ವ್ಯಾಕುಲತೆ ಫಲಿತಾಂಶ  ಮಂಕುತಿಮ್ಮ

ನಲ್ಮೆಯ ಓದುಗರಿಗೆ ನಮಸ್ಕಾರ. 

‘ಕನ್ನಡ ನಾಡಿನ ವೀರ ರಮಣಿಯ 
ಗಂಡುಭೂಮಿಯ ವೀರನಾರಿಯ 
ಚರಿತೆಯ ನಾನು ಹಾಡುವೆ’.. 
ಈ ಗೀತೆ ಆಕಾಶವಾಣಿಯಲ್ಲಿ ಹರಿದು ಬರುತ್ತಿದ್ದರೆ ಮಕ್ಕಳಾದ ನಮಗೆ  ಮೈಯೆಲ್ಲಾ ರೋಮಾಂಚನ..ಧಮನಿ ಧಮನಿಯಲ್ಲೂ ನಾಡಭಕ್ತಿಯ ಸಂಚಲನ. ಈ ಚಿತ್ರದುರ್ಗ, ಕೋಟೆ , ಮದಕರಿನಾಯಕರನ್ನು ಜನ ಮಾನಸದಲ್ಲಿ ಶಾಶ್ವತವಾಗಿಸಿದ್ದೇ ನಮ್ಮ ತ.ರಾ.ಸು. ಅವರು. ಅದೆಂಥ ಅದ್ಭುತ ಪಾತ್ರಪ್ರಪಂಚದ ಸೃಷ್ಟಿಕರ್ತ !! ಹಂಸಗೀತೆಯ ಭೈರವಿ ವೆಂಕಟಸುಬ್ಬಯ್ಯನವರನ್ನು , ದುರ್ಗಾಸ್ತಮಾನದ ಓಬವ್ವ ನಾಗತಿಯನ್ನು ಮರೆಯಲಾದೀತೇ? ಐತಿಹಾಸಿಕ ಕಾದಂಬರಿಗಳ ನಿಜವಾದ ಛವಿ ಅರಿಯಬೇಕಾದರೆ ಅವರ ‘ನೃಪತುಂಗ'ದಂಥ ಕಾದಂಬರಿಗಳನ್ನೋದಬೇಕು. ನಾಡು ತನ್ನ ಪುಣ್ಯಪ್ರಭೆಯಿಂದ ಕಂಡ  ಅಂಥ ಅಸಾಮಾನ್ಯ ಸಾಹಿತಿಗೆ ಜನುಮದಿನದ (ಏಪ್ರಿಲ್ 21, 1920) ಶುಭಾಶಯಗಳು.

‘ಬೇಸನ್ ಕಿ ಸೊಂಧಿ ರೋಟಿ ಪರ್ ಖಟ್ಟಿ ಚಟ್ನಿ ಜೈಸಿ ಮಾ
ಯಾದ್ ಆತಿ ಹೈ ಚೌಕಾ -ಬಾಸನ್
ಚಿಮಟಾ ಫುಕನಿ ಜೈಸಿ ಮಾ
ಆಧಿ ಸೋಯಿ ಆಧಿ ಜಾಗಿ
ಥಕಿ ದೋಪೆಹರ್ ಜೈಸಿ ಮಾ...
ಪಂಕಜ್ ಉದಾಸ್ ರ ಗಜಲ್ ನಂತೆ ಯಾವ್ಯಾವುದೋ ಕಾರಣಕ್ಕೆ  ಎಲ್ಲೆಲ್ಲೋ ಕಾಡುತ್ತದೆ ಅಮ್ಮನ ನೆನಪು ನಮ್ಮೆಲ್ಲರಿಗೂ.  ನಮ್ಮನ್ನು ಹೆತ್ತು, ಹೊತ್ತು ತಿರುಗಿದ ಅಮ್ಮನ ಬೆನ್ನು ಬಾಗಿ, ಮೊಣಕಾಲು ಮುಷ್ಕರ ಹೂಡಿದಾಗ, ಬೇಕೆಂದಾಗ ಅವರ ಸಮಯಕ್ಕೆ ಆಗದ ನಮ್ಮಂಥ ಅನಿವಾಸಿಗಳ ಆ ‘ಗಿಲ್ಟ್’ ಬಹುಶ: ಬೇರಾರಿಗೂ ಸುಲಭಕ್ಕೆ ಅರ್ಥವಾಗುವಂಥದ್ದಲ್ಲ. ಆ ತಳಮಳ, ತಹತಹಿಕೆಗಳನ್ನೂ, ಅದಕ್ಕೆ ಕಂಡುಕೊಂಡ ತಾತ್ಕಾಲಿಕ  ಉಪಶಮನಗಳನ್ನೂ ತುಂಬ ಮಾರ್ಮಿಕವಾಗಿ ಮನಮುಟ್ಟುವಂತೆ ತಮ್ಮ ಚಿಕ್ಕ-ಚೊಕ್ಕ ಲೇಖನದಲ್ಲಿ ಚಿತ್ರಿಸಿದ್ದಾರೆ ಉಮೇಶ ನಾಗಲೋತಿಮಠ ಅವರು.

ಜೀವನ ಚಕ್ರದಲ್ಲಿ ಏರು-ಇಳಿವು, ನೋವು-ನಲಿವು, ಸರಸ-ವಿರಸ, ಸಿಹಿ-ಕಹಿ ಎಲ್ಲ ಇರತಕ್ಕದ್ದೇ. ಮನವ ಮಾಗಿಸಲು, ಹಣ್ಣಾಗಿಸಲು ಪ್ರಕೃತಿ ಹೂಡಿದ ತಂತ್ರವಿರಬಹುದೇನೋ?! ಬನ್ನಿ..ತಾವೇ ರಚಿಸಿ ಜೊತೆಗೆ ಸುಂದರವಾದ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ ಮೇಟಿಯವರು. ಅವರ ‘ ಜೀವನ ಚೈತ್ರ’ ದಲ್ಲೊಂದು ಜೀಕು ಜೀಕಿ ಬರೋಣ. ಹಾಡಿದವರಾರೆಂದಿರಾ? ಚೈತ್ರದಲ್ಲಿ ಕೋಗಿಲೆ ತಾನೇ ಹಾಡುವುದು? ಅನಿವಾಸಿಯ ಕೋಗಿಲೆ ಅಮಿತಾ ರವಿಕಿರಣ ಅವರ ದನಿಯಲ್ಲಿ.
ಓದಿ..ಆಸ್ವಾದಿಸಿ..ಎರಡು ಸಾಲು ಅನಿಸಿಕೆ ಬರೆಯಲು ಮರೆಯದಿರಿ.

~ ಸಂಪಾದಕಿ

ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು

ನನ್ನ ವಯಸ್ಸಾದ ತಾಯಿಯನ್ನ ಊರಲ್ಲೇ ಬಿಟ್ಟು ವಿದೇಶಕ್ಕೆ ಕಾರಣಾಂತರದಿಂದ ಬಂದ ವೈದ್ಯ ನಾನು.ತಾಯಿಯನ್ನ ನನ್ನಲ್ಲಿಗೆ ಕರೆಸಿಕೊಂಡರೂ ಅವಳಿಗೆ ಇಲ್ಲಿ ಯಾರೂ ಮಾತನಾಡಲು ಇಲ್ಲವೆಂದು ಎರುಡು ಮೂರು ತಿಂಗಳಲ್ಲೇ ಬೇಸರವಾಗಿ ಮರಳಿ ತನ್ನ ಊರಿಗೆ ಹೊರಟು ನಿಲ್ಲುತ್ತಿದ್ದಳು. 

ಕೊರೊನ ನಂತರ ಊರಲ್ಲಿ ಒಬ್ಬಳೇ . ಪಕ್ಕದ ಮನೆಯವರ ಹತ್ತಿರ ಮಾತನಾಡಬಹುದು ಅಷ್ಟೇ . 
ಇದನ್ನೇ ವಿಷಯ ತಲೆಯಲ್ಲಿ ಇಟ್ಟುಕೊಂಡು ವೈದ್ಯನಾದ ನಾನು ಆಸ್ಪತ್ರೆಗೆ ಕೊರೊನ ರೋಗಿಗಳ ಸೇವೆಗೆ ಹೋಗಿದ್ದೆ. ಅಂದು ಇಲ್ಲಿಯ ಬಿಳಿ ಅಜ್ಜಿ (ಗಂಟಲು ಕ್ಯಾನ್ಸರ ಚಿಕಿತ್ಸೆ ಮುಗಿದ ಮೇಲೆ )ಮೂಗಿನಲ್ಲಿ ಹಾಕಿದ ನಳಿಕೆ ಯಾವುದೊ ಕಾರಣದಿಂದ ಬಂದ ಆಗಿ ೧ದಿನ ಪೂರ್ತಿ ಅನ್ನ ನೀರಿಲ್ಲದೆ ಬಳಲಿ ಆಸ್ಪತ್ರೆಗೆ ಬಂದಿದ್ದಳು . 
ನಾನು ನನ್ನ ಸ್ವ ರಕ್ಷಣಾ ಕವಚ (personal protective equipment)ಧರಿಸಿ ಅವಳಿದ್ದ ಕೊಠಡಿಗೆ ಹೋಗಿ ಮಾತನಾಡಿಸಿದಾಗ ಅವಳು ನನ್ನ ಕೈ ಗಟ್ಟಿಯಾಗಿ ಹಿಡಿದು “ಅಯ್ಯೋ ಮಗನೇ ಬೇಗ ಬಂದಿದಕ್ಕೆ ಧನ್ಯವಾದಗಳು , ೧-೨ ದಿನದಿಂದ ನನ್ನ ಹೊಟ್ಟೆಗೆ ಏನೂ ನೀರೂ ಆಹಾರ ಹೋಗಿಲ್ಲ , ದಯಮಾಡಿ ಬೇಗ ಇದಕ್ಕೆ ಪರಿಹಾರ ಹುಡುಕು , ನನಗೆ ಬಹಳ ಭಯವಾಗುತ್ತಿದೆ “ಎಂದಳು . ನಾನು ಅವಳನ್ನು ನೋಡುವಾಗ ನನ್ನ ತಾಯಿಯ ಮುಖವೇ ಕಾಣತೊಡಗಿತು ನಾನು ವೈದ್ಯನಾದರೂ ದೇವರನ್ನು ನಂಬುವ ಆಸ್ತಿಕ . ನನ್ನ ಕೆಲಸ ಪ್ರಾರಂಭಿಸುವ ಮೊದಲು ಮನದಲ್ಲೇ ದೇವರನ್ನ ಪ್ರಾರ್ಥಿಸಿ “ನೀನೇ ಈ ಅಜ್ಜಿಯ ಚಿಕಿತ್ಸೆ ಮಾಡುತ್ತಿರುವೆ ಭಗವಂತಾ , ನಾನು ನಿಮಿತ್ತ ಮಾತ್ರ “ ಎಂದೆ . ಅವಳ ಕೈಗಳು ನನ್ನ ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದವು . ನನಗೆ ನನ್ನ ತಾಯಿಯೇ ನನ್ನ ಕೈ ಹಿಡಿದುಕೊಂಡಿದ್ದಾಳೆ ಎಂದೆನಿಸತೊಡಗಿತು. ನನ್ನ ಕೆಲಸ ಪ್ರಾರಂಭಿಸಿದೆ 
ನಾನು ಕ್ಷ ಕಿರಣ ಪರೀಕ್ಷೆ , ಅಂತರದರ್ಶಕ ಪರೀಕ್ಷೆ , ರಕ್ತ ಪರೀಕ್ಷೆ ಇತ್ಯಾದಿ ಮಾಡಿ ಕ್ಯಾನ್ಸರ ಗಡ್ಡೆ ಏನಾಗಿದೆ ಎಂದು ತಿಳಿದುಕೊಂಡು ಕೊನೆಗೆ ಅವಳಿಗೆ ಹೊಸ ನಳಿಕೆಯನ್ನು ಬಹಳ ಜಾಗರೂಕತೆಯಿಂದ ಹಾಕಿ ಅವಳ ಹೊಟ್ಟೆಗೆ ಅನ್ನ ನೀರು ಹೋಗುವಂತೆ ಮಾಡಿದೆವು . 

ಚಿಕಿತ್ಸೆ ಫಲಕಾರಿಯಾಗಿ ಆ ಮಹಾಮಾತೆ ನನ್ನ ಕೈ ಹಿಡಿದು ತನ್ನ ತುಟಿಗಳಿಂದ ಚುಂಬನದ ಮಳೆಗರೆದು ಧನ್ಯವಾದ ಹೇಳಿ ನನ್ನ ಆಶೀರ್ವದಿಸಿದಳು. . ಅವಳ ಆಶೀರ್ವಾದದ ಸ್ಪರ್ಶ ನಾನು ಹಾಕಿಕೊಂಡ ಎರೆಡೆರೆಡು ಗಾವ್ನ್ ದಾಟಿ ಬಂದು ನನಗೆ ತಲುಪಿದಂತೆ ಅನ್ನಿಸಿತು . ನನಗೋ ಚಿಕಿತ್ಸೆ ಫಲಕಾರಿಯಾದ ಖುಷಿ , ನನ್ನ ತಾಯಿ ದೂರದಲ್ಲಿರುವ ದುಃಖ , ಆ ಅಜ್ಜಿಯ ಪ್ರೀತ್ಯಾಶೀರ್ವಾದ , ಈ ಎಲ್ಲವೂ ಒಟ್ಟಿಗೆ ಬಂದು ಕಣ್ಣಂಚು ಒದ್ದೆಯಾದವು . 
ದೇವರು ನೀಡಿದ್ದ ಸಂದೇಶ ಬಲು ಸ್ಪಷ್ಟವಾಗಿತ್ತು .

ನಮ್ಮಲ್ಲಿ ಅನೇಕರು ನಮ್ಮ ಊರು ಬಿಟ್ಟು ಬೇರೆ ಊರಿಗೆ , ದೇಶ ಬಿಟ್ಟು ಬೇರೆ ದೇಶಕ್ಕೆ ಕಾರಣಾಂತರಗಳಿಂದ ಚಲಿಸಿದ್ದೇವೆ , ನೆಲೆಸಿದ್ದೇವೆ . ನಮ್ಮಗಳ ತಂದೆ ತಾಯಂದಿರು ಹಲವು ಕಾರಣದಿಂದ ನಮ್ಮಗಳ ಜೊತೆ ಇರದಿದ್ದರೂ , ಅವರ ಹಾರೈಕೆ , ಆಶೀರ್ವಾದ ನಮ್ಮ ಮೇಲೆ ಸದಾ ಇರುತ್ತದೆ . ಹಾಗೆಯೇ ನಮ್ಮ ಮನದ ಮಿಡಿತ , ಪ್ರಾರ್ಥನೆ ಅವರಿಗಾಗಿ ಸದಾ ಇರುತ್ತದೆ . 

ನಮ್ಮೆಲ್ಲರ ತಂದೆ-ತಾಯಿ , ಗುರು ಹಿರಿಯರನ್ನು ಸದಾ ದೇವರು ಆಯುರಾರೋಗ್ಯದಿಂದ ಇಡಲಿ ಎಂಬುದೇ ನಮ್ಮೆಲ್ಲರ 
ಆಶಯವಲ್ಲವೇ ?

~ ಇಂಗ್ಲೆಂಡ ಕನ್ನಡಿಗ 
Dr Umesh Nagalotimath

ಜೀವನ ಚೈತ್ರ

ರಚನೆ ಹಾಗೂ ಸಂಗೀತ ಸಂಯೋಜನೆ ಶಿವ್ ಮೇಟಿ, ಗಾಯನ – ಅಮಿತ ರವಿಕಿರಣ

ವಿಶ್ವಭಾರತಿಗೆ ಕನ್ನಡದಾರತಿ..ಚನ್ನವೀರ ಕಣವಿಯವರಿಗೆ ಅನಿವಾಸಿಯ ಭಾವಾಂಜಲಿ

ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ
‘ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯಸಂಸ್ಕಾರಿ’... ಎಲ್ಲಾ ಶಾಲಾ-ಕಾಲೇಜುಗಳ ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಹಾಡು ಸ್ವಾಗತ ಗೀತೆಯಾಗಿಯೋ, ಪ್ರಾರ್ಥನಾ ಗೀತೆಯಾಗಿಯೋ ಅನುರಣಿಸಲೇಬೇಕಿತ್ತು ಆಗ. ಅಂತೆಯೇ ‘ನನ್ನ ದೇಶ ನನ್ನ ಜನ ನನ್ನ ಮಾನಪ್ರಾಣಧನ ತೀರಿಸುವನೇ ಅದರ ಋಣ ಈ ಒಂದೇ ಜನ್ಮದಿ’ ಎನ್ನುವ ಆಕಾಶವಾಣಿಯ ವಂದನಾದ ಕೊನೆಯ ದೇಶಭಕ್ತಿ ಗೀತೆಯೊಂದಿಗೇ ನಮ್ಮ ಹೆಚ್ಚಿನ ಬೆಳಗುಗಳು ಆರಂಭವಾಗುತ್ತಿದ್ದವು. ಕವಿಯ ಬಗ್ಗೆ ಏನೇನೂ ಗೊತ್ತಿಲ್ಲದಾಗಲೂ ಅವರ ಕವನಗಳು ಹೀಗೆ ಹಾಡಾಗಿ ಹರಿದು ಸಾಮಾನ್ಯರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿ ಬಿಡುವುದೇ ಆ ಕಾವ್ಯದ ಗೆಲುವು. 

ಸಾರ್ಥಕ ತುಂಬು ಜೀವನ ನಡೆಸಿದ  ಚೆಂಬೆಳಕಿನ ಕವಿಚೇತನ ಮಹಾಬೆಳಗಿನಲಿ ವಿಲೀನವಾಗಿದೆ. ಆದರೆ ಅರವತ್ತೆಂಟು  ವರುಷ ಜೊತೆಯಾಗಿ ದಾಂಪತ್ಯ ರಥವನ್ನೆಳೆದ ತಮ್ಮ ಪತ್ನೀವಿಯೋಗದ ಸಂದರ್ಭ ದಲ್ಲಿ ಅವರೇ ಹೇಳಿದ ಮಾತಿನಂತೆ ಹೇಳುವುದಾದರೆ –‘ಇಲ್ಲಿದ್ರು..ಇಲ್ಲೇ ಇದ್ರು..ಈಗ – ಎಲ್ಲಾ ಕಡೆ ಅದಾರ. ಇದ್ದಾಗ ಇರುವು ಇಲ್ಲಷ್ಟೇ ಇತ್ತು. ಈಗ ಸರ್ವವ್ಯಾಪಿ ಆದ್ರು. ಥೇಟ್ ಚೆಂಬೆಳಕಿನ್ಹಂಗ..’

ಸಮನ್ವಯ ಕವಿಯೆಂದೇ ಖ್ಯಾತರಾದ ಕಣವಿಯವರು ಕನ್ನಡದಲ್ಲಿ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿದವರು.ಮೃದು ಮಾತಿನ ಆದರೆ ಖಚಿತ ನಿಲುವಿನ ಸಜ್ಜನಿಕೆಯ ಕವಿಯವರು. ಧಾರವಾಡದ ಅನೇಕ ಸಾಹಿತ್ಯಿಕ  ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲಿನ ಅವರ ಉಪಸ್ಥಿತಿ ನನಗೆ ಶಾಂತವಾಗಿ,ಸದ್ದಿಲ್ಲದೇ ಬೆಳಗುವ ನಂದಾದೀಪದಂತೆ ಕಂಡದ್ದಿದೆ.
ಕಣವಿಯವರ ಕಾವ್ಯ ಮುಂಗಾರಿನ ಮಳೆಯ ಆರ್ಭಟದಂತೆಯೋ, ಶ್ರಾವಣದ ಮುಸಲಧಾರೆಯಂತೆಯೋ ಅಬ್ಬರದ್ದಲ್ಲ;ಇದ್ದೂ ಇಲ್ಲದಂತೆ ಶೃತಿ ಹಿಡಿದು ಸುರಿದು ನೆಲವ ಹದಗೊಳಿಸಿ, ಮನವ ಮುದಗೊಳಿಸುವ ಮುಂಜಾವಿನ ಸೋನೆಮಳೆ.. ‘ಬಾನ ಸಾಣಿಗೆ ಹಿಟ್ಟು ಸಣಿಸಿದಂತೆ’ ಜಿನುಗಿದ ಸೋನೆ. 

ಕವಿವರ್ಯರ ಪ್ರಸಿದ್ಧ ಗೀತೆ ‘ಹೂವು ಹೊರಳುವವು ಸೂರ್ಯನ ಕಡೆಗೆ’ ಇದರ ಬಗ್ಗೆ ಅರ್ಥಪೂರ್ಣ ಲೇಖನವನ್ನು ನಮ್ಮ ಆಹ್ವಾನದ ಮೇರೆಗೆ ಅತಿ ಕಡಿಮೆ ವೇಳೆಯಲ್ಲಿ ಸರೋಜಿನಿ ಪಡಸಲಗಿಯವರು ಬರೆದು ಕಳಿಸಿದ್ದು ಅವರ ಕವಿ-ಕಾವ್ಯ ಪ್ರೇಮವನ್ನೂ, ಅನಿವಾಸಿಯ ಬಗೆಗಿನ ಅಭಿಮಾನವನ್ನೂ ಎತ್ತಿ ತೋರಿಸುತ್ತದೆ.

ತಮ್ಮ ಶೃತಿಬದ್ಧವಾದ ಇನಿದನಿಯಲ್ಲಿ ‘ಒಂದು ಮುಂಜಾವಿನಲಿ’ ಹಾಡುವುದರ ಮೂಲಕ ಕವಿಗೆ ಗೀತನಮನ ಸಲ್ಲಿಸಿದ್ದಾರೆ ಸುಮನಾ ಧ್ರುವ್ ಅವರು.

ತಮ್ಮ ವಿದ್ಯಾರ್ಥಿದೆಸೆಯಲ್ಲಾದ ಕವಿವರ್ಯರ ಮುಖಾಮುಖಿ ಭೇಟಿಯ ಕುರಿತಾದ ಮಧುರ ನೆನಪುಗಳನ್ನು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ ಶಿವ್ ಮೇಟಿ ಹಾಗೂ ಅಮಿತಾ ರವಿಕಿರಣ್ ಅವರು.

ಕವಿಯ ಯಶೋಕಾಯಕ್ಕೆ  ಕಾಲದ-ಹಂಗಿಲ್ಲ.ಅನಂತದವರೆಗೂ ವಿಶ್ವಭಾರತಿಗೆ ಕನ್ನಡದಾರತಿ ಬೆಳಗುತ್ತಲೇ ಇರುತ್ತದೆ; ಮಂಗಳ ಜಯಭೇರಿ ಮೊಳಗುತ್ತಲೇ ಇರುತ್ತದೆ. ಮುಟ್ಟಿದರೆ ಮಾಸುತಿಹ ಮಂಜಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯು ಬಿಂಬಿಸುತ್ತಲೇ ಇರುತ್ತದೆ. ಸೋನೆಮಳೆ ಸುರಿಸುರಿದು ನೆಲದೆದೆ ಹದಗೊಳ್ಳುತ್ತಲೇ ಇರುತ್ತದೆ.
ಬನ್ನಿ ಓದುಗರೇ, ಇವತ್ತಿನ ಸಂಚಿಕೆಯನ್ನೋದಿ ಕವಿಗೊಂದು ಭಾವನಮನ ಸಲ್ಲಿಸಿ.

~ ಸಂಪಾದಕಿ

ಪರಿಚಯ 

ಧಾರವಾಡದವಳಾದ ನಾನೀಗ ಸಧ್ಯ ಬೆಂಗಳೂರು ವಾಸಿ. ಸಾಮಾನ್ಯ ಗೃಹಿಣಿ. ಚಿಕ್ಕಂದಿನಿಂದಲೂ ಹಾಡಿನ ಹುಚ್ಚು; ಸಂಯೋಜಿಸುವ, ಹಾಡುವ ಗುಂಗು.ಇದೇ ಕವಿತೆಗಳನ್ನು ಬರೆಯುವತ್ತ ಕೊಂಡೊಯ್ತು. ಓದುವ ಹವ್ಯಾಸವೂ ಹಾಗೇ.

ಈಗ ಎರಡು ಕವನಸಂಕಲನ ಹೊರ ಬಂದಿವೆ. ವೈದ್ಯ ಪತ್ನಿಯ ಅನುಭವ ಕಥನ; ಸ್ವರಚಿತ ಸಂಪ್ರದಾಯದ ಹಾಡುಗಳು ತಾಯಿ-ಮಗು ಇವೆರಡೂ ಅಚ್ಚಿನಲ್ಲಿವೆ. ನಾನು ಅನಿವಾಸಿ ಅಲ್ಲದಿದ್ದರೂ ಅನಿವಾಸಿ ಮಗನ ತಾಯಿ ನಾನು. ಅದಕ್ಕೇ ಏನೋ ಈ ಅನಿವಾಸಿ ಬಳಗ ನನ್ನದೇ ಎಂಬ ಆತ್ಮೀಯ, ಆಪ್ತ ಭಾವ.

ಚೆಂಬೆಳಕಿನ ಕವಿ - ಚೆಂಬೆಳಕಿನ ಕವಿತೆ- ನಾಲ್ಕು ಮಾತು
     "ನಾಡೋಜ, ಚೆಂಬೆಳಕಿನ ಕವಿ  ಚೆನ್ನವೀರ ಕಣವಿಯವರು ಇನ್ನಿಲ್ಲ" . ಟಿವಿ ಯಲ್ಲಿ  ಬಿತ್ತರವಾಗುತ್ತಿದ್ದ  ಸುದ್ದಿ  ಕೇಳುತ್ತಿದ್ದಂತೆಯೇ ನನಗೇ ಗೊತ್ತಿಲ್ಲದಂತೆ  ಒಂದು ಗಳಿಗೆ  ಹಾಗೇ ಸ್ತಬ್ಧವಾಗಿ  ಬಿಟ್ಟೆ. ಈ ೯೩ ರ, ಜೀವನದ  ಸಂಧ್ಯಾ ಕಾಲದಲ್ಲಿ  ಕೋರೋನಾದ  ಕರಾಳ  ಬಂಧನದಲ್ಲಿ ಸಿಲುಕಿ ,  ನಲುಗುತ್ತಿರುವ  ಆ ಜೀವ  ಸೋತು ಹೋಗಿದ್ದರೂ , ಮತ್ತೆ ಚಿಗುರೀತೇನೋ ಮಾಗಿದ ಚೇತನ  ಎಂಬ  ಅರ್ಥವಿಲ್ಲದ  ಆಸೆ  ದೂರದಲ್ಲಿತ್ತು. ಈಗ ' ದೀಪ  ಹೊತ್ತಿಸಿದ  ದೀಪವೇ  ನಂದಿ  ಹೋಯ್ತಲ್ಲ' ಎಂಬ  ದಿಗ್ಭ್ರಮೆ !
ಈಗಿದ್ದು  ಮುಂದಿನ  ಗಳಿಗೆಗೇ ಇಲ್ಲದಂತಾಗುವುದು  ಜೀವವೊಂದೇ ಏನೋ ಎಂಬ ಹತಾಶೆ ಭರಿತ  ವಿಷಾದದಲೆ  ಸುಳಿದು ಹೋಗಿ , ಕಣ್ತುಂಬಿ ತುಳುಕಿ ಅದರಲ್ಲೇ  ಆ ಮಗುವಿನ ಮನದ, ಮುಗ್ಧ ನಗೆಯ ಮೃದು ವ್ಯಕ್ತಿತ್ವ ಅದೇ ಶುಭ್ರ ನಗೆಯೊಡನೆ ತೇಲಿದ ಭಾಸ.
ಒಣ ಕಠೋರತೆ, ಅಣುಕು ಮಾತುಗಳಿಂದ ಬಲು ದೂರ  ಇದ್ದ ಆ ಭಾವಜೀವಿಯ ಎದೆ ತುಂಬಿದ ಕನಸುಗಳು ಅರಳಿ ಕವಿತೆಯಾಗಿ  ಹರಿದ  ಆ ಕೋಮಲ ಧಾರೆಯಲಿ ಮುಳುಗಿ ಹೋದೆ ನಾ, ಅವರ  ಭೇಟಿಯಾದ ಗಳಿಗೆಯ ನೆನಪಿನೊಡನೆ!
        ಧಾರವಾಡದ  ಕಲ್ಯಾಣ ನಗರದ  ಅವರ ಮನೆಯ ಹೊಸ್ತಿಲನ್ನು  ಅಳುಕುತ್ತಲೇ ತುಳಿದಾಗ ಅವರ  ಆ ತುಟಿತುಂಬ  ಹರಡಿದ  ಮೃದು ಹಾಸ, ನೀಡಿದ  ಮನದುಂಬಿದ ಸ್ವಾಗತ ," ಬಾ ಯವ್ವಾ ಬಾ  ತಂಗಿ  ಬಾ  ಒಳಗ" ಅಂದ  ಆ ಮೆತ್ತಗಿನ  ಧ್ವನಿ  ಇನ್ನೂ ಕಿವಿಯಲ್ಲಿ  ಗುಂಜಿಸುತ್ತಿದೆ. ಆ ಒಂದು  ಗಂಟೆಯಲ್ಲಿ  ಎಷ್ಟೊಂದು ಮಾತಾಡಿದೆವು! ಆದರೆ  ಅದರಲ್ಲಿ ನನ್ನ ತಲೆಗೆ ಎಷ್ಟು ಹೋಯ್ತೋ ಗೊತ್ತಿಲ್ಲ. ಅವರ  ಕವಿತೆಯಂತೆ ಇರುವ  ಆ  ವ್ಯಕ್ತಿತ್ವದಲ್ಲಿ  ಕರಗಿ  ಹೋಗಿದ್ದೆ  ನಾ! ಅಂತಹ  ಧೀಮಂತ  ಚೇತನ  ಇನ್ನು ನಮ್ಮೊಡನಿಲ್ಲ. ಆದರೆ ಅವರ  ಒಂದೊಂದು ಕವಿತೆ ಒಂದೊಂದು ಮಾತು ಹೇಳುತ್ತ ಚಿರಸ್ಥಾಯಿಯಾಗಿ ಉಳಿಯುವಂಥವೇ. ಆ ಕಾವ್ಯ- ಕವನಗಳೊಂದಿಗೆ ಅವರೂ ನಮ್ಮೊಡನೆಯೇ  ಇದ್ದಾರೆ ಎಂಬ ಹುಚ್ಚು ಸಮಾಧಾನ." ಹೂವು ಹೊರಳುವವು ಸೂರ್ಯನ ಕಡೆಗೆ....." ಎಂದು  ಅವರು  ಹಾಡಿದಂತೆ ಆ ಸ್ವಚ್ಛ ಮನದ  ಕವಿ ಆ ಶುಭ್ರತೆಯಲ್ಲೇ, ಆ ಬೆಳಕಿನಲ್ಲೇ ಒಂದಾಗಿ  ಹೋಗಿದ್ದಾರೆ. ಅವರ ಈ  ಕವಿತೆ ನನಗೆ ಅತ್ಯಂತ ಪ್ರಿಯವಾದ  ಕವಿತೆ. ಅವರಿನ್ನಿಲ್ಲದ  ಸುದ್ದಿ  ಕೇಳಿದಾಗಿನಿಂದ  ಎಷ್ಟು ಸಲ  ಆ ಹಾಡು ರತ್ನಮಾಲಾ ಪ್ರಕಾಶ ಅವರ  ಧ್ವನಿಯಲ್ಲಿ ಕೇಳಿದೀನೋ  ನನಗೇ ಗೊತ್ತಿಲ್ಲ!  ಮತ್ತೊಮ್ಮೆ ಹುಟ್ಟಿ ಬಾ ಅನ್ನುವುದು ಅದೆಷ್ಟು ವಾಸ್ತವಿಕ ಗೊತ್ತಿಲ್ಲ. ಈಗ ನಮ್ಮ ಕೈಲಿರುವುದು ಅವರ ನೆನಪಲ್ಲಿ ನಾಲ್ಕು ಹನಿ ಕಣ್ಣೀರು ಸುರಿಸುವ ಅಸಹಾಯಕತೆ ಒಂದೇ.  ನಾನೀಗ ಅವರ ಈ ಕವಿತೆಯ ಕುರಿತು ನನಗೆ ತಿಳಿದ  ಹಾಗೆ ಬರೆದ ನಾಲ್ಕು ಮಾತುಗಳೇ   ಚೆಂಬೆಳಕಿನ ಕವಿಗೆ  ನನ್ನ ಶ್ರದ್ಧಾಂಜಲಿ !  

ಹೂವು ಹೊರಳುವವು ಸೂರ್ಯನ ಕಡೆಗೆ..

ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನ ವರೆಗೆ
ಇರುಳಿನ ಒಡಲಿಗೆ  ದೂರದ ಕಡಲಿಗೆ
ಮುಳುಗಿದಂತೆ, ದಿನ  ಬೆಳಗಿದಂತೆ
ಹೊರ ಬರುವನು  ಕೂಸಿನ ಹಾಗೆ

ಜಗದ  ಮೂಸೆಯಲಿ  ಕರಗಿಸಿ  ಬಿಡುವನು
ಎಲ್ಲ  ಬಗೆಯ  ಸರಕು
ಅದಕೆ  ಅದರ ಗುಣ ದೋಷಗಳಂಟಿಸಿ
ಬಿಡಿಸಿ  ಬಿಟ್ಟ ತೊಡಕು

ಗಿಡದಿಂದುರುವ  ಎಲೆಗಳಿಗೂ ಮುದ 
ಚಿಗುರುವಾಗಲೂ  ಒಂದೆ ಹದ
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ  ಕುಳಿತಿಹನೋ ಕಲಾವಿದ

ಬಿಸಿಲ ಧಗೆಯ  ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ  ಸಂಕಟವನು ಸೋಸಲು
ಬಂದೇ ಬರುವುದು ಗಳಿಗೆ

ಸಹಜ ನಡೆದರೂ  ಭೂಮಿಯ ಲಯದಲಿ
ಪದಗಳನಿರಿಸಿದ  ಹಾಗೆ
ವಿಶ್ವದ  ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ

ನಾಲ್ಕು ಮಾತುಗಳು ಕವಿತೆ ನನಗನಿಸಿದಂತೆ -

       ನಾಡೋಜ ಕವಿ ಚೆನ್ನವೀರ ಕಣವಿಯವರ ಈ ಕವಿತೆ " ಹೂವು ಹೊರಳುವವು ಸೂರ್ಯನ ಕಡೆಗೆ....."  ಹಾಗೇ ಓದಿ, ಆಲಿಸಿದ್ರೆ ಒಂದು ಸರಳ , ಸುಂದರ ಭಾವಗೀತೆ  ಅನ್ನಿಸಿದ್ರೂ ಬಗೆದಷ್ಟು  ಗೂಢಾರ್ಥ  ಅದರೊಡಲಲ್ಲಿ ಅಂತ ನನಗನ್ನಿಸ್ತು.
 ಹೂವು  ಇಲ್ಲಿ ಸುಂದರ, ಸರಳ, ಸ್ವಚ್ಛ ಮನದ ಪ್ರತೀಕ. ಅಂತೆಯೇ  ಸಹಜವಾಗಿಯೇ ಅವು  ಸೂರ್ಯನ  ಅಂದರೆ ತಮದ ಲವಲೇಶವೂ ಇಲ್ಲದ, ಶುಭ್ರ, ಸ್ವಚ್ಛ ಪ್ರಕಾಶದ, ಅರಿವಿನ ದ್ಯೋತಕ; ಅತ್ತ ಹೊರಳಬಲ್ಲವು , ಆ ಬೆಳಕು ಪ್ರಖರವಾಗಿದ್ದರೂ. ಆದರೆ ನಾವು ಮನುಷ್ಯರು ; ಮಾನವ ಸಹಜ  ದುರ್ಬಲತೆ  ನಮ್ಮಲ್ಲಿ. ಮಾಯಾ, ಮೋಹ, ಅಹಂ ದ ಗಾಢ ಕತ್ತಲು, ತುಮುಲದಲ್ಲಿ  ಮುಳುಗಿರುವ ನಾವು ಅದನ್ನು ಜೀರ್ಣಿಸಿಕೊಳ್ಳುವ ತಾಕತ್ತೂ ಇಲ್ಲದವರು. ನಮ್ಮ ದಾರಿ ಬರಿ ಚಂದ್ರನ ವರೆಗಷ್ಟೇ; ಸೂರ್ಯನ ಪ್ರತಿಫಲಿತ ಬೆಳಕಿನ ಚಂದ್ರನ ವರೆಗಷ್ಟೇ . ಆ ಜ್ವಾಜ್ವಲ್ಯಮಾನ  ಬೆಳಕಿನೆಡೆ  ಕಣ್ಣೆತ್ತಿ ನೋಡಲೂ ಆಗದಷ್ಟು ಆಳವಾಗಿ  ಹುದುಲಿನಲ್ಲಿ  ಸಿಲುಕಿದವರು. ಆ ಇರುಳಿನ ಒಡಲಿಂದ ಸಾಗಿ  ಬೆಳಕಿನೆಡೆ ಸಾಗಲು ಸೇತುವೆಯಂತಿರುವ  ಈ ಜೀವನದ  ಕಡಲಿನಲ್ಲೇ ಮುಳುಗಿ ಅಲ್ಲೇ ಎಲ್ಲಾ ದುರ್ಬಲತೆ, ಜಂಜಾಟಗಳನ್ನೆಲ್ಲ ಕಳಚಿ ಎದ್ದು ನಿಷ್ಕಲ್ಮಶ ಮನಸಿನ ಕೂಸಿನಂತೆ  ಹೊರಬಂದರೆ ಸೂರ್ಯನತ್ತ ಹೊರಳುವ ಯೋಗ್ಯತೆ ಬಂದೀತೋ ಏನೋ ಅಂತ. ಸೂರ್ಯನು ದಿನವೂ ಇರುಳಿನೊಡಲಲ್ಲಿ ಮುಳುಗಿ, ಕಡಲಿನಿಂದ  ಬೆಳಗುತ್ತ ಕೂಸಿನ ಹಾಗೆ ಶುಭ್ರವಾಗಿ ಹೊರಬಂದು ಇದನ್ನೇ ಹೇಳ್ತಾ ಇದಾನೆ ಅಂತ ಕವಿ ಸೂಚ್ಯವಾಗಿ ಹೇಳಿದ್ದಾರೆ ಇಲ್ಲಿ. ನಿಜಕ್ಕೂ ಇದೊಂದು ಅನುಪಮ ಪ್ರತಿಮೆ.ಮಾನವನೂ ಸೂರ್ಯ ದಿನ ಬೆಳಗಿದ ಹಾಗೆ ಬೆಳಗುತ್ತ ಅಂದರೆ ತುಸು ತುಸುವಾಗಿ ತಿಳಿವು ವಿಕಸಿಸಿ, ಸ್ವಚ್ಛ ಮನದ ಬೆಳಕಲಿ ಹೊಳೆಯುತ್ತ  ಕೂಸಿನ ಹಾಗೆ ಶುಭ್ರವಾಗಿ ಹೊರಬರಲಿ ಕಡಲ ಮಡಿಲಿಂದ  ಥೇಟ್  ಆ ನೇಸರ  ಬಂದ ಹಾಗೆ  ಎಂಬುದು ಕವಿಯ ಆಶಯ. 
         ಎರಡನೇ ಚರಣದಲ್ಲಿ  ಇದನ್ನೇ ಮುಂದುವರಿಸುತ್ತ  ಕವಿ ಹೇಳ್ತಾರೆ - ಯಾರು ಹೇಗೇ ಬಂದರೂ, ಅವರ ಯಾವ ಗುಣಾವ ಗುಣಗಳನ್ನು ಗಣನೆಗೆ ತಾರದೇ ಅವರವರ ಯೋಗ್ಯತೆಗೆ ತಕ್ಕಂತೆ ಈ ಜಗದ ದಿನ ನಿತ್ಯದ ಬದುಕಿನಲ್ಲಿ ಮುಳುಗಿಸಿ ಬಿಡ್ತಾನೆ ಆತ. ಹಾಗೇ ಆ ಒಂದೇ ಮೂಸೆಯಲ್ಲಿಯೇ ಅಕ್ಕಸಾಲಿಗನಂತೆ ಕರಗಿಸಿ ಮಸೆಸಿ ಬಿಟ್ಟು, ಒರೆಗ್ಹಚ್ಚಿ ಶುದ್ಧೀಕರಿಸುವದೊಂದೇ ಆತನ ಕೆಲಸ. ಆದರೆ ಒಂದೇ ಬಾರಿಗೆ ಆಗುವುದಲ್ಲ ಅದು. ಅವರವರ ಒಳಿತು ಕೆಡುಕುಗಳ ಕರ್ಮದ ಗಂಟು ಅವರ ಬೆನ್ನಿಗೇ. ಅಲ್ಲಿ ಯಾವ ಏಚು ಪೇಚಿಲ್ಲ; ತೊಡಕು ತೊಡರಿಲ್ಲ. ಬಲು ಸ್ಪಷ್ಟ ಆ ಲೆಕ್ಕ.
        ಇನ್ನು ಈ  ಕರಗಿಸಿ ಶುದ್ಧೀಕರಿಸಿದ್ದು ಎಷ್ಟರ ಮಟ್ಟಿಗೆ ಫಲ ಕೊಟ್ಟಿದೆ  ಎಂಬುದನ್ನು ಮೂರನೇ ಚರಣದಲ್ಲಿ ಹೇಳ್ತಾರೆ ಕವಿ. ಗಿಡದಿಂದ ಉದುರುವ ಎಲೆಗೂ ಒಂದು ಮುದ ಇದೆ ಅಂತ. ನಿಜ; ಮಾಗಿದ  ಮನದ  ಪ್ರತೀಕ ಅದು. ಮನ  ಮಾಗಿ ಪಕ್ವವಾಗಿ  ತೊಟ್ಟು ಕಳಚಿ ಗಿಡದಿಂದ ಉದುರುವ ಎಲೆಯಂತಾಗಿದ್ರೂ ಆ ಹಣ್ಣಾದ ಮನದಲ್ಲಿ  ಏನೋ ಒಂದು ನಿರಾಳ, ನಿವಾಂತ ಭಾವ. ಯಾವ
ಗೊಂದಲದ  ಗೋಜಿಲ್ಲದೇ, ತಿಳಿವು ಅರಿವಿನ  ಹುಡುಕಾಟದಿ ನಲುಗದ ಸ್ಥಿತಿ ಅದು; ಸ್ಥಿತಪ್ರಜ್ಞನ ಹಾಗೆ. ತಾ ಏನು, ತನ್ನ ದಾರಿ ಎತ್ತ ಎಂಬುದರ  ಕಲ್ಪನೆ  ನಿಚ್ಚಳವಾಗಿದೆ ಈಗ ಆ‌ ಜೀವಕೆ. ಅದಕ್ಕೇ ಹೊಸ ಚಿಗುರಿನ ಹದದಂತೆಯೇ ಆ ಮನವೀಗ. ಷೇಕ್ಸ್ ಪಿಯರ್ ನ  ಕವಿತೆಯ  ನೆನಪು ಬಾರದಿರದೀಗ; ಶಿಶುವಾಗಿ ಆಗಮಿಸಿ ಶಿಶುವಿನಂತೆ ನಿರ್ಗಮನ. ನಿರ್ಗಮನ ಆದ ಹಣ್ಣೆಲೆ ಭೂಮಿ ಒಡಲು ಸೇರಿ ಮತ್ತೆ ಚಿಗುರೊಡೆಯುವುದೂ ಅಲ್ಲಿಂದಲೇ. ಆ ಹಂತದಲ್ಲಿ ಅಲ್ಲಿ ಏನು ನಡೀತದೋ ಗೊತ್ತಿಲ್ಲ, ಆಗುವುದೂ ಇಲ್ಲ. ಇದು ಜನನ- ಮರಣ - ಜನನ ಈ ಚಕ್ರದ ಸೂಚಕ. ಆ ಕಲಾವಿದ ಮತ್ತೆ ಅವುಗಳ ಗುಣದೋಷಗಳನು  ಅಂಟಿಸಿ ಕಳಿಸಬೇಕಲ್ಲ ರೂಪಿಸಿ! ಒಂದು ಹದದ ಲೆಕ್ಕ, ಅಳತೆಗೋಲು ಇಟ್ಟುಕೊಂಡೇ ಇರ್ತಾನೆ ಆ ಕಲಾವಿದ- ಅದೇ ಸೃಷ್ಟಿಕರ್ತ, ಯಾರ ಅಳಿವಿಗೂ ನಿಲುಕದವನಾತ ಎಂದು ಹೇಳ್ತಿದ್ದಾರೆ ಕವಿ.
         ಈಗ  ನಾಲ್ಕನೇ ಚರಣದಲ್ಲಿ ಕವಿ ಸಂತೈಸ್ತಿದಾರೆ ಆ ಜೀವಗಳನ, ಗುಣದೋಷಗಳ ಮೂಟೆ ಹೊತ್ತು ತಿರುಗುವ ಜೀವಗಳನ. ಈ ಹೆಣಗಾಟದ ಮಧ್ಯೆಯೂ  ಒಂದು ಸುಂದರ ಗಳಿಗೆ ಬಂದೇ ಬರತದೆ.ಸಾಗಿ ಬಂದ ದಾರಿಯ ಹಿಂದಿರುಗಿ ನೋಡಿ , ತನ್ನನ್ನೇ ತಾ ಮಥಿಸಿ ಸೋಸಿ ನೋಡಿದಾಗ  ವಿಷಯ ನಿಚ್ಚಳವಾಗಿ ಗೋಚರಿಸಿ ಒಂದು ನಿರಾಳತೆ  ಮನದಲ್ಲಿ. ಇದೇ ಆ ಹೆಣಗಾಟದ  ಗರ್ಭದಲ್ಲಿಯೇ ಇರುವ ತಂಪೆರೆವ ಹಾಯಿಯ ನೆರಳಿನೆಳೆ. ಇದನ್ನು ಗುರುತಿಸುವ ಗಳಿಗೆ ಬಂದೇ ಬರುತ್ತದೆ ಎಂಬುದು ಕವಿಯ ಧೃಡ ನಂಬಿಕೆ. ಇಲ್ಲಿ ಬಿಸಿಲಿನ ಧಗೆ ಜೀವನ ಪರ್ಯಂತದ
 ಜಂಜಾಟ, ಗುದ್ದಾಟವೇ;  ಮಾಗುವಿಕೆ ಬರೋ ತನಕ. ನಂತರ ಬರುವುದು ಮೆಲು ತಂಗಾಳಿಯ ಅಲೆ. ನಿಧಾನವಾಗಿ ಬರೋದದು. ಆ ಹಣ್ಣೆಲೆಗೆ ಮುದ ನೀಡುವುದೂ ಇದೇ.
ಇದನ್ನೆಲ್ಲ  ನೋಡಿ  ಕವಿಗೆ  ಎಲ್ಲ  ಅಂಶಗಳ ನಡೆ, ಚಲನೆಯಲ್ಲೂ ಒಂದು ಲಯಬದ್ಧತೆ, ಕ್ರಮ ಬದ್ಧತೆ ಎದ್ದು ಕಾಣುತ್ತದೆ. ಸೃಷ್ಟಿಯ ಪ್ರತಿ ಅಣು , ಪ್ರತಿ ಕಣವನ್ನೂ ವ್ಯವಸ್ಥಿತವಾಗಿ, ಸರಿಯುತ್ತಿರುವ ಸಮಯದ ಚಲನೆಯಲ್ಲೂ, ಭೂಮಿಯು ಸಾಗುವ ಗತಿಯಲ್ಲೂ ಆಚೀಚೆ ಅಲುಗಾಡದಂತೆ , ಅದರದರದೇ ಸ್ಥಳದಲ್ಲೇ ಜೋಡಿಸಿರುವುದರಲ್ಲೂ ಒಂದು ಸೌಂದರ್ಯ ಕಾಣ್ತಿದೆ , ಕವಿತೆಯ  ಲಯಬದ್ಧ ಪದ ಜೋಡಣೆಯಲ್ಲಿರುವ ಹಾಗೆ. ಅದಕ್ಕೇ ಕವಿಗೆ  ಈ ಜೀವನವೇ ಒಂದು ಕವಿತೆ ಅನಿಸಿ ಬಿಟ್ಟು, ಅದು ಈ ಜಗದ ಮೊಳಹಿನಲ್ಲಿಯೇ ಅಂದರೆ ಜೀವನದ ಉಗಮದಲ್ಲಿಯೇ ರೂಪ ತಾಳಿ ಬಿಟ್ತು ಅಂತ ಹೇಳ್ತಾರೆ. ಹೀಗೆ ಜೀವನದ ಸಾರವನ್ನು ಪೂರ್ತಿಯಾಗಿ ಹೇಳಿ ಅದನ್ನು ಕವಿತೆ ಎನ್ನುವುದು ಅನುಪಮ  ಹೇಳಿಕೆ.ಜೀವನವೇ ಕವಿತೆ ಎನ್ನುವುದು ನಿಜಕ್ಕೂ ಅಪ್ರತಿಮ ಪ್ರತಿಮೆ.

ಒಟ್ಟಿನಲ್ಲಿ ಈ ಛಂದದ ಕವಿತೆ ಮನದ ತುಂಬಾ ಯೋಚನಾ ಭಾವ ತರಂಗಗಳನೆಬ್ಬಿಸುವದಂತೂ ನಿರಂತರ ಸತ್ಯ! ಈಗ ಅವರನ್ನು ಕಳೆದುಕೊಂಡು ಮಂಕು ಕವಿದು, ಮಬ್ಬುಗತ್ತಲೆ ಆವರಿಸಿದ್ದರೂ, ಇಂತಹ ಅಪರೂಪದ ಕವಿತೆಗಳಿಂದ ಚೆಂಬೆಳಕನ್ನು ಹರಡುತ್ತಾ, ಆ ಮಬ್ಬುಗತ್ತಲೆಯ ಮಂಕನ್ನು ಸರಿಸುತ್ತಾ  ನಮ್ಮ ಜೊತೆಯಲ್ಲೇ ಇರುತ್ತಾರೆಂಬುದೂ ಅಷ್ಟೇ ಸತ್ಯ!

~ ಸರೋಜಿನಿ ಪಡಸಲಗಿ
ಬೆಂಗಳೂರು

ಒಂದು ಮುಂಜಾವಿನಲಿ..ಸುಮನಾ ಧ್ರುವ್

ವಿಶ್ವ ವಿನೂತನ ವಿದ್ಯಾ ಚೇತನ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ	
ಈ ಹಾಡನ್ನು ಅದೆಷ್ಟು ಬಾರಿ ಆ ಮೊದಲು ಹಾಡಿದ್ದೆ ಆದರೆ , ಆ ದಿನ ಒಂಥರಾ ಭಯಮಿಶ್ರಿತ ಖುಷಿ ಯಾಕೆಂದರೆ ಕವಿಯ ಎದುರೆ ಅವರ ಹಾಡು ಹಾಡುವ ಸೌಭಾಗ್ಯ ಎಲ್ಲ ಗಾಯಕರಿಗೂ ಸಿಗುವಂತದ್ದಲ್ಲ, ಆ ಒಂದು ವಿಷಯದಲ್ಲಿ ನಾನು ನಿಜಕ್ಕೂ ನಶೀಬವಾನ,ಈ ಅವಕಾಶ ನನಗೆ ಹಲವುಬಾರಿ ಸಿಕ್ಕಿದೆ. 

ಕಣವಿ ಅವರನ್ನ ಅದೇ ಮೊದಲ ಬಾರಿ ನೋಡಿದ್ದು , ಧಾರವಾಡದ ವಿದ್ಯಾವರ್ಧಕ ಸಂಘದ ಯಾವುದೋ ಕಾರ್ಯಕ್ರಮಕ್ಕೆ ವಿಶ್ವ ವಿನೂತನ ಹಾಡಲಿಕ್ಕೆಂದು ನಾವು ಕೆಲವು ಸಂಗೀತ ವಿದ್ಯಾರ್ಥಿಗಳು ಹೋಗಿದ್ದೆವು. ವಿಶ್ವವಿನೂತನ ಹಾಡಿನ ಹೊಸದೊಂದು ಸಂಯೋಜನೆಯನ್ನು ನಮ್ಮ ಉಪನ್ಯಾಸಕರಾದ ಡಾ ನಂದಾ ಪಾಟೀಲ್ ಅವರು ನಮಗೆ ಕಲಿಸಿದ್ದರು. ಹಾಡಿನ ನಂತರ "ಚಲೋ ಹಾಡಿದ್ರು ಹುಡುಗೂರು". ಅಂದು ಮುಗುಳುನಕ್ಕರು ಅವರ ಕವಿತೆಗಳಂತೆ ಅವರ ನಗುವೂ ಚಂದ ಚಂದ, ಪುಟ್ಟ ಮಗುವಿನ ನಗುವಿನಂತೆ.

ಧಾರವಾಡದಲ್ಲಿ ಇದ್ದಷ್ಟು ದಿನ ಆಗೊಮ್ಮೆ ಈಗೊಮ್ಮೆ ಸಾಹಿತ್ಯ ಸಂಗೀತ ಕಾರ್ಯಕ್ರಮದಲ್ಲಿ ಅವರ ಭೇಟಿ ಆಗುತ್ತಲೇ ಇರುತ್ತಿತ್ತು. ಈಗಿನಂತೆ selfi ಕಾಲವಾಗಿದ್ದ್ರೆ ಅದೆಷ್ಟು ಫೋಟೋಗಳ ಸಂಗ್ರಹವಾಗುತ್ತಿತ್ತೋ. ಮನಸ್ಸಲ್ಲಿ ಅಚ್ಚಾದ ಆ ನೆನಪಿನ ಚಿತ್ರಗಳನ್ನು ಅಕ್ಷರದಲ್ಲಿ ಬಿಂಬಿಸಲು ಸೋಲುತ್ತಿದ್ದೇನೆ.

ಕನ್ನಡ ಭಾವಗೀತೆಗಳ ಗುಂಗಿಗೆ ಬಿದ್ದವರು, ತಮ್ಮ ಜೀವನದ ಎಲ್ಲ ಸಂದರ್ಭಕ್ಕೂ ಒಂದು ಹಾಡನ್ನು ತಮ್ಮ ಅರಿವಿಲ್ಲದಂತೆ ಗುನುಗಿಕೊಂಡು ಬಿಡುತ್ತೇವೆ. ಹಾಗೆ ಎಂದೋ ಕೇಳಿದ ಮುಂಜಾವಾದಲಿ ಹಸಿರುಹುಲ್ಲ ಮಖಮಲ್ಲಿನಲಿ ಪಾರಿಜಾತವೂ ಹೂವು ಸುರಿಸಿದಂತೆ ಹಾಡು ಪಾರಿಜಾತ ಸಿಗದ ನಾಡಿಗೆ ಬಂದರೂ ಇಬ್ಬನಿ ತುಂಬಿದ ಹಸಿರು ಹೊದ್ದ ನೆಲವನ್ನು ಕಂಡರೆ ಪಕ್ಕನೆ ಗುನುಗಿಬಿಡುತ್ತೇನೆ. ಏಳುತ್ತಲೇ ಮಳೆ ನಾದ ಕೇಳಿದರೆ ತುಂತುರಿನ ಸೋನೆಮಳೆ ಎಂದು ಮನಸು ಹಾಡತೊಡಗುತ್ತದೆ. ಎಲ್ಲಕ್ಕಿಂತ ಹೆಚ್ಚು ಆಪ್ಯಾಯಮಾನ ಹಾಡು ಎಂದರೆ ಹೂವು ಹೊರಳುವವು ಸೂರ್ಯನ ಕಡೆಗೆ ಎನ್ನುವ ಗೀತೆ, ಈಗಲೂ ಸೂರ್ಯನತ್ತ ಮುಖಮಾಡಿದ ಹೂಗಳನ್ನು ನೋಡಿದಾಗ, ಆ ಸಾಲು ನೆನಪಾಗುತ್ತದೆ. 

~ ಅಮಿತಾ ರವಿಕಿರಣ್
ಕಣವಿಯವರ ಜೊತೆಗೆ ನನ್ನದೊಂದು ಭೇಟಿ 
ನಾವಿದ್ದ ಸಮಯದಲ್ಲಿ ಕೆಎಂಸಿಯ ಕನ್ನಡ ಸಂಘ ತುಂಬಾ ಚುರುಕಾಗಿತ್ತು . ಪ್ರತಿ ವರ್ಷ ' ಬೇಂದ್ರೆಯವರ ' ದಿನಾಚರಣೆಯನ್ನು ಆಚರಿಸುವುದು ವಾಡಿಕೆಯಾಗಿತ್ತು . ಯಾರಾದರೂ ಸಾಹಿತಿಗಳನ್ನು ಮುಖ್ಯ ಅತಿಥಿಗಳನ್ನಾಗಿ ಕರೆತರುವದು ವರ್ಷಗಳಿಂದ ನಡೆದುಬಂದ ರೂಢಿಯಾಗಿತ್ತು .
ಅದು ೧೯೯೦ ರ ಬೇಂದ್ರೆ ದಿನಾಚರಣೆ  . ನಮ್ಮ ಸಂಘದ  ಮುಖ್ಯಸ್ಥರಾಗಿದ್ದ ಡಾ . ಪಾರ್ಶ್ವನಾಥ ಸಾರರ ಮೇರೆಗೆ ಆ  ಸಲ ನಾಡೋಜ ಕವಿ ಚೆನ್ನವೀರ ಕಣವಿಯವರನ್ನು ಮುಖ್ಯ ಅತಿಥಿಯಾಗಿ ಕರೆಯಬೇಕೆಂದು ನಿರ್ಧಾರವಾಗಿತ್ತು .
ನನ್ನ ಸೌಭಾಗ್ಯವೋ ಏನೊ ನನಗೆ ಆ ಜವಾಬ್ಧಾರಿಯನ್ನು ಒಪ್ಪಿಸಲಾಗಿತ್ತು . ನಾನು ಅವರನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ . ಅವರ ಪದ್ಯಗಳನ್ನು ಪಠ್ಯ ಪುಸ್ತಕದಲ್ಲಿ ಓದಿದ್ದೆ. ಧಾರವಾಡದಲ್ಲಿ  ಇದ್ದಾಗ ಬೇಂದ್ರೆಯವರ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತಾದರೂ ಕಣವಿಯವರನ್ನು ಕಾಣುವ ಸಂದರ್ಭ ಒದಗಿ ಬಂದಿರಲಿಲ್ಲ.
ಒಂದು ಸಂಜೆ ನಾನು ಮತ್ತು ನನ್ನ ಗೆಳೆಯ ಸೇರಿ ಧಾರವಾಡಕ್ಕೆ ಪಯಣ ಬೆಳೆಸಿದೆವು. ಆಗಿನ ಸಮಯದಲ್ಲಿ ಈಗಿನಂತೆ ಮೊಬೈಲ್ ಫೋನಗಳು ಮತ್ತು ಅಂತರ್ಜಾಲದ ಅನುಕೂಲತೆಯೂ ಇರಲಿಲ್ಲ . ಅವರು ಧಾರವಾಡ ವಿಶ್ವ ವಿದ್ಯಾಲಯದ ನೌಕರರ ಕ್ವಾರ್ಟರ್ಸ್ ನಲ್ಲಿ ಇರುತ್ತಾರೆಂದು ಗೊತ್ತಿತ್ತು . ಮನೆಯ ನಂಬರನ್ನು ನಮ್ಮ ಸಾರರಿಂದ ಪಡೆದುಕೊಂಡಿದ್ದೆವು . ಸಂಜೆ ೭ ಘಂಟೆಯ ಸುಮಾರಿಗೆ ಸಿಟಿ ಬಸ್ಸ ಹಿಡಿದು ವಿಶ್ವವಿದ್ಯಾಲಯವನ್ನು ತಲುಪಿದ್ದೆವು . ಬಸ್ಸಿನಿಂದ ಕೆಳಗಿಳಿದ ಮೇಲೆ ಎಲ್ಲಿಹೋಗಬೇಕೆಂದು ಗೊತ್ತಾಗದೆ ಯಾರನ್ನಾದರೂ ಕೇಳಿದರಾಯಿತು ಎಂದು ಕಾಯುತ್ತಿದ್ದೆವು. ಅಷ್ಟರಲ್ಲಿಯೇ ನಮ್ಮ  ಹಿಂದೆಯೇ ಇನ್ನೊಬ್ಬರು ಬಸ್ಸಿನಿಂದ  ಇಳಿದರು  . ನೆಹರು ಶರ್ಟ್ ಮತ್ತು ಪಾಯಜಾಮ್ ಹಾಕಿದ್ದರು ತಲೆಯ ಮೇಲೆ ಒಂದು ಟೋಪಿ ಇತ್ತು ಮತ್ತು ಕೈಯಲ್ಲಿ  ಒಂದು ಕಾಯಿಪಲ್ಲೆ ತುಂಬಿದ ಚೀಲವಿತ್ತು . ನಾವು ಹೋಗಿ ಅವರನ್ನು ಕೇಳಿದೆವು - 'ಕಣವಿ ಸರ್ರರ್ ಮನೆಗೆ ಹೋಗಬೇಕು , ದಾರಿಯನ್ನು ಹುಡುಕುತ್ತಿದ್ದೇವೆ ನಿಮಗೇನಾದರೂ ಗೊತ್ತೇನು' ಎಂದು . ನಮ್ಮನ್ನೊಮ್ಮೆ ನೋಡಿ ಅವರೆಂದರು   ' ನಾನು ಅಲ್ಲಿಯೇ ಹೊರಟಿದ್ದೇನೆ ನೀವೂ ನನ್ನ ಜೊತೆಗೆ ಬರಬಹುದು ಎಂದು. ಅವರನ್ನೇ ಹಿಂಬಾಲಿಸಿದೆವು 
ಅವರ ಮನೆಯನ್ನು ಮುಟ್ಟಿದ್ದಾಗ ನಮಗೆ  ಗೊತ್ತಾಯಿತು ಅವರೇ ಕಣವಿಯವರೆಂದು . ನಾವೇನೋ ತಪ್ಪು ಮಾಡಿದೆವು ಎಂದು ಅನಿಸಿತ್ತು. 'ನಿಮ್ಮನ್ನು ಗೊತ್ತು ಹಿಡಿಯಲು  ಆಗಲಿಲ್ಲವೆಂದು ' ಕ್ಷಮೆಯಾಚಿಸಿದ್ದೆವು .ನಾವು ಬೆಪ್ಪಾಗಿರುವದನ್ನು ಕಂಡು ಅವರೇ ಮಾತನಾಡಿದರು . 'ಪರವಾಗಿಲ್ಲ ಬಿಡ್ರಪ್ಪಾ ! ಎಲ್ಲರೂ ಗೊತ್ತು ಹಿಡಿಯುವದಕ್ಕೆ ನಾನೇನು ಫಿಲ್ಮ್ ನಟನೇನೂ ' ಅಂತ ಎಂದಿದ್ದರು . ಬಂದ ವಿಷಯವನ್ನು ಹೇಳಿದೆವು . ಅವರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದರು. ಅಷ್ಟರಲ್ಲಿಯೇ ಅವರ ಪತ್ನಿಯವರು ಗರಂ ಚಹಾ ತಂದು ಇಟ್ಟಿದ್ದರು. ಚಹಾ  ಕುಡಿದು ಮನೆಯನ್ನು ಬಿಟ್ಟಿದ್ದೆವು . ಅವರ ಸರಳ ಜೀವನದ ಶೈಲಿಯನ್ನು ಕಂಡು ನಾನು ದಂಗಾಗಿದ್ದೆ.
೧೫ ದಿನಗಳ ನಂತರ ಅವರನ್ನು ಕಾರ್ಯಕ್ರಮಕ್ಕೆ ಕರೆ ತರಲು ಕಾರು ತೆಗೆದುಕೊಂಡು ಹೋಗಿದ್ದೆವು. ಕಾರನ್ನು  ಕಂಡು ಅವರೆಂದಿದ್ದರು ' ಇದಕ್ಕ್ಯಾಕ ಇಷ್ಟು ಖರ್ಚು  ಮಾಡಿದ್ರಿ , ಅರ್ಧ ಘಂಟೆಗೊಂದ  ಸಿಟಿ ಬಸ್ಸ ಅದಾವ ಬಸ್ಸಿನಾಗ ಹೋಗಬಹುದಿತ್ತಲ್ಲ?' ಎಂದು . ಆ ಮಾತುಗಳು ಅವರ ಸರಳ ಜೀವನಕ್ಕೆ ಇನ್ನೊಂದು ಸಾಕ್ಷಿಯಾಗಿದ್ದವು . ಅರ್ಧ ಘಂಟೆಯ ಕಾರು ಪಯಣದಲ್ಲಿ ನಮ್ಮ ಜೊತೆಗೆ ಎಷ್ಟೊಂದು ಸಲೀಸಾಗಿ  ಮಾತನಾಡಿದ್ದರು . ಅವರಿಗೆ  ತಾವೊಬ್ಬ ದೊಡ್ಡ ಕವಿ ಎಂಬ ಅಹಂಕಾರ ಸ್ವಲ್ಪವೂ ಇರಲಿಲ್ಲ . 
ಕೆಎಂಸಿ ಯ ಕನ್ನಡ ಸಂಘದ ಬಗ್ಗೆ ಮತ್ತು ಬೇಂದ್ರೆಯವರ ದಿನಾಚರಣೆ ಬಗ್ಗೆ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದರು. ಬೇಂದ್ರೆಯವರ ಬಗ್ಗೆ ಅವರಿಗೆ ತುಂಬಾ ಗೌರವವಿತ್ತು . ಅವರ  ಬಗ್ಗೆ  ಮನಸು ಬಿಚ್ಚಿ ಮಾತನಾಡಿದ್ದರು ಕಾರ್ಯಕ್ರಮದಲ್ಲಿ . 
ಅಂಥ ಸರಳ ಮತ್ತು ಶಿಸ್ತಿನ ಕವಿ ಜೀವಿಯ ಜೊತೆಗಿನ ನನ್ನ ಸಣ್ಣ ಭೇಟಿ ಮತ್ತು ಅರ್ಧಘಂಟೆಯ ಕಾರು ಪಯಣ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯೊಲ್ಲೊಂದು . ಇಲ್ಲಿ ಅದನ್ನು ನೆನಪಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ.

~ ಶಿವ ಮೇಟಿ