’ಲಂಡನ್ ಡೈರಿ’: ವೈದೃಶ್ಯಗಳ ನಡುವಿನ ಬೆರಗುಗಳು’ ಯೋಗೀಂದ್ರ ಮರವಂತೆಯವರ ಪುಸ್ತಕದ ವಿಮರ್ಶೆ – ಡಾ ಜಿ ಎಸ್ ಶಿವಪ್ರಸಾದ್

ಬ್ರಿಸ್ಟಲ್ ಏರ್ ಬಸ್ ಸಂಸ್ಥೆಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞರಾದ ಯೋಗಿಂದ್ರ ಮರವಂತೆ ಅನಿವಾಸಿ ಕನ್ನಡಿಗರಿಗೆ ಚಿರಪರಿಚಿತರು. ಹಲವಾರು ವರ್ಷಗಳಿಂದ ದಿನಪತ್ರಿಕೆಗಳಿಗೆ ಮತ್ತು ಅಂತರ್ಜಾಲ ತಾಣಗಳಿಗೆ ಅಂಕಣ ಬರೆಯುತ್ತ,  ಆಗೊಮ್ಮೆ ಈಗೊಮ್ಮೆ ಅನಿವಾಸಿ ತಾಣದಲ್ಲೂ ಕೆಲವು ಪ್ರಬಂಧಗಳನ್ನು ಬರೆಯುತ್ತ ನಮಗೆಲ್ಲ ಚಿರಪರಿಚಿತರಾಗಿದ್ದಾರೆ. ಅವರ ಲೇಖನಗಳು ನಮ್ಮ ಸಮಕಾಲೀನ ಬದುಕಿನ ಹಲವಾರು ವಿಷಯಗಳಿಗೆ ಸಂಬಂಧಿಸಿದ್ದು ಅವರ ಸೃಜನಾತ್ಮಕ  ಬರಹಗಳು ಅನೇಕ ಚಿಂತನೆಗಳಿಗೆ ಅನುವು ಮಾಡಿಕೊಟ್ಟಿದೆ. ಲಂಡನ್ ಡೈರಿ ಅವರ ಮೊದಲನೇ ಕೃತಿ. ಇದಲ್ಲದೆ ಅವರು 'ಮುರಿದು ಬಿದ್ದ ಸೈಕಲ್ ಮತ್ತು ಹೂಲ ಹೂಪ್ಸ್ ಹುಡುಗಿ’,'ನನ್ನ ಕಿಟಕಿ' ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಒಂದೆರಡು ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದ್ದಾರೆ. ಯೋಗಿಂದ್ರ ಮರವಂತೆ ಮತ್ತು ಇನ್ನೂ ಅನೇಕ ಅನಿವಾಸಿ ಕನ್ನಡಿಗರು ವಿದೇಶದಲ್ಲಿ ಕುಳಿತು ಉತ್ತಮವಾದ ಪುಸ್ತಕಗಳನ್ನು ಬರೆದಿದ್ದಾರೆ.  ಅವರ ಕೃತಿಗಳನ್ನು ಅನಿವಾಸಿ ಕನ್ನಡಿಗರು ಓದಬೇಕು ಮತ್ತು ಓದಿ ಅವರ ಅಭಿಪ್ರಾಯಗಳನ್ನು ದಾಖಲಿಸಿದರೆ ಲೇಖಕರಿಗೆ ಮುಂದಕ್ಕೆ ಬರೆಯಲು ಉತ್ತೇಜನ ದೊರೆಯುತ್ತದೆ ಎಂಬುದು ನನ್ನ ಅಭಿಪ್ರಾಯ. ಈ ಒಂದು ಹಿನ್ನೆಲೆಯಲ್ಲಿ ನಾನು ಯೋಗಿಂದ್ರ ಅವರ ಲಂಡನ್ ಡೈರಿ ಪುಸ್ತಕ ಪರಿಚಯದ ಪ್ರಯತ್ನ ಮಾಡಿದ್ದೇನೆ. ನನ್ನ ಒಂದು ಕಾದಂಬರಿ ಕೃತಿಯನ್ನು ಅನಿವಾಸಿ ಮಿತ್ರರು ಹಿಂದೆ ಓದಿ ಅದರ ವಿಮರ್ಶೆ ಒದಗಿಸಿದ್ದು ನನಗೆ ಓದುಗರ ದೃಷ್ಟಿಕೋನ ದೊರಕಿದಂತಾಯಿತು. ನನ್ನ ಸಾಮರ್ಥ್ಯಗಳ ಬಗ್ಗೆ ಒಂದು ಒಳನೋಟವೂ ದೊರಕಿತು. ಕನ್ನಡ ನೆಲದಿಂದ ದೂರವಿರುವ ನಮ್ಮಂಥ ಅನಿವಾಸಿ ಲೇಖಕರುಗಳು ಒಬ್ಬರು ಇನ್ನೊಬ್ಬರ ಕೃತಿಗಳನ್ನು ಓದಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಶ್ಯಕತೆ ನನಗೆ ಕಂಡಿದೆ. ಈ ಪ್ರಯತ್ನವನ್ನು ಮುಂದಕ್ಕೆ ನಡೆಸಿಕೊಡಲು ನಾನು ಪ್ರಯತ್ನಿಸುತ್ತೇನೆ.

ನಾವುಗಳು ಬರೆದ ಕನ್ನಡ ಪುಸ್ತಕಗಳು ಕರ್ನಾಟಕದಲ್ಲಿ ಪ್ರಕಟಗೊಂಡು ಅದನ್ನು ಇಂಗ್ಲೆಂಡಿನ ಕನ್ನಡ ಓದುಗರಿಗೆ ಒದಗಿಸುವುದು ಸ್ವಲ್ಪ ಕಷ್ಟದ ಕೆಲಸವೇ. ಪುಸ್ತಕದ ಬೆಲೆಗೆ ಸಾಗರದಾಚೆಗೆ ರವಾನಿಸುವ ಮತ್ತು ಅಂಚೆಯಲ್ಲಿ ವಿತರಿಸುವ ಬೆಲೆಯನ್ನು ಸೇರಿಸುವುದು ಅನಿವಾರ್ಯವಾಗುತ್ತದೆ. ಮುಂದಕ್ಕೆ ಯುಕೆ ಕನ್ನಡ ಬಳಗ ಮತ್ತು ಇತರ ಕನ್ನಡ ಸಂಘ ಸಮಾರಂಭದಲ್ಲಿ ಅನಿವಾಸಿ ಲೇಖಕರ ಪ್ರಕಟಿತ ಪುಸ್ತಕಗಳ ಬಗ್ಗೆ ಅರಿವು ಮೂಡಿಸಿ ಅದನ್ನು ಒಂದು ಕಡೆ ಮಾರಾಟ ಮಾಡುವ ಅವಕಾಶವನ್ನು ಈ ಸಂಘಗಳು ಕಲ್ಪಿಸಿ ಕೊಡಬೇಕಾಗಿದೆ. ಇದನ್ನು ಬರಿ ವಾಣಿಜ್ಯ ವಹಿವಾಟಾಗಿ ನೋಡದೆ ಕನ್ನಡ ಬೆಳೆಸುವ ಯತ್ನವೆಂದು ಪರಿಗಣಿಸಬೇಕು. ಅನಿವಾಸಿ ಲೇಖಕರು ತಾವು ಬರೆದ ಕೃತಿಗೆ ಅನಿವಾಸಿ ಓದುಗರ ಬೆಂಬಲವನ್ನು ನಿರೀಕ್ಷಿಸುವುದು ಸಹಜವೇ.  

 -ಸಂಪಾದಕ
ಯೋಗಿಂದ್ರ ಮರವಂತೆ ಅವರು ಅಂಕಣಕಾರರಾಗಿ ಉದಯವಾಣಿ, ಪ್ರಜಾವಾಣಿ, ಕೆಂಡ ಸಂಪಿಗೆ ಮುಂತಾದ ತಾಣಗಳಲ್ಲಿ ಬರೆದ ಪ್ರಬಂಧಗಳನ್ನು ಒಟ್ಟುಗೂಡಿಸಿ ‘ಲಂಡನ್ ಡೈರಿ’ (ಅನಿವಾಸಿಯ ಪುಟಗಳು) ಎಂಬ ಸಂಕಲನವನ್ನು ೨೦೧೯ರಲ್ಲಿ ಹೊರತಂದಿದ್ದು ಅದನ್ನು ಕರ್ನಾಟಕದ ಯಾಜಿ ಪ್ರಕಾಶನ ಪ್ರಕಟಿಸಿದೆ. ಈ ಪುಸ್ತಕವನ್ನು ಹಿಂದೆ ನಾನು ಕೊಂಡಿದ್ದು ಅದು ನನ್ನ ಇಂಡಿಯಾ ಪ್ರವಾಸದಲ್ಲಿ ಕಳೆದುಹೋಗಿ, ಇತ್ತೀಚಿಗೆ ಬೆಂಗಳೂರಿನ ನವಕರ್ನಾಟಕ ಪುಸ್ತಕ ಮಳಿಗೆಗೆ ಭೇಟಿ ನೀಡಿದಾಗ ಮತ್ತೆ ನನಗೆ ದಕ್ಕಿದೆ. ಇದೀಗ ಈ ಪುಸ್ತಕವನ್ನು ಓದಿ ಮುಗಿಸಿದ್ದೇನೆ. ಹಳೆಯ ಪುಸ್ತಕಕ್ಕೊಂದು ಹೊಸ ದೃಷ್ಟಿಕೋನವನ್ನು ಒದಗಿಸುವ ಪ್ರಯತ್ನ ನನ್ನದಾಗಿದೆ. "ಹಾಡು ಹಳೆಯದಾದರೇನು ಭಾವ ನವನವೀನ" ಎನ್ನುವ ಹಾಗೆ ಎಂದು ತಿಳಿಯಿರಿ. ಈ ಪುಸ್ತಕವನ್ನು ಎರಡೇ ಸಾಲುಗಳಲ್ಲಿ ಸಂಕ್ಷಿಪ್ತವಾಗಿ ಪರಿಚಯ ಮಾಡುವುದಾದರೆ  ಪುಸ್ತಕದ ಮೊದಲನೇ ಪುಟದಲ್ಲೇ ಲೇಖಕರೇ ತಿಳಿಸಿರುವಂತೆ; "ಮುಖಾಮುಖಿಗಳು ಹುಟ್ಟಿಸುವ ಬೆರಗು, ಕುತೂಹಲ, ತಳಮಳ, ವೈರುಧ್ಯಗಳ ನಡುವೆ ಅಲೆಯುತ್ತ ನೆನೆಯುತ್ತ ಕಾಲ ಘಟನೆಗಳಿಗೆ ಹೊಂದಿಸಿ ಮನಸ್ಸಿನಲ್ಲಿ ಅಕ್ಷರ ಪೋಣಿಸಿದರೆ, ಹಾಳೆಯ ಮೇಲೆ ಮೂಡಿಸಿದರೆ, ಮತ್ತು ಆ ಹಾಳೆಗಳನ್ನು ಪುಟಗಳಾಗಿ ಜೋಡಿಸಿದರೆ ಅದು ಲಂಡನ್ ಡೈರಿ". ಇದರಲ್ಲಿ ಒಂದು ಮುಖ ಇಂಗ್ಲೆಂಡ್, ಇನ್ನೊಂದು ಮುಖ ಭಾರತ. ಈ ಹೊತ್ತಿಗೆಗೆ ಬೆನ್ನುಡಿ ಬರೆದ ಖ್ಯಾತ ಲೇಖಕಿ ಪುಸ್ತಕದಲ್ಲಿನ ವೈವಿಧ್ಯತೆ ಮತ್ತು ಸೂಕ್ಷ್ಮ ವಿವರಗಳನ್ನು ಗಮನಿಸಿ ಯೋಗಿಂದ್ರ ಅವರಿಗೆ "ಕಾಣುವ ಕಣ್ಣುಗಳು" ಇವೆಯೆಂದು ಪ್ರಶಂಸಿಸಿದ್ದಾರೆ. ಇಂಗ್ಲೆಂಡಿನಲ್ಲಿ ವಾಸ ಮಾಡುತ್ತಿರುವ ಅನಿವಾಸಿಗಳಿಗೆ ಸಾಧಾರಣ ಎನಿಸುವ ದಿನ ನಿತ್ಯ ಬದುಕಿನ ಕ್ಷಣಗಳನ್ನು ಯೋಗಿಂದ್ರ ಅವರು ಗ್ರಹಿಸಿ ಆಳವಾಗಿ ಚಿಂತಿಸಿರುವುದರ ಬಗ್ಗೆ ಖ್ಯಾತ ಲೇಖಕ ಅಬ್ದುಲ್ ರಶೀದ್ ಅವರು ಬೆನ್ನುಡಿಯಲ್ಲಿ ಬರೆಯುತ್ತ “ಯೋಗಿಂದ್ರ ಅವರಿಗೆ ಪತ್ರಕರ್ತನ ಗುಣವಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಪುಸ್ತಕದ ಶೀರ್ಷಿಕೆ ‘ಲಂಡನ್ ಡೈರಿ’ ಎಂತಿದ್ದರೂ ಇದು ಲಂಡನ್ ನಗರವನ್ನೂ ದಾಟಿ ಇಂಗ್ಲೆಂಡಿನ ಬದುಕಿನ ಚಿತ್ರವಾಗಿದೆ. ಕರ್ನಾಟಕದ ಕನ್ನಡಿಗರು ಲಂಡನ್ ಮತ್ತು ಇಂಗ್ಲೆಂಡ್ ಎಂಬ ಹೆಸರಿನಲ್ಲಿ ನಿರ್ದಿಷ್ಟವಾದ ವ್ಯತಾಸವನ್ನು ಕಾಣದೆ ನಗರ ಮತ್ತು ದೇಶವನ್ನು ಒಂದೇ ಹೆಸರಿನಲ್ಲಿ ಸಂಬೋಧಿಸುವುದರಿಂದ ಈ ಶೀರ್ಷಿಕೆ ಇಂಗ್ಲೆಂಡನ್ನು ಕನ್ನಡಿಗರಿಗೆ ಪರಿಚಯಿಸುವ ದೃಷ್ಟಿಯಿಂದ ಸೂಕ್ತವಾಗಿದೆ. ಅಂದ ಹಾಗೆ ಈ ಹೊತ್ತಿಗೆಯ ಮುಖಪುಟವನ್ನು ಗಮನಿಸಿದರೆ ಇಲ್ಲಿ ಇರುವ ಲಂಡನ್ ಬಿಗ್ ಬೆನ್, ಜಿನುಗುತ್ತಿರುವ ಮಳೆ, ಮಬ್ಬು ಕವಿದ ಮೋಡಗಳು ಇಂಗ್ಲೆಂಡಿನ ಒಂದು ಪರಿಪೂರ್ಣ ಚಿತ್ರಾತ್ಮಕ ಸಂಕೇತದಂತೆ ತೋರುತ್ತದೆ. ಈ ಮುಖಪುಟವೇ ಈ ಹೊತ್ತಿಗೆಯ ಒಂದು ಕಿರುಪರಿಚಯ!

ಈ ಪ್ರಬಂಧ ಸಂಕಲನದ ಮೂಲ ಉದ್ದೇಶ ಬ್ರಿಟನ್ನಿನ್ನ ನಿವಾಸಿ ಮತ್ತು ಅನಿವಾಸಿಗಳ ಬದುಕನ್ನು ಕನ್ನಡಿಗರಿಗೆ ಪರಿಚಯಿಸುವುದು ಎಂದು ಶುರಿವಿನಲ್ಲೇ ಪ್ರಸ್ತಾಪಿಸಿಸುವುದು ಉಚಿತ. ಓದುತ್ತ ಹೋದಂತೆ ಲೇಖಕರ ಮೂಲ ಆಶಯ ಮತ್ತು ಹಂಬಲ ತೆರೆದುಕೊಳ್ಳುತ್ತದೆ.  ನಾಲ್ಕೈದು ದಶಕಗಳ ಹಿಂದೆ ವಿದೇಶದಲ್ಲಿ ನೆಲೆಸಿದ್ದ ವೈದ್ಯರು ಮತ್ತು ಇಂಜಿನೀಯರ್ಗಳು ಕನ್ನಡದಲ್ಲಿ ಒಂದು ಲೇಖನವಿರಲಿ ಒಂದೆರಡು ಸಾಲುಗಳನ್ನು ಬರೆಯಲು ಹಿಂಜರಿಯುತ್ತಿದ್ದ ಕಾಲದಲ್ಲಿ ಶಿವರಾಮ ಕಾರಂತ, ಮೂರ್ತಿರಾಯರು, ಗೋರೂರ್, ಗೋಕಾಕ ಮತ್ತು ಜಿ.ಎಸ್.ಎಸ್ ಮುಂತಾದ ಸಾಹಿತಿಗಳು ವಿದೇಶ ಪರ್ಯಟನೆ ಮಾಡಿ ಮರಳಿದಾಗ ಅವರ ಪ್ರವಾಸದ  ಅಲ್ಪ ಸಮಯದಲ್ಲಿ ಕಂಡದ್ದನ್ನು ಕೇಳಿದ್ದನ್ನು ಅನುಭವಿಸಿದ್ದನು ಪ್ರವಾಸ ಕಥನವಾಗಿ ದಾಖಲಿಸಿ ಇಂಗ್ಲೆಂಡ್ ಮತ್ತು ಅಮೆರಿಕಗಳನ್ನು ಕನ್ನಡಿಗರಿಗೆ ಪರಿಚಯಿಸುತ್ತಿದ್ದರು. ಕವಿ- ಸಾಹಿತಿಗಳಾದ ಅವರು ಮಾಹಿತಿಗಳೊಡನೆ ತಮ್ಮ ವಿಶೇಷ ಒಳನೋಟವನ್ನು ಒದಗಿಸುತ್ತಿದ್ದರು. ಆದರೆ ಆ ಬರಹಗಳಲ್ಲಿ ಆಯಾ ದೇಶಗಳ ಜನ ಜೀವನದ ಪೂರ್ಣ ಪರಿಚಯ ಸಿಗುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಯೋಗಿಂದ್ರ ರೀತಿಯ ಅನೇಕ ಅನಿವಾಸಿ ಎಂಜಿನೀಯರ್ಗಳು, ವೈದ್ಯರು, ವೃತ್ತಿಪರರೂ, ಗೃಹಿಣಿಯರು ವಿದೇಶಗಳಲ್ಲಿ ದಶಕಗಳ ಕಾಲ ಬದುಕಿ ಇಲ್ಲಿಯ ಜನ ಜೀವನ, ಸಾಂಸ್ಕೃತಿಕ ವೈಶಿಷ್ಟ್ಯತೆ, ವಿಲಕ್ಷಣ, ದಿನ ನಿತ್ಯ ಆಗು-ಹೋಗುಗಳನ್ನು ಸವಿವರವಾಗಿ ಕೂಲಂಕುಷವಾಗಿ ಗಮನಿಸಿ ಪ್ರಬಂಧಗಳನ್ನು ಬರೆಯುತ್ತಿದ್ದಾರೆ. ಇನ್ನು ಅಮೇರಿಕಾದ ಅನಿವಾಸಿ ಕನ್ನಡಿಗ ಗುರುಪ್ರಸಾದ್ ಕಾಗಿನೆಲೆ ತಮ್ಮ ಕಥೆ ಕಾದಂಬರಿಗಳಲ್ಲಿ ವಿದೇಶದ ಬದುಕನ್ನೇ ಕಥೆಯ ಹಂದರದಲ್ಲಿ ಅಳವಡಿಸಿದ್ದಾರೆ. ಪ್ರವಾಸ ಕಥನ ಒದಗಿಸಲಾರದ ವಿಷಯ ವಿವರಗಳನ್ನು ಯೋಗಿಂದ್ರ ತಮ್ಮ ಪ್ರಬಂಧಗಳಲ್ಲಿ ವಿಶೇಷ ಒಳನೋಟಗಳ ಜೊತೆ ದಾಖಲಿಸಿದ್ದಾರೆ. ಕರ್ನಾಟಕದ ಅನೇಕ ಕನ್ನಡಿಗರಿಗೆ, ಟಿವಿ ಇನ್ನಿತರ ಮಾಧ್ಯಮಗಳ ಮೂಲಕ, ವಿದೇಶದಲ್ಲಿ ನೆಲೆಸಿರುವ ಬಂಧುಗಳ ಮೂಲಕ, ಬ್ರಿಟನ್ನಿನ್ನ ಬಗ್ಗೆ ಸಾಕಷ್ಟು ತಿಳುವಳಿಕೆ ಇರುತ್ತದೆ. ಆದರೂ ಅನಿವಾಸಿ ಕನ್ನಡಿಗರು ಹೇಗೆ ಬಾಳಿ ಬದುಕುತ್ತಿದ್ದಾರೆ ಎಂಬ ಕುತೂಹಲ ಅವರಿಗಿರುವುದು ಸಹಜವೇ. ಆ ಕೂತುಹಲವನ್ನು ತಣಿಸಲು ಲಂಡನ್ ಡೈರಿ ಒಂದು ಉತ್ತಮ ಪರಿಚಯ ಪ್ರವೇಶ ಎನ್ನಬಹುದು.  ಅಷ್ಟೇ ಏಕೆ ಬ್ರಿಟನ್ನಿನ್ನ ಸ್ವಾರಸ್ಯಕರವಾದ ವಿಚಾರಗಳು ಇಲ್ಲಿರುವುದರಿಂದ ಇಂಗ್ಲೆಂಡಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೂ ಈ ಪುಸ್ತಕ ಪ್ರಸ್ತುತವಾಗಿದೆ.   

ಈ ಪ್ರಬಂಧವನ್ನು ಒಟ್ಟಾರೆ ನೋಡಿದಾಗ ಇಲ್ಲಿ ಎದ್ದು ಕಾಣುವ ವಿಷಯಗಳೆಂದರೆ; ಆಂಗ್ಲರ ದೃಷ್ಟಿಯಲ್ಲಿ ಭಾರತೀಯರು ಮತ್ತು ಭಾರತ, ಅನಿವಾಸಿ ದೃಷ್ಟಿಯಲ್ಲಿ ಆಂಗ್ಲರು ಮತ್ತು ಅವರ ಸಂಸ್ಕೃತಿ, ಕೊನೆಯದಾಗಿ ಈ ಎರಡೂ ದೃಷ್ಟಿಯಲ್ಲಿ ಇರುವ ಸಮಾನಾಂತರಗಳ, ವೈರುಧ್ಯಗಳ ಬಗ್ಗೆ ಇರುವ ತೌಲನಿಕ ಚಿಂತನೆಗಳು. ಇಲ್ಲಿ 'ಆಂಗ್ಲರ ಕನ್ನಡಕದಲ್ಲಿ ಭಾರತ' ಎಂಬ ಮೊದಲನೇ ಪ್ರಬಂಧದಲ್ಲಿ ಆಂಗ್ಲರು ನಮ್ಮನ್ನು ನೋಡುವಾಗ ವಸ್ತುನಿಷ್ಠವಾಗಿ ನಮನ್ನು ನೋಡುತ್ತಾರೆ, ಇಲ್ಲಿ ಹೊಗಳಿಕೆ ತೆಗಳಿಕೆ ಎರಡು ಅವರ ತಕ್ಕಡಿಯಲ್ಲಿ ಸಮಾನವಾಗಿ ತೂಗುತ್ತದೆ. ನಾವು ನಮ್ಮ ದೇಶ ಎಷ್ಟು ಶ್ರೇಷ್ಠ, ಎಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವಾಗ ಆಂಗ್ಲರು ಬಿಬಿಸಿ ಕಾರ್ಯಕ್ರಮದಲ್ಲಿ, ಬರಹಗಳಲ್ಲಿ ನಮ್ಮ ಹುಳುಕುಗಳನ್ನು ಎತ್ತಿ ತೋರಿಸಿ ಮುಖಕ್ಕೆ ಕನ್ನಡಿ ಹಿಡಿಯುತ್ತಾರೆ ಎಂದು ಹೇಳುವಲ್ಲಿ ಯೋಗಿಂದ್ರ ಹಿಂಜರಿಯುವುದಿಲ್ಲ, ಈ ಪ್ರಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ಆತ್ಮಶೋಧನೆಗಳಿವೆ. ಆಂಗ್ಲರು ನಮ್ಮ ಸಂಸ್ಕೃತಿಯನ್ನು ಮೆಚ್ಚಿಕೊಂಡಿರುವ ಉಲ್ಲೇಖಗಳೂ ಸಾಕಷ್ಟಿವೆ. ಇನ್ನು ಬ್ರಿಟನ್ ಬದುಕಿನ ವಿಶೇಷ ಮೌಲ್ಯಗಳು ಮತ್ತು ವಿಚಿತ್ರ ಎನ್ನಿಸುವ ವಿಚಾರಗಳು, ಇಲ್ಲಿಯ ರಾಜ ಮನೆತನ, ರಾಜಕೀಯ ವ್ಯವಸ್ಥೆ, ನಗರ ಮತ್ತು ಗ್ರಾಮೀಣ ಬದುಕು, ಅನಿಶ್ಚಿತವಾದ ಹವಮಾನ ಮತ್ತು ಸದಾ ಜಿನುಗುವ ಮಳೆ, ಇಂಗ್ಲಿಷ್ ಸಾಹಿತ್ಯ; ಹೀಗೆ ಅನೇಕ ವಿಚಾರಗಳ ಬಗ್ಗೆ ಪ್ರಬಂಧಗಳಿವೆ.  

ನನಗೆ ಈ ಕೃತಿಯಲ್ಲಿ ವಿಶೇಷವಾಗಿ ಕಂಡ ಒಂದೆರಡು ಲೇಖನದ ಬಗ್ಗೆ ಪ್ರತ್ಯೇಕವಾಗಿ ಹೇಳಬಯಸುತ್ತೇನೆ. ‘ಮಲೆನಾಡ ಮಳೆದಿನದ ಮಾತುಗಳು ಮೌನಗಳು’ ಎಂಬ ಪ್ರಬಂಧದಲ್ಲಿ ಯೋಗಿಂದ್ರ ಅವರು ಇಂಗ್ಲೆಂಡ್ ವಿಷಯವನ್ನು ಪಕ್ಕಕ್ಕಿಟ್ಟು ತಮ್ಮ ಹುಟ್ಟೂರಾದ ಮರವಂತೆಯಿಂದ ಹೊರಟು ಕೊಲ್ಲೂರು ಘಾಟಿಯನ್ನು ದಾಟಿ ಒಳ ಮಲೆನಾಡಿನ ಹಿಂಸೋಡಿಗೆ ಹೋಗಿಬರುವ ಪ್ರಸಂಗ ವಿಶೇಷವಾಗಿದೆ. ಇಲ್ಲಿ ಮಲೆನಾಡಿನ ಮುಂಗಾರು ಮಳೆಯ ವರ್ಣನೆ, ದಟ್ಟವಾದ ಹಸಿರು ಕಾಡುಗಳು, ಮಳೆಯ ಹೊದಿಕೆಯಲ್ಲಿ ಮುಸುಕು ಹಾಕಿಕೊಂಡು ಮಾತನಾಡುವ ಮರಗಳು, ಕತ್ತಲಿಗೂ ಧ್ವನಿ ಭಾಷೆ ನೀಡುವ ಕಪ್ಪೆ ಜೀರುಂಡೆಗಳು, ಶರಾವತಿಯ ಹಿನ್ನೀರಿನ ದಡದಲ್ಲಿ ಚುರುಮುರಿ ಅಂಗಡಿ ಇಟ್ಟುಕೊಂಡಿರುವಾಕೆಯ ಅನಾನುಕೂಲಗಳು, ಸಮಸ್ಯೆಗಳು, ಅವಳ ದುಃಖದ ಮಾತುಗಳಿಗೆ ಹೊಂ ಹೌದು ಎಂದು ಧ್ವನಿಗೂಡಿಸುವ ಸೌತೆಕಾಯಿ, ಮೆಣಸು ಮತ್ತು ಮಂಡಕ್ಕಿಗಳು; ಹೀಗೆ ಅಲ್ಲಿ ಅನೇಕ ಸುಂದರ ಚಿತ್ರಗಳು ರೂಪಕಗಳು ತೆರೆದು ನಿಲ್ಲುತ್ತವೆ. ಇನ್ನೊಂದು ಮರವಂತೆ ಮಳೆಗೆ ಸಂಬಂಧಿಸಿದ ಪ್ರಬಂಧದಲ್ಲಿ ಕರಾವಳಿಯಲ್ಲಿ ಸುರಿಯುವ ಮಳೆಯ ವರ್ಣನೆ ಅದ್ಭುತವಾಗಿದೆ, ಹಾಗೆ ಲೇಖಕರಿಗೆ ಬೀಳುವ ಕನಸೊಂದರಲ್ಲಿ ಮಳೆ ಒಂದು ಕನ್ಯೆಯಾಗಿ ಬಂದು ಅವಳ ಮತ್ತು ಲೇಖಕನ ಪ್ರೇಮ ಪ್ರಸಂಗ ತೆರೆದುಕೊಂಡು ಅಲ್ಲಿ ಸಂವಾದ ಆತ್ಮೀಯವಾಗಿ ಶೃಂಗಾರ ಕಾವ್ಯವೇ ಸೃಷ್ಟಿಯಾಗಿದೆ. ಯೋಗಿಂದ್ರ ಅವರು ಬ್ರಿಟನ್ನಿನ ಬಗ್ಗೆ ಬರೆಯುವ ವಿಚಾರಕ್ಕಿಂತ ಅವರ ಊರಾದ ಮರವಂತೆಯ ಬಗ್ಗೆ ಬರೆಯುವಾಗ ಅವರ ಬರಹ ಇನ್ನು ಉಜ್ವಲವಾಗುತ್ತದೆ.  ಹಾಗೆಯೇ ಯೋಗಿಂದ್ರ ಅವರು ತಮ್ಮ ವೈಯುಕ್ತಿಕ ಬದುಕಿನ ಅನುಭವಗಳನ್ನು ಸೇರಿಸಿ ಬರೆದಾಗ ಅದು ಓದುಗರಿಗೆ ಆತ್ಮೀಯವಾಗುತ್ತದೆ.

'ಭಾನುವಾರದ ಇಟಾಲಿಯನ್ ಕಟಿಂಗ್' ಬಹಳ ಶ್ರೇಷ್ಠವಾದ ಪ್ರಬಂಧ. ಈ ಪ್ರಬಂಧಕ್ಕೆ ಸುಧಾ ಪತ್ರಿಕೆಯ ಯುಗಾದಿ ವಿಶೇಷಾಂಕದಿಂದ ಬಹುಮಾನ ದಕ್ಕಿದೆ. ಇಲ್ಲಿ ಹೇರ್ ಕಟಿಂಗ್ ಎಂಬ ಸಾಧಾರಣ ವಿಷಯದಲ್ಲಿ ಯೋಗಿಂದ್ರ ಅವರು ಅನೇಕ ಚಿಂತನೆಗಳನ್ನು, ಪ್ರತಿಮೆಗಳನ್ನು, ರೂಪಕಗಳನ್ನು ತಂದು ನಿಲ್ಲಿಸಿದ್ದಾರೆ. ತಗ್ಗಿಸಿದ ತಲೆ, ತಗ್ಗಿಸದೆ ಉಳಿದು ಕೊನೆಗೂ ತಗ್ಗಿಸಬೇಕಾದ ತಲೆ, ಅಹಂಕಾರ, ಅಜ್ಞಾನ, ಅರಿವಿನ ವಿಸ್ತಾರ, ಸಾಂಸ್ಕೃತಿಕ ವೈವಿಧ್ಯತೆ, ಸಂಘರ್ಷಗಳು, ಇವುಗಳನ್ನು ಒಳಗೊಂಡು ಕೊನೆಗೆ ಹೇರ್ ಕಟ್ ಮಾಡಿದಾಗ ಉರುಳಿದ ಎಲ್ಲ ಬಣ್ಣಗಳ, ಊರುಗಳ, ದೇಶಗಳ, ಜಾತಿಗಳ ಕೂದಲನ್ನು ನುಂಗಿಬಿಡುವ ಕಸದ ಬುಟ್ಟಿ ಇಲ್ಲಿ ಬಾಹ್ಯಾಕಾಶದ ಬ್ಲಾಕ್ ಹೋಲಿನ (Cosmic Black Hole) ಪ್ರತಿಮೆಯಾಗಿ ನಿಲ್ಲುತ್ತದೆ. ಇಲ್ಲಿ ಕಾಲನ ಮಹಿಮೆಯಿದೆ. ಒಂದು ಸಣ್ಣ ಪ್ರಸಂಗದಲ್ಲಿ ಇಡೀ ಬದುಕಿನ ಅನುಭವವನ್ನು ಸಾರಾಂಶವನ್ನು ಯೋಗಿಂದ್ರ ಈ ಶ್ರೇಷ್ಠ ಪ್ರಬಂಧದಲ್ಲಿ ಹಿಡಿದಿಟ್ಟಿದ್ದಾರೆ. 

ಈ ಬರಹಗಳಲ್ಲಿ ಯೋಗಿಂದ್ರ ಅವರ ಸೌಂದರ್ಯ ಪ್ರಜ್ಞೆ, ಕಾವ್ಯ ಪ್ರಜ್ಞೆ, ಎದ್ದು ನಿಲ್ಲುತ್ತವೆ. ಕೆಲವು ಕಡೆ ಅವರು ಬಳಸುವ ಪದಗಳು, ಆದಿಪ್ರಾಸಗಳು, ರೂಪಕಗಳು, ಮತ್ತು ಉಂಟಾಗಿರುವ ಛಂದಸ್ಸು ಒಂದು ಗದ್ಯವನ್ನು ಪದ್ಯವಾಗಿ  ನಿರೂಪಿಸುತ್ತದೆ, ಯೋಗಿಂದ್ರ ಇಲ್ಲಿ ಒಬ್ಬ ಕವಿಯೂ ಆಗಿದ್ದಾರೆ. ಕೆಲವೆಡೆ ಅವರು ಪದಗಳನ್ನು ಬಳಸಿ ಒಂದು ಸನ್ನಿವೇಶವನ್ನು ಕಟ್ಟುವಾಗ ಅಲ್ಲಿ ಒಂದು ಚಲನ ಶೀಲತೆ ಉಂಟಾಗುತ್ತದೆ. ಸ್ಥಾವರವು ಜಂಗಮವಾಗುತ್ತದೆ. ಬರಹದಲ್ಲಿಯ ನೋಟ, ಶಬ್ದ, ವಾಸನೆ, ಕ್ರಿಯೆ ಇವುಗಳಿಂದ ಒಂದು ಚಪ್ಪಟ್ಟೆಯಾಗಿರುವ ಸಾಲುಗಳು ಹಲವಾರು ಆಯಾಮಗಳನ್ನು ಪಡೆದುಕೊಂಡು ಒಂದು ಒಂದು ವರ್ಚುಯಲ್ (4D) ಅನುಭವ ಉಂಟಾಗುತ್ತದೆ. ಈ ರೀತಿಯ ವಿಶೇಷ ಅನುಭವವನ್ನು ಅರುಂಧತಿ ರಾಯ್ ಅವರ 'ಗಾಡ್ ಆಫ್ ಸ್ಮಾಲ್ ಥಿಂಗ್ಸ್ 'ಎಂಬ ಎಂಬ ಕೃತಿಯಲ್ಲೂ ಕಂಡಿದ್ದನ್ನು ಇಲ್ಲಿ ನೆನೆಯ ಬಯಸುತ್ತೇನೆ. 

ಒಂದು ಬರಹ ಯಾವಾಗ ಪ್ರಬಂಧ ಸಂಕಲನವಾಗುತ್ತದೆ? ಮತ್ತು ಯಾವಾಗ ಬಿಡಿ ಬರಹವಾಗುತ್ತದೆ? ಎಂಬ ಆಲೋಚನೆ ಒಬ್ಬ ಓದುಗನಾಗಿಯೂ ಮತ್ತು ಲೇಖಕನಾಗಿಯೂ ನನ್ನನು ಕಾಡಿರುವ ವಿಚಾರ. ಸಾಮಾನ್ಯವಾಗಿ ಪ್ರಬಂಧ ಸಂಕಲನ ಒಂದು ವಿಷಯ ಮಾದರಿಯನ್ನು ಕುರಿತಾದ ಧೀರ್ಘವಾದ ಮತ್ತು ಆಳವಾದ ಅಧ್ಯಯನ. ಅಲ್ಲಿ ವೈವಿಧ್ಯತೆ ಇದ್ದರೂ ಅದು ಒಂದು ನಿರ್ದಿಷ್ಟ ವಿಷಯದ ಚೌಕಟ್ಟಿನೊಳಗೇ ಇರುತ್ತದೆ. ಬಿಡಿ ಬರಹಕ್ಕೆ ಆ ಬದ್ಧತೆ ಇರುವುದಿಲ್ಲ. ಅಲ್ಲಿ ವ್ಯಕ್ತಿ ಚಿತ್ರಣ, ಒಂದು ಸಂಸ್ಕೃತಿಯ ಪರಿಚಯ, ಸಾಹಿತ್ಯ, ಕಲೆ, ವಿಜ್ಞಾನ, ವಿಮರ್ಶೆ, ಹೇಗೆ ಅನೇಕ ವಿಚಾರಗಳ ಕಲಸು ಮೇಲೋಗರವಾಗಿರುತ್ತದೆ. ವೈಯುಕ್ತಿಕ ಅನುಭವಗಳನ್ನು, ಸನ್ನಿವೇಶಗಳನ್ನು ಒಳಗೊಂಡು ಲೇಖಕನ ವೈಯುಕ್ತಿಕ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಬಿಡಿ ಬರಹದಲ್ಲಿ ಹೆಚ್ಚು ಅವಕಾಶವಿರಬಹುದು. ಅಂದಹಾಗೆ ಒಂದು ಕಥೆ ಕಾದಂಬರಿಯನ್ನು ಬರೆಯುವುದಕ್ಕಿಂತ ಪ್ರಬಂಧ ಮತ್ತು ಬಿಡಿ ಬರಹವನ್ನು ಬರೆಯುವುದು ಸುಲಭ ಎನ್ನುವುದು ನನ್ನ ಅನಿಸಿಕೆ. ಒಂದು ಉತ್ತಮ ಪ್ರಬಂಧವನ್ನು ಬರೆಯಬೇಕಿದ್ದಲ್ಲಿ ಯೋಗಿಂದ್ರ ಅವರ "ಕಾಣುವ ಕಣ್ಣು" ಅಗತ್ಯ.  ಹಾಗೆಯೇ ಅಲ್ಲಿ ಹಿನ್ನೆಲೆ ವಿಚಾರಗಳನ್ನು ಸಂಶೋಧನೆ ಮಾಡಿ ಮಾಹಿತಿಗಳನ್ನು ರಸವತ್ತಾಗಿ ಸ್ವಾರಸ್ಯಕರವಾಗಿ ಕಾವ್ಯಮಯವಾಗಿ ವ್ಯಕ್ತಪಡಿಸಿ ಹಲವಾರು ದೃಷ್ಠಿಕೋನಗಳನ್ನು ತರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅದು ಮಾಹಿತಿಗಳನ್ನು ವೈಕಿಪೀಡಿಯಾದಿಂದ ಓದಿದ ಶೈಕ್ಷಣಿಕ ಒಣ ಅನುಭವವಾಗುತ್ತದೆ. ಯೋಗಿಂದ್ರ ಅವರ ಇತರ ಕೃತಿಗಳನ್ನು ಹೊತ್ತು ತಂದಿದ್ದೇನೆ. ಅವುಗಳನ್ನು ಓದಲು ಕಾತರನಾಗಿದ್ದೇನೆ. ಒಟ್ಟಾರೆ ಹೇಳುವುದಾದರೆ 'ಲಂಡನ್ ಡೈರಿ' ಎಂಬ ಪ್ರಬಂಧ ಸಂಕಲನ ನನ್ನ ಅರಿವಿನ ವಿಸ್ತಾರವನ್ನು ಹೆಚ್ಚಿಸಿದೆ. ಎಲ್ಲರೂ ಓದಬೇಕಾದ ಪುಸ್ತಕ.  

***


ಹೀಗೊಂದು ಸಿನೆಮಾ ವಿಹಾರ, ಹಾಗೊಂದು ಹರಟೆ

ಅನಿವಾಸಿ ಬಳಗಕ್ಕೆ ನಮಸ್ಕಾರ. ಯುಗಾದಿ, ರಾಮನವಮಿ, ಹನುಮಜಯಂತಿ, ಕೋಸಂಬರಿ-ಪಾನಕ, ಮಾವು ಎಂದೆಲ್ಲ ಚೈತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾಯಿತು. ಇದೀಗ ಈಸ್ಟರ್ ನ ರಜೆಯ ದಿನಗಳು. ಬೆಳಗ್ಗೆ ಮಕ್ಕಳ ಶಾಲೆಯ ಅವಸರವಿರದ, ತಡ ರಾತ್ರಿಯ ಟಿ.ವಿ. ವೀಕ್ಷಣೆಗೆ ಸೂಕ್ತ ದಿನಗಳು. ಅದಕ್ಕೆಂದೇ ನಮ್ಮ ಅನಿವಾಸಿಯ ಹೊಸ ಬರಹಗಾರರಾದ ಪ್ರಮೋದ್ ಸಾಲಿಗ್ರಾಮ ಅವರು ನೋಡಿ ವಿಶ್ಲೇಷಿಸಿದ ಸಿನೆಮಾವೊಂದರ ಲೇಖನ ಇಂದಿನ ಸಂಚಿಕೆಯಲ್ಲಿದೆ. ನಮ್ಮಲ್ಲಿರುವ ಬಹು ಮಂದಿ ಸಿನೆಮಾಪ್ರಿಯರಿಗೆ ಇದು ಮೆಚ್ಚುಗೆಯಾದೀತೆಂಬ ಭರವಸೆಯಿದೆ. ಜೊತೆಗೆ ನನ್ನದೊಂದು ಲಘು ಹರಟೆಯೂ ಉಂಟು. ಓದಿ ಲಗೂನೆ ಒಂದೆರಡು ಕಮೆಂಟೂ ಮಾಡ್ರಿ. ಹಂಗೇ ಪ್ರಮೋದ್ ಅವರು ಹೇಳಿದ ಸಿನೆಮಾನೂ ನೋಡ್ರಿ..ಅವರ ಅನಿಸಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನೂ ಹಂಚಗೊಳ್ರಿ. – ಸಂಪಾದಕಿ

ನಾ ಕಂಡ ವಿಡುದಲೈ – ೧

ಬರಹಗಾರ ಜೆಯಮೋಹನ್ ರವರ ಸಣ್ಣಕಥೆ ಆಧಾರಿತ ಸಿನಿಮಾ. ಮೈನಿಂಗ್ ಹೆಸರಲ್ಲಿ ಸರ್ಕಾರವೊಂದು  ಜನರಿಗೆ ಮಣ್ಣೆರಚುತ್ತಾ : ಕ್ರಾಂತಿಕಾರಿಯೋರ್ವನನ್ನು ದೇಶದ್ರೋಹಿಯಾಗಿಸಿ ; ಪೊಲೀಸ್ ಪಡೆಯೊಂದು ಅವನ ಬೆನ್ನಟ್ಟಿರುವ ಹಿನ್ನಲೆಯಲ್ಲಿ ಈ ಚಿತ್ರ . 

ಪೊಲೀಸ್ ದೌರ್ಜನ್ಯದ ಮುನ್ನಲೆಯಲ್ಲಿ ಡ್ರಾಮಾ ರಚಿಸಿ , ಕಥಾಪಾತ್ರಗಳೆಲ್ಲ ಬಂದು ಕಥೆಗೆ ನಟಿಸಿ ಹೋಗುತ್ತಾರೆ ಅಷ್ಟೇ. ಕಥೆಯೇ ಸಿನಿಮಾದ ಜೀವಾಳ . ಇದು ನಿರ್ದೇಶಕ ವೆಟ್ರಿಮಾರನ್ ಗೆ ಹೊಸದಲ್ಲ- ಅವರ ಹಿಂದಿನ ಸಿನಿಮಾ : ವಿಸಾರಣೈ ಒಂದೊಮ್ಮೆ ನೋಡಿ ಬನ್ನಿ . ಇವರು ಪಾತ್ರಗಳ ನಿಟ್ಟಿನಲ್ಲಿ ಕಥೆ ಹೇಳುವ ಕಲೆಯನ್ನ ,ಹೇಗೆ ಕರಗತ ಮಾಡಿಕೊಂಡ್ದಿದಾರೆ ಅನ್ನೋ ಆಶ್ಚರ್ಯ ನಿಮ್ಮನ್ನ ಪಕ್ಕಾ ಕಾಡುತ್ತದೆ .  ಗುಡ್ಡುಗಾಡಿನ ಗ್ರಾಮಸ್ಥರು , ಪೋಲಿಸಿನವರು , ರಾಜಕಾರಣಿ , ಮಾಧ್ಯಮದವರು, ನಾಯಕ -ನಾಯಕಿ ಎಲ್ಲರ ಮಧ್ಯದಲ್ಲೊಂದು balancing act ನಿರ್ದೇಶಕನ ಕೈಚಳಕ . ಮೊದಲ ಹತ್ತು ನಿಮಿಷದ ರೈಲು ಆಕ್ಸಿಡೆಂಟ್ ದೃಶ್ಯದಲ್ಲೇ ದೊಡ್ಡ Long -Shot  ಮುಖಾಂತರ ಕ್ಯಾಮೆರಾ ಕಣ್ಣಲ್ಲಿ ಟ್ರೈನ್ ಕಿಟಕಿಯೊ ಳಗೆ ಹೊಕ್ಕು ಗಾಯಗಳು , ಸಾವು ನೋವು , ವೇದನೆ , ಅನುಕಂಪ , ಮನುಷ್ಯತ್ವ ಎಲ್ಲವನ್ನುತೋರಿಸುತ್ತ ಕಥೆಯಲ್ಲಿ ಮುಳಿಗಿಸಿಬಿಡುತ್ತಾರೆ . ನಂತರ ಬರುವುದೆಲ್ಲಾ Bonus.  

ದಮನಿತರ ರಕ್ಷಣೆಗೆ ನಿಂತಂತೆ ಇರುವ ಕ್ರಾಂತಿಕಾರಿ ಪೆರುಮಾಳ್ ವಾದಿಯಾರ್ (ವಿಜಯ್ ಸೇತುಪತಿ)ಗೆ ಭಾಗ ಒಂದರಲ್ಲಿ ಕಡಿಮೆ ಪಾತ್ರ ಆದರೂ ಮನಸ್ಸಿಗೆ ಹತ್ತಿರವಾಗುತ್ತಾರೆ . Climax ನಲ್ಲಿ ಬರುವ ಅವರ ಭಾಗ -೨ರ ತುಣುಕುಗಳಲ್ಲಿ powerful Dialogue ನಿಂದ ಮುಂದೇನಾಗಬಹುದು ಅನ್ನೋ ಕುತೂಹಲ.  

ಪೊಲೀಸ್ ಇಲಾಖೆಯ ಸಾಮಾನ್ಯ ಪೇದೆ ಕುಮರೇಸನ್(ಸೂರಿ) ಈ ಕಥೆಯ ಮುಖ್ಯ ಪಾತ್ರಧಾರಿ .ಈ ಮುನ್ನ ಬರೀ comedian ಆಗೇ ನಟಿಸಿದಂತ ಸೂರಿ ಅವರನ್ನ ಸಿನಿಮಾದ ಹೀರೋವನ್ನಾಗಿಸಿರುವ ನಿರ್ದೇಶಕರ ಗಟ್ಟಿ ನಿರ್ಧಾರ ಮೆಚ್ಚಬೇಕಾದಂತದ್ದು . ಕಾರಣ ಪಾತ್ರಕ್ಕೆ ಬೇಕಾದ ಮುಗ್ಧತೆ , ಅಸಹಾಯಕತೆ , ಹತಾಶೆ ಇವೆಲ್ಲದರ ಮಧ್ಯೆ ನೈತಿಕತೆಯ ಮೂರ್ತರೂಪ ಸೂರಿ . ತಾನು ತಪ್ಪು ಮಾಡದೆ ಇದ್ದಾಗ ಕ್ಷಮೆ ಕೇಳಲಿಚ್ಛಿಸದ ಛಲವಾದಿ -  ಮನಸ್ಸಿಗೆ ಹತ್ತಿರವಾಗುತ್ತಾರೆ . ನಮ್ಮ - ನಿಮ್ಮಂತೆ ವ್ಯವಸ್ಥೆಯ ಮೇಲೆ ಭರವಸೆ ಇಟ್ಟಿರುವ ಕುಮರೇಸ ವಿನಾಕಾರಣ ಪನಿಶ್ಮೆಂಟ್ ತಿನ್ನುವಾಗ ಕರುಳು ಚುರುಕ್ ಅನ್ನತ್ತೆ.  ಕುಮರೇಸ- ನಾವೇ ಏನೋ ಅನ್ನಿಸೋ ಅಷ್ಟು ಆಕ್ರಮಿಸುತ್ತಾರೆ , ಪ್ರಭಾವ ಬೀರುತ್ತಾರೆ. 

ನಾಯಕಿ ತಮಿಳರಸಿಯಾಗಿ (ಭವಾನಿ ಶ್ರೀ) ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತಾರೆ. ಪರದೆಯ ಮೇಲಿನ ಲವ್ ಟ್ರ್ಯಾಕ್ ನಮ್ಮನ್ನು ಎಲ್ಲೂ ಬೋರ್ ಹೊಡಿಸದಂತೆ ಸಮಗ್ರವಾಗಿ ಮತ್ತು ಅದ್ಭುತವಾಗಿ ಬರೆಯಲಾಗಿದೆ.ಅದಕ್ಕೆ ಕಾರಣ ನಾಯಕಿಯ ಭಾವನಾತ್ಮಕ ಆಘಾತಗಳು , ಜನಾಂಗದ ಹಿನ್ನೆಲೆ, ಫ್ಲ್ಯಾಷ್‌ಬ್ಯಾಕ್ ಎಲ್ಲವೂ ಕಥೆಗೆ ಪೂರಕವಾಗಿರೊದು. ತುಂಬಾ ಹಿಡಿಸುವ scene ಒಂದು ನೆನಪಿಗೆ  ಬರುತ್ತಿದೆ : ಸರಿಯಾಗಿ ಸ್ಪಂದಿಸದ ಕಾರಣ ನಾಯಕಿಯ ಎದುರು ಕುಮರೇಸ ಬಂದು ಬೇಷರತ್ ಕ್ಷಮೆಯಾಚಿಸಿ , ತಪ್ಪನ್ನು ಸಮರ್ಥಿಸಿಕೊಳ್ಳದೆ , ಏನನ್ನೂ ವೈಭವೀಕರಿಸದಿರುವ scene - ತುಂಬಾ Beautiful ಹಾಗೂ Rare ಕೂಡ . 

ಕುಮರೇಸನಿಗೆ ನರಕ ತೋರಿಸುವ ವ್ಯವಸ್ಥೆಯ ರೂವಾರಿಯಾಗಿ ಪೊಲೀಸ್ ಅಧಿಕಾರಿ ಓ.ಸಿ (ಚೇತನ್). ಈತ ಚಿತ್ರದ ದೊಡ್ಡ ಅಚ್ಚರಿ. ಪೋಲೀಸರ ದೌರ್ಜನ್ಯದ ಮುಖವಾಗಿ ಮತ್ತು ಕ್ರೂರಿಯಾಗಿ ಪಾತ್ರವನ್ನು ನೆನಪಿನಲ್ಲಿರುವಂತೆ ನಟಿಸಿದ್ದಾರೆ. DSP ಯಾಗಿ ಗೌತಮ್ ವಾಸುದೇವ್ ಮೆನನ್ , Chief Secretary ಆಗಿ ರಾಜೀವ್ ಮೆನನ್ Perfect . ಸಣ್ಣ ಪೋಷಕ ಪಾತ್ರಗಳು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.   

ಹೊರಗಿನವನು ಹೇಗೆ ಒಳಗಿನವನಾಗುತ್ತಾನೆ ? ನಿರಪರಾಧಿ ಹೇಗೆ ನಿಜಾಯಿತಿ ಅರಿಯುತ್ತಾನೆ ? ಸತ್ಯದಿಂದ ದೂರವಾದ ಮಾಧ್ಯಮಗಳ ಪ್ರಚಾರ , ವ್ಯವಸ್ಥಿತ ರಾಜಕೀಯ, ಮೇಲ್ದರ್ಜೆಯವರ ದರ್ಪ - ಪೊಲೀಸರನ್ನು ಹೊಕ್ಕಿದಾಗ ಜನರಿಗಾಗುವ ಸಂಕಷ್ಟಗಳು ,ಒಳ್ಳೆಯದಾವುದು - ಕೆಟ್ಟದಾವುದು ಎಂಬ ಸಂಘರ್ಷ. ಯಾರ ಪರವಾಗಿ ಹೋರಾಡುವುದು ? ಹೀಗೆ ನಾನಾ ವಿಷಯಗಳನ್ನು ಅವರವರ ದೃಷ್ಟಿಕೋನದಲ್ಲಿ ಹೇಳಿರುವ ಕಥೆ ತೆರೆಯ ಮೇಲೆ ಸ್ಪಷ್ಠವಾಗಿ ಕಾಣಸಿಗುತ್ತದೆ . ಹಾಗಾಗಿ ನಾವು ಕೂಡ ಬರೀ ಪ್ರೇಕ್ಷಕರೆನ್ನುವುದು ಮರೆತು ಹೋಗಿ ಪಾತ್ರಗಳಾಗಿರುತ್ತೇವೆ . 

ಪೊಲೀಸ್ ದೌರ್ಜನ್ಯ, Raw ಅಂಡ್ Rustic ಆಗಿ ಮೂಡಿಬರಬೇಕು ಅಂತ ಚಿತ್ರದಲ್ಲಿ ಸಾಕಷ್ಟು Aggression, Nudity, Vulgarity ಎಲ್ಲವೂ ಇದ್ದು disturb ಆಗಿಬಿಡಬಹುದು . ಹಾಗೂ ಚಿತ್ರದಲ್ಲಿ  ಅಲ್ಲಲ್ಲಿ ಡಬ್ಬಿಂಗ್ lip Sync issues ಅನ್ನಿಸ್ತು.  

ಕ್ಯಾಮೆರಾ ವರ್ಕ್ ವೇಲರಾಜ್ , ಕಲಾ ನಿರ್ದೇಶನ  Jackie, ಎಡಿಟರ್ ರಾಮರ್  ನಿಮಗೆ ದೊಡ್ಡ ಸಲಾಂ .ಇಳಯರಾಜರ ಇಂಪಾದ ಸಂಗೀತವಿದೆ. ಹಾಡೊಂದಕ್ಕೆ ಕನ್ನಡತಿ ಅನನ್ಯ ಭಟ್ ದನಿಯಿದೆ. ಸಿನಿಮಾದ geography  - locations ಎಲ್ಲವೂ ಕಥೆಗೆ ಪೂರಕ .  ಸಿನಿಮಾನೇ ಜೀವನ ಅಂತ ಇಷ್ಟಪಡುವ ಹಲವು ಜನರ ಕೈಂಕರ್ಯದ ಫಲ ವಿಡುದಲೈ  . ಪೊಲೀಸ್ ದೌರ್ಜನ್ಯದ ದೃಶ್ಯಗಳು ಬಲು ಹಿಂಸಾತ್ಮಕ - ಸ್ವತಃ ಪೊಲೀಸ್ ಒಬ್ಬಾತನಿಗೂ ತನ್ನ ಕೆಲಸದ ಮೇಲೆ ವಿಷಾದ ಮೂಡಬಹುದು . ಆದರೂ ಸಹ ಸಮುದಾಯದ ತಳವರ್ಗ / ಬುಡಕಟ್ಟು ಜನರ ಕಷ್ಟ-ಕಾರ್ಪಣ್ಯ ಗಳಿಗೆ ಕನ್ನಡಿ . ಮನಸ್ಸು ಕರಗಿ , ನಮ್ಮನು ನಾವೇ ಅರ್ಥೈಸಿಕೊಳ್ಳಬಹುದಾದ ಪ್ರಶ್ನೆಗಳು ಮೂಡುತ್ತವೆ. ಅದಕ್ಕೆ ಏನೋ  ಈ ಸಿನೆಮಾಗೆ ವಿಡುದಲೈ ಅಂದರೆ ಬಿಡುಗಡೆ/ಸ್ವಾತಂತ್ರ್ಯ ಅನ್ನೋ ಹೆಸರು. 

Rating: ೮೫/೧೦೦

-ಪ್ರಮೋದ್ ಸಾಲಿಗ್ರಾಮ ರಾಮಕೃಷ್ಣ

ಪಂಜಾದ ಮ್ಯಾಲೊಂದು ಪ್ರಬಂಧ

ಸ್ನೇಹಿತರೇ ನಮಸ್ಕಾರ.’ಪಂಜಾನs' ಅಂತ ಒಮ್ಮಿಗಲೇ ಆವಾಕ್ಕಾಗಬ್ಯಾಡ್ರಿ.ಈ ಪಂಜಾ ಹುಲಿ-ಸಿಂಹದ ಪಂಜಾ ಅಲ್ರಿ .  ಮತ್ತ ನಮ್ಮ ಬೆಂಗಳೂರು -ಮೈಸೂರಿನ
ಪಂಚೆನೂ ಅಲ್ರಿ.ಯಾಕಂದ್ರ ಆ ಪಂಚೆಯ ಠೀವಿ  ಬ್ಯಾರೆನೇ ಇರತದ.ಕೆಂಪು-ಹಸಿರು ಬಣ್ಣದ ಎರಡು  ಬಟ್ಟಿನ ಜರದ ಅಂಚೇನು? ಬೆಳ್ಳಗ ಶುಭ್ರ ಕೊಕ್ಕರೆಯಂಥ ಅದರ ಮಿನುಗೇನು?......ಅದಲ್ಲ ತಗೀರಿ,ಇದು ನಮ್ಮ ಉತ್ತರ ಕನಾ೯ಟಕದ ಪಂಜಾsರೀ..

ಜೀವನದಾಗ ಒಂದು ಗುರಿ ಇರಬೇಕು ;ಕೆಲವೊಂದು ರೂಲ್ಸ್ ,ಕಂಡೀಷನ್ಸ ಇರಬೇಕು  ಅನ್ನೋದು ಬಲ್ಲವರ ಮಾತು.ನಮ್ಮ ಡಿ.ವಿ.ಜಿ.ಯವರಂತೂ”ಜೀವಗತಿಗೊಂದು ರೇಖಾಲೇಖವಿರಬೇಕು  ನಾವಿಕನಿಗೆ ಇರುವಂತೆ  ದಿಕ್ಕು  ದಿನವೆಣಿಸೆ’ ಅಂತ ಖಡಾಖಂಡಿತವಾಗೇ ಹೇಳಿಬಿಟ್ಟಾರ.ಆದ್ರ ನಮ್ಮ ಈ ಕೈಮಗ್ಗದ , ಖಾದಿಭಂಡಾರದ ಪಂಜಾಕ್ಕ ಇವು ಯಾವ ಮಾತೂ ಅಪ್ಲೈ
ಆಗಂಗಿಲ್ಲ.ಅದಕ್ಯಾವ ಘನಂದಾರಿ ಗೊತ್ತು ಗುರಿ ಏನೂ ಇಲ್ಲ.ಅದರಲೆ ತಲಿ ಅರೆ  ಒರಸಕೋರಿ, ಮಾರಿ ಅರೆ ಒರಸಕೋರಿ ,ಮುಸುರಿಗೈ ಅರೆ ಒರಸಕೋರಿ, ಅಳ್ಳಕ ಆಗಿದ್ದ ಹೂರಣ ಅರೆ ಸೋಸರಿ,ಅನ್ನದ ಗಂಜಿ ಬಸೀರಿ,ಶ್ರೀಖಂಡಕ್ಕ ಮಸರರೆ ಕಟ್ರಿ, ಮೊಳಕಿ ಬರಸಲಿಕ್ಕೆ ಕಾಳ ಅರೆ ಕಟ್ಟಿಡ್ರಿ, ದೇವರ ಒರಸೂ ವಸ್ತ್ರ ಮಾಡ್ರಿ,ಮಡೀಲೆ ಒಣಗಹಾಕಿ ದೇವರ ಪೂಜಾ ಅರೇ ಮಾಡ್ರಿ ..ಇಲ್ಲಾ  ಶ್ರಾದ್ಧ-ಪಕ್ಷ -ತಿಥಿ ಮಾಡ್ರಿ..  ಎಲ್ಲಾ ನಡೀತದ.ಫಲಾಫಲದ ಚಿಂತೆಯಿಲ್ಲದ ಕಮ೯ಯೋಗಿಯಂತೆ ಯಾವ ಕೆಲಸವನ್ನಾದರೂ ನಿಷ್ಠೆಯಿಂದ  ಮಾಡುವ ಹಿರಿಮೆ ಇದರದು.ನಾ ಮೊದಲೇ ಹೇಳಿದ್ಹಂಗ ಇದು ಯಾವ ನಿಯಮಗಳ ಮುಲಾಜಿಲ್ಲದ ಸವ೯ತಂತ್ರ ಸ್ವತಂತ್ರ ವಾದದ್ದು.ಅದಕ್ಕ ಯಾವದೇ ಪಂಜಾದ ಮ್ಯಾಲೂ ‘ವಾಶಿಂಗ್ ಇನ್ ಸ್ಟ್ರಕ್ಶನ್ಸ’ ಇರಂಗಿಲ್ಲ ನೋಡ್ರಿ.”only hand wash,only dry clean ,keep away from the fire,only machine wash in 40 degree ,do not iron ..ಇಂಥ ಯಾವ  ರಗಳೇನೂ ಇಲ್ಲ.ಕೈಲೇರೆ ಒಗೀರಿ,ಮಶೀನ್ ನಾಗರೆ ಹಾಕ್ರಿ,ಅಗಸರವನಿಗೇ ಕೊಡ್ರಿ...ಎಲ್ಲಾನೂ ನಡೀತದ.ಇದ್ರ ಒಂಚೂರು ನಿರಮಾನೋ,ನೀಲಿಪಾಲಿನೋ ಹಾಕಿದರೂ ನಡದೀತು! ಇಲ್ಲಂದ್ರ ಬರೀ ನೀರಲ್ಲಿ ಕೈಯಿಂದ ಕುಕ್ಕಿ ಹಾಕಿದರೂ ಆಯಿತು.ಬಿಚ್ಚಿ ಹರವಿದ್ರ ಐದು ನಿಮಿಷದಾಗ ಒಣಗೇ ಬಿಡತದ. ಇಸ್ತ್ರಿ ಪಸ್ತ್ರಿ ಮಾಡೂ ತಂಟೆನೂ  ಇಲ್ಲ.
ಇನ್ನು ಇವುಗಳ ಸೈಜೋ? ದಶಾವತಾರದ ವಾಮನನಿಂದ ಹಿಡಿದು ತ್ರಿವಿಕ್ರಮನವರೆಗೆ..ಅಂಗೈ ಅಗಲದಿಂದ ಹಿಡಿದು ನವ್ವಾರಿ ಸೀರಿಯಷ್ಟು ದೊಡ್ಡದೂ ಸಿಗತಾವ.ಕನಾ೯ಟಕ ಬಿಟ್ಟು ಸುಮಾರು ೨೫ ವಷ೯ಗಳಿಂದ ದೆಹಲಿ – ಲಂಡನ್ ಅಂತ ಎಲ್ಲೇ ಅಡ್ಡಾಡಿದರೂ ನಮ್ಮ ಮನೆಯ  ಕಪಾಟಿನಾಗ ಪಂಜಾಕ್ಕೊಂದು ಜಾಗ ರಿಸವ್೯ ಇರೂದಂತೂ ಗ್ಯಾರಂಟಿ .ನಾನು ಪ್ರತಿಸಲ ಸೂಟಿಗೆ  ಅಂತ ನನ್ನ ತವರು  ಮನಿಗೆ ಹೋದ್ರ  ಏನು ಬಿಟ್ಟರೂ ,ಬ್ಯಾರೆ ಬ್ಯಾರೆ ಸೈಜಿನ  ನಾಲ್ಕು ಪಂಜಾ ತರೂದಂತೂ ತಪ್ಪಸಂಗಿಲ್ರಿ.ಎರಕೊಂಡ ಮ್ಯಾಲೆ ಪಂಜಾದಲೆ ತಲಿ ಒರಸಿಕೊಳ್ಳುದರ ಮಜಾನೇ ಬ್ಯಾರೆ.soft ಆದ  cotton ಬಟ್ಟಿ...ಸಂಪೂಣ೯ವಾಗಿ ನೀರು ಹೀರಿಕೊಳ್ಳುವ  ಅದರ ವೈಶಿಷ್ಟ್ಯ.. ಈ  ಟರ್ಕಿ - ಪರ್ಕಿ ಒಳಗ ಆ ಮಜಾ ಇಲ್ಲ ಬಿಡ್ರಿ.
 ನಾವು ಸಣ್ಣವರಿದ್ದಾಗ ನಮ್ಮ ಸೋದರಮಾವ  ಚ್ಯಾಷ್ಟಿ ಮಾಡತಿದ್ರು...”ನೈನಂ ಛಿಂದಂತಿ ಶಸ್ತ್ರಾಣಿ  ನೈನಂ ದಹತಿ ಪಾವಕ: “ ಅಂತ ಶ್ರೀಕೃಷ್ಣಗ ಭಗವದ್ಗೀತಾ ಒಳಗ ಆತ್ಮದ ಲಕ್ಷಣ ಹೇಳೂ ಐಡಿಯಾ ನಮ್ಮ ಸುಬ್ಬಣ್ಣಾಚಾರ್ಯರ ಪಂಜಾ ನೋಡಿನೇ ಬಂದಿರಬೇಕು ಅಂತ.ಹಂಗs  ಅವಾಗಿನ ಅಂದ್ರ 60- 70 ರ ದಶಕದ ಸುಬ್ಬಣಾಚಾಯ೯ರಿಂದ ಈಗ  2022-23 ರ ನಮ್ಮ ಪವಮಾನಚಾರ್ಯರತನಕ ಇದರ ಜಾಗ ಏನೂ ಬದಲಾಗಿಲ್ಲ. ನಮ್ಮ ಪವಮಾನಾಚಾರ್ಯರು  face-book,WhatsApp  ಎಲ್ಲಾದರಾಗೂ ಇದ್ದಾರ.ಕಂಪ್ಯೂಟರ್ ನಾಗ ಕುಂಡಲಿ  ತಗೀತಾರ.ವಿಮಾನದಾಗ ಓಡಾಡತಾರ.ಆದ್ರ ಪಂಜಾದ ಜಾಗಾದಾಗ ಮಾತ್ರ ಇನ್ನೊಂದು  ಸಾಮಾನು ಬಂದಿಲ್ಲ ನೋಡ್ರಿ.ಇವುಗಳದು ತಲೆ-ತಲಾಂತರದಿಂದ ಒಂಥರಾ ‘ಏಕಮೇವ ಚಕ್ರಾಧಿಪತ್ಯ’.  ‘ಸೂಯ೯ನ ಕಾಂತಿಗೆ ಸೂಯ೯ನೇ ಸಾಟಿ  .ಹೋಲಿಸಲಾರಿಲ್ಲ.’ ಅಂದ್ಹಂಗ ಪಂಜಾದ ಹಿರಿಮೆಗೆ ಪಂಜಾನೇ ಸಾಟಿ .ಹೋಲಿಸಲಾರಿಲ್ಲ.’ಮಡಿವಾಳರ ಶತ್ರು ,ಮಠದಯ್ಯಗಳ ಮಿತ್ರ....ಲಂಗೋಟಿ ಬಲು ಒಳ್ಳೇದಣ್ಣ  - ಒಬ್ರ ಹಂಗಿಲ್ಲದೇ ಮಡಿಗೆ ಒದಗುವುದಣ್ಣ ‘ ಅಂತ ಪುರಂದರದಾಸರು ಹಾಡಿದರಲ್ಲ.....ನಾವು ಬೇಕಾದರ ಲಂಗೋಟಿಗೆ ಪಯಾ೯ಯವಾಗಿ ಪಂಜಾ ಬಳಸಿಕೊಂಡ್ರ ಏನೂ ತಪ್ಪಿಲ್ಲವೇನೋ?! ಈ ಪಂಜಾಗಳಿಗೆ ರೇಶ್ಮೆಯಂಥಾ ರೇಶ್ಮೆಯಿಂದನೂ ಕಾಂಪಿಟೇಶನ್ ಇಲ್ಲ ಬಿಡ್ರಿ.

ಬ್ರಾಹ್ಮಣರ  ಮನ್ಯಾಗ ಏನು ಇಲ್ಲಂದ್ರೂ ನಡೀತದ.ಆದ್ರ ಈ ಪಂಜಾ ಇಲ್ಲಂದ್ರ ನಡ್ಯಂಗಿಲ್ಲ ನೋಡ್ರಿ.ದೇವರ  ಪೂಜಾದ ಸಮಯಕ್ಕ ಉಪಯೋಗಿಸಿದಂಥ ಪಂಜಾನ್ನ ಆಮ್ಯಾಲೆ ಬಿಚ್ಚಿ ನೋಡಬೇಕ್ರಿ..ಅದರ ಮ್ಯಾಲೆ ಒಂದು  ಸುಂದರ ವಣ೯ಚಿತ್ರ , ಒಂದು  modern art ಆಗಿಬಿಟ್ಟಿರತದ.ಅಕ್ಷಂತಿ,ಗಂಧ,ಅರಿಶಿನ,ಕುಂಕುಮ ಎಲ್ಲದರ ಸುಂದರ ಚಿತ್ತಾರ...ಇನ್ನ ದೊಡ್ಡ  ದೊಡ್ಡ  ಸಮಾರಾಧನಿ ಅಡಿಗಿಗೆ ಪಂಜಾ ಬೇಕೇ ಬೇಕ್ರಿ.ದೊಡ್ಡ  ದೊಡ್ಡ ಪಾತೇಲಿ ಒಲಿ ಮ್ಯಾಲಿಂದ ಇಳಸಲಿಕ್ಕೆ ಒದ್ದಿ ಪಂಜಾನೇ ಬೇಕ್ರಿ.ಹಾಂ,ಮಸಾಲಿಪುಡಿ,ಖಾರಪುಡಿ ,ಅರಿಶಿನ ಪುಡಿ ಎಲ್ಲಾ ಮೆತ್ತಿದ ಅದರ ಸೌಂದರ್ಯನೇ ಬ್ಯಾರೆ. ಇಷ್ಟ ಯಾಕ್ರಿ ಸ್ವಾಮಿಗೋಳು ಮುದ್ರಾ ಹಾಕಬೇಕಂದ್ರೂ ಈ ಪಂಜಾ ಜೋಡಿಗೆ ಬರಬೇಕ್ರಿ.ಒದ್ದಿ ಪಂಜಾದ ಮ್ಯಾಲೆ ಮುದ್ರಿ ಒತ್ತಿದ ಮ್ಯಾಲೆನೇ ಅದು ನಮ್ಮ ಮೈ ಮ್ಯಾಲೆ ಮೂಡೂದರಿ.
ನಮ್ಮ ಗದಗಿನ ಕುಮಾರ ವ್ಯಾಸನ ಭಾರತಕ್ಕೂ ಇದು ತನ್ನ ಕೊಡುಗೆ ಸಲ್ಲಿಸಿದ್ದ ಗೊತ್ತಿರಬೇಕ ನಿಮಗ. ಬಾವಿ ನೀರಿನ ಸ್ನಾನಮಾಡಿ ಉಟಗೊಂಡಿದ್ದ ಒದ್ದಿ ಪಂಜಾ ಆರೂತನಾ ಕುಮಾರವ್ಯಾಸಗ ಕಾವ್ಯ ಸ್ಫೂರ್ತಿ ಇರತಿತ್ತು ಅಂತಲೂ, ಕಂಬಕ್ಕೆ ಆರಲೆಂದು ಕಟ್ಟಿದ ಪಂಜಾದ ಮ್ಯಾಲ ನಾರಾಣಪ್ಪಗ ಮಹಾಭಾರತ ಸಚಿತ್ರವಾಗಿ ಕಾಣಿಸುತ್ತಿತ್ತು ಅಂತಲೂ ದಂತಕಥೆಗಳು ಪ್ರಚಲಿತದಾಗ ಅವ. 
ಹಂಗಂತ ಇದರ ಜಾಗಾ ಬರೇ ಬಡ ಬ್ರಾಹ್ಮಣರ ಮನ್ಯಾಗ ಮತ್ತ ಮಠದಾಗಷ್ಟೇ ಅಂತ ತಿಳಕೋಬ್ಯಾಡ್ರಪಾ.ಇದು ರಗಡ ಸಲ ಬಾಲಿವುಡ್ ಸವಾರಿನೂ ಮಾಡಿ  ಬಂದದ.ನಮ್ಮ ರಾಜಕಪೂರ್ ಫ್ಯಾಮಿಲಿಯವರಿಗಂತೂ ಇದು ಫೇವರಿಟ್. ‘ ತುಝೆ ಬುಲಾಯೆ ಯೆ ಮೇರಿ ಬಾಹೇಂ...ಗಂಗಾ  ಯೆ ತೇರಿ ಹೈ ಫಿರ್ ಕೈಸಿ ದೇರಿ ಹೈ’ಅಂತಲೂ, ‘ಸತ್ಯಂ ಶಿವಂ ಸುಂದರಂ ‘ ಅಂತಲೂ ಹಾಡಿ ತಾನೂ ಕುಣಿಯೂದಲ್ಲದ ಎಲ್ಲಾರ ಮೈ-ಮನಸ್ಸನ್ನೂ ಕುಣಿಸಿ -ತಣಿಸೇದ ಅನ್ನೂದನ್ನ ಮರೀಬ್ಯಾಡ್ರಿ.
ಇಷ್ಟೆಲ್ಲಾ  ಆದ್ರೂ ಸೊಕ್ಕಿಲ್ಲ ನೋಡ್ರಿ ಅದಕ್ಕ.”ತುಂಬಿದ ಕೊಡ ತುಳಕಂಗಿಲ್ಲ “ಅನ್ನೂಹಂಗ ಸದ್ದಿರದೇ ತನ್ನ ಕತ೯ವ್ಯದಲ್ಲಿ ನಿರತವಾಗಿರತದ.ಫಲಾಫಲಾಪೇಕ್ಷೆಯಿಲ್ಲದೇ ,ಮೇಲು -ಕೀಳು ಎನ್ನದೇ ಕಮ೯ಯೋಗಿಯಂತೆ ತಾನಾಯಿತು ತನ್ನ ಕಾಯಕವಾಯಿತು ಎಂಬಂತಿರತದ.

ಮತ್ತ ಇಂಥ ಪಂಜಾಕ್ಕ  ಒಂದು ಮೆಚ್ಚುಗಿ ಮಾತ ಬರಲೆಲಾ ನಿಮ್ಮ ಕಡೆಯಿಂದ.

- ಗೌರಿ ಪ್ರಸನ್ನ