ಜೋಗಿಯ ಮಾಯೆ

ನಲುಮೆಯ ಓದುಗರೇ ನಮಸ್ಕಾರ. ಈ ‘ಜೋಗಿ-ಜಂಗಮ’ ಪದದಲ್ಲೇ ಅದೇನೋ ಮೋಡಿ, ಸೆಳೆತ ಕಾಣುತ್ತದೆ ನನಗೆ. ಈ ಜೋಗಪ್ಪನ ಅರಮನೆ, ತಳಮನೆಗಳು ಅಷ್ಟು ಸುಲಭಕ್ಕೆ ದಕ್ಕುವಂಥವಲ್ಲ. ಜಾನಪದದಿಂದ ತೀರ ಇತ್ತೀಚಿನ ಸಾಹಿತ್ಯದಲ್ಲೂ ಇವನ ಸಾಮ್ರಾಜ್ಯವಿದೆ. ಮರುಳ ಮಾಡಾಕ ಹೋದ ಮರುಳಸಿದ್ಧನ ನಾರಿಯೂ ಇವನ ಕೈಯಾಗಿನ ಕಿನ್ನರಿಯಾಗಿ ಮೈಯಾಗ ಬಂದ್ಹಂಗ ನುಡಿಯುತ್ತಾಳೆ; ಎಳ್ಳಿನ ಹೊಲ, ಒಳ್ಳೆಯ ಗಂಡನನ್ನು ಬಿಟ್ಟು ಇವನ ಹಿಂದೆ ನಡೆಯುತ್ತಾಳೆ. ಈ ಜೋಗಿ ಹಾಡುತ್ತಾನೆ;ಕಾಡುತ್ತಾನೆ. ಇಂಥ ಕಿಂದರಿ ಜೋಗಿಯನ್ನು ಇಂದು ಅನಿವಾಸಿಯಂಗಳಕ್ಕೆ ಕರೆತಂದಿದ್ದಾರೆ ಅನುರಾಧ ಜಗಳೂರ ಅವರು   ‘ಪುಸ್ತಕಕ್ಕೊಂದು ಕಥೆ’ ಸರಣಿಯಲ್ಲಿ.

ಬೆಳಗಿನ ತಿಂಡಿ,ಕಾಫಿ ಪೂರೈಸಿ ಮೇಲೆ ಉಪ್ಪರಿಗೆಗೆ ಹೋಗಿ ಬರೆಯತೊಡಗಿ ಮಧ್ಯಾಹ್ನದ ಊಟದ ಹೊತ್ತಿಗಾಗಲೇ ಅಂದರೆ ಸುಮಾರು 4-5 ಗಂಟೆಗಳಲ್ಲಿಯೇ ಕುವೆಂಪು ಇದನ್ನು ಬರೆದು ಮುಗಿಸಿದ್ದರಂತೆ!! (ನೆನಪಿನ ದೋಣಿಯಲ್ಲಿ.ಪುಟ ಸಂಖ್ಯೆ 724)

ತನ್ನ ರೆಕ್ಕೆಗಳಲ್ಲಿ ರಹಸ್ಯಮಯ ಕುತೂಹಲಕಾರಿ ಕಥೆಯೊಂದನ್ನು ಹೊತ್ತ  ರೆಕ್ಕೆಹುಳಗಳ ಕಥೆಯೊಂದನ್ನು ಎಂದಿನ ತಮ್ಮ ಅನನ್ಯ ಶೈಲಿಯಲ್ಲಿ ನಿಮಗಾಗಿ ತಂದಿದ್ದಾರೆ  ರಾಮಮೂರ್ತಿಯವರು. 

ಬನ್ನಿ; ಓದಿ; ಒಂದೆರಡು ಪದಗಳಲ್ಲಾದರೂ ಸರಿಯೇ..ಅನಿಸಿಕೆ ಹಂಚಿಕೊಳ್ಳಿ.ಲೇಖಕರನ್ನು ಪ್ರೋತ್ಸಾಹಿಸಿ..ಸಂಪಾದಕರನ್ನು ಪೋಷಿಸಿ.

~ ಸಂಪಾದಕಿ

ನನ್ನ ನೆಚ್ಚಿನ ಪುಸ್ತಕ(ಗಳು)

ಅನುರಾಧ ಜಗಳೂರು ಮೂಲತಃ ಮೈಸೂರಿನವರು. ಈಗ ರೆಡಿಂಗ್ನಲ್ಲಿ  ನೆಲೆಸಿದ್ದಾರೆ. ಗಣಿತ ಶಾಸ್ತ್ರದ ಅಧ್ಯಾಪಕಿ. ರೆಡಿಂಗ್ ಕನ್ನಡ ಮಿತ್ರರು (ರೆಕಮಿ) ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು. ಓದು, ಬರಹ, ಸಂಗೀತ, ಬೆಟ್ಟಗುಡ್ಡಗಳಲ್ಲಿ ನಡಿಗೆ, ತೋಟಗಾರಿಕೆ, ಮುಂತಾದವು ಪ್ರಿಯವಾದ ಹವ್ಯಾಸಗಳು.
ನನ್ನಂತಹ ಪುಸ್ತಕ ಪ್ರಿಯರಿಗೆ ‘ನಿನಗೆ ವಿಶೇಷ ಮಹತ್ವವಿರುವ, ನೆಚ್ಚಿನ ಪುಸ್ತಕ ಯಾವುದು’ ಎಂದು ಎಲ್ಲಾದರೂ ಕೇಳುವುದುಂಟೆ? ಕೇಳಿದವರು ಪ್ರಶ್ನೆಯನ್ನು ಮುಗಿಸಿ ಉಸಿರು ತೆಗೆದುಕೊಳ್ಳುವಷ್ಟರಲ್ಲಿ ನಾನು ಮುಂದು, ತಾನು ಮುಂದು ಎಂದು ನನ್ನ ಕಣ್ಣಿನ ಮುಂದೆ ೧೦-೨೦ ಪುಸ್ತಕಗಳ ನೂಕು ನುಗ್ಗಲು. ನನ್ನಂಥವರಿಗೆ ಅಂತಹ ಪ್ರಶ್ನೆಯನ್ನು ಕೇಳುವುದು ಶಾಂಪೇನ್ ಬಾಟಲಿನ ಕಾರ್ಕ್ಸ್ ತೆಗೆದ ಹಾಗೆ. ಪಾಪ, ಕೇಳಿ ತಪ್ಪು ಮಾಡಿದವರು, ಚಿಮ್ಮಿ ಹರಿಯುವ, ತಡೆದು ನಿಲ್ಲಿಸಲಾಗದ ನನ್ನ ಉತ್ತರವನ್ನು ಕೇಳಿಸಿಕೊಳ್ಳಬೇಕಾಗುವುದು. 


ನೆಚ್ಚಿನ ಪುಸ್ತಕ ಪಟ್ಟಕ್ಕೆ ಸ್ಪರ್ಧಿಸುವ ೧೦-೨೦ ಪುಸ್ತಕಗಳಲ್ಲಿ ವಿಶೇಷವಾದ ಒಂದನ್ನು ಆರಿಸುವುದಾದರೂ ಹೇಗೆ? ಗಟ್ಟಿ ಮನಸ್ಸು ಮಾಡಿ ಅವುಗಳಲ್ಲಿ  ೧೦-೧೨ನ್ನು ಹಿಂದಕ್ಕೆ ತಳ್ಳಿ, ಮಿಕ್ಕವನ್ನು ತುಲನೆ ಮಾಡಿದೆ ಎಂದುಕೊಳ್ಳಿ. ಆಗಲೂ ಸಂಕಷ್ಟವೇ. ಚಿಕ್ಕ ಹುಡುಗಿಯಾಗಿದ್ದಾಗ ಪದೇ ಪದೇ ಓದಿ ಸಂತೋಷಪಡುತ್ತಿದ್ದ ಎ.ಆರ್.ಕೃಷ್ಣಶಾಸ್ತ್ರಿಗಳ  ‘ಮಕ್ಕಳ ಮಹಾಭಾರತ’ ಅಥವಾ ‘ನಿರ್ಮಲ ಭಾರತಿ’ಯ ಬಗ್ಗೆ ಹೇಳಲೇ? ಅಥವಾ “ಈಗ ದೊಡ್ಡವಳಾಗಿದ್ದೀಯೆ, ಮಕ್ಕಳ ಮಹಾಭಾರತ ಸಾಕು, ಇದನ್ನು ಓದು” ಎಂದು ಅಮ್ಮ ಕೈಯಲ್ಲಿತ್ತ, ನಾನು ಓದಿದ ಮೊಟ್ಟ ಮೊದಲ ವಯಸ್ಕರ ಪುಸ್ತಕ - ಕೃಷ್ಣಶಾಸ್ತ್ರಿಗಳದ್ದೇ ಆದ ‘ವಚನ ಭಾರತ’ದ ಬಗ್ಗೆ  ಹೇಳಲೇ? ಪ್ರತಿ ಬೇಸಿಗೆ ರಜದಲ್ಲೂ ಒಮ್ಮೆ ಅದನ್ನು ಪುನಃಪಠಿಸುತ್ತಿದ್ದೆನಲ್ಲಾ! ಕಾಲೇಜಿನಲ್ಲಿ ಪಠ್ಯಪುಸ್ತಕವಾಗಿದ್ದ(ರೂ) ಬಹಳ ಪ್ರಿಯವಾಗಿದ್ದ ಕೆ ವಿ ಅಯ್ಯರ್ ಅವರ ರೂಪದರ್ಶಿ? ಅದರಲ್ಲಿ ರೂಪಿಸಿರುವ ಕೆಲವು ಸನ್ನಿವೇಶಗಳು ಇಷ್ಟು ವರ್ಷಗಳ ನಂತರವೂ ಸ್ಪಷ್ಟವಾಗಿ ನೆನಪಿನಲ್ಲಿದ್ದು ನನ್ನ ಮನಸ್ಸನ್ನು ಈಗಲೂ ಹಿಂಡುತ್ತದಲ್ಲಾ!.  

ಮೇಲೆ ಹೇಳಿದ ನೂಕುನುಗ್ಗಲಿನಲ್ಲಿದ್ದ ಇಂಗ್ಲಿಷ್ ಪುಸ್ತಕಗಳನ್ನು ನಿರ್ಲಕ್ಷಿಸುವಂತಿಲ್ಲ. ಯಥೇಚ್ಛವಾಗಿ ಲಭ್ಯವಾಗಿರುವುದೆಂಬ ಕಾರಣ - ಅದರಲ್ಲೂ ನಾನ್-ಫಿಕ್ಷನ್  ಪುಸ್ತಕಗಳು ಕನ್ನಡಕ್ಕಿಂತ ಇಂಗ್ಲಿಷ್ನಲ್ಲಿ ಹೇರಳವಾಗಿ ಲಭ್ಯವಾಗಿರುವುದೆಂಬ ಒಂದೇ ಕಾರಣದಿಂದಾದರೂ ನಾನು ಇಂಗ್ಲಿಷ್ ಪುಸ್ತಕಗಳನ್ನು ಓದಿರುವುದೇ ಹೆಚ್ಚು. ಪೋಲೆಂಡಿನ ಭೌತವಿಜ್ಞಾನಿ ಲಿಯೊಪಾಲ್ಡ್ ಇನ್ಫೆಲ್ಡ್ ಅವರ ಆತ್ಮ ಕಥೆ ‘ಕ್ವೆಸ್ಟ್’ ನನ್ನ ಅತ್ಯಂತ ಮೆಚ್ಚಿನ ಪುಸ್ತಕ ಎಂದು ಹಲವಾರು ವರ್ಷ ಹೇಳುತ್ತಿದ್ದೆ. ಈಗಲೂ ಮೆಚ್ಚಿನ ಪುಸ್ತಕವೇ. ಆದರೆ ಇತರ ಪುಸ್ತಕಗಳು ಬಹು ಬೇಗ ಅದರ ಜೊತೆ ಪೈಪೋಟಿಗೆ ಬಂದವು. ಆಲಿಸ್ ವಾಕರ್ ಅವರ ‘ದಿ ಕಲರ್ ಪರ್ಪಲ್’- ಇದು ನನ್ನ ಕೈಗೆ ಬಂದಾಗ ಹೇಗೆ ಛಿದ್ರ ಚೂರಾಗಿತ್ತೆಂದರೆ, ಬ್ಯಾಗ್ ಒಂದರಲ್ಲಿ ತೆರೆದಿಟ್ಟುಕೊಂಡಿದ್ದು ಒಂದೊಂದೇ ಹಾಳೆ ಹೊರತೆಗೆದು ಓದಿದ್ದೆ.  ಹಾರ್ಪರ್ ಲೀ ಅವರ ’ಟು ಕಿಲ್ ಎ ಮಾಕ್ಕಿಂಗ್ ಬರ್ಡ್’- ಮುಂದೆ ನನ್ನ ಪತಿಯಾದವ ನನಗಾಗಿ ತಂದು ಕೊಟ್ಟ ಮೊದಲ ಪುಸ್ತಕ. ಓದಿ (ಪುಸ್ತಕದಿಂದಲೂ) ಮೋಹಿತಳಾಗಿದ್ದೆ. ಜೇಮ್ಸ್ ಮಿಚೆನೆರ್ ಅವರ ‘ಸೋರ್ಸ್’ ಮರೆಯಲು ಸಾಧ್ಯವೇ? ಸುಮಾರು ೯೦೦-೧೦೦೦ ಪುಟಗಳ ಆ ಪುಸ್ತಕವನ್ನು ಮನೆಯವರೆಲ್ಲ ಓದಿ ಚರ್ಚೆ ಮಾಡಿ ಸಂತೋಷ ಪಟ್ಟಿದ್ದೆವು. ಆ ಪುಸ್ತಕ ನನ್ನ ಕೈ ತಪ್ಪಿ ಹೋಯಿತೆಂದು ಬೇಜಾರಿಸಿಕೊಂಡದ್ದನ್ನು ಕೇಳಿ ನನ್ನ ಮಾವನವರು ಕೆಲಸದ ಮೇಲೆ ಮುಂಬೈಗೆ ಹೋದವರು ಆ ಪುಸ್ತಕಕ್ಕಾಗಿ ಹುಡುಕಾಡಿ, ರಸ್ತೆಯ ಬದಿಯ ಕಲ್ಲುಹಾಸಿನ ಮೇಲಿನ ಪುಸ್ತಕದಂಗಡಿಯಲ್ಲಿ ಕೊಂಡು ತಂದುಕೊಟ್ಟಿದ್ದರು. ನಿಜ, ಕೆಲವೊಮ್ಮೆ ಪುಸ್ತಕದೊಳಗೂ ಸುಂದರ ಕಥೆ, ನಮ್ಮ ಕೈಸೇರಿದ ಆ ಪುಸ್ತಕದ ಪ್ರತಿಗೂ ಒಂದು ಸುಂದರ ಕಥೆ ಇರುತ್ತದೆ.


ಶೆಲ್ಫ್ ನಲ್ಲಿ ಕುಳಿತು ಪೈಪೋಟಿ ಮಾಡುತ್ತಿರುವ ಪುಸ್ತಕಗಳನ್ನು ಅಲ್ಲಿಯೇ ಕೈಬಿಟ್ಟು ನಾನು ಬೇರೆಯೇ ಒಂದು ಪುಸ್ತಕವನ್ನು ಹೊರತೆಗೆದಿದ್ದೇನೆ. ಇದು ನನ್ನ ಬಟ್ಟೆಯ ಬೀರುವಿನಲ್ಲಿ, ಒಂದು ಜಿಪ್ ಲಾಕ್  ಬ್ಯಾಗಿನಲ್ಲಿ ಜೋಪಾನವಾಗಿರುವ, ಕೇವಲ ೨೬ ಪುಟದ ಕಿರುಪುಸ್ತಕ. ಚಿಕ್ಕವರಿದ್ದಾಗ ನಮ್ಮ ತಂದೆಯವರು (ಇದೇ ಪ್ರತಿಯಲ್ಲನ್ನಲ್ಲದಿದ್ದರೂ) ಓದಿ ಆನಂದ ಪಟ್ಟ ಪುಸ್ತಕ. ನಾನು ಚಿಕ್ಕವಳಿದ್ದಾಗ ನನ್ನ ಕೈಯಲ್ಲಿ ಓದಿಸಿ ನನ್ನ ಜೊತೆ ನಕ್ಕು ಅವರೂ ಸಂತೋಷ ಪಟ್ಟ ಪುಸ್ತಕ. ನನ್ನ ಮಗ ಪುಟ್ಟವನಾಗಿದ್ದಾಗ ನಾನು ಅವನಿಗೆ ಓದಿ ಹೇಳಿದ ಪುಸ್ತಕ : ಕುವೆಂಪು ಅವರ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’!
 
ಇದು ರಾಬರ್ಟ್ ಬ್ರೌನಿಂಗ್ ಅವರ ‘ಪೈಡ್ ಪೈಪರ್ ಆಫ್ ಹ್ಯಾಮ್ಲಿನ್’ ಪದ್ಯದಿಂದ ಪ್ರೇರಿತರಾಗಿ ಬರೆದ ಅತ್ಯಂತ ಸೊಗಸಾದ ಕಥನಕಾವ್ಯ. 

“ತುಂಗಾತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ”

ಎಂಬ ಸಾಲುಗಳಿಂದ ಪ್ರಾರಂಭವಾಗುವ ಈ ಪದ್ಯದ ೪೨೦ ಸಾಲುಗಳಲ್ಲೂ ಎದ್ದು ಕಾಣುವ ತಿಳಿ ಹಾಸ್ಯ, ವಿಶೇಷ ಕಲ್ಪನಾ ಶಕ್ತಿ ಯಾರ ಮನಸ್ಸನ್ನೇ ಆಗಲಿ ಸೂರೆಗೊಳಿಸುತ್ತದೆ. 


ಇಲಿಗಳ ಕಾಟ ಎಷ್ಟಿತ್ತೆಂದರೆ, 

“ಭೃಂಗಾಮಲಕದ ತೈಲವ ಹಚ್ಚಿದ ಶೇಷಕ್ಕನ ನುಣ್ಣನೆ ಫಣಿವೇಣಿ
ಬೆಳಗಾಗೇಳುತ ಕನ್ನಡಿ ನೋಡೆ ಇಲಿಗಳಿಗಾಗಿತ್ತೂಟದ ಫೇಣಿ”

ಇಂತಹ  ಲಯಬದ್ಧ ಸಾಲುಗಳಂತೂ ಮತ್ತೆ ಮತ್ತೆ ಮೆಲಕು ಹಾಕಿಕೊಳ್ಳುವಂತಹವು.

ಇಲಿಗಳು, ಮನುಷ್ಯರು ಮಲಗಿದ್ದಾಗ ಮಾತ್ರ ಚೇಷ್ಟೆ ಮಾಡುತ್ತಿರಲಿಲ್ಲ! 

ಸಿದ್ದೋಜೈಗಳು ಶಾಲೆಗೆ ಹೋಗಿ 
ಪಾಠವ ಬೋಧಿಸುತ್ತಿದ್ದಾಗ 
ಅಂಗಿಯ ಜೇಬಿಂ ಹೆಳವಿಲಿಯೊಂದು 
ಚೆಂಗನೆ ನೆಗೆಯಿತು ತೂತನು ಮಾಡಿ 
ಲೇವಡಿ ಎಬ್ಬಿಸೆ ಬಾಲಕರೆಲ್ಲ 
ಗುರುಗಳಿಗಾಯಿತು ಬಲು ಗೇಲಿ 

ಇಲಿಗಳ ಕಾಟ ತಡೆಯಲಾಗದ ಜನರೆಲ್ಲರೂ ಊರಿನ ಗೌಡನನ್ನು ಒತ್ತಾಯಿಸಿದಾಗ ಆತ, ಇಲಿಗಳನ್ನು ನಿರ್ನಾಮ ಮಾಡಿದವರಿಗೆ ಆರು ಸಾವಿರ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಡುವುದಾಗಿ ಘೋಷಿಸಿದ. 

ಆಗ ಕಿಂದರಿ ನುಡಿಸುತ್ತಾ, 

“ಕೆದರಿದ ಕೂದಲ ಗಡ್ಡದ ಜೋಗಿ 
ನಾನಾ ಬಣ್ಣದ ಬಟ್ಟೆಯ ಜೋಗಿ” ಬಂದವನೇ ಕಿಂದರಿ ಜೋಗಿ! !
 
ಇಲಿಗಳನ್ನು ಓಡಿಸುವ ಅವನ ಅನುಭವದ ಬಗ್ಗೆ ವಿಚಾರಿಸಿದಾಗ, ಆತ ತನ್ನ ಪರಾಕ್ರಮವನ್ನು ಹೇಳಿಕೊಂಡ. ದೇವಲೋಕದಲ್ಲಿ ಇಲಿಗಳ ಕಾಟ ಹೆಚ್ಚಾದಾಗ,
 
“ಕಾಮನ ದಹಿಸಿದ ಹಣೆಗಣ್ಣು 
ಮೂಷಿಕರೋಮವ ಸುಡಲಿಲ್ಲ” ವಂತೆ!

“ಕಡೆಗಾ ವಿಷ್ಣುವೆ ಚಕ್ರವ ಹಿಡಿದು
ಮೂಷಿಕಕುಲವನೆ ಕೊಲ್ಲುವೆನೆಂದು 
ಕದನವನಾಡಲು ಇಲಿಗಳ ಕೂಡೆ
ಮೂರ್ಛೆಗೆ ಸಂದನು ಬಲುಬಳಲಿ“ 

ಆದರೆ, ನಮ್ಮ ಕಿಂದರಿ ಜೋಗಿ ಎಂತಹ ಪ್ರವೀಣನೆಂದರೆ, ಶಿವ, ವಿಷ್ಣುಗಳು ಸೋತ ಯುದ್ಧದಲ್ಲಿ ಆತ ಜಯಗಳಿಸಿದ! ಕುವೆಂಪು ಅವರದು ಅದೆಂತಹ ಕಲ್ಪನಾಶಕ್ತಿ!

ಕಿಂದರಿ ಜೋಗಿ ತನ್ನ ಕಿಂದರಿ ನುಡಿಸಿದಾಗ ಏನಾಯಿತೆಂಬುದನ್ನು ತಿಳಿಸುವ ಈ ಕೆಳಗಿನ ಸಾಲುಗಳು ಮಕ್ಕಳಿಗಾಗಲಿ ದೊಡ್ಡವರಿಗಾಗಲಿ ಶುದ್ಧ, ಸರಳ, ಖುಷಿಯನ್ನುಂಟುಮಾಡುವಂತಹವು. 

“ಹಾರುತ ಬಂದವು ಓಡುತ ಬಂದವು
ನೆಗೆಯುತ ಬಂದವು ಕುಣಿಯುತ ಬಂದವು
ಜೋಗಿಯು ಬಾರಿಸೆ ಕಿಂದರಿಯ


ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ ಎಲ್ಲಾ ಬಂದವು ಓಡೋಡಿ
ಜೋಗಿಯು ಬಾರಿಸೆ ಕಿಂದರಿಯ”

ನನ್ನ ಪುಟ್ಟ ಮಗನಿಗೆ ಪದ್ಯದ ಇತರ ಎಷ್ಟೋ ಸಾಲುಗಳನ್ನು ವಿವರಿಸಿ ಹೇಳಬೇಕಾಯಿತಾದರೂ, ಈ ಮೇಲಿನ ಸಾಲುಗಳನ್ನು ಲಯಬದ್ಧವಾಗಿ ಓದಿದಾಗ ಮಾತ್ರ ಅವನಿಗೆ ತಡೆಯಲಾರಷ್ಟು ನಗು! ಕುಣಿಯುತ್ತ ಕುಪ್ಪಳಿಸುತ್ತ ಆನಂದಪಟ್ಟ. 

ನಾನು ನನ್ನ ಚಿಕ್ಕ ವಯಸ್ಸಿನಲ್ಲಿ ಪುಸ್ತಕದ ಸಾಲುಗಳನ್ನು ಜೋರಾಗಿ ಓದಿದಾಗ ಅಮ್ಮ, ಅಣ್ಣ ಇಬ್ಬರ ಆನಂದದ ನಗು, ಹಾಗೂ ಕಣ್ಣಲ್ಲಿನ ಹೊಳಪನ್ನು ಎಂದೆಂದಿಗೂ ಮರೆಯಲಾರೆ. ಇಂತಹ ಆಹ್ಲಾದಕರ ನೆನಪುಗಳನ್ನು ತರುವ ಪುಸ್ತಕ ಪುಟ್ಟದಾದರೂ ವಿಶೇಷವಾದುದಲ್ಲವೇ? 

ಈಚೆಗೆ ಈ ಪುಸ್ತಕ ಮರು ಮುದ್ರಣವಾಗಿ ಅಂಗಡಿಗಳಲ್ಲಿ ಸಿಗುತ್ತಿರುವಂತಿದೆ, ಆದರೆ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಮಗ ನಾಲ್ಕೈದು ವರ್ಷದವನಿದ್ದಾಗ ನನಗೆ ಅಂಗಡಿಯಲ್ಲಿ ಸಿಕ್ಕಿರಲಿಲ್ಲ. ಅಣ್ಣನ ಗ್ರಂಥಾಲಯದಲ್ಲಿದ್ದ ಪುಸ್ತಕವನ್ನು ನಾನು ತೆಗೆದುಕೊಂಡು ಹೋಗಲೇ ಎಂದು ಕೇಳಿದೆ. ಅಣ್ಣ ತೆಗೆದುಕೊಂಡು ಹೋಗು, ಹುಷಾರಾಗಿ ಇಟ್ಟುಕೋ ಎಂದು ಹೇಳಿದರು. ತೆಳುವಾದ, ಸವೆದು ಹೋಗಿರುವ ಪುಸ್ತಕ. ಇತರ ಧಡೂತಿಗಳ ಮಧ್ಯೆ ಕಳೆದುಹೋಗದಿರಲೆಂದು ಪ್ರೀತಿಯಿಂದ ಭದ್ರವಾಗಿ ಬಟ್ಟೆ ಬೀರುವಿನಲ್ಲಿ ಇಟ್ಟುಕೊಂಡಿದ್ದೇನೆ.  

~ ಅನುರಾಧ ಜಗಳೂರು

ಮೂಲ :  ಸರ್ ಅರ್ಥರ್ ಕಾನಾನ್ ಡೊಯಲ್ ಬರೆದ  The Strand magazine  ನಲ್ಲಿ ಪ್ರಕಟವಾಗಿದ್ದ ಕಥೆ :  The Story of the Beetle Hunter (೧೮೯೬)

ನಾನು ಆಗತಾನೆ ವೈದ್ಯಕೀಯ ಪದವಿಯನ್ನು ಪಡೆದು ಲಂಡನ್ ಗೋವರ್ ಸ್ಟ್ರೀಟ್ ನಲ್ಲಿ  ಬಾಡಿಗೆ ಮನೆಯಲ್ಲಿ ವಾಸಕ್ಕೆ ಬಂದೆ, ಹೆಚ್ಚಾಗಿ ಹಣ ಇರಲಿಲ್ಲ , ಕೆಲಸ ಇನ್ನು ಸಿಕ್ಕಿರಲಿಲ್ಲ.  ನನ್ನ ಆಸಕ್ತಿ ವೈದಕೀಯಗಿಂತ ಪ್ರಾಣಿ ಶಾಸ್ತ್ರ (   Zoology ) ಮತ್ತು ವಿಜ್ಞಾನ (Science} ಮೇಲಿತ್ತು. ಆದರೆ ಹಣಕಾಸಿನ ಒತ್ತಡದಿಂದ ಯಾವ ಕೆಲಸ ವನ್ನು ಮಾಡುವುದಕ್ಕೂ ತಯಾರಿದ್ದೆ. ಒಂದು ದಿನ ಲಂಡನ್ ದಿನಪತ್ರಿಕೆ The Standard ಈ ಜಾಹೀರಾತು ನೋಡಿದೆ.

" wanted for one or more days services of a medical man. it is essential that he should be man of strong physique, of steady nerves and of a resolute nature, knowledge of entomology preferred. Apply 77 Brooke Street/ Applications must be made before 12'o clock today. 

ನಾನು ಮೇಲೆ ಹೇಳಿದಂತೆ. ಪ್ರಾಣಿಶಾಸ್ತ್ರ ಅದರಲ್ಲೂ ,  ಕೀಟಶಾಸ್ತ್ರ ನನಗೆ ಪ್ರಿಯವಾದ ವಿಷಯವಾಗಿತ್ತು, ಚಿಕ್ಕಂದಿನಿಂದ ಅನೇಕ ಮಾದರಿಯ ರೆಕ್ಕೆ ಹುಳ ( Beetles) ಗಳನ್ನು ಸಂಗ್ರಹಿಸಿದ್ದೆ. ಈ ಕೆಲಸದ ಜಾಹೀರಾತು ಸ್ವಲ್ಪ ವಿಚಿತ್ರವಾಗೇ ತೋರಿತು.  ಗಟ್ಟಿ ಮುಟ್ಟಾದ ವೈದ್ಯ ಮತ್ತು ಕೀಟಶಾಸ್ತ್ರದ ತಿಳಿವು,  ಅದೂ  ಅಲ್ಲದೆ ಈ ಕೆಲಸ ಕೇವಲ ತಾತ್ಕಾಲಿಕ ಅಷ್ಟೇ,  ಆದರೆ ಹಣದ ಅವಶ್ಯಕತೆ ಇತ್ತು . ತಕ್ಷಣ ಕೊಟ್ಟಿದ್ದ ವಿಳಾಸಕ್ಕೆಹೊರಟು  ಹನ್ನೆರಡು ಗಂಟೆ ಮುಂಚೆ ತಲಪಿದಾಗ ಒಬ್ಬ ನನ್ನ ವಯಸ್ಸಿನ ತರುಣ ಸಪ್ಪೆ ಮುಖ ದಲ್ಲಿ ಹೊರಗೆ ಬಂದ, ಅಂದರೆ ಇವನಿಗೆ ಕೆಲಸ ಸಿಕ್ಕಿರಲಿಲ್ಲ ಅನ್ನುವ ಸಂದೇಹ ಬಂತು. ಬಾಗಿಲು ತಟ್ಟಿದೆ , ಒಬ್ಬ ಸಮವಸ್ತ್ರದ ಸೇವಕ ಬಾಗಿಲು ತೆಗದು ಏನು ಬೇಕಾಗಿತ್ತೆಂದು  ಕೇಳಿದ.  ಕೆಲಸದ ಬಗ್ಗೆ ಅಂತ ಹೇಳಿದಾಗ " ಸರಿ ನಿಮ್ಮನ್ನು ಲಾರ್ಡ್ ಲಿಂಚ್ಮಿಯರ್ ನೋಡುತ್ತಾರೆ , ಗ್ರಂಥಾಲಯದಲಿದ್ದಾರೆ ಬನ್ನಿ " ಅಂತ ಹೇಳಿ ಒಂದು ದೊಡ್ಡ ಕೋಣೆಗೆ ಕರೆದೊಯ್ದ.   ಇವರ ಹೆಸರು ಎಲ್ಲೊ ಕೇಳಿದ ಹಾಗಿದೆ ಆದರೆ ಜ್ಞಾಪಕ ಬರಲಿಲ್ಲ.
ಲಾರ್ಡ್ ಲಿಂಚ್ಮಿಯರ್, ಸುಮಾರು ಐವತ್ತು  ವಯಸ್ಸಿರಬಹುದು, ಸಣ್ಣ ಮೈಕಟ್ಟು ದೊಡ್ಡ ಮೇಜಿನ ಮುಂದೆ ಕೂತು ಸೇವಕ ಕೊಟ್ಟಿದ್ದ ನನ್ನ ವಿಸಿಟಿಂಗ್ ಕಾರ್ಡ್ ಮೇಲೆ ಎತ್ತಿ ತೋರಿಸಿ 
" ನೀವು ನಮ್ಮ ಜಾಹೀರಾತನ್ನು ನೋಡಿ ಬಂದಿದ್ದೀರಾ ಡಾ.  ಹ್ಯಾಮಿಲ್ಟನ್ ?" ಅಂದರು 
"ಹೌದು ಸರ್ "
" ಜಾಹೀರಾತನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಈ ಕೆಲಸಕ್ಕೆ ಅರ್ಹತೆ ಇದೆಯಂದು ಭಾವಿಸಿದ್ದೀರಾ ?"
" ನನ್ನ ಪ್ರಕಾರ ಹೌದು  ಸರ್ "
"ನಿಮ್ಮಮೈಕಟ್ಟು  ನೋಡಿದರೆ ನೀವು ಬಲಶಾಲಿ"
"ನನ್ನ ಭಾವನೆ ಅದೇ ಸರ್ "
" ನಿಮ್ಮ ಜೀವನದಲ್ಲಿ ಎಂದಾದರೂ ಅಪಾಯ ತರುವ ಸಂಧರ್ಬವನ್ನು ಎದಿರಿಸಿದ್ದೀರಾ ?"
"ಅಂತಹ ಸಂದರ್ಭ ಹಿಂದೆ ಬಂದಿಲ್ಲ"
" ಸರಿ, ಅಂತಹ ಸಮಯ ಮುಂದೆ  ಬಂದರೆ "
" ಅದನ್ನು ಎದಿರಿಸುವ ಧೈರ್ಯ ನನಗಿದೆ ಅನ್ನುವುದರಲ್ಲಿ  ಸಂದೇಹ ಇಲ್ಲ ಸರ್ "
" ನಿಮ್ಮನ್ನು ನೋಡಿದರೆ ನನಗೂ ಅದೇ ಭಾವನೆ ಬಂತು , ಈಗ ಎರಡನೇ ವಿಷಯಕ್ಕೆ  ಹೋಗೋಣ ಡಾ. ಹ್ಯಾಮಿಲ್ಟನ್ "
"ಕೇಳಿ ನನಗೆ ಗೊತ್ತಿದ್ದರೆ ಉತ್ತರಿಸುತ್ತೇನೆ "
" ಕ್ರಿಮಿ ಕೀಟಗಳ , ಅದರಲ್ಲೂ ರೆಕ್ಕೆ ಹುಳ ( Beetles) ಬಗ್ಗೆ ನಿಮಗೆ ಏನು ಗೊತ್ತಿದೆ ?"
ನನಗೆ ಈ ಪ್ರಶ್ನೆ  ಬಹಳ ವಿಚಿತ್ರವಾಗಿತ್ತು, ನನ್ನ  ಗೇಲಿ ಮಾಡುತ್ತಿದ್ದಾರ ಎನ್ನುವ ಸಂಶಯವೂ  ಮನಸ್ಸಿಗೆ ಬಂತು, ಆದರೆ ಲಾರ್ಡ್ ಲಿಂಚ್ಮಿಯರ್  ಒಬ್ಬ ಗಂಭೀರ ಮತ್ತು ವಿದ್ಯಾವಂತ ಮನುಷ್ಯ ಅನ್ನುವುದರಲ್ಲಿ  ಏನೂ   ಸಂದೇಹ ಇರಲಿಲ್ಲ ಆದರೂ ಈ ಪ್ರೆಶ್ನೆ ಅರ್ಥವಾಗಲಿಲ್ಲ. ನಾನು ಮೇಲೆ ಹೇಳಿದಹಾಗೆ ವೈದ್ಯಕೀಯಗಿಂತ ಹೆಚ್ಚು ಆಸಕ್ತಿ ಪ್ರಾಣಿ ಶಾಸ್ತ್ರದಲ್ಲಿ ಮತ್ತು Entomology ಬಗ್ಗೆ  ಸಹ ಸ್ವಲ್ಪ ತಿಳಿದಿದ್ದೆ, ತಕ್ಷಣ ನನಗೆ ಉತ್ತರ ಹೇಳುವುದಕ್ಕೆ ತೋಚಲಿಲ್ಲ. 
" ಓ ಹೊ ನಿಮಗೆ ಕ್ರಿಮಿ ಕೀಟಗಳ ಬಗ್ಗೆ ಗೊತ್ತಿಲ್ಲ ಅಲ್ಲವೇ ?"
ಧೈರ್ಯ ತಂದುಕೊಂಡು " ಹಾಗಲ್ಲ ಸರ್ , ಈ ವಿಷಯದಲ್ಲಿ ನನಗೆ ಆಸಕ್ತಿ ಇದೆ ಮತ್ತು coleopterology  ಅಧ್ಯಯನ ಮಾಡಿದ್ದೇನೆ"
" ಹಾಗಾದರೆ ತುಂಬಾ ಸಂತೋಷ , ನಿಮಗೆ ಗೊತ್ತಿರುವದ್ದನ್ನ  ವಿವರಿಸಿ "
ಸುಮಾರು ಐದು  ನಿಮಿಷ ರೆಕ್ಕೆ ಹುಳದ ಬಗ್ಗೆ ಮಾತನಾಡಿದೆ , ನಾನು ಹೇಳಿದ್ದರಲ್ಲಿ ಹೊಸ ವಿಷಯ ಏನೂ ಇರಲಿಲ್ಲ ಆದರೆ ಹಿಂದೆ Journal of Entomological Science ನಲ್ಲಿ ಒಂದು ಸಣ್ಣ ಬರಹ ಪ್ರಕಟವಾಗಿದ್ದು ಮತ್ತು ನನ್ನ ಬಳಿ ಅನೇಕ ರೀತಿಯ ರೆಕ್ಕೆ ಹುಳಗಳ  ಸಂಗ್ರಹ ಇದ್ದ ವಿಚಾರ ಕೇಳಿ ಲಾರ್ಡ್ ಲಿಂಚ್ಮಿಯರ್ ಬಹಳ ಸಂತೋಷ ಪಟ್ಟರು 
"ಡಾ. ಹ್ಯಾಮಿಲ್ಟನ್ , ನೀವು ನಮಗೆ ಬೇಕಾದವರು ಎನ್ನುವುದರಲ್ಲಿ ಸಂದೇಹವೇ ಇಲ್ಲ, ನೋಡಿ,  ಲಂಡನ್ ನ ೫ ಮಿಲಿಯನ್ ಜನಸಂಖ್ಯೆ ಯಲ್ಲಿ ನಿಮ್ಮಂತವರು ಸಿಕ್ಕಿರುವುದು ನನ್ನ ಅದೃಷ್ಟ" ಅಂತ ಹೇಳಿ ಮೇಜಿನ ಮೇಲೆ ಇದ್ದ ಗಂಟೆ ಬಾರಿಸಿ ಹೊರಗೆ ನಿಂತಿದ್ದ ಸೇವಕನನ್ನು ಕರೆದು  "ಲೇಡಿ ರೊಸ್ಸಿಟರ್  ಅವರನ್ನು ಇಲ್ಲಿಗೆ ಬರ ಹೇಳು " ಎಂದರು . ಕೆಲವು ನಿಮಿಷದಲ್ಲಿ ಈಕೆ ಬಂದರು . ನೋಡಿದರೆ 
ಲಾರ್ಡ್ ಲಿಂಚ್ಮಿಯರ್ ರ ಹೋಲಿಕೆ ಇತ್ತು , ಇವರಿಗೂ ಸುಮಾರು ಐವತ್ತು ವಯಸ್ಸು , ಮಖದಲ್ಲಿ ಏನೋ ಕಳವಳ ಮತ್ತು ಹೆದರಕೆ ಇರುವಂತಿತ್ತು, ಪರಿಚಯ ಆದನಂತರ ನನ್ನ ಕಡೆ ನೋಡಿ ತಿರಿಗಿದಾಗ ಆಕೆಯ ಬಲ ಕಣ್ಣಿನ ಕೆಳಗೆ ಎರಡು ಮೂರು ಇಂಚುಗಳ , ಬಹುಷಃ ಇತ್ತೀಚಿಗೆ ಆಗಿದ್ದ,  ಗಾಯದ  ಗುರುತು ಕಾಣಿಸಿತು. 
" ನೋಡು ಈವೆಲಿನ್ ,   ಇವರು ಡಾ . ಹ್ಯಾಮಿಲ್ಟನ್ ನಮ್ಮ  ಕೆಲಸಕ್ಕೆ ಸರಿಯಾಗಿ  ಹೊಂದುವರು ಅಂದರೆ ಇವರೇ,  ಇವರಿಗೆ ರೆಕ್ಕೆ ಹುಳಗಳ ವಿಷಯ ಗೊತ್ತಿದೆ ಮತ್ತು ಇವರ ಹವ್ಯಾಸ ಸಹ ಅದರ ಸಂಗ್ರಹ ಮತ್ತು ಈ ವಿಷಯದ ಮೇಲೆ ಲೇಖನವನ್ನು ಬರೆದಿದ್ದಾರೆ  "
" ಸಂತೋಷ, ಹಾಗಾದರೆ ನೀವು  ನನ್ನ ಪತಿ ಸರ್ ಥಾಮಸ್ ರೊಸ್ಸಿಟರ್  ಹೆಸರು ಕೇಳಿರಬೇಕು , ಇವರು  ರೆಕ್ಕೆಹುಳಗಳ  ಬಗ್ಗೆ ಸಂಶೋಧನೆ ಮಾಡಿದ್ದಾರೆ"
ಆ ಕ್ಷಣ ನನಗೆ ಈ ಕುಟುಂಬಕ್ಕೆ  ರೆಕ್ಕೆ ಹುಳದ  ಸಂಬಂಧ  ಹೊಳೆಯಿತು, ಸರ್ ಥಾಮಸ್, coleopterology ಅಧ್ಯಯನದಲ್ಲಿ ಗಣ್ಯರು ಅನ್ನುವುದನ್ನ ಕೇಳಿದ್ದೆ 
"  ನೀವು ಅವರನ್ನು ಭೇಟಿಯಾಗಿದ್ದೀರಾ "
"ಇಲ್ಲ,  ಲೇಡಿ ರೊಸ್ಸಿಟರ್  , ಮಾಡಿಲ್ಲ "
ಲಾರ್ಡ್ ಲಿಂಚ್ಮಿಯರ್ " ನಿಮಗೆ ಅವರ ಭೇಟಿ ಮಾಡಿಸುತ್ತೇನೆ "
ಲೇಡಿ ರೊಸ್ಸಿಟರ್ , " ಚಾರ್ಲ್ಸ್ , ನೀನು ಇದನ್ನು ನಿಜವಾಗಲೂ ಮಾಡುತ್ತೀಯಾ, ಆದರೆ ನನಗೆ ಭಯ" ಎಂದು ಹೇಳಿ ಪಕ್ಕದಲ್ಲೇ ನಿಂತಿದ್ದ  ಲಾರ್ಡ್ ಲಿಂಚ್ಮಿಯರ್ ಭುಜದ  ಮೇಲೆ ಕೈ ಇಟ್ಟು ಆತಂಕದಿಂದ  ಹೇಳಿದಳು, ನನಗೆ ಇವರಿಬ್ಬರು ಅಣ್ಣ ತಂಗಿ ಅಂತ ಅರಿವಾಯಿತು,
" ನೀನೇನು ಆತಂಕ ಪಡಬೇಡ ಈವಲಿನ್ ನಮಗೆ ಬೇರೆ ದಾರಿ ಇಲ್ಲ "
" ಇನ್ನೊಂದು ದಾರಿ ಇದೆ ಚಾರ್ಲ್ಸ್ "
" ನಮಗೆ ಇದನ್ನು ಬಿಡು ಈವಲಿನ್ , ನಿನ್ನನ್ನು ನಾನು ಪರಿತ್ಯಜಿಸುವುದಿಲ್ಲ "
ನಾನು ಇರುವುದನ್ನ   ಮರೆತು ಈ ಸಂಭಾಷಣೆ ನಡೆದಹಾಗೆ ಕಾಣಿಸಿತು,    ಲಾರ್ಡ್ ಲಿಂಚ್ಮಿಯರ್ ನನ್ನ ಕಡೆ ತಿರಿಗಿ , "ನೋಡಿ ಡಾ. ಹ್ಯಾಮಿಲ್ಟನ್, ಈ ಕೆಲಸಕ್ಕೆ ನಾನು  ನಿಮನ್ನು ಕೇಳುವುದಿಷ್ಟೇ , ನೀವು ನನ್ನ ಜೊತೆಯಲ್ಲಿ ಯಾವಾಗಲು ಇರತಕ್ಕದ್ದು ಮತ್ತು ನಾನು ಹೇಳಿದಾಗೆ ಮಾಡಬೇಕು, ಇದು ನಿಮಗೆ ಸರಿ ಅಲ್ಲ ಅನ್ನಿಸದೇ ಇರಬಹುದು ಆದರೂ ನೀವು ನನ್ನ ಅಪ್ಪಣೆಯನ್ನು ಮೀರಬಾರದು.  
" ಇದು ಸ್ವಲ್ಪ ಮಿತಿ ಮೀರಿದ್ದು ಅಲ್ಲವೇ ಸರ್ "
"ಇರಬಹುದು, ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವ ರೀತಿ ಮುಂದೆವರೆಯುತ್ತೆ ಅನ್ನುವುದು ನನಗೂ ಗೊತ್ತಿಲ್ಲ. ಕೊನೆಗೆ ಇದು ಸಫಲವಾದರೆ, ನೀವು ಹೆಮ್ಮೆ ಪಡುಬಹುದಾದ ವಿಚಾರ "
ಲೇಡಿ ರೊಸ್ಸಿಟರ್  " ಇದು ಸಂತೋಷದಿಂದ ಕೊನೆಗೊಂಡರೆ "
" ಹೌದು , ಇದು ಸಂತೋಷದಿಂದ ಕೊನೆಗೊಂಡರೆ " ಲಾರ್ಡ್ ಲಿಂಚ್ಮಿಯರ್ ಪುನರಾವರ್ತಿಸಿದರು 
" ಇದಕ್ಕೆ ನನ್ನ ಸಂಭಾವನೆ ಏನು ಅಂತ ಕೇಳಬಹುದಾ  ಸರ್ "
" ದಿನಕ್ಕೆ ಇಪ್ಪತ್ತು ಪೌಂಡ್ ಗಳು "
ನಾನು  ಇಷ್ಟು ದೊಡ್ಡ ಮೊತ್ತವನ್ನು ನಿರೀಕ್ಷಿಸಿರಲಿಲ್ಲ , ನನ್ನ ಮಖದ ಮೇಲೆ ಕಂಡ ಆಶ್ಚರ್ಯ ನೋಡಿ " ಈ ಕೆಲಸವು ಪ್ರಯಾಸಕರ ಅಥವಾ ಅಪಾಯಕಾರಿಯಾಗಿರಬಹುದು ಆದ್ದರಿಂದ ವೇತನ ಹೆಚ್ಚು, ಇದು ಒಂದು ಅಥವಾ ಎರಡು ದಿನಗಳಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ ಅನ್ನುವುದು ನನ್ನ ಭಾವನೆ, ನಿಮ್ಮ ಸಹಾಯ ನಿರೀಕ್ಷಿಸಬಹುದಾ, ಡಾ. ಹ್ಯಾಮಿಲ್ಟನ್?"
" ಖಂಡಿತವಾಗಿಯೂ  ಸರ್ , ಹೇಳಿ ನನ್ನಿಂದ ಏನಾಗಬೇಕು "
" ನೀವು ತಕ್ಷಣ ನಿಮ್ಮ ಕೋಣೆಗೆ ಹಿಂತಿರುಗಿ , ಕಿರು ಭೇಟಿಗೆ ಬೇಕಾದ್ದ ಬಟ್ಟೆಗಳನ್ನು ತೆಗೆದುಕೊಂಡು ೩ :೩೦ ಘಂಟೆಗೆ  ಪ್ಯಾಡಿಂಗ್ಟನ್ (Paddington) ರೈಲು ನಿಲ್ದಾಣಕ್ಕೆ ಬನ್ನಿ , ನಾನು ನಿಮ್ಮ ಟಿಕೆಟ್ ನ್ನು ಖರೀದಿ ಮಾಡಿರುತ್ತೇನೆ , ೪ ಘಂಟೆಗೆ   ಬಾರ್ಕ್ ಶೈರ್ (Berkshire) ನಲ್ಲಿರುವ ಪೆಂಗ್ ಬೌರನ್ (Pangbourne) ಗೆ ನಮ್ಮ ಪ್ರಯಾಣ, ಅಂದಹಾಗೆ ಎರಡು ವಿಷಯ ಬಹಳ ಮುಖ್ಯವಾದುದ್ದು . ನೀವು ಸಂಗ್ರಹಿಸಿದ  ರಕ್ಕೆ ಹುಳಗಳು ಮತ್ತು ಒಂದು ದೊಡ್ಡ ಕೋಲು ಮರಯೆದೆ ತನ್ನಿ "  
ನನ್ನ ಮನಸಿನ ಕಳವಳ ಹೆಚ್ಚಾಗಿ ಅನೇಕ ಪ್ರಶ್ನೆಗಳು ನನ್ನ ತಲೆ ತುಂಬಿತು ಆದರೆ ಈ ಸಮಸ್ಯೆಗಳಿಗೆ ಉತ್ತರ ಇಲ್ಲ ಎಂಬುದು ಖಚಿತ,  ಅದೂ  ಅಲ್ಲದೆ ಲಾರ್ಡ್ ಲಿಂಚ್ಮಿಯರ್ ಹೇಳಿದ ಮಾತುಗಳು ನೆನಪಿಗೆ ಬಂದು ಅವರು  ಹೇಳಿದಹಾಗೆ ಮಾಡಲೇಬೇಕಾಗಿದೆ. 

೩:೩೦ ಸರಿಯಾಗಿ ರೈಲ್ ನಿಲ್ದಾಣ ಕ್ಕೆ ಸೇರಿದಾಗ ಲಾರ್ಡ್ ಲಿಂಚ್ಮಿಯರ್ ನನಗೆ ಕಾಯುತ್ತಿದ್ದರು, ಕೈಯಲ್ಲಿ ಒಂದು ದಪ್ಪದ  ಕರಿ ದೊಣ್ಣೆ ಕಂಡು ನನ್ನ ಕುತೊಹಲ ಮತ್ತಷ್ಟು ಕೆರಳಿತು. 
" ಡಾ. ಹ್ಯಾಮಿಲ್ಟನ್ , ಎರಡು ವಿಚಾರ ಸರಿಯಾಗಿ ಗಮನಿಸಿ , ಒಂದು,  ನೀವು ನನ್ನ ರಕ್ಷಣೆಗೆ ಇರಬೇಕು ಮತ್ತು ಎರಡನೆಯದು ನನ್ನ ಬಿಟ್ಟು ಒಂದು ಕ್ಷಣವೂ ಇರಬಾರದು"    ಈ ಮಾತುಗಳನ್ನು ಪ್ರಯಾಣ ಮಾಡುವಾಗ ಎರಡು ಮೂರು ಸರಿ ಪುನಃ ಪುನಃ ಹೇಳಿದರು. 
ಪ್ರಯಾಣ ಮುಗಿದು ಕುದರೆ ಗಾಡಿಯಲ್ಲಿ ಕುಳಿತಾಗ, " ನೋಡಿ ಡಾ,  ಹ್ಯಾಮಿಲ್ಟನ್ , ನನಗೆ  ಸ್ವಲ್ಪ ನರಗಳ ದುರ್ಬಲತೆ ಇದೆ ಮತ್ತು ಪುಕ್ಕಲ ಎಂದೂ ಹೇಳಬಹುದು ಆದರೆ ನನ್ನಲ್ಲಿ ಆತ್ಮ ವಿಶ್ವಾಸ ಇದೆ ಎಂಥಹ  ಕಷ್ಟ ಬಂದರೂ ,  ನರಗಳ ದುರ್ಬಲತೆ ಇದ್ದರೂ ಇದನ್ನ ಎದಿರುಸುವ ಧೈರ್ಯ ನನ್ನಲ್ಲಿ ಇದೆ. ಈಗ ನಾನು ಕೈಕೊಳ್ಳುವ ಕೆಲಸ  ಕರ್ತ್ಯವ್ಯ ಪ್ರಜ್ಞೆಯಿಂದ  ಮಾತ್ರ, ಅಕಸ್ಮಾತ್ ಇದು ಕೈಮೀರಿ ವೈಫಲ್ಯ ವಾದರೆ ನಾನು  ಹುತಾತ್ಮನಾಗಬಹುದು"

ಈ ಒಗಟುಗಳ ಮಾತನ್ನು  ಕೇಳಿ ನನಗೆ ವಿಪರೀತ ಗೊಂದಲವಾಯಿತು " ಸರ್ ನೀವು ನನ್ನಲ್ಲಿ ನಂಬಿಕೆ ಇಡಿ , ಆದರೆ ನಮ್ಮ ಉದ್ದೇಶ್ಯ ಏನು, ನಾವೆಲ್ಲಿಗೆ ಈಗ ಹೋಗುತ್ತಿದ್ದೇವೆ ಇಂತಹ ಪ್ರಶ್ನೆಗಳು ನನ್ನ  ಕಾಡುತ್ತಿದೆ"

" ಎಲ್ಲಿಗೆ ಹೋಗುತ್ತಿದ್ದೇವೆ ಅನ್ನುವುದರಲ್ಲಿ ಸಂದೇಹ ಇಲ್ಲ, ಇಲ್ಲಿಂದ ಸ್ವಲ್ಪ ದೂರದಲ್ಲಿ ಡೆಲಾಮಿರ್ ಕೋರ್ಟ್(Delamere Court) , ಸರ್ ಥಾಮಸ್ ರೊಸ್ಸಿಟರ್  ಅವರ ನಿವಾಸ, ಇವರ ಸಂಶೋಧನೆ ನಿಮಗೆ ಪರಿಚಯ ಇದೆ ಎಂದು ಹೇಳಿದ್ದೀರಿ ,   ಅಲ್ಲಿ ಏನು ಮಾಡುತ್ತೀವಿ ಅನ್ನುವುದನ್ನ ಈಗ ಹೇಳಿ ಪ್ರಯೋಜನ ಇಲ್ಲ ಅಂತ ನನ್ನ ನಂಬಿಕೆ.  ನಮ್ಮ , ಅಂದರೆ,  ನನ್ನ ಮತ್ತು ಲೇಡಿ ರೊಸ್ಸಿಟರ್  ಉದ್ದೇಶ್ಯ ಒಂದೇ , ನಮ್ಮ ಕುಟುಂಬದಲ್ಲಿ ಆಗಬಹುದಾದ  ಹಗರಣವನ್ನು ತಪ್ಪಿಸುವುದು,  ನಿಮಗೆ ವಿವರವಾದ ವಿವರಣೆಯನ್ನು ಈಗ ಹೇಳಿ ಅಗತ್ಯವಿಲ್ಲ ಡಾ .  ಹ್ಯಾಮಿಲ್ಟನ್ , ನಿಮ್ಮ ಸಲಹೆ ನಾನು ಕೇಳುತ್ತಿಲ್ಲ, ನಿಮ್ಮಿಂದ ಬೇಕಾಗಿರುವುದು   ಸಹಕಾರ ಮತ್ತು ಸಹಾಯ ,  ಎಲ್ಲಿ,  ಹೇಗೆ ಅನ್ನುವುದನ್ನ ಸಮಯ ಬಂದಾಗ ಕೇಳುತ್ತೇನೆ"

ಇನ್ನೇನು ಪ್ರಶ್ನೆಗಳನ್ನು  ಕೇಳುವ  ಸ್ಥಿತಿಯಲ್ಲಿ ನಾನಿರಲಿಲ್ಲ, ದಿನಕ್ಕೆ ಇಪ್ಪತ್ತು ಪೌಂಡ್ ಗಳ ವೇತನ ಮುಖ್ಯ , ಹಾಗಾಗಿ ಸುಮ್ಮನಾದೆ 

ಡೆಲಾಮಿರ್ ಕೋರ್ಟ್ ರೈಲು ನಿಲ್ದಾಣದಿಂದ ಐದು ಮೈಲಿ , ಲಾರ್ಡ್ ಲಿಂಚ್ಮಿಯರ್ ದಾರಿಯಲ್ಲಿ ಇನ್ನೇನು ಹೇಳಲಿಲ್ಲ, ನಾನು ಸುಮ್ಮನಿದ್ದೆ, ಗಾಡಿಯಿಂದ ಇಳಿಯುವಕ್ಕೆ ಮುಂಚೆ 
"ನೋಡಿ ಡಾ . ಹ್ಯಾಮಿಲ್ಟನ್ ನಾನು ನಿಮ್ಮಹಾಗೆ ಒಬ್ಬ ವೈದ್ಯ"
" ಓ ಹೌದಾ ಸರ್ ನನಗೆ ಗೊತ್ತಿರಲಿಲ್ಲ "
" ಹೌದು ಬಹಳ ವರ್ಷಗಳ  ಹಿಂದೆ ನಾನು ಪದವಿ ಪಡೆದೆ ಆದರೆ ಕಾರಣಾಂತರಗಳಿಂದ   ವೈದ್ಯ ವೃತ್ತಿ ಪ್ರಾರಂಭಿಸುವುದಕ್ಕೆ ಸಾಧ್ಯವಾಗಲಿಲ್ಲ, ಆದರೂ ನಾನು ಕಲಿತದ್ದನ್ನು ಮರೆತಿಲ್ಲ , ಇಲ್ಲಿ ನೋಡಿ 
ಡೆಲಾಮಿರ್ ಕೋರ್ಟ್ ಗೇಟ್  ಬಂತು".

 ಗೇಟಿನಿಂದ ಒಳಗೆ ಸುಮಾರು ದೂರದಲ್ಲಿ ಒಂದು ದೊಡ್ಡ ಕಟ್ಟಡ ಇಂಗ್ಲೆಂಡ್ ದೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವ ಮ್ಯಾನರ್ ಹೌಸ್. ನಮ್ನನ್ನು  ಎದಿರಗೊಳ್ಳಲು ನಿಂತಿದ್ದ ವ್ಯಕ್ತಿ, ಸುಮಾರು ಆರು ಅಡಿ ಮೇಲೆ ಇರುವ ಎತ್ತರ  , ತಲೆಯಮೇಲೆ ಕಪ್ಪು ಹ್ಯಾಟ್ , ಟ್ರಿಮ್ ಮಾಡಿಲ್ಲದ ಬಿಳಿ ಗಡ್ಡ ,  ತೋಟದಲ್ಲಿ ಕೆಲಸ ಮಾಡುವಾಗ ಕೈಗೆ ಹಾಕುವ ಗ್ಲೋವ್ಸ್. ಲಾರ್ಡ್ ಲಿಂಚ್ಮಿಯರ್, ಗಾಡಿಯಿಂದ ಇಳಿಯುದಕ್ಕೆ  ಮುಂಚೆ " ಇವರೇ ಸರ್ ಥಾಮಸ್ ರೊಸ್ಸಿಟರ್   "

ಇಳಿದು  ಆತ್ಮೀಯತೆಯಿಂದ " ಮೈ ಡಿಯರ್ ಥಾಮಸ್ ಹೇಗಿದ್ದೀರ?"
ಆದರೆ ಉತ್ತರ ತಕ್ಷಣ ಬರಲಿಲ್ಲ , ಮಖದಲ್ಲಿ ಏನೂ ವಾತ್ಸಲ್ಯ ಇರಲಿಲ್ಲ , ನಾನು ಲಾರ್ಡ್ ಲಿಂಚ್ಮಿಯರ್ ಹಿಂದೆ ನಿಂತಿದ್ದೆ , ನನ್ನ ಕಡೆ ನೋಡಿ ಸರ್ ಥಾಮಸ್ ಮೆಲ್ಲಗೆ ಗೊಣಗಿದ್ದು ಸ್ವಲ್ಪ  ಕೇಳಿಸಿತು  " ..... ಅಪರಿಚಿತರು ...ಇಲ್ಲಿಗೆ.. ಏನು ಕಾರಣ .. ಇಷ್ಟ ಇಲ್ಲ ... ."

ತಕ್ಷಣ ಲಾರ್ಡ್ ಲಿಂಚ್ಮಿಯರ್  ನನ್ನ ಕಡೆ ತಿರಗಿ " ಡಾ. ಹ್ಯಾಮಿಲ್ಟನ್,  ನಿಮ್ಮನ್ನು ಸರ್ ಥಾಮಸ್ ಅವರಿಗೆ ಪರಿಚಯ ಮಾಡುತ್ತೇನೆ"  ಸರ್ ಥಾಮಸ್ ನಗಲಿಲ್ಲ, ಕೈಕುಲಕಲಿಲ್ಲ, ನೇರವಾಗಿ ನೋಡಿ " ಲಾರ್ಡ್ ಲಿಂಚ್ಮಿಯರ್ ಹೇಳಿದ್ದ ಪ್ರಕಾರ ನಿಮಗೆ ರೆಕ್ಕೆ ಹುಳಗಳ ಬಗ್ಗೆ ಆಸಕ್ತಿ ಇದೆಯಂತೆ  ?"
" ಹೌದು ಸರ್ ನಿಮ್ಮ ಸಂಶೋಧನೆಯಿಂದ ಕೆಲವು ವಿಚಾರಗಳನನ್ನು ತಿಳಿದಿದ್ದೇನೆ"
" ಹಾಗಾದರೇ ಒಂದೆರಡು ಹೆಸರುಗಳನ್ನು  ಹೇಳಿ ಅದರ ಬಗ್ಗೆ ವಿವರಣೆ ಕೊಡಿ",  ನಾನು  ಈ ರೀತಿಯ ಪರೀಕ್ಷೆ ನಿರೀಕ್ಷಿಸಿರಲಿಲ್ಲ, ವಿಚಿತ್ರ  ಮನುಷ್ಯ,   ಮನೆ ಹೊರಗೆ ನಿಲ್ಲಿಸಿ ರೆಕ್ಕೆ ಹುಳಗಳ ಮೇಲೆ ಮಾತನಾಡು ಅಂದರೆ ಇವರಿಗೆ ಬುದ್ದಿ ನೆಟ್ಟಗಿಲ್ಲ ಅನ್ನುವ ಭಾವನೆ ಬಂತು , ನನಗೆ ತಿಳಿದ ವಿಚಾರಗಳನ್ನು ಹತ್ತು ನಿಮಿಷ ಹೇಳಿದೆ, ಮತ್ತು  ಸರ್ ಥಾಮಸ್ ನಡೆಸಿದ ಸಂಶೋಧನೆ ಸಹ ವಿವರಿಸಿದೆ 

" ಡಾ . ಹ್ಯಾಮಿಲ್ಟನ್ ನೀವು ನನ್ನ ಪುಸ್ತಕವನ್ನು ಓದಿ ತಿಳಿಕೊಂಡಿದ್ದೀರ, ಬಹಳ ಸಂತೋಷ, ನೋಡಿ ಜನರಿಗೆ ಕ್ರೀಡೆಗಳು ಮನೋರಂಜನೆ ಇತ್ಯಾದಿ ಗಳಮೇಲೆ ಗಮನ ಹೆಚ್ಚು ಆದರೆ ಈ ಅಜ್ಞಾನಿ ಜನಕ್ಕೆ  ರೆಕ್ಕೆಹುಳ  ಬಗ್ಗೆ ಸ್ವಲ್ಪಾನೂ  ಆಸಕ್ತಿ ತೋರಿಸುವುದಿಲ್ಲ,   ನಿಮ್ಮನ್ನು ಭೇಟಿಯಾಗಿದ್ದು ಒಳ್ಳೇದೇ ಆಯಿತು,  ಬನ್ನಿ ನನ್ನ ರೆಕ್ಕೆ ಹುಳಗಳ ಸಂಗ್ರಹ ತೋರಿಸುತ್ತೇನೆ "  

ಅವರನ್ನು ಹತ್ತಿರದಿಂದ ಮನೆ ಒಳಗೆ ನೋಡಿದಾಗ ತಲೆಮೇಲೆ ಹ್ಯಾಟ್ ಇರಲಿಲ್ಲ , ಹಣೆ ಮೇಲೆ, ನರಗಳ ದುರ್ಬಲದಿಂದ ಇರಬೇಕು , ಸ್ನಾಯುಗಳು ಅಲ್ಲಾಡಿತ್ತಿರುವುದು ಗಮನಿಸಿದೆ , ನಮ್ಮ ಕಡೆ ತಿರಿಗಿ ಮಾತನಾಡಿದಾಗ ಈ ಲಕ್ಷಣಗಳು ಹೆಚ್ಚಾದಂತೆ ತೋರಿತು. 

" ನಿಮ್ಮನ್ನ ಸ್ವಾಗತಿಸೊಕ್ಕೆ  ಲೇಡಿ ರೊಸ್ಸಿಟರ್  ಇಲ್ಲಿಲ್ಲ, ಅಂದಹಾಗೆ ಚಾರ್ಲ್ಸ್, ಈವಲಿನ್ ಇಲ್ಲಿಗೆ ಬರುವ ವಿಚಾರ ನಿನಗೆ ತಿಳಿಸಿದ್ದಳಾ ?"
" ನಿಮಗೆ ಗೊತ್ತಿದೆ ಥಾಮಸ್ , ಅವಳ  ಸ್ನೇಹಿತರು ಬಹಳ ಮಂದಿ ಇದ್ದಾರೆ ಆದ್ದರಿಂದ ಇನ್ನೂ ಕೆಲವು ದಿನ ಲಂಡನ್ ನಲ್ಲಿ ಇರುವ ನಿರ್ಧಾರ ಅವಳದ್ದು"
" ಸರಿ ಅವಳ ಇಷ್ಟ , ಆದರೆ ಆಕೆ ಇಲ್ಲಿ ಇಲ್ಲದೆ ಇರೋದು ನನಗೆ ಬಹಳ ಬೇಜಾರು "
" ನನಗೆ ಇದು ಗೊತ್ತಿದೆ ಚಾರ್ಲ್ಸ್ , ಆದ್ದರಿಂದ ನಾನೇ  ಬಂದೆ ಮತ್ತು  ಡಾ .  ಹ್ಯಾಮಿಲ್ಟನ್  ನಿಮ್ಮನ್ನು ಭೇಟಿಯಾಗಲಿ ಅಂತ ಕರೆತಂದೆ, ನಿಮ್ಮ ಸಂಶೋಧನೆ ಬಗ್ಗೆ ಈತನಿಗೆ ಬಹಳ ಕುತೂಹಲ ಇದೆ "
  " ನಾನು ಈಗ ನಿವೃತ್ತಿ ಜೀವನ ನಡೆಸುತ್ತಿದ್ದೇನೆ ಡಾ . ಹ್ಯಾಮಿಲ್ಟನ್, ಪ್ರಪಂಚದ ನಾನಾ ಭಾಗಗಳಿಗೆ ಹೋಗಿ ಅನೇಕ ವಿಧವಾದ ರೆಕ್ಕೆ ಹುಳಗಳನ್ನು ಹುಡುಕಿ ತಂದಿದ್ದೀನಿ.  ನನ್ನಲ್ಲಿ ಇರುವ ಈ ಅತ್ಯುತ್ತಮ ಸಂಗ್ರಹ ಇನ್ನೆಲ್ಲೂ ಇಲ್ಲ ಎಂದು ಹೇಳಬಲ್ಲೆ, ನಿಮಗೂ ಈ ವಿಚಾರದಲ್ಲಿ ಆಸಕ್ತಿ ಇರುವದರಿಂದ ಬನ್ನಿ ನೋಡುವಿರಂತೆ " . 

ನಿಜವಾಗಲೂ , ಈ ಸಂಗ್ರಹವನ್ನು ಮೆಚ್ಚಲೇಬೇಕು, ಹಲವಾರು ಮರದ ಬೀರುಗಳಲ್ಲಿ ಪ್ರಪಂಚದ ನಾನಾ ಭಾಗದಿಂದ ತಂದ ಈ ಕ್ರಿಮಿಗಳನ್ನು ಜೋಡಿಸಿ ಅದರ ವಿವರಣೆಯನ್ನು ಬರೆದಿತ್ತು . ಕೆಂಪು ಕಪ್ಪು ಹಸಿರು ಬಣ್ಣದ ಕ್ರಿಮಿಗಳು ಸಾವಿರಾರು.  ತನ್ನ ಇಡೀ ಜಾಯಮಾನವನ್ನೇ ಈ ಸಂಗ್ರಹಕ್ಕೆ ಕಳೆದಿದ್ದಾರೆ  ಅನ್ನಬಹುದು.  ಸುಮಾರು ಎರಡು ಗಂಟೆ ತಮ್ಮ ಸಂಶೋಧನೆ ಮೇಲೆ ಮಾತಾಡಿರಬಹುದು ಬಹುಶ: ನಾನೇ ಇವರ ಮೊದಲನೆಯ  ಸಹಾನುಭೂತಿಯ ಕೇಳುಗ. 

   ಸರ್ ಥಾಮಸ್ ಪಕ್ಕದಲ್ಲೇ   ಲಾರ್ಡ್ ಲಿಂಚ್ಮಿಯರ್   ನಿಂತಿದ್ದರೂ ಒಂದು ಮಾತೂ ಅಡರಿಲಿಲ್ಲ ಆದರೆ ಅವರ ಮಖದಲ್ಲಿ  ಆತಂಕ ಅಥವಾ ಕಳವಳ, ಮತ್ತು  ಮುಂದೆ ಏನಾಗಬಹುದು ಅನ್ನುವ ಚಿಂತೆ ಅವರನ್ನು ಕಾಡಿಸುತ್ತಾ ಇರುವಹಾಗಿತ್ತು 

ಅವರ ಸೇವಕ ಬಂದು ಊಟ ತಯಾರಾಗಿದೆ ಎಂದು ಹೇಳಿದಾಗ , ಎಲ್ಲರೂ ತಮ್ಮ ಕೊಠಡಿಗೆ ಹೋಗಿ ಸರಿಯಾದ ಉಡುಪುಗಳನ್ನು ಧರಿಸಿ ಊಟದ  ಮನೆಯಲ್ಲಿ ಸೇರಿದೆವು.
ಊಟದ ಸಮಯದಲ್ಲಿ ಸರ್ ಥಾಮಸ್ ,  ಲೇಡಿ ರೊಸ್ಸಿಟರ್  ಮತ್ತು ಮಗ ಮನೆಯಲ್ಲಿ ಇಲ್ಲದಿರುವುದು ಬಹಳ ಬೇಜಾರು, ದಿನಗಳನ್ನು ಕಳೆಯುವುದು ಕಷ್ಟ ಅನ್ನುವುದೇ  ನನ್ನ ಚಿಂತೆ ಎಂದು ಪಶ್ಚಾತ್ತಾಪ ಪಟ್ಟರು . 
ಊಟದನಂತರ ಬಿಲಿಯರ್ಡ್ಸ್ ಆಡುವ ಕೋಣೆ ಯಲ್ಲಿ ಸ್ವಲ್ಪ ಕಾಲ ಧೂಮಪಾನ ಮಾಡುತ್ತಾ ಕುಳಿತು ನಂತರ ಅವರವರ  ಕೋಣೆಗೆ ಹೋಗಿ ಮಲಗುವುದಕ್ಕೆ ಹಿಂತಿರಿಗಿದೆವು.  ನನ್ನ ಹಿಂದೆ  
ಲಾರ್ಡ್ ಲಿಂಚ್ಮಿಯರ್ ಬಂದು " ಡಾ ಹ್ಯಾಮಿಲ್ಟನ್ , ನೀವು ಇಲ್ಲಿ ಮಲಗ ಬೇಡಿ ನನ್ನ ಕೋಣೆ ಗೆ ಬನ್ನಿ"  ಅಂತ ಹೇಳಿದಾಗ, ಈತನಿಗೆ ಬುದ್ದಿ ಕೆಟ್ಟಿರ ಬೇಕು ಅನ್ನುವ ಸಂದೇಹ ಬಂತು.    ಇದರ ಉದ್ದೇಶ ಏನು ಅಂತ ಕೇಳಿದಾಗ " ಇದನ್ನು ನಾನು ನಿಮಗೆ ವಿವರಿಸಬೇಕಾಗಿಲ್ಲ, ಬೆಳಗ್ಗೆ ಸೇವಕ ಬಂದು ಎಬ್ಬಿಸುವಕ್ಕೆ ಮುಂಚೆ ನೀನು ನಿಮ್ಮ ಕೋಣೆ ಗೆ ಹೋಗಿ " 
"ಆದರೆ ಏಕೆ ಹೇಳಿ"
" ನನ್ನ ನರಗಳ ದುರ್ಬಲತೆಯಿಂದ ಒಬ್ಬನೇ ಮಲಗುವುದಕ್ಕೆ ಆಗುವುದಿಲ್ಲ , ಈಗ ನಾನು ಹೇಳಿದ್ದನ್ನು ಕೇಳಿ "
 ಇಪ್ಪತ್ತು ಪೌಂಡ್ ಗಳು ಕಣ್ಣಿನಮುಂದೆ ಬಂತು, ವಿಧಿ ಇಲ್ಲದೆ ಅವರನ್ನು ಅವರ ಕೋಣೆಗೆ  ಹಿಂಬಾಲಿಸಿದೆ   
"ಆದರೆ ಸರ್, ಈ ಹಾಸಿಗೆ ಒಬ್ಬರಿಗೆ ಮಾತ್ರ  "
"ಹೌದು  ಒಬ್ಬರಿಗೆ ಜಾಗ, ಇನ್ನೊಬ್ಬರು ಕಾವಲಿರಬೇಕು "
" ಕಾರಣ , ಯಾರಾದರೂ ಹಲ್ಲೆ ಮಾಡುವ ಸಾಧ್ಯತೆ ಇದೆಯೇ ?"
"ಆ ಅನುಮಾನ ನನಗಿದೆ "
" ಹಾಗಾದರೆ ಬಾಗಿಲಗೆ ಚಿಲಕ ಹಾಕಿ ಮಲಗಬಹುದಲ್ಲ "
"ಇಲ್ಲ, ನನ್ನ ಮೇಲೆ ಹಲ್ಲೆ ನಡೆಯಲಿ ಅನ್ನುವುದೇ  ಅಸೆ  "
ಈತನಿಗೆ  ಬುದ್ಧಿವಿಕಲ್ಪ ಆಗಿದೆ ಎಂಬುದು ನನಗೆ ಖಚಿವಾಯಿತು " ಹಾಗಾದರೆ ನೀವು ಮಲಗಿ  ನಾನು ಈ ಕುರ್ಚಿಮೇಲೆ ಕುಳಿತು ಕಾವಲಿರುತ್ತೇನೆ "
" ಇಬ್ಬರೂ ಮಾಡೋಣ , ನೀವು ಎರಡು ಗಂಟೆಯವರೆಗೆ ಎದ್ದಿರಿ  ನಂತರ ನನ್ನ ಸರದಿ,  ನನ್ನನ್ನು ಆ ಸಮಯಕ್ಕೆ ಎಬ್ಬಿಸಿ "
"ಸರಿ "
" ಎಚ್ಚ್ಚರದಿಂದಿರಿ ,ಕೂತಲ್ಲೇ ನಿದ್ದೆ ಮಾಡಬೇಡಿ ,  ಏನಾದರೂ ಶಬ್ದ ಕೇಳಿಸಿದರೆ ನನ್ನನ್ನು ಎಬ್ಬಿಸಿ"

ನನಗೆ ತೂಕಡಿಕೆ ಬಂದರೂ ಕಷ್ಟದಿಂದ ಎದ್ದಿದ್ದೆ , ಕೊಣೆಯ ಎದುರಿನ ಓಣಿಯಲ್ಲಿ ಗಡಿಯಾರ ಹದಿನೈದು ನಿಮಿಷಕ್ಕೆ ಸದ್ದುಮಾಡುತಿತ್ತು, ಕೊನೆಗೆ ಎರಡು ಗಂಟೆ ಹೊಡೆದ ಶಬ್ದ ಕೇಳಿಸಿತು, ತಕ್ಷಣ 
ನಿಶ್ಚಿಂತೆಯಿಂದ ಮಲಗಿದ್ದ ಲಾರ್ಡ್ ಲಿಂಚ್ಮಿಯರ್ ಭುಜವನ್ನು ಮುಟ್ಟಿ ಎಬ್ಬಿಸಿದೆ, ಅವರು ಗಾಬರಿಯಿಂದ ಎದ್ದು " ಏನಾಯಿತು ಶಬ್ದ ಏನಾದರೂ ಕೇಳಿಸಿತೇ ?"
"ಇಲ್ಲ ಸರ್, ಎರಡು ಗಂಟೆ ಅದಕ್ಕೆ ಎಬ್ಬಿಸಿದೆ "
" ಸರಿ, ನೀವು ಮಲಗಿ ನಾನು ಎದ್ದಿರುತ್ತೇನೆ "
ಎಷ್ಟು ಹೊತ್ತು ನಿದ್ದೆ ಮಾಡಿದ್ದೆನೋ ಅರಿವಿಲ್ಲ , ಆದರೆ ನನ್ನ ತೋಳನ್ನು ಯಾರೋ ಬಲವಾಗಿ ಎಳೆದಾಗ ಎಚ್ಚರಿಕೆ ಆಯಿತು .  " ಬೇಗ, ಬೇಗ ಏಳಿ ,  ಬನ್ನಿ ಶಬ್ದ ಮಾಡದೆ ಕೇಳಿ " ಲಾರ್ಡ್ ಲಿಂಚ್ಮಿಯರ್ ನನ್ನನ್ನು ಎಳೆಯುತ್ತಾ ಒಂದು ಮೂಲೆಯಲ್ಲಿ ನಿಲ್ಲಿಸಿದರು. 
ಸಂದೇಹವೇ ಇರಲಿಲ್ಲ, ಯಾರೋ ಬರುತ್ತಿರುವ ಶಬ್ದ, ಬಹಳ ಎಚ್ಚರದಿಂದ ಬರುತ್ತಿರುವ ಹಾಗಿದೆ, ಹೆಜ್ಜೆಯ ಶಬ್ದ ಒಂದು ಕ್ಷಣ ನಿಲ್ಲುವುದು ನಂತರ ಕೇಳುವುದು, ನನ್ನ ಕೈಯನ್ನು ಹಿಡದಿದ್ದು  ಲಾರ್ಡ್ ಲಿಂಚ್ಮಿಯರ್  ಬಿಟ್ಟರಲಿಲ್ಲ , ಆದರೆ ಉದ್ರೇಕದಿಂದ ನಡಗುತ್ತಿದ್ದರು, 
" ಯಾರು ಇರಬಹುದು ಸರ್ ?
" ಅವರೇ .....   ಅವರೇ .."
"ಸರ್ ಥಾಮಸ್, ಏನು ಬೇಕು ಅವರಿಗೆ  ?"
"ಹೌದು ಹೌದು  ನಾನು ಹೇಳುವರಗೆ ಏನೂ ಮಾಡಬೇಡಿ
 ಮುಂದಾಗಿದ್ದ ಬಾಗಿಲು ನಿಧಾನವಾಗಿ ತೆರೆದಿದ್ದು ಕೇಳಿಸಿತು  ಓಣಿಯಲ್ಲಿ ಹಚ್ಚಿದ್ದ  ದೀಪ ದಿಂದ ಸ್ವಲ್ಪ ಬೆಳಕಿತ್ತು , ಒಂದು  ಬಗ್ಗಿದ ವ್ಯಕ್ತಿ ಒಳಗೆ ಧಾವಿಸಿ, ತಕ್ಷಣ   ಹಾಸಿಗೆಮೇಲೆ  ಮೇಲೆ ಧಭ ಧಭ ಅಂತ ಬಾರಿಸಿದ್ದು ಕಂಡು ನನ್ನ ಜೀವವೇ ಹೋದಂತಾಯಿತು.   ಕೆಲವೇ ಕ್ಷಣಗಳಲ್ಲಿ ಲಾರ್ಡ್ ಲಿಂಚ್ಮಿಯರ್ ನನ್ನ ಕೈ ಬಿಟ್ಟು  ಸರ್ ಥಾಮಸ್ ಹಿಂದೆ ನಿಂತು ಅವರ ಎರಡು ಕೈಯನ್ನು ಅವರ ಕತ್ತಿನ ಮೇಲೆ ಹಾಕಿ ನನ್ನನ್ನು   ಕೂಗಿದರು , ಎತ್ತರದ ವ್ಯಕ್ತಿ ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾಗ ನಾನು ತಕ್ಷಣ ಅವರ ನೆರವಿಗೆ ಹೋಗಿ ಇಬ್ಬರೂ  ಆತನನ್ನು  ಹತೋಟಿಗೆ ತಂದು ಅವರು  ತೊಟ್ಟಿದ್ದ ಡ್ರೆಸ್ಸಿಂಗ್ ಗೌನ್ ನಲ್ಲಿದ್ದ ಹಗ್ಗವನ್ನು ತೆಗೆದು ಅವರ ಎರಡು ಕೈಗಳನ್ನು ಕಟ್ಟಿದವು,  ಈ ಕಿರುಚಾಟ ಕೇಳಿದ ಮೂರು ಸೇವಕರು ಓಡಿ  ಬಂದರು. ಇವರ ಸಹಾಯದಿಂದ ಸರ್ ಥಾಮಸ್ ಸಂಪೂರ್ಣವಾಗಿ ನಮ್ಮ ಸೆರೆಯಾದರು , ಕೆಳಗೆ ಕೂತು ಸಿಟ್ಟಿನಿಂದ ನೊರೆಯಾಡುತ್ತಿದ್ದರು. ಅವರ ಮುಖವನ್ನು  ಸರಿಯಾಗಿ ನೋಡಿದಾಗ ಈತ ಒಬ್ಬ ಅಪಾಯಕಾರಿ ಹುಚ್ಚ ಅನ್ನುವುದು ಸ್ಪಷ್ಟವಾಯಿತು , ಅದೂ ಅಲ್ಲದೆ ಹಾಸಿಗೆ ಪಕ್ಕದಲ್ಲಿ ಬಿದ್ದಿದ್ದ ಸುತ್ತಿಗೆಯಿಂದ   ಸರ್ ಥಾಮಸ್ ರವರ ಉದ್ದೇಶ್ಯ ಲಾರ್ಡ್ ಲಿಂಚ್ಮಿಯರ್ ರನ್ನು ಕೊಲ್ಲುವುದಾಗಿತ್ತು ಅನ್ನುವುದರದಲ್ಲಿ ಸಂಶಯ ಏನೂ ಇರಲಿಲ್ಲ. 
ಅವರನ್ನು ಎತ್ತಿ ನಿಲ್ಲಿಸಿದಾಗ , ಲಾರ್ಡ್ ಲಿಂಚ್ಮಿಯರ್ " ಅವರನ್ನು ಹಿಂಸೆ ಮಾಡಬೇಡಿ,  ಉದ್ರೇಕದ ನಂತರ ಈ  ಮೂರ್ಖತನ ಕೆಲವು ನಿಮಿಷಗಳು ಮಾತ್ರ ಇರುತ್ತದೆ." ಹೀಗೆ ಹೇಳುತ್ತಿರುವಾಗಲೇ 
ಸರ್ ಥಾಮಸ್ ಅವರ ತಲೆ ತಗ್ಗಿಸಿ ನಿಂತಲ್ಲೇ ನಿದ್ದೆ ಮಾಡುವಹಾಗಿತ್ತು, ಎಲ್ಲರೂ ಸೇರಿ ಅವರನ್ನು ನಿಧಾವಾಗಿ ನಡೆಸಿಕೊಂಡು ಅವರ ಕೋಣೆ ಯಲ್ಲಿ ಹಾಸಿಗೆಮೇಲೆ ಮಲಗಿಸಿದೆವು.  ಪ್ರಜ್ಞೆ ಇದ್ದಹಾಗೆ ಕಾಣಿಸಲಿಲ್ಲ  ಮೇಲೆ  ಮೇಲೆ ಉಸಿರು ಬಿಡುತ್ತಿದ್ದರು . 
" ನೀವೆಲ್ಲರು  ಇವರ ಮೇಲೆ ನಿಗಾ ಇಟ್ಟಿರಿ , ಡಾ.  ಹ್ಯಾಮಿಲ್ಟನ್ , ನೀವು ನನ್ನ ಜೊತೆಯಲ್ಲಿ ಬನ್ನಿ ನನ್ನ ಕೊಣೆಯಲ್ಲಿ ನಿಮಗೆ ಇದರ ಬಗ್ಗೆ ವಿವರಣೆ ಕೊಡುತ್ತೇನೆ"

ಅವರ ಕೋಣೆ  ಸೇರಿದಾಗ " ನೋಡಿ ನನ್ನ ಮೈದುನ,  ಸರ್ ಥಾಮಸ್ ಬಹಳ ಒಳ್ಳೆ ಮನುಷ್ಯ, ಅವರಿಗೆ ತನ್ನ ಪತ್ನಿ ಮತ್ತು ಮಗನ ಮೇಲೆ ಅಪಾರ ಪ್ರೀತಿ, ಆದರೆ ಅವರ ಮನೆತನದಲ್ಲಿ   ಹಲವಾರು ತಲೆ ಮಾರುಗಳಿಂದ ಬಂದಿರುವುದು ಕಳಂಕಿನ ಹುಚ್ಚುತನ. ಆಗಾಗ್ಗೆ ಕೊಲೆಗಾರನಿಗೆ ಬರುವ ಪ್ರವೃತ್ತಿ, ಇವರಿಗೂ ಬಂದಿದೆ, ಒಂದು ವಿಚಿತ್ರ ಅಂದರೆ,  ಯಾರು ತುಂಬಾ ಹತ್ತಿರವಾದವರ ಮೇಲೆ ದಾಳಿ ನಡೆಸುವುದು. ಆದ್ದರಿಂದ ಅವರ ಮಗ  ಬೋರ್ಡಿಂಗ್ ಶಾಲೆಯಲ್ಲಿದ್ದಾನೆ ಮತ್ತು ಲೇಡಿ ರೊಸ್ಸಿಟರ್ ಆದಷ್ಟು ಮನೆಯಿಂದ ಹೊರಗೆ ಇರುತ್ತಾರೆ. ನೀವು ನನ್ನ ತಂಗಿ ಮಖದ ಮೇಲೆ ಆಗಿದ್ದ ಗಾಯವನ್ನು ಗಮನಿರಸಬಹುದು. ಈತನಿಗೆ  ಇದರ ಅರಿವು ಚೂರು ಇಲ್ಲ ಮತ್ತು ತಾನು ಇಂತ ಘಟನೆಗಳಿಗೆ ಕಾರಣ ಅನ್ನುವುದು ನಗೆಗೇಡಿತನ ಅನ್ನುವ ಭಾವನೆ. ಇವರ ಹವ್ಯಾಸ ರೆಕ್ಕೆ ಹುಳಗಳ ಸಂಗ್ರಹಣ ಮತ್ತು ಏಕಾಂತ ಜೀವನ, ಬೇರೆ ಯಾರ ಹತ್ತಿರನೂ ಸಂಪರ್ಕ ಬೆಳಸಿಲ್ಲ ಮತ್ತು ಬೇಕಾಗೂ ಇಲ್ಲ, ಇಂಥವರಿಗೆ ವೈದ್ಯರಿಂದ ಚಿಕಿತ್ಸೆ  ಕೊಡಿಸುವುದು ದೊಡ್ಡ ಸಮಸ್ಯೆ ಇತ್ತು, ಅದೂ ಅಲ್ಲದೆ ವೈದ್ಯನಿಗೂ ಇವರಿಗೆ ಈ ಮಾನಸಿಕ ರೋಗ ಇದೆ ಎಂದು ಅರಿವು ಮಾಡಿಸುವುದೂ  ಹೇಗೆ ಅನ್ನುವುದು ನಮ್ಮನ್ನು  ಕಾಡುತಿತ್ತು. ಆದರೆ , ಸುದೈವದಿಂದ ಇವರಿಗೆ ಈ ಮನಸ್ಥಿತಿ ಬರುವ ಮೊದಲು ಕೆಲವು ಸೂಚನೆಗಳು ಕಾಣಿಸುತ್ತವೆ. ನಿಮ್ಮ ಹತ್ತಿರ ಮಾತನಾಡುವಾಗ ಅವರ ಹಣೆಯಮೇಲೆ ಸ್ನಾಯುಗಳ ಅಲ್ಲಾಡಿಕೆ ನೀವು ಗಮನಿಸಿದಿರಾ ? ಇದು ಮೂರು ಎರಡು ಮೂರು ದಿನಗಳ ಹಿಂದೆ ಶುರು ವಾಗುವುದು.  ಅಂತಹ ಸಮಯದಲ್ಲಿ ಲೇಡಿ  ರೊಸ್ಸಿಟರ್ ಏನೋ ನೆಪ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ನಮ್ಮ ಮನೆಗೆ ಬರುತ್ತಿದ್ದರು, ನನ್ನ ಗುರಿ ಇದ್ದಿದ್ದು ಹೇಗಾದರೂ ಮಾಡಿ ಒಬ್ಬ ವೈದ್ಯನ ಮುಂದೆ ಸರ್ ಥಾಮಸ್ ಅವರಿಗೆ ಈ ಮಾನಸಿಕ ರೋಗ ಇದೆ ಅನ್ನುವುದನ್ನ ತೋರಿಸಿವುದು. ಅವರ ಮನೆಗೆ ಅಪರಿಚಿತರು ಹೋಗುವುದಕ್ಕೆ ಒಂದು ಒಳ್ಳೆ ಕಾರಣ ಹುಡಕಬೇಕಾಗಿತ್ತು. ರೆಕ್ಕೆ  ಹುಳದ  ಬಗ್ಗೆ ಆಸಕ್ತಿ ಇರುವರು ಸಿಕ್ಕಿದರೆ ಸರ್  ಥಾಮಸ್ ಅವರನ್ನು ನೋಡುವ ಸಾಧ್ಯತೆ ಇದೆ ಎಂದು ಆ ರೀತಿ  ಜಾಹೀರಾತನ್ನು ಪತ್ರಿಕೆಯಲ್ಲಿ ಹಾಕಿದ್ದು. ನೀನು ಅದನ್ನ ನೋಡಿ ಬಂದದ್ದು ನಮ್ಮ ಅದೃಷ್ಟ, ನನಗೆ ಯಾವ ಘಳಿಗೆಯಲ್ಲಿ ಈ ಅನಾಹುತ ನಡೆಯುತ್ತೆ ಅನ್ನುವುದು ಊಹಿಸುವುದು ಕಷ್ಟ, ಆದರೆ ಇದು ನನ್ನ ಮೇಲೆ ನಡೆಯುತ್ತೆ ಅನ್ನುವುದು ಖಚಿತ. ಕಾರಣ ಈತನಿಗೆ ನನ್ನ  ಮೇಲೆ ಅಕ್ಕರೆ ಮತ್ತು ಗೌರವ ಇದೆ. ನಿಮ್ಮ ಸಹಾಯದಿಂದ ಈಗ ಇವರಿಗೆ ಸರಿಯಾದ ಚಿಕಿತ್ಸೆ  ದೊರೆಯುವ ಸಂದರ್ಭ ಬಂದಿದೆ   " 

"ಡಾ. ಹ್ಯಾಮಿಲ್ಟನ್, ನೀವು ಸರ್ ಥಾಮಸ್ ಅವರ ಮಾನಸಿಕ ಕಾಯಿಲೆಯ ಪ್ರಮಾಣ ಪತ್ರಕ್ಕೆ ಸಹಿ ಹಾಕುತ್ತೀರಾ?"
"ಖಂಡಿತ ಸರ್ , ಆದರೆ ಕಾನೂನಿನ ಪ್ರಕಾರ ಎರಡು ಸಹಿ ಬೇಕಲ್ಲ "
" ನಾನು ಒಬ್ಬ ಪರಿಣಿತಿ ಹೊಂದಿರುವ ವೈದ್ಯ ಅನ್ನುವುದು ಮರೆಯಬೇಡಿ, ಬೇಕಾದ್ದ ಪತ್ರಗಳು ಇಲ್ಲೇ ಇದೆ ನಮ್ಮಿಬ್ಬರ ಸಹಿ ಆದನಂತರ ರೋಗಿಯನ್ನು ಇಲ್ಲಿಂದ ಸಾಗಿಸಬಹುದು "

ಪ್ರಸಿದ್ಧ "ಬೀಟಲ್ ಹಂಟರ್ " ಸರ್  ಥಾಮಸ್ ರೊಸ್ಸಿಟರ್ ಅವರ ಭೇಟಿಯಾಗಿದ್ದು, ಲಾರ್ಡ್ ಲಿಂಚ್ಮಿಯರ್ ಮತ್ತು ಲೇಡಿ ರೊಸ್ಸಿಟರ್ ಪರಿಚಯ ನನ್ನ ವೈಯಕ್ತಿಕ ಜೀವನದಲ್ಲಿ ಯಶಸ್ವಿಯಾಗಿ ಮುಂದುವರೆಯುವದಕ್ಕೆ  ಸಹಾಯವಾಯಿತು.

ಸರ್ ಥಾಮಸ್ ಚಿಕಿತ್ಸೆನಂತರ ಗುಣವಾಗಿ  ಮಾನಸಿಕ ಆಸ್ಪತ್ರೆಯಿಂದ ಹೊರಗೆ ಬಂದಿದ್ದಾರೆ, ಆದರೆ, ನಾನು ಪುನಃ ಡೆಲಾಮಿರ್  ಕೋರ್ಟ್ ನಲ್ಲಿ  ಉಳಿದರೆ ಬಾಗಿಲಗೆ  ಚಿಲಕ ಹಾಕಿ ಮಲಗುವುದು ಉತ್ತಮ ಅಲ್ಲವೇ?   
 
~ ರಾಮಮೂರ್ತಿ , ಬೇಸಿಂಗ್ ಸ್ಟೋಕ್ 

ಕಪ್ಪು ವೈದ್ಯನ ಕಥೆ – ಸರ್ ಆರ್ಥರ್ ಕಾನನ್ ಡಾಯ್ಲ್ ಸರಳಾನುವಾದ: ರಾಮಮೂರ್ತಿ (ಬೇಸಿಂಗ್ ಸ್ಟೋಕ್)

ಸರ್ ಅರ್ಥರ್ ಕಾನನ್ ಡೊಯ್ಲ್ ಬರೆದ The Story of the Black Doctor ಕಥೆಯ ಅನುವಾದ.  ಈ ಕಥೆ The Strand magazine ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. 

Bishop’s Crossing ಅನ್ನುವ ಸಣ್ಣ ಊರು ಲಿವರ್ ಪೂಲ್  ಪಟ್ಟಣದಿಂದ ಸುಮಾರು  ಹತ್ತು ಮೈಲಿ. ೧೮೭೦ ವರ್ಷದಲ್ಲಿ ಡಾ. ಅಲೋಸಿಸ್ಸ್ ಲಾನಾ ಎಂಬ ವೈದ್ಯ ತನ್ನ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಲು ಈ ಊರಿಗ ಬಂದ,  ಈ ವೈದ್ಯನ ಕೇವಲ ಎರಡು ವಿಷಯಗಳು ಮಾತ್ರ ಊರಿನ ಜನಗಳಿಗೆ ಗೊತ್ತಿತ್ತು, ಒಂದು, ಈತ ಗ್ಲಾಸ್ಗೋ (Glasgow ) ವಿಶ್ವ ವಿದ್ಯಾಲಯದಿಂದ ಉನ್ನತ ವರ್ಗದ ಪದವಿ ಪಡೆದಿದ್ದು  ಮತ್ತು  ಕಪ್ಪು ಮೈಬಣ್ಣ,  ಆದರೆ  ಹೊರ ದೇಶದ ಪ್ರಜೆ,  ಯಾವ ದೇಶ ಅನ್ನುವುದು ಗೊತ್ತಿಲ್ಲ.  ಇವನ ನಡತೆ, ಹಾಕುವ ಬಟ್ಟೆಗಳು  ಮತ್ತು ವೈಲಕ್ಷಣ್ಯ ಯುರೋಪಿಯನ್ ಮಾದರಿ. ವೈದ್ಯಕೀಯ ವೃತ್ತಿ ಯಲ್ಲಿ ನಿಪುಣ.  ಇಷ್ಟಾದರೂ ಈತ ಒಂಟಿಯಾಕಿದ್ದಾನೆ ಎಂಬ ಮಾತು ಊರಿನವರ ಬೀದಿ ಮಾತಾಗಿತ್ತು.  ವರ್ಷದ ನಂತರ ಲಿವರ್ ಪೂಲ್  ದಿನ ಪತ್ರಿಕೆಯಲ್ಲಿ ಈ ಪ್ರಕಟಣೆ ಯನ್ನು ನೋಡಿ ಜನರಿಗೆ ಸಂತೋಷ ಮತ್ತು ಆಶ್ಚರ್ಯ ಆಯಿತು. 

The engagement is announced between Dr Aloysius Lana of Bishop’s Crossing and Frances, daughter of Late James Morton of Leigh Hall.  

ಇವರಿಬ್ಬರ ಪರಿಚಯ ಹೇಗಾಯಿತು ಅನ್ನುವದು ಸಹಾ ಊರಿನ ಸಣ್ಣ ಮಾತಾಯಿತು.  ಫ್ರಾನ್ಸೆಸ್ ತಂದೆ ಮತ್ತು ತಾಯಿ ತೀರಿದ್ದರಿಂದ ಮನೆಯಲ್ಲಿ ಅವಳ ಅಣ್ಣ ಆರ್ಥರ್ ಮಾತ್ರ ಈ ಮನೆಯಿದ್ದರು.  ಇದು ಆ ವರ್ಷದ ಫೆಬ್ರುವರಿ ತಿಂಗಳಲ್ಲಿ, ಜೂನ್ ತಿಂಗಳಲ್ಲಿ  ಡಾ.ಲಾನಾಗೆ ಹೊರದೇಶದ ಒಂದು ಲಕೋಟೆ ಅಂಚೆಯಲ್ಲಿ ಬಂತು.  ಊರಿನ ಅಂಚೆ ಮಾಸ್ಟರ್ ಇದನ್ನು ಕುಶಾಲವಾಗಿ ನೋಡಿ ಇದು ಬ್ಯೋನಸ್ ಏರಿಸ್ ಅಂಚೆಮುದ್ರೆ ಅರ್ಜಂಟೈನ ದೇಶದ್ದು ಎಂದು ತಿಳಿದ; ಈ ವಿಚಾರ ಊರಿನವರ ಹತ್ತಿರ ಹರಟೆ ಹೊಡೆಯುವಾಗ ಬೇಕಾಗಬಹುದು ಅಲ್ಲವೇ? 

ಮಾರನೇ ದಿನ ಡಾ. ಲಾನಾ ಫ್ರಾನ್ಸೆಸ್ ಮನೆಯಲ್ಲಿ ಬಹಳ ಹೊತ್ತು ಇದ್ದು ಹೊರಗೆ ಬಂದಾಗ ಮಖದ ಮೇಲೆ ಉದ್ರೇಕ ಇದ್ದಿದ್ದು ಅವಳ ಮನೆ ಸೇವಕಿ ಗಮನಿಸಿದಳು ಅದೂ  ಅಲ್ಲದೆ ಫ್ರಾನ್ಸೆಸ್ ದಿನವೆಲ್ಲ ತನ್ನ ಕೋಣೆಯಿಂದ ಹೊರಗೂ ಸಹ ಬರಲಿಲ್ಲ.  

ವಾರದ ನಂತರ ಈ ಸಂಬಂಧ ಮುರಿದಿದೆ ಅನ್ನುವ ಮಾತು ಊರಿನ ಜನರ ಮಾತಾಯಿತು.  ಡಾ. ಲಾನಾ ಫ್ರಾನ್ಸಸ್ ಗೆ ಹೀಗೆ ಮೋಸ ಮಾಡ ಬಾರದಾಗಿತ್ತು ಅನ್ನುವ ಮಾತು ಎಲ್ಲರ ಬಾಯಿನಲ್ಲಿ ಇತ್ತು. ಅವಳ ಅಣ್ಣ ಅರ್ಥರ್ ಇದಕ್ಕೆ ತಕ್ಕ ಶಿಕ್ಷೆ ಆಗಬೇಕು ಅಂತ ಕೆಲವರ ಹತ್ತಿರ ಬೆದರಿಕೆ ಹಾಕಿದ್ದನಂತೆ. 

ಭಾನುವಾರ ಚರ್ಚಿನಲ್ಲಿ ನಡೆಯುವ  ಪ್ರಾರ್ಥನೆಗೂ ಡಾ. ಲಾನಾ ಬರುತ್ತಿರಲಿಲ್ಲ.  ವೈದ್ಯಕೀಯ ಮಾಸಪತ್ರಿಕೆ Lancet ನಲ್ಲಿ ಬಿಷಪ್’ಸ್ ಕ್ರಾಸ್ಸಿಂಗ್ ನಲ್ಲಿ ಒಂದು ವೈದ್ಯಕೀಯ ನಡೆಸುವ ಮನೆ ಮಾರಾಟಕ್ಕೆ ಇದೆ ಅನ್ನುವ ಜಾಹಿರಾತು ಸಹ ಬಂದಿತ್ತು.  

ಸೋಮವಾರ, ಜೂನ್ ೨೫ ನೇ ತಾರೀಕು, ಇಷ್ಟುದಿನ ಊರಿನ ವದಂತಿ ಹಬ್ಬಿದ್ದ ಮಾತಿನ ಬದಲು ಒಂದು ದುರಂತವಾದ ಸುದ್ದಿ ಕಾಡುಕಿಚ್ಚಿನಂತೆ ಹರಡಿತು. ಇದರ ಬಗ್ಗೆ ವಿವರಣೆ ಹೀಗಿದೆ. 

ಡಾ. ಲಾನಾ ಮನೆಯಲ್ಲಿ ಇಬ್ಬರು ಮಹಿಳೆಯರು ಕೆಲಸದಲ್ಲಿದ್ದರು, ಮಾರ್ಥಾ ಅನ್ನುವ Housekeeper ಮತ್ತು ಮೇರಿ ಸೇವಕಿ.  ಕುದುರೆ ಗಾಡಿ ಓಡಿಸುವನು ಮತ್ತು ಕೈಕೆಲಸಕ್ಕೆ ಇದ್ದ ಒಬ್ಬ ಹುಡುಗ ಮನೆಯ ಹೊರಗೆ ಒಂದು ಸಣ್ಣ ಕೊಠಡಿಯಲ್ಲಿ ಮಲಗುತ್ತಿದ್ದರು.  ಡಾ. ಲಾನಾ ರಾತ್ರಿ ಬಹಳ ಹೊತ್ತು ತನ್ನ ಓದಿನಕೋಣೆಯಲ್ಲಿ (Study) ಇರುವುದು ಇವರಿಗೆಲ್ಲ ತಿಳಿದಿತ್ತು.  ಇದರ ಪಕ್ಕದಲ್ಲಿ ರೋಗಿಗಳನ್ನು ಪರೀಕ್ಷೆ ಮಾಡುವ ಕೊಠಡಿ; ಇದಕ್ಕೆ ಹೊರಗಿನಿಂದ ಬರುವವರಿಗೆ ಪ್ರತ್ಯೇಕ ಬಾಗಿಲು ಇತ್ತು. 

ಅವತ್ತಿನ ದಿನ, ಮಾರ್ಥಾ  ಸುಮಾರು ರಾತ್ರಿ ೯ ೩೦ ನೋಡಿದಾಗ ಡಾ. ಲಾನಾ ತನ್ನ ಕೊಣೆ ಯಲ್ಲಿ ಬರೆಯುತ್ತಿದ್ದನ್ನು ಗಮನಿಸಿ ಶುಭರಾತ್ರಿ ಹೇಳಿ ಮೇರಿಯನ್ನು ಮಲಗಲು ಕಳಿಸಿದಳು.  ಮಾರ್ಥಾಳ ಮನೆ ಕೆಲಸ ಮುಗಿದಾಗ ಗಡಿಯಾರ ೧೧ ಹೊಡೆದಿದ್ದು ಕೇಳಿ ಅವಳ ಕೋಣೆ ಸೇರಿದಳು.  ಸುಮಾರು ಇಪ್ಪತ್ತು ನಿಮಿಷದ ನಂತರ ಯಾರೋ ಗಟ್ಟಿಯಾಗಿ ಕಿರಿಚಿದ್ದು ಕೇಳಿ ಕೆಳಗೆ ಬಂದು ಡಾ. ಲಾನಾ ಕೋಣೆಯ ಮುಂದೆ ನಿಂತು ಬಾಗಿಲನ್ನು ತಟ್ಟಿದಾಗ ಒಳಗಿಂದ ಕರ್ಕಶ ದನಿಯಲ್ಲಿ “ಯಾರು ಅಲ್ಲಿ?” ಎಂದರು.  “ನಾನು ಮಾರ್ಥಾ” ಎಂದಾಗ, “ನನ್ನನ್ನು ಸುಮ್ಮನೆ ಬಿಟ್ಟು ಹೋಗು” ಅನ್ನುವ ಉತ್ತರ ಬಂತು. “ನನ್ನನ್ನು ಕರೆದಿದ್ದ ಹಾಗಿತ್ತು ಸರ್” ಎಂದರೂ ಉತ್ತರ ಬರಲಿಲ್ಲ.  ಆ ರೀತಿಯಾಗಿ ಡಾ. ಲಾನಾ ಯಾವತ್ತೂ ಮಾತನಾಡಿರಲಿಲ್ಲ.  ಆದ್ದರಿಂದ ಈ ಗಡುಸಾದ ಧ್ವನಿ ಕೇಳಿ ಅವಳಿಗೆ ಸ್ವಲ್ಪ ಅನುಮಾನ ಬಂದರೂ ಇದು ಇರಬೇಕೆಂದು ಹಿಂತಿರಿಗಿದಳು. 

ಸುಮಾರು ೧೨ ಗಂಟೆಗೆ ಶ್ರೀಮತಿ ಮಾಡಿಂಗ್ ಅನ್ನುವ ಮಹಿಳೆ ತನ್ನ ಗಂಡನ ಆರೋಗ್ಯ ಹದಗೆಟ್ಟಿರುವ ಕಾರಣದಿಂದ ಈ ವೈದ್ಯನ  ಕೋಣೆಯ ಬಾಗಿಲು ತಟ್ಟಿದಳು.  ಒಳಗೆ  ದೀಪ ಉರಿಯುತಿತ್ತು, ಆದರೆ ಉತ್ತರ ಸಿಗಲಿಲ್ಲ.  ನಿರಾಶೆಯಿಂದ ವಾಪಸ್ಸು ಹೋಗುತ್ತಿದ್ದಾಗ,  ರಸ್ತೆಯಲ್ಲಿ ಒಬ್ಬ ಮನುಷ್ಯ ಕೈಯಲ್ಲಿ ಒಂದು ಚಾವಟಿ ತರಹ ಕಂಡ ವಸ್ತುವನ್ನು ಹಿಡಿದು ವೈದ್ಯನ ಮನೆ ಒಳಗೆ ಪ್ರವೇಶಿದ್ದನ್ನು ಈಕೆ ಕಂಡು ತಲೆಯೆತ್ತಿ ನೋಡಿದಾಗ ಆ ಮನುಷ್ಯ ಅರ್ಥರ್ ಮಾರ್ಟನ್  ಎನ್ನುವುದು ಗೊತ್ತಾಯಿತು.  “ವೈದ್ಯರು ಮನೆಯಲ್ಲಿ ಇರುವಂತೆ ಕಾಣಿವುದಿಲ್ಲ ಸರ್” ಅಂದಳು.  ಅರ್ಥರ್ ಕೋಪದಿಂದ “ನಿನಗೆ ಹೇಗೆ ಗೊತ್ತು? ದೀಪ ಒಳಗೆ ಉರಿಯುತ್ತಿದೆ” ಎಂದು ಹೇಳಿ ವೈದ್ಯನ ಮನೆ ಬಳಿಗೆ ಹೋದ. 

ಮಹಿಳೆ ಮಾಡಿಂಗ್ ಮನೆಗೆ ಹಿಂತಿರುಗಿದಳು.  ಆದರೆ ಸುಮಾರು ಮೂರು ಗಂಟೆಗೆ ಗಂಡನ ಪರಿಸ್ಥಿತಿ ಇನ್ನೂ ಹದಗೆಟ್ಟಿದ್ದರಿಂದ ಪುನ್ಹ ವೈದ್ಯರನ್ನು ನೋಡಲು ವಾಪಸ್ಸು ಬಂದಳು.  ಮನೆ ಹತ್ತಿರ ಗಿಡಗಳ ಮಧ್ಯ ಯಾರೋ ಹೊಂಚು ಹಾಕುತ್ತಿದ್ದು ಕಾಣಿಸಿತು, ಒಳಗೆ ದೀಪ ಇನ್ನೂ ಬೆಳಗುತ್ತಿತ್ತು. ಆದರೆ ಬಾಗಿಲನ್ನು ಅನೇಕ ಸಲ ತಟ್ಟಿದಾಗಲೂ ಉತ್ತರವಿರಲಿಲ್ಲ.  ಬಾಗಿಲ ಪಕ್ಕದಲ್ಲೇ ಇದ್ದ  ಕಿಟಕಿಗೆ  ಹಾಕಿದ್ದ ಪರದೆ ಸ್ವಲ್ಪ ತೆಗದಿತ್ತು.  ನೋಡಿದಾಗ ದೀಪವು ಸಹ ಉರಿಯುತ್ತಿತ್ತು.  ಆದರೆ ಯಾರೂ ಕಾಣಸಲಿಲ್ಲ.  ಮೇಜಿನ ಮೇಲೆ ಅನೇಕ ಪುಸ್ತಕಗಳು ಮತ್ತು ವೈದ್ಯನಿಗೆ ಬೇಕಾದ ಕೆಲವು ಸಲಕರಣೆಗಳು ಹರಡಿತ್ತು.  ನೆಲದ ಮೇಲೆ ಬಿಳಿಯದೊಂದು ಕೈಚೀಲ (glove) ಬಿದ್ದಿದ್ದು ಕಾಣಿಸಿತು.  ಆದರೆ ಇನ್ನೂ ಸರಿಯಾಗಿ ನೋಡಿದಾಗ ಇದು ಬರಿ ಕೈ ಚೀಲ ಅಲ್ಲ, ಒಬ್ಬ ಮನುಷ್ಯನ  ತೋಳು  ಮತ್ತು ದೇಹ ನೆಲದ ಮೇಲಿತ್ತು.  ಇಲ್ಲಿ ದೊಡ್ಡ ಅನಾಹುತವೇ ನಡೆದಿದೆ ಅಂತ ತಿಳಿದು ಮನೆಯ ಮುಂಬಾಗಿಲಿಗೆ ಬಂದು ಕರೆಗಂಟೆ (ಡೋರ್ ಬೆಲ್) ಬಾರಿಸಿ ಮಾರ್ಥಾಳನ್ನು ಎಬ್ಬಿಸಿ ಗಾಬರಿಯಿಂದ ತಾನು ನೋಡಿದನ್ನು ವಿವರಿಸಿದಳು.  ಮಾರ್ಥಾ ತಕ್ಷಣ ವೈದ್ಯನ ಕೋಣೆಗೆ ಹೋಗಿ ನೋಡಿದಾಗ ಡಾ . ಲಾನಾ  ನೆಲದಮೇಲೆ ಬಿದ್ದಿರುವುದನ್ನು ಕಂಡು ಮೇರಿಯನ್ನು ಪೊಲೀಸರನ್ನು ಕರೆಯಲು ಕಳಿಸಿದಳು. ವೈದ್ಯನ ಒಂದು ಕಣ್ಣು ಕಪ್ಪಾಗಿತ್ತು, ಅಲ್ಲದೆ ಮುಖದ ಮೇಲೆ ಮತ್ತು ನೆತ್ತಿಯ ಮೇಲೆ ಗಾಯಗಳ ಕಲೆ ಸಹ ಇತ್ತು.  ಅಂದರೆ ಯಾರೋ ಸಾಯುವುದಕ್ಕೆ ಮುಂಚೆ ಹಿಂಸೆ ಮಾಡಿರಬೇಕು ಅನ್ನುವುದು ಖಚಿವಾಯಿತು. ವೈದ್ಯನ ಬಟ್ಟೆಗಳಲ್ಲಿ ಬದಲಾವಣೆ ಇರಲಿಲ್ಲ.  ಕಾಲಿನ  ಬಿಳಿಯ ಚಪ್ಪಲಿಗಳ (slippers) ಮೇಲೆ ಕೊಳೆ ಇರಲಿಲ್ಲ, ಆದರೆ ನೆಲದ ಮೇಲಿ ಹಾಸಿದ್ದ ರತ್ನಕಂಬಳಿ ಮೇಲೆ ಗಲೀಜಾದ ಬೂಟಿನ ಕಲೆಗಳಿತ್ತು. ಅಂದರೆ ಯಾರೋ ಹೊರಗಿನಿಂದ ಬಂದು ವೈದ್ಯನ ಕೊಲೆ ಮಾಡಿ ಪರಾರಿ ಆಗಿರಬೇಕು.  ಬೂಟಿನ ಗಾತ್ರ ನೋಡಿ ಇದು ಒಬ್ಬ ಗಂಡಿನ ಕೆಲಸ ಎಂದು ಪೋಲಿಸರು ಊಹೆಪಟ್ಟರು.  ಇದು ಬಿಟ್ಟರೆ ಅವರಿಗೆ  ಇನ್ನೇನು  ಸುಳಿವು ಇರಲಿಲ್ಲ.  ವೈದ್ಯನ ಚಿನ್ನದ ಗಡಿಯಾರ ಜೇಬಿನಲ್ಲೇ ಇತ್ತು.  ಮೇಜಿನ ಮೇಲೆ ದುಡ್ಡಿನ ಪೆಟ್ಟಿಗೆ (cash box) ಇದ್ದು, ಅದರಲ್ಲಿ ದುಡ್ಡು ಇರಲಿಲ್ಲ.  ಮಾರ್ಥಾಳ ಪ್ರಕಾರ ಅವತ್ತೇ ಡಾ. ಲಾನಾ ಮನೆ ಕಂದಾಯದ ಹಣ ಕೊಟ್ಟಿದ್ದರು; ಅಂದರೆ ಕಳ್ಳತನ ನಡೆದಿಲ್ಲ ಎಂಬುದು ಸ್ಪಷ್ಟವಾಯಿತು.  ಇನ್ನೊಂದು ಮುಖ್ಯವಾದ ವಿಷಯ ಮಾರ್ಥಾಳ ಗಮನಕ್ಕೆ ಬಂದಿದ್ದು ಫ್ರಾನ್ಸೆಸ್ನ ಭಾವಚಿತ್ರ ಚೌಕಟ್ಟಿನಲ್ಲಿರಲಿಲ್ಲ.  ಅದೇ ಸಾಯಂಕಾಲ ಈ ಭಾವಚಿತ್ರವನ್ನು ಮಾರ್ಥಾ ನೋಡಿದ್ದಳು.  ನೆಲದ ಮೇಲೆ ಬಿದ್ದಿದ್ದ ಒಂದು ಹಸಿರು ಬಣ್ಣದ ಕಣ್ಣಿಗೆ ಕಟ್ಟುವ ಬಟ್ಟೆ (Eye Patch) ಇವಳ ಗಮನಕ್ಕೆ ಬಿತ್ತು.  ಇದನ್ನು ಹಿಂದೆ ನೋಡಿದ ಹಾಗೆ ಅವಳಿಗೆ ಜ್ಞಾಪಕವಿರಲಿಲ್ಲ. 

 ಪೊಲೀಸರಿಗೆ ಅರ್ಥರ್ ಮಾರ್ಟನ್ ಬಿಟ್ಟರೆ ಇನ್ನಾರ ಮೇಲೂ ಸಂಶಯ ಬರಲಿಲ್ಲ.  ಇವನು ಮಧ್ಯರಾತ್ರಿಯ ವೇಳೆಯಲ್ಲಿ ವೈದ್ಯನ ಮನೆಯ ಮುಂದೆ ಇದ್ದ ಮತ್ತು ಕೈಯಲ್ಲಿ ಒಂದು ಚಾವಟಿ ಬೇರೆ ಇತ್ತು.  ಅವನ ತಂಗಿಗೆ ಈ ವೈದ್ಯ ಮಾಡಿದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಬಗ್ಗೆ ಮಾತನಾಡಿದ್ದ.  ಸಾಕಷ್ಟು ಆಧಾರಗಳಿಂದ ಪೊಲೀಸರಿಗೆ ಇವನನ್ನು ದಸ್ತಗಿರಿ ಮಾಡಿದರು.  ಮರಣೋತ್ತರ ಪರೀಕ್ಷೆಯ ಪ್ರಕಾರ ಮೃತನ ಹೃದಯ ಬಹಳ ದುರ್ಬಲವಾಗಿತ್ತು; ಆದರೆ ಡಾ. ಲಾನಾ ಗಟ್ಟಿಮುಟ್ಟಾಗಿದ್ದವನು, ಆತನ ಮರಣ ಹಿಂಸೆ ಮತ್ತು ಗಾಯಗಳಿಂದ ಆದದ್ದು; ಆರ್ಥರ್ ಮಾರ್ಟನ್ ವೈದ್ಯನ ಕೊಲೆ ಮಾಡುವ ಮುಂಚೆ ಹೊರಗೆ ಪೊದೆಗಳಲ್ಲಿ ಮುಚ್ಚಿಟ್ಟಿಕೊಂಡಿದ್ದ – ಇತ್ಯಾದಿಯಾಗಿ ಫಿರ್ಯಾದಿ ವಕೀಲರು ಮತ್ತು ಪೊಲೀಸರು ನ್ಯಾಯಾಲಯದಲ್ಲಿ ಹೇಳಿಕೆ ಕೊಟ್ಟರು.  ಆದರೆ ಅರ್ಥರ್ ಮಾರ್ಟನ್ ಕಡೆಯ ವಕೀಲ ಮಿಸ್ಟರ್ ಹಂಫ್ರಿ, “ನಮ್ಮ ಕಕ್ಷಿಗಾರ ಬಹಳ ಗಣ್ಯವ್ಯಕ್ತಿ.  ಸಮಾಜದಲ್ಲಿ ಅವನಿಗೆ ಬಹಳ ಗೌರವ ಇದೆ.  ಆದರೆ ಆತನಿಗೆ ಸ್ವಲ್ಪ ಅಹಂಕಾರ ಇದೆ ಅಂದರೆ ತಪ್ಪಾಗಲಾರದು, ಕೊಲೆ ಮಾಡುವ ಕೆಟ್ಟತನ ಖಂಡಿತ ಇಲ್ಲ. ಇವನು ಡಾ. ಲಾನಾ ಅವರನ್ನು ನೋಡುವುದಕ್ಕೆ ಹೋಗಿದ್ದು ನಿಜ.  ಅವರ ಸಂಸಾರದ ಒಂದು ಸಮಸ್ಯೆಯನ್ನು ಬಗೆಹರಿಸುವ ಉದ್ದೇಶ ಇತ್ತು.  ಆದರೆ ಅವನು ಡಾ ಲಾನಾ ಮನೆ ಒಳಗೆ ಹೋಗಲಿಲ್ಲ.  ವೈದ್ಯ ಮನೆಯಲ್ಲಿ ಇಲ್ಲ ಅನ್ನುವುದು ಗೊತ್ತಾದದ್ದರಿಂದ ಸುಮಾರು ಮೂರು ಗಂಟೆಯವರೆಗೂ ಕಾದು ಮನೆಗೆ ಬಂದ.  ನನ್ನ ಕಕ್ಷಿಗಾರ ಕೊಲೆ ಮಾಡಿಲ್ಲ.  ವೈದ್ಯನ ಕೊಲೆಯ ವಿಚಾರ ಇವನಿಗೆ ಗೊತ್ತಾಗಿದ್ದು ಪೊಲೀಸರು ದಸ್ತಗಿರಿ ಮಾಡಲು ಬಂದಾಗ ಮಾತ್ರ, ಆದ್ದರಿಂದ ಈತ ನಿರಪರಾಧಿ” ಎಂದು ವಾದಿಸಿದರು.

ಮಾರನೆ  ದಿನ ನ್ಯಾಯಾಲಯದಲ್ಲಿ ಇಬ್ಬರ ವಕೀಲರೂ ವಾದ ನಡೆಸಿದರು.  ಹಲವಾರು ಸಾಕ್ಷಿಗಳು ಹೇಳಿಕೆ ಕೊಟ್ಟರು.  ಶ್ರೀಮತಿ ಮಾಡಿಂಗ್ ತನ್ನ ಸಾಕ್ಷಿಯಲ್ಲಿ ತಾನು ನೋಡಿದ್ದನ್ನು ಹೇಳಿದಳು.  ಅರ್ಥರ್ ಮಾರ್ಟನ್ ಮನೆಯ ಸೇವಕಿ ಅವಳ ಯಜಮಾನ ಮನೆಗೆ ಬಂದಾಗ ಸುಮಾರು ಮೂರು ಗಂಟೆ ಅನ್ನವುದು ಕೇಳಿ ಕೆಲವರಿಗೆ ಸಂಶಯ ಉಂಟಾಯಿತು. 

ನ್ಯಾಯಾಧೀಶರು ಮರುದಿನಕ್ಕೆ ತಮ್ಮ ವಾದವನ್ನು ಮುಂದುವರೆಸಲು ವಕೀಲರಿಗೆ ಕರೆಕೊಟ್ಟಾಗ,  ಮಿಸ್ಟರ್ ಹಂಫ್ರಿ ಎದ್ದು ನಿಂತು “ನ್ಯಾಯಾಧೀಶರೇ, ನಮ್ಮ ಕಡೆಯಿಂದ ಒಬ್ಬರು ಸಾಕ್ಷಿ ಕೊಡಲು ಬಂದಿದ್ದಾರೆ.  ಅವರಿಗೆ ಅವಕಾಶ ಇವತ್ತೇ ಕೊಡಿ” ಅಂತ ಮನವಿ ಮಾಡಿದರು. 

“ಮಿಸ್ ಫ್ರಾನ್ಸೆಸ್ ಮಾರ್ಟನ್ ” ಎಂದು ಕರೆದಾಗ ಎಲ್ಲರಿಗೂ ಆಶ್ಚರ್ಯ – ಈಕೆ ಇದುವರೆಗೂ ಯಾವ ರೀತಿಯಲ್ಲೂ ಈ ಮೊಕದ್ದಮೆಯಲ್ಲಿ ಭಾಗವಾಗಿರಲಿಲ್ಲ!  ಫ್ರಾನ್ಸೆಸ್ ಮಖದಲ್ಲಿ ಯಾವ ಆತಂಕವೂ ಇರಲಿಲ್ಲ.  ಸಾಕ್ಷಿಸ್ಥಾನದಲ್ಲಿ ನಿಂತು ಬೈಬಲ್ ಹಿಡಿದು ಸತ್ಯವನ್ನು ಹೇಳುತ್ತೇನೆ ಎಂದು ಪ್ರಮಾಣವಚನ ಮಾಡಿ, “ತನ್ನ ಮತ್ತು ಡಾ. ಲಾನಾ ಅವರ ಸಂಬಂಧ ಕೊನೆಗಾಣಿಸಿದ್ದರಲ್ಲಿ ಡಾ. ಲಾನಾ ತಪ್ಪು ಏನೂ ಇಲ್ಲ.  ಆತ ಈ ವಿಚಾರದಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ನಡೆದುಕೊಂಡಿದ್ದಾರೆ.  ಅವರ ಮನೆಯಲ್ಲಿ ಏನೋ ಪ್ರಸಂಗ ನಡೆದು ನಮ್ಮಿಬ್ಬರ ಸಂಬಂಧ ಮುರಿಯುತು.  ಎಷ್ಟೇ ನೋವಾದರೂ ನನಗೆ ಅವರ ಇಕ್ಕಟ್ಟು ಅರ್ಥವಾಗಿದೆ.  ಅರ್ಥರ್ ಮುಂದೆ ಇದನ್ನು ವಿವರಿಸಿದೆ, ಆದರೆ ಅವನು ಬಹಳ ಕೋಪದಲ್ಲಿದ್ದ.  ಸರಿಯಾದ ಬುದ್ದಿ ಕಲಿಸಬೇಕು, ಡಾ. ಲಾನಾ ಹತ್ತಿರ ಇವತ್ತೇ ಮಾತನಾಡುತ್ತೇನೆ ಮತ್ತು ಪರಿಹಾರ ಕಾಣಿಸುತ್ತೇನೆ ಅಂತ ಹೇಳಿ ಹೊರಟುಹೋದ.  ಅರ್ಥರ್ ಸ್ವಲ್ಪ ಕೋಪಿಷ್ಠ, ನನ್ನ ಮಾತು ಕೇಳಲಿಲ್ಲ” ಎಂದಾಗ ಈ ಮಾತುಗಳನ್ನು ಕೇಳಿ ಆರ್ಥರ್ ಕೊಲೆಗಾರ ಇರಬೇಕು ಅನ್ನುವ ಸಂಶಯ ಕೆಲವರಿಗೆ ಬಂದಿದ್ದು ಸಹಜ. 

ಮಿಸ್ಟರ್ ಹಂಫ್ರಿ:  ಮಿಸ್ ಫ್ರಾನ್ಸೆಸ್, ನಿಮ್ಮ ನಂಬಿಕೆಯಲ್ಲಿ ನಿಮ್ಮ ಅಣ್ಣ ಕೊಲೆಗಾರನೇ?  

ನ್ಯಾಯಾಧೀಶರು:  ಈ ಪ್ರೆಶ್ನೆಯನ್ನು ನೀವು ಕೇಳುವುದಕ್ಕೆ ನಮ್ಮ ಅನುಮತಿ ಇಲ್ಲ, ಇದನ್ನು ನ್ಯಾಯಾಲಯ ನಿರ್ಧಾರ ಮಾಡುತ್ತೆ.

ಮಿಸ್ಟರ್ ಹಂಫ್ರಿ:  ಸರಿ.  ಮಿಸ್ ಫ್ರಾನ್ಸೆಸ್ ಡಾ. ಲಾನಾ ಮರಣಕ್ಕೆ ನಿಮ್ಮ ಅಣ್ಣ, ಹೊಣೆ ಅಲ್ಲ ಅನ್ನುತ್ತೀರಾ?

ಮಿಸ್ ಫ್ರಾನ್ಸೆಸ್:  ಹೌದು.

ಮಿಸ್ಟರ್ ಹಂಫ್ರಿ:  ನಿಮಗೆ ಹೇಗೆ ಗೊತ್ತು?

ಮಿಸ್ ಫ್ರಾನ್ಸಸ್:  ಡಾ. ಲಾನಾ ಬದುಕಿದ್ದಾರೆ, ಆದ್ದರಿಂದ.

ಇದನ್ನು ಕೇಳಿ ಎಲ್ಲರೂ ಚಕಿತರಾದರು ಮತ್ತು ಗುಸು ಗುಸು ಮಾತು ಕೇಳಿ ನ್ಯಾಯಾಧೀಶರು “order, order ” ಅಂತ ಕೂಗಿ ಮಿಸ್ಟರ್ ಹಂಫ್ರಿ ಅವರನ್ನು ಮುಂದುವರೆಸುದಕ್ಕೆ ಆಜ್ಞಾಪಿಸಿದರು. 

ಮಿಸ್ಟರ್ ಹಂಫ್ರಿ:  ಇದು ನಿಮಗೆ ಹೇಗೆ ಗೊತ್ತು?

ಮಿಸ್ ಫ್ರಾನ್ಸಸ್:  ಅವರಿಂದ ನನಗೆ ಒಂದು ಕಾಗದ ಬಂದಿದೆ, ಈ ಪ್ರಕರಣ ಆದಮೇಲೆ ಬರೆದಿದ್ದು.

ಮಿಸ್ಟರ್ ಹಂಫ್ರಿ:  ಈ ಕಾಗದ ನಿಮ್ಮ ಬಳಿ ಇದೆಯೇ?

ಮಿಸ್ ಫ್ರಾನ್ಸಸ್:  ಹೌದು, ಅದನ್ನು ತೋರಿಸುವ ಉದ್ದೇಶ ಇಲ್ಲ.

ಮಿಸ್ಟರ್ ಹಂಫ್ರಿ:  ಲಕೋಟೆ ನಿಮ್ಮ ಹತ್ತಿರ ಇದೆಯೇ?

ಮಿಸ್ ಫ್ರಾನ್ಸಸ್:  ಇದೆ.

ಮಿಸ್ಟರ್ ಹಂಫ್ರಿ:  ಅದರ ಮೇಲೆ ಅಂಚೆ ಗುರುತು ಇದೆಯೇ?

ಮಿಸ್ ಫ್ರಾನ್ಸಸ್:  ಇದೆ, ಲಿವರ್ ಪೂಲ್

 ಮಿಸ್ಟರ್ ಹಂಫ್ರಿ:  ತಾರೀಕು?

ಮಿಸ್ ಫ್ರಾನ್ಸಸ್:  ೨೨ ಜೂನ್.

ಮಿಸ್ಟರ್ ಹಂಫ್ರಿ:  ಹಾಗಾದರೆ ಡಾ. ಲಾನಾ ಮರಣದ ಸುದ್ದಿ ಹರಡಿದ ಮೇಲೆ, ಅವರದ್ದೇ ಬರವಣಿಗೆ ಎಂಬುದನ್ನ ನೀವು ಪ್ರಮಾಣ ಮಾಡುತ್ತೀರಾ?

ಮಿಸ್ ಫ್ರಾನ್ಸಸ್:  ಖಂಡಿತವಾಗಿ.

ಮಿಸ್ಟರ್ ಹಂಫ್ರಿ: ನ್ಯಾಯಾಧೀಶರೇ, ನಾನು ಇನ್ನೂ ಆರು ಸಾಕ್ಷಿಗಳನ್ನು ಕರೆಯುತ್ತೇನೆ, ಈ ಬರವಣಿಗೆ ಡಾ. ಲಾನಾ ಅವರದ್ದು ಅನ್ನುವ ಬಗ್ಗೆ.

ನ್ಯಾಯಾಧೀಶರು ಇದನ್ನು ಒಪ್ಪಿ ನಾಳೆ ಮುಂದುವರೆಸೋಣ ಅಂದರು. 

ಆದರೆ ಫಿರ್ಯಾದಿ ವಕೀಲ, ಮಿಸ್ಟರ್ ಕಾರ್ಟರ್, “ಈ ಕಾಗದ ನಮ್ಮ ವಶಕ್ಕೆ ಕೊಡಿ, ನಾವು ಇದನ್ನು ಪರಿಶೀಲಿಸಿ ಬರವಣಿಗೆ ಡಾ ಲಾನಾ ಅವರದ್ದೋ ಎಂಬುದನ್ನು ತಿಳಿಯಬೇಕು. ಈ ಕಾಗದ ಮಿಸ್ ಫ್ರಾನ್ಸೆಸ್ ಹತ್ತಿರ ಇದ್ದಿದ್ದರೆ, ಇದನ್ನು ಮುಂಚೆಯೇ ಪೊಲೀಸರಿಗೆ ತಿಳಿಸಿದ್ದರೆ ಈ ಮೊಕ್ಕದ್ದಮೆಯ ಅವಶ್ಯಕತೆ ಇರುತ್ತಿರಲಿಲ್ಲ.  ಈ ನಾಟಕ ಅರ್ಥರ್ ಹೇಳಿ ಮಾಡಿಸಿರಬೇಕು,  ನಮಗೆ ಈ ವಿಚಾರದಲ್ಲಿ ನಂಬಿಕೆ ಬರುತ್ತಿಲ್ಲ” ಅಂದರು.

ಮಿಸ್ಟರ್ ಹಂಫ್ರಿ:  ಮಿಸ್ ಫ್ರಾನ್ಸೆಸ್, ಈ ಅಪವಾದನೆಗೆ ಉತ್ತರ ಕೊಡಿ.

ಮಿಸ್ ಫ್ರಾನ್ಸೆಸ್:  ಡಾ. ಲಾನಾ ಈ ಕಾಗದಲ್ಲಿ ಇರುವ ವಿಚಾರವನ್ನು  ಬಹಿರಂಗ ಮಾಡುವುದು ಬೇಡ ಅಂದಿದ್ದರು.

ಮಿಸ್ಟರ್ ಕಾರ್ಟರ್:  ಹಾಗಾದರೆ ಈಗ ಏಕೆ ಬಹಿರಂಗ ಮಾಡಿದರಿ?

ಮಿಸ್ ಫ್ರಾನ್ಸೆಸ್:  ನನ್ನ ಅಣ್ಣನನ್ನು ಉಳಿಸುವುದಕ್ಕೆ.

ನ್ಯಾಯಾಧೀಶರು:  ಮಿಸ್ಟರ್ ಹಂಫ್ರಿ, ಹಾಗಾದರೆ ಮರಣಹೊಂದಿದ ವ್ಯಕ್ತಿ ಯಾರು?  ಶವ ಪರೀಕ್ಷೆ ಮಾಡಿದವರು, ಡಾ. ಲಾನಾ ಅವರ ಸೇವಕರು ಮತ್ತು ಇತರರು ಇದರ ಬಗ್ಗೆ ಯಾವ ಸಂದೇಹವನ್ನು ತೋರಿಸಿಲ್ಲ.  ಆದರೆ, ಮಿಸ್ ಫ್ರಾನ್ಸೆಸ್ ಡಾ . ಲಾನಾ ಬದುಕಿದ್ದಾರೆ ಅಂತ ಹೇಳಿದ್ದಾರೆ.  ಇದನ್ನು ಪರಿಶೀಲಿಸಿ ನಾಳೆ ಇಲ್ಲಿಗೆ ಬನ್ನಿ.

ಮಿಸ್ಟರ್ ಹಂಫ್ರಿ:  ನಾಳೆ ಇದನ್ನು ಪರಿಹರಿಸುವುದಕ್ಕೆ ಪ್ರಯತ್ನ ಮಾಡುತ್ತೇವೆ.

ಮಾರನೇ ದಿನ ನ್ಯಾಯಾಯಲದಲ್ಲಿ ಜನರು ಕಿಕ್ಕಿರಿದ್ದರು.  ನ್ಯಾಯಾಧೀಶರು ಬಂದು ಕೂರುವ ಮುಂಚೆ, ಮಿಸ್ಟರ್ ಹಂಫ್ರಿ ಮತ್ತು ಮಿಸ್ಟರ್ ಕಾರ್ಟರ್ ಕೆಲವು ನಿಮಿಷಗಳು ಗುಟ್ಟಾಗಿ ಮಾತನಾಡಿದರು.  ಮಿಸ್ಟರ್ ಕಾರ್ಟರ್ ಮಖದಲ್ಲಿ ದಿಗ್ಬ್ರಮೆ ಕಾಣುತಿತ್ತು.  ಮಿಸ್ಟರ್ ಹಂಫ್ರಿ ನ್ಯಾಯಾಧೀಶರಿಗೆ ನಮಸ್ಕರಿಸಿ ಮಿಸ್ ಫ್ರಾನ್ಸೆಸ್ ಅವರನ್ನು ಪುನಃ ಸಾಕ್ಷಿಯಾಗಿ ಕರೆಯುವುದಿಲ್ಲವೆಂದು ಅರುಹಿದರು. 

ನ್ಯಾಯಾಧೀಶರು:  ಮಿಸ್ಟರ್ ಹಂಫ್ರಿ, ನಿಮ್ಮ ನಿರ್ಧಾರ ಈ ಮೊಕದ್ದಮೆಗೆ ಅತೃಪ್ತಿಕರವಾಗಿ ಕಾಣಿಸುತ್ತೆ, ಇದಕ್ಕೆ ಫಿರ್ಯಾದಿ ವಕೀಲರದ್ದು ಸಮ್ಮತಿ ಇದೆಯೆ?

ಮಿಸ್ಟರ್ ಹಂಫ್ರಿ:  ಇದೆ, ನಮ್ಮ ಮುಂದಿನ ಸಾಕ್ಷಿ ಈ ಸಮಸ್ಯೆಯನ್ನು ಬಗೆಹರಿಸಬಹುದು.

ನ್ಯಾಯಾಧೀಶರು:  ಸರಿ, ಈ ಸಾಕ್ಷಿಯನ್ನು ಕರೆಯಿರಿ.

ಮಿಸ್ಟರ್ ಹಂಫ್ರಿ:  ನಾನು ಡಾ ಅಲೋಸಿಸ್ಸ್ ಲಾನಾ ಅವರನ್ನು ಕರೆಯುತ್ತಿದ್ದೇನೆ ನ್ಯಾಯಾಧೀಶರೇ.

ಇದನ್ನು ಕೇಳಿ ಎಲ್ಲರಿಗೂ ಆಶ್ಚರ್ಯ ಮತ್ತು ದಿಗ್ಬ್ರಮೆ ಉಂಟಾಗಿ ಗುಸು ಗುಸು ಮಾತುಗಳು ಪ್ರಾರಂಭವಾಯಿತು, ಆದರೆ ನ್ಯಾಯಾಧೀಶರು “ಆರ್ಡರ್, ಆರ್ಡರ್” ಅಂತ ಹೇಳಿದ ನಂತರ ಎಲ್ಲರೂ ಸಾಕ್ಷಿಕಟ್ಟೆ ಕಡೆ ಗಮನವಿಟ್ಟರು.  

ಡಾ. ಲಾನಾ, ಪ್ರಮಾಣವಚನ ಮಾಡಿ, ತನ್ನ ಕಡೆಯಿಂದ ಒಂದು ಹೇಳಿಕೆ ಕೊಡುವುದಕ್ಕೆ ಅಪ್ಪಣೆ ಕೇಳಿ ಹೀಗೆ ಹೇಳಿದರು. 

“ನನ್ನ ಉದ್ದೇಶ ಜೂನ್ ೨೧ರ ದಿನ ನಡೆದಿದ್ದನ್ನು ಮುಚ್ಚುಮರೆ ಇಲ್ಲದೆ ಇಲ್ಲಿ ಹೇಳುವುದಾಗಿದೆ.  ಇಲ್ಲಿ ಕೆಲವರಿಗೆ ಅರ್ಜಂಟೈನ್ ದೇಶದ ರಾಜಕೀಯ ಗೊತ್ತಿದ್ದರೆ, ಲಾನಾ ಮನೆತನದವರ ಬಗ್ಗೆ ಗೊತ್ತಿರಬೇಕು.  ನಮ್ಮ ತಂದೆ ಸ್ಪೇನ್ ದೇಶದ ಮೂಲದವರು; ಆದರೆ ಅರ್ಜೆಂಟೈನಾದಲ್ಲಿ ನೆಲಸಿ ಉನ್ನತ ಹುದ್ದೆಗಳಲ್ಲಿದ್ದವರು.  ಕೊನೆಗೆ ಆ ದೇಶದ ರಾಷ್ಟ್ರಪತಿ ಆಗುವ ಮುಂಚೆ ಸಾನ್ ಹುವಾನ್ ನಲ್ಲಿ ನಡೆದ ಗಲಭೆಯಲ್ಲಿ ಸಿಕ್ಕಿಕೊಂಡು ತಮ್ಮ ಅಸ್ತಿ ಮತ್ತು ಪ್ರಾಣವನ್ನು ಕಳೆದುಕೊಂಡರು.  ಹೀಗಾಗಿ  ನಾನು ಮತ್ತು ನನ್ನ ಅವಳಿ ಸಹೋದರ ಅರ್ನೆಸ್ಟ್  ಬದುಕುವುದು ಬಹಳ ಕಷ್ಟವಾಯಿತು.  ನಾವಿಬ್ಬರೂ ಒಟ್ಟಿಗೆ ಇದ್ದಾಗ ಜನರಿಗೆ ವ್ಯತ್ಯಾಸ ಕಾಣುತ್ತಿರಲಿಲ್ಲ, ಹೋಲಿಕೆ ಅಷ್ಟಿತ್ತು.  ಆದರೆ ನಮ್ಮ ಗುಣಗಳು ಅಜಗಜಾಂತರ.  ಅವನ ದುಷ್ಟತನ ನನ್ನಿಂದ ಸಹಿಸುವುದಕ್ಕೆ ಸಾದ್ಯವಿರಲಿಲ್ಲ, ಆದಷ್ಟು ಅವನಿಂದ ದೂರವಾಗಬೇಕೆಂಬ ಅಸೆ ಬಲವಾಯಿತು.  ಕೊನೆಗೆ ಸಾಕಷ್ಟು ಹಣ ಕೂಡಿಸಿ ಅರ್ಜಂಟೈನ್ ಇಂದ ಯುರೋಪಿನಲ್ಲಿ ಕೆಲಸ ಹುಡುಕುವ ಉದ್ದೇಶ ಮಾಡಿ ಬಂದೆ. ಕೊನೆಗೆ ಗ್ಲಾಸ್ಗೋ (Glasgow) ಯೂನಿವೆರ್ಸಿಟಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿ Bishop’s Crossingನಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದೆ.  ಅರ್ನಸ್ಟ್ ನನ್ನನ್ನು ಇಲ್ಲಿ, ಅಂದರೆ ಲ್ಯಾಂಕಾಶೈರ್ ನ ಒಂದು ಸಣ್ಣ ಊರಿನಲ್ಲಿ, ಹುಡುಕುವುದು ಸಾಧ್ಯವೇ ಇಲ್ಲವೆಂಬುದೇ ನನ್ನ ನಂಬಿಕೆಯೂ ಸಹ ಕಾರಣವಾಗಿತ್ತು.  ಆದರೆ ಹೇಗೋ ನನ್ನ ವಿಳಾಸ ಪತ್ತೆ ಮಾಡಿ, ಅವನು ಇಲ್ಲಿಗೆ ಬರುತ್ತೇನೆಂದು ಕಾಗದ ಬರೆದ.  ಇವನು ಬಂದರೆ ನನಗೆ ಬೇಕಾದವರ ಮುಂದೆ ಅವಮಾನವಾಗುವುದು ಖಂಡಿತ.  

“ಅವನ ಕಾಗದ ಬಂದ ಕೆಲವು ವಾರದಲ್ಲಿ ಒಂದು ರಾತ್ರಿ ನಾನು ನನ್ನ ಕೋಣೆಯಲ್ಲಿ ಕುಳಿತಿದ್ದಾಗ ಹೊರಗೆ ಯಾರೋ ಬಂದ  ಶಬ್ದ ಕೇಳಿಸಿತು. ಕಿಟಕಿ ಸ್ವಲ್ಪ ತೆಗದಿತ್ತು ಒಬ್ಬರ ಮಖ ಕಾಣಿಸಿತು.  ಒಂದು ಕ್ಷಣ ನನ್ನ ಮುಖವನ್ನೇ ಗಾಜಿನ ಕನ್ನಡಿಯಲ್ಲಿ ನೋಡುತಿದ್ದೇನೆ ಅನ್ನುವ ಭ್ರಮೆ!  ಬಾಗಿಲಿಗೆ ಹೋಗಿ  ನೋಡಿದರೆ ಅದು ಅರ್ನೆಸ್ಟ್!  ಇದು ಸುಮಾರು ಹತ್ತು ಗಂಟೆ ಸಮಯ.  ಅವನ ಸ್ಥಿತಿ ನೋಡಿ ನನಗೆ ಗಾಬರಿ ಆಯಿತು.  ಮಖದ ಮೇಲೆ ಕೆಲವು ಗಾಯಗಳಿತ್ತು, ಕಣ್ಣಿಗೆ ಹಸಿರು ಬಟ್ಟೆ ಕಟ್ಟಿತ್ತು ಮತ್ತು ಮದ್ಯ ಕುಡಿದ ವಾಸನೆ ಬಂತು.  ಮನೆ ಒಳಗೆ ನುಗ್ಗಿ ಕಣ್ಣಿನ ಮೇಲಿದ್ದ ಬಟ್ಟೆಯನ್ನು ಕಿತ್ತು ಬಿಸಾಕಿ, ಕಾಡುಮೃಗದಂತೆ ಶತಪಥ ಓಡಾಡಿ ಕುಡಿಯೋದಕ್ಕೆ ಬೀರ್ ಕೊಡು ಮತ್ತು ದುಡ್ಡು ಕೊಡು ಅಂತ ಕೂಗಾಡಿದ.  ನಾನು ತಾಳ್ಮೆಯಿಂದ ಇದ್ದಿದ್ದು ಅವನಿಗೆ ಇನ್ನೂ ಕೋಪ ಬಂದು ನನ್ನ ಮೇಲೆ ಕೈ ಮಾಡಲು ಪ್ರಯತ್ನಿಸಿದಾಗ ಅವನು ಪ್ರಜ್ಞೆ ತಪ್ಪಿ ಕಿರುಚುತ್ತಾ  ಕೆಳಗೆ ಕುಸಿದು ಬಿದ್ದ.  ತಕ್ಷಣ ಅವನನ್ನು ಎತ್ತಿ ಸೋಫಾ ಹತ್ತಿರ ಮಲಗಿಸಿ ನಾಡಿಯನ್ನು ಪರೀಕ್ಷಿದಾಗ ಅವನು ಇನ್ನಿಲ್ಲ ಎನ್ನುವುದು ಖಚಿತವಾಯಿತು.  ಮರಣ ಬಹುಶಃ ಹೃದಯಘಾತದಿಂದ.  ಬಹಳ ಹೊತ್ತು ಕಕ್ಕಾಬಿಕ್ಕಿಯಾಗಿ ಅಲ್ಲೇ ಅವನ ಮುಂದೆ ಕುಳಿತೆ.  ಮಾರ್ಥಾ ಬಾಗಿಲು ತಟ್ಟಿದ್ದು ಕೇಳಿಸಿತು, ಆದರೆ ಅವಳನ್ನು ಗದರಿಸಿ ಕಳಿಸಿಬಿಟ್ಟೆ.  ನಂತರ, ಬಹುಶಃ ಒಬ್ಬ ರೋಗಿ ಇರಬೇಕು, ಬಾಗಿಲನ್ನು ತಟ್ಟುತ್ತಿರುವ ಶಬ್ದ ಕೇಳಿದರೂ ನಾನು ಗಮನ ಕೊಡಲಿಲ್ಲ.  

“ಅನೇಕ ಯೋಚನೆಗಳು ನನ್ನ ಮನಸ್ಸಿಗೆ ಬಂದವು; ನನ್ನ ವೈದ್ಯಕೀಯ ವೃತ್ತಿ ಇಲ್ಲಿ ಯಶಸ್ವಿಯಾಗಿದ್ದರೂ, ಮುಂಚೆ ನಡೆದಿದ್ದ ಘಟನೆಯೂ ನನ್ನನ್ನು ಕಾಡುತಿತ್ತು.  ಊರಿನ ಜನರ ಮನಸ್ಸು ನನ್ನ ಬಗ್ಗೆ ದ್ವೇಷತಾಳಲು ಆರಂಭಿಸಿತ್ತು.  ನಾನು ನಿರೀಕ್ಷಿಸಿದ ಅನುಕಂಪದ ಬದಲು ದ್ವೇಷಪೂರ್ಣ ನಡುವಳಿಕೆ ನನ್ನನ್ನು ಕಾಡಲಾರಂಭಿಸಿತು.  ನಡೆದಿದ್ದ ಅರ್ನೆಸ್ಟ್ ಪ್ರಕರಣ ಮುಗಿದಿರಬಹುದು, ಆದರೆ ಇನ್ನು ಮುಂದೆ ನನ್ನ ಜೀವನ ಹೇಗಿರುತ್ತೋ ಅನ್ನುವ ಚಿಂತೆ ಮುಸುಕಿತು.  ಈ ಊರಿನಿಂದ ದೂರ  ಹೋಗುವ ಆಲೋಚನೆಯು ಸಹ ಹಿಂದೆ ಆಗಾಗ್ಗೆ ಬಂದಿತ್ತು;  ಸರಿ, ಆ ಸಮಯ ಈಗ ಬಂದಿದೆ ಅನ್ನುವ ನಿರ್ಧಾರಕ್ಕೆ ಬಂದೆ.  ಮೃತನಾಗಿ ಮಲಗಿದ್ದ ಅರ್ನಸ್ಟ್ ನನ್ನು ನೋಡಿದಾಗ ನನಗೂ ಅವನಿಗೂ ಬಹಳ ವ್ಯತ್ಯಾಸವಿಲ್ಲದಿರುವುದು ಅರಿವಾಯಿತು.  ಅವನು ಒಳಗೆ ಬಂದಿದ್ದು ಯಾರೂ ನೋಡಿರಲಾರರು; ಅವನಿಗೆ ನನ್ನ ಬಟ್ಟೆಗಳನ್ನು ತೊಡಿಸಿ, ಅವನ ಬಟ್ಟೆಯನ್ನು ನಾನು ಧರಿಸಿ ಇಲ್ಲಿಂದ ಪರಾರಿ ಆದರೆ, ಡಾ. ಲಾನಾ ಅವರ ಕೋಣೆಯಲ್ಲೇ ಪ್ರಾಣ ಬಿಟ್ಟಿದ್ದಾರೆ ಅಂತಲೇ ಜನ ಅಂದುಕೊಳ್ಳುತ್ತಾರೆ.  ಹೀಗನ್ನಿಸಿದ ಒಂದು ಗಂಟೆಯ ನಂತರ, ಪೆಟ್ಟಿಗೆಯಲ್ಲಿದ್ದ ಹಣ ಮತ್ತು ಒಬ್ಬರ ಭಾವಚಿತ್ರ ಎರಡನ್ನೇ ನನ್ನ ಜೋಬಿನಲ್ಲಿ ಇಟ್ಟಿಕೊಂಡು ಮನೆಯಿಂದ ಯಾರಿಗೂ ಕಾಣದಿರುವ ರಸ್ತೆಯಲ್ಲಿ ಲಿವರ್ ಪೂಲ್ ಕಡೆ ಹೊರಟು ಬೆಳಗ್ಗೆ ಬಂದು ಸೇರಿದೆ.  ಅಲ್ಲಿ ಕೊರುನಕ್ಕೆ (Corunna) ಹೊರಡಲಿದ್ದ ಹಡಗನ್ನು ಹತ್ತಿದೆ.  ನನ್ನ ಉದ್ದೇಶ, ಈ ಊರಿನ ಕೆಲವರಿಂದ ದೂರವಾಗಬೇಕೆಂದಾಗಿತ್ತು – ಇದನ್ನು ನೀವು ನಂಬಬೇಕು ಅನ್ನುವುದು ನನ್ನ ಕೋರಿಕೆ.  ಈ ಸಮುದ್ರಯಾನದ ಸಮಯದಲ್ಲಿ ನನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡುವುದಕ್ಕೆ ಸಮಯ ಸಿಗಬಹುದೆಂದು ನನ್ನ ಊಹೆಯಾಗಿತ್ತು.  ಈ ಪ್ರಪಂಚದಲ್ಲಿ ನನಗೆ ಬೇಕಾದ ಒಬ್ಬರಿಗೆ ನೋವು ತರುವುದು, ಆಕೆ ಮನಸ್ಸಿಲ್ಲೇ ಕೊರಗುವುದು ಮತ್ತು ಇತರರು ನನ್ನ ಬಗ್ಗೆ ಅಸಡ್ಡೆಯಿಂದ ಮಾತನಾಡಿ ಆಕೆ ನೋವು ಅನುಭವಿಸುವುದು ಸರಿಯಲ್ಲವೆಂದನಿಸಿ, ಅಲ್ಲಿಂದಲೇ ನಡೆದಿದ್ದ ವಿಚಾರವನ್ನು ವಿವರಿಸಿ ಒಂದು ಪತ್ರವನ್ನು ಬರೆದು, ಆಕೆಯ ಹೆಸರಿಗೆ ತುರ್ತು ಅಂಚೆಯಲ್ಲಿ ಕಳಿಸಿದೆ.  ಈ ವಿಷಯ ರಹಸ್ಯವಾಗಿ ನಮ್ಮಲ್ಲಿ ಮಾತ್ರ ಇರಲಿ ಅನ್ನುವುದನ್ನು ಸಹ ಬರೆದಿದ್ದೆ.  ಅಕಸ್ಮಾತ್ತು ಈ ರಹಸ್ಯವನ್ನು ಆಕೆ ಒತ್ತಡದಿಂದ ಬಹಿರಂಗಪಡಿಸಿದ್ದರೆ ಆಕೆಯ ಮೇಲೆ ನನ್ನ ಸಹಾನುಭೂತಿ ಖಂಡಿತ ಇರುತಿತ್ತು. 

“ನಿನ್ನೆ ರಾತ್ರಿ ತಾನೇ ನಾನು ಇಂಗ್ಲೆಂಡಿಗೆ ವಾಪಸ್ಸು ಬಂದೆ.  ಬಂದು ಮುಟ್ಟುವವರೆಗೂ ನನಗೆ ಈ ಪ್ರಕರಣ ಬಗ್ಗೆ ಏನೂ ಗೊತ್ತಿರಲಿಲ್ಲ.  ಇಲ್ಲಿನ ದಿನ ಪತ್ರಿಕೆಯಲ್ಲಿ ಅರ್ಥರನ ಮೇಲೆ ನನ್ನ “ಕೊಲೆ” ಮಾಡಿದ ಅಪವಾದ ಇದೆ ಎಂದು ತಿಳಿಯಿತು.  ಆದ್ದರಿಂದ ಆದಷ್ಟು ಬೇಗ ಈ ನ್ಯಾಯಾಲಯದಲ್ಲಿ ಸಾಕ್ಷಿ ಕೊಡುವುದಕ್ಕೆ ಬಂದಿದ್ದೇನೆ.”

ಡಾ. ಲಾನಾ ಮಾಡಿದ ಇಂತಹ ಅಸಾಧಾರಣವಾದ ಹೇಳಿಕೆಯಿಂದ ಮೊಕದ್ದಮೆಯು ಕೊನೆಗಂಡಿತು.  ನ್ಯಾಯಾಲಯವು ಮುಂದಿನ ತನಿಖೆ ಮಾಡಿದಾಗ ಅರ್ನಸ್ಟ್ ದಕ್ಷಿಣ ಅಮೆರಿಕದಿಂದ ಬಂದ ಹಡಗಿನ ವೈದ್ಯರ ಸಾಕ್ಷಿಯಲ್ಲಿ ಈತ ಹೃದಯ ರೋಗದಿಂದ ನರಳುತಿದ್ದ ಮತ್ತು ಇದಕ್ಕೆ ಚಿಕಿತ್ಸೆ ಕೊಡಲಾಗಿತ್ತು ಎಂಬುದು (ಅವನ ಶವಪರೀಕ್ಷೆಯಲ್ಲಿ ಹೇಳಿದಂತೆ) ಅರಿವಾಯಿತು. 

ಡಾ. ಲಾನಾ Bishop’s Crossing ಗೆ ಹಿಂತಿರುಗಿದಾಗ ಅರ್ಥರ್ ತಾನು ಈ ವಿಚಾರದಲ್ಲಿ ಸಭ್ಯತೆಯಿಂದ ನಡೆದಿಲ್ಲ ಅನ್ನುವದನ್ನು ಅರಿತು ಕ್ಷಮೆ ಕೋರಿದ ಮತ್ತು ಅವನ ತಂಗಿ ಮತ್ತು ಡಾ ಲಾನಾ ಸಂಬಂಧದ ಬಗ್ಗೆ ಏನೂ ಅಡಚಣೆ ಇಲ್ಲವೆಂದ. 

ಕೆಲವು ವಾರದಲ್ಲಿ ಲಿವರ್ ಪೂಲ್ ದಿನ ಪತ್ರಿಕೆಯಲ್ಲಿ ಈ ಸುದ್ದಿ ಪ್ರಕಟವಾಯಿತು: 

“ಸೆಪ್ಟೆಂಬರ್ ೧೯ನೇ ತಾರೀಕು Bishop ‘s Crossing ಚರ್ಚಿನಲ್ಲಿ, ಅರ್ಜಂಟೈನ್ ರಾಜ್ಯದ ವಿದೇಶಮಂತ್ರಿಗಳಾಗಿದ್ದ ದಿವಂಗತ ಡಾನ್ ಲಾನಾ ಅವರ ಪುತ್ರ ಡಾ ಅಲೋಯ್ಸಿಯಸ್ ಲಾನಾ ಮತ್ತು ಫ್ರಾನ್ಸಿಸ್ ಮೊರ್ಟನ್ (ದಿವಂಗತ ಜೇಮ್ಸ್ ಮೊರ್ಟನ್ ಪುತ್ರಿ) ಅವರ ಮದುವೆಯನ್ನು ರೆವರೆಂಡ್ ಜಾನ್ಸನ್ ಅವರು ನೆರವೇರಿಸಿದರು.”    

*********************************************************************************************************