(ಕರಾಳ) ರಹಸ್ಯಗಳ ಗೂಡು ಬ್ರಾಡ್ಸ್ ವರ್ತ್ -ಭಾಗ 2 ಶ್ರೀವತ್ಸ ದೇಸಾಯಿ

 

ಕಳೆದ ವಾರ ಪ್ರಕಟಿಸಿದ ರಹಸ್ಯಗಳ ಗೂಡು ಭಾಗ ೧ ರ ನಂತರ ಈ ವಾರ ಇದೇ ವಿಷಯದ ಬಗ್ಗೆ ಅದರಲ್ಲೂ ಭವ್ಯವಾದ ಹಿರಿಯ ಮನೆಯ ಮತ್ತು ಮನೆ ಒಡೆಯರ ಕರಾಳ ಇತಿಹಾಸವನ್ನು ಶ್ರೀವತ್ಸ ದೇಸಾಯಿ ಅವರು ಭಾಗ ಎರಡರಲ್ಲಿ ದಾಖಲಿಸಿದ್ದಾರೆ. ಒಂದು ಹಿನ್ನೋಟದಲ್ಲಿ ನೋಡಿದಾಗ ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯ, ಒಂದು ರಾಷ್ಟ್ರ, ಒಂದು ಸಂಸ್ಕೃತಿ, ಒಂದು ಬಣ್ಣ, ಒಂದು ಜಾತಿ ಮತ್ತು ಒಂದು ಧರ್ಮ ಇನ್ನೊಂದನ್ನು ಶೋಷಿಸುತ್ತ ಬಂದಿದೆ. ಮೇಲು-ಕೀಳು, ಶ್ರೇಷ್ಠ- ಕನಿಷ್ಠ ಎಂಬ ಭಾವನೆಗಳನ್ನು ಹುಟ್ಟುಹಾಕಿದೆ. ಈ ಶೋಷಣೆ, ದ್ವೇಷ, ದಬ್ಬಾಳಿಕೆ, ಅನ್ಯಾಯ ಪ್ರಪಂಚದ ಹಲವಾರು ನೆಲೆಗಳಲ್ಲಿ ನಮ್ಮ-ನಿಮ್ಮ ನಡುವೆ ಇಂದಿಗೂ ನಡೆಯುತ್ತಿದೆ. ಭೇದಗ್ರಹಣ, ಗುಂಪುಗಾರಿಕೆ, ನಮ್ಮವರು-ಅನ್ಯರು ಈ ಭಾವನೆಗಳು ಜೈವಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಗುಂಪಿನ, ಸಮುದಾಯದ ಸಂರಕ್ಷಣೆಗೆ ಪೂರಕವಾದದ್ದು ಎಂದು ಸಮಾಜ ಶಾಸ್ತ್ರ ಪರಿಗಣಿಸಿದ್ದರೂ, ಯಾವ ವಿಶ್ಲೇಷಣೆ ವಿವರಣೆ ಕೊಟ್ಟರೂ, ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ! ಅದು ಅನೈತಿಕ ನಿಲುವು. ಈ ವಿಭಜನೆಗಳನ್ನು ದಾಟಿ ಮೇಲೇರುವುದು ಸಭ್ಯತೆಯ, ನಾಗರೀಕತೆಯ ಮತ್ತು ವಿಕಾಸದ ಲಕ್ಷಣ. ಇತಿಹಾಸದಲ್ಲಿ ನಡೆದ ಹಳೆ ಆಕ್ರಮಣ, ತಪ್ಪು ಇವುಗಳ ನೆಪದಲ್ಲಿ ಅವುಗಳನ್ನು ಕೆದಕಿ ಈ ಇಪ್ಪತ್ತೊಂದನೇ ಶತಮಾನದಲ್ಲಿ ಇತ್ಯರ್ಥ ಮಾಡುವುದು ಕೂಡ ಅನೈತಿಕ. ವಿಶ್ವಮಾನವ, ವಿಶ್ವ ಭ್ರಾತೃತ್ವ ಇವುಗಳ ಚೌಕಟ್ಟಿನಲ್ಲಿ ಈ ಮೇಲೆ ಪ್ರಸ್ತಾಪಿಸಿದ ವಿಭಜನೆಗಳನ್ನು ಸಜ್ಜನರು,ಉದಾರಿಗಳು, ಪ್ರಗತಿಪರರು ಪ್ರಶ್ನಿಸಬೇಕಾಗಿದೆ ಮತ್ತು ತಿರಸ್ಕರಿಸಬೇಕಾಗಿದೆ. ಇದು ನಾಗರೀಕ ಸಮಾಜದ ಸಾಮಾಜಿಕ ಜವಾಬ್ದಾರಿ. ಮೌನ ಸಮ್ಮತಿಯ ಸೂಚಕ ಎಂಬ ಉಕ್ತಿಯನ್ನು ಕೇಳಿದ್ದೇವೆ. ಡಾ.ದೇಸಾಯಿ ಅವರ ಬರಹ ನಮ್ಮ ಸಂವೇದನೆಗಳನ್ನು ಎಚ್ಚರ ಗೊಳಿಸುವುದಲ್ಲದೆ, ಅರಿವನ್ನು ಹೆಚ್ಚಿಸಿದೆ. ಸೂಕ್ಷ್ಮ ಮತೀಯರು ಈ ವಿಚಾರವನ್ನು ಪ್ರಪಂಚದ ಇತರ ನೆಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಟ್ಟು, ಒರೆ ಹಚ್ಚಿ ನೋಡಿ, ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
      -ಸಂಪಾದಕ

**********************************************************************************************

’ಸತ್ಯಂ ಬ್ರೂಯಾತ್, ಪ್ರಿಯಮ್ ಬ್ರೂಯಾತ್’. ಒಂದನೆಯ ಭಾಗದಲ್ಲಿ  ಬ್ರಾಡ್ಸ್ ವರ್ತ್ ಮನೆ, ತೋಟದ ಬಗ್ಗೆ ಥಳುಕಿನ ಸತ್ಯಗಾಥೆ ಓದಿದ ನಂತರ ಮೇಲೆ ಉದ್ಧರಿಸಿದ ಮನುಸಮೃತಿಯ ಎರಡನೆಯ ಪಾದಕ್ಕೆ ಬರಬೇಕಲ್ಲವೆ? ’ನ ಬ್ರೂಯಾತ್ ಸತ್ಯಮಪ್ರಿಯಂ!’ ಅಪ್ರಿಯವಾದದ್ದನ್ನೂ ಹೇಳಿದರೇನೇ ಬ್ಯಾಲನ್ಸ್ ಆಗುತ್ತದೆ. ಹೋದಸಲದ ಲೇಖನವನ್ನು ಓದಿದ ಕೆಲವರಿಗೆ ಬಿ ಬಿ ಸಿ ಯಲ್ಲಿ ಬಂದ ’ಆಂಟಿಕ್ ರೋಡ್ ಶೋ’ದಲ್ಲಿ ನೋಡಿದ ವಿವಿಧ grand country homes ಗಳು ನೆನಪಾದವಂತೆ. ನಿಜ, ಹಿಂದೊಮ್ಮೆ ಈ ದೇಶದಲ್ಲಿ 5,000 ಕ್ಕಿಂತ ಹೆಚ್ಚು ಇಂಥ ಭವ್ಯ ಮನೆಗಳಿದ್ದು ಕಾರಣಾಂತರಗಳಿಂದ ಈಗ ಅವುಗಳ ಸಂಖ್ಯೆ 3,000 ಕ್ಕೆ ಇಳಿದು ನಿಂತಿದೆ. ಇವುಗಳನ್ನು ನೋಡಿ ಆನಂದಿಸಿದ ಜನಸಾಮಾನ್ಯರಿಗೆ ಈ

ಬ್ರಾಡ್ಸ್ ವರ್ತ್ ಹಾಲ್

’ಮಾಂಡಲೀಕರು, ಪಾಳೇಗಾರರು (ಅವರಲ್ಲಿ ಕೆಲವರು ನೈಟ್(Kt), ಬಾರೊನೆಟ್(Bt), ಡ್ಯೂಕ್,  ಮಾರ್ಕಿಸ್ಸ್ ಅಂತೆಲ್ಲ ಟೈಟಲ್ ಹೊಂದಿದ ಮಾಲಕರು), ಹೇಗೆ ಸಿರಿವಂತರಾದರು ಅನ್ನುವ ಕುತೂಹಲವಿದ್ದರೂ ಅದನ್ನು ಇತ್ತೀಚೆಗೆ ಕೆದಕುವ ವರೆಗೆ ಗೌಪ್ಯವಾಗಿಯೇ ಇಡಲಾಗುತ್ತಿತ್ತು. ಈಗ ಆ ಕರಾಳ ಇತಿಹಾಸದ ಮೇಲೆ ಬೆಳಕು ಚೆಲ್ಲುವಾ. ಅದಕ್ಕೂ ಮೊದಲು ಅದರ ಹಿನ್ನೆಲೆಯನ್ನು ಅರಿತುಕೊಳ್ಳೋಣ.

 ಒಂದು ಕಾಲಕ್ಕೆ ಸೂರ್ಯಾಸ್ತ ಕಾಣದ ಸಾಮ್ರಾಜ್ಯಶಾಹಿಯಾಗಿದ್ದ ಬ್ರಿಟನ್ ದೇಶದವರು ಬೇರೆ ಕೆಲವು ವಸಹಾತುಶಾಹಿ ಯೂರೋಪಿಯನ್  ದೇಶದ ಪ್ರಜೆಗಳಂತೆ ಹೆಚ್ಚು ಕಡಿಮೆ ಹದಿನಾರನೆಯ ಶತಮಾನದಿಂದಲೂ ಆಫ್ರಿಕನ್ನರನ್ನು ’ಬೇಟೆಯಾಡಿ’ ಗುಲಾಮರನ್ನಾಗಿ ಹಿಡಿದೊಯ್ದು ’ನ್ಯೂ ವರ್ಲ್ಡ್’ ಅಮೇರಿಕೆ, ಮತ್ತು ವೆಸ್ಟ್ ಇಂಡೀಸ್ ದ್ವೀಪಗಳಿಗೆ ಕೊಂಡೊಯ್ದು ಮಾರುವ ವ್ಯಾಪಾರದಲ್ಲಿ ಆಳವಾಗಿ ತೊಡಗಿದ್ದರು. ದಾಖಲೆಗಳ ಪ್ರಕಾರ ಆ ಎರಡೂವರೆ ಶತಮಾನದ ಅವಧಿಯಲ್ಲಿ ಹೆಚ್ಚು ಕಡಿಮೆ 3,000,000 ಗುಲಾಮರನ್ನು ’ಕಪ್ಪು ಖಂಡ’ದಿಂದ ಅಮೇರಿಕೆಗಳಿಗೆ ಸಾಗಿಸಲಾಯಿತು. ಅದರಿಂದ ಉದ್ಭವಿಸಿದ ದುಡ್ಡು-ದೌಲತ್ತು, ವರ್ಚಸ್ಸು ಮತ್ತು ರಾಜಕಾರಣದಲ್ಲಿ  ಯಶಸ್ಸನ್ನು ಗಳಿಸಿದವರು ಅಗಣ್ಯರು. ಈ ದೇಶದ ಉದ್ದಗಲದ ಮಹಾನಗರಗಳಲ್ಲಿ ಅದರ ಕುರುಹುಗಳಿವೆ; ಇಮಾರತಿಗಳಿವೆ, ವಿದ್ಯಾ ಸಂಸ್ಥೆಗಳಿವೆ, ದತ್ತಿ ಪಾರಿತೋಷಕಗಳಿವೆ; ’ಮಹಾ ದಾನಿಗಳ’ ಪುತ್ಥಳಿಗಳಿವೆ. ಅಥವಾ ಇದ್ದವು. ಕೆಲವು ಇತ್ತೀಚಿನ ಕಾಲದಲ್ಲಿ ನೀರುಪಾಲಾದದ್ದು ಸರ್ವ ವಿದಿತ. ದಾಸ್ಯದ ವಿರುದ್ಧ ಪ್ರತಿಭಟನೆಗಳು ಬೆಳೆಯಲಾರಂಭಿಸಿ ತಡವಾಗಿಯಾದರೂ 1833 ರಲ್ಲಿ ಗುಲಾಮಗಿರಿ ನಿಷೇಧಿಸುವ ಕಾನೂನು (Slavery Abolition Act 1833) ಜಾರಿಗೆ ಬಂದಿತು.

ಪೀಟರ್ ಥೆಲ್ಲುಸನ್ ಮತ್ತು ಗುಲಾಮರ ಸಾಗಾಣಿಕೆ

ಗುಲಾಮಗಿರಿ ನಿರ್ಮೂಲನ ಆಂದೋಲನದ ದ್ವಿಶತಮಾನದ ವರ್ಧಂತಿಯ ಕಾಲದಲ್ಲಿ ಈ ವಿಷಯದಲ್ಲಿ ಆಸ್ಥೆ ಬೆಳೆಯಿತು. (ನಂತರದ Black Lives Matter ಆಂದೋಲನ ಇಲ್ಲಿ ಪ್ರಸ್ತುತ ಅಲ್ಲ). ಅದಕ್ಕೂ ಮೊದಲು ಜನರಲ್ಲಿ ಈ ವಿಷಯದಲ್ಲಿ ಹೆಚ್ಚಿನ ತಿಳಿವಳಿಕೆಯನ್ನು ಬಿಂಬಿಸಲು ಈ ನಾಡಿನ ಎರಡು ಪ್ರಮುಖ ದತ್ತಿ ಸಂಸ್ಥೆಗಳದ ಇಂಗ್ಲಿಷ್ ಹೆರಿಟೇಜ್(EH)  ಮತ್ತು ನ್ಯಾಷನಲ್ ಟ್ರಸ್ಟ್(NT)) ತಮ್ಮ ಆಡಳಿತದಲ್ಲಿರುವ ಆದರೆ ಹಿಂದೆ ಖಾಸಗಿ ಸ್ವಾಮಿತ್ವದಲ್ಲಿದ್ದ ಈ ’ಅರಮನೆ’ಗಳ ಹಿಂದಿನ ಇತಿಹಾಸದ ಬಗ್ಗೆ ಆಳವಾದ ಅಭ್ಯಾಸ ಮಾಡಲು ನಿರ್ಧರಿಸಿದವು. ಇತಿಹಾಸಕರರನ್ನು ಸಂಪರ್ಕಿಸಿದರು; ಸಂಶೋಧಕರನ್ನು ಆಹ್ವಾನಿಸಿದರು. ಅದರ ಫಲಶ್ರುತಿ 2009 ರಲ್ಲಿ ನಡೆದ ಮಹತ್ವಪೂರ್ಣ The Slavery and the British Country House’ Conference. (ಆ ವರದಿಯ ಕೊಂಡಿ ಲೇಖನದ ಕೆಳಗೆ ಇದೆ). ಆನಂತರ ಅವೆರಡೂ ಸಂಸ್ಥೆಗಳು ಆ ಸಂಕೀರಣದಲ್ಲಿ ಮಂಡಿಸಿದ ಅಧ್ಯಯನಗಳನ್ನು ಪ್ರಕಟಿಸಿವೆ (ಈ ಲೇಖನದ ಕೊನೆಯಲ್ಲಿಯ ಕೊಂಡಿ ನೋಡಿ). ಆಗ ಬಹಿರಂಗವಾದ ಸತ್ಯ ಜನರಿಗೆ ಅಚ್ಚರಿಯುಂಟು ಮಾಡಿದರೂ ಅವುಗಳು ಅತ್ಯಂತ ಅನಿರೀಕ್ಷಿತವೇನೂ ಆಗಿರಲಿಲ್ಲ. ಆ ವರದಿಯಲ್ಲಿ ಬ್ರಾಡ್ಸ್ ವರ್ತ್ ಮನೆಯ ಹೆಸರು ಕಂಡಿರಬೇಕು ಎಂದು ನೀವು ಈಗಾಗಲೇ ಊಹಿಸಿರಬಹುದು. ನಿಜ. ಇದೊಂದೇ ಅಲ್ಲ ಇಂಗ್ಲಿಷ್ ಹೆರಿಟೇಜ್ ನ ನಿರ್ವಹಣೆಯಲ್ಲಿರುವ 33 ರಲ್ಲಿ 26 ’ಮನೆ’ಗಳಲ್ಲಿ, ಮತ್ತು ನ್ಯಾಷನಲ್ ಟ್ರಸ್ಟ್(NT) ದ ಕೆಳಗಿನ ಮೂರರಲ್ಲೊಂದು ಮನೆಗಳು (93/300) ಈ ’ಕಳಂಕ’ದಿಂದ ಲೇಪಿತವಾಗಿದ್ದವು ಅಥವಾ ಪರೋಕ್ಷ ಸಂಬಂಧ ಹೊಂದಿದ್ದವು! ಈ ಸಂಬಂಧ ಕೆಲವು ಕಡೆಗಷ್ಟೇ ಢಾಲಾಗಿ ಕಂಡರೆ ಇನ್ನು ಕೆಲವು ಮನೆತನಗಳು ತಮ್ಮ ’ಹೇಯ’ ದೌಲತ್ತನ್ನು ಮರೆಮಾಚಿಸಿ ಚಾಣಾಕ್ಷತೆಯಿಂದ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಸಿ, ಅನೇಕ ರೀತಿಯ ಚರಾಚರ ಆಸ್ತಿಗಳನ್ನು ಗಳಿಸಿದ್ದರು. ಆ ವೈಭವವನ್ನೇ ಇಂದೂ ನೋಡ ಬಹುದು.ಕೆಲವರು ರಾಜಕಾಣದಲ್ಲಿ ಧುಮುಕಿ ಮ್ರಧಾನ ಮಂತ್ರಿಗಳಾದರು. (ಉದಾ:ಇಲ್ಲಿಂದ ಅನತಿದೂರದ ಬಾಲ್ಸೋವರ್ ಕಾಸಲ್ಲಿನ (Balsover Castle) ಡ್ಯೂಕ್ ಆಫ್ ಪೋರ್ಟ್ ಲಂಡ್).  ಬ್ರಾಡ್ಸ್ ವರ್ತ್ ಕೊಂಡ ಪೀಟರ್ ಥೆಲ್ಲಿಸನ್ ಬ್ಯಾಂಕ್ ಆಫ್ ಇಂಗ್ಲಂಡಿನ ಡೈರೆಕ್ಟರ್ ಆಗಿದ್ದರೂ ವಲಸಿಗನಾಗಿದ್ದರಿಂದ ಸ್ವತಃ ತನಗೆ ಪಾರ್ಲಿಮೆಂಟಿನಲ್ಲಿ ಕೂಡುವ ಹಕ್ಕಿರದಿದ್ದರೂ ಆತನ ಮಗನಿಗೆ (ಪೀಟರ್ ಐಸಾಕ್ ಥೆಲ್ಲಿಸನ್) ಹಣ ಮತ್ತು ವರ್ಚಸ್ಸಿನಿಂದ ಬ್ಯಾರನ್ ರೆಂಡಲ್ ಶಮ್ ಅನ್ನುವ ಆನುವಂಶಿಕ ಪಿಯರೇಜ್ ದೊರಕಿತು. ಈ ತರದ ಪರಿವರ್ತನೆ (gentrification)     ತಲೆತಲಾಂತರದಿಂದ ನಡೆಯುತ್ತಲೇ ಬಂದಿದೆ. ವಿಪರ್ಯಾಸವೆಂದರೆ ಬ್ರಾಡ್ಸ್ ವರ್ತ್ ಮನೆತನದ ಕೋಟ್ ಆಫ್ ಆರ್ಮ್ಸ್ ಕೆಳಗಿನ ಧ್ಯೇಯ ವಾಕ್ಯ: Lebore et Honore: ಪರಿಶ್ರಮದಿಂದ ಗೌರವ!  

ಮರಗಳು ಸಂಗೀತವ ಹಾಡುತಿವೆ! (Songs of Mahogany)

ಹಿಂದಿನ ಲೇಖನದಲ್ಲಿ ಬ್ರಾಡ್ಸ್ ವರ್ತ್ ಮನೆಯನ್ನು ಅಲಂಕರಿಸಿದ ಮಹೋಗನಿ ಮರದ ಆಕರ್ಷಕ ಬಾಗಿಲು, ಹಿಡಿಕೆ, ಸ್ಟೇರ್ಕೇಸ್, balustrade  ಬಗ್ಗೆ ಬರೆದಿದ್ದನ್ನು ಓದಿರ ಬಹುದು ಮತ್ತು ನೋಡಿರಬಹುದು. ಮಹೋಗನಿ ನಮಗೆಲ್ಲ ಚಿರಪರಿಚಿತವಾದ ತೇಗನ್ನು ಹೋಲುತ್ತದೆ. ಅದು ಗಟ್ಟಿ, ಮರಗೆಲಸಕ್ಕೆ ಅನುಕೂಲ ಮತ್ತು ಬೆಲೆಬಾಳುವಂಥದು. ಪಶ್ಚಿಮ ಆಫ್ರಿಕಾ ಮತ್ತು ಸೆಂಟ್ರಲ್ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ದ  ಜಮೈಕಾಗಳಲ್ಲಿ  ಬೆಳೆಯುವ ಈ ಮರ ಮೇಲಿನ ಎರಡು ಬ್ರಿಟಿಶರ ಆಧಿಪತ್ಯದಲ್ಲಿದ್ದ ಭಾಗಗಳಲ್ಲಿ ವಿಪುಲವಾಗಿ ದೊರಕುತ್ತಿದ್ದರಿಂದ ಮತ್ತು ಅದನ್ನು ಕಡಿದು ಸಾಗಿಸಲು ಗುಲಾಮರ ’ತೋಳುಬಲ’ ಇದ್ದುದರಿಂದ ಅದರ ಆಮದು ಬ್ರಿಟಿಶ್ ವಸಹಾತುಗಳಲ್ಲೆಲ್ಲ ಬೆಳೆದದ್ದರಲ್ಲಿ ಆಶ್ಚರ್ಯವಿಲ್ಲ.

ಇಂದು ನೀವು ಬ್ರಾಡ್ಸ್ ವರ್ತಿಗೆ ಭೇಟಿ ಕೊಟ್ಟರೆ ಅಲ್ಲಲ್ಲಿ ಮಲಿಕಾ ಬುಕರ್ (ಚಿತ್ರ) ಎನ್ನುವ ಗಯಾನಾ-ಗ್ರೆನೇಡಾ ಮೂಲದ ಇಂಗ್ಲಿಷ್ ಕವಯಿತ್ರಿಯ ಕವನಗಳ ಪ್ರದರ್ಶನವನ್ನು ನೋಡಬಹುದು (ಈ ಪ್ರದರ್ಶನ ನವೆಂಬರ್ ವರೆಗೆ ಅಷ್ಟೇ). ಆಕೆ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಕ್ರಿಯೇಟಿವ್ ರೈಟಿಂಗ್ ವಿಭಾಗದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿ.  ವಿಶಾಲವಾದ ಡೈನಿಂಗ್ ಟೇಬಲ್ ಹೊದಿಕೆಯ ಮೇಲೆ ಆಕೆಯ ಕವನದ (ಶೀರ್ಷಿಕೆ ಮೇಲೆ ಇದೆ) ಮುದ್ರಿತ ಸಾಲುಗಳು ಇವು:

  ”Speak of Mahogany. Speak

of the original people of the land!

And think of  bodies/ bodies/ blood

black …blessed …bones..back broad   broken branches/

broken bough/  brown/   bleed/ balsam/  balm/  breathless

Here is a space of interruption,
where hands slap wooden surfaces
for luck and palms lick wood for praise.”

ತೆರೆಯದ ಬಾಗಿಲು!

 ಬ್ರಾಡ್ಸ್ ವರ್ತ್ಆಸ್ತಿಯನ್ನು ಕೊಳ್ಳುವ ಮೊದಲು ಬ್ಯಾಂಕರ್ ಪೀಟರ್ ಥೆಲ್ಲುಸನ್ ಮತ್ತು ಅವನ ಸಹಯೋಗಿಗಳು ಗುಲಾಮರು ಮತ್ತು ಅದಕ್ಕೆ ಸಂಬಧ ಪಟ್ಟ ಸರಕುಗಳ ಸಾಗಾಣಿಕೆಯ ವ್ಯಾಪಾರಕ್ಕೆಂದು ಎರಡು ಹಡಗುಗಳನ್ನು ಕೊಂಡಿದ್ದರು. ಒಂದರ ಹೆಸರು ”ಲಾಟರಿ” ಮತ್ತು ಇನ್ನೊಂದು ”ಲಿಬರ್ಟಿ”(ಎಂಥ ವಿಪರ್ಯಾಸ!). ಇತರ ವ್ಯಾಪರಿಗಳು ಇವರಿಂದ ಸಾಲ ತೆಗೆದುಕೊಂಡಿರುತ್ತಿದ್ದರು. ಗ್ರನಾಡಾ ಮತ್ತು ಬೇರೆ ದ್ವೀಪಗಳ ಪ್ಲಾಂಟೇಶನ್ ವ್ಯವಹಾರದಲ್ಲಿ ತೊಂದರೆಯಾಗಿ ಸಾಲ ತೀರಿಸಲು ತಪ್ಪಿದರೆ, ಇನ್ಶೂರನ್ಸ್ ಹಣದಿಂದ ಶ್ರೀಮಂತರಾಗುತ್ತಿದ್ದರು. ಅದಲ್ಲದೆ ಥೆಲುಸ್ಸನ್ ಬೀಡ್ಸ್ (ಆಫ್ರಿಕನ್ ಮಣಿಗಳು), ಗುಲಾಮರು ತಯಾರಿಸಿದ ರಮ್ (ಮದ್ಯ), ತನ್ನದೇ ಸಕ್ಕರೆ ರಿಫೈನರಿ ಮುಂತಾದ ಎಲ್ಲವ್ಯಾಪಾರಗಳು ಅಪಾರ ಸಂಪತ್ತನ್ನು ತಂದದ್ದರಲ್ಲಿ ಆಶ್ಚರ್ಯವಿಲ್ಲ. ಆತ ಸ್ವತಃ ಗ್ರೆನಾಡಾದಲ್ಲಿ ಕಾಲಿಟ್ಟಿರಲಿಕ್ಕಿಲ್ಲ. ಅನೇಕರಂತೆ ಅನುಪಸ್ಥಿತ ಲ್ಯಾಂಡ್ ಲಾರ್ಡ್ಗಳಲ್ಲಿ ಪೀಟರ್ ಸಹ ಒಬ್ಬನು! ಬ್ರಾಡ್ಸ್ ವರ್ತ್ ಮನೆಯ ದಿವಾನಖಾನೆಯಲ್ಲಿ ಅಲಂಕಾರಕ್ಕೆ ಇಟ್ಟಂಥ ಕಂಪು -ಕಂದು ಬಣ್ಣದ ಮಹೋಗನಿಯ ತೆರೆಯದ ಬಾಗಿಲು ಇದ್ದಂತೆ! 1833 ರಲ್ಲಿ ಗುಲಾಮಗಿರಿಗೆ ಅಂತಿಮ ಕಹಳೆ ಊದಿಯಾದ ಮೇಲೆ ಇಂಥ ಭವ್ಯ ಎಸ್ಟೇಟಿನ ಮಾಲಕರ  ಮನೆತನದ ಜೀತದಾಳಾಗಿ ಅನೇಕರು ಅವರನ್ನು ಅವಲಂಬಿಸಿದ್ದುದು ಸತ್ಯ. ಸರಕಾರ ಗುಲಾಮಗಿರಿ ನಿಂತ ಮೇಲೆ ’ನಷ್ಟ ಪರಿಹಾರಕ್ಕೆ’ 20 ಮಿಲಿಯನ್ ಪೌಂಡುಗಳನ್ನು ಬದಿಗಿಟ್ಟಿತು. ಅದು ಈಗಿನ ಲೆಕ್ಕದಲ್ಲಿ 16.5 ಬಿಲಿಯನ್! 100 ಮನೆಮಾಲಕರು ಅರ್ಜಿ ಸಲ್ಲಿಸಿದ 100 ಜನರ ಯಾದಿಯಲ್ಲಿ ಥೆಲುಸನ್ ಹೆಸರು ಮಾತ್ರ ಇಲ್ಲ!

ಇತ್ತೀಚಿನ ವರೆಗೆ ಮೇಲು ನೋಟಕ್ಕೆ ಆತ ಗುಲಾಮಗಿರಿಯಿಂದ ಲಾಭಪಡೆದನೆಂಬ ವಿಷಯ ಎಷ್ಟೋ ತಲೆಮಾರುಗಳ ವರೆಗೆ ರಹಸ್ಯವಾಗಿಯೇ ಉಳಿದಿತ್ತು!  ಮುಖವಾಡದ ಹಿಂದೆ ಏನಿದೆಯೋ!

ಎಲ್ಲಿಂದ ಬಂತು ಮಹೋಗನಿ?

ಮೆಕ್ಸಿಕೋದ ದಕ್ಷಿಣದ ಆಗಿನ ಬ್ರಿಟಿಶ್ ಹೊಂಡುರಾಸ್  (ಈಗಿನ ಬೆಲೀಜ್ ದೇಶದ)”ಮಸ್ಕಿಟೋ ಬೇ’ ಪ್ರದೇಶದಲ್ಲಿ ಬೆಳೆದ ಉತ್ತುಂಗ ಮಹೋಗನಿ ಮರಗಳನ್ನು ಪಶ್ಚಿಮ ಆಫ್ರಿಕದ ಇಬೋ ಮತ್ತು ಯರುಬಾ ಎನ್ನುವ ಬುಡಕಟ್ಟು ಜನಾಂಗದವರು ಕಡಿಯುತ್ತಿದ್ದರು. ತಮ್ಮ ಊರಲ್ಲಿಯೂ ಇದೇ ತರದ ಖಯಾ ಮರಗಳಿಗೆ ’ಮೊಗಾನ್ವೋ’ (‘m’oganwo’) ಅಂತ ಕರೆಯುತ್ತಿದ್ದರಂತೆ. ಅದೇ ಮಹೋಗನಿ ಆಯಿತು ಅಂತ ಒಂದು ವಾದ. ಗುಲಾಮರು ಮರಗಳನ್ನು ಕೊಡಲಿಯನ್ನು ಪಯೋಗಿಸಿ ಕೈಯಿಂದಲೆ ಕಡಿಯುತ್ತಿದ್ದರು. ಮರದ ಬೊಡ್ಡೆಯನ್ನು ತಟ್ಟಿ, ಗುಡ್ ಲಕ್ಕಿಗೆಂದು ಉಗುಳು ಹಚ್ಚಿದ ಅಂಗೈಯಿಂದ ಅದನ್ನು ಸವರಿ, ಮರವನ್ನು ಕಡಿದು ಕೆಡವಿ, ಉರಿಳಿಸುತ್ತ  ನದಿಯಲ್ಲಿ ತೇಲಿಬಿಡುತ್ತಿದ್ದರು. ಆಚೆಯ ತುದಿಯಲ್ಲಿದ್ದ ಸಾ’ ಮಿಲ್ಲಿನಲ್ಲಿ  ಇನ್ನೊಬ್ಬ ಗುಲಾಮ -ಆತನ ಎದೆಯ ಮೇಲೆ ಬರೆಕೊಟ್ಟು ಉಬ್ಬಿದ ದಪ್ಪ ಕಲೆ ಬಿದ್ದ ಒಡೆಯನ ಅಂಕಿತ -ತಲೆಬಗ್ಗಿಸಿ ಪ್ರಾರ್ಥನೆ ಮಾಡಿ ಕ್ಷಮೆ ಕೇಳಿ ಕೊಯ್ಯು ಮರದ ಹಲಗೆಗಳನ್ನು ಮಾಡುತ್ತಾನೆ. ಕೊನೆಯ ಹಂತದಲ್ಲಿ ಕನ್ನಡಿಯಂತೆ ಮಿಂಚಿ ಎಲ್ಲರ ಕಣ್ಣ ಸೂರೆಗೊಳ್ಳುವ ಕೆಂಪು-ಕಪ್ಪು ಪಾಲಿಶ್ ತಿಕ್ಕಿ ಉಜ್ಜಿದರೆ ತನ್ನ ಮುಖವೇ ಕಾಣಬೇಕು. ಅದನ್ನೇ ಚಾರ್ಲ್ ಡಿಕಿನ್ಸ್ ತನ್ನ ಶಬ್ದಗಳಲ್ಲಿ ಹೇಳಿದ್ದು: ”the varnished wood reflected in the depth of its grain, through all its polish, the hue of the wretched slaves.”  

ಅದೇ ಭಾವವನ್ನು ಆ ಕರಿಯ ಕವಯಿತ್ರಿ (ಮಲಿಕಾ ಬುಕರ್) ತನ್ನ ಮನ ಕಲುಕುವ ಕವನದ ಸಾಲುಗಳಲ್ಲಿ ಹೇಳಿದ್ದಾಳೆ:

In Jamaica in the big house, the house girl is on her knees

polishing the wood floor with coconut oil and orange halves.

ಬೆನ್ನ ಮೇಲೆ ಚಾಟೆಯೇಟಿನ ಕಲೆಗಳುಳ್ಳ ಗುಲಾಮ

In England servants kneel with linseed and brick dust,

worshiping this majestic red, genuflecting.

In the kitchen cook prepares the tea tray for Master. It too

is fancy wood. She walks through the house to deliver

to a man hunched over a desk shaping his will. Now think of Brodsworth, …

ಆ ಕುಖ್ಯಾತ ಉಯಿಲು!

ಪೀಟರ್ ಥೆಲ್ಲುಸನ್ ಸ್ವತಃ ಡೋಂಕಾಸ್ಟರಿನ ಈ ಮನೆಯಲ್ಲಿ ವಾಸ ಮಾಡಿರಲಿಲ್ಲ. ಈ ಮನೆಯನ್ನು ಆತನ ಮೊಮ್ಮಗ (ಒಂದನೆಯ ಭಾಗದಲ್ಲಿ ಹೇಳಿದಂತೆ) 1860 ರಲ್ಲಿ ಚಾರ್ಲ್ಸ್ ಸಾಬಿನ್ ಕಟ್ಟಿಸಿದ. ಆತನ ಅಜ್ಜ ಪೀಟರ್ 1797ರಲ್ಲಿ ತೀರಿಕೊಳ್ಳುವ ಮೊದಲು ಮಾಡಿದ ವೈಶಿಷ್ಠ್ಯಪೂರ್ನ ಮೃತ್ಯುಪತ್ರ ಇತಿಹಾಸವನ್ನೇ ಮಾಡಿತು. ಆಗ ಆತನ ವಾರ್ಷಿಕ ರಿಯಲ್ ಎಸ್ಟೇಟ್ ಆಸ್ತಿ £5000 ದಷ್ಟಿತ್ತು. ಅದಲ್ಲದೆ ವೈಯಕ್ತಿಕ ಎಸ್ಟೇಟ್ ಆಗಿನ ಆರು ಲಕ್ಷ ಪೌಂಡುಗಳಿಗೆ ಟ್ರಸ್ಟೀಗಳನ್ನು ನೇಮಿಸಿ ಅವೆಲ್ಲಕ್ಕೂ ಒಂದು ವಿಚಿತ್ರ ’ಅಕ್ಯೂಮ್ಯುಲೇಷನ್ ಕ್ಲಾಸ್’ ಹಾಕಿ ಇಟ್ಟ. ಅದರ ಪ್ರಕಾರ ”ಆತನ ಆಸ್ತಿಯನ್ನು ಎಲ್ಲಿಯವರೆಗೆ ಬೆಳೆಯುವಂತೆ ತೊಡಗಿಸಬೇಕೆಂದರೆ ತನ್ನ ಮರಣದ ಸಮಯದಲ್ಲಿ ಬದುಕಿರುವ ಮೊಮ್ಮಕ್ಕಕಳ ಕೊನೆಯಗಂಡು ಸಂತತಿ ಬದುಕಿರುವವರೆಗೆ! ಆವರೆಗೆ ಅದು ಆಗಿನ ಕಾಲದ ಒಂದೂವರೆ ಕೋಟಿ ಪೌಂಡುಗಳಷ್ಟು ಆಗಿರಬಹುದಾಗಿದ್ದು ಅದನ್ನು ಅವರಿಗೆ ಹಂಚ ಬೇಕು” ಎಂದು. ಹಿಂದೆಂದೂ ಈ ತರದ ಉಯಿಲನ್ನು ಕಂಡಿರಲಿಲ್ಲ. ಅದನ್ನು ಆತನ ಹೆಂಡತಿ ಮಕ್ಕಳು ಪ್ರಶ್ನಿಸಲಾಗಿ ಟ್ರಸ್ಟುಗಳಿಗೆಂದೇ ಮೀಸಲಾಗಿದ್ದ  ಚಾನ್ಸರಿ ಕೋರ್ಟಿಗೆ ಬಗೆ ಹರಿಸಲು ತಲೆಬೇನೆಯಾಗಿ ಹೋಯಿತು. ಕೊನೆಗೆ ಮುಂದೆ ಇಂಥ ಮೃತ್ಯು ಪತ್ರಗಳು ಬರಬಾರದೆಂದು ’Thelluson Act’ ಎನ್ನುವ ಹೊಸ ಕಾನೂನೇ ಪಾಸು ಮಾಡಬೇಕಾಯಿತು! ಎಂದಿನಂತೆ ಇಂಥ ವ್ಯಾಜ್ಯಗಳು ಮುಗಿಯದೆ ವರ್ಷಾನುಗಟ್ಟಲೆ ಕೋರ್ಟ್ ಮೆಟ್ಟಲು ಹತ್ತಿಸಿದ ಬಗೆಹರಿಸಿ ಲಾಯರು, ಕೋರ್ಟಿನ ಖರ್ಚು, ಫೀಸ್ ಗಳನ್ನು ಕಳೆದ ನಂತರ ’ಗೆದ್ದ’ ಫಲಾನುಭವಿಗಳಿಗೆ (beneficiaries) ದೊರಕಿದ್ದು ತಮ್ಮ ಮೊದಲಿನ ವರ್ಷಾಸನಕ್ಕಿಂತ ಏನೂ ಹೆಚ್ಚಾಗಿರಲಿಲ್ಲ! ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ! ಈ ಕೇಸನ್ನು ಆಧರಿಸಿಯೇ ಚಾರ್ಲ್ಸ್ ಡಿಕೆನ್ಸ್ ’ಬ್ಲೀಕ್ ಹೌಸ್’ (Bleak House) ಎನ್ನುವ ಕಥೆ ಬರೆದನೆಂದು ಪ್ರತೀತಿ. ಕೆಲವರು ಇದನ್ನು ಒಪ್ಪ್ದದಿದ್ದರೂ ಕೆಂಟ್ ಪ್ರಾಂತದ ಬ್ರಾಡ್ಸ್ಟೇರ್ಸ್ ಎನ್ನುವ ಊರಲ್ಲಿಯ ಆ ಹೆಸರಿನ ಮನೆಗೂ ಆ ಕಾದಂಬರಿಗೂ ಏನೂ ಸಂಬಂಧವಿಲ್ಲ ಅನ್ನುತ್ತಾರೆ, ಅಲ್ಲಿ ಕುಳಿತು ಆ ಕಥೆಯನ್ನು ಬರೆದ ಎನ್ನುವದನ್ನು ಬಿಟ್ಟರೆ.

ನೋವು-ನಲಿವುಗಳನ್ನು ಹಾಡುವ ಕಿರುಸ್ತಂಭ 

ಥೆಲ್ಲುಸ್ಸನ್ ಮನೆಯ ಹಿಂದಿನ ಗ್ರೋಟೊದಲ್ಲಿ (ಭಾಗ -೧ ನೋಡಿರಿ) ಟಾರ್ಗೆಟ್ ಹೌಸ್ ಎದುರುಗಡೆ ತೋಟದಲ್ಲಿ ಬಟನ್ ಒತ್ತಿದರೆ  ಒಂದು ಮರದ ಕಿರುಸ್ತಂಭದಿಂದ ಎರಡು ಧ್ವನಿಮುದ್ರಿಕೆಗಳನ್ನು ಕೇಳಬಹುದು. ಒಂದರಲ್ಲಿ  ಗ್ರೆನಾಡಾದಾಮೀಪದ ದ್ವೀಪದಲ್ಲಿ ಪ್ರಚಲಿತವಿರುವ ಕರಿಯಾಕೋ ಡ್ರಮ್ ಮತ್ತು ನೃತ್ಯದ ಸಂಗೀತ ಕೇಳಬರುತ್ತದೆ. ಇನ್ನೊಂದರಲ್ಲಿ  ಪೀಟರ್ ಥೆಲ್ಲುಸನ್ ಸಾಲದ ಕಾಗದಪತ್ರದಲ್ಲಿ ನಮೂದಿಸಿದ ಗ್ರೆನೇಡಾದ ಬಕೋಲೆಯ (Bacolet Plantation, 1772) 101 ಅಫ್ರಿಕನ್ ಗುಲಾಮರ ಹೆಸರುಗಳನ್ನು ಇವೆಟ್ ಫಿಲ್ಬರ್ಟ್ ಓದುವದನ್ನು ಕೇಳಬಹುದು. ಸುಂದರ ಉದ್ಯಾನದಲ್ಲಿ ಮೈಮರೆತು ಆನಂದಿಸುವ ಪ್ರೇಕ್ಷಕರಿಗೆ ಅದರಲ್ಲಡಗಿದ ರಹಸ್ಯದ ಅರಿವೇ ಇರಲಾರದು. (ಲೇಖನದ ಕೊನೆಯಲ್ಲಿಯ ವಿಡಿಯೋವನ್ನು ನೋಡಿರಿ).

ಈಶಾವಾಸ್ಯಮಿದಂ ಸರ್ವಂ … ಮಾ ಗೃಧ ಕಸ್ಯಸ್ವಿದ್ಧನಂ

ಕೊನೆಯ ಮಾತು. ಈ ಎರಡು ಲೇಖನಗಳಲ್ಲಿ ಒಂದು ಕುಟುಂಬ ತಲೆತಲಾಂತರಗಳಿಂದ ವಾಸಮಾಡಿದ ಸುಂದರ ಮನೆ, ತೋಟಗಳನ್ನು ನೋಡಿದ್ದಾಯಿತು. ಆ ಸಂಪತ್ತಿನ ಹಿಂದಿನ ರಹಸ್ಯವನ್ನೂ ತಿಳಿದೆವು. ಇಲ್ಲಿ ಈಶಾವಾಸ್ಯ ಉಪನಿಷತ್ತಿನ ಮೊದಲ ಶ್ಲೋಕದ ಉಲ್ಲೇಖದಿಂದ ಇದನ್ನು ಮುಗಿಸುವೆ. ಅದರ ಸಂಕ್ಷಿಪ್ತ ತಾತ್ಪರ್ಯ ಹೀಗಿದೆ: ’ಈ ಜಗತ್ತೆಲ್ಲವೂ ಭಗವಂತನ ವಾಸಕ್ಕಾಗಿಯೇ ಇದೆ. ನಮಗೆ ದೊರಕಿದ್ದನ್ನು ತ್ಯಾಗಬುದ್ಧಿಯಿಂದ ಸ್ವೀಕರಿಸ ಬೇಕು ಮತ್ತು ಅನ್ಯರು ’’ಗಳಿಸಿದ” ಸಂಪತ್ತಿನ ಮೇಲೆ ದುರಾಸೆ ಪಡ ಬೇಡ.

ಶ್ರೀವತ್ಸ ದೇಸಾಯಿ

ಫೋಟೋಗಳು ಮತ್ತು ವಿಡಿಯೋ ಶ್ರೀವತ್ಸ ದೇಸಾಯಿ ಮತ್ತು ಗೂಗಲ್.

*ಆಧಾರ: ಪುಸ್ತಕ/ಲೇಖನಗಳು:

1)https://historicengland.org.uk/images-books/publications/slavery-and-british-country-house/slavery-british-country-house-web/

2)  https://www.nationaltrust.org.uk/features/addressing-the-histories-of-slavery-and-colonialism-at-the-national-trust

3) https://www.english-heritage.org.uk/siteassets/home/learn/research/the-slavery-connections-of-brodsworth-hall.pdf

4) Brodsworth Hall and Gardens: English Heritage Guidebooks; http://www.english-heritage.org.uk ; ISBN 978978-1-84802-014-6

 

 

 

ವೈಚಾರಿಕ ಲೇಖನ ಮತ್ತು ಹೊಸ ಬರಹಗಳ ಸರಣಿ ‘ಬದುಕು ಬದಲಿಸಿದ ಪುಸ್ತಕ’.

ಆತ್ಮೀಯ ಓದುಗರೇ, 
ಕಳೆದ ವಾರ ಪ್ರಕಟಗೊಂಡ 'ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ' ಲೇಖನದ ಮೊದಲ ಭಾಗವನ್ನು ತಾವೆಲ್ಲರೂ ಓದಿ ಮೆಚ್ಚಿಕೊಂಡು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿದ್ದೀರಿ. ನೀವೆಲ್ಲರೂ ಕಾಯುತ್ತಿರುವ ಈ ಲೇಖನದ ಎರಡನೇ ಭಾಗ ಈ ವಾರ ಪ್ರಕಟವಾಗುತ್ತಿದೆ. ಜೊತೆಗೆ ಕೆಲ ವಾರಗಳ ಹಿಂದೆ ಓದುಗರಿಗೆ ಅವರ ಮೆಚ್ಚಿನ, ಬದುಕಿನ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡಿದ  ಆ ಬದುಕು ಬದಲಿಸಿದ ಪುಸ್ತಕದ ಬಗ್ಗೆ ಕಿರು ಲೇಖನವನ್ನು ಬರೆಯುವಂತೆ ವಿನಂತಿಯನ್ನು ಮನ್ನಿಸಿ ಹಲವಾರು ತಮ್ಮ ಆ ಸರಣಿಯ ಮೊದಲ ಬರಹ ಈ ವಾರ ಪ್ರಕಟವಾಗುತ್ತಿದೆ. ಶ್ರೀರಂಜನಿ ಸಿಂಹ ಅವರು ತಮ್ಮ ಮನಸಿಗೆ ಸಾಂತ್ವನ ನೀಡಿ ಆಶಾಭಾವ ಹೊಮ್ಮಿಸಿದ ಪುಸ್ತಕಗಳ ಬಗ್ಗೆ ಬರೆದಿದ್ದಾರೆ. 
ಈ ಸರಣಿಗೆ ತಾವೆಲ್ಲರೂ ಬರೆಯಿರಿ. ಈ ರೀತಿಯಲ್ಲಿ ಹೊಸ ಪುಸ್ತಕಗಳ ಬಗ್ಗೆ ನಾವೆಲ್ಲರೂ ತಿಳಿಯುವಂತಾಗಲಿ ಎಂಬ ಆಶಯದೊಂದಿಗೆ 
ಈ ವಾರದ ಓದಿಗೆ ತಮಗಿದೋ ಸ್ವಾಗತ. 
-ಸಂಪಾದಕಿ   

ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ-ಭಾಗ ೨

ಲೇಖಕರು-ಡಾ ಜಿ ಎಸ್ ಶಿವಪ್ರಸಾದ್,ಶೇಫೀಲ್ಡ್ ಯು.ಕೆ

ಉದಾರತೆ, ವೈಚಾರಿಕತೆ, ಮತ್ತು ಸಾಮಾಜಿಕ ಜವಾಬ್ದಾರಿ ಈ ಮೂರು ಏಕ ಕಾಲಕ್ಕೆ ಮೇಳವಿಸಿದ್ದು ೧೨ನೇ ಶತಮಾನದ ಬಸವಕೇಂದ್ರಿತ ಶರಣ ಚಳುವಳಿಯಲ್ಲಿ, ಇವು ಶರಣ ತತ್ವದ ಮೂರು ಮುಖಗಳು ಎಂದು ಜಿ. ಎಸ್. ಎಸ್. ಕರೆದಿದ್ದಾರೆ. ಅವರು ಇದನ್ನು ಮುಂದಕ್ಕೆ ವಿಸ್ತರಿಸಿ ಸಮಾಜದ ಎಲ್ಲ ಸ್ತರಗಳನ್ನು ಸಮಾನವೆಂದು ಪರಿಗಣಿಸಲು ಉದಾರತೆ ಬೇಕು, ವ್ಯವಸ್ಥೆಯೊಳಗಿನ ತಾರತಮ್ಯಗಳನ್ನು ಪ್ರಶ್ನಿಸುವುದಕ್ಕೆ ವೈಚಾರಿಕತೆ ಬೇಕು, ಇದಕ್ಕೆ ಅನುಗುಣವಾಗಿ ಹೊಸ ಸಮಾಜವೊಂದನ್ನು ನಿರ್ಮಿಸಲು ಸಾಮಾಜಿಕ ಜವಾಬ್ದಾರಿ ಬೇಕು ಎನ್ನುತ್ತಾರೆ. ಜಿ.ಎಸ್.ಎಸ್ ಚಿಂತನೆಗಳ ಸಂಗ್ರಹವಾದ 'ಶರಣ ಪಥ' ಎಂಬ ಸಂಕಲನದಲ್ಲಿ ಈ ವಿಚಾರಗಳು ಪ್ರಸ್ತಾಪಗೊಂಡಿವೆ. 

ಈ ವೈಜ್ಞಾನಿಕ ಯುಗದಲ್ಲಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದು ಬಹಳ ಅವಶ್ಯವಾಗಿದೆ. ಅಮೇರಿಕದ  'ನ್ಯಾಸ' ಕೇಂದ್ರದವರು ಉಡಾಯಿಸಿದ ಅಪೋಲೊ ೧೩ ರಾಕೆಟ್ ವಿಫಲಗೊಂಡ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ  ದೇಶಗಳಲ್ಲಿ ೧೩ ಎಂಬ ಸಂಖ್ಯೆಯ ಬಗ್ಗೆ ಮೂಢನಂಬಿಕೆಗಳು ಹುಟ್ಟಿಕೊಂಡಿವೆ. ಇಲ್ಲಿಯ ವಸತಿಗಳಲ್ಲಿ, ಬಹು ಅಂತಸ್ತಿನ ಕಟ್ಟಡಗಳಲ್ಲಿ, ಹೋಟೆಲ್ ಕೊಠಡಿಗಳಲ್ಲಿ ೧೩ ಸಂಖ್ಯೆ ಕಾಣೆಯಾಗಿದೆ. ೧೩ ಎಂಬ ಸಂಖ್ಯೆ ದುರದೃಷ್ಟದ ಕುರುಹಾಗಿ ಅದು ಅಮಂಗಳವೆಂದು ಪರಿಗಣಿಸಲಾಗಿದೆ. ಹೀಗೆ ವೈಜ್ಞಾನಿಕವಾಗಿ ಮುನ್ನಡೆದ ಸುಶೀಕ್ಷಿತ ಪಾಶ್ಚಿಮಾತ್ಯ   ದೇಶಗಳಲ್ಲಿ ಮೂಢನಂಬಿಕೆ ಸ್ವಲ್ಪ ಮಟ್ಟಿಗೆ ಪ್ರಚಲಿತವಾಗಿರುವಾಗ ಅಭಿವೃದ್ಧಿ ಗೊಳ್ಳುತ್ತಿರುವ ಮತ್ತು ಧಾರ್ಮಿಕ ನಂಬಿಕೆಗಳಿಂದ  ತುಂಬಿರುವ  ಭಾರತದಲ್ಲಿ ಮೂಢನಂಬಿಕೆಗಳು ಸಾವಿರಾರು ವರ್ಷಗಳಿಂದ ಮನೆಮಾಡಿಕೊಂಡಿವೆ. ೮೦೦ ವರ್ಷಗಳ ಹಿಂದೆಯೇ ಈ ಮೂಢನಂಬಿಕೆಗಳನ್ನು ಪ್ರಶ್ನಿಸುವ ವೈಚಾರಿಕ ಮನೋಭಾವವನ್ನು ಜನರಲ್ಲಿ ಬೆಳೆಸುವ ಪ್ರಯತ್ನವನ್ನು ಬಸವಾದಿ ಶರಣರು ಮಾಡಿದ್ದಾರೆ. 
'ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತೆ ಉಂಟೆ'? ಎಂದು ಪ್ರಶ್ನಿಸಿ ಮುಂದಕ್ಕೆ ‘ಸತ್ಯ ನುಡಿವುದೇ ದೇವಲೋಕ, ಮಿಥ್ಯ ನುಡಿವುದೇ ಮರ್ತ್ಯ ಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎನ್ನುತ್ತಾ ಇಹ-ಪರ ಲೋಕಗಳ ಪರಿಕಲ್ಪನೆಗಳನ್ನು ಶರಣರು ತಿರಸ್ಕರಿಸಿದ್ದಾರೆ. ಇಂದಿನ ದಿನಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಚಾಲನೆಯಲ್ಲಿರುವ ಎಷ್ಟೋ ಸಂಗತಿಗಳನ್ನು ನಾವು ನಂಬುವುದೇ ಕಷ್ಟೆ.  ಕೆಲವರು  ತಮ್ಮ ಆಲೋಚನಾ ಕ್ರಮಕ್ಕೆ, ತಮ್ಮ ಸಿದ್ಧಾಂತಕ್ಕೆ, ರಾಜಕೀಯ ನಿಲುವಿಗೆ  ಸರಿದೂಗುವಂತೆ  ನಿಜವಾದ ಸಂಗತಿಗಳನ್ನು ತಿರುಚಿ ವ್ಯವಸ್ಥಿತವಾಗಿ ಅದನ್ನು ವಾಟ್ಸ್ ಆಪ್ ಗುಂಪುಗಳಲ್ಲಿ ಹಂಚಿ ಪ್ರಚಾರಕ್ಕಾಗಿ ಬಳೆಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 'ಮಿಥ್ಯ ನುಡಿವುದೇ ಮರ್ತ್ಯಲೋಕ' ಎಂಬ ಬಸವ ತತ್ವದ ಬಗ್ಗೆ ನಾವೆಲ್ಲಾ ಧೀರ್ಘವಾಗಿ ಚಿಂತಿಸಬೇಕಾಗಿದೆ.

'ಭಕ್ತನಿರ್ದ ತಾಣವೇ ದೇವಲೋಕ, ಭಕ್ತನಂಗಳವೇ ವಾರಣಾಸಿ, ದೇಹವೇ ದೇಗುಲ' ಎಂದು ಹೇಳುತ್ತಾ ದೇವಸ್ಥಾನಗಳನ್ನು ಶರಣರು ನಿರಾಕರಿಸಿದ್ದಾರೆ. ದೇವಸ್ಥಾನದ ಒಂದು ಚೌಕಟ್ಟಿನಲ್ಲಿ ಮೂರ್ತವಾದ ದೇವರನ್ನು ಧಿಕ್ಕರಿಸಿ, ಬಯಲೆಂಬ ಮುಕ್ತ ಪರಿಸರದಲ್ಲಿ, ನಿರಾಕಾರದಲ್ಲಿ, ಇಷ್ಟಲಿಂಗದಲ್ಲಿ  ದೇವರನ್ನು ಕಾಣುವ ಪರಿಕಲ್ಪನೆಯನ್ನು ಒದಗಿಸಿದ್ದಾರೆ. ನಾವು ಆಚರಿಸುವ ಕೆಲವು ಪೂಜೆ ಪುನಸ್ಕಾರಗಳ, ಧಾರ್ಮಿಕ ವಿಧಿಗಳ ಬಗ್ಗೆ ಆಲೋಚಿಸಿ; 
 

ಕಲ್ಲ ನಾಗರ  ಕಂಡರೆ  ಹಾಲನೆರೆಯಂಬರು 
ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ 
ಉಂಬ ಜಂಗಮ ಬಂದರೆ ನಡೆಯಂಬರು 
ಉಣ್ಣದ ಲಿಂಗಕೆ ಬೋನವ ಹಿಡಿ ಎಂಬರಯ್ಯ 

ಎನ್ನುತ್ತಾ  ನಮ್ಮ ಆಚರಣೆಗಳನ್ನು ವಿಮರ್ಶಿಸಿದ್ದಾರೆ. ಇನ್ನು ಕೆಲ ಶರಣರು ವೇದ ಶಾಸ್ತ್ರ ಪುರಾಣಗಳನ್ನು, ಆಗಮಗಳನ್ನು , ಪಾಪ -ಪುಣ್ಯ ಕರ್ಮವೆಂಬ ಕಲ್ಪನೆಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ನಮ್ಮ ಸಮಾಜದಲ್ಲಿ ಅರ್ಥಹೀನವಾದ ಅವೈಜ್ಞಾನಿಕ ನಂಬಿಕೆಗಳು ಅನುಷ್ಠಾನ ದಲ್ಲಿದ್ದು ಈ ವೈಜ್ಞಾನಿಕ ಯುಗದಲ್ಲಿ,  ಬದಲಾಗುತ್ತಿರುವ ಸಮಾಜದಲ್ಲಿ ವೈಚಾರಿಕತೆಯನ್ನು ಬೆಳಸಿಕೊಳ್ಳಬೇಕಾಗಿದೆ. ಧರ್ಮದ ನೆಪದಲ್ಲಿ ಮೂಡುವ ಭಾವೋದ್ವೇಗವನ್ನು ಪಕ್ಕಕ್ಕಿಟ್ಟು ಚಿಂತಿಸಬೇಕಾಗಿದೆ.

'ಎನಗಿಂತ ಕಿರಿಯರಿಲ್ಲಯ್ಯ ಮತ್ತು ತನ್ನ ಬಣ್ಣಿಸಬೇಡ'ಎಂಬ ವಚನದ ಸಾಲುಗಳು ತನ್ನ ಪ್ರಸ್ತುತತೆಯನ್ನು ಇಂಗ್ಲೆಂಡಿನಲ್ಲಿ ವಿಶೇಷವಾಗಿ ಕಂಡುಕೊಂಡಿದೆ. ಈ ಭಾವನೆಗಳನ್ನು ನಾವು ಅನಿವಾಸಿಗಳು ಇಲ್ಲಿ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ. ವೃತ್ತಿಯ ಪರಿಸರದಲ್ಲಿ ಕಿರಿಯರು ಹಿರಿಯರಿಗೆ 'ಸರ್' ಎನ್ನುತ್ತಾ ತಲೆಬಾಗಿಸುವುದಿಲ್ಲ, ಅತಿಯಾದ ವಿನಮ್ರತೆ ಮತ್ತು ವಿಧೇಯತೆಗಳನ್ನು ತೋರುವುದು ಇಲ್ಲಿ ಕಂಡುಬರುವುದಿಲ್ಲ. ಹಿರಿಯರು ಅದನ್ನು ನಿರೀಕ್ಷಿಸುವುದೂ ಇಲ್ಲ. ಒಂದು ಕಛೇರಿಯಲ್ಲಿ ಮೇಲಧಿಕಾರಿಯೂ ಸಾಮಾನ್ಯ ಉದ್ಯೋಗಿಯೂ ಬಿಡುವಿನ ವೇಳೆಯಲ್ಲಿ ಒಟ್ಟಿಗೆ ಕುಳಿತು ಕಾಫಿ ಹೀರುವುದು, ಹರಟುವುದು ಮತ್ತು ಎಲ್ಲರು ಒಂದು ತಂಡದಂತೆ ಕೆಲಸ ಮಾಡುವುದನ್ನು ಕಾಣಬಹುದು. ಇವರ ವ್ಯಕ್ತಿತ್ವದಲ್ಲಿ ದರ್ಪವಾಗಲಿ ಅಥವಾ ಆಡಂಬರವಾಗಲಿ ಇರುವುದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಮತ್ತು ನೋಬಲ್ ಪ್ರಶಸ್ತಿ ಪಡೆದ ಪ್ರಖ್ಯಾತ ನಾಯಕರು, ಸಾಹಿತಿಗಳು, ವಿಜ್ಞಾನಿಗಳು ಬಾಳಿ ಬದುಕಿದ್ದಾರೆ. ಇವರು ಯಾವುದೇ ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಹೆಗ್ಗಳಿಕೆಯ ಬಗ್ಗೆ ಮಾತನಾಡುವುದಿಲ್ಲ. ಹೊಗಳಿಕೆ ಇವರಿಗೆ ಸಂಕೋಚದ ವಿಚಾರವಾಗಿರುತ್ತದೆ. ಈ ವಿನಯಶೀಲರು 'ಎನಗಿಂತ ಕಿರಿಯರಿಲ್ಲಯ್ಯ' ಎಂಬ ಭಾವನೆಯಲ್ಲಿ ಬದುಕುತ್ತಿದ್ದಾರೆ.  'ತನ್ನ ಬಣ್ಣಿಸಬೇಡ' ಎಂಬ ಸಾಲುಗಳ ಬಗ್ಗೆ ಚಿಂತಿಸುವಾಗ ಪ್ರಪಂಚದ ನಾನಾ ದೇಶಗಳಲ್ಲಿ ನೂರಾರು ವರ್ಷಗಳಿಂದ ರಾಜ ಮಹಾರಾಜರಿಗೆ ಹೊಗಳು ಭಟ್ಟರು ಇದುದ್ದನ್ನು  ನಾವು ಇತಿಹಾಸದಲ್ಲಿ ಗಮನಿಸಬಹುದು. ಈಗಿನ ಕಾಲಕ್ಕೆ ಆ ಹೊಗಳುಭಟ್ಟರ ಹೊಗಳಿಕೆಗಳ ಹಳೆಯ ಸಂಪ್ರದಾಯವನ್ನು ರಾಜಕಾರಣಿಗಳ ಅನುಯಾಯಿಗಳು ಉಳಿಸಿಕೊಂಡಿದ್ದಾರೆ. ಇದನ್ನು ನಾವು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಬಹುದು

'ಎನ್ನವರೊಲಿದು ಹೊನ್ನ ಶೂಲದಲಿ ಇಕ್ಕಿದರೆನ್ನ 
ನಿಮ್ಮ ಮನ್ನಣೆಯೇ ಅಲುಗಾಗಿ ತಾಕಿತ್ತಲ್ಲಾ 
ಅಯ್ಯ ನೊಂದೆನು ಸೈರಿಸಲಾರೆನು 
ನೀ ನನಗೆ ಒಳ್ಳಿದನಾದರೆ 
ಎನ್ನ ಹೊಗಳತೆಗೆ ಅಡ್ಡ ಬಾರ'

ಎನ್ನುವ ಈ ಬಸವಣ್ಣನವರ ಸರಳ ವಚನ ಜನ ಸಾಮಾನ್ಯರಿಂದ ಹಿಡಿದು ಅಧಿಕಾರದಲ್ಲಿ ಮತ್ತು ಉನ್ನತ ಸ್ಥಾನದಲ್ಲಿರುವ ಎಲ್ಲರಿಗೂ ಪ್ರಸ್ತುತವಾದ ಸಂದೇಶ ಎನ್ನಬಹುದು. ಒಮ್ಮೆ ‘ಸೂರ್ಯ ಮುಳುಗದ ಸಾಮ್ರಾಜ್ಯ’ವೆಂದು ತಮ್ಮನು ತಾವು ಹೊಗಳಿಕೊಂಡು, ತಮ್ಮ ದೇಶವನ್ನು ಗ್ರೇಟ್ ಬ್ರಿಟನ್ ಎಂಬ ಹೆಸರಿನಲ್ಲಿ ಕರೆದು ಕೊಳ್ಳುತ್ತಿದ್ದ ಇಂಗ್ಲೆಂಡ್ ಈಗ ಕಾಲ ಬದಲಾದಂತೆ ತನ್ನ ಹಿಂದಿನ ತಪ್ಪುಗಳನ್ನು, ಸ್ವಾಭಿಮಾನವನ್ನು ಸಂಕೋಚದಿಂದ ಪಕ್ಕಕ್ಕೆ ತಳ್ಳಿ ಈಗ ವಿನಮ್ರವಾಗಿದೆ.  'ಕಾಯಕವೇ ಕೈಲಾಸ' ಎಂಬ ಬಸವ ತತ್ವ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಷ್ಠಾನದಲ್ಲಿದೆ. ಇಲ್ಲಿ ಎಲ್ಲ ವೃತಿಯೂ ಸಮಾನವೆಂದು ಪರಿಗಣಿಸಲ್ಪಡುತ್ತದೆ. ಇಲ್ಲಿ ವೃತ್ತಿಗಿಂತ ಅದರ ಹಿಂದೆ ಇರುವ ವ್ಯಕ್ತಿ, ಅವನ ಶ್ರದ್ಧೆ ಮುಖ್ಯವಾಗುತ್ತದೆ. ಇಲ್ಲಿಯ ಜನ ಸಂಭಾಷಣೆಯಲ್ಲಿ ತೊಡಗಿದಾಗ; 'ನೀನು ಯಾವ ವೃತ್ತಿಯಲ್ಲಿದ್ದೀಯಾ? ನಿನಗೆ ಸಂಬಳವೆಷ್ಟು? ಎಂಬ ಪ್ರಶ್ನೆಯನ್ನು ಯಾರು ಯಾರಿಗೂ ಕೇಳುವುದಿಲ್ಲ. ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಹಂಬಲ ಮತ್ತು ಛಲ ಇವು ಇಲ್ಲಿಯ ಬದುಕಿನ ರೀತಿ ನೀತಿಗಳಾಗಿವೆ.  

ಅನಿವಾಸಿಗಳಾದ ನಮಗೆ ಕನ್ನಡ ಮಾತೃಭಾಷೆಯಾದರೆ ಇಂಗ್ಲಿಷ್ ಪರಿಸರದ ಭಾಷೆ. ಹಾಗೆ ನಮ್ಮ ಧರ್ಮ ಹಿಂದೂ ಧರ್ಮವಾದರೆ ಪರಿಸರದ ಧರ್ಮ ಕ್ರೈಸ್ತ ಧರ್ಮವಾಗಿದೆ. ಕ್ರೈಸ್ತ ಧರ್ಮಧ ಕೆಲವು ಬೋಧನೆಗಳನ್ನು ಗಮನಿಸಿದಾಗ ಅಲ್ಲಿ ನಮಗೆ ಬಸವಣ್ಣನವರ ತತ್ವ ಕಾಣಿಸಿಕೊಳ್ಳುತ್ತದೆ. "ದಯವೇ ಧರ್ಮದ ಮೂಲವಯ್ಯ' ಎಂದು ಬಸವಣ್ಣ ಹೇಳಿದ್ದರೆ, ಕ್ರೈಸ್ತ ಧರ್ಮವು, ‘ದೇವರಿಗೆ ಧನ್ಯತೆಯನ್ನು ಸೂಚಿಸು, ಅವನ ದಯೆ ಎಂದೆಂದಿಗೂ ಇರುತ್ತದೆ, ದಯೆ, ನ್ಯಾಯ ತೀರ್ಪುಗಳನ್ನು ಮೀರಿದ್ದು’ ಎಂಬುದಾಗಿ ಸಾರುತ್ತದೆ. ‘ಕ್ರೈಸ್ತ ಧರ್ಮದಲ್ಲಿ ನಿನ್ನ ದೇಹವು ನಿನ್ನ ಪವಿತ್ರ ಚೇತನದ ಮಂದಿರ, ಆ ಚೇತನವನ್ನು ವಿಜೃಂಭಿಸಿ ಆರಾಧಿಸು’ ಎಂದು ಹೇಳಿದರೆ, ಬಸವಣ್ಣನವರು 'ದೇಹವೇ ದೇಗುಲ' ಎಂಬ ಕಲ್ಪನೆಯನ್ನು ಒದಗಿಸಿದ್ದಾರೆ. "ಯಾರಾದರೂ ನಿನ್ನ ಬಲ ಕೆನ್ನೆಗೆ ಹೊಡೆದರೆ ಅವರಿಗೆ ನಿನ್ನ ಎಡಕೆನ್ನೆಯನ್ನು ತೋರಿಸು ಎಂಬ ಸಹನೆಯ ಮಾತನ್ನು ಜೀಸಸ್ ಹೇಳಿದ್ದಾರೆ ಇದೇ ಮಾತನ್ನು;

" ತನಗೆ ಮುನಿದವರಿಗೆ ತಾ ಮುನಿಯಲೇಕೆಯ್ಯಾ  
ತನುವಿನಕೋಪ ತನ್ನ ಹಿರಿಯತನದ ಕೇಡು 
ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೆ 
ನೆರೆಮನೆಯ ಸುಡದು, ಕೂಡಲ ಸಂಗಮದೇವ" 

ಎಂದು ಬಸವಣ್ಣ ಹೇಳುತ್ತಾರೆ. ಎರಡು ಸಾವಿರ ವರುಷಗಳ ಹಿಂದೆ ದೂರದ ಬೆಥ್ಲೆಹೆಮ್ ನಗರದಲ್ಲಿ  ಹುಟ್ಟಿದ ಮಹಾನ್ ಪುರುಷ ಜೀಸಸ್ ಮತ್ತು ಅಲ್ಲಿಂದ ಒಂದುಸಾವಿರ ವರುಷಗಳ ನಂತರ ಕರ್ನಾಟಕದಲ್ಲಿ ಹುಟ್ಟಿದ ಮಹಾನುಭಾವಿ  ಬಸವಣ್ಣನವರ ತತ್ವಗಳು ಎಷ್ಟು ಸಾದೃಶ್ಯವಾಗಿವೆ ಎನ್ನುವ ವಿಚಾರ ಆಶ್ಚರ್ಯಕರವಾಗಿದೆ. 'ದೇವನೊಬ್ಬ ನಾಮ ಹಲವು' ಎಂದು ಬಸವಣ್ಣ ಹೇಳಿದ್ದರೇ 'ಎಷ್ಟು ಮತಗಳೋ ಅಷ್ಟು ಪಥಗಳು ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. "ಅವರವರ ದರುಶನಕೆ, ಅವರವರ ದೇಶದಲಿ, ಅವರವರಿಗೆಲ್ಲ ಗುರು ನೀನೊಬ್ಬನೇ" ಎಂದು ಮುಪ್ಪಿನ ಷಡಕ್ಷರಿ ಹೇಳಿದ್ದಾರೆ.  ಹೀಗೆ ಪ್ರಪಂಚದ ಸಾಧು ಸಂತರ, ಮಹಾಪುರುಷರ ಅನುಭಾವದಲ್ಲಿರುವ ಸಾಮ್ಯ ಗಮನಾರ್ಹವಾದದ್ದು ಮತ್ತು ಎಲ್ಲ ಮತಗಳನ್ನು ಗೌರವದಿಂದ ಸಮಾನವಾಗಿ ಕಾಣುವ ಸಂದೇಶ ಇಂದಿನ ಸಾಮಾಜಿಕ ಪರಿಸ್ಥಿತಿಗೆ ಪ್ರಸ್ತುತವಾಗಿದೆ. 

ಇಂಗ್ಲೆಂಡಿನಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೂಡಿದ 'ಸಫ಼್ರಜೆಟ್ ಚಳುವಳಿ' ಚಾರಿತ್ರಿಕವಾಗಿ ಮಹತ್ವವಾದದ್ದು. ೧೯೧೮ ರಲ್ಲಿ ತೀವ್ರವಾದ ಈ ಚಳುವಳಿಯಿಂದ ಸ್ತ್ರೀಯರ ಸ್ಥಾನಮಾನಗಳಿಗೆ ವಿಶೇಷ ಅರ್ಥದೊರಕಿತು. ಸ್ತ್ರೀಯರು ಚುನಾವಣೆಯಲ್ಲಿ ಮತಚಲಿಸುವುದಕ್ಕೆ ಅನುವುಮಾಡಿಕೊಟ್ಟಿತು. ಇತಿಹಾಸದ ಎಲ್ಲ ಹಂತಗಳಲ್ಲಿ ಸ್ತ್ರೀಯರು ಸಮಾಜದಲ್ಲಿ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಯಿತು. ಈ ಆಧುನಿಕ ಯುಗದಲ್ಲೂ ಮೂಲಭೂತವಾದಿ ಧಾರ್ಮಿಕ ಆಲೋಚನೆಯುಳ್ಳ ಕೆಲವು ದೇಶಗಳಲ್ಲಿ ಸ್ತ್ರೀಯರು ತಮ್ಮ ಅಸ್ತಿತ್ವವನ್ನು ಮತ್ತು ಮೂಲಭೂತ ಹಕ್ಕುಗಳನ್ನು     ಉಳಿಸಿಕೊಳ್ಳುವುದರ ಬಗ್ಗೆ ಆತಂಕವಿದೆ. ಈ ಹೋರಾಟ ಇನ್ನೂ ನಡೆಯುತ್ತಿದೆ. ಆದರೆ ೮೦೦ ವರ್ಷಗಳ ಹಿಂದೆಯೇ ಬಸವಣ್ಣನವರು ಸ್ತ್ರೀಯರಿಗೆ ಸಮಾಜದಲ್ಲಿ ಪುರುಷ ಸಮಾನ ಹಕ್ಕುಗಳನ್ನು ಒದಗಿಸಿ ಕೊಟ್ಟರು. ಪೂಜೆ ಮಾಡಲು ಸ್ತ್ರೀ ಅರ್ಹಳಲ್ಲ ಎಂಬ ಪರಿಸ್ಥಿತಿಯಲ್ಲಿ "ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎನ್ನುತ್ತಾ 'ಶರಣ
ಸತಿ-ಲಿಂಗ ಪತಿ' ಎಂಬ ಪರಿಕಲ್ಪನೆಯನ್ನು ಕೊಟ್ಟು ಗಂಡು ಹೆಣ್ಣಿನ ಮಧ್ಯ ಇರುವ ಭೇದಗಳನ್ನು ತೊಡೆದು ಹಾಕಿದರು. 

ಪ್ರಜಾಪ್ರಭುತ್ವದ ತವರೂರಾದ ಇಂಗ್ಲೆಂಡಿನಲ್ಲಿ ಕುಳಿತು ಪ್ರಜಾಪ್ರಭುತ್ವದ ಬಗ್ಗೆ ಯೋಚಿಸುವಾಗ ೮೦೦ ವರ್ಷಗಳ ಹಿಂದೆ ಬಸವಣ್ಣನವರು ಜ್ಯಾತ್ಯಾತೀತವಾದ, ಲಿಂಗ ಬೇಧವಿಲ್ಲದ ವಿಚಾರವಂತರ, ವೇದಿಕೆಯನ್ನು ಕಲ್ಪಿಸಿದ್ದರು, ಅಲ್ಲಿ ಜನಪರ ಸಾಮಾಜಿಕ ಹಾಗು ಆಧ್ಯಾತ್ಮಿಕ ವಿಚಾರಗಳನ್ನು ಅನುಭವ ಮಂಟಪದಲ್ಲಿ ವಿನಿಮಯ ಮಾಡಿಕೊಂಡು ಚರ್ಚಿಸುತ್ತಿದ್ದರು ಎಂಬ ವಿಚಾರ ಅತ್ಯಂತ ಶ್ಲಾಘನೀಯವಾದದ್ದು. ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಅಲ್ಲಿ ಪ್ರಧಾನವಾಗಿದ್ದು ಅದು ಪ್ರಜಾಪ್ರಭುತ್ವದ ಒಂದು ಮಾದರಿಯಾಗಿತ್ತು. ಈ ವಿಚಾರಗಳು ಇಡೀ ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.

ದಯೆ, ಕರುಣೆ, ಅನುಕಂಪೆ, ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆ, ಕಾಯಕದಲ್ಲಿ ಶ್ರದ್ಧೆ, ದಾಸೋಹ, ವಿನಯ ಶೀಲತೆ ಮುಂತಾದ ಉತ್ತಮ ಮೌಲ್ಯಗಳನ್ನು ಬಸವಾದಿ ಶರಣರು ಎತ್ತಿ ಹಿಡಿದಿದ್ದಾರೆ. ಈ ಮೌಲ್ಯಗಳು ಪ್ರಪಂಚದ ಯಾವ ದೇಶದಲ್ಲಾದರೂ ಒಂದು ಆರೋಗ್ಯಕರವಾದ ಸಮಾಜವನ್ನು ಕಟ್ಟಲು ಬೇಕಾಗಿರುವ ಅಡಿಗಲ್ಲುಗಳು. ಹೀಗಾಗಿ ಈ ಮೌಲ್ಯಗಳನ್ನು ಒಳಗೊಂಡ ಶರಣ ತತ್ವ ವೈಯುಕ್ತಿಕ ಮತ್ತು ಸಾಮೂಹಿಕ ನೆಲೆಯಲ್ಲಿ, ಎಲ್ಲ ದೇಶಗಳಿಗೂ ಎಲ್ಲ ಕಾಲಕ್ಕೂ ಪ್ರಸ್ತುತವಾದದ್ದು.

ಬದುಕು ಬದಲಿಸಿದ ಪುಸ್ತಕ

ಲೇಖಕಿ-ಶ್ರೀರಂಜನಿ ಸಿಂಹ

ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು,'ನಮ್ಮ ಬದುಕಿನಲ್ಲಿ ಸ್ನೇಹಿತರ ಕೊರತೆ ಯಾವತ್ತೂ ಇರಲ್ಲ ಪುಸ್ತಕ ಒಂದಿದ್ದರೆ ಸಾಕು'ಎಂದು. ಬೇಸಿಗೆ ರಜೆ ಬರಲಿ, ದಸರಾ ರಜೆ ಇರಲಿ ಆ ರಜೆಯಲ್ಲಿ ಪುಸ್ತಕ ಓದುವುದು, ಗ್ರಂಥಾಲಯಕ್ಕೆ ಹೋಗಿ ಪುಸ್ತಕ ತರುವುದು ನನ್ನ ದೈನಂದಿನ ಕೆಲಸವಾಗಿತ್ತು. ನಾನು ಸದ್ವಿದ್ಯಾ ಶಾಲೆಯಲ್ಲಿ ಓದುತ್ತಿದ್ದಾಗ ಪುಸ್ತಕ ಓದುವ ಹವ್ಯಾಸ ಇನ್ನೂ ಹೆಚ್ಚಾಯಿತು,tinkle ಪಂಚತಂತ್ರ Competitive success, Wisdom, Tell me why ನಂತಹ ಪುಸ್ತಕಗಳನ್ನು ಓದುತ್ತಿದ್ದೆ. ಇವೆಲ್ಲ ಪುಸ್ತಕಗಳಲ್ಲಿ ಯಾವುದಾದರೂ ಪದ ಅರ್ಥ ಆಗದೆ ಇದ್ದರೆ, ಆ ಪದವನ್ನು Oxford Dictionary ( ಆಂಗ್ಲ ಭಾಷೆ -ಕನ್ನಡ) ಯಲ್ಲಿ ಹುಡುಕಿ ಹೊಸ ಪದಗಳೆಂದು ಕಲಿಯುವ ವಾಡಿಕೆ. (ಇವೆಲ್ಲ tables, square root, cube root ಜೊತೆಗೆ ಓದುತ್ತಿದ್ದ ಪದಗಳು). ಕಾಲ ಕಳೆದಂತೆ ಪುಸ್ತಕ ಓದುವ ಆಸಕ್ತಿ ಹೆಚ್ಚಾಗಿ, ನನಗೆ ಇಷ್ಟವಾಗುವ ಆಂಗ್ಲ ಭಾಷೆಯ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ.

ನನಗೆ ತುಂಬಾ ಬೇಸರ ಆದಾಗ ಮೂರು ಕೆಲಸ ಮಾಡುತ್ತೇನೆ - ಗಿಡಗಳನ್ನು ಬೆಳೆಸುವುದು, ಗಿಡಗಳ ಜೊತೆ ಮಾತನಾಡುವುದು, ಅಡುಗೆ ಮಾಡುವುದು, ಪುಸ್ತಕ ಓದುವುದು. ಪುಸ್ತಕ ಎಂದರೆ ಸ್ನೇಹಿತರಿದ್ದಹಾಗೆ, ಈವಾಗಲಂತೂ ಎಲ್ಲೆಂದರಲ್ಲಿ digital ರೂಪದಲ್ಲಿ ಪುಸ್ತಕ ಓದುವ ಅನುಕೂಲವಿದೆ, ಹೀಗಾಗಿ ಪುಸ್ತಕ ಓದುವುದರಿಂದ ವಿಚಾರ ವಿನಿಮಯ, ದೇಶದ ಆಗು ಹೋಗುಗಳ ಬಗ್ಗೆ ತಿಳುವಳಿಕೆ, ಹೊಸಪದ ಪರಿಚಯ, ಸಾಂಸ್ಕೃತಿಕ ವೈವಿಧ್ಯತೆ ಎಲ್ಲದರ ಅನುಭವವಾಗುತ್ತದೆ. ಅಂತಹ ಪುಸ್ತಕಗಳಲ್ಲಿ ನನಗೆ ಬಹಳ ಹತ್ತಿರವಾದ ಪುಸ್ತಕಗಳು ಎಂದರೆ - You can Win (By Shiv Khera) , ನಾ ಕಂಡ ಕಲಾವಿದರು - ಶ್ರೀ ಮೈಸೂರು ವಾಸುದೇವಾಚಾರ್ಯರು, What Can I give? - (By Abdul Kalam Sir Personal Assistant - Srijan Pal Singh)

ನಾನು ನಮ್ಮ ತಂದೆಯನ್ನು ಕಳೆದುಕೊಂಡ ನಂತರ ಓದಿದ ಪುಸ್ತಕ ಎಂದರೆ - You can Win. ನನ್ನ ವಿಚಲಿತವಾದ ಮನಸನ್ನು, ಆ ಪುಸ್ತಕವನ್ನು ಓದಿ ನಿಧಾನವಾಗಿ ಸಮಾಧಾನ ಮಾಡಿಕೊಂಡೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ, ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋ ಮಾತುಗಳು, ಹೇಳಕ್ಕೆ ಕೇಳಕ್ಕೆ ಚಂದ ಆದರೆ ಅಂತಹ ಪರಿಸ್ಥಿತಿ ನಮಗೆ ಬಂದಾಗ ನಮ್ಮ ಮನಸ್ಸು ತುಂಬಾ ನಿಧಾನ ಗತಿಯಲ್ಲಿ ಒಪ್ಪಿಕೊಳ್ಳುತ್ತದೆ. ಈ ಪುಸ್ತಕದಿಂದ ನನಗೆ ನಿಧಾನವಾಗಿ ಈ ವಿಷಯ ಅರಿವಾಯಿತು, ಮತ್ತೊಂದು ವಿಷಯ ಎಂದರೆ " Always count on blessings" ನಾವು  ಹಿರಿಯರಲ್ಲಿ ಯಾವಾಗಲೂ ಆಶೀರ್ವಾದ ಪಡೆಯುತ್ತೇವೆ. ಯಾಕೋ ಏನೋ ನಮ್ಮ ತಂದೆಯವರನ್ನು ಕಳೆದುಕೊಂಡ ನಂತರ ನನಗೆ ಆಶೀರ್ವಾದ ಇಲ್ಲವೇನೋ ಅನ್ನಿಸುತಿತ್ತು, ಈ ವಾಕ್ಯ ಮತ್ತೆ ಮತ್ತೆ ಓದಿದ ನಂತರ ಒಂದಂತೂ ಅನ್ನಿಸಿದ್ದು ನಿಜ ಲಕ್ಷ್ಮೀನರಸಿಂಹ ಕಾಪಾಡಪ್ಪ ಎಂದು ಕೇಳಿಕೊಂಡೆ ಎಲ್ಲ ನೆರವೇರಿದೆ. 

ನಾನು ದ್ವಿತೀಯ ಪದವಿ ಪೂರ್ವ ಮುಗಿಸಿದ ನಂತರ, BE in Industrial Production ಅಧ್ಯಯನ ಮಾಡಿದ್ದು SJCE ಕಾಲೇಜ್ ನಲ್ಲಿ. ಹದಿ ಹರೆಯದ ವಯಸ್ಸಿನಲ್ಲಿ  ಬರೀ fiction ಪುಸ್ತಕಗಳೇ ಓದಿದ್ದು, ಮಧ್ಯದಲ್ಲಿ ನಾ ಓದಿದ ಒಂದು ಪುಸ್ತಕ - ''ನಾ ಕಂಡ ಕಲಾವಿದರು''ನಮ್ಮ ಊರಿನ ವಿದ್ವಾಂಸರಾದ ಶ್ರೀ ವಾಸುದೇವಾಚಾರ್ಯರು ಬರೆದ ಈ ಪುಸ್ತಕದಲ್ಲಿ ಅವರು ಕಂಡ ಹಲವಾರು ಕಲಾವಿದರ ಬಗ್ಗೆ ಬರೆದಿದ್ದಾರೆ. ಅವರು ಕಲಿಕೆಯ ಮಹತ್ವವನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಅಂಥ ವಿದ್ವಾಂಸರೇ ವಯಸ್ಸಿನ ಅಡ್ಡಿಯಿಲ್ಲದೇ ಕಲಿಯುವ ಪ್ರಯತ್ನ ಮಾಡುತ್ತಾರೆ ಅಂದರೆ ನಮ್ಮ ಕೈಯಲ್ಲೂ ಸಾಧ್ಯ ಎಂದು ಮನದಟ್ಟು ಮಾಡಿಸಿದ ಪುಸ್ತಕ ಇದು . ಈ ಪುಸ್ತಕ ನನ್ನನು ಮುಂದೆ ಕರ್ನಾಟಕ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಪ್ರೇರೇಪಿಸಿತು ಎಂದರೆ ತಪ್ಪಿಲ್ಲ.

ನನಗಿಷ್ಟವಾದ ಇನ್ನೊಂದು ಪುಸ್ತಕ  - What Can I give? by Sir Srijan Pal Singh. ಈ ಪುಸ್ತಕ ನಾನು ಮೊಟ್ಟ ಮೊದಲ ಬಾರಿಗೆ ಓದಿದ್ದು ಚುನಾವಣೆಯಲ್ಲಿ ಮತ ಚಲಾಯಿಸುವ ಮೊದಲು. ದಿವಂಗತ ರಾಷ್ಟ್ರಪತಿ A P J Abdul Kalam sir ಅವರ ಒಂದೊಂದು ಅನುಭವದ ಮಾತು, ದೇಶಕ್ಕೆ ನಾವು ಎಂತಹ ಪ್ರಜೆಗಳಾಗಿ ಇರಬೇಕೆನ್ನುವ ಕುರಿತು ನನ್ನನು ಚಿಂತನೆ ಮಾಡಲು ಹಚ್ಚಿತು. 
...................................................................................................................................................