ಪ್ರಧಾನಿ ರಿಷಿ ಸುನಾಕ್ – ಬ್ರಿಟನ್ ಕಂಡ ಅಪೂರ್ವ ಪ್ರತಿಭೆ

ಡಾ ಜಿ ಎಸ್ ಶಿವಪ್ರಸಾದ್

ಫೋಟೋ – ಗೂಗಲ್ ಕೃಪೆ

ಭಾರತೀಯ ಮೂಲದವರಾದ ರಿಷಿ ಸುನಾಕ್ ಅವರು ಪ್ರಧಾನಿಯಾದ ಹಿನ್ನೆಲೆಯಲ್ಲಿ ವಿಶ್ವವಾಣಿ ಕ್ಲಬ್ ಹೌಸ್ ಏರ್ಪಡಿಸಿದ್ದ ಒಂದು ವಿಚಾರ ಸಂಕೀರಣದಲ್ಲಿ ನೀಡಿದ ಉಪನ್ಯಾಸವನ್ನು ಆಧರಿಸಿದ ಮತ್ತು ಆ ಉಪನ್ಯಾಸಕ್ಕೆ ಕೆಲವು ಅಂಶಗಳನ್ನು ಸೇರಿಸಿ ಬರೆದಿರುವ ಲೇಖನ. ಈ ಲೇಖನದಲ್ಲಿ ರಿಷಿ ಅವರ ವೈಯುಕ್ತಿಕ ಹಿನ್ನೆಲೆ, ಅವರು ರಾಜಕಾರಣಿಯಾಗಿ ನಡೆದು ಬಂದ ದಾರಿ, ಪ್ರಧಾನಿಯಾಗುವ ಮುನ್ನ ನಡೆದ ರೋಚಕ ಸಂಗತಿಗಳು, ಜನಾಭಿಪ್ರಾಯ ಮುಂತಾದ ವಿಷಯಗಳನ್ನು ನನ್ನ ಕೆಳಗಿನ ಧೀರ್ಘ ಬರಹ ಒಳಗೊಂಡಿದೆ. ರಾಜಕಾರಣಿಗಳನ್ನು ಕುರಿತ ಲೇಖನಗಳು ಅನಿವಾಸಿ ಜಾಲ ಜಗುಲಿಯಲ್ಲಿ ವಿರಳ. ಹೀಗಾಗಿ ಇದು ಓದುಗರನ್ನು ಆಕರ್ಷಿಸಬಹುದು  ಎಂದು ನಂಬಿರುತ್ತೇನೆ. ರಿಷಿ ಇದೀಗಷ್ಟೇ ಪ್ರಧಾನಿಯಾಗಿದ್ದು ಈ ಬರಹ ಸಮಯೋಚಿತವಾಗಿದೆ ಎಂದು ಭಾವಿಸುತ್ತೇನೆ. 
    -ಸಂಪಾದಕ
***
ರಿಷಿ ಸುನಾಕ್ ಅವರು ೨೪ ಅಕ್ಟೊಬರ್ ೨೦೨೨ ದೀಪಾವಳಿಯ ಹಬ್ಬದ ದಿನದಂದು ಬ್ರಿಟನ್ನಿನ ಪ್ರಧಾನ ಮಂತ್ರಿಯಾದರು. ಐತಿಹಾಸಿಕವಾಗಿ ಇದು ಒಂದು ಮೈಲಿಗಲ್ಲು ಮತ್ತು ಮಹತ್ವದ ಘಳಿಗೆ. ರಿಷಿ ಹುಟ್ಟಿನಲ್ಲಿ ಬ್ರಿಟಿಷರಾದರೂ ಅವರು ಭಾರತೀಯ ಮೂಲದವರು. ಆಂಗ್ಲನಾಡಿನಲ್ಲಿ ಮೈನಾರಿಟೀ ಸಮುದಾಯದಿಂದ ಬಂದು ಎತ್ತರಕ್ಕೆ ಏರಿ ಪ್ರಧಾನಿಯಾಗುವುದು ಇದುವರೆವಿಗೂ ಅಸಾಧ್ಯವಾಗಿತ್ತು. ಆಂಗ್ಲರು ಜಾನಾಂಗವಾದಿಗಳೆಂಬ ಒಂದು ಕಳಂಕ ಇದ್ದು ರಿಷಿ ಅವರನ್ನು ಪ್ರಧಾನಿಯಾಗಿ ಆಯ್ಕೆಮಾಡಿದ ಮೇಲೆ ಅವರು ಆ ಕಳಂಕದಿಂದ ಮುಕ್ತರಾಗಿದ್ದಾರೆ. ಇದಷ್ಟೇ ಅಲ್ಲದೆ ರಿಷಿ ರಾಜಕೀಯ ಕ್ಷೇತ್ರದಲ್ಲಿ ಕಾಲಿಟ್ಟು ಕೇವಲ ಏಳು ವರ್ಷಗಳಾಗಿದ್ದು ಇಷ್ಟು ಕಡಿಮೆ ಸಮಯದಲ್ಲಿ ಎಲ್ಲರ ಮನ್ನಣೆ ಮತ್ತು ವಿಶ್ವಾಸಗಳನ್ನು ಗಳಿಸಿಕೊಂಡು ಪ್ರಧಾನಿ ಪಟ್ಟಕ್ಕೇರಿದ್ದಾರೆ ಮತ್ತು ಕೇವಲ ೪೨ ವರ್ಷ ವಯಸ್ಸಿನಲ್ಲಿ ಪ್ರಧಾನಿಯಾಗಿರುವುದೂ ವಿಶೇಷ. ಈ ಕಾರಣಕ್ಕಾಗಿ ಇದು ಮಹತ್ವ ಘಳಿಗೆ ಎಂದು ಭಾವಿಸಬಹುದು. 

‘ಋಷಿ ಮೂಲ ಹುಡುಕಬಾರದಾದರೂ’ ಇಲ್ಲಿ ರಿಷಿ ಅವರ ಕೆಲವು ವೈಯುಕ್ತಿಕ ಹಿನ್ನೆಲೆಯನ್ನು ಪ್ರಸ್ತಾಪಿಸುವುದು ಉಚಿತ. ರಿಷಿ ಅವರು ಬ್ರಿಟನ್ನಿನಲ್ಲಿ ಹುಟ್ಟಿದ್ದರೂ ಅವರ ಪೂರ್ವಜರು ಹಿಂದಿನ ಅವಿಭಾಜಿತ ಭಾರತದ, ಈಗಿನ ಪಂಜಾಬ್ ಪ್ರಾಂತ್ಯದಿಂದ ಬಂದವರು. ಅವರ ಪರಿವಾರದವರು ಮೊದಲಿಗೆ ಈಶಾನ್ಯ ಆಫ್ರಿಕಾದ ದೇಶಗಳಿಗೆ ವಲಸೆ ಹೋಗಿ ಅಲ್ಲಿ ನೆಲಸಿ ೬೦ರ ದಶಕದಲ್ಲಿ ರಿಷಿ ಅವರ ತಂದೆ ತಾಯಿ ಇಂಗ್ಲೆಂಡಿಗೆ ವಲಸೆ ಬಂದು ಸೌತ್ ಹ್ಯಾಂಪ್ಟನ್ ನಗರದಲ್ಲಿ ನೆಲೆಸಿದರು. ಅವರ ತಂದೆ ಒಬ್ಬ ಸಾಧಾರಣ ವೈದ್ಯ ಮತ್ತು ತಾಯಿ ಫಾರ್ಮಸಿಸ್ಟ್ ಆಗಿದ್ದು ಆರ್ಥಿಕವಾಗಿ ಅವರು ಮಧ್ಯಮ ವರ್ಗದವರೇ. ಅವರಿಗೆ ಲಕ್ಷಿ ಕಟಾಕ್ಷ ಪ್ರಾಪ್ತವಾಗಿದ್ದು ನಂತರದಲ್ಲಿ. ವಿದ್ಯಾರ್ಥಿ ದೆಸೆಯಲ್ಲಿ ರಿಷಿ ಬಹಳ ಪ್ರತಿಭಾವಂತರಾಗಿ ಆಕ್ಸ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪದವಿ ಪಡೆದುಕೊಂಡು ನಂತರ ಕ್ಯಾಲಿಫೋರ್ನಿಯಾದಲ್ಲಿ ಎಂಬಿಎ ಪದವಿ ಪಡೆದು ಕ್ಯಾಲಿಫೋರ್ನಿಯಾ ಮತ್ತು ಲಂಡನ್ನಿನ ಫೈನ್ಯಾನ್ಸ್ ಕಂಪನಿಗಳಲ್ಲಿ ಕೆಲಸ ಮಾಡಿದರು. ಅವರು ಕ್ಯಾಲಿಫೋರ್ನಿಯಾದಲ್ಲಿ ಇದ್ದಾಗ ಇನ್ಫೋಸಿಸ್ ಕಂಪನಿಯ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಅವರನ್ನು ಭೇಟಿಯಾಗಿ ಪ್ರೇಮಾಂಕುರವಾಗಿ ಮದುವೆಯಾದರು. ಈ ಒಂದು ಹಿನ್ನೆಲೆಯಲ್ಲಿ ಅವರನ್ನು ಕರ್ನಾಟಕದ ಅಳಿಯ ಎಂದು ಕನ್ನಡಿಗರು ಸಂಭೋದಿಸುವುದು ಸಮಂಜಸವಾಗಿದೆ. 

೨೦೧೫ ರಲ್ಲಿ ಉತ್ತರ ಇಂಗ್ಲೆಂಡಿನ ಯಾರ್ಕ್ ಶೈರ್ ಪ್ರಾಂತ್ಯದ ರಿಚ್ಮಂಡ್ ಎಂಬ ಊರಿನಲ್ಲಿ ಪ್ರಭಾವಿತ ಮಂತ್ರಿಗಳಾಗಿದ್ದ ವಿಲಿಯಂ ಹೇಗ್ ಅವರು ನಿವೃತ್ತಿಯಾದ ಬಳಿಕ ಅದೇ ಕ್ಷೇತ್ರದಿಂದ ಕನ್ಸರ್ವೇಟಿವ್ ಪಾರ್ಟಿ ಟಿಕೆಟ್ ಹಿಡಿದು ರಿಷಿ ಎಂಪಿಯಾಗಿ ಆಯ್ಕೆಗೊಂಡರು. ಅಲ್ಲಿಂದ ಮುಂದಕ್ಕೆ ೨೦೧೯ರಲ್ಲಿ ಬೋರಿಸ್ ಜಾನ್ಸನ್ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಹಣಕಾಸು ವಿಭಾಗದ ಕಾರ್ಯದರ್ಶಿಯಾಗಿ ಆ ಕೆಲಸವನ್ನು ದಕ್ಷತೆಯಿಂದ ನಿಭಾಯಿಸಿ ಬೋರಿಸ್ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ೨೦೨೦ರ ಸಮಯದಲ್ಲಿ ಛಾನ್ಸೆಲರ್ ಆಫ್ ಎಕ್ಸ್ ಚೆಕರ್ ಅಂದರೆ ಆರ್ಥಿಕ ಮಂತ್ರಿಯಾಗಿ ಬೋರಿಸ್ ಅವರ ಮಂತ್ರಿ ಮಂಡಳವನ್ನು ಸೇರಿಕೊಂಡರು. ಅದೇ ಸಮಯಕ್ಕೆ ಯೂರೋಪಿನಲ್ಲಿ ಕೋವಿಡ್ ಕಾಣಿಸಿಕೊಂಡು ಬ್ರಿಟನ್ನಿನಲ್ಲಿ ಈ ವೈರಸ್ ಪಿಡುಗು ವ್ಯಾಪಕವಾಗಿ ಹಬ್ಬಿಕೊಂಡಿತು. ಇದರ ಪರಿಣಾಮವಾಗಿ ಜನಸಾಮಾನ್ಯರು ನಿರುದ್ಯೋಗಿಗಳಾಗಿ ಆರ್ಥಿಕ ತೊಂದರೆಯನ್ನು ಅನುಭವಿಸಿದರು. ರಿಷಿ ಅವರು ಈ ಒಂದು ಸಂದರ್ಭದಲ್ಲಿ, ಫರ್ಲೊ ಎಂಬ ಆಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಪರಿಹಾರ ನಿಧಿಯನ್ನು ಒದಗಿಸಿದರು. ರಿಷಿ ಅವರು 'ಹೆಲ್ಪ್ ಟು ಇಟ್ ಔಟ್' ಎಂಬ ಯೋಜನೆಯನ್ನು ಹುಟ್ಟು ಹಾಕಿ ರೆಸ್ಟೋರೆಂಟ್ ಮಾಲೀಕರಿಗೆ ಮತ್ತು ಜನರಿಗೆ ಸಹಾಯವಾಗುವಂತೆ ಊಟ ತಿಂಡಿ ಬಿಲ್ಲಿನಲ್ಲಿ ಹತ್ತು ಪೌಂಡಿನ ವರೆಗೆ ಶೇಕಡಾ ೫೦% ರಿಯಾಯ್ತಿ ಒದಗಿಸಲಾಗಿತ್ತು. ಒಟ್ಟಾರೆ ಈ ಸಂಕಷ್ಟಗಳ ನಡುವೆ ರಿಷಿ ಅವರು ಅನೇಕ ಜನಪರ ಆರ್ಥಿಕ ಯೋಜನೆಗಳನ್ನು ಹಾಕಿಕೊಟ್ಟರು. ತಮ್ಮ ಸಹೋದ್ಯೋಗಿ ಎಂಪಿ ಮತ್ತು ಜನರ ವಿಶ್ವಾಸವನ್ನು ಗಳಿಸಿಕೊಂಡರು.

ಕೋವಿಡ್ ಪಿಡುಗಿನ ಮಧ್ಯೆ ಲಾಕ್ ಡೌನ್ ಸಮಯದಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕೆಲವು ಸಾರ್ವಜನಿಕ ಆರೋಗ್ಯ ನಿಯಮಗಳ ಉಲ್ಲಂಘನೆ ಮಾಡಿದ್ದು ಅದು 'ಪಾರ್ಟಿಗೇಟ್' ಹಗರಣವೆಂಬ ಹೆಸರಿನಲ್ಲಿ ಬಹಿರಂಗಗೊಂಡಿತು. ಬೋರಿಸ್ ಅದಕ್ಕೆ ದಂಡ ತೆತ್ತು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕಾಯಿತು. ಇದಾದನಂತರ ಬೋರಿಸ್ ಅವರು ತಮ್ಮ ರಾಜಕೀಯ ಪಕ್ಷದ 'ಚೀಫ್ ವಿಪ್' ಕ್ರಿಸ್ ಪಿಂಚೆರ್ ಅವರ ನೇಮಕಾತಿಯಲ್ಲಿ ಕೆಲವು ಮುಖ್ಯ ಅಂಶಗಳನ್ನು ಬಚ್ಚಿಟ್ಟಿದ್ದರು ಎಂಬ ಅಪವಾದದಲ್ಲಿ ಮತ್ತೆ ಸಿಕ್ಕಿಕೊಂಡರು. ಈ ಎಲ್ಲ ಹಗರಣಗಳ ಹಿನ್ನೆಲೆಯಲ್ಲಿ ತಮ್ಮ ಮಂತ್ರಿಮಂಡಳದ ಸಹೋದ್ಯೋಗಿಗಳ ವಿಶ್ವಾಸಗಳನ್ನು ಕಳೆದುಕೊಂಡರು. ಈ ಹಿನ್ನೆಲೆಯಲ್ಲಿ ರಿಷಿ ಅವರು ತಾವು ರಾಜಕೀಯ ಮೌಲ್ಯಗಳಿಗೆ ಬದ್ಧರೆಂದು ಬೋರಿಸ್ ಅವರ ಈ ಹಗರಣದ ಹಿನ್ನೆಲೆಯಲ್ಲಿ ಅವಿಶ್ವಾಸದ ಮೇಲೆ ರಾಜೀನಾಮೆ ನೀಡಿದರು, ಅವರ ಹಿಂದೆ ಉಳಿದೆಲ್ಲ ಕ್ಯಾಬಿನೆಟ್ ಮಂತ್ರಿಗಳು ರಾಜೀನಾಮೆ ನೀಡಲು ಮೊದಲುಗೊಂಡರು. ಬೋರಿಸ್ ಕೊನೆಗೆ ತಮ್ಮ ನೈತಿಕ ಜವಾಬ್ದಾರಿಯ ನಷ್ಟದ ಸಲುವಾಗಿ ರಾಜೀನಾಮೆ ನೀಡ ಬೇಕಾಯಿತು. 

ಬೋರಿಸ್ ಅವರ ರಾಜೀನಾಮೆಯಿಂದ ತೆರವಾದ ಪ್ರಧಾನಿ ಹುದ್ದೆಗೆ ರಿಷಿ ಸುನಾಕ್ ಮತ್ತು ಲಿಜ್ ಟ್ರಸ್ಸ್ ನಡುವೆ ಪೈಪೋಟಿ ಉಂಟಾಯಿತು. ಎಂಪಿಗಳ ಬೆಂಬಲವಿದ್ದರೂ ಪ್ರಧಾನಿಯ ಆಯ್ಕೆ ಇಲ್ಲಿಯ ನಿಯಮಾನುಸಾರವಾಗಿ 
ಸಾರ್ವಜನಿಕರ ವೋಟಿನ ಅಗತ್ಯವಿಲ್ಲದೆ, ಕನ್ಸರ್ವೇಟಿವ್ ಪಾರ್ಟಿ ಸದಸ್ಯರಿಂದ ನಡೆದು ಕೊನೆಗೆ ಲಿಜ್ ಟ್ರಸ್ಸ್ ಪ್ರಧಾನಿಯಾದರು. ರಿಷಿಗೆ ಪ್ರಧಾನಿಯಾಗುವ ಅರ್ಹತೆ ಇದ್ದರೂ ಅವರು ಹಿಂದೆ ಉಳಿಯಬೇಕಾದುದು ಬಹಳ ಜನರಿಗೆ ನಿರಾಸೆ ಉಂಟಾಯಿತು. ಅಂದಹಾಗೆ ಲಿಜ್ ಟ್ರಸ್ ಪ್ರಧಾನಿಯಾದ ನಂತರ ಅವರು ಕೈಗೊಂಡ ಆರ್ಥಿಕ ಯೋಜನೆಗಳು ನಿಷ್ಫಲವಾಗಿ ಎಲ್ಲ ಮಾರುಕಟ್ಟೆಗಳಲ್ಲಿ ಪೌಂಡ್ ಬೆಲೆ ಕುಸಿಯಲು ಮೊದಲುಗೊಂಡಿತು.  ಮೊದಲೇ ನರಳುತ್ತಿದ್ದ ಆರ್ಥಿಕ ಪರಿಸ್ಥಿತಿ ಇನ್ನೂ ಹದಗೆಡುವ ಸೂಚನೆಗಳು ಕಾಣತೊಡಗಿದವು. ಇದರ ಬಗ್ಗೆ ರಿಷಿ ಎಚ್ಚರಿಕೆಯ ಕರೆಗೆಂಟೆಯನ್ನು ಕೊಟ್ಟಿದ್ದರು ಎಂದುದನ್ನು ಇಲ್ಲಿ ನೆನೆಯಬಹುದು. ಇದೇ ಹಿನ್ನೆಲೆಯಲ್ಲಿ ಲಿಜ್ ಟ್ರಸ್ಸ್ ರಾಜೀನಾಮೆ ನೀಡಬೇಕಾಯಿತು. ಯಶಸ್ವಿಯಾದ ನಾಯಕತ್ವವಿಲ್ಲದ ಬ್ರಿಟನ್ ಇತರ ದೇಶಗಳ ನಗೆಪಾಟಲಿಗೆ ಗುರಿಯಾಯಿತು. ಈ ಒಂದು ಕ್ಲಿಷ್ಟ ಪರಿಸ್ಥಿತಿಯಲ್ಲಿ ರಿಷಿ ಸುನಾಕ್ ಪ್ರಧಾನಿಯಾಗಲು ಮತ್ತೆ ಅರ್ಜಿಸಲ್ಲಿಸಿದರು. ಅವರ ಜೊತೆ ಪೆನ್ನಿ ಮಾರ್ಡೆಂಟ್ ಎಂಬ ಜನಪ್ರಿಯ ಎಂಪಿ (ಪಾರ್ಲಿಮೆಂಟ್ ಸದಸ್ಯೆ) ತಾನೂ ಪ್ರಧಾನಿಯಾಗಲು ಅರ್ಜಿ ಸಲ್ಲಿಸಿದಳು. ಇದರ ಮಧ್ಯೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತ್ತಿದ್ದ ಬೋರಿಸ್ ಜಾನ್ಸನ್ ತಾನು ಮತ್ತೆ ಪ್ರಧಾನಿಯಾಗಿ ಬರುತ್ತೇನೆ ಎಂದು ಅರ್ಜಿ ಸಲ್ಲಿಸಿದ ವಿಚಾರ ಎಲ್ಲರಿಗೂ ಆಶ್ಚರ್ಯದ ಜೊತೆಗೆ ಹಾಸ್ಯಾಸ್ಪದವಾಗಿ ಕಾಣಿಸಿತು. ಬೋರಿಸ್ ಜಾನ್ಸನ್ ಹಗರಣಗಳ ತನಿಖೆ ವಿಚಾರಣಾ ಹಂತದಲ್ಲಿ ಇರುವಾಗ ಅರ್ಜಿಸಲ್ಲಿಸಿರುವುದು ಸರಿಯಲ್ಲವೆಂದು ನಿರ್ಧರಿಸಿ ಕೊನೆಗೆ ಬೋರಿಸ್ ಅರ್ಜಿಯನ್ನು ಹಿಂದೆ ತೆಗೆದುಕೊಳ್ಳಬೇಕಾಯಿತು. ದೇಶದ ಸದರಿ ಆರ್ಥಿಕ ಪರಿಸ್ಥಿಯ ಹಿನ್ನೆಲೆಯಲ್ಲಿ ಮತ್ತು ಎಂಪಿಗಳ ಬೆಂಬಲ ಇಲ್ಲದ ಪೆನ್ನಿ ಮಾರ್ಡೆಂಟ್ ಕೊನೆ ಘಳಿಗೆಯಲ್ಲಿ ತಮ್ಮ ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಂಡರು. ಅತಿ ಹೆಚ್ಚಿನ ಎಂಪಿಗಳ ಬೆಂಬಲವಿರುವ ರಿಷಿ ಕೊನೆಗೂ ಪ್ರಧಾನಿಯಾದರು. 

ಪಾಶ್ಚಿಮಾತ್ಯ ದೇಶಗಳಲ್ಲಿ ರಾಜಕಾರಣ ಕೆಲವು ಮೌಲ್ಯಗಳಿಗೆ ಬದ್ಧವಾಗಿದೆ. ಇಲ್ಲಿಯ ವ್ಯವಸ್ಥೆಯಲ್ಲಿ ನೈತಿಕ ಜವಾಬ್ದಾರಿ, ನಿಯಮಗಳ ಪಾಲನೆ, ಆಡಳಿತಾಂಗ, ನ್ಯಾಯಾಂಗ ಮತ್ತು ಸಂವಿಧಾನದಕ್ಕೆ ಗೌರವ ಇವುಗಳನ್ನು ಕಾಣಬಹುದು. ಒಬ್ಬ ಜನ ನಾಯಕನ ನಿರ್ಣಯದಿಂದ ಮೌಲ್ಯ ನಷ್ಟವಾದಲ್ಲಿ ಕೂಡಲೇ ಅವರು ತಪ್ಪನ್ನು ಒಪ್ಪಿಕೊಂಡು ರಾಜೀನಾಮೆ ನೀಡುತ್ತಾರೆ. ಅಭಿವೃದ್ಧಿ ಗೊಳ್ಳುತ್ತಿರುವ ಕೆಲವು ದೇಶಗಳಲ್ಲಿ ನೈತಿಕ ಹೊಣೆಗಾರಿಕೆಯ ಕಾರಣವಾಗಿ ರಾಜೀನಾಮೆ ನೀಡುವವರು ವಿರಳ. ಹಗರಣಗಳ ಮೇಲೆ ಹಗರಣಗಳು ನಡೆದರೂ ತಾವು ಮಾಡಿದುದು ಸರಿಯೇ ಎಂದು ಸಮರ್ಥಿಸಿಕೊಳ್ಳುತ್ತ, ಮಾಧ್ಯಮಗಳ ಬಾಯಿ ಮುಚ್ಚಿಸುತ್ತಾ ಕುರ್ಚಿಗೆ ಅಂಟುಕೊಳ್ಳುವ ರಾಜಕಾರಣವನ್ನು ಕಾಣಬಹುದು. ಇನ್ನು ಕೆಲವು ರಾಷ್ಟ್ರಗಳಲ್ಲಿ ನಾಯಕತ್ವದ ಮತ್ತು ರಾಜಕೀಯದ ಬಿಕ್ಕಟ್ಟಿನಲ್ಲಿ ಪ್ರಜಾಪ್ರಭುತ್ವವನ್ನು ಪಕ್ಕಕ್ಕೆ ತಳ್ಳಿ ಮಿಲಿಟಿರಿ ಸರ್ವಾಧಿಕಾರಿಗಳು ಬಂದು ಕೂರುವುದನ್ನು ಕಾಣಬಹುದು. ಬ್ರಿಟನ್ನಿನಲ್ಲಿ ಪ್ರತಿಭೆಗಷ್ಟೇ ಪುರಸ್ಕಾರ. ಹೀಗೆ ಹೇಳುತ್ತಾ ಬ್ರಿಟನ್ನಿನಲ್ಲಿ ಎಲ್ಲ ಸುಗಮವಾಗಿದೆ ಎಂದು ಹೇಳಲಾಗದು. ಎಲ್ಲ ಪ್ರಜಾಪ್ರಭುತ್ವದಲ್ಲಿ ಅನಿಶ್ಚಿತ ತಿರುವುಗಳು ಇರುತ್ತವೆ.  ರಾಜಕೀಯ ಕ್ಷೇತ್ರದ ಕಸುಬೇ ಹೀಗೆ. ಅನಿರೀಕ್ಷಿತ ಸನ್ನಿವೇಶಗಳು ಅಲೆಗಳಂತೆ ಅಪ್ಪಳಿಸುತ್ತವೆ. ಈ ಅಲೆಗಳಲ್ಲಿ ಎದ್ದವರು ಬಿದ್ದವರು ಇರುತ್ತಾರೆ.  ಪ್ರಪಂಚದಲ್ಲಿ ಎಲ್ಲೇ ಆದರೂ ರಾಜಕೀಯ ವಿದ್ಯಮಾನಗಳ ಇತಿಹಾಸವನ್ನು ಗಮನಿಸಿದಾಗ ಒಬ್ಬರು ಇನ್ನೊಬ್ಬರ ಬೆನ್ನ ಹಿಂದೆ ಚೂರಿ ಹಾಕುವುದು, ಪಿತೂರಿ-ಒಳಸಂಚನ್ನು ಹೂಡುವುದು ಇವುಗಳನ್ನು ಕಾಣಬಹುದು. ರಾಜಕಾರಣದಲ್ಲಿ ಒಳಪಂಗಡಗಳು, ಚಿಂತನೆಗಳ ಸಂಘರ್ಷಣೆಗಳು, ಬಲಪಂಥ ಎಡ ಪಂಥ ವಿಭಜನೆಗಳು ಸಾಮಾನ್ಯ. ಬ್ರಿಟನ್ನಿನ ರಾಜಕಾರಣದಲ್ಲಿ ಜಾತಿ, ಮತ, ಧರ್ಮಗಳ ವಿಚಾರದಲ್ಲಿ ಬೇಧವಿಲ್ಲ. ಇಲ್ಲಿ ಧರ್ಮ ಮತ್ತು ರಾಜಕೀಯ ಇವೆರಡು ಬೇರೆ ಬೇರೆ. ಪ್ರಪಂಚದ ಇತರ ದೇಶಗಳಲ್ಲಿ ಕೆಲವು ಕಡೆ ಇರುವಂತೆ ರಾಜಕೀಯ ಮತ್ತು ಧರ್ಮಗಳ ಬೆರಕೆ ಇಲ್ಲ.
ಅವರವರ ಧರ್ಮ ಅವರಿಗೆ ವೈಯುಕ್ತಿಕವಾದ ವಿಚಾರ. ಬಹಿರಂಗದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಅದರ ಪ್ರಸ್ತಾಪವೂ ಇರುವುದಿಲ್ಲ. ಹೀಗಿದ್ದರೂ ಪಕ್ಕದ ಐರ್ಲೆಂಡಿನಲ್ಲಿ ಧರ್ಮ ಬಹಳ ಮುಖ್ಯವಾದ ವಿಚಾರ. ಉತ್ತರ ಮತ್ತು ದಕ್ಷಿಣ ಐರ್ಲೆಂಡಿನಲ್ಲಿ ಧರ್ಮದ ಹೆಸರಿನಲ್ಲಿ, ಕ್ರೈಸ್ತ ಮತದ ಒಳಪಂಗಡದಲ್ಲೇ ಸಾಕಷ್ಟು ರಾಜಕೀಯ ನಡೆದಿದೆ ಎನ್ನ ಬಹುದು.

ರಿಷಿ ಸುನಾಕ್ ಅವರು ಪ್ರಧಾನಿಯಾದ ವಿಚಾರ ಎಲ್ಲರಿಗು ಸಂತಸವನ್ನು ತಂದಿದ್ದು ಆ ಸಂಭ್ರಮದಲ್ಲಿ ನಾವೆಲ್ಲಾ ವಿಜೃಂಭಿಸುತ್ತಿರಬಹುದು. ಆದರೆ ಈಗ ಬ್ರಿಟನ್ನಿನ ಪ್ರಸ್ತುತ ರಾಜಕೀಯ ಸಾಮಾಜಿಕ ಪರಿಸ್ಥಿತಿ ಬಹಳ ಬಿಕ್ಕಟ್ಟಿನಲ್ಲಿದೆ. ರಿಷಿ ಅವರು ಎದುರಿಸ ಬೇಕಾದ ಸವಾಲುಗಳು ಬಹಳಷ್ಟಿದೆ. ಕನ್ಸರ್ವೇಟಿವ್ ಪಾರ್ಟಿಯ ಒಳಗೇ ಬಿರುಕಗಳಿವೆ. 
ರಿಷಿ ಸುನಾಕ್ ಅವರು ಪ್ರಧಾನಿಯಾದ ಮೊದಲ ಕ್ಷಣದಿಂದಲೇ ಅಪಸ್ವರಗಳು ಕೇಳಿ ಬರುತ್ತಿದೆ. ರಿಷಿ ಅವರು ತಮ್ಮ ಮಂತ್ರಿ ಮಂಡಳ ರಚಿಸಿದ ಹಿನ್ನೆಲೆಯಲ್ಲಿ, ಮಂತ್ರಿಗಳ ಆಯ್ಕೆಯಲ್ಲಿ ತೆಗೆದುಗೊಂಡ ನಿರ್ಣಯದಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸಿದೆ. ಬ್ರಿಟನ್ನಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಬೆಲೆಯುಬ್ಬರದ ಬವಣೆಗಳನ್ನು ("ಕಾಸ್ಟ್ ಆಫ್  ಲಿವಿಂಗ್  ಕ್ರೈಸಿಸ್") ನಿಭಾಯಿಸುವುದು ರಿಷಿ ಅವರಿಗೆ ದೊಡ್ಡ ಸವಾಲಾಗಿದೆ. ಯುಕ್ರೇನ್ ಯುದ್ಧದ ಪರಿಣಾಮದಿಂದ ಇಂಧನದ ಸರಬರಾಜು ಸ್ಥಗಿತಗೊಂಡು ಬೆಲೆ ಹೆಚ್ಚಾಗಿದೆ. ಚಳಿಗಾಲದಲ್ಲಿ ಬ್ರಿಟನ್ನಿನ ಮನೆಗಳನ್ನು ಬೆಚ್ಚಗಿಡಲು ಹೆಣಗಬೇಕಾಗಿದೆ. ಯುದ್ಧದಲ್ಲಿ ಸ್ಥಳಾಂತರಗೊಂಡ ಮತ್ತು ಇತರ ಬಡ ದೇಶಗಳಿಂದ ವಲಸೆ ಬರುತ್ತಿರುವ ನಿರಾಶ್ರಿತರನ್ನು ನಿಯಂತ್ರಿಸಬೇಕಾಗಿದೆ. ರಾಷ್ಟ್ರೀಯ ಅರೋಗ್ಯ ಸಂಸ್ಥೆಯಲ್ಲಿ ನರ್ಸ್ಗಳು, ಮತ್ತು ಸಾರಿಗೆ ವಿಭಾಗದಲ್ಲಿ ರೈಲ್ವೆ ಸಿಬ್ಬಂಧಿಗಳು ಮುಷ್ಕರವನ್ನು ಶುರುಮಾಡಿದ್ದಾರೆ. ಹಣದುಬ್ಬರದಿಂದ ಆಹಾರ ಮತ್ತು ದಿನನಿತ್ಯ ಬಳಕೆಯ ವಸ್ತುಗಳ ಬೆಲೆಗಳು ಏರಿವೆ.  ಇಡೀ ರಾಷ್ತ್ರದ ಆತ್ಮವಿಶ್ವಾಸವನ್ನು ರಿಷಿ ಅವರು ಹಿಡಿದೆತ್ತಬೇಕಾಗಿದೆ.  ರಿಷಿ ಅವರ ಮುಂದಿನ ದಾರಿ ಸುಗಮವಂತೂ ಅಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಯಾರಿಗೆ ತಾನೇ ಬೇಕು ಈ ಪ್ರಧಾನಿ ಪಟ್ಟ? ಎಂದು ಬಿ.ಬಿ.ಸಿಯ ಖ್ಯಾತ ವರದಿಗಾರರಾದ ಲಾರಾ ಕೂನ್ಸ್ ಬರ್ಗ್ ಪ್ರಶ್ನಿಸಿದ್ದಾರೆ. 

ರಿಷಿ ಅವರು ಪ್ರಧಾನಿಯಾದಾಗ ಹಲವಾರು ಮಾಧ್ಯಮಗಳು ಜನಾಭಿಪ್ರಾಯವನ್ನು ಪಡೆಯಲು ಮುಂದಾದವು. ಜನರು ಒಬ್ಬ ಪ್ರಧಾನಿಯ ಯೋಗ್ಯತೆಯನ್ನು ಅವನ ಅವಧಿಯ ಕೊನೆಗೆ ಅಳೆಯಬೇಕೆ ಹೊರತು ಪ್ರಾರಂಭದಲ್ಲಿ ಅಲ್ಲ! ಇದೇನೆಯಿರಲಿ ಸುಶೀಕ್ಷಿತರು, ರಾಜಕಾರಣಿಗಳು ರಿಷಿ ಬಗ್ಗೆ ತಮ್ಮ ವಿಶ್ವಾಸವನ್ನು, ಒಳ್ಳೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಮಿಕ ವರ್ಗದವರು, ಬಡ ಜನಸಾಮಾನ್ಯರು ರಿಷಿ ಶ್ರೀಮಂತ ವರ್ಗದವರು ಅವರಿಗೆ ಬಡತನದ ಬವಣೆಗಳು ಹೇಗೆ ಅರ್ಥವಾದೀತು? ಎಂಬ ಅಭಿಪ್ರಾಯವನ್ನು ನೀಡಿ ರಿಷಿ ಅವರ ಸಾಮರ್ಥ್ಯದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದರು. ಹಾಗೆ ನೋಡಿದರೆ ರಿಷಿ ಮೂಲದಲ್ಲಿ ಮಾಧ್ಯಮವರ್ಗದವರೇ, ತಮ್ಮ ಸ್ವಪ್ರತಿಭೆಯಿಂದ ಮೇಲೆ ಬಂದು ಈಗ ಹಣವಂತರಾಗಿದ್ದಾರೆ ಅಷ್ಟೇ. ಇನ್ನು ಕೆಲವು ದಿನಪತ್ರಿಕೆಗಳು ರಿಷಿ "ಮತಗಳಿಸದೆ ಪಟ್ಟಕ್ಕೇರಿದ ಪ್ರಧಾನಿ" ಎಂದು ಕಟುವಾಗಿ ಟೀಕಿಸಿತು. ಬ್ರಿಟನ್ನಿನ ಜನತೆ ಎಂಪಿಗಳನ್ನು ಚುನಾಯಿಸಿದ್ದು, ಅದೇ ಎಂಪಿಗಳು ರಿಷಿಯನ್ನು ಬಹುಮತದಿಂದ ಪ್ರಧಾನಿಯಾಗಿ ಆರಿಸಿದ್ದಾರೆ ಎಂದ ಮೇಲೆ ಇದು ಸತ್ಯಕ್ಕೆ ದೂರವಾದ ಮಾತು ಮತ್ತು ಅಸಂಗತ ಪ್ರಲಾಪ. ಅಂದಹಾಗೆ ಬ್ರಿಟನ್ನಿನ ರಾಜಕೀಯ ವ್ಯವಸ್ಥೆಯಲ್ಲಿ ಮತದಾರರು ಒಂದು ಪಾರ್ಟಿಗೆ ತಮ್ಮ ಮತವನ್ನು ನೀಡುತ್ತಾರೆ ಹೊರತು ಒಬ್ಬ ಪ್ರಧಾನ ಮಂತ್ರಿಗಲ್ಲ. ಆ ಪ್ರಧಾನಮಂತ್ರಿಯನ್ನು ಪಾರ್ಟಿ ಸದಸ್ಯರು ಚುನಾಯಿಸುತ್ತಾರೆ. ಬ್ರಿಟನ್ನಿನ ನಿವಾಸಿಗಳು ಯಾರು ಬೇಕಾದರೂ ಸ್ವಲ್ಪ ಹಣ ತೆತ್ತು ಪಾರ್ಟಿಯ ಸದಸ್ಯತ್ವವನ್ನು ಪಡೆಯಬಹುದು. ಇನ್ನು ನಮ್ಮ ಭಾರತೀಯ ಮೂಲದ ಅನಿವಾಸಿಗಳಿಗೆ ರಿಷಿ ಸುನಾಕ್ ಪ್ರಧಾನಿಯಾದದ್ದು ಅತ್ಯಂತ ಹೆಮ್ಮೆಯ ವಿಷಯ. ಈ ಸುವಾರ್ತೆಯನ್ನು ಎಲ್ಲರು ಹಂಚಿಕೊಂಡು ಸಂಭ್ರಮಿಸಿದರು. ಇಷ್ಟೇ ಅಲ್ಲದೆ ರಿಷಿ ಪೂರ್ವಜರು ಇಂದಿನ ಪಾಕಿಸ್ತಾನದ ಪಂಜಾಬಿನ ಮೂಲದವರು ಎಂದು ತಿಳಿದ ಕೂಡಲೇ ಪಾಕಿಸ್ಥಾನಿಗಳೂ ರಿಷಿ ಅವರ ಕೀರ್ತಿಯಲ್ಲಿ ಪಾಲುದಾರರಾಗಲು ಹವಣಿಸುತ್ತಿದ್ದಾರೆ.  ಬಿದ್ದವರನ್ನು ಕಡೆಗಣಿಸಿ ಗೆದ್ದವರ ಯಶಸ್ಸಿನಲ್ಲಿ ಭಾಗಿಗಳಾಗಲು ಹಾತೊರೆಯುವುದು ಲೋಕಾರೂಢಿಯಲ್ಲವೇ?

ರಿಷಿ ಸುನಾಕರಿಂದ ವಿಶೇಷವಾಗಿ ಭಾರತೀಯ ಮೂಲದವರು ಏನನ್ನು ನಿರೀಕ್ಷಿಸಬಹುದು? ಎಂಬ ಪ್ರಶ್ನೆ ಮೂಡುವುದು ಸಹಜ. ರಿಷಿ ಸುನಾಕ್ ಬಹಿರಂಗವಾಗಿ ಭಾರತದವರಂತೆ ಕಂಡರೂ ಇಲ್ಲಿ ಹುಟ್ಟಿ ಬೆಳೆದ ನಮ್ಮ ಅನಿವಾಸಿ ಎರಡನೇ ಪೀಳಿಗೆಯವರಂತೆ ಅವರೂ ಅಂತರಂಗದಲ್ಲಿ ಬ್ರಿಟಿಷ್ ಅಸ್ಮಿತೆಯನ್ನು ಉಳ್ಳವರು. ಇಂತಹ ಹಿನ್ನೆಲೆಯಲ್ಲಿ ಅವರಿಂದ ಯಾವುದೇ ವಿಶೇಷ ರಿಯಾಯ್ತಿಯನ್ನು ನಾವು ನಿರೀಕ್ಷಿಸುವುದು ತರವಲ್ಲ. ಇದೆಲ್ಲಕ್ಕೂ ಮಿಗಿಲಾಗಿ ಮೇಲೆ ಪ್ರಸ್ತಾಪಿಸಿದಂತೆ ಬ್ರಿಟನ್ನಿನ ಪ್ರಸಕ್ತ ಆರ್ಥಿಕ ಮತ್ತು ಇನ್ನೂ ಅನೇಕ ಸವಾಲುಗಳನ್ನು  
ರಿಷಿ ಬಗೆಹರಿಸಬೇಕಾಗಿದೆ. ಭಾರತ ಮತ್ತು ಬ್ರಿಟನ್ನಿನ ನಡುವೆ ವಾಣಿಜ್ಯ ಮತ್ತು ತಂತ್ರಜ್ಞಾನ ವಿನಿಮಯ, ವೀಸಾ ಪಡೆಯುವ ವಿಧಾನದಲ್ಲಿ ಸರಳೀಕರಣ, ಭಾರತೀಯ ಮೂಲದ ಪರಿಣಿತರಿಗೆ ಬ್ರಿಟನ್ನಿನಲ್ಲಿ ಉದ್ಯೋಗಾವಕಾಶ, ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗದ ಅವಕಾಶ ಇವುಗಳನ್ನು ನಾವು ನೀರೀಕ್ಷಿಸುವುದು ಸಹಜ. ಈ ವಿಚಾರದಲ್ಲಿ ರಿಷಿ ಅವರ ಸಹಕಾರವನ್ನು ನಾವು ಪಡೆಯುವ ಸಾಧ್ಯತೆಗಳಿವೆ. ರಿಷಿ ಅವರು ಬ್ರಿಟನ್ನಿನ ಹೊರಗೆ ಅಂತರಾಷ್ಟ್ರೀಯ ಮಟ್ಟದಲ್ಲಿ, ಯೂರೋಪಿನ ಒಕ್ಕೂಟದ ಜೊತೆಗೂಡಿ ಯುಕ್ರೇನಿನಲ್ಲಿ ಸಮರವನ್ನು ನಿಲ್ಲಿಸಲು ಸಾಧ್ಯವೇ? ರಷ್ಯಾ ಮತ್ತು ಚೈನಾದಂತಹ ಪ್ರಬಲವಾದ ಎದುರಾಳಿಗಳನ್ನು ನಿಭಾಯಿಸುವ ರಾಜತಾಂತ್ರಿಕ ಅನುಭವವಿದೆಯೇ? ಸಾಮರ್ಥ್ಯವಿದೆಯೇ? ಈ ವಿಚಾರದ ಬಗ್ಗೆ ನಾವೆಲ್ಲಾ ಸ್ವಲ್ಪ ಅನುಮಾನದಿಂದಲೇ   ಗಮನಿಸುತ್ತಿದ್ದೇವೆ. ರಿಷಿ ಅವರು ಆಗಲೇ ಆರ್ಥಿಕ ಮಂತ್ರಿಯಾಗಿದ್ದು ಮತ್ತು ಅವರ ಶಿಕ್ಷಣ ಇದಕ್ಕೆ ಪೂರಕವಾಗಿದ್ದು ಅವರು ಬ್ರಿಟನ್ನಿನ ಸಧ್ಯದ ಆರ್ಥಿಕ ಬಿಕ್ಕಟನ್ನು ಬಗೆಹರಿಸುವುದರ ಬಗ್ಗೆ ಎಲ್ಲರಿಗೂ ಸಂಪೂರ್ಣ ವಿಶ್ವಾಸವಿದೆ ಎನ್ನ ಬಹುದು.

ಒಟ್ಟಿನಲ್ಲಿ ರಿಷಿ ಸುನಾಕ್ ಆಂಗ್ಲ ಜನಾಂಗದ ಹೊರಗಿನ ಭಾರತೀಯ ಮೂಲದ ಒಬ್ಬ ವ್ಯಕ್ತಿ.  ಬ್ರಿಟನ್ನಿನ ಅತ್ಯಂತ ಕಠಿಣವಾದ ಪರಿಸ್ಥಿತಿಯಲ್ಲಿ ಆಂಗ್ಲ ಜನತೆ ಅವರನ್ನು ತಮ್ಮ ಜನನಾಯಕನಾಗಿ ಒಪ್ಪಿರುವುದು ಐತಿಹಾಸಿಕವಾಗಿ ಮಹತ್ವವಾದ ವಿಷಯ. ಇದು ಬ್ರಿಟಿಷ್ ಜನರ ಸಹಿಷ್ಣುತೆಗೆ ಮತ್ತು ಉದಾರತೆಗೆ ಸಾಕ್ಷಿಯಾಗಿದೆ. ಈ ನೆಲದಲ್ಲಿ ಯಾವ ವರ್ಣದವರಾದರೂ, ಯಾವ ಜನಾಂಗದವರಾದರೂ, ಯಾವ ಜಾತಿ, ಮತ, ಧರ್ಮಾದವರಾದರೂ ಅವನಿಗೆ ಅಥವಾ ಅವಳಿಗೆ ಪ್ರತಿಭೆ ಮತ್ತು ಸಾಮರ್ಥ್ಯವಿದ್ದಲ್ಲಿ ಈ ದೇಶದ ಪ್ರಧಾನಿಯಾಗಬಹುದು. ನಮ್ಮ ಭಾರತದಲ್ಲಿ ಯುರೋಪಿಯನ್ ಅಥವಾ ಆಫ್ರಿಕಾ ಮೂಲದ ವಲಸಿಗನೊಬ್ಬ ಬಂದು ನೆಲೆಯೂರಿ, ದೇಶದ ನಿಯಮಗಳು ಒಂದು ವೇಳೆ ಅವಕಾಶ ಮಾಡಿಕೊಟ್ಟರೆ ಆ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವೇ? ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಭಾರತದಲ್ಲೇ ಹುಟ್ಟಿದ್ದು ಹಿಂದೂ ಧರ್ಮದ ಹೊರಗಿನವರು ಎಷ್ಟು ಜನ ಮಂತ್ರಿ ಮಂಡಳದಲ್ಲಿ ಇದ್ದಾರೆ? ಅನ್ಯ ಧರ್ಮೀಯರು ಪ್ರಧಾನಿಯಾಗಲು ಸಾಧ್ಯವೇ? ಎಂಬ ಮುಜುಗರದ 
ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುವುದು ಸಹಜ. ಬ್ರಿಟಿಷ್ ಜನರಿಗಿರುವ ಆ ಸಹಿಷ್ಣುತೆ, ಉದಾರತೆ ನಮ್ಮಲ್ಲಿ ಇದೆಯೇ? ಎಂಬ ವಿಚಾರದ ಬಗ್ಗೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. 

 ಕೀನ್ಯಾ ಮೂಲದ ಅಮೇರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಭಾರತೀಯ ಮೂಲದ ಬ್ರಿಟನ್ನಿನ ರಿಷಿ ಸುನಾಕ್, ಐರ್ಲೆಂಡಿನ ಭಾರತೀಯ ಮೂಲದ ಮಾಜಿ ಪ್ರಧಾನಿ ಲಿಯೋ ವರಾಡ್ಕರ್ ಮತ್ತು ಇಟಲಿ ಮೂಲದ ಸೋನಿಯಾ ಗಾಂಧಿ, ಈ ಜನನಾಯಕರಲ್ಲಿ ಒಂದು ಸಾದೃಶ್ಯವಿದೆ. ಇವರು ಅಥವಾ ಇವರ ಪೂರ್ವಜರು ವಲಸಿಗರು. ಅವರು ಹಲವು ಕನಸುಗಳನ್ನು ಹೊತ್ತು ವಿದೇಶಗಳನ್ನು ತಮ್ಮ ದೇಶವಾಗಿಸಿಕೊಂಡು ಅಲ್ಲಿಯ ಸಂಸ್ಕೃತಿಯನ್ನು ಹೀರಿಕೊಂಡು ಸತ್ಪ್ರಜೆಗಳಾಗಿ ಕೊನೆಗೆ ಆಯಾ ದೇಶಗಳ ನಾಯಕರಾಗಿದ್ದಾರೆ. ಇದಕ್ಕೆ ಮೂಲ ಕಾರಣಗಳು ಇವರ ಪ್ರತಿಭೆ, ಶ್ರದ್ಧೆ ಮತ್ತು ಪ್ರಾಮಾಣಿಕತೆ. ಇನ್ನೊಂದು ಕಡೆ ಜಾಗತೀಕರಣ, ಅವಕಾಶ, ಆಯಾದೇಶದ ಜನರ ಉದಾತ್ತ ಮೌಲ್ಯಗಳು, ಎಲ್ಲರನ್ನೂ ಒಳಗೊಳ್ಳುವ ಆಶಯ ಮತ್ತು ಮತಾತೀತ ನಿಲುವುಗಳು ಕಾರಣವಿರಬಹುದು. 


ರಿಷಿ ಸುನಾಕ್ ಅವರ ಮುಂದಿನ ದಾರಿ ಸುಗಮವಾಗಲಿ ಅವರು ಒಬ್ಬ ಅದ್ವಿತೀಯ ಪ್ರಧಾನಿ ಮತ್ತು ಲೋಕನಾಯಕನಾಗಲಿ ಎಂದು ಹಾರೈಸೋಣ.

ಡಾ ಜಿ ಎಸ್ ಶಿವಪ್ರಸಾದ್
***



 

ತಸ್ಮೈಶ್ರೀಗುರವೇನಮಃ

ಫೋಟೋ ಕೃಪೆ ಗೂಗಲ್ L>R ರಾಧಾ ಕೃಷ್ಣನ್, ಬಿಎಂಶ್ರೀ, ಕುವೆಂಪು, ಹೆಚ್ ಏನ್
ಕಳೆದ ಕೆಲವು ದಿನಗಳ ಹಿಂದೆ ನಾವೆಲ್ಲಾ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ನಮ್ಮ ಬದುಕಿನಲ್ಲಿ ನಮಗೆ ಸ್ಫೂರ್ತಿ ನೀಡಿ, ಜ್ಞಾನ ದೀವಿಗೆಯನ್ನು ಕೈಗಿತ್ತ ಗುರುಗಳನ್ನು ಸ್ಮರಿಸಿಕೊಂಡಿದ್ದೇವೆ.  ಇಂದು ಗೌರಿ ಪ್ರಸನ್ನ ಮತ್ತು ಡಾ. ದೇಸಾಯಿಯವರು ತಮ್ಮ ಗುರುವಿನ ಬಗ್ಗೆ ಆತ್ಮೀಯವಾದ ಬರಹಗಳನ್ನು ಇಲ್ಲಿ ಸಮರ್ಪಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ಪರಂಪರೆಗೆ, ಸಂಬಂಧಗಳಿಗೆ ಉಚ್ಚ ಸ್ಥಾನಮಾನಗಳಿವೆ. 'ಗುರು ಸಾಕ್ಷಾತ್ ಪರಬ್ರಹ್ಮ' ಎಂದು ಪರಿಗಣಿಸುತ್ತೇವೆ. ಇದು ಒಂದು ಪವಿತ್ರವಾದ ನಂಟು. ಗುರುವಿಗೆ ಒಂದು ಜವಾಬ್ದಾರಿಯಿದೆ, ಜ್ಞಾನಾರ್ಜನೆಯ ಕರ್ತವ್ಯ ಮತ್ತು ಕೈಂಕರ್ಯವಿದೆ. ನಿಜವಾದ ಗುರುವಿಗೆ ತನ್ನ ಶಿಷ್ಯರ ಬಗ್ಗೆ ಪಕ್ಷಪಾತವಿರಬಾರದು, ಅಲ್ಲಿ ಜಾತಿ ಮತಗಳ ಭಾವನೆಗಳು ನುಸುಳಿ ಬರಬಾರದು. ಬಹಳ ಹಿಂದೆ ಗುರುಕುಲಗಳಲ್ಲಿ ಕೆಳಜಾತಿ ವರ್ಗದವರಿಗೆ, ಹೆಂಗಸರಿಗೆ  ವಿದ್ಯೆಯನ್ನು ಪಡೆಯುವ ಅರ್ಹತೆ ಇಲ್ಲವೆಂದು ಅವರನ್ನು ದೂರ ಇಡಲಾಗಿತ್ತು. ಏಕಲವ್ಯನಂಥವರು ತಮ್ಮ ಕಲಿಕೆಯನ್ನು ತ್ಯಜಿಸಬೇಕಾಯಿತು. ಅದು ಗುರುಭಕ್ತಿಯ ಪರಾಕಾಷ್ಠೆ  ಹಾಗೂ ಉತ್ತಮ ನಿದರ್ಶನವೂ ಹೌದು. ಸ್ವಾತಂತ್ರ್ಯ ಭಾರತದಲ್ಲಿ ಶಿಕ್ಷಣ ಎಲ್ಲರ ಹಕ್ಕು. ಹಿಂದೆ ಮತ್ತು ಇಂದಿಗೂ ಕೆಲವೆಡೆ ಶಿಕ್ಷಕರು ಶಿಷ್ಯನಿಗೆ ಬಹಳ ಅಸಡ್ಡೆಯಿಂದ, ಕೆಲವೊಮ್ಮೆ ಎಲ್ಲರ ಮುಂದೆ ತೇಜೋವಧೆ ಮಾಡಿ ಹೀನೈಸಿ ವಿದ್ಯೆ ಕಲಿಸುವ ವಿಧಾನ ಸರಿಯೆಂದು ಭಾವಿಸಿದ್ದಾರೆ. (Learning by humiliation) ಇಂತಹ ಗುರುಗಳು ಮತ್ತು ಇಂತಹ ಶಿಕ್ಷಣ ವ್ಯವಸ್ಥೆ ಕಲಿಕೆಗೆ ತದ್ವಿರುದ್ಧ ಪರಿಣಾಮಗಳನ್ನು ತರಬಹುದು.  ನಿಜವಾದ ಗುರು ಶಿಷ್ಯನ ಸರ್ವತೋಮುಖ ಬೆಳವಣಿಗೆಗೆ 
(Holistic Development) ಪೂರಕವಾಗುವ ಶಿಕ್ಷಣವನ್ನು ಆಸ್ಥೆಯಿಂದ, ಪ್ರೀತಿಯಿಂದ ನೀಡಬೇಕಾಗಿದೆ. ಶಿಷ್ಯನನ್ನು ಗೌರವದಿಂದ ಕಂಡು, ಅವನು ತನ್ನ ಪೈಪೋಟಿ ಎಂದೆನಿಸದೆ  ಶಿಷ್ಯನು ತನ್ನಷ್ಟೇ ಅಥವಾ  ತನಗಿಂತ  ಉನ್ನತ ಸ್ಥಾನವನ್ನು ಏರಬೇಕೆಂದು ನೀರೀಕ್ಷೆಯಿಟ್ಟುಕೊಂಡಲ್ಲಿ ಅದು ಶಿಕ್ಷಣದ ಉದ್ದೇಶವನ್ನು ಪೂರೈಸುತ್ತದೆ. ಶಿಷ್ಯರಿಂದ ಶಿಷ್ಯರಿಗೆ ಜ್ಞಾನದ ಬೆಳಕು ಇನ್ನು ಪ್ರಖರವಾಗಿ ಬೆಳಗಬೇಕೆ ಹೊರತು ಅದು ಕುಂದಬಾರದು. ಈ ಜ್ಞಾನದಿಂದ ಒಬ್ಬ ವ್ಯಕ್ತಿಯ ವಿಕಾಸದ ಜೊತೆಗೆ ಒಂದು ಸಮಾಜದ ವಿಕಾಸವೂ  ಆಗಬೇಕು, ಅಲ್ಪ ಮಾನವ ವಿಶ್ವಮಾನವನಾಗಬೇಕು, ಅದೇ ಶಿಕ್ಷಣದ ಗುರಿ. ಕೆಲವು ವಿಶೇಷ ಗುರು-ಶಿಷ್ಯ ಸಂಬಂಧಗಳು, ಶಿಷ್ಯ ಗುರುವಿಗೆ ಸಲ್ಲಿಸಿರುವ ಕಾಣಿಕೆಗಳು ಕಾವ್ಯ ರೂಪದಲ್ಲೂ ಅಭಿವ್ಯಕ್ತಗೊಂಡಿವೆ. ಗೌರಿ  ಅವರು ಕೆಳಗೆ ತಮ್ಮ ಬರಹದ ಕೊನೆಯಲ್ಲಿ ಪ್ರಸ್ತಾಪಿಸಿರುವಂತೆ, ಜಿ ಎಸ್ ಎಸ್  ತಮ್ಮ ಗುರುಗಳಾದ ಕುವೆಂಪು ಅವರನ್ನು ಗೌರವದಿಂದ, ನಿಶ್ಶಬ್ದದಲ್ಲಿ ನಿಂತು ನೆನೆಯುತ್ತಾರೆ. ಗುರುಗಳು ಕೊಟ್ಟ ಹೊಸ ಹುಟ್ಟುಗಳನ್ನು ಹಿಡಿದು, ದೋಣಿಯೇರಿ ಜ್ಞಾನವೆಂಬ ಸಾಗರವನ್ನು ಪ್ರವೇಶಿಸುತ್ತಾರೆ. ಅವರ ಗುರುಗಳಾದ ಕುವೆಂಪುರವರು ತಮ್ಮ ಮೇರುಕೃತಿ ಶ್ರೀ ರಾಮಾಯಣ ದರ್ಶನಂ ಮುಗಿಸಿ ಅದನ್ನು ತಮ್ಮ ಗುರುಗಳಾದ ಶ್ರೀ ವೆಂಕಣ್ಣಯ್ಯನವರಿಗೆ ಅರ್ಪಿಸಿ; 

"ಇದೋ ಮುಗಿಸಿ ತಂದಿಹೆನ್  ಈ ಬೃಹದ್ ಗಾನಮಂ, 
ನಿಮ್ಮ ಸಿರಿಯಡಿಗೆ ಒಪ್ಪಿಸಲ್ಕೆ, ಓ ಪ್ರಿಯ ಗುರುವೇ, ಕರುಣಿಸಿಂ 
ನಿಮ್ಮ ಹರಕೆಯ ಬಲದ ಶಿಷ್ಯನಂ"  

ಎಂದು ವಿನಂತಿಸುತ್ತಾರೆ. ಹೀಗೆ ಗುರು ಶಿಷ್ಯರ ಪ್ರೀತಿ ವಿಶ್ವಾಸಗಳ ಪರಂಪರೆಯನ್ನು ಮತ್ತು ಅದರ ಸಮೃದ್ಧಿಯನ್ನು ಕನ್ನಡ ಸಾಹಿತ್ಯದಲ್ಲಿ ಕಾಣಬಹುದು. ಆದರ್ಶ ಗುರುಗಳು  ನಮಗೆ ಸ್ಫೂರ್ತಿಯನ್ನು ನೀಡಿ ಬದುಕಿನ ದಿಕ್ಕನ್ನೇ ಬದಲಾಯಿಸುತ್ತಾರೆ. ಸಮರ್ಥಗುರುಗಳು ನಮ್ಮ ಸ್ಮೃತಿಯಲ್ಲಿ ಅಮರರಾಗಿರುತ್ತಾರೆ. ಇಂತಹ ಮಹಾನುಭಾವಿ ಮಹನೀಯರನ್ನು ಮಹಿಳೆಯರನ್ನು ಶಿಕ್ಷಕರ ದಿನದಂದು ಸ್ಮರಿಸುವುದು, ನಮನಗಳನ್ನು ಅರ್ಪಿಸುವುದು ನಮ್ಮ ಕರ್ತವ್ಯ. 

***

ನಮ್ಮೆಲ್ಲರ ನೆಚ್ಚಿನ ರಾಣಿ ಎಲಿಝಬೆತ್ ಇಂದು ತೀರಿಕೊಂಡಿದ್ದಾಳೆ. ಅವಳ ಕರ್ತವ್ಯ ನಿಷ್ಠೆ ನಮಗೆಲ್ಲ ಆದರ್ಶಪ್ರಾಯವಾಗಿದೆ. ತನಗೆ ದೊರಕಿದ ಆಯುಷ್ಯದುದ್ದಕ್ಕೂ ಜನರ ಸೇವೆಯನ್ನು ಮಾಡುವುದಾಗಿ ಪಣತೊಟ್ಟಿದ್ದು ಅದನ್ನು ಇಂದು ಪೂರೈಸಿದ್ದಾಳೆ. ಕಳೆದ ಕೆಲವು ತಿಂಗಳ ಹಿಂದೆ ರಾಣಿಯ ೭೦ ವರ್ಷ ಆಳ್ವಿಕೆಯ ಸಂದರ್ಭದಲ್ಲಿ ಅನಿವಾಸಿ ಬಳಗ ವಿಶೇಷ ಸಂಚಿಕೆ ತಂದಿದ್ದನು ಇಲ್ಲಿ ಸ್ಮರಿಸಬಹುದು. ರಾಣಿಯ ಆತ್ಮಕ್ಕೆ ಶಾಂತಿಯನ್ನು ಕೊರೋಣ. 

 - ಸಂಪಾದಕ 

*************
ಫೋಟೋ ಕೃಪೆ ಗೂಗಲ್ L>R ಅನಿ ಬೆಸೆಂಟ್, ರೋಮಿಲಾ ಥಾಪರ್ ಮತ್ತು ಚೀ.ನಾ. ಮಂಗಳ
ಶಿಕ್ಷಕರ ದಿನಾಚರಣೆ –  ಶ್ರೀಮತಿ  ಗೌರಿ ಪ್ರಸನ್ನ 

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಹ 
 ಸುಮಾರು ೩-೫ ವರುಷಗಳ ಹಿಂದಿನ ಮಾತು. ಅದೊಂದು ಸುಂದರ ಶಾಲೆ. ಅಂದು ಶಿಕ್ಷಕರ ದಿನಾಚರಣೆ. ಹತ್ತನೆಯ ತರಗತಿಯ ವಿದ್ಯಾಥಿ೯ನಿಯರೆಲ್ಲ ತಮ್ಮ ನೆಚ್ಚಿನ ಗುರುವೃಂದಕ್ಕಾಗಿ ಒಂದು ಪುಟ್ಟ ಸಮಾರಂಭವನ್ನೇಪ೯ಡಿಸಿದ್ದರು.  ಗುರುಶಿಷ್ಯರ ನಡುವಿನ ಸಂಬಂಧ ಅದೂ ಆ ಹದಿವಯಸ್ಸಿನಲ್ಲಿ ಬಹಳ ಮನೋಹರವೂ, ಆತ್ಮೀಯವೂ ಆಗಿರುತ್ತದೆಯಲ್ಲವೇ? ತಮ್ಮ ಪ್ರೀತಿಯ ಗುರುಗಳಿಗೊಂದು ಕೃತಜ್ಞತೆ ಸಲ್ಲಿಸುವ ಸದಾವಕಾಶ. ಜೀವನದ ವಕ್ರತೆಗಿನ್ನೂ ಅಪರಿಚಿತರಾದ ಆ ಹುಡುಗಿಯರ ಮೊಗದ ತುಂಬ ಮುಗ್ಧತೆಯ ಮುಗುಳ್ನಗು; ಹೃದಯಗಳಲ್ಲಿ ಪ್ರೀತಿ-ಗೌರವಗಳ ಮಹಾಪೂರ. ತಮ್ಮ ಪ್ರೀತ್ಯಾದರಗಳ ದ್ಯೋತಕವಾಗಿ ತಮಗೆ ತಿಳಿದಂತೆ ನಾಲ್ಕಾರು ಮಾತಾಡಿ, ಎಲ್ಲ ಶಿಕ್ಷಕವೃಂದಕ್ಕೂ ಒಂದೊಂದು ಗುಲಾಬಿ ಹೂ ಕೊಟ್ಟರು. ಶಿಕ್ಷಕರೆಲ್ಲ ಅವರ ಖುಷಿಯಲ್ಲಿ ತಾವೂ ಪಾಲ್ಗೊಂಡು ತಮ್ಮ ತಮ್ಮ ಅಂಗಿಯ ಕಿಸೆಗೆ ಸಿಕ್ಕಿಸಿಕೊಂಡರೆ ಶಿಕ್ಷಕಿಯರೆಲ್ಲ ತಮ್ಮ ಮುಡಿಗೆ ಮುಡಿದುಕೊಂಡರು. ಆದರೆ ಯಾವಾಗಲೂ ಬಳೆ-ಕುಂಕುಮವಿಲ್ಲದೇ, ಬರೀ ಸಾಧಾರಣ ಸೀರೆಗಳನ್ನುಟ್ಟು  ಸೈಕಲ್ ಮೇಲೆ ಶಾಲೆಗೆ ಬರುವ ಒಬ್ಬ P.E .ಟೀಚರ್, ದೈಹಿಕ ಶಿಕ್ಷಕಿ ಮಾತ್ರ ಅದನ್ನು ಮುಡಿಯದೇ ಕೈಯಲ್ಲಿ ಹಿಡಿದು ಯಾವುದೋ ಚಿಂತನೆಯಲ್ಲಿ ಮುಳುಗಿದ್ದಾರೆ. 'ಪಾಪ! ಗಂಡ ಇರಲಿಕ್ಕಿಲ್ಲ. ಅದು ಹೇಗೆ ತಾನೇ ಮುಡಿದಾರು?!' ಎನ್ನುವ  ಅನುಕಂಪ ನನಗೆ.  ಆಷ್ಟರಲ್ಲೇ ಮತ್ತೋವ೯ ಹುಡುಗಿ ಜಯಶ್ರೀ ಯಾಳವಾರ  ಅನ್ನುವವಳು ಕೇಳಿಯೇಬಿಟ್ಟಳು.' ಮೇಡಂ,ನಾವಷ್ಟು ಪ್ರೀತಿಯಿಂದ  ಕೊಟ್ಟೇವಿ. ನೀವು ಇಟ್ಟುಕೊಳ್ಳಲೇ  ಇಲ್ಲ?' ನಸುನಕ್ಕ ಅವರು ಉತ್ತರಿಸಿದರು - ' ಇಲ್ಲ ಮರೀ,ಖಂಡಿತ ನಿಮ್ಮ ಪ್ರೀತಿಗೆ ಸರಿಯಾದ  ಸ್ಥಾನವನ್ನೇ ಅದು ಸೇರುತ್ತದೆ'. ಶಾಲೆಯಲ್ಲಿದ್ದ ಅರವಿಂದರ ಫೋಟೋವನ್ನದು ಅಲಂಕರಿಸಿತು. ನಮಗೆಲ್ಲ 'ಅಯ್ಯೋ! ಜಯಶ್ರೀ ಎಂಥ ಅನಾಹುತದ ಪ್ರಶ್ನೆ ಕೇಳಿಬಿಟ್ಟಳಲ್ಲ?' ಎಂಬ ಆತಂಕ.

      ಮರುದಿನ  ೧೧ ಗಂಟೆ. ಕಿಲಕಿಲ ನಗುತ್ತ , ಜೋರುಜೋರಾಗಿ ಹರಟೆ ಹೊಡೆಯುತ್ತ ನಮ್ಮೆಲ್ಲ  ಗೆಳತಿಯ ಸವಾರಿ  ಇಡಿಯ ರೋಡನ್ನೇ  block ಮಾಡಿಕೊಂಡು ಶಾಲೆಗೆ ಹೊರಟಿತ್ತು. 'ಟ್ರಿಣ್..ಟ್ರಿಣ್..' ಹಿಂದೆ ಮ್ಯಾಡಂ ನ ಸೈಕಲ್ ನ ಬೆಲ್ ದನಿ. ಹಿಂತಿರುಗಿ ನೋಡಿ ದಾರಿ ಮಾಡಿಕೊಟ್ಟ ನಮ್ಮ ಪಕ್ಕದಲ್ಲೇ ಸೈಕಲ್ ನಿಂದ ಇಳಿದ ಅವರು ನನ್ನನ್ನೇ ನೋಡುತ್ತ ಗಂಭೀರವಾಗಿ ' ನಿನ್ನೆ ಹೂವು ಯಾಕೆ ಮುಡಿದುಕೊಳ್ಳಲಿಲ್ಲ ಎಂದು ನೀನಲ್ಲವೇ ಕೇಳಿದ್ದ?' ಎಂದರು. ನನಗೋ ಒಮ್ಮೆಲೇ ಎದೆ ಝಲ್ಲೆಂದಿತು, ಖಂಡಿತ  ಬಯ್ಯುತ್ತಾರಿವರು ಎಂದು. ಕೆಲಸಮಯದ ಹಿಂದೆ ಅಮ್ಮ ಅರಿಶಿನ-ಕುಂಕುಮಕ್ಕೆ ಎಲ್ಲರನ್ನೂ ಕರೆದು ಬಾ ಎಂದು ಹೇಳಿಕಳಿಸಿದಾಗ ನಮ್ಮೂರಿನ ಮಡಿಹೆಂಗಸು ಪದ್ದಕ್ಕಜ್ಜಿಯನ್ನೂ 'ಅರಿಶಿನ-ಕುಂಕುಮಕ್ಕ ಬರಬೇಕಂತ್ರಿ' ಎಂದು ಕರೆದು ' ನಿಮ್ಮವ್ವ ಹೇಳಿದ್ಲಾ ನನ್ನ ಕರಿ ಅಂತ. ಹುಚ್ಚು ಮುಂಡೆದೇ..' ಅಂತ ಅವರಿಂದ ಬಯ್ಯಿಸಿಕೊಂಡದ್ದು ನೆನಪಾಗಿ ಕಟ್ಟಾ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಿದ್ದ ನಾನು ಹೆದರಿದ್ದೆ.' ಓಹೋ! ಇವರು ಆ ಪ್ರಶ್ನೆ ಕೇಳಿದವಳು ನಾನೇ ಅಂದುಕೊಂಡಿದ್ದಾರೆ. ನಾನಲ್ಲ; ಜಯಶ್ರೀ ಎಂದು ಅವಳ ಹೆಸರು ಹೇಳಿ ಅವಳಿಗೆ ಬಯ್ಯಿಸಬಾರದು. ಪಾಪಾ! ಅವಳು ಮೊದಲೇ ಮೆತ್ತನೆಯ ಹುಡುಗಿ. ಏನೋ ತಿಳಿಯದೇ ಕೇಳಿದ್ದಾಳೆ' ..ಎಂದೆಲ್ಲ ಅನ್ನಿಸಿ 'ಹೌದ್ರಿ.ನಾನೇ' ಎಂದುಬಿಟ್ಟೆ. ನಾನಂದುಕೊಂಡಂತೆ ಅವರು ಬಯ್ಯಲಿಲ್ಲ;ರೇಗಲೂ ಇಲ್ಲ. ''ನೋಡು ಮರೀ, ನೀನಿನ್ನೂ ಸಣ್ಣವಳು.ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಂದು ವ್ಯಕ್ತಿ , ವಸ್ತುವೂ ತನ್ನ ಆತ್ಯಂತಿಕ ಗುರಿಯನ್ನು ಮುಟ್ಟಲು ಉದ್ಯುಕ್ತವಾಗಿರುತ್ತದೆ; ಸಾಥ೯ಕತೆಯನ್ನು ಪಡೆಯಲು ತುಡಿಯುತ್ತಿರುತ್ತದೆ. ನೀವು ನಿನ್ನೆ ಕೊಟ್ಟ ಹೂ ..ದೇವನ, ಗುರುವಿನ ಶಿರವನ್ನೋ, ಪಾದವನ್ನೋ ಸೇರುವುದೇ ಅದರ ತಪಸ್ಸು. ನಾ ಮುಡಿದುಕೊಂಡರೆ  ಒಂದೆರಡು ಗಂಟೆಯಲ್ಲಿ ಒಣಗಿ ಮುದುರಿ ಹೋಗುತ್ತಿತ್ತು. ಅದಕ್ಕೆಂದೇ ನಿಮ್ಮೆಲ್ಲರ ಯಶಸ್ಸಿಗಾಗಿ, ಶ್ರೇಯಸ್ಸಿಗಾಗಿ  ಪ್ರಾಥಿ೯ಸಿ ಅದನ್ನು ಅರವಿಂದರ ಭಾವಚಿತ್ರಕ್ಕೆ ಸಮಪಿಸಿದ್ದು' ಎಂದರು. ಅವರು ಹೇಳಿದ್ದು ಬಹಳಷ್ಟೇನೂ ಅಥ೯ವಾಗದಿದ್ದರೂ ಅವರ ದನಿಯಲ್ಲಿನ ನೈಜ ಕಳಕಳಿ, ಪ್ರೀತಿ ನೇರವಾಗಿ ನನ್ನ  ಹೃದಯವನ್ನು ಸ್ಪಶಿ೯ಸಿತು. ಅವರ ಆ ರೀತಿಯ ವಿಚಾರ-ಚಿಂತನೆ ನಮ್ಮ ಆಗಿನ ಬೌದ್ಧಿಕ ವಲಯಕ್ಕೊಂದು ಕ್ರಾಂತಿ ಎಂದರೂ ಸರಿಯೇ.  'ಮಗೂ, ಸಸ್ಯಗಳಿಗೆ, ಹೂಗಳಿಗೆ, ಗಿಡಮರಬಳ್ಳಿಗಳಿಗೆ ಎಲ್ಲಕ್ಕೂ ಜೀವವಿರುತ್ತದೆ. ಅವಕ್ಕೂ ನಮ್ಮಂತೆಯೇ ಭಾವನೆಗಳಿರುತ್ತವೆ. ನಿಮ್ಮ ಪಾಠದಲ್ಲಿ ಜಗದೀಶ್ ಚಂದ್ರ  ಬೋಸ್ ರ ವಿಷಯ ಬಂದಿಲ್ಲವೇ? ಇವತ್ತು ಶಾಲೆ ಬಿಟ್ಟ ಮೇಲೆ ನನ್ನನ್ನು ಕಾಣು. ಅವರ ಪುಸ್ತಕ ಕೊಡುತ್ತೇನೆ.'' ಎಂದರು. ಆ ಪುಸ್ತಕ, ಅದರಲ್ಲಿ ಅವರು ನನಗೆಂದು ಬರೆದಿಟ್ಟ ಚಂದದ ಪತ್ರ ನಂತರದ ಕತೆಯೇ ಬೇರೆ.ಆ ಶರಾವತಿ ಹೆಗಡೆ ಮ್ಯಾಡಂ ನನ್ನ ಪ್ರೀತಿಯ ಶತ೯ಕ್ಕನಾಗಿ ಜೀವನದ ಎತ್ತರದ ಸ್ತರಗಳನ್ನು ತೋರಿಸಿಕೊಟ್ಟು, ನೈತಿಕತೆ, ಪ್ರಾಮಾಣಿಕತೆ, ಪ್ರೀತಿ, ಅಧ್ಯಾತ್ಮ, ಸಾಹಿತ್ಯ, ಸಂಗೀತದಂಥ ಧನಾತ್ಮಕ ಚಿಂತನೆಗಳ ಸಹಸ್ರ ಗರಿ ಮೂಡಿಸಿ, ಅಂತ:ಕರಣದ ಹೊಳೆಯಲ್ಲಿ ನನ್ನನ್ನು ಮೀಯಿಸಿ, ತೊಯ್ಯಿಸಿ,  ಮೈ-ಮನ-ಚೇತನಗಳನ್ನೆಲ್ಲ ಸಂತೃಪ್ತಗೊಳಿಸಿ , ಜೀವನದ ಇಂದಿನ ಹಂತದವರೆಗೂ ತನ್ನ ಕೃಪಾ ಶಕ್ತಿಯಿಂದಲೇ ಎಲ್ಲ ಕಷ್ಟಗಳಲ್ಲೂ ಪಾರುಮಾಡಿ ...ಓಹ್! ಅದ್ಭುತ!! ಅದನ್ನೆಲ್ಲ ಬರೆಯಲಾಗದು. ಬರೆದು,ಮಾತಾಡಿ  ಅದರ ಭಾವತೀವ್ರತೆಯ ಸೊಗವನ್ನು ಕಡಿಮೆ ಮಾಡಿಕೊಳ್ಳಲಾಗದು.

''ಸದ್ದುಗದ್ದಲದ  ತುತ್ತೂರಿ ದನಿಗಳಾಚೆಗೆ ನಿಂತು 
ನಿಶ್ಶಬ್ದ ದಲ್ಲಿ  ನೆನೆಯುತ್ತೇನೆ ಗೌರವದಿಂದ.
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ ನನ್ನ ಸುತ್ತ.
ಪಟಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ'' 
 ( ಮೂಲ ಡಾ. ಜಿ. ಎಸ್. ಎಸ್ )

***********************************************
ನಾಡಗೀರ ಮಾಸ್ತರ್ (1915-2011)

ನನ್ನಶಾಲೆ ಮತ್ತು ನನ್ನ ಇಂಗ್ಲಿಷ್ ಟೀಚರ್ ನಾಡಗೀರ ಮಾಸ್ತರ್ (1915-2011) ಶ್ರೀವತ್ಸ ದೇಸಾಯಿ

ಪ್ರತಿ ವರ್ಷ ಭಾರತದಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವೆಂದು ಸಾಮೂಹಿಕವಾಗಿ ಆಚರಿಸುತ್ತೇವೆಯಾದರೂ ಪ್ರತಿದಿನದ ಯೋಗಾಭ್ಯಾಸದ ಪ್ರಾರಂಭದಲ್ಲಿ ನಮ್ಮ ಯೋಗಾಮಾ ಹೇಳಿದಂತೆ ನನ್ನ ಶಾಲಾಗುರುಗಳು ನನಗೆ ಪ್ರಾತಃಸ್ಮರಣೀಯರಾಗುತ್ತಾರೆ. ಸುಮಾರು ಎಂಬತ್ತು ವರ್ಷಗಳ ಕೆಳಗೆ ಕರ್ನಾಟಕ ಎಜುಕೇಶನ್  ಸೊಸೈಟಿ ಎನ್ನುವ  ಹೆಸರಿನಿಂದ ಸ್ಥಾಪಿತವಾಗಿ ಮುಂದೆ ಮಹತ್ವದ ಶೈಕ್ಷಣಿಕ ಸಂಸ್ಥೆ ಯ(K E Board) ಧಾರವಾಡದ ಮಾಳಮಡ್ಡಿಯಲ್ಲಿರುವ ಕೆ ಇ ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿ ನಾನು. ಗುರುರಾಜ ಕರಜಗಿಯವರು ಅನೇಕ ಸಲ ಹೇಳಿದಂತೆ ನಿಸ್ವಾರ್ಥ, ಅಪ್ಪಟ ದೇಶಪ್ರೇಮಿ ಆದರ್ಶ ಮಾಸ್ತರರ ಪಡೆಯೇ ಅಲ್ಲಿ ಇತ್ತು. ನಮಗೆ ಪಾಠ ಕಲಿಸಿದ ಮತ್ತು ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಗುರುಗಳೆಲ್ಲರ ಹೆಸರು ತೊಗೊಳ್ಳದೆ ಅವರೆಲ್ಲರಿಗೂ ವಂದಿಸಿ ಈ ಚಿಕ್ಕ ಲೇಖನದಲ್ಲಿ ಇಂಗ್ಲಿಷ್ ಟೀಚರ್ ನಾಡಗೀರವರ ಬಗ್ಗೆಯಷ್ಟೇ ಸ್ವಲ್ಪ ಬರೆಯುತ್ತೇನೆ. ಬರೆಯುತ್ತ ಹೋದರೆ ಪರೀಕ್ಷೆಯ ದಿನ ಕೊಡುತ್ತಿದ್ದ ’ಸಪ್ಲಿಮೆಂಟೆಲ್ಲ’ ತುಂಬಿಸುವಷ್ಟಿದೆ. ನಮ್ಮೆಲ್ಲ ಗೆಳೆಯರಿಗೆ ’ಮಾಸ್ತರ್’ ಅಂದರೆ ಅವರೊಬ್ಬರೇ – ಶಿವರಾವ್ ಜಿ ನಾಡಗೀರ್ ಮಾಸ್ತರರು. ಇನ್ನೂ ಹತ್ತಿರದವರು ಅವರನ್ನು ’ಶಿವಣ್ಣ ಕಾಕಾ’ ಅಂತ ಕರೆಯುತ್ತಿದ್ದರು. ನಮ್ಮ ’ಸಾಲಿ” ಅಂದರೆ ಉತ್ತರ ಕರ್ನಾಟಕ ಭಾಷೆಯಲ್ಲಿ ಶಾಲೆ -ನಾಡಗೀರ್ ಮಾಸ್ತರರ ಸಾಲಿ ಅಂತ ಎಲ್ಲೆಡೆ  ಪ್ರಸಿದ್ಧವಾಗಿತ್ತು. ಕೆ ಇ ಬೋರ್ಡ್ ಹೈಸ್ಕೂಲಿನಲ್ಲಿ ಅವರು ಸೇವೆ ಸಲ್ಲಿಸಿದ ನಾಲ್ಕು ದಶಕಗಳಲ್ಲಿ (1938-1976) ಅದೆಷ್ಟೊಂದು ಕೆಲಸ ಮಾಡಿದ್ದರು! ಅದರಲ್ಲಿ 20 ವರ್ಷ ಹೆಡ್ಮಾಸ್ಟರ್ ಆಗಿದ್ದರು. ಅವರು ಕಲಿಸಿದ ವಿದ್ಯಾರ್ಥಿಗಳು ಸಾವಿರಾರು. ಅವರೆಲ್ಲರ ಮನದಲ್ಲಿ ಅವರು ಸ್ಥಿರವಾಗಿ ನೆಲೆಸಿದ್ದಾರೆಂದರೆ ಅತಿಶಯೋಕ್ತಿಯಲ್ಲ. 1975ರಲ್ಲಿ ರಾಷ್ಟ್ರಪತಿಗಳ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯಿಂದ ಭೂಷಿತರಾದರು. ಅವರ ಪ್ರಯತ್ನ ಮತ್ತು ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಪ್ರತಿವರ್ಷ ಉತ್ತಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದರು. ಹೆಚ್ಚಿನ ಕೋಚಿಂಗಿನಿಂದ ನೂರಕ್ಕೂ ಹೆಚ್ಚು ’ರಾಂಕ್’ ಗಳಿಸಿ Rank Bank ಅಂತ ನಮ್ಮ ಶಾಲೆ ಕರೆಸಿಕೊಳ್ಳಲಾರಂಭಿಸಿತು.

ಕೆ. ಯೀ. ಬೋರ್ಡ್ ಮಹಾವಿದ್ಯಾಲಯ, ಧಾರವಾಡ
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಸ್ವೀಕಾರ – ನಾಡಿಗೇರ್ ಮಾಸ್ತರ್ ಮತ್ತು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್
 ’ನನ್ನ ಮಾಸ್ತರ್-ನನ್ನ ಪೆನ್ ಫ್ರೆಂಡ್ ಸಹ’.
ಆ ಶಾಲೆಯಲ್ಲಿ ನಾನು  ಕಲಿತದ್ದು ಮೂರೇ ವರ್ಷಗಳಾದರೂ ಅವರೊಡನೆ ನನ್ನ ಸಂಬಂಧ, ಮತ್ತು ಪತ್ರ ವ್ಯವಹಾರ ಅವರು ನಿಧನರಾಗುವ ತನಕ ಇತ್ತು. ಅವರು ಅತ್ಯಂತ ಶಿಸ್ತಿನ ಮನುಷ್ಯ. ವ್ಯತಿರಿಕ್ತವಾಗಿ ನಡೆದರೆ ಶಿವನ ಮೂರನೆಯ ಕಣ್ಣಿಗೆ ಆಹುತಿಯೇ ಸೈ. ನಾವೆಲ್ಲ ಅವರೆದುರು ಥರ ಥರ ನಡುಗುತ್ತಿದ್ದೆವು. ನಾನು ಸಾಲಿ ಬಿಟ್ಟ ನಂತರವೇ ಅವರು ನನಗೆ ಇನ್ನೂ ಹತ್ತಿರವಾದರು. ತಮ್ಮ ತೊಂಬತ್ತಾರನೆಯ ವಯಸ್ಸಿನವರೆಗೆ ನನ್ನೂಡನೆ ಪತ್ರವ್ಯವಹಾರ ನಡೆಸುತ್ತಿದ್ದರು: ಅದರಲ್ಲಿ ಹಾಸ್ಯವಿರುತ್ತಿತ್ತು, ಬೋಧನೆಯಿರುತ್ತಿತ್ತು; ಚೇಷ್ಟೆ ಸಹ! ಅದೇ ತರಹ ಇನ್ನುಳಿದ ಅಗಣಿತ ಹಳೆಯ ವಿದ್ಯಾರ್ಥಿಗಳಿಗೂ ಸ್ವಹಸ್ತದಿಂದಲೇ ಪತ್ರಗಳನ್ನು ಬರೆಯುತ್ತಿದ್ದರೆಂದು ನನಗೆ ಆಮೇಲೆ ಗೊತ್ತಾಯಿತು.ಅವರು ನಮಗೆ ಇಂಗ್ಲಿಷ್ ಕಲಿಸುತ್ತಿದ್ದರು. ಅವರ ಸ್ಖಾಲಿತ್ಯವಿರದ ಪತ್ರಗಳ ತುಂಬ ಶೇಕ್ಸ್ಪಿಯರಿನ ನಾಟಕಗಳ,  ಥಾಮಸ್ ಗ್ರೇ, ಕಾರ್ಲೈಲ್, ಟೆನ್ನಿಸನ್ ಮುಂತಾದ ಆಂಗ್ಲ ನಾಡಿನ ಸಾರಸ್ವತ ಪುತ್ರರ ಕೊಟೇಶನ್ ಗಳಿರುತ್ತಿದ್ದವು. ಅವರ ಜನ್ಮಶತಾಬ್ದಿಯ ಸ್ಮರಣಸಂಚಿಕೆಗಾಗಿ ಆ ’ಪತ್ರ ಪರಾಚಿಯ’ ಆಧಾರದ ಮೇಲೆಯೇ ಒಂದು ಲೇಖನ ಬರೆದಿದ್ದೆ. ಅದರ ಶೀಷಿಕೆ: 'Nadgir master -my guru and my pen pal!'  ಅಂತ!  "A good teacher teaches well at school; a great teacher continues to teach even after you've left the school!" ಅಂತ ಉಲ್ಲೇಖಿಸಿದ್ದೆ.
’ಆರಂಕು”ಶಮಿಟ್ಟೊಡಂ ...

ಅವರ ಇಂಗ್ಲಿಷ್ ಪಾಠದಿಂದಲೆ ನನಗೆ ಆ ಭಾಷೆಯ ಮೇಲಿನ ಒಲವು ಶುರುವಾಗಿತ್ತು. ಅವರು ಕನ್ನಡ ಸಹ ಕಲಿಸುತ್ತಿದ್ದರು. ನಾನು ಪರದೇಶಕ್ಕೆ ಬಂದ ಮೇಲೆ ಒಂದು ವರ್ಷ ಇನ್ನೊಬ್ಬ ಸಹಪಾಠಿಯ ಜೊತೆ ಸೇರಿ ನಾವೇ ಹೊಸದಾಗಿ ಕಲಿತ ಕಂಪ್ಯೂಟರಿನಿಂದ ಅವರಿಗೊಂದು ಬರ್ತ್ ಡೇ ಕಾರ್ಡ್ ಮಾಡಿ ಪ್ರಿಂಟ್ ಕಳಿಸಿಕೊಟ್ಟಿದ್ದೆವು. ಅವರ ಸೂಕ್ಷ್ಮ ಕಣ್ಣು ನಾವು ಟೈಪು ಮಾಡುವಾಗ ಒಂದಕ್ಷರ ('r') ಬಿಟ್ಟು ಹೋಗಿ ”ಅದು ’ಬಿಥ ಡೇ’ ಆಗಿತ್ತಲ್ಲೋ,” ಅಂತ ಅವರು ಟೀಕಿಸಿ ತಿದ್ದಿದ್ದನ್ನು ಮರೆಯುವಂತಿಲ್ಲ. ಈಗಲೂ ಪ್ರತಿ ಸಲ ನಾನು 'Happy birthday' ಅಂತ ಬರೆಯುವಾಗಲೆಲ್ಲ ಅಂಕುಶದಿಂದ ತಿವಿದು ಮರೆಯ ಬೇಡ ’’r' ಅಂತ ”ಏಡಿಸಿ ಕಾಡುತ್ತದೆ, ಶಿವನ ಡಂಗುರ!” ಅದಕ್ಕೇ ಎಚ್ಚರಿಕೆಯಿಂದ ತಪ್ಪು ಮಾಡದೆ ಬರೆಯಲು ಪ್ರಯತ್ನಿಸುತ್ತೇನೆ. ಆರಂಕುಶಮಿಟ್ಟೊಡಮ್ ನೆನೆವುದೆನ್ನ ಮನಂ ಧಾರವಾಡ ದೇಶಮಮ್!

ನಾಡಗೀರ್ ಸರ್ ತಮ್ಮನ್ನು ಶಾಲೆಯ ಉನ್ನತಿಗಾಗಿಯೇ ಹಗಲು ರಾತ್ರಿ ತೂಡಗಿಸಿಕೊಂಡಿರುತ್ತಿದ್ದರು. ಉಳಿದವರಿಂದಲೂ ಅದೇ ಶಿಸ್ತನ್ನೇ ಅಪೇಕ್ಷಿಸುತ್ತಿದ್ದರು. ಅವರ ಮೇಜಿನ ಮೇಲಿನ ಮರದ ತುಂಡಿನಮೇಲೆ ಎರಡೂ ಬದಿಯಲ್ಲಿ ಭಾರತದ ಹಿಂದಿನ ಒಬ್ಬ ಪ್ರಧಾನಿ ಹೇಳಿದ ಬರಹವನ್ನು ಬರೆಸಿ ಇಟ್ಟಿದ್ದರು, ಮತ್ತು ಅದರಂತೆ ನಡೆದುಕೊಳ್ಳುತ್ತಿದ್ದರು. ಅದು ಹೀಗೆ ಇತ್ತು: I am interested in getting things done. I am not interested in the cause of delay.
ಉಪದೇಶ ಮಾಡುವದಕ್ಕಿಂತ ಮಾಡಿ ತೋರಿಸುವದು ಅವರ ಮಾದರಿಯಾಗಿತ್ತು. ಎಲ್ಲಿಯೇ ಇದ್ದರೂ ರಾಷ್ಟ್ರಗೀತೆ ಹಾಡುತ್ತಿರುವಾಗ ಇದ್ದಲ್ಲೇ ನಿಂತು ಗೌರವ ತೋರಿಸುವದನ್ನು ಬಿಂಬಿಸಲು ಒಂದಿ ದಿನ ಬೇಕಂತಲೇ ತಡವಾಗಿ ಶಾಲೆಯ ಮೈದಾನದ ಮಧ್ಯ ಬಂದು ತಲುಪಿದಾಗ ಎಂದಿನಂತೆ ಶಾಲೆಯ ಪ್ರಾರ್ಥನೆ ಆರಂಭವಾಯಿತೆಂದು ಎಲ್ಲರಿಗೂ ಕಾಣುತ್ತಿದ್ದಂತೆಯೇ ಅಲ್ಲೇ ನಿಂತುಬಿಟ್ಟರು, ಮುಗಿಯುವ ವರೆಗೆ. ನನಗೆ ಇನ್ನೂ ನೆಪಿನಲ್ಲಿರುವ ಆ ನಿದರ್ಶನ ಎಲ್ಲ ಶಾಲಾ ಮಕ್ಕಳ ಮೇಲೆಯೂ ಪರಿಣಾಮ ಬೀರಿತ್ತು ಮತ್ತು ಆ ಆದರ್ಶವನ್ನು ಪಾಲಿಸಲು ಪ್ರೇರಿಸಿತು. ಶಾಲೆಯಲ್ಲಿ ಅವರು ಎಲ್ಲರಿಗೂ ಕಾಣಿಸುವಂತೆಒಂದು ಬರಹವನ್ನು ಬರೆಸಿ ಹಾಕಿದ್ದರು. ಅದನ್ನು ಚಾಚೂ ತಪ್ಪದೆ ಪಾಲಿಸಿದರು ಸಹ. ಅದು ಹೀಗಿತ್ತು: 
"Henceforth you and the school are one, what you are, the school shall be. Here shall beat the heart of us, the best school of all. Your alma mater expects everyone to do their duty. For her, no contribution is too great and no sacrifice is too small."

ಆಗ ಶಾಲೆಗಳಿಗೆ ಸರಕಾರದ ಅನುದಾನದ ವ್ಯವಸ್ಥೆ ಇರುತ್ತಿರಲಿಲ್ಲ. ಮಕ್ಕಳು ಕೊಡುವ ಫೀಸ್ ಹಣದಿಂದಲೇ ಶಾಲೆಯ ಖರ್ಚು, ಸಿಬ್ಬಂದಿಯ ಸಂಬಳ, ಇವೆಲ್ಲವನ್ನು ನೋಡಿಕೊಳ್ಳಬೇಕು, ಹೆಡ್ಮಾಸ್ಟರ್. ಹೆಡ್ ಮಾಸ್ಟರ್ ಆಗಿದ್ದ ಅವರ ಮನೆ ಶಾಲೆಯ ಆವರಣದಲ್ಲಿಯೇ ಇತ್ತು. ಅವರ ಮಗ ಅರುಣನೂ ನನ್ನ ಕ್ಲಾಸಿನಲ್ಲಿಯೇ ಇದ್ದ. ಅವನಲ್ಲದೆ ಇನ್ನೂ ಹದಿನೈದು ಮಾಸ್ತರರ ಮಕ್ಕಳೂ ನನ್ನ ಕ್ಲಾಸಿನಲ್ಲಿದ್ದರು. ಅವರಿಗೆ ಫೀ ಮಾಫಿ ಇತ್ತು. ಅನೇಕ ಬಡ ವಿದ್ಯಾರ್ಥಿಗಳಿಗೂ ಅದೇ ತರಹ ರಿಯಾಯತಿ ಕೊಡುತ್ತಿದ್ದರಿಂದ ಹಲವಾರು ಸಲ ಶಿಕ್ಷಕರಿಗೆ ಪೂರ್ತಿ ಸಂಬಳ ಕೊಡಲು ಕಷ್ಟವಾಗುತ್ತಿತ್ತು. ತಾವು ಮಾತ್ರ ತಮ್ಮ ಅವಧಿಯ ಪೂರ್ತಿ ಅರ್ಧ ಪಗಾರ ಅಷ್ಟೇ ತೆಗೆದುಕೊಂಡು ಪೂರ್ತಿ ಸ್ವೀಕರಿಸಿದೆ ಅಂತ ಸಹಿಮಾಡುತ್ತಿದ್ದರು. ಅದೆಷ್ಟೋ ಸಲ ಬಡಮಕ್ಕಳು ಹಸಿದ ಹೊಟ್ಟೆಯಲ್ಲಿ ಬಂದಿದ್ದನ್ನು ಗಮನಿಸಿ ಆವರಣದಲ್ಲಿದ್ದ ತಮ್ಮ ಮನೆಗೇ ತಿಂಡಿ ತಿಂದು ಬರಲು ಕಳಿಸಿ ಕೊಡುತ್ತಿದ್ದರು. ”ಎಷ್ಟೋ ಸಲ ಇಂತಹ ಮಕ್ಕಳೊಂದಿಗೆ ನಾನು ನನ್ನ ರೊಟ್ಟಿಯನ್ನು ಹಂಚಿಕೊಂಡಿದ್ದೇನೆ”’ ಅಂತ ಸನ್ನ ಸಹಪಾಠಿಯಾಗಿದ್ದ ಅರುಣ ತನ್ನ ಸ್ಮರಣೆಯನ್ನು ಇತ್ತೀಚೆಗೆ ಒಂದು ಪುಸ್ತಕದಲ್ಲಿ ಹಂಚಿಕೊಂಡಿದ್ದಾನೆ. National scholarship ಪರೀಕ್ಷೆಯಲ್ಲಿ ಉತ್ತಮ ತರಗತಿಯಲ್ಲಿ ಪಾಸಾಗಿದ್ದರೂ means tested ಇದ್ದುದರಿಂದ ಸ್ವತಃ ಅರ್ಧ ಸಂಬಳವನ್ನೇ ಮನೆಗೆ ಒಯ್ಯುತ್ತಿದ್ದರೂ ಆ ಶಿಷ್ಯವೇತನದ ಪೂರ್ಣ ಫಲ ತನಗೆ ಲಭ್ಯವಾಗಿರಲಿಲ್ಲ ಅಂತ ಮಾಸ್ತರರ ಎರಡನೆಯ ಮಗನಿಗೆ ಇತ್ತು ಕೊರಗು! 

ಬಡತನ ಕಷ್ಟ ಕಾರ್ಪಣ್ಯಗಳೊಡನೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಅನೇಕ ಗುರುಗಳು ಶಾಲೆಯಲ್ಲಿದ್ದರು. ಬದುಕಿದ್ದಷ್ಟು ದಿನ ಬಡತನ. ಅವರ ಆಸ್ತಿಯೆಂದರೆ ಅವರ ಶಿಷ್ಯವೃಂದ. ಆ ದಿನಗಳ ನೆನಪಿನ ಭಂಡಾರವೇ ನಮ್ಮ ಜೀವನಕ್ಕೆ ಭಂಡವಲು. ಅವರ ಆದರ್ಶ ನಮಗೆ ದಿಕ್ಸೂಚಿ.
'ವಾತ್ಸಲ್ಯ’ ಎನ್ನುವ ಅಭಿನಂದನಾ ಗ್ರಂಥದಲ್ಲಿ ತಮ್ಮ ಆತ್ಮಚರಿತ್ರೆ ಬರೆಯುತ್ತ ತಮ್ಮ ’ಪ್ರಸಿದ್ಧ’ ಸಿಟ್ಟಿನ ಬಗ್ಗೆ ಹೀಗೆ ಬರೆದಿದ್ದಾರೆ (’ವಾತ್ಸಲ್ಯ’; ಪು. 9): ’ನನ್ನದು ಸಿಟ್ಟಿನ ಸ್ವಭಾವ. ಅದು ಅಪ್ಪನಿಂದ ಬಂದ ಆನುವಂಶಿಕ ಗುಣವೂ ಇರಬಹುದು, ಅಥವಾ (ಎಳೆವಯಸ್ಸಿನಲ್ಲೇ ತಾಯಿಯನ್ನೆ ಕಳೆದುಕೊಂಡ) ಮಾತೃವಾತ್ಸಲ್ಯದ ಅಭಾವದಿಂದಲೂ ಇರಬಹುದು. ಏನೇ ಇರಲಿ, ”ಹೊಲೆಸಿಟ್ಟು” ನನ್ನ ಜೀವನದ ಬಹುಭಾಗವನ್ನು ನುಂಗಿ ಹಾಕಿದೆ. ಬರೆದ ಚಿತ್ರವೆಲ್ಲ ಮಸಿ ನುಂಗಿದಂತೆ, ಸ್ವಚ್ಛ ಮನಸ್ಸಿನಿಂದ ಮಾಡಿದ ಒಳ್ಳೇ ಕೆಲಸಗಳು ನಿಷ್ಪ್ರಯೋಜಕವಾಗಿರುವುದರ ಅರಿವೂ ನನಗಾಗಿದೆ. ನನ್ನ ಸಿಟ್ಟಿನ ರುಚಿಯನ್ನು ವಿದ್ಯಾರ್ಥಿಗಳು, ಸಹಶಿಕ್ಷಕರು ಹಾಗೂ ಕುಟುಂಬದವರೂ ಸಾಕಷ್ಟು ಉಂಡಿದ್ದಾರೆ'.

 ಶಿಸ್ತಿನ ಸಾಕಾರ ಸ್ವರೂಪರಾಗಿದ್ದ ಅವರು  ಆಗಾಗ್ಗೆ ಸಿಟ್ಟಿನ ಪ್ರತಿರೂಪ ತಳೆದು ’ದೂರ್ವಾಸ ಮುನ್ನಿ’ ಅನ್ನುವ ಉಪನಾಮ ಗಳಿಸಿದ್ದರೂ ಅವರ ಶಿಷ್ಯ ವಾತ್ಸಲ್ಯ ಅಪಾರ. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಇಂಥ ಒಂದು ಪ್ರಸಂಗದಲ್ಲಿ ತಮಗೆ ಕಪಾಳ ಮೋಕ್ಷ ಕೊಟ್ಟಿದ್ದ ನಾಡಗೀರ್ ಮಾಸ್ತರರೇ ತಾವು ಪ್ರಸಿದ್ಧ ವಾಗ್ಮಿಗಳಾಗಲು ಕಾರಣವೇನೋ ಎಂದು ನನ್ನ ಶಾಲೆಯಲ್ಲೇ ಕಲಿತ ಗುರುರಾಜ ಕರಜಗಿಯವರು ಒಂದು ಲೇಖನದಲ್ಲಿ ಉದ್ಗಾರ ತೆಗೆದಿದ್ದಾರೆ! 

ಕೆಲವು ಸ್ವಾರಸ್ಯಕರ ಘಟನೆಗಳೊಂದಿಗೆ ಈ ಲೇಖನವನ್ನು ಮುಗಿಸುವೆ.

ಮೂರು ವರ್ಷಗಳ ಕೆಳಗೆ 75 ದಾಟಿದ (ಒಬ್ಬರನ್ನು ಬಿಟ್ಟು) ಇಪ್ಪತ್ತೆರಡು ಹಳೆಯ ವಿದ್ಯಾರ್ಥಿಗಳು ಧಾರವಾಡದಲ್ಲಿ ಸೇರಿ ನಮ್ಮ ಶಾಲೆಗೆ ಹೋಗಿ ಹಳೆಯ ನೆನಪುಗಳನ್ನು ತಾಜಾ ಮಾಡಿಕೊಂಡೆವು. ಶಾಲಾ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಮೋಹನನಿಗೆ ’ಟೆನ್ಷನ್.’ ತನಗೆ ಏನೂ ನೆನಪಾಗುವದಿಲ್ಲ ಅಂತ ಬೆವರಿಳಿಯುತ್ತದೆ. ಪ್ರಶ್ನೆಪತ್ರಿಕೆಯನ್ನು ಹಂಚುತ್ತಿದ್ದ ಕುಲಕರ್ಣಿ ಮಾಸ್ತರರು ಆತನ ಬಿನ್ನು ಸವರುತ್ತ, ”ಡೋಂಟ್ ವರ್ರಿ; ಬಂದಷ್ಟು ಬರಿ!” ಅಂತ ಅರಿಪ್ರಾಸವನ್ನು (ಅರಿಸಮಾಸದಂತೆ, ಆಂಗ್ಲ-ಕನ್ನಡ ಭಾಷೆಯ ಕಲಬೆರಕೆ) ಜೋಡಿಸಿ ಹೇಳಿದ್ದನ್ನು ಒಬ್ಬರು ನೆನೆದಾಗ ಕೋಣೆಯ ತುಂಬ ನಗು.
ಶ್ಲೇಷಾಲಂಕಾರ, homonym ಗಳನ್ನು ಮೊದಲ ಬಾರಿ ನಾಡಗೀರ್ ಮಾಸ್ತರ್ ಕಲಿಸಿದ್ದು ನನಗೆ ಇಂದೂ ನೆನಪಿದೆ: The vicar told the sexton (ಚರ್ಚಿನ ಗಂಟೆಯನ್ನು ಬಾರಿಸುವವ) and he tolled the bell (ಬಾರಿಸಿದ). Who is going to bell the cat ಅನ್ನುವ ಪದಗುಚ್ಛದ ಅರ್ಥವನ್ನು ಅವರೇ ಕಲಿಸಿದ್ದು:'to undertake a very dangerous mission.' ಅದರ ಪ್ರಾತ್ಯಕ್ಷಿಕೆಯನ್ನೂ ಮಾಡಬೇಕಾದ ಪ್ರಸಂಗವೂ ಒಮ್ಮೆ ಒದಗಿ ಬಂದಿತ್ತು.

ಕತ್ತಲೆ-ಬೆಳಕು
Epitaph (ಗೋರಿ ಬರಹ) ಅಂದರೇನು ಅಂತ ಕಲಿಸುವಾಗ ಮಾಸ್ತರರು ಹೇಳಿದ’ಕಥೆ.’ ಶೋಕಗ್ರಸ್ತ ಪಾಶ್ಚಿಮಾತ್ಯ ವಿಧವೆಯೊಬ್ಬಳು ಪತಿಯ ಅಗಲುಕೆಯಿಂದ ತನ್ನ ಬದುಕನ್ನು ಆವರಿಸಿದ ಅಂಧಕಾರವನ್ನು ಸೂಚಿಸಲು ಚರ್ಚಿನ ಸೆಮೆಟ್ರಿಯಲ್ಲಿ ಕಲ್ಲಿನ ಮೇಲೆ ಕೆತ್ತಿಸಿದ್ದು: Since the demise of my husband, I'm left in utter darkness ಅಂತ. ಎರಡು ವರ್ಷಗಳ ನಂತರ ಚೇತರಿಸಿಕೊಂಡು ಪುನರ್ವಿವಾಹ ಆದಾಗ ಆ epitaph ಗೆ ಇನ್ನೊಂದು ಸಾಲು ಸೇರಿಸಿದಳಂತೆ: But now I have struck a match!
ಕ್ಷಮಾಪಣೆ ಕೇಳಲು 36 ವರ್ಷಗಳ ಕಾಲ ಕಾಯ್ದ ಪ್ರೀತಿಯ ವಿದ್ಯಾರ್ಥಿ!

’ತಪ್ಪು ಮಾಡುವದು ಸಹಜವೇ. ಆದರೆ ಅದನ್ನು ಒಪ್ಪಿಕೊಂಡು ಕ್ಷಮಾಪಣೆ ಬೇಡಲು ಸಿದ್ಧರಿರುವುದು ದೊಡ್ಡ ಗುಣ ಅಂತ ಅವರು ಕಲಿಸಿದರು. 1977ರಲ್ಲಿ ನಡೆದ ಒಂದು ಘಟನೆಯನ್ನು ನೆನೆದು ನನ್ನ ಸಹಪಾಠಿ ಅರುಣ ಬರೆದದ್ದನ್ನು ಇಲ್ಲಿ ಕೊಡುವೆ:
” 1960ರಲ್ಲಿ ಕನ್ನಡ ಹಾಗೂ ಇಂಗ್ಲಿಷ್ ವಿಷಯಗಳನ್ನು (ನಾಡಗೀರ್ ಮಾಸ್ತರರು) ಕಲಿಸುತ್ತಿದ್ದರು.ಆವಾಗ ಒಂದು ಅಹಿತಕರ ಘಟನೆ ನಡೆದು ನಮ್ಮ ಸಹಪಾಠಿಗಳಿಗೆ ಬೇಸರವಾಯಿತು. ಅವರೆಲ್ಲಾ ಸೇರಿ ನಾಡಗೀರ ಮಾಸ್ತರರು ನಮಗೆ ಕಲಿಸುವದು ಬೇಡ ಎಂದು ಅರ್ಜಿ ಬರೆದು ನಾಡಗೀರ ಮಾಸ್ತರರ ಮೇಜಿನ ಮೇಲೆ ಇಟ್ಟು ಬಂದರು. ಮರುದಿನ ವರ್ಗದಲ್ಲಿ ಎಲ್ಲರಿಗೂ ಬಲು ಭಯ. ಯಾಕೆಂದರೆ ಮಾಸ್ತರ ಸಿಟ್ಟಿಗೆ ಎಲ್ಲರೂ ಅಂಜುತ್ತಿದ್ದರು. ಆದರೆ ಮಾಸ್ತರರು ಏನೂ ಆಗಲಿಲ್ಲ ಎಂಬಂತೆ ಆ ದಿನದ ಪಾಠ ಮಾಡಿದರು. ಎಲ್ಲರಿಗೂ ಅಚ್ಚರಿ ಹಾಗೂ ನಿರಾಳ. ಎಲ್ಲರೂ ಈ ಘಟನೆಯನ್ನು ಮರೆತರು. (Who will bell the cat? ಅಂತ ಕೊನೆಗೆ ಆ ಚೀಟಿಯನ್ನು ಇಟ್ಟು ಬಂದಿದ್ದ ವಿದ್ಯಾರ್ಥಿ ಮಾತ್ರ ಆ ಅಪರಾಧವನ್ನು ಎಂದೂ ಮರೆತಿರಲಿಲ್ಲ. ಅದನ್ನು ಬಚ್ಚಿಟ್ಟಿದ್ದ ಆತನ ಎದೆಯಗೂಡಿನ ಭಾರ ಅವನಿಗೇ ಗೊತ್ತು!) ಮುಂದೆ 1997ರಲ್ಲಿ ಮಾಸ್ತರರಿಗೆ 82 ವರ್ಷ ತುಂಬಿದ ಪ್ರಯುಕ್ತ ಅವರಿಗೆ ವಿದ್ಯಾರ್ಥಿಗಳು ಸಹಸ್ರ ಚಂದ್ರ ದರ್ಶನ ಸಮಾರಂಭ ಏರ್ಪಡಿಸಿದ್ದರು. ಆ ಸಮಾರಂಭದಲ್ಲಿ ಭಾಗವಹಿಸಲೆಂದೇ ನಮ್ಮ ಇಬ್ಬರು ಸಹಪಾಠಿಗಳು ಇಂಗ್ಲೆಂಡ್ ನಿಂದ ಬಂದಿದ್ದರು. ಸಮಾರಂಭ ಮುಗಿದ ಮೇಲೆ ಗುರು-ಶಿಷ್ಯಂದಿರ ಸ್ನೇಹಕೂಟ ಒಂದು ಹೋಟೆಲ್ಲಿನಲ್ಲಿ ಏರ್ಪಾಡಾಗಿತ್ತು. ಹೋಟೆಲ್ ಧಾರವಾಡಕ್ಕೆ ಅವರು ಬಂದಾಗ ಇಲಿಯಾಗಿ ’ಬೆಕ್ಕಿಗೆ ಗಂಟೆ ಕಟ್ಟಿದ’ ಆ ಸಹಪಾಠಿ 36 ವರ್ಷಗಳ ಕೆಳಗೆ ತಾನೇ ಆ ಕಾಗದ ಇಟ್ಟಿದ್ದಕ್ಕೆ ಕ್ಷಮೆ ಬೇಡಿ ಎದೆ ಹಗುರು ಮಾಡಿಕೊಂಡ. ಆಗ ಅವರು ಉತ್ತರಿಸಿದ್ದು ಅತ್ಯಂತ ಮಾರ್ಮಿಕವಾಗಿತ್ತು: ”ಹೌದು, ಅದರ ಹಿಂದಿನ ಅಹಿತಕರ ವರ್ತನೆಗೆ ಕಾರಣನಾದ ... ಎಂಬ ಹುಡುಗನ ವರ್ತನೆ ಸಹಿಸದೆ ನಾನು ಅವನ ಕಪಾಳಕ್ಕೆ ಜೋರಾಗಿ ಹೊಡೆದೆ, ಅದರಿಂದ ಅವನ ಶ್ರವಣ ಶಕ್ತಿ ಕ್ಷೀಣಿಸಿತು. ನಿಮಗೆ ಸಿಟ್ಟು ಬಂದು ಅರ್ಜಿ ಬರೆದಿರಿ. ನಾನು ಸಿಟ್ಟಿನಿಂದ ಆ ರೀತಿ ಮಾಡಬಾರದಾಗಿತ್ತು. ಅವನಿಗೆ ನಾನು ಕ್ಷಮೆ ಕೇಳಲುತಯಾರಿದ್ದೇನೆ.” ಎಂದು ಅವರೂ ತಮ್ಮ ವ್ಯಥೆ ವ್ಯಕ್ತಪಡಿಸಿದರು. ಎಂಥ ದೊಡ್ಡ ಗುಣ!”
ಇಂಗ್ಲೆಂಡಿನಿಂದ ಸಮಾರಂಭಕ್ಕೆಂದು ಧಾರವಾಡಕ್ಕೆ ಹೋಗಿ ಕ್ಷಮಾಪಣೆ ಬೇಡಿದ ವಿದ್ಯಾರ್ಥಿಯೇ ಈ ಲೇಖನದ ಲೇಖಕ!
ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯು ಕೆ

ಆಕರ ಪುಸ್ತಕಗಳು: ೧.ವಾತ್ಸಲ್ಯ (1997) :ಎಸ್ ಜಿ ನಾಡಗೀರ ಅವರ ಅಭಿನಂದನಾ ಗ್ರಂಥ ಸಂ: ಡಾ ಕೆ ಹೆಚ್ ಕಟ್ಟಿ
 ೨: ವಿದ್ಯಾ ವಿಕಾಸ (2002)  ಲೇ:  ಪ್ರಿ. ಎಸ್ ಜಿ ಣಾಡಗೀರ
೩: ಅಪ್ಪನು ನನಗಿಷ್ಟ: (2021) ಸಂ: ಡಾ ಶರಣಮ್ಮ ಅ. ಗೋರೇಬಾಳ

*******************