ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ ಮತ್ತು ’ತಲಾಷ್’-ಭಾಗ 3

ಈ ವಾರವೂ ಎರಡು ಪ್ರಸ್ತುತಿಗಳು ಇವೆ. ಮೊದಲು ವತ್ಸಲಾ ರಾಮಮೂರ್ತಿಯವರು ಬರೆದ ಲೇಖನ ಅಪರೂಪದ ಪ್ರತಿಭೆ, ಅಪ್ರತಿಮ ಸಾಧಕಿಯೋರ್ವಳನ್ನು ಕುರಿತಾದ ನಾಟಕದ ವಿಮರ್ಶೆ ಮತ್ತು ಎರಡನೆಯದಾಗಿ ಶಿವ ಮೇಟಿಯವರ ಕತೂಹಲಕಾರಿ ಧಾರಾವಾಹಿ ಕಥೆಯ ಮುಕ್ತಾಯದ ಭಾಗವನ್ನು ಸಹ ಓದಿ ಅವಶ್ಯ ಪ್ರತಿಕ್ರಿಯೆಸಿರಿ. ನಾಗಾಭರಣ ಅವರು ಆಕೆಯ ಕಥೆಯನ್ನು ಹೇಳುವ ವಿಡಿಯೋ ಸಹ ಕೆಳಗೆ ಇದೆ. (ಸಂ)
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.Wishing you all Merry Christmas and a Happy New Year 2023
1) ವಿದ್ಯಾಸುಂದರಿ ‘ಬೆಂಗಳೂರು ನಾಗರತ್ನಮ್ಮ‘  - ವತ್ಸಲ ರಾಮಮೂರ್ತಿಯವರು ಬರೆದ ಲೇಖನ 

ಪೀಠಿಕೆ ನಾನು ಈ ಸಲದ ‘ಅನಿವಾಸಿ‘ಯ ದೀಪಾವಳಿ ಸಮಾರಂಭದ ಕಾರ್ಯಕ್ರಮಕ್ಕೆಅನಾನುಕೂಲತೆಗಳಿಂದ ನನ್ನಿಂದ ಬರಲಾಗಲಿಲ್ಲ.ಅದರಲ್ಲಿ ನಾಗಾಭರಣರ ನಾಟಕ ವಿದ್ಯಾಸುಂದರಿ ‘ಬೆಂಗಳೂರು ನಾಗರತ್ನಮ್ಮ‘ ಬಗ್ಗೆ ವಿಮರ್ಶೆ ಮಾಡಲು ಒಪ್ಪಿಕೊಂಡಿದ್ದೆ. ಅವರ ಜೀವನಚರಿತ್ರೆಯನ್ನು ನಾನಾ ಮೂಲಗಳಿಂದ ಸಂಗ್ರಹಿಸಿದ್ದೆ. ಅದರ ಸಾರಾಂಶ ಕೆಳಗಿದೆ.

ಪ್ರಸಿದ್ಧ ರಂಗಕರ್ಮಿ ಮತ್ತು ಸಿನಿಮಾ ಡೈರೆಕ್ಟರ್ ನಾಗಾಭರಣ ಅವರಿಗೆ ಬೆಂಗಳೂರು ನಾಗರತ್ನಮ್ಮನವರ ಬಗ್ಗೆ ಸಿನಿಮಾ (biopic) ಮಾಡಲು ಕರೆ ಬಂದಿತ್ತು.  ಸಿನಿಮಾ ತಯಾರಿಸಲು ಆಕೆಯ ಬಗ್ಗೆ ಸಂಶೋಧನೆ ನಡೆಸಿದ ಅವರು ಶ್ರೀರಾಮರವರ ಇಂಗ್ಲಿಷ್ ಪುಸ್ತಕ Devadasi and Saint -The Life and Times of Nagaratnamma ಮತ್ತು ಮೈಸೂರು ಗುರುಸ್ವಾಮಿಯವರ ಅದೇ ಹೆಸರಿನ ಕಾದಂಬರಿ ಓದಿ ಅವರ ವ್ಯಕ್ತಿತ್ವ ಮತ್ತು ಸಾಧನೆಗಳಿಗೆಮಾರು ಹೋದರು. ಬೈಯೋಪಿಕ್ ತಯಾರಿಸಲು ಕಷ್ಟವೆಂದು ತಿಳಿದು ಕರ್ನಾಟಕ ಸಂಗೀತದ(ಗಮಕ) ಮೂಲಕ ಕನ್ನಡದಲ್ಲಿ ಮ್ಯೂಸಿಕಲ್ ಮಾಡಿದರು. ಅವರು ಎಲ್ಲರೂ ನಾಗರತ್ನಮ್ಮ ಅವರ ಬಗ್ಗೆ  ತಿಳಿಯಬೇಕೆಂದಿದ್ದಾರೆ.

ಬೆಂಗಳೂರು ನಾಗರತ್ನಮ್ಮ ಅವರ ಕಿರು ಪರಿಚಯ.  

ಅವರು ಹುಟ್ಟಿದ್ದು 1878ರಲ್ಲಿ. ಅವರ ತಾಯಿ ಪುಟ್ಟಲಕ್ಷಮ್ಮ ದೇವದಾಸಿ ಪರಂಪರೆಯವರು. ಅವರತಂದೆ ವಕೀಲ ಸುಬ್ಬರಾಯರು ಅವರನ್ನು ತೊರೆದು ಹೋದ ನಂತರ ಪುಟ್ಟಲಕ್ಷಮ್ಮ ಮೈಸೂರುಆಸ್ಥಾನದಲ್ಲಿ ವಿದ್ವಾಂಸರಾಗಿದ್ಧ  ಶಾಸ್ತ್ರಿಯವರ  ಆಸರೆ  ಪಡೆದರು ಶಾಸ್ತ್ರಿಯವರು ನಾಗರತ್ನಮ್ಮನಿಗೆ ಸಂಸ್ಕೃತ, ನೃತ್ಯ, ಕರ್ನಾಟಕ ಸಂಗೀತ, ಇಂಗ್ಲಿಷ್, ತೆಲಗು ಭಾಷೆಗಳನ್ನೂ ಕಲಿಸಿದರು. ಅವರು ಸಹ ಪುಟ್ಟಲಕ್ಷ್ಮಮ್ಮನವರನ್ನು ಬಿಟ್ಟು ಹೋದರು. ಆಮೇಲೆ ಪುಟ್ಟಲಕ್ಷಮ್ಮ ಅವರು ಮೈಸೂರನ್ನು ಬಿಟ್ಟು ತಮ್ಮ ಸಂಬಂಧಿ ವಯೊಲಿನ್ ವಿದ್ವಾನ್ ವೆಂಕಟೇಶ್ವರಪ್ಪನವರ ಆಶ್ರಯ ಪಡೆದರು. ಅವರ ಆಶ್ರಯದಲ್ಲಿ ಗುರು-ಶಿಷ್ಯೆ ಪರಂಪರೆಯಲ್ಲಿ ಸಂಗೀತ ಮತ್ತು ನೃತ್ಯದಲ್ಲಿ ಪಾರಂಗತರಾದರು. ತಮ್ಮಹದಿನೈದನೆಯ ವಯಸ್ಸಿನಲ್ಲಿ ಸಂಗೀತ ವಿದುಷಿಯಾಗಿ ರಂಗಾರ್ಪಣೆ ಮಾಡಿದರು.
ಅವರು ಸಂಸ್ಕೃತ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ  ಹಾಡುತ್ತಿದ್ದರು. ಅವರ ವಿಶೇಷವಾದ ಕಲೆ ‘ಹರಿಕತೆ’. ಅವರು ಹರಿಕತೆಯನ್ನು ಜನ ಸಾಮಾನ್ಯರಿಗೆ ದೊರಕುವಂತೆಮಾಡಿದರು. ನಂತರ ಬೆಂಗಳೂರಿಗೆ ಬಂದು ಹೈ  ಕೋರ್ಟ್ ಜಜ್  ನರಹರಿ ರಾಯರ ಆಶ್ರಯದಲ್ಲಿಅವರ ಪ್ರತಿಭೆಯ ಬಗ್ಗೆ ತಿಳುವಳಿಕೆ ಪಸರಿಸಿತು. ಎಲ್ಲ ಜನರಿಗೂ ಅವರ ಬಗ್ಗೆ ಗೊತ್ತಾಯಿತು. ನರಹರಿರಾಯರು ಅವರ ಪ್ರತಿಭೆ ಮುಂದುವರಿಯಲು ಅವರನ್ನು ಮದರಾಸ್ನಲ್ಲಿ ಮೊದಲಿಯಾರ್ ಅವರ ಆಶ್ರಯಕ್ಕೆ ಕಳಿಸಿದಾಗಿನಿಂದ ಅವರ ಪ್ರತಿಭೆ ಮತ್ತು ಖ್ಯಾತಿ ಮುಗಿಲೆತ್ತರಕ್ಕೆ ಬೆಳೆಯಿತು. ಅನೇಕ ಪ್ರಶಸ್ತಿ, ಬಿರುದು ಬಾವಲಿಗಳು ಅವರನ್ನರಸಿ ಬಂದವು. ಅವರು ಹೇಳಿದ್ದೇನೆಂದರೆ ತ್ಯಾಗರಾಜರು ಅವರ ಕನಸಿನಲ್ಲಿ ಬಂದು ಅವರ ಸ್ಮಾರಕ ಮತ್ತು  ಕರ್ನಾಟಕ ಸಂಗೀತ ಪರಂಪರೆಯನ್ನು ಮುಂದುವರಿಸ-ಲು ಹೇಳಿದರಂತೆ. ನಾಗರತಮ್ಮ ಅವರು ತಮ್ಮ ಜೀವನವನ್ನುಕರ್ನಾಟಕ ಸಂಗೀತ ಮತ್ತು ತ್ಯಾಗರಾಜರಕೀರ್ತಗಳನ್ನು ಹೆಸರಿವಾಸಿಯಾಗಿ ಮಾಡಲು ಮುಡುಪಾಗಿಟ್ಟರು. ಪಾಳು ಬಿದ್ದಿದ್ದ ತ್ಯಾಗರಾಜರ ಸಮಾಧಿಯನ್ನು ಪುನರತ್ಥಾನಗೊಳಿಸಿದರು. ಶ್ರೀರಾಮ ಮಂದಿರವನ್ನು ಕಟ್ಟಿಸಿದರು. ಅದಕ್ಕಾಗಿ ತಮ್ಮ ಒಡವೆ ಮತ್ತು ಹಣವನ್ನು (ಆಗಿನ ಕಾಲದಲ್ಲಿ Rs 36,000) ದಾನ ಮಾಡಿದರು.


ನಾಗರತ್ನಮ್ಮನವರ ವ್ಯಕ್ತಿತ್ವ

ಅವರೊಬ್ಬ ಕಲಾವಿದೆ ಮತ್ತು ಕಲಾಭಿಮಾನಿ ಸಹ. ಚಿಕ್ಕ ವಯಸ್ಸಿನಿಂದ ಸಂಗೀತ, ನೃತ್ಯ, ಹರಿಕತೆಗಳಿಗೆಜೀವನವನ್ನೇ ಮುಡುಪಾಗಿಯಿಟ್ಟಿದ್ದರು. ತ್ಯಾಗರಾಜರ ಸಂಗೀತ ಪರಂಪರೆಯನ್ನು ಆರಾಧನೆಯ ಮೂಲಕ ಅಮರವಾಗಿ ಮಾಡಿದರು. ಇವತ್ತಿಗೂ ಅದು ಸಂಗೀತಪ್ರಿಯರಿಗೆ ರಸದೌತಣ. ಅವರು ಕ್ರಿಯಾವಾದಿ (activist). ಅವರ ಕಾಲದಲ್ಲಿ ಹೆಂಗಸರಿಗೆ ಅಷ್ಟು ಮರ್ಯಾದೆ ಇರಲಿಲ್ಲ. ಸಮಾಜದಲ್ಲಿ ಕೀಳು ಸ್ಥಿತಿ. ಅದರಲ್ಲೂ ದೇವದಾಸಿಯರನ್ನು ಕಡೆಗಣಿಸುತ್ತಿದ್ದರು. ಪುರುಷ ಸಂಗೀತಗಾರರು ತ್ಯಾಗರಾಜರ ಆರಾಧನೆಯ ಸಮಯದಲ್ಲಿ ಅವರಿಗೆ ಗುಡಿಯೊಳಗೆ ಹಾಡಲು ಅವಕಾಶ ಕೊಡುತ್ತಿರಲಿಲ್ಲ. ಅದಕ್ಕೆ ಸವಾಲಾಗಿ ಎಂಬಂತೆ ನಾಗರತ್ನಮ್ಮನವರು ತಮ್ಮದೇ ಆದ ಒಂದು ”ಸಂಗೀತ ಸಭೆ”ಯನ್ನು ಗುಡಿಯ ಹಿಂಭಾಗದಲ್ಲಿ ಶುರುಮಾಡಿದರು. ಕಾಲಾನಂತರ ಮಹಿಳೆಯರಿಗೂ ಪುರುಷರ ಸಮನಾಗಿ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶವಾಯ್ತು. ಅವರು ಮೊಟ್ಟ ಮೊದಲ ’ದೇವದಾಸಿ ಸಂಘ’ ಕಟ್ಟಿದರು. ದೇವದಾಸಿಯರು ವೇಶ್ಯೆಯರಲ್ಲ, ಕಲಾಭಿಮಾನಿಗಳೆಂದು ಸಾರಿದರು. ಅವರು ಪ್ರಪ್ರಥಮ ರೆಕಾರ್ಡಿಂಗ್ ಆರ್ಟಿಸ್ಟ್ ಗಳಲ್ಲೊಬ್ಬರು. ಆಗಿನ ಇಡೀ ಮದರಾಸು ಪ್ರೆಸಿಡೆನ್ಸಿಯಲ್ಲೇ ಇನ್ಕಮ್ ಟ್ಯಾಕ್ಸ್ ಕಟ್ಟಿದ ಪ್ರಥಮ ಮಹಿಳೆ ಅವರಾಗಿದ್ದರು. ಅವರು ವಿದ್ವಾಂಸಿ. ಅನೇಕ ಪುಸ್ತಕಗಳನ್ನು ಪ್ರಕಟಿಸಿದ ಮಹಿಳೆಯೆಂಬ ಹೆಗ್ಗಳಿಕೆ ಅವರದು. ಬಹು ಭಾಷಾ ಪರಿಣತಿಯರಾದ ಅವರು ಕವಿತೆ,ಮತ್ತಿತರ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರು 1952ರಲ್ಲಿ ನಿಧನರಾದರು.
Photos: Creative Commons License
ನಾಟಕದ ಬಗ್ಗೆ ಒಂದು ಅನಿಸಿಕೆ:  
ನಾಟಕ ರೂಪವನ್ನು ಬರೆದವರು ಪ್ರತಿಭಾ ನಂದಕುಮಾರ್ ಮತ್ತು ಹೂಲಿ ಶೇಖರ್.  ಸಂಗೀತ ಸಂಯೋಜನೆ ಮತ್ತು ನಿರ್ಮಾಣ ಡಾ ಪಿ. ರಮಾ ಅವರದು. ಬೆನಕ ಮತ್ತು ಸಂಗೀತ ಸಂಭ್ರಮ ಅವರು ಅರ್ಪಣೆ. ಮೊದಲ ಬಾರಿಗೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಸರಿಯಾಗಿ ಮೂರು ವರ್ಷದ ಕೆಳಗೆ 27-12-2019ರಂದು ಪ್ರದರ್ಶನಗೊಂಡಿತು. ಮೊದಲನೆಯ ದೃಶ್ಯದಲ್ಲಿ  ಪಿರಿಯ ಕಚ್ಚಿ ಮತ್ತಿ ಚಿನ್ನ ಕಚ್ಚಿ ನಡುವೆ ಆರಾಧನೆಯ ಸಮಯದಲ್ಲಿ ಸುದೀರ್ಘ ವಿವಾದ ನಡೆಯುತ್ತದೆ. ಪುರುಷರ ಪೆರಿಯ ಕಚ್ಚಿ’ ಸ್ತ್ರೀಯರ ಸಂಗ ’ಚಿನ್ನ ಕಚ್ಚಿ’ಗೆ ಹಾಡಲು ಅವಕಾಶ ಕೊಡುತ್ತಿಲ್ಲ. ಆಗ ನಾಗರತ್ನಮ್ಮನವರು ತಮ್ಮ ಸಂಗೀತವನ್ನು ಪ್ರಾರಂಭಿಸುತ್ತಾರೆ. ಬೆಂಕಿಯ ಗಲಾಟೆಯಲ್ಲಿ ಸಮಾರಂಭ ನಿಲ್ಲಿಸಬೇಕಾಗುತ್ತದೆ. (ಬೆಂಕಿ ಹಚ್ಚಿದ್ದು ನಾಗರತ್ನಮ್ಮನವರ ಜಿದ್ದಿನಿಂದ!) ಹೀಗೆ ನಾಟಕ ನಾಗರತ್ನಮ್ಮನವರ ಜೀವನಕತೆ ಮೆಟ್ಟಲು ಮೆಟ್ಟಲಾಗಿ ಗಮಕ ಸಂಗೀತದಲ್ಲಿ ಸಾಗುತ್ತದೆ. ಅದರಲ್ಲಿ ’ನರಹರಿ ರಾಯರ ಮತ್ತು ಪತ್ನಿಯ ಸಂವಾದ,’ ನಾಗರತ್ನಮ್ಮನವರು ಒಡವೆ, ದುಡ್ಡು ಎಲ್ಲವನ್ನು ತ್ಯಾಗರಾಜರ ಆರಾಧನೆಗಾಗಿ ಕೊಡುವದು, ದೇವದಾಸಿಯರಿಗೆ ಸಹಾಯ ಮಾಡುವುದು, ಅವರ ಅಪಾರ ಕೊಡುಗೆಯನ್ನು ಮನಮುಟ್ಟುವಂತೆ ನಾಟಕದಲ್ಲಿ ಪ್ರದರ್ಶಿಸಿದ್ದಾರೆ. ನಾಟಕ ಬಹಳ ಗಂಭೀರವಾದ ವ್ಯಕ್ತಿ ಚಿತ್ರ. ಅದನ್ನು  ಐದಾರು ಜನ ಸಂಗೀತಗಾರರು ಪಕ್ಕವಾದ್ಯಗಳ ಜೊತೆಗೆ  ಒಂದೇ ರಾಗದಲ್ಲಿ ಅವರ ಜೀವನ ಚರಿತ್ರೆ ವಿವರಿಸುತ್ತಾರೆ.  ಕೇಳುಗರಿಗೆ ಗಮಕ ಶೈಲಿ ಅರ್ಥವಾಗದಲ್ಲಿಕಥೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು. ಲಘು ಹಾಸ್ಯ ಸೇರಿಸಿದ್ದರೆ ಹಗುರವಾಗುತ್ತಿತ್ತೇನೋ ಎನಿಸುತ್ತದೆ. ಮಧ್ಯೆ ನಾಗರತ್ನಮ್ಮನ ಹಾಡುಗಳ, ತುಣುಕುಗಳ ಾವರ ಸಂಗೀತ ತಿಳಿಯದಿದ್ದವರಿಗೆ ಕಷ್ಟವೆನಿಸಿತು. ನಟನಟಿಯರು ಭಾವ್ಪೂರ್ವಗಿ ನಟಿಸಿದ್ದಾರೆ. Screen set up ಆಗಿನ ಕಾಲಕ್ಕೆ ಸರಿಯಾಗಿ ಜೋಡಿಸಿದ್ದಾರೆ. ನಾಗರತನಮ್ಮನವರ ವ್ಯಕ್ತಿತ್ವ ಚೆನ್ನಾಗಿ ಮೂಡಿ ಬಂದಿದೆ. ಅವರ ಜೀವನ ಚರಿತ್ರೆ ತಿಳಿಯದವರಿಗೆ musical follow ಮಾಡೋದು ಸ್ವಲ್ಪ ಕಷ್ಟವಾದರೂ ಕನ್ನಡದಲ್ಲಿ ಈ ಮ್ಯೂಸಿಕಲ್ ಮಾಡಿದ ನಾಗಾಭರಣ ಅವರಿಗೆ ಅನಂತ ವಂದನೆಗಳು

        ---ವತ್ಸಲ ರಾಮಮೂರ್ತಿ
 2) ತಲಾಷ್ -3    - ಶಿವ ಮೇಟಿಯವರ ಕಥೆಯ ಕೊನೆಯ ಭಾಗ
(ಇಲ್ಲಿಯ ವರೆಗೆ: ಅಂಜಲಿ ಎನ್ನುವ ಶಾಲಾಬಾಲಕಿ ಇನ್ನೂ ಶಾಲೆಯಿಂದ ಮನೆಗೆ ಬಂದಿಲ್ಲ. ಆಲದ ಮರದ ಕೆಳಗೆ ಕುಳಿತ ಹುಚ್ಚಪ್ಪನ ಭವಿಷ್ಯವಾಣಿಯ ಜಾಡು ಹಿಡಿಯಬೇಕೆ? ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ ತಂದೆ ತಾಯಿಗಳು. ಮುಂದೆ ಓದಿ ...) 
ವಸುಂಧರೆಯ ಮನಸಿನಲ್ಲಿ ಹುಚ್ಚಪ್ಪನ ಮಾತುಗಳು ಪ್ರತಿಧ್ವನಿಸುತಿದ್ದವು . ಅವನಾಡುವ ಪದಗಳು ಒಗಟಿನಂತೆ ಕಂಡರೂ, ಒರೆ ಹಚ್ಚಿ ನೋಡಿದಾಗ ಒಂದೊಂದು ಪದಕ್ಕೂ ಅರ್ಥವಿರುತ್ತಿತ್ತು . ಉತ್ತರ ದಿಕ್ಕಿನ ಕಡೆ ಆರು ಮೈಲಿನ ಅಂತರದಲ್ಲಿ ಅಂತದೇನು ವಿಶೇಷವಿದೆ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಂಡಳು. ಅವಳ ತಲೆಗೆ ಹೊಳೆದಿದ್ದು ಪಕ್ಕದ  ಊರಿನ  ಕಾಡಿನ ಆದಿಯಲ್ಲಿ ಇರುವ 'ದುರ್ಗಿ'ಯ ಗುಡಿ. ಕುರಿ ಕೋಣಗಳ  ಬಲಿಗಳೊಂದಿಗೆ ಭರ್ಜರಿಯಾಗಿ ವರ್ಷಕ್ಕೊಮ್ಮೆ ನಡೆಯುತಿದ್ದ ದುರ್ಗಿಯ ಜಾತ್ರೆಗೆ ಅವಳೂ  ಸಹ ಕೆಲವು ಸಲ ಹೋಗಿದ್ದಳು. ಆದರೆ ಅಂಜಲಿಗೂ ದುರ್ಗಿಯ ಗುಡಿಗೂ ಏನು ಸಂಬಂಧ? 
ಅಷ್ಟರಲ್ಲಿಯೇ ರಾಮುನ ಫೋನು ಒದರತೊಡಗಿತ್ತು. 
ಪೊಲೀಸ್ ಸ್ಟೇಷನ್ ನಿಂದ ಕರೆ: " ಸರ್ ಅಂಜಲಿಯ ಟೀಚರ್ ಮತ್ತು ಅಸಿಸ್ಟಂಟ್ ಇಬ್ಬರು ಸವದತ್ತಿಯಲ್ಲಿ  ಸಿಕ್ಕಿದ್ದಾರೆ  ವಿಚಾರಣೆ ಮುಂದುವರೆದಿದೆ; ಇಷ್ಟರಲ್ಲಿಯೇ ಎಲ್ಲಾ ಗೊತ್ತಾಗಬಹುದು, ನಿಮಗೆ ಮತ್ತೆ ಕರೆ ಮಾಡುತ್ತೇವೆ."
  " ದಯವಿಟ್ಟು ಕರೆ ಮಾಡಿ " ಎಂದು ಹೇಳಿದ ರಾಮುವಿನ ಮುಖದಲ್ಲಿ ಸ್ವಲ್ಪ ಭರವಸೆಯ ಚಿನ್ಹೆ ಮೂಡಿತ್ತು. 
 " ವಸುಂಧರೆ ನಿನಗೇನು ಗೊತ್ತಾಗಿದೆ ಎಂದು ನನಗೂ ಸ್ವಲ್ಪ ಹೇಳಿಬಿಡೆ " ಎಂದು ಹೆಂಡತಿಯನ್ನು ಕೇಳಿದ.
   "ಇಷ್ಟರಲ್ಲಿಯೇ ಎಲ್ಲಾ ಗೊತ್ತಾಗುತ್ತೆ , ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ " ಎಂದು ಅನ್ನುವಷ್ಟರಲ್ಲಿಯೇ ಅವರಿಬ್ಬರೂ ಮನೆಯನ್ನು ಸೇರಿದ್ದರು.
 
' ಅರಿಷಿಣ ಕುಂಕುಮ ------- ಅರಿಷಿಣ ಕುಂಕುಮ' ಮತ್ತೆ ಹುಚ್ಚಪ್ಪನ ಮಾತುಗಳು ವಸುಂಧರೆಯ ಕಿವಿಯಲ್ಲಿ .  ನೇರವಾಗಿ ದೇವರ ಕೋಣೆಗೆ ಹೋದಳು. ದೊಡ್ಡ ಕುಂಕುಮ ಮತ್ತು ಅರಿಷಿಣದ ಭರಣಿಗಳು ಕೋಣೆಯಿಂದ ಮಾಯವಾಗಿದ್ದವು. ವಸುಂಧರೆಯ ಮನಸಿನಲ್ಲಿ ಇದ್ದ ಸಂಶಯ ಇನ್ನಷ್ಟು ಗಟ್ಟಿಯಾಯಿತು . ಅತ್ತೆಯ ಕೋಣೆಯ ಬಾಗಿಲನ್ನು ತೆರೆದಳು . ಮಂಚದ ಮೇಲೆ ತೆರೆದ ಪುಸ್ತಕಗಳು ಹರಡಿದ್ದವು. ಕೆಲವು ಪುಟಗಳಲ್ಲಿ ಪೆನ್ನಿನಿಂದ ಮಾಡಿದ ಗುರುತುಗಳಿದ್ದವು , ಪುಟಗಳ ಅಂಚಿನಲ್ಲಿ ಅದೇನೋ ಟಿಪ್ಪಣಿಗಳಿದ್ದವು. ಅತ್ತೆಯು ಅದಾವುದೋ ' ತಲಾಷ್' ನಲ್ಲಿ ತೊಡಗಿದ್ದಳು ಎಂಬುವದರಲ್ಲಿ ಸಂಶಯವಿರಲಿಲ್ಲ.
 
ಇತ್ತೀಚಿನ ದಿನಗಳಲ್ಲಿ ಅತ್ತೆಯಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ವಸುಂಧರೆ  ಸೂಕ್ಷ್ಮವಾಗಿ ನಿರೀಕ್ಷಿಸುತಿದ್ದಳು. ಕೋಣೆಯಿಂದ ಹೊರಗೆ ಬರುವದು ಕಡಿಮೆ ---- ಅದೇನೋ ಓದುತ್ತಿದ್ದಳು. ಕೆಲವು  ಸಲ ತನ್ನ ಮನಸ್ಸಿನಲ್ಲಿಯೇ ಅದಾವುದೋ ಮಂತ್ರವನ್ನು ಜಪಿಸುತಿದ್ದಳು
 --- ಕೆಲವು ಸಲ ಯಾರದೋ ಜೊತೆಗೆ ತಾಸುಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿದ್ದಳು. ರಾಮುನ ಜೊತೆಗೂ ಮಾತು ಕಡಿಮೆಯಾಗಿತ್ತು . ವಸುಂಧರೆ ಅಂದಿದ್ದಳು " ಅತ್ತೆ ಯಾಕೋ ಇತ್ತೀಚಲಾಗಿ  ಒಂದ  ಥರಾ ಇದ್ದಾಳ."
 "ವಯಸ್ಸಿಗೆ ತಕ್ಕ ಬದಲಾವಣೆ ಇರಬಹುದು ಬಿಡು " ಎಂದು ರಾಮು ಮಾತು ಮರೆಸಿದ್ದ.  
ಎರಡು ದಿನಗಳ ಮುಂಚೆ ಅತ್ತೆ ಧಾರವಾಡದಲ್ಲಿರುವ ತನ್ನ ತಮ್ಮನ ಮನೆಗೆ ಹೋಗಿದ್ದಳು  ವಸುಂಧರೆ ಕೋಣೆಯ ಹೊರಗೆ ಬಂದು ರಾಮುನಿಗೆ ಹೇಳುತ್ತಿದ್ದಳು:
 " ರೀ -- ಅತ್ತೆಗೆ ತಕ್ಷಣವೇ  ಫೋನು ಮಾಡಿರಿ " 
" ಅವಳಿಗೆ ಫೋನು ಮಾಡಿದರೆ ಏನು ಸಿಗುತ್ತೆ?" ಎಂದ  ರಾಮು.
 " ರೀ -- ನಿಮಗ ಗೊತ್ತಾಗುದಿಲ್ಲ , ಜಲ್ದಿ ಫೋನ್  ಮಾಡರಿ." 
ಹೆಂಡತಿಯ ಬಲವಂತಿಕೆಗೆ ರಾಮು ತಾಯಿಗೆ ಫೋನು ಮಾಡಿದ, ಆದರೆ ತಾಯಿ ಮಾತ್ರ ಫೋನು ಎತ್ತಲಿಲ್ಲ. ರಾಮುನಿಗೆ ಯಾಕೋ ಭಯವಾಯಿತು. 
ಧಾರವಾಡದ ಮಾವನಿಗೆ ಫೋನು ಮಾಡಿದ . ಉತ್ತರವನ್ನು ಕೇಳಿ ಇನ್ನೂ ಭಯವಾಯಿತು . ಮಾವ ಹೇಳಿದ್ದ - ಅವಳು ಧಾರವಾಡಕ್ಕೆ ಬಂದೆ ಇಲ್ಲವೆಂದು. 
"ವಸುಂಧರಾ! ಅವ್ವ ಧಾರವಾಡಕ್ಕೆ ಹೋಗೆ ಇಲ್ಲವಂತೆ , ನನಗ್ಯಾಕೊ ಭಯ ಆಗತಾ ಇದೆ , ಅದೆಲ್ಲಿ ಹೋದಳೇನೋ?"
" ರೀ -- ನಿಮಗಿಂತ ಜಾಸ್ತಿ ಭಯ  ನನಗ ಆಗೈತಿ. " 
'ಅರೆ ರಾತ್ರಿ, ಟೈಮ್ ಇಲ್ಲ ' ಹುಚ್ಚಪ್ಪನ  ಕೊನೆಯ ಮಾತುಗಳು  ವಸುಂಧರೆ ಟೈಮ್ ನೋಡಿದಳು, ಆಗಲೇ ರಾತ್ರಿ ಒಂಭತ್ತು  ಹತ್ತಿರವಾಗುತ್ತಿತ್ತು . 
"ರೀ -- ಟೈಮ್ ಜಾಸ್ತಿ ಇಲ್ಲ ಬೇಗನೆ  ನಡೀರಿ." 
"ಎಲ್ಲಿಗೆ ಹೋಗಬೇಕೆ ? ನನಗೆ ಸ್ವಲ್ಪನೂ ಅರ್ಥ  ಆಗತಾ ಇಲ್ಲ."
"ನಿಮ್ಮ ಬೈಕ್ ತೆಗಿರಿ , ದುರ್ಗಿ ಗುಡಿಗೆ ಹೋಗಬೇಕು." 
"ನಿನಗೇನು ತಲೆ ಕೆಟ್ಟಿದೆ ಏನೇ ? ಈ ರಾತ್ರಿಯಲ್ಲಿ ದುರ್ಗಿ ಗುಡಿಯಲ್ಲಿ ಏನು ಮಾಡಬೇಕು?"
"ನನಗೆ ತಲೆ ಕೆಟ್ಟಿಲ್ಲ , ನಿಮ್ಮ ತಾಯಿಗೆ ತಲೆ  ಕೆಟ್ಟಿದೆ, ಸಮಯ  ಜಾಸ್ತಿ ಇಲ್ಲ ಜಲ್ದಿ ನಡೀರಿ." 
ಉತ್ತರವಿಲ್ಲದೆ ರಾಮು ತನ್ನ  ಬೈಕ್ ಅನ್ನು ಹೊರಗೆ  ತೆಗೆದ.  ಗಾಬರಿಯಲ್ಲಿದ್ದ ವಸುಂಧರೆಯನ್ನು ಕುಳ್ಳರಿಸಿಕೊಂಡು ದುರ್ಗಿಯ ಗುಡಿಯತ್ತ ಸಾಗಿದ. 

ಆಲದ ಕಟ್ಟೆಯ ಮೇಲೆ ಅರೆಬೆಳಕಿನಲ್ಲಿ ಕುಳಿತಿದ್ದ ಹುಚ್ಚಪ್ಪ ಇವರ ಬೈಕ್ ಅನ್ನು ಕಂಡು  ಒದರುತ್ತಿದ್ದ "ಸಿಗತಾಳ್  ---- ಸಿಗತಾಳ್ --- ಅಂಜಲಿ ಸಿಗತಾಳ್ " ಅರೆಬೆಳಕಿನ  ಅಡ್ಡ  ರೋಡಿನಲ್ಲಿ ಸರ್ಕಸ್ ಮಾಡುತ್ತ ಬೈಕು ಗುಡಿಯ ಹತ್ತಿರ ಬಂದಿತ್ತು  ವಸುಂಧರೆ ಬೈಕ್ ಅನ್ನು ದೂರವೇ ನಿಲ್ಲಿಸಲು ಹೇಳಿದಳು.

 ಸದ್ದಿಲ್ಲದೆ ನಿಧಾನವಾಗಿ ನಡೆಯುತ್ತಾ ಗುಡಿಯ ಕಡೆಗೆ ಸಾಗಿದರು. ಗುಡಿಯ ಮುಂದೆ ಬೆಂಕಿ ಉರಿಯುತ್ತಿತ್ತು, ಅದೇನೋ ಮಂತ್ರ ಪಠನೆ ಆಗುತಿತ್ತು, ನಡು ನಡುವೆ ಘಂಟೆಯ ಧ್ವನಿ ಕೇಳಿಸುತಿತ್ತು . ಇನ್ನೂ ಹತ್ತಿರ  ಬಂದಾಗ ಯಜ್ಞದ ಬೆಂಕಿಯ ಮುಂದೆ ಅತ್ತೆಯ ಮುಖ ಸ್ಪಷ್ಟವಾಗಿ ಕಾಣಿಸತೊಡಗಿತು. ಇನ್ನೊಂದು ಕಡೆ  ಒಬ್ಬ ವ್ಯಕ್ತಿ ಬೆಂಕಿಗೆ ತುಪ್ಪ ಸುರುವುತ್ತ ಮಂತ್ರ  ಪಠನೆ ಮಾಡುತಿದ್ದ  ಇಬ್ಬರ ನಡುವೆ ಅಂಜಲಿ ಕುಳಿತಿದ್ದಳು . ಆಕೆಯ ಮೈ ತುಂಬ ಅರಿಶಿಣ ಮತ್ತು ಕುಂಕುಮವನ್ನು ಸವರಿದ್ದರು . ಬಾಯಿಗೆ ಅರಿವೆಯನ್ನು ಕಟ್ಟಿದ್ದರು. 
ಇದೆಲ್ಲವನ್ನು ಕಂಡು ರೊಚ್ಚಿಗೆದ್ದ ವಸುಂಧರೆ  "ಸಾಕು ಮಾಡ್ರಿ-- ಸಾಕು ಮಾಡ್ರಿ -- ನಿಮ್ಮನ್ನು ಸುಮ್ಮನೆ ಬಿಡುಲ್ಲಾ" ಎಂದು ಅವರತ್ತ  ಧಾವಿಸಿದಳು.

ಹಠಾತನೆ ಇವರನ್ನು ಕಂಡು ಬೆಚ್ಚಿ ಬಿದ್ದ ಅವರಿಗೆ ಏನು ಮಾಡಬೇಕೆಂದು ತೋರಲಿಲ್ಲ. ಮಂತ್ರ ಪಠಿಸುತ್ತಿದ್ದ ವ್ಯಕ್ತಿ ಕತ್ತಲಲ್ಲಿ  ಓಡಲು ಪ್ರಾರಂಭಿಸಿದ, ರಾಮು ಅವನನ್ನು ಹಿಡಿಯಲು ಹಿಂಬಾಲಿಸಿದ್ದ. ಅಂಜಲಿ ಅಳುತ್ತ ಅಮ್ಮನನ್ನು ತಬ್ಬಿಕೊಂಡಳು. ಅತ್ತೆ ಹುಚ್ಚಿಯಂತೆ ಜೋಲಿ ಹೊಡಿಯುತಿದ್ದಳು, ಒಮ್ಮೆ ಗಟ್ಟಿಯಾಗಿ  ನಕ್ಕು ಮತ್ತೊಮ್ಮೆ ಜೋರಾಗಿ ಅಳುತೊಡಗಿದಳು. ಉರಿಯುವ ಜ್ವಾಲೆಯ ಮುಂದೆ ಕುಂಕುಮಿನಿಂದ ಅಲಂಕೃತವಾದ ಹರಿತವಾದ ಆಯುಧ ಥಳ ಥಳಿಸುತಿತ್ತು. ಅತ್ತೆಯ ಮೂಢ ನಂಬಿಕೆ ಮತ್ತು ಕಂದಾಚಾರದ ' ತಲಾಷ್ ' ವ್ಯರ್ಥವಾಗಿತ್ತು!
                       
  ( ಮುಗಿಯಿತು )
 ---ಶಿವ ಮೇಟಿ 

ಕಥೆ ಇಲ್ಲಿ ಮುಗಿದರು ಮಾತ್ರ ನಿಜ ಜೀವನದಲ್ಲಿ ನೀವು ಇಂಥ ಅಸಹ್ಯಯಕರ ಘಟನೆಯನ್ನು ಕೇಳುವದು ಮತ್ತು ಓದುವುದು ಎಂದೂ ಮುಗಿಯುವದಿಲ್ಲ!
ನಾಗಾಭರಣ ಅವರು ನವೆಂಬರ್ 2022ರಲ್ಲಿ ”YSKB ಯೊಡನೆ ಸಂವಾದ”ದಲ್ಲಿ ಬೆಂಗಳೂರು ನಾಗರತ್ನಮ್ಮನವರ ಹಾಡಿನ ತುಣುಕಿನ ನಂತರ ಅವರ ಕಥೆ ಹೇಳುತ್ತಿದ್ದಾರೆ …

ಒಂದೋ ಎರಡೋ ಬಾಳೆಲೆ ಹರಡೋ ಮತ್ತು ನನ್ನ ಮೆಚ್ಚಿನ ಲೇಖಕಿಗೊಂದು ಹೃತ್ಪೂರ್ವಕ ನಮನ

ಆತ್ಮೀಯ  ಓದುಗರಿಗೆ ನಮಸ್ಕಾರ

ರುಚಿಯಾದ ಅಡಿಗೆ ಮಾಡುವದು ಕಷ್ಟವೆಂದರೆ ಮಾಡಿದ್ದನ್ನು ತಿನ್ನುವುದೂ ಕೂಡ  ಕಷ್ಟವೆಂಬುವುದು  ಬಹು ಜನರಿಗೆ ಗೊತ್ತಿರಿಲರಾರದ ಸಂಗತಿ ಇರಬಹುದು . ಪ್ರಪಂಚದ ಬೇರೆ ಬೇರೆ ದೇಶಗಲ್ಲಿ ತಿನ್ನುವ ಆಹಾರ ವಿಭಿನ್ನವಾಗಿದ್ದರೆ, ತಿನ್ನುವ ಪದ್ಧತಿ ಕೂಡ ಅಷ್ಟೇ ವಿಭಿನ್ನವಾಗಿದೆ. ನಾನು ಮೊದಲು ಸಲ ಈ ದೇಶಕ್ಕೆ ಬಂದಾಗ ಫೋರ್ಕ್ ಮತ್ತು ಚಮಚ ಹಿಡಿದು ತಿನ್ನಲು ಹೋಗಿ ಹಾಗು ಜಪನೀಸ ನೂಡಲ್ಸನ್ನು ಕಡ್ಡಿಯಿಂದ ಎತ್ತಲು ಹೋಗಿ ನಗೆಪಾಡಾಗಿದ್ದು ಇನ್ನೂ ನೆನಪು. ಡೈನಿಂಗ್ ಟೇಬಲ್ ಮೇಲೆ ಕುಳಿತು ಆರಾಮವಾಗಿ ತಿನ್ನುವವರಿಗೆ ನಮ್ಮ ಹಳ್ಳಿಗೆ ಕರೆದೊಯ್ದು ಹಾಸಿದ ಚಾಪೆಯ ಮೇಲೆ ಕುಳಿತು ತಿನ್ನಲು ಹೇಳಿದರೆ ಎಂಥ ಕಷ್ಟವಾದೀತು? ಇಂಥ ವಿಷಯದ ಮೇಲೆ ಸರಾಳವಾಗಿ ಜುಳು ಜುಳು ನೀರಿನಂತೆ ಹರಿಯುವ ‘ ಹರಟೆ ‘ ಓದಲು ಸಿಕ್ಕರೆ ಮನಸಿಗೆ ಎಷ್ಟೊಂದು ಖುಷಿ ! ಇಷ್ಟು ಸಲೀಸಾಗಿ  ಹರಟೆಯನ್ನು ಬರೆಯಲು ಗೌರಿ ಪ್ರಸನ್ನನವರನ್ನು ಬಿಟ್ಟರೆ ಇನ್ನ್ಯಾರಿಗೆ ಸಾಧ್ಯ? ಬನ್ನಿ, ತಪ್ಪದೆ ಅವರ ಹರಟೆಯನ್ನು ಓದಿ ಆನಂದಿಸಿ .

ಒಬ್ಬೊಬ್ಬರ ಜೀವನದಲ್ಲೂ ಇನ್ನೊಬ್ಬ ಪ್ರಭಾವಿತ ವ್ಯಕ್ತಿಯ ಪ್ರಭಾವ ಇರುವದು ಸಹಜ. ನನ್ನ ಚಿಕ್ಕ ವಯಸಿನಲ್ಲಿ ಕನ್ನಡ ಸಾಹಿತ್ಯದತ್ತ ಅಭಿರುಚಿ ಬೆಳೆಯಲು ಕಾರಣರಾದವರು ನನ್ನ ನೆಚ್ಚಿನ ಕಾದಂಬರಿಕಾರ್ತಿ ‘ತ್ರಿವೇಣಿ’ ಯವರು . ಸೆಪ್ಟೆಂಬರ್ ೧ ಅವರ ಹುಟ್ಟುದಿನ . ಈ ಸಮಯದಲ್ಲಿ ನಾನು ಅವರಿಗೊಂದು ಹೃತ್ಪೂರ್ವಕ ನಮನ ಸಲ್ಲಿಸಲು ಸಣ್ಣ ಬರಹವನ್ನು ಬರೆದಿರುವೆ , ತಾವೆಲ್ಲಾ ಓದುವಿರೆಂದು ಭಾವಿಸಿರುವೆ 

ದಯವಿಟ್ಟು ಎರಡೂ ಬರಹಗಳನ್ನು ಸಮಯ ಸಿಕ್ಕಾಗ ಓದಿ , ಹಾಗೆಯೇ ಎರಡಕ್ಷರದ ಅನಿಸಿಕೆಯನ್ನು ಬರೆಯಲು ಮರೆಯಬೇಡಿ 

–  ಸಂಪಾದಕ 

ಒಂದೋ ಎರಡೋ ಬಾಳೆಲೆ ಹರಡೋ

ಗೌರಿ ಪ್ರಸನ್ನ

‘ಒಂದೋ ಎರಡೋ ಬಾಳೆಲೆ ಹರಡೋ’ ಅನ್ನುವ ಹಾಡಿನಿಂದಲೇ ನಮ್ಮ ಒನ್ನೆತ್ತಾ ಶುರುವಾಗಿ ನಾವು ರಾಕ್ಷಸ ಗಣದಿಂದ ಸಾಕ್ಷರರಾಗುವತ್ತ ಮೊದಲ ಹೆಜ್ಜೆಯಿಟ್ಟದ್ದು. ನಮಗೆ ಆಗಲೂ, ಈಗಲೂ ಊಟದ ಆಟ ಕೊಟ್ಟಷ್ಟು ಖುಷಿ ಬೇರಾವುದೂ ಕೊಟ್ಟಿಲ್ಲ ಅನಬಹುದು. ನಾ ಎಷ್ಟೋ ಸಲ ವಿಚಾರ ಮಾಡತಿರತೀನಿ. ಈ ‘ಊಟ’ ಅನ್ನೂದು ಇರಲಿಲ್ಲಂದ್ರ ಕೆಲಸನs ಇರತಿರಲಿಲ್ಲ ಅಂತ. ನಾವೂ ಗಿಡಮರಬಳ್ಳಿಗಳ ಗತೆ ಅಥವಾ ಕೋಯಿಮಿಲ್ ಗಯಾದ ‘ಜಾದೂ’ ನ ಗತೆ ಬರೀ ಸೂರ್ಯನ ಬಿಸಿಲೋ, ನೀರೋ ಇವುಗಳಿಂದನೇ ಬದುಕೂ ಹಂಗಿದ್ರ ಯಾವ ಕೆಲಸದ ರಗಳೆನೇ ಇರತಿರಲಿಲ್ಲ. ಕನಿಷ್ಠ ಪಕ್ಷ ಪಶುಪಕ್ಷಿಗಳ ಗತೆ ಸೊಪ್ಪು, ಹುಲ್ಲು, ಹಣ್ಣುಹಂಪಲ, ಹಸಿಮಾಂಸಗಳನ್ನು ಹಂಗೇ ನೇರವಾಗಿ ತಿನ್ನೂ ಹಂಗಿದ್ರ ಹೆಂಗಿರತಿತ್ತು..?! ಆವಾಗ ಈ ಭಾಂಡಿ ತೊಳಿ, ಕಟ್ಟಿ ಒರಸು, ಕಿರಾಣಿ ತಗೊಂಬಾ, ಕಾಸು, ಕಟ್ಟು, ಕುದಿಸು, ಬೇಯಿಸು, ಹೆಚ್ಚು, ಕೊಚ್ಚು, ತೊಳಿ, ಬಳಿ ಅನ್ನೋ ಯಾವ ಉಸಾಬರಿನೂ ಇರತಿರಲಿಲ್ಲ. ಹಂಗಂದ್ರ ಈ ಊಟನೇ ಎಲ್ಲಾದಕ್ಕೂ ಮೂಲ ಅಂದ್ಹಂಗಾತು. ದಾಸರೂ ಸಹಿತ ಅದಕ್ಕಾಗೇ ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಅಂತ ಇನ್ ಡೈರೆಕ್ಟ್ ಆಗಿ ಈ ಊಟದ ಬಗ್ಗೆನೇ ಹೇಳ್ಯಾರ ಅನಸತದ.  ‘ತಂಡುಲದ ಹಿಡಿಯೊಂದು, ತುಂಡು ಬಟ್ಟೆಯದೊಂದು ಅಂಡಲೆತವಿದಕೇನೋ ಮಂಕುತಿಮ್ಮ’ ಅಂತಾರ ನಮ್ಮ ತಿಮ್ಮ ಗುರು.

 ಊಟಾ ಏನೋ ಎಲ್ಲಾರೂ ಮಾಡತಾರ. ಮಾಡಿದ್ದಣ್ಣೋ ಮಹರಾಯ ಅಂತ ಕೆಲವರು ತಾವೇ ಕೈ ಸುಟಗೊಂಡು ಬಾಯಿನೂ ಸುಟಗೋತಾರ. ಇನ್ನ ಕೆಲವರು ಏನೂ ಬಿಸಿಯಿಲ್ಲದೇ ಖಮ್ಮಗ ಮತ್ತೊಬ್ಬರು ಮಾಡಿ ಹಾಕಿದ್ದನ್ನ ಸುಮ್ಮ ತಿಂದು ಬಿಮ್ಮಗಿರತಾರ. ಮತ್ತೂ ಕೆಲವರು ತಿನ್ನೂತನಾ ತಿಂದು ಆಮ್ಯಾಲೆ “ಹೋಳ ಭಾಳ ಹಣ್ಣ ಬೆಂದಾವ ಅಂತಲೋ, ಬ್ಯಾಳಿ ಬೆಂದೇ ಇಲ್ಲ” ಅಂತನೋ ಕಿಟಿಪಿಟಿ ನಡಸಿರತಾರ. ಅಂತೂ ಊಟ ಅಂಬೋ ಆಟ ಅವರವರದೇ ರೀತಿಯೊಳಗ ಎಲ್ಲಾರೂ ಆಡತಿರತಾರ. ಈ ಊಟ ಮಾಡೂ ರೀತಿ, ಅದರ ವಿಧಿ -ವಿಧಾನಗಳು ಎಷ್ಟೊಂದ ನಮೂನೀರಿ?! ಜಾಗಾದಿಂದ ಜಾಗಾಕ್ಕ ಈ ಊಟದ ರೀತಿ-ನೀತಿಗಳು ಬ್ಯಾರೆ ಬ್ಯಾರೆ ಆಗತಾವ ಅನ್ರಿ. ನಮ್ಮ ಕಡೆ ಅಂದ್ರ ದಕ್ಷಿಣ ಭಾರತದಾಗ ಬಾಳೆ ಎಲೆಗಳ ಸಂಭ್ರಮ. ಏನರೇ ಹಬ್ಬ-ಹುಣ್ಣಿಮಿ, ಮದುವಿ-ಮುಂಜಿವಿ, ಆರಾಧನಿ-ಸಮಾರಾಧನಿ ಅಂತೆಲ್ಲ ಇದ್ರ  ಬಾಳೆಎಲೆ ಊಟ ಗ್ಯಾರಂಟೀರಿ. ನಾವು ಸಣ್ಣವರಿದ್ದಾಗ ರವಿವಾರಕ್ಕೊಮ್ಮೆ ಸಂತ್ಯಾಗ ಬಾಳಿ ಎಲಿ ತಂದು, ದಿಂಡ ತಗದು, ಅವನ್ನ ಹೆಚ್ಚಿ ಸಣ್ಣಸಣ್ಣ ಎಲೆಗಳನ್ನಾಗಿ ಮಾಡಿ ಒಂದು ತಟ್ಟಿನ ಚೀಲ ‘ನಮ್’ ಅನ್ನೂ ಅಷ್ಟು ಒದ್ದಿ ಮಾಡಿ ಅದರಾಗ ಸುತ್ತಿ ಇಡತಿದ್ರು ನಮ್ಮ ಮುದ್ದಣ್ಣ ಮಾಮಾ. 15-20 ದಿನಗಟ್ಟಲೇ ಛಲೋ ಇರತಿದ್ವು. ಸ್ವಲ್ಪ ಹಳದಿ ಒಡದ್ರೂ ನಮಗೇನ ಫರಕ ಬೀಳತಿರಲಿಲ್ಲ.( ಯಾಕಂದ್ರ ನಮ್ಮ ಕಣ್ಣೆಲ್ಲ ಎಲೆಯ ಮೇಲಿನ ಖಾದ್ಯಗಳ ಬಣ್ಣದೆಡೆ ನೆಟ್ಟಿರುತ್ತಿದ್ದವೆನ್ನಿ) ಊಟಾ ಆದಮ್ಯಾಲೆ ಅವೇ ಎಲೆಗಳು ಸಾಳುಂಕೆ ಅವರ ಮನೆಯ ಎಮ್ಮೆ-ಆಕಳುಗಳಿಗೆ  ಸುಗ್ರಾಸ ಭೋಜನವಾಗುತ್ತಿದ್ದವು. 

 ಈ ಬಾಳೆ ಎಲಿ ಹೆಂಗ ಹಾಕಬೇಕು ಅನ್ನೂದೇ ಒಂದು ಸಮಸ್ಯೆ ಹಲವರಿಗೆ. ಉದ್ದ ಹಾಕಬೇಕೋ, ಅಡ್ಡ ಹಾಕಬೇಕೋ, ಅದರ ಮಾರಿ ಯಾವ ಕಡೆ ಇರಬೇಕು, ಕುಡಿ ಬಾಳೆ ಎಲಿ ಹಾಕಬೇಕೋ ಬ್ಯಾಡೋ ..ಹೀಂಗ ನೂರಾ ಎಂಟು ಪ್ರಶ್ನೆ ಇರತಾವರೀ ( ಯಾಕಂದ್ರ ಚೊಚ್ಚಲ ಗಂಡಸ ಮಕ್ಕಳಿದ್ದವರು ಕುಡಿ ಬಾಳಿ ಎಲ್ಯಾಗ ಉಣಬಾರದಂತ ಶಾಸ್ತ್ರ ಅದ ಅಂತರಿ).  ಎಲಿ ಹಾಕಿದ ಮ್ಯಾಲೆ ಇನ್ನ ಸಾಲಕ ಉಪ್ಪಿನ ಹಿಡಕೊಂಡು ಚಟ್ಟಿ, ಕೋಸಂಬ್ರಿ, ಪಲ್ಯಾ, ಕಾರೇಸಾ, ಬುರಬುರಿ, ಪಾಯಸ, ಅನ್ನ, ತೊವ್ವೆಗಳಿಗಲ್ಲ ಅದರದರದೇ ನಿರ್ದಿಷ್ಟ ಜಾಗ ಇರತಾವರೀ. ಉಪ್ಪು ಎಡಕ್ಕ, ಪಾಯಸ ಬಲಕ್ಕ, ಅನ್ನದ ಬಲಬದಿಗೆ ತೊವ್ವೆ, ಅದರ ಮೇಲೆ ತುಪ್ಪ … ಹೀಂಗ ಏನೇನೋ. ಅವೆಲ್ಲ ಅದಲು ಬದಲು ಆಗೂ ಹಂಗಿಲ್ರೀ. ನೀವೇನರೇ ಪಾಯಸ ಎಡಕ್ಕ ಬಡಸಿದಿರೋ ‘ಹುಚ್ಚ ಖೋಡಿ’ ಅಂತ ಗ್ಯಾರಂಟಿ ಬಯ್ಯಿಸಿಕೋತಿರಿ. ಕೆಲವು ಮಂದಿ ಅಂತೂ ವಾಗತ್ಯ ಮಾಡಿಕೋತಾರ. ಹಂಗಂತ ಇದೇ ಸರಿ ಅಂತ ಅಲ್ರಿ. ಕೆಲವರಲ್ಲಿ ಉಪ್ಪಿಲ್ಲದೇ ಊಟ ಬಡಿಸುವಂತಿಲ್ಲ. ಇನ್ನ ಕೆಲವರಲ್ಲಿ ಮೊದಲು ಉಪ್ಪು ಹಾಕುವಂತಿಲ್ಲ. ಕೆಲವರಲ್ಲಿ ಪಾಯಸ- ಪರಮಾನ್ನದಿಂದ ಊಟ ಆರಂಭ ಆದ್ರ, ಇನ್ನ ಕೆಲವರಲ್ಲಿ ‘ಡೆಸರ್ಟ್’ಅಂತ ಊಟ ಆದಮ್ಯಾಲೆ ತಿಂತಾರ. ಕೆಲವೆಡೆ ಶುಭ ಸಂದರ್ಭಗಳಲ್ಲಿ ಮುದ್ದಿಪಲ್ಯ ನಿಷಿದ್ಧ. ಇನ್ನು ಕೆಲವೆಡೆ ಅದು ಕಂಪಲ್ಸರಿ ಇರಲೇಬೇಕು. ಕೆಲವರಿಗೆ ಭಕ್ರಿ-ಬದನೆಕಾಯಿ ಹಬ್ಬಹರಿದಿನಗಳಲ್ಲಿ ನಿಷಿದ್ಧ.  ಇನ್ನು ಕೆಲವರಲ್ಲಿ ಮದುವೆ ಊಟಕ್ಕೂ ಅವು ಬೇಕು. ಹೀಂಗ ದೇಶ-ಕಾಲ ಭೇದಗಳು ಭಾಳ ಇರತಾವ್ರಿ ಈ ಊಟದಾಗ.

ಈ ಬಾಳಿ ಎಲಿ ಊಟದ ಮಜಾನೇ ಬ್ಯಾರೆ ಇರತದ್ರಿ. ಮದುವಿ ಭೂಮದಾಗಂತೂ ಇಷ್ಟುದ್ದ ಏಕ ಎಲಿ ಮ್ಯಾಲೆ ಬಡಿಸಿದ ನಾನಾ ನಮೂನಿ ಸಂಡಿಗಿ-ಹಪ್ಪಳ-ಮಂಡಿಗೆಗಳು, ಶ್ಯಾವಿಗೆ-ಬಟವಿ ಪಾಯಸಗಳು, ಎಲೆ ಮುಂದೆ ಹಾಕಿದ ಬಣ್ಣಬಣ್ಣದ ಮನಸೆಳೆವ ರಂಗೋಲಿಗಳು, ಬೆಳಗುತ್ತಿರುವ ಸಮೆಗಳು… ನೋಡೂ ಹಂಗ ಇರತದ. ಆದ್ರ ಮಣೆ ಮ್ಯಾಲೆ ಕೂತು ಎಲೆ ತುದಿಯ ಖಾದ್ಯಗಳನ್ನೆಲ್ಲ ಬಗ್ಗಿ ಬಗ್ಗಿ ಹೆಕ್ಕಿ ತಿನ್ನೂದರಾಗ ದೊಡ್ಡ ಸರ್ಕಸ್ಸೇ ಆಗತದ. ಮೊನ್ನೆ ಇಲ್ಲೊಬ್ಬರ ಮನ್ಯಾಗ ವಾಸ್ತುಶಾಂತಿಗಂತ ಊಟಕ್ಕ ಕರದಿದ್ರು. ತಾಜಾ ಹಸರ ದೊಡ್ಡದೊಡ್ಡ ಬಾಳಿಎಲಿ ಮ್ಯಾಲೆ ಛಂದಾಗಿ ಬಡಸಿದ್ರು. ಆದ್ರ ಆ ಭಾರೀ ಜರದ ರೇಶ್ಮೆ ಸೀರೆ ಉಟಗೊಂಡು , ನಮ್ಮ ಗಜಗಾತ್ರದ ದೇಹ ಹೊತಗೊಂಡು , ಕೆಳಗ ನೆಲದ ಮ್ಯಾಲೆ ಕೂತು ಊಟಾ ಮಾಡೂದರಾಗ ‘ಊಟಾನೂ ಇಷ್ಟ ತ್ರಾಸಿಂದs’ ಅಂತ ಅನ್ನಿಸಿಬಿಡತರೀ. ಯಾಕಂದ್ರ ಕೋಸಂಬ್ರಿ, ಅಂಬೊಡೆ, ಮೈಸೂರ ಪಾಕು ಎಲ್ಲಾ ಮುಂದ ಹಾಕಿಬಿಟ್ಟಾರ್ರೀ. ಬಗ್ಗಬೇಕಂದ್ರ ನಮ್ಮ ಹೊಟ್ಟಿ ಅಡ್ಡ. ಕಡೀಕೆ ನಾ ಬಡಸಲಿಕ್ಕೆ ಬಂದವರಿಗೆ ಹೇಳೇಬಿಟ್ಟೆ. ’ಇಲ್ಲೇ ಇತ್ತತ್ತೇ ಹಾಕಿಬಿಡ್ರಿ. ಬಗ್ಗಲಿಕ್ಕೆ ಆಗಂಗಿಲ್ಲ’ ಅಂತ. ಅವರೂ ನನ್ನ ಮಾರಿ ನೋಡಿ ನಕ್ಕೋತ ಹಾಕಿ ಹೋದ್ರ ಬಿಡ್ರಿ. ಮತ್ತೇನ ಮಾಡೂದ್ರಿ? ಊಟದ ವಿಷಯ ನಾಚಿಕೊಂಡ ಕೂತರ ಹೆಂಗ ನಡೀತದ್ರೀ? 

ಈ ಬಾಳಿ ಎಲಿ ಆವಾಂತರ ಒಂದೊಂದ ಅಲ್ರೀ. ಒಂದ ಸಲ ಶಿರಸಿಗೆ ನನ್ನ ಗೆಳತಿ ಊರಿಗೆ ಹೋಗಿದ್ದೆ. ಅಕಿ ಎಲ್ಲೋ ತಮ್ಮ ನೆಂಟರ ಮನಿಗೆ ನಮ್ಮನ್ನ ಕರಕೊಂಡು ಹೋಗಿದ್ಲು. ಅವರು ನಾವು ಬಯಲುಸೀಮಿಯಿಂದ ಬಂದವರು, ತಮ್ಮೂರಿನ ಸ್ಪೆಷಲ್  ತಿನಸಬೇಕೆಂದು ತೋಟದಿಂದ ತಾಜಾ ಬಾಳಿ ಎಲಿ ಕತ್ತರಿಸಿಕೊಂಡು ಬಂದು ಮನೆಯ ತೋಟದ ರುಚಿರುಚಿಯಾದ ಘಮಗುಡುವ ಮಾವಿನಹಣ್ಣಿನ ಸೀಕರಣೆಯನ್ನು ಹಲಸಿನ ಹಪ್ಪಳದ ಜೋಡಿಗೆ ಅದರಾಗ ಬಡಿಸಿದರು. ನಾ ಕಕ್ಕಾಬಿಕ್ಕಿ. ಬಾಳಿಎಲ್ಯಾಗ ಸೀಕರಣಿ ಹೆಂಗ ತಿನ್ನೂದ್ರಿ?! ಅದು ಹರಕೊಂಡು ಹೊಂಟದ. ಕೈಯಾಗ ತಗೊಂಡು ನೆಕ್ಕಲಿಕ್ಕ ಹೋದ್ರ ಮೊಣಕೈತನಾ ಸೋರಿ ಸೀರಿ ಮ್ಯಾಲೆ ಬೀಳಲಿಕ್ಹತ್ತೇದ. ಅವರು ಆದರ ಮಾಡಿ ಬಲವಂತ ಮಾಡಿದರೂ ಹಾಕಿಸಿಕೊಳ್ಳಲಾರದಂಥ ಪರಿಸ್ಥಿತಿ. ಒಂದ ಬಟ್ಟಲದಾಗೋ, ದೊನ್ನ್ಯಾಗೋ ಹಾಕಿಕೊಡಬಾರದs ಅಂತ ಮನಸಿನಾಗ ಬಯ್ಯಕೋತ ಅಂಥ ರುಚಿಯಾದ ಸೀಕರಣೀನ್ನ ಸುಡ್ಲಿ ಈ ಬಾಳಿ ಎಲ್ಯಾಗ ಬಡಿಸಿದ್ರು ಅಂತ ತಿನ್ನಲಾರದ ಬಿಡೂದಾತು.

ಈ ಬಾಳಿ ಎಲಿ ಊಟೇನೋ ಛಂದ. ಆದ್ರ ಆಮ್ಯಾಲೇನರೇ ಎಂಜಲಾಗ್ವಾಮಾ ಮಾಡೂ ಪಾಳಿ ಬಂತೋ .. ಭಾರೀ ತ್ರಾಸರೀ. 

ಅಂತೂ ಊಟಾ ಮಾಡೂದು (ಅದೂ ಬಾಳೆ ಎಲಿದು)  ಆಟಾ ಆಡೂದರಷ್ಟ ಸರಳ ಅಲ್ಲಾ ಅನ್ನೂದು ನನ್ನ ಅಂಬೋಣ. ನೀವೇನಂತೀರಿ? 

ವಿ.ಸೂ. ಇನ್ನ ನನ್ನ ಕೊರೆತ ಮುಗದಿಲ್ಲಾ. ಈಗ ಒಂದೋ, ಎರಡೋ.. ಆಗೇದ. ಇನ್ನ ಮೂರೋ, ನಾಕೋ, ಐದೋ, ಆರೋ ಎಲ್ಲಾ ಬಾಕಿ ಅವ. ಮಾನಸಿಕವಾಗಿ ಸಿದ್ಧವಾಗಿರಿ ಕೊರೆಸಿಕೊಳ್ಳಲು..

ಮೂಲ ಕವಿಯ ಕ್ಷಮೆ ಯಾಚಿಸಿ..

ಒಂದೋ, ಎರಡೋ ..ಬಾಳೆಲೆ ಹರಡೋ

( ನೀರ ತಗೋರಿ..ಎರಡೆಳಿ ರಂಗೋಲಿ ಹಾಕ್ರಿ)

ಮೂರೋ, ನಾಕೋ ಅನ್ನವ ಹಾಕೋ

(ಚಟ್ನಿ,ಕೋಸಂಬ್ರಿ, ಪರಮಾನ್ನ??!!)

ಐದೋ, ಆರೋ ಬೇಳೆಯ ಸಾರೋ

(ತವ್ವಿ, ತುಪ್ಪ ತಗೋರಿ ಮದಲs)

ಏಳೋ, ಎಂಟೋ ಪಲ್ಯಕೆ ದಂಟೋ

(ಪಲ್ಯಾ ಮದಲs ಬರಬೇಕಿತ್ತಲ್ರೀ .)

ಒಂಬತ್ತೋ, ಹತ್ತೋ ಎಲೆ ಮುದುರೆತ್ತು

(ಸ್ವೀಟು, ಚಿತ್ರಾನ್ನ, ಮೊಸರನ್ನ ಎಲ್ರಿ?)

ಒಂದರಿಂದ ಹತ್ತು ಹೀಗಿತ್ತು..

(ಒಂದರಿಂದ ನೂರಿದ್ರೂ ನಡೀತಿತ್ರೀ..

ಯಾವುದೂ ಐಟಂ ಬಿಡಬಾರದಿತ್ರಿ)

ಊಟದ ಆಟವು ಮುಗಿದಿತ್ತು

(ಉಸಿರಿನ ಓಟವೂ  ನಿಂತಿತ್ತು..)

ನನ್ನ ಮೆಚ್ಚಿನ ಲೇಖಕಿಗೊಂದು ಹೃತ್ಪೂರ್ವಕ ನಮನ

ಶಿವಶಂಕರ ಮೇಟಿ

(ಚಿತ್ರ: ಗೂಗಲ್ ಕೃಪೆ)

ಸೆಪ್ಟೆಂಬರ್ ೧ ಕನ್ನಡದ  ಕಾದಂಬರಿಗಾರ್ತಿಯರ ಇತಿಹಾಸದಲ್ಲಿ ನೆನಪಿಡುವ ದಿನ . ಏನಿದರ ವಿಶೇಷತೆ ಎನ್ನುತ್ತೀರಾ ?

ಇದು ಕನ್ನಡದ  ಕಾದಂಬರಿ ಲೋಕ ಕಂಡ ಅಪರೂಪದ ಲೇಖಕಿ ತ್ರಿವೇಣಿಯವರ ಜನುಮ ದಿನ . ಬಾಲ್ಯದಿಂದಲೂ ನನಗೆ ಅವರ ಮೇಲಿರುವ ಅಪಾರ ಗೌರವದ ಋಣಿಯಾಗಿ,  ಇದೊಂದು ಸಣ್ಣ ಲೇಖನದ ಮೂಲಕ ಅವರಿಗೊಂದು ನಮನ .

ಕನ್ನಡದ ‘ಜೇನ್ ಆಸ್ಟಿನ್ ‘ ಎಂದೇ ಹೆಸರಾಗಿದ್ದ ತ್ರಿವೇಣಿಯವರು ಹುಟ್ಟಿದ್ದು ಸೆಪ್ಟೆಂಬರ್ ೧ , ೧೯೨೮ ರಲ್ಲಿ . ಮೈಸೂರಿನ ಚಾಮರಾಜಪುರದಲ್ಲಿ ಜನನ . ಭಾಗೀರಥಿ ಜನ್ಮನಾಮವಾದರೂ ‘ಅನಸೂಯಾ’ ಆಗಿ ಶಾಲೆಗೆ ಸೇರಿ, ‘ತ್ರಿವೇಣಿ ‘ಎಂಬ  ಲೇಖನಿ ಹೆಸರಿನಿಂದ ಕನ್ನಡ ಸಾಹಿತ್ಯಕ್ಕೆ ಚಿರ ಪರಿಚಿತರಾದವರು. ಸಾಹಿತ್ಯ ಸಂಸ್ಕೃತಿಯ ಮನೆಯ ವಾತಾವರಣದಲ್ಲಿ ಬೆಳೆದ ಅವರಿಗೆ ಬಾಲ್ಯದಿಂದಲೂ ಓದುವ ಹುಚ್ಚು ಸಹಜವಾಗಿತ್ತು ( ಬಿ ಎಂ ಶ್ರೀ  ಚಿಕ್ಕಪ್ಪ ಮತ್ತು ವಾಣಿ ಸೋದರ ಸಂಬಂಧಿ ). ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಂಗಾರದ ಪದಕದೊಂದಿಗೆ ಬಿ. ಎ ಮುಗಿಸಿದ  ಅವರಿಗೆ  ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರದ ಬಗ್ಗೆ ತುಂಬ ಆಸಕ್ತಿ ಇತ್ತು. 

ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರೂ ಅಂತರಾಳದಲ್ಲಿ ಅಡಗಿದ್ದ ಸಾಹಿತ್ಯದ ಒಲವು ಅವರನ್ನು ಕಾದಂಬರಿ ಲೋಕಕ್ಕೆ ಕರೆದುಕೊಂಡು ಹೋಗಿತ್ತು. ಹೆಣ್ಣಿನ ಆಸೆಗಳಿಗೆ ಪುರುಷ ಪ್ರಧಾನವಾದ ಸಮಾಜದಲ್ಲಿ ಬೆಲೆಯೇ ಇಲ್ಲವೆಂದು ಪ್ರತಿಪಾದಿಸುವ ಅವರ ಮೊದಲು ಕಾದಂಬರಿ ‘ ಅಪಸ್ವರ ‘ ೧೯೫೩ ರಲ್ಲಿ ಪ್ರಕಟವಾಯಿತು. ಹೆಣ್ಣಿನ ಮಾನಸಿಕ ತುಮುಲ, ಶೋಷಣೆ, ಸಮಾಜದಲ್ಲಿ ಅವಳೆದಿರಿಸುವ ಸಮಸ್ಯೆಗಳು ಅವರ ಕಾದಂಬರಿಯ ಜೀವಾಳವಾಗಿದ್ದವು . ಮಾನಸಿಕ ರೋಗಿ ಗುಣಮುಖವಾದರೂ ಸಮಾಜ ಅವರನ್ನು ನೋಡುವ ಪರಿಯನ್ನು ‘ ಶರಪಂಜರದಲ್ಲಿ ‘ ಬಿಂಬಿಸಿದ್ದರೆ, ಯೌವ್ವನದ  ಹೊಳೆಯಲ್ಲಿ ಉಕ್ಕುವ ಕಾಮದಾಸೆ ಮತ್ತು ತಪ್ಪು ಪುರುಷನಿಗೆ ಮಾತ್ರ ಸೀಮಿತವಲ್ಲ ಹೆಣ್ಣಿಗೂ ಅನ್ವಯವಾಗುತ್ತದೆ  ಹಾಗು ಒಬ್ಬರನೊಬ್ಬರು  ಕ್ಷಮಿಸಿ ನಡೆದರೆ ಜೀವನ ಸಾರ್ಥಕವೆಂಬುವದನ್ನು ‘ಸೋತು ಗೆದ್ದವಳು’ ಎಂಬ ಕಾದಂಬರಿಯಲ್ಲಿ  ಚಿತ್ರಿಸಿದ್ದಾರೆ. ‘ಹಣ್ಣೆಲೆ ಚಿಗುರಿದಾಗ’ ದಲ್ಲಿ ವಿಧವಾ ವಿವಾಹದ ವಿಷಯವಿದ್ದರೆ ‘ಹೂವು ಹಣ್ಣು’ ನಲ್ಲಿ ಅಸಹಾಯಕ ಹೆಣ್ಣು ವೇಶ್ಯಾ ವೃತ್ತಿಯ  ಜಾಲದಲ್ಲಿ ಸಿಲುಕುವ ವ್ಯಥೆಯಿದೆ. ಅವರ ಒಂದೊಂದು ಕಾದಂಬರಿಗಳನ್ನು ವಿಮರ್ಶಿಸಲು ನೂರಾರು ಪುಟಗಳೇ ಬೇಕಾಗಬಹುದು . ಅವರು ಬರೆದ ೨೧ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದ ೨೧ ಮುತ್ತುಗಳು ಎಂದರೆ ತಪ್ಪಾಗಲಾರದು.

ಐವತ್ತರಿಂದ  ಅರವತ್ತರ ದಶಕದಲ್ಲಿ ಬರೆದ ಅವರ ಕಾದಂಬರಿಗಳು ಹಳೆಯದಾದರೂ , ಕಾದಂಬರಿಯ ಕಥೆಗಳಲ್ಲಿ ಇರುವ ವಿಚಾರಧಾರೆ ಮತ್ತು ಪಾತ್ರಗಳು ಇಂದಿನ ಆಧುನಿಕ ಸಮಾಜದಲ್ಲೂ ನವ್ಯವೆಂದು ಅನಿಸುತ್ತವೆ. ಅವರ ಹಲವಾರು ಕಾದಂಬರಿಗಳು ಬೇರೆ  ಭಾಷೆಗಳಲ್ಲಿ ಅನುವಾದಗೊಂಡಿವೆ. ಅವರ ಕಾದಂಬರಿಗಳು ಸಾಮಾನ್ಯ ಓದುಗರನ್ನು ಮಾತ್ರವಲ್ಲ ಪ್ರಸಿದ್ಧ ಚಿತ್ರ ನಿರ್ದೇಶಕರನ್ನು ಕೂಡಾ ಆಕರ್ಷಿಸಿದ್ದವು . ಇಪ್ಪತ್ತೊಂದರಲ್ಲಿ ಏಳು ಕಾದಂಬರಿಗಳು ಸುಪ್ರಸಿದ್ದ ಕನ್ನಡ ಚಿತ್ರಗಳಾಗಿ ಬೆಳ್ಳಿ ತೆರೆಯನ್ನು ಕಂಡಿವೆ. ಶರಪಂಜರ , ಬೆಕ್ಕಿನ ಕಣ್ಣು ಮತ್ತು ಬೆಳ್ಳಿಮೋಡ  ಚಿತ್ರಗಳನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರೆ , ಹಣ್ಣೆಲೆ ಚಿಗುರಿದಾಗ, ಹೂವು ಹಣ್ಣು, ಕಂಕಣ ಮತ್ತು ಮುಕ್ತಿ  ಬೇರೆ ಪ್ರಸಿದ್ಧ ನಿರ್ದೇಶಕರಿಂದ  ತೆರೆಯನ್ನು ಕಂಡಿವೆ.

ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದವು . ‘ಅವಳ ಮನೆ’ ಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದರೆ , ‘ಕಂಕಣ’ ದ ಕಥೆಗೆ ಕರ್ನಾಟಕ ಮೋಶನ್ ಪಿಕ್ಚರ್ ಪ್ರಶಸ್ತಿ ಬಂದಿತ್ತು . 

ಸಾಹಿತ್ಯ ಜೀವನದಲ್ಲಿ ಸವಿಯಿದ್ದರೂ ಅವರ ಸ್ವಂತ ಜೀವನದಲ್ಲಿ ನೋವಿನ ಅಲೆಯಿತ್ತು. ಮೆಚ್ಚಿ ಕೈ  ಹಿಡಿದ ಪ್ರೋತ್ಸಾಹಕ ಪತಿಯಿದ್ದರೂ (ಪ್ರೊಫೆಸ್ಸರ್ ಶಂಕರ್), ಹನ್ನೆರಡು ವರ್ಷದ ದಾಂಪತ್ಯ ಜೀವನದಲ್ಲಿ ಮಕ್ಕಳಾಗಲಿಲ್ಲ ಎಂಬ ಕೊರಗು ಸದಾ ಅವರನ್ನು ಕೊರೆಯುತಲಿತ್ತು . ಎರಡು ಸಲ ಗರ್ಭಪಾತವಾದಾಗ ಅವರು ಕುಸಿದು ಹೋಗಿದ್ದರು. ತಮ್ಮ ಮಾನಸಿಕ ವೇದನೆಯನ್ನು ‘ಅತಿಥಿ ಬರಲೇ ಇಲ್ಲ’ ಎಂಬ ಕಥೆಯಲ್ಲಿ ತೋಡಿಕೊಂಡಿದ್ದಾರೆ.

ಆದರೆ  ಕೊನೆಗೂ ಅತಿಥಿ ಬಂದಾಗ ವಿಧಿ ಅವರ ಅದೃಷ್ಟದ ಪುಟವನ್ನು ಬೇರೆ ರೀತಿಯಲ್ಲಿ ಬರೆದಿತ್ತು ಜುಲೈ ೧೯ , ೧೯೬೩ ರಲ್ಲಿ ಅವರು ಹೆಣ್ಣು ಮಗುವಿಗೆ  ಜನ್ಮವಿತ್ತಿದ್ದರು. ಹತ್ತು ದಿನಗಳ ನಂತರ ಪಲ್ಮನರಿ ಎಂಬೋಲಿಸಂ (ಶ್ವಾಸಕೋಶದಲ್ಲಿ ಸಿಲುಕಿದ ರಕ್ತದ ಹೆಪ್ಪು) ಗೆ ಬಲಿಯಾಗಿ  ಕೊನೆಯ ಉಸಿರನ್ನು ಎಳೆದರು . ಮೂವತ್ತೈದರ ಹರೆಯದಲ್ಲಿ ಇನ್ನೂ ಬಾಳಿ , ಬದುಕಿ ಹೆಮ್ಮರವಾಗಬೇಕಿದ್ದ ಪ್ರತಿಭೆಯ ಸಸಿ ಕಮರಿ ಹೋಯಿತು. ಕನ್ನಡದ  ಕಾದಂಬರಿ ಲೋಕ ಒಬ್ಬ ಮಹಾನ್  ಲೇಖಕಿಯನ್ನು ಕಳೆದುಕೊಂಡಿತು. ಅವರು ಇನ್ನು ಹೆಚ್ಚಿಗೆ ಬಾಳಿ  ಬದುಕಿದ್ದರೆ  ಅದೆಷ್ಟು ಪ್ರಸಿದ್ಧ ಕಾದಂಬರಿಗಳು  ಕನ್ನಡ ಸಾಹಿತ್ಯವನ್ನು ಸೇರುತ್ತಿದ್ದವೋ? ಇನ್ನೆಷ್ಟೋ ರಂಜಿತ ಚಲನ ಚಿತ್ರಗಳು ತೆರೆ ಕಾಣುತಿದ್ದವೋ ಎಂಬುದು ಕಲ್ಪನೆ ಮಾತ್ರ ಅವರು ಬದುಕಿರುವಾಗ ಅವರ ಯಾವುದೇ ಕಾದಂಬರಿಗಳು ಚಲನ ಚಿತ್ರಗಳಾಗಿರಲಿಲ್ಲ ಎಂಬುದು ವಿಷಾದನೀಯ .

ಅವರ ಮಗಳು  ಮೀರಾ ಶಂಕರ್ ಇತ್ತೀಚಿಗೆ ತೆಗೆದುಕೊಂಡ ನಿರ್ಧಾರ ಶ್ಲಾಘನೀಯ. ಚಾಮರಾಜಪುರದಲ್ಲಿ ಸುಮಾರು ಇನ್ನೂರು ವರ್ಷದಷ್ಟು ಹಳೆಯದಾದ ಅವರ ಮನೆಯನ್ನು ‘ತ್ರಿವೇಣಿ ಮ್ಯೂಸಿಯಂ’ ಆಗಿ ಪರಿವರ್ತಿಸಲಿದ್ದಾರೆ. ಮ್ಯೂಸಿಯಂನ ಜೊತೆಗೆ ಅವರ ಹೆಸರು ನವ ಪೀಳಿಗೆಗೆ ಗೊತ್ತಾಗಲಿ ಮತ್ತು ಅಮರವಾಗಿ ಉಳಿಯಲಿ ಎಂಬುವದು ನನ್ನ ಆಸೆ.

ತ್ರಿವೇಣಿಯವರು ಇಂದಿಗೂ ನನ್ನ ನೆಚ್ಚಿನ ಲೇಖಕಿ . ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ದೊರೆತ ಅವರ ಎರಡು ಕಾದಂಬರಿಗಳು ನನಗೆ ಕನ್ನಡ ಸಾಹಿತ್ಯ ಲೋಕಕ್ಕೆ ದಾರಿಯನ್ನು ತೋರಿಸಿದ್ದವು . ಪುಸ್ತಕಗಳನ್ನು ಓದುವ ಹುಮ್ಮಸ್ಸವನ್ನು ಹುಟ್ಟಿಸಿದ್ದವು. ಅವರ  ಉಳಿದ  ಕಾದಂಬರಿಗಳನ್ನು ಓದುವ ತವಕ ಮನಸಿನಲ್ಲಿ ಸದಾ ಇತ್ತು ಆದರೆ  ಅವಕಾಶ ಸಿಕ್ಕಿರಲಿಲ್ಲ . ಹೈಸ್ಕೂಲಿಗೆಂದು ಪಕ್ಕದ ಬೈಲಹೊಂಗಲಕ್ಕೆ ಸೇರಿದಾಗ ನಾನು ಮೊದಲು ಮಾಡಿದ ಕೆಲಸ ಗ್ರಂಥಾಲಯದ ಸದಸ್ಯನಾಗಿದ್ದು (ಸುಳ್ಳು ವಯಸ್ಸು ಹೇಳಿ ). ಅವರ  ಎಲ್ಲ  ಕಾದಂಬರಿಗಳು ಗ್ರಂಥಾಲಯದಲ್ಲಿ ಸಿಗದೇ ಇದ್ದರೂ ಸುಮಾರು ಪುಸ್ತಕಗಳು ಸಿಕ್ಕಿದ್ದು ಮನಸಿಗೆ ಖುಷಿ ತಂದಿತ್ತು. ತನ್ಮಯನಾಗಿ ಅವರ ಕಾದಂಬರಿಯನ್ನು ಓದುತ್ತಿದ್ದರೆ ನನಗೆ  ಆ ಕಥೆ ಎಲ್ಲೋ ನಮ್ನ ಪಕ್ಕದ ಮನೆಯಲ್ಲಿಯೇ ನಡೆದಿದೆ ಎಂದು ಅನಿಸುತಿತ್ತು. ಕಾದಂಬರಿಯ ಕಥೆ ಅಷ್ಟೊಂದು ಸರಳ  ಮತ್ತು ಸಹಜವಾಗಿರುತಿತ್ತು . 

ಮುಂದೆ ಧಾರವಾಡದ ಕರ್ನಾಟಕ ಕಾಲೇಜು ಸೇರಿದಾಗ , ಅವರ ಉಳಿದ ಕಥೆಗಳನ್ನು ಓದಲು ಅವಕಾಶ  ಸಿಕ್ಕಿದ್ದು ನನ್ನ ಜೀವನದ ಸಂತೋಷದ ಘಟನೆಗಳಲ್ಲಿ ಒಂದು ಎಂದು ಹೇಳಬಲ್ಲೆ . ಅವರ ಎಲ್ಲಾ ಪುಸ್ತಕದ ಕಿಟ್ಟು ಇಂದಿಗೂ  ‘ಅಮೆಜಾನ್  ‘ ಮಾರುಕಟ್ಟೆಯಲ್ಲಿ ಐದು ಸ್ಟಾರ್ ರಿವ್ಯೂನೊಂದಿಗೆ ಮಾರಾಟವಾಗುತ್ತಿದೆ ಎಂಬುದು ಹೆಮ್ಮೆಯ ಸಂಗತಿ .