ಅನಿವಾಸಿಗೆ ಐದು ವರ್ಷ ; ಹೊಸ ಚಿಗುರು ಹೊಸ ಬೇರು-ಡಾ. ಜಿ. ಎಸ್. ಶಿವಪ್ರಸಾದ್

ಅನಿವಾಸಿ ಶುರುವಾದ್ದು ಬರೀ 2 ಆಯಾಮಗಳಲ್ಲಿ. ಕಪ್ಪು-ಬಿಳುಪು ಆವೃತ್ತಿಯ ಬರಹದ ರೂಪದಲ್ಲಿ.ಆದರೆ ಅದಕ್ಕೆ ತಟ್ಟನೆ ಸಾಂಸ್ಕೃತಿಕತೆಯ 4 ಡಿ ಆಯಾಮ ದೊರೆತದ್ದು  ದೊಡ್ಡಗುಣಗಳ ಒಬ್ಬ ವ್ಯಕ್ತಿಯಿಂದ. ಸಜ್ಜನಿಕೆ, ಸರಳತೆ, ಸಂಭಾವಿತ ನಡವಳಿಕೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಬದ್ದತೆ, ಅತ್ಯಂತ ಉದಾತ್ತ ರೀತಿಯಲ್ಲಿ ವಿಚಾರಗಳನ್ನು ಸಂಬಾಳಿಸುವಿಕೆ, ನಿರಾಯಾಸವಾಗಿ ಕೆಲಸ ಮಾಡವ ಸ್ವಭಾವ ಈ ಎಲ್ಲ ಗುಣಗಳೂ ಇರುವ ವ್ಯಕ್ತಿಯಾದ ಡಾ. ಜಿ.ಎಸ್.ಶಿವಪ್ರಸಾದ್ ರಿಂದ.ಇವರಿಲ್ಲದ ಅನಿವಾಸಿ ಹಲವಾರು ರೀತಿಯಲ್ಲಿ ಲಘುವಾಗಿಬಿಡುತ್ತದೆ.

              ಡಾ. ಜಿ.ಎಸ್.ಶಿವಪ್ರಸಾದ್

ನಮ್ಮ ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪನವರ ಸುಪುತ್ರರಾದ ಇವರು ಶೆಫೀಲ್ಡ್ ನಲ್ಲಿ ಮಕ್ಕಳ ತಘ್ನರು. ಕನ್ನಡ ಮತ್ತು ಇಂಗ್ಲೀಷು ಭಾಷೆಗಳಲ್ಲಿ ಒತ್ತಟ್ಟಿಗೆ ಬರೆಯಬಲ್ಲವರು. ಸಾಹಿತ್ಯದ ವಾತಾವರಣದಲ್ಲಿಯೇ ಬೆಳದ ಇವರ ಸಂಪರ್ಕಗಳ ಫಲವಾಗಿ ಕನ್ನಡ ಬಳಗದ ವೇದಿಕೆಯಲ್ಲಿ ಸಾಹಿತ್ಯ ಹಾಸು ಹೊಕ್ಕಿತು. ಅನಿವಾಸಿ ಸಾಹಿತ್ಯ ಕಮ್ಮಟಗಳು ನಿಯಮಿತವಾಗಿ ನಡೆದವು.ಕಳೆದ ಐದು ವರ್ಷಗಳ ಕಾಲ ಇವರು ಕನ್ನಡ ಬಳಗದ ಸೆಕ್ರೆಟರಿಯಾಗಿದ್ದ ಕಾರಣ ಅನಿವಾಸಿಗೆ ಕನ್ನಡ ಬಳಗದ ವೇದಿಕೆ ದೊರೆಯಿತು. ಕನ್ನಡ ಬಳಗಕ್ಕೆ ಅನಿವಾಸಿಯ ಪ್ರಬುದ್ಧ  ಸಾಂಗತ್ಯ ಸಿಕ್ಕಿತು.ಇದನ್ನು ತಕರಾರಿಲ್ಲದೆ ಒಪ್ಪಿಕೊಂಡ  ಕಳೆದ ಐದು ವರ್ಷಗಳ KBUK ಯ ಅಧ್ಯಕ್ಷರಿಗೆ ಮಿಕ್ಕೆಲ್ಲ ಕಾರ್ಯಕಾರಿ ಸಮಿತಿಯ ಸದಸ್ಯರುಗಳಿಗೆ ಮತ್ತು ಇತರೆ ಎಲ್ಲ ಸಾಹತ್ಯಾಸಕ್ತರಿಗೆ ಕೂಡ ಅನಿವಾಸಿ ಚಿರಋಣಿ.ಈ ಬೆಂಬಲ ಮುಂದುವರೆಯಲೆಂದು ಆಶಿಸೋಣ.

ಹಾಗಿದ್ದು ಅನಿವಾಸಿಗೆ ತನ್ನದೇ ಆದ  ಸ್ವತಂತ್ರ ಇರುವಿದೆ. ಅಕಸ್ಮಿಕ ಒಂದು ಸಂಸ್ಥೆಯ ವೇದಿಕೆ ದೊರೆಯದಿದ್ದರೂ ತನ್ನ ಆಸಕ್ತಿಗಳನ್ನು ಮುಂದುವರೆಸಲು ತನ್ನದೇ ಜಾಲಜಗುಲಿಯಿದೆ. ಹಣಕಾಸಿನ ಸಂಬಂಧ ಎಂದಿಗೂ ಇಲ್ಲದ ಕಾರಣ ತಾನಾಗಿ ಮುಂದುವರೆಯಬಲ್ಲ ದ್ರವ್ಯಾತ್ಮಕ ಗುಣಗಳವೆ.  ಆದರೆ, ಯಾರಾದರೂ ಆಯೋಜಿಸಲಿ,ನಾವು ಅತಿಥಿಗಳಂತೆ ಹೋಗೋಣ ಎನ್ನುವ ಜಡತ್ವವನ್ನು ಬಿಟ್ಟು  ಸಾಹಿತ್ಯ ಕಮ್ಮಟಗಳನ್ನು ಆಯೋಜಿಸಲು ನಾವೆಲ್ಲ ನೆರವಾಗೋಣ.ಅನಿವಾಸಿಯನ್ನು ಮುಂದುವರಸಿಕೊಂಡು ಹೋಗಬಲ್ಲ ಮತ್ತು ಅದಕ್ಕಾಗಿ ಪ್ರಯತ್ನಪಡುವ ಆತ್ಮಗಳಿರುವುದು ಮುಖ್ಯ. ಕಳೆದ ಐದು ವರ್ಷಗಳಲ್ಲಿ ಪ್ರಸಾದರು ಆಯೋಜಿಸಿದ 10 ಕ್ಕೂ ಹೆಚ್ಚು ಸಾಹಿತ್ಯ ಕಮ್ಮಟಗಳ ಬಗ್ಗೆ ಕೆಳಗಿನ ಲೇಖನದಲ್ಲಿ ಅವರು ಬರೆದಿದ್ದಾರೆ.ಅನಿವಾಸಿಯ ಐದು ವರ್ಷಗಳ ಪೂರ್ವಾವಲೋಕನದ ಐದು ಲೇಖನಗಳ ಸರಣಿಯಲ್ಲಿ ಇದು ಕೊನೆಯದು.

ತಾನಿರುವ ಕಡೆಯೆಲ್ಲ ಸಾಹಿತ್ಯವನ್ನ ಸಿಂಪಡಿಸಬಲ್ಲ ಮನಸ್ಸು, ಧ್ಯೇಯ ಇರುವ ಪ್ರಸಾದರ ಕಾರಣ ಅನಿವಾಸಿಯ ಎಲ್ಲ ಬಣ್ಣಗಳಿಗೂ ಅರ್ಥ ಬಂದಿದೆ. ಹೆಮ್ಮೆ ಮತ್ತು ಆತ್ಮ ವಿಶ್ವಾಸ ಮೈ ದುಂಬಿದೆ.  ಅನಿವಾಸಿಯ ಎಲ್ಲ ಹಂತಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಉನ್ನತ ಆಶಯಗಳನ್ನು ಉಳ್ಳ ಶಿವಪ್ರಸಾದರು ”ಇಂಗ್ಲೆಂಡಿನಲ್ಲಿ ಕನ್ನಡಿಗ’ ಎನ್ನುವ ಕವನ ಸಂಕಲನ,  ’ದಕ್ಷಿಣ ಅಮೆರಿಕಾ-ಒಂದು ಸುತ್ತು ’ ಎನ್ನುವ ಪ್ರವಾಸ ಕಥನವನ್ನು ಬರೆದಿದ್ದಾರೆ.ಮೂರನೇ ಪುಸ್ತಕದ ತಯಾರಿಯಲ್ಲಿರುವ ಪ್ರಸಾದರ  ಮುಂದಿನ ಎಲ್ಲ ಯೋಜನೆಗಳಿಗೆ ಶುಭ ಹಾರೈಸೋಣ- ಡಾ.ಪ್ರೇಮಲತ ಬಿ.

ಅನಿವಾಸಿಗೆ ಐದು ವರ್ಷ ; ಹೊಸ ಚಿಗುರು ಹೊಸ ಬೇರು

ನಮ್ಮ ನೆಚ್ಚಿನ ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ ಐದು ವಸಂತ ಋತುಗಳನ್ನ ಕಂಡಿದೆ. ನಾವು ನೆಟ್ಟ ಈ ‘ಸಾಂಸ್ಕೃತಿಕ ಸಸಿ’ ಹೆಮ್ಮರವಾಗಿ ಬೆಳೆಯದಿದ್ದರೂ ನಾಲ್ಕಾರು ಹೊಸ ಚಿಗುರುಗಳು ಮೂಡಿ ಕೆಲವು ಹೂಗಳನ್ನು ನೀಡಬಹುದೆಂಬ ಭರವಸೆಯಲ್ಲಿ ನೀರೆರೆದಿದ್ದೇವೆ. ನಮ್ಮ ಹೊಸ ಬೇರುಗಳು ಇನ್ನೂ ಆಳಕ್ಕೆ ಇಳಿಯಬೇಕಾಗಿದೆ. ಯು. ಕೆ. ಕನ್ನಡ ಬಳಗದ ಆಶ್ರಯದಲ್ಲಿ ನಮ್ಮ ವೇದಿಕೆಯನ್ನು ಪ್ರಾರಂಭಿಸಿದ್ದು, ನಮ್ಮ ಸಾಂಸ್ಕೃತಿಕ  ಮತ್ತು ಸಾಹಿತ್ಯ ಕಾರ್ಯಕ್ರಮಗಳನ್ನು ಕನ್ನಡ ಬಳಗದ ಯುಗಾದಿ ಮತ್ತು ದೀಪಾವಳಿ ಹಬ್ಬದಾಚರಣೆಯ ಸಮಾರಂಭಗಳಲ್ಲಿ ನಡೆಸಿಕೊಂಡು ಬಂದಿದ್ದೇವೆ.  ಈ ಸಾಹಿತ್ಯ ಕಾರ್ಯಕ್ರಮಗಳು ಕನ್ನಡ ಬಳಗಕ್ಕೆ ಬೇರೊಂದು ಆಯಾಮವನ್ನು ತಂದುಕೊಟ್ಟಿದೆ ಎಂಬುದು ಕೆಲವು ಹಿರಿಯ ಸದಸ್ಯರ ಅಭಿಪ್ರಾಯ.  ಮನೋರಂಜನೆ ಮತ್ತು ಸಾಂಸ್ಕ್ಕತಿಕ ಕಾರ್ಯಕ್ರಮಗಳು ಪ್ರಧಾನವಾಗಿದ್ದ ಕನ್ನಡ ಬಳಗದ ಸಮಾರಂಭದಲ್ಲಿ  ಸಾಹಿತ್ಯ ವಿಚಾರ ಸಂಕಿರಣಗಳನ್ನು ತಂದು ಭಾಷೆ ಮತ್ತು ಸಾಹಿತ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವುದು  ಈ ವಿಚಾರ ವೇದಿಕೆಯ ಉದ್ದೇಶವಾಗಿತ್ತು. ಅದು ಇಲ್ಲಿಯವರೆಗೂ ಯಶಸ್ವಿಯಾಗಿದೆ ಎನ್ನಬಹುದು.

‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ ನಡೆದು ಬಂದ ದಾರಿಯನ್ನು ಶ್ರೀವತ್ಸ ದೇಸಾಯಿಯವರು ಈಗಾಗಲೇ ತಿಳಿಸಿದ್ದಾರೆ. ಇನ್ನೊಂದು ಮುಖ್ಯವಾದ ಹಿನ್ನೆಲೆ ಸಂಗತಿಯಂದರೆ, ಕನ್ನಡ ಬಳಗ ಯು.ಕೆ ಯ ಮೂವತ್ತನೇ ವಾರ್ಷಿಕೋತ್ಸವದ  ಸಮಯದಲ್ಲಿ (ಯುಗಾದಿ ೨೦೧೨) ಒಂದು ಸ್ಮರಣ ಸಂಚಿಕೆಯನ್ನು ತರಲಾಯಿತು. ಅಲ್ಲಿ ಹಲವಾರು ಉತ್ಸಾಹಿ ಕನ್ನಡದ ಲೇಖಕ ಮತ್ತು ಲೇಖಕಿಯರು ಭಾಗವಹಿಸಿದ್ದು ಈ ಸ್ಥಳೀಯ ಸಾಹಿತ್ಯಾಸಕ್ತರು ಪರಿಚಯವಾದರು.  ಇವರನ್ನೆಲ್ಲಾ ಒಂದುಗೂಡಿಸಿ ವೇದಿಕೆ ಕಟ್ಟುವ ಕನಸು ಹುಟ್ಟಿದು ಬಹುಶಃ ಅಲ್ಲಿಂದ ಎಂಬ ವಿಚಾರವನ್ನು ನಾನು ನೆನೆಯುತ್ತೇನೆ.

ಒಂದು ಹಿನ್ನೋಟದಲ್ಲಿ ‘ಅನಿವಾಸಿ’ಯು  ಸುಮಾರು ಹತ್ತು ಕಾರ್ಯಕ್ರಮಗಳನ್ನು ಕಂಡಿದೆ.  ಇದರಲ್ಲಿ ಗಮನಾರ್ಹವಾದ ಕೆಲವು ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದೇನೆ. ನಮ್ಮೆಲ್ಲರ ನೆಚ್ಚಿನ ಖ್ಯಾತ ಕವಿ ಎಚೆಸ್ವಿ ಅವರು ೨೦೧೪ ದೀಪಾವಳಿ ಕಾರ್ಯಕ್ರಮದಲ್ಲಿ ‘ಅನಿವಾಸಿ’ ವೇದಿಕೆಯನ್ನು ಉದ್ಘಾಟಿಸಿದರು. ಆ ಸಂದರ್ಭದಲ್ಲಿ ನಮ್ಮ ಅನಿವಾಸಿ ಕಾರ್ಯಕರ್ತರು ತಂತ್ರಜ್ಞಾನವನ್ನು ಬಳಸಿಕೊಂಡು ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ಗಳಲ್ಲಿ ಕನ್ನಡವನ್ನು ಬರೆಯುವ ಕಮ್ಮಟವನ್ನಿಟ್ಟುಕೊಂಡು ನೆರೆದಿದ್ದ ಸದಸ್ಯರಿಗೆ ಸಲಹೆ ಮತ್ತು ತರಬೇತಿಯನ್ನು ನೀಡಿದರು.  ಎಚೆಸ್ವಿ ಅವರ ಸಮ್ಮುಖದಲ್ಲಿ ಕವಿಸಮ್ಮೇಳನ ಜರುಗಿದ್ದು ಅಲ್ಲಿ ನಮ್ಮ೭-೮ ಅನಿವಾಸಿ ಸದಸ್ಯರು ತಮ್ಮ ಕವನಗಳನ್ನು ಮಂಡಿಸಿದರು.

ಎಚೆಸ್ವಿಯವರು ಕನ್ನಡ ನಾಡಿನಾಚೆ ಅದೂ ಇಂಗ್ಲೆಂಡಿನಲ್ಲಿ ಎರಡು ದಿನಗಳ ಮಟ್ಟಿಗೆ ಇಷ್ಟೊಂದು ಕನ್ನಡ ಪರ ಚಟುವಟಿಕೆಗಳನ್ನು ಆಯೋಜಿಸಿದ ಯು.ಕೆ ಕನ್ನಡ ಬಳಗ ಮತ್ತು ಅನಿವಾಸಿ ಬಳಗಕ್ಕೆ ಅಭಿನಂದನೆ ಸಲ್ಲಿಸಿದರು. ಹಾಗೆ ಆ ಸಮಯದಲ್ಲಿ ಪ್ರೇಮಲತಾ ಅವರು ನಡೆಸಿಕೊಟ್ಟ ಸಂದರ್ಶನದಲ್ಲಿ ಕನ್ನಡ ಭಾಷೆಯ ಉಳಿವಿನ ಬಗ್ಗೆ ಮತ್ತು ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ನಡೆಯಬೇಕೆಂಬ ವಿಚಾರವನ್ನು ಕುರಿತು ” ಆರಂಭದಲ್ಲಿ ನಾವು ಯಾವುದನ್ನು ಅನುಕರಣೆಯಿಂದ ಕಲಿಯುತ್ತೇವೋ ಅದು ನಮ್ಮ ಭಾಷೆಯಾಗುತ್ತದೆ ಮತ್ತು ನಮ್ಮ ಅಂತರಂಗದ ದ್ರವ್ಯವೂ ಆಗುತ್ತದೆ. ಪರಿಸರದಲ್ಲಿ ಯಾವ ಭಾಷೆ ಇರುತ್ತದೆಯೋ  ಅದೇ ನಮ್ಮ ಭಾಷೆಯಾಗುತ್ತದೆ. ಅದೇ ಭಾಷೆಯಲ್ಲಿ ನಾವು ಚಿಂತಿಸುವುದು ಮತ್ತು ಕನಸುಕಾಣುವುದು” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಅಂದು ನಡೆದ ವಿಚಾರಗೋಷ್ಠಿಯಲ್ಲಿ ಸುಗಮಸಂಗೀತ ನಡೆದುಬಂದ ದಾರಿಯನ್ನು ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾದ ವೈ ಕೆ ಮುದ್ದು ಕೃಷ್ಣ ವಿವರಿಸಿದರು. ಖ್ಯಾತ ಹಾಸ್ಯ ಪಟು ಡಾ. ಪುತ್ತೂರಾಯರು ಮತ್ತು ಚಿತ್ರರಂಗದ ಹಿರಿಯ ನಟ ಶಿವರಾಂ ಅವರು ಕೂಡ ಈ ಗೋಷ್ಠಿಯಲ್ಲಿ  ಭಾಗವಹಿಸಿದ್ದರು.

ಲಿವರ್ಪೂಲ್ ನಲ್ಲಿ ನಡೆದ ಕನ್ನಡ ಬಳಗದ  ೨೦೧೫ ರ  ಕಾರ್ಯಕ್ರಮಕ್ಕೆ ಜನಪ್ರಿಯ ಕವಿ ಬಿ. ಆರ್. ಲಕ್ಷ್ಮಣ ರಾವ್ ಮತ್ತು ಸ್ತ್ರೀವಾದಿ, ಕವಿಯಿತ್ರಿ ಮಮತಾ ಸಾಗರ್ ಅವರು ಅತಿಥಿಗಳಾಗಿ, ಖ್ಯಾತ ರಂಗಕಲಾವಿದೆ  ಶ್ರೀಮತಿ ಬಿ.ಜಯಶ್ರೀ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಅಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅನಿವಾಸಿ ಸದಸ್ಯರು ಮಂಡಿಸಿದ ಕವಿತೆಗಳ ಬಗ್ಗೆ ಲಕ್ಷ್ಮಣ ರಾವ್ ತಮ್ಮ ವೈಯುಕ್ತಿಕ ಅಭಿಪ್ರಾಯಗಳನ್ನು ಸೂಚಿಸಿ ಕಾವ್ಯದ ಸ್ವರೂಪಗಳನ್ನು ಪರಿಚಯಿಸಿದರು. ಮಮತಾ ಅವರು ಕಾವ್ಯ ಲಹರಿಯ ಶಬ್ದ ನಿನಾದ ಮತ್ತು ಲಯಗಳ ಹೇಗೆ ಕಾವ್ಯದ ಸೊಬಗನ್ನು ಹೆಚ್ಚಿಸುತ್ತದೆ ಎಂಬ ವಿಚಾರದ ಬಗ್ಗೆ ತಿಳಿಪಡಿಸಿ ತಮ್ಮ ಕೆಲವು ಕವನಗಳನ್ನು ಓದಿದರು. ಕೇಶವ್ ಕುಲಕರ್ಣಿ ಜಯಶ್ರೀ ಅವರನ್ನು ಸಂದರ್ಶಿಸಿದಾಗ ಅವರು ತಮ್ಮ   ತಾತ ಗುಬ್ಬಿ ವೀರಣ್ಣ ಅವರ ಸಾಧನೆಗಳ ಬಗ್ಗೆ ಹೆಮ್ಮೆಯ ವಿಚಾರಗಳನ್ನು ತಿಳಿಸಿದರು. ಗುಬ್ಬಿ ನಾಟಕ ಕಂಪನಿಯ  ಆಶ್ರಯದಲ್ಲಿ ಕನ್ನಡದ ಖ್ಯಾತ ನಟರುಗಳಾದ ರಾಜ್ ಕುಮಾರ್, ಬಾಲಣ್ಣ ನರಸಿಂಹರಾಜುಗಳು ಬೆಳಕಿಗೆ ಬಂದದ್ದನ್ನು ಸ್ಮರಿಸಿದರು . ರಂಗ ಭೂಮಿಯ ಬಗ್ಗೆ ಮಾತನಾಡುತ್ತ “ಮನುಷ್ಯನನ್ನು ಮನುಷ್ಯನ ಹಾಗೆ ಕಾಣಿಸುವಂಥ ಮಾಧ್ಯಮ ನಾಟಕ ಒಂದೇ . ಮನುಷ್ಯನನ್ನು ತುಂಬಾ ಚಿಕ್ಕವನಾಗಿ ಮಾಡುವುದು ಕಿರು ತೆರೆ (ಟಿವಿ ) ಹಾಗೆ ಅಗಾಧವಾಗಿ ತೋರಿಸಿವುದು ಬೆಳ್ಳಿಯ ತೆರೆ ಎಂದು ನುಡಿದರು”  ಅಂದು ಸಂಜೆ ನಡೆದ ಸಂಗೀತ ಕಾರ್ಯಕ್ರಮ ವನ್ನು ನಡೆಸಿಕೊಟ್ಟ ಖ್ಯಾತ ಗಾಯಕಿ ಅಮಿತ ರವಿಕಿರಣ್ ಈಗ ನಮ್ಮ ಅನಿವಾಸಿ ಬಳಗದ  ಲೇಖಕಿ ಮತ್ತು ಸಕ್ರಿಯ ಕವಿಯಿತ್ರಿ !

  ಚಿತ್ರ ಕಲೆ- ಲಕ್ಶ್ಮೀನಾರಾಯಣ ಗೂಡೂರು

ಕನ್ನಡ ಬಳಗದ ೨೦೧೬ ಮ್ಯಾಂಚೆಸ್ಟರ್ ಯುಗಾದಿ ಕಾರ್ಯಕ್ರಮದಲ್ಲಿ ಖ್ಯಾತ ಕಾಮಿಡಿಯನ್ ಪ್ರಾಣೇಶ್ ಗಂಗಾವತಿ ಅವರ ಸಮ್ಮುಖದಲ್ಲಿ  ಹಾಸ್ಯ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಅಂದು ಪ್ರಸ್ತುತ ಪಡಿಸಿದ ಕವನಗಳನ್ನು ವಿಮರ್ಶಿಸುತ್ತಾ ಅದಕ್ಕೆ ತಮ್ಮದೇ ಆದ ತಿಳಿ ಹಾಸ್ಯವನ್ನು ಸೇರಿಸಿ ಎಲ್ಲರನ್ನು ರಂಜಿಸಿದರು. ಇದೇ  ಸಂದರ್ಭದಲ್ಲಿ ಅನಿವಾಸಿ ಜಾಲ ಜಗುಲಿಯಲ್ಲಿ ಪ್ರಕಟವಾದ ಕಥೆ ಕಾವ್ಯ ವಿಡಂಬನೆಗಳನ್ನು ಒಳಗೊಂಡಂತೆ “ಅನಿವಾಸಿಗಳ  ಅಂಗಳದಿಂದ” ಎಂಬ ಹೊತ್ತಿಗೆಯನ್ನು ಪ್ರಾಣೇಶ್  ಬಿಡುಗಡೆಮಾಡಿದರು. ಈ ಒಂದು ಹೊತ್ತಿಗೆಗೆ ಎಚೆಸ್ವಿ ಮುನ್ನುಡಿಯನ್ನು ಮತ್ತು   ಅಮೇರಿಕಾದ ಲೇಖಕ ಶ್ರೀವತ್ಸ ಜೋಶಿ ಅವರು ಬೆನ್ನುಡಿಯನ್ನು ಬರೆದುಕೊಟ್ಟಿದ್ದಾರೆ.

೨೦೧೬ದೀಪಾವಳಿ ಕಾರ್ಯಕ್ರಮ ಡಾರ್ಬಿ ನಗರದಲ್ಲಿ ಜರುಗಿತ್ತು. ಆ ಸಮಾರಂಭದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಕವಿತೆ ಮತ್ತು ಸಾಹಿತ್ಯ ಸಂಬಂಧಗಳನ್ನು (Interface) ಅನಿವಾಸಿ ಅತಿಥಿಗಳಾದ ಡಾರ್ಬಿ ಶೈರ್ ನ ಇಂಗ್ಲಿಷ್ ಕವಿಯಿತ್ರಿ ಕ್ಯಾತಿ  ಗ್ರಿನ್ಡ್ ರಾಡ್ ಅವರ ಸಮ್ಮುಖದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ “ಪೂರ್ವ ಪಶ್ಚಿಮಗಳ ಸಮ್ಮಿಲನ” ಎಂದು ಹೆಸರಿಸಿದ್ದು   ಇಲ್ಲಿ ಸದಸ್ಯರುಗಳು ಬರೆದ ಇಂಗ್ಲಿಷ್ ಕವನವನ್ನು ಮತ್ತು ಅದರ ಕನ್ನಡ ಭಾಷಾಂತರವನ್ನು ಪ್ರಸ್ತುತ ಪಡಿಸಲಾಯಿತು. ಕ್ಯಾತಿ ಅವರಿಗೆ ನಮ್ಮ ಕನ್ನಡ ಭಾಷೆಯ ಅಸ್ತಿತ್ವವನ್ನು ಮತ್ತು ಭಾರತದ ಸಾಹಿತ್ಯ ಕ್ಷೇತ್ರದಲ್ಲಿ  ಅದು ತಂದಿರುವ  ಸಮೃಧ್ಧತೆಯನ್ನು ಪರಿಚಯಿಸಿಕೊಡಲಾಯಿತು. ಇಂಗ್ಲಿಷ್ ಭಾಷೆ ಹೇಗೆ ನಮ್ಮ ಹಿರಿಯ ಕವಿಗಳಿಗೆ ಸ್ಫೂರ್ತಿ ಮತ್ತು  ಕನ್ನಡ ಸಾಹಿತ್ಯದ ಮೇಲೆ ಪರಿಣಾಮ  ಬೀರಿದೆ ಎಂಬ ವಿಚಾರವನ್ನು ನಾನು ನನ್ನ ಸ್ವಾಗತ ಭಾಷಣದಲ್ಲಿ ತಿಳಿಸಿದೆ.  ಕನ್ನಡ ಭಾಷೆಯ ಸ್ಥಾನ ಮಾನಗಳ ಬಗ್ಗೆ ಕ್ಯಾತಿ ಅವರು ಆಶ್ಚರ್ಯ ಮತ್ತು ಮೆಚ್ಚುಗಳನ್ನು ವ್ಯಕ್ತಪಡಿಸಿದರು. ಅವರು ಡಾರ್ಬಿ ಶೈರ್ ಕಾರ್ಖಾನೆಯನ್ನು ಕುರಿತು ಬರೆದ ಒಂದು ಜನಪ್ರಿಯ ನೀಳ್ಗವಿತೆಯನ್ನು ಪ್ರಸ್ತುತ ಪಡಿಸಿದರು.

೨೦೧೭ ನ ಬ್ರಾಡ್ ಫೋರ್ಡ್  ಯುಗಾದಿ ಕಾರ್ಯಕ್ರಮಕ್ಕೆ ನಮ್ಮಂತೆ ಅನಿವಾಸಿಗಳಾದ ಅಮೆರಿಕನ್ನಡಿಗ , ಖ್ಯಾತ ಲೇಖಕ ಕವಿ ಮೈ ಶ್ರೀ ನಟರಾಜ್ ಅತಿಥಿಗಳಾಗಿ ಆಗಮಿಸಿದ್ದರು. ಆ ಕಾರ್ಯಕ್ರಮಕ್ಕೆ ‘ಕನ್ನಡ ಪ್ರಜ್ಞೆ’ ಎಂಬ ಶೀರ್ಷಿಕೆಯನ್ನು ನೀಡಲಾಗಿತ್ತು. ನಟರಾಜ್ ಅವರು ಈ ವಿಚಾರದ  ಬಗ್ಗೆ ಮಾತನಾಡುತ್ತಾ ” ಬಾಲ್ಯದಲ್ಲಿ ಕಲಿತ ನಮ್ಮ ಮೌಲ್ಯಗಳು ಮತ್ತು ಆಧ್ಯಾತ್ಮಿಕ ಬುನಾದಿ ಭದ್ರವಾಗಿದ್ದರೆ ನಾವು ಹೊರದೇಶದಲ್ಲಿದ್ದುಕೊಂಡೂ ನಮ್ಮ ತನವನ್ನು ಉಳಿಸಿಕೊಳ್ಳಬಹುದು ” ಎಂದು ಅಭಿಪ್ರಾಯಪಟ್ಟರು. ” ಬಹಳಷ್ಟು  ಐರೋಪ್ಯ ಭಾಷೆಗಳು ಶೈಶಾವಸ್ಥೆಯಲ್ಲಿದ್ದ ಕಾಲಕ್ಕೆ ಸಕಲ ಆಧ್ಯಾತ್ಮ ಸಾರವನ್ನು ಒಳಗೊಂಡ ವಚನ ಸಾಹಿತ್ಯದಂತಹ  ಅದ್ವಿತೀಯ ಸಾಹಿತ್ಯಕ್ಕೆ ಜನ್ಮ ಕೊಟ್ಟಂತಹ ಭಾಷೆ ಕನ್ನಡವಾಗಿದ್ದರೂ ಇಂಥ ಮಹಾನ್ ಭಾಷೆಯ ಮೇಲೆ ಕನ್ನಡಿಗರಿಗೆ ಅಭಿಮಾನವಿಲ್ಲದಿರುವುದು ಒಂದು ದುರಂತ” ಎಂಬ ವಿಚಾರದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ನಮ್ಮ ಅನಿವಾಸಿ ಸದಸ್ಯರು ಕನ್ನಡ ಪ್ರಜ್ಞೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

೨೦೧೭ರ ದೀಪಾವಳಿ ಕಾರ್ಯಕ್ರಮ ಬೆಡ್ ಫೋರ್ಡ್ ನಲ್ಲಿ ನಡೆಯಿತು. ಖ್ಯಾತ ಕವಿ  ಡುಂಡಿರಾಜ್ ಅತಿಥಿಗಳಾಗಿ ಆಗಮಿಸಿದ್ದರು.

ಹನಿಗವನಗಳ ಚಕ್ರವರ್ತಿಯೆಂದೇ ಹೆಸರಾಗಿರುವ ಅವರ ಹಾಜರಿನಲ್ಲಿ ಅನಿವಾಸಿ ಕವಿಗಳು ತಮ್ಮ ಹನಿಗವನಗಳನ್ನು ಪ್ರಸ್ತುತ ಪಡಿಸಿದರು. ಇಲ್ಲಿ ಓದಿದ ಅನೇಕ ಹನಿಗವನಗಳು ಉತ್ತಮ ಮಟ್ಟದಾಗಿದ್ದವು ಎನ್ನುವುದು ಡುಂಡಿರಾಜ್ ಅವರ ಅಭಿಪ್ರಾಯವಾಗಿತ್ತು. ಅಂದಿನ ಸಭೆಯಲ್ಲಿ ಸುಮಾರು ಒಂದು ತಾಸು ತಮ್ಮ ಹನಿಗವನಗಳ ಸುತ್ತ ಹೆಣೆದ ಅವರ ಭಾಷಣ ಎಲ್ಲರ ಮನ್ನಣೆಗಳಿಸಿತ್ತು. ಅವರ ಒಂದು ಹನಿಗವನದಲ್ಲಿ ನಮ್ಮ ಕನ್ನಡ  ಪ್ರಜ್ಞೆಯನ್ನು ಟೀಕಿಸುದ್ದು ಹೀಗೆ:

ತಮಿಳರ ಜೊತೆ ತಮಿಳಲ್ಲಿ ಮಾತನಾಡಿ

ತೆಲುಗರ ಜೊತೆ ತೆಲುಗಿನಲ್ಲಿ ಮಾತಾಡಿ

ಕನ್ನಡಿಗರ ಜೊತೆ ಇಂಗ್ಲಿಷಿನಲ್ಲಿ ಮಾತನಾಡುವವನೇ ಕನ್ನಡಿಗ !!

೨೦೧೮ ಕೊವೆಂಟ್ರಿ ಯಲ್ಲಿ  ನಡೆದ ಯುಗಾದಿ ಕಾರ್ಯಕ್ರಮದಲ್ಲಿ  ಶಿಕ್ಶಣ ತಜ್ಞ , ಅಂಕಣಕಾರ ಮತ್ತು  ಉತ್ತಮ ವಾಗ್ಮಿ  ಗುರುರಾಜ್ ಕರ್ಜಗಿ ಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು . ಈ ಕಾರ್ಯಕ್ರಮವನ್ನು ಡಿ.ವಿ.ಜಿ. ಸ್ಮರಣೆ ಎಂಬ ಶೀರ್ಷಿಕೆಯಲ್ಲಿ ಆಚರಿಸಲಾಗಿತ್ತು. ಅನಿವಾಸಿ ತಂಡದ ಸದಸ್ಯರು ಡಿ ವಿ ಜಿ ಅವರ ಕಗ್ಗದ ಬಗ್ಗೆ ಮಾತನಾಡಿದ ಬಳಿಕ  ಕರ್ಜಗಿಯವರು ಆ ಕಗ್ಗಕ್ಕೆ ತಮ್ಮ ವ್ಯಾಖ್ಯಾನ ತಂದುಗೂಡಿಸಿ ಕಗ್ಗದಲ್ಲಿರುವ ಲೌಕಿಕ ಮತ್ತು ಪಾರಮಾರ್ಥಿಕ ಮೌಲ್ಯಗಳನ್ನು ವಿವರಿಸಿದರು.

ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ  ಹಿನ್ನೆಲೆಯನ್ನು ಮತ್ತು ಅವರ ವೈಯುಕ್ತಿಕ ಬದುಕಿನ ಏರು ಪೇರುಗಳು, ಅನುಭವಗಳು ಹೇಗೆ ಅವರ ಸಾಹಿತ್ಯದಲ್ಲಿ ಮೂಡಿಬಂದಿದೆ ಎಂಬ ವಿಚಾರವನ್ನು ಶುದ್ಧ ಕನ್ನಡದಲ್ಲಿ ವಿವರಿಸಿದರು. ಅವರ ಭಾಷಣದಲ್ಲಿ ಮಂಕುತಿಮ್ಮನ ಕಗ್ಗ ನಮ್ಮ ದಿನನಿತ್ಯ ಬದುಕಿಗೆ ಕನ್ನಡಿ ಹಿಡಿದಿರುವ ಬಗ್ಗೆ ಉದಾಹರಣೆಗಳೊಂದಿಗೆ ಮನ ಮುಟ್ಟುವಂತೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಅನಿವಾಸಿಗಳು ಹೊರತಂದ “ಪ್ರೀತಿ ಎಂಬ ಚುಂಬಕ ” ಧ್ವನಿ ಮುದ್ರಿಕೆಯನ್ನು ಬಿಡುಗಡೆ ಮಾಡಿದರು.

೨೦೧೮ ದೀಪಾವಳಿ ಕಾರ್ಯಕ್ರಮ ಕೇಂಬ್ರಿಡ್ಜ್ ನಗರದಲ್ಲಿ ಜರುಗಿತು. ಖ್ಯಾತ ಹಾಸ್ಯ ಚತುರೆ ಶ್ರೀಮತಿ ಸುಧಾ ಬರಗೂರು ಅವರ ಸಮ್ಮುಖದಲ್ಲಿ  ಮತ್ತು ನಮ್ಮ ಹಿರಿಯ ಮಹಿಳಾ ಸದಸ್ಯರಾದ ಡಾ.ವತ್ಸಲಾ ರಾಮಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕನ್ನಡದ ಮಹಿಳಾ ಲೇಖಕಿಯರ ಬಗ್ಗೆ ಚರ್ಚೆನಡೆಯಿತು. ಪುರುಷ ಪ್ರಧಾನವಾದ ಸಮಾಜದಲ್ಲಿ ಹೇಗೆ ಅನೇಕ ಲೇಖಕಿಯರು ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾದರು ಎಂಬ ವಿಚಾರವವನ್ನು ವತ್ಸಲಾ ಅವರು ವಿವರಿಸಿದರು. ಸುಧಾ ಬರಗೂರು ” ನಾನು ಸಾಹಿತ್ಯವನ್ನು ಓದಿಕೊಂಡು ಬೆಳೆದವಳು, ನನಗೆ ಬರವಣಿಗೆಗಿಂತ ಮಾತೆ ನನ್ನ ಬಂಡವಾಳ” ಎಂದು ಹೇಳುತ್ತಾ ತಮ್ಮ ಹಾಸ್ಯ ಮತ್ತು ಸಾಹಿತ್ಯ ಪ್ರಜ್ಞೆಯನ್ನು ಒಳಗೊಂಡ ಭಾಷಣದಲ್ಲಿ ಎಲ್ಲರನ್ನೂ ರಂಜಿಸಿದರು. ಸುಧಾ ಅವರು ಮುಖ್ಯ ಸಭಾಂಗಣದಲ್ಲಿ ಒಂದು ತಾಸಿಗೂ ಮೀರಿ ನೆರದ ಎಲ್ಲರನ್ನು ನಕ್ಕು ನಗಿಸಿದರು. ಕಾರ್ಯಕ್ರಮದ ಮಧ್ಯದಲ್ಲಿ ಅವರಿಗೆ ನೀರು ಸರಬರಾಜು ಮಾಡಿದ ಸ್ಥಳೀಯ ಸಂಯೋಜಕ ತಿಪ್ಪೆಸ್ವಾಮೀ ಅವರಿಗೆ;   ‘ಏನ್ರಿ ಸ್ವಾಮಿ, ನಾನು ಎಷ್ಟೋ ಜನಕ್ಕೆ ನೀರು ಕುಡಿಸಿದ್ದೀನಿ ನೀವು ನಂಗೆ ನೀರು ಕುಡಿಸೋಕೆ ಬರ್ತಿರಾ? ಎಂದುದ್ದು ಸುಧಾ ಬರಗೂರು!  ಒದಗಿದ ಅವಕಾಶವನ್ನು ಬಳೆಸಿಕೊಂಡು  ಹಾಸ್ಯವನ್ನು ಸೃಷ್ಟಿಸುವಲ್ಲಿ  ಸುಧಾ ಪಳಗಿದವರು,  ಅವರ ಹಾಸ್ಯ ಪ್ರಜ್ಞೆ ಅನನ್ಯ ವಾದದ್ದು.

ಅನಿವಾಸಿ ಸದಸ್ಯರು ಕನ್ನಡ ಪ್ರಮುಖ ಲೇಖಕಿಯರಾದ ಅನುಪಮಾ ನಿರಂಜನ, ನೇಮಿ ಚಂದ್ರ, ಭುವನೇಶ್ವರಿ ಹೆಗ್ಗಡೆ,  ಗೌರಿ ಲಂಕೇಶ್,  ಸುಧಾ ಮೂರ್ತಿ, ಸುನಂದಾ ಬೆಳಗಾವ್ಕರ್ ಮತ್ತು ಪ್ರತಿಭಾ ನಂದಕುಮಾರ್  ಅವರನ್ನು ಕುರಿತು ಮಾತನಾಡಿದರು.

೨೦೧೯  ಡೋಂಕಾಸ್ಟರ್ ನಗರದಲ್ಲಿ ನಡೆದ ಯುಗಾದಿ ಕಾರ್ಯಕ್ರಮಕ್ಕೆ ಕನ್ನಡ ಚಲನ ಚಿತ್ರದ ಖ್ಯಾತ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿಯವರು ಆಗಮಿಸಿದ್ದು ಅವರ ಕಲಾತ್ಮಕ ಚಿತ್ರಗಳ ಪರಿಚಯ ಮಾಡಿಕೊಡುವ “ಕಾಫಿ ವಿಥ್ ಕಾಸರವಳ್ಳಿ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಸುಮಾರು ೭೫ ನಿಮಿಷಗಳ ಈ ಕಾರ್ಯಕ್ರಮದಲ್ಲಿ ಅನಿವಾಸಿ ಸದಸ್ಯರು ಕಾಸರವಳ್ಳಿಯವರ ೬ ಚಿತ್ರಗಳ ತುಣುಕುಗಳನ್ನು ತೆರೆಯ ಮೇಲೆ ತೋರಿಸಿ ಆ ಚಿತ್ರದ ಬಗ್ಗೆ ಒಂದು ಕಿರು ವಿಮರ್ಶೆಯನ್ನು ಒದಗಿಸಿದರು. ಕಾಸರವಳ್ಳಿಯವರು ಆಯಾ ಸಿನಿಮಾಗಳ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿ ಅನಿವಾಸಿ ಸದಸ್ಯರು ಕೇಳಿದ ಪ್ರಶ್ನೆಗಳನ್ನು ಉತ್ತರಿಸಿದರು. “ಸಿನಿಮಾ ಸಾಹಿತ್ಯಕ್ಕಿಂತ ಪ್ರಬಲವಾದ ಮಾಧ್ಯಮ, ಸಾಹಿತ್ಯವನ್ನು ಸಿನಿಮಾವಾಗಿ ಪರಿವರ್ತಿಸಬೇಕಾದರೆ ಹಲವಾರು ಬದಲಾವಣೆಗಳನ್ನು ತರುವುದು ಅನಿವಾರ್ಯ, ಆ ಬದಲಾವಣೆಗಳು ಮೂಲ ಕಥೆಯನ್ನು ಸಂವೃದ್ಧಿ ಗೊಳಿಸಬೇಕು ಎಂದು ನುಡಿದರು. ಫಾರ್ಮಸಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ತಮನ್ನು ಕನ್ನಡ ಸಾಹಿತ್ಯ ಮತ್ತು ಕಲೆಯಲ್ಲಿ ಹಿಂದೆ ನಡೆದ ನವೋದಯ ಕ್ರಾಂತಿ ಮತ್ತು ಹೊಸ ಅಲೆ ಸಿನಿಮಾದೆಡೆಗೆ ಹೇಗೆ ಆಕರ್ಷಿಸಿತು ಎಂದು ವಿವರಿಸಿದರು. ಸತ್ಯಜಿತ್ ರೇ ಕುರುಸೋವಾ ಮುಂತಾದ ಮಹಾನ್ ನಿರ್ದೇಶಕರು ತಮ್ಮ ಮೇಲೆ ಗಾಢವಾದ ಪ್ರಭಾವ ಬಿರಿದುದನ್ನು ಅವರು ಸ್ಮರಿಸಿದರು .

ನಾನು ನಡೆಸಿಕೊಟ್ಟ ಸಂದರ್ಶನದಲ್ಲಿ ಒಂದು ಸಿನಿಮಾಗೆ ಸಮಾಜದಲ್ಲಿ ಪರಿವರ್ತನೆಗಳನ್ನು ತರುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ, ‘ಸಿನಿಮಾಗೆ ಪ್ರಬಲವಾದ ಶಕ್ತಿಯಿದೆ ಅದು ಅಭಿಪ್ರಾಯವನ್ನು ಬೇರೆಯವರ ಮೇಲೆ ಹೇರದೆ ಒಳ ಸಂವಾದವನ್ನು ಹುಟ್ಟು ಹಾಕಬೇಕು, ಒಂದು ಕಥೆ ಒಬ್ಬ ವ್ಯಕ್ತಿಯ ಆಲೋಚನಾ ಕ್ರಮವನ್ನು ಅರಳಿಸಬೇಕು ಹೊರತು ಕೆರಳಿಸಬಾರದು.  ಹೀಗಾಗದಿದ್ದಲ್ಲಿ ಅದು ಫ್ಯಾಸಿಸ್ಟ್ ಜೀವನಕ್ರಮದ ಸಿನಿಮಾ ಎಂದು ಗುರುತಿಸಬೇಕಾಗುತ್ತದೆ, ಸಿನಿಮಾ ಅಭಿಪ್ರಾಯಗಳು ನಮ್ಮನ್ನು ಅರಳಿಸಿದಾಗ ನಮ್ಮ ಆಲೋಚನಾ ಕ್ರಮದಿಂದ ಸಿನಿಮಾ ಕೂಡ ಬೆಳೆಯುವ ಸಾಧ್ಯತೆಗಳಿವೆ . ಸಿನಿಮಾ ಒಂದು ಸಂಸ್ಕೃತಿಯ ಕನ್ನಡಿಯಾಗಿರಬೇಕು, ಅದು ವಾಣಿಜ್ಯ ದೃಷ್ಟಿಯಿಂದ ವಾಸ್ತವ ಬದುಕಿಗೆ ದೂರವಾಗಿ ಯಾವುದೋ ಕಾಲ್ಪನಿಕ ಪ್ರಪಂಚವನ್ನು ಕಟ್ಟುವ ಪ್ರಯತ್ನವಾಗಬಾರದು” ಎಂದು ನುಡಿದರು

ಒಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ‘ಅನಿವಾಸಿ’ ಬಳಗವು ಯು.ಕೆ ಕನ್ನಡ ಬಳಗದ ಆಶ್ರಯದಲ್ಲಿ , ಬಳಗದ ದ್ವಿವಾರ್ಷಿಕ  ಸಂಭ್ರಮಗಳಲ್ಲಿ ಪರ್ಯಾಯ ಸಾಹಿತ್ಯ ಗೋಷ್ಠಿಯನ್ನು ಆಯೋಜಿಸುತ್ತಾ ಬಳಗದ ಒಂದು ಅಂಗವಾಗಿ ಬೆಳದು ಬಂದಿದೆ . ಹೀಗಾಗಿ ಕನ್ನಡ ಬಳಗ ಮತ್ತು ‘ಅನಿವಾಸಿ’ ಇವೆರಡನ್ನೂ ಬೇರ್ಪಡಿಸಿ ನೋಡುವುದು ಅಸಮಂಜಸ. ಇವೆರಡರ  ಉದ್ದೇಶ ಧ್ಯೇಯಗಳು ಒಂದೇ ಆಗಿ ಬೆಸೆದುಕೊಂಡು ಒಂದನ್ನೊಂದು ಅವಲಂಬಿಸಿವೆ. ಕನ್ನಡ ಬಳಗವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒದಗಿಸಿದರೆ ಅನಿವಾಸಿ ಬಳಗವು ಸಾಹಿತ್ಯ ಕಾರ್ಯಕ್ರಮಗಳನ್ನು ನೀಡಿದೆ. ‘ಅನಿವಾಸಿ’ ಕಾರ್ಯಕ್ರಮಗಳು ನಮಗೆ ಶೈಕ್ಷಣಿಕ ಮತ್ತು ಬೌದ್ಧಿಕ ಶ್ರೀಮಂತಿಕೆಯನ್ನು ತಂದಿದೆ. ಕಾರ್ಯಕ್ರಮಕ್ಕೆ ಆಹ್ವಾನಿತರಾದ ಗಣ್ಯ ಸಾಹಿತಿ ಮತ್ತು ಕಲಾವಿದರಿಂದ ಸಾಕಷ್ಟು ಕಲಿತಿದ್ದೇವೆ, ಕಲಿತದ್ದನ್ನು ಜಾಲಾ ಜಗುಲಿಯಲ್ಲಿ  ಹಂಚಿಕೊಂಡಿದ್ದೇವೆ. ಈ ಕಾರ್ಯಕ್ರಮದ ಹಿಂದೆ ಅನಿವಾಸಿ ಸದಸ್ಯರು ಮೀಟಿಂಗ್ ಗಳಲ್ಲಿ ಕಾರ್ಯಕ್ರಮದ ಸ್ವರೂಪವನ್ನು ಆಲೋಚಿಸಿದ್ದು, ಸಾಕಷ್ಟು ಪೂರ್ವಸಿದ್ಧತೆ ಮತ್ತು  ಪರಿಶ್ರಮಗಳಿಂದ ಕಾರ್ಯಕ್ರಮಗಳು ಯಶಸ್ಸನ್ನು ಕಂಡು ಜನರ ಪ್ರಶಂಸೆಗಳನ್ನುಗಳಿಸಿದೆ.  ಜನಬಲ ಮತ್ತು ಅವಕಾಶ ಇವುಗಳನ್ನು ಯು.ಕೆ. ಕನ್ನಡ ಬಳಗವು ಒದಗಿಸಿದೆ. ‘ಅನಿವಾಸಿ’ಯಲ್ಲಿ ಹಲವು ಸಂಸ್ಥೆಗಳಿಗಿರುವ ಔಪಚಾರಿಕ ಸ್ವರೂಪ ಅಂದರೆ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಈ ವ್ಯವಸ್ಥೆಯಿಲ್ಲ. ಇಲ್ಲಿ ಎಲ್ಲರೂ ಕಾರ್ಯಪ್ರವೃತ್ತರೇ! ಯಶಸ್ಸಿನಲ್ಲಿ ಎಲ್ಲರೂ ಸಹಭಾಗಿಗಳೇ!

ಈ ಸಂದರ್ಭದಲ್ಲಿ ಇನ್ನೊಂದು ವಿಚಾರವನ್ನು ಪ್ರಸ್ತಾಪ ಮಾಡುವುದು ಅಗತ್ಯ. ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ ಯು.ಕೆ.ಕನ್ನಡ ಬಳಗದ ಅಂಗವಾಗಿದ್ದರೂ ಬಳಗದ ಹೊರಗೆ, ‘ಅನಿವಾಸಿ’ ಎಂಬ ಜಾಲ ಜಗುಲಿ ತಾಣದಲ್ಲಿ ತನ್ನದೇ  ಆದ ಅಸ್ತಿತ್ವವನ್ನು ಉಳಿಸಿಕೊಂಡು ಯು.ಕೆ ಯಲ್ಲಿರುವ ಎಲ್ಲ ಕನ್ನಡಿಗರು ಭಾಗವಹಿಸಬಹುದಾದ  ವಿಚಾರ ವೇದಿಕೆಯಾಗಿದೆ. ಈ ತಾಣಕ್ಕೆ ಬೇಕಾದ ಆರ್ಥಿಕ ಮತ್ತು ಆಡಳಿತ ಬೆಂಬಲ ಅನಿವಾಸಿ ಸದಸ್ಯರಿಂದ ಬಂದಿದೆ.

‘ಅನಿವಾಸಿ’ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ  ಕೆಲವು ಮಕ್ಕಳಾದ ಅಮೋಘ ರಾಮಶರಣ್, ದೀಕ್ಷಾ ಬಿಲ್ಲಹಳ್ಳಿ ಹಾಗು ಸಿಯ ಕುಲಕರ್ಣಿ ಹೆಸರನ್ನು ವಿಶೇಷವಾಗಿ ಪ್ರಸ್ತಾಪಿಸುತ್ತಿದ್ದೇನೆ. ಈ ಮಕ್ಕಳು ತಮ್ಮ ಕವಿತೆಗಳನ್ನು ಕಾರ್ಯಕ್ರಮದಲ್ಲಿ ಓದಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ನಮ್ಮ ಎರಡನೇ ಪೀಳಿಗೆಯ ನವ್ಯ ಆನಂದ್, ರಜತ್ ಸತ್ಯ ಪ್ರಕಾಶ್, ಸೂರ್ಯ, ವರುಣ ಹೀಗೆ ಅನೇಕ ಯುವಕರು, ಕಿರಿಯರು ನಮ್ಮ ಜಾಲಜಗುಲಿಯಲ್ಲಿ ಬರೆದಿದ್ದನ್ನು ನೆನೆಯುತ್ತೇನೆ. (ಇನ್ನು ಯಾವುದಾದರೂ ಹೆಸರನ್ನು ನಾನು ಮರೆತಿದ್ದಲ್ಲಿ  ಕ್ಷಮೆ ಇರಲಿ)  ಮುಂದಿನ ಪೀಳಿಗೆಯ ಯುವ ಮತ್ತು ಕಿರಿಯ ಸದಸ್ಯರು ಅನಿವಾಸಿ ಕಾರ್ಯಕ್ರಮದಲ್ಲಿ ಮತ್ತು ಜಲಜಗುಲಿಯಲ್ಲಿ ಭಾಗವಹಿಸಿರುವುದು ಅತ್ಯಂತ ಸಂತೋಷದ ಮತ್ತು ತೃಪ್ತಿನೀಡಿರುವ ವಿಷಯ. ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಲಿ ಎಂದು ಆಶಿಸುತ್ತೇನೆ.

‘ಅನಿವಾಸಿ’ಯ ಮುಂದಿನ ಐದು ವರ್ಷಗಳ ಯೋಜನೆಗಳೇನು? ಎಂಬ ಆಲೋಚನೆ ಈ ಘಳಿಗೆಯಲ್ಲಿ ಮೂಡುವುದು ಸಹಜ. ಮುಂದೆ ನಮ್ಮ ಕಾರ್ಯಕ್ರಮಗಳ ಸ್ವರೂಪ ಹೇಗಿರಬೇಕು ? ನಮ್ಮ ವಿಸ್ತಾರಗಳನ್ನು ಚಾಚುವುದು ಹೇಗೆ ? ಇನ್ನು ಹೆಚ್ಚಿನ ಸಾಹಿತ್ಯಾಸಕ್ತರನ್ನು ಆಕರ್ಷಿಸುವುದು ಹೇಗೆ ? ಈ ವಿಚಾರಗಳ ಬಗ್ಗೆ ಗಾಢವಾಗಿ ಆಲೋಚಿಸಬೇಕಾಗಿದೆ. ಜಾಗತೀಕರಣದ ಈ ಯುಗದಲ್ಲಿ ಸೋಷಿಯಲ್ ಮೀಡಿಯಾಗಳ ಅನುಕೂಲತೆಯಲ್ಲಿ, ನಮ್ಮ ಹಿನ್ನೆಲೆಗಳೇನೇ ಇರಲಿ, ಯು.ಕೆ.ಯಲ್ಲಿ ಎಲ್ಲೇ ಇರಲಿ  ನಾವು ಒಟ್ಟಾಗಿ ಈ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ.

ಪ್ರತ್ಯಕ್ಷವಾಗಿ ನಮಗೆ ಆಶ್ರಯ ಮತ್ತು ಬೆಂಬಲವನ್ನು ನೀಡುತ್ತಿರುವ ಯು.ಕೆ ಕನ್ನಡ ಬಳಗಕ್ಕೆ ಮತ್ತು ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಕನ್ನಡಿಗರು ಯು.ಕೆ ಮತ್ತು ಇತರ  ಸ್ಥಳೀಯ ಕನ್ನಡ ಸಂಘಗಳಿಗೆ ‘ಅನಿವಾಸಿ’ಯ  ಕೃತಜ್ಞತೆಗಳು.

ಕೃಪೆ: ಈ ಬರವಣಿಗೆಗೆ ಬೇಕಾದ ಕೆಲವು ಮಾಹಿತಿಯನ್ನು ‘ಅನಿವಾಸಿ’ ಜಾಲಜಗುಲಿಯಲ್ಲಿ ಪ್ರಕಟವಾಗಿರುವ ವರದಿಗಳಿಂದ ಆಯ್ದುಕೊಳ್ಳಲಾಗಿದೆ.

ಸೂಚನೆ: ಇಲ್ಲಿ ಕೆಲವು ಅನಿವಾಸಿ ಸದಸ್ಯರುಗಳ ಹೆಸರುಗಳನ್ನು ಪ್ರಸ್ತಾಪ ಮಾಡಲಾಗಿದೆ,  ಇದು ಸಂಧರ್ಭ ನಿಮಿತ್ತವಷ್ಟೇ . ನಮ್ಮಲ್ಲಿನ  ಅನೇಕ ಸದಸ್ಯರು ಕಾರ್ಯಕ್ರಮದಲ್ಲಿ ನೆರವಾಗಿದ್ದಾರೆ. ಈ ಬರವಣಿಗೆಯನ್ನು ಸಂಕ್ಷಿಪ್ತವಾಗಿಡುವ ಸಲುವಾಗಿ ಅನೇಕರ ಹೆಸರುಗಳನ್ನು ಪ್ರಸ್ತಾಪಿಸಿಲ್ಲ. ಕ್ಷಮೆ ಇರಲಿ.

ಡಾ. ಜಿ. ಎಸ್. ಶಿವಪ್ರಸಾದ್

( ಮುಂದಿನ ವಾರ- ಋತು ಗೀತೆಗಳು)

 

 

9 thoughts on “ಅನಿವಾಸಿಗೆ ಐದು ವರ್ಷ ; ಹೊಸ ಚಿಗುರು ಹೊಸ ಬೇರು-ಡಾ. ಜಿ. ಎಸ್. ಶಿವಪ್ರಸಾದ್

  1. ನಿಮ್ಮ ಲೇಖನ ಓದಿ ಖುಷಿಯಾಯಿತು. ಹೊರನಾಡಲ್ಲಿ ನಮ್ಮವರ ಸಾಧನೆ ನೋಡಿ ಹೆಮ್ಮೆ ಎನಿಸುತ್ತದೆ. ಹೀಗೆ ನಿಮ್ಮ ಸಂಘದ ಚಟುವಟಿಕೆಗಳ ಬಗೆಗೆ ನಮಗೆ ತಿಳಿಸುತ್ತಾ ಇರಿ.

    Like

  2. ಈ ಲೇಖನದಲ್ಲಿರುವ ಕಾರ್ಯಕ್ರಮಗಳಲ್ಲಿ ಹೆಚ್ಚಿನವು ನಿಮ್ಮ ಶ್ರಮದಿಂದ ನನಸಾದವು ಎಂದರೆ ತಪ್ಪಲ್ಲ. ಅನಿವಾಸಿಯ ಬೆಳವಣಿಗೆಯಲ್ಲಿ ನಿಮ್ಮ ಪಾತ್ರ ಮಹತ್ವದ್ದು.
    ನಿಮ್ಮ ಲೇಖನ ನಾವು ಕನ್ನಡ ಸಾಹಿತ್ಯದ ತಾರೆಗಳೊಡನೆ ಕಳೆದ ರಸ ನಿಮಿಷಗಳನ್ನು ಹಿತವಾಗಿ ಮೆಲುಕು ಹಾಕಿಸಿದೆ.

    Like

  3. ಪ್ರಸಾದ್,
    ನಿಮ್ಮ ಲೇಖನವು ಹೊರನಾಡಿನಲ್ಲಿ ಪುಟ್ಟದೊಂದು ಕನ್ನಡಿಗರ ಗುಂಪು ಐದು ವರ್ಷಗಳಿಂದ ನಡೆಸುತ್ತ ಬಂದಿರುವ ಸಾಹಿತ್ಯ ಮತ್ತು ಸಂಸ್ಕೃತಿ ಚಟುವಟಿಕೆಗಳ ಬೃಹತ್ ಕಥನವನ್ನು ಸಂಕ್ಷಿಪ್ತವಾಗಿ ನಮ್ಮ ಮುಂದಿಟ್ಟಿದೆ. ನೀವು ಒದಗಿಸಿರುವ ವಿವರಗಳನ್ನು ಓದಿದಾಗ ಅಬ್ಬಾ, ದಾರಿಯುದ್ದಕ್ಕೂ KSSVV ಮತ್ತು ‘ಅನಿವಾಸಿ’ ಜಾಲಜಗುಲಿ ಪತ್ರಿಕೆ ಇಷ್ಟೆಲ್ಲಾಸಸಿ, ಮೈಲಿಗಲ್ಲುಗಳನ್ನು ನೆಟ್ಟಿತಾ ಎಂದು ಬೆರಗುಗೊಳ್ಳದೇ ಇರಲಾಗದು. ಕರ್ನಾಟಕದ ಸಾಹಿತ್ಯ ಮತ್ತು ಸಂಸ್ಕೃತಿ ಲೋಕದ ‘ತಾರೆ’ ಗಳನ್ನು ಕನ್ನಡಬಳಗಕ್ಕೆ ಮತ್ತು ಇಂಗ್ಲೆಂಡಿಗೆ ಕರೆತಂದು ಅವರನ್ನು ಕನ್ನಡದ ಹಳೆ ಮತ್ತು ಹೊಸ ಬೇರುಗಳಿಗೆ – ಹಿರಿಯ/ಕಿರಿಯರಿಗೆ – ಪರಿಚಯಿಸಿದ ಕೀರ್ತಿ ನಿಮ್ಮದು. ನಿಮ್ಮ ಪ್ರಯತ್ನಗಳಿಂದ KSSVV ಯಂತಹ ಗುಂಪಿಗೆ ದೊಡ್ಡ ಅವಕಾಶಗಳು ಒದಗಿ ಅದು ಸಸಿಯಿಂದ ಮರವಾಗಲು ಚಿಗುರುತ್ತಿದೆ. ಲೇಖನದಲ್ಲಿ ನೀವು ಕಿರಿಯ ಸದಸ್ಯರನ್ನು ನೆನೆದದ್ದು ಖುಷಿಯಾಯ್ತು. ಸಾಹಿತ್ಯ ಕಾರ್ಯಕ್ರಮಗಳ ಸಾರಾಂಶವನ್ನು ಕೊಟ್ಟಿದ್ದು ಅವನ್ನು ಮೆಲುಕು ಹಾಕಲು ಅನುವಾಯ್ತು. ಲೇಖನಕ್ಕೆ ಇನ್ನೂ ಕಳೆಕಟ್ಟಿತು.
    ವಿನತೆ ಶರ್ಮ

    Like

  4. ಅನಿವಾಸಿ ವೇದಿಕೆಯ ಅದ್ಯಪ್ರವರ್ತಕರಲ್ಲಿ ಒಬ್ಬರಾದ ಶಿವಪ್ರಸಾದ್ ಅವರು ಈ ವೇದಿಕೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಈ ಲೇಖನದಲ್ಲಿ ಅವರು ದಾಖಲಿಸಿರುವ ಎಲ್ಲ ಅಂಶಗಳು ಅದನ್ನೇ ಸಾರಿ ಹೇಳುತ್ತಿವೆ. ೨೦೧೪ರ ಏಪ್ರಿಲ್ ತಿಂಗಳಲ್ಲಿ ಲಂಡನ್ನಿನ ಕನ್ಕಾರ್ಡ್ ಹಾಲಿನಲ್ಲಿ ನಡೆದ ಯುಗಾದಿ ಸಮಾರಂಭದಲ್ಲಿ ಅವರೇ ಬರೆದು ನಿರೂಪಿಸಿದ್ದ ಜಿ.ಎಸ.ಎಸ ನುಡಿ-ನಮನದಲ್ಲಿ ಅವರೊಡನೆ ನಿರೂಪಕಿಯಾಗಿದ್ದ ನನಗೆ ಆ ಅನುಭವ ನಿಜಕ್ಕೂ ಸ್ಮರಣೀಯ. ತಮ್ಮ ಕವನಗಳು ಮತ್ತು ಪ್ರವಾಸ ಲೇಖನಗಳನ್ನು ಪುಸ್ತಕ ರೂಪದಲ್ಲಿ ಹೊರತಂದ ಶಿವಪ್ರಸಾದರು ಅವರ ತಂದೆಯವರ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ. ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ಹೀಗೆ ಮುಂದುವರೆಯಲಿ ಎಂದು ಹಾರೈಸುವೆ.
    ಉಮಾ ವೆಂಕಟೇಶ್

    Like

  5. ಪ್ರಸಾದ್ ನಿಮ್ಮ ನಿರೂಪಣೆ ಬಹಳ ಚೆನ್ನಾಗಿದೆ, ಕೇವಲ ಐದು ವರ್ಷದಲ್ಲಿ KSSVV ನೀವೆಲ್ಲರೂ ಸೇರಿ ಬೆಳಸಿದ್ದೀರ ಮತ್ತು ನನ್ನಂತಹವರು ಸಹ ಕನ್ನಡದಲ್ಲಿ ಬರೆಯವುದಕ್ಕೆ ಅವಕಾಶ ಕೊಟ್ಟಿದ್ದೀರ
    ಈ ಹುಟ್ಟಿದಹಬ್ಬವನ್ನು ಇನ್ನೂ ಅದ್ದೂರಿ ಇಂದ ಆಚರಿಸುವುದು ನನ್ನ ಅಸೆ. ಒಂದು ಪ್ರತ್ಯೇಕ ದಿನ ಪೂರ್ತಿ ಕಾರ್ಯಕ್ರಮ ನಡೆಸಲು ಸಾಧ್ಯವೇ ?
    Ramamurthy

    Like

    • ಅನಿವಾಸಿಯ ಸಾಫಲ್ಯದಲ್ಲಿ ನಿಮ್ಮಂಥ ಹಿರಿಯ ಸದಸ್ಯರನ್ನು (ಗೌರವಪೂರ್ವಕವಾಗಿಯೇ. ಹೇಳಿದ್ದೇನೆ!) ಸಹ ಬರಹಗಾರರಾಗುವಂತೆ ಹುರಿದುಂಬಿಸಿದ್ದು! ನಿಮ್ಮ ಆ ಪರಿಶ್ರಮ ನಾ ಬಲ್ಲೆ. ಇನ್ನೂ ಬರೆಯುತ್ತಾ ಇರಿ – ಈ ನಮ್ಮ ‘ತಂಗುದಾಣ’ದಲ್ಲಿ. ಶ್ರೀವತ್ಸ ದೇಸಾಯಿ

      Like

  6. ಪ್ರಸಾದ್ ನಿಮ್ಮ ನಿರೂಪಣೆ ಬಹಳ ಚೆನ್ನಾಗಿದೆ, ಕೇವಲ ಐದು ವರ್ಷದಲ್ಲಿ KSSVV ನೀವೆಲ್ಲರೂ ಸೇರಿ ಬೆಳಸಿದ್ದೀರ ಮತ್ತು ನನ್ನಂತಹವರು ಸಹ ಕನ್ನಡದಲ್ಲಿ ಬರೆಯವುದಕ್ಕೆ ಅವಕಾಶ ಕೊಟ್ಟಿದ್ದೀರ
    ಈ ಹುಟ್ಟಿದಹಬ್ಬವನ್ನು ಇನ್ನೂ ಅದ್ದೂರಿ ಇಂದ ಆಚರಿಸುವುದು ನನ್ನ ಅಸೆ. ಒಂದು ಪ್ರತ್ಯೇಕ ದಿನ ಪೂರ್ತಿ ಕಾರ್ಯಕ್ರಮ ನಡೆಸಲು ಸಾಧ್ಯವೇ ?

    Like

  7. ಪ್ರಸಾದ್ ‘ಅನಿವಾಸಿ’ಗೆ ಎಲೆಮರೆಯ ಕಾಯಿ‌ ಇದ್ದಂತೆ. ಅವರ ವಿನಯ ಮತ್ತು ಸರಳತೆ ನಮಗೆಲ್ಲ ಮಾದರಿ.

    ಕೆಬಿಯುಕೆಯ ಕಾರ್ಯಕ್ರಮಗಳಲ್ಲಿ ‘ಅನಿವಾಸಿ’ಗೆ ವೇದಿಕೆ ಒದಗಿಸಿದವರೇ ಪ್ರಸಾದ್ ಅವರು. ಇಲ್ಲದಿದ್ದರೆ ಸಾಹಿತ್ಯದ ವೇದಿಕೆ ಬರೀ ‘ಬ್ಲಾಗ್’ಗೆ ಮೀಸಲಿರುತ್ತಿತ್ತೋ ಏನೋ.

    ಸಾಹಿತ್ಯದ ಪ್ರತಿ ಕಮ್ಮಟವನ್ನೂ ಆನಂದಿಸಿದ್ದೇನೆ. ಮಾತನಾಡುವ ಕವಿತೆ ಓದುವ ಅವಕಾಶ ಪಡೆದಿದ್ದೇನೆ. ಕನ್ನಡದ ಶ್ರೇಷ್ಟ ಕವಿಗಳ ಎದುರು ನನ್ನ ಕವಿತೆಗಳನ್ನು ಓದಿದ್ದೇನೆ, ಭಾಷಣಗಳನ್ನು ಮಾಡಿದ್ದೇನೆ.

    ಈ ಎಲ್ಲ ಕಾರ್ಯಕ್ರಮಗಳನ್ನು ಸೂಕ್ತವಾಗಿ ದಾಖಲಿಸಿದ್ದಾರೆ.

    ಪ್ರಸಾದ್ ಅವರಿಗೆ ಚಿರ ಋಣಿ.

    ಕೇಶವ

    Like

  8. ಕ ಸಾ ಸಾಂ ವಿ ವೇದಿಕೆ (KSSVV) ಕಳೆದ ಐದು ವರ್ಷಗಳಲ್ಲಿ ನಡೆಸಿಕೊಟ್ಟ ಹತ್ತು ಕಾರ್ಯಕ್ರಮಗಳನ್ನು. ಮತ್ತು ಅವುಗಳಲ್ಲಿ ತಾವು ಸಹ ಸಕ್ರಿಯವಾಗಿ ಪಾಲುಗೊಂಡದ್ದನ್ನು ಸುಂದರವಾಗಿ ಬರೆದು ಪರಿಚಯಿಸಿದ್ದಾರೆ ಪ್ರಸಾದ್ ಅವರು. ಸಂಪಾದಕರು ಬರೆದಂತೆ ‘ಅನಿವಾಸಿ’ ಬಳಗಕ್ಕೆ ಬೆನ್ನೆಲುಬಾಗಿ ನಿಂತವರು ಮತ್ತು ಸಾಹಿತ್ಯಿಕವಾಗಿ ಕೊಟ್ಟವರು. ಅದರ ಚೇತನ ಅನಿವಾಸಿಯ ಮುಂದಿನವರ್ಷಗಳಲ್ಲಿಯೂ ನಮಗೆ ಬೇಕು. ಅನಿವಾಸಿಯಾ ಎಲ್ಲ ಸದಸ್ಯರ ಕೊಡುಗೆಯನ್ನೂ ಇಲ್ಲಿ ನೆನದದ್ದು ಸಮಂಜಸವೇ. ಇತ್ತೀಚಿಗೆ ನಮ್ಮ ವಾಟ್ಸಪ್ ಗುಂಪಿಗೆ ಸೇರಿದವರಿಂದಲೂ ಬರವಣಿಗೆ ಮತ್ತುಅನಿವಾಸಿ ಹಮ್ಮಿಕೊಳ್ಳಬಹುದಾದ ಇತರ ಚಟುವಟಿಕೆಗಳಲ್ಲಿ ಪಾತ್ರವಹಿಸಿಯಾರು ಎನ್ನುವ ನಂಬಿಕೆಯಿದೆ. ಈ ಹಿನ್ನೋಟ ಅವರನ್ನು ಹುರಿದುಂಬಿಸಿಸಿರಬೇಕೆಂಬ ಆಶಯ! ಶ್ರೀವತ್ಸ ದೇಸಾಯಿ

    Like

Leave a comment

This site uses Akismet to reduce spam. Learn how your comment data is processed.