ಈ ವಾರದ ಅಂಕಣದ ಎರಡನೆಯ ಭಾಗದಲ್ಲಿ ಓದುಗರು ಕುತೂಹಲದಿಂದ ಕಾಯುತ್ತಿರುವ ಶಿವ ಮೇಟಿಯವರ ’ತಲಾಷ್’ ಕಥೆಯ ಎರಡನೆಯ ಭಾಗ ಕಳೆದ ವಾರದಿಂದ ಮುಂದುವರೆದಿದೆ. ಅದಕ್ಕೂ ಮೊದಲು ಶ್ರೀವತ್ಸ ದೇಸಾಯಿಯವರು ಬರೆದ ಇಂಗ್ಲೆಂಡಿನ ಮಧ್ಯಯುಗದ ಅರಸನ ದಂತದ ಕಥೆಯನ್ನು ಓದುಗರಿಗಾಗಿ ಇಡಲಾಗುತ್ತಿದೆ. ಫ್ರಾನ್ಸ್ ಮೂಲದ ಪ್ಲಾಂಟಾಂಜೆನೆಟ್ ವಂಶದ ಕೊನೆಯ ಅರಸ ಮೂರನೆಯ ರಿಚರ್ಡ್ ದೊರೆ ಕಾರಣಾಂತರಗಳಿಂದ ಆ ಕಾಲದ ಇತಿಹಾಸದಲ್ಲಿ ಪ್ರಸಿದ್ಧನೂ ನಿಜ, ಕುಪ್ರಸಿದ್ಧನೂ ಸಹ. ನೂರು ವರ್ಷಗಳ ಕಾಲ (1337-1453) ಫ್ರಾನ್ಸಿನೊಡನೆ ಈ ದೇಶ ಬಿಟ್ಟೂ ಬಿಡದೆ ಸಂಗ್ರಾಮದಲ್ಲಿ ತೊಡಗಿತ್ತು. ಅದು ಮುಗಿಯುತ್ತಿದ್ದಂತೆಯೇ War of the Roses ಪ್ರಾರಂಭವಾಗಿತ್ತು.ಆ ಸಮಯದಲ್ಲಿಯೇ ಹುಟ್ಟಿದ ಮೂರನೆಯ ರಿಚರ್ಡ್ ಮೂರು ದಶಕಗಳ ನಂತರ ಪಟ್ಟಕ್ಕೇರಿದರೂ ಆತ ಆಳಿದ್ದು ಕೇವಲ ಎರಡೂವರೆ ವರ್ಷ(1483-1485). ಆತ ತನ್ನ ಅಣ್ಣನ ಇಬ್ಬರ ಮಕ್ಕಳನ್ನು ಟಾವರ್ ಆಫ್ ಲಂಡನ್ನಿನಲ್ಲಿ ಸೆರೆಹಿಡಿದಿಟ್ಟಿದ್ದ, ಆತ ಗೂನನಲ್ಲದಿದ್ದರೂ ಆತನ ಬೆನ್ನು ಬಾಗಿತ್ತು, ಒಂದು ಕೈ ಮುರುಟಿತ್ತು, ಒಂದು ಕಾಲಿನಲ್ಲಿ ಕುಂಟುತ್ತಿದ್ದ, ಹೀಗೆಲ್ಲ ವರ್ಣಿಸಿ ಆತನನ್ನು ಖಳನಾಯಕನನ್ನಾಗಿ ಮಾಡಿ ಹೀಗಳೆದವರಲ್ಲಿ ಶೇಕ್ಸ್ಪಿಯರ್ ಮಹಾ ಕವಿ ಸಹ ಒಬ್ಬ. ಆತನ ಜೀವನ ಮತ್ತು ಮೃತ್ಯು ಅನೇಕ ದಂತ ಕಥೆಗಳನ್ನು ಹುಟ್ಟು ಹಾಕಿತ್ತು. ಆತನ ಬಗ್ಗೆ ಇತಿಹಾಸಕ್ತರ ಕುತೂಹಲ ಇತ್ತೀಚಿನ ವರೆಗೂ ಇತ್ತು; ಇನ್ನೂ ಇದೆ. ಆಧುನಿಕ ವಿಜ್ಞಾನದ ಸಂಶೋಧನೆ ಮತ್ತು ತಂತ್ರಗಳಿಂದ ಆತನ ಅಂತ್ಯದ ಬಗೆಗೆ ಬೆಳಕು ಚೆಲ್ಲುವ ಸ್ವಾರಸ್ಯಕರ ವೃತ್ತಾಂತವನ್ನು ನಿಮ್ಮೆದುರು ಇಡುವ ಪ್ರಯತ್ನ ಈ ಕೆಳಗಿನ ಲೇಖನದಲ್ಲಿದೆ. ಒಂದು ವಿಡಿಯೋ ಸಹ ಇದೆ. ಓದುಗರಿಗೆ ಹಿಡಿಸೀತೆಂಬ ಭರವಸೆಯಿದೆ. ಹೆಚ್ಚಿನ ಮಾಹಿತಿಗೆ ಲೆಸ್ಟರಿಗೆ ಭೇಟಿ ಕೊಡಬಹುದು. (ಸಂ )
1 ”ಕಾರ್ ಪಾರ್ಕ್ ರಾಜ’ -ಒಂದು ದಂತದ ಕಥೆ
ತನ್ನ ಮೈ ಮೇಲೆ ಸಾವಿರಾರು ಕಾರುಗಳು ಬಂದು, ನಿಂತು ದಾಟಿ ಹೋಗುತ್ತಿದ್ದರೂ ಐದು ಶತಮಾನಕ್ಕೂ ಮೇಲು ತನ್ನ ರಹಸ್ಯವನ್ನು R- ಅಡಿ ಬಚ್ಚಿಟ್ಟುಕೊಂಡು ಪವಡಿಸಿದ್ದ ಒಬ್ಬ ಅರಸನ ಕಥೆ ಇದು. ಒಬ್ಬ ಮೊಮ್ಮಗ ಅಜ್ಜನಿಗೆ ಹೇಳಿದ ’ದಂತ’ ಕಥೆ ಇದು. ಒಬ್ಬ ’ಕಿಂಗ್’ ಇನ್ನೊಬ್ಬ ಕಿಂಗನ ಅಸ್ಮಿತೆಯನ್ನು ಬಯಲು ಮಾಡಿದ ಕಥೆ. ಆಧುನಿಕ ವಿಜ್ಞಾನದ ಯಶೋಗಾಥೆ ಇದು!

ಇದು ಹದಿನೈದನೆಯ ಶತಮಾನದ ಇಂಗ್ಲೆಂಡಿನ ಒಬ್ಬ ಅರಸನ ದಂತದ ಕಥೆ! ಕ್ರಿ ಶ 1485ರಲ್ಲಿ ಇಂಗ್ಲೆಂಡಿನ ಮಧ್ಯಭಾಗದಲ್ಲಿ ಲೆಸ್ಟರ್ ಪಕ್ಕದ ಬಾಸ್ವರ್ತ್(Bosworth) ಕಾಳಗದಲ್ಲಿ ಮೂರನೆಯ ರಿಚರ್ಡ್ ರಾಜ (ಎಡಗಡೆಯ ಚಿತ್ರ) ಬಿದ್ದು ಕುದುರೆಯನ್ನು ಕಳಕೊಂಡು ಕಾದುತ್ತಲೇ ಲ್ಯಾಂಕಾಸ್ಟ್ರಿಯನ್ ರಿಚ್ಮಂಡ್ (ಮುಂದೆ ಏಳನೆಯ ಹೆನ್ರಿ) ಸೈನ್ಯದ ಪ್ರಹಾರದಿಂದ ಮೃತನಾದ. ಶೇಕ್ಸ್ಪಿಯರನ ಅದೇ ಹೆಸರಿನ ನಾಟಕದಲ್ಲಿ ಬರೆದಂತೆ “A horse, a horse, My kingdom for a horse” ಅಂತ ಪರಿತಪಿಸುತ್ತ ಮಡಿದ. ಐದೂವರೆ ನೂರು ವರ್ಷಗಳ ವರೆಗೆ ಆತನ ದೇಹದ ಅವಶೇಷಗಳ ಬಗ್ಗೆ ಊಹಾ ಪೋಹವೇ ಬೆಳೆದು ದಂತ ಕಥೆಗಳು ಹುಟ್ಟಿಕೊಡಿದ್ದವು. ಆತನೆ ಆಕಾರ-ಸ್ವಭಾವಗಳ ಬಗ್ಗೆ ಮಹಾಕವಿ ಶೇಕ್ಸ್ಪಿಯರ್ ಸಹ ಆ ದಂತಕಥೆಗಳ ಆಧಾರದ ಮೇಲೆ ತನ್ನ ನಾಟಕದಲ್ಲಿ ಆತನ ಅಸಾಮಂಜಸ ವರ್ಣನೆಯನ್ನೇ ಕೊಟ್ಟಿದ್ದಾನೆ. ಆತನ ಅಸ್ಥಿಗಳು 2012ರಲ್ಲಿ ಲೆಸ್ಟರ್ ಮಹಾನಗರದ ಮಧ್ಯದ ಒಂದು ಕಾರ್ ಪಾರ್ಕಿನಡಿಯಲ್ಲಿ ಆರ್ (R) ಅಕ್ಷರದಡಿ ಆರಡಿ ಕೆಳಗೆ ಸಿಕ್ಕವು. ಈಗ ಈ ವಿಸ್ಮಯಕಾರಕ, ರೋಚಕ ಕಥೆ ಇತಿಹಾಸಕಾರರನ್ನು ನಿರಂತರವಾಗಿ ಆಕರ್ಷಿಸುತ್ತಿದೆಯಲ್ಲದೆ ಅರ್ಕಿಯಾಲಜಿಸ್ಟ್ ಮತ್ತು ವಿಜ್ಞಾನಿಗಳ ಕುತೂಹಲವನ್ನೂ ಕೆರಳಿಸಿದ ಒಂದು ಕಥೆಯಾಗಿದೆ. ಆತನ ಕಥೆಯನ್ನು ಹೇಳುವ ಲೆಸ್ಟರ್ ಮ್ಯೂಸಿಯಮ್ ’RIII’ಗೆ ಈಗ ತಂಡೋಪ ತಂಡವಾಗಿ ಜನರು ಮತ್ತು ಶಾಲಾ ಮಕ್ಕಳೂ ಸಹ ಭೇಟಿ ಕೊಡುತ್ತಿದ್ದಾರೆ
ಫ್ರಾನ್ಸ್ ಮೂಲದ ಪ್ಲಾಂಟಾಜೆನೆಟ್ (Plantangenet) ಮನೆತನದ ಕೊನೆಯ ಅರಸ ರಿಚರ್ಡ್ನ ಅಸ್ಥಿ ಮತ್ತಿತರ ಪಳೆಯುಳಿಕೆಗಳು ಸಿಕ್ಕ ಜಾಗವನ್ನು ಸಹ ನೆಲದ ಮೇಲಿನ ಗಾಜಿನ ಮುಖಾಂತರ ನೋಡಬಹುದು ಅಂತ ತಿಳಿದಿದ್ದರಿಂದ ಬಲು ಉತ್ಸುಕನಾಗಿದ್ದ ಹತ್ತು ವರ್ಷದ ನನ್ನ ಮೊಮ್ಮಗ ಅಕ್ಷಯನನ್ನು ಕರೆದು ಕೊಂಡು ಕಳೆದ ತಿಂಗಳು ಲೆಸ್ಟರ್ ಊರಿನ ಮ್ಯೂಸಿಯಮ್ಗೆ ಹೊರಟೆ. ಶಾಲೆಯಲ್ಲಿ ಮೊದಲೇ ಆ ಬಗ್ಗೆ ಕಲಿತಿದ್ದ ಆತನೇ ನನಗೆ ’ಆರ’ಡಿ (R-ಅಡಿ) ಹೂತ ರಾಜನ ವಿಷಯ ಹೇಳಿದ್ದು. ಈಗಿನ ಮಹಾ ನಗರದ ಮಧ್ಯವರ್ತಿ ಕಾರ್ ರ್ಪಾರ್ಕಿನ ಅಡಿಯಲ್ಲಿ ಹಿಂದಿನ ಕಾಲದಲ್ಲಿ ನೆಲಸಮವಾದ ಗ್ರೇ ಫ್ರಯರ್ಸ್ ಚರ್ಚಿನಲ್ಲೇ ಹದಿನೈದನೆಯ ಶತಮಾನದಲ್ಲಿ ರಾಜನನ್ನು ಅವಸರದಲ್ಲಿ ದಫನ ಮಾಡಿದ ಹಳೆಯ ಕೆಲವು ದಾಖಲೆಗಳಿದ್ದವು. ಅದನ್ನು ಖಚಿತ ಪಡಿಸಿಕೊಳ್ಳಲು ಮುಮ್ಮಡಿ ರಿಚರ್ಡ್ ಸಂಸ್ಥೆ 13,000 ಪೌಂಡುಗಳ ಹಣ ಸಂಗ್ರಹ ಮಾಡಿ ನಗರ ಪಾಲಿಕೆಯ ಅನುಮತಿ ಪಡೆದು ಜಿ ಪಿ ಆರ್ ರಾಡಾರ್ ಸಹಾಯದಿಂದ ಆತ ಹೂತಿರುವ ಜಾಗದ ಪತ್ತೆ ಹಚ್ಚಿದ ನಂತರ ಉತ್ಖನನ ಪ್ರಾರಂಭವಾಯಿತು. ಮೊದಲು ಸಿಕ್ಕದ್ದು ತೊಡೆಯ ಎಲುವು. ಬೆನ್ನೆಲುಬು ಬಾಗಿತ್ತು (scoliosis). ತಲೆಬುರುಡೆಯ ಕೆಳಭಾಗದಲ್ಲಿ ಆಳವಾದ ಗಾಯಗಳ ಕುರುಹುಗಳಿದ್ದವು. ಶೇಕ್ಸ್ಪಿಯರ್ ಸಹ ಆಗಿನ ಕಾಲದ ಪ್ರಚಲಿತ ವಿದ್ಯಮಾನಕ್ಕನುಗುಣವಾಗಿ ತನ್ನ ’ಕಿಂಗ್ ರಿಚರ್ಡ್’ ನಾಟಕದಲ್ಲಿ ಆತನಿಗೆ, ’ಗೂನ, ಒಂದು ಕೈ ಮುರುಟಿತ್ತು, ಒಂದು ಕಾಲು ಕುಂಟುತ್ತಿತ್ತು’ ಎನ್ನುವ ವಿಕಾರ ರೂಪ ಕೊಟ್ಟಿದ್ದಲ್ಲದೇ ಅವನನ್ನು ಒಬ್ಬ ಖಳನಾಯಕನನ್ನಾಗಿ ವರ್ಣಿಸಿದ್ದಾನೆ (ಮೊದಲ ಮೂವತ್ತು ಸಾಲುಗಳಲ್ಲಿ). ತನ್ನ ಅಣ್ಣನ ಇಬ್ಬರು ಎಳೆಯ ಮಕ್ಕಳನ್ನು (”Princes in the Tower”) ಸೆರೆಹಿಡಿದಿಟ್ಟ ನಂತರ ಬಹುಶಃ ಕೊಲ್ಲಿಸಿ ಕುಖ್ಯಾತನನ್ನಾಗಿ ಮಾಡಿದ್ದಾನೆ. ’ನಾನು ಹೊರಟರೆ ನಾಯಿಗಳೂ ಸಹ ನಿಂತು ಬೊಗಳುತ್ತವೆ!’ ಎನ್ನುವ ಆತನ ಸ್ವಗತ ಆ ನಾಟಕದಲ್ಲಿ ಹೀಗಿದೆ:
Deform’d, unfinish’d, sent before my time
Into this breathing world, scarce half made up (Richard III, 1.1.14-31)
ಇತ್ತೀಚಿನ ಸಂಶೋಧಕರ ಅಭಿಪ್ರಾಯದ ಪ್ರಕಾರ ಇದು ಅತಿರೇಕದ ವರ್ಣನೆ, ರಿಚರ್ಡನ ಮರಣದ ನಂತರ ಬಂದ ಟ್ಯೂಡರ್ ಮನೆತನದ ಪರವಾಗಿದ್ದವರ ಪ್ರಚಾರದಿಂದ ಪ್ರೇರಿತವಾದ ತೇಜೊವಧೆ ಎನ್ನುವ ಮತಕ್ಕೆ ಬಂದಿದ್ದಾರೆ.

ಲೆಸ್ಟರ್ (Leicester) ಐತಿಹಾಸಿಕ ಸ್ಥಳ ಇಂಗ್ಲೆಂಡಿನ ಮಧ್ಯದಲ್ಲಿರುವ ಈ ಮಹಾನಗರ ಇತಿಹಾಸದ ಕೇಂದ್ರಬಿಂದುವಾಗಿ ಉಲ್ಲೇಖ ಪಡೆದಿದೆ. ಇತ್ತೀಚೆಗಷ್ಟೇ 2022 ರ ದೀಪಾವಳಿಗೆ ಮುಂಚೆ ಇಲ್ಲಿ ಮತೀಯ ಗಲಭೆಗಳುಂಟಾಗಿ ಜಗತ್ತಿನಲ್ಲೆಲ್ಲ ಹೆಡ್ಲೈನ್ ಸುದ್ದಿ ಮಾಡಿತ್ತು. ಸದ್ಯಕ್ಕಂತೂ ಇಲ್ಲಿ ಶಾಂತಿ ನೆಲೆಸಿದೆ. ಪೋಲೀಸರ ’ರಕ್ಷೆ’ಯಲ್ಲಿ ದೀಪಾವಳಿ ಹಬ್ಬ ವಿಜೃಂಭಣೆಯಿಂದ ಸಾಂಗವಾಗಿ ಜರಿದು ನಿಟ್ಟುಸಿರು ಬಿಟ್ಟೆವು. ಅದಕ್ಕೂ ಪೂರ್ವದಲ್ಲಿ 1974ರಲ್ಲಿ ದಕ್ಷಿಣ ಏಷಿಯಾದ ಮೂಲದ ಹೆಂಗಸರು ಬಿಳಿಯರಿಗಿಂತ ಅದೇ ಕೆಲಸಕ್ಕಾಗಿ ತಮಗೆ ಕಡಿಮೆ ವೇತನ ಕೊಟ್ಟದ್ದಕ್ಕಾಗಿ ಸಂಪು ಹೂಡಿ, ಕೊನೆಗೆ ಇಂಪೀರಿಯಲ್ ಟೈಪ್ ರೈಟರ್ ಕಂಪನಿಯನ್ನು ಮುಚ್ಚುವಂತೆ ಮಾಡಿ ಇತಿಹಾಸವನ್ನೇ ಬರೆದರು. ಅದಕ್ಕೂ ಮೊದಲು ಐದೂವರೆ ನೂರು ವರ್ಷಗಳ ಹಿಂದೆ ಅನತಿ ದೂರದಲ್ಲಿರುವ ಬಾಸ್ವರ್ತ್ ಮೈದಾನದಲ್ಲಿ ಮಡಿದು ಮೂರನೆಯ ರಿಚರ್ಡ್ ರಾಜ ಊರ ಮಧ್ಯದ ಫ್ರಯರಿ ಚರ್ಚಿನಲ್ಲಿ ಅವಸರದ ಸಮಾಧಿಯನ್ನು ಹೊಕ್ಕುಇಲ್ಲಿಯ ವರೆಗೆ ಗುಲ್ಲೆಬ್ಬಿಸದೆ ಪವಡಿಸಿದ್ದ! ಕಿಂಗ್ ರಿಚರ್ಡ್ ವಿಸಿಟರ್ ಸೆಂಟರ್, ಲೆಸ್ಟರ್ ಲೆಸ್ಟರಿನ ಯಾವದೇ ಮೂಲೆಯಲ್ಲಿಯೂ ಒಂದು ಕಿರೀಟದ ಕೆಳಗೆ ದೊಡ್ಡ 'R' ಎನ್ನುವ ಅಕ್ಷರವಿರುವ (ಲೋಗೋ) ಲಾಂಛನವನ್ನು ಕಾಣ ಬಹುದು. ಮ್ಯೂಸಿಯಂ ಮೂರು ಭಾಗಗಳಲ್ಲಿ ಈ ಕಥೆಯನ್ನು ಹೇಳುತ್ತದೆ: ವಂಶಾವಳಿ(Dynasty), ಮೃತ್ಯು(Death)ಮತ್ತು ವೈಜ್ಞಾನಿಕ ಅನ್ವೇಶಣೆ(Discovery).

1.ವಂಶಾವಳಿ: ಹದಿನಾಲ್ಕನೆಯ ಶತಮಾನದ ಆದಿಯಲ್ಲಿ ಮೂರನೆ ಎಡ್ವರ್ಡ್ ರಾಜ 50 ವರ್ಷ ನೆಮ್ಮದಿಯಾಗಿ ಆಳಿದ ನಂತರ ಫ್ರಾನ್ಸ್ ನೊಡನೆ ’ಒಂದು ಶತಮಾನ ದ ಯುದ್ಧ’ದಲ್ಲಿ ತೊಡಗಿ ಸೋತಿತ್ತು ಇಂಗ್ಲೆಂಡ್. ಆತನ ವಂಶದ ಎರಡು ಶಾಖೆಯ ಮರಿಮಕ್ಕಳು ದಾಯಾದಿಗಳಾಗಿ ಮೂವತ್ತು ವರ್ಷ ಸತತವಾಗಿ ಬಡಿದಾಡಿದ್ದೇ ”ವಾರ್ ಆಫ್ ಥಿ ರೋಸಸ್’ ಎನ್ನುವ ಹೆಸರು ಪಡೆಯಿತು. ಲ್ಯಾಂಕಾಸ್ಟರ್ ಮನೆತನ ಲಾಂಛನ ಕೆಂಪು ಗುಲಾಬಿ ಯಾಗಿದ್ದರೆ ಯಾರ್ಕ್ ಮನೆತನದ್ದು ಬಿಳಿ ಗುಲಾಬಿ (Yorkists). ಈ ಮನೆತನದ ಕೊನೆಯ ರಾಜನೇ ಯುದ್ಧದಲ್ಲಿ ಮಡಿದ ಕೊನೆಯ ಇಂಗ್ಲೆಂಡಿನ ರಾಜ ನಮ್ಮ ಕಥಾನಾಯಕ ಮೂರನೆಯ ರಿಚರ್ಡ್. ಆತನ ಮರಣದ ನಂತರ ಇವೆರಡೂ ಶಾಖೆಗಳು ವಿವಾಹದಿಂದ ಒಂದಾಗಿ ಟ್ಯೂಡರ್ ಮನೆತನ ಆರಂಭವಾಯಿತು. ಇದು ಸಂಕ್ಷಿಪ್ತ ಇತಿಹಾಸ. 2.ಮೃತ್ಯು ಲೆಸ್ಟರಿನ ಬ್ಲೂ ಬೋರ್ ಎನ್ನುವ ಇನ್ ದಲ್ಲಿ (ತಂಗುದಾಣ) ರಿಚರ್ಡ್ ತನ್ನ ಕೊನೆಯ ರಾತ್ರಿಯನ್ನು ಕಳೆದ. ವೇಲ್ಸ್ ಕಡೆಯಿಂದ ಇನ್ನೂ ಪಡೆಯೊಂದಿಗೆ ಬರುತ್ತಿದ್ದ ಹೆನ್ರಿಯನ್ನು ಎದುರಿಸಲು ಬಾಸ್ವರ್ತ್ಗೆ ಕಾಳಗಕ್ಕೆ ಹೊರಟ. ರಿಚರ್ಡನ ಸೈನ್ಯ ದೊಡ್ಡದಿದ್ದರೂ ಆತನಿಗೆ ಬೆಂಬಲ ಕೊಡಬೇಕಾಗಿದ್ದ ಲಾರ್ಡ್ ಸ್ಟಾನ್ಲಿ ಕೊನೆಯ ಗಳಿಗೆಯಲ್ಲಿ ಅವನ ಸಹಾಯ ಮಾಡದೆ ವೈರಿಯ ಪಂಗಡವನ್ನು ಸೇರಿದ. ರಿಚರ್ಡ್ ಮಾತ್ರ ಕೆಸರಿನಲ್ಲಿ ತನ್ನ ಕುದುರೆ ಸಿಕ್ಕಿ ಬಿದ್ದಿದ್ದರಿಂದ ಕೆಳಗಿಳಿಯ ಬೇಕಾಯಿತು. ಆತನ ಕಿರೀಟ, ಶಿರಸ್ತ್ರಾಣ ಕಳಚಿ ಬಿದ್ದಿತ್ತು. ಯುದ್ದ ಮಾಡುತ್ತ ಸಾವನ್ನಪ್ಪಿದ. ಮೇಲೆ ಉದ್ಧರಿಸಿದಂತೆ, ’ಒಂದು ಕುದುರೆ ಬೇಕು! ಇದು ಸ್ಟಾನ್ಲಿಯ ಫಿತೂರಿ’, ಅನ್ನುತ್ತಲೇ ಮಡಿದ. ಒಂದು ಕುದುರೆಗಾಗಿ ನನ್ನ ರಾಜ್ಯವನ್ನೇ ಕೊಡುವೆ ಅನ್ನುವ ಇಂಗ್ಲಿಷ್ ಪದಪುಂಜ ಮಹಾಕವಿ ಶೇಕ್ಸ್ಪಿಯರನ ನಂತರ ಮನೆಮಾತಾಗಿದೆ. ಅದನ್ನೇ ತಿರುಚಿ ಈಗಲೂ ಸಹ "I will give an arm and a leg" ಅಂತ ಜನರಾಡುವದನ್ನು ಈಗಲೂ ನಾವು ಕೇಳ ಬಹುದು. ಆತನ ದೇಹಕ್ಕೆ ಬಿದ್ದ ಹನ್ನೊಂದು ಪ್ರಹಾರಗಳಲ್ಲಿ ತಲೆಯ ಕೆಳಭಾಕಕ್ಕೆ ತಗಲಿದ ಎರಡು ಮಾರಕವಾಗಿದ್ದವು ಅಂತ ಸಿದ್ಧವಾಗಿವೆ. ಆತನ ಬತ್ತಲೆ ದೇಹವನ್ನು ಆಗಿನ ರೂಢಿಯಂತೆ ಜನರೆಲ್ಲ ನೋಡಲೆಂದು ಎರಡು ದಿನ ಪಕ್ಕದಲ್ಲಿದ್ದ ಒಂದು ಚರ್ಚಿನಲ್ಲಿ ಪ್ರದರ್ಶನ ಮಾಡಿದ ನಂತರ ಗ್ರೇ ಪಾದ್ರಿಗಳು ಅವಸರದಲ್ಲಿ (ಅದಕ್ಕೇ ತಲೆ ಸೊಟ್ಟಾಗಿ ಕುಳಿತಿದೆ) ಶವ ಸಂಸ್ಕಾರ ಮಾಡಿದರೆಂದು ಸಂಶೋಧಕರ ಅಭಿಮತ. ರುವ ಲೇಖನಗಳಿಂದ ತಿಳಿದು ಬರುತ್ತದೆ.

3. ದಂತ ಮತ್ತು ವಂಶವಾಹಿನಿ ನಿನ್ನಜ್ಜ ಮುತ್ತಜ್ಜ ಮೂಲಜ್ಜರೆಲ್ಲರುಂ ನಿನ್ನೊಳವತರಿಸಿ ಮುಂದಿನ್ನು ಜನಿಸಲಿಹ ನಿನ್ನ ಮಗ ಮೊಮ್ಮ ಮರಿಮೊಮ್ಮರೊಳು ಜೀವಿಪ್ಪರ್ ಅನ್ವಯ ಚಿರಂಜೀವಿ -ಮಂಕುತಿಮ್ಮ. 25 ಆಗಸ್ಟ್, 2012 ರಂದು ರಿಚರ್ಡ್ ಸೊಸೈಟಿಯವರ ((ಲೆಸ್ಟರ್ ರಿಕಾರ್ಡಿಯನ್ಸ್) ಪ್ರಯತ್ನದ ಫಲವಾಗಿ ಊರ ಮಧ್ಯದ ಸೋಶಿಯಲ್ ಸರ್ವಿಸಸ್ ಕಾರ್ ಪಾರ್ಕಿನಲ್ಲಿ ಡಿಗ್ಗರ್ ಗಳು ಕೆಲಸ ಪ್ರಾರಂಭ ಮಾಡಿದವು. ಮೂರು ಟ್ರೆಂಚುಗಳನ್ನು ಅಗಿಯುವ ಯೋಜನೆ. ಕಾರ್ ಪಾರ್ಕಿನ ನೆಲದ ಮೇಲೆ ಬರೆದ ಬಿಳಿಯ 'R' ಅಕ್ಷರದ ಹತ್ತಿರವೇ ಅಗಿದ ಮೊದಲನೆಯ ಟ್ರೆಂಚ್. ಕೆಲವೇ ತಾಸುಗಳಲ್ಲಿ ಸಿಕ್ಕ ತೊಡೆಯ ಎಲುಬು ರಿಚರ್ಡನದೇ ಅಂತ ವೈಜ್ಞಾನಿಕವಾಗಿ ನಂತರದ ಡಿ ಎನ್ ಎ ಸಂಶೋಧನೆಯಲ್ಲಿ ಸಾಬೀತಾದುದು ಕಾಕತಾಳೀಯವೇ! ಎಲುಬುಗಳ ಸ್ಕ್ಯಾನ್ನಿಂದ ಆತ 32 ರಿಂದ 34 ವಯಸ್ಸಿನವ ಅಂತ ಗೊತ್ತಾಯಿತು. ಅಷ್ಟೇ ಅಲ್ಲ, ಆ ಎಲುಬುಗಳ ಕೊಲಾಜನ್ನಿನ ಆಕ್ಸಿಜನ್, ಸ್ಟ್ರಾನ್ಷಿಯಮ್, ಕಾರ್ಬನ್ ಡೇಟಿಂಗ್ ಮತ್ತು ನೈಟ್ರೋಜನ್ ಐಸೊಟೋಪುಗಳ ವಿಶ್ಲೇಷಣೆಯಿಂದ ಆತ 1483ರಲ್ಲಿ ಪಟ್ಟಕ್ಕೇರಿದ ರಾಜನೇ ಅನ್ನುವದರಲ್ಲಿ ಸಂಶಯ ಉಳಿಯಲಿಲ್ಲ. ಆನಂತರ ಸೇವಿಸಿದ ರಾಜ ವೈಭವದ ಆಹಾರದಲ್ಲಿ ಹಂಸ, ಕೊಕ್ಕರೆ ಮತ್ತು ಸಾರಸ, ಅಪರೂಪದ ಮೀನ ಇತ್ಯಾದಿ ಇದ್ದವು ಅನ್ನುವ ಮಾಹಿತಿ ಗಣ್ಯ ವೈಜ್ಞಾನಿಕ ಜರ್ನಲ್ಗಳಲ್ಲಿ ಪ್ರಕಟಗೊಂಡ ಲೇಖನಗಳಿಂದ ತಿಳಿದು ಬರುತ್ತದೆ
ಚ್ಯೂರಿಯ ಚೂರ್ಣ ಮತ್ತು ದಂತದ ಕಥೆ: ಕಟ್ಟ ಕಡೆಗೆ ಆತನದೇ ಆ ಅಸ್ಥಿ ಅಂತ 99.999% ಪುರಾವೆ ಸಿಕ್ಕಿದ್ದು ಆತನೆಯ ಹಲ್ಲುಗಳ ಡಿ ಎನ್ಎ ಗಳಿಂದ. ಆತನ ಬಗ್ಗೆ ಹಬ್ಬಿದ್ದ ಎಷ್ಟೋ ಸಂಗತಿಗಳು (ಉದಾ ಸೊಟ್ಟವಾದ ಬೆನ್ನು, ಗೂನ ಅಲ್ಲ) ಬರೀ ದಂತ ಕಥೆಯಲ್ಲ ಅಂತ ಕೊನೆಗೂ ರುಜು ಸಿಕ್ಕಿತು. ಲೆಸ್ಟರ್ ಯುನಿವರ್ಸಿಟಿಯ ಚ್ಯೂರಿ ಕಿಂಗ್ (Dr Turi King) ಎನ್ನುವ ಜೆನೆಟಿಕ್ಸ್ ಮತ್ತು ಜೀನೋಮ್ ಬಯಾಲಜಿ ಪ್ರೊಫೆಸರ್ ಅವಳಿಗೆ ಅದರ ಹೊಣೆಯನ್ನು ಹೊರಿಸಿದ್ದರು. ಈ ವಿಷಯದಲ್ಲಿ ಅಪಾರ ಅನುಭವ ಆಕೆಗೆ. ಸದ್ಯ ಮೂವತ್ತುಮೂರನೇ ವಯಸ್ಸಿಗೇ ಜೀವ ತೆತ್ತಿದ್ದ ರಿಚಡನ ಕೆಳದವಡೆಯಲ್ಲಿ ಸಾಕಷ್ಟು ಹಲ್ಲುಗಳಿದ್ದವು. ಹಲ್ಲಿನ ಡಿ ಎನ್ ಎ ಸುಲಭದಲ್ಲಿ ಕ್ಷಯವಾಗುವದಿಲ್ಲವಂತೆ. ಸುದೈವದಿಂದ ದೇಹದ ಹತ್ತಿರದಲ್ಲೇ ತೇವವಿದ್ದರೂ ಎಲುವುಗಳು ನೀರಲ್ಲಿ ಮುಳುಗಿ ಹಾನಿಯಾಗಿರಲಿಲ್ಲ. ಮೆಲ್ಲ ಮೆಲ್ಲಗೆ ಒಂದು ಹಲ್ಲನ್ನು ಹತ್ತಾರು ನಿಮಿಷ ಅಲ್ಲಾಡಿಸುತ್ತ ಅಲ್ಲಾಡಿಸುತ್ತ ಕೊನೆಗೆ ಅದನ್ನು ಕಿತ್ತಿ ಸ್ವಚ್ಛ ಪಾಕೀಟಿನಲ್ಲಿ ಹಾಕಿ ಅದರ ಚೂರ್ಣದಿಂದ ತನ್ನ ಸಂಶೋಧನೆ ಮಾಡಿ ಅದರಲ್ಲಿ ದೊರೆತ (ತಾಯಿಯ ವಂಶಾವಳಿಯಿಂದ ಮುಂದುವರೆದ) ಮೈಟೋಕೋಂಡ್ರಿಯಲ್ ಡಿ ಎನ್ ಎ ರಿಚರ್ಡನ ಮನೆತನದ ಹೆಣ್ಣು ಸಂತತಿಯ ಹದಿನಾರನೆಯ ಪೀಳಿಗೆಯ ಮೈಕಲ್ ಇಬ್ಸೆನ್ ಮತ್ತು ಹದಿನೆಂಟನೆಯ ಪೀಳಿಗೆಯ ವೆಂಡಿ ಡಲ್ಡಿಗ್ ಅವರ ವಂಶವಾಹಿನಿಗಳ ಅತ್ಯಂತ ನಿಕಟ ಹೋಲಿಕೆ (ಮೇಲಿನ ಕಗ್ಗ ಹೇಳುವ ’ಅನ್ವಯ’) ಇರುವುದನ್ನು ಸಾಬೀತು ಮಾಡಿ ಕೊನೆಗೂ ಆ ಅಸ್ಥಿಗಳು 99.999% ಆತನದೇ ಅನ್ನುವ ರುಜುವಾತನ್ನು ಸ್ಥಾಪಿಸಿದ್ದು ಅದ್ಭುತವೇ ಸರಿ. Y ವರ್ಣತಂತುವಿನ (chromosome) ಜಾಡು ಹಿಡಿದು ಹೊರಟಾಗ ಸಿಕ್ಕ ಐವರು ವಂಶಜರಲ್ಲಿ ಒಬ್ಬರದೂ ಡಿ ಎನ್ ಎ ದಲ್ಲಿ ಹೊಂದಿಕೆ ಸಿಗದಿದ್ದರೂ ಆ ಎಲುಬುಗಳು ರಿಚರ್ಡನದೇ ಅನ್ನುವ ನಿರ್ಣಯಕ್ಕೆ ವ್ಯತಿರಿಕ್ತವಾಗಿರಲಿಲ್ಲ. ಗೀತೆ ಹೇಳಿದ ವರ್ಣಸಂಕರ ನೆನಪಾಗುತ್ತದೆ! ನಿಮಗೆ ಅವಕಾಶ ಸಿಕ್ಕರೆ ಲೆಸ್ಟರ್ಗೆ ಅವಶ್ಯ ಭೇಟಿ ಕೊಡಿ. ಒಮ್ಮೆ ಕೊಂಡ ತಿಕೀಟಿಗೆ ಮಾತ್ರ ಒಂದೇ ಒಂದು ವರ್ಷದ ಬಾಳಿಕೆಯಿದೆ!
ಶೇಕ್ಸ್ಪಿಯರಾಯಣ
What’s in a name? (Or in a letter?)
ಇಲ್ಲಿ ಒಂದು ಸಾಮ್ಯತೆಯಿದೆ. ಆತನ ನಾಟಕದಲ್ಲಿ ಒಬ್ಬ G ಅಕ್ಷರದವ ಎಡ್ವರ್ಡ್ ರಾಜನ ಸಂತತಿಯನ್ನು ಕೊಲೆಮಾಡುವದಾಗಿ ಭವಿಷ್ಯವಾಣಿ ಹೇಳುತ್ತದೆ. ಯಾರು ಆ G? ಅದು ನಾಟಕದಲ್ಲಿ ಬರುವ ರಹಸ್ಯ.
EIIR, VR ಮತ್ತು ಸದ್ಯ CR ಇತ್ಯಾದಿ ಬ್ರಿಟಿಷ್ ರಾಜ ಮುದ್ರೆಯಲ್ಲಿ ಕ್ರಮವಾಗಿ, ಎಲಿಝಬೆತ್, ವಿಕ್ಟೋರಿಯಾ, ಚಾರ್ಲ್ಸ್ ಇವರಲ್ಲಿ R- Regina (ರಾಣಿ) ಅಥವಾ Rex (ರಾಜ)ನನ್ನು ಸೂಚಿಸುತ್ತದೆ. ಅಂದರೆ ಲೆಸ್ಟರಿನ ಕಾರ್ ಪಾರ್ಕಿನ R? Reserved ಇರಬಹುದೇನೋ!
‘ದಂತ ಕಥೆ’ ಹೇಗೆ ಹುಟ್ಟಿತು?
ಇನ್ನು ಪಾವೆಂ ಅವರ ಪದಾರ್ಥ ಚಿಂತಾಮಣಿಯಿಂದ (ಪು:241): ”ದಂತಕ್ಕೂ ಕಥೆಗೂ ಏನು ಸಂಬಂಧ? ದಂತ ಕಥೆ ಎನ್ನುವ ಪದ ಎಲ್ಲರಿಗೂ ಗೊತ್ತು. ಯಾವ ಖಚಿತ ಆಧಾರವಿಲ್ಲದೆ ಬಾಯಿಂದ ಬಾಯಿಗೆ ತಲೆಮಾರುಗಳಿಗೆ ಹಬ್ಬುತ್ತ ಬೆಳೆದ ವಾರ್ತೆ ದಂತ ಕಥೆಯೆನಿಸುತ್ತದೆ. ಮಾಸ್ತಿಯವರು ಇದಕ್ಕೊಂದು ವ್ಯುತ್ಪತ್ತಿಯನ್ನು ಊಹಿಸುತ್ತಾರೆ. ದಂತ ಕಥೆಯ ದಂತ, ಹಲ್ಲು ಅಲ್ಲವೇ ಅಲ್ಲ, ’ಉದಂತ’ ಎಂದರೆ ಸಂಸ್ಕೃತದಲ್ಲಿ ವೃತ್ತಾಂತ, ವರ್ತಮಾನ(ಉದಾ: ರಾಮೋದಂತಃ). ಈ ಉದಂತದಲ್ಲಿ ಪ್ರಥಮಾಕ್ಷರ ಉದುರಿ ಹೋಗಿ ’ದಂತ’ ಮಾತ್ರ ಉಳಿಯಿತು. ಉದಂತ ಮತ್ತು ಕಥೆ ಸುಮಾರಾಗಿ ಒಂದೇ ಅರ್ಥದ ಶಬ್ದಗಳು. ಹೇಗಿದೆ ಈ ’ದಂತ ಕಥೆ’ಯ ವೃತ್ತಾಂತ?
ಲೇಖನ ಮತ್ತು ಫೋಟೋಗಳು: ಶ್ರೀವತ್ಸ ದೇಸಾಯಿ (ಎರಡು ಚಿತ್ರಗಳು ಗೈಡ ಬುಕ್ ಕೃಪೆ).
Links:
- King Richard III Visitor Centre, 4A St Martins, Leicester LE1 5DB
- https://www.researchgate.net/publication/273293657_%27The_king_in_the_car_park%27_New_light_on_the_death_and_burial_of_Richard_III_in_the_Grey_Friars_church_Leicester_in_1485
2. ತಲಾಷ್ - ೨ ಶಿವ ಮೇಟಿಯವರು ಬರೆದ ಕಥೆಯ ಎರಡನೆಯ ಭಾಗ
(ಮುಂದುವರೆದುದು) ಇಲ್ಲಿಯ ವರೆಗೆ: ಅಂಜಲಿ ಶಾಲೆಯಿಂದ ಇನ್ನೂ ಮನೆಗೆ ಬಂದಿಲ್ಲ. ಎಲ್ಲಿಗೆ ಹೋದಳೋ? ತಲಾಷ್ (ಶೋಧ) ಪ್ರಾರಂಭವಾಗಿದೆ. ಇನ್ನು ಓದಿರಿ. ರಾಮೂನು ಆಲದ ಮರದ ಕಟ್ಟೆಯ ಹತ್ತಿರ ಬಂದು ಸೇರಿದ್ದ. ವಿಷಯ ಗೊತ್ತಾಗಿ ಓಣಿಯ ಜನರೂ ಧಾವಿಸಿದ್ದರು. ಕಟ್ಟೆಯ ಹತ್ತಿರ ಕೆಲವು ಕ್ಷಣ ಮೌನವಾಗಿದ್ದ ನಾಯಿ ಮತ್ತೇ ಬೊಗಳತೊಡಗಿತು. ವಸುಂಧರೆಯ ಸೆರಗನ್ನು ಕಚ್ಚಿ ಎಲ್ಲಿಯೋ ಕರೆದುಕೊಂಡು ಹೋಗಲು ಪ್ರಯತ್ನಿಸುತಿತ್ತು. ಎಲ್ಲರೂ ಅದರ ಜೊತೆಗೆ ಮುನ್ನೆಡೆದರು . ಕಟ್ಟೆಯಿಂದ ಉತ್ತರ ದಿಕ್ಕಿನೆಡೆಗೆ ನಡೆದ ನಾಯಿಯು ಸುಮಾರು ನೂರು ಮೀಟರುಗಳಾದ ಮೇಲೆ ನಿಂತುಕೊಂಡಿತು. ಅಲ್ಲೇನಿದೆ ಎಂದು ನೋಡಲು, ಹತ್ತಿರದಲ್ಲಿಯೇ ಅಂಜಲಿಯು ಶಾಲೆಗೆ ಒಯ್ಯುತ್ತಿದ್ದ ನೀರಿನ ಬಾಟಲಿ ಬಿದ್ದಿತ್ತು . ಅಂಜಲಿಯು ಈ ದಿಕ್ಕಿನಲ್ಲಿಯೆ ಎಲ್ಲಿಯೋ ಮರೆಯಾಗಿದ್ದಾಳೆ ಎಂಬುವದು ಅಲ್ಲಿದ್ದವರಿಗೆಲ್ಲ ಖಾತರಿಯಾಯಿತು. ಬೀದಿಯ ನಾಯಿಯಾಗಿದ್ದರೂ 'ಅನ್ನ ತಿಂದ ಮನೆಯ ಋಣವನ್ನು' ತೀರಿಸಿತ್ತು. ಆ ದಿಕ್ಕಿನಲ್ಲಿಯೇ ಸುಮಾರು ಜನರು ಅಲೆದು ಬಂದರೂ ಎಲ್ಲಿಯೂ ಅಂಜಲಿಯ ಸುಳಿವು ಸಿಗಲಿಲ್ಲ. ಚಿಂತಾಕ್ರಾಂತವಾಗಿ ರೋಧಿಸುತ್ತಿದ್ದ ವಸುಂಧರೆಯನ್ನು ಬಿಟ್ಟು, ರಾಮು ಪೊಲೀಸ್ ಸ್ಟೇಷನ್ ಕಡೆಗೆ ನಡೆದಿದ್ದ. ನೆರೆದವರೆಲ್ಲ 'ಎಲ್ಲ ಸರಿಹೋಗುವದೆಂದು' ವಸುಂಧರೆಗೆ ಸಮಾಧಾನ ಹೇಳುತ್ತಿದ್ದರು. ಕೆಲವು ಸಮಯದ ನಂತರ ರಾಮು ಪೋಲೀಸರ ವಾಹನದೊಂದಿಗೆ ಮರಳಿ ಸ್ಥಳಕ್ಕೆ ಬಂದಿದ್ದ. ಸಹಜವಾಗಿ, ಕೆಲಸವೆಲ್ಲ ಮುಗಿದ ಮೇಲೆ ಪ್ರತ್ಯಕ್ಶವಾಗುವ ಪೊಲೀಸರು ಇಷ್ಟು ಬೇಗನೆ ಬಂದಿದ್ದು ಜನರಲ್ಲಿ ಆಶ್ಚರ್ಯವನ್ನು ಮೂಡಿಸಿತ್ತು. ಪೊಲೀಸರು ಸೂಕ್ಷ್ಮರೀತಿಯಾಗಿ ಪರಿಶೋಧಿಸಿದಾಗ ಅಲ್ಲಿಂದ ಅಡ್ಡದಾರಿಯಲ್ಲಿ ನಾಲ್ಕು ಚಕ್ರದ ವಾಹನ ಹೋಗಿರುವದು ಖಾತ್ರಿಯಾಯಿತು. ತಕ್ಷಣವೇ ಅವರು ಶಾಲಾವಾಹನದ ಚಾಲಕನನ್ನು ಫೋನಿನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು, ಸಾಧ್ಯವಾಗದೇ ಇದ್ದಾಗ ಪೋಲೀಸರ ಜೀಪು ಚಾಲಕನ ಮನೆಯತ್ತ ಸಾಗಿತು. ಪೊಲೀಸರನ್ನು ಕಂಡು ನಡುಗುತ್ತಿದ್ದ ಚಾಲಕನು ತನ್ನ ವಿವರಣೆಯನ್ನು ಕೊಟ್ಟನು. 'ಅಂಜಲಿಯು ಶಾಲೆ ಮುಗಿದಾದ ಮೇಲೆ ಶಾಲಾವಾಹನದಲ್ಲಿ ಹತ್ತಿದ್ದು ಮತ್ತು ತನ್ನ ಗೆಳೆಯರೊಂದಿಗೆ ಕಟ್ಟೆಯ ಸ್ಟಾಪಿನಲ್ಲಿ ಇಳಿದಿದ್ದು ನಿಜವೆಂದು ಹಾಗು ಅದನ್ನು ಬಿಟ್ಟು ತನಗೆ ಬೇರೆ ಏನೂ ಗೊತ್ತಿಲ್ಲವೆಂದು, ತಾನು ಯಾವ ರೀತಿಯ ಶೋಧನೆಗೂ ಸಿದ್ದನೆಂದು ಪ್ರಮಾಣಮಾಡಿ ಹೇಳಿದನು. ಅವನನ್ನು ಜೀಪಿನಲ್ಲಿ ಕೂರಲು ಹೇಳಿ, ಪೊಲೀಸರು ಅಂಜಲಿಯ ತರಗತಿಯ ಶಿಕ್ಷಕನ ಮನೆಯತ್ತ ಧಾವಿಸಿದರು. ಶಿಕ್ಷಕನ ಮನೆಗೆ ಬೀಗ ಹಾಕಿತ್ತು. ಈಗೇನು ಮಾಡುವದು ಎಂದು ಯೋಚಿಸಿದ ಅವರು ನೇರವಾಗಿ ಶಾಲೆಯ ಪ್ರಿನ್ಸಿಪಾಲರ ಮನೆಯತ್ತ ಸಾಗಿದರು. ಬಂದ ವಿಷಯವನ್ನು ಹೇಳಿದಾಗ ಅವರು 'ಅಂಜಲಿಯ ಕ್ಲಾಸಿನ ಶಿಕ್ಷಕ ಮತ್ತು ಉಪಶಿಕ್ಷಕರು ಕಳೆದ ಎರಡು ದಿನಗಳಿಂದ ರಜೆಯ ಮೇಲಿರುವದಾಗಿಯೂ ಮತ್ತು ಇನ್ನೊಬ್ಬ ಶಿಕ್ಷಕಿಯು ತರಗತಿಯನ್ನು ನೋಡಿಕೊಳ್ಳುತ್ತಿರುವದಾಗಿಯೂ' ಮಾಹಿತಿಯನ್ನು ನೀಡಿದರು. ತರಗತಿಯನ್ನು ನೋಡಿಕೊಳ್ಳುತ್ತಿದ್ದ ಶಿಕ್ಷಕಿಯನ್ನು ಫೋನಿನಲ್ಲಿ ಮಾತನಾಡಿಸಿದಾಗ 'ಅಂಜಲಿಯು ಪೂರ್ತಿ ದಿನ ಶಾಲೆಯಲ್ಲಿ ಇದ್ದಿದ್ದು ಖಚಿತವಾಯಿತು'. "ಹಲ್ಕಾ ನನ್ನ ಮಕ್ಕಳು! ಈ ಶಿಕ್ಷಕರದೇ ಕಿತಾಪತಿ, " ಎಂದು ಪೊಲೀಸರು ಮಾತನಾಡುವದನ್ನು ಕೇಳಿ ರಾಮುಗೆ ಭಯ ಬಂದಿತ್ತು . ಎಂದೂ ದೇವರಿಗೆ ಕೈ ಮುಗಿಯದವನು 'ಅಪ್ಪ ದೇವರೇ ! ನನ್ನ ಮಗಳನ್ನು ಸುರಕ್ಷಿತವ್ವಾಗಿ ಮನೆಗೆ ತಲುಪಿಸು,' ಎಂದು ಮನದಲ್ಲೇ ದೇವರಿಗೆ ಬೇಡಿಕೊಂಡಿದ್ದ. ರಾಮುನನ್ನು ಆಲದ ಕಟ್ಟೆಯ ಹತ್ತಿರ ಬಿಟ್ಟು ಪೊಲೀಸರು ಮುಂದಿನ ಕಾರ್ಯಾಚರಣೆಗೆ ಸ್ಟೇಷನ್ ಗೆ ಮರಳಿದ್ದರು.
ಇವನ ಬರುವಿಕೆಗಾಗಿಯೇ ಕಾಯುತ್ತಿದ್ದ ವಸುಂಧರೆ ಕೇಳಿದಳು
"ಏನಾದರೂ ಗೊತ್ತಾಯ್ತೆನ್ರಿ?"
ಏನು ಹೇಳಬೇಕೆಂದು ತೋಚದೆ ರಾಮು ತೊದಲುತ್ತ ನುಡಿದಿದ್ದ
" ಇನ್ನೂ ಏನು ಗೊತ್ತಾಗಿಲ್ಲ, ಇಷ್ಟರಲ್ಲಿಯೇ ಗೊತ್ತಾಗಬಹುದು "
ಅಷ್ಟರಲ್ಲಿಯೇ ಜನರಲ್ಲಿ ಯಾರೋ ಅನ್ನುತ್ತಿದ್ದರು: "ಪೋಲೀಸರ ಕೈಯಲ್ಲಿ ಅಷ್ಟು ಬೇಗನೆ ಆಗುವ ಕೆಲಸ ಇದಲ್ಲ. ನಮ್ಮ ಹುಚ್ಚಪ್ಪನನ್ನು ಕೇಳಿದರೆ ಎಲ್ಲ ಗೊತ್ತಾಗಬಹುದು, ಅವನಿಗೆ ಗೊತ್ತಿಲ್ಲದಿರುವದು ಈ ಊರಲ್ಲಿ ಏನಿದೆ ?"
ಹೌದು; ಅವನೊಬ್ಬ ಹುಚ್ಚ. ಅವನ ಇಟ್ಟ ಹೆಸರು ಬಹು ಜನರಿಗೆ ಗೊತ್ತಿಲ್ಲದಿದ್ದರೂ ಕೊಟ್ಟ ಹೆಸರು ಮಾತ್ರ ಎಲ್ಲರಿಗೂ ಗೊತ್ತು. 'ಹುಚ್ಚಪ್ಪ'! ಐವತ್ತರ ಗಡಿಯಲ್ಲಿ ಇರುವ ಅವನ ಬಗ್ಗೆ ಊರ ಜನರಿಗೆ ಇಷ್ಟು ಮಾತ್ರ ಗೊತ್ತು-
'ಅವನು ಭಾಳ ಸಾಲಿ ಓದ್ಯಾನಂತ, ಇಪ್ಪತ್ತು ವರ್ಷದ ಹಿಂದ ಬೆಳಗಾವಿ ಲಿಂಗರಾಜ ಕಾಲೇಜಿನಾಗ ಪದವಿ ಮುಗಿಸ್ಯಾನಂತ , ಅಷ್ಟ ಸಾಲಿ ಓದಿ ನೌಕರಿ ಸಿಗದಿದ್ದಕ್ಕ, ಊರ ಸುಧಾರಣೆ ಮಾಡಾಕ ಹೋಗಿ ತಾನ ಹುಚ್ಚ ಆಗ್ಯಾನಂತ ‘ ಎಂದು.
ಹಗಲಿನಲ್ಲೆಲ್ಲ ಊರಿನ ಬೀದಿ ಬೀದಿ ಅಲೆಯುತಿದ್ದ ಅವನು ಇಳಿ ಹೊತ್ತಾದರೆ ಆಲದ ಕಟ್ಟೆಯನ್ನು ಸೇರಿಕೊಳ್ಳುತಿದ್ದ. ಊರಿನಲ್ಲಿರುವ ಎಲ್ಲ ಮನೆಗಳ ಗುಟ್ಟು ಅವನಿಗೆ ಗೊತ್ತು. ಮಾತು ಕಡಿಮೆ ನೋಟ ಜಾಸ್ತಿ.
ಅದೇನೋ ಕಾರಣಕ್ಕಾಗಿ ಆ ಸಮಯದಲ್ಲಿ ಅವನೂ ಸಹ ಆಲದ ಕಟ್ಟೆಯ ಹತ್ತಿರವಿರಲಿಲ್ಲ. ಜನರೆಲ್ಲಾ ಅವನ ಬಗ್ಗೆಯೇ ಮಾತನಾಡುತ್ತಿದ್ದಾಗ ಆಕಡೆಯಲ್ಲೋ ಅವನ ಆಗಮನ ಆಗುತ್ತಿದ್ದದ್ದು ಕಂಡು ಬಂತು.
ಅವನ ಬರುವಿಕೆಗಾಗಿಯೇ ಕಾಯುತ್ತಿದ್ದ ವಸುಂಧರೆ ದಗ್ಧ ದನಿಯಲ್ಲಿ ಕೇಳಿದಳು
" ಹುಚ್ಚಪ್ಪ, ಅಂಜಲಿ ಎಲ್ಲೋ ಮಾಯ ಆಗ್ಯಾಳ, ಎಲ್ಲೂ ಸುಳುವು ಸಿಗವಲ್ಲದು "
ಅವಳ ಕಣ್ಣಲ್ಲೆ ನೋಡುತ್ತ ಅವನು ನುಡಿದ: "ಸಿಗತಾಳು! ಆರ ಮೈಲು, ಉತ್ತರ ದಿಕ್ಕು, ಅರೆ ರಾತ್ರಿ, ಅರಿಶಿಣ ಕುಂಕುಮ, ಟೈಮ್ ಜಾಸ್ತಿ ಇಲ್ಲ "
ಅಲ್ಲಿದ್ದವರಿಗೆ ಅದೇನೂ ಅರ್ಥವಾಗಲಿಲ್ಲ. ವಸುಂಧರೆ ಮನದಲ್ಲೇ ಅವನ ಒಗಟಿನ ಪದಗಳಿಗೆ ಅರ್ಥ ಹುಡುಕುತ್ತಿದ್ದಳು.
ಒಮ್ಮೆಲೇ ಅವಳಿಗೆ ಅದೇನೋ ಅರ್ಥವಾಯಿತು .
ರಾಮುನಿಗೆ ಜೋರಾಗಿ ಹೇಳುತ್ತಿದ್ದಳು.
" ಅರ್ಥ ಆಯ್ತು, ಅರ್ಥ ಆಯ್ತು, ಬೇಗ ಮನೆಗೆ ನಡೀರಿ, ಟೈಮ್ ಜಾಸ್ತಿ ಇಲ್ಲ "
ರಾಮುನಿಗೆ ಅದೇನು ಅವಳಿಗೆ ಅರ್ಥ ಆಯಿತು ಎಂದು ಸ್ವಲ್ಪವೂ ತಿಳಿಯಲಿಲ್ಲ ಆದರೂ ಅವಳ ಮಾತಿನಂತೆ ಅವಸರದಿಂದ ಮನೆಯ ಕಡೆಗೆ ನಡೆದ.
( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು )
ಶಿವ ಮೇಟಿ
ಶ್ರೀವತ್ಸ ದೇಸಾಯ್ ಅವರ ಲೇಖನ ಬಹಳ ಸೊಗಸಾಗಿದೆ, well researched subject . ಲೆಸ್ಟರ್ ಕಾರ್ ಪಾರ್ಕ್ನಲ್ಲಿ ಸಿಕ್ಕಿದ ಅಸ್ತಿ ಪಂಜರ ನಿಜವಾಗಿಯೂ ಆಶ್ಚರ್ಯ ,
ಈ ದೇಶದಲ್ಲಿ ಇಂತಹ ಸಂಶೋಧನೆ ಮಾಡುವುದಕ್ಕೆ ಅನಕೂಲಗಳು ಇರುವುದು ಒಂದು ಹೆಮ್ಮೆಯ ವಿಚಾರ , ನೂರಾರು ವರ್ಷದ ಪತ್ರಗಳನ್ನ (documents ) ಕಾಪಾಡಿದ್ದಾರೆ ಮತ್ತು ಅನೇಕ ವಿದ್ವಾಂಸರು ಇದರ ಬಗ್ಗೆ TV ನಲ್ಲಿ ಮಾತನಾಡುವುದರಿಂದ ಜನಸಾಮಾನ್ಯರಿಗೆ ಅರಿವೂ ಮತ್ತು ಕೂತೂಹಲ ಸಹ ಇದೆ.
LikeLike
ರಾಮಮೂರ್ತಿಯವರಿಗೆ ಧನ್ಯವಾದಗಳು ನಿಮ್ಮ ಮೆಚ್ಚಿಗೆಯ ಮಾತುಗಳಿಗೆ. ನೀವಂದಂತೆ ಸಂಶೋಧನೆಗೆ ಪರಿಕರಗಳು ಇಲ್ಲಿ ಸುಲಭವಾಗಿ ಲಭ್ಯ ಮತ್ತು ಅದಕ್ಕೆ appreciation ಸಹ. RIII History Society ಯವರ ಹಣಸಂಗ್ರಹದ ಹುಮ್ಮಸ್ಸು ಏನು ಕಡಿಮೆಯ ಸಾಹಸವಲ್ಲ. ತಮ್ಮಂಥ ಇತಿಹಾಸಪ್ರಿಯರಿಗೆ ರೋಚಿಸಿದ್ದು ಸಮಾಧಾನ, ಲೇಖಕನಿಗೆ!
LikeLike
ಶಿವ ಮೇಟಿ ಅವರ ಕಥೆ ತಲಾಷ್ ನನ್ನ ಕುತೂಹಲವನ್ನು ಕೆರಳಿಸಿ, ಟಿವಿ ಧಾರಾವಾಹಿಗಳಲ್ಲಿ ಕಥೆಯನ್ನು ಒಳ್ಳೆಯ ತಿರುವಿನಲ್ಲಿ ನಿಲ್ಲಿಸಿ ವೀಕ್ಷಕರ ಕಾತುರತೆಯನ್ನು ಹೆಚ್ಚುಮಾಡುವ ರೀತಿಯಲ್ಲಿ, ಅದೇ ತಂತ್ರವನ್ನು ಉಳಿಸಿಕೊಂಡಿದೆ. ಕಥೆಯ ಮೊದಲ ಭಾಗ ಸ್ತ್ರೀ ವಾದಕ್ಕೆ ಪೂರಕವಾಗುವ ಅಂಶಗಳನ್ನು ಒಳಗೊಂಡಿದೆ. ಹಿಂದಿನ ಸಾಂಪ್ರದಾಯಿಕ ಸಮಾಜದಲ್ಲಿ ಗಂಡು ಮಕ್ಕಳನ್ನು ಬಯಸುತ್ತಿದ್ದು, ಹೆಣ್ಣು ಭ್ರೂಣ ಮತ್ತು ಶಿಶು ಹತ್ಯೆ ಹಿಂದೆ ವ್ಯಾಪಕವಾಗಿದ್ದು ನಮ್ಮ ಸಮಾಜದಲ್ಲಿ ಲಿಂಗಬೇಧದ ಬಗ್ಗೆ ಈಗ ಸುಧಾರಣೆಗಳಾಗಿರುವುದು ಸಮಾಧಾನಕರವಾದ ಸಂಗತಿಯಾದರೂ ಮೇಟಿ ಅವರು ಕಥೆಯಲ್ಲಿ ತಂದಿರುವ ಸನ್ನಿವೇಶ ಈ ಸಾಮಾಜಿಕ ಪಿಡುಗು ನಗರಗಳಲ್ಲಿ ಕಡಿಮೆಯಾಗಿದ್ದರೂ ಹಳ್ಳಿಗಳಲ್ಲಿ ಇನ್ನೂ ಇದೆ ಎಂದು ತಿಳಿಸಿದೆ. ಇದು ಶೋಚನೀಯ ಪರಿಸ್ಥಿತಿ. ಸಾಮಾಜಿಕ ಕಥೆ ಒಂದು ತಿರುವಿನಿಂದ ಈಗ ಪತ್ತೆ ದಾರಿ ಶೈಲಿಯನ್ನು ಹಿಡಿದಿರುವುದು ಮತ್ತು ಒಂದು ಮುಗ್ಧ ಮಗು ಕಾಣೆಯಾಗಿರುವುದು ನಮ್ಮೆಲ್ಲರ ಅನುಕಂಪೆಯನ್ನು ಮತ್ತು ಕಾತುರತೆಗಳನ್ನು ಹೆಚ್ಚಿಸಿದೆ.
ಶ್ರೀವತ್ಸ ಅವರು ಐನೂರು ವರ್ಷಕ್ಕೂ ಹಿಂದಿನ ಕಥೆಯನ್ನು ಕೈಗೆತ್ತಿಕೊಂಡು ಅದರ ಸುತ್ತ ಕವಿದುಕೊಂಡಿದ್ದ ನಿಗೂಢ ಮಾಹಿತಿಗಳನ್ನು, ಸತ್ಯ/ ಅಸತ್ಯಗಳನ್ನು ರಹಸ್ಯವನ್ನು ಆಧುನಿಕ ತಂತ್ರ ಜ್ಞಾನದಿಂದ ಹೇಗೆ ಹೊರತೆಗೆಯಲಾಯಿತು ಎಂಬ ವಿಚಾರವನ್ನು ಒಂದಿಷ್ಟು ಇತಿಹಾಸ, ಒಂದಿಷ್ಟು ಸಾಹಿತ್ಯ ಮತ್ತು ವಿಜ್ಞಾನದ ಅಂಶಗಳನ್ನು ಬಳಸಿಕೊಂಡು ಒಂದು ಸ್ವಾರಸ್ಯವಾದ ಕಥೆಯನ್ನು ಹೆಣೆದಿದ್ದಾರೆ. ಅಷ್ಟೇ ಅಲ್ಲ ದಂತ ಕಥೆಗೆ ಮತ್ತು ಶವದ ದಂತದಿಂದ ಪತ್ತೆ ಹಚ್ಚಿದ ಕಥೆಗೂ ಇರಬಹುದಾದ ಗೊಂದಲಗಳನ್ನು ಯಶಸ್ವಿಯಾಗಿ ಬಗೆಹರಿಸಿ ಉತ್ತಮವಾದ ವಿವರಣೆ ನೀಡಿದ್ದಾರೆ. ‘ದಂತ ಕಥೆ’ ಎಂಬ ಪದದ ಮೂಲ ಅರ್ಥವನ್ನು ನಮಗೆ ತಿಳಿಸಿದ್ದಾರೆ. ದಂತ ಕಥೆ ಎಂದರೆ ಬಾಯಿಂದ ಬಾಯಿಗೆ ಹರಿದು ಬಂದ ಜಾನಪದ ಶೈಲಿಯ ಕಥೆ ಆದುದರಿಂದ ‘ದಂತ’ ಎಂಬುವ ಪದ ಹೀಗೆ ಹುಟ್ಟಿರಬಹುದು ಎನ್ನುವುದು ನನ್ನ ಅನಿಸಿಕೆಯಾಗಿತ್ತು. ಈಗ ಅದು ಬಗೆಹರಿದಿದೆ. ಅವರು ಈ ಬರವಣಿಗೆಯಲ್ಲಿ ಸಾಕಷ್ಟು ಸಂಶೋಧನೆ, ಸಮಯ ಮತ್ತು ಪರಿಶ್ರಮವನ್ನು ಹೂಡಿದ್ದಾರೆ.
ಶೈಕ್ಷಣಿಕವಾದ ಬರಹ.
LikeLike
ಪ್ರಸಾದ್ ಅವರು ಎಂದಿನಂತೆ ವಿವರವಾಗಿ ವಿಶ್ಲೇಷಿಸಿದ ನಿಮ್ಮ ಕಾಮೆಂಟಿಗೆ ಕಾಯುವವರು ಬಹಳ ಅಂದುಕೊಂಡಿದ್ದೇನೆ. ನಿಮ್ಮಿಂದ ಬರುವ ತನಕ ಯಾವ ಲೇಖನವೂ ಪೂರ್ತಿಯಾಗುವದಿಲ್ಲ. ಈ ಸಲ ಮೊದಲ ಗಂಟೆಯನ್ನೇ ಬಾರಿಸಿದ್ದೀರಿ, ‘ಟಿಲ್ಲಿನ’ ಮೊದಲ ಗಂಟೆಯ ದಾಖಲಿಗೆ ಧನ್ಯವಾದಗಳು! ನಾನು ಸಹ ಆ ಪದದ ವ್ಯುತ್ಪತ್ತಿಗಾಗಿ ಬಹಳ ಸಲ ಹುಡುಕಾಡಿದ್ದೇನೆ. ಯಾವ ನಿಘಂಟಿನಲ್ಲೂ ಸಿಕ್ಕಿರಲಿಲ್ಲ. ಕಾಂತಾರ ನೋಡಿದ ಮೇಲೆ ಇನ್ನೂ ತೀವ್ರವಾಗಿತ್ತು ಅನ್ವೇಷಣೆ. ಹಿಂದೊಮ್ಮೆ ಜಿಮ್ ಅಲ್ ಖಲೀಲಿಯವರೊಡನೆ Turi King ಳ ಸಂದರ್ಶನ ಈ ದಂತದ ಬಗ್ಗೆ ಕುತೂಹಲ ಕೆರಳಿಸಿತ್ತು. ( Search in BBC SOUNDS. ಸಿಗುತ್ತದೆ.) ಪಾವೆಂ ಅವರ ಪುಸ್ತಕ ಇಂಥ ವಿಷಯಗಳ ಖನಿ. ‘Turi ಉದಂತಃ’ ಎಂದು ಮುಗಿಸುವೆ!ಅನಿವಾಸಿಯಲ್ಲಿ ನಿಮ್ಮೆಲ್ಲರ ಆಸ್ಥೆ ಸದಾ ಇರಲಿ.
LikeLike