ್ ಸಮಾರಾಧನೆ.  9-10 ಪಾಕೀಟುಗಳಿಗೆ, ಇತರ ತರಕಾರಿ ಹಾಕಿ ಒಂದಿಡೀ ಅಮುಲ್ ಬಟರ್ ಬ್ಲಾಕ್ ಹಾಕಿ ಮಾಡಿದ ನೂಡಲ್ಸ್ ಅನ್ನು, ಬೆಣ್ಣೆ ಹಚ್ಚಿ ಹಂಚಿನ ಮೇಲೆ ಘಮ್ಮನ್ನುವಂತೆ ಬೇಯಿಸಿದ ಬ್ರೆಡ್ಡಿನೊಂದಿಗೆ ತಿನ್ನುವುದು! ಆಹಾ!

ಪ್ರಸ್ತುತ….

ಮದುವೆಯಾದಾಗಿನಿಂದ, ಅದೂ ಇಂಗ್ಲಂಡಿಗೆ ಬಂದ ಮೇಲೆ, ವಾರ-ಎರಡು ವಾರಕ್ಕೊಮ್ಮೆ (ಹೆಂಡತಿಯ on call ಬರುತ್ತವಲ್ಲ!) ಮಕ್ಕಳೊಂದಿಗೆ ಏನೋ ಒಂದು ಐಟಮ್ ಅಡಿಗೆ ಮಾಡುವುದು ಬಿಟ್ಟರೆ, ಉಳಿದಂತೆ ನನ್ನ ಕೆಲಸ ತರಕಾರಿ ಹೆಚ್ಚುವುದು, ದೋಸೆ ಹುಯ್ದು ಕೊಡುವುದು ಮುಂತಾದ ಸಹಾಯಕ ಕೆಲಸಗಳಷ್ಟೆ.  ಅದೊಂದು ರೀತಿಯ ನಿಶ್ಚಿಂತೆಯ ಕೆಲಸ – ಆದೇಶ ಪರಿಪಾಲನೆ.  ಅದರಲ್ಲೂ ತರಕಾರಿ ಹೆಚ್ಚುವುದು ನನ್ನ ಇಷ್ಟದ ಕೆಲಸ – ಅದಕ್ಕೋಸ್ಕರ ಹೋದಲ್ಲೆಲ್ಲ ಬೇರೆ ಬೇರೆ ತರಹದ ಚಾಕುಗಳನ್ನು ನೋಡುವುದು, ತರುವುದು ಮಾಡಿ ಮನೆಯಲ್ಲೀಗ ಒಂದು ಹನ್ನೆರಡು ಚಾಕುಗಳಿವೆ!  ಇನ್ನೂ ಜಪಾನಿನ ಉಕ್ಕಿನದೊಂದು ತೊಗೊಳ್ಳುವ ಆಸೆಯಿದೆ.  

ಅಡುಗೆಮನೆಯಲ್ಲಿ ಬರಿಯ ಅವಾಂತರಗಳಷ್ಟೇ ಆಗಬೇಕಿಲ್ಲ, ಅಲ್ಲವೇ?  ಅಲ್ಲಿ ಒಂದು ರೀತಿಯ ಮಾನಸಿಕ ಥೆರಪಿ ಸಿಗುತ್ತದೆ.  ತರಕಾರಿ ಸಣ್ಣಗೆ ಹೆಚ್ಚುವುದರ ಕಡೆಗೋ, ದೋಸೆಯನ್ನು ಪರ್ಫೆಕ್ಟ್ ವೃತ್ತಾಕಾರವಾಗುವಂತೆ ಹುಯ್ಯುವುದರ ಕಡೆಗೋ ಮನಸ್ಸನ್ನು ಫೊಕಸ್ ಮಾಡಿ, ಹೊರಜಗದ ಚಿಂತೆ ಮರೆಯಬಹುದು.  “ಪಪ್ಪ ಮೇಕ್ಸ್ ಬೆಟರ್ ದೋಸೆ” ಅಂತಲೋ, ಯಾವತ್ತೋ ಒಮ್ಮೆ ಮಾಡುವ ಸೌತೆಕಾಯಿ ಭಾತನ್ನು “ಹಿಸ್ ಭಾತ್ ಇಸ್ ದ ಬೆಸ್ಟ್, ಅಮ್ಮಾ” ಅಂತಲೋ ಮಕ್ಕಳು ಹೇಳುವಾಗ – ಹೆಮ್ಮೆಯಿಂದ ಹೆಂಡತಿಯ ಕಡೆಗೆ ನೋಡಿ ಬೀಗಬಹುದು!

– ಲಕ್ಷ್ಮೀನಾರಾಯಣ ಗುಡೂರ್.

************************************************************************