ಊರಿಂದ ಕಾಗದ ಬಂತು

  • ವತ್ಸಲ ರಾಮಮೂರ್ತಿ

ನಾನು ಈ ಸಲ ಬೆಂಗಳೂರಿಗೆ ಹೋದಾಗ ನಮ್ಮ ಫ್ರೆಂಡ್ ಮನೆಗೆ ಹೋಗಿದ್ದೆ. ಇದು ಅವರು ಹೇಳಿದ ಕಥೆ. ಆ ಮಾವಿನ ಕಾಯಿಗೆ ಒಂದಿಷ್ಟು ಉಪ್ಪು ಖಾರ ಹಚ್ಚಿ ಇಟ್ಟಿದ್ದೇನೆ. ಮೆಲ್ಲಿ, ಎಂಜಾಯ್ ಮಾಡಿ, ಚೆನ್ನಾಗಿತ್ತ ಹೇಳಿ.

ಚಳಿಗಾಲದ ದಿನ, ಹೊರಗಡೆ ಬೆಳಿಗ್ಗೆಯಷ್ಟೇ ಬಿದ್ದ ತೆಳ್ಳನೆಯ, ನವಿರಾದ ಹಿಮದ ಪದರದಲ್ಲಾವರಿಸಿದ ಹೊರಾಂಗಣ, ಒಣಗಿ ನಿಂತ ಮರಗಳು ಕಪ್ಪು-ಬಿಳುಪಿನ ಸುಂದರ ಚಿತ್ರದಂತಿತ್ತು. ಹಲವು ಕಾಲ ಮೋಡದ ಹಚ್ಚಡವನ್ನು ಹೊದ್ದು ಬಿದ್ದಿದ್ದ ಸೂರಜ್ ಕುಮಾರ್ ಈ ಮನೋಹರ ದೃಶ್ಯವನ್ನು ವೀಕ್ಷಿಸಲೆಂದೇ ಹಣಕಿ ಹಾಕಿದ್ದ. ಆತ ತಂದ ಹೊಂಬಿಸಿಲನ್ನು ಆಸ್ವಾದಿಸುತ್ತ ನಾನು ಕಿಟಕಿಯ ಪಕ್ಕದ ಆರಾಮಾಸನದಲ್ಲಿ ಒರಗಿ ತೂಕಡಿಸುತ್ತಿದ್ದೆ. ಬಾಗಿಲ ಬಳಿ ಟಪ್ ಎಂದು ಟಪಾಲು ಬಿದ್ದ ಸದ್ದಾಯಿತು. ಕುತೂಹಲ ತಾಳಲಾರದೇ ಹೋಗಿ ನೋಡಿದರೆ, ಇಂಡಿಯಾದಿಂದ ಬಂದ ಪತ್ರ! ಅದರಲ್ಲೂ ನನ್ನ ಪ್ರಿಯ ತಂಗಿಯ ಕೈಬರಹದಲ್ಲಿರುವ ಅಡ್ರೆಸ್!! ತೆಗೆದರೆ, ೬ ಪೇಜುಗಳ ಕಾಗದ. ಏನಪ್ಪಾ! ಅಂಥ ಮಹತ್ವದ್ದು, ಇಷ್ಟೂದ್ದದ್ದು ಎಂದು ಓದ ತೊಡಗಿದೆ. 

ಮಾತೃಶ್ರೀ ಸಮನಾಳದ ಅಕ್ಕನಿಗೆ ನಿನ್ನ ತಂಗಿಯಾದ ಗುಂಡಮ್ಮ ಮಾಡುವ ನಮಸ್ಕಾರಗಳು. ಉllಕುllಶಲೋಪರಿ ಸಾಂಪ್ರತ (ಪರವಾಗಿಲ್ವೇ, ಗೌರವಯುತವಾಗಿ ಬರೆದಿದ್ದಾಳೆ). ನಾವೆಲ್ಲ ಇಲ್ಲಿ ತಿಂದು, ಉಂಡು, ಹರಟೆ ಹೊಡೆದು, ಸಿನಿಮಾ ನೋಡಿಕೊಂಡು ಚೆನ್ನಾಗಿದ್ದೇವೆ (ನನಗೆ ಹೊಟ್ಟೆ ಉರಿ, ಈ ಚಳಿ ದೇಶದಲ್ಲಿ ಯಾವ ಕನ್ನಡ ಸಿನಿಮಾ ಬರುತ್ತೆಂತ). 

ಮುಖ್ಯ ವಿಷಯವೆಂದರೆ, ನಾನು, ನನ್ನೆಜಮಾನರು ವಿದೇಶ ಪ್ರವಾಸ ಮಾಡೋದಂತ ನಿಶ್ಚಯಿಸಿದ್ದೇವೆ. ನಿನಗೆ ಗೊತ್ತಿರುವ ಹಾಗೆ ನನ್ನ ಗಂಡನಿಗೆ ಪಿಂಚಣಿ ದೊರಕಿದೆ. ನೀನೇ  ಎಷ್ಟೋ ಸಲ “ಬಾರೆ, ನಮ್ಮೂರಿಗೆ, ಬೇಕಾದರೆ ಟಿಕೆಟ್ ಕಳಿಸ್ತೇನೆ” ಅಂತ ಕರೀತ್ಲೇ ಇರ್ತೀಯ. ನಾನೇ, “ಬೇಡ ಕಣೇ, ನಾವಿಬ್ಬರೂ ಬಹಳ ಮಡಿ, ಆಚಾರವಂತರು, ಸರಿ ಹೋಗಲ್ಲ” ಅಂತ ದೂಡಿದ್ದೇನೆ. ನೀನು, “ಪರವಾಗಿಲ್ಲ, ನಾನು ನೋಡ್ಕೋತೀನಿ” ಅಂತ ಧೈರ್ಯ ಕೊಟ್ಟಿದೀಯ. ನಮ್ಮ ಮಠದವರು ಮುದ್ರೆ ಒತ್ತಿ, ಪಂಚಗವ್ಯ ಕುಡಿಸಿ, “ದೇವರು ಕ್ಷಮಿಸುತ್ತಾನೆ, ಪರಂಗಿ ದೇಶ ಪ್ರವಾಸ ಮಾಡಿದ್ದಕ್ಕೆ” ಅಂತ ಅಭಯ ನೀಡಿದ್ದಾರೆ. ಈಗ ಹೊರಟಿದ್ದೇವೆ. ಟಿಕೆಟ್ಟಿಗೆ ೨ ಲಕ್ಷ ಆಗುತ್ತೆ. ನೀನೇ ಮಾಡಿಸಿ ಕಳಿಸಿಬಿಡು, ರಾಹು ಕಾಲದಲ್ಲಿ ಮಾತ್ರ ಟಿಕೆಟ್ ತೊಗೋಬೇಡ (ಗ್ರಹಚಾರ, ನನಗೇನು ಗೊತ್ತು, ರಾಹು ಕಾಲ ಯಾವಾಗ ಅಂತ). ನಾನು ಇಳಕಲ್ ಸೀರೆ ಕಚ್ಚೆ ಉಟ್ಟು,  ಗುಂಡಗೆ ಕುಂಕುಮ ಹಚ್ಚಿ, ಎಣ್ಣೆ ತೀಡಿ ತಲೆ ಬಾಚಿ, ಹೂವ ಮುಡಿದಿರುತ್ತೇನೆ. ಪ್ರತಿದಿನ ನನಗೆ ಮಲ್ಲಿಗೆ ಹೂವ ಬೇಕು, ತೆಗೆದಿಟ್ಟಿರು. ಬಾವನವರಿಗೆ ಗಂಧ ತೇಯ್ದು ಮುದ್ರೆ ಹಾಕಿಕೊಳ್ಳಲು ರೆಡಿ ಮಾಡಿಟ್ಟಿರು. ನಿಮ್ಮೂರಲ್ಲಿ ವಿಪರೀತ ಚಳಿ, ನಮ್ಮ ರೂಮು ಬಿಸಿಯಾಗಿರಬೇಕು. ನಮಗೆಂತ ೬ ಜೊತೆ ಕಾಲು ಚೀಲ, ಟೋಪಿ ಮತ್ತು ಮಫ್ಲರ್ ಇಟ್ಟಿರು. 

ನಮ್ಮ ದಿನಚರಿ ಹೀಗಿರುತ್ತೆ: ಬೆಳಗ್ಗೆ ೫ ಗಂಟೆಗೆ ಸುಪ್ರಭಾತ. ಸ್ನಾನಕ್ಕೆ ಬಿಸಿ ಬಿಸಿ ನೀರು ರೆಡಿ ಇರಲಿ. ಆಮೇಲೆ ಜೋರಾಗಿ ವಿಷ್ಣು ಸಹಸ್ರನಾಮ ಪಠನ (ದೇವರೇ ಗತಿ, ಪಕ್ಕದ ಮನೆ ಪೀಟರ್ ಏನೆಂದಾನು). ೬:೩೦ಕ್ಕೆ ಬೆಳಗಿನ ತಿಂಡಿ. ಉಪ್ಪಿಟ್ಟು, ದೋಸೆ, ಗೊಜ್ಜವಲಕ್ಕಿ, ಅಕ್ಕಿ ರೊಟ್ಟಿ-ಮಾವಿನಕಾಯಿ ಚಟ್ನಿ ಏನಾದರೂ  ಮಡಿಯಲ್ಲಿ ಮಾಡಿಟ್ಟಿರು. ಫಿಲ್ಟರ್ ಕಾಫಿ ಮರೀಬೇಡ. ೧೦:೩೦ಕ್ಕೆ ಒಂದು ರವೇ ಉಂಡೆ, ಒಂದು ಗ್ಲಾಸ್ ಬಾದಾಮಿ ಹಾಲು ಸಾಕು. ೧:೩೦ಕ್ಕೆ ಊಟ. ಈರುಳ್ಳಿ-ಗೀರುಳ್ಳಿ, ಕ್ಯಾರೆಟ್, ಬೀಟ್ ರೂಟ್ ಮಡಿಗೆ ಆಗಲ್ಲ. ಹುಳಿಗೆ ಪಡವಲ ಕಾಯಿ, ಗೋರಿಕಾಯಿ, ಸುವರ್ಣ ಗಡ್ಡೆ ಆದೀತು. ಖಾರವಾಗೇ ಇರಲಿ. ಜೊತೆಗೆ ಸಂಡಿಗೆ ಕರಿದು ಬಿಡು. ಚಟ್ನಿಪುಡಿ, ಮಾವಿನಕಾಯಿ ಮಿಡಿ ಉಪ್ಪಿನಕಾಯಿ, ಗೊಜ್ಜು ಎಲ್ಲ ಇಟ್ಟಿರು. ಬೆಣ್ಣೆ ಕಾಸಿದ ತುಪ್ಪ ಅವಶ್ಯ. ಊಟವಾದ ಮೇಲೆ ಮಲಗಲು ಚಾಪೆ, ದಿಂಬು ಸಾಕು. ಎದ್ದ ಮೇಲೆ, ಬಿಸಿ ಕಾಫಿ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಕೊಬ್ರಿ ಮಿಠಾಯಿ ಬಯೋ ಆಡ್ಸೋಕಿದ್ರೆ ಒಳ್ಳೇದು. ರಾತ್ರಿ ಊಟ ಸಿಂಪಲ್ಲಾಗೇ  ಇರಬೇಕು. ಅನ್ನ-ಸಾರು, ತೊವ್ವೆ, ಚಪಾತಿ, ಮೊಸರು. ಮಲಗೋಕ್ಮುಂಚೆ ಒಂದ್ಲೋಟ ಹಾಲು. ಇನ್ನೇನೂ ಬೇಡ ಕಣೆ, ನಿನಗೆ ತೊಂದ್ರೆ ಆಗ್ಬಿಡತ್ತೆ. ಆಮೇಲೆ ಊರು ತೋರಿಸ್ಬೇಕು. ರಾಣಿ ಅರಮನೇ, ಒಡವೆ ಎಲ್ಲಾನೂ ಬೆಚ್ಚಗಿನ ಕಾರಲ್ಲಿ ಕರಕೊಂಡು ಹೋಗೇ ಅಕ್ಕಮ್ಮ.

ಇನ್ನ ೩ ಪೇಜ್ ಇದೇರಿ. ಬರೀ  ಊಟ ತಿಂಡಿಗೇ ಈ ಪಾಟಿ ಗಲಾಟೆ ಮಾಡಿದ್ದಾಳಲ್ಲ! ನಮ್ದೋ ಸೆಮಿ ಡಿಟ್ಯಾಚ್ಡ್ ಮನೆ; ದೇವರ ಮನೆಯಿಲ್ಲ, ತುಳಸಿ ಗಿಡವಿಲ್ಲ. ಏನಂತಾಳೋ, ಯಾರಿಗ್ಗೊತ್ತು? ಅದಕ್ಕೆ ಒಂದು ಪಿಲಾನು ಮಾಡಿದೆ. ತಕ್ಷಣವೇ, ಉತ್ತರ  ಬರೆಯಲು ಕುಳಿತೆ. 

ಪ್ರೀತಿಯ ತಂಗಚ್ಚಿಯಾದ ಗುಂಡು ಬಾಯಿಗೆ, ನಿನ್ನ ಅಕ್ಕ ಮಾಡುವ ಅನಂತ ಆಶೀರ್ವಾದಗಳು. ನೀನು ಬರುತ್ತಿ ಅಂತ ತಿಳಿದು, ವಿಪರೀತ ಸಂತೋಷವಾಗಿ ಕುಣಿದುಬಿಟ್ಟೆ. ನಮ್ಮ ಮನೆಗೆ ಖಂಡಿತ ಬಾರೆ. ಭಾವನವರನ್ನು ಕರೆದು ತಾರೆ. ನಮ್ಮ ಕುಟೀರ ನಿಮಗೆ ಇಷ್ಟವಾಗಬಹುದೆಂದು ಆಶಿಸುವೆ. ನಾವಿರುವುದು ಸೆಮಿ ಡಿಟ್ಯಾಚ್ಡ್ ಮನೆ, ಅಂದರೆ ಒಂದಕ್ಕೆ ಒಂದು ಅಂಟಿಕೊಂಡಿರುವ ಎರಡು ಮನೆಗಳಲ್ಲಿ ಒಂದು. ಪಕ್ಕದ ಮನೆಯಲ್ಲಿರುವವರು ಇಂಗ್ಲೀಷ್ ಜನ. ಅವರಿಗೆ ಕನ್ನಡ ಬರಲ್ಲ. ನೀನು ಬೆಳ್ಳಂಬೆಳಗ್ಗೆ ವಿಷ್ಣು ಸಹಸ್ರನಾಮ ಪಠಿಸಿದರೆ, ಪೋಲೀಸಿಗೆ ಕಂಪ್ಲೇಂಟ್ ಕೊಟ್ಟಾರು. ಒಳ್ಳೇ ಚಳಿಗಾಲದಲ್ಲಿ ಬರಬೇಕು ಅಂತೀಯ. ಇಲ್ಲಿ ಈಗ ಕಿಟಕಿ ಮೇಲೆಲ್ಲಾ ಮಂಜು ಮುಸುಕಿದೆ. ಗಡಗಡ ನಡುಗಿಸುವ ಅಸಾಧ್ಯ ಚಳಿ ಕಣೆ. ಹಲ್ಲು ಕಟಕಟಗುಟ್ಟುತ್ತೆ. ನಿನ್ನ ಕಚ್ಚೆ ಸೀರೆ ನಡಿಯಲ್ಲ. Trousers, leggings, sweaters ಅತ್ಯವಶ್ಯ. ಕಾಲಿಗೆ ದೊಡ್ಡ ಬೂಟು ಹಾಕಬೇಕು. ಮನೆ ಹೊರಗೆ ಕಾಲಿಟ್ಟಾಗ, ಮಂಜಿನ ಮೇಲೆ ಕಾಲು ಜಾರಿ ಬಿದ್ದು, ನಿನ್ನ, ಭಾವನವರ ಸೊಂಟ, ಮಂಡಿ ಮೂಳೆ ಮುರಿದ್ರೇನು ಮಾಡೋದು? ಆಸ್ಪತ್ರೇಲಿ ಮ್ಲೇಚ್ಛರ ಮಧ್ಯ ಬಿದ್ಕೊಂಡು ಸೂಪು, ಬ್ರೆಡ್ಡು ತಿನ್ಬೇಕಷ್ಟೇ; ಮೇಲಿಂದ ಚೀಸ್ ಉದುರಿಸಿ ಕೊಟ್ಟೇನು. ಮನೆಯಲ್ಲಿ ಟಿ.ವಿ ಬಿಟ್ಟರೆ ಇನ್ನೇನಿಲ್ಲ. ಅದರಲ್ಲೂ ಕನ್ನಡ ಬರಲ್ಲ; ಹತ್ರದಲ್ಲೆಲ್ಲೂ ಕನ್ನಡ ಸಿನಿಮಾ ಬರಲ್ಲ ಕಣೇ. ಪಕ್ಕದ ಮಾನೆಯವರ್ಯಾರೂ ಹರಟೆ ಕೊಚ್ಕೋಕೆ ಬರಲ್ಲ ಕಣೇ, ಅವಕ್ಕೆ ಕನ್ನಡ ಬಂದ್ರೆ ತಾನೇ? ಆದ್ರೂನೆ, ನೀನು ಅಪರೂಪಕ್ಕೆ ಬರೋದು ಅಪಾರ ಸಂತೋಷ ಕಣೆ. ಖಂಡಿತ ಬಾರೆ. ಎಲ್ಲ ರೆಡಿ ಮಾಡಿಟ್ಟಿರ್ತೇನೆ. ಇತಿ ನಿನ್ನ ಪ್ರೀತಿಯ ಅಕ್ಕ, ವೆಂಕೂಬಾಯಿ 

ಈ ಪತ್ರಕ್ಕಿನ್ನೂ ಗುಂಡಮ್ಮನ ಉತ್ತರ ಬಂದಿಲ್ಲ. ಹ್ಹ, ಹ್ಹ, ಹ್ಹ ! ಹೇಗಿದೆ ನನ್ನ ಪಿಲ್ಯಾನು? 

‘ಸಂಕಟ ಬಂದಾಗ ವೆಂಕಟರಮಣ’

ಸಂಕಟ ಬಂದಾಗ ವೆಂಕಟರಮಣ ಎಂಬುದು ಕನ್ನಡದಲ್ಲಿ ಬಹಳೇ ಪ್ರಚಲಿತ ಇರುವ ಗಾದೆ . ನಮ್ಮ ಪೂರ್ವಜರು ಬಹಳ
ಅನುಭವದಿಂದ ಹೇಳಿರುವ ಮಾತು . ನನಗೂ ಸಹ ಯಾಕೋ ಇದರ ಮೇಲೆ ಸ್ವಲ್ಪ ಹರಟೆ ಹೊಡೆಯಬೇಕು ಎಂದು ಅನಿಸಿತು .
ಹರಟೆ ಎಂದ ತಕ್ಷಣ ನಮ್ಮೂರಿನ ಆಲದ ಮರದ ಹರಟೆಯ ಕಟ್ಟೆಯ ನೆನಪು ಬರುತ್ತದೆ . ಸಂಜೆಯಾದರೆ ಊರ ಜನರು ಸೇರಿ
ಹರಟೆ ಹೊಡೆಯುತ್ತಿದ್ದ ಆ ಕಟ್ಟೆ ಇನ್ನೂ ಇದೆ , ಆದರೆ ಈಗ ಹರಟೆ ಹೊಡೆಯುವರಿಲ್ಲ ಬದಲು ಫೋನು ಹಿಡಿದುಕೊಂಡು
ವಿಡಿಯೋ ನೋಡುವ ಪಡ್ಡೆ ಹುಡುಗರು ಇದ್ದಾರೆ . ನಾನೂ ಇಲ್ಲಿ ಕುಳಿತು ಒಂದು ಕಟ್ಟೆ ನೋಡುತ್ತಿದ್ದೆ , ಹರಟೆ ಹೊಡೆಯಲು .
ಅನಿವಾಸಿ ಕಟ್ಟೆ ಸಿಕ್ಕಿತು . ಒಬ್ಬನೇ ಕುಳಿತು ಹರಟೆ ಹೊಡೆದಿದ್ದೇನೆ. ಸಮಯ ಸಿಕ್ಕರೆ ಓದಿ , ಹಾಗೆಯೆ ಒಂದೆರಡು ಸಾಲು
ಅನಿಸಿಕೆಗಳನ್ನು ದಯವಿಟ್ಟು ಗೀಚಿ .


ಸಂಕಟ ಬಂದಾಗ ಸಹಾಯಕ್ಕೆ ಮೊರೆಹೋಗುವುದು ಎಲ್ಲ ಜೀವಿಗಳ ಸಹಜವಾದ ಸ್ವಭಾವ . ಭೂಮಂಡಲದಲ್ಲಿ ತಾನೇ
ಶ್ರೇಷ್ಠನೆಂದು ಬೀಗುವ ಮನುಜ ಇದಕ್ಕೇನು ಹೊರತಾಗಿಲ್ಲ . ಸಂಕಟ ಬಂದಾಗ ಅಥವಾ ಬರಿಸಿಕೊಂಡಾಗ ಹತ್ತು ಹಲವಾರು
ಮಾರ್ಗಗಳ ಅನ್ವೇಷಣೆಯಲ್ಲಿ ತೊಡಗುತ್ತಾನೆ . ಅಡ್ಡದಾರಿ ಹುಡುಕುವದು , ಮೋಸ ಮಾಡುವದು , ಇನ್ನೊಬ್ಬರಿಗೆ
ಅನ್ಯಾಯವೆಸಗುವದು , ಲಂಚ ಕೊಡುವದು ಇವೆಲ್ಲವೂ ಫಲ ನೀಡದಿದ್ದಾಗ ಕೊನೆಯ ಪ್ರಯತ್ನವಾಗಿ ದೇವರಿಗೆ ಮೊರೆ
ಹೋಗುವದು ಸಾಮಾನ್ಯ . ಎಷ್ಟೋ ಜನರಿಗೆ ನಿತ್ಯ ಜೀವನದಲ್ಲಿ ಲಂಚವನ್ನು ಕೊಟ್ಟು, ಪಡೆದು ಅಸಾಧ್ಯವಾದ ಕೆಲಸಗಳನ್ನು
ಸರಾಗವಾಗಿ ಗಿಟ್ಟಿಸಿಕೊಂಡು , ಬಂದ ಸಂಕಟವನ್ನು ಹಾಗೆಯೆ ಪರಿಹರಿಸಿಕೊಂಡ ಅಭ್ಯಾಸ .

ಸಂಕಟದ ಪರಿಸ್ಥಿತಿ ಬಂದಾಗ , ತಮ್ಮ ಮನಸಿನಂತೆ ದೇವರ ಮನಸೂ ಇರಬಹುದೆಂದು ಊಹಿಸಿ , ದೇವರಿಗೂ ಸಹ
ಲಂಚಕೊಡಲು ಮುಂದಾದ ಮಹಾಶಯರಿಗೆ ಏನೂ ಕೊರತೆಯಿಲ್ಲ . ಲಂಚ ಕೊಡುವ ರೀತಿ ಮಾತ್ರ ವಿಭಿನ್ನವಾಗಿರಬಹುದು .
ಇತ್ತೀಚಿಗೆ ನಮ್ಮ ಹಳ್ಳಿಯಲ್ಲಿ ನಡೆದ ಪಂಚಾಯತ ಸದಸ್ಯರ ಚುನಾವಣೆಗೆ ಬಸಪ್ಪ ಶೆಟ್ಟಿ ಸ್ಪರ್ಧಿಸಿದ್ದ . ಅಂಗಡಿಯ ವ್ಯವಹಾರ
ಚನ್ನಾಗಿದ್ದಿದ್ದರಿಂದ ಒಳ್ಳೆಯ ಹಣವನ್ನು ಸಂಪಾದಿಸಿದ್ದ . ಅದೆಷ್ಟೇ ಹಣ ಖರ್ಚಾದರೂ ಚುನಾವಣೆಯನ್ನು ಗೆಲ್ಲಲೇ ಬೇಕೆಂದು
ಶಪಥಪಟ್ಟಿದ್ದ . ಮೊದಲಿನಿಂದಲೂ ದಾಯಾದಿಯಾಗಿದ್ದ ಎದುರು ಮನೆಯ ನಂಜಪ್ಪನಿಗೆ ವಿಷಯ ಗೊತ್ತಾಗಿ ಹೊಟ್ಟೆಯಲ್ಲಿ ಕಸಿವಿಸಿ ಉಂಟಾಗಿ ನಿದ್ರೆಬಾರದಾಗಿತ್ತು. ಹೇಗಾದರೂ ಮಾಡಿ ಶೆಟ್ಟಿಯನ್ನು ಸೋಲಿಸಲೇ ಬೇಕೆಂದು ತಂತ್ರವನ್ನು ಹೂಡತೊಡಗಿದ್ದ .ಆದರೆ ಶೆಟ್ಟಿಯಲ್ಲಿದ್ದಷ್ಟು ಹಣವೂ ಇರಲಿಲ್ಲ ಜನಬಲವೂ ಇರಲಿಲ್ಲ . ಹಗಲೂ ರಾತ್ರಿ ಕೊರಗುತ್ತಿದ್ದ ಅವನಿಗೆ ಕೊನೆಗೊಂದು ದಿನ ಸರಳ ಉಪಾಯ ಹೊಳೆಯಿತು . ತಿರುಪತಿ ತಿಮ್ಮಪ್ಪನಿಗೆ ಮೊರೆ ಹೋದ . ಶೆಟ್ಟಿಯನ್ನು ಚುನಾವಣೆಯಲ್ಲಿ ಸೋಲಿಸಿದರೆ ತಿಮ್ಮಪ್ಪನ
ಹುಂಡಿಗೆ ೫೦೦೧ ರೂಪಾಯಿ ಹಾಕುವದಾಗಿ ಹರಕೆ ಹೊತ್ತ . ವಿಷಯ ಶೆಟ್ಟಿಗೆ ಗೊತ್ತಾಗಿ ಅವನಿಗೂ ಕಸಿವಿಸಿಯಾಗತೊಡಗಿತು .
ಊರ ಜನರಿಗೆ ತಾನು ಎಷ್ಟೊಂದು ಹಣವನ್ನು ಖರ್ಚು ಮಾಡಿದರೂ ತಿಮ್ಮಪ್ಪನ ಕರುಣೆ ನಂಜಪ್ಪನಿಗೆ ಗಿಟ್ಟಿಬಿಟ್ಟರೆ ಏನು ಗತಿ ?
ಎಂದು ದಿನವಿಡೀ ತವಕಾಡತೊಡಗಿದ . ಯಾವುದಕ್ಕೂ ಸ್ವಲ್ಪನೂ ಅಪಾಯವನ್ನು ತೆಗೆದುಕೊಳ್ಳಬಾರದು ಎಂದು ಅವನ
ಸ್ನೇಹಿತರೆಲ್ಲ ಹೇಳತೊಡಗಿದ್ದರು . ನಿದ್ರೆಬಾರದ ರಾತ್ರಿಯಲ್ಲಿ ಒಂದು ನಿರ್ಧಾರ ತೆಗೆದೇಕೊಂಡ . ನಂಜಪ್ಪನಿಗಿಂತ ಎರಡು ಪಟ್ಟು
ಹಣವನ್ನು ಹುಂಡಿಗೆ ಹಾಕುವದಾಗಿ ತಾನೂ ಸಹ ತಿಮ್ಮಪ್ಪನಿಗೊಂದು ಹರಕೆ ಹೊತ್ತೇಬಿಟ್ಟ . ಈಗ ನೀವೇ ಹೇಳಿ ತಿಮ್ಮಪ್ಪ ಏನು
ಮಾಡಬೇಕೆಂದು ? ತಾವೇ ಬರಿಸಿಕೊಂಡ ಇವರ ಸಂಕಟವನ್ನು ಅವನು ಹೇಗೆ ಬಗೆಹರಿಸಬೇಕೆಂದು ? . ಇವರಿಬ್ಬರು ತಮ್ಮ
ವಯಕ್ತಿಕ ಕಿತ್ತಾಟದಲ್ಲಿ ತಿಮ್ಮಪ್ಪನನ್ನು ಇಕ್ಕಟ್ಟಿಗೆ ಸಿಕ್ಕಿಸಿಹಾಕಿದ್ದು ಮಾತ್ರ ನಿಜ .ಎಲ್ಲ ಕಡೆಯಲ್ಲೂ ಇಂಥ ಮಹಾಶಯರಿಗೇನು
ಕೊರತೆಯಿಲ್ಲ ಹಾಗೆಯೆ ದೇವರನಿಗೂ ಸಂಕಟ ತಪ್ಪಿದ್ದಲ್ಲ .
ಹಣವಿದ್ದವರು ದೇವರಿಗೆ ಈ ರೀತಿಯ ಹಣದಾಸೆ ತೋರಿಸಿದರೆ ಇನ್ನು ಹಣವಿಲ್ಲದವರು ಏನು ಮಾಡಬೇಕು ? ಹಾಗೇನೆಂದುಕೊಳ್ಳಬೇಡಿ ! ಏನೂ ಇಲ್ಲದಿದ್ದರೂ ಏನೋ ಒಂದು ವಿಚಾರಿಸಿ ಕೊನೆಗೊಂದು ಮಾರ್ಗವನ್ನು ಕಂಡುಕೊಳ್ಳುವವರಿಗೇನು ಕೊರತೆಯಿಲ್ಲ.

ನಮ್ಮ ‘ಕೆ ಎಂ ಸಿ’ ಯ ಕಾಲೇಜಿನ ಅವರಣದಲ್ಲೊಂದು ಹನುಮಪ್ಪನ ಮಂದಿರವಿತ್ತು . ಪ್ರತಿ ಶನಿವಾರ ಸಾಯಂಕಾಲ ತಪ್ಪದೆ ಕೆಲವು ಹುಡುಗರು ಮತ್ತು ಹುಡುಗಿಯರು ಹನುಮಪ್ಪನನ್ನು ಭಕ್ತಿಯಿಂದ ಪ್ರದಕ್ಷಿಣೆ ಹಾಕುತ್ತಿದ್ದರು . ಅವರು ನಿಜವಾದ ಭಕ್ತರು ಎಂಬುದರಲ್ಲಿ ಸಂಶಯವಿಲ್ಲ . ಆದರೆ ವಾರ್ಷಿಕ ಪರೀಕ್ಷೆಗಳು ಹತ್ತಿರ
ಬರುತ್ತಿದ್ದಂತೆ ಹನುಮಪ್ಪನ ಭಕ್ತರ (?) ಸಂಖ್ಯೆ ತ್ರಿಗುಣಗೊಳ್ಳುತ್ತಿತ್ತು . ಇನ್ನು ಕೆಲವರು ತಾಸುಗಂಟಲೇ ಸಂಚರಿಸಿ ದೂರದಲ್ಲಿದ್ದ ರಾಯರ ಮಂಟಪಕ್ಕೆ ದರ್ಶನಕೊಡುತ್ತಿದ್ದರು . ನಿಜವಾದ ಭಕ್ತರಿಗೆ ಯಾವಾಗಲು ಭಕ್ತಿಯ ಭಾವ ಇದ್ದಿದ್ದು ಬೇರೆ ಸಂಗತಿ ಆದರೆ ,
ವರ್ಷವಿಡೀ ಮಜಾ ಮಾಡಿ , ಸರಿಯಾಗಿ ಓದದೆ , ಕೊನೆಯಲ್ಲಿ ಪರೀಕ್ಷೆಯ ಬಿಸಿ ತಟ್ಟಿದ್ದಾಗ ದೇವರನ್ನು ಪ್ರದಕ್ಷಣೆ ಹಾಕುತ್ತಿದ್ದ
ಇವರಿಗೆ ಏನೆನ್ನಬೇಕು ? ( ಅವರಲ್ಲಿ ನಾನೂ ಒಬ್ಬ ಎಂಬುದು ಬೇರೆ ವಿಷಯ!).
ಇನ್ನು ಪಾಪ , ಹನುಮಪ್ಪ ಏನು ಮಾಡಬೇಕು ಹೇಳಿ ? . ಖಂಡಿತ ಅವನೂ ಸಹ ಗೊಂದಲದಲ್ಲಿ ಬಿದ್ದಿರಬಹುದು . ಈ
ಅವಕಾಶವಾದಿ ‘ ಮೊಸಳೆ ಕಣ್ಣೀರಿನ ‘ ಪ್ರದಕ್ಷಣೆಗಾರರಿಗೆ ಸಹಾಯಮಾಡಬೇಕೆ ? ಅಥವಾ ವರ್ಷವಿಡೀ ಓದಿದ ಶ್ರಮಜೀವಿಗಳಿಗೆ
ಅಸ್ತು ಅನ್ನಬೇಕೆ ?. ಇವರೆಲ್ಲಾ ತಮ್ಮ ನಡುವಳಿಕೆಯಿಂದ , ಸಂಕಟವನ್ನು ತಾವೇ ಬರಿಸಿಕೊಂಡು , ಕೊನೆಯ ಗಳಿಗೆಯಲ್ಲಿ
ಹನುಮಪ್ಪನ ಮೊರೆ ಹೋಗಿ , ಅವನಿಗೂ ಸಂಕಟ ತಂದೊದಗಿದ್ದು ಸುಳ್ಳೇನಲ್ಲ . ತಾಸುಗಂಟಲೆಯ ಸಮಯವನ್ನು ಪ್ರದಕ್ಷಣೆಗಾಗಿ
ಕಳೆಯುವದಕ್ಕಿಂತ , ಅವನನ್ನು ಮನದಲ್ಲೇ ನೆನೆದು , ಅದೇ ಸಮಯವನ್ನು ಓದಿಗಾಗಿ ಉಪಯೋಗಿಸಿದ್ದಿದ್ದರೆ ಹನುಮಪ್ಪ
ಪ್ರಸನ್ನವಾಗಿರುತ್ತಿದ್ದಿದ್ದು ಮಾತ್ರ ಸತ್ಯ .

ಇಂಥವರದೊಂದು ಕಥೆಯಾದರೆ ಬೇರೆಯವರದು ಇನ್ನೊಂದು ಕಥೆ . ನಮ್ಮ ಪಕ್ಕದ ಮನೆಯ ಗೌರಕ್ಕನಿಗೆ ಒಳ್ಳೆಯ ಗಂಡ
ಸಿಕ್ಕು ಅದ್ದೂರಿಯಿಂದ ಮದುವೆ ಆಗಿ ಹೋಯಿತು . ಗೌರಕ್ಕ ನಮ್ಮ ಅಕ್ಕನಿಗಿಂತ ಒಂದು ವರ್ಷ ದೊಡ್ಡವಳು .ಪೂಜೆ ಪುರಸ್ಕಾರ
ಮತ್ತು ಉಪವಾಸಗಳಲ್ಲಿ ತುಂಬಾ ಆಸಕ್ತಿ . ಅವಳ ಭಕ್ತಿಗೆ ಮೆಚ್ಚಿ ದೇವರು ಒಳ್ಳೆಯ ಗಂಡನನ್ನು ದಯಪಾಲಿಸಿದನೆಂಬುವದು ಊರ
ಜನರ ನಂಬಿಕೆ. ಇದನ್ನು ಕಂಡು ನಮ್ಮಕ್ಕನಿಗೆ ಏನಾಯಿತೋ ಕಾಣೆ ( ಬಹುಶಃ, ಮನದಲ್ಲಿ ಸಂಕಟ ಆರಂಭವಾಗಿರಬಹುದು ) .

ಅವಳ ಹಾಗೆ ತನಗೂ ಸಹ ಒಳ್ಳೆಯ ಗಂಡನು ಸಿಗಲೆಂದು ಒಮ್ಮಿಂದೊಮ್ಮಲೆ ಸೋಮಪ್ಪನ ಭಕ್ತೆಯಾಗಿ ಬಿಟ್ಟಳು .ಪ್ರತಿ ಸೋಮವಾರ ಬೆಳಿಗ್ಗೆ ಮನೆಯಲ್ಲಿ ತಾಸುಗಂಟಲೇ ಪೂಜೆ ಪುರಸ್ಕಾರ ನಡೆಯತೊಡಗಿತು . ಬರಿ ಪೂಜೆ ಮಾಡಿದರೆ ಸಾಕಾಗಿತ್ತೇನೋ ಅದರ ಜೊತೆಗೆ ”ಉಪವಾಸವನ್ನು” ಕೂಡ ಸುರು ಹಚ್ಚಿಕೊಂಡಿದ್ದಳು . ಉಪವಾಸ ಎಂದ ಕ್ಷಣ ಸ್ವಲ್ಪ ಹೆಚ್ಚಿಗೇನೇ ಹೇಳಬೇಕೆನಿಸುತ್ತಿದೆ .
ಉಪವಾಸ ಮಾಡುವವರಲ್ಲಿ ಬೇರೆ ಬೇರೆ ವರ್ಗಗಳಿವೆ . ಉಪವಾಸವೆಂದರೆ ಕೆಲವರು ಆಹಾರ ಬಿಡಿ ! ನೀರನ್ನೂ ಸಹ
ಮುಟ್ಟುವದಿಲ್ಲ . ಕೆಲವರಿಗೆ ಉಪವಾಸವೆಂದರೆ ಲಘು ಆಹಾರ ಸೇವನೆ . ಇನ್ನು ಕೆಲವರು ಊಟಕ್ಕಿಂತಲೂ ಹೆಚ್ಚು ಉಪಹಾರ
ತಿಂದು , ಉಪವಾಸವಿದ್ದೆ ಎಂದು ಸಂತೋಷಪಡುವದುಂಟು . ನಮ್ಮ ಅಕ್ಕಳು ಸಹ ಈ ಕೊನೆಯ ಗುಂಪಿಗೆ ಸೇರಿದವಳು .ಅವಳ
ಉಪವಾಸ ಬೆಳಿಗ್ಗೆ ಎಂಟು ಘಂಟೆಗೆ ಪಾವ್ ಕಿಲೋ ನೆನೆಸಿದ ಅವಲಕ್ಕಿಯನ್ನು ತಿಂದು ಪ್ರಾರಂಭವಾಗುತ್ತಿತ್ತು . ಮಧ್ಯಾಹ್ನ
ಕೇವಲ ? ನಾಲ್ಕೈದು ಬಾಳೆ ಹಣ್ಣು , ಒಂದು ಹಿಡಿ ಖರ್ಜುರು ಮತ್ತು ಒಂದು ದೊಡ್ಡ ಗ್ಲಾಸು ಹಾಲು , ಮತ್ತೆ ಸುಮಾರು ಇಳಿಹೊತ್ತಿಗೆ
ಇನ್ನೆರಡು ಬೇರೆ ತರಹದ ಹಣ್ಣುಗಳು . ಪಾಪ !! ಹೆಸರಿಗೆ ಊಟ ಮಾತ್ರ ಇರಲಿಲ್ಲ . ಅವಳಿಗೆ ಸಿಗುತ್ತಿದ್ದ ಈ ವಿಶೇಷ ಸೇವನೆಗಳನ್ನು ನೋಡಿ ನನಗೂ ಆ ಸಣ್ಣ
ವಯಸಿನಲ್ಲಿ ಉಪವಾಸ ಮಾಡಬೇಕೆಂದಿನಿಸಿತ್ತು . ಅವಳ ಉಪವಾಸದ ಫಲವಾಗಿ ಮೈತೂಕ ಹೆಚ್ಚಾಗಿತ್ತೆ ವಿನಃ
ಕಡಿಮೆಯಾಗಿರಲಿಲ್ಲ . ಪಾಪ !! ಇಂಥ ಭಕ್ತರಿಗೆ ದೇವರು ಹೇಗೆ ಸಹಾಯಮಾಡಬೇಕು ? . ಮೈತೂಕ ಇಳಿಸಲು ಕೋರಿ ಇವಳು
ಇನ್ನೊಂದು ಪೂಜೆಯ ಮೊರೆ ಹೋದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಿರಬಹುದು ಸೋಮಪ್ಪ . ಹಾಗು ಹೀಗೂ
ನಮ್ಮಕ್ಕನಿಗೆ ಒಳ್ಳೆಯ ಗಂಡ ಸಿಕ್ಕಿದ್ದ ನಿಜ ಆದರೆ ಅವಳ ಉಪವಾಸದಿಂದ ಅಲ್ಲ ಎಂಬುವುದು ನನ್ನ ನಂಬಿಕೆ .

ಕಳೆದ ವರುಷ ನಮ್ಮ ಹಳ್ಳಿಗೆ ಹೋಗಿದ್ದೆ. ವಿಪರೀತ ಮಳೆ . ನಾನು ಬಂದಿರುವ ವಿಷಯ ತಿಳಿದು ನನ್ನ ‘ ಚಡ್ಡಿ ದೋಸ್ತ ‘ ಕಲ್ಲೇಶಿ
ನನ್ನನ್ನು ಭೇಟಿಯಾಗಲು ಬಂದಿದ್ದ . ಹಳೆಯ ಗೆಳೆತನ ತಾನೆ ? ಸಲುಗೆಯಿಂದ ಮಾತು ಪ್ರಾರಂಭಿಸಿದ್ದೆ . “ಏನ್ ಕಲ್ಲ್ಯಾ ಹ್ಯಾಂಗ್
ಆದಿ ” ಅಂತ ಅಂದಿದ್ದೆ ಸಾಕು , ತನ್ನ ಗೋಳನ್ನು ಸುರು ಮಾಡಿಕೊಂಡುಬಿಡುವುದೆ ?. ” ಏನ್ ಹೇಳುದು ಬಿಡಪ್ಪಾ ಎರಡ
ವರ್ಷದಿಂದ ಬರೇ ಮಳಿ ಹತ್ತಿ , ಬೆಳಿಯೆಲ್ಲ ಹಾಳಾಗಿ ಹೋಗಿ , ಸಾಲಾ ಜಾಸ್ತಿ ಆಗಿ ಬಿಟ್ಟೈತಿ ಅದಕ್ಕ ಈ ಸಾರಿ ಒಂದ್ ಉಪಾಯ
ಮಾಡೀನಿ ” . ನಾನು ಅಂದುಕೊಂಡೆ, ಏನಾದರು ನನ್ನ ಹತ್ತಿರ ಹಣದ ಸಹಾಯ ಕೇಳಲು ಬಂದಿರಬಹುದೆಂದು . “ಅದೇನು
ಉಪಾಯಪ್ಪ ” ಎಂದೆ , ” ಊರ ದೇವಿ ದ್ಯಾಮವ್ವ ಬಾಳ ಸಿಟ್ಟ ಮಾಡಿಕೊಂಡಂಗೈತಿ ಅದಕ್ಕ ಇಷ್ಟೊಂದ್ ಸಂಕಟ , ಅದಕ್ಕ
ಇನ್ನಷ್ಟ್ ಸಾಲ ಅದರೂ ಸರಿ ಈ ಸರಿ ಜಾತ್ರಿಗೆ ಒಂದು ಕುರಿ ಕೊಯ್ಯಬೇಕಂತ ವಿಚಾರ ಮಾಡೀನಿ ” ಎಂದ . “ಅಲ್ಲೋ ಇನ್ನಷ್ಟ
ಸಾಲಾ ಮಾಡಿ , ಅವಳ ಹೆಸರಲ್ಲಿ ಕುರಿ ಕೊಯ್ದು, ನೀನು ಮತ್ತು ನಿಮ್ಮ ಸಂಸಾರಾ ಕುರಿ ತಿಂದರ ದ್ಯಾಮವ್ವ ಮಳಿ ಹ್ಯಾಂಗ್
ನಿಲ್ಲಸತಾಳು ? ” ಎಂದೆ . ” ನಿಮ್ಮಂತ ಓದಿದವರಿಗೆ ಇದೆಲ್ಲ ಗೊತ್ತಾಗುದಿಲ್ಲ ಬಿಡಪ್ಪಾ ” ಎಂದು ಮಾತು ಮುಂದುವರಿಸದೆ
ಹಾಗೆಯೆ ಹೋಗಿಯೇ ಬಿಟ್ಟ . ನನಗಂತೂ ಗೊತ್ತಾಗಲಿಲ್ಲ ಅದು ‘ ದ್ಯಾಮವ್ವನ ತಪ್ಪೋ , ಕಲ್ಲೇಶಿಯ ತಪ್ಪೋ ಅಥವಾ ನನ್ನ
ತಪ್ಪೋ ‘ಎಂದು .
ಹೋಗಲಿ ಬಿಡಿ ಹಾಗೆಯೆ ಹರಟುತ್ತ ಹೋದರೆ ಇದು ಮುಗಿಯುವ ವಿಷಯವಲ್ಲ . ಇದಂತು ನಿಜ , ಇಂಥ ಜನರು , ಇಂಥ ನಂಬಿಕೆ
ನಮ್ನ ದೇಶಕ್ಕೆ ಅಥವಾ ಧರ್ಮಕ್ಕೆ ಮಾತ್ರ ಸೀಮಿತವಲ್ಲ . ಎಲ್ಲ ದೇಶಗಳಲ್ಲೂ , ಪಂಗಡಗಳಲ್ಲೂ ಇದು ಇರುವುದು ಕಟು ಸತ್ಯ .
ಆದರೆ ಪದ್ಧತಿ ಬೇರೆ ಇರಬಹುದು .
” ಸಂಕಟ ಬಂದಾಗ ವೆಂಕಟರಮಣ ” ಅಂತ ಅನ್ನುವದಕ್ಕಿಂತಲೂ –
” ಸಂಕಟ ಬಂದಾಗ ಧೈರ್ಯವೇ ಭೂಷಣ ” ಅಂತ ತಿಳಿದರೆ ಎಷ್ಟೊಂದು ಚನ್ನಾಗಿರುತ್ತಲ್ಲವೆ ?
ಇನ್ನು, ರಾತ್ರಿಯೆಲ್ಲಾ ಪುರಾಣವನ್ನು ಹೇಳಿ ಬೆಳಿಗ್ಗೆ ಬದನೇಕಾಯಿ ತಿನ್ನದೇ ಇರಲಿಕ್ಕೆ ಸಾಧ್ಯವೇ ? ಇದಕ್ಕೆ ನಾನೇನು
ಹೊರತಾಗಿಲ್ಲ . ನಾನೂ ಹತ್ತು ಹಲುವಾರು ಹರಕೆಗಳನ್ನು ಹೊತ್ತಿರುವೆ, ಆದರೆ ಇನ್ನೂ ತೀರಿಸಲು ಆಗಿಲ್ಲ . ನೀವೂ ಏನಾದರು
ಹರಕೆಗಳನ್ನು ಹೊತ್ತಿದ್ದರೆ , ನಿಮ್ನ ಅಭ್ಯಂತರವಿಲ್ಲದಿದ್ದರೆ ನನಗೂ ಸ್ವಲ್ಪ ತಿಳಿಸಿಬಿಡಿ . ನಿಮ್ಮ ಹರಕೆಗಳನ್ನು ನನ್ನಂತೆ ಇನ್ನೂ
ಪೂರೈಸದಿರಲು ಸಾಧ್ಯವಾಗಿಲ್ಲದಿದ್ದರೂ ಪರವಾಗಿಲ್ಲ , ನೀವೇನು ಚಿಂತಿಸದಿರಿ . ಏಕೆಂದರೆ – ಹರಕೆ ತೀರಿಸಲು ಹತ್ತು ವರುಷ
ಇರುತ್ತದೆ ಅಂತ, ನಮ್ಮ ಅಜ್ಜಿ ಹೇಳುತ್ತಿದ್ದಳು .

-ಡಾ . ಶಿವಶಂಕರ ಮೇಟಿ