ಈ ವಾರವೂ ಎರಡು ಪ್ರಸ್ತುತಿಗಳು ಇವೆ. ಮೊದಲು ವತ್ಸಲಾ ರಾಮಮೂರ್ತಿಯವರು ಬರೆದ ಲೇಖನ ಅಪರೂಪದ ಪ್ರತಿಭೆ, ಅಪ್ರತಿಮ ಸಾಧಕಿಯೋರ್ವಳನ್ನು ಕುರಿತಾದ ನಾಟಕದ ವಿಮರ್ಶೆ ಮತ್ತು ಎರಡನೆಯದಾಗಿ ಶಿವ ಮೇಟಿಯವರ ಕತೂಹಲಕಾರಿ ಧಾರಾವಾಹಿ ಕಥೆಯ ಮುಕ್ತಾಯದ ಭಾಗವನ್ನು ಸಹ ಓದಿ ಅವಶ್ಯ ಪ್ರತಿಕ್ರಿಯೆಸಿರಿ. ನಾಗಾಭರಣ ಅವರು ಆಕೆಯ ಕಥೆಯನ್ನು ಹೇಳುವ ವಿಡಿಯೋ ಸಹ ಕೆಳಗೆ ಇದೆ. (ಸಂ)
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.Wishing you all Merry Christmas and a Happy New Year 2023
1) ವಿದ್ಯಾಸುಂದರಿ ‘ಬೆಂಗಳೂರು ನಾಗರತ್ನಮ್ಮ‘ - ವತ್ಸಲ ರಾಮಮೂರ್ತಿಯವರು ಬರೆದ ಲೇಖನ

ಪೀಠಿಕೆ ನಾನು ಈ ಸಲದ ‘ಅನಿವಾಸಿ‘ಯ ದೀಪಾವಳಿ ಸಮಾರಂಭದ ಕಾರ್ಯಕ್ರಮಕ್ಕೆಅನಾನುಕೂಲತೆಗಳಿಂದ ನನ್ನಿಂದ ಬರಲಾಗಲಿಲ್ಲ.ಅದರಲ್ಲಿ ನಾಗಾಭರಣರ ನಾಟಕ ವಿದ್ಯಾಸುಂದರಿ ‘ಬೆಂಗಳೂರು ನಾಗರತ್ನಮ್ಮ‘ ಬಗ್ಗೆ ವಿಮರ್ಶೆ ಮಾಡಲು ಒಪ್ಪಿಕೊಂಡಿದ್ದೆ. ಅವರ ಜೀವನಚರಿತ್ರೆಯನ್ನು ನಾನಾ ಮೂಲಗಳಿಂದ ಸಂಗ್ರಹಿಸಿದ್ದೆ. ಅದರ ಸಾರಾಂಶ ಕೆಳಗಿದೆ.
ಪ್ರಸಿದ್ಧ ರಂಗಕರ್ಮಿ ಮತ್ತು ಸಿನಿಮಾ ಡೈರೆಕ್ಟರ್ ನಾಗಾಭರಣ ಅವರಿಗೆ ಬೆಂಗಳೂರು ನಾಗರತ್ನಮ್ಮನವರ ಬಗ್ಗೆ ಸಿನಿಮಾ (biopic) ಮಾಡಲು ಕರೆ ಬಂದಿತ್ತು. ಸಿನಿಮಾ ತಯಾರಿಸಲು ಆಕೆಯ ಬಗ್ಗೆ ಸಂಶೋಧನೆ ನಡೆಸಿದ ಅವರು ಶ್ರೀರಾಮರವರ ಇಂಗ್ಲಿಷ್ ಪುಸ್ತಕ Devadasi and Saint -The Life and Times of Nagaratnamma ಮತ್ತು ಮೈಸೂರು ಗುರುಸ್ವಾಮಿಯವರ ಅದೇ ಹೆಸರಿನ ಕಾದಂಬರಿ ಓದಿ ಅವರ ವ್ಯಕ್ತಿತ್ವ ಮತ್ತು ಸಾಧನೆಗಳಿಗೆಮಾರು ಹೋದರು. ಬೈಯೋಪಿಕ್ ತಯಾರಿಸಲು ಕಷ್ಟವೆಂದು ತಿಳಿದು ಕರ್ನಾಟಕ ಸಂಗೀತದ(ಗಮಕ) ಮೂಲಕ ಕನ್ನಡದಲ್ಲಿ ಮ್ಯೂಸಿಕಲ್ ಮಾಡಿದರು. ಅವರು ಎಲ್ಲರೂ ನಾಗರತ್ನಮ್ಮ ಅವರ ಬಗ್ಗೆ ತಿಳಿಯಬೇಕೆಂದಿದ್ದಾರೆ. ಬೆಂಗಳೂರು ನಾಗರತ್ನಮ್ಮ ಅವರ ಕಿರು ಪರಿಚಯ. ಅವರು ಹುಟ್ಟಿದ್ದು 1878ರಲ್ಲಿ. ಅವರ ತಾಯಿ ಪುಟ್ಟಲಕ್ಷಮ್ಮ ದೇವದಾಸಿ ಪರಂಪರೆಯವರು. ಅವರತಂದೆ ವಕೀಲ ಸುಬ್ಬರಾಯರು ಅವರನ್ನು ತೊರೆದು ಹೋದ ನಂತರ ಪುಟ್ಟಲಕ್ಷಮ್ಮ ಮೈಸೂರುಆಸ್ಥಾನದಲ್ಲಿ ವಿದ್ವಾಂಸರಾಗಿದ್ಧ ಶಾಸ್ತ್ರಿಯವರ ಆಸರೆ ಪಡೆದರು ಶಾಸ್ತ್ರಿಯವರು ನಾಗರತ್ನಮ್ಮನಿಗೆ ಸಂಸ್ಕೃತ, ನೃತ್ಯ, ಕರ್ನಾಟಕ ಸಂಗೀತ, ಇಂಗ್ಲಿಷ್, ತೆಲಗು ಭಾಷೆಗಳನ್ನೂ ಕಲಿಸಿದರು. ಅವರು ಸಹ ಪುಟ್ಟಲಕ್ಷ್ಮಮ್ಮನವರನ್ನು ಬಿಟ್ಟು ಹೋದರು. ಆಮೇಲೆ ಪುಟ್ಟಲಕ್ಷಮ್ಮ ಅವರು ಮೈಸೂರನ್ನು ಬಿಟ್ಟು ತಮ್ಮ ಸಂಬಂಧಿ ವಯೊಲಿನ್ ವಿದ್ವಾನ್ ವೆಂಕಟೇಶ್ವರಪ್ಪನವರ ಆಶ್ರಯ ಪಡೆದರು. ಅವರ ಆಶ್ರಯದಲ್ಲಿ ಗುರು-ಶಿಷ್ಯೆ ಪರಂಪರೆಯಲ್ಲಿ ಸಂಗೀತ ಮತ್ತು ನೃತ್ಯದಲ್ಲಿ ಪಾರಂಗತರಾದರು. ತಮ್ಮಹದಿನೈದನೆಯ ವಯಸ್ಸಿನಲ್ಲಿ ಸಂಗೀತ ವಿದುಷಿಯಾಗಿ ರಂಗಾರ್ಪಣೆ ಮಾಡಿದರು. ಅವರು ಸಂಸ್ಕೃತ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಹಾಡುತ್ತಿದ್ದರು. ಅವರ ವಿಶೇಷವಾದ ಕಲೆ ‘ಹರಿಕತೆ’. ಅವರು ಹರಿಕತೆಯನ್ನು ಜನ ಸಾಮಾನ್ಯರಿಗೆ ದೊರಕುವಂತೆಮಾಡಿದರು. ನಂತರ ಬೆಂಗಳೂರಿಗೆ ಬಂದು ಹೈ ಕೋರ್ಟ್ ಜಜ್ ನರಹರಿ ರಾಯರ ಆಶ್ರಯದಲ್ಲಿಅವರ ಪ್ರತಿಭೆಯ ಬಗ್ಗೆ ತಿಳುವಳಿಕೆ ಪಸರಿಸಿತು. ಎಲ್ಲ ಜನರಿಗೂ ಅವರ ಬಗ್ಗೆ ಗೊತ್ತಾಯಿತು. ನರಹರಿರಾಯರು ಅವರ ಪ್ರತಿಭೆ ಮುಂದುವರಿಯಲು ಅವರನ್ನು ಮದರಾಸ್ನಲ್ಲಿ ಮೊದಲಿಯಾರ್ ಅವರ ಆಶ್ರಯಕ್ಕೆ ಕಳಿಸಿದಾಗಿನಿಂದ ಅವರ ಪ್ರತಿಭೆ ಮತ್ತು ಖ್ಯಾತಿ ಮುಗಿಲೆತ್ತರಕ್ಕೆ ಬೆಳೆಯಿತು. ಅನೇಕ ಪ್ರಶಸ್ತಿ, ಬಿರುದು ಬಾವಲಿಗಳು ಅವರನ್ನರಸಿ ಬಂದವು. ಅವರು ಹೇಳಿದ್ದೇನೆಂದರೆ ತ್ಯಾಗರಾಜರು ಅವರ ಕನಸಿನಲ್ಲಿ ಬಂದು ಅವರ ಸ್ಮಾರಕ ಮತ್ತು ಕರ್ನಾಟಕ ಸಂಗೀತ ಪರಂಪರೆಯನ್ನು ಮುಂದುವರಿಸ-ಲು ಹೇಳಿದರಂತೆ. ನಾಗರತಮ್ಮ ಅವರು ತಮ್ಮ ಜೀವನವನ್ನುಕರ್ನಾಟಕ ಸಂಗೀತ ಮತ್ತು ತ್ಯಾಗರಾಜರಕೀರ್ತಗಳನ್ನು ಹೆಸರಿವಾಸಿಯಾಗಿ ಮಾಡಲು ಮುಡುಪಾಗಿಟ್ಟರು. ಪಾಳು ಬಿದ್ದಿದ್ದ ತ್ಯಾಗರಾಜರ ಸಮಾಧಿಯನ್ನು ಪುನರತ್ಥಾನಗೊಳಿಸಿದರು. ಶ್ರೀರಾಮ ಮಂದಿರವನ್ನು ಕಟ್ಟಿಸಿದರು. ಅದಕ್ಕಾಗಿ ತಮ್ಮ ಒಡವೆ ಮತ್ತು ಹಣವನ್ನು (ಆಗಿನ ಕಾಲದಲ್ಲಿ Rs 36,000) ದಾನ ಮಾಡಿದರು.

ನಾಗರತ್ನಮ್ಮನವರ ವ್ಯಕ್ತಿತ್ವ ಅವರೊಬ್ಬ ಕಲಾವಿದೆ ಮತ್ತು ಕಲಾಭಿಮಾನಿ ಸಹ. ಚಿಕ್ಕ ವಯಸ್ಸಿನಿಂದ ಸಂಗೀತ, ನೃತ್ಯ, ಹರಿಕತೆಗಳಿಗೆಜೀವನವನ್ನೇ ಮುಡುಪಾಗಿಯಿಟ್ಟಿದ್ದರು. ತ್ಯಾಗರಾಜರ ಸಂಗೀತ ಪರಂಪರೆಯನ್ನು ಆರಾಧನೆಯ ಮೂಲಕ ಅಮರವಾಗಿ ಮಾಡಿದರು. ಇವತ್ತಿಗೂ ಅದು ಸಂಗೀತಪ್ರಿಯರಿಗೆ ರಸದೌತಣ. ಅವರು ಕ್ರಿಯಾವಾದಿ (activist). ಅವರ ಕಾಲದಲ್ಲಿ ಹೆಂಗಸರಿಗೆ ಅಷ್ಟು ಮರ್ಯಾದೆ ಇರಲಿಲ್ಲ. ಸಮಾಜದಲ್ಲಿ ಕೀಳು ಸ್ಥಿತಿ. ಅದರಲ್ಲೂ ದೇವದಾಸಿಯರನ್ನು ಕಡೆಗಣಿಸುತ್ತಿದ್ದರು. ಪುರುಷ ಸಂಗೀತಗಾರರು ತ್ಯಾಗರಾಜರ ಆರಾಧನೆಯ ಸಮಯದಲ್ಲಿ ಅವರಿಗೆ ಗುಡಿಯೊಳಗೆ ಹಾಡಲು ಅವಕಾಶ ಕೊಡುತ್ತಿರಲಿಲ್ಲ. ಅದಕ್ಕೆ ಸವಾಲಾಗಿ ಎಂಬಂತೆ ನಾಗರತ್ನಮ್ಮನವರು ತಮ್ಮದೇ ಆದ ಒಂದು ”ಸಂಗೀತ ಸಭೆ”ಯನ್ನು ಗುಡಿಯ ಹಿಂಭಾಗದಲ್ಲಿ ಶುರುಮಾಡಿದರು. ಕಾಲಾನಂತರ ಮಹಿಳೆಯರಿಗೂ ಪುರುಷರ ಸಮನಾಗಿ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶವಾಯ್ತು. ಅವರು ಮೊಟ್ಟ ಮೊದಲ ’ದೇವದಾಸಿ ಸಂಘ’ ಕಟ್ಟಿದರು. ದೇವದಾಸಿಯರು ವೇಶ್ಯೆಯರಲ್ಲ, ಕಲಾಭಿಮಾನಿಗಳೆಂದು ಸಾರಿದರು. ಅವರು ಪ್ರಪ್ರಥಮ ರೆಕಾರ್ಡಿಂಗ್ ಆರ್ಟಿಸ್ಟ್ ಗಳಲ್ಲೊಬ್ಬರು. ಆಗಿನ ಇಡೀ ಮದರಾಸು ಪ್ರೆಸಿಡೆನ್ಸಿಯಲ್ಲೇ ಇನ್ಕಮ್ ಟ್ಯಾಕ್ಸ್ ಕಟ್ಟಿದ ಪ್ರಥಮ ಮಹಿಳೆ ಅವರಾಗಿದ್ದರು. ಅವರು ವಿದ್ವಾಂಸಿ. ಅನೇಕ ಪುಸ್ತಕಗಳನ್ನು ಪ್ರಕಟಿಸಿದ ಮಹಿಳೆಯೆಂಬ ಹೆಗ್ಗಳಿಕೆ ಅವರದು. ಬಹು ಭಾಷಾ ಪರಿಣತಿಯರಾದ ಅವರು ಕವಿತೆ,ಮತ್ತಿತರ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರು 1952ರಲ್ಲಿ ನಿಧನರಾದರು.
Photos: Creative Commons License
ನಾಟಕದ ಬಗ್ಗೆ ಒಂದು ಅನಿಸಿಕೆ:
ನಾಟಕ ರೂಪವನ್ನು ಬರೆದವರು ಪ್ರತಿಭಾ ನಂದಕುಮಾರ್ ಮತ್ತು ಹೂಲಿ ಶೇಖರ್. ಸಂಗೀತ ಸಂಯೋಜನೆ ಮತ್ತು ನಿರ್ಮಾಣ ಡಾ ಪಿ. ರಮಾ ಅವರದು. ಬೆನಕ ಮತ್ತು ಸಂಗೀತ ಸಂಭ್ರಮ ಅವರು ಅರ್ಪಣೆ. ಮೊದಲ ಬಾರಿಗೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಸರಿಯಾಗಿ ಮೂರು ವರ್ಷದ ಕೆಳಗೆ 27-12-2019ರಂದು ಪ್ರದರ್ಶನಗೊಂಡಿತು. ಮೊದಲನೆಯ ದೃಶ್ಯದಲ್ಲಿ ಪಿರಿಯ ಕಚ್ಚಿ ಮತ್ತಿ ಚಿನ್ನ ಕಚ್ಚಿ ನಡುವೆ ಆರಾಧನೆಯ ಸಮಯದಲ್ಲಿ ಸುದೀರ್ಘ ವಿವಾದ ನಡೆಯುತ್ತದೆ. ಪುರುಷರ ಪೆರಿಯ ಕಚ್ಚಿ’ ಸ್ತ್ರೀಯರ ಸಂಗ ’ಚಿನ್ನ ಕಚ್ಚಿ’ಗೆ ಹಾಡಲು ಅವಕಾಶ ಕೊಡುತ್ತಿಲ್ಲ. ಆಗ ನಾಗರತ್ನಮ್ಮನವರು ತಮ್ಮ ಸಂಗೀತವನ್ನು ಪ್ರಾರಂಭಿಸುತ್ತಾರೆ. ಬೆಂಕಿಯ ಗಲಾಟೆಯಲ್ಲಿ ಸಮಾರಂಭ ನಿಲ್ಲಿಸಬೇಕಾಗುತ್ತದೆ. (ಬೆಂಕಿ ಹಚ್ಚಿದ್ದು ನಾಗರತ್ನಮ್ಮನವರ ಜಿದ್ದಿನಿಂದ!) ಹೀಗೆ ನಾಟಕ ನಾಗರತ್ನಮ್ಮನವರ ಜೀವನಕತೆ ಮೆಟ್ಟಲು ಮೆಟ್ಟಲಾಗಿ ಗಮಕ ಸಂಗೀತದಲ್ಲಿ ಸಾಗುತ್ತದೆ. ಅದರಲ್ಲಿ ’ನರಹರಿ ರಾಯರ ಮತ್ತು ಪತ್ನಿಯ ಸಂವಾದ,’ ನಾಗರತ್ನಮ್ಮನವರು ಒಡವೆ, ದುಡ್ಡು ಎಲ್ಲವನ್ನು ತ್ಯಾಗರಾಜರ ಆರಾಧನೆಗಾಗಿ ಕೊಡುವದು, ದೇವದಾಸಿಯರಿಗೆ ಸಹಾಯ ಮಾಡುವುದು, ಅವರ ಅಪಾರ ಕೊಡುಗೆಯನ್ನು ಮನಮುಟ್ಟುವಂತೆ ನಾಟಕದಲ್ಲಿ ಪ್ರದರ್ಶಿಸಿದ್ದಾರೆ. ನಾಟಕ ಬಹಳ ಗಂಭೀರವಾದ ವ್ಯಕ್ತಿ ಚಿತ್ರ. ಅದನ್ನು ಐದಾರು ಜನ ಸಂಗೀತಗಾರರು ಪಕ್ಕವಾದ್ಯಗಳ ಜೊತೆಗೆ ಒಂದೇ ರಾಗದಲ್ಲಿ ಅವರ ಜೀವನ ಚರಿತ್ರೆ ವಿವರಿಸುತ್ತಾರೆ. ಕೇಳುಗರಿಗೆ ಗಮಕ ಶೈಲಿ ಅರ್ಥವಾಗದಲ್ಲಿಕಥೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು. ಲಘು ಹಾಸ್ಯ ಸೇರಿಸಿದ್ದರೆ ಹಗುರವಾಗುತ್ತಿತ್ತೇನೋ ಎನಿಸುತ್ತದೆ. ಮಧ್ಯೆ ನಾಗರತ್ನಮ್ಮನ ಹಾಡುಗಳ, ತುಣುಕುಗಳ ಾವರ ಸಂಗೀತ ತಿಳಿಯದಿದ್ದವರಿಗೆ ಕಷ್ಟವೆನಿಸಿತು. ನಟನಟಿಯರು ಭಾವ್ಪೂರ್ವಗಿ ನಟಿಸಿದ್ದಾರೆ. Screen set up ಆಗಿನ ಕಾಲಕ್ಕೆ ಸರಿಯಾಗಿ ಜೋಡಿಸಿದ್ದಾರೆ. ನಾಗರತನಮ್ಮನವರ ವ್ಯಕ್ತಿತ್ವ ಚೆನ್ನಾಗಿ ಮೂಡಿ ಬಂದಿದೆ. ಅವರ ಜೀವನ ಚರಿತ್ರೆ ತಿಳಿಯದವರಿಗೆ musical follow ಮಾಡೋದು ಸ್ವಲ್ಪ ಕಷ್ಟವಾದರೂ ಕನ್ನಡದಲ್ಲಿ ಈ ಮ್ಯೂಸಿಕಲ್ ಮಾಡಿದ ನಾಗಾಭರಣ ಅವರಿಗೆ ಅನಂತ ವಂದನೆಗಳು
---ವತ್ಸಲ ರಾಮಮೂರ್ತಿ
2) ತಲಾಷ್ -3 - ಶಿವ ಮೇಟಿಯವರ ಕಥೆಯ ಕೊನೆಯ ಭಾಗ
(ಇಲ್ಲಿಯ ವರೆಗೆ: ಅಂಜಲಿ ಎನ್ನುವ ಶಾಲಾಬಾಲಕಿ ಇನ್ನೂ ಶಾಲೆಯಿಂದ ಮನೆಗೆ ಬಂದಿಲ್ಲ. ಆಲದ ಮರದ ಕೆಳಗೆ ಕುಳಿತ ಹುಚ್ಚಪ್ಪನ ಭವಿಷ್ಯವಾಣಿಯ ಜಾಡು ಹಿಡಿಯಬೇಕೆ? ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ ತಂದೆ ತಾಯಿಗಳು. ಮುಂದೆ ಓದಿ ...)
ವಸುಂಧರೆಯ ಮನಸಿನಲ್ಲಿ ಹುಚ್ಚಪ್ಪನ ಮಾತುಗಳು ಪ್ರತಿಧ್ವನಿಸುತಿದ್ದವು . ಅವನಾಡುವ ಪದಗಳು ಒಗಟಿನಂತೆ ಕಂಡರೂ, ಒರೆ ಹಚ್ಚಿ ನೋಡಿದಾಗ ಒಂದೊಂದು ಪದಕ್ಕೂ ಅರ್ಥವಿರುತ್ತಿತ್ತು . ಉತ್ತರ ದಿಕ್ಕಿನ ಕಡೆ ಆರು ಮೈಲಿನ ಅಂತರದಲ್ಲಿ ಅಂತದೇನು ವಿಶೇಷವಿದೆ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಂಡಳು. ಅವಳ ತಲೆಗೆ ಹೊಳೆದಿದ್ದು ಪಕ್ಕದ ಊರಿನ ಕಾಡಿನ ಆದಿಯಲ್ಲಿ ಇರುವ 'ದುರ್ಗಿ'ಯ ಗುಡಿ. ಕುರಿ ಕೋಣಗಳ ಬಲಿಗಳೊಂದಿಗೆ ಭರ್ಜರಿಯಾಗಿ ವರ್ಷಕ್ಕೊಮ್ಮೆ ನಡೆಯುತಿದ್ದ ದುರ್ಗಿಯ ಜಾತ್ರೆಗೆ ಅವಳೂ ಸಹ ಕೆಲವು ಸಲ ಹೋಗಿದ್ದಳು. ಆದರೆ ಅಂಜಲಿಗೂ ದುರ್ಗಿಯ ಗುಡಿಗೂ ಏನು ಸಂಬಂಧ? ಅಷ್ಟರಲ್ಲಿಯೇ ರಾಮುನ ಫೋನು ಒದರತೊಡಗಿತ್ತು. ಪೊಲೀಸ್ ಸ್ಟೇಷನ್ ನಿಂದ ಕರೆ: " ಸರ್ ಅಂಜಲಿಯ ಟೀಚರ್ ಮತ್ತು ಅಸಿಸ್ಟಂಟ್ ಇಬ್ಬರು ಸವದತ್ತಿಯಲ್ಲಿ ಸಿಕ್ಕಿದ್ದಾರೆ ವಿಚಾರಣೆ ಮುಂದುವರೆದಿದೆ; ಇಷ್ಟರಲ್ಲಿಯೇ ಎಲ್ಲಾ ಗೊತ್ತಾಗಬಹುದು, ನಿಮಗೆ ಮತ್ತೆ ಕರೆ ಮಾಡುತ್ತೇವೆ." " ದಯವಿಟ್ಟು ಕರೆ ಮಾಡಿ " ಎಂದು ಹೇಳಿದ ರಾಮುವಿನ ಮುಖದಲ್ಲಿ ಸ್ವಲ್ಪ ಭರವಸೆಯ ಚಿನ್ಹೆ ಮೂಡಿತ್ತು. " ವಸುಂಧರೆ ನಿನಗೇನು ಗೊತ್ತಾಗಿದೆ ಎಂದು ನನಗೂ ಸ್ವಲ್ಪ ಹೇಳಿಬಿಡೆ " ಎಂದು ಹೆಂಡತಿಯನ್ನು ಕೇಳಿದ. "ಇಷ್ಟರಲ್ಲಿಯೇ ಎಲ್ಲಾ ಗೊತ್ತಾಗುತ್ತೆ , ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ " ಎಂದು ಅನ್ನುವಷ್ಟರಲ್ಲಿಯೇ ಅವರಿಬ್ಬರೂ ಮನೆಯನ್ನು ಸೇರಿದ್ದರು. ' ಅರಿಷಿಣ ಕುಂಕುಮ ------- ಅರಿಷಿಣ ಕುಂಕುಮ' ಮತ್ತೆ ಹುಚ್ಚಪ್ಪನ ಮಾತುಗಳು ವಸುಂಧರೆಯ ಕಿವಿಯಲ್ಲಿ . ನೇರವಾಗಿ ದೇವರ ಕೋಣೆಗೆ ಹೋದಳು. ದೊಡ್ಡ ಕುಂಕುಮ ಮತ್ತು ಅರಿಷಿಣದ ಭರಣಿಗಳು ಕೋಣೆಯಿಂದ ಮಾಯವಾಗಿದ್ದವು. ವಸುಂಧರೆಯ ಮನಸಿನಲ್ಲಿ ಇದ್ದ ಸಂಶಯ ಇನ್ನಷ್ಟು ಗಟ್ಟಿಯಾಯಿತು . ಅತ್ತೆಯ ಕೋಣೆಯ ಬಾಗಿಲನ್ನು ತೆರೆದಳು . ಮಂಚದ ಮೇಲೆ ತೆರೆದ ಪುಸ್ತಕಗಳು ಹರಡಿದ್ದವು. ಕೆಲವು ಪುಟಗಳಲ್ಲಿ ಪೆನ್ನಿನಿಂದ ಮಾಡಿದ ಗುರುತುಗಳಿದ್ದವು , ಪುಟಗಳ ಅಂಚಿನಲ್ಲಿ ಅದೇನೋ ಟಿಪ್ಪಣಿಗಳಿದ್ದವು. ಅತ್ತೆಯು ಅದಾವುದೋ ' ತಲಾಷ್' ನಲ್ಲಿ ತೊಡಗಿದ್ದಳು ಎಂಬುವದರಲ್ಲಿ ಸಂಶಯವಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅತ್ತೆಯಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ವಸುಂಧರೆ ಸೂಕ್ಷ್ಮವಾಗಿ ನಿರೀಕ್ಷಿಸುತಿದ್ದಳು. ಕೋಣೆಯಿಂದ ಹೊರಗೆ ಬರುವದು ಕಡಿಮೆ ---- ಅದೇನೋ ಓದುತ್ತಿದ್ದಳು. ಕೆಲವು ಸಲ ತನ್ನ ಮನಸ್ಸಿನಲ್ಲಿಯೇ ಅದಾವುದೋ ಮಂತ್ರವನ್ನು ಜಪಿಸುತಿದ್ದಳು --- ಕೆಲವು ಸಲ ಯಾರದೋ ಜೊತೆಗೆ ತಾಸುಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿದ್ದಳು. ರಾಮುನ ಜೊತೆಗೂ ಮಾತು ಕಡಿಮೆಯಾಗಿತ್ತು . ವಸುಂಧರೆ ಅಂದಿದ್ದಳು " ಅತ್ತೆ ಯಾಕೋ ಇತ್ತೀಚಲಾಗಿ ಒಂದ ಥರಾ ಇದ್ದಾಳ." "ವಯಸ್ಸಿಗೆ ತಕ್ಕ ಬದಲಾವಣೆ ಇರಬಹುದು ಬಿಡು " ಎಂದು ರಾಮು ಮಾತು ಮರೆಸಿದ್ದ. ಎರಡು ದಿನಗಳ ಮುಂಚೆ ಅತ್ತೆ ಧಾರವಾಡದಲ್ಲಿರುವ ತನ್ನ ತಮ್ಮನ ಮನೆಗೆ ಹೋಗಿದ್ದಳು ವಸುಂಧರೆ ಕೋಣೆಯ ಹೊರಗೆ ಬಂದು ರಾಮುನಿಗೆ ಹೇಳುತ್ತಿದ್ದಳು: " ರೀ -- ಅತ್ತೆಗೆ ತಕ್ಷಣವೇ ಫೋನು ಮಾಡಿರಿ " " ಅವಳಿಗೆ ಫೋನು ಮಾಡಿದರೆ ಏನು ಸಿಗುತ್ತೆ?" ಎಂದ ರಾಮು. " ರೀ -- ನಿಮಗ ಗೊತ್ತಾಗುದಿಲ್ಲ , ಜಲ್ದಿ ಫೋನ್ ಮಾಡರಿ." ಹೆಂಡತಿಯ ಬಲವಂತಿಕೆಗೆ ರಾಮು ತಾಯಿಗೆ ಫೋನು ಮಾಡಿದ, ಆದರೆ ತಾಯಿ ಮಾತ್ರ ಫೋನು ಎತ್ತಲಿಲ್ಲ. ರಾಮುನಿಗೆ ಯಾಕೋ ಭಯವಾಯಿತು. ಧಾರವಾಡದ ಮಾವನಿಗೆ ಫೋನು ಮಾಡಿದ . ಉತ್ತರವನ್ನು ಕೇಳಿ ಇನ್ನೂ ಭಯವಾಯಿತು . ಮಾವ ಹೇಳಿದ್ದ - ಅವಳು ಧಾರವಾಡಕ್ಕೆ ಬಂದೆ ಇಲ್ಲವೆಂದು. "ವಸುಂಧರಾ! ಅವ್ವ ಧಾರವಾಡಕ್ಕೆ ಹೋಗೆ ಇಲ್ಲವಂತೆ , ನನಗ್ಯಾಕೊ ಭಯ ಆಗತಾ ಇದೆ , ಅದೆಲ್ಲಿ ಹೋದಳೇನೋ?" " ರೀ -- ನಿಮಗಿಂತ ಜಾಸ್ತಿ ಭಯ ನನಗ ಆಗೈತಿ. " 'ಅರೆ ರಾತ್ರಿ, ಟೈಮ್ ಇಲ್ಲ ' ಹುಚ್ಚಪ್ಪನ ಕೊನೆಯ ಮಾತುಗಳು ವಸುಂಧರೆ ಟೈಮ್ ನೋಡಿದಳು, ಆಗಲೇ ರಾತ್ರಿ ಒಂಭತ್ತು ಹತ್ತಿರವಾಗುತ್ತಿತ್ತು . "ರೀ -- ಟೈಮ್ ಜಾಸ್ತಿ ಇಲ್ಲ ಬೇಗನೆ ನಡೀರಿ." "ಎಲ್ಲಿಗೆ ಹೋಗಬೇಕೆ ? ನನಗೆ ಸ್ವಲ್ಪನೂ ಅರ್ಥ ಆಗತಾ ಇಲ್ಲ." "ನಿಮ್ಮ ಬೈಕ್ ತೆಗಿರಿ , ದುರ್ಗಿ ಗುಡಿಗೆ ಹೋಗಬೇಕು." "ನಿನಗೇನು ತಲೆ ಕೆಟ್ಟಿದೆ ಏನೇ ? ಈ ರಾತ್ರಿಯಲ್ಲಿ ದುರ್ಗಿ ಗುಡಿಯಲ್ಲಿ ಏನು ಮಾಡಬೇಕು?" "ನನಗೆ ತಲೆ ಕೆಟ್ಟಿಲ್ಲ , ನಿಮ್ಮ ತಾಯಿಗೆ ತಲೆ ಕೆಟ್ಟಿದೆ, ಸಮಯ ಜಾಸ್ತಿ ಇಲ್ಲ ಜಲ್ದಿ ನಡೀರಿ." ಉತ್ತರವಿಲ್ಲದೆ ರಾಮು ತನ್ನ ಬೈಕ್ ಅನ್ನು ಹೊರಗೆ ತೆಗೆದ. ಗಾಬರಿಯಲ್ಲಿದ್ದ ವಸುಂಧರೆಯನ್ನು ಕುಳ್ಳರಿಸಿಕೊಂಡು ದುರ್ಗಿಯ ಗುಡಿಯತ್ತ ಸಾಗಿದ. ಆಲದ ಕಟ್ಟೆಯ ಮೇಲೆ ಅರೆಬೆಳಕಿನಲ್ಲಿ ಕುಳಿತಿದ್ದ ಹುಚ್ಚಪ್ಪ ಇವರ ಬೈಕ್ ಅನ್ನು ಕಂಡು ಒದರುತ್ತಿದ್ದ "ಸಿಗತಾಳ್ ---- ಸಿಗತಾಳ್ --- ಅಂಜಲಿ ಸಿಗತಾಳ್ " ಅರೆಬೆಳಕಿನ ಅಡ್ಡ ರೋಡಿನಲ್ಲಿ ಸರ್ಕಸ್ ಮಾಡುತ್ತ ಬೈಕು ಗುಡಿಯ ಹತ್ತಿರ ಬಂದಿತ್ತು ವಸುಂಧರೆ ಬೈಕ್ ಅನ್ನು ದೂರವೇ ನಿಲ್ಲಿಸಲು ಹೇಳಿದಳು. ಸದ್ದಿಲ್ಲದೆ ನಿಧಾನವಾಗಿ ನಡೆಯುತ್ತಾ ಗುಡಿಯ ಕಡೆಗೆ ಸಾಗಿದರು. ಗುಡಿಯ ಮುಂದೆ ಬೆಂಕಿ ಉರಿಯುತ್ತಿತ್ತು, ಅದೇನೋ ಮಂತ್ರ ಪಠನೆ ಆಗುತಿತ್ತು, ನಡು ನಡುವೆ ಘಂಟೆಯ ಧ್ವನಿ ಕೇಳಿಸುತಿತ್ತು . ಇನ್ನೂ ಹತ್ತಿರ ಬಂದಾಗ ಯಜ್ಞದ ಬೆಂಕಿಯ ಮುಂದೆ ಅತ್ತೆಯ ಮುಖ ಸ್ಪಷ್ಟವಾಗಿ ಕಾಣಿಸತೊಡಗಿತು. ಇನ್ನೊಂದು ಕಡೆ ಒಬ್ಬ ವ್ಯಕ್ತಿ ಬೆಂಕಿಗೆ ತುಪ್ಪ ಸುರುವುತ್ತ ಮಂತ್ರ ಪಠನೆ ಮಾಡುತಿದ್ದ ಇಬ್ಬರ ನಡುವೆ ಅಂಜಲಿ ಕುಳಿತಿದ್ದಳು . ಆಕೆಯ ಮೈ ತುಂಬ ಅರಿಶಿಣ ಮತ್ತು ಕುಂಕುಮವನ್ನು ಸವರಿದ್ದರು . ಬಾಯಿಗೆ ಅರಿವೆಯನ್ನು ಕಟ್ಟಿದ್ದರು. ಇದೆಲ್ಲವನ್ನು ಕಂಡು ರೊಚ್ಚಿಗೆದ್ದ ವಸುಂಧರೆ "ಸಾಕು ಮಾಡ್ರಿ-- ಸಾಕು ಮಾಡ್ರಿ -- ನಿಮ್ಮನ್ನು ಸುಮ್ಮನೆ ಬಿಡುಲ್ಲಾ" ಎಂದು ಅವರತ್ತ ಧಾವಿಸಿದಳು. ಹಠಾತನೆ ಇವರನ್ನು ಕಂಡು ಬೆಚ್ಚಿ ಬಿದ್ದ ಅವರಿಗೆ ಏನು ಮಾಡಬೇಕೆಂದು ತೋರಲಿಲ್ಲ. ಮಂತ್ರ ಪಠಿಸುತ್ತಿದ್ದ ವ್ಯಕ್ತಿ ಕತ್ತಲಲ್ಲಿ ಓಡಲು ಪ್ರಾರಂಭಿಸಿದ, ರಾಮು ಅವನನ್ನು ಹಿಡಿಯಲು ಹಿಂಬಾಲಿಸಿದ್ದ. ಅಂಜಲಿ ಅಳುತ್ತ ಅಮ್ಮನನ್ನು ತಬ್ಬಿಕೊಂಡಳು. ಅತ್ತೆ ಹುಚ್ಚಿಯಂತೆ ಜೋಲಿ ಹೊಡಿಯುತಿದ್ದಳು, ಒಮ್ಮೆ ಗಟ್ಟಿಯಾಗಿ ನಕ್ಕು ಮತ್ತೊಮ್ಮೆ ಜೋರಾಗಿ ಅಳುತೊಡಗಿದಳು. ಉರಿಯುವ ಜ್ವಾಲೆಯ ಮುಂದೆ ಕುಂಕುಮಿನಿಂದ ಅಲಂಕೃತವಾದ ಹರಿತವಾದ ಆಯುಧ ಥಳ ಥಳಿಸುತಿತ್ತು. ಅತ್ತೆಯ ಮೂಢ ನಂಬಿಕೆ ಮತ್ತು ಕಂದಾಚಾರದ ' ತಲಾಷ್ ' ವ್ಯರ್ಥವಾಗಿತ್ತು! ( ಮುಗಿಯಿತು ) ---ಶಿವ ಮೇಟಿ
ಕಥೆ ಇಲ್ಲಿ ಮುಗಿದರು ಮಾತ್ರ ನಿಜ ಜೀವನದಲ್ಲಿ ನೀವು ಇಂಥ ಅಸಹ್ಯಯಕರ ಘಟನೆಯನ್ನು ಕೇಳುವದು ಮತ್ತು ಓದುವುದು ಎಂದೂ ಮುಗಿಯುವದಿಲ್ಲ!