ಆತ್ಮೀಯ ಓದುಗರೇ,
''ನಾನು ಅಲ್ಪ ಎಂದು, ಕುಗ್ಗಿ ಮುದುಗಬೇಡವೋ,
ಓ ಅಲ್ಪವೇ, ಅನಂತದಿಂದ ಗುಣಿಸಿಕೊ,
ನೀನ್ ಆನಂತವಾಗುವೆ!''
ಎಂಬ ಸುಂದರ, ಮಹತ್ತರ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಕನ್ನಡಿಗರು ವಿಶ್ವಮಾನವ ದಿನವೆಂದು ಆಚರಿಸುತ್ತಾರೆ. ಕರ್ನಾಟಕ ರತ್ನ, ಪದ್ಮವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಸಋಷಿ, ರಾಷ್ಟ್ರಕವಿಗೆ ೨೦೨೧ನೇ ವರುಷದ ಕೊನೆಯ ವಾರದ, ಅನಿವಾಸಿ ಬರಹಗಳು ಅರ್ಪಣೆ.
ಈ ಸಂಚಿಕೆಯಲ್ಲಿ ಶ್ರೀಮತಿ ಗೌರಿ ಪ್ರಸನ್ನ ಅವರು ಕುವೆಂಪು ಅವರ ಕುರಿತು ಬರೆದಿರುವ ಲೇಖನದಲ್ಲಿ ಅವರಿಗೆ ಕೆವಿ ಪುಟ್ಟಪ್ಪನವರ ಮೇಲಿರುವ ಭಕ್ತಿ, ಆರಾಧನೆ, ಪ್ರೀತಿ ಎದ್ದು ಕಾಣುತ್ತದೆ. ಅಂತೆಯೇ ಅವರು ವಾಚಿಸಿರುವ ''ಸ್ವರ್ಗದ್ವಾರದಿ ಯಕ್ಷ ಪ್ರಶ್ನೆ'' ಕವನ ಕೂಡ ಅತೀ ಸುಂದರವಾಗಿದೆ ಚಂದದ ಕಿರುಗತೆಯಂತೆ ಭಾಸವಾಗುತ್ತದೆ.
ಡಾ ಶಿವಶಂಕರ ಮೇಟಿ ಅವರು ಕುವೆಂಪು ಅವರ ಅನಿಕೇತನ ಪದ್ಯವನ್ನು ಭಾವಪೂರ್ಣವಾಗಿ ಹಾಡಿದ್ದಾರೆ.
ಡಾ ಲಕ್ಷ್ಮಿನಾರಾಯಣ ಗುಡೂರ್ ಅವರು ವಾಚಿಸಿರುವ- ''ನಾ ನಿನಗೆ ನೀ ನನಗೆ ಜೇನಾಗುವ'' ಮತ್ತು ''ಬನವೆಲ್ಲ ಕೊನರೊಡೆದು'' ಮತ್ತೆ ಮತ್ತೆ ಕೇಳಬೇಕೆನ್ನುವಷ್ಟು ಮಧುರವಾಗಿವೆ.
ಡಾ ದಾಕ್ಷಾಯಣಿ ಗೌಡ ಅವರು ಹಾಡಿರುವ ''ದೂರ ಬಹು ದೂರ'' ನಿಮ್ಮನ್ನು ಭಾವಲೋಕದಲ್ಲಿ ತೇಲಿಸುತ್ತದೆ.
ಬನ್ನಿ ನಿಮಗೆ ರಸಋಷಿಯ ಜನ್ಮದಿನದ ವಿಶೇಷ ಸಂಚಿಕೆಗೆ ಸ್ವಾಗತ.
-ಸಂಪಾದಕಿ
ಕನ್ನಡಕಾವ್ಯಾರಾಮದಕೋಗಿಲೆ-ಕುವೆಂಪು.
ಶ್ರೀಮತಿ ಗೌರಿ ಪ್ರಸನ್ನ.
ರನ್ನ-ಷಡಕ್ಷರಿ, ಪೊನ್ನ, ಪಂಪ, ಲಕುಮಿಪತಿ, ಜನ್ನರಂತಹ ಕವಿಕೋಗಿಲೆಗಳ ಪುಣ್ಯಾರಾಮವಾದ, ವಿದ್ಯಾರಣ್ಯ-ಬಸವಣ್ಣರ ದಿವ್ಯಾರಣ್ಯವಾದ, ಕೃಷ್ಣೆ-ಶರಾವತಿ-ತುಂಗೆ-ಕಾವೇರಿಯರ ವರರಂಗವಾದ ಭಾರತ ಜನನಿಯ ತನುಜಾತೆಯಾದ ಕನ್ನಡಮ್ಮನಿಗೆ ವಂದಿಸಿ ಜಗದ ಕವಿ, ಯುಗದ ಕವಿ ಕುವೆಂಪುರವರ ಜನುಮದಿನದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ತನ್ಮೂಲಕ ಇಡಿಯ ಮಾನವಕುಲಕ್ಕೆ ಅವರಿತ್ತ ಅಪಾರ ಕೊಡುಗೆಗಳ ಋಣಭಾರವನ್ನು ವಿನೀತಳಾಗಿ ಹೊತ್ತು ಈ ಹೊತ್ತು ಅವರನ್ನು ಸ್ಮರಿಸುತ್ತಿದ್ದೇನೆ.
ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ
ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ದಿಗ್ ದಿಗಂತವಾಗಿ ಏರಿದ ಮಹಾನ್ ಚೇತನ ಕುವೆಂಪು ಅವರದು. ಕನ್ನಡಮ್ಮನ ಚರಣಾರವಿಂದಕ್ಕೆ ಮೊದಲ ಜ್ಞಾನಪೀಠದ ಕೊಡುಗೆಯನ್ನು ಸಲ್ಲಿಸಿದ ಕೀರ್ತಿ ಇವರದು. ಕನ್ನಡ ಕಾವ್ಯಾರಾಮದ ಕೋಗಿಲೆ ಎಂದೇ ಹೆಸರಾದ ಕುವೆಂಪುರವರ ಹೆಸರಿನಲ್ಲಿಯೇ ಕೋಗಿಲೆಯ ಕೂಜನದ ಇಂಪಿದೆ. ಅವರ ಒಂದೊಂದು ಕವಿತೆಯಲ್ಲಿಯೂ ಕೊಳಲಿನ ಮಾಧುರ್ಯವಿದೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಕುವೆಂಪು ಕೈಯಾಡಿಸದ ಸಾಹಿತ್ಯ ಪ್ರಕಾರವೇ ಇಲ್ಲ. ಮಹಾಕಾವ್ಯ, ಕಾದಂಬರಿ, ನಾಟಕ, ಗೀತ, ಲೇಖನ, ವಿಮರ್ಶೆ, ಮಕ್ಕಳ ಸಾಹಿತ್ಯ ..ಎಲ್ಲದಕ್ಕೂ ಜೀವ ನೀಡಿದವರು;ಕಸುವ ತುಂಬಿದವರು. ಮಹಾಕಾವ್ಯದ ಯುಗ ಮುಗಿದೇಹೋಯ್ತು ಎನ್ನುವ ಕಾಲಘಟ್ಟದಲ್ಲಿ ‘ಶ್ರೀರಾಮಾಯಣ ದರ್ಶನಂ’ ದಂಥ ಮಹಾಛಂದಸ್ಸಿನ ಅದ್ಭುತ ಮಹಾಕಾವ್ಯವನ್ನು ಸೃಷ್ಟಿಸಿದರೂ ತಾನದನ್ನು ಸೃಜಿಸಿಲ್ಲ, ಅದುವೇ ತನ್ನನ್ನು ಸೃಷ್ಟಿಸಿತು, “ಕುವೆಂಪುವ ವಿರಚಿಸಿದೀ ರಾಮಾಯಣ ದರ್ಶನಂ” ಎಂದು ಹೇಳಿ ವಿನಯವನ್ನು ಮೆರೆದವರು. ’ಈ ಪುಟ್ಟ ಕನ್ನಡದ ಪೊಸಸುಗ್ಗಿ ಬನದ ಪರಪುಟ್ಟ’ ಎಂದು ‘ವಿದ್ಯಾ ವಿನಯೇನ ಶೋಭತೆ’ ಎಂಬ ಮಾತಿಗೆ ನಿದರ್ಶನವಾದವರು.
1904 ಡಿಸೆಂಬರ, 29ರಂದು ಶಿವಮೊಗ್ಗೆಯ ಹಿರೇಕೂಡಿಗೆಯಲ್ಲಿ ಜನಿಸಿದ ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂದು. ಪುರೋಹಿತಶಾಹಿಯ ಬಿಗಿಯಾದ ಕಪಿಮುಷ್ಟಿಯಲ್ಲಿ, ಕುಗ್ರಾಮವಾದ ಕುಪ್ಪಳ್ಳಿಯಲ್ಲಿ ಬೆಳೆದ, ಒಕ್ಕಲಿಗ ತುಂಬು ಕುಟುಂಬದ ಪೋರನೊಬ್ಬ ಮುಂದೆ ವಿಶ್ವವಿದ್ಯಾಲಯವೊಂದರ ಉಪಕುಲಪತಿಯ ಹುದ್ದೆಯನ್ನಲಂಕರಿಸಿ, ‘ರಾಷ್ಟ್ರಕವಿ’ ಮನ್ನಣೆಗೆ ಪಾತ್ರವಾಗುವುದು ಕಡಿಮೆ ಸಾಧನೆಯೇನಲ್ಲ. ‘ಕನ್ನಡದ ಆಸ್ಥಾನಕವಿ’ ಎಂದೇ ಹೊಗಳಿಸಿಕೊಳ್ಳುವ ಕುವೆಂಪು ಪಡೆದ ಪ್ರಶಸ್ತಿಗಳು ಅಸಂಖ್ಯಾತ.1968 ರಲ್ಲಿ ಜ್ಞಾನಪೀಠದ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಪಂಪ ಪ್ರಶಸ್ತಿ, ಪದ್ಮವಿಭೂಷಣ, ‘ಕರ್ನಾಟಕ ರತ್ನ’, ಗೌರವ ಡಾಕ್ಟರೇಟ್, ಇವೆಲ್ಲ ಇವರನ್ನರಸಿ ಬಂದವು. ನವಿಲು, ಕೊಳಲು, ಪಾಂಚಜನ್ಯ, ಕಲಾಸುಂದರಿ, ಪ್ರೇಮಕಾಶ್ಮೀರ ಇತ್ಯಾದಿ ಇವರ ಪ್ರಸಿದ್ಧ ಕವನ ಸಂಕಲನಗಳು. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಬೃಹತ್ ಕಾದಂಬರಿಗಳು. ರಕ್ತಾಕ್ಷಿ, ಜಲಗಾರ, ಬೆರಳ್ಗೆ ಕೊರಳ್, ಸ್ಮಶಾನ ಕುರುಕ್ಷೇತ್ರಂ, ಯಮನ ಸೋಲು ಇತ್ಯಾದಿ ನಾಟಕಗಳು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ.
ಕುವೆಂಪು ಕಾವ್ಯ ಕಬ್ಬಿಣದ ಕಡಲೆ, ಅವರು ಬಳಸುವ ಭಾಷೆ ಸುಲಭಕ್ಕೆ ಅರ್ಥವಾಗುವುದಿಲ್ಲ.. ಎಂಬಿತ್ಯಾದಿಟೀಕೆ-ಟಿಪ್ಪಣೆಗಳೂ ಇವೆ. ಆದರೆ ಜನತಾ ಜನಾರ್ಧನನ ಸಂತುಷ್ಟಿ, ಸಂಪುಷ್ಟಿಗಾಗಿಯೇ ಮಹಾಕವಿಯ ಕಾವ್ಯಯೋಗ. ನಗರ ಸಂಕ್ಷೋಭೆಯಿಂದ ದೂರವಾದ ನಿರ್ಜನಾರಣ್ಯದಲ್ಲಿ ತಪೋನಿರತನಾಗುವ ಋಷಿಯ ಗುರಿ ಜಗತ್ಕಲ್ಯಾಣ ಸಂಸಿದ್ಧಿಯೇ ಹೊರತು ಕೇವಲ ವೈಯಕ್ತಿಕ ಮೋಕ್ಷಸಾಧನೆಯಲ್ಲ. ವಲ್ಮೀಕ ಪ್ರವೇಶವಿಲ್ಲದೇ ವಾಲ್ಮೀಕಿಯಾಗುವುದು ಸಾಧ್ಯವಾಗಲಾರದು. ಆದ್ದರಿಂದ ಕುವೆಂಪು ಜನತೆಗೆ ದೂರವೆನಿಸಿದಂತೆ ತೋರಿದರೂ ವಾಸ್ತವವಾಗಿ ಹತ್ತಿರವೇ ಆಗಿದ್ದಾರೆ; ಹತ್ತಿರವಾಗುವುದಕ್ಕೋಸ್ಕರವೇ ದೂರವಾಗಿದ್ದಾರೆಂದರೆ ಸಮರ್ಪಕವಾದೀತೆಂಬುದು ಪ್ರಾಜ್ಞರ ಅಭಿಪ್ರಾಯ.
ಕುವೆಂಪು ಅಪ್ಪಟ ನಿಸರ್ಗ ಕವಿ. ಇವರ ಕಾವ್ಯದಲ್ಲಿ ಚಿತ್ರಿತವಾದಷ್ಟು ಸುಂದರವಾಗಿ ಪ್ರಕೃತಿ ಮತ್ತೆಲ್ಲೂ ಚಿತ್ರಿತವಾಗಿಲ್ಲವೆಂದರೆ ಅತಿಶಯೋಕ್ತಿಯೇನಲ್ಲ. ‘ಸೃಷ್ಟಿಯೊಲ್ಮೆಯೇ ಸೃಷ್ಟಿಕರ್ತಂಗೆ ಪೂಜೆಯಯ್’ ಎಂದಿವರು ಸಾರುತ್ತಾರೆ. ಹೊನ್ನಗಿಂಡಿಯ ಹಿಡಿದು ಕೈಯಲಿ ಹೇಮವಾರಿಯ ಚಿಮುಕಿಸಿ, ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ’ ಎಂಬ ದೋಣಿಹಾಡಿನ ಬಣ್ಣನೆ ಮೈನವಿರೇಳಿಸುವಂಥದು. ಹಾರುತಿಹ ಬೆಳ್ಳಕ್ಕಿಗಳ ಸಾಲು ಇವರ ಕಂಗಳಿಗೆ ದೇವರ ರುಜುವಿನಂತೆ ಕಾಣುತ್ತದೆ. ಗಿಳಿಗೊರವಂಕ ಹಕ್ಕಿಗಳಿಂಚರ ಕಿವಿಹಾಯ್ದು ಎದೆ ಮುಟ್ಟುತ್ತದೆ.
ಕನ್ನಡ ಪ್ರೇಮವಂತೂ ಇವರ ಉಸಿರಾಗಿದೆ.’ಕನ್ನಡ ಎನೆ ಕುಣಿದಾಡುವುದೆನ್ನೆದೆ. ಕನ್ನಡ ಎನೆ ಕಿವಿ ನಿಮಿರುವುದು’ ಎಂದು ಹಾಡುವ ಇವರು ‘ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಗೋವರ್ಧನಗಿರಿಯಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅದು ಪಾಂಚಜನ್ಯವಾಗುತ್ತದೆ' ಎಂದು ಎದೆ ತಟ್ಟಿ ಹೇಳಿದವರು. ಎಲ್ಲಾದರೂ ಇರು..ಎಂತಾದರೂ ಇರು..ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹರಸಿದವರು. ನನಗಿಲ್ಲಿ ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದಲ್ಲಿನ ಒಂದು ಘಟನೆ ಹೇಳಲೇಬೇಕು. ತೇಜಸ್ವಿ, ಚೈತ್ರ ಚಿಕ್ಕವರಿದ್ದಾಗಿನ ಪ್ರಸಂಗ. ಅವರಿಬ್ಬರೂ ಅದ್ಯಾ ವುದೋ ನಾಯಿಯೊಡನಾಡುತ್ತ ಅದಕ್ಕೆ ಆದೇಶ ಕೊಡುತ್ತಿರುತ್ತಾರೆ. ‘ಕಮಾಂಡಾ, ಕಮಾಂಡಾ’..ಎಂದೆಲ್ಲ. ಕುವೆಂಪುಗೆ ಎಷ್ಟು ತಲೆಕೆಡಿಸಿಕೊಂಡರೂ ಅದ್ಯಾವ ಶಬ್ದದ ಅಪಭ್ರಂಶ ಈ ‘ಕಮಾಂಡಾ’ ಅರ್ಥವಾಗುವುದಿಲ್ಲ. ಕೊನೆಗೆ ಮಕ್ಕಳನ್ನೇ ಕರೆದು ಕೇಳಿದಾಗ ಅವರು ಇದು ಇಂಗ್ಲೀಷ್ ನಾಯಿಯೆಂತಲೂ, ಬಾ ಅಂತ ಕನ್ನಡದಲ್ಲೆಲ್ಲ ಮಾತಾಡಿದರೆ ಅದಕ್ಕೆ ತಿಳಿಯುವುದಿಲ್ಲವಾದ್ದರಿಂದ ‘ಕಮಾಂಡಾ’ ಎಂದು ಇಂಗ್ಲೀಷ್ ನಲ್ಲಿ ಕರೆಯಬೇಕೆಂದು ‘ಜಾನಪ್ಪ’ ಹೇಳಿಕೊಟ್ಟಿದ್ದಾನೆಂತಲೂ ವಿವರಿಸುತ್ತಾರೆ. ಇದು ‘come on dog’ ದ ಅಪಭ್ರಂಶವೆಂದು ಅರ್ಥವಾಗುವುದರ ಜೊತೆಗೆ ಕನ್ನಡಕ್ಕಾದ ಅಪಮಾನದಿಂದ ಅವರ ಮೈ ಉರಿದುಹೋಗುತ್ತದೆ. “ನಮ್ಮ ಪಂಪ ಇಲ್ಲಿ ಮಹಾಕಾವ್ಯ ಬರೆಯುತ್ತಿದ್ದಾಗ ನಿಮ್ಮ ದೊರೆಗಳಿನ್ನೂ ತೊಗಟೆಯುಟ್ಟುಕೊಂಡು ಅಡವಿಯಲ್ಲಿ ಅಲೆಯುತ್ತಿದ್ದರು ಎಂದು ಹೋಗಿ ಹೇಳಿ ನಿಮ್ಮ ಆ ಜಾನಪ್ಪನಿಗೆ’' ಎಂದು ಗರ್ಜಸುತ್ತಾರಂತೆ. ನನಗೆ ಈ ಪ್ರಸಂಗವನ್ನೆಷ್ಟು ಸಲ ಓದಿದರಷ್ಟೂ ಸಲವೂ ಮೈಮೇಲೆ ಮುಳ್ಳು..ಕಣ್ಣಲ್ಲಿ ನೀರೊಡೆಯುತ್ತದೆ.
ಕುವೆಂಪು ದಾರ್ಶನಿಕ ಕವಿಯೂ ಹೌದು. ಜೀವನದ ಸಣ್ಣಪುಟ್ಟದರಲ್ಲಿಯೂ ಉದಾತ್ತತೆಯನ್ನೂ, ಅನಂತತೆಯನ್ನು ಕಾಣುವ ಕವಿ ನಮಗೂ ಅದನ್ನು ತೋರಿಸುತ್ತಾರೆ. ‘ಬೃಂದಾವನಕೆ ಹಾಲನು ಮಾರಲು’ ಅಂಥದೇ ಒಂದು ಭಾವಪೂರ್ಣ ಗೀತೆ. ಗೋಪಿಯೊಬ್ಬಳು ತನ್ನ ಸಖಿಗೆ ಬೃಂದಾವನಕೆ ಹಾಲನು ಮಾರಲು ತನ್ನೊಡನೆ ಬರಲು ಕರೆಯುತ್ತಿದ್ದಾಳೆ. ಆ ಸಖಿಗೋ ಪರಮಾಶ್ಚರ್ಯ! ಹಾಲು-ಹೈನಿನಿಂದ ಸಮೃದ್ಧವಾದ ಆ ಬೃಂದಾವನದಲ್ಲಿ ತಮ್ಮ ಹಾಲನ್ನು ಯಾರು ಕೇಳಿಯಾರು ಎಂಬ ಚಿಂತೆ ಅವಳದು. ಈ ಮುಗುದೆಗೋ ಹಾಲು ಮಾರುವುದೊಂದು ನೆಪ. ಅವಳ ಜೀವವೆಲ್ಲ ಶ್ರೀಕೃಷ್ಣನಲ್ಲಿ. ಹಾಲನು ಮಾರುವ ನೆವದಿಂದ ಹರಿಯ ಮೋಹಿಸಿ ಕರೆಯುವುದೇ ಅವಳ ಉದ್ದೇಶ. ಜೊತೆಗೇ ಗೋವಿಂದ ಹಾಲನು ಕೊಂಡು ಅದಕ್ಕೆ ಪ್ರತಿಯಾಗಿ ತನ್ನನೇ ನೀಡುವನೆಂಬ ಬಲವಾದ ನಂಬಿಕೆ. ಈ ಗೀತೆಗೊಂದು ನೃತ್ಯ ರೂಪಕದ ಗುಣವಿದೆ; ದರ್ಶನದ ಹೊಳಹಿದೆ. ‘ನಾವು ಲೀಲಾ ಮಾತ್ರ ಜೀವರು ನಮ್ಮ ದೇವನ ಲೀಲೆಗೆ..ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’ ಎಂಬಲ್ಲಿ ಸಂಪೂರ್ಣ ಶರಣಾಗತಿಯ ಸೊಗವಿದೆ. ರಾಮಾಯಣ ದರ್ಶನಂದಲ್ಲಿ ಅಹಲ್ಯೋದ್ಧಾರ ಸಂದರ್ಭದ ‘ಕಲ್ಲಾದರೇನ್, ತೀವ್ರತಪದಿಂದೆ ಚೇತನಸಿದ್ಧಿಯಾಗದೇ ಜಡಕೆ? ಜಡವೆಂಬುದು ಬರಿ ಸುಳ್ಳು..ಚೇತನ ಮೂರ್ತಿಯು ಈ ಕಲ್ಲು’ ಎಂದು ಚೈತನ್ಯ ಪೂಜೆ ಮಾಡುತ್ತಾರೆ. ‘'ಕಡೆಯದೆಯೇ ಕೇಳ್ ಬೆಣ್ಣೆ ಹೊಮ್ಮುವುದೇ? ಮೂಡುತಿರ್ದುವೇ ಮಹಾರತ್ನಗಳ್, ಪೇಳ್ ಮಥಿಸದಿರೆ ಮಂಥರೆಯ ವಾಸುಕಿ, ಮಹಾಮಮತೆ ತಾಂ ಕೈಕೆ ಮಂದರದಿಂದಮಾ ತ್ರೇತಾ ಸಮುದ್ರಮಂ” ಎಂದು ‘ಪ್ರಾಕೃತ ಘಟನೆಗಳ್ಗೆ ಪ್ರಕೃತಿ ಕಾರಣದಂತೆ ದೇವಕಾರಣಮಿರ್ಪುದು’ ಎಂಬ ರಹಸ್ಯವನ್ನರುಹುತ್ತಾರೆ. ‘ಲೇಸನೆಸಗುವ ವಿಧಿಗೆ ಬಹು ಪಥಗಳುಂಟು ನಡೆಯಲ್’ ಎಂದು ಕಂಗೆಟ್ಟವರನ್ನು ಸಂತೈಸುತ್ತಾರೆ. ‘ ರಸಜೀವನಕೆ ಮಿಗಿಲು ತಪಮಿಹುದೇ? ರಸಸಿದ್ಧಿಗಿಂ ಮಿಗಿಲೇ ತಾನ್ ಸಿದ್ಧಿ’ ಎಂದು ರಸದ ಹೊನಲನ್ನೇ ಹರಿಸುತ್ತಾರೆ.
ಕೊನೆಯದಾಗಿ ನಾನಿಲ್ಲಿ ಬರೆಯುತ್ತಿರುವುದು ಕವಿಯೊಡನೆ ನನ್ನ ನಂಟಿನ ಬಗ್ಗೆ; ಆ ಮಹಾಕವಿ ಒಂದಿನಿತು ನನಗೂ ದಕ್ಕಿದ ಬಗ್ಗೆ. ‘ಹಿಂದೆ ಕುಳಿದವಳೆಂಬ ನಿಂದೆಯ ಸಹಿಸಿ ನೊಂದಿಹೆ ಬಲ್ಲೆನು; ಆದರೊಲಿಯೆನು ಅನ್ಯರ..ಚಿನ್ನವೊಲಿದಿಹ ಧನ್ಯರ’ ಎಂದು ಪ್ರಾಥಮಿಕ ಶಾಲೆಯಲ್ಲಿ ಬಾಯಿಪಾಠ ಮಾಡಿ ಹಾಡಿ, ಇದನ್ನು ಬರೆದವರು ಕುವೆಂಪು, ಅವರ ಪೂರ್ಣ ಹೆಸರು......’ ಇತ್ಯಾದಿಯೊಂದಿಗೆ ಶುರುವಾದದ್ದು ಕುವೆಂಪುರವರ ನಂಟು. ಬಾಲ್ಯದ ಆದಿನಗಳಲ್ಲಿ ದೇಶಭಕ್ತಿ, ನಾಡು-ನುಡಿಯ ಬಗ್ಗೆ ಅಭಿಮಾನ, ಪ್ರೇಮ ಹೀಗೆಲ್ಲ ಗರಿಮೂಡಿದ್ದೇ ಅವರ ಜಯಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ ಇತ್ಯಾದಿ ಗೀತೆಗಳಿಂದ..ನನ್ನ ಹೈಸ್ಕೂಲಿನ ಮಾಸ್ತರರೊಬ್ಬರು ‘ವಿದ್ಯಾರ್ಥಿಗಳು ಭತ್ತ ತುಂಬುವ ಗೋಣಿ ಚೀಲಗಳಾಗಬಾರದು; ಭತ್ತ ಬೆಳೆಯುವ ಗದ್ದೆಗಳಾಗಬೇಕು’ ಎನ್ನತ್ತಾರೆ ಕುವೆಂಪು ಎಂದು ನಮ್ಮ ಅಭ್ಯಾಸದ ಪರಿಯನ್ನು ತಿದ್ದಿದ ರೀತಿ ನನಗಿಂದಿಗೂ ನೆನಪಿದೆ. ಶಾಲೆಯಲ್ಲಿ ಏರ್ಪಡಿಸಿದ್ದ ‘ನನ್ನ ನೆಚ್ಚಿನ ಕವಿ’ ನಿಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ನಾ ಪಡೆದಿದ್ದ ಸ್ಟೀಲ್ ಲೋಟವೊಂದು ಇನ್ನೂ ಅಮ್ಮನ ಮನೆಯಲ್ಲಿದೆ.
ನಂತರ ಕ್ಯಾಸೆಟ್ಟಿನ ಆ ಸುವರ್ಣಯುಗದಲ್ಲಿ ಅಶ್ವತ್ಥ, ಮೈಸೂರು ಅನಂತಸ್ವಾಮಿ, ರಾಜಕುಮಾರ್, ಮಾಲತಿ ಶರ್ಮ,ರತ್ನಮಾಲಾ ಪ್ರಕಾಶ್ ಅವರೆಲ್ಲರ ಸಿರಿಕಂಠದಿಂದ ಹರಿದು ಬಂದ ಕುವೆಂಪು ಗೀತೆಗಳು ನನ್ನನ್ನು ಬೇರೆಯದೇ ಲೋಕಕ್ಕೆ ಒಯ್ದದ್ದು ಸುಳ್ಳಲ್ಲ. ‘ಎಲ್ಲಿಯೂ ನಿಲ್ಲದಿರು..ಮನೆಯನೆಂದೂ ಕಟ್ಟದಿರು’, ‘ನೀನು ಹೊಳೆದರೆ ನಾನು ಹೊಳೆವೆನು’, ‘ಚಿನ್ನವ ಕೊಡನೇ ರನ್ನವ ಕೊಡನೇ ತನ್ನನೇ ಕೊಡುವನು ಕೇಳೆ ಸಖಿ’..ಇಂಥ ಗೀತೆಗಳಲ್ಲಿ ಮುಳುಗಿ ಕಳೆದುಹೋದದ್ದೆಷ್ಟು ಬಾರಿಯೋ? ಕೆರೆಯ ಅಂಚಿನ ಮೇಲೆ ಮಿಂಚುವ ಹಿಮಮಣಿಗಳ ಚಿತ್ರಣಕ್ಕೆ ಮನಸೋತಿದ್ದೆಷ್ಟು ಬಾರಿಯೋ? ಬೇಸರದ ಬದುಕಿಗುಸುರ ತುಂಬಲು ‘ಅಂತಾದರೂ ಬಾ, ಇಂತಾದರೂ ಬಾ, ಎಂತಾದರೂ ಬಾ ಬಾ’ ಎಂದು ಎದೆಬಾಗಿಲು ತೆರೆದಿಟ್ಟು ಆ ಅತಿಥಿಯನ್ನು ಧ್ಯಾನಿಸಿದ್ದೆಷ್ಟು ಸಲವೋ? ಮುಂದೆ ನಲ್ಲನೊಬ್ಬ ಒಲಿದಾಗ ‘ಆವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು’ ಎಂದು ಮನತುಂಬಿದ ಭಾವ ಈ ಕವಿಯ ಸಾಲುಗಳದ್ದೇ. ಮಲೆಗಳಲ್ಲಿ ಮದುಮಗಳು ಓದುತ್ತಿದ್ದಾಗ ನಾ ಚೊಚ್ಚಲ ಬಸುರಿ. ಅದರಲ್ಲಿ ಮೇಲಿಂದ ಮೇಲೆ ಬರುವ ತುಂಡು, ಕಡುಬು, ಕಳ್ಳುಗಳ ವರ್ಣನೆ ಇಷ್ಟು ನನ್ನ ಮನ ಹೊಕ್ಕಿಬಿಟ್ಟಿತ್ತೆಂದರೆ ಅದ ತಿನ್ನುವ, ಕುಡಿವ ಬಯಕೆ ಎಡೆಬಿಡದೇ ಕಾಡಿದ್ದು, ಅದನ್ನೇ ಹತ್ತು ಸಲ ಹಲುಬಿ ಅಮ್ಮನಿಂದ ಬೈಸಿಕೊಂಡದ್ದು ಮಧುರ ನೆನಪು. ಕಾನೂರ ಹೆಗ್ಗಡತಿಯಂತೂ ಆಗ ನಿದ್ದೆಯಲ್ಲೂ ಬಂದು ಕಾಡಿದ್ದಳು. ರಾಮಾಯಣ ದರ್ಶನಂ ಅಂತೂ ಸದೈವ ಕಾಲ ಇಷ್ಟದೇವತಾ ಪಟದಂತೆ ನನ್ನ ಕಣ್ಣೆದಿರು ಇರಲೇಬೇಕು..ನನ್ನ ಟೇಬಲ್ ಮೇಲೆ. ಅದು ಮಾಡಿದ ಪ್ರಭಾವದ ಬಗ್ಗೆ ಇಲ್ಲಿ ಬರೆಯಲಾಗದು. ‘ರಾಮಾಯಣಂ ಅದು ವಿರಾಮಯಣಂ ಕಣಾ’.
ಬುದ್ಧಿಗೆ ಅತೀತವಾದುದನ್ನು ಭಾವದಿಂ ಗ್ರಹಿಸುವ ಶಕ್ತಿ ಕರುಣಿಸಿದ್ದಕ್ಕೆ, ಎದೆಯ ತಿಳಿವಿಗೂ ಮಿಗಿಲು ಶಾಸ್ತ್ರವಿಹುದೇ ಎಂದು ಎದೆಯ ಮಾತಾಲಿಸಲು ಕಲಿಸಿದ್ದಕ್ಕೆ ಕವಿಗೆ ಮಣಿಯುತ್ತಿದ್ದೇನೆ.
ಮುಗಿದಿರಲಿ ಕೈ; ಮಣಿದಿರಲಿ ಮುಡಿ; ಮತ್ತೆ ಮಡಿಯಾಗಿರಲಿ ಬಾಳ್ವೆ..ಕವಿವಾಕ್ಯ ಸದಾ ನನ್ನ ಪೊರೆಯಲೆಂಬ ಆಶಯ.
ಅಮಿತಾ ಅವರ ಸಂಪಾದಕೀಯದಲ್ಲಿ ಈ ಶುಕ್ರವಾರ ಮೂಡಿಬಂದ ಸಂಚಿಕೆಯು ಸಾಹಿತ್ಯ ಮತ್ತು ಸಂಗೀತದಲ್ಲಿ ಅಮಿತಾ ಅವರಿಗಿರುವ ಅಮಿತಾಸಕ್ತಿಯನ್ನು ತೋರಿಸುತ್ತದೆ.
ಗೌರಿಯವರು ಕುವೆಂಪು ಅವರ ದರ್ಶನ ಮಾಡಿಸಿದ್ದಾರೆ. ಭಾವಗೀತೆಗಳ ಧ್ವನಿಸುರಳಿಗಳ ಮೂಲಕ ಕುವೆಂಪು ಅವರ ಕವನಗಳು ಪ್ರತಿದಿನ ಎಲ್ಲಾದರೂ ಯಾರಾದರೂ ಗುಣುಗುಣಿಸುತ್ತಲೋ ಇಲ್ಲಾ ಹಾಡುತ್ತಲೋ ಇರುತ್ತಾರೆ. ಕುವೆಂಪು ಅವರ ಈ ಕಿರುಪ್ರಬಂಧವು ಕುವೆಂಪು ಅವರನ್ನು ಮತ್ತೆ ಓದಬೇಕು, ಅವರ ಭಾವಗೀತೆಗಳನ್ನು ಮತ್ತೆ ಕೇಳಬೇಕು ಎನಿಸುವಂತಿದೆ.
ಗೌರಿಯವರು ಕುವೆಂಪು ಅವರ ನೀಳ್ಗವನವನ್ನು ಕಣ್ಣಿಗೆ ಕಟ್ಟುವಂತೆ ವಾಚಿಸಿದ್ದಾರೆ. ಹಾಡಲು ಸಾಧ್ಯವಿಲ್ಲದ, ಆದರೆ ಓದಿದರೆ ಕೇಳಲು ಸುಂದರವಾದ ಸರಳವಾಗಿ ತಿಳಿಯುವ ಕವನವಿದು. ಮೇಟಿಯವರು ಕುವೆಂಪು ಅವರ ಪ್ರಸಿದ್ಧ ʼಅನಿಕೇತನʼವನ್ನು ಸುಶ್ರಾವ್ಯವಾಗಿ ಭಾವತುಂಬಿ ಹಾಡಿದ್ದಾರೆ. ಗುಡೂರ್ ಅವರು ಓದುವ ಶೈಲಿ ವಿಶಿಷ್ಟವಾಗಿದೆ, ಸಾಲುಗಳನ್ನು ಅರ್ಥಪೂರ್ಣವಾಗಿ ವಾಚಿಸಿದ್ದಾರೆ. ದಾಕ್ಷಾಯಿಣಿಯವರು ಅಷ್ಟೊಂದು ಪ್ರಸಿದ್ಧವಲ್ಲದ ಭಾವಗೀತೆಯನ್ನು ಮನತುಂಬಿ ಹಾಡಿದ್ದಾರೆ.
ಈ ವಾರದ ಅನಿವಾಸಿ ಅನನ್ಯ ಸಂಚಿಕೆ. ವಿಶ್ವಮಾನವ ಕುವೆಂಪುಗೆ ಸ್ವರ – ಬರಹದ ವಿಶಿಷ್ಟ ಹಾರ. ಸಂಪಾದಕಿಯ ಮೂಸೆಯಿಂದ ತಯಾರಾದ ಉತ್ತಮ ಪಾಕ. ಬಾಣಸಿಗರಾದ ಗೌರಿ, ದಾಕ್ಷಾಯಿಣಿ, ಮೇಟಿ ಹಾಗೂ ಗುಡೂರರು ತಯಾರಿಸಿದ ರಸಗವಳ. ಅನಿವಾಸಿ ಹೀಗೇ ೨೦೦೨ ರಲ್ಲಿಯೂ ಬೆಳೆಯಲಿ ಎಂಬುದೇ ನನ್ನ ಹಾರೈಕೆ.
ಅನಿವಾಸಿಯ ಈ ಕುವೆಂಪು ಸ್ಮರಣೆ ಆವೃತ್ತಿ ಸ್ಮರಣೀಯ – ವಿವಿಧ ಕಾರಣಗಳಿಂದ. ಗೌರಿ ಪ್ರಸನ್ನ ಅವರಂತೆ ರೇಷ್ಮೆ ಎಳೆಯ ಬರಹ ಹೆಣೆದು ಮಾಲೆ ಮಾಡುವವರು ಅಪರೂಪ. ಹಿಂದಿನ ಸಲ ಬೇಂದ್ರೆ ಸ್ಮರಣೆಯಲ್ಲೂ ಅವರ ಅನೇಕಾನೇಕ ಕೃತಿಗಳ ಉಲ್ಲೇಖ ಮಾಡಿದ್ದರು. ಇಲ್ಲಿ ಸಹ. ಇದರಲ್ಲಿ ಅವರ ಆಳವಾದ ಅಧ್ಯಯನ ಮತ್ತು ಅವರ ಬಗ್ಗೆ ಪ್ರೀತಿ- ಗೌರವ ಎರಡೂ ವ್ಯಕ್ತವಾಗುತ್ತವೆ. ಜೊತೆಗೆ ಅವರ ಕಾವ್ಯಕಥೆಯ ಓದು. ಅದಕ್ಕೆ ಕಳಸವಿಟ್ಟಂತೆ. ಗುಡೂರ್ ಅವರ ಕವನ ವಾಚನಡಾ ವಿಡಿಯೋ ಚೊಕ್ಕವಾಗಿದೆ. ದಾಕ್ಷಾಯಣಿಯವರು ಎಷ್ಟು ಎಫರ್ಟಿಲ್ಲದೆ ಮತ್ತು ಎಂಜಾಯ್ ಮಾಡುತ್ತಾ ಹಾಡುತ್ತಾರೆ! ಮೇಟಿಯವರು ಅನಿವಾಸಿಯಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುತ್ತಾರೆ. ನೀವು ಮತ್ತೆ ಮತ್ತೆ ಭೇಟಿ ಕೊಡಬೇಕು ಸಾರ್. ನಿಮ್ಮ ಹಾಡುಗಳು ಮತ್ತು ಬೇರೆ ಬರಹದಂತ ಕ್ರಿಯೇಟಿವಿಟಿಯೂ ಪ್ರಸ್ತುತಿಯಾಗಲಿ ನಿಮ್ಮಿಂದ. ಇವೆಲ್ಲವಕ್ಕೆ ಸೂತ್ರಧಾರಿಯಾಗಿ -ವೈಯಕ್ತಿಕ ಅಡಚಣೆಗಳನ್ನೂ ಮೀರಿ – ಕೆಲಸಮಾಡಿದ ಅಮಿತಾ ರವಿಕಿರಣ ಅವರ ಪ್ರಯತ್ನ ನಿರಂತರವಾಗಿ ಹಿನ್ನೆಲೆಯಲ್ಲಿರುವುದರಿಂದಲೇ ಅವರ ಸಂಪಾದಕೀಯ ಅವಧಿ ಯಶಸ್ವಿಯಾಗಿದೆಯೆನ್ನಬಹುದು. ಪ್ರತಿಯೊಂದು ಸಂಚಿಕೆಯಲ್ಲೂ ಅವರ ಛಾಪು ಸಂಪಾದಕರ ‘ನಾಲ್ಕು’ಮಾತುಗಳ’ಲ್ಲಷ್ಟೇ ಕಾಣುತ್ತಿಲ್ಲ ಎಲ ಕಡೆಗೂ. ಹೊಸಬರನ್ನು ಪರಿಚಯಿಸುವುದು ಸುಲಭದ ಕಾರ್ಯವಲ್ಲ, ಅದು ಅವರ ವ್ಯಕ್ತಿತ್ವದ ದ್ಯೋತಕವೂ ಅಹುದು. ಬರಿ ಪರಿಚಯ ಇದ್ದ ಮಾತ್ರಕ್ಕೆ ಲೇಖನ-ಗಾಯನ- ಪದ್ಯ- ಚಿತ್ರ ಅವತರಿಸುವದಿಲ್ಲ. ಬೆನ್ನು ಚಪ್ಪರಿಸಿ, ಪುಸಲಾಯಿಸಿ ‘ಹಿಂಡಬೇಕಾಗುತ್ತದೆ’ , ಹಾಲನ್ನು ಕರೆದಂತೆ! ಹತ್ತಿರದಿಂದ ನೋಡಿದ ನಾನದನ್ನು ಬಲ್ಲೆ! ಅವರಿಗೂ ಅಭಿನಂದನೆಗಳು!
ಹಿಂದೂ ಎನ್ನುವುದು ಮಾತ್ರ ವೇ ಪವಿತ್ರವಾದರೆ ನನ್ನಲ್ಲಿ ಹಿಂದೂವಿನ ಯಾವ ಲಕ್ಷಣಗಳೂ ಇಲ್ಲ. ಗಂಗೆ ಮಾತ್ರ ಪುಣ್ಯ ನದಿಯಾದರೆ, ಮಲೆನಾಡಿನ ನನ್ನ ತುಂಗೆ ಯಾಕಲ್ಲ? ಗೋವಿನ ವಧೆ ಮಾತ್ರ ಪಾಪವಾದರೆ ಮಿಕ್ಕ ಪ್ರಾಣಿಗಳು ಮಾಡಿದ ತಪ್ಪೇನು?
ಎಂದು ಪ್ರಶ್ನಿಸಿ ಆ ಕಾಲದಲ್ಲೇ ಸಮನ್ವಯತೆಯ ತತ್ವಗಳನ್ನು ಸಾರಿ ವಿಶ್ವ ಮಾನವರಾಗಿ ಕನ್ನಡನಾಡಿನ ಹೆಮ್ಮೆಯನ್ನು ಜಗದಗಲ ಸಾರಿದ ಕವಿ ಕುವೆಂಪು.
ಗೌರಿಯವರು ಬರೆದಿರುವಂತೆ ಆ ಕಾಲದಲ್ಲೇ ಎಲ್ಲ ವೈರುಧ್ಯಗಳನ್ನು ಮೆಟ್ಟಿನಿಂತು ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ವಿದ್ವತ್ತನ್ನು ಸಾಧಿಸಿ, ಜಗತ್ತಿನ ಎಲ್ಲ ವಿಚಾರಗಳಲ್ಲಿ ಸೌಂದರ್ಯವನ್ನು, ದೈವಾಂಶವನ್ನು ಕಂಡಂತ ಹಿರಿಯ ಚೇತನ.
ಲೇಖನ- ವಾಚನ ಎರಡನ್ನೂ ಮಾಡಿ ಗೌರಿಯವರು ತಮ್ಮ ಮನದಾಳದ ಗೌರವವನ್ನು ವ್ಯಕ್ತ ಪಡಿಸಿದ್ದಾರೆ.
ಲೇಖನ ಕುವೆಂಪುರ ಪರಿಪೂರ್ಣ ಪರಿಚಯವನ್ನು ಸಂಕ್ಷಿಪ್ತವಾಗಿ ಮಾಡಿಕೊಡುತ್ತದೆ.
ಶಿವಕುಮಾರ ಮೇಟಿ ಯವರ ಗಾಯನ ಪ್ರತಿಭೆಯ ಪೂರ್ಣ ಅನಾವರಣ ಅವರ ಹಾಡಿನಲ್ಲಿ ಕಂಡುಬಂದಿದೆ.
ಕುವೆಂಪು ಅವರ ಮತ್ತೊಂದು ಹಾಡು ದಾಕ್ಷ ಅವರ ಕಂಠದಲ್ಲೇ ನನಗೆ ಮೊದಲ ಪರಿಚಯವಾದದ್ದು. ಬಹಳ ಅರ್ಥಪೂರ್ಣ ಹಾಡಿದು.
ಗೂಡೂರರ ವಾಚನಗಳೂ ಸುಂದರವಾಗಿವೆ.
ಕುವೆಂಪು ರ ಬರಹಗಳ ಸೌಂದರ್ಯ ವೇ ಎಲ್ಲರಲ್ಲೂ ಈ ಬಗೆಯ ತಲ್ಲೀನತೆಯನ್ನು ನೀಡಿದೆ ಎನ್ನುವುದು ಚೆನ್ನಾಗಿ ವೇದ್ಯವಾಗುತ್ತದೆ.
ಅಮಿತಾರಿಗೆ ಈ ಸಂಚಿಕೆಗಾಗಿ ವಿಶೇಷ ಅಭಿನಂದನೆಗಳು💐💐💐💐🙏
ಅಮಿತಾ ಅವರ ಸಂಪಾದಕೀಯದಲ್ಲಿ ಈ ಶುಕ್ರವಾರ ಮೂಡಿಬಂದ ಸಂಚಿಕೆಯು ಸಾಹಿತ್ಯ ಮತ್ತು ಸಂಗೀತದಲ್ಲಿ ಅಮಿತಾ ಅವರಿಗಿರುವ ಅಮಿತಾಸಕ್ತಿಯನ್ನು ತೋರಿಸುತ್ತದೆ.
ಗೌರಿಯವರು ಕುವೆಂಪು ಅವರ ದರ್ಶನ ಮಾಡಿಸಿದ್ದಾರೆ. ಭಾವಗೀತೆಗಳ ಧ್ವನಿಸುರಳಿಗಳ ಮೂಲಕ ಕುವೆಂಪು ಅವರ ಕವನಗಳು ಪ್ರತಿದಿನ ಎಲ್ಲಾದರೂ ಯಾರಾದರೂ ಗುಣುಗುಣಿಸುತ್ತಲೋ ಇಲ್ಲಾ ಹಾಡುತ್ತಲೋ ಇರುತ್ತಾರೆ. ಕುವೆಂಪು ಅವರ ಈ ಕಿರುಪ್ರಬಂಧವು ಕುವೆಂಪು ಅವರನ್ನು ಮತ್ತೆ ಓದಬೇಕು, ಅವರ ಭಾವಗೀತೆಗಳನ್ನು ಮತ್ತೆ ಕೇಳಬೇಕು ಎನಿಸುವಂತಿದೆ.
ಗೌರಿಯವರು ಕುವೆಂಪು ಅವರ ನೀಳ್ಗವನವನ್ನು ಕಣ್ಣಿಗೆ ಕಟ್ಟುವಂತೆ ವಾಚಿಸಿದ್ದಾರೆ. ಹಾಡಲು ಸಾಧ್ಯವಿಲ್ಲದ, ಆದರೆ ಓದಿದರೆ ಕೇಳಲು ಸುಂದರವಾದ ಸರಳವಾಗಿ ತಿಳಿಯುವ ಕವನವಿದು. ಮೇಟಿಯವರು ಕುವೆಂಪು ಅವರ ಪ್ರಸಿದ್ಧ ʼಅನಿಕೇತನʼವನ್ನು ಸುಶ್ರಾವ್ಯವಾಗಿ ಭಾವತುಂಬಿ ಹಾಡಿದ್ದಾರೆ. ಗುಡೂರ್ ಅವರು ಓದುವ ಶೈಲಿ ವಿಶಿಷ್ಟವಾಗಿದೆ, ಸಾಲುಗಳನ್ನು ಅರ್ಥಪೂರ್ಣವಾಗಿ ವಾಚಿಸಿದ್ದಾರೆ. ದಾಕ್ಷಾಯಿಣಿಯವರು ಅಷ್ಟೊಂದು ಪ್ರಸಿದ್ಧವಲ್ಲದ ಭಾವಗೀತೆಯನ್ನು ಮನತುಂಬಿ ಹಾಡಿದ್ದಾರೆ.
ಅಮಿತಾ ಅವರಿಗೆ ಅಭಿನಂದನೆಗಳು.
– ಕೇಶವ
LikeLike
ಈ ವಾರದ ಅನಿವಾಸಿ ಅನನ್ಯ ಸಂಚಿಕೆ. ವಿಶ್ವಮಾನವ ಕುವೆಂಪುಗೆ ಸ್ವರ – ಬರಹದ ವಿಶಿಷ್ಟ ಹಾರ. ಸಂಪಾದಕಿಯ ಮೂಸೆಯಿಂದ ತಯಾರಾದ ಉತ್ತಮ ಪಾಕ. ಬಾಣಸಿಗರಾದ ಗೌರಿ, ದಾಕ್ಷಾಯಿಣಿ, ಮೇಟಿ ಹಾಗೂ ಗುಡೂರರು ತಯಾರಿಸಿದ ರಸಗವಳ. ಅನಿವಾಸಿ ಹೀಗೇ ೨೦೦೨ ರಲ್ಲಿಯೂ ಬೆಳೆಯಲಿ ಎಂಬುದೇ ನನ್ನ ಹಾರೈಕೆ.
– ರಾಂ
LikeLike
ಅನಿವಾಸಿಯ ಈ ಕುವೆಂಪು ಸ್ಮರಣೆ ಆವೃತ್ತಿ ಸ್ಮರಣೀಯ – ವಿವಿಧ ಕಾರಣಗಳಿಂದ. ಗೌರಿ ಪ್ರಸನ್ನ ಅವರಂತೆ ರೇಷ್ಮೆ ಎಳೆಯ ಬರಹ ಹೆಣೆದು ಮಾಲೆ ಮಾಡುವವರು ಅಪರೂಪ. ಹಿಂದಿನ ಸಲ ಬೇಂದ್ರೆ ಸ್ಮರಣೆಯಲ್ಲೂ ಅವರ ಅನೇಕಾನೇಕ ಕೃತಿಗಳ ಉಲ್ಲೇಖ ಮಾಡಿದ್ದರು. ಇಲ್ಲಿ ಸಹ. ಇದರಲ್ಲಿ ಅವರ ಆಳವಾದ ಅಧ್ಯಯನ ಮತ್ತು ಅವರ ಬಗ್ಗೆ ಪ್ರೀತಿ- ಗೌರವ ಎರಡೂ ವ್ಯಕ್ತವಾಗುತ್ತವೆ. ಜೊತೆಗೆ ಅವರ ಕಾವ್ಯಕಥೆಯ ಓದು. ಅದಕ್ಕೆ ಕಳಸವಿಟ್ಟಂತೆ. ಗುಡೂರ್ ಅವರ ಕವನ ವಾಚನಡಾ ವಿಡಿಯೋ ಚೊಕ್ಕವಾಗಿದೆ. ದಾಕ್ಷಾಯಣಿಯವರು ಎಷ್ಟು ಎಫರ್ಟಿಲ್ಲದೆ ಮತ್ತು ಎಂಜಾಯ್ ಮಾಡುತ್ತಾ ಹಾಡುತ್ತಾರೆ! ಮೇಟಿಯವರು ಅನಿವಾಸಿಯಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುತ್ತಾರೆ. ನೀವು ಮತ್ತೆ ಮತ್ತೆ ಭೇಟಿ ಕೊಡಬೇಕು ಸಾರ್. ನಿಮ್ಮ ಹಾಡುಗಳು ಮತ್ತು ಬೇರೆ ಬರಹದಂತ ಕ್ರಿಯೇಟಿವಿಟಿಯೂ ಪ್ರಸ್ತುತಿಯಾಗಲಿ ನಿಮ್ಮಿಂದ. ಇವೆಲ್ಲವಕ್ಕೆ ಸೂತ್ರಧಾರಿಯಾಗಿ -ವೈಯಕ್ತಿಕ ಅಡಚಣೆಗಳನ್ನೂ ಮೀರಿ – ಕೆಲಸಮಾಡಿದ ಅಮಿತಾ ರವಿಕಿರಣ ಅವರ ಪ್ರಯತ್ನ ನಿರಂತರವಾಗಿ ಹಿನ್ನೆಲೆಯಲ್ಲಿರುವುದರಿಂದಲೇ ಅವರ ಸಂಪಾದಕೀಯ ಅವಧಿ ಯಶಸ್ವಿಯಾಗಿದೆಯೆನ್ನಬಹುದು. ಪ್ರತಿಯೊಂದು ಸಂಚಿಕೆಯಲ್ಲೂ ಅವರ ಛಾಪು ಸಂಪಾದಕರ ‘ನಾಲ್ಕು’ಮಾತುಗಳ’ಲ್ಲಷ್ಟೇ ಕಾಣುತ್ತಿಲ್ಲ ಎಲ ಕಡೆಗೂ. ಹೊಸಬರನ್ನು ಪರಿಚಯಿಸುವುದು ಸುಲಭದ ಕಾರ್ಯವಲ್ಲ, ಅದು ಅವರ ವ್ಯಕ್ತಿತ್ವದ ದ್ಯೋತಕವೂ ಅಹುದು. ಬರಿ ಪರಿಚಯ ಇದ್ದ ಮಾತ್ರಕ್ಕೆ ಲೇಖನ-ಗಾಯನ- ಪದ್ಯ- ಚಿತ್ರ ಅವತರಿಸುವದಿಲ್ಲ. ಬೆನ್ನು ಚಪ್ಪರಿಸಿ, ಪುಸಲಾಯಿಸಿ ‘ಹಿಂಡಬೇಕಾಗುತ್ತದೆ’ , ಹಾಲನ್ನು ಕರೆದಂತೆ! ಹತ್ತಿರದಿಂದ ನೋಡಿದ ನಾನದನ್ನು ಬಲ್ಲೆ! ಅವರಿಗೂ ಅಭಿನಂದನೆಗಳು!
LikeLike
ಹಿಂದೂ ಎನ್ನುವುದು ಮಾತ್ರ ವೇ ಪವಿತ್ರವಾದರೆ ನನ್ನಲ್ಲಿ ಹಿಂದೂವಿನ ಯಾವ ಲಕ್ಷಣಗಳೂ ಇಲ್ಲ. ಗಂಗೆ ಮಾತ್ರ ಪುಣ್ಯ ನದಿಯಾದರೆ, ಮಲೆನಾಡಿನ ನನ್ನ ತುಂಗೆ ಯಾಕಲ್ಲ? ಗೋವಿನ ವಧೆ ಮಾತ್ರ ಪಾಪವಾದರೆ ಮಿಕ್ಕ ಪ್ರಾಣಿಗಳು ಮಾಡಿದ ತಪ್ಪೇನು?
ಎಂದು ಪ್ರಶ್ನಿಸಿ ಆ ಕಾಲದಲ್ಲೇ ಸಮನ್ವಯತೆಯ ತತ್ವಗಳನ್ನು ಸಾರಿ ವಿಶ್ವ ಮಾನವರಾಗಿ ಕನ್ನಡನಾಡಿನ ಹೆಮ್ಮೆಯನ್ನು ಜಗದಗಲ ಸಾರಿದ ಕವಿ ಕುವೆಂಪು.
ಗೌರಿಯವರು ಬರೆದಿರುವಂತೆ ಆ ಕಾಲದಲ್ಲೇ ಎಲ್ಲ ವೈರುಧ್ಯಗಳನ್ನು ಮೆಟ್ಟಿನಿಂತು ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ವಿದ್ವತ್ತನ್ನು ಸಾಧಿಸಿ, ಜಗತ್ತಿನ ಎಲ್ಲ ವಿಚಾರಗಳಲ್ಲಿ ಸೌಂದರ್ಯವನ್ನು, ದೈವಾಂಶವನ್ನು ಕಂಡಂತ ಹಿರಿಯ ಚೇತನ.
ಲೇಖನ- ವಾಚನ ಎರಡನ್ನೂ ಮಾಡಿ ಗೌರಿಯವರು ತಮ್ಮ ಮನದಾಳದ ಗೌರವವನ್ನು ವ್ಯಕ್ತ ಪಡಿಸಿದ್ದಾರೆ.
ಲೇಖನ ಕುವೆಂಪುರ ಪರಿಪೂರ್ಣ ಪರಿಚಯವನ್ನು ಸಂಕ್ಷಿಪ್ತವಾಗಿ ಮಾಡಿಕೊಡುತ್ತದೆ.
ಶಿವಕುಮಾರ ಮೇಟಿ ಯವರ ಗಾಯನ ಪ್ರತಿಭೆಯ ಪೂರ್ಣ ಅನಾವರಣ ಅವರ ಹಾಡಿನಲ್ಲಿ ಕಂಡುಬಂದಿದೆ.
ಕುವೆಂಪು ಅವರ ಮತ್ತೊಂದು ಹಾಡು ದಾಕ್ಷ ಅವರ ಕಂಠದಲ್ಲೇ ನನಗೆ ಮೊದಲ ಪರಿಚಯವಾದದ್ದು. ಬಹಳ ಅರ್ಥಪೂರ್ಣ ಹಾಡಿದು.
ಗೂಡೂರರ ವಾಚನಗಳೂ ಸುಂದರವಾಗಿವೆ.
ಕುವೆಂಪು ರ ಬರಹಗಳ ಸೌಂದರ್ಯ ವೇ ಎಲ್ಲರಲ್ಲೂ ಈ ಬಗೆಯ ತಲ್ಲೀನತೆಯನ್ನು ನೀಡಿದೆ ಎನ್ನುವುದು ಚೆನ್ನಾಗಿ ವೇದ್ಯವಾಗುತ್ತದೆ.
ಅಮಿತಾರಿಗೆ ಈ ಸಂಚಿಕೆಗಾಗಿ ವಿಶೇಷ ಅಭಿನಂದನೆಗಳು💐💐💐💐🙏
LikeLiked by 1 person
very humble, respectful and loving tributes to a great soul, thinker, poet and author.
A thoughtful work by the editor and the responding members. A fitting end to the year.
Wishing all anivaasi readers a happy beginning to the year 2022
Murali
LikeLike