‘ಥಟ್ ಅಂತ ಹೇಳಿ‘ – ಅಂತಿಮ ಹಣಾಹಣಿ — ಕೇಶವ ಕುಲಕರ್ಣಿ ಬರೆದ ಲೇಖನ

ಪ್ರಿಯ ಓದುಗರೆ, ನೀವು‘ ಅನಿವಾಸಿ ಬಳಗ‘ದ ಸದಸ್ಯರು ಭಾಗವಹಿಸಿ ಬರೆದ “ಥಟ್ ಅಂತ ಹೇಳಿ“ ಕಾರ್ಯಕ್ರಮದ ಮೊದಲ ಎರಡು ಕಂತುಗಳನ್ನು ಓದಿರುತ್ತೀರಿ ಮತ್ತು ನಿಮ್ಮಲ್ಲಿ ಬಹಳಷ್ಟು ಜನ ಕಾರ್ಯಕ್ರಮವನ್ನು ನೋಡಿಯೂ ಇರುತ್ತೀರಿ. ಮೂರನೆಯ ಮತ್ತು ಅಂತಿಮ ಸುತ್ತಿನ ಕಾರ್ಯಕ್ರಮದ ವರದಿಯನ್ನು ಅದರಲ್ಲಿ ಭಾಗವಹಿಸಿದ ಡಾ. ಕೇಶವ ಕುಲಕರ್ಣಿ, ಅದು ನಡೆದ ಬಗೆ, ಆಂಗ್ಲನಾಡಿಗೆ ಕರುನಾಡಿನಿಂದ ಪಯಣಿಸಿದ ರೀತಿ, ಪ್ರೇಕ್ಷಕರ ಮನ ಗೆದ್ದ ಅಶುಕವಿತೆಯ ವಿವರದ ಜೊತೆಗೆ ಹಾಸ್ಯದ ಮೆರುಗನ್ನು ಸೇರಿಸಿ ಬರೆದಿದ್ದಾರೆ ಮತ್ತು ಹಿಂದಿನ ಕಾರ್ಯಕ್ರಮಗಳನ್ನು ನೋಡುವ ಅವಕಾಶವನ್ನೂ ಸಹ ನಮ್ಮ ಮುಂದಿಟ್ಟಿದ್ದಾರೆ. ಈ ಕಾರ್ಯಕ್ರಮ ಗಮನಾರ್ಹ ಅಂಕೆಯಲ್ಲಿ ಕನ್ನಡಿಗರನ್ನು ತಲುಪಿ ಯಶಸ್ವಿಯಾಗಿದೆ – (ದಾಕ್ಷಾಯಿಣಿ ಗೌಡ -ಸಂ)

ಕ್ವಿಜ಼್ ಮಾಸ್ತರ್ (ಮಾಸ್ಟರ್) ಡಾ. ನಾ ಸೋಮೇಶ್ವರ:  

ಡಾ. ನಾ ಸೋಮೇಶ್ವರ (ನಾಸೋ) ಅವರ ಹೆಸರು ಕೇಳದ ಕನ್ನಡಿಗನಿಲ್ಲ ಎಂದರೆ ಅತಿಶಯೋಕ್ತಿ ಏನಲ್ಲ. ಅವರ ವಿದ್ವತ್ತು, ಕನ್ನಡ ಭಾಷೆಯ ಮೇಲಿನ ಪ್ರೀತಿ, ಅಚ್ಚ ಕನ್ನಡದಲ್ಲಿ, ಸುಲಿದ ಬಾಳೆಯಹಣ್ಣಿನಂದದಿ, ಸಂಭಾಷಿಸುವ ವೈಖರಿಗೆ ಮಾರುಹೋಗದವರಿಲ್ಲ. ನಿತ್ಯಹಸನ್ಮುಖಿಯಾಗಿ ವಿನಯಪೂರ್ವಕವಾಗಿ ಮಾತನಾಡುತ್ತ ಕೆಲವೇ ನಿಮಿಷದಲ್ಲಿ ಆಪ್ತವಾಗುವ ಪರಿಭಾವ ಅವರದು.

ಡಾ. ನಾ ಸೋಮೇಶ್ವರ

ನಾಸೋ ಅವರೊಂದಿಗೆ ಮಾತನಾಡುವ, ಕಾಲ ಕಳೆಯುವ ಅವಕಾಶ ಸಿಗುತ್ತದೆ, ಎನ್ನುವ ಒಂದೇ ಕಾರಣಕ್ಕೆ ’ಅನಿವಾಸಿ’ಯ ಸ್ನೇಹಿತರು ನಾ ಮುಂದು ತಾ ಮುಂದು ಎಂದು ಈ ಇ-ಕ್ವಿಜ಼್‍ನಲ್ಲಿ ಪಾಲ್ಗೊಳ್ಳಲು ಮುಂದಾದದ್ದು ಸುಳ್ಳೇನಲ್ಲ.

ನಾಸೋ ಅವರು ವಿನಯಪೂರ್ಣ, ಸ್ಪುಟವಾದ, ಸ್ಪಷ್ಟವಾದ  ಕನ್ನಡದಲ್ಲಿ ಮಾತಾಡುತ್ತಿದ್ದರೆ, ಕನ್ನಡವನ್ನು ಕೇಳುತ್ತಲೇ ಇರಬೇಕು ಎನಿಸುತ್ತದೆ. ಅವರು ಗಾದೆಗಳನ್ನು ವಿವರಿಸುವ ರೀತಿ ಇರಬಹುದು, ಒಗಟುಗಳನ್ನು ವರ್ಣಿಸುವ ರೀತಿ ಇರಬಹುದು, ಸ್ಪರ್ಧಾಳುಗಳನ್ನು ಹುರಿದುಂಬಿಸುವ ರೀತಿ ಇರಬಹುದು, ಅದನ್ನು ನೋಡುವುದೇ ಚಂದ, ಕೇಳುತ್ತ ಕೂರುವುದೇ ಚಂದ.

ಕರ್ನಾಟಕದ ಭೂಗೋಲ ಮಾಹಿತಿ, ಇತಿಹಾಸ, ಜಾನಪದ, ಸಂಸ್ಕೃತಿ, ಒಗಟುಗಳು, ಗಾದೆಗಳು, ಸುಗಮಸಂಗೀತ, ಚಲನಚಿತ್ರ, ಕ್ರೀಡೆ, ಸಾಹಿತ್ಯ, ನಾಟಕ…ಒಂದೇ ಎರಡೇ… ಆಡುಮುಟ್ಟದ ಗಿಡವಿಲ್ಲ, ನಾಸೋ ಕೇಳದ ಪ್ರಶ್ನೆಯಿಲ್ಲ ಎನ್ನಬಹುದೇನೋ. ಅವರು ಕಾರ್ಯಕ್ರಮವನ್ನು ರೂಪಿಸುವ ರೀತಿಯಲ್ಲಿ ಸಮಗ್ರ ಕರ್ನಾಟಕದ ದರ್ಶನವಾಗುತ್ತದೆ.

3500ಕ್ಕೂ ಹೆಚ್ಚು ಕಂತುಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿರುವ ನಾಸೋ ಅವರ ’ಥಟ್ ಅಂತ ಹೇಳಿ’ ಕಾರ್ಯಕ್ರಮ ಜಾಲದ ಕಾರಣದಿಂದಾಗಿ ಇಂಗ್ಲಂಡಿಗೂ ಬಂದಿದ್ದು ನಮ್ಮ ಸುಯೋಗ.

ಸತ್ಯಪ್ರಮೋದ ಲಕ್ಕುಂಡಿ:

ಕರ್ನಾಟಕದ ದೂರವಾಹಿನಿಯಲ್ಲಿ ಮನೆಮಾತಾಗಿರುವ ಅವರ ’ಥಟ್ ಅಂತ ಹೇಳಿ’ ಕಾರ್ಯಕ್ರಮ ಕೊರೊನಾ ಕಾರಣದಿಂದಾಗಿ ಜಾಲಕ್ಕೆ ತರುವ, ಕರ್ನಾಟಕದಿಂದ ಹೊರಗೆ ತರುವ ಕೆಲಸದ ರುವಾರಿ ಹೊತ್ತವರು ಸತ್ಯಪ್ರಮೋದ ಅವರು.

ಸತ್ಯಪ್ರಮೋದ ಅವರು ಮಾತು ಕಡಿಮೆ, ಕೆಲಸ ಜಾಸ್ತಿ ಎಂದು ಹೇಳುತ್ತಾರಲ್ಲ, ಆ ಪಂಗಡಕ್ಕೆ ಸೇರಿದವರು. ಅವರು ನಡೆಸುವ ’ಮೂಕ ಟ್ರಸ್ಟ್’, ’ವಿವಿಡ್ಲಿಪಿ’ಗಳೇ ಅದಕ್ಕೆ ಸಾಕ್ಷಿ. ’ಮೂಕ ಟ್ರಸ್ಟ್’ ಹೆಸರಿನಿಂದ ಪ್ರತಿ ವಾರವೂ ಜಾಲದಲ್ಲಿ ಕನ್ನಡದ ಖ್ಯಾತ ಸಾಹಿತಿಗಳ, ಸಾಹಿತ್ಯ  ಕೃತಿಗಳ ಭಾಷಣಮಾಲೆಗಳನ್ನು ಏರ್ಪಡಿಸುತ್ತಾರೆ.

ನಾಸೋ ಅವರ, ’ಕ್ವಿಜ಼್ ನಡೆದು ಬಂದ ದಾರಿ’ ಎನ್ನುವ ಕಾರ್ಯಕ್ರಮವೂ ವಿವಿಡ್ಲಿಪಿಯ ಕಾರ್ಯಕ್ರಮದಲ್ಲಿದೆ. ಅದನ್ನು ನೋಡಲು ಇಲ್ಲಿ ಒತ್ತಿ.

ಇಂಗ್ಲಂಡಿನಲ್ಲಿ ’ಥಟ್ ಅಂತ ಹೇಳಿ’

’ಥಟ್ ಅಂತ ಹೇಳಿ’, ಕರ್ನಾಟಕದಲ್ಲಿ ಜನಪ್ರಿಯವಾದ ಜನಜನಿತವಾದ ಕ್ವಿಜ಼್ ಕಾರ್ಯಕ್ರಮ. ಯಾವ ಆಡಂಬರವಿಲ್ಲದೇ ಯಾವ ಆಮಿಷಗಳಿಲ್ಲದೇ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಇತಿಹಾಸವನ್ನು ಮನೆಯಲ್ಲಿ ಕೂತಲ್ಲೇ ಮನೋರಂಜಕವಾಗಿ ಡಾ|ನಾ ಸೋಮೇಶ್ವರ ಅವರು ದಶಕಗಳಿಂದ ಉಣಬಡಿಸುತ್ತ ಬಂದಿದ್ದಾರೆ. ವೈದ್ಯರಾಗಿ ವೈದ್ಯಕೀಯ ಕಾರ್ಯಗಳನ್ನು ನಿರ್ವಹಿಸುತ್ತಲೇ ’ಥಟ್ ಅಂತ ಹೇಳಿ’ ಕಾರ್ಯಕ್ರಮವನ್ನು ಚಾಚೂ ತಪ್ಪದೇ ನಡೆಸಿಕೊಂಡು ಬಂದಿದ್ದಾರೆ. ಕರ್ನಾಟಕದ ಮೂಲೆ ಮೂಲೆಗಳಿಂದ ಸ್ಪರ್ಧಾರ್ಥಿಗಳನ್ನು ಕರೆತಂದು ಕನ್ನಡದ ಮೂಲೆ ಮೂಲೆಗೆ ರಸದೌತಣವನ್ನು ಹಂಚುತ್ತಿದ್ದಾರೆ.

ಕೊರೊನಾ ಮಾರಿ ವಿಶ್ವವನ್ನೆಲ್ಲಿ ವ್ಯಾಪಿಸಿರುವಾಗ ವಿವಿಡ್ಲಿಪಿಯ ಶ್ರೀ ಸತ್ಯಪ್ರಮೋದ ಲಕ್ಕುಂಡಿಯವರ ’ಮೂಕ ಟ್ರಸ್ಟ್’ ಈ ಸುಂದರ ಕಾರ್ಯಕ್ರಮನನ್ನು ಅಂತರಜಾಲದ ಮೂಲಕ ಇಂಗ್ಲಂಡಿಗೂ ತಂದೇ ಬಿಟ್ಟಿದ್ದು ನಿಮಗೆಲ್ಲ ತಿಳಿದೇ ಇದೆ. ಈಗ ಎರಡು ತಿಂಗಳಲ್ಲಿ, ’ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ (KSSVV)’ಯ ಸ್ನೇಹಿತರಿಗೆ ಮನೆಯಲ್ಲೇ ಕೂತು ಬೆಂಗಳೂರಿನಿಂದ ನಾಸೋ ಅವರು ’ಥಟ್ ಅಂತ ಹೇಳಿ’ ಕಾರ್ಯಕ್ರಮವನ್ನು ಪಾಕ್ಷಿಕವಾಗಿ ನಡೆಸಿಕೊಟ್ಟಿದ್ದಾರೆ. ಪ್ರತಿ ಕಾರ್ಯಕ್ರಮದಲ್ಲಿ ನಾಲ್ಕು ಸ್ಪರ್ಧಾರ್ಥಿಗಳು. ಹತ್ತು ಸುತ್ತುಗಳು. ಪ್ರತಿ ಸುತ್ತಿನಲ್ಲಿ ನಾಲ್ಕು ಪ್ರಶ್ನೆಗಳು, ಬಜ಼ರ್ ಒತ್ತಿದ ಮೊದಲ ಅಭ್ಯರ್ಥಿಗೆ ಮೊದಲ ಅವಕಾಶ; ಉತ್ತರ ತಪ್ಪಿದ್ದರೆ ಬಜ಼ರ್ ಒತ್ತಿದ ಎರಡನೇಯವರಿಗೆ. ಋಣಾಂಕವಿಲ್ಲ. ಸರಿ ಉತ್ತರಕ್ಕೆ ವಿವಿಡ್ಲಿಪಿಯ ವತಿಯಿಂದ ಪುಸ್ತಕ. ಪ್ರತಿ ಸ್ಪರ್ಧೆಯ ವಿಜೇತರು ಅಂತಿಮ ಸುತ್ತಿಗೆ.

ಮೊದಲ ಸುತ್ತಿನ ವರದಿಗಾಗಿ ಇಲ್ಲಿ ಒತ್ತಿ

ಎರಡನೇ ಸುತ್ತಿನ ವರದಿಗಾಗಿ ಇಲ್ಲಿ ಒತ್ತಿ

ಮೂರನೇ ಸುತ್ತು:

ಮೂರನೇ ಸುತ್ತಿನಲ್ಲಿ ಇದ್ದವರು ಮುರಳಿ ಹತ್ವಾರ್, ರಮ್ಯಾ ಭಾದ್ರಿ, ಸ್ವರೂಪ ಮಠ ಮತ್ತು ನಾನು (ಕೇಶವ ಕುಲಕರ್ಣಿ) ಭಾಗವಹಿಸಿದ್ದೆವು. ಮುರಳಿ ಮತ್ತು ರಮ್ಯಾ ಅವರು ಆರಂಭದ ಸುತ್ತುಗಳಿಂದಲೇ ಪಿಂಚ್ ಹಿಟ್ಟಿಂಗ್ ಶುರು ಮಾಡಿದರು, ಅಂದರೆ ಬಜ಼ರ್ ಒತ್ತಿ ಸರಿ ಉತ್ತರಗಳನ್ನು ಕೊಟ್ಟರು. ಸ್ವರೂಪ ಮತ್ತು ನಾನು ಟೆಸ್ಟ್ ಆಟಗಾರರ ತರಹ ನಿಧಾನವಾಗಿ ಆರಂಭಿಸಿದೆವು. ಕನ್ನಡ ಭೂಗೋಲ, ಇತಿಹಾಸ ಹಾಗೂ ಕನ್ನಡ ಸಾಹಿತ್ಯದ ಪ್ರಶ್ನೆಗಳು ತುಂಬ ಉಪಯುಕ್ತವಾಗಿದ್ದವು, ಆದರೆ ಉತ್ತರ ಮಾತ್ರ ನನಗೆ ಗೊತ್ತಿರಲಿಲ್ಲ. ಕನ್ನಡದ ಗಾದೆ ಮಾತುಗಳನ್ನು ಒಗಟುಗಳನ್ನು ನಾಸೋ ಅವರು ವಿವರಿಸುವ ರೀತಿ ಅನನ್ಯ. ಅವರ ಮಾತಿನ ಮೋಡಿಯಲ್ಲಿ, ಮುರಳಿಯವರ ಭರ್ಜರಿ ಬ್ಯಾಟಿಂಗ್‍ನಲ್ಲಿ ಕೆಲ ನಿಮಿಷ ನಾನು ಸ್ಪರ್ಧಾರ್ಥಿ ಎನ್ನುವುದನ್ನೂ ಮರೆತು ನೋಡುಗನಾಗಿ ಆನಂದಿಸುತ್ತ ಕೊತಿದ್ದು ಸುಳ್ಳಲ್ಲ.

ಬೇಂದ್ರೆಯವರ ಬದುಕು ಬರಹದ ಬಗ್ಗೆ ’ಚಿಟ್ ಪಟ್ ಚಿನಕುರುಳಿ’ ಸುತ್ತಿನಲ್ಲಿ ’ನರಬಲಿ’ ಎನ್ನುವ ಉತ್ತರ ಗೊತ್ತಿದ್ದರೂ ನನಗೆ ಉತ್ತರ ನಾಲಿಗೆಗೆ ಬರಲಿಲ್ಲ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಹಾಗೆಂದು ಕಾರ್ಯಕ್ರಮ ಮುಗಿದ ಮೇಲೆ ನನ್ನ ತಮ್ಮನಿಗೆ ’ಹಾಟ್‍ಸೀಟ್’ ಪ್ರಭಾವ ಎಂದು ಹೇಳುತ್ತಿದ್ದೆ. ಅದಕ್ಕೆ ನನ್ನ ತಮ್ಮನ  ಪುಟ್ಟ ಮಗ, ’ಕಾಕಾ ಎಲ್ಲೆ ಹಾಟ್‍ಸೀಟ್‍ನ್ಯಾಗ ಕೂತಿದ್ರು? ಅವರು ತಮ್ಮ ಮನ್ಯಾಗ ಅವರ ಕುರ್ಚಿ ಮ್ಯಾಲೆ ಕೂತಿದ್ರು,’ ಎನ್ನಬೇಕೇ?

ಮೂರನೇ ಸುತ್ತನ್ನು ಮುರಳಿ ಹತ್ವಾರ್ ಅವರು ಲೀಲಾಜಾಲವಾಗಿ ಗೆದ್ದು ಅಂತಿಮ ಸುತ್ತಿಗೆ ನಡೆದರು. 150ಕ್ಕೂ ಹೆಚ್ಚಿನ ಅಂಕ ಪಡೆದ ಖುಷಿ ಮತ್ತು ನಾಸೋ ಅವರೊಂದಿಗೆ ಮಾತನ್ನಾಡುವ ಅವಕಾಶ ಸಿಕ್ಕಿದ್ದು ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.

ಅಂತಿಮ ಹಣಾಹಣಿ (ಫೈನಲ್ಸ್) :

ಮೊದಲ ಸುತ್ತಿನಲ್ಲಿ ಲಕ್ಷ್ಮೀನಾರಾಯಣ ಗುಡೂರ್, ಎರಡನೇ ಸುತ್ತಿನಲ್ಲಿ ದಿವ್ಯತೇಜ, ಮತ್ತು ಮೂರನೇ ಸುತ್ತಿನಲ್ಲಿ ಮರಳಿ ಹತ್ವಾರ್ ವಿಜೇತರಾಗಿದ್ದರು. ನಾಲ್ಕನೇಯ ಅಭ್ಯರ್ಥಿ ಯಾರಿರಬಹುದು ಎನ್ನುವುದು ಕೊನೆಯ ಕ್ಷಣದಲ್ಲಿ ಘೋಷಿಸಲಾಯಿತು. ಲಂಡನ್ನಿನ ’ಭಾರತೀಯ ವಿದ್ಯಾಭವನ’ದ ನಿರ್ದೇಶಕರಾದ ಡಾ. ಮತ್ತೂರು ನಂದಕುಮಾರ ಅವರು ವೈಲ್ಡ್‍ಕಾರ್ಡ್ ಸೆಲಿಬ್ರಿಟಿ ಗೆಸ್ಟ್ ಆಗಿ ನಾಲ್ಕನೇ ಸ್ಪರ್ಧಾರ್ಥಿಯಾದರು. ಕಾರ್ಯಕ್ರಮಕ್ಕೆ ಕಳೆ ಬಂದಿತು.

ಡಾ ಮತ್ತೂರು ನಂದಕುಮಾರ

ಸ್ವಾತಂತ್ರ್ಯ ದಿನಾಚರಣೆಯ ಮುಂದಿನ ದಿನ, ಅಂದರೆ ಅಗಷ್ಟ್ 16 ರಂದು, ’ಏರ್-ಮೀಟ್’ ಮಾಧ್ಯಮದ ಮೂಲಕ ಯಶಸ್ವಿಯಾಗಿ ನಡೆಯಿತು. 

ಕಾರ್ಯಕ್ರಮವನ್ನು ಪೂರ್ತಿ ನೋಡಲು ಇಲ್ಲಿ ಒತ್ತಿ. ಕಾರ್ಯಕ್ರಮದ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ದಾಖಲಿಸಿದ್ದೇನೆ:

ಫೈನಲ್ಸ್-ನಲ್ಲಿ ನಿಯಮಗಳಲ್ಲಿ ಒಂದು ಮಹತ್ವದ ಬದಲಾವಣೆಯಾಯಿತು. ಬಜ಼ರನ್ನು ತೆಗೆದು ಹಾಕಲಾಯಿತು. ಇದರಿಂದಾದ ಅನುಕೂಲಗಳ ಎರಡು: ಎಲ್ಲರಿಗೂ ಅವಕಾಶ ಸಿಕ್ಕಿದ್ದು ಮತ್ತು ಸಮಯದ ಉಳಿತಾಯ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಲೇ ಗುಡೂರ್ ಅವರು ನಂದಕುಮಾರ ಮತ್ತು ಮುರಳಿಯವರ ಕ್ಯಾರಿಕೇಚರ್ ಬರೆದದ್ದು ವಿಶೇಷವಾಗಿತ್ತು. (ಕೆಳಗೆ ನೋಡಿರಿ)

ಚಿತ್ರಕಾವ್ಯ ಸುತ್ತಿನಲ್ಲಿ ಬರೆದ ನಾಕು ಸಾಲಿನ ಕವನಗಳ ಆಶುಕವಿತೆಗಳು ಅದ್ಭುತವಾಗಿದ್ದವು.

ಗುಡೂರ್ ಅವರು ಬರೆದ ಆಶುಕವನವನ್ನು ಇಲ್ಲಿ ಉಲ್ಲೇಖಿಸುತ್ತೇನೆ. ತಂದೆಯ ಹೆಗಲ ಮೇಲೆ ಕುಳಿತ ಮಗುವಿನ ಚಿತ್ರಕ್ಕೆ ಅವರು ಬರೆದ ಕವನ:

‘ನನ್ನ ಅಪ್ಪನ ಹೆಗಲು ಕಡಿಮೆಯೇ ಯಾವಸಿಂಹಾಸನಕ್ಕೆ?

ಮೇಲೇರಿ ಕೂಡುವನು ಹೊರಡುವೆನು ಅಲ್ಲಿಂದ

ಜೀವನದ ಸಿಂಹಾವಲೋಕನಕ್ಕೆ’’

ಲಕ್ಷ್ಮಿನಾರಾಯಣ ಗುಡೂರ್

ಗಾಯಕಿಯರನ್ನು ಗುರುತಿಸುವ ಶ್ರವ್ಯಕಾವ್ಯ ಕಷ್ಟಕರವಾಗಿತ್ತು.

ನಾಸೋ ಅವರು ಅಂಕಗಳನ್ನು ಎಣಿಸಲು ಬ್ರೇಕ್ ತೆಗೆದುಕೊಂಡಾಗ, ಪ್ರವೀಣ B V ಅವರು ಸುಶ್ರಾವ್ಯವಾಗಿ ಕನ್ನಡದ ಭಾವಗೀತೆಗಳನ್ನು ಹಾಡಿದರು. ಕೈಲಾಸಂ ಅವರ ‘ತಿಪ್ಪಾರಳ್ಳಿ’ ಹಾಡನ್ನು ಹಾಡಿ ಖುಷಿಪಡಿಸಿದರು. ಆ ಹಾಡು ಮುಗಿದ ಮೇಲೆ ನಾಸೋ ಅವರು ಆ ಹಾಡಿನ ಇತಿಹಾಸವನ್ನು ಮೆಲುಕು ಹಾಕಿದರು. ಪ್ರವೀಣ ಅವರು ಶರೀಫರ ಮತ್ತು ಕುವೆಂಪು ಅವರ ಕೃತಿಗಳನ್ನೂ ಹಾಡಿದರು. ಪ್ರವೀಣ್ B V ಮತ್ತು ಪ್ರದೀಪ್ B V ಅವರದು ಜೋಡಿ ಸಂಗೀತ. ವೃತ್ತಿಯಲ್ಲಿ ಐಟಿಯಾದರೂ ಅವರು ಕನ್ನಡ ಸುಗಮಸಂಗೀತದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿ ಅಶ್ವಥ್ ಅವರ ಗರಡಿಯಲ್ಲಿ ಪಳಗಿದ್ದಾರೆ. ನಾಟಕಸಂಗೀತ ಮತ್ತು ಭಕ್ತಿಸಂಗೀತದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಹಾಡುಗಳನ್ನು ಕೇಳಲು ಇಲ್ಲಿ ಒತ್ತಿ.

ಡಾ ನಂದಕುಮಾರ ಅವರ ಪತ್ರ

ಅ ಆ ಇ ಈ ಕಲಿತರೆ ಭಾಷೆಯ ಓದಲು ಬಲು ಸುಲಭ’ ಎಂದು ತಾವು ಬರೆದು ಸ್ವರಸಂಯೋಜಿಸಿದ ಹಾಡನ್ನು ಸುಶ್ರಾವ್ಯವಾಗಿ ನಂದಕುಮಾರ್ ಅವರು ಹಾಡಿದರು. ಈ ಹಾಡನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಇತ್ತೀಚಿನ ಚಿತ್ರ ’ಇಂಗ್ಲಂಡ್ ವರ್ಸಸ್ ಇಂಡಿಯಾ’ ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ.

ನಾಸೋ ಅವರಿಗೆ ’ಅನಿವಾಸಿ’ ಬಳಗದಿಂದ ಕೃತಜ್ಞತಾಪೂರ್ವಕವಾದ ವಂದನೆಗಳು ಮತ್ತು ಸತ್ಯಪ್ರಮೋದ ಅವರಿಗೆ ಧನ್ಯವಾದಗಳು.

ಅಂಕಿಅಂಶಗಳು:

ಮೂರನೇ ಸುತ್ತು ಸುಮಾರು ಐವತ್ತು ಸಾವಿರ ಜನರನ್ನು ತಲುಪಿದೆ. ಫೈನಲ್ಸ್ ಈಗಾಗಲೇ 34,891 ಜನರನ್ನು ತಲುಪಿದೆ. ಅಷ್ಟಲ್ಲದೇ ಲೋಕಲ್ ಚಾನಲ್ ಗಳು ಈ ಕಾರ್ಯಕ್ರಮಗಳ ನೇರ ಪ್ರಸಾರ ಮಾಡಿದ್ದಾರೆ; ಇದು ಕೂಡ ಸಾವಿರಾರು ಜನರನ್ನು ತಲುಪಿದೆ. Engagements: 1,104; Comments: 154; 33 shares; 14.000 views.

ಕೇಶವ ಕುಲಕರ್ಣಿ

3 thoughts on “‘ಥಟ್ ಅಂತ ಹೇಳಿ‘ – ಅಂತಿಮ ಹಣಾಹಣಿ — ಕೇಶವ ಕುಲಕರ್ಣಿ ಬರೆದ ಲೇಖನ

  1. ಕೇಶವ, ನಿಮ್ಮ ಲೇಖನ ಕೊನೆಯ ಹಣಾಹಣಿಯನ್ನು ಕಣ್ಣಿಗೆ ಕಟ್ಟುವಂತೆ ರೂಪಿಸಿದೆ. ಅದಲ್ಲದೆ ಎಲ್ಲ ಹಳೆಯ ಕಾರ್ಯ್ಕ್ರಮಗಳ ವಿಡಿಯೋಗಳಿಗೆ ಮತ್ತು ಗಾಯಕರ ಹಾಡುಗಳಿಗೆ ಕೊಂಡಿ ಒದಗಿಸಿದ್ದು ಸಹ ನಿಮ್ಮ ಮುತವರ್ಜಿಯ ಕೆಲಸಕ್ಕೆ ಸಾಕ್ಷಿ! ಧನ್ಯವಾದಗಳು.

    Like

  2. ಬರೆಹ ತುಂಬಾ ಚೆನ್ನಾಗಿದೆ. Very inclusive report. It took me back to the moments enjoyed on the programme.

    Like

  3. ಥಟ್ ಅಂತ ಹೇಳಿ ಕಾರ್ಯಕ್ರಮದ ನಿನ್ನ ಅನುಭವದ ಲೇಖನ ತುಂಬಾ ಚನ್ನಾಗಿದೆ‌. ನಾಸೊ ಅವರು ಕಾರ್ಯಕ್ರಮ ನಡೆಸಿಕೊಡುವ ಪರಿ ಅನನ್ಯ. ಅವರ ಕನ್ನಡದ ಭಂಡಾರ ಅಮೋಘ. ಕಾರ್ಯಕ್ರಮದಲ್ಲಿ ಗೆಲ್ಲುವುದಕ್ಕಿಂತ ಅದರ ಅನುಭವವೇ ಚನ್ನ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.