ಹೀಗೊಂದು ಸಿನೆಮಾ ವಿಹಾರ, ಹಾಗೊಂದು ಹರಟೆ

ಅನಿವಾಸಿ ಬಳಗಕ್ಕೆ ನಮಸ್ಕಾರ. ಯುಗಾದಿ, ರಾಮನವಮಿ, ಹನುಮಜಯಂತಿ, ಕೋಸಂಬರಿ-ಪಾನಕ, ಮಾವು ಎಂದೆಲ್ಲ ಚೈತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾಯಿತು. ಇದೀಗ ಈಸ್ಟರ್ ನ ರಜೆಯ ದಿನಗಳು. ಬೆಳಗ್ಗೆ ಮಕ್ಕಳ ಶಾಲೆಯ ಅವಸರವಿರದ, ತಡ ರಾತ್ರಿಯ ಟಿ.ವಿ. ವೀಕ್ಷಣೆಗೆ ಸೂಕ್ತ ದಿನಗಳು. ಅದಕ್ಕೆಂದೇ ನಮ್ಮ ಅನಿವಾಸಿಯ ಹೊಸ ಬರಹಗಾರರಾದ ಪ್ರಮೋದ್ ಸಾಲಿಗ್ರಾಮ ಅವರು ನೋಡಿ ವಿಶ್ಲೇಷಿಸಿದ ಸಿನೆಮಾವೊಂದರ ಲೇಖನ ಇಂದಿನ ಸಂಚಿಕೆಯಲ್ಲಿದೆ. ನಮ್ಮಲ್ಲಿರುವ ಬಹು ಮಂದಿ ಸಿನೆಮಾಪ್ರಿಯರಿಗೆ ಇದು ಮೆಚ್ಚುಗೆಯಾದೀತೆಂಬ ಭರವಸೆಯಿದೆ. ಜೊತೆಗೆ ನನ್ನದೊಂದು ಲಘು ಹರಟೆಯೂ ಉಂಟು. ಓದಿ ಲಗೂನೆ ಒಂದೆರಡು ಕಮೆಂಟೂ ಮಾಡ್ರಿ. ಹಂಗೇ ಪ್ರಮೋದ್ ಅವರು ಹೇಳಿದ ಸಿನೆಮಾನೂ ನೋಡ್ರಿ..ಅವರ ಅನಿಸಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನೂ ಹಂಚಗೊಳ್ರಿ. – ಸಂಪಾದಕಿ

ನಾ ಕಂಡ ವಿಡುದಲೈ – ೧

ಬರಹಗಾರ ಜೆಯಮೋಹನ್ ರವರ ಸಣ್ಣಕಥೆ ಆಧಾರಿತ ಸಿನಿಮಾ. ಮೈನಿಂಗ್ ಹೆಸರಲ್ಲಿ ಸರ್ಕಾರವೊಂದು  ಜನರಿಗೆ ಮಣ್ಣೆರಚುತ್ತಾ : ಕ್ರಾಂತಿಕಾರಿಯೋರ್ವನನ್ನು ದೇಶದ್ರೋಹಿಯಾಗಿಸಿ ; ಪೊಲೀಸ್ ಪಡೆಯೊಂದು ಅವನ ಬೆನ್ನಟ್ಟಿರುವ ಹಿನ್ನಲೆಯಲ್ಲಿ ಈ ಚಿತ್ರ . 

ಪೊಲೀಸ್ ದೌರ್ಜನ್ಯದ ಮುನ್ನಲೆಯಲ್ಲಿ ಡ್ರಾಮಾ ರಚಿಸಿ , ಕಥಾಪಾತ್ರಗಳೆಲ್ಲ ಬಂದು ಕಥೆಗೆ ನಟಿಸಿ ಹೋಗುತ್ತಾರೆ ಅಷ್ಟೇ. ಕಥೆಯೇ ಸಿನಿಮಾದ ಜೀವಾಳ . ಇದು ನಿರ್ದೇಶಕ ವೆಟ್ರಿಮಾರನ್ ಗೆ ಹೊಸದಲ್ಲ- ಅವರ ಹಿಂದಿನ ಸಿನಿಮಾ : ವಿಸಾರಣೈ ಒಂದೊಮ್ಮೆ ನೋಡಿ ಬನ್ನಿ . ಇವರು ಪಾತ್ರಗಳ ನಿಟ್ಟಿನಲ್ಲಿ ಕಥೆ ಹೇಳುವ ಕಲೆಯನ್ನ ,ಹೇಗೆ ಕರಗತ ಮಾಡಿಕೊಂಡ್ದಿದಾರೆ ಅನ್ನೋ ಆಶ್ಚರ್ಯ ನಿಮ್ಮನ್ನ ಪಕ್ಕಾ ಕಾಡುತ್ತದೆ .  ಗುಡ್ಡುಗಾಡಿನ ಗ್ರಾಮಸ್ಥರು , ಪೋಲಿಸಿನವರು , ರಾಜಕಾರಣಿ , ಮಾಧ್ಯಮದವರು, ನಾಯಕ -ನಾಯಕಿ ಎಲ್ಲರ ಮಧ್ಯದಲ್ಲೊಂದು balancing act ನಿರ್ದೇಶಕನ ಕೈಚಳಕ . ಮೊದಲ ಹತ್ತು ನಿಮಿಷದ ರೈಲು ಆಕ್ಸಿಡೆಂಟ್ ದೃಶ್ಯದಲ್ಲೇ ದೊಡ್ಡ Long -Shot  ಮುಖಾಂತರ ಕ್ಯಾಮೆರಾ ಕಣ್ಣಲ್ಲಿ ಟ್ರೈನ್ ಕಿಟಕಿಯೊ ಳಗೆ ಹೊಕ್ಕು ಗಾಯಗಳು , ಸಾವು ನೋವು , ವೇದನೆ , ಅನುಕಂಪ , ಮನುಷ್ಯತ್ವ ಎಲ್ಲವನ್ನುತೋರಿಸುತ್ತ ಕಥೆಯಲ್ಲಿ ಮುಳಿಗಿಸಿಬಿಡುತ್ತಾರೆ . ನಂತರ ಬರುವುದೆಲ್ಲಾ Bonus.  

ದಮನಿತರ ರಕ್ಷಣೆಗೆ ನಿಂತಂತೆ ಇರುವ ಕ್ರಾಂತಿಕಾರಿ ಪೆರುಮಾಳ್ ವಾದಿಯಾರ್ (ವಿಜಯ್ ಸೇತುಪತಿ)ಗೆ ಭಾಗ ಒಂದರಲ್ಲಿ ಕಡಿಮೆ ಪಾತ್ರ ಆದರೂ ಮನಸ್ಸಿಗೆ ಹತ್ತಿರವಾಗುತ್ತಾರೆ . Climax ನಲ್ಲಿ ಬರುವ ಅವರ ಭಾಗ -೨ರ ತುಣುಕುಗಳಲ್ಲಿ powerful Dialogue ನಿಂದ ಮುಂದೇನಾಗಬಹುದು ಅನ್ನೋ ಕುತೂಹಲ.  

ಪೊಲೀಸ್ ಇಲಾಖೆಯ ಸಾಮಾನ್ಯ ಪೇದೆ ಕುಮರೇಸನ್(ಸೂರಿ) ಈ ಕಥೆಯ ಮುಖ್ಯ ಪಾತ್ರಧಾರಿ .ಈ ಮುನ್ನ ಬರೀ comedian ಆಗೇ ನಟಿಸಿದಂತ ಸೂರಿ ಅವರನ್ನ ಸಿನಿಮಾದ ಹೀರೋವನ್ನಾಗಿಸಿರುವ ನಿರ್ದೇಶಕರ ಗಟ್ಟಿ ನಿರ್ಧಾರ ಮೆಚ್ಚಬೇಕಾದಂತದ್ದು . ಕಾರಣ ಪಾತ್ರಕ್ಕೆ ಬೇಕಾದ ಮುಗ್ಧತೆ , ಅಸಹಾಯಕತೆ , ಹತಾಶೆ ಇವೆಲ್ಲದರ ಮಧ್ಯೆ ನೈತಿಕತೆಯ ಮೂರ್ತರೂಪ ಸೂರಿ . ತಾನು ತಪ್ಪು ಮಾಡದೆ ಇದ್ದಾಗ ಕ್ಷಮೆ ಕೇಳಲಿಚ್ಛಿಸದ ಛಲವಾದಿ -  ಮನಸ್ಸಿಗೆ ಹತ್ತಿರವಾಗುತ್ತಾರೆ . ನಮ್ಮ - ನಿಮ್ಮಂತೆ ವ್ಯವಸ್ಥೆಯ ಮೇಲೆ ಭರವಸೆ ಇಟ್ಟಿರುವ ಕುಮರೇಸ ವಿನಾಕಾರಣ ಪನಿಶ್ಮೆಂಟ್ ತಿನ್ನುವಾಗ ಕರುಳು ಚುರುಕ್ ಅನ್ನತ್ತೆ.  ಕುಮರೇಸ- ನಾವೇ ಏನೋ ಅನ್ನಿಸೋ ಅಷ್ಟು ಆಕ್ರಮಿಸುತ್ತಾರೆ , ಪ್ರಭಾವ ಬೀರುತ್ತಾರೆ. 

ನಾಯಕಿ ತಮಿಳರಸಿಯಾಗಿ (ಭವಾನಿ ಶ್ರೀ) ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತಾರೆ. ಪರದೆಯ ಮೇಲಿನ ಲವ್ ಟ್ರ್ಯಾಕ್ ನಮ್ಮನ್ನು ಎಲ್ಲೂ ಬೋರ್ ಹೊಡಿಸದಂತೆ ಸಮಗ್ರವಾಗಿ ಮತ್ತು ಅದ್ಭುತವಾಗಿ ಬರೆಯಲಾಗಿದೆ.ಅದಕ್ಕೆ ಕಾರಣ ನಾಯಕಿಯ ಭಾವನಾತ್ಮಕ ಆಘಾತಗಳು , ಜನಾಂಗದ ಹಿನ್ನೆಲೆ, ಫ್ಲ್ಯಾಷ್‌ಬ್ಯಾಕ್ ಎಲ್ಲವೂ ಕಥೆಗೆ ಪೂರಕವಾಗಿರೊದು. ತುಂಬಾ ಹಿಡಿಸುವ scene ಒಂದು ನೆನಪಿಗೆ  ಬರುತ್ತಿದೆ : ಸರಿಯಾಗಿ ಸ್ಪಂದಿಸದ ಕಾರಣ ನಾಯಕಿಯ ಎದುರು ಕುಮರೇಸ ಬಂದು ಬೇಷರತ್ ಕ್ಷಮೆಯಾಚಿಸಿ , ತಪ್ಪನ್ನು ಸಮರ್ಥಿಸಿಕೊಳ್ಳದೆ , ಏನನ್ನೂ ವೈಭವೀಕರಿಸದಿರುವ scene - ತುಂಬಾ Beautiful ಹಾಗೂ Rare ಕೂಡ . 

ಕುಮರೇಸನಿಗೆ ನರಕ ತೋರಿಸುವ ವ್ಯವಸ್ಥೆಯ ರೂವಾರಿಯಾಗಿ ಪೊಲೀಸ್ ಅಧಿಕಾರಿ ಓ.ಸಿ (ಚೇತನ್). ಈತ ಚಿತ್ರದ ದೊಡ್ಡ ಅಚ್ಚರಿ. ಪೋಲೀಸರ ದೌರ್ಜನ್ಯದ ಮುಖವಾಗಿ ಮತ್ತು ಕ್ರೂರಿಯಾಗಿ ಪಾತ್ರವನ್ನು ನೆನಪಿನಲ್ಲಿರುವಂತೆ ನಟಿಸಿದ್ದಾರೆ. DSP ಯಾಗಿ ಗೌತಮ್ ವಾಸುದೇವ್ ಮೆನನ್ , Chief Secretary ಆಗಿ ರಾಜೀವ್ ಮೆನನ್ Perfect . ಸಣ್ಣ ಪೋಷಕ ಪಾತ್ರಗಳು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.   

ಹೊರಗಿನವನು ಹೇಗೆ ಒಳಗಿನವನಾಗುತ್ತಾನೆ ? ನಿರಪರಾಧಿ ಹೇಗೆ ನಿಜಾಯಿತಿ ಅರಿಯುತ್ತಾನೆ ? ಸತ್ಯದಿಂದ ದೂರವಾದ ಮಾಧ್ಯಮಗಳ ಪ್ರಚಾರ , ವ್ಯವಸ್ಥಿತ ರಾಜಕೀಯ, ಮೇಲ್ದರ್ಜೆಯವರ ದರ್ಪ - ಪೊಲೀಸರನ್ನು ಹೊಕ್ಕಿದಾಗ ಜನರಿಗಾಗುವ ಸಂಕಷ್ಟಗಳು ,ಒಳ್ಳೆಯದಾವುದು - ಕೆಟ್ಟದಾವುದು ಎಂಬ ಸಂಘರ್ಷ. ಯಾರ ಪರವಾಗಿ ಹೋರಾಡುವುದು ? ಹೀಗೆ ನಾನಾ ವಿಷಯಗಳನ್ನು ಅವರವರ ದೃಷ್ಟಿಕೋನದಲ್ಲಿ ಹೇಳಿರುವ ಕಥೆ ತೆರೆಯ ಮೇಲೆ ಸ್ಪಷ್ಠವಾಗಿ ಕಾಣಸಿಗುತ್ತದೆ . ಹಾಗಾಗಿ ನಾವು ಕೂಡ ಬರೀ ಪ್ರೇಕ್ಷಕರೆನ್ನುವುದು ಮರೆತು ಹೋಗಿ ಪಾತ್ರಗಳಾಗಿರುತ್ತೇವೆ . 

ಪೊಲೀಸ್ ದೌರ್ಜನ್ಯ, Raw ಅಂಡ್ Rustic ಆಗಿ ಮೂಡಿಬರಬೇಕು ಅಂತ ಚಿತ್ರದಲ್ಲಿ ಸಾಕಷ್ಟು Aggression, Nudity, Vulgarity ಎಲ್ಲವೂ ಇದ್ದು disturb ಆಗಿಬಿಡಬಹುದು . ಹಾಗೂ ಚಿತ್ರದಲ್ಲಿ  ಅಲ್ಲಲ್ಲಿ ಡಬ್ಬಿಂಗ್ lip Sync issues ಅನ್ನಿಸ್ತು.  

ಕ್ಯಾಮೆರಾ ವರ್ಕ್ ವೇಲರಾಜ್ , ಕಲಾ ನಿರ್ದೇಶನ  Jackie, ಎಡಿಟರ್ ರಾಮರ್  ನಿಮಗೆ ದೊಡ್ಡ ಸಲಾಂ .ಇಳಯರಾಜರ ಇಂಪಾದ ಸಂಗೀತವಿದೆ. ಹಾಡೊಂದಕ್ಕೆ ಕನ್ನಡತಿ ಅನನ್ಯ ಭಟ್ ದನಿಯಿದೆ. ಸಿನಿಮಾದ geography  - locations ಎಲ್ಲವೂ ಕಥೆಗೆ ಪೂರಕ .  ಸಿನಿಮಾನೇ ಜೀವನ ಅಂತ ಇಷ್ಟಪಡುವ ಹಲವು ಜನರ ಕೈಂಕರ್ಯದ ಫಲ ವಿಡುದಲೈ  . ಪೊಲೀಸ್ ದೌರ್ಜನ್ಯದ ದೃಶ್ಯಗಳು ಬಲು ಹಿಂಸಾತ್ಮಕ - ಸ್ವತಃ ಪೊಲೀಸ್ ಒಬ್ಬಾತನಿಗೂ ತನ್ನ ಕೆಲಸದ ಮೇಲೆ ವಿಷಾದ ಮೂಡಬಹುದು . ಆದರೂ ಸಹ ಸಮುದಾಯದ ತಳವರ್ಗ / ಬುಡಕಟ್ಟು ಜನರ ಕಷ್ಟ-ಕಾರ್ಪಣ್ಯ ಗಳಿಗೆ ಕನ್ನಡಿ . ಮನಸ್ಸು ಕರಗಿ , ನಮ್ಮನು ನಾವೇ ಅರ್ಥೈಸಿಕೊಳ್ಳಬಹುದಾದ ಪ್ರಶ್ನೆಗಳು ಮೂಡುತ್ತವೆ. ಅದಕ್ಕೆ ಏನೋ  ಈ ಸಿನೆಮಾಗೆ ವಿಡುದಲೈ ಅಂದರೆ ಬಿಡುಗಡೆ/ಸ್ವಾತಂತ್ರ್ಯ ಅನ್ನೋ ಹೆಸರು. 

Rating: ೮೫/೧೦೦

-ಪ್ರಮೋದ್ ಸಾಲಿಗ್ರಾಮ ರಾಮಕೃಷ್ಣ

ಪಂಜಾದ ಮ್ಯಾಲೊಂದು ಪ್ರಬಂಧ

ಸ್ನೇಹಿತರೇ ನಮಸ್ಕಾರ.’ಪಂಜಾನs' ಅಂತ ಒಮ್ಮಿಗಲೇ ಆವಾಕ್ಕಾಗಬ್ಯಾಡ್ರಿ.ಈ ಪಂಜಾ ಹುಲಿ-ಸಿಂಹದ ಪಂಜಾ ಅಲ್ರಿ .  ಮತ್ತ ನಮ್ಮ ಬೆಂಗಳೂರು -ಮೈಸೂರಿನ
ಪಂಚೆನೂ ಅಲ್ರಿ.ಯಾಕಂದ್ರ ಆ ಪಂಚೆಯ ಠೀವಿ  ಬ್ಯಾರೆನೇ ಇರತದ.ಕೆಂಪು-ಹಸಿರು ಬಣ್ಣದ ಎರಡು  ಬಟ್ಟಿನ ಜರದ ಅಂಚೇನು? ಬೆಳ್ಳಗ ಶುಭ್ರ ಕೊಕ್ಕರೆಯಂಥ ಅದರ ಮಿನುಗೇನು?......ಅದಲ್ಲ ತಗೀರಿ,ಇದು ನಮ್ಮ ಉತ್ತರ ಕನಾ೯ಟಕದ ಪಂಜಾsರೀ..

ಜೀವನದಾಗ ಒಂದು ಗುರಿ ಇರಬೇಕು ;ಕೆಲವೊಂದು ರೂಲ್ಸ್ ,ಕಂಡೀಷನ್ಸ ಇರಬೇಕು  ಅನ್ನೋದು ಬಲ್ಲವರ ಮಾತು.ನಮ್ಮ ಡಿ.ವಿ.ಜಿ.ಯವರಂತೂ”ಜೀವಗತಿಗೊಂದು ರೇಖಾಲೇಖವಿರಬೇಕು  ನಾವಿಕನಿಗೆ ಇರುವಂತೆ  ದಿಕ್ಕು  ದಿನವೆಣಿಸೆ’ ಅಂತ ಖಡಾಖಂಡಿತವಾಗೇ ಹೇಳಿಬಿಟ್ಟಾರ.ಆದ್ರ ನಮ್ಮ ಈ ಕೈಮಗ್ಗದ , ಖಾದಿಭಂಡಾರದ ಪಂಜಾಕ್ಕ ಇವು ಯಾವ ಮಾತೂ ಅಪ್ಲೈ
ಆಗಂಗಿಲ್ಲ.ಅದಕ್ಯಾವ ಘನಂದಾರಿ ಗೊತ್ತು ಗುರಿ ಏನೂ ಇಲ್ಲ.ಅದರಲೆ ತಲಿ ಅರೆ  ಒರಸಕೋರಿ, ಮಾರಿ ಅರೆ ಒರಸಕೋರಿ ,ಮುಸುರಿಗೈ ಅರೆ ಒರಸಕೋರಿ, ಅಳ್ಳಕ ಆಗಿದ್ದ ಹೂರಣ ಅರೆ ಸೋಸರಿ,ಅನ್ನದ ಗಂಜಿ ಬಸೀರಿ,ಶ್ರೀಖಂಡಕ್ಕ ಮಸರರೆ ಕಟ್ರಿ, ಮೊಳಕಿ ಬರಸಲಿಕ್ಕೆ ಕಾಳ ಅರೆ ಕಟ್ಟಿಡ್ರಿ, ದೇವರ ಒರಸೂ ವಸ್ತ್ರ ಮಾಡ್ರಿ,ಮಡೀಲೆ ಒಣಗಹಾಕಿ ದೇವರ ಪೂಜಾ ಅರೇ ಮಾಡ್ರಿ ..ಇಲ್ಲಾ  ಶ್ರಾದ್ಧ-ಪಕ್ಷ -ತಿಥಿ ಮಾಡ್ರಿ..  ಎಲ್ಲಾ ನಡೀತದ.ಫಲಾಫಲದ ಚಿಂತೆಯಿಲ್ಲದ ಕಮ೯ಯೋಗಿಯಂತೆ ಯಾವ ಕೆಲಸವನ್ನಾದರೂ ನಿಷ್ಠೆಯಿಂದ  ಮಾಡುವ ಹಿರಿಮೆ ಇದರದು.ನಾ ಮೊದಲೇ ಹೇಳಿದ್ಹಂಗ ಇದು ಯಾವ ನಿಯಮಗಳ ಮುಲಾಜಿಲ್ಲದ ಸವ೯ತಂತ್ರ ಸ್ವತಂತ್ರ ವಾದದ್ದು.ಅದಕ್ಕ ಯಾವದೇ ಪಂಜಾದ ಮ್ಯಾಲೂ ‘ವಾಶಿಂಗ್ ಇನ್ ಸ್ಟ್ರಕ್ಶನ್ಸ’ ಇರಂಗಿಲ್ಲ ನೋಡ್ರಿ.”only hand wash,only dry clean ,keep away from the fire,only machine wash in 40 degree ,do not iron ..ಇಂಥ ಯಾವ  ರಗಳೇನೂ ಇಲ್ಲ.ಕೈಲೇರೆ ಒಗೀರಿ,ಮಶೀನ್ ನಾಗರೆ ಹಾಕ್ರಿ,ಅಗಸರವನಿಗೇ ಕೊಡ್ರಿ...ಎಲ್ಲಾನೂ ನಡೀತದ.ಇದ್ರ ಒಂಚೂರು ನಿರಮಾನೋ,ನೀಲಿಪಾಲಿನೋ ಹಾಕಿದರೂ ನಡದೀತು! ಇಲ್ಲಂದ್ರ ಬರೀ ನೀರಲ್ಲಿ ಕೈಯಿಂದ ಕುಕ್ಕಿ ಹಾಕಿದರೂ ಆಯಿತು.ಬಿಚ್ಚಿ ಹರವಿದ್ರ ಐದು ನಿಮಿಷದಾಗ ಒಣಗೇ ಬಿಡತದ. ಇಸ್ತ್ರಿ ಪಸ್ತ್ರಿ ಮಾಡೂ ತಂಟೆನೂ  ಇಲ್ಲ.
ಇನ್ನು ಇವುಗಳ ಸೈಜೋ? ದಶಾವತಾರದ ವಾಮನನಿಂದ ಹಿಡಿದು ತ್ರಿವಿಕ್ರಮನವರೆಗೆ..ಅಂಗೈ ಅಗಲದಿಂದ ಹಿಡಿದು ನವ್ವಾರಿ ಸೀರಿಯಷ್ಟು ದೊಡ್ಡದೂ ಸಿಗತಾವ.ಕನಾ೯ಟಕ ಬಿಟ್ಟು ಸುಮಾರು ೨೫ ವಷ೯ಗಳಿಂದ ದೆಹಲಿ – ಲಂಡನ್ ಅಂತ ಎಲ್ಲೇ ಅಡ್ಡಾಡಿದರೂ ನಮ್ಮ ಮನೆಯ  ಕಪಾಟಿನಾಗ ಪಂಜಾಕ್ಕೊಂದು ಜಾಗ ರಿಸವ್೯ ಇರೂದಂತೂ ಗ್ಯಾರಂಟಿ .ನಾನು ಪ್ರತಿಸಲ ಸೂಟಿಗೆ  ಅಂತ ನನ್ನ ತವರು  ಮನಿಗೆ ಹೋದ್ರ  ಏನು ಬಿಟ್ಟರೂ ,ಬ್ಯಾರೆ ಬ್ಯಾರೆ ಸೈಜಿನ  ನಾಲ್ಕು ಪಂಜಾ ತರೂದಂತೂ ತಪ್ಪಸಂಗಿಲ್ರಿ.ಎರಕೊಂಡ ಮ್ಯಾಲೆ ಪಂಜಾದಲೆ ತಲಿ ಒರಸಿಕೊಳ್ಳುದರ ಮಜಾನೇ ಬ್ಯಾರೆ.soft ಆದ  cotton ಬಟ್ಟಿ...ಸಂಪೂಣ೯ವಾಗಿ ನೀರು ಹೀರಿಕೊಳ್ಳುವ  ಅದರ ವೈಶಿಷ್ಟ್ಯ.. ಈ  ಟರ್ಕಿ - ಪರ್ಕಿ ಒಳಗ ಆ ಮಜಾ ಇಲ್ಲ ಬಿಡ್ರಿ.
 ನಾವು ಸಣ್ಣವರಿದ್ದಾಗ ನಮ್ಮ ಸೋದರಮಾವ  ಚ್ಯಾಷ್ಟಿ ಮಾಡತಿದ್ರು...”ನೈನಂ ಛಿಂದಂತಿ ಶಸ್ತ್ರಾಣಿ  ನೈನಂ ದಹತಿ ಪಾವಕ: “ ಅಂತ ಶ್ರೀಕೃಷ್ಣಗ ಭಗವದ್ಗೀತಾ ಒಳಗ ಆತ್ಮದ ಲಕ್ಷಣ ಹೇಳೂ ಐಡಿಯಾ ನಮ್ಮ ಸುಬ್ಬಣ್ಣಾಚಾರ್ಯರ ಪಂಜಾ ನೋಡಿನೇ ಬಂದಿರಬೇಕು ಅಂತ.ಹಂಗs  ಅವಾಗಿನ ಅಂದ್ರ 60- 70 ರ ದಶಕದ ಸುಬ್ಬಣಾಚಾಯ೯ರಿಂದ ಈಗ  2022-23 ರ ನಮ್ಮ ಪವಮಾನಚಾರ್ಯರತನಕ ಇದರ ಜಾಗ ಏನೂ ಬದಲಾಗಿಲ್ಲ. ನಮ್ಮ ಪವಮಾನಾಚಾರ್ಯರು  face-book,WhatsApp  ಎಲ್ಲಾದರಾಗೂ ಇದ್ದಾರ.ಕಂಪ್ಯೂಟರ್ ನಾಗ ಕುಂಡಲಿ  ತಗೀತಾರ.ವಿಮಾನದಾಗ ಓಡಾಡತಾರ.ಆದ್ರ ಪಂಜಾದ ಜಾಗಾದಾಗ ಮಾತ್ರ ಇನ್ನೊಂದು  ಸಾಮಾನು ಬಂದಿಲ್ಲ ನೋಡ್ರಿ.ಇವುಗಳದು ತಲೆ-ತಲಾಂತರದಿಂದ ಒಂಥರಾ ‘ಏಕಮೇವ ಚಕ್ರಾಧಿಪತ್ಯ’.  ‘ಸೂಯ೯ನ ಕಾಂತಿಗೆ ಸೂಯ೯ನೇ ಸಾಟಿ  .ಹೋಲಿಸಲಾರಿಲ್ಲ.’ ಅಂದ್ಹಂಗ ಪಂಜಾದ ಹಿರಿಮೆಗೆ ಪಂಜಾನೇ ಸಾಟಿ .ಹೋಲಿಸಲಾರಿಲ್ಲ.’ಮಡಿವಾಳರ ಶತ್ರು ,ಮಠದಯ್ಯಗಳ ಮಿತ್ರ....ಲಂಗೋಟಿ ಬಲು ಒಳ್ಳೇದಣ್ಣ  - ಒಬ್ರ ಹಂಗಿಲ್ಲದೇ ಮಡಿಗೆ ಒದಗುವುದಣ್ಣ ‘ ಅಂತ ಪುರಂದರದಾಸರು ಹಾಡಿದರಲ್ಲ.....ನಾವು ಬೇಕಾದರ ಲಂಗೋಟಿಗೆ ಪಯಾ೯ಯವಾಗಿ ಪಂಜಾ ಬಳಸಿಕೊಂಡ್ರ ಏನೂ ತಪ್ಪಿಲ್ಲವೇನೋ?! ಈ ಪಂಜಾಗಳಿಗೆ ರೇಶ್ಮೆಯಂಥಾ ರೇಶ್ಮೆಯಿಂದನೂ ಕಾಂಪಿಟೇಶನ್ ಇಲ್ಲ ಬಿಡ್ರಿ.

ಬ್ರಾಹ್ಮಣರ  ಮನ್ಯಾಗ ಏನು ಇಲ್ಲಂದ್ರೂ ನಡೀತದ.ಆದ್ರ ಈ ಪಂಜಾ ಇಲ್ಲಂದ್ರ ನಡ್ಯಂಗಿಲ್ಲ ನೋಡ್ರಿ.ದೇವರ  ಪೂಜಾದ ಸಮಯಕ್ಕ ಉಪಯೋಗಿಸಿದಂಥ ಪಂಜಾನ್ನ ಆಮ್ಯಾಲೆ ಬಿಚ್ಚಿ ನೋಡಬೇಕ್ರಿ..ಅದರ ಮ್ಯಾಲೆ ಒಂದು  ಸುಂದರ ವಣ೯ಚಿತ್ರ , ಒಂದು  modern art ಆಗಿಬಿಟ್ಟಿರತದ.ಅಕ್ಷಂತಿ,ಗಂಧ,ಅರಿಶಿನ,ಕುಂಕುಮ ಎಲ್ಲದರ ಸುಂದರ ಚಿತ್ತಾರ...ಇನ್ನ ದೊಡ್ಡ  ದೊಡ್ಡ  ಸಮಾರಾಧನಿ ಅಡಿಗಿಗೆ ಪಂಜಾ ಬೇಕೇ ಬೇಕ್ರಿ.ದೊಡ್ಡ  ದೊಡ್ಡ ಪಾತೇಲಿ ಒಲಿ ಮ್ಯಾಲಿಂದ ಇಳಸಲಿಕ್ಕೆ ಒದ್ದಿ ಪಂಜಾನೇ ಬೇಕ್ರಿ.ಹಾಂ,ಮಸಾಲಿಪುಡಿ,ಖಾರಪುಡಿ ,ಅರಿಶಿನ ಪುಡಿ ಎಲ್ಲಾ ಮೆತ್ತಿದ ಅದರ ಸೌಂದರ್ಯನೇ ಬ್ಯಾರೆ. ಇಷ್ಟ ಯಾಕ್ರಿ ಸ್ವಾಮಿಗೋಳು ಮುದ್ರಾ ಹಾಕಬೇಕಂದ್ರೂ ಈ ಪಂಜಾ ಜೋಡಿಗೆ ಬರಬೇಕ್ರಿ.ಒದ್ದಿ ಪಂಜಾದ ಮ್ಯಾಲೆ ಮುದ್ರಿ ಒತ್ತಿದ ಮ್ಯಾಲೆನೇ ಅದು ನಮ್ಮ ಮೈ ಮ್ಯಾಲೆ ಮೂಡೂದರಿ.
ನಮ್ಮ ಗದಗಿನ ಕುಮಾರ ವ್ಯಾಸನ ಭಾರತಕ್ಕೂ ಇದು ತನ್ನ ಕೊಡುಗೆ ಸಲ್ಲಿಸಿದ್ದ ಗೊತ್ತಿರಬೇಕ ನಿಮಗ. ಬಾವಿ ನೀರಿನ ಸ್ನಾನಮಾಡಿ ಉಟಗೊಂಡಿದ್ದ ಒದ್ದಿ ಪಂಜಾ ಆರೂತನಾ ಕುಮಾರವ್ಯಾಸಗ ಕಾವ್ಯ ಸ್ಫೂರ್ತಿ ಇರತಿತ್ತು ಅಂತಲೂ, ಕಂಬಕ್ಕೆ ಆರಲೆಂದು ಕಟ್ಟಿದ ಪಂಜಾದ ಮ್ಯಾಲ ನಾರಾಣಪ್ಪಗ ಮಹಾಭಾರತ ಸಚಿತ್ರವಾಗಿ ಕಾಣಿಸುತ್ತಿತ್ತು ಅಂತಲೂ ದಂತಕಥೆಗಳು ಪ್ರಚಲಿತದಾಗ ಅವ. 
ಹಂಗಂತ ಇದರ ಜಾಗಾ ಬರೇ ಬಡ ಬ್ರಾಹ್ಮಣರ ಮನ್ಯಾಗ ಮತ್ತ ಮಠದಾಗಷ್ಟೇ ಅಂತ ತಿಳಕೋಬ್ಯಾಡ್ರಪಾ.ಇದು ರಗಡ ಸಲ ಬಾಲಿವುಡ್ ಸವಾರಿನೂ ಮಾಡಿ  ಬಂದದ.ನಮ್ಮ ರಾಜಕಪೂರ್ ಫ್ಯಾಮಿಲಿಯವರಿಗಂತೂ ಇದು ಫೇವರಿಟ್. ‘ ತುಝೆ ಬುಲಾಯೆ ಯೆ ಮೇರಿ ಬಾಹೇಂ...ಗಂಗಾ  ಯೆ ತೇರಿ ಹೈ ಫಿರ್ ಕೈಸಿ ದೇರಿ ಹೈ’ಅಂತಲೂ, ‘ಸತ್ಯಂ ಶಿವಂ ಸುಂದರಂ ‘ ಅಂತಲೂ ಹಾಡಿ ತಾನೂ ಕುಣಿಯೂದಲ್ಲದ ಎಲ್ಲಾರ ಮೈ-ಮನಸ್ಸನ್ನೂ ಕುಣಿಸಿ -ತಣಿಸೇದ ಅನ್ನೂದನ್ನ ಮರೀಬ್ಯಾಡ್ರಿ.
ಇಷ್ಟೆಲ್ಲಾ  ಆದ್ರೂ ಸೊಕ್ಕಿಲ್ಲ ನೋಡ್ರಿ ಅದಕ್ಕ.”ತುಂಬಿದ ಕೊಡ ತುಳಕಂಗಿಲ್ಲ “ಅನ್ನೂಹಂಗ ಸದ್ದಿರದೇ ತನ್ನ ಕತ೯ವ್ಯದಲ್ಲಿ ನಿರತವಾಗಿರತದ.ಫಲಾಫಲಾಪೇಕ್ಷೆಯಿಲ್ಲದೇ ,ಮೇಲು -ಕೀಳು ಎನ್ನದೇ ಕಮ೯ಯೋಗಿಯಂತೆ ತಾನಾಯಿತು ತನ್ನ ಕಾಯಕವಾಯಿತು ಎಂಬಂತಿರತದ.

ಮತ್ತ ಇಂಥ ಪಂಜಾಕ್ಕ  ಒಂದು ಮೆಚ್ಚುಗಿ ಮಾತ ಬರಲೆಲಾ ನಿಮ್ಮ ಕಡೆಯಿಂದ.

- ಗೌರಿ ಪ್ರಸನ್ನ

One thought on “ಹೀಗೊಂದು ಸಿನೆಮಾ ವಿಹಾರ, ಹಾಗೊಂದು ಹರಟೆ

  1. ಒಂದು ವಾರವೇ ಆದರೂ ಈ ಅಂಕಣದ ಮಹಿಮಾ ಏನ ಕಡಿಮೆ ಆಗಿಲ್ಲ! ನಾನು ಸ್ವಲ್ಪ ದಿವಸ ಎಲ್ಲೊ ಹೊಗಿದ್ದೆ. ನನ್ನಲ್ಲಿರೋ ಒಂದೇ ಒಂದು ಪಂಜಾನ್ನ ಮರೆತಿದ್ದೆ ಪ್ಯಾಕ್ ಮಾಡಲು. ಇರಲಿ ಬಿಡ್ರಿ.
    ಆದರ ನಮ್ಮ ಹೊಸ ಬರಹಗಾರ ಪ್ರಮೋದ್ ಅವರ ಸೂಕ್ಷ್ಮವಾಗಿ ನಿರೀಕ್ಷಿಸಿ, ಸುದೀರ್ಘವಾಗಿ ಚಿಂತನೆ ಮಾಡಿ ಬರೆದ ವಿಮರ್ಶೆಯ ಬಗ್ಗೆ ಒಂದು ಮಾತಾದರೂ ಬರೆಯದೇ ಹೆಂಗ ಮುಂದ ಹೋಗಲಿ? ನನಗೆ ತಮಿಳು ಅರ್ಥ ಆಗ್ತದ ಅಂತ ಆ ಸಿನಿಮಾ ನೋಡ ಬೇಕಾಗಿದೆ. ಅದು ಎಲ್ಲಿ ನೋಡಲು ಸಿಗುತ್ತದೆ ಅಂತ ಗೊತ್ತಾಗಿಲ್ಲ. ನಾನು ನೆಟ್ ಫ್ಲಿಕ್ಸ್, ಪ್ರೈಮ್ ದಿಂದ ದೂರ. ನೋಡಿಲ್ಲ, ಅದಕ್ಕೇ ಹೆಚ್ಚಿಗೆ ಬರೆಯಲಾರೆ. ಆದರೆ ನೋಡೋ ವರೆಗೆ ನನಗೆ ”ವಿಡುದಲೈ ಇಲ್ಲೈ!”

    ಇನ್ನ ಪಂಜಾದ ಮಹಿಮೆಯ ಮೇಲಿನ ಪ್ರಬಂಧದ ಬಗ್ಗೆನೇ ಪುಂಖಾನು ಪುಂಖವಾಗಿ ಬರೆಯಬಹುದೇನೋ. ಅದನ್ನು ಮೊದಲ ಸಲ ಗೌರಿ ಅವರ ಹರಟೆ ಕಟ್ಟೆದಾಗ (ರೇಡಿಯೋ ಗಿರ್ಮಿಟ್ ದಾಗ) ಕೇಳಿದಾಗಿನಿಂದ ಅದರ ಫ್ಯಾನು ಆಗೇನೆ. ಅದರ ಉಪಯೋಗದ ಲಿಸ್ತ್ ಇಟ್ಟುಕೊಂಡು ಟಿಕ್ ಮಾಡಕೋತ ’done that, done this ಅಂತ ಮಾಡೂ ಅಷ್ಟು ಉದ್ದನ್ನ ಪಂಜಾದಷ್ಟು ಅದರ ಉಪಯೋಗಗಳು. ಹಿಂದೊಮ್ಮೆ ಒಬ್ಬರು ಮದುವಿ ಮನ್ಯಾಗ ಹಂಡೆ ಚಹಾ ಸೋಸಲಿಕ್ಕೆ ಮಚ್ಛರದಾನಿ ವಾಪರಿಸಿದ್ದು ಕೇಳಿದಾಗ ಪಂಜಾನ್ನ ನೆನಸಿಕೊಂಡಿದ್ದೆ! ಅಯ್ಯೋ upstage ಮಾಡಿಬಿಟ್ರಲ್ಲ ಅಂತ. ಆದರ ’ಇಸ್ ಕಾ ಭಿ ಬಡಾ ನಾಮ್ ಹೈ!’ ಮಾಡರ್ನ್ ಆರ್ಟ್ ಕ್ಯಾನ್ವಾಸ್? ಭಲೇ! ಎಂಥ ಗೌರವ! ಕೆಲವು ವಸ್ತುಗಳು they suffer bu comparison. ಆದರೆ ಈ humble panja is elevated by comparison. ನಾವು ಶಾಲೆಯಲ್ಲಿ ರನ್ನನ ಗದಾಯುದ್ಧ ಕಲಿಯುತ್ತಿದ್ದಾಗ ಮತ್ತೆ ಮತ್ತೆ ಕೇಳಿಬಂದ ಪದಪುಂಜ ’ಎಲ್ಲಿ ಎಲ್ಲಿ ಪಜ್ಜೆ?’ ವೈಶಂಪಾಯನ ಸರೋವರದ ಬಳಿ ದುರ್ಯೋಧನ ನೀರಿಗೆ ಬೆನ್ನು ಮಾಡಿ ಸರೋವರದ ಕಡೆಗೆ ನಡೆದು ಹೋದಾಗ ಭೀಮಾದಿಗಳು ಅವನ ಹೆಜ್ಜೆಯ ಗುರುತನ್ನು ನೋಡಿದಾಗ ತಮ್ಮೊಳಗೆ ಸಡೆದ ಸಂವಾದ: ಕೊಳದ ಬಳಿ! ನಾವು ಉಲ್ಕೋಚ್ ಹುಡುಗರ parody: ಎಲ್ಲಿ, ಎಲ್ಲಿ ಪಂಜೆ? ಉತ್ತರ: ಪೃಷ್ಠದ ಬುಡಯೊಳ್! Beat that!

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.