ಕಾಲ ಚಕ್ರ ಉರುಳಿ ಶತ ಶತಮಾನಗಳು ಗತಿಸಿದರೂ , ಆಧುನಿಕತೆಯ ಗಾಳಿಯು ಬೀಸಿದರೂ , ಸಮಾಜದಲ್ಲಿ ಹೆಣ್ಣಿನ ಶೋಷಣೆ ಮಾತ್ರ ಹಾಗೆಯೇ ಮುಂದುವರೆದಿರುವದು ಕಟು ಸತ್ಯ . ಜಗತ್ತಿನ ಮೂಲೆ ಮೂಲೆಗಳಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಬೇರೂರಿರುವದು ದುಃಖಕರ ಸಂಗತಿ . ಬದಲಾವಣೆಯ ಅಲೆಯು ಭಾರತದ ಹಳ್ಳಿಗಳಲ್ಲಿ ಬಿಸುತ್ತಿದ್ದರೂ ಲಿಂಗ ಬೇಧ ಮಾತ್ರ ಕೊನೆ ಕಂಡಿಲ್ಲ . ಅಕ್ಷರವಂತರು , ಶ್ರೀಮಂತ ಕುಟುಂಬಗಳು ಇದಕ್ಕೇನು ಹೊರತಾಗಿಲ್ಲ .ಈ ದೇಶಕ್ಕೆ ಬರುವ ಮುನ್ನ ನಾನು ಕೆಲಸಮಾಡುತ್ತಿದ್ದ ಸ್ಥಳದಲ್ಲಿ ನಡೆದ ಒಂದು ಘಟನೆ ಇನ್ನೂ ಮನಸಿನಲ್ಲಿ ಹಾಗೆಯೇ ಉಳಿದಿದೆ . ಘಟನೆಗೆ ಅವಶ್ಯಕ ಬದಲಾವಣೆಗಳನ್ನು ಮಾಡಿ ಒಂದು ಕಥೆ ಬರೆಯಬೇಕು ಎಂದು ಅನಿಸಿತು ಅದಕ್ಕಾಗಿ ಬರೆದಿರುವೆ , ನಿಮ್ಮ ಮುಂದೆ ಇಟ್ಟಿರುವೆ. ದಯವಿಟ್ಟು ಸಮಯ ದೊರೆತಾಗ ಓದಿರಿ ಹಾಗೆಯೇ ಒಂದೆರಡು ಅಕ್ಷರದ ಅನಿಸಿಕೆಯನ್ನು ಗೀಚಲು ಮರೆಯದಿರಿ – (ಸಂಪಾದಕ)
ತಲಾಷ್ ( ಶೋಧ )
“ಅಮ್ಮ; ಅಂಜಲಿ ಇನ್ನೂ ಶಾಲೆಯಿಂದ ಮನೆಗೆ ಬಂದಿಲ್ಲ “
ಅಟ್ಟದ ಮೇಲಿದ್ದ ತಾಯಿಗೆ ದೊಡ್ಡ ಮಗಳು ಕೂಗಿ ಹೇಳುತ್ತಿದ್ದಳು. ಇಕ್ಕಿದ ಸಂಡಿಗೆಯನ್ನು ಆರು ಹಾಕುತ್ತಿದ್ದ ವಸುಂಧರೆ ಉತ್ತರಿಸಿದಳು ” ಇಷ್ಟರಲ್ಲಿಯೆ ಬರಬಹುದು ಬಿಡು …., ಆ ಬೀದಿಯ ನಾಯಿಯ ಜೊತೆಗೊ ಅಥವಾ ಹುಚ್ಚಪ್ಪನ ಜೊತೆಗೊ ಆಟವಾಡುತ್ತಿರಬಹುದು ” ಎಂದು. ಅಂಜಲಿ ಆರು ವರ್ಷದ ಮೂರನೆಯ ಮುದ್ದಿನ ಮಗಳು . ವಸುಂಧರೆಯ ಪಾಲಿಗಂತೂ ವಿಶೇಷ ಮಗಳು . ಮೊಮ್ಮಗ ಬೇಕೆಂದು ಹರ ಸಾಹಸ ಮಾಡುತ್ತಿರುವ ಅತ್ತೆಯ ನಿರೀಕ್ಷೆಗೆ ವಿರುದ್ಧವಾಗಿ ಹುಟ್ಟಿದವಳು . ಗಂಡನಿಗೂ ಮತ್ತೆ ‘ಹೆಣ್ಣಾಯಿತಲ್ಲ’ ಎಂಬ ನಿರಾಸೆಯಿದ್ದರೂ ಚಿಕ್ಕ ಮಗಳೆಂದು ಪ್ರೀತಿ ಜಾಸ್ತಿ . ಚೊಚ್ಚಲು ಮೊಮ್ಮಗು ಹೆಣ್ಣಾದಾಗ ಅತ್ತೆ, ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ . ‘ಇರಲಿ ಬಿಡು ಮುಂದಿನದಾದರೂ ಗಂಡಾದರೆ ಸಾಕು’ ಎಂದು ನಿಟ್ಟುಸಿರು ಬಿಟ್ಟಿದ್ದಳು . ಆದರೆ , ಎರಡನೆಯ ಮೊಮ್ಮಗೂ ಕೂಡ ಹೆಣ್ಣೆಂದು ಗೊತ್ತಾದಾಗ ಗರಬಡಿದವಳ ಹಾಗೆ ಕುಳಿತುಕೊಂಡಿದ್ದಳು . ಮಗನ ಮುಂದೆ ತನ್ನ ಮನದ ದುಗುಡನ್ನು ತೋರಿಕೊಂಡು;” ಏನಪ್ಪಾ ರಾಮು ! ಹೀಗೇಕಾಯಿತು …. ? ನನಗೆ ಇರುವವನು ನೀನೊಬ್ಬನೇ ಮಗ , ನಿನಗೆ ಗಂಡು ಮಗು ಆಗದಿದ್ದರೆ ಈಮನೆತನದ ವಂಶೋದ್ಧಾರನೆ ಹೇಗೆ ಸಾಧ್ಯ….. ? “ಎಂದು ಕಣ್ಣೀರು ಸುರಿಸಿದ್ದಳು . ರಾಮು ಅಷ್ಟೇ ಶಾಂತವಾಗಿಉತ್ತರಿಸಿದ್ದ ;” ಇರಲಿ ಬಿಡಮ್ಮ , ಅವರನ್ನೇ ಗಂಡು ಮಕ್ಕಳ ಹಾಗೆ ಬೆಳೆಸಿದರಾಯಿತು . ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳುಗಂಡಸರಿಗಿಂತ ಯಾವುದರಲ್ಲಿ ಕಡಿಮೆ ಇದ್ದಾರೆ…? . ತಂದೆ ತಾಯಿಗಳ ಮೇಲೆ ಅವರಿಗಿರುವಷ್ಟು ಪ್ರೀತಿ ಗಂಡುಮಕ್ಕಳಿಗೆ ಎಲ್ಲಿದೆ? ಯಾಕೆ ಹೀಗೆ ಮಕ್ಕಳಲ್ಲಿ ಭೇಧ ಭಾವ ಮಾಡ್ತಿಯಾ ?” ಎಂದು ಸಮಾಧಾನ ಹೇಳಿದ್ದ
” ನನ್ನ ಸಂಕಟ ನಿನಗೆ ಹೇಗೆ ಗೊತ್ತಾಗುತ್ತದೆ . ಪುರಾಣ , ವೇದಗಳಲ್ಲಿ ಹೇಳಿಲ್ಲವೇನೋ….’ ಗಂಡು ಮಗು ಇಲ್ಲದಿದ್ದರೆ
ಮೋಕ್ಷ ಸಾಧ್ಯವಿಲ್ಲವೆಂದು …’ . ಹೆಣ್ಣು ಎಂದಾದರು ಪರರ ಆಸ್ತಿ . ಇಷ್ಟೊಂದು ಪಿತ್ರಾರ್ಜಿತ ಆಸ್ತಿಯನ್ನು ಬೇರೆಯವರ
ಪಾಲು ಮಾಡಲು ನನಗೆ ಎಳ್ಳಷ್ಟೂ ಇಷ್ಟವಿಲ್ಲ “ ಎಂದು ಬೇಸರದಿಂದ ನುಡಿದಿದ್ದಳು.
” ಅಮ್ಮಾ, ಪುರಾಣ ವೇದಗಳಲ್ಲಿ ಹೆಣ್ಣು ಮಕ್ಕಳ ಕುರಿತು ಒಳ್ಳೆಯದನ್ನೂ ಹೇಳಿದ್ದಾರೆ . ಒಳ್ಳೆಯದನ್ನು ಆರಿಸಿಕೊಂಡು ಕೆಟ್ಟದ್ದನ್ನು ಬಿಟ್ಟರಾಯಿತು . ಸತ್ತ ಮೇಲೆ ಸ್ವರ್ಗ ನರಕ ಯಾರಿಗೆ ತಿಳಿದಿದೆ …?” ಎಂದು ತಾಯಿಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದ . ಆದರೆ ತಾಯಿಯು ತಾನೂ ಒಂದು ಹೆಣ್ಣು ಎಂಬುವದನ್ನು ಮರೆತು ಇದಕ್ಕೆ ಯಾವುದಕ್ಕೂ ಜಗ್ಗಿದಂತೆ ಕಾಣಿಸಿರಲಿಲ್ಲ. ಅದೊಂದು ದಿನ ಮನೆ ಕೆಲಸದ ಸುಬ್ಬಿ ವಸುಂಧರೆಗೆ ಹೇಳುತ್ತಿದ್ದಳು ” ನೋಡಮ್ಮ ನಮ್ಮ ಪಕ್ಕದ ಮನೆ ಅನುಸುಯಿಗೆ ಮಕ್ಕಳಾಗಲಿಲ್ಲ ಅಂತ ಅವಳ ಗಂಡ ಇನ್ನೊಂದು ಹೆಣ್ಣನ್ನ ಕಟ್ಟಿಕೊಂಡಾನ್ ….ಆದರ ಆರು ತಿಂಗಳಾದರೂ ಅದಕ್ಕೂ ಗರ್ಭ ತುಂಬಿಲ್ಲ …..ಅವಳ ಅತ್ತಿ ಇನ್ನ ಮುಂದ ಏನ್ ಮಾಡ್ತಾಳಂತ ಗೊತ್ತಿಲ್ಲ”
“ಅದೇನ್ ಹೊಸಾದ ಬಿಡ ಸುಬ್ಬಿ ….ರಾಮಾಯಣದ ಸೀತವ್ವನ ಹಿಡಕೊಂಡು ಇಲ್ಲಿವರೆಗೂ ಹೆಣ್ಣಿನ ಮ್ಯಾಲ ದಬ್ಬಾಳಿಕಿ
ನಡದ ಐತಿ … ಮಕ್ಕಳಾಗದಿದ್ದರೆ ‘ಬಂಜಿ ‘ ಎಂಬ ಪಟ್ಟಾ ಕಟ್ಟತಾರ , ಹೆಣ್ಣು ಹೆತ್ತರ ಗಂಡು ಹಡಿಯಲಿಲ್ಲ ಎಂದು
ಶಪಿಸತಾರ್ … ಗಂಡಸರು ಮಾತ್ರ ಏನೂ ತಪ್ಪಿಲ್ಲ ಎಂದು ಮೌನವಾಗಿರತಾರ್ ….ನಮ್ಮ ಅತ್ತಿಗೂ ಸ್ವಲ್ಪ ಹೇಳಿಬಿಡು “
ಅಂತ ಸುಬ್ಬಿಗೆ ಹೇಳಿದ್ದಳು . ಅತ್ತೆ ಮಾತು ಕೇಳಿಸಿಕೊಂಡರು ಏನು ಮಾತನಾಡಿರಲಿಲ್ಲ
ಮನೆಯಲ್ಲಿ ಅತ್ತೆಯ ವಿರುದ್ಧವಾಗಿ ಹೋಗುವ ಶಕ್ತಿ ಯಾರಿಗೂ ಇರಲಿಲ್ಲ . ರಾಮು , ಹೆಂಡತಿಯ ಮೇಲಿದ್ದ ಪ್ರೀತಿಯನ್ನ ಕಡೆಗಣಿಸಲಾಗದೆ , ತಾಯಿಯ ವಿರುದ್ಧ ಮಾತನಾಡುವ ಶಕ್ತಿಯಿಲ್ಲದೆ ತ್ರಿಶಂಕು ನರಕದಲ್ಲಿ ಸಿಕ್ಕಿಹಾಕಿಕೊಂಡಿದ್ದನು . ವಸುಂಧರೆ ಮತ್ತೆ ಗರ್ಭವತಿ ಎಂದು ಗೊತ್ತಾದಾಗ ಅತ್ತೆಗೆ ಸಂತೋಷವೂ ಆಗಿತ್ತು ಹಾಗೆಯೆ ಚಿಂತೆಯೂ ಮೂಡಿತ್ತು.
‘ದೇವರೆ ! ಈ ಸಾರಿಯಾದರೂ ನನ್ನ ಆಸೆಯನ್ನು ಪೂರೈಸು ಎಂದು ದೊಡ್ಡ ನಮಸ್ಕಾರವನ್ನು ಹಾಕಿದ್ದಳು’ , ತಕ್ಷಣವೇ
ಅವಳನ್ನು ತನಗೆ ಗೊತ್ತಿದ್ದ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದ್ದಳು . ಅಡ್ಡದಾರಿಯಲ್ಲಿ
ವೈದ್ಯರಿಂದ ಲಿಂಗ ಪರೀಕ್ಷೆಯೂ ಆಗಿತ್ತು . ಗಂಡು ಮಗು ಎಂಬ ಆಶ್ವಾಸನೆಯು ದೊರಕಿದಾಗ ಅವಳ ಆನಂದಕ್ಕೆ
ಪಾರವೇ ಇರಲಿಲ್ಲ . ಸೊಸೆಯನ್ನು ಅಪ್ಪಿ ಮುದ್ದಾಡಿದ್ದಳು, ‘ದೇವರು ಕೊನೆಗೂ ತನ್ನ ಮೇಲೆ ಕರುಣೆ ತೋರಿದನಲ್ಲಾ’
ಎಂದು ಸಂತೋಷದ ಉಸಿರನ್ನು ಬಿಟ್ಟಿದ್ದಳು. ಆದರೆ ಅತ್ತೆಗೆ ಗೊತ್ತಾಗಿರಲಿಲ್ಲ ‘ ತಾನೊಂದು ಬಗೆದರೆ,ದೈವ
ಇನ್ನೊಂದು ಬಗೆಯುವದೆಂದು’. ಅದೊಂದು ದಿನ ವಸುಂಧರೆಗೆ ಹೆರಿಗೆ ಆಯಿತು ಆದರೆ ಅವರೆಂದುಕೊಂಡಂತೆ ಗಂಡು ಮಗವಾಗಿರಲಿಲ್ಲ ಮತ್ತೆ ಇನ್ನೊಂದು ಹೆಣ್ಣು ಮಗುವಿನ ಆಗಮನವಾಗಿತ್ತು . ವೈಧ್ಯರ ಪರೀಕ್ಷೆ ಸುಳ್ಳಾಗಿತ್ತು. ಅತ್ತೆಯ ಪೂಜೆಗೆ ಯಾವ ದೇವರೂ ವರ ಕೊಟ್ಟಿರಲಿಲ್ಲ ಅದಷ್ಟೇ ಅಲ್ಲದೆ ಮಗು ‘ಮೂಲಾ ‘ ನಕ್ಷತ್ರದಲ್ಲಿ ಹುಟ್ಟಿತ್ತು . ಒಂದರಮೇಲೊಂದು ಆಘಾತವನ್ನು ಅನುಭವಿಸಿದ ಅತ್ತೆಯ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಿತ್ತು . ಮೂಲಾ ನಕ್ಷತ್ರದಲ್ಲಿ ಮಗು ಹುಟ್ಟಿದರೆ ತಂದೆಯ ಪ್ರಾಣಕ್ಕೆ ಅಪಾಯ ಎಂಬುದು ಬಹು ಜನರ ನಂಬಿಕೆ . ಅತ್ತೆಯೂ ಅದಕ್ಕೇನು
ಹೊರತಾಗಿರಲಿಲ್ಲ . ಈ ಅನಿಷ್ಟ ಮಗು ಏಕೆ ಈ ಮನೆಯಲ್ಲಿ ಹುಟ್ಟಿತೆಂದು ಪರಿತಪಿಸಿದ್ದಳು. ಮಗನ ಜೊತೆಗೆ ವಿಷಯವನ್ನು ಎತ್ತಿದಾಗ ಅವನೇನು ತಲೆಕೆಡಿಸಿಕೊಳ್ಳಲಿಲ್ಲ . ” ಮಗು ಮುದ್ದಾಗಿದೆಯಮ್ಮ! ಎತ್ತಿ ಮುದ್ದಾಡಿಬಿಡು. ಮೂಢನಂಬಿಕೆಗಳಿಗೆಲ್ಲ ಸುಮ್ಮನೆ ತಲೆ ಕೆಡಿಸಿಕೊಂಡು ಯಾಕೆ ನಿನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿ ಮತ್ತು ಮನೆಯ ನೆಮ್ಮದಿಯನ್ನೂ ಕೂಡಾ ಕೆಡಿಸುತ್ತಿ” ಅಂತ ಅವಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದನು . ಅಮ್ಮನ ಮನಸು ಅಷ್ಟು ಸುಲಭವಾಗಿ ಒಪ್ಪುವದಿಲ್ಲವೆಂದು ಅವನಿಗೆ ಗೊತ್ತಿತ್ತು. ಅತ್ತೆಯ ವರ್ತನೆಯಿಂದ ವಸುಂಧರೆಗೆ ರೋಷಿ ಹೋಗಿತ್ತು. ಇವಳೂ ಒಬ್ಬಳು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಭಾವನೆಗಳನ್ನು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರಮಾಡಿಕೊಂಡಿದ್ದಳು. ಅತ್ತೆಗೆ ಎದುರಾಗಿ ಎಂದೂ ಮಾತನಾಡದವಳು ಅದೊಂದು ದಿನ ಘಟ್ಟಿ ಮನಸಿನಿಂದ ಹೇಳಿಬಿಟ್ಟಿದ್ದಳು . ” ನೋಡು ಅತ್ತೆಮ್ಮ…..ನಿಮ್ಮ ಗಂಡು ಮೊಮ್ಮಗನ ಆಸೆಯಿಂದ ನನಗೆ ಮತ್ತೆ ಮಕ್ಕಳನ್ನು ಹೆರಲು ಹೇಳಬೇಡಿ . ನಾನೇನು ಮಕ್ಕಳನ್ನು ಹೆರುವ ಫ್ಯಾಕ್ಟರಿ ಅಲ್ಲ . ಇದ್ದ ಮೂವರು ಮಕ್ಕಳನ್ನು ಚನ್ನಾಗಿ ಬೆಳೆಸುವ ಜವಾಬ್ಧಾರಿ ನನಗೆ ಸಾಕು. ಗರ್ಭದಲ್ಲಿ ಜೀವ ಮೂಡುವದಕ್ಕೆ ಗಂಡ ಹೆಂಡತಿ ಹೇಗೆ ಕಾರಣರೊ……ಹಾಗೆಯೇ ಮೂಡಿದ ಜೀವ ಹೆಣ್ಣು ಅಥವಾ ಗಂಡು ಎಂದು ಮಾರ್ಪಡಲು ಅವರಿಬ್ಬರೂ ಅಷ್ಟೆ ಸಮಪಾಲರು ಎಂಬುವದನ್ನು ಮರೆಯಬೇಡಿರಿ“ ಎಂದಿದ್ದಳು . ಸೊಸೆಯ ಈ ಮಾತಿನಿಂದ ಆಘಾತವಾಗಿದ್ದರು ಏನನ್ನು ತಿರುಗಿ ಮಾತನಾಡದೆ ಸುಮ್ಮನಾಗಿದ್ದಳು .
ತನ್ನ ಮನಸಿನ ವೇದನೆಯನ್ನು , ವಸುಂಧರೆ ಗಂಡನಿಗೂ ಮುಟ್ಟಿಸಿದ್ದಳು” ನನಗೆ ಇನ್ನು ಮುಂದೆ ಮಕ್ಕಳು ಬೇಡ
….ನಿಮಗೇನಾದರೂ ನಿಮ್ಮ ತಾಯಿಯ ಹಾಗೆ ಗಂಡುಮಗುವಿನ ಆಸೆಯಿದ್ದರೆ ……? ಇನ್ನೊಂದು ಮದುವೆಯನ್ನು
ಮಾಡಿಕೊಳ್ಳಿ …ನನಗೇನೂ ತೊಂದರೆ ಇಲ್ಲ . ನನ್ನನ್ನು ನನ್ನ ಪಾಲಿಗೆ ಬಿಟ್ಟುಬಿಡಿ ” ಎಂದು . ವಸುಂಧರೆಯನ್ನು
ಸಮಾಧಾನಪಡಿಸಿ ಅವನು ಹೇಳಿದ್ದ ” ಇದಕ್ಕೆಲ್ಲ ಯಾಕೆ ತಲೆಕೆಡಿಸಿಕೊಳ್ಳುತ್ತೀಯ ಸ್ವಲ್ಪ ಸಮಯದ ನಂತರ ಎಲ್ಲ
ಸರಿಯಾಗುತ್ತದೆ ಬಿಡು ” ಎಂದು .
ಕಾಲಚಕ್ರ ತಿರುಗುತ್ತಿತ್ತು , ಅಂಜಲಿ ಅಷ್ಟರಲ್ಲಿಯೇ ಆರು ವಸಂತಗಳನ್ನು ಕಳೆದಿದ್ದಳು . ತಂದೆ ತಾಯಿಯರ ಇಚ್ಛೆಯಂತೆ
ಮನೆಯಿಂದ ಸುಮಾರು ಮೂರು ಮೈಲು ದೂರವಿದ್ದ ಇಂಗ್ಲಿಷ್ ಶಾಲೆಗೆ ಪಾದಾರ್ಪಣೆ ಮಾಡಿದ್ದಳು . ಮನೆಯಿಂದ
ನೂರು ಮೀಟರ್ ನಡೆದರೆ ಆಲದ ಮರದ ಕಟ್ಟೆ . ಅಲ್ಲಿಗೆ ಶಾಲೆಯ ವಾಹನ ಬಂದು ಮಕ್ಕಳನ್ನು ಕರೆದೊಯ್ಯುತ್ತಿತ್ತು .
ಅಂಜಲಿಗೆ ಪ್ರಾಣಿಗಳನ್ನು ಕಂಡರೆ ತುಂಬಾ ಅನುಕಂಪ , ಮನೆಯ ಮುಂದೆ ಮಲಗುತ್ತಿದ್ದ ಬೀದಿಯ ನಾಯಿಗೆ ದಿನಾಲೂಊಟವನ್ನು ಹಾಕಿ ಸ್ನೇಹವನ್ನು ಗಿಟ್ಟಿಸಿದ್ದಳು. ತಿಂದ ಅನ್ನದ ಋಣ ಎಂಬುವಂತೆ ದಿನಾಲೂ ಮನೆಯಿಂದ ಆಲದ ಕಟ್ಟೆಯವರೆಗೂ ಅದು ಅವಳನ್ನು ಹಿಂಬಾಲಿಸುತ್ತಿತ್ತು ಮತ್ತು ಸಾಯಂಕಾಲ ಅವಳ ಬರುವಿಕೆಗಾಗಿ ಕಟ್ಟೆಯ ಹತ್ತಿರ ಕಾಯುತ್ತಿತ್ತು .
ಸಾಯಂಕಾಲ ಐದು ಘಂಟೆಯಾದರೂ ಅಂಜಲಿ ಮನೆ ಸೇರದಿದ್ದಾಗ ವಸುಂಧರೆಗೆ ಚಿಂತೆಯಾಗತೊಡಗಿತು….. ಆಲದ
ಕಟ್ಟೆಯವರೆಗೂ ಹೋಗಿನೋಡೊಣವೆಂದು ಮನೆಯ ಹೊರಗೆ ಬಂದಳು . ಬಾಗಿಲಿನ ಎದುರು ಬೀದಿ ನಾಯಿ
ಒಂಟಿಯಾಗಿ ಜೋರಾಗಿ ಬೊಗಳುತ್ತ ನಿಂತಿತ್ತು ಆದರೆ ಅಂಜಲಿ ಇರಲಿಲ್ಲ . ನಾಯಿಯು ಏನೋ ಸಂದೇಶವನ್ನು
ಹೇಳಲು ಪ್ರಯತ್ನಿಸುತಿತ್ತು
ವಸುಂಧರೆಗೆ ಯಾಕೋ ಭಯವಾಗತೊಡಗಿತು . ಗಂಡನಿಗೆ ಫೋನು ಮಾಡಿ ತಕ್ಷಣವೇ ಮನೆಗೆ ಬರಲು ಹೇಳಿ ,
ನಾಯಿಯ ಜೊತೆಗೆ ಆಲದ ಮರದ ಕಟ್ಟೆಯಕಡೆಗೆ ನಡೆದಳು .
( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು )
ಸುಧಾ ಧಾರಾವಹಿಯ ‘ಸಶೇಷ’ ನೆನಪಾಯಿತು.ಮುಂದಿನ ಕಂತಿಗೆ ಕಾಯುತ್ತಿದ್ದೇನೆ.
– ಕೇಶವ
LikeLike
ಸ್ವಾರಸ್ಯಕರವಾಗಿ ಓದಿ(ಡಿ)ಸಿಕೊಂಡು ಹೋಗುತ್ತಿದ್ದ ತಲಾಷ್ ಕಥೆ ಗಕ್ಕನೆ ಟೆಹರೋ (ನಿಂತು ಬಿಡು) ಅಂತ ಮುಂದಿನವಾರದ ವರೆಗೆ ಕಾಯಿಸಬೇಡಿ ಅಂತ ಅಂಜಲಿ ಜೋಡಿಸಿ ಬೇಡಿಕೊಳ್ಳುವೆ, ಶಿವ ಮೇಟಿಯವರೇ! ಬಹಳ ದಿನಗಳ ನಂತರ ಅನಿವಾಸಿಯಲ್ಲಿ ಕಾಣಿಸಿಕೊಂಡ ಒಂದು ಕಥೆಗೆ ಸ್ವಾಗತ!
LikeLike