ಕೋವಿಡ್ ಪಿಡುಗು ನಮ್ಮನ್ನೆಲ್ಲ ಬಾಧಿಸಿ ಹೋದ ನಂತರ ಹಳೆಯ ಅಡಕಪದಗಳಿಗೆ (Acronyms) ಹೊಸದೊಂದು ಅರ್ಥ ಬಂದಿದೆ. BC(Before Christ) ಈಗ Before Covid ಎಂತಲೂ, AD (Anno Domini) ಈಗ After Disease, ಅಥವಾ After Done (with Corona) ಎಂತಲೂ ಕೆಲವರು ಕರೆಯುತ್ತಾರೆ. ಇತ್ತೀಚೆಗೆ ಕೋರೋನಾ ನಂತ ಮೊದಲ ಬಾರಿ ಬೆಂಗಳೂರಿಗೆ ಹೋದ ಬೇಸಿಂಗ್ ಸ್ಟೋಕ್ ರಾಮಮೂರ್ತಿಯವರ ತಮ್ಮ ಆರು ವಾರಗಳ ಕಾಲದ ವಾಸ್ತವ್ಯದಲ್ಲಿ ಅನುಭವಿಸಿದ ಸಿಹಿ, ಆಶ್ಚರ್ಯಕರ ಮತ್ತು ಇತರೇ ಅನುಭವಗಳವನ್ನು ಈ ಸ್ವಾರಸ್ಯಕರವಾದ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರ ಟ್ರೇಡ್ ಮಾರ್ಕ್ ಆದ ಅಲ್ಲಿ ಸ್ವಲ್ಪ ಇತಿಹಾಸ, ಇಲ್ಲಿ ಸ್ವಲ್ಪ ಹಾರ್ಟಿಕಲ್ಚರ್, ಬಾಟನಿ ಹೀಗೆ ಸ್ವಲ್ಪ spice sprinkling ಸಹ ಉದುರಿಸಿ ಉಣಬಡಿಸಿದ್ದಾರೆ. Enjoy! (ತತ್ಕಾಲ್ ಸಂಪಾದಕ)
ಕೋವಿಡ್ ನಿಂದ ಕಳೆದ ಮೂರು ವರ್ಷ ಬೆಂಗಳೂರಿಗೆ ಹೋಗಿರಲಿಲ್ಲ. ಈ ವರ್ಷ ಜನವರಿ ತಿಂಗಳಲ್ಲಿ ಹೋಗಿ ಆರು ವಾರ ಇದ್ದು, ಅಲ್ಲಿ ಈ ಮೂರು ವರ್ಷಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಈ ಲೇಖನ. ಬೆಂಗಳೂರು Airport ಬಹಳ ಚೆನ್ನಾಗಿದೆ ಇದು ನಮ್ಮೆಲ್ಲರ ಹೆಮ್ಮೆಯ ವಿಷಯ. Immigration ಸಹ ತುಂಬಾ ಸರಾಗ ಮತ್ತು ವಿನಯದಿಂದ ನಡೆಯಿತು. ಕೋವಿಡ್ ಔಪಚಾರಿಕತೆಗಳು ಏನೂ ಇರಲಿಲ್ಲ. ಕೆಲವು ವರ್ಷದ ಹಿಂದೆ Auto ಅಥವಾ Taxi ಸಮಸ್ಯೆ ಇತ್ತು, ಆದರೆ ಈಗ Uber ಮತ್ತು Ola ಇರುವುದರಿಂದ ಯಾವ ತೊಂದರೆಯೂ ಇಲ್ಲ. ಸುಮಾರು ಐದು ನಿಮಿಷದ ಒಳಗೆ ನಿಮ್ಮ ವಾಹನ ಬರುವ ಸಾಧ್ಯತೆ ಇದೆ. ದರದ ಚೌಕಾಸಿ ಅಥವಾ ಜಗಳ ಬರಿ ನೆನಪುಗಳು ಅಷ್ಟೇ !
ಇನ್ನೊಂದು ವಿಷಯ ಗಮನಕ್ಕೆ ಬರುವುದು ದೇಶದಲ್ಲಿ ಆಗಿರುವ Digital Revolution. ರಸ್ತೆ ಯಲ್ಲಿ ತರಕಾರಿ ಮಾರುವರು , ಚಾಟ್ ಅಂಗಡಿಯವರು ಸಹ ಇದರಲ್ಲಿ ಭಾಗವಹಿಸಿದ್ದಾರೆ. ಫೋನಿನಿಂದ QR Code scan ಮಾಡಬಹುದು. ಅನೇಕ ಉಪಹಾರ ಮಂದಿರಗಳಲ್ಲಿ QR code ನಿಂದ ಅವತ್ತಿನ ತಿಂಡಿಗಳ ವಿವರ ತಿಳಿಯಬಹುದು. ಅಂಗಡಿ ಸಾಮಾನುಗಳನ್ನು on line ನಲ್ಲಿ ತರಿಸಬಹುದು. ನೋಡಿದರೆ ಬೆಂಗಳೂರಿನಲ್ಲಿ ಎಲ್ಲರ ಮನೆಯಲ್ಲೂ ಒಂದು ನಾಲಕ್ಕು ಚಕ್ರದ ವಾಹನ ಇರಬಹುದೇನೋ ಅನ್ನಿಸುತ್ತೆದೆ, ರಸ್ತೆಯಲ್ಲಿ ಅಷ್ಟೊಂದು traffic! Highway ಗಳು ಈಗ ಚೆನ್ನಾಗಿವೆ, ಆದರೆ ಬಹು ಮಂದಿ ವಾಹನ ನಡೆಸುವ ನಿಯಮಗಳನ್ನು ಪಾಲಿಸಿವುದಿಲ್ಲ ಅನ್ನುವುದು ಬಹಳ ಶೋಚಿನಿಯವಾದ ವಿಷಯ.
ಇನ್ನು ಮೆಟ್ರೋ (ನಮ್ಮ ಮೆಟ್ರೋ ) ಬಹಳ ಅನುಕೂಲವಾಗಿದೆ. ನಾನು ಬಹಳ ಹಿಂದೆ ಒಂದು ಸಲಿ ಇಲ್ಲಿ ಪ್ರಯಾಣ ಮಾಡಿದ್ದೆ.
ಆದರೆ ಏನು ಬದಲಾವಣೆ ಆಗಿದೆ ಅನ್ನುವ ವಿಚಾರ ಗೊತ್ತಿರಲಿಲ್ಲ. ಸರಿ, ಇದರಲ್ಲಿ ಪ್ರಯಾಣ ಮಾಡಿ ನೋಡೋಣ ಅಂತ ನ್ಯಾಷನಲ್ ಕಾಲೇಜು ನಿಲ್ದಾಣಕ್ಕೆ ಬಂದೆ. ಟಿಕೆಟ್ counter ನಲ್ಲಿ ಮಂತ್ರಿ ಮಾಲ್ ಗೆ ಎಷ್ಟು ಅಂತ ಕೇಳಿದಾಗ ಆಕೆ ೧೮ ರೂಪಾಯಿ ಅಂದಳು, ನಾನು ಆಶ್ಚರ್ಯದಿಂದ ”೧೮ ಆ?” ಅಂದೆ. ಆಕೆ ಹೌದು ಸರ್, ಸೀನಿಯರ್ concession ಇಲ್ಲ ಅಂದಳು! ನನಗೆ ಆಶ್ಚರ್ಯ ಆಗಿದ್ದು ಕೇವಲ ೧೮ ರೂಪಾಯಿ ಮಾತ್ರ ಅಂತ , ಆದರೆ ಆಕೆ ನಾನು ಇದು ದುಬಾರಿ ಅಂತ ಹೇಳುತ್ತಿದ್ದೇನೆ ಅಂತ ತಿಳಿದಿರಬೇಕು!! (London Tube ನಲ್ಲಿ ಕನಿಷ್ಠ £೭!) ದುಡ್ಡು ಕೊಟ್ಟೆ, ಚಿಲ್ಲರೆ ಬಂತು, ಟಿಕೆಟ್ ಕೊಡಿ ಅಂದೆ. ಆಕೆ ಕೊಟ್ಟಿದ್ದೀನಿ ನೋಡಿ ಸರ್ ಅಂದಳು. (ಈ ಮನುಷ್ಯ ಎಲ್ಲಿಂದ ಬಂದಿದ್ದಾನೆ ಅಂತ ಯೋಚಿಸರಬಹುದು!!). ನೋಡಿದರೆ ಟಿಕೆಟ್ ಒಂದು ಬಿಲ್ಲೆ ಆದರೆ Digital ಬಿಲ್ಲೆ ! ಅಂತೂ ಪ್ರಯಾಣ ಕೇವಲ ೧೦ ನಿಮಿಷ ಮಾತ್ರ. ಅದೇ Auto ನಲ್ಲಿ ಮಲ್ಲೇಶ್ವರಕ್ಕೆ ಹೋಗಿದ್ದರೆ ೧೦೦ ರೂಪಾಯಿ ಮತ್ತು ಅರ್ಧ ಅಥವಾ ಮುಕ್ಕಾಲು ಗಂಟೆ ಸಮಯ ಹಿಡಿಯುತ್ತಿತ್ತು.
ಬೆಳಗ್ಗೆ ಅಥವಾ ಸಾಯಂಕಾಲ ತಿಂಡಿ/ಊಟಕ್ಕೆ ಜನಗಳು ಉಪಹಾರ ಮಂದಿರಗಳ ಮುಂದೆ ನಿಂತಿರುವುದನ್ನ ನೋಡಿದರೆ ಮನೆಯಲ್ಲಿ ಅಡಿಗೆ ಮಾಡುವ ಅಭ್ಯಾಸ ಇಲ್ಲವೇನೋ ಅನ್ನುವ ಸಂಶಯ ಹುಟ್ಟುತ್ತದೆ. ಗಾಂಧಿ ಬಜಾರ್ನಲ್ಲಿರುವ ಹೆಸರಾದ ವಿದ್ಯಾರ್ಥಿ ಭವನದ ಮುಂದೆ queue ನಿಂತಿರುತ್ತಾರೆ. ಎಲ್ಲಾ ಉಪಹಾರ ಮಂದಿರಗಳಲ್ಲೂ ಇದೇ ಸಮಸ್ಯೆ.
ಸಂಕ್ರಾಂತಿ ಸಮಯದಲ್ಲಿ, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಮುಂತಾದವು ಈಗ ಅನೇಕ ಅಂಗಡಿಗಳಲ್ಲಿ Prepack ಸಿಗುತ್ತೆ. ಮನೆಯಲ್ಲಿ ಕಷ್ಟ ಪಡಬೇಕಾದ ಅವಶ್ಯಕತೆ ಇಲ್ಲ. ಯುಗಾದಿ ಹಬ್ಬಕ್ಕೆ ಹೋಳಿಗೆ ಮಾಡುವ ಅಂಗಡಿಗಳು ಅನೇಕ.
ನಾವು ಇದ್ದ ಆರು ವಾರದಲ್ಲಿ, ಅಡಿಗೆ ಮಾಡಿಕೊಳ್ಳುವ ಸೌಲಭ್ಯ ಇದ್ದಿದ್ದರೂ ಮಾಡುವ ಅವಶ್ಯಕತೆ ಇರಲಿಲ್ಲ. ಹತ್ತಿರದಲ್ಲೇ ಇದ್ದ ವಿದ್ಯಾರ್ಥಿ ಭವನ, ಭಟ್ಟರ ಹೋಟೆಲ್ ಅಥವಾ ಉಡುಪಿ ಕೃಷ್ಣ ಭವನದಲ್ಲಿ ಬೆಳಗ್ಗೆ ಬಿಸಿ ಬಿಸಿ ಇಡ್ಲಿ ದೋಸೆ (Take Away) ಸಿಗಬೇಕಾದರೆ ಮನೆಯಲ್ಲಿ ಕಷ್ಟ ಪಡಬೇಕಾಗಿಲ್ಲ ಅಲ್ಲವೇ? ಊಟ ಸಹ On Line ನಲ್ಲಿ ತರಿಸಬಹುದು! When in Rome Do as Romans Do ಅಂದ ಹಾಗೆ.
ನಮ್ಮ ಮನೆಯ ಕಿರಿಯ ಇಬ್ಬರು ಸಂಬಂಧಿಕರು ಬ್ರೂವರಿ (Brewery )ಗೆ ಹೋಗೋಣ ಅಂದರು. (ಬೆಂಗಳೂರಿನಲ್ಲಿ ಸುಮಾರು ೩೦-೪೦ ಇವೆಯಂತೆ). ಸಾಯಂಕಾಲ ೭ ೩೦ ಕ್ಕೆ booking ಇದ್ದಿದ್ದು, ಸುಮಾರು ೧೫೦೦ ಜನ ಇದ್ದಿರಬಹುದು ಆ ಸಮಯದಲ್ಲಿ! QR code scan ಮಾಡಿದರೆ ಅನೇಕ ರೀತಿಯ beer ಮಾಹಿತಿ ಸಿಗುತ್ತೆ. (ಈ Beer ಇಲ್ಲಿ ಸಿಗುವ Lager)
ಸುಮಾರು ೨೫-೩೦ ವರ್ಷದ ಹಿಂದೆ, ಬಸವನಗುಡಿ ಅಥವಾ ಮಲ್ಲೇಶ್ವರದ ರಸ್ತೆಗಳಲ್ಲಿ ಒಂಟಿ ಮನೆಗಳು ಇದ್ದವು, ಈಗ ಎಲ್ಲೆಲ್ಲಿ ನೋಡಿದರೂ ಹಳೇ ಮನೆಗಳನ್ನು ಕೆಡವಿ ೩ ಅಥವಾ ೪ ಅಂತಸ್ತಿನ apartment ಗಳು ಬಂದಿವೆ. ರಸ್ತೆಗಳ ತುಂಬಾ ಮರಳು, ಸಿಮೆಂಟ್ ಇತ್ಯಾದಿ. ಇದು ಸಾಲದು ಅಂತ ಚರಂಡಿ ರಿಪೇರಿ, ಅದರ ಕಲ್ಲಿನ ಚಪ್ಪಡಿಗಳೂ ಸಹ ರಸ್ತೆ ಮಧ್ಯೆ. ಹೀಗಾಗಿ ರಸ್ತೆಯಲ್ಲಿ ನಡೆಯುವುದೇ ಒಂದು ಸಮಸ್ಯೆ, ಗಾಂಧಿ ಬಜಾರ್ ನಂತೂ ಪೂರ್ತಿ ಅಗದು ಬಿಟ್ಟಿದ್ದಾರೆ. ಇದು ಹೇಗೆ ಅನ್ನುವ ಪ್ರಶ್ನೆ ನೀವು ಕೇಳಬಹುದು. ಕಾರಣ, ಇಂಗ್ಲಿಷ್ನನಲ್ಲಿ ಹೇಳಬೇಕಾದರೆ, Lack of Accountability. ಸರಿಯಾದ ಉಸ್ತುವಾರಿ ಸಹ ಕಡಿಮೆ. ಆದರೆ ಸ್ಥಳೀಯ ಜನ ಇದನ್ನ ಸಹಿಸಿಕೊಂಡು ಇದು ತಮ್ಮ ಹಣೆ ಬರಹ ಎಂದು ಸುಮ್ಮನಿರುತ್ತಾರೆ. ನಿಮ್ಮ ಪ್ರತಿನಿಧಿ (ಕಾರ್ಪೊರೇಟರ್ )ಗೆ ದೂರು ಕೊಡಬಹುದಲ್ಲ ಎಂದು ಕೇಳಿದಾಗ ಬಂದ ಉತ್ತರ ಇದು " ಇವರು ಇರುವುದು ನಮಗೆ ಸಹಾಯ ಮಾಡುವುದಕ್ಕೆ ಅಲ್ಲ ತಮ್ಮ ಜೇಬು ತುಂಬಿಸಿಕೊಳ್ಳುವುದಕ್ಕೆ!"
ಆದರೆ ನೀವು ಮೈಸೂರಿಗೆ ಹೋಗಿ, ಅಲ್ಲಿನ ವಾತಾವರಣ, ಸೌಂದರ್ಯ ಕಂಡು ಹೆಮ್ಮೆ ಬರುತ್ತೆ. ಸಧ್ಯ ಇಲ್ಲಿ Apartment ಹುಚ್ಚುತನ ಇನ್ನೊ ಬಂದಿಲ್ಲ. ಹಳೆ ಕಟ್ಟಡಗಳನ್ನು ಒಡೆದಿಲ್ಲ, ರಸ್ತೆಯಲ್ಲಿ ಅಷ್ಟೇನೂ ಗಲಾಟೆ ಇಲ್ಲ. ಮುಂದೆ IT ಕಂಪನಿಗಳು ಇಲ್ಲಿ ಬಂದರೆ ಮೈಸೂರಿನ ಗತಿ ಬೆಂಗಳೂರಿನ ಹಾಗೆ ಅನ್ನುವ ನನ್ನ ಅಭಿಪ್ರಾಯ! (ದಯವಿಟ್ಟು Software ನವರು ನನ್ನ ಹತ್ತಿರ ಜಗಳ ಮಾಡಬೇಡಿ, ಇರೋ ವಿಚಾರ ಹೇಳುತ್ತಿದ್ದೇನೆ.)
ಅಪ್ಪಿ ತಪ್ಪಿ ನೀವು ರಾಜಕೀಯದ ವಿಚಾರ ಎತ್ತಿ ಬೇಡಿ, ನಾನು ಒಮ್ಮೆ ದೇಶದಲ್ಲಿ ಅಸಹಿಸ್ಣುತೆ ( intolerance ) ಹೆಚ್ಚಾಗಿದೆ ಅನ್ನುವ comment ಮಾಡಿದೆ. ನಮ್ಮ ಕೆಲವು ಸಂಬಂಧಿಕರು ನನ್ನ ಮೇಲೆ serious ಆಗಿ ಜಗಳಕ್ಕೆ ಬಂದರು, ಬಿಬಿಸಿನ ಬೈದರು, ನಿಮ್ಮ ಪತ್ರಿಕೆಗಳು "anti India" ಇನ್ನೂ colonial mind set ಹೋಗಿಲ್ಲ ಇತ್ಯಾದಿ, ಇತ್ಯಾದಿ. ಆದರೆ ಈಗ UK ಇಂತಹ ವಿಚಾರದಲ್ಲಿ ಎಷ್ಟು ಮುಂದುವರೆದಿದೆ ಅನ್ನುವ ಮಾಹಿತಿಯನ್ನು ಅವರಿಗೆ ಕೇಳುವ ಕುತೂಹಲ ಅಥವಾ ಉತ್ಸಾಹ ಇರಲಿಲ್ಲ.
ಇದ್ದ ಆರು ವಾರದಲ್ಲಿ, ಹೊರಗೆ , ಅಂದರೆ ಬೆಂಗಳೂರು ಬಿಟ್ಟು ಜಾಸ್ತಿ ಅನೇಕ ಕಾರಣಗಳಿಂದ ಹೋಗಲಿಲ್ಲ. ಆದರೆ ಹೆಸರಘಟ್ಟ ದಲ್ಲಿರುವ Horticulture Research Institute ಗೆ ಭೇಟಿ ಕೊಟ್ಟಿದ್ದು ಅದ್ಭುತವಾಗಿತ್ತು. ನಮ್ಮ ಮನೆಯಲ್ಲಿ ನಮ್ಮಿಬ್ಬರಿಗೂ ತೋಟಗಾರಿಕೆ ಮೇಲೆ ಆಸಕ್ತಿ ಇದೆ, ಇದರ ಬಗ್ಗೆ ಅನಿವಾಸಿಯಲ್ಲಿ ಹಿಂದೆ ಬರೆದಿದ್ದೇನೆ. ಈ ಸಂಸ್ಥೆ ೧೯೩೮ ರಲ್ಲಿ ಅಂದಿನ ಮೈಸೂರು ಸರ್ಕಾರ ಹಣ್ಣು ಮತ್ತು ತರಕಾರಿ ಸಂಶೋಧನೆಗೆ ಈ ಸಂಸ್ಥೆಯನ್ನು ಹೆಸರಘಟ್ಟದಲ್ಲಿ ಸ್ಥಾಪನೆ ಮಾಡಿದರು. ನಾಲ್ಮಡಿ ಕೃಷ್ಣರಾಜ ಓಡೆಯರ್ ಮಹಾರಾಜರು ರಾಜ್ಯಕ್ಕೆ ಮಾಡಿದ ಅನೇಕ ಸೇವೆಗಳಲ್ಲಿ ಇದೊಂದು. ಸುಮಾರು ೫೦೦ ಎಕರೆ ವಿಸ್ತರಣೆಯಲ್ಲಿ ಇರುವ ಸಂಸ್ಥೆ ಈಗ ಕೇಂದ್ರ ಸರ್ಕಾರದ Institute of Agricultural Research (IAR) ಗೆ ಸೇರಿದ್ದು. ಕೆಲವು ಹಣ್ಣುಗಳ ಮತ್ತು ತರಕಾರಿಯ ಬಗ್ಗೆ ಇಲ್ಲಿನ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಗಿಡಗಳಿಗೆ ಬರುವ ರೋಗ ಮತ್ತು ಅದರ ನಿವಾರಣೆಯ ರೀತಿ ರೈತರಿಗೆ ಮಾಹಿತಿ ಕೊಡುವ ಕೆಲವನ್ನು ಇಲ್ಲಿ ನಡೆಯುತ್ತದೆ. ಇವರ ಸಂಶೋಧನೆ ಅಂತರ ರಾಷ್ಟ್ರೀಯ ಪ್ರಶಂಸೆ ಪಡದಿದೆ ಅನ್ನುವುದು ಹೆಮ್ಮೆಯ ವಿಚಾರ. ಇಲ್ಲೇ ಬೆಳದ ಗಿಡ ಮತ್ತು ಬೀಜಗಳನ್ನ ಖರೀದಿ ಮಾಡಬಹುದು. ಅರ್ಕ (Arka ) ಈ ಸಂಸ್ಥೆಯ ವ್ಯಾಪಾರ ಗುರುತು (Trade Mark ). ಈ ಹೆಸರಿನಲ್ಲಿ ಗಿಡಗಳನ್ನು ಮಾರುವುದರಿಂದ ಜನಗಳಿಗೆ (ರೈತರಿಗೆ) ಇದು ಈ ಸಂಸ್ಥೆಯಿಂದ ಬಂದಿದ್ದು ಅಂಬ ಭರವಸೆ ಬರುತ್ತೆ. ಗುಣಮಟ್ಟದ ಬಗ್ಗೆ( Quality ) ಗೊಂದಲ ಇರುವುದಿಲ್ಲ. IAR ಸೇರಿದ ಸಂಸ್ಥೆಗಳು ಸರ್ಕಾರಕ್ಕೆ ೧೩೦೦೦ ಕೋಟಿ ಆದಾಯ ತರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇಲ್ಲೇ ಬೆಳೆದ ಗಿಡಗಳ ಬೀಜಗಳನ್ನುಖರೀದಿ ಮಾಡ ಬಹುದು. ೧೫ ರೀತಿಯ Bougainvillea ಮತ್ತು ಗುಲಾಬಿ ಹೂವುಗಳ ತೋಟ ನೋಡುವುದಕ್ಕೆ ಸುಂದರ ವಾಗಿತ್ತು. ಅಲ್ಲಿ ಕೆಲಸ ಮಾಡುವ ಸ್ಥಳೀಯ ಮಹಿಳೆಯಯರು ಹೈಬ್ರಿಡ್ ಮಾವಿನ ಸಸಿಗಳನ್ನು ಮಾಡುವ ಕೌಶಲ್ಯ (Skill ) ವನ್ನು ಮೆಚ್ಚಬೇಕು. IAR ಸೇರಿದ ಸಂಸ್ಥೆಗಳಿಂದ ಸರ್ಕಾರಕ್ಕೆ ೧೩೦೦೦ ಕೋಟಿ ರೂಪಾಯಿ ಆದಾಯ ಎಂದು ಅಂದಾಜು ಮಾಡಲಾಗಿದೆ.
ಮಾರ್ಚ್ ತಿಂಗಳಲ್ಲಿ ಬಿಸಿಲು ಹೆಚ್ಚು, ಹೊರಗೆ ಹೋಗುವುದು ಕಷ್ಟ , ಅಲ್ಲದೇ ಇಲ್ಲಿ ನಮ್ಮ ಮನೆ ಯೋಚನೆ ಬರುವುದು ಸಹಜ, ಆದ್ದರಿಂದ ಆರು ವಾರಕ್ಕೆ ಮೀರಿ ಅಲ್ಲಿರುವುದು ನಮಗೆ ಕಷ್ಟವೇ . ಪುನಃ ಈ ವರ್ಷ ಬೆಂಗಳೂರಿಗೆ ಹೋಗುವ ನಿರೀಕ್ಷೆ ಇದೆ.
ರಾಮಮೂರ್ತಿ
ಬೇಸಿಂಗ್ ಸ್ಟೋಕ್
ನನಗನ್ನಿಸುವಂತೆ ಅನಿವಾಸಿಯ ಬಳಗದ ಸದಸ್ಯರೆಲ್ಲರ (ಹೆಚ್ಚು-ಕಮ್ಮಿ ಎಲ್ಲರ ಅನ್ನೋಣವೇ?) ಜೀವನ ಕಾಲದಲ್ಲಿ ಇದು ಮೊದಲನೆಯ ಸಿಂಹಾಸನಾರೋಹಣ, ಈ ಶನಿವಾರ ಅಂದರೆ ನಾಳೆ 2023 ರ ಮೇ 6 ರಂದು ಜರುಗಲಿದೆ. ಕಳೆದ 70 ವರ್ಷಗಳಿಂದ ರಾಜಕುಮಾರನಾಗಿಯೇ ಉಳಿದಿದ್ದ ಚಾರ್ಲ್ಸ್, 7 ತಿಂಗಳ ಹಿಂದೆ ರಾಣಿ ಎಲಿಜಬೆತ್ ರ ಮರಣಾನಂತರ ರಾಜನಾದರೂ, ಈ ವಾರದ ಕೊನೆಯಲ್ಲಿ ಅಧಿಕೃತ ಸಮಾರಂಭದಲ್ಲಿ ಪತ್ನಿ ಕಮಿಲಾರೊಂದಿಗೆ ಸಿಂಹಾಸನವನ್ನು ಏರಲಿದ್ದಾರೆ. 53 ಕ್ಕೂ ಹೆಚ್ಚು ಅವಧಿಯ ತಮ್ಮ ಅಪ್ರೆಂಟಿಸ್ ಅನುಭವವನ್ನು ವೃತ್ತಿಯಲ್ಲಿ ಯಶಸ್ವಿಯಾಗಿ ಬಳಸುವ ಅವಕಾಶ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಅನಿವಾಸಿ ಬಳಗದ “ಡೇವಿಡ್ ಬೇಯ್ಲಿ” ಹವ್ಯಾಸಿ ಛಾಯಾಗ್ರಾಹಕರೊಬ್ಬರು, ಸುಮಾರು ಅರ್ಧ ಶತಮಾನದ ಹಿಂದೆ ತಾವು ಕಿಂಗ್ ಚಾರ್ಲ್ಸ್ ಅವರ ಜೀವನದ ಒಂದು ಭಾಗದಲ್ಲಿ ಹೇಗೆ ಹಾಯ್ದು ಬಂದರೆಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಓದುಗರಲ್ಲೂ ಹಲವರು ಈರೀತಿಯ ಅನುಭವಗಳ ಪಟ್ಟಿಮಾಡುವವರಿರಬಹುದು – ದಯವಿಟ್ಟು ಪ್ರತಿಕ್ರಿಯೆ ಬರೆದು ನಮ್ಮೊಂದಿಗೆ ಹಂಚಿಕೊಳ್ಳಿ.
ಮೊದಲಿಗೆ ರಾಜ ಚಾರ್ಲ್ಸ್ ರ ಜೀವನಕಾಲದ ಒಂದು ಝಲಕನ್ನು ನೋಡೋಣ. ಹಲವಾರು ಅಂತರ್ಜಾಲ ತಾಣಗಳು ಈ ಚಿಕ್ಕ ಬರಹದ ಸಾಮಗ್ರಿ ಒದಗಿಸಿದ ಮೂಲಗಳು – royal.uk, britroyals.com, theguardian.com, smithsonianassociates.org ಇತ್ಯಾದಿ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ)
ಮೂರನೆಯ ಚಾರ್ಲ್ಸ್ - ಕಿಂಗ್ ಚಾರ್ಲ್ಸ್ ದ ಥರ್ಡ್
ಜನಪ್ರಿಯ ರಾಣಿ ಎರಡನೆಯ ಎಲಿಜಬೆತ್ ಹಾಗೂ ರಾಜಕುಮಾರ ಫಿಲಿಪ್ (ಡ್ಯೂಕ್ ಆಫ಼ ಎಡಿನ್ಬರಾ) ಇವರ ಮೊದಲ ಮಗ.
ಸ್ಕಾಟ್ಲಂಡಿನಲ್ಲಿ ಮತ್ತು ಕೇಂಬ್ರಿಜ್ ನ ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ.
ಜುಲೈ 1, 1969 ರಂದು ಪ್ರಿನ್ಸ್ ಆಫ್ ವೇಲ್ಸ್ ಪದವಿ. ಅಲ್ಲಿಂದ ಕೇಂಬ್ರಿಜ್ ಹಾಗೂ ರಾಯಲ್ ವಿಮಾನ ದಳದಲ್ಲಿ ಕಲಿಕೆ. 1971 ರಲ್ಲಿ ಅವರ ತಂದೆ ಹಾಗೂ ತಾತನ ಹೆಜ್ಜೆಗಳನ್ನನುಸರಿಸಿ, ನೌಕಾದಳಕ್ಕೆ ಸೇರಿಕೆ.
1981 ರ ಜುಲೈ 29ರಂದು ಡಯಾನಾ ಅವರೊಂದಿಗೆ ಮದುವೆ. ಅವರ ವೈವಾಹಿಕ ಜೀವನ ಹಲವು ಏರುಪೇರುಗಳಿಂದ ಕೂಡಿದ್ದು, 1993ರಲ್ಲಿ ಅವರಿಬ್ಬರ ಬೇರ್ಪಡುವಿಕೆಯಲ್ಲಿ ಕೊನೆಗೊಂಡಿತು. 2005 ರಲ್ಲಿ ಚಾರ್ಲ್ಸ್ ಮತ್ತೆ ಕಮಿಲಾ ಅವರನ್ನು ಮದುವೆಯಾದರು.
ರಾಜನಾಗುವ ಮೊದಲಿನಿಂದಲೂ ಚಾರ್ಲ್ಸ್ ಸೈನ್ಯದ, ಸೈನಿಕರ ಜೊತೆಯ ತಮ್ಮ ಬಾಂಧವ್ಯವನ್ನು ಗಟ್ಟಿಯಾಗಿ ಇಟ್ಟುಕೊಂಡಿದ್ದಾರೆ. ಹಲವಾರು ಚಾರಿಟಬಲ್ ಸಂಸ್ಥೆಗಳ ಪೋಷಕನಾಗಿ, ಅವುಗಳ ಕೆಲಸವನ್ನು ಪ್ರೋತ್ಸಾಹಿಸಿಕೊಂಡು ಬಂದಿದ್ದಾರೆ. ವೇಲ್ಸ್ ಹಾಗೂ ಸ್ಕಾಟ್ಲಂಡ್ ಗಳ ಮೇಲಿನ ಅವರ ಪ್ರೀತಿ ಸುಲಭವಾಗಿ ಕಂಡುಬರುವಂಥದ್ದು. ಇವೆಲ್ಲದರೊಂದಿಗೆ ಚಾರ್ಲ್ಸ್ ರ ನಿಸರ್ಗ ಪ್ರೇಮ, ಅವರನ್ನು ಹಲವಾರು ಜಾಗತಿಕ ಹಾಗೂ ಸ್ಥಳೀಯ ಸವಾಲುಗಳೊಂದಿಗೆ ಸೆಣಸುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಸಿದೆ. ಸುಸ್ಥಿರ ಭವಿಷ್ಯ (sustainable future), ಅಭಿವೃದ್ಧಿಗಾಗಿ ಅವರ ಹೋರಾಟ ಮುಂದುವರೆದಿದೆ.
ಮೂರನೆಯ ಚಾರ್ಲ್ಸ್, ಯುನೈಟೆಡ್ ಕಿಂಗ್ಡಮ್ ನ 22ನೆಯ ಸಿಂಹಾಸನಾಧೀಶ / ರಾಜ. ಮುತ್ತಾತ ಐದನೆಯ ಜಾರ್ಜ್ ರಿಂದ ಸ್ಥಾಪಿತವಾದ ವಿಂಡ್ಸರ್ ಮನೆತನದ 6ನೇ ರಾಜ. ಆಸ್ಟ್ರೇಲಿಯಾ, ನ್ಯೂಜಿಲಂಡ್, ಕೆನಡಾ ಸೇರಿದಂತೆ 16 ದೇಶಗಳ ರಾಜಪಟ್ಟ (ನೇರ ಆಡಳಿತವಿಲ್ಲದ ಸ್ವತಂತ್ರ ದೇಶಗಳು). 54 ಸ್ವತಂತ್ರ ದೇಶಗಳ ಸದಸ್ಯತ್ವದ ಕಾಮನ್ ವೆಲ್ತ್ ಕೂಟದ ಮುಖ್ಯಸ್ಥ.
ಅತ್ಯಂತ ಜನಪ್ರಿಯ ರಾಣಿಯಾಗಿ 70 ವರ್ಷಕ್ಕೂ ಹೆಚ್ಚು ಕಾಲ ಇಲ್ಲ-ಸಲ್ಲದ ಕಾಂಟ್ರೋವರ್ಸಿಗಳಿಲ್ಲದೇ ’ರಾಜ್ಯಭಾರ’ ಮಾಡಿದ ಎರಡನೆಯ ಎಲಿಜಬೆತ್ ರಾಣಿಯ ಉತ್ತರಾಧಿಕಾರಿಯಾಗಿ ಸಿಂಹಾಸನವನ್ನೇರುವುದು ಸುಲಭದ ಮಾತಲ್ಲ. ಹಾಗೆಯೇ ಸುರಳೀತವಾಗಿ ಹೊಸ ರಾಜನ ರಾಜ್ಯಾಡಳಿತವೂ ನಡೆಯಲೆಂದು ಹಾರೈಸೋಣ.
-ಲಕ್ಷ್ಮೀನಾರಾಯಣ ಗುಡೂರ.
ನಾನು ರಾಯಲ್ ಫೋಟೋಗ್ರಾಫರ್ (ಅನಧಿಕೃತ) ಆದ ದಿನ! - ಡಾ. ಶ್ರೀವತ್ಸ ದೇಸಾಯಿ
ಇದೇ ವಾರ ಲಂಡನ್ನಿನಲ್ಲಿ ಮೂರನೆಯ ಕಿಂಗ್ ಚಾರ್ಲ್ಸ್ ನ ಪಟ್ಟಾಭಿಷೇಕ ನಡೆಯಲಿದೆ. ರಾಣಿ ಎಲಿಝಬೆತ್ ಪಟ್ಟಕ್ಕೇರಿದ ವರ್ಷ
1952. ಆಗ ನಾಲ್ಕು ವರ್ಷದವನಾಗಿದ್ದ ಆತ ಈ ದಿನಕ್ಕಾಗಿ ಎಪ್ಪತ್ತು ವರ್ಷಗಳೇ ಕಾಯ್ದಿರ ಬಹುದು. ಆತನ ’ಹೆಡ್ ಅಂಡ್
ಶೋಲ್ಡರ್’ ಫೋಟೋ ತೆಗೆದು ನನ್ನನ್ನೊಬ್ಬ ಅನಧಿಕೃತ ಫೋಟೋಗ್ರಾಫರ್ ಅಂತ ನಾನೇ ಅಂದುಕೊಳ್ಳುತ್ತ ನಾನು 45
ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೇನೆ ಅಂದರೆ ಬರೀ ಉಡಾಫೆ ಅಂದುಕೊಳ್ಳದೆ ಆ ಕಥೆಯನ್ನು ಕೇಳಿ ಆಮೇಲೆ ಹೇಳಿರಿ!
ರೆಡ್ ಲೆಟ್ಟರ್ ಡೇ, ಜೂಲೈ, 1978.
ಹದಿನೈದನೆಯ ಶತಮಾನದಿಂದಲೂ ಹಬ್ಬದ ದಿನಗಳ ಪ್ರಥಮಾಕ್ಷರವನ್ನು ಕೆಲೆಂಡರಿನಲ್ಲಿ ಕೆಂಪು ಅಕ್ಷರಗಳಿಂದ ಮುದ್ರಿಸುವ ಈ ರೀತಿಯ ಪರಿಪಾಠ ಪ್ರಿಂಟರ್ ವಿಲಿಯಮ್ ಕ್ಯಾಕ್ಸ್ಟನ್ ಶುರುಮಾಡಿದ ಕಾಲದಿಂದ ಬಂದಿದೆ ಅಂತ ಪ್ರತೀತಿ.
ನನ್ನ ಪಾಲಿಗೆ ಆ ದಿನ ಅಂಥದೊಂದು ದಿನ. ಒಂದು ಕೆಂಪು ಹೆಲಿಕಾಪ್ಟರನ್ನು ತಾನೇ ಪೈಲಟ್ ಆಗಿ ನಡೆಸಿಕೊಂಡು ಯು ಕೆ ನ ವೇಲ್ಸ್ ಪ್ರಾಂತದ ಮರ್ಥರ್ ತಿಡ್ಫಿಲ್ ಎನ್ನುವ ಊರಿನ ’ಪ್ರಿನ್ಸ್ ಚಾರ್ಲ್ಸ್ ಆಸ್ಪತ್ರೆ’ಯ ಖಾಲಿ ಕಾರ್ ಪಾರ್ಕಿನಲ್ಲಿ ಬಂದಿಳಿದಾಗ ರೆಡ್ ಲೆಟ್ಟರ್ ಡೇ ಆಯಿತು. ಅಷ್ಟೇ ಏಕೆ, ಆತನ ಹೆಸರಿನಲ್ಲಿ ನಾಮಕರಣವಾಗಿ ಅದನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿಸಿದ ಆಸ್ಪತ್ರೆಯ ಸಿಬ್ಬಂದಿ ಮತ್ತು ಅಲ್ಲಿ ನೆರೆದ ನೂರಾರು ಜನರಿಗೂ ಅದು ಮರೆಯಲಾರದ ದಿನ. ಆಗ ಮೋಬೈಲ್ ಕ್ಯಾಮರಾಗಳು ಹುಟ್ಟಿರಲಿಲ್ಲ. ಅದೇ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ಜೂನಿಯರ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನಾನು ಒಂದು ಹಳೆಯ ಮಾದರಿಯ ಅಶಾಯಿ ಪೆಂಟಾಕ್ಸ್ Asahi Pentax ಕ್ಯಾಮರಾ ಹಿಡಿದು ಆತನ ಒಂದು ಚಿತ್ರವನ್ನಾದರೂ ಸೆರೆ ಹಿಡಿಯಲು ಕಾತುರನಾಗಿದ್ದೆ. ರಾಜ ಕುಮಾರ ಅಂದ ಮೇಲೆ ಸಾಕಷ್ಟು ಸೆಕ್ಯೂರಿಟಿ ಇತ್ತಾದರೂ ಈಗಿನಷ್ಟು ಇರಲಿಲ್ಲ. ಆದರೂ ನಿಯಮಾವಳಿಗಳ (protocol) ಪ್ರಕಾರ ಫ್ಲಾಷ್ ಫೋಟೋಗೆ ಕಡ್ಡಾಯವಾಗಿ ನಿಷೇಧ. ಅದು ನನಗೆ ಸ್ವಲ್ಪ ನಿರಾಶೆಯನ್ನುಂಟು ಮಾಡಿದರೂ ನನ್ನ ಅದೃಷ್ಟವನ್ನು ಪರೀಕ್ಷಿಸಲು
ಸಿದ್ಧನಾದೆ.
ನನಗೂ ಫೋಟೋಗ್ರಾಫಿಗೂ ಅಂಟಿದ ನಂಟು ...
ಎಲಿಝಬೆತ್ ರಾಣಿ ಪಟ್ಟಕ್ಕೆ ಬಂದಾಗ ನಾವು ಊಟಿಯಲ್ಲಿ ವಾಸಿಸುತ್ತಿದ್ದೆವು. ಆಗ ನನಗೆ ಆರುವರ್ಷ, ನನ್ನ ಅಣ್ಣನಿಗೆ ಎಂಟು
ವರ್ಷ ವಯಸ್ಸಿರಬಹುದು. ನಮಗೆ ಮೊದಲಿನಿಂದಲೂ ಫೋಟೋ ತೆಗೆಯ ಬೇಕೆಂದು ತವಕ. ನನ್ನಣ್ಣ ಮತ್ತು ನಾನು ತಂದೆಯವರಿಗೆ
ಕಾಡಿ, ಬೇಡಿ ಒಂದು ಫುಲ್ ವ್ಯೂ ಕ್ಯಾಮರವನ್ನು ಅದೇ ಸಮಯಕ್ಕೆ ಗಿಟ್ಟಿಸಿದ್ದೆವು. ಆಗ ಬ್ಲಾಕ್ ಅಂಡ ವೈಟ್ ಫೋಟೊ ತೆಗೆದು,
ಊರಲ್ಲಿದ್ದ ಒಂದೇ ಸ್ಟೂಡಿಯೋಗೆ ಕೊಟ್ಟು, ’ತೊಳೆಸಿ’ ಪ್ರಿಂಟ್ ಮಾಡಿಸಿದ ನೆನಪು ಇನ್ನೂ ಹಸಿರಾಗಿದೆ. ಆಮೇಲೆ ಕಾಲೇಜಿಗೆ
ಬಂದಾಗ ನನ್ನ ಮಿತ್ರನೊಡನೆ ಸೇರಿ ನಾವೇ ಪ್ರಿಂಟ್ ಮಾಡಿದ್ದೂ ಇದೆ. ನಂತರ ಈಗ ಡಿಜಿಟಲ್ ಯುಗ ಬಂದಾಗಿನಿಂದ ಎಲ್ಲರಂತೆ
ನಾನೂ ಒಬ್ಬ ಡೇವಿಡ್ ಬೇಯ್ಲಿ, ಅಥವಾ ಕ್ರಿಸ್ ಜಾಕ್ಸನ್ ಅನ್ನುವ ಭ್ರಮೆಯಲ್ಲಿದ್ದೇನೆ!
ಲೈಬ್ರರಿಯಲ್ಲಿ ರಾಜನ ಭೇಟಿ
ಇಂಗ್ಲಿಷ್ ನಿಘಂಟು ಬರೆದು ಪ್ರಸಿದ್ಧರಾದ ಡಾ ಸಾಮ್ಯುಎಲ್ ಜಾನ್ಸನ್ ಅವರನ್ನು ಮೂರನೆಯ ಜಾರ್ಜ್ ಅವರು ತಮ್ಮ
ಇಚ್ಛೆಯಂತೆ ರಾಣಿಯ ಲೈಬ್ರರಿಯಲ್ಲಿ 1767 ರಲ್ಲಿ ಭೆಟ್ಟಿಯಾಗಿದ್ದರು ಅಂತ ಓದಿದ ನೆನಪು. ಅದನ್ನೇ ನೆನಪಿಸುವ ಅಂದಿನ
ಘಟನೆ. ಆಗ ನಾನು ಅದೇ ಆಸ್ಪತ್ರೆಯಲ್ಲಿ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಡಾ ಲಾಲಾ ಎನ್ನುವ ಕಣ್ಣಿನ ತಜ್ಞರ ಕೆಳಗೆ ಕೆಲಸ
ಮಾಡುತ್ತಿದ್ದೆ. ಅವರು ಆ ದಿನ ಆಗ ಪ್ರಿನ್ಸ್ ಎಂದೇ ಕರೆಯಲಾಗುತ್ತಿದ್ದ ಚಾರ್ಲ್ಸ್ ಅವರನ್ನು ಭೇಟಿ ಮಾಡಲು ಇಚ್ಛಿಸಿದ್ದರು.
ಅದಕ್ಕೆ ಆಸ್ಪತ್ರೆಯ ಅಧಿಕಾರಿಗಳೂ ಒಪ್ಪಿದ್ದರು. ಅವರ ಜೊತೆಗೆ ನಾನೂ ಸೇರಿಕೊಳ್ಳಲೇ ಎಂದು ಹೊಂಚು ಹಾಕಿದ್ದು ಫಲಿಸಲಿಲ್ಲ.
ಪ್ರೋಟೋಕಾಲ್ ಅಂತ ಅಧಿಕಾರಿಗಳು ಅದೇ ಕೋಣೆಯಲ್ಲಿರಲು ಸಮ್ಮತಿಸಲಿಲ್ಲ.
ಅಂತೂ ಸಿಕ್ಕಿತು ಅವಕಾಶ
ನಂತರ ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಚಾರ್ಲ್ಸ್ ’ತಮ್ಮ’ ಹೆಸರಿನ ಆಸ್ಪತ್ರೆಯ ವಿವಿಧ ಭಾಗಗಳಿಗೆ ಭೇಟಿಕೊಡಲು ಸುತ್ತಿತ್ತುರುವಾಗ ಅವರ ಹಿಂದೆ ’ಆಂಟೂರಾಜ್’ ಜೊತೆಗೆ ಸೇರಿಕೊಂಡು ಒಂದು ಕೋಣೆಯಲ್ಲಿ ಕೆಲವು ಡಾಕ್ಟರರು ಮತ್ತು ನರ್ಸ್ಗಳು ಸಾಲಾಗಿ ನಿಂತಿದ್ದನ್ನು ನೋಡಿ, ಅವರ ಹಿಂದಿನ ಸಾಲಿನಲ್ಲಿ ಆಯಕಟ್ಟಿನ ಸ್ಥಳದಲ್ಲಿ ನಿಂತುಕೊಂಡೆ. ನಮ್ಮ ಎದುರಿಗೆ ಮೂರೇ ಅಡಿ ದೂರದಲ್ಲಿ ಒಬ್ಬೊಬ್ಬರನ್ನಾಗಿ ವಿಚಾರಿಸುತ್ತ ಮಾತಾಡಿಸುತ್ತ ಬಂದ ಚಾರ್ಲ್ಸ್ ಅವರನ್ನು ಫೋಕಸ್ ಮಾಡಿ ತಲೆ ಮತ್ತು ಭುಜಗಳು (head and shoulder) ಇಷ್ಟೇ ಕಾಣಿಸುವಂಥ ನಾಲ್ಕೈದು ’ಪೋರ್ಟ್ರೇಟ್’ ಫೋಟೋಗಳನ್ನು ಕ್ಲಿಕ್ಕಿಸಿದೆ. ಆಗ ಡಿಜಿಟಲ್ ಕ್ಯಾಮರಾಗಳ ಆವಿಷ್ಕಾರ ಆಗಿದ್ದಿಲ್ಲ. ನೆಗೆಟಿವ್ ಗಾಗಿ ಫಿಲ್ಮ್ ಗಳನ್ನು ಕಂಪನಿಗೆ ಕಳಿಸಿ ಪೋಸ್ಟಿನಲ್ಲಿ ಪ್ರಿಂಟ್ ಬರುವ ವರೆಗೆ ಪ್ರಸೂತಿ ವೇದನೆ! ಎರಡು ವಾರಗಳ ನಂತರ ಪೋಸ್ಟ್ಮನ್ ಬಂದಾಗ ’ಹೆಣ್ಣೋ ಗಂಡೋ’ ಅಂತ ಕುತೂಹಲದಿಂದ ಮತ್ತು ಅವಸರದಿಂದ ಕವರನ್ನು ಬಿಚ್ಚಿ ನೋಡಿದೆ. ಫ್ಲಾಷ್ ಇಲ್ಲ ಅಂತ 1/15 ಸೆಕೆಂಡುಗಳ ಎಕ್ಸ್ ಪೋಶರ್ ಕೊಟ್ಟಿದ್ದೆ. ಒಂದೇ ಒಂದು ಫೋಟೋ ಮಾತ್ರ ಅವರದೇ ಅನ್ನುವಷ್ಟಾದರೂ ಸ್ಪಷ್ಟವಾಗಿ ಕಾಣಿಸುವಂತಿತ್ತು. ನನಗೆ ಸ್ವರ್ಗ ಮೂರೇ ಗೇಣು! ಒಂದು ಕಾಲದಲ್ಲಿ ಆತ ಕಿಂಗ್ ಆಗುವ ದಿನವನ್ನೇ ಕಾಯುತ್ತಿದ್ದೇನೆ ಇಂದಿನ ವರೆಗೆ! ಇನ್ನುಳಿದ snaps ಕುದುರೆ ರೇಸಿನಲ್ಲಿ ಹೇಳುವಂತೆ 'also ran' ಅನ್ನುವ ಲೆಕ್ಕಕ್ಕಿಲ್ಲದವು! ಹೋಗಲಿ ಬಿಡಿ. ಆ ‘ಐತಿಹಾಸಿಕ' ಫೋಟೋ ಬಲಗಡೆ ಕೊಟ್ಟಿದೆ, ನಿಮಗಾಗಿ!(Credit: Monochrome editing by Nigel Burkinshaw)
ರೈಟ್ ರಾಯಲ್ ಖುಶಿ!
ಆ ಫೋಟೋವನ್ನು ಎನ್ಲಾರ್ಜ್ ಮಾಡಿಸಿ, ಪೋಸ್ಟರ್ ಮಾಡಿಸಿ ನನ್ನ ಡಿಪಾರ್ಟ್ಮೆಂಟಿನಲ್ಲಿ ಇಟ್ಟಿದ್ದೆ. 1978 ರಲ್ಲಿ ಆ ಊರು ಬಿಟ್ಟು ಬಂದೆ. ಈಗ ಆ ದೊಡ್ಡ ಫೋಟೋದ ಗತಿ ಏನಾಯಿತು ಗೊತ್ತಿಲ್ಲ. ಆ ನೆಗಟಿವ್ ಮಾತ್ರ ಇನ್ನೂ ನನ್ನ ಹತ್ತಿರ ಇದೆ. ರಾಯಲ್ ಗ್ರಾಂಟ್ ಅಂತ ಒಂದು ’ಪದವಿ’ ಸಿಗುವದು ಅಷ್ಟು ಸುಲಭವಲ್ಲ. ಆ ಫೋಟೋದ ಒಂದು ಪ್ರತಿಯನ್ನು ’ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್’ ಲಂಡನ್ ಅಂತ ಹೆಮ್ಮೆಯಿಂದ ಕಳಿಸಿದ್ದು ಏನಾಯಿತೋ ಗೊತ್ತಿಲ್ಲ. ಆದರೆ ಈ ವರ್ಷದ ವರೆಗೆ ಕಾಯ್ದಿದ್ದ ನನಗೆ ಆ ಫೋಟೋ ಕ್ಲಿಕ್ಕಿಸಿದ ದಿನವನ್ನು ನೆನೆದು ಮೈ ಪುಳಕಿತವಾಗುತ್ತಿದೆ! ನನ್ನ ಅತ್ಯಂತ ಅದೃಷ್ಟದ ಫೋಟೋ ಅದು ಅಂತ ನೀವೂ ಒಪ್ಪ ಬಹುದೆಂದು ಊಹಿಸುತ್ತೇನೆ! ಅದಕ್ಕೆ ನನ್ನ ಕಾಪಿರೈಟಿದೆ, ಎಚ್ಚರಿಕೆ!
ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯಾರ್ಕ್ ಶೈರ್, ಯು ಕೆ.
(ಫೋಟೋಗಳೆಲ್ಲ ಲೇಖಕರು ಕ್ಲಿಕ್ಕಿಸಿದ್ದು. Copyright reserved.)
(ಇದೇ ವಾರದ ಕನ್ನಡ ಪ್ರಭ ಎನ್ ಆರ್ ಐ ಆವೃತ್ತಿಯಲ್ಲಿ ಪ್ರಕಟವಾದ ನನ್ನ ಲೇಖನದ ಪರಿಷ್ಕೃತ ರೂಪ)