ಕೃಷ್ಣಾ ನೀ ಬೇಗನೆ ಬಾರೋ  

  • ರಾಂ

ಪ್ರಾಚೀನವೂ ಪ್ರಬುದ್ಧವೂ ಆದ ಭಾರತೀಯ ನಾಟ್ಯ ಪದ್ಧತಿಯ ವೃಕ್ಷದ ಶಾಖೆಗಳು ಹಲವು.  ದಕ್ಷಿಣ ಭಾರತದಲ್ಲೇ ಭಾರತ ನಾಟ್ಯ, ಕುಚಿಪುಡಿ ಹಾಗೂ ಮೋಹಿನಿ ಅಟ್ಟಂ ಎಂಬ ಮೂರು ಪ್ರಮುಖ ಪ್ರಕಾರಗಳನ್ನು ಕಾಣುತ್ತೇವೆ. ವಿದೇಶದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಭಾರತೀಯ ನೃತ್ಯ ಪದ್ಧತಿಯ ಪರಿಚಯವಾಗುವುದು ಸುಲಭವಲ್ಲ. ಪರಿಚಯವಾದರೂ ಅದರಲ್ಲಿ ತರಬೇತಿಗೆ ಸಿಗುವ ಅವಕಾಶ ಕಡಿಮೆ. ಅವಕಾಶ ಸಿಕ್ಕರೂ ಅದರ ಪ್ರಯೋಜನ ಪಡೆದುಕೊಳ್ಳಲು ಹಲವಾರು ಅಡೆತಡೆಗಳು ಬರುವುದು ಸಹಜ, ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸಿಕ್ಕ ಅವಕಾಶದ ಸದುಪಯೋಗ ಪಡೆದುಕೊಂಡು, ಪರಿಣತಿ ಪಡೆದ ಯುವತಿಯ ಪರಿಚಯ ಮಾಡಿಕೊಡುವ ಸುಯೋಗ ನನ್ನದು. ರಂಗಪ್ರವೇಶದ ಒಂದು ವಿಡಿಯೋ ತುಣುಕು, ಮನಮೋಹಕ ಸಂಗೀತದ ಧ್ವನಿಮುದ್ರಿಕೆಯನ್ನು ಕೂಡ ನಿಮ್ಮೊಡನೆ ಹಂಚಿಕೊಳ್ಳಲಾಗಿದೆ. ಒಟ್ಟಂದದಲ್ಲಿ ನಿಮಗೆ ಕಾರ್ಯಕ್ರಮದ ಒಳ ನೋಟ ಕೊಡುವ ಪ್ರಯತ್ನವಿದು.

ಅಭಿನಯ ಪ್ರಧಾನವಾದ ಕುಚಿಪುಡಿ ನೃತ್ಯ ಪ್ರಕಾರದಲ್ಲಿ ಹಲವಾರು ವರ್ಷ ತರಬೇತಿ ಪಡೆದು, ಪರಿಣತಿಯನ್ನು ಹೊಂದಿ ರಂಗಪ್ರವೇಶ ಮಾಡಿರುವ ಅದಿತಿಯ ರಂಗ ಪ್ರವೇಶದ ಒಲ್ಮೆಯ ಆಮಂತ್ರಣ ಕೈ ಸೇರಿದಾಗ ಆದ ಸಂತೋಷ, ಹೆಮ್ಮೆ; ಕನ್ನಡತಿ, ಅನಿವಾಸಿ ಬಳಗದ ಲಕ್ಷ್ಮೀನಾರಾಯಣ ಗುಡೂರ್ ಅವರ ಮಗಳು ಎಂದರೆ KSSVVಯ ಹೊಸ ಚಿಗುರು, ಬಾಲ್ಯದಿಂದ ಕಂಡ ಸಿರಿ ಎಂಬ ಹಲವು ಮಟ್ಟದ್ದಾಗಿತ್ತು. 

ಐದು ವರ್ಷದ ಅದಿತಿ ಮೊದಲ ದಿನ ನೃತ್ಯ ಕಲಿಯಲು ಹೋದಂದು ತೋರಿದ ಉತ್ಸಾಹ ಗುಲಗಂಜಿಯಷ್ಟೂ ಬತ್ತಿಲ್ಲ ಎಂದು ಅದಿತಿಯ ಅಮ್ಮ ವಿದ್ಯಾ ಹೇಳಿದ ವಿಷಯ ಅದಿತಿಯ ಶಬ್ದಗಳಲ್ಲೂ ಪ್ರತಿಧ್ವನಿಸುತ್ತದೆ. ಶಾಸ್ತ್ರೀಯ ನೃತ್ಯ ಕಷ್ಟಕರವಾದರೂ ತನ್ನನ್ನು ಪರಿಚಯಿಸಿದ್ದಕ್ಕೆ ಅದಿತಿ ಸದಾ ತನ್ನ ತಾಯಿಗೆ ಕೃತಜ್ಞಳು. ನೃತ್ಯವಿಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದುದು ಅಸಾಧ್ಯವೆಂದು ಹೇಳುತ್ತಾಳೆ. ನೃತ್ಯ ಇಂದು ಅದಿತಿಗೆ ತನ್ನ ಬಾಲ್ಯದ ಸಾಕಾರ ರೂಪ, ತನ್ನನ್ನೇ ಅರಿಯಲು ಸಿಕ್ಕ ಅವಕಾಶ, ಭಾರತೀಯ ಸಂಸ್ಕೃತಿಗೆ ಸಂಪರ್ಕ ಕಲ್ಪಿಸಿದ ಸೇತು. ಇವು ಕೇವಲ ಸಂದರ್ಶನಕ್ಕೆ ಬಳಸಿದ ಪೊಳ್ಳು ಶಬ್ದಗಳಲ್ಲ, ಹೃದಯಾಳದಿಂದ ಹೊಮ್ಮಿದ ಅಪ್ಪಟ ಭಾವನೆಗಳೆಂಬುದು ಆಕೆಯ ನೃತ್ಯ ಪ್ರದರ್ಶನ ನೋಡಿದವರೆಲ್ಲರಿಗೂ ಅನಿಸಿದ್ದರೆ ಆಶ್ಚರ್ಯವಲ್ಲ. 

 ರಂಗಪ್ರವೇಶದಂದು ಹಬ್ಬದ ವಾತಾವರಣವಿತ್ತು. ಅದಿತಿಯ ನರ್ತನ ಭಂಗಿಯ ಚಿತ್ರ ಅತಿಥಿಗಳನ್ನು ಸ್ವಾಗತಿಸುತ್ತಿದ್ದರೆ, ಅವರ ದಾಹ ನಿವಾರಣೆಗೆ ನೀರು-ಬೆಲ್ಲ ಸಾಂಪ್ರದಾಯಿಕ ಮೆರುಗನ್ನು ನೀಡುತ್ತಿದ್ದವು. ಸಮಯಕ್ಕೆ ಸರಿಯಾಗಿ, ಪದ್ಧತಿಯಂತೆ ಗಣಪತಿ, ನಂತರ ಅರ್ಧನಾರೀಶ್ವರನ ಪ್ರಾರ್ಥನೆಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪುರಂದರ ದಾಸರ “ಗಜವದನಾ ಬೇಡುವೆ” ಭಜನೆ ರಂಗಪ್ರವೇಶದ ಮೊದಲ ನೃತ್ಯವಾಗಿದ್ದು ಮಾತೃಭಾಷೆಯಾದ ಕನ್ನಡದವನ್ನು ಸರಾಗವಾಗಿ ಬಳಸಬಲ್ಲ ಅದಿತಿಯ ಕನ್ನಡ ಪ್ರೇಮಕ್ಕೆ ದ್ಯೋತಕವಾಗಿತ್ತು. ಕುಚಿಪುಡಿ ಪದ್ಧತಿಗೆ ವಿಶೇಷವಾದ ತಟ್ಟೆಯ ಮೇಲೆ ನಿಂತು ತಲೆಯ ಮೇಲೆ ತಂಬಿಗೆಯನ್ನಿಟ್ಟುಕೊಂಡು ಮಾಡುವ “ತರಂಗಂ” ನೃತ್ಯದ ತಾಂತ್ರಿಕತೆ ವೀಕ್ಷಕರನ್ನು ಮೋಡಿ ಮಾಡಿತು. 

“ಕೃಷ್ಣಾ ನೀ ಬೇಗನೆ ಬಾರೋ” ಚಿಕ್ಕಂದಿನಿಂದಲೂ ನನ್ನ ಮೆಚ್ಚಿನ ಭಜನೆಗಳಲ್ಲೊಂದು. ವಂಶಿಕೃಷ್ಣರ ಹಾಡುಗಾರಿಕೆ ಪದ್ಯದ ಭಾವವನ್ನು, ವಾತಾವರಣವನ್ನು ಸೃಷ್ಟಿಸಿದರೆ; ಅದಿತಿಯ ಮನಮೋಹಕ ಭಾವಪೂರ್ಣ ಅಭಿನಯ ಯಶೋದೆಯ ಮಾತೃತ್ವ, ಕೃಷ್ಣನ ತುಂಟತನಗಳನ್ನು ನಮ್ಮ ಮುಂದೆ ಮೂರ್ತಗೊಳಿಸಿದ್ದಲ್ಲದೆ, ಮಂತ್ರಮುಗ್ಧರನ್ನಾಗಿಸಿತು. ತನ್ನ ಅಚ್ಚು ಮೆಚ್ಚಿನ ಭಜನೆಯನ್ನು ನಮ್ಮ ಮುಂದೆ ಸಾಕಾರಗೊಳಿಸಿದ ಯಶಸ್ಸಿಗೆ ತನ್ನ ಬದುಕಿನ ಅನುಭವಗಳೇ ಸ್ಫುರ್ತಿಯೆನ್ನುತ್ತಾಳೆ ಅದಿತಿ.  ತನ್ನ ತಂಗಿಯ ತುಂಟತನದಲ್ಲಿ ಕೃಷ್ಣನ ತುಂಟತನವನ್ನು ಕಾಣುವ ಅದಿತಿ, ಎಲ್ಲ ವಯಸ್ಸಿನವರಿಗೂ, ಕಾಲಕ್ಕೂ ಅನ್ವಯವಾಗುವ ಕೃಷ್ಣನ ವ್ಯಕ್ತಿತ್ವ ತನಗೆ ಅಪ್ಯಾಯಮಾನ ಎನ್ನುತ್ತಾಳೆ. ಅವಳ ನಾಟ್ಯ-ನಟನಾ ಪರಿಣತಿ ಸಂಪೂರ್ಣವಾಗಿ ಈ ನೃತ್ಯದಲ್ಲಿ ಅಭಿವ್ಯಕ್ತವಾಗಿತ್ತು. ಅಂದು ನಿಸ್ಸಂದೇಹವಾಗಿ “ಕೃಷ್ಣ ನೀ ಬೇಗನೆ ಬಾರೋ” ಸಭಿಕರೆಲ್ಲರ ಮೆಚ್ಚಿನ ನೃತ್ಯವಾಗಿತ್ತೆಂಬುದು ಕರತಾಡನದಲ್ಲೇ ಅರ್ಥವಾಗಿತ್ತು.

“ಕಾಮಾಕ್ಷಿ ಸ್ತುತಿ” ಹಾಗೂ “ನಮೋ ನಮೋ  ಲಕ್ಷ್ಮೀ ನರಸಿಂಹ” ನೃತ್ಯಗಳಲ್ಲಿ ಬರುವ ಭಕ್ತಿ, ಶೃಂಗಾರ, ಶಾಂತ, ಕ್ರೋಧ, ಭಯ, ಕರುಣಾ ರಸಗಳ ಪ್ರದರ್ಶನ ಅದಿತಿಯ ನಟನಾ ಪ್ರಬುದ್ಧತೆಗೆ ದ್ಯೋತಕವಾಗಿದ್ದವು. ಅಂತ್ಯದಲ್ಲಿ ಪ್ರದರ್ಶಿಸಿದ ವೇಗ ಪ್ರಧಾನವಾದ ತಿಲ್ಲಾನ ವೀಕ್ಷಕರನ್ನು ಸಂತೃಪ್ತಿಯ ಶಿಖರಕ್ಕೇರಿಸಿತ್ತು. 

ಅದಿತಿಯ ಪ್ರತಿಭೆಗೆ ಪುಟ ಕೊಟ್ಟು ಬೆಳಗಿಸಿದ ಗುರು ಅಭಿನಂದನಾ ಕೋದಂಡ ಅವರ ಅಪಾರ ಪರಿಶ್ರಮದ ಅರಿವು ನಮಗೆ ಅಂದಿನ ಪ್ರದರ್ಶನದಲ್ಲಾಯಿತು. ಪ್ರಾರಂಭದಿಂದಲೇ ಅದಿತಿಯ ಪ್ರತಿಭೆಯನ್ನು ಗುರುತಿಸಿ, ಅವಕಾಶ ಕೊಟ್ಟು ಬೆಳೆಸಿದ ಹಿರಿಮೆ ಅವರದ್ದು. ರಂಗಪ್ರವೇಶದ ಯಶಸ್ಸಿಗೆ ಹಿಮ್ಮೇಳದ ಕೊಡುಗೆ ಸರಿಸಮನಾಗೇ ಇರುವುದು ಅತ್ಯವಶ್ಯ. ವಂಶಿಕೃಷ್ಣ ವಿಷ್ಣುದಾಸ್ ಒಬ್ಬ ಅದ್ಭುತ ಹಾಡುಗಾರ ಎಂಬ ಅನುಭವ ಅಂದು ನಮಗಾಯಿತು. ವಿಜಯವೆಂಕಟ್ ಕೊಳಲು ವಾದನದಿಂದ ಕೃಷ್ಣನ ಮೋಡಿ ಹಾಕಿದ್ದರು ಸಭಿಕರ ಮೇಲೆ. ಪ್ರತಾಪ್ ರಾಮಚಂದ್ರರ ಮೃದಂಗ ವಾದನಕ್ಕೆ ವೀಕ್ಷಕರು ಕುಳಿತಲ್ಲೇ ಹೆಜ್ಜೆ ಹಾಕಿದ್ದರು ಕಾರ್ಯಕ್ರಮದುದ್ದ. 

ತನ್ನ ನೃತ್ಯ ಪ್ರಯಾಣದ ಹಾದಿಯಲ್ಲಿ ಹಲವು ಗೆಳೆಯರನ್ನು ಪಡೆದಿರುವ ಅದಿತಿಗೆ ಇಂದು ನೃತ್ಯ ಜೀವನದ ಅಂಗವಾಗಿದೆ, ತನ್ನ ಭಾವನೆಗಳ ಅಭಿವ್ಯಕ್ತಿಗೆ ಸಾಧನವಾಗಿದೆ. ಕಲೆ ಆಕೆಗೆ ಜೀವನಾನುಭವಗಳ ಕಿಟಕಿ ತೆರೆಯುವ ಮಾಧ್ಯಮ.  ರಂಗಪ್ರವೇಶಕ್ಕೆ ಹಾರೈಸಲು ಬಂದವರನ್ನು, ಅನಾಥ ಮಕ್ಕಳ ಬದುಕನ್ನು ರೂಪಿಸಲು ಹಲವು ವರ್ಷಗಳಿಂದ ನಿರತವಾಗಿರುವ ಚಾಮರಾಜಪೇಟೆಯ ದೀನಬಂಧು ಸಂಸ್ಥೆಗೆ ಕೈಲಾದಷ್ಟು ದಾನ ಮಾಡಿರೆಂಬ ಅದಿತಿಯ ವಿನಂತಿ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗನ್ನು ನೀಡಿತು. 

ವಿಡಿಯೋ ಕೃಪೆ: ಶ್ರೀಮತಿ ಶಾಂತಾ ರಾವ್, ಅನ್ನಪೂರ್ಣ ಇಂಡಿಯನ್ ಡಾನ್ಸ್ ಅಕ್ಯಾಡೆಮಿ, ಯುಕೆ.

**************************************************************************

‘ಅಂತಃಪುರ ಗೀತೆ’- ಡಿ.ವಿ.ಜಿ ಸ್ಮರಣೆ ಮತ್ತು Dr.ಸುಮನಾ ನಾರಾಯಣ್ ಅವರ ನಾಟ್ಯ ವೈಭವ

‘ಅಂತಃಪುರ ಗೀತೆ’-  ಡಿ.ವಿ.ಜಿ ಅವರು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಒಂದು ಅಪೂರ್ವವಾದ ಕೊಡುಗೆ.
ಮೂಲತಃ ‘ಬೇಲೂರು ಶಿಲಾಬಾಲಿಕೆಯರು’ ಎಂಬ ಶೀರ್ಷಿಕೆಯಡಿ 1920ರಲ್ಲಿ ರಚಿಸಿದ್ದರೂ, ಅಧಿಕೃತವಾಗಿ 1950 ರಲ್ಲಿ ಮೊದಲ ಬಾರಿಗೆ ಮುದ್ರಣವಾಗಿ ಲೋಕಾರ್ಪಣೆಯಾಯಿತು.

dvgapg-cover

ಬೇಲೂರ ಶಿಲಾ ಬಾಲಿಕೆಯರ ಸೌಂದರ್ಯದ ಅತೀಸೂಕ್ಷ್ಮತೆಯನ್ನು ಗಮನಿಸಿ ತಮ್ಮ ಅಗಾಧ ಪ್ರತಿಭೆಯಿಂದ ಗೀತೆಗಳನ್ನು ರಚಿಸಿ ಚನ್ನಕೇಶವನಿಗೆ ಅರ್ಪಿಸಿದ ದಿವ್ಯ ಸಂಕಲನ ಇದಾಗಿದೆ.
ಬೇಲೂರ ಶಿಲಾ ಬಾಲಿಕೆಯರ ಒಂದೊಂದು ಭಂಗಿಯ ಭಾವದ ನಾಡಿ ಹಿಡಿದು ಪ್ರತ್ಯೇಕ ರಾಗಗಳನ್ನೊಳಗೊಂಡ ಗೀತೆಗಳನ್ನು ಚಿತ್ರ ಸಹಿತವಾಗಿ ಈ ಸಂಕಲನದಲ್ಲಿ ಹಿಡಿದಿಟ್ಟಿದ್ದಾರೆ ಪೂಜ್ಯ ಡಿ.ವಿ.ಜಿ ಅವರು.
ಪ್ರತಿಯೊಂದು ಗೀತೆಗೂ ಡಿ.ವಿ.ಜಿ ಅವರೇ ಸ್ವತಃ ರಾಗಗಳನ್ನು ಸೂಚಿಸಿ ಅದಕ್ಕಾಗಿ ಸಂಗೀತ ವಿದ್ವಾನ್ ವೀಣೆ ರಾಜಾರಾವ್ ಅವರಿಂದ ಸಹಾಯವನ್ನು ಪಡೆದದ್ದನ್ನು ಸ್ಮರಿಸಿದ್ದಾರೆ.ಈ ಸಂಕಲನದಲ್ಲಿ ಗೀತೆಗಳ ಜೊತೆಗೆ ಬೇಲೂರು ದೇವಾಲಯಗಳು ಮತ್ತು ಸೌಂದರ್ಯೋಪಾಸನೆ ಎಂಬ ಟಿಪ್ಪಣಿಗಳನ್ನು ಕೂಡ ಬರೆದಿದ್ದಾರೆ.
ಎಲ್ಲಾ ಗೀತೆಗಳು ಮೂಲತಃ ಹಳಗನ್ನಡದಲ್ಲಿ ಇದ್ದರೂ ಸಹಿತ ಸಂಗೀತ ಸಾಧಕರಿಗೆ ಇದೊಂದು ಜ್ಞಾನ ಕೋಶವಾಗಿದೆ ಎಂದು ಬಲ್ಲವರು ಹೇಳುತ್ತಾರೆ.ಸಂಗೀತವಷ್ಟೇ ಏಕೆ ಸಾಂಪ್ರದಾಯಿಕ ನೃತ್ಯಗಾರರು ಈ ಗೀತೆಗಳಿಗೆ ನೃತ್ಯ ಸಂಯೋಜಿಸಿ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಹೀಗೆ ಸಂಗೀತ,  ನಾಟ್ಯ ಗಳಿಂದ ಅಂತಃಪುರ ಗೀತೆಗಳು ಇಂದಿಗೂ ಬೆರಗು ಮೂಡಿಸುತ್ತಿವೆ ಮತ್ತು ಕನ್ನಡದ ಹೆಮ್ಮೆಯ ಹೊಯ್ಸಳ ಸಾಮ್ರಾಜ್ಯದ ಶಿಲ್ಪ ಕಲಾ ವೈಭವವನ್ನು ಜೀವಂತವಾಗಿರಿಸಿವೆ.
ಕನ್ನಡ ಬಳಗ, ಯು.ಕೆ (KBUK) 2018 ಏಪ್ರಿಲ್ 21ರಂದು ಕೊವೆಂಟ್ರಿ(coventry)ಯಲ್ಲಿ ಆಚರಿಸಿದ ಯುಗಾದಿ ಸಂಭ್ರಮದಂದು ಡಿ.ವಿ.ಜಿ ಸ್ಮರಣೆಯ ಅಂಗವಾಗಿ ಖ್ಯಾತ ಭರತನಾಟ್ಯ ಕಲಾವಿದೆ Dr.ಸುಮನಾ ನಾರಾಯಣ್ ಅವರು ಅದ್ಭುತವಾದ ನೃತ್ಯ ಪ್ರದರ್ಶನ ಮಾಡಿದರು.
‘ನಟನ ವಾಡಿದಳ್ ತರುಣಿ’ ಮತ್ತು ‘ಏನೀ ಮಹಾನಂದವೇ ಓ ಭಾಮಿನಿ’ ಎನ್ನುವ ಗೀತೆಗಳು ಅತಿ ಜನಪ್ರಿಯವಾಗಿದ್ದು ಅವುಗಳನ್ನು ತಮ್ಮ ನೃತ್ಯಕ್ಕೆ ಆಯ್ದುಕೊಂಡಿದ್ದರು.

DSC_0207 (2)apg-8.jpg

ಎರಡನೆಯ ಹಾಡಿನಲ್ಲಿ ಮುರಜಾ ಮೋದೆಯ ನೃತ್ಯ ಭಂಗಿಗಳು ನಯನ ಮನೋಹರವಾಗಿದ್ದವು.
ಈ ನೃತ್ಯ ಪ್ರದರ್ಶನಕ್ಕಾಗಿ ಸುಮಾರು ಮೂರು ತಿಂಗಳು ಸತತ ಅನ್ವೇಷಣೆ ಮತ್ತು ಅಭ್ಯಾಸ ಗಳೊಂದಿಗೆ ಪೂರ್ವ ತಯಾರಿ ನಡೆಸಿದ್ದನ್ನು Dr.ಸುಮನಾ ನಾರಾಯಣ್ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಇದರಲ್ಲಿ ವಿಶೇಷವೆಂದರೆ ಸಂಪೂರ್ಣ ಸಾಂಪ್ರದಾಯಿಕ ನೃತ್ಯಕ್ಕೆ ಕಟ್ಟುಬೀಳದೆ ಹಾಡಿನ ಭಾವ, ರಾಗ, ತಾಳಗಳಿಗೆ ಅನುಗುಣವಾಗಿ ನೃತ್ಯ ಭಂಗಿಗಳನ್ನು ತಾವೇ ಸಂಯೋಜಿಸಿಕೊಂಡಿದ್ದನ್ನು ಪ್ರಸ್ತಾಪಿಸಿದರು.

Dr. ಸುಮನಾ ನಾರಾಯಣ್ ಅವರ ಕಿರು ಪರಿಚಯ-
ಭರತನಾಟ್ಯವನ್ನು ಗುರುಗಳಾದ ಶ್ರೀಮತಿ ಗೀತಾ ಅನಂತನಾರಾಯಣ್ ಅವರ ಗೀತಾಂಜಲಿ ನಾಟ್ಯ ಶಾಲೆಯಲ್ಲಿ ತಮ್ಮ ನಾಲ್ಕನೆ ವಯಸ್ಸಿಗೆ ಕಲಿಯಲು ಪ್ರಾರಂಭಿಸಿದರು. ಭಾರತ ಸರ್ಕಾರದ ವಿದ್ವತ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯನ್ನು ಪಡೆದು 1993-2002ರವರೆಗೆ ಕರ್ನಾಟಕ ರಾಜ್ಯ ಸರ್ಕಾರದ ಅನುದಾನಿತ ವಿದ್ಯಾರ್ಥಿವೇತನ ಮತ್ತು ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಬಹುತೇಕ ಸುಪ್ರಸಿದ್ಧ ವೇದಿಕೆಗಳಲ್ಲಿ ಇವರು ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ ಅವುಗಳಲ್ಲಿ Indian Institute of world culture, Milapfest, ‘ಬೆಂಗಳೂರು ಹಬ್ಬ’, ‘ಹಂಪಿ ಉತ್ಸವ’ ಪ್ರಮುಖವಾದವುಗಳು. ಇವರಿಗೆ ಸಂದ ಪ್ರಶಸ್ತಿಗಳು ಅನೇಕ.
ಇವರಿಗೆ ‘ನಾಟ್ಯ ವಿಶಾರದ’ ಎನ್ನುವ ಪ್ರತಿಷ್ಠಿತ ಬಿರುದನ್ನು ಕೊಟ್ಟು ಭಾರತ ಸರ್ಕಾರ ಗೌರವಿಸಿದೆ.

ಯು.ಕೆ (U.K)ಯಾದ್ಯಂತ ಅನೇಕ ಸಾಂಸ್ಕೃತಿಕ ವೇದಿಕೆಗಳಲ್ಲಿ ಕಲಾ ಪ್ರದರ್ಶನ ಮಾಡಿರುವ ಇವರು ಪ್ರಸ್ತುತ ಇಂಗ್ಲೆಂಡ್ ನ ನಾಟ್ಟಿಂಗ್ಹ್ಯಾಮ್ ಅಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಪ್ರಸೂತಿ ಶಾಸ್ತ್ರಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ಲಾಸ್ಯ ಭರತನಾಟ್ಯ ಶಾಲೆ’ಯನ್ನು ಸ್ಥಾಪಿಸಿ ದೈವಿಕ ಕಲೆಯಾದ ಭರತನಾಟ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಒಬ್ಬ ಕನ್ನಡತಿ ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ.