ಇಂಗ್ಲಂಡ್ ಕನ್ನಡಿಗರ ಕವಿಗೋಷ್ಠಿ – ಕನ್ನಡಪ್ರೆಸ್ ರಾಜ್ಯೋತ್ಸವ ವಿಶೇಷ ೨೦೨೦

ಅನಿವಾಸಿಯ ವಾಟ್ಸಾಪ್ ಗುಂಪಿನಲ್ಲಿ ಪ್ರೇಮಲತ ಅವರು ಹಾಕಿದ ಅಹ್ವಾನವನ್ನು ಸ್ವೀಕರಿಸಿ ಮುಂದೆ ಬಂದ ನಮ್ಮ ಐವರು ಉತ್ಸಾಹಿ ಕವಿ / ಕವಯತ್ರಿಯರು ಬರೆದ ಕವಿತೆಗಳಿವು. ವಿಡಿಯೊದಲ್ಲಿ ಇರುವ ಕ್ರಮದಲ್ಲಿಯೇ ಇವೆ; ಕೆಲವಕ್ಕೆ ಅವರೇ ಬರೆದಿರುವ ಮುನ್ನುಡಿಗಳಿವೆ. ಅನಿವಾಸಿ ಕವಿಗಳ ಕನ್ನಡ ನಾಡು, ನುಡಿಯ ಪ್ರೇಮವನ್ನು ಮೆರೆಯುವ ಈ ರಚನೆಗಳನ್ನು ಓದಿ, ಕೇಳಿ (ಯೂಟ್ಯೂಬ್ ಲಿಂಕ್ ಕೊನೆಯಲ್ಲಿದೆ) ನೋಡಿ ಆನಂದಿಸಿ. – ಎಲ್ಲೆನ್ ಗುಡೂರ್ (ಸಂ.)

ಮುನ್ನುಡಿ:

ಈ ಬಾರಿಯ ಕನ್ನಡ ರಾಜ್ಯೋತ್ಸವ, ಕೆ.ಎಸ್.ಎಸ್.ವಿ.ವಿ. ಯ ಐವರು ಕವಿಗಳಿಗೆ ತಮ್ಮ ಸ್ವರಚಿತ ಕನನಗಳನ್ನು ವಾಚಿಸಲು ಒಂದು ವಿಶೇಷ  ಅವಕಾಶವನ್ನು ಹೊತ್ತು ತಂದಿತು.

ಈ ವರ್ಷದಲ್ಲೇ ಆರಂಭವಾದ ಕನ್ನಡಪ್ರೆಸ್.ಕಾಂ ಎನ್ನುವ ಅಂತರ್ಜಾಲಜಗಲಿಯ ಪ್ರಧಾನ ಸಂಪಾದಕರಾದ ಶ್ರೀವತ್ಸ ನಾಡಿಗರು ಇಂಗ್ಲೆಂಡಿನ ಅನಿವಾಸಿ ಕನ್ನಡ ಕವಿಗಳಿಂದ ಒಂದು ಕವಿಗೋಷ್ಠಿಯನ್ನು ಮಾಡಬಹುದಲ್ಲವೇ? – ಎಂಬ ಹೊಳಹನ್ನು ನೀಡಿದ್ದೇ ಇದಕ್ಕೆ ನಾಂದಿಯಾಯಿತು.

ಕವಿಗೋಷ್ಠಿಯನ್ನು ವರ್ಚುಯಲ್ ವೇದಿಕೆ-ವೀಡಿಯೋ ಪಾಡ್ ಕಾಸ್ಟ್ ಮೂಲಕ ಮಾಡಬಹುದೆಂದೂ, ಅವರವರ ಕವನವನ್ನು ವಾಚಿಸುವ ವೀಡೀಯೋಗಳನ್ನು ನೀಡಿದರೆ ಸಾಕೆಂದೂ ಅವರು ಹೇಳಿದರು. ಈ ಸಾಧ್ಯತೆಯನ್ನು ಅನಿವಾಸಿಯ ಕವಿಗಳ ಮುಂದಿಟ್ಟಾಗ ಸವಿತಾ ಸುರೇಶ್, ರಾಮ ಶರಣ್, ರಾಧಿಕ, ಕೇಶವ ಕುಲಕರ್ಣಿ ಮತ್ತು ಶ್ರೀವತ್ಸ ದೇಸಾಯಿಯವರು ಇದಕ್ಕೆ ಒಪ್ಪಿದರು. ಈ ಐಡಿಯಾವನ್ನು ಕವಿಗಳ ಮುಂದಿಟ್ಟಿದ್ದು 24 ಅಕ್ಟೋಬರಿನಂದು. 5000 ಮೈಲು ದೂರದ ಐವರು ಕವಿಗಳು ಕವನಗಳನ್ನು ಬರೆದು, ಓದಿ, ವಿಡೀಯೋ ಮಾಡಿ ಕಳಿಸಲು ತಗೊಂಡ ಕಾಲ ಕೇವಲ 3-4 ದಿನಗಳು ಮಾತ್ರ! ಅವುಗಳನ್ನು ನಿರೂಪಣೆಯನ್ನೂ ಸೇರಿಸಿ, ಒಂದಿಷ್ಟೂ ತಪ್ಪಿಲ್ಲದಂತೆ ಪ್ರಬುದ್ಧವಾದ ಕವಿಗೋಷ್ಠಿಯ ಹದಕ್ಕೆ ಜೋಡಿಸಿದ್ದು ಸುಧಾಕರ್ ದರ್ಬೆಯವರು. ಇವರು ಕನ್ನಡಪ್ರಭದ ಮುಖ್ಯ ಇಲ್ಲಸ್ಟ್ರೇಷನ್ ಕಲಾವಿದರು. ಮುನ್ನೂರಕ್ಕೂ ಹೆಚ್ಚು ಪುಸ್ತಕಗಳ ಮುಖ ಪುಟ ವಿನ್ಯಾಸ ಮಾಡಿದವರು. ಮುಖ್ಯ ಮಂತ್ರಿಗಳಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಇತ್ಯಾದಿ ಹಲವು ಪ್ರಶಸ್ತಿಗಳಿಗೆ ಭಾಜನರಾದವರು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ, ಕರ್ನಾಟಕಕ್ಕೂ – ಇಂಗ್ಲೆಂಡಿನ ಕನ್ನಡ ಕವಿಗಳಿಗೂ ಸಂಬಂಧಸೇತುವನ್ನು ನಿರ್ಮಿಸಿದ ಶ್ರೀವತ್ಸ ನಾಡಿಗರು ಎರಡೂ ಕಡೆಗಳಿಂದ ಓದುಗರ ಮತ್ತು ಕೇಳುಗರ ಮೆಚ್ಚುಗೆಗೆ ಪಾತ್ರರಾದರು. ಭಾಗವಹಿಸಿದ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ವಿಶೇಷ ಸಂಭ್ರಮವನ್ನು ತುಂಬಿದರು.

ಈ ಕವಿಗೋಷ್ಠಿಯ ಕಾರಣ  ಶ್ರೀವತ್ಸ ನಾಡಿಗರು ಮತ್ತು ಕೇಶವ ಕುಲಕರ್ಣಿಯವರು ದೂರದ ಸಂಬಂಧಿಗಳು ಎನ್ನುವ ವಿಚಾರವೂ ತಿಳಿದು ಬಂದಿದ್ದು ಮತ್ತೊಂದು ವಿಶೇಷಕ್ಕೂ ನಾಂದಿ ಹಾಡಿ ಎಲ್ಲರಿಗೂ ಮುದನೀಡಿದ ವಿಚಾರವಾಯಿತು.

– ಡಾ.ಪ್ರೇಮಲತ ಬಿ.

*******************************************************************

 ನಾನು ಮತ್ತು ನನ್ನ ಭಾಷೆ - ಕೇಶವ ಕುಲಕರ್ಣಿ

 ಇಂಗ್ಲಂಡಿನಲ್ಲಿರುವ ನಾನಿರುವ ಊರಿನ poetry clubನಲ್ಲಿ
 ನಾನು ಅನುವಾದಿಸಿ ಓದುವ ಕವಿತೆಯ ಭಾಷೆ 'ಕನ್ನಡ' ಎಂದೆ
 'I didn't know you are from Canada,' ಎಂದು ನಿರೂಪಕ
 ನನ್ನ ಕಂದು ಮೈಬಣ್ಣವನ್ನು ಓರೆಗಣ್ಣಿಂದ ನೋಡುತ್ತಾನೆ
 
 ನಾನು ಕೆಲಸ ಮಾಡುವ ಇಂಗ್ಲಂಡಿನ ಆಸ್ಪತ್ರೆಯಲ್ಲಿ
 ಭಾರತೀಯ ಮೂಲದ ವಯಸ್ಸಾದ ರೋಗಿಗಳಿಗೆ 
 'ನಿಮ್ಮ ಪಂಜಾಬಿ ಉರ್ದು ಹಿಂದಿ ನನಗೆ ಅರ್ಥವಾಗುವುದಿಲ್ಲ,' ಎಂದರೆ
 'ನೀನ್ಯಾವ ಸೀಮೆಯ ಭಾರತೀಯ!' ಎಂದು ಗೇಲಿ ಮಾಡುತ್ತಾರೆ
 
 ಇಂಗ್ಲಂಡಿನ ಅಖಿಲ ಭಾರತೀಯ ಸಮಾರಂಭವೊಂದರಲ್ಲಿ
 ಹಿಂದಿ ಪಂಜಾಬಿ‌ ಬೆಂಗಾಲಿ ಹಾಡುಗಾರರ ನಡುವೆ
 ನಾನೊಂದು ಕನ್ನಡದ ಭಾವಗೀತೆಯನ್ನು ಹಾಡುತ್ತೇನೆ
 'What a lovely Tamil song!' ಎಂದು‌ ಡಿಜೆ ಬೆನ್ನು ತಟ್ಟುತ್ತಾನೆ
 
 ಇಂಗ್ಲೀಷಿನಲ್ಲಿ ಬ್ಲಾಗಿಸುವ ನನ್ನ ಕಸಿನ್ ಮನೆಗೆ ಬೆಂಗಳೂರಿಗೆ ಹೋದಾಗ, 
 'ನೀನೇಕೆ ಕನ್ನಡದಲ್ಲೂ ಬರೆಯುವುದಿಲ್ಲ?' ಎಂದು ಕೇಳಿದರೆ ಆತ ನನ್ನನ್ನೇ ಕೇಳುತ್ತಾನೆ:
 ಇಂಗ್ಲಂಡಿನಲ್ಲಿದ್ದೂ ನೀನ್ಯಾಕೆ ಇನ್ನೂ ಕನ್ನಡದಲ್ಲಿ ಬರೆಯುತ್ತೀಯ?
 ನಿನ್ನ ಮಗಳಿಗಾಗಲಿ ನನ್ನ ಮಗನಿಗಾಗಲಿ ಕನ್ನಡ ಓದಲು ಬರುತ್ತದೆಯೆ?'
 
(ಇದೊಂದು ಗಪದ್ಯ)  
*******************************************************
ದುಂಡು ಮಲ್ಲಿಗೆ ಬರುವೆಯಾ ಇಲ್ಲಿಗೆ - ರಾಧಿಕಾ ಜೋಶಿ

ಮಲ್ಲಿಗೆಯ ಋತುವಿನಲ್ಲಿ ಹಾಗು ಹಬ್ಬಗಳ ಸಮಯದಲ್ಲಿ ಮಲ್ಲಿಗೆಯ ಊರು ಮೈಸೂರಿನವಳಾದ ನಾನು ಅದನ್ನು ಬಹಳ ಹಂಬಲಿಸುತ್ತೇನೆ. ಸುಮಾರು ೩ ವರ್ಷಗಳಿಂದ ಬೆಳೆಸಲು ಪ್ರಯತ್ನಿಸುತ್ತಿದ್ದೇನೆ. ನನ್ನ ದುರಾದೃಷ್ಟ, ಗಿಡ ಒಣಗಿ ಹೋಗುತ್ತಿದೆ. ನನ್ನ ತಂದೆ ತಾಯಿಯೊಡನೆ ದಿನ ಪೇಟೆಗೆ ಹೋಗಿ ಹೂವು ಹಣ್ಣು ಕಾಯಿಪಲ್ಯೆ ತರುವ ಆಚರಣೆ. ಒಬ್ಬ ಹೂವಾಡಗಿತ್ತಿ ನಮಗೆ ಮುಖ ಪರಿಚಯ. ಬಹಳ ಶಾಂತ ಹಾಗು ಹಸನ್ಮುಖಿ ಆಗಿದ್ದ ಅವರ ಮುಖ ಇನ್ನು ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಸರಸರನೆ ಮಲ್ಲಿಗೆ ಕಟ್ಟುವ ಅವರ ಕೈಚಾತುರ್ಯ ನನ್ನನ್ನು ಯಾವಾಗಲು ಮಂತ್ರಮುಗ್ಧಳನ್ನಾಗಿ ಮಾಡುತ್ತಿತ್ತು. ನನಗೆ ಯಾವಾಗಲು ಅಂಗೈ ಉದ್ದದ ಮಲ್ಲಿಗೆ ಮಾಲೆ ಉಚಿತವಾಗಿ ಕೊಡುತ್ತಿದ್ದರು,”ತೊಗೋ ಪುಟ್ಟಿ ಹೂ, ನಿನಗೇ” ಅಂತ ಹೇಳಿ ಮುಗುಳ್ನಗುವರು. ಏನೋ ಒಂದು ಖುಷಿ. ಆ ಹೂವನ್ನು ಅಮ್ಮನಿಗೆ ಕೊಡದೇ ನಾನೇ ಹಿಡಿದುಕೊಂಡು ಬರ್ತಿದ್ದೆ. ನನಗೆ ಗುಲಾಬಿ ಸೇವಂತಿಗೆ ಇಷ್ಟವಾಗುತ್ತಿತ್ತು, ಆದರೆ ನನ್ನ ಜಿಜ್ಞಾಸೆ ಎಲ್ಲರೂ ಮಲ್ಲಿಗೆಯ ಬೆಲೆಯನ್ನು ಕೇಳಿ, ಕೊಳ್ಳುತ್ತಿದ್ದರು..

 ದುಂಡು ಮಲ್ಲಿಗೆ ಬರುವೆಯಾ ಇಲ್ಲಿಗೆ 
  
 ಗುಲಾಬಿ ಸೇವಂತಿ ರಾಶಿಯ ನಡುವೆಯೂ ಕಂಗೊಳಿಸುವ ಮಲ್ಲೆ
 ದಿನನಿತ್ಯ ಪೇಟೆಗೆ ಹೋಗುವ ಪುಟ್ಟಿಯ ಪ್ರಶ್ನೆ 
 ಬಣ್ಣಬಣ್ಣದ ಹೂವಿನ ನಡುವೆ ಎಲ್ಲರನು ಆಕರ್ಷಿಸುವುದು ಏಕೆ ಮಲ್ಲಿಗೆ
 ಗುಲಾಬಿಯ ವಿವಿಧ ಬಣ್ಣ ಇದಕಿಲ್ಲ, ಸೇವಂತಿಗೆಯಂತೆ ತಾಜಾತನ ಉಳಿಯುವುದಿಲ್ಲ 
 ಸಂಪಿಗೆಯ ಪ್ರಖರವಾದ ಸುವಾಸನೆ ಇಲ್ಲ, ಮತ್ತೇಕೆ ಬೇಡಿಕೆ ಈ ಹೂವಿಗೆ 
 ಮುಂಜಾನೆ ಬಂದಿಳಿಯಿತು ಶುಭ್ರ ಶ್ವೇತ ಮಲ್ಲಿಗೆ ರಾಶಿ ಬುಟ್ಟಿ
 ಹೂಗಾರ ಒಂದೆರಡು ಮಾರನ್ನು ಕೆಸುವಿನ ಎಲೆಯಲ್ಲಿ ಕಟ್ಟಿ 
 ಆಹ್ಲಾದಕರ ಬಿಡಿ ಮಲ್ಲಿಗೆಯೋ ಸುಂದರ ಸುರುಳಿ ರಾಶಿ ಮುತ್ತಿನ ಹಾರವೋ  
 ಪೋಣಿಸಿದ ಮೊಗ್ಗು ಲಲನೆಯ ಮುಡಿಯ ಜಡೆ ಮಲ್ಲಿಗೆಯ ಅಲಂಕಾರವೋ 
 ಹಬ್ಬವೋ ಮಹೋತ್ಸವವೋ ಕಳೆ ಹೆಚ್ಚಿಸುವ ಮಲ್ಲೆಯ ಮಾಲೆಯೋ  
  
 ಮನೆಯ ತುಂಬಾ ಮಲ್ಲಿಗೆಯ ಪರಿಮಳ 
 ಚಿಕ್ಕ ಮಕ್ಕಳು ಮೊಗ್ಗಿನ ಜಡೆಯ ಸಂಭ್ರಮದಲ್ಲಿ ತಳಮಳ 
 ಕಾಲ ಬೆಳೆದಂತೆ ಮಲ್ಲಿಗೆಯ ಮೇಲಿನ ಪ್ರೀತಿಯು ಬೆಳೆಯಿತು 
 ನಮ್ಮ ಮನೆಯಲ್ಲಿರು ದೇವರ ಕೋಣೆಯ ಚಿತ್ರಪಟದ ಮೇಲೆ 
 ಅಂಬಾರಿಯ ಚಾಮುಂಡೇಶ್ವರಿಯ ಮೂರ್ತಿಯ ಮೇಲೆ
 ಕಂಗೊಳಿಸುವ ಈ ಸರಳ ಸೂಕ್ಷ್ಮ ಹೂ ಮುತ್ತು 
 ಸಾಮಾನ್ಯ ದಿನವನ್ನು ವಿಶೇಷ ಮಾಡಿತ್ತು  
 ದೇಶ ಬಿಟ್ಟು ವಿದೇಶದ ನೆಲದಲ್ಲಿ 
 ತಂದೆ ತಾಯಿಯನ್ನು ಹಂಬಲಿಸುವಂತೆ 
 ಈ ಮುಗ್ಧ ಸುಗಂಧಿತ ಸುಂದರ ಹೂವನ್ನು 
 ಸದಾ ಹಂಬಲಿಸುತ್ತಾ ಈ ಭೂಮಿಯಲ್ಲಿ 
 ಈ ಹೂವನ್ನು ಬೆಳೆಸಲು ಸತತ ಪ್ರಯತ್ನದಲ್ಲಿ 
 ಕನ್ನಡ ನಾಡಿನಲ್ಲಿ ಎಲ್ಲರಿಗೆ ಸರಳವಾಗಿ ಸಿಗುವ ಸ್ವತ್ತು  
 ಆದರೆ ಇಲ್ಲಿ ಬೇಕೆಂದರೂ ಸಿಗದ ವಸ್ತು

***************************************************** 
ರಾಜ್ಯೋತ್ಸವ: ಸ್ವಗತ, ಹಾರೈಕೆ - ರಾಮಶರಣ ಲಕ್ಷ್ಮೀನಾರಾಯಣ
  
 ಉದಯವಾಯಿತು ಅಂದು ಚೆಲುವ ಕನ್ನಡ ನಾಡು
 ಕುಟ್ಟಿ ಮಾಡಿದೆವಿಂದು ಗುಡ್ಡ ಬೆಟ್ಟಗಳ ತೌಡು
 ದುರಾಸೆಗೆ ಬರಿದಾಯ್ತು ಜೀವ ಪೊರೆದಿಹ ಕಾಡು
 ಪ್ರವಾಹ ಭೂಕುಸಿತದಲಿ ಬಿಕ್ಕಿದೆ ಕಣ್ಣೀರ ಹಾಡು
  
 ಬಡಿದೆಬ್ಬಿಸಲು ಬಾರಿಸಿದರು ಕನ್ನಡದ ಡಿಂಡಿಮ
 ಒಂದಿಷ್ಟೂ ಇಲ್ಲ ತಾಳಕ್ಕೆ ಕುಣಿವ ಆ ಸಂಭ್ರಮ
 ಪರಭಾಷೆ  ಪರದೇಶಗಳೆಂಬ ಮೋಹದ ಮೋಡಿ
 ಹಳೆಭಾಷೆ ಸಂಸ್ಕೃತಿಯ ಅವನತಿಗೆ ಇದು ಹಾದಿ
  
 ಕವಿ ಕಂಡ ಸರ್ವರಿಗೂ ಶಾಂತಿಯ ತೋಟ
 ಆಗಬೇಕೆ ಬರಿ ಪುಸ್ತಕದ ಒಳಗಿನ ಪಾಠ?
 ಜಾತಿ, ಮತ, ಪಂಥದಲಿ ಚಿಂದಿ ಜರತಾರಿ
 ಚರ್ಚೆಗೆಲ್ಲಿದೆ ಹಾದಿ ಕಂಠಶೋಷಣೆ ಹೆದ್ದಾರಿ
  
 ಬನ್ನಿ ಬೆಳೆಸುತಲಿರುವ ಪರಿಸರದ ಹೆಮ್ಮುಡಿ
 ಜಲ, ಜೀವ, ತರು, ಲತೆ, ಭವಿತವ್ಯಕೆ ಕುಡಿ.
 ಬನ್ನಿ ಹಚ್ಚುತಲಿರುವ ಭಾಷೆ, ಸಂಸ್ಕೃತಿಯ ಕಿಡಿ
 ಮೂಡಿಸಲು ಹೊಸ ಜೀವಗಳಲೆಮ್ಮ ನಲು ನುಡಿ
  
 ಬನ್ನಿ ಕಟ್ಟೋಣ ಶಾಂತಿ- ಸಮನ್ವಯಗಳ ಗುಡಿ
 ಅದುವೆ ಕನ್ನಡನಾಡು ಆದರ್ಶದ ಕೈಪಿಡಿ 

****************************************************

 ಹೊನ್ನುಡಿ  - ಸವಿತ ಸುರೇಶ್  
  
 ಪ್ರಜ್ವಲಿಸಲಿ  ಎಲ್ಲೆಲ್ಲೂ  ಕನ್ನಡದ  ಪ್ರಜ್ಯೋತಿ
 ತಾಯೊಲ್ಮೆಯ ಸಿರಿಸೊಡರಿಗೆ  ಅಭಿಮಾನವೇ  ಪ್ರಗತಿ
  
 ಕನ್ನಡ  ನುಡಿಗೆ ಶಕ್ತಿ ನೀಡಲಿ ನಿಷ್ಠೆತೈಲ ಭತ್ತದಂತೆ
 ಝಗಝಗನೇ ಉರಿಯುತಿರಲಿ ಛಲದ ಬತ್ತಿ ಆರದಂತೆ
  
 ಮಿಡಿಯುತಿರಲಿ  ಕನ್ನಡಕ್ಕೆ ಕನ್ನಡಿಗರ ಹೃದಯ 
 ಕನ್ನಡ ನೆಲದಿ ಕನ್ನಡವೇ ಸದಾ ಅಗ್ರಮಾನ್ಯ
  
 ಕನ್ನಡಾಂಬೆಯ ಪಾದಕೆ ಹೊನ್ನುಡಿಯಾರ್ಚನೆ
 ನಿರಂತರ ಕನ್ನಡಿಸಲಿ ಕನ್ನಡ ನಿತ್ಯಾರಾಧನೆ
  
***************************************************

ಅಲ್ಲಿಯೂ ಸಲ್ಲುವುದು! – ಶ್ರೀವತ್ಸ ದೇಸಾಯಿ

ಕನ್ನಡ ಪ್ರೆಸ್ ನ ಶ್ರೀವತ್ಸ ನಾಡಿಗ್ ಅವರು ಯು ಕೆ ಕನ್ನಡಿಗರಿಗೆ ರಾಜ್ಯೋತ್ಸವಕ್ಕಾಗಿ ಕವನಗಳನ್ನು ಆಹ್ವಾನಿಸಿದಾಗ ಬಂದ ಯೋಚನೆಗಳಿವು. ಅನಿವಾಸಿಯಾಗಿ ಇಂಗ್ಲೆಂಡಿನಲ್ಲಿ ಕಳೆದ ಹೆಚ್ಚು ಕಡಿಮೆ ಅರ್ಧ ಶತಮಾನ ಬದುಕಿನ ಸಿಂಹಾವಲೋಕನ ಮಾಡುತ್ತ  ಒಬ್ಬ ಕನ್ನಡಿಗನಾಗಿ ನನ್ನ ಅಸ್ಮಿತೆ ಮತ್ತು ಅಸ್ತಿತ್ವದ ಬಗ್ಗೆ (identity) ಯೋಚಿಸುತ್ತ ಬರೆದ ಸಾಲುಗಳಿವು. ಹುಟ್ಟಿದಾಗಿನಿಂದ ಬದುಕಿರುವ ತನಕ ಕನ್ನಡ ಕೈಹಿಡಿದಂತೆ ನಂತರವೂ ಕೈಬಿಡಲಾರದೆಂಬ ಆಶಯ, ಹಂಬಲ! ಇಲ್ಲಿ ಸಲ್ಲಿದ ಭಾಷೆ ಅಲ್ಲಿಯೂ ಸಲ್ಲುವುದೇ? – ಶ್ರೀ ದೇ. (ಕವಿತೆಯನ್ನು ಓದಿ, ಪರಿಷ್ಕರಿಸಿದ ಕೇಶವ ಕುಲ್ಕರ್ಣಿಯವರಿಗೆ ವಂದನೆಗಳನ್ನು ಅರ್ಪಿಸುತ್ತ…)

 ಅಲ್ಲಿಯೂ ಸಲ್ಲುವುದು! 
  
 ನಾನು ಅನಿವಾಸಿಯಾದರೇನು
 ನನ್ನ ಉಸಿರು ಕನ್ನಡ ಎಂಬ ಮಾತು ಹುಸಿಯೇ?
 ಮೊಲೆಹಾಲಿನೊಡನೆ ಕುಡಿದದ್ದು ಕನ್ನಡ
 ನನ್ನೆದೆಯ ಮಿಡಿತವೂ ನನ್ನ ನಾಡಿಯ ತುಡಿತವೂ
 ಕನ್ನಡ ಕನ್ನಡ ಎಂಬ ಅನುಭವ ಸುಳ್ಳೇ?
 
 ಇಲ್ಲಿ ಲೇಕ್ ಡಿಸ್ಟ್ರಿಕ್ಟ್ ನ ವಿಂಡಮಿಯರಿನ ಕೆರೆಯ ಸುಳಿಗಾಳಿಯಲ್ಲಿ
 ನನ್ನ ಕಿವಿಯಲ್ಲಿ ಅದೇ ಗುಂಜನ 
 ಯಾರೋ ಕರೆದಂತೆ, `ಬಾರೋ ಸಾಧನಕೇರಿಗೆ!`
 ಪೀಕ್ ಡಿಸ್ಟ್ರಿಕ್ಕಿನ ಗುಡ್ಡ ಕಣಿವೆಗಳಲ್ಲಿ ಕೇಳುತಿದೆ
 ಅತ್ತಿಕೊಳ್ಳದ ಶಾಲ್ಮಲೆಯ ಮಂಜುಳ ಜುಳು ಜುಳು ನಗೆ!
 
 ಯಾರ್ಕ್ ಶೈರಿನ ಅತಿವೃಷ್ಟಿಯ ಮಹಾಪೂರ
 ಕೊಂಡೊಯ್ತು ನಾ ಹುಟ್ಟಿದ ಮನೆಯ ಸಪ್ತಾಪುರಕ್ಕೆ
 ನಮ್ಮ ಮನೆಯ ಜಾಗದಲ್ಲಿರುವುದೀಗ ಡೂಪ್ಲೆಕ್ಸ್ ಕಾಂಪ್ಲೆಕ್ಸುಗಳು
 ಹೊಸ ಮಾಲಕರು ಕರೆದು ತೋರಿಸಿದರು ಡೌಲಾಗಿ
 ತಮ್ಮ “ಪೋಶ್” ಮಾರ್ಬಲ್ ಸ್ಟಡಿಯನ್ನು
 ನನಗೆ ಕಂಡುದು ನಾ ಹುಟ್ಟಿದ ಬಾಣಂತಿ ಖೋಲಿ
 ಅವ್ವನ ತೊಡೆಯಮೇಲೆ ಪವಡಿಸಿದ ನವಜಾತ ಶಿಶು – ನಾನು!
 
 ಲಗ್ನವಾದೊಡನೆ ಈ ಚಳಿನಾಡಿಗೆ ವಲಸೆ ಬಂದಾಗ
 ಬೆಚ್ಚಗಿರಲು ನಾ ಹೊದ್ದುಕೊಂಡು ಬಂದುದು ಮಾತೃಭಾಷೆ ಮಾತ್ರ
 ಅದನ್ನು ಕಳೆದರೆ ನಾನು ನಗ್ನ!
 ಈಗ ವಯಸ್ಸಾಗುತ್ತಿದೆ--
 'ಬಾಹತ್ತರ` ದಾಟಿದ ಮೇಲೆ ಸ್ವರ್ಗ ಹತ್ತಿರವಲ್ಲವೆ?
 ’ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’
 ಅದಕ್ಕೆ ಇನ್ನೊಂದು ಪದ ಜೋಡಿಸುವೆ `ಮಾತೃಭಾಷಾ ಚ`!
 ಸತ್ತ ಮೇಲೆ ಸ್ವರ್ಗವೋ ನರಕವೋ
 ಅಲ್ಲಿಯ ಭಾಷೆ ಕನ್ನಡವಾದರೆ ಸಾಕು
 ಭಾಷೆ ಕನ್ನಡವಾದರೆ ನರಕವೂ ಸ್ವರ್ಗ! 

************************************************

4 thoughts on “ಇಂಗ್ಲಂಡ್ ಕನ್ನಡಿಗರ ಕವಿಗೋಷ್ಠಿ – ಕನ್ನಡಪ್ರೆಸ್ ರಾಜ್ಯೋತ್ಸವ ವಿಶೇಷ ೨೦೨೦

  1. ಪ್ರೇಮಲತಾ ಅವರು ಹುರಿದುಂಬಿಸದಿದ್ದರೆ ಈ ಕವನಗಳು ಹುಟ್ಟುತ್ತಿರಲಿಲ್ಲ. ನಾಡಿಗ್ ಅವರು ಕರೆಗೊಡದಿದ್ದರೆ ಪ್ರೇಮಲತಾ ನಮಗೆ ಹೇಳುತ್ತಿರಲಿಲ್ಲ. ಪ್ರೇಮಲತಾ ನಮ್ಮನ್ನೆಲ್ಲ ಒಟ್ಟುಗೂಡಿಸದಿದ್ದರೆ ಇವತ್ತಿನ ಪುಟ ಗುಡೂರ್ ಅವರಿಗೆ ಸಿಗುತ್ತಿರಲಿಲ್ಲ. ಕೋವಿಡ್ ಸಮಯದಲ್ಲಿ ನಾವೆಲ್ಲ ನಮ್ಮ ನಮ್ಮ ಮನೆಗಳಲ್ಲಿ ಬಂಧಿ. ಆದರೂ ಕನ್ನಡದ ಕರೆ ಎಲ್ಲಿಂದಲೋ ಶುರುವಾಗಿ ಇನ್ನೆಲ್ಲೋ ತಲುಪುವ ಪ್ರೀತಿಗೆ ಏನನ್ನಬೇಕು? ರಾಧಿಕಾ ಅವರ ಮಲ್ಲಿಗೆಯ ತುಂಬ ಕನ್ನಡದ ಘಮಘಮ. ಕನ್ನಡದ ಪ್ರಸಿದ್ಧ ಕನ್ನಡ ಕವನಗಳ ಸಾಲನ್ನೇ ಹಿಡಿದು ಬರೆದಿರುವ ರಾಮಶರಣರ ಕವನ ಇಂದಿನ ಸ್ಥಿತಿಗೆ ಕನ್ನಡಿ. ಸವಿತಾ ಅವರ ಕನ್ನಡ ಪ್ರೀತಿ ಪ್ರತಿ ಪದಗಳಲ್ಲೂ ಉಕ್ಕುತ್ತದೆ. ದೇಸಾಯಿಯವರ ಸ್ವಗತ ಎಲ್ಲ ಅನಿವಾಸಿಗಳ ಆತ್ಮಕತೆಯಂತಿದೆ. – ಕೇಶವ

    Like

    • ಕೇಶವ ಆ ಸಾಲಿನಲ್ಲಿ ನಿಮ್ಮದು ಬಿಟ್ಟುಹೋಗಿದೆ. Naturally ! ನಿಮ್ಮ ಮೂರೂ ಅನುಭವಗಳು ಶಂಬರ್ ಟಕ್ಕೆ ಸತ್ಯ, (ಇನ್ನೊಂದು ಭಾಷೆಯ ಮೇಲೆ ಆನಿಕೊಂಡೆ!) ಸುಂದರವಾಗಿ ಬರೆದಿದ್ದೀರಿ ಆ ಅನುಭವಗಳನ್ನು.
      ಶ್ರೀವತ್ಸ ದೇಸಾಯಿ

      Like

    • ಇದೊಂದು ಚಿಕ್ಕ ಚೊಕ್ಕ ವೇಗವಾಗಿ ನಡೆದ ಪಕ್ವವಾಗಿ ಮೂಡಿದ ಕವಿಗೋಷ್ಠಿ.
      3-4 ದಿನಗಳಲ್ಲಿ ಕನ್ನಡ ನಾಡಿನ ಬಗ್ಗೆ ಹಿಗ್ಗಿನಿಂದ ಬರೆದು ಉತ್ಸಾಹದಿಂದ ಪಾಲ್ಗೊಂಡ ಕವಿಗಳನ್ನು ಎಷ್ಟು ಮೆಚ್ಚಿ ಕೊಂಡರು ಕಡಿಮೆಯೇ.ಒಂದಕ್ಕಿಂತ ಒಂದು ಭಿನ್ನ ಬಗೆಯ ಕವನಗಳನ್ನು ಕೇಳುವಾಗ ಎಲ್ಲಿಯೂ ಬೇಸರವೆನಿಸುವುದಿಲ್ಲ.
      ಸದ್ದೇ ಇಲ್ಲದೆ ಹಿಗ್ಗಿನಿಂದ ನಡೆದ ಈ ಕಾರ್ಯಕ್ರಮವನ್ನು ಸಾರ್ಥಕವಾಗಿಸಿದ್ದು ಸುಧಾಕರ್ ದರ್ಬೆಯವರ ಸಂಕಲನದಿಂದ. ಶ್ರೀವತ್ಸ ನಾಡಿಗರು ಇದಕ್ಕೆ ಅವಕಾಶ ಮಾಡಿಕೊಟ್ಟು ಅನಿವಾಸಿ ಕನ್ನಡಿಗರ ಸ್ವದೇಶಿತನವನ್ನು ಸಾರ್ಥಕ ಗೊಳಿಸಿದ್ದು 2020 ರ ಕನ್ನಡ ರಾಜ್ಯೋತ್ಸವ ನನ್ನು ವಿಶೇಷ.ಅದಕ್ಕೊಂದು ಸಣ್ಣ ಕೊಂಡಿಯಾಗುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ 🙏🙏💐

      Liked by 1 person

Leave a comment

This site uses Akismet to reduce spam. Learn how your comment data is processed.