ನಾಗಾಭರಣಾಯಣ

 

ಈ ವಾರ ನಿಮ್ಮ ಮುಂದಿದೆ ಕಳೆದ ಶನಿವಾರ ಹೆಸರಾಂತ ನಿರ್ದೇಶಕ, ರಂಗ ಕರ್ಮಿ ಟಿ. ಎಸ್. ನಾಗಾಭರಣರೊಡನೆ ಅನಿವಾಸಿಗಳು ನಡೆಸಿದ ಸಂವಾದದ ವರದಿ.

ನವೆಂಬರ್ ೨೬ರಂದು ಕನ್ನಡ ಬಳಗ (ಯು.ಕೆ) ಸ್ಟೋಕ್ ಆನ್ ಟ್ರೆಂಟ್ ನಗರದಲ್ಲಿ ದೀಪಾವಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಂದು ಮುಖ್ಯ ಅತಿಥಿಗಳಾಗಿ ಹೆಸರಾಂತ ನಿರ್ದೇಶಕ, ರಂಗಕರ್ಮಿ ಶ್ರೀ. ಟಿ. ಎಸ್. ನಾಗಾಭರಣ ಕರ್ನಾಟಕದಿಂದ ಆಗಮಿಸಿದ್ದರು. ಅವರು ಬರುವ ವಿಚಾರ ನಮಗೆ  ಸಪ್ಟೆಂಬರ್ ತಿಂಗಳಲ್ಲೇ ತಿಳಿದಿತ್ತು. ಅದಕ್ಕನುಗುಣವಾಗಿ ಸಂಪ್ರದಾಯದಂತೆ ಅನಿವಾಸಿ ಹುಟ್ಟಿದಾಗಿನಿಂದ ನಡೆಸಿಕೊಂಡು ಬಂದಿರುವ ಗೋಷ್ಠಿಗೆ ನಾಗಾಭರಣರ ನಾಟಕ ಹಾಗೂ ಸಿನಿಮಾಗಳ ವಿಶ್ಲೇಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದೆವು. ಇದರೊಡನೆ, ಅವುಗಳ ಬಗ್ಗೆ ಮಾತಾಡುವ ಸದಸ್ಯರಿಗೆ ನಾಗಾಭರಣರನ್ನು ಪ್ರಶ್ನಿಸುವ ಅವಕಾಶವನ್ನು ಕೊಡಲಾಯಿತು. 

ಅನಿವಾಸಿ ಕಾರ್ಯಕ್ರಮಕ್ಕೆ ಉತ್ತಮವಾದ ವಿಂಡ್ಸರ್ ಕೋಣೆ ಹಾಗು ಸೂಕ್ತವಾದ ಧ್ವನಿ ವ್ಯವಸ್ಥೆಯ ಅನುಕೂಲ ಮಾಡಿಕೊಟ್ಟವರು ಕನ್ನಡ ಬಳಗದ ಅಧ್ಯಕ್ಷರಾದ ಶ್ರೀಮತಿ ಸುಮನಾ ಗಿರೀಶ್. ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದವರು ಡಾ. ಲಕ್ಷ್ಮೀನಾರಾಯಣ ಗುಡೂರ್. ಆರು ಅನಿವಾಸಿಗಳು ತಮಗೆ ಬೇಕಾದ ಸಿನಿಮಾಗಳನ್ನು ಆರಿಸಿಕೊಂಡು, ವಿಶ್ಲೇಷಿಸಿದರು. ಪ್ರತಿಯೊಬ್ಬರಿಗೂ ಸರಿ ಸುಮಾರು ಹತ್ತು ನಿಮಿಷಗಳ ಕಾಲಾವಕಾಶವಿತ್ತು. ಮೊದಲ ಒಂದೆರಡು ನಿಮಿಷಗಳು ಸಿನಿಮಾ ಕಥೆಯ ವಿವರಣೆಗೆ ಮೀಸಲಿಡಲು ಸೂಚಿಸಲಾಗಿತ್ತು. ನಂತರದ ಎರಡು ನಿಮಿಷಗಳನ್ನು ಸಿನಿಮಾದ ತುಣುಕನ್ನು ತೋರಿಸಲು ಹಾಗು ಉಳಿದ ಸಮಯದಲ್ಲಿ ವಿಶ್ಲೇಷಣೆ ಹಾಗು ನಾಗಾಭರಣರೊಡನೆ ಆ ಸಿನಿಮಾ ಕುರಿತಾದ ಸಂವಾದಕ್ಕೆಂದು ಗುರುತಿಸಿಕೊಂಡಿದ್ದೆವು. ವಿಶ್ಲೇಷಕರಿಗೆ ಬೇಕಾದ ಸಿನಿಮಾ ತುಣುಕುಗಳನ್ನು ಮುತುವರ್ಜಿಯಿಂದ ತಯಾರಿಸಿ ಒದಗಿಸಿದವರು ಡಾ. ಶ್ರೀವತ್ಸ ದೇಸಾಯಿ.

ಅನಿವಾಸಿಗಳ ಆಯ್ಕೆ ಈ ಕೆಳಗಿನಂತಿದ್ದವು:

೧. ಡಾ. ಕೇಶವ ಕುಲಕರ್ಣಿ: ಅನ್ವೇಷಣೆ (ಬಿಡುಗಡೆ: ೧೯೮೩)

೨. ಡಾ. ಜಿ.ಎಸ್. ಶಿವಪ್ರಸಾದ: ಅಲ್ಲಮ (ಬಿಡುಗಡೆ: ೨೦೧೭)

೩. ಡಾ. ರಶ್ಮಿ ಮಂಜುನಾಥ: ಚಿನ್ನಾರಿ ಮುತ್ತ (ಬಿಡುಗಡೆ: ೧೯೯೩) 

೪. ಡಾ. ರಾಮಶರಣ ಲಕ್ಷ್ಮೀನಾರಾಯಣ: ನಾಗಮಂಡಲ (ಬಿಡುಗಡೆ: ೧೯೯೭) 

೫. ಡಾ. ಶ್ರೀವತ್ಸ ದೇಸಾಯಿ: ಸಿಂಗಾರೆವ್ವ (ಬಿಡುಗಡೆ: ೨೦೦೩) 

೬. ಡಾ. ಲಕ್ಷ್ಮೀನಾರಾಯಣ ಗುಡೂರ್: ಮೈಸೂರು ಮಲ್ಲಿಗೆ (ಬಿಡುಗಡೆ: ೧೯೯೧) 

ಉತ್ತಮವಾದ ಪ್ರತಿ ಸಿಗದ ಕಾರಣ ಕೇಶವ ಕುಲಕರ್ಣಿಯವರು ಸಿನಿಮಾದ ತುಣುಕನ್ನು ತೋರಿಸದಿದ್ದರೂ, ಅವರ ತಮ್ಮ ಹೇಗೆ ಸಿನಿಮಾದ ಪ್ರಾರಂಭದಲ್ಲಿನ ದೃಶ್ಯವೊಂದರ ಬಳಿಕ ಹೆದರಿ ಪರದೆಗೆ ಬೆನ್ನು ಮಾಡಿ ಕುಳಿತಿದ್ದನೆಂಬುದನ್ನು ಕೇಳಿದವರಿಗೆ ಸಿನಿಮಾ ಟ್ರೇಲರ್ ನೋಡಿದ ಅನುಭವವಾಗಿರಬಹುದು. ಜನಮನದ ಗೀತೆಗಳನ್ನು ಆಧಾರಿಸಿ ನಿರ್ಮಿಸಿದ ಸಿನಿಮಾವಾಗಿದ್ದರಿಂದ ಗುಡೂರರು ಸಿನಿಮಾದ ಹಾಡುಗಳ ಸಂಗೀತವನ್ನು ಕತ್ತರಿಸಿ ಧ್ವನಿ ಕೊಲಾಜನ್ನು ಪ್ರಸ್ತುತ  ಪಡಿಸಿದರು. ಇಡೀ ಹಾಡನ್ನು ನಿರೀಕ್ಷಿಸುತ್ತಿದ್ದವರಿಗೆ, ಒಮ್ಮೆಲೇ ಇನ್ನೊಂದು ಹಾಡು ಶುರುವಾಗಿ ತಬ್ಬಿಬ್ಬಾಗಿದ್ದು (ನಾಗಾಭರಣರನ್ನೂ ಸೇರಿ) ಈ ಪ್ರಯೋಗದ ವೈಶಿಷ್ಠ್ಯ. 

ನಮ್ಮ ಕಾರ್ಯಕ್ರಮದ ವಿಶೇಷ ನಾಗಾಭರಣರೊಂದಿಗಿನ ಸಂವಾದ.  ಅವರ ಸಿನೆಮಾಗಳ ಬೆಳವಣಿಗೆಯ ಹಿಂದಿನ ಕುತೂಹಲಕಾರಿ ಕಥೆಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು, ಆಶ್ಚರ್ಯಚಕಿತರಾಗಿಸಿದವು. ‘ಅನ್ವೇಷಣೆ’ ನಾಗಾಭರಣರ ಎರಡನೇ ಸಿನೆಮಾ. ಅವರ ಗುರು ಗಿರೀಶ್ ಕಾರ್ನಾಡರು. ಅವರ ಸಲಹೆಯಂತೆ ಸ್ಮಿತಾ ಪಾಟೀಲರನ್ನು ನಾಯಕಿಯಾಗಿ ಆರಿಸಿದ್ದರು ನಾಗಾಭರಣ. ಅದಕ್ಕೆ ಎರಡು ಕಾರಣಗಳು: ಆಕೆ ಚಿತ್ರಕಥೆ ಇಷ್ಟ ಪಟ್ಟು ತಾನೇ ನಾಯಕಿಯಾಗಿ ನಟಿಸುತ್ತೇನೆಂದಿದ್ದು ಹಾಗು ನಾಗಾಭರಣರ ಕಾಸಿನ ಕಷ್ಟ ನೋಡಿ ಸಂಭಾವನೆ ಇಲ್ಲದೇ ಕೆಲಸ ಮಾಡುವೆನೆಂದು ಒಪ್ಪಿದ್ದು. ನಾಯಕ ಅನಂತನಾಗ್ ಪ್ರೇಮದ ಕಡಲಲ್ಲಿ ಈಸುತ್ತ, ನಾಗಾಭರಣರನ್ನು ಇರುಸು-ಮುರಿಸಿನ ಪ್ರಸಂಗಕ್ಕೆ ಸಿಲುಕಿಸಿದ್ದನ್ನು ಹಂಚಿಕೊಂಡರು. ಕೇವಲ ೨.೫ ಲಕ್ಷದಲ್ಲಿ ತಯಾರಿಸಿದ ಚಿತ್ರವಿದಾಗಿತ್ತು. ಮಕ್ಕಳ ಚಿತ್ರ ಜಗತ್ತಿನಲ್ಲೇ ಹೆಚ್ಚು ಕಡೆಗಣಿಸಲ್ಪಟ್ಟ ಪ್ರಕಾರ ಎಂಬುದು ನಾಗಾಭರಣರ ಅಂಬೋಣ. ‘ಚಿನ್ನಾರಿ ಮುತ್ತ’ ಕ್ಕೆ ಪ್ರೇರಣೆ ಡಿಕನ್ಸ್ ನ ಓಲಿವರ್ ಟ್ವಿಸ್ಟ್. ಕವಿ ಎಚ್ಚೆಸ್ವಿಯವರಿಗೆ ಸವಾಲು ಹಾಕಿ ಕಥೆ, ಸಂಭಾಷಣೆ, ಹಾಡು ಬರೆಸಿ ತಯಾರಿಸಿದ ಸಿನಿಮಾ. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತ್ತು. ಹೀಗೇ ನಾಲಕ್ಕು ಮಕ್ಕಳ ಚಿತ್ರಗಳನ್ನು ತಯಾರಿಸಿ, ಪ್ರಶಸ್ತಿ ಪಡೆದ ಹೆಗ್ಗಳಿಕೆ ನಾಗಾಭರಣರದ್ದು. 

ಸಂಗೀತ ನಾಗಾಭರಣರ ಚಿತ್ರಗಳ ಜೀವಾಳ. ಅದಕ್ಕೆ ಅವರಿಗೆ ಹೆಗಲು ಕೊಟ್ಟಿದ್ದು ಹೆಸರಾಂತ ಕಲಾವಿದ ಸಿ. ಅಶ್ವಥ್. ಇವರ ಯಮಳ ಪ್ರಯೋಗಗಳನ್ನು ಹೆಚ್ಚಿನ ಪ್ರಸಿದ್ಧ ಸಿನಿಮಾಗಳಲ್ಲಿ ಕಾಣುತ್ತೇವೆ (ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ಸಂತ ಶಿಶುನಾಳ ಶರೀಫ, ನಾಗಮಂಡಲ, ಸಿಂಗಾರೆವ್ವ). ‘ಮೈಸೂರು ಮಲ್ಲಿಗೆ’ ನಾಗಾಭರಣರಿಗೆ ವಿಶೇಷ ಸವಾಲನ್ನು ಒಡ್ಡಿದ ಪ್ರಯೋಗ. ಕೇವಲ ಹಾಡುಗಳನ್ನು ಆಧರಿಸಿ ಹೊಸೆದ ಕಥೆಯಿದು. ಸುಮಾರು ಹದಿನೈದು ಹೆಸರಾಂತ ಕವಿಗಳೊಡನೆ ಸಮಾಲೋಚಿಸಿದರೂ, ದಾರಿ ಕಾಣದಾದಾಗ, ನಾಗಾಭರಣರೇ ಕಥೆಯನ್ನು ಹೊಸೆಯುವ ನಿರ್ಧಾರ ಮಾಡಿದರು. ಹಲವು ಆವೃತ್ತಿಗಳನ್ನು ಕವಿತೃಯರಾದ ಎಚ್ಚೆಸ್ವಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗು ವ್ಯಾಸರಾಯರೊಡನೆ ಚರ್ಚಿಸಿದ್ದರಂತೆ. ಒಂದು ಬೆಳಗಿನ ಝಾವ ಬುಲ್ ಟೆಂಪಲ್ ಎದುರಿನ ಕಟ್ಟೆಯ ಮೇಲೆ ಅಶ್ವಥ್ ಜೊತೆ ಕುಳಿತಿದ್ದಾಗ ಬಲ್ಬ್ ತಟ್ಟನೆ ಫ್ಲಾಶ್ ಆಗಿ ಕಥೆಗೊಂದು ರೂಪ ಬಂದಿತ್ತೆಂದು ವಿವರಿಸಿದರು. ಇದರಲ್ಲಿ ಅವರು ಕಾಣುವುದು ಸಂಘರ್ಷ: ಸ್ವಾತಂತ್ರ್ಯ ಹೋರಾಟ, ಸರಕಾರದ ಪರವಾದ ಶಾನುಭೋಗರೊಂದೆಡೆ, ಸಂಗ್ರಾಮದ ಪರವಾದ ಅವರ ಅಳಿಯ, ಇವರ ನಡುವೆ ಬಳಲುವ ಪದುಮ. ಈ ಸಿನೆಮಾದ ತೆರೆಯ ಮರೆಯಲ್ಲಿ ಆದ ಸಂಘರ್ಷ ನಮಗೆಲ್ಲ ನಾಗಾಭರಣರ ಜಿದ್ದು, ಸಿನಿಮಾ ಕ್ಷೇತ್ರದಲ್ಲಿ ಅವರಿಗಿದ್ದ ಪ್ರಭಾವಗಳನ್ನೂ ಪರಿಚಯ ಮಾಡಿಸಿತು. ಮೈಸೂರು ಮಲ್ಲಿಗೆ ಧ್ವನಿ ಸುರುಳಿಯ ಯಶಸ್ಸಿನ ಹಿಂದಿನ ರೂವಾರಿ ಅಶ್ವಥ್ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ನಾಗಾಭರಣರಿಗೆ ಬೇಕಿದ್ದುದು ಯುವಕನಿಗೆ ಹೊಂದುವ ಧ್ವನಿ. ಹೇಗೆ ಅವರು ಎಸ್ಪಿ ಬಾಲಸುಬ್ರಹ್ಮಣ್ಯರನ್ನು ಅಶ್ವಥ್ ಬದಲು ಅಶ್ವಥ್ ನಿರ್ದೇಶನದಲ್ಲೇ ಹಾಡಿಸಿದರು ಎಂಬುದನ್ನು ಕೇಳಿ ಪ್ರೇಕ್ಷಕರೆಲ್ಲ ದಿಗ್ಭ್ರಂತರಾದರು, ಮನಸಾರೆ ನಕ್ಕರು. 

‘ನಾಗಮಂಡಲದ’ ಲ್ಲಿ ಅವರು ತೋರಬಯಸುವುದು ರಾಣಿಯ ಬಯಕೆ, ಮುಗ್ಧತೆ, ಸಂವೇದನೆಗಳು. ಇದರಲ್ಲಿ ಬರುವ ಹಲವು ಸನ್ನಿವೇಶಗಳು, ಬದುಕಿನ ವಿಪರ್ಯಾಸಗಳಿಗೆ ರೂಪಕಗಳು. ನಾಗಪ್ಪ – ಅಣ್ಣಪ್ಪ ಎರಡು ಪಾತ್ರಗಳಲ್ಲ. ಒಬ್ಬನೇ ವ್ಯಕ್ತಿಯ ಎರಡು ಮನಸ್ಥಿತಿಗಳ ಸಂಕೇತ, ಅವುಗಳ ನಡುವಿನ ಸಂಘರ್ಷ. ಕೊನೆಯಲ್ಲಿ ಕಂಡುಬರುವುದು ರಾಣಿಯ ಪ್ರೀತಿಯ ಗೆಲುವು. ಕಾರ್ನಾಡರ ಪ್ರಸಿದ್ಧ ನಾಟಕವನ್ನಾಧರಿಸಿದ ನಾಗಮಂಡಲವನ್ನು ನೋಡಿ ಮೆಚ್ಚಿದ ಕಾರ್ನಾಡರು ನೀಡಿದ ಪ್ರತಿಕ್ರಿಯೆಯೇ ನಾಗಾಭರಣರಿಗೆ ಚಿತ್ರಕ್ಕೆ ಸಿಕ್ಕ ಇತರ ಪ್ರಶಸ್ತಿಗಳಿಗಿಂತ ಅತ್ಯಮೂಲ್ಯವಾಗಿದ್ದರಲ್ಲಿ ಸಂದೇಹವೇ ಇಲ್ಲ. ‘ಸಿಂಗಾರೆವ್ವ’ ದಲ್ಲಿ ನಾಗಾಭರಣರು ಕಾಣುವುದು ವರ್ಗ ಸಂಘರ್ಷ, ಇರುವವರ-ಇಲ್ಲದವರ ನಡುವಿನ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ. ಇಲ್ಲಿ ಸಿಂಗಾರೆವ್ವ ಪ್ರಕೃತಿಯ ಸಂಕೇತ. ಪ್ರಕೃತಿ ನಾಶವಾದಂತೆ ಹೇಗೆ ಪುರುಷ ನಾಶವಾಗುತ್ತಾನೆ ಎಂಬುದನ್ನು ಅವರು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ‘ಅಲ್ಲಮ’ ದಲ್ಲಿ ಆತನ ಚಿಂತನೆಗಳನ್ನು ಪ್ರಸ್ತುತಕ್ಕೆ ಹೊಂದಿಸುವ ಪ್ರಯತ್ನ ಮಾಡಿದ್ದಾರೆ. ಅವಧೂತನಾದ ಅಲ್ಲಮನ ವಚನಗಳನ್ನೇ ಸಂಭಾಷಣೆಯನ್ನಾಗಿ ಉಪಯೋಗಿಸಿದ್ದಾರೆ. ಅವನ ವಚನಗಳನ್ನು ದೃಶ್ಯ ರೂಪದಲ್ಲಿ ನೋಡುಗರ ಕಣ್ಮುಂದೆ ತಂದಿದ್ದಾರೆ. ಈ ಪ್ರಯೋಗವು ಅವರಿಗೆ ಹೊಸ ಸವಾಲನ್ನೆಸೆದಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ ತೃಪ್ತಿ ಅವರಿಗಿದೆ. 

ಸುದೀರ್ಘವಾಗಿ, ನಗೆ ಚಾಟಿಕೆಗಳ ನಡುವೆ ತಮ್ಮ ಸಿನಿಮಾ ಪಯಣವನ್ನು ಹಂಚಿಕೊಂಡ ನಾಗಾಭರಣರು, ತಮ್ಮ ಪ್ರತಿಭೆ, ಸರಳತೆ, ಯೋಚನಾ ಲಹರಿಯ ಹರಿವು – ದಿಕ್ಕುಗಳನ್ನು ಪರಿಚಯಿಸಿದರು. ಬಂದ ಪ್ರೇಕ್ಷಕರೆಲ್ಲ ಸಂವಾದವನ್ನು ತುಂಬು ಹೃದಯದಿಂದ ಅನುಭವಿಸಿದರು. ಅವರಿಗೂ ಸಂವಾದಿಸುವ ಅವಕಾಶ ಸಮಯಾಭಾವದಿಂದ ಸಿಗದೇ ನಿರಾಶರಾಗಿದ್ದು ಪ್ರಯೋಜಕರಿಗೆ ವೇದ್ಯವಾಗಿತ್ತು. 

-ರಾಂ 

ಕನ್ನಡ ಬಳಗದಲ್ಲಿ ಸಂಭ್ರಮದ ಚೈತ್ರ ಕಲರವ

ಮಾನವ ಮೂಲತ: ಸಂಘಜೀವಿ. ತನಗಿಷ್ಟವಾದ ವಸ್ತು-ವಿಷಯ-ದಿರಿಸು-ತಿನಿಸುಗಳನ್ನು ತನ್ನಿಷ್ಟದವರೊಂದಿಗೆ ಹಂಚಿಕೊಂಡಾಗಲೇ ತೃಪ್ತಿ. ಕಷ್ಟ, ನೋವು, ತಾಪತ್ರಯಗಳನ್ನು ಅದ್ಹೇಗೋ ಏಕಾಕಿಯಾಗಿ ಅವಡುಗಚ್ಚಿ ಸಹಿಸಿಬಿಡಬಹುದು. ಆದರೆ ಸಂತಸ, ಸಂಭ್ರಮ, ನಗುವನ್ನು ಸಮಾನಮನಸ್ಕ ನಾಲ್ಕು ಜನರೊಡನೆ ಹಂಚಿಕೊಂಡರಷ್ಟೇ ಧನ್ಯತೆ. ಅದಕ್ಕೇ ಅಲ್ಲವೇ ನಮ್ಮ ಕಗ್ಗಬ್ರಹ್ಮ ಹೇಳುವುದು-

‘ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ
ಇಬ್ಬರಾಗುವೆನೆಂದನಂತೆ ಪರಬೊಮ್ಮಂ |
ಹೆಬ್ಬದುಕನೊಂಟಿತನದೊಳದೇನು ಬದುಕುವುದೋ?
ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ’

ಬಂದವರೆಲ್ಲರನ್ನೂ ತಬ್ಬಿಕೊಂಡು ಹೆಬ್ಬದುಕಿಗೆ ಅನುವು ಮಾಡಿಸುವ ಇಂಥ ಸವಿಯೂಟವನ್ನು ವರ್ಷಕ್ಕೆರಡು ಬಾರಿ  ನಮ್ಮ ಹೆಮ್ಮೆಯ ಕನ್ನಡ ಬಳಗ ಅನಿವಾಸಿಗಳಿಗೆ ಉಣಬಡಿಸುವುದು ತಮ್ಮೆಲ್ಲರಿಗೂ ಗೊತ್ತಿದ್ದದ್ದೇ. ಕೋವಿಡ್ ರಕ್ಕಸನ ಕಬಂಧ ಬಾಹು ಕಳೆದೆರಡು ವರುಷದಿಂದ ಆ ಸಂಭ್ರಮಕ್ಕೆ ಅಡ್ಡಿ ಮಾಡಿತ್ತಾದರೂ ಈ 2022 ರ ಯುಗಾದಿ ಸಂಭ್ರಮಾಚರಣೆ ನಿರ್ವಿಘ್ನವಾಗಿ ನೆರವೇರಿದ್ದು ಸಂತಸ ಹಾಗೂ ಸಮಾಧಾನ ತಂದ ವಿಷಯ.

ಇಂದಿನ ಈ ಸಂಚಿಕೆಯಲ್ಲಿ ಕಾರ್ಯಕ್ರಮದ ಸಂಪೂರ್ಣ ಚಿತ್ರಣ ನಿಮ್ಮೆದಿರು ಇಟ್ಟಿದ್ದಾರೆ ಶ್ರೀರಂಜಿನಿಯವರು. 
ಅದ್ಭುತ ನೃತ್ಯಗಾತಿ ಶ್ರೀಮತಿ ವಸುಂಧರಾ ದೊರಸ್ವಾಮಿ ಅವರು ಪ್ರದರ್ಶಿಸಿದ  ಭಾರತದ ಅತೀ ಪುರಾತನ ಆಸ್ತಿಗಳಾದ ಯೋಗ ಹಾಗೂ ಭರತನಾಟ್ಯಗಳ ಸಮ್ಮಿಲನದ ಅಪೂರ್ವ ಭಂಗಿಗಳ ಕುರಿತಾಗಿ, ಅವರ ಸಾಧನೆಗಳ ಕುರಿತಾಗಿ ಆತ್ಮೀಯವಾಗಿ ಬರೆದಿದ್ದಾರೆ ಅವರದೇ ಶಿಷ್ಯೆ ರಶ್ಮಿ ಮಂಜುನಾಥ ಅವರು.

ಗಾಯಕ ಶ್ರೀಹರ್ಷ ಮಾಡಿದ ಮೋಡಿಯ ಬಗ್ಗೆ ಬರಹದ ಮೂಲಕ ಮಾತನಾಡಿದ್ದಾರೆ ಸ್ವತ: ಉತ್ತಮ ಗಾಯಕಿಯಾದ ಪೂಜಾ ತಾಯೂರ್ ಅವರು.

ಏಕಪಾತ್ರಾಭಿನಯದ ಮೂಲಕ ಕ್ರಿ.ಶ.1800 ರ ಕಿತ್ತೂರಿನ ಚೆನ್ನಮ್ಮನನ್ನು 2022ರಲ್ಲಿ ಡಾರ್ಬಿಯ ಸಭಾಂಗಣದಲ್ಲಿ ತಂದಿಳಿಸಿದ ವಸುಂಧರಾ ಅವರ ಬಗ್ಗೆ ನಮ್ಮ ಅಪೂರ್ವ ನೃತ್ಯಪಟುವಾದ ಸುಮನಾ ಅವರು ಏನು ಹೇಳುತ್ತಿದ್ದಾರೆಂದು ಕೇಳೋಣ ಅಲ್ಲಲ್ಲ ಓದೋಣ ಬನ್ನಿ.

ಸಮಾರಂಭದ ಗಡಿಬಿಡಿ ಗದ್ದಲದ ನಂತರದ ಆತ್ಮೀಯ, ಅತ್ಯಾಪ್ತ ಕಳುವೂಟದ ಪ್ರಥೆಯನ್ನು ಅನೂಚಾನವಾಗಿ ಪಾಲಿಸುತ್ತಿರುವ  ಸುಮನಾ-ಗಿರೀಶ್ ದಂಪತಿಗಳ ಮನೆಯಲ್ಲಿ ನಡೆದ ಗೋಷ್ಠಿಯನ್ನು ಸುಂದರವಾದ ವಿಡಿಯೋ ಹಾಗೂ ಬರಹದಿಂದ ಪ್ರಸ್ತುತ ಪಡಿಸಿದ್ದಾರೆ ಶ್ರೀವತ್ಸ ದೇಸಾಯರು.

ಬನ್ನಿ..ಭೂರಿಭೋಜನ ಸವಿದು ಸಂತೃಪ್ತರಾಗಿ.

~ ಸಂಪಾದಕಿ

ಕನ್ನಡ ಬಳಗದಿಂದ ಯುಗಾದಿ ರಸದೌತಣ

ದೀಪವನು ಬೆಳಗು ಸುತ್ತ ಕವಿದಿಹ ಇರುಳ।।

ಕಾವಳವು ಅಳಿವಂತೆ ಕಾಂತಿ ಅರಳೆ…

ಹೃದಯ ಬೆಸೆಯುವ ನಗೆಯು ತುಂಬಿಬರಲಿ।।

ಎಂಬ ಎಸ್. ಅನಂತನಾರಾಯಣ ಅವರ ಕವಿತೆಯ ಭಾವದಂತೆ ಕಳೆದ ಎರಡು ವರ್ಷಗಳ ನಂತರದ ಮೊದಲ Live eventನಿಂದಾಗಿ ’ಹೃದಯ ಬೆಸೆಯುವ ನಗೆಯು ತುಂಬಿಬಂದಿತ್ತು’. ಅದನ್ನು ಮಾಡುವ ಜವಾಬ್ದಾರಿಯನ್ನು ನಮ್ಮ ಕನ್ನಡಬಳಗಯುಕೆ  ಹಾಗು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯು (KSSVV) ಜೊತೆಗೂಡಿ ಎಲ್ಲಾ ಯುಕೆ ಕನ್ನಡಿಗರಿಗೆ ತಮ್ಮ ನೆಲ, ತಮ್ಮ ಜನ ಹಾಗು ತಮ್ಮ ಸಂಸ್ಕೃತಿಯ  ಆ ದಿನಗಳಿಗೆ ಕರೆದುಕೊಂಡು ಹೋದರು. 
23 ಏಪ್ರಿಲ್, 2022ರಂದು  ಕನ್ನಡ ಬಳಗ ಯುಕೆ ವತಿಯಿಂದ ಈ ಯುಗಾದಿ ಸಂಭ್ರಮವು ಡಾರ್ಬಿ ನಗರದ ರಿವರ್ಸೈಡ್ ಸಭಾಂಗಣದಲ್ಲಿನಡೆಯಿತು. ಅಂದಹಾಗೆ ಇದು ನನ್ನ ಮೊದಲ ಯುಗಾದಿ ಹಬ್ಬ ಯುಕೆ ಯಲ್ಲಿನಾನಂತೂ ಖಂಡಿತ ಈ ಅನುಭವವನ್ನು ಮರೆಯಲು ಸಾಧ್ಯವಿಲ್ಲ. ಕಾರ್ಯಕ್ರಮದಲ್ಲಿನ 
ಮುಖ್ಯ ಕಲಾವಿದರಾದ ನಾಟ್ಯ ವಿದುಷಿ ಡಾ  ವಸುಂಧರಾ ದೊರಸ್ವಾಮಿಯವರು, ಶ್ರೀ ಶ್ರೀಹರ್ಷ ಅವರು ಹಾಗು ಕನ್ನಡ ಬಳಗ ಯುಕೆಯ ಗಣ್ಯ ಸದಸ್ಯರು ದೀಪವನ್ನು ಬೆಳಗುವುದರ ಮೂಲಕ ಪ್ರಾರಂಭಿಸಿದರು. ದೇವಿಯ ನಮನವನ್ನು ನಮ್ಮ ಕನ್ನಡ ಬಳಗದ ಪೂಜಾ ತಾಯೂರ್  ಸುಶ್ರಾವ್ಯವಾಗಿ ಹಾಡಿ ಎಲ್ಲರ  ಮನಸೆಳೆದರು. 

ಅನಂತರ ಡಾ  ವಸುಂಧರಾ ದೊರಸ್ವಾಮಿ ಅವರಿಂದ  "ನಾಟ್ಯ ಯೋಗ ದರ್ಶನ" ಕುರಿತು ಭಾಷಣ ಮತ್ತು ಪ್ರಾತ್ಯಕ್ಷಿಕೆ. ಈ ಪ್ರದರ್ಶನವು  ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯ ವತಿಯಿಂದ ಆಯೋಜಿಸಲಾಗಿತ್ತು. (ಇದರ ವಿವರವನ್ನು ಡಾ ರಶ್ಮಿ ಮಂಜುನಾಥ ಅವರ ಲೇಖನದಲ್ಲಿ ಕೊಟ್ಟಿದೆ). ಈ ಪ್ರದರ್ಶನ ಒಂದು ಕಡೆಯಲ್ಲಿ ಆದರೆ, ಮತ್ತೊಂದು ಕಡೆ ಕನ್ನಡ ಬಳಗ ಸದಸ್ಯರ ಪುಟಾಣಿ ಮಕ್ಕಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ. ಭರತನಾಟ್ಯ ದಿಂದ ಬಾಲಿವುಡ್, ಶ್ಲೋಕದಿಂದ ಫಿಲಂ ಹಿಟ್ಸ್ ನಂತೆ ಈ ಕಾಲದ ಮಕ್ಕಳು ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಎಂಬಂತೆ ಎಲ್ಲರ ಮನ ಗೆದ್ದರು. ಇದಾದ ನಂತರ ಕನ್ನಡ ಬಳಗದ ವಾರ್ಷಿಕ ಸಾಮಾನ್ಯ ಸಭೆ ಸೇರಿತ್ತು. ಇತ್ತೀಚಿನ ಚುನಾವಣೆಯಲ್ಲಿ ಆಯ್ಕೆಯಾದ ಹೊಸ ಪದಾಧಿಕಾರಿಗಳ ಘೋಷಣೆ ಆಯಿತು.

ಊಟದ ವಿರಾಮದನಂತರ ಕನ್ನಡ ಬಳಗ ಸದಸ್ಯರಿಂದ ಸಾಂಸೃತಿಕ ಕಾರ್ಯಕ್ರಮ ಪ್ರಾರಂಭವಾಯಿತು. ನಮ್ಮ ಸಾಂಸ್ಕೃತಿಕ  ಕಾರ್ಯದರ್ಶಿಯಾದ ಸುಮನಾ ನಾರಾಯಣರವರು  ಆಯೋಜಿಸಿದ ಎಲ್ಲಾ  ಪ್ರದರ್ಶನಗಳು ಒಂದಕ್ಕಿಂದ ಮತ್ತೊಂದು ಅದ್ಭುತ ಎಂಬಂತೆ ಇದ್ದವು. ಭರತನಾಟ್ಯ ಪ್ರದರ್ಶನದಲ್ಲಿ ನರಸಿಂಹ ಕೌತ್ವಂ ಪ್ರದರ್ಶನ, ಹಾಗೆಯೇ Live ಹಾಡುಗಾರಿಕೆಗೆ ಭರತನಾಟ್ಯ ಕೂಚುಪುಡಿ ನೃತ್ಯ ಪ್ರದರ್ಶನವು ಸಹ ಎಲ್ಲರಿಗೆ ಅಚ್ಚರಿ ಮೂಡಿಸಿತು. ಇಂತಹ ಪ್ರದರ್ಶನಗಳನ್ನು ನೋಡಿದರೆ ನಮ್ಮ ಭಾರತೀಯ ಸಂಸ್ಕೃತಿ ಮತ್ತು ಕನ್ನಡದ ಕಲೆ - ಕಲಾವಿದರ ಪರಿಶ್ರಮ - ಪ್ರಯತ್ನಗಳು ಸಾಗರದಿಂದಾಚೆಯೂ ಮೆರೆಯುತ್ತಿದೆ. ಭಾರತಾಂಬೆಯೇ ಧನ್ಯೆ, ಜೈ ಕರ್ನಾಟಕ ಮಾತೆ, ಇದಲ್ಲದೆ ಮತ್ತೊಂದು ಮನರಂಜನೆಯ ನೃತ್ಯ-ನಾಟಕ ಪ್ರದರ್ಶನ ಇತ್ತು. ಕರ್ನಾಟಕದ ಹಲವು ರಾಜ್ಯಗಳ ಸೊಗಡನ್ನು ದಂಪತಿಯ ವೈವಾಹಿಕ ಜೀವನಕ್ಕೆ ಹೋಲಿಸಿ ನಮ್ಮೆಲ್ಲರ ನೆಚ್ಚಿನ ನಟಸಾರ್ವಭೌಮ ಡಾ ರಾಜ್ ಕುಮಾರ್, ಅನಂತ್ ನಾಗ್ ಹಾಗು ಸಾಹಸ ಸಿಂಹ ವಿಷ್ಣುವರ್ಧನ್  ಹಾಡುಗಳನ್ನು ಮೆಲಕುಹಾಕುವಂತೆ ಮಾಡಿಸಿತು. 

ಅಬ್ಬಬ್ಬಾ ಇಷ್ಟನ್ನೇ ನೋಡಿ ಅಚ್ಚರಿಯಾದ ನಾನು  - ಕಾರ್ಯಕ್ರಮದ ಅಂತಿಮ  ಪ್ರದರ್ಶನಗಳಿಗೆ ಕಾಯುತ್ತಿದ್ದೆ. ಡಾ.ವಸುಂಧರಾ ಅವರ ನೃತ್ಯ ಪ್ರದರ್ಶನಕ್ಕೆ ಸಾಟಿಯೇ ಇಲ್ಲ - ಕಿತ್ತೂರು ರಾಣಿ ಚೆನ್ನಮ್ಮನೇ  ಒಂದು ಕ್ಷಣ ಕಣ್ಣ ಮುಂದೆ ಬಂದಂತಾಯಿತು. ಎಲ್ಲರಿಗೂ  ರಾಣಿ ಚೆನ್ನಮ್ಮನೇ ತನ್ನ ಜೀವನದ ಕಥೆಯನ್ನು ನೃತ್ಯ ರೂಪಕದಲ್ಲಿ  ವಿವರಿಸುತ್ತಿದ್ದಾರೆ ಎನಿಸಿತು.  ಕರ್ನಾಟಕದ  ವೀರ ವನಿತೆಯಾದ ಚೆನ್ನಮ್ಮನ ಕಥೆ ನೃತ್ಯ ರೂಪಕದಲ್ಲಿದ್ದು , ಸಂದರ್ಭಕ್ಕೆ ತಕ್ಕ ಸಂಗೀತ, ಸಂಗೀತಕ್ಕೆ ತಕ್ಕ ಹಾವ ಭಾವ ಇವೆಲ್ಲವೂ ಅಲ್ಲಿ ಅದನ್ನು  ವೀಕ್ಷಿಸಿದ ಪ್ರೇಕ್ಷಕರಲ್ಲಿ  ಹುಚ್ಚೆಬ್ಬಿಸಿತು. ಇಂತಹ ಪ್ರದರ್ಶನದ  ಹಿಂದೆ ಅಡಗಿರುವ ನಮ್ಮ ಮೈಸೂರಿನ ಹೆಮ್ಮೆಯ ವಸುಂಧರಾ ಅಮ್ಮನಿಗೆ ಒಂದು ಸಲಾಂ! (ಇದರ ಬಗ್ಗೆ ಸುಮನಾಾರಾಯಣ್ ಅವರ ಅನಿಸಿಕೆಗಳನ್ನು ಕೆಳಗಿನ ಲೇಖನದಲ್ಲಿ ಓದಿರಿ) 

।।ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತಮ್ ಉಚ್ಯತೇ ।। - ಭರತನ ನಾಟ್ಯಶಾಸ್ತ್ರ 

ನೃತ್ಯದ ನಂತರ ಸಂಗೀತ, ಸಂಗೀತದ ನಂತರ ನೃತ್ಯವೋ ಎಂಬಂತೆ ಮುಂದಿನ ಪ್ರದರ್ಶನ ಶ್ರೀಹರ್ಷರವರ ಹಾಡುಗಾರಿಕೆ. Zee ಕನ್ನಡ ಸರೆಗಮಪ ಹೆಮ್ಮಯ ಗಾಯಕ, ಅತ್ಯುತ್ತಮ್ಮ ನಾಟಕ ಕಲಾವಿದರು ಆದ ಶ್ರೀಹರ್ಷರವರು ತಮ್ಮ ಕಾರ್ಯಕ್ರಮಯನ್ನು ಶಿವನ  ಮೃತ್ಯುಂಜಯ ಮಂತ್ರದಿಂದ ಆರಂಭಿಸಿ ಕನ್ನಡ ಹಾಗೂ  ಹಿಂದಿ  ಚಿತ್ರರಂಗದ ಹಲವು ಸಮಾನವಾದ ಸಂಗೀತ ಸಂಯೋಜನೆಯುಳ್ಳ Medley ಯನ್ನು ಪ್ರಸ್ತುತ ಪಡಿಸಿದರು. ಅವರ ಬಹುಮುಖ ಪ್ರತಿಭೆಗೆ ಸಾಟಿಯೇ ಇಲ್ಲ, ಇವರೊಡನೆ ನಮ್ಮ ಯುಕೆ ಕನ್ನಡ ಬಳಗ ಮತ್ತು ಕನ್ನಡಿಗರು ಯುಕೆ ಹಾಡುಗಾರರು ಸಹ ಯುಗಳ ಗೀತಗಳನ್ನು ಪ್ರಸ್ತುತ ಪಡಿಸಿದರು. (ವಿವರಗಳನ್ನು ಪೂಜಾ ತಾಯೂರ್ ಅವರ ಲೇಖನದಲ್ಲಿ ಓದಿರಿ)

ಒಟ್ಟಾರೆ ಯುಗಾದಿ ಸಂಭ್ರಮಕ್ಕೆ ಪಾಯಸದ  ಸಿಹಿ, ಮಿರ್ಚಿ ಬಜ್ಜಿಯ ತಿನಿಸು, ತಿಳಿ ಸಾರು ಎಲ್ಲವೂ ಬಾಳೆ ಎಲೆಯ ಮೇಲೆ ಸವಿಯಲು ಸಿದ್ಧವಾದಂತೆ ನಮ್ಮ ಕನ್ನಡ ಬಳಗದ ಈ  ಕಾರ್ಯಕ್ರಮವು ಕಲೆಗಳ ರಸದೌತಣವನ್ನು ಉಣ ಬಡಿಸಿತು. ನಾನು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರೂಪಣೆಯನ್ನು ಮಾಡಿದ ಹೆಮ್ಮೆಯೂ ಇದೆ. ಕನ್ನಡ ಬಳಗ ಯುಕೆಗೆ ಮುಂದಿನ ವರುಷ ನಲವತ್ತರ ಹರುಷ - ಇನ್ನೂ ಹೆಚ್ಚು ಕಲಾವಿದರಿಗೆ ಅವಕಾಶ ಸಿಗಲಿ ಮತ್ತಷ್ಟು ಸಂಭ್ರಮದ ಕಾರ್ಯಕ್ರಮಗಳು ಮೂಡಿಬರಲಿ ಎಂದು ಆಶಿಸುವೆ.     

~ ಶ್ರೀರಂಜಿನಿ ಸಿಂಹ 

ಮನ ಮುಟ್ಟಿದ ನಾಟ್ಯ ಯೋಗ ಸಮನ್ವಯ ಪ್ರಾತ್ಯಕ್ಷಿಕೆ

ಕನ್ನಡ ಬಳಗ ಯು ಕೆ, ದಿನಾಂಕ ಎಪ್ರಿಲ್ 23, 2022 ರಂದು ಡಾರ್ಬಿಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯ (KSSVV) ಅಡಿಯಲ್ಲಿ ಏರ್ಪಡಿಸಿದ್ದ ವಿಶೇಷ ಯುಗಾದಿ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ನೃತ್ಯ ಗುರು ಡಾ ವಸುಂಧರಾ ದೊರಸ್ವಾಮಿಯವರು ”ನಾಟ್ಯ ಯೋಗ ದರ್ಶನ” ಈ ವಿಷಯದ ಬಗ್ಗೆ ಭಾಷಣ ಮತ್ತು ಪ್ರಾತ್ಯಕ್ಷಿಕಾ ಕಾರ್ಯಕ್ರಮವನ್ನು ನೀಡಿದರು.
ಮೊದಲಿಗೆ, ನಾಟ್ಯದ ಉಗಮ,  ವಿಕಾಸ, ಬೆಳವಣಿಗೆಗಳನ್ನು ಹಂತ ಹಂತವಾಗಿ ಎಲ್ಲಾ ವೀಕ್ಷಕರಿಗೂ ಅರ್ಥವಾಗುವಂತೆ ಅಚ್ಚುಕಟ್ಟಾಗಿ ವಿವರಿಸಿದರು. ಭರತನಾಟ್ಯವು ಶಾಸ್ತ್ರೀಯ ಕಲೆಯಾಗಿದ್ದು ಇದು ಭಕ್ತಿ ಮಾರ್ಗವೂ ಹಾಗೂ ಮೋಕ್ಷದಾಯಕವೂ ಆಗಿದೆ ಎಂದರು. ಋಗ್, ಯಜುರ್, ಸಾಮ, ಅಥರ್ವಣ -ಈ ನಾಲ್ಕು ವೇದಗಳಿಂದ ಒಂದೊಂದು ಮುಖ್ಯ ಸಾರವನ್ನು ಆಯ್ದು ಉದ್ಭವವಾದ ಐದನೆಯ ವೇದವೇ ಪಂಚಮ ವೇದ -ಅದುವೇ ನೃತ್ಯ. ಈ ವಿಷಯದ ಬಗ್ಗೆ ಸವಿಸ್ತಾರವಾಗಿ ವಸುಂಧರಾರವರು ತಿಳಿಸಿಕೊಟ್ಟರು. ಈ ನೃತ್ಯವನ್ನು ಬ್ರಹ್ಮನು ಭರತಮುನಿಗೆ ಮನವರಿಕೆ ಮಾಡಿ, ಭರತ ಮುನಿಯು ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಅಭಿನಯಗಳನ್ನು ಒಳಗೊಂಡ ಈ ನೃತ್ಯ ಕಲೆಯನ್ನು ತನ್ನು ನೂರು ಮಕ್ಕಳಿಗೆ ಹೇಳಿಕೊಟ್ಟು, ಅಂತೆಯೇ ಭೂಮಿಯ ಮೇಲೆ ನಾಟ್ಯಪ್ರಸಾರಕ್ಕೆ ಅನುವು ಮಾಡಿಕೊಟ್ಟನೆಂದು ತಿಳಿಸಿದರು.
ನೃತ್ಯವು ಮೊದಲು ಷೋಡಷೋಪಚಾರಗಳಲ್ಲಿ ಒಂದಾಗಿದ್ದು, ಕಾಲಕ್ರಮೇಣ ದೇವಸ್ಥಾನಗಳಲ್ಲಿ ದೇವರಿಗೇ ಮುಡುಪಾಗಿಟ್ಟ ನೃತ್ಯಗಾರ್ತಿಯರಿಂದ ಪ್ರಚಲಿತವಾಗಿ ಪ್ರಸಾರವಾಗಲು ತೊಡಗಿತು. ನಂತರ ಭರತನಾಟ್ಯ ಕಲೆಗೆ ಶಾಸ್ತ್ರೀಯತೆ ಹಾಗೂ ಗೌರವಯುತ ಸ್ಥಾನ ಲಭ್ಯವಾಗಿ ಜನಸಾಮಾನ್ಯರಿಗೂ ನಿಲುಕುವಂತಾಯಿತು ಎಂದು ಹೇಳಿದರು.
ಮುಂದುವರೆದು, ಡಾ ವಸುಂಧರಾರವರು ಯೋಗದ ಬಗ್ಗೆ ವಿವರಣೆ ನೀಡಿದರು. ತಮ್ಮ ಬಾಲ್ಯದಲ್ಲಿ ಮೂಡಬಿದ್ರೆಯ ಹತ್ತಿರದ ಹಳ್ಳಿಯಲ್ಲಿ ವಾಸವಾಗಿದ್ದ ಅವರು, ಮನೆಯಲ್ಲಿ ತಮ್ಮ ತಂದೆಯವರ ನಿರ್ದೇಶನದಂತೆ ವ್ಯಾಯಾಮ, ಆಸನಗಳನ್ನು ಕಲಿಯಲಾರಂಭಿಸಿದರು. ಆದರೆ ಈ ಆಸನಗಳು ಯೋಗದ ಆಸನಗಳೆಂದು ಅವರಿಗೆ ತಿಳಿದಿರಲಿಲ್ಲ. ಮದುವೆಯಾಗಿ ಮೈಸೂರಿಗೆ ಬಂದ ನಂತರ ಭರತನಾಟ್ಯ ಮುಂದುವರಿಕೆಯ ಸಂದರ್ಭದಲ್ಲಿ, ಭರತನಾಟ್ಯ ಭಂಗಿಗಳ ಹಾಗು ಯೋಗ ಆಸನಗಳ ನಡುವೆ ಇರುವ ಸಮನ್ವಯವನ್ನು ಗುರುತಿಸಿದರು. ಅಷ್ಟಾಂಗ ಯೋಗ ಗುರು ಶ್ರೀ ಪಟ್ಟಾಭಿ ಜೋಯಿಸ್ ಅವರಲ್ಲಿ ಯೋಗಾಭ್ಯಾಸವನ್ನು ಮಾಡಿದರು. ಮುಂದುವರೆದು. ”ನಾಟ್ಯ ಯೋಗ ಸಮನ್ವಯ” ಎಂಬ ವಿಷಯದಲ್ಲಿ ತೊಡಗಿ, ಡಾಕ್ಟರೇಟ್ ಪದವಿಯನ್ನು ಗಳಿಸಿದರು. ಯೋಗದ ಆಸನಗಳನ್ನು ಭರತನಾಟ್ಯಕ್ಕೆ ಅಳವಡಿಸಿ ಈ ಎರಡೂ ಕಲೆಗಳನ್ನು ಸಮೀಕರಿಸಿದ ಕೀರ್ತಿಗೆ ಭಾಜನರಾದವರು ಡಾ ವಸುಂಧರಾ ಅವರು. ನಾಟ್ಯವು ಒಂದು ವಿಧದಲ್ಲಿ ಯೋಗವೇ ಎಂದು ಪ್ರತಿಪಾದಿಸಿದ ವಸುಂಧರಾರವರು, ಅಷ್ಟಾಂಗ ಯೋಗದಲ್ಲಿ ಇರುವ ಎಂಟು ಸ್ಥರಗಳಾದ ಯಮ, ನಿಯಮ,ಆಸನ, ಪ್ರಾಣಾಯಾಮ, ಪಥ್ಯಾಹಾರ, ಧ್ಯಾನ, ಧಾರಣ ಹಾಗೂ ಸಮಾಧಿ -ಈ ಹಂತಗಳನ್ನು ವಿವರಿಸಿದರು.
ಎಪ್ಪತ್ತೆರಡರ ಹರೆಯದ ಡಾ ವಸುಂಧರಾ ದೊರಸ್ವಾಮಿಯವರು ತಮ್ಮ ಅತ್ಯುತ್ತಮ ಭಂಗಿಗಳಿಂದ, ಉತ್ಕೃಷ್ಟ ಅಭಿನಯದಿಂದ ಮನಮುಟ್ಟುವಂತೆ ವಿವಿಧ ಆಸನಗಳ ಹಾಗೂ ಭಂಗಿಗಳ ಪ್ರಾತ್ಯಕ್ಷಿಕೆ ನೀಡಿ ರಂಜಿಸಿದರು. ಇದಕ್ಕೆ, ಅವರ ಶಿಷ್ಯೆ ವಿದ್ಯಾರಾಣಿ ಸಹಕರಿಸಿದರು.
ವೈಯಕ್ತಿಕವಾಗಿ ಹೇಳುವುದಾದರೆ, ನಾನು ಕೂಡ ಈ ಮಹಾನ್ ಕಲಾವಿದೆಯ ಶಿಷ್ಯೆ. ಇವರು ಗುರು ಸ್ಥಾನದಲ್ಲಿ ಅಂತೆಯೇ ಮಾತೃ ಸ್ಥಾನದಲ್ಲಿ ನಿಂತು ಭರತನಾಟ್ಯವನ್ನು ಕಲಿಸಿದ ಆ ಸುಂದರ ಸಮಯವು ನನ್ನ ಮನಸ್ಸಿನಲ್ಲಿ ಇಂದಿಗೂ ಹಚ್ಚ  ಹಸಿರಾಗಿದೆ.
ಇನ್ನು, ನನ್ನ ತಾಯಿ ಡಾ ಸರ್ವಮಂಗಳಾ ಶಂಕರ್ ರವರು ಮೈಸೂರಿನ ಡಾ ಗಂಗೂಬಾಯಿ ಹಾನಗಲ್ ಸಂಗೀತ ಹಾಗು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ಡಾ ವಸುಂಧರಾ ಅವರಿಗೆ ತಾವು ನೀಡಿದ ”ನಾಟ್ಯ ಕುಲೋತ್ತುಂಗ” ಪ್ರಶಸ್ತಿ ಸಮಾರಂಭವನ್ನು ಹಾಗೂ ವಸುಂಧರಾ ಅವರೊಂದಿಗಿನ ಒಡನಾಟ, ಸ್ನೇಹ, ಪ್ರೀತಿ-ವಿಶ್ವಾಸಗಳನ್ನು ನೆನೆದು ಸಂತೋಷಿಸುತ್ತಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಅಹರ್ನಿಶಿ ನೃತ್ಯಕ್ಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿರುವ ಅಪೂರ್ವ ಕಲಾವಿದೆ ಡಾ ವಸುಂಧರಾ ದೊರಸ್ವಾಮಿ ಅವರು ನೃತ್ಯಗಾರರಿಗೆ ಸ್ಫೂರ್ತಿದಾಯಕ. ಅವರು ನೀಡಿದ ಅಚ್ಚುಕಟ್ಟಾದ, ಚಿಕ್ಕ, ಚೊಕ್ಕ ಪ್ರಾತ್ಯಕ್ಷಿಕಾ ಕಾರ್ಯಕ್ರಮಕ್ಕಾಗಿ ಅವರಿಗೂ, ಅದನ್ನು ಏರ್ಪಡಿಸಿದ್ದ ಕನ್ನಡ ಬಳಗ ಯುಕೆ ಮತ್ತು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (KSSVV), ಅವರನ್ನು ಸ್ವಾಗತ ಮಾಡಿ ಪರಿಚಯ ಭಾಷಣ ಮಾಡಿದ ಡಾ ಜಿ ಎಸ್ ಶಿವಪ್ರಸಾದ್ ಅವರಿಗೆ ಮತ್ತು ವಂದನಾರ್ಪಣೆ ಮಾಡಿದ ಡಾ ಶ್ರೀವತ್ಸ ದೇಸಾಯಿಯವರಿಗೆ ಧನ್ಯವಾದಗಳು.

~ ಡಾ ರಶ್ಮಿ ಮಂಜುನಾಥ
 MBBS, MRCP, MRCP ( Diabetes and Endocrinology), FRCP
Consultant Endocrinologist
Coventry. UK

ಹರುಷ ತಂದ ಶ್ರೀಹರ್ಷ

ನಾನು 'ಇಂಗ್ಲೆಂಡ್'ಗೆ ಬಂದು ಎರಡು ವರ್ಷಗಳಾಗಿದ್ದು, ಕೋವಿಡ್-19ನಿಂದಾಗಿ ಸಾಮಾಜಿಕ ಸಂವಹನವೇ ಇಲ್ಲದ ಹಾಗೆ ಆಗಿತ್ತು. 'ಫೇಸ್ಬುಕ್'ನಿಂದಾಗಿ ನನಗೆ 'ಇಂಗ್ಲೆಂಡ್'ನಲ್ಲಿ ವಾಸವಾಗಿರುವ ಎಷ್ಟೋ ಜನರ ಪರಿಚಯವಾಯಿತು.   ಶತ ಪ್ರಯತ್ನ ಮಾಡಿದ್ದರೂ, ಸಾಮಾಜಿಕ ಜಾಲತಾಣವಿಲ್ಲದೆ ನನಗೆ ಇಷ್ಟೊಂದು ಕನ್ನಡ ಬಳಗದವರ ಪರಿಚಯ ಆಗುತ್ತಿರಲಿಲ್ಲ. ಕನ್ನಡ ಬಳಗ UK ಅವರು ಆಯೋಜಿಸಿದ್ದ 'ಯುಗಾದಿ ಸಂಭ್ರಮ 2022'ಯಲ್ಲಿ ಭಾಗಿಯಾಗಲು ಒಂದು ಸುವರ್ಣ ಅವಕಾಶ ದೊರಕಿದಾಗ, ನನಗೆ ನೀಡಿದ ಪ್ರಾರ್ಥನಾ ಗೀತೆ ಹಾಡುಗಾರಿಕೆ ಮತ್ತು ಕಾರ್ಯಕ್ರಮ ನಿರ್ವಹಣೆಯ ಅವಕಾಶಕ್ಕಿಂತಲೂ, ನನಗೆ ತಿಳಿದಿದ್ದ ಎಲ್ಲ ಹೆಸರುಗಳಿಗೆ ಜೀವಂತ ಮುಖ ಕಾಣಬಹುದು, ಮಾತನಾಡಬಹುದು ಎಂಬ ಸಂತೋಷವೇ ಹೆಚ್ಚು! ಜೊತೆಗೆ ಮುಖ್ಯ ಅತಿಥಿಗಳಾದ ಶ್ರೀ ಶ್ರೀಹರ್ಷ ಅವರ ಜೊತೆ ಸಂಜೆಯ ಕಾರ್ಯಕ್ರಮದಲ್ಲಿ ಚಿತ್ರಗೀತೆ  ಹಾಡಲು ಒಂದು ಸದವಕಾಶ ದೊರೆತಿತು. ವೇದಿಕೆಯ ಮೇಲೆ ಶಾಸ್ತ್ರೀಯ ಸಂಗೀತ, ದೇವರನಾಮ, ಭಾವಗೀತೆಗಳನ್ನು ಮಾತ್ರ ಹಾಡುವ ನನಗೆ, ಇದು ಚೊಚ್ಚಲ ಚಿತ್ರಗೀತೆ ಗಾಯನಾವಕಾಶ. ಶ್ರೀ ಶ್ರೀಹರ್ಷ ಅವರ ಬಗ್ಗೆ, ನಿಜ ಹೇಳಬೇಕು ಅಂದ್ರೆ ನನಗೆ ಅಷ್ಟು ಪರಿಚಯ ಇರ್ಲಿಲ್ಲ. ರಿಯಾಲಿಟಿ ಶೋಗಳಲ್ಲಿ ಆಸಕ್ತಿಯನ್ನು ಬಹಳ ವರ್ಷಗಳ ಮುಂಚೆಯೇ ಕಳೆದುಕೊಂಡುಬಿಟ್ಟಿದ್ದೆ. ತಂತ್ರಜ್ಞಾನದಿಂದ ಏನು ಸಾಧ್ಯ ಇಲ್ಲ ಹೇಳಿ? ಶ್ರೀಹರ್ಷ ಅವರ ಹಾಡುಗಳನ್ನು ಯೌಟ್ಯೂಬ್ನಲ್ಲಿ  ನೋಡಿ ನನಗೆ ಅವರ ಧ್ವನಿ ಬಹಳ ಇಷ್ಟವಾಯಿತು ! ನನ್ನ ಜೊತೆ ಇನ್ನೂ ಮೂವರು ಅವರ ಜೊತೆ ಯುಗಳ ಗೀತೆ ಹಾಡಬೇಕಿತ್ತು. ಕಾರಣಾಂತರದಿಂದ ನಮ್ಮ ಕಾರ್ಯಕ್ರಮ ತುಂಬಾ ತಡವಾಗಿ ಶುರು ಆದರೂ, ಶ್ರೀಹರ್ಷರವರ 'ನಾದಮಯ'  ಬೇರೆ ಲೋಕಕ್ಕೆ ಕರೆದೊಯ್ದಿತು. ಹಾಡನ್ನು ಕಣ್ಮುಚ್ಚಿ ಕೇಳಿ, ಆನಂದಿಸಿದವರಲ್ಲಿ ನಾನೂ ಒಬ್ಬಳು. ಎಂಥ ಗಾಯನ, ಎಂಥ ಪ್ರಬುದ್ಧತೆ! ಹಿಂದಿ ಹಾಗು ಕನ್ನಡ ಭಾಷೆಯಲ್ಲಿ ಸಾವಿರಾರು ಸಮಾನವಾಗಿರುವ ಹಾಡುಗಳಿವೆ. ಶ್ರೀಹರ್ಷ ಅವರು ಅಂತಹ ೨೪ ಹಾಡುಗಳ ಝಲಕ್ (ಸಮಾನ ರಾಗ-ತಾಳದ ಒಂದು ಹಿಂದಿ ಹಾಗು ಒಂದು ಕನ್ನಡ ಹಾಡು) ನೀಡಿದರು. ಅವರ ಸುಮಧುರವಾದ ಧ್ವನಿಯಲ್ಲಿ ಎಲ್ಲಾ ಹಾಡುಗಳು ಅದ್ಭುತವಾಗಿ ಕೇಳಿಸಿದವು. ಈ ಅಸಾಮಾನ್ಯ ಪ್ರಸ್ತುತಿ ಎಲ್ಲರಿಗೂ ಇಷ್ಟವಾಗಿದ್ದು, ಜೋರಾದ ಚಪ್ಪಾಳೆ, ಶಿಳ್ಳೆಗಳಿಂದ ಅಭಿವ್ಯಕ್ತವಾಯಿತು. ಶ್ರೀಹರ್ಷರವರು ಕೇವಲ ಒಬ್ಬ ಗಾಯಕನಲ್ಲ, ಒಬ್ಬ ಪ್ರದರ್ಶಕ. ಪ್ರೇಕ್ಷಕರನ್ನು ಸೆಳೆಯುವ ಕಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಕಾರ್ಯಕ್ರಮ ಸಂವಾದಾತ್ಮಕವಾಗಿ ಇದ್ದಿದ್ದು ನನಗೆ ಬಹಳ ಹಿಡಿಸಿತು. ಇದೇನಪ್ಪ, ಎಲ್ಲ ಅಷ್ಟು ಚೆನ್ನಾಗಿತ್ತಾ? ಹಾಗಾದರೆ ನಮಗೆ ಖಂಡಿತ ಈ ಕಾರ್ಯಕ್ರಮ ಮಿಸ್ ಆಯ್ತಾ ಅನ್ಕೊಂಡ್ರಾ? ಅದೇನೋ ಹೌದು. ಆದರೆ ಇಷ್ಟು ಚೆನ್ನಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ, ನನಗೆ ತುಸು ನಿರಾಶೆ ಉಂಟು ಮಾಡಿದ್ದು ಕೇವಲ ಒಂದು ವಿಚಾರ. ಒಂದೊಂದು ಯುಗಳ ಗೀತೆಯ ಮಧ್ಯೆ, ಒಂದೆರಡು 'ಟಪಾಂಗುಚಿ' ಗೀತೆಗಳನ್ನು ಹಾಡಿದ್ದು. ನನ್ನ ಪ್ರಕಾರ, ಕುಣಿದು ಕುಪ್ಪಳಿಸಿದ ಮೇಲೆ ಪ್ರೇಕ್ಷಕರನ್ನು ಮತ್ತೆ ಆಸೀನರಾಗಿರಿಸಲು ಕಷ್ಟ. ಯುಗಳಗೀತೆಗಳನ್ನು ಮುಗಿಸಿ, ನಂತರ 'ಟಪಾಂಗುಚಿ' ಹಾಡಬಹುದಿತ್ತೇನೋ ಅಂತ ನನ್ನ ಅನಿಸಿಕೆ.  ಪ್ರೇಕ್ಷಕರು ಒಂದು ಯುಗಳ ಗೀತೆಯ ನಂತರ ಕುಣಿದು ಕುಪ್ಪಳಿಸಿ, ಊಟಕ್ಕೆ ತೆರಳಿದರು. ಮಿಕ್ಕ ಯುಗಳ ಗೀತೆಗಳನ್ನು ಕೇಳೋ ಶ್ರೋತೃಗಳು ಬೆರಳೆಣಿಕೆಯಷ್ಟು ಮಾತ್ರ. ಇರಲಿ, ಒಬ್ಬ ಗಾಯಕನಿಗೆ ತನ್ನ ಹಾಡಿಗೆ ಜನ ಮನಸ್ಸು ಬಿಚ್ಚಿ ಕುಣಿದರೆ ಅದಕ್ಕಿಂತ ಇನ್ನೇನು ಬೇಕು ಅಲ್ಲವೇ? ಒಟ್ಟಿನಲ್ಲಿ ಹೇಳೋದಾದರೆ, ಕನ್ನಡ ಬಳಗಕ್ಕೆ ಶ್ರೀಹರ್ಷ ಹರುಷ ತಂದು ಕೊಟ್ಟರು. ನನಗೆ ಅವರ ಜೊತೆ ಹಾಡಲು ಸದಾವಕಾಶ ಕಲ್ಪಿಸಿಕೊಟ್ಟದಕ್ಕೆ ಕನ್ನಡ ಬಳಗ UK ಗೆ ನಾನು ಸದಾ ಚಿರ ಋಣಿ.

~ ಪೂಜಾ ತಾಯೂರ್

ಕಿತ್ತೂರ ರಾಣಿ ಚೆನ್ನಮ್ಮ

ಕನ್ನಡ ಬಳಗ ಯುಗಾದಿ ಕಾರ್ಯಕ್ರಮದ ಮುಖ್ಯ ಆಕರ್ಷಣೆ, ಅಂದು  ಸಂಜೆ ಮೂಡಿ ಬಂದ ಡಾ. ವಸುಂಧರಾ ದೊರೆಸ್ವಾಮಿ  ರವರ  ನೃತ್ಯ ರೂಪಕ "ಕಿತ್ತೂರು ರಾಣಿ ಚೆನ್ನಮ್ಮ." ಇದು ಏಕಪಾತ್ರಾಭಿನಯವೂ ಆಗಿತ್ತು. ನಮ್ಮ ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿರುವ ಪಾತ್ರ ಕಿತ್ತೂರು ಚೆನ್ನಮ್ಮನ ದು. ಕೇವಲ ಹೆಸರು ಕೇಳಿದರೆ ಸಾಕು, ದೇಶ ಭಕ್ತಿಯ ನೆತ್ತರು ಮೈಮನಗಳಲ್ಲಿ ಹರಿದಾಡಿ, ಹೆಮ್ಮೆಯಿಂದ ಎದೆಯುಬ್ಬಿ, ಪರಕೀಯರಿಗೆ ಸಿಂಹಸ್ವಪ್ನವಾಗಿ ಕತ್ತಿ ಹಿಡಿದು ನಿಂತ ವೀರ ಮಹಿಳೆಯ  ಚಿತ್ರ ಕಣ್ಣಿಗೆ ಬರುತ್ತದೆ. ಏಪ್ರಿಲ್ ೨೩ರ ಸಂಜೆ Derby ಯಲ್ಲಿ, ಆ ಪಾತ್ರಕ್ಕೆ ಜೀವಬಂದು , ಸ್ವತಃ ಕಿತ್ತೂರು ರಾಣಿ ಚೆನ್ನಮ್ಮನನ್ನೇ ಕಣ್ಮುಂದೆ ಕಂಡ ಅನುಭವ ಆಯಿತು ವೀಕ್ಷಕರಿಗೆ. 

ನಿರೂಪಣೆಯಿಂದ ಆರಂಭವಾಗಿ ಚೆನ್ನಮ್ಮನ ಬಾಲ್ಯ, ಮದುವೆ, ತಾಯ್ತನ, ರಾಜ್ಯಭಾರ, ಹೋರಾಟ ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಹೆಣೆದಿರುವ ಕಥಾನಕ, ಸುಮಧುರ  ಸಂಗೀತ, ಅದ್ಭುತ ನೃತ್ಯ ಹಾಗು ಅಮೋಘವಾದ ಅಭಿನಯ ಸೇರಿ ನೋಡುಗರ  ಕಣ್ಣಾಲಿಗಳು ತುಂಬಿ ಬಂದವು. ಪ್ರತಿ ಹಂತದಲ್ಲೂ  ಕಂಡು ಬಂದ ಅಚ್ಚರಿ ಮೂಡಿಸುವ ಯೋಗಾಸನಗಳು ವೀಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿಸಿದವು.
ಏಕಪಾತ್ರಾಭಿನಯವಾದರೂ,  ಇಲ್ಲಿ  ಮೂಡಿ ಬಂದ ಎಲ್ಲಾ ಪಾತ್ರಗಳೂ - ಮಗು ಚೆನ್ನಮ್ಮನಿಂದ ಹಿಡಿದು, ಮಲ್ಲಸರ್ಜ, ರಾಣಿ ಚೆನ್ನಮ್ಮನ ವರೆಗೆ , ಅಷ್ಟೇ ಅಲ್ಲದೆ ಹುಲಿ, ಕುದುರೆ ಸೇರಿದಂತೆ ವಿವಿಧ ಪ್ರಾಣಿಗಳೂ ಸಹ ಜೀವತಳೆದು ನಮ್ಮ ಮುಂದೆ ನರ್ತಿಸಿದಂತಿತ್ತು. ಕುದುರೆಯ ಚಿತ್ರಣವಂತೂ  ಅವಿಸ್ಮರಣೀಯ. ಪ್ರತಿ ಪಾತ್ರದಲ್ಲೂ ಪರಕಾಯ ಪ್ರವೇಶ ಮಾಡಿ, ಪಾತ್ರದೊಳಗೆ ತಾವೇ ಹೊಕ್ಕು ಸಂಪೂರ್ಣ  ತನ್ಮಯರಾಗಿ ತಮ್ಮದೇ ಭಾವವನ್ನು ನಮ್ಮೆಲ್ಲರಿಗೂ ಉಣಬಡಿಸಿದರು. ಚೆನ್ನಮ್ಮನ ಮದುವೆ ಇರಬಹುದು, ಅವಳು ಮಗುವನ್ನು ಆಡಿಸುವ ಪರಿ, ಮಗನನ್ನು  ಕಳೆದು ಕಂಡ ವೇದನೆ, ಠಾಕರೆಯ ಜೊತೆಗಿನ ವಾಗ್ವಾದ ಇವೆಲ್ಲವನ್ನೂ ನಾವೇ ಸ್ವತಃ ಮಾಡುತ್ತಿದ್ದೀವೇನೋ ಎನ್ನುವ ಅನುಭವ! ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಕ್ಷಣಾರ್ಧದಲ್ಲಿ ಅನಾಯಾಸವಾಗಿ ಪರಿವರ್ತನೆಗೊಂಡ   ಪರಿ ಅಂತ್ಯಂತ ಶ್ಲಾಘನೀಯ. ಅದರೊಂದಿಗೆ ಬಂದ  ಉಪಕರಣಗಳು  ಅತ್ಯಂತ ಪೂರಕವಾಗಿದ್ದು ನೃತ್ಯಕ್ಕೆ ಮತ್ತೊಂದು ಆಯಾಮವನ್ನ ತಂದು ಕೊಟ್ಟಿತು. 
 
ಇನ್ನು ನೃತ್ಯಕ್ಕೆ ಬಂದರೆ ರೇಖಾ  ಗಣಿತವೇ  ಅಡವಿನ ರೂಪದಲ್ಲಿ ಬಂದು ನರ್ತಿಸಿದಂತಿತ್ತು, ಪ್ರತಿ ಸಾಲುಗಳಲ್ಲೂ  ಹಾಸು ಹೊಕ್ಕಿದ್ದ ಅದ್ಭುತ ಯೋಗಾಸನಗಳು, ಅವನ್ನು ಲೀಲಾಜಾಲವಾಗಿ ಪ್ರಯೋಗಿಸಿದ ಬಗೆ, ಆರಂಭದಿಂದ ಅಂತ್ಯದವರೆಗೂ ಕಾಯ್ದುಕೊಂಡು ಬಂದ ದೈಹಿಕ ಶಕ್ತಿ ಹಾಗು ಕಲಾಸಹಿಷ್ಣುತೆ ನೋಡುಗರನ್ನು ನಿಬ್ಬೆರಗಾಗಿಸಿತು. ಚೂರೂ  ಯಾಂತ್ರಿಕವೆನಿಸದೆ ಪಾದರಸದಂತೆ ಸರಿದಾಡುತಿದ್ದ ಪರಿ ಹದಿಹರೆಯದವರನ್ನೂ ನಾಚಿಸುವಂತಿತ್ತು. ಕಲರಿಪಯಟ್ಟುವಿಂದ ಕೂಡಿದ ಕತ್ತಿವರಸೆ ಕಣ್ಣು ಮಿಟುಕಿಸದೆ ನೋಡುವಂತೆ ಇದ್ದರೆ, ಕಟ್ಟಕಡೆಯ ದ್ರಶ್ಯದಲ್ಲಿ ಕಣ್ಣು ತೇವ ಆಗದೆ ಇದ್ದವರೇ ಇಲ್ಲ.

ಈ ಸುಂದರ ರೂಪಕವನ್ನು  ಬರೆದವರು ಮೈಸೂರಿನ ಪ್ರೊಫೆಸರ್ ಜ್ಯೋತಿ ಶಂಕರ್ ಮತ್ತು ಸಂಗೀತ ರಚನೆ ಶ್ರೀವತ್ಸ ಅವರದು.

ಒಟ್ಟಿನಲ್ಲಿ ಇದೊಂದು ಅಭೂತಪೂರ್ವ ವಿಸ್ಮಯ ಹುಟ್ಟಿಸುವ ಅದ್ಭುತ ಅನುಭವವೆಂದರೆ ಅತಿಶಯೋಕ್ತಿ ಅಲ್ಲ. 
ಡಾ. ವಸುಂಧರಾರವರ ಕಲಾಸೇವೆ ಹೀಗೇ ಮುಂದುವರೆದು ನಮಗೆ ಹೀಗೆಯೇ ಕಲೆಯ ರಸದೌತಣವನ್ನ ಉಣಬಡಿಸುತ್ತ ಇರಲಿ ಎಂದು ಆಶಿಸೋಣ

~  ಸುಮನಾ ನಾರಾಯಣ್
ನರಸಿಂಹಕೌತ್ವಂ

ನಮ್ಮೂರಿನ ಕೋಕೆನ್ ಹಾಫ್ ದಲ್ಲಿ ಶ್ರೀಹರ್ಷಧ್ವನಿ!

ಕನ್ನಡ ಬಳಗದ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಬಂದ ಅತಿಥಿಗಳನ್ನು ತಮ್ಮ ಮನೆಗೂ ಆಹ್ವಾನಿಸಿ ಗೌರವಿಸಿ ಕೆಲವೊಂದು ಆಪ್ತ ಮಿತ್ರರೊಂದಿಗೆ ಅವರ ಅನುಸಂಧಾನವನ್ನು ಏರ್ಪಡಿಸಿ ಸವಿಯುವ ಪರಿಪಾಠ ಡೋಂಕಾಸ್ಟರಿನ ಕನ್ನಡಾಭಿಮಾನಿ ದಂಪತಿಗಳಾದ ಸುಮನಾ ಮತ್ತು ಗಿರೀಶ್ ದಂಪತಿಗಳು ಇಟ್ಟುಕೊಂಡಿದ್ದರ ಲಾಭವನ್ನು ನಾನು ಅನೇಕ ಸಲ ಪಡೆದಿದ್ದೇನೆ. ಈ ಸಲವೂ (ಎಪ್ರಿಲ್, 2022) ಡಾ ವಸುಂಧರಾ ದೊರೆಸ್ವಾಮಿ ಮತ್ತು ಶ್ರೀಹರ್ಷ ದಂಪತಿಗಳೂ ಸಹ ಆಗಮಿಸಿದ್ದರು. 
ಶನಿವಾರದ ಡಾರ್ಬಿ ಕಾರ್ಯಕ್ರಮದ ಮರು ದಿನ ಹಲವಾರು ಕನ್ನಡ ಬಳಗ ಮತ್ತು ಅದರ ಯಾರ್ಕ್ ಶೈರ್ ಚ್ಯಾಪ್ಟರ್ ದ ಸದಸ್ಯರು ಕಿಕ್ಕಿರಿದು ನೆರೆದಿದ್ದರು ಆ ''ಟ್ಯೂಲಿಪ್ ಕಿಚನ್’''ನಲ್ಲಿ. ವಿಶಾಲವಾದ ಅಡಿಗೆಯ ಮನೆಯ ಒಂದು ಗೋಡೆಯಮೇಲಿನ ಹಸಿರು ಟ್ಯೂಲಿಪ್ಪುಗಳ ಸಾಲಿನ ಚಿತ್ರ  ಹಾಲಂಡಿನ ಸುಪ್ರಸಿದ್ಧ  ಕೋಕೆನ್ ಹಾಫ್ ತೋಟವನ್ನು ನೆನಪಿಸುತ್ತದೆ.  ಕೋಕೆನ್ ಹಾಫ಼ (Keukenhof) ಅಂದರೆ ಡಚ್ ಭಾಷೆಯಲ್ಲಿ 'ಕಿಚನ್ ಗಾರ್ಡನ್ ಅಥವಾ ಕೋರ್ಟ್’ ಎಂದು. ಆ ಗೋಡೆಯ ಮುಂದೆ ನೆರೆದ ಎಲ್ಲ ಅತಿಥಿಗಳು ಮತ್ತು ಕನ್ನಡ ಮನಸ್ಸುಗಳು ಸಂಭ್ರಮದಿಂದ ಫೋಟೊ ತೆಗೆಸುಕೊಳ್ಳುವದೂ ಒಂದು ರಿಚುಅಲ್ ಆಗಿದೆ. ಈ ಹಿಂದೆ ಇಲ್ಲಿಗೆ ಬಂದಿದ್ದ  ಕೆಲವು ಅತಿಥಿಗಳೆಂದರೆ ಗುರುರಾಜ ಕರ್ಜಗಿ, ನಾಗತಿಹಳ್ಳಿ ಚಂದ್ರಶೇಖರ್, ಸುಮನ್ ನಗರ್ಕರ್ ದಂಪತಿಗಳು, ಚಕ್ರವರ್ತಿ ಸೂಲಿಬೆಲೆ, ಸೃಜನ್, ರಾಜೇಶ್ ಕೃಷ್ಣನ್, ಬಿ ಆರ್ ಛಾಯಾ ಮುಂತಾದವರು. ಈ ಸಲ ವಸುಂಧರಾ ಅವರು ತಮ್ಮ ಚಿಕ್ಕದಾದರೂ ಮನಮುಟ್ಟುವ, ಅತ್ಮೀಯ ಭಾಷಣದ ನಂತರ ಮೃಷ್ಟಾನ್ನವನ್ನು ಸೇವಿಸಿ ಹೊರಟಾದ ಮೇಲೆ ಶ್ರೀಹರ್ಷ ಅವರ ಹರಟೆ ಮಾತುಕತೆಯಲ್ಲಿ ನಮ್ಮೊಡನೆ ತಮ್ಮ ಮನಸ್ಸು, ವಿದ್ವತ್ತು ಅಲ್ಲದೇ ಸರಳ ವ್ಯಕ್ತಿತ್ವವನ್ನೇ ತೆರೆದಿಟ್ಟರು. ಶನಿವಾರದ ಸಭೆಯ ವೇದಿಕೆಯ ಮೇಲಿಂದ ನಮ್ಮನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ  ’ಪ್ರೂ ಸೆಲೆಬ್ರಿಟ” ಶ್ರೀಹರ್ಷ ಇವರೇನಾ ಅನ್ನುವಷ್ಟು ಅವರ ವಿಭಿನ್ನ ಪಾರ್ಶ್ವವನ್ನು ನೋಡಿದೆ. ಅವರ ಜೊತೆಗೆ ಕಡಲು ದಾಟಿ ಅರ್ಧ ದಾರಿ ಅಮೇರಿಕೆಯಿಂದ ಹಾರಿ ಬಂದಿದ್ದ ಅವರ ಪತ್ನಿ ಶ್ರೀಮತಿ ಸ್ವರ್ಣಲತಾ ಸಹ ತಮ್ಮ ಸರಳ ಆತ್ಮೀಯ ಮಾತುಕತೆಯಿಂದ ನೆರೆದ ಸ್ನೇಹಿತರ ಮನಸ್ಸನ್ನು ಸೂರೆಗೊಂಡರು. ಅವರಿಬ್ಬರ ಮಿಲನದ ಪ್ರೇಮಕಥನವನ್ನು ಸಹ ಹಂಚಿಕೊಂಡು ಬೆರಗು ಹುಟ್ಟಿಸಿದರು. ಮೂರು ನಾಲ್ಕು ಹಾಡುಗಳು, ಮಿಮಿಕ್ರಿ, ವ್ಯಂಗೋಕ್ತಿ,ಭಗವದ್ಗೀತೆಯ ಶ್ಲೋಕಗಳು, ಮಂಕುತಿಮ್ಮನ ಕಗ್ಗಗಳನ್ನು ಉದ್ಧರಿಸುತ್ತ ನಮ್ಮೊಡನೆ ಕಳೆದ ನಾಲ್ಕೈದು ತಾಸಿನ ಅವಿಸ್ಮರಣೀಯ ಅನುಭವದೊಂದಿಗೆ ನಾನು ಇವರೇ ನಮ್ಮ ಸಂಸ್ಕೃತಿಯ ನಿಜವಾದ ರಾಯಭಾರಿ ಅಂದುಕೊಳ್ಳುತ್ತ ಮನೆಗೆ ಮರಳಿದೆ.  

~ ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್


ಫೋಟೋಕೃಪೆ :'ಡಾ ದಿವ್ಯತೇಜ; ಡಾ LN ಗುಡೂರ್; ಡಾ. ರಾಂಶರಣ್ ; ಶ್ರೀವತ್ಸ ದೇಸಾಯಿ; ಡಾ ನವೀನ್ C