ಸಂಕ್ರಾಂತಿ ವಿಶೇಷ: ಯೋಗೀಂದ್ರ ಮರವಂತೆ ಬರೆದ `ಶ್ಯಾವಿಗೆ ಹಬ್ಬ` ಮತ್ತು ಕೇಶವ ಕುಲಕರ್ಣಿ ಬರೆದ `ಅಮರಪ್ರೇಮ` ಕತೆಯ ಕೊನೆಯ ಭಾಗ

ನಮಸ್ಕಾರ ಅನಿವಾಸಿ ಬಂಧುಗಳೇ. ಬೆಳಗಾದರೆ ಭೋಗಿ-ಸಂಕ್ರಾಂತಿಗಳು.  ಸುಗ್ಗಿಯ ಹಬ್ಬ ತಮ್ಮೆಲ್ಲರಿಗೂ ಹಿಗ್ಗನ್ನು ತರಲಿ. ಹುಗ್ಗಿಯ  ಘಮದಂತೆ ಬದುಕು ಹಿತವಾಗಲಿ 

ಎಳ್ಳು-ಬೆಲ್ಲದ ಸಿಹಿ ಬಾಳ ತುಂಬಿರಲಿ. ಸಿಹಿಗಬ್ಬು, ಬಾಳೆ- ಬಾರೆ, ಸೀತನಿ-ಸುಲಗಾಯಿ..ಆಹಾ! 'ಈ ಜನುಮವೇ   ಆಹಾ ದೊರಕಿದೆ ರುಚಿ ಸವಿಯಲು.. ಈ ಜಗವಿದೆ ನವರಸಗಳ ಉಣಬಡಿಸಲು' ಅಲ್ಲವೇ? 

ಬನ್ನಿ.. ಇವತ್ತು ಮರವಂತೆಯವರ ಮನೆಯಲ್ಲಿ ಶ್ಯಾವಿಗೆಯಂತೆ. ಎಂಥಾ  ಸೊಗಸಾದ ಊಟ  ಉಣಬಡಿಸಿದ್ದಾರೆ  ಸವಿಯಬನ್ನಿ.

ಉಂಡಾದ ಮೇಲೆ ಹಾಯಾಗಿ ಅಡ್ಡಾಗಿ ಅಮರಪ್ರೇಮ ಕಥಾಯಾನ ಮಾಡಿ ಸಂಕ್ರಾಂತಿ ಸಂಭ್ರಮ ಹೆಚ್ಚಿಸಿಕೊಳ್ಳಿ. 
 
~ ಗೌರಿ ಪ್ರಸನ್ನ, ಸಂಪಾದಕರು

ಶ್ಯಾವಿಗೆ ಹಬ್ಬ – ಯೋಗೀಂದ್ರ ಮರವಂತೆ

ಇವತ್ತು ಶ್ಯಾವಿಗೆ. ಇಂತಹ ಇವತ್ತು  ವಾರಾಂತ್ಯದ ದಿನಗಳಾದ ಶನಿವಾರ  ಆದಿತ್ಯವಾರ ಅಲ್ಲದಿದ್ದರೆ ಯಾವುದೊ ಹಬ್ಬದ ರಜೆಯ ದಿವಸ ಬರುತ್ತದೆ. ಇಲ್ಲದಿದ್ದರೆ ಶ್ಯಾವಿಗೆಯಂತಹ ಪ್ರಯಾಸಕರ ಸಾಹಸವನ್ನು ದೈನಿಕದ ಕೆಲಸ ಇರುವ ವಾರದ ನಡುವೆ  ಯಾರಾದರೂ ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಕಡಿಮೆ. ಶ್ಯಾವಿಗೆಯನ್ನು ತಲೆಮಾರುಗಳಿಂದ ತಯಾರಿಸಿ  ಪ್ರೀತಿಸಿ ಆಸ್ವಾದಿಸಿ ಬಡಿಸಿ ಉಣಿಸಿ ತಣಿಸಿದ ಪರಂಪರೆಯಲ್ಲಿ ಹುಟ್ಟಿದ್ದು ನನ್ನ ಭಾಗ್ಯ ಇರಬೇಕು. ಸಂಗೀತ ನೃತ್ಯ  ಪ್ರಕಾರಗಳಲ್ಲಿ ಇಂತಹ ಶೈಲಿ ಘರಾನಾ ತಿಟ್ಟು ಮಟ್ಟು  ಎಂದೆಲ್ಲ ಇದೆಯಲ್ಲ. ಪರಂಪರೆಯೊಂದು ಗುರುವಿನಿಂದ ಶುರುವಾಗಿ  ಶಿಷ್ಯರ ತಲಾಂತರಗಳಿಗೆ ವಿಶಿಷ್ಟ ಗುರುತಾಗಿ  ಹರಿದು ಹೋಗುವಂತಹದು. ಹೀಗೆ ಹೆಸರಾಂತ ಪರಂಪರೆಯಿಂದ ಬಂದವರನ್ನು ನೋಡಿದ ಕೇಳಿದ ತಕ್ಷಣ ಇನ್ಯಾರೋ ,"ಓ ಇವರು ಇಂತಹಲ್ಲಿಗೆ ಸೇರಿದವರು "ಎಂದು ಸುಲಭವಾಗಿ ಗುರುತಿಸುವುದಿದೆ.  ಅಂತಹ ಯಾವುದೇ  ಗಾಯಕ ವೈಣಿಕ ನರ್ತಕ ಕಲಾವಿದರ  ಸಾಲಿಗೆ ಪರಂಪರೆಗೆ  ಸೇರದ ನಾನು  , ಆದರೆ, ಒಂದು ವೇಳೆ ಮನುಷ್ಯರೇ ಆರೋಪಿಸಿಕೊಂಡ  ಸಾಮೂಹಿಕ ಗುರುತಿಗೆ  ಸೇರಲೇಬೇಕಾದ  ಸಂದರ್ಭದಲ್ಲಿ   " ಶ್ಯಾವಿಗೆ ಘರಾನಾ"ಕ್ಕೆ ಮಾತ್ರ ಸೇರಬೇಕಾದವನು ಎಂದು ಅನಿಸಿದ್ದಿದೆ. ಶ್ಯಾವಿಗೆಯನ್ನು  ತಿಂಡಿ ಎಂತಲೋ  ಕಜ್ಜಾಯ ಊಟ ಉಪಹಾರ ಎಂತಲೋ ವರ್ಗೀಕರಿಸಿದವರಿದ್ದಾರೆ. ಮತ್ತೆ ಕೆಲವರು ಅದರ ತಯಾರಿಯ ಹಿಂದಿನ ಸಿದ್ಧತೆ ಬದ್ಧತೆ ಶ್ರಮ ಸಾಹಸಗಳನ್ನು ಕಂಡು ಅಡಿಗೆಯ ಪ್ರಕಾರದಿಂದಲೇ ಹೊರಗಿಟ್ಟು ದೂರ ಉಳಿದಿದ್ದಾರೆ. ನನ್ನ ಮಟ್ಟಿಗೆ ಶ್ಯಾವಿಗೆ ಇಂತಹ ಮಾನವ ಮಿತಿಯ ವಿವರ ವರ್ಣನೆಗಳನ್ನು ಮೀರಿದ ಒಂದು ಮಹಾ ಕುಸುರಿ ಕೆತ್ತನೆ  ಕಾವ್ಯ.

ಈ ಕಾಲದಲ್ಲಿ ಉಪ್ಪಿಟ್ಟನ್ನು  ಪಾಯಸ  ಫಲೂದಂತಹ ಸಿಹಿಖಾದ್ಯಗಳನ್ನೂ ಶ್ಯಾವಿಗೆ ಬಳಸಿ  ತಯಾರಿಸುವುದು  ಜನಪ್ರಿಯವಾಗಿರುವವಾದರೂ  "ಒತ್ತು ಶ್ಯಾವಿಗೆ"ಯನ್ನೇ ಶ್ಯಾವಿಗೆ ಎಂದು ಸಂಬೋಧಿಸುವುದು ಕೆಲವು ಊರು ಮನೆಗಳಲ್ಲಿ ಇಂದಿಗೂ  ಕ್ರಮ.  ಹಲವು ಮಾದರಿ ಬಗೆಗಗಳ ಶ್ಯಾವಿಗೆಳು ಅಸ್ತಿತ್ವದಲ್ಲಿ ಇದ್ದರೂ ಅದರ  ಉಗಮ ಮೂಲ ನಾಲ್ಕು ಸಾವಿರ ವರ್ಷಗಳ ಹಿಂದೆ ಚೈನಾದಲ್ಲಿ ಆಯಿತು ಎಂದು ಕೆಲವು ಆಹಾರ ಇತಿಹಾಸಕಾರರು ಬರೆದಿಟ್ಟಿದ್ದಾರೆ. ಇನ್ನು ಕೆಲವರು ಅನಾದಿ ಕಾಲದಲ್ಲಿ ನೂಡಲ್ಸ್ ನಂತಹ ತಿನಿಸು ಇಟೆಲಿಯಲ್ಲಿ ಇತ್ತು ಎಂದೂ ಹೇಳಿದ್ದಾರೆ. ಮತ್ತೊಬ್ಬರು ಕ್ರಿಸ್ತ ಪೂರ್ವ ೨೦೦೦ದ ಹೊತ್ತಿಗೆ ಭಾರತದಲ್ಲಿಯೂ ಶ್ಯಾವಿಗೆ ಮಾದರಿಯ ಊಟ ತಿಂಡಿ ಇದ್ದುದರ ಕುರುಹು ಇದೆ ಎನ್ನುತ್ತಾರೆ. ಹಲವು ನೂರು, ಕೆಲವು ಸಾವಿರ ವರ್ಷಗಳ ಹಿಂದೆ ಶ್ಯಾವಿಗೆಯ ಹುಟ್ಟು ಎಲ್ಲೇ ಆಗಿದ್ದರೂ ,ಅಂದಿನಿಂದ ಇಂದಿನ ತನಕದ ಸುದೀರ್ಘ ಯಾನದಲ್ಲಿ  ಜಗತ್ತಿನ ಬೇರೆ ಬೇರೆ ಮೂಲೆಗಳಿಗೆ  ಹರಡಿ ಹಲವು ಮಾರ್ಪಾಟುಗಳನ್ನು ಕಂಡು ಇಂದು ಇಲ್ಲಿ ಹೀಗೆ ಹಸನಾಗಿ ಬದುಕಿ ಬಾಳಿಕೊಂಡಿದೆ.

ಶ್ಯಾವಿಗೆ ಮಾಡುವವರು ತಯಾರಿಯನ್ನು ಹಿಂದಿನ ದಿನ ಅರೆಯುವ ಕೆಲಸದಿಂದ ಆರಂಭಿಸಿರುತ್ತಾರೆ. ಇನ್ನು ನನ್ನಂತೆ ತಿನ್ನುವುದರಲ್ಲಿ  ತೀವ್ರ  ಆಸಕ್ತಿ ಇರುವವರು ಅದಕ್ಕಿಂತಲೂ ಮೊದಲೇ ಒಂದು ಮಾನಸಿಕ ಸಿದ್ಧತೆ  ಪ್ರತೀಕ್ಷೆಯಲ್ಲಿ ಇರುತ್ತಾರೆ. ಬಿಡಿ,ಅರೆಯುವುದು ಶ್ಯಾವಿಗೆ ಯಾನದ  ಮೊದಲ ಹಂತವಾದರೂ ಅದಕ್ಕೂ ಪೂರ್ವದಲ್ಲಿ  ಶ್ಯಾವಿಗೆ ಸ್ನೇಹಿ ಅಕ್ಕಿ ಕೈವಶವಾಗಿರಬೇಕು. ಶ್ಯಾವಿಗೆಗೆ ಸಮರ್ಪಕ  ಅಕ್ಕಿ ಯಾವುದು ಎಂದು ಅರಸುವುದು ಮತ್ತೆ ಕಂಡುಹಿಡಿಯುವುದು ಪರಂಪರೆ ಪ್ರಯೋಗಗಳು ಕಲಿಸಿಕೊಡುವ ಗುಟ್ಟುಗಳಲ್ಲಿ ಒಂದು. ಬಿಳಿಯಾಗಿ ಹೊಳೆಯುವ ಯಾವುದೋ  ಅಕ್ಕಿ, ದುಬಾರಿಯಾದ ಕಾರಣಕ್ಕೆ ಒಳ್ಳೆಯದು ಎನ್ನುವ ಹೆಸರು ಪಡೆದ ಅಕ್ಕಿ ಇಂತಹವನ್ನು ತಂದು ಅರೆದು ಶ್ಯಾವಿಗೆ ಮಾಡಲು ಕೈಹಾಕಿದರೆ ಉದ್ದುದ್ದ ಎಳೆಯಾಗಿ ನಿಂತು ನಲಿದು ಬಾಳಬೇಕಾದ  ಶ್ಯಾವಿಗೆ ನೂಲುಗಳು ಕ್ಷಣಮಾತ್ರದಲ್ಲಿ  ತುಂಡು ತುಂಡಾಗಿ ಹರಿದು ಛಿದ್ರವಾಗಿ ನಾಲಿಗೆಯಲ್ಲಿ ನಿಲ್ಲದೆ ಕರಗಿ ನಿರಾಸೆ ಜಿಗುಪ್ಸೆ ಹುಟ್ಟಿಸುವ ಸಾಧ್ಯತೆಯೇ ಹೆಚ್ಚು. ಕೇರಳದ ಕಡೆಯ  ಶ್ಯಾವಿಗೆ ಬಿಳಿ ಅಲ್ಲದೇ ಕೆಂಪು ಅಕ್ಕಿಯಿಂದಲೂ  ತಯಾರಾಗುತ್ತದೆ."ಇಡಿಯಪ್ಪಂ" ಎನ್ನುವ ಹೆಸರಿನ ಕೇರಳದ ಶಾವಿಗೆ ಪ್ರಕಾರಕ್ಕೆ ನೂಲುಪೊಟ್ಟು ,ನೂಲಪ್ಪಮ್ ಎಂಬ ಹೆಸರುಗಳೂ ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿ ಇವೆ. ಇನ್ನು ಆಂಗ್ಲ ಭಾಷೆಯಲ್ಲಿಯೇ ಹೆಸರು ಬೇಕೆಂದು ಬಯಸುವವರು  ರೈಸ್ ನೂಡಲ್ಸ್ ಅಥವಾ ಸ್ಟ್ರಿಂಗ್ ಹೋಪರ್ ಎಂದೂ ಕರೆದು ಕೃತಾರ್ತರಾಗಬಹುದು. ರುಚಿ ಗಂಧಗಳಲ್ಲಿ ಕೇರಳದ ಅಥವಾ ಇನ್ಯಾವುದೋ ರಾಜ್ಯದ  ಶ್ಯಾವಿಗೆ ಕನ್ನಡದ ಶ್ಯಾವಿಗೆಗಿಂತ ಭಿನ್ನ. ಮೇಲುನೋಟಕ್ಕೆ ಎಲ್ಲ ಬಗೆಯ ಶ್ಯಾವಿಗೆಗಳೂ  ಸುರುಳಿಸುತ್ತಿದ ನೂಲಿನ ಮುದ್ದೆಯಾದರೂ  ಅವುಗಳೊಳಗೆ ವೈವಿಧ್ಯ ಇದೆ. ವೈವಿಧ್ಯಮಯ ಶ್ಯಾವಿಗೆಯನ್ನು  ಪ್ರೀತಿಸಿ ಸ್ವಯಂ ತಯಾರಿಸುವವರು  ಜಗತ್ತಿನ ಯಾವುದೇ  ಮೂಲೆಯಲ್ಲಿ ಇದ್ದರೂ ಅಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಸಿಗುವ ಅಕ್ಕಿಗಳಲ್ಲಿ ಶ್ಯಾವಿಗೆಗೆ ಹೊಂದುವ ಅಕ್ಕಿ ಯಾವುದು ಎಂದು ತಮ್ಮ ಅಡುಗೆಯ ವಿಜ್ಞಾನ  ಗಣಿತ ಪ್ರಯೋಗಗಳನ್ನು  ಜೊತೆಮಾಡಿಸಿ ಕಂಡುಕೊಂಡಿರುತ್ತಾರೆ. ಅದಕ್ಕಿಂತ ಮುಖ್ಯವಾಗಿ ತಾವಿರುವ ಊರಿಗೆ ಶ್ಯಾವಿಗೆ ಒತ್ತುವ ಒರಳನ್ನೂ ಕೊಂಡೊಯ್ದಿರುತ್ತಾರೆ. ಹಿತ್ತಾಳೆಯ ಹೊಳೆಯುವ ಒರಳುಗಳು ಸಣ್ಣ ದೊಡ್ಡ ಗಾತ್ರದಲ್ಲಿ ಕನ್ನಡ ನಾಡಿನ ಅಂಗಡಿಗಳಲ್ಲಿ ದೊರೆಯುತ್ತವೆ. ವಿದೇಶ ಪ್ರವಾಸದ ಬ್ಯಾಗಿನ ಅಚ್ಚುಕಟ್ಟಿನ ಜಾಗದಲ್ಲಿ ಸಾಗಿಸಲು  ಅನುಕೂಲಕರ ಆಗಲಿ ಎಂದು ಒರಳಿನ ಭಾಗಗಳನ್ನು ಹೊರಡುವಾಗ  ಬಿಡಿಸಿ ಮತ್ತೆ ತಲುಪಿದ ಮೇಲೆ ಜೋಡಿಸಲಾಗುವ ನಮೂನೆಗಳೂ ದೊರೆಯುತ್ತವೆ. ಅಂತೂ ಒರಳೂ ಇದ್ದು, ಸೂಕ್ತವಾದ ಅಕ್ಕಿಯೂ ದಕ್ಕಿದ ಮೇಲೆ ,  ಮರುದಿನ ಬೆಳಿಗ್ಗೆಯ ಶ್ಯಾವಿಗೆ ತಯಾರಿಗೆ  ಹಿಂದಿನ ಸಂಜೆ  ಅರೆದಿಡಬಹುದು ,  ಜೊತೆಗೆ  ತೆಂಗಿಕಾಯಿ ತುರಿದು ಸೇರಿಸುವ ಪದ್ಧತಿಯೂ ಇದೆ. ಕೆಲವು ಊರು ಮನೆಗಳಲ್ಲಿ ತೆಂಗಿನ ಕಾಯಿ ಹಾಕದೆಯೂ  ಶ್ಯಾವಿಗೆ ಮಾಡುತ್ತಾರೆ.

ನಾನಂತೂ ಶ್ಯಾವಿಗೆ ಪರಂಪರೆಯಲ್ಲಿ "ತೆಂಗಿನಕಾಯಿ ಸಹಿತ" ಸಂತತಿಗೆ  ಸೇರಿದವನು. ಶ್ಯಾವಿಗೆಯನ್ನು ಆಘ್ರಾಣಿಸಿಯೇ ಅದಕ್ಕೆ ತೆಂಗಿನ ಕಾಯಿ ಹಾಕಿದ್ದಾರೋ ಇಲ್ಲವೋ ಎಂದು ಹೇಳಬಲ್ಲ ಹುಟ್ಟಾ  ಕಟ್ಟಾ ಶ್ಯಾವಿಗೆ ಪ್ರೇಮಿಗಳೂ ಇದ್ದಾರೆ.  ಎಷ್ಟು ಅಕ್ಕಿಗೆ ಎಷ್ಟು ತೆಂಗಿನಕಾಯಿ  ಸೇರಿಸಿ  ಅರೆಯಬೇಕು ಎನ್ನುವುದು ಶ್ಯಾವಿಗೆಯ ಸೂಕ್ಶ್ಮಾತಿಸೂಕ್ಷ್ಮಗಳಲ್ಲಿ  ಇನ್ನೊಂದು. ಈ ಹಂತದಲ್ಲಿ ಕಾಯಿ ಹೆಚ್ಚು ಸೇರಿಸಿದರೆ ಶ್ಯಾವಿಗೆ ತಯಾರಾಗುವ ಕೊನೆಯ ಹಂತದಲ್ಲಿ ಎಳೆಗಳು ತೀರಾ ದುರ್ಬಲವಾಗಿ ಪುಡಿ ಪುಡಿ ಆಗುತ್ತವೆ.ಕಡಿಮೆ ಆದರೆ ಎಳೆಗಳು ಗಟ್ಟಿಯಾಗಿ ತಿನ್ನುವ ಅನುಭವ ಕೆಡುತ್ತದೆ.  ಚದುರಂಗದ ಆಟದಲ್ಲಿ ಹಲವು ಹೆಜ್ಜೆಗಳ ಮುಂದಿನ ಪರಿಣಾಮವನ್ನು ಅಳೆದು ಮೊದಲೇ ಯೋಜನೆ ಮಾಡಿ ಜಾಗರೂಕವಾಗಿ ಮುನ್ನಡೆಯುವಂತೆ   ಈ ಮಹಾಖಾದ್ಯದ ತಯಾರಿಯೂ.  ಒಂದಾನೊಂದು ಕಾಲದಲ್ಲಿ ನನ್ನ ತಂದೆ ತಾಯಿಯರ  ಕಡೆಯ ಅಮ್ಮಮ್ಮಂದಿರು (ಅಜ್ಜಿಯರು) ಶಿಲೆಯ ಅರೆಯುವ  ಕಲ್ಲುಗಳ ಎದುರು ನೇರ  ಕುಳಿತು ಒಂದು ಕೈಯಿಂದ ಕಲ್ಲನ್ನು ತಿರುವುತ್ತಾ ಮತ್ತೊಂದರಲ್ಲಿ ಅಷ್ಟಷ್ಟೇ ಅಕ್ಕಿ ತುರಿದ ಕಾಯಿಯನ್ನು ಕಲ್ಲಿನ ಕುಳಿಗೆ ಜಾರಿಸುತ್ತಾ ನಡುನಡುವೆ ಹಣೆಯ ಬೆವರನ್ನೂ ಸೆರಗಿಂದ ಒರಸುತ್ತ  ಸಣ್ಣ ಸದ್ದಿನಲ್ಲಿ ಅರೆಯುತ್ತಿದ್ದ  ಪ್ರಕ್ರಿಯೆ ಇದೀಗ ತಲೆಮಾರುಗಳನ್ನು ದಾಟಿ ಬಟನ್ ಒತ್ತಿದೊಡನೆ ಕರ್ಕಶವಾಗಿ ಗಿರಗಿಟ್ಟುವ ಮಿಕ್ಸರ್ ಗ್ರೈಂಡರ್ ಗಳ  ಶಬ್ದದ  ನಡುವೆ  ನುಣ್ಣಗೆ ತೆಳ್ಳಗಾಗುವುದಕ್ಕೆ ಒಗ್ಗಿಕೊಂಡಿವೆ. ಹೀಗೆ ಸಿದ್ಧವಾದ ನೀರುನೀರಾದ ಶ್ಯಾವಿಗೆ ಹಿಟ್ಟು ಒಂದು ರಾತ್ರಿಯನ್ನು  ಏನೂ  ಮಾಡದೇ ಪಾತ್ರೆಯೊಂದರಲ್ಲಿ ಬೆಳಗಿನ ನಿರೀಕ್ಷೆಯಲ್ಲಿ ಕಳೆಯುತ್ತದೆ . ,ಮರುದಿನ ಬೆಳಗಿಗೆ ತುಸು ಹುಳಿಯಾಗಿ ಮುಂದಿನ ಹಂತಕ್ಕೆ ಅಣಿಗೊಳ್ಳುತ್ತದೆ. ಇನ್ನು ಶ್ಯಾವಿಗೆ ಸಂಭ್ರಮದ ದಿನದ ಬೆಳಿಗ್ಗೆ  ಒಲೆಯ ಮೇಲಿರುವ ಬಾಣಾಲೆಯನ್ನು ಏರಿದ   ತೆಳ್ಳಗಿನ ಹಿಟ್ಟು ,ಮನೆಯ ನಿಷ್ಣಾತ ಬಾಣಸಿಗರ ಸುಪರ್ದಿಯಲ್ಲಿ   ನಿಧಾನವಾಗಿ ಕುದಿಯುತ್ತಾ   ಮಗುಚಿಸಿಕೊಳ್ಳುತ್ತ   ಮುದ್ದೆಯಾಗುತ್ತದೆ   , ಮತ್ತೆ ಆ ಗಟ್ಟಿ ಮುದ್ದೆ ಕೈಮುಷ್ಟಿಯ ಬಿಗಿಯಲ್ಲಿ  ಉಂಡೆಯ ರೂಪವನ್ನು ಪಡೆದು  ಇಡ್ಲಿ ಅಟ್ಟ  ಅಥವಾ ಕುಕರ್ ಒಳಗೆ ನಂತರ ಬೇಯುತ್ತದೆ ತೋಯುತ್ತದೆ . ತೆಳ್ಳಗಿನ ಹಿಟ್ಟು ಯಾವ ಬೆಂಕಿಯಲ್ಲಿ ಎಷ್ಟೊತ್ತು ಕುದಿಯಬೇಕು ಎಷ್ಟು ಗಟ್ಟಿಯಾಗಬೇಕು ಮತ್ತೆ  ಎಷ್ಟು ಬೇಯಬೇಕು ಎನ್ನುವುದು ಕೂಡ ಶ್ಯಾವಿಗೆಯ ಯಶಸ್ಸಿನ ಹಿಂದೆ ದುಡಿಯುವ  ನಯ ನಾಜೂಕಿನ ವಿಚಾರಗಳು.

ಈಗ  ಮೃದುವಾಗಿ ಹದವಾಗಿ ಕುದಿದು ಬೆಂದ ಉಂಡೆಗಳು ಒತ್ತಿಸಿಕೊಳ್ಳಲಿಕ್ಕೆ ತಯಾರು. ಎಂದೋ ಯಾರೋ ಮಹಾ ಇಂಜಿನೀಯರ್ ಒಬ್ಬರು ಸಂಶೋಧನೆಯ ಕಾರಣಕ್ಕೆ  ಈಗಲೂ ಅವರಿಗೆ  ಪುಣ್ಯ ಸಂಚಯ ಮಾಡಿಸುತ್ತಿರುವ   "ಶ್ಯಾವಿಗೆ ಒರಳು" ಇಷ್ಟೊತ್ತಿಗೆ ಮೈಮುರಿದು ಅಡುಗೆ ಮನೆಯಲ್ಲಿ ಪ್ರತ್ಯಕ್ಷ ಆಗಿರುತ್ತದೆ. ಸಾಮಾನ್ಯವಾಗಿ ಮನೆಯ ಅಟ್ಟದಲ್ಲೋ ಅಡುಗೆ ಮನೆಯ ನೇಪತ್ಯದಲ್ಲೋ ನಿಷ್ಕ್ರಿಯವಾಗಿರುವ  ಒರಳು, ಶ್ಯಾವಿಗೆ ಒತ್ತಬೇಕಾದ ಅಪರೂಪದ ವಿಶೇಷ ದಿನಗಳಲ್ಲಿ ಮಾತ್ರ ಹೊರಬಂದು ಕತ್ತು ಗಿರಗಿರ ತಿರುಗಿಸುವ  ಮೂರು ಕಾಲಿನ ವಿಚಿತ್ರ ಜಂತುವಾಗಿ ಜೀವ ತಳೆಯುತ್ತದೆ  . ಒರಳಿನ  ತಿರುಗಿಸುವ  ಹಿಡಿಯ ಕೆಳಗಿನ ಭಾಗಕ್ಕೆ ತೆಂಗಿನ ಎಣ್ಣೆ ಸವರುವುದು  ಪ್ರತಿ ಒತ್ತಿಗೂ  ಮೇಲೆ ಕೆಳಗೆ ಹೋಗುವಾಗ ಆಗುವ ಘರ್ಷಣೆಯನ್ನು ತಗ್ಗಿಸುತ್ತದೆ, ಅಮೂಲ್ಯವಾದ ಒರಳಿನ ಆಯಸ್ಸನ್ನು ವರ್ಧಿಸುತ್ತದೆ ಎನ್ನುವುದನ್ನು ಅಡುಗೆಮನೆ ನಿರ್ವಹಿಸುವ ಅನುಭವದ ಯಾರೂ ಹೇಳಬಲ್ಲರು. ಹೀಗೆ ಒರಳುಯಂತ್ರದ ಪ್ರವೇಶ ಅಲಂಕಾರ ಆಗುತ್ತಿರುವಾಗ  ಒಲೆಯ ಮೇಲೆ ಬೆಂದ ಹಿಟ್ಟಿನ ಉಂಡೆಗಳ ಬಿಸಿ ಆರದಂತೆ ಸಣ್ಣ ಬೆಂಕಿ ಮುಂದುವರಿಯುತ್ತಿರುತ್ತದೆ. ಇನ್ನು ಅಕ್ಕಿ ಕಾಯಿಯಗಳು ಅರೆದು ಬೆಂದ  ಉಂಡೆಗಳು ಶ್ಯಾವಿಗೆಯ ಎಳೆಗಳಾಗಿ ಮಾರ್ಪಡುವ ದಿವ್ಯ ಘಳಿಗೆ ಸನ್ನಹಿತವಾದಾಗ ಆಯಾ ಮನೆಯ ಬಲಿಷ್ಠ ಒತ್ತುಗಾರರಿಗೆ ಒಂದು ಕೂಗು ಕರೆ ಹೋಗುತ್ತದೆ. ಒಬ್ಬರು ಶ್ಯಾವಿಗೆ ಒರಳಿನ ಒತ್ತು ಪಾತ್ರೆ ಹಿಡಿಯುವಷ್ಟು ಬೆಂದ ಹಿಟ್ಟಿನ ಉಂಡೆಯನ್ನು ಕುಳಿತು ತುಂಬಿಸಿದರೆ  ಇನ್ನೊಬ್ಬರು ನಿಂತು, ಒರಳಿನ ಎರಡು ಕಾಲುಗಳನ್ನು ತಮ್ಮ ಪಾದಗಳಿಂದ ಅದುಮಿ ಹಿಡಿದು ಎರಡು ಕೈಯಲ್ಲಿ ಹ್ಯಾಂಡಲ್ ಬಾರ್ ತಿರುಗಿಸುತ್ತಾ ಶ್ಯಾವಿಗೆ ಒತ್ತುತ್ತಾರೆ. ಪ್ರತಿ ಸುತ್ತಿಗೂ ಅಷ್ಟಷ್ಟು ಶ್ಯಾವಿಗೆ ಎಳೆಯಾಗಿ ನೂಲಾಗಿ  ಒರಳಿನ ಕೆಳಗಿರುವ ಅಚ್ಚಿನಿಂದ ಹೊರ ಬರುತ್ತದೆ, ಕುಳಿತವರು ಪ್ಲೇಟ್ ಅನ್ನು  ಎಳೆಗಳು ಹೊರ ಬರುವ ಲಯಕ್ಕೆ ಹೊಂದಿಕೊಂಡು ತಿರುಗಿಸುತ್ತಾ  ಸುರುಳಿಯಾಗಿ ಸುತ್ತಿಸಿ ಮುದ್ದೆಯನ್ನು ಹಿಡಿಯುತ್ತಾರೆ . ಶ್ಯಾವಿಗೆ ಮಾಡುವುದರಲ್ಲಿ ಪಳಗಿರುವ  ಅಜ್ಜಿ ಅಮ್ಮ ಹೆಂಡತಿ  ದೊಡ್ಡಮ್ಮ ಚಿಕ್ಕಮ್ಮ ಅತ್ತಿಗೆ ಹೆಂಡತಿಯಂತಹ ಮಹಾನ್ ಬಾಣಸಿಗರು ಬಿಸಿ ಹಿಟ್ಟಿನ ಮುದ್ದೆಯನ್ನು ಒರಳಿಗೆ ತುಂಬುವ ಮತ್ತೆ  ಒತ್ತಿದಾಗ ಕೆಳಗೆ ಧಾರೆಯಾಗಿ ಇಳಿಯುವ ಶ್ಯಾವಿಗೆಯನ್ನು ಪ್ಲೇಟು ಹಿಡಿದು ಸುತ್ತಿಸಿ ಹದ್ದುಬಸ್ತಿನಲ್ಲಿಡುವ ಕೆಲಸ ಮಾಡಿದರೆ, ರಟ್ಟೆಯ ಬಲ ಹೆಚ್ಚಿರುವ ಗಂಡ ಮಗ ಅಳಿಯ ಮೊಮ್ಮಗರಂತವರು  ಒರಳು ತಿರುಗಿಸುವ ಹೊಣೆಗಾರಿಕೆಯನ್ನು  ನಿರ್ವಹಿಸುತ್ತಾರೆ.ಕೆಲವು ಪ್ರದರ್ಶನಗಲ್ಲಿ ಈ ಪಾತ್ರಗಳು ಬದಲಾಗುವುದು ಒಬ್ಬರೇ ಎರಡು ಮೂರು ಪಾತ್ರ ಮಾಡಬೇಕಾದ ಅನಿವಾರ್ಯತೆ ಬರುವುದೂ ಇರುತ್ತದೆ. ಕಾರ್ಖಾನೆಯೊಂದರ ನಿರ್ಧರಿತ  ನಿಯಮಿತ ಚಲನೆಗಳಂತೆ  ಕುಕ್ಕರಿನಲ್ಲಿ ಹದ ಬಿಸಿಯಲ್ಲಿರುವ ಒಂದೊಂದೇ ಹಿಟ್ಟಿನ ಉಂಡೆಗಳು  ಒರಳಿನ ತೂತು ಅಚ್ಚುಗಳ ಮೂಲಕ ಹಾದು ನೀಳ  ನೂಲಿನ ಗುಚ್ಛದ ಸ್ವರೂಪವನ್ನು  ಪಡೆದು ಪ್ಲೇಟಿನಲ್ಲಿ ಇಳಿದು ದೊಡ್ಡ ಪಾತ್ರಕ್ಕೆ ವರ್ಗಾವಣೆ ಆಗುತ್ತಿರುತ್ತವೆ. ಇಡೀ ಕುಟುಂಬ ಮನೆಯನ್ನು, ತಾನು ರೂಪ ಆಕಾರ ಪಡೆಯುವ ಪ್ರಸನ್ನ ಘಳಿಗೆಯಲ್ಲಿ ಅಡಿಗೆಮನೆಯ ಸೂರಿನ ಕೆಳಗೆ ಒಂದು ಮಾಡಿಸುವ ಸಾಮರ್ಥ್ಯ  ಶ್ಯಾವಿಗೆ ಎನ್ನುವ ಅದ್ಭುತ ಪ್ರಕ್ರಿಯೆಗೆ ಇದೆ. 

ಹೀಗೆ ತಯಾರಾದ ಶ್ಯಾವಿಗೆಯನ್ನು ಹೇಗೆ ತಿನ್ನಬೇಕು ಬಾರದು ಎನ್ನುವುದರ ಬಗ್ಗೆ ಅದರ ಪ್ರೇಮಿಗಳಲ್ಲಿ ಜಿಜ್ಞಾಸೆ ಇದೆ ಅವರೊಳಗೆ ಪಂಥ  ಗುಂಪುಗಳೂ ಇವೆ .ಈ ಗುಂಪುಗಾರಿಕೆ ಒಡಕುಗಳು ಶ್ಯಾವಿಗೆ  ಹುಟ್ಟಿತು ಎನ್ನಲಾದ ಕೆಲ ಸಾವಿರ ವರ್ಷಗಳ ಹಿಂದೆಯೂ ಇದ್ದವೋ   ಇತ್ತೀಚಿಗೆ ಹುಟ್ಟಿಕೊಂಡದ್ದೋ  ಆ ಶ್ಯಾವಿಗೆಯ ಎಳೆಗಳೇ ಹೇಳಬೇಕು.  ಕೆಲವರು ಶ್ಯಾವಿಗೆ ಮುದ್ದೆಗೆ  ತೆಂಗಿನೆ ಎಣ್ಣೆ ಕಲಸಿಕೊಂಡು ಉಪ್ಪಿನ ಕಾಯಿಯ ಜೊತೆ ತಿನ್ನುವ, ಅಲ್ಲವೇ ಕಾಯಿರಸ, ಸಾಂಬಾರ್ ಇನ್ನೇನೋ ಖಾರ ಪದಾರ್ಥದ  ಜೊತೆ ಸೇವಿಸುವ  ಖಡಕ್ ಮನುಷ್ಯರು. ಇನ್ನು ಕೆಲವರು ತುರಿದ ತೆಂಗಿನ ಕಾಯಿಯನ್ನು ಮಿಕ್ಸರ್ ಅಲ್ಲಿ ಅರೆದು ಹಿಂಡಿದ  ಹಾಲಿಗೆ ಬೆಲ್ಲ ಸೇರಿಸಿ ತಯಾರಾದ ಕಾಯಿಹಾಲಿನ ಜೊತೆ ಮಾತ್ರ ಶ್ಯಾವಿಗೆಯನ್ನು ಸವಿಯ ಬಲ್ಲ ಸಂಕುಲದವರು. ತಿನ್ನುವ ಹೊತ್ತಿನಲ್ಲಿ ನಮ್ಮೊಳಗೇ ಭಿನ್ನಾಭಿಪ್ರಾಯ ಎಷ್ಟೇ ಇದ್ದರೂ  ಶ್ಯಾವಿಗೆಯ ಕುರಿತಾದ ಅಭಿಮಾನ ಒತ್ತಾಯ ಪ್ರೀತಿಯ ವಿಷಯದಲ್ಲಿ ಎಲ್ಲರೂ ಸಂಘಟಿತರು.

 ಮರವಂತೆಯ ನನ್ನ ಬಾಲ್ಯದ ಬೇಸಿಗೆ ರಜೆಯಯಲ್ಲಿ  ಮಂಗಳೂರು ಚಿಕ್ಕಮ್ಮನ ಮನೆಗೆ ಹೋಗಿದ್ದಾಗ, ಅಲ್ಲಿ ವಾಸಿಸುತ್ತಿದ್ದ ಅಮ್ಮಮ್ಮನಿಗೂ ನನಗೂ ಒಂದು ಪಂಥ ಬಿದ್ದ್ದಿತ್ತು.  ಒಂದೋ ಆಕೆ ನಿತ್ಯವೂ ಶ್ಯಾವಿಗೆ ಮಾಡಿ ದಣಿದು ನಿಲ್ಲಿಸಬೇಕು, ಇಲ್ಲದಿದ್ದರೆ  ನಾನು ದಿನಾ  ತಿಂದು ತಿಂದು ಸಾಕೆನ್ನಬೇಕು. ಈ ಪಂಥದ ಪ್ರಕಾರ ಪ್ರತಿ ದಿನ ಬೆಳಿಗ್ಗೆ ಅಮ್ಮಮ್ಮನಿಂದ ಹೊಚ್ಚ ಹೊಸ ಶ್ಯಾವಿಗೆ ತಯಾರಿ ಮತ್ತೆ  ನಿತ್ಯವೂ  ನಾನು ತಿನ್ನುವುದು ನಡೆಯಿತು. ಒಂದು ವಾರದ  ಪರಿಯಂತ ನಿತ್ಯ ನಡೆದ ಈ ಹಿತಸ್ಪರ್ಧೆಯಲ್ಲಿ ಸೋಲು ಗೆಲುವುಗಳ ನಿರ್ಧಾರ ಆಗದೇ , ಲೋಕಹಿತಕ್ಕಾಗಿ ನಾವಿಬ್ಬರೂ ಹೊಂದಾಣಿಕೆ ಒಪ್ಪಂದ ಮಾಡಿಕೊಂಡು  ಪಂಥವನ್ನು ಕೈಬಿಟ್ಟಿದ್ದೆವು.  ಶ್ಯಾವಿಗೆಯ ಸುದೀರ್ಘ ಇತಿಹಾಸದಲ್ಲಿ ದಾಖಲಾದ ಅವಿಸ್ಮರಣೀಯ ಜಿದ್ದು  ಇದಾಗಿದ್ದಿರಬಹುದು.  ಇಂದಿಗೂ ಶ್ಯಾವಿಗೆ -ಕಾಯಿ ಹಾಲುಗಳ ಜೋಡಿಯನ್ನು ಮೀರಿದ ಸುಖ ರಸಸೃಷ್ಟಿ  ಇನ್ನೊಂದಿಲ್ಲ ಎಂದು ನಂಬುವ ಕೆಲವರಲ್ಲಿಯಾದರೂ ನಾನೊಬ್ಬ. ಶ್ಯಾವಿಗೆಯನ್ನು ಇನ್ನೊಂದು ಆಹಾರ ಎಂತಲೋ ವಿಶೇಷ ತಿಂಡಿ ಎಂದೋ  ಹಲವರು  ಕರೆಯಬಹುದಾದರೂ ನನ್ನ ಮಟ್ಟಿಗೆ ಶ್ಯಾವಿಗೆ ಯಾವಾಗಲೂ ಹಬ್ಬ; ಮತ್ತೆ ಇವತ್ತು ಮನೆಯಲ್ಲಿ ಶ್ಯಾವಿಗೆ.

ಅಮರಪ್ರೇಮ (ಕತೆ): ಕೇಶವ ಕುಲಕರ್ಣಿ (ಕೊನೆಯ ಕಂತು)

ಮೊದಲ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ

ಎರಡನೆಯ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ

ಅಮರನಿಗೆ ಪ್ರೇಮಾಳನ್ನು ನೋಡುವ ಅದಮ್ಯ ಹಂಬಲ ಪರಾಕಾಷ್ಠೆಗೆ ತಲುಪಿದ್ದು, ೨೦ನೇ ವರ್ಷದ ಪುನರ್ಮಿಲನದ ಕಾರ್ಯಕ್ರಮದ ಸಲುವಾಗಿ, ಪುಣೆಯಿಂದ ಬೆಂಗಳೂರಿಗೆ ರೈಲಿನಲ್ಲಿ, ಬೆಂಗಳೂರಿನಿಂದ ಮೈಸೂರಿಗೆ ಬಸ್ಸಿನಲ್ಲಿ ಪಯಣಿಸಿ, ಬಸ್ ನಿಲ್ದಾಣದಿಂದ ಹೊಟೇಲಿಗೆ ಆಟೋದಲ್ಲಿ ಬಂದಿಳಿದ ಆ ಒಂದು ದಿನದ ಸುದೀರ್ಘ ಪಯಣದಲ್ಲಿ. 

ಪ್ರೇಮಾ ಬರುತ್ತಾಳೆ, ಬರುವುದಿಲ್ಲ ಎನ್ನುವ ಚಡಪಡಿಕೆ; ಜೊತೆಗೆ ಅವಳ ಗಂಡನೂ ಬರಬಹುದು, ಬರಲಿಕ್ಕಿಲ್ಲ ಎನ್ನುವ ಗೊಂದಲ. ಗಂಡ ಬರದಿದ್ದರೆ ಒಳ್ಳೆಯದು, ಅವಳ ಜೊತೆ ಕೂತು ನಾಕು ಮಾತಾದರೂ ಆಡಲು ಸಮಯ ಸಿಕ್ಕಬಹುದು ಎಂಬ ಹಂಬಲ. ಆದರೆ ಅಮೇರಿಕದಲ್ಲಿ ಈಗ ರಜೆಯ ಸಮಯವಲ್ಲವೇ, ಅವಳು ಕುಟುಂಬ ಸಮೇತ ಬಂದೇ ಬರುತ್ತಾಳೆ ಎನ್ನುವ ತರ್ಕ. ಅವಳಿಗೆ ಬಹುಷಃ ಇಬ್ಬರು ಮಕ್ಕಳಿರಬಹುದು. ತನ್ನ ಮಗಳಿಗಿಂತ ದೊಡ್ಡ ಮಕ್ಕಳಿರುತ್ತಾರೆ, ಏಕೆಂದರೆ ಅವಳಿಗೆ ತನಗಿಂತ ಮೊದಲು ಮದುವೆ ಆಯಿತಲ್ಲವೇ?  ಸ್ವಲ್ಪ ದಪ್ಪಗಾಗಿರಬಹುದು, ಇಲ್ಲ, ಅಮೇರಿಕದಲ್ಲಿರುವವರಿಗೆ ದೇಹದ ಬಗ್ಗೆ ತುಂಬ ಕಾಳಜಿಯಂತೆ, ಮೊದಲಿಗಿಂತ ಸಪೂರವಾಗಿರಬಹುದು ಎಂದೆಲ್ಲ ಪ್ರಯಾಣದ ತುಂಬ ಯೋಚಿಸಿದ. 

ಪ್ರೇಮಾ ಎದುರಾದಾಗ ಯಾವ ಮಾತಿನಿಂದ ಶುರು ಮಾಡುವುದು, ಯಾವ ಯಾವ ಹಳೆಯ ವಿಷಯಗಳ ಬಗ್ಗೆ ಮಾತಾಡುವುದು ಎಂದು ಮನದಲ್ಲೇ ಪಟ್ಟಿ ಮಾಡಿಕೊಂಡ. ಕಾಲೇಜಿನಲ್ಲಿರುವಾಗ ಇದ್ದ ತನ್ನ ದಟ್ಟ ಕಪ್ಪು ಕೂದಲು ಬಹಳಷ್ಟು ಮಾಯವಾಗಿ ಉಳಿದ ಅರೆಬಕ್ಕ ತಲೆಯ ಬಗ್ಗೆ ಕಸಿವಿಸಿಯಾಯಿತು. ನಿಯಮಿತವಾಗಿ ವ್ಯಾಯಾಮ ಮಾಡಿದ್ದರೆ ಇಷ್ಟು ಹೊಟ್ಟೆ ಬರುತ್ತಿರಲಿಲ್ಲ ಎಂದು ಮೊಟ್ಟಮೊದಲ ಬಾರಿಗೆ ತನ್ನ ಹೊಟ್ಟೆಯ ಬಗ್ಗೆ ಬೇಸರ ಮೂಡಿತು.

ಅವಳಿಗೆ ತನ್ನ ಹೆಂಡತಿಯನ್ನು ಹೇಗೆ ಪರಿಚಯಿಸುವುದು, ಅದಕ್ಕಿಂತ ಹೆಚ್ಚಾಗಿ ತನ್ನ ಮಗಳ ಹೆಸರು ಕೂಡ `ಪ್ರೇಮಾ` ಎಂದು ಹೇಗೆ ಹೇಳುವುದು ಎನ್ನುವ ಪ್ರಶ್ನೆಗಳಿಗೆ ಇಡೀ ಪ್ರಯಾಣದಲ್ಲಿ ಉತ್ತರಗಳೇ ಸಿಗಲಿಲ್ಲ. ಹಲವಾರು ಸನ್ನಿವೇಷಗಳನ್ನು ತಾನೇ ಸೃಷ್ಟಿಸಿಕೊಂಡು ಅದನ್ನು ಹೇಗೆ ನಿಭಾಯಿಸುವುಸುದು ಎಂದು ಪ್ರಯಾಣದ ಪೂರ್ತಿ ನಾನಾ ರೀತಿಯ ಲೆಖ್ಖಾಚಾರ ಹಾಕುತ್ತಲೇ ಇದ್ದ. ಹೆಂಡತಿ ಮತ್ತು ತಾಯಿಯ ಮಾತನ್ನು ಕೇಳಿ ಮಗಳಿಗೆ `ಪ್ರೇಮಾ` ಎನ್ನುವ ಹೆಸರನ್ನು ಯಾವ ಕಾರಣಕ್ಕೂ ಇಡಲು ಬಿಡಬಾರದಿತ್ತು ಎಂದು ತನ್ನನ್ನೇ ಬಯ್ದುಕೊಂಡ. ಏನಾದರೂ ಕಾರಣ ಹೇಳಿ ಹೆಂಡತಿ ಮಗಳನ್ನು ಕರೆತರಬಾರದಿತ್ತು ಎಂದುಕೊಂಡ. ಹೊಟೇಲು ತಲುಪಿದರೂ ತನ್ನ ಸಮಸ್ಯೆಗೆ ಯಾವ ಸಮಂಜಸ ಉತ್ತರವೂ ದೊರಕದೇ, ಹೇಗೆ ಆಗುತ್ತೋ ಹಾಗೆ ಆಗಲಿ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ. 

ಮೊದಲೇ ಬುಕ್ ಮಾಡಿರುವ ಹೋಟೀಲು ತಲುಪಿದಾಗ ಆಗಲೇ ಸಂಜೆ ಆಗಿತ್ತು. ಎಲ್ಲ ಕ್ಲಾಸ್‍ಮೇಟುಗಳೂ ಆಗಲೇ ಮುಖ್ಯ ಸಭಾಂಗಣಕ್ಕೆ ಹೋಗಿಯಾಗಿತ್ತು. ಹಾಗಾಗಿ ಅಮರನಿಗೆ ಯಾವ ಗೆಳೆಯರೂ ಸಿಗಲಿಲ್ಲ. 

ರೂಮಿಗೆ ಬಂದವರೇ ಸ್ನಾನ ಮಾಡಿ, `ಪುನರ್ಮಿಲನ`ಕ್ಕಾಗಿಯೇ ಖರೀದಿಸಿದ ಹೊಸ ಬಟ್ಟೆಗಳನ್ನು ಮೂವರೂ ಹಾಕಿಕೊಂಡರು. ಉಷಾ ಮದುವೆಯ ಮನೆಗೆ ಹೋಗುವವಳಂತೆ ಶೃಂಗಾರ ಮಾಡಿಕೊಂಡು ನಳನಳಿಸುತ್ತಿದ್ದಳು. ಎಂದೂ ಅಷ್ಟಾಗಿ ಹೊಗಳದ ಅಮರ `ಚೆನ್ನಾಗಿ ಕಾಣುತ್ತಿದ್ದೀಯಾ,` ಎಂದು ಹೆಂಡತಿಯನ್ನು ಹೊಗಳಿದ. ಮಗಳೂ ಚೆನ್ನಾಗಿ ಡ್ರೆಸ್ ಮಾಡಿದ್ದಳು, `ಸೋ ಕ್ಯೂಟ್,` ಎಂದು ಮಗಳ ಕೆನ್ನೆಗೆ ಮುತ್ತನಿಟ್ಟ. `ಏನು ಯಜಮಾನರು, ಇವತ್ತು ಭಾರೀ ಮೂಡಿನಲ್ಲಿ ಇರುವಂತಿದೆ!` ಎಂದು ಉಷಾ ತಮಾಷೆ ಮಾಡಿದಳು. ಮಗಳ ಮುಂದೆಯೇ ಹೆಂಡತಿಯ ಕೆನ್ನೆಗೂ ಒಂದು ಮುತ್ತನಿತ್ತ. ಮಗಳು ಖುಷಿಯಲ್ಲಿ ನಕ್ಕಳು. ಲಿಫ್ಟಿನಿಂದ ಇಳಿದು `ಪುನರ್ಮಿಲನ` ನಡೆಯುತ್ತಿರುವ ಹೊಟೀಲಿನ ಸಭಾಂಗಣದತ್ತ ಹೊರಡಲು ಹೊಟೇಲಿನ ಲಾಬಿಗೆ ಬಂದರು. 

ಹೆಂಡತಿ ಮಗಳನ್ನು ಹೊಟೇಲ್ ಲಾಬಿಯಲ್ಲಿ ಕೂರಲು ಹೇಳಿ, ಸಭಾಂಗಣ ಎಲ್ಲಿದೆ ಎಂದು ರೆಸೆಪ್ಷೆನ್ನಿನಲ್ಲಿ ಕೇಳಿಕೊಂಡು ಬರುತ್ತೇನೆ ಎಂದು ಅಮರ ರಿಸೆಪ್ಷನ್ನಿಗೆ ಬಂದು, ಅಲ್ಲಿರುವ ಹುಡುಗನಿಗೆ ಕೇಳಿದ.

ಅಷ್ಟರಲ್ಲಿ ಹಿಂದಿನಿಂದ ಯಾರೋ ಬಂದು ಅವನ ಕಣ್ಣು ಮುಚ್ಚಿದರು. ಯಾರು ಎಂದು ಅಮರನಿಗೆ ಗೊತ್ತಾಗದಿದ್ದರೂ ಬಳೆಗಳ ಸದ್ದು ಮತ್ತು ಪರ್ಫ್ಯೂಮಿನ ವಾಸನೆಯಿಂದ ಹೆಣ್ಣು ಎನ್ನುವುದಂತೂ ಗೊತ್ತಾಯಿತು. ಬಂದಿದ್ದು ರಿ-ಯುನಿಯನ್ನಿಗೆ ತಾನೆ, ತನಗೆ ಪ್ರೇಮಾಳನ್ನು ಬಿಟ್ಟರೆ ಇನ್ಯಾರೂ ಸನಿಹದ ಗೆಳತಿಯರಿರಲಿಲ್ಲ. ಕಾಲೇಜಿನಲ್ಲಿ ಇರುವಾಗ ಒಂದೇ ಒಂದು ದಿನವೂ ಸಲಿಗೆಯಿಂದ ಭುಜವನ್ನೂ ತಟ್ಟಿರದ ಹುಡುಗಿ, ಈಗ ಹಿಂದಿನಿಂದ ಬಂದು ಕಣ್ಣು ಮುಚ್ಚುವುದೆಂದರೆ!  ಅವಳು ಪ್ರೇಮಾ ಅಲ್ಲದಿದ್ದರೆ ಅಥವಾ ತನ್ನನ್ನು ಇನ್ನಾರೋ ಎಂದು ಅಂದುಕೊಂಡು ಬೇರೆ ಯಾರೋ ಕ್ಲಾಸ್‍ಮೇಟ್ ಹುಡುಗಿ ತನ್ನ ಕಣ್ಣು ಮುಚ್ಚಿದ್ದರೆ ಎಂದು ಅಂದುಕೊಂಡು, `ಯಾರು? ಹು ಈಸ್ ಇಟ್?` ಎಂದ. 

ಅತ್ತ ಕಡೆಯಿಂದ ಯಾವ ಉತ್ತರವೂ ಬರಲಿಲ್ಲ. ಅಮರನ ಕಣ್ಣಿನ ಮೇಲಿನ ಬಿಗಿತ ಹೆಚ್ಚಾಯಿತು. ಅಮರನಿಗೆ ಬೇರೆ ದಾರಿಯೇ ಇರಲಿಲ್ಲ, `ಪ್ರೇಮಾ!` ಎಂದ. ಕಣ್ಣು ಕಟ್ಟಿದ್ದ ಕೈ ಸಡಿಲಿತು. ತಿರುಗಿ ನೋಡಿದರೆ, ಸಾಕ್ಷಾತ್ ಪ್ರೇಮಾ ಸಕಲ ಶೃಂಗಾರದೊಂದಿಗೆ ಸೀರೆಯುಟ್ಟು ಮುಖದಲ್ಲಿ ಮಿಲಿಯನ್ ವ್ಯಾಟ್ ಬೆಳಕು ಸೂಸಿ ನಗುತ್ತಿದ್ದಳು. 

`ನನ್ನನ್ನು ಮರೆತೇ ಬಿಟ್ಟಿದ್ದೀಯೇನೋ ಅಂದುಕೊಂಡಿದ್ದೆ, ಪರವಾಗಿಲ್ಲ, ಇನ್ನೂ ನನ್ನ ನೆನಪಿದೆಯಲ್ಲ,` ಎಂದು ಪಾಶ್ಯಾತ್ಯ ದೇಶದಲ್ಲಿ ಭೇಟಿಯಾದಾಗ ಮಾಡುವಂತೆ ಅಮರನನ್ನು ತಬ್ಬಿಕೊಂಡು ಕೆನ್ನೆಯ ಹತ್ತಿರ ಕೆನ್ನೆ ತಂದು ಹಿಂದೆ ಸರಿದಳು. ಅವಳ ತಾಕಿಯೂ ತಾಕದ ದೇಹ, ಕೆನ್ನೆ ಮತ್ತು ಕೇಶರಾಶಿಗೆ ಒಂದು ಕ್ಷಣ ಅಮರ ಮೈಮರೆತ; ಅವಳ ಮೈಗಂಧ ಮೂಗಿನಿಂದ ಹೊರಬಿಡುವ ಮನಸ್ಸಿಲ್ಲದೇ ಉಸಿರು ಹಿಡಿದೇ ನಿಂತ. ಕಾಲೇಜಿನಲ್ಲಿ ಒಟ್ಟಿಗಿದ್ದ ಐದೂವರೆ ವರ್ಷದಲ್ಲಿ ಒಂದೇ ಒಂದು ಸಲವೂ ಇಷ್ಟು ಸನಿಹ ಅವಳ ಹತ್ತಿರ ಬಂದಿರಲಿಲ್ಲ. 

ಲಾಬಿಯಲ್ಲಿ ಮಗಳ ಜೊತೆ ಏನೋ ಮಾತಾಡುತ್ತ ಕುಳಿತ ಉಷಾ ಇದನ್ನು ಗಮನಿಸದೇ ಇರಲಿಲ್ಲ.

`ಹೇಗಿದ್ದೀಯಾ? ಯಾವಾಗ ಬಂದೆ? ನೀನು ಬರುತ್ತೀಯೋ ಇಲ್ಲವೋ ಅಂದುಕೊಂಡಿದ್ದೆ,` ಎಂದ.

`ನಾನು ಅಷ್ಟೇ. ನೀನಂತೂ ಯಾರ ಜೊತೆನಲ್ಲೂ ಸಂಪರ್ಕದಲ್ಲಿಲ್ಲ, ನೀನು ಬರುವುದಿಲ್ಲ ಎಂದೇ ತುಂಬ ಜನ ಹೇಳಿದ್ದರು. ಇನ್ ಫ್ಯಾಕ್ಟ್, ನಿನ್ನನ್ನು ನೋಡಿ ನನಗೆ ಆಶ್ಯರ್ಯವೇ ಆಯಿತು. ಏನೋ ಎಷ್ಟು ವರ್ಷವಾಯಿತೋ? ಎಷ್ಟೊಂದು ಮಾತಾಡಲು ಇದೆಯೋ?` ಎಂದಳು.

`ನೀನೊಬ್ಬಳೇ ಬಂದಿರುವೆಯೋ, ಇಲ್ಲಾ ಎಲ್ಲರೂ ಬಂದ್ದಿದ್ದೀರೋ?` ಎಂದು ಕೇಳಿದ.

`ಎಲ್ಲಾ ಬಂದ್ದಿದ್ದೇವೆ, ನೀನು?` ಎಂದಳು.

ಅದೇ ಸಮಯಕ್ಕೆ ಅವರತ್ತಲೇ ನಡೆದುಕೊಂಡು ಬರುತ್ತಿದ್ದ ಗಂಡಸು ಮತ್ತು ಹುಡುಗನನ್ನು. 

`ಇವನು ನನ್ನ ಗಂಡ ರಾಜ್ ಮತ್ತು ಒಬ್ಬನೇ ಮಗ` ಎಂದು ಪರಿಚಯಿಸಿ, ಗಂಡನಿಗೆ, `ಇವನು ನನ್ನ ಕ್ಲಾಸ್‍ಮೇಟ್` ಎಂದು ಪರಸ್ಪರ ಪರಿಚಯ ಮಾಡಿದಳು. 

ಅಮರ ಕೈಕುಲುಕಿ, `ಹಾಯ್, ನಾನು ಅಮರ ಚರಂತಿಮಠ, ನೈಸ್ ಮೀಟಿಂಗ್ ಯು, ರಾಜಶೇಖರ ಕೃಷ್ಣೇಗೌಡ,` ಎಂದ. ಅಮರನಿಗೆ ತನ್ನ ಗಂಡನ ಪೂರ್ತಿ ಹೆಸರು ನನಪಿರುವುದನ್ನು ಕೇಳಿ ಪ್ರೇಮಾ ಹುಬ್ಬೇರಿಸಿ ಅಮರನತ್ತ ನೋಡಿದಳು. 

ರಾಜಶೇಖರ ಅವಕ್ಕಾಗಿ ಒಂದು ಕ್ಷಣ ಗಲಿಬಿಲಿಗೊಂಡಂತೆ ಕಂಡ, ತಕ್ಷಣವೇ ಸಾವರಿಸಿಕೊಂಡು, `ಹಾಯ್, ನೈಸ್ ಮೀಟಿಂಗ್ ಯು, ಅಮರ್` ಎಂದ. ಅಮರ ಅದನ್ನು ಗಮನಿಸದೇ ಇರಲಿಲ್ಲ.

ಲಾಬಿಯಲ್ಲಿ ಕೂತ ಉಷಾ ಈಗ ಮೈಯೆಲ್ಲ ಕಣ್ಣಾಗಿ ರಿಸೆಪ್ಷನ್ನಿನಲ್ಲಿ ನಡೆಯುತ್ತಿರುವುದನ್ನೆಲ್ಲ ನೋಡುತ್ತಿದ್ದಳು; ತನಗಿಂತ ವಯಸ್ಸಾದ ಹೆಂಗಸೊಂದು ಸಕಲ ಅಲಂಕಾರ ಭೂಷಿತೆಯಾಗಿ ಚಿಕ್ಕ ಹುಡುಗಿಯಂತೆ ಹಿಂದಿನಿಂದ ತನ್ನ ಗಂಡನ ಕಣ್ಣು ಮುಚ್ಚುವುದು, ಇಬ್ಬರೂ ತಬ್ಬಿಕೊಳ್ಳುವುದು, ಕಿಲಕಿಲ ನಗುವುದನ್ನು ನೋಡುತ್ತಲೇ ಇದ್ದಳು. ಅಮರ ಉಷಾಳನ್ನು ಕರೆದ. ಉಷಾ ಗಂಟು ಮುಖ ಹಾಕಿಕೊಂಡು ಮಗಳನ್ನು ಕರೆದುಕೊಂಡು ರಿಸೆಪ್ಷೆನ್ನಿಗೆ ಬಂದಳು. 

ಪ್ರೇಮಾಳಿಗೆ ತನ್ನ ಹೆಂಡತಿಯ ಪರಿಚಯ ಮಾಡಿಸಿದ, `ಇವಳು ನನ್ನ ಹೆಂಡತಿ, ಉಷಾ, ಮತ್ತು ಮಗಳು ಪ್ರೇಮಾ,` ಎಂದ. ಪ್ರೇಮಾಳ ಮುಖದಲ್ಲಿ ಒಂದು ತೆಳುವಾದ ನಗು ಮೂಡಿ, ಅಮರನತ್ತ ಓರೆನೋಟ ಬೀರಿ, ಉಷಾಳ ಕೈ ಕುಲುಕಿದಳು. ಉಷಾ ಕೂಡ ಕೈಕುಲುಕಿ (ಕೃತಕವಾಗಿ) ಮುಗುಳ್ನಕ್ಕಳು. ಅವಳ ಆತ್ಮವಿಶ್ವಾಸ, ಚೆಲುವು, ನಿಲುವು, ಶೃಂಗಾರಗಳನ್ನು ನೋಡಿ ಈರ್ಷೆಯಾದರೂ ತೋರಿಸಿಕೊಳ್ಳಲಿಲ್ಲ.  

ಅಮರ ಹೆಂಡತಿಯತ್ತ ತಿರುಗಿ, `ಇವರು ರಾಜಶೇಖರ ಕೃಷ್ಣೇಗೌಡ, ಅಮೇರಿಕದಲ್ಲಿ ಡಾಕ್ಟರು, ಇವಳು ಅವರ ಹೆಂಡತಿ, ನನ್ನ ಕ್ಲಾಸ್-ಮೇಟ್,` ಎಂದ. 

ಪ್ರೇಮಾ ಕೈ ಚಾಚಿ ಉಷಾಳ ಕೈ ಕುಲುಕಿ ಹತ್ತಿರ ಬಂದು ತಬ್ಬಿಕೊಂಡು, ‘ನಾನು ಪ್ರೇಮಾ,’ ಎಂದಳು. 

ಇಬ್ಬರು `ಪ್ರೇಮಾ`ರ ನಡುವೆ ನಿಂತ ಉಷಾಳ ಮುಖದ ಬಣ್ಣವೇ ಬದಲಾಯಿತು. ಒಂದು ಕ್ಷಣ ತನ್ನ ಮಗಳು ‘ಪ್ರೇಮಾ’ನ್ನೂ ಇನ್ನೊಂದು ಕ್ಷಣ ಅಮರನ ಕ್ಲಾಸ್‍ಮೇಟ್ ‘ಪ್ರೇಮಾ’ಳನ್ನೂ ನೋಡಿದಳು. 

ನಂತರ ಏನು ಮಾಡುವುದೆಂದು ತೋಚದೇ, ತನಗಾದ ಆಘಾತವನ್ನು ಮುಚ್ಚಿಕೊಳ್ಳಲು ಕಣ್ಣು ತಿರುಗಿಸಿದಾಗ, ಅವಳ ದೃಷ್ಟಿ ಅಪ್ಪನ ಕೈಹಿಡಿದು ನಿಂತಿದ್ದ ಪ್ರೇಮಾಳ ಮಗನ ಮೇಲೆ ಬಿತ್ತು. ತನ್ನನ್ನು ಸ್ಥಿಮಿತಕ್ಕೆ ತಂದುಕೊಳ್ಳಲು, ಒಣಗಿಹೋದ ತುಟಿಯಲ್ಲೇ ಹುಡುಗನ ಕೆನ್ನೆ ಸವರಿ `ಎಷ್ಟು ಕ್ಯೂಟಾಗಿದ್ದಾನೆ ನಿಮ್ಮ ಮಗ‘, ಎಂದು, ‘ಏನು ಮರಿ ನಿನ್ನ ಹೆಸರು?` ಎಂದು ಕೇಳಿದಳು. 

ಹುಡುಗ ಹೇಳಿದ, `ಅಮರ್`.

(ಮುಗಿಯಿತು)

ಅಮರಪ್ರೇಮ (ಕತೆ) – ಕೇಶವ ಕುಲಕರ್ಣಿ

ಭಾಗ 1: ಇಸ್ವಿ 1987 

ಅಮರನಿಗೆ ಪ್ರೇಮಾಳನ್ನು ನೋಡಬೇಕು ಎನ್ನುವ ಅದಮ್ಯ ಹಂಬಲ ಹುಟ್ಟಿದ್ದು ಇದೇ ಮೊದಲ ಸಲವೂ ಅಲ್ಲ, ಕೊನೆಯ ಸಲವೂ ಅಲ್ಲ. 

ಅಂಥ ಒಂದು ಬಯಕೆ ಅಮರನಲ್ಲಿ ಹುಟ್ಟಿದ್ದು, ತನ್ನ ಮತ್ತು ಉಷಾಳ ಮದುವೆಯ ಆಮಂತ್ರಣ ಪತ್ರಿಕೆ ಕೈಗೆ ಸಿಕ್ಕಾಗ. ಅಪ್ಪ-ಅಮ್ಮ ಗೊತ್ತು ಮಾಡಿದ ಹುಡುಗಿಯಾಗಿದರೂ, ಅಮರನಿಗೆ ಉಷಾ ಮೊದಲ ನೋಟಕ್ಕೇ ಇಷ್ಟವಾಗಿದ್ದಳು, ಮೊದಲ ಮಾತಿನಲ್ಲೇ ಆತ್ಮೀಯಳಂತೆ ಕಂಡಿದ್ದಳು. ನಿಶ್ಚಿತಾರ್ಥವಾದ ಮೇಲೆ ಪುಣೆಯಿಂದ ಹುಬ್ಬಳ್ಳಿಗೆ ಬಂದಾಗಲೆಲ್ಲ ಉಣಕಲ್ ಕೆರೆ, ನೃಪತುಂಗ ಬೆಟ್ಟ, ಕರ್ನಾಟಕ ವಿಶ್ವವಿದ್ಯಾಲಯ, ಅಪ್ಸರಾ ಸುಜಾತಾ ಥೇಟರುಗಳ ತುಂಬೆಲ್ಲ ಓಡಾಡಿದ್ದರು, ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅನ್ನುವಂತೆ. 

ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ತರಲು ಅಮರ ಪ್ರಿಂಟಿಂಗ್ ಪ್ರೆಸ್ಸಿಗೆ ಹೋಗಿದ್ದ. ಕೈಯಲ್ಲಿ ಐನೂರು ಆಮಂತ್ರಣ ಪತ್ರಗಳನ್ನು ಹಿಡಿದು, ಅದರಲ್ಲಿಯ ಒಂದು ಕಾರ್ಡನ್ನು ತೆಗೆದು, ಆ ಕಾರ್ಡಿನಲ್ಲಿ ತನ್ನ ಭಾವಿ ಮಡದಿ, ‘ಉಷಾ‘ ಎಂಬ ಹೆಸರನ್ನು ನೋಡಿ ಪುಲಕಿತಗೊಂಡು, ಆ ಹೆಸರಿನ ಮೇಲೆ ಕೈಯಾಡಿಸಿ, ಕಣ್ಣು ಮುಚ್ಚಿ ಆ ಹೆಸರಿನ ಮೇಲೊಂದು ಮುತ್ತು ಕೊಡಬೇಕು ಎಂದು ಕಾರ್ಡನ್ನು ತುಟಿಯ ಬಳಿ ತಂದದ್ದೇ, ಆ ಹೊಸ ಮದುವೆ ಕಾರ್ಡಿನ ವಾಸನೆ ಮೂಗಿಗೆ ಬಡಿದು, ಇದ್ದಕ್ಕಿದ್ದಂತೆ ಪ್ರೇಮಾಳನ್ನು ನೋಡಬೇಕು ಅನಿಸಿಬಿಟ್ಟಿತು. ಇಂಥ ರೋಮ್ಯಾಂಟಿಕ್ ಮೂಡಿನಲ್ಲಿ ಇರಬೇಕಾದರೆ ಪ್ರೇಮಾಳ ನೆನಪು ಏಕೆ ಆಯಿತು, ಅವಳನ್ನು ನೋಡುವ ಆಸೆ ಯಾಕೆ ಹುಟ್ಟಿತು ಎಂದು ತನ್ನ ಮೇಲೆ ತನಗೆ ಕೋಪ ಬಂದಿತು. 

***

1976ನಲ್ಲಿ ಎಂ.ಬಿ.ಬಿ.ಎಸ್ ಓದಲು ‘ಮೈಸೂರು ಮೆಡಿಕಲ್ ಕಾಲೇಜು’ ಸೇರಿದಾಗಿನಿಂದಲೂ ಅಮರನ ಕಣ್ಣಿದ್ದುದು ತನ್ನ ಜೊತೆಗೇ ಓದುತ್ತಿದ್ದ, ಒಂದೇ ಬ್ಯಾಚಿನಲ್ಲಿದ್ದ, ದಿನವೂ ಸಿಗುತ್ತಿದ್ದ ಪ್ರೇಮಾಳ ಮೇಲೆ. ಅಮರ ಚರಂತಿಮಠ ಜಮಖಂಡಿಯವನು, ಪ್ರೇಮಾ ಗೌಡ ಬೆಂಗಳೂರಿನವಳು. ಅಮರ ಲಿಂಗಾಯತ, ಪ್ರೇಮಾ ಒಕ್ಕಲಿಗಳು. ಅಮರ ಶಾಲಾಮಾಸ್ತರನ ಮಗ, ಪ್ರೇಮಾ ಇಂಜಿನಿಯರನ ಮಗಳು. ಅಮರನ ಮನೆಯಲ್ಲಿ ಒಬ್ಬಳು ಅಕ್ಕ, ಇಬ್ಬರು ತಂಗಿಯರು ( ತಂಗಿಯರ ಮದುವೆಯ ಜವಾಬ್ದಾರಿ ಅಮರನದು ಎನ್ನುವುದು ಅಲಿಖಿತ ನಿಯಮ), ಪ್ರೇಮಾಳೇ ಅವಳ ಮನೆಯಲ್ಲಿ ಹಿರಿಯಳು, ಅವಳಿಗೆ ಒಬ್ಬ ತಮ್ಮ. ಅಮರ ಕನ್ನಡ ಮಾಧ್ಯಮ, ಪ್ರೇಮಾ ಇಂಗ್ಲೀಷ್ ಮೀಡಿಯಂ. ಅಮರ ಸಂಕೋಚದ ಮುದ್ದೆ, ಪ್ರೇಮಾ ಉತ್ಸಾಹದ ಬುಗ್ಗೆ. ಅಮರನಿಗೆ ಹಿಂದಿ ಹಾಡುಗಳೆಂದರೆ ಪ್ರಾಣ, ಪ್ರೇಮಾಳಿಗೆ ಇಂಗ್ಲೀಷ್ ಹಾಡುಗಳ ಹುಚ್ಚು. ಒಟ್ಟಿನಲ್ಲಿ ಅವರಿಬ್ಬರೂ ‘ಮೈಸೂರು ಮೆಡಿಕಲ್ ಕಾಲೇಜಿ’ನಲ್ಲಿ ಒಂದೇ ಕ್ಲಾಸಿನಲ್ಲಿ ಅದರಲ್ಲೂ ಒಂದೇ ಬ್ಯಾಚಿನಲ್ಲಿ ಇರುತ್ತಾರೆ ಎನ್ನುವುದರ ಹೊರತಾಗಿ, ಇಬ್ಬರಲ್ಲೂ ಹೊಂದುವ ಒಂದೇ ಒಂದು ಗುಣವೂ ಇರಲಿಲ್ಲವಾದರೂ, ಅಮರನಿಗೆ ಪ್ರೇಮಾ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದ್ದಳು.   

ಮೊದಲ ವರ್ಷದ ಅಂಗರಚನಾಶಾಸ್ತ್ರದಿಂದ ಹಿಡಿದು ಕೊನೆಯ ವರ್ಷದ ಕೊನೆಯ ಕ್ಲಿನಿಕ್‍ವರೆಗೆ ಇಬ್ಬರೂ ಒಂದೇ ಬ್ಯಾಚಿನಲ್ಲಿದ್ದರು. ಏಕವಚನದಲ್ಲಿ ಮಾತಾಡುತ್ತಾರೆ ಎನ್ನುವುದನ್ನು ಬಿಟ್ಟರೆ ಅವರಿಬ್ಬರ ನಡುವೆ ಅಂಥ ಸಲಿಗೆ ಏನೂ ಇರಲಿಲ್ಲ. ಗುಂಪಿನಲ್ಲಿ ಎಲ್ಲರೂ ಮಾತಾಡುವಂತೆ ಮಾತಾಡುತ್ತಿದ್ದರು. ಆದರೆ ಅಮರ ಅವಳು ಬೆಳಿಗ್ಗೆ ಸಿಗುವುದನ್ನೇ ಕಾಯುತ್ತ ಪ್ರತಿ ರಾತ್ರಿ ನಿದ್ದೆ ಹೋಗುತ್ತಿದ್ದ. ಅಮರನಿಗೆ ಕನಸುಗಳನ್ನು ಹೆಣೆಯಲು, ಅವಳ ಒಂದು ‘ಗುಡ್ ಮಾರ್ನಿಂಗ್’, ಒಂದು ಮುಗುಳ್ನಗು, ಒಂದು ಹಿಡಿಯಷ್ಟು ಮಾತು ಸಾಕಾಗುತ್ತಿತ್ತು. ತನಗೆ ಅವಳನ್ನು ಕಂಡರೆ ಇಷ್ಟ ಎನ್ನುವ ಸುಳಿವನ್ನು ಅವಳಿಗೇನು, ತನ್ನ ಹಾಸ್ಟೇಲಿನ ರೂಮ್‍ಮೇಟ್ ಮಲ್ಲಿಕಾರ್ಜುನನಿಗೂ ಬಿಟ್ಟುಕೊಟ್ಟಿರಲಿಲ್ಲ. ಎಲ್ಲಿ ಅವಳ ಆ ಒಂದು ನಗು ಮತ್ತು ಒಂದಿಷ್ಟು ಮಾತು ಕೂಡ ಕಳೆದು ಹೋಗಿ ಬಿಡುವುದೋ ಎನ್ನುವ ಭಯ. ಗುಂಪಿನಲ್ಲಿ ಗೋವಿಂದನಾಗಿ ಕ್ಯಾಂಟೀನಿಗೆ ಹೋಗುತ್ತಿದ್ದ, ಆಗಾಗ ಡಿನ್ನರಿಗೆ ಗೆಳೆಯರೆಲ್ಲ ಸೇರಿ ಆರ್-ಆರ್-ಆರ್-ಗೆ (ಮೈಸೂರಿನ ಪ್ರಸಿದ್ಧ ಆಂಧ್ರದ ಚಿಕನ್ ಬಿರಿಯಾನಿ ಸಿಗುವ ಹೊಟೇಲು) ಹೋಗುತ್ತಿದ್ದರು (ಪ್ರೇಮಾ ಚಿಕನ್ ಬಿರಿಯಾನಿ ತಿನ್ನುವಾಗ, ತಾನು ಸೊಪ್ಪಿನ ಸಾರು ಹಾಕಿಕೊಂಡು ಅನ್ನ ತಿನ್ನುತ್ತಿದ್ದ). ಬೈಕಿನಲ್ಲಿ ಚಾಮುಂಡಿ ಬೆಟ್ಟಕ್ಕೋ, ಕನ್ನಂಬಾಡಿಗೋ (ಕೆ ಆರ್ ಎಸ್ ಆಣೆಕಟ್ಟು) ಹೋಗುತ್ತಿದ್ದರು; ಅಂಥ ದಿನಗಳಲ್ಲಿ ಅವಳು ಒಬ್ಬಳೇ ಒಂದೈದು ನಿಮಿಷ ಮಾತಿಗೆ ಸಿಕ್ಕರೂ ಆಕಾಶದಲ್ಲಿ ಹಾರಾಡುತ್ತಿದ್ದ. ಇಷ್ಟೆಲ್ಲ ಆದರೂ ಅಮರ ನಾಕೂವರೆ ವರ್ಷದಲ್ಲಿ ಪ್ರೇಮಾಳ ಜೊತೆ ಒಂದೇ ಒಂದು ಗೆರೆ ಮುಂದೆ ದಾಟಲಿಲ್ಲ, ಒಂದೇ ಒಂದು ಮಾತು ಹೆಚ್ಚು ಆಡಲಿಲ್ಲ. 

ಎಂ.ಬಿ.ಬಿ.ಎಸ್ ಮುಗಿದು ಜ್ಯೂನಿಯರ್ ಡಾಕ್ಟರ್ (ಇಂಟರ್ನ್‍‍ಶಿಪ್) ಆಗಿ ಕೆಲಸ ಬರುತ್ತಿದ್ದಂತೆ ಅಮರ ಸ್ವಲ್ಪ ಚಿಗುರಿಕೊಂಡ, ಏಕೆಂದರೆ ಮೊಟ್ಟಮೊದಲ ಬಾರಿಗೆ ಸ್ಟೈಪೆಂಡ್ ಎಂಬ ಹೆಸರಿನಲ್ಲಿ ಕೈಯಲ್ಲಿ ಒಂಡಿಷ್ಟು ದುಡ್ಡು ತಿಂಗಳೂ ತಿಂಗಳೂ ಕೈಬರುವ ದಿನಗಳವು. ಮೊಟ್ಟಮೊದಲ ಬಾರಿಗೆ ಅವಳ ಜೊತೆ ಕಾಲೇಜ್ ಕ್ಯಾಂಟೀನಿನಲ್ಲಿ ಒಬ್ಬನೇ ಕೂತು ಕಾಫಿ ಕುಡಿಯುತ್ತಿದ್ದ. ಕಲ್‍ಬಿಲ್ಡಿಂಗನ್ನೂ ದಾಟಿ, ಧನ್ವಂತ್ರಿ ರೋಡಿನ ‘ಗಾಯತ್ರಿ ಭವನ’ದಲ್ಲಿ ಅವಳೊಟ್ಟಿಗೆ ದೋಸೆ ತಿನ್ನುತ್ತಿದ್ದ. ಪ್ರೇಮಾ ಕೂಡ ಅವನು ಕರೆದಾಗಲೆಲ್ಲ ಖುಷಿ ಖುಷಿಯಲ್ಲಿ ಬರುತ್ತಿದ್ದಳು. ಆರು ತಿಂಗಳು ಮುಗಿಯುತ್ತಿದ್ದಂತೆ ಅವರ ರೂರಲ್ ಪೋಸ್ಟಿಂಗುಗಳು ಶುರುವಾದವು. ಆಗ ಅಮರನು ಎಲ್ಲೊ, ಪ್ರೇಮಳು ಏಲ್ಲೋ. ಆಗಿನ್ನೂ ಮೊಬೈಲು ಇಂಟರ್ನೆಟ್ಟು ಯಾವುದೂ ಇರಲಿಲ್ಲ. ಹೀಗಾಗಿ ಅವರಿಬ್ಬರ ಸಂಪರ್ಕ ಮತ್ತು ಭೇಟಿ ಹೆಚ್ಚು ಕಡಿಮೆ ನಿಂತೇ ಹೋಯಿತು. ಇತ್ತ ಪಿ.ಜಿ ಎಂಟ್ರನ್ಸ್ ಪರೀಕ್ಷೆ ಕೂಡ ಹತ್ತಿರ ಬರುತ್ತಿತ್ತು. ಎಲ್ಲರೂ ಪರೀಕ್ಷೆಯ ತಯಾರಿಯಲ್ಲಿ ತೊಡಗಿದರು. ಅಮರನೂ ಓದಲು ಕೂತ, ಒಳ್ಳೆಯ ಕಡೆ ಪಿ.ಜಿ ಸೀಟು ಸಿಕ್ಕಿದರೆ ಪ್ರೇಮಾಳಿಗೆ ತನ್ನ ಮನಸ್ಸಿನ ಹಂಬಲ ಹೇಳಿ ಬಿಡುವ ಆಸೆಯಿಂದ ಎಲ್ಲರಿಗಿಂತ ತುಸು ಚೆನ್ನಾಗಿಯೇ ಓದಿದ. ಎಂಟ್ರನ್ಸ್ ಬರೆಯುವಾಗ ಪ್ರೇಮಾ ಸಿಕ್ಕಿದಳು, ಪರೀಕ್ಷೆ ಮುಗಿದ ಮೇಲೆ ಗೆಳೆಯರ ಗುಂಪಿನಲ್ಲಿ `ಮೈಲಾರಿ`ಗೆ ಹೋಗಿ ದೋಸೆ ತಿಂದು, ಅಲ್ಲಿಂದ ಚಾಮುಂಡಿ ಬೆಟ್ಟಕ್ಕೆ ಹೋಗಿ ತಮಗೆ ಓಳ್ಳೆಯ ರ‍್ಯಾಂಕ್‌ ಬರಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದರು. ಆಗ ಪ್ರೇಮಾ ಅವನ ತಲೆಗೆ ತಿಲಕವನ್ನು ಇಟ್ಟು `ಬೆಸ್ಟ್ ಆಫ್ ಲಕ್` ಹೇಳಿದಳು. ಚಾಮುಂಡೇಶ್ವರಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದ ಅಮರನಿಗೆ ಆಕಾಶಕ್ಕೆ ಮೂರೇ ಗೇಣು.    

ಜ್ಯೂನಿಯರ್ ಡಾಕ್ಟರ್ ಮುಗಿಯುವ ಸಮಯದಲ್ಲಿ ಪಿ.ಜಿ ಎಂಟ್ರನ್ಸಿನ ಫಲಿತಾಂಶ ಬಂತು. ಅಮರನಿಗೆ ಒಳ್ಳೆಯ ರ‍್ಯಾಂಕ್‌ ಬಂದ್ದಿತ್ತು, ಅವನ ರ‍್ಯಾಂಕಿಗೆ ಅವನಿಗೆ ಒಳ್ಳೆಯ ಕಡೆ ಸೀಟು ಸಿಗುವುದು ಖಾತ್ರಿ ಇತ್ತು. ರಿಸಲ್ಟು ಗೊತ್ತಾದ ತಕ್ಷಣ ಮೊಟ್ಟಮೊದಲು ಅವನಿಗೆ ಹೇಳಬೇಕು ಅನಿಸಿದ್ದು ಪ್ರೇಮಾಳಿಗೆ. ಗೈನೆಕಾಲಾಜಿ ಪೋಸ್ಟಿಂಗಿನಲ್ಲಿದ್ದ ಪ್ರೇಮಾಳಿಗೆ ವಿಚಾರ ತಿಳಿಸಲು ಲಗುಬಗೆಯಿಂದ ನಡೆದ. ಪ್ರೇಮಾಳಿಗೆ ಕೂಡ ಒಳ್ಳೆಯ ರ‍್ಯಾಂಕ್‌ ಬಂದಿತ್ತು. ಚಲುವಾಂಬಾ ಆಸ್ಪತ್ರೆಯ ಹತ್ತಿರ ಹೋಗುತ್ತಿರಬೇಕಾದರೆ, ಪ್ರೇಮಾ ಕೂಡ ಅಷ್ಟೇ ಲಗುಬಗೆಯಿಂದ ಹೊರಬರುತ್ತಿದ್ದಳು. ಅಮರನನ್ನು ನೋಡುತ್ತಿದ್ದಂತೆ ಅವಳ ಕಣ್ಣುಗಳೂ ಅರಳಿದವು, ದೂರದಿಂದಲೇ ಕೈಯಾಡಿಸಿದಳು. ಇಬ್ಬರೂ ಹತ್ತಿರ ಬರುತ್ತಿದ್ದಂತೆ, ಇಬ್ಬರೂ ಒಟ್ಟಿಗೇ `ಕಾಂಗ್ರ್ಯಾಟ್ಸ್` ಹೇಳಿದರು, ನಂತರ ಇಬ್ಬರೂ ಒಟ್ಟಿಗೇ ನಕ್ಕರು, ನಂತರ ಮತ್ತೆ ಒಟ್ಟಿಗೇ `ಕಾಂಗ್ರಾಟ್ಸ್` ಹೇಳಿದರು, ಮತ್ತೆ ನಕ್ಕರು. ಅಮರನಿಗೆ ಪಿಜಿ ಸೀಟು ಸಿಕ್ಕಿದ್ದು ಸಾರ್ಥಕವೆನಿಸಿಬಿಟ್ಟಿತು. ಇಬ್ಬರೂ ಹೊಸ ಊರಿನಲ್ಲಿ (ಮುಂಬೈ ಅಥವಾ ದಿಲ್ಲಿ) ಒಂದೇ ಕಾಲೇಜಿನಲ್ಲಿ ಪಿ.ಜಿ ಮಾಡಬಹುದು, ತನ್ನ ಪ್ರೇಮ ಚಿಗುರೊಡೆಯಬಹುದು ಎಂದೆಲ್ಲ ಅವನ ಮುಂದಿನ ಮೂರು ವರ್ಷದ ಕನಸುಗಳು ಮೂರು ಸೆಕೆಂಡಿನಲ್ಲಿ ಅವನ ಮನಸ್ಸಿನ ಪರದೆಯ ಮೇಲೆ ಚಲಿಸಿದವು. ಆಗ ಪ್ರೇಮಾ ತನ್ನ ಬ್ಯಾಗಿನಿಂದ ಒಂದು ಲಕೋಟೆಯನ್ನು ಕೊಟ್ಟಳು. ಅದೊಂದು ಗ್ರೀಟಿಂಗ್ ಕಾರ್ಡು ತರಹ ಇತ್ತು, ಅದು `ಕಾಂಗ್ರ್ಯಾಚುಲೇನ್` ಕಾರ್ಡಿರಬಹುದು, ಅದರೊಳಗೆ ಪ್ರೇಮಾ ತನ್ನ ಪ್ರೇಮಪತ್ರವನ್ನು ಇಟ್ಟಿರಬಹುದು ಎಂದುಕೊಂಡ. ಲಕೋಟೆಯನ್ನು ಕೈಗೆ ತಗೆದುಕೊಂಡಾಗ ಅವನ ಹೃದಯ ಬಡಿತ ನಗಾರಿಯಾಗಿ ಎಲ್ಲಿ ಪ್ರೇಮಳಿಗೆ ಕೇಳಿಸಿಬಿಡುತ್ತೋ ಎಂದು ನಾಚಿಕೊಂಡ. 

`ಇಲ್ಲೇ ತೆಗೆಯಬಹುದಾ?` ಎಂದ.

`ಪ್ಲೀಸ್,` ಎಂದಳು ಪ್ರೇಮಾ. ಅವಳ ಕಣ್ಣುಗಳು ಮಿಂಚುತ್ತಿದ್ದವು.

ಲಕೋಟೆ ಹರಿದರೆ, ಒಳಗೆ ಕಾರ್ಡು. ಕಾರ್ಡು ಹೊರ ತೆರೆದರೆ ಲಗ್ನಪತ್ರಿಕೆ! ಅದೂ ಪ್ರೇಮಾಳ ಲಗ್ನಪತ್ರಿಕೆ!! 

ಹುಡುಗನೂ ಡಾಕ್ಟರಂತೆ, ಅಮೇರಿಕದಲ್ಲಿ ಪಿ.ಜಿ ಮಾಡುತ್ತಿದ್ದಾನಂತೆ, ತನಗಿಂತ ಬರೀ ಮೂರು ವರ್ಷ ದೊಡ್ಡವನಂತೆ, ಬೆಂಗಳೂರಿನವನಂತೆ, ಬೆಂಗಳೂರಿನಲ್ಲೇ ಎಂ.ಬಿ.ಬಿ.ಎಸ್ ಮಾಡಿದ್ದಂತೆ, ಫ್ಯಾಮಿಲಿ ಫ್ರೆಂಡ್ಸ್ ಅಂತೆ, ಮದುವೆ ಮುಂದಿನ ತಿಂಗಳು ಬೆಂಗಳೂರಿನಲ್ಲಂತೆ, ಖಂಡಿತ ಬರಬೇಕಂತೆ, ಪಿ.ಜಿ.ಯನ್ನು ಅಮೇರಿಕದಲ್ಲೇ ಮಾಡುತ್ತಾಳಂತೆ, ಇನ್ನೂ ತುಂಬಾ ಜನರಿಗೆ ಕಾರ್ಡು ಕೊಡಬೇಕಂತೆ…ಎಂದೆಲ್ಲ ಹೇಳಿ ಪ್ರೇಮಾ ಹೊರಟು ಹೋದಳು. 

ಅಮರ ಕಾರ್ಡನ್ನು ಹಿಡಿದು ಏನೂ ತೋಚದೇ ನಿಂತುಬಿಟ್ಟ. ಕಾರ್ಡಿನ ಮೇಲಿನ ಪ್ರೇಮಾಳ ಹೆಸರಿನ ಪಕ್ಕದಲ್ಲಿ ಇರುವ `ಡಾ. ರಾಜಶೇಖರ ಕೃಷ್ಣೇಗೌಡ` ಎನ್ನುವ ಹುಡುಗನ ಹೆಸರನ್ನು ಬೆರಳಿನಿಂದ ಮುಚ್ಚಿ, ಲಗ್ನಪತ್ರಿಕೆಯನ್ನು ಮುಖದ ಹತ್ತಿರ ತಂದು, `ಪ್ರೇಮಾ` ಎನ್ನುವ ಹೆಸರಿನ ಮೇಲೆ ಒಂದು ಸಲ ತುಟಿ ಆಡಿಸಿದ, ಮೂಗಿಗೆ ಘಮ್ಮೆಂದು ಲಗ್ನಪತ್ರಿಕೆಯ ವಾಸನೆ! 

***

ಅದೇ ವಾಸನೆ! ತನ್ನ ಲಗ್ನಪತ್ರಿಕೆಗೂ ಅದೇ ವಾಸನೆ! ಅದಕ್ಕೇ ಪ್ರೇಮಾಳ ನೆನಪಾದದ್ದು. ಅದಕ್ಕೇ ಪ್ರೇಮಾಳನ್ನು ನೋಡುವ ಆಸೆ ಮೂಡಿದ್ದು ಎಂದು ಅಮರ ತನಗೆ ತಾನೇ ಸಮಾಧಾನ ಮಾಡಿಕೊಂಡು, ತನ್ನ ಮತ್ತು ಉಷಾಳ ಲಗ್ನಪತ್ರಿಕೆಗಳನ್ನು ಹಿಡಿದುಕೊಂಡು ಪ್ರಿಂಟಿಂಗ್ ಪ್ರೆಸ್ಸಿನಿಂದ ಹೊರಬಂದ. 

ಆದರೆ ದಿನ ಕಳೆದಂತೆ ಅಮರನಿಗೆ ಪ್ರೇಮಾಳನ್ನು ನೋಡಬೇಕು ಎನ್ನುವ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. ತನ್ನ ನಿಶ್ಚಿತಾರ್ಥ ಆಗಿದೆ, ತನ್ನ ಭಾವಿ ಪತ್ನಿ ಉಷಾ, ತಾನು ಅವಳ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೇನೆ. ಅತ್ತ ಪ್ರೇಮಾ ಮದುವೆಯಾಗಿ ದೂರದ ಅಮೇರಿಕಕ್ಕೆ ಹೋಗಿದ್ದಾಳೆ. ಅಂಥದರಲ್ಲಿ ಪ್ರೇಮಾಳನ್ನು ನೋಡಬೇಕು ಎನ್ನುವ ಆಸೆ ಪದೇ ಪದೇ ಮೂಡಿದ್ದಕ್ಕೆ ತನ್ನ ಬಗ್ಗೆ ತನಗೇ ಕಳವಳವಾಯಿತು. ಅವಳ ಮದುವೆಗೆ ಹೋಗಿದ್ದರೆ ಬಹುಷಃ ಇಂಥ ಹುಚ್ಚು ಆಸೆ ಮೂಡುತ್ತಿರಲಿಲ್ಲ ಎನಿಸಿತು. ಅವಳ ಹತ್ತಿರ ಮಾತಾಡಿ ಅವಳಿಗೆ ಈಗ ಆಗುತ್ತಿರುವ ತನ್ನ ಮದುವೆಯ ಬಗ್ಗೆ ಹೇಳಿದರೆ ಈ ಭ್ರಾಂತಿ ಕಳೆಯಬಹುದು ಎನಿಸಿತು.

ಎಂ.ಬಿ.ಬಿ.ಎಸ್ ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲರ ಹೆಸರು, ಜನ್ಮದಿನಾಂಕ ಮತ್ತು ಮನೆಯ ಫೋನ್ ನಂಬರ್ ಇರುವ ಒಂದು ಚಿಕ್ಕ ಹೊತ್ತಿಗೆಯನ್ನು ಎಲ್ಲರಿಗೆ ಕೊಟ್ಟಿದ್ದರು. ಆಗಿನ್ನೂ ಮೊಬೈಲು, ಇ-ಮೇಲು ಇರಲಿಲ್ಲವಲ್ಲ. ಅದರಲ್ಲಿ ಹುಡುಕಿ ಪ್ರೇಮಾಳ ಬೆಂಗಳೂರಿನ ಮನೆಗೆ ಎಸ್.ಟಿ.ಡಿ ಬೂತಿನಿಂದ ಫೋನ್ ಮಾಡಿದ. ಪ್ರೇಮಾಳ ಅಮ್ಮ ಫೋನ್ ಎತ್ತಿಕೊಂಡರು. 

`ಓ ಅಮರನಾ? ಪ್ರೇಮಾ ನಿನ್ನ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಾಳಪ್ಪಾ. ಏನು? ನಿನ್ನ ಮದುವೆನೇನಪ್ಪಾ? ತುಂಬ ಸಂತೋಷ ಆಯ್ತಪ್ಪಾ! ಅವಳು ಅಮೇರಿಕದಿಂದ ಫೋನ್ ಮಾಡಿದಾಗ ಪ್ರೇಮಾಗೂ ಹೇಳ್ತೀನಪ್ಪಾ. ಅವಳಿಗೂ ತುಂಬ ಸಂತೋಷ ಆಗುತ್ತಪ್ಪಾ` ಎಂದು ಬಿಡದೇ ಮಾತಾಡಿದರು. 

ಪ್ರೇಮಾಳ ಅಮೇರಿಕದ ನಂಬರು ಕೇಳಬೇಕು ಎಂದುಕೊಂಡವನು ಕೇಳದೇ ಹಾಗೆಯೇ ಫೋನು ಇಟ್ಟುಬಿಟ್ಟ. 

(ಮುಂದುವರೆಯುವುದು…)