ಈ ವಾರ ಅನಿವಾಸಿಯಲ್ಲಿ ಎರಡು ಲೇಖನಗಳು ಮತ್ತು ಕಣ್ಣೋಟ. ಮೊದಲಿಗೆ, ಕಳೆದ ಶನಿವಾರ ಲೆಸ್ಟರ್ ನಲ್ಲಿ ನಡೆದ ಯುಗಾದಿ ಕಾರ್ಯಕ್ರಮದ ಸಂಕ್ಷಿಪ್ತ ವರದಿ. ಎರಡನೆಯದು, ಯೋಗಿಂದ್ರ ಮರವಂತೆಯವರ ಲೇಖನ.
ಎಂದಿನಂತೆ, ಕಣ್ಣೋಟದಲ್ಲಿ ಎರಡು ಚಿತ್ರಗಳು – ಈ ವಾರದ ಚಿತ್ರಗಳು ಮ್ಯಾಂಚೆಸ್ಟರ್ ನ ಶಾಂತಲಾ ರಾವ್ ತಮ್ಮ ಮೊಬೈಲ್ ಫೋನಿನಲ್ಲಿ ಸೆರೆ ಹಿಡಿದವು. ಮೊಬೈಲ್ ತಂತ್ರ ಬೆಳೆದಂತೆ, ಅದರ ಕ್ಯಾಮೆರಾ ಶಕ್ತಿಯೂ ಬೆಳೆದಿದೆ. ಅದರ ಎರಡು ಉದಾಹರಣೆ ಶಾಂತಲಾ ಅವರ ಫೋಟೋಗಳು. ಅದಕ್ಕೆ ಪೂರಕವಾಗಿ, ಧಾರವಾಡದ ಕನ್ನಡದಲ್ಲಿ ಅವರೇ ಬರೆದ ಹಿನ್ನೆಲೆ ಮತ್ತು ಅವರ ಅನಿಸಿಕೆ.
ಸವಿಗಾನದ ರಸದೌತಣ
ಬಾಳೆಎಲೆ. ಅನ್ನದ ಮೇಲೆ ಬಿಸಿ ಸಾರು. ಆಚೆ ಈಚೆ ಕೋಸುಂಬರಿ, ಪಲ್ಯ, ಹೋಳಿಗೆ, ಹಯಗ್ರೀವ; ಪೂರಿಯ ಜೋಡಿ ಮಾವಿನ ಶೀಕರಣೆ. ಮತ್ತೆ-ಮತ್ತೆ ಕೇಳಿ ಬಡಿಸುವ ಉಪಚಾರ. ಇನ್ನೇನು ಬೇಕು ಹೇಳಿ? ಕೈಯಾಯ್ತು, ಬಾಯಾಯ್ತು. ಬಾಳೆಎಲೆ ಕೀಸಿ-ಕೀಸಿ ಉಂಡವರೇ ಎಲ್ಲ. ನಮ್ಮದು ನಾಲ್ಕನೇ ಪಂಕ್ತಿಯಾದರೂ ಉಪಚಾರದಲ್ಲಿ ಅವಸರವಿರಲಿಲ್ಲ. ನಾವು ನೆಂಟರೂ ಅಲ್ಲ, ಇದು ಯಾರ ಮನೆ ಮದುವೆಯೂ ಅಲ್ಲ. ಇದು, ಕಳೆದ ಶನಿವಾರ (೨೭/೪/೧೯) ಇಂಗ್ಲೆಂಡಿನ ಮಧ್ಯ ಭಾಗದ ಲೆಸ್ಟರ್ ಊರಿನ ಕನ್ನಡಿಗರು ಆಯೋಜಿಸಿದ್ದ ಯುಗಾದಿ ಕಾರ್ಯಕ್ರಮದ ಮಧ್ಯಾಹ್ನದ ಊಟದ ಸಂಭ್ರಮ. ನೂರಾರು ಸಂತೃಪ್ತ ಮುಖಗಳಲ್ಲಿ ಆಯೋಜಕರ ಆಲೋಚನೆ, ಶ್ರಮ ಮತ್ತು ಆತಿಥ್ಯಕ್ಕೆ ಕೃತಜ್ಞತೆ ಸೂಸುತ್ತಿತ್ತು.
ಔತಣ ಹೊಟ್ಟೆಯ ಒತ್ತೊತ್ತಿ ತುಂಬಿದರೆ, ಕಣ್ಣು, ಕಿವಿ ತುಂಬಿದ್ದು, ಸ್ಥಳೀಯ ಕಲಾವಿದರ, ಬಹುವಿಧದ ನೃತ್ಯ, ಹಾಡುಗಳು. ಅದು ಮುಗಿಯುತ್ತಿದ್ದಂತೆ ಮತ್ತೆ ಹೊಟ್ಟೆಗೆ ಸಿಹಿ-ಕಾರ-ಕಾಪಿ. ಇವೆಲ್ಲ ಸಂಜೆಯ ಮುಖ್ಯ ಅಂಕಕ್ಕೆ ಪೀಠಿಕೆ.
ಅದು, ಕರ್ನಾಟಕದ ಇಂದಿನ ಅತಿ ಪ್ರಸಿದ್ಧ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಮತ್ತು ಅವರ ತಂಡದವರ ಹಾಡುಗಾರಿಕೆ. ಮೈಸೂರಿನಿಂದ ಮುಂಬೈಗೆ ಹಾರಿ, ಸಾವಿರಾರು ಜಾಹಿರಾತುಗಳ ಜಿಂಗಲ್ಸ್ ಹಾಡಿ, ಎ. ಆರ್. ರಹಮಾನರ ‘ಜೈ ಹೋ’ ಹಾಡಿನ ಮೊದಲ ಸಾಲು ಹಾಡಿ ವಿಶ್ವವಿಖ್ಯಾತರಾದ ವಿಜಯ ಪ್ರಕಾಶ್, ಹಿನ್ನೆಲೆ ಹಾಡು; ಟಿವಿ ಕಾರ್ಯಕ್ರಮಗಳ ನಿರೂಪಣೆ, ಜಡ್ಜ್, ಹೀಗೆ ಕನ್ನಡಿಗರ ಮನದಲ್ಲಿ ಬೆಳೆದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ತಮ್ಮ ತಂದೆಯನ್ನು ಕಳೆದುಕೊಂಡರೂ, ಅವಶ್ಯ ಕ್ರಿಯೆಗಳೆಲ್ಲ ಮುಗಿದ ತಕ್ಷಣ, ಕಲೆಯನ್ನು ಹಂಚುವ ತಮ್ಮ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಅದು ಅವರ ವೃತ್ತಿಪರತೆ. ಅಂದಿನ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಬೆಂಗಳೂರಿನ ಓಗರ ರೆಡಿ ಫುಡ್ಸ್ ಮಾಲೀಕರು ಸಹ ಇತ್ತೀಚಿಗೆ ತಮ್ಮ ತಂದೆಯನ್ನು ಕಳೆದುಕೊಂಡರೂ, ವಿಜಯ ಪ್ರಕಾಶರ ಒತ್ತಾಸೆಗೆ ಒಪ್ಪಿ ಬಂದೆ ಎಂದು ಹೇಳಿಕೊಂಡರು. ಒಂದು ನಿಮಿಷ ಮೌನದೊಂದಿಗೆ ಅವರಿಬ್ಬರ ಶೋಕಕ್ಕೆ ಸಭೆ ಸ್ಪಂದಿಸಿದ್ದು ಸಮಯೋಚಿತವಾಗಿತ್ತು.
ಹಾಡಿನಲ್ಲಿ ವಿಜಯಪ್ರಕಾಶರ ಜೊತೆಗೆ ಅನುರಾಧ ಭಟ್ ಮತ್ತು ಶಶಿಕಲಾ ಇದ್ದರು. ಇವರಿಬ್ಬರೂ ಹಿನ್ನೆಲೆ ಗಾಯಕರಾಗಿ ಸಾಕಷ್ಟು ಹೆಸರು ಮಾಡಿದವರೇ. ಸುಮಾರು ಮೂರು ಗಂಟೆಗಳ ಕಾಲ ತಡೆಯಿಲ್ಲದೆ ಹರಿದ ಹಾಡುಗಳ ಮಳೆಯಲ್ಲಿ ಸಭಿಕರು ಕುಣಿದು, ಕುಪ್ಪಳಿಸುತ್ತ ನೆನೆದರು. ಲಘು ಹಾಸ್ಯದ ಮಾತುಗಳಲ್ಲಿ ಸಭಿಕರನ್ನು ಛೇಡಿಸುತ್ತ, ಉತ್ಸಾಹಿಸುತ್ತ ತನ್ನೊಂದಿಗೆ ಕರೆದೊಯ್ಯುತ್ತಿದ್ದ ವಿಜಯಪ್ರಕಾಶರ ಶೈಲಿ ಅವರ ಕಂಠದಷ್ಟೇ ಅಪೂರ್ವ.
ಬೇರೆ-ಬೇರೆ ಭಾಷೆಗಳ ಹಾಡುಗಳಲ್ಲಿ ಬೆಳೆದರೂ, ತನ್ನೊಳಗಿನ ಕನ್ನಡತನವನ್ನು ಮೆರೆಸುತ್ತಿರುವ ವಿಜಯಪ್ರಕಾಶ್ ಮತ್ತು ಬೇರೆ ಭಾಷೆ ಸಂಸ್ಕೃತಿಯ ದೇಶದಲ್ಲೂ ಕನ್ನಡತನವನ್ನ ಉಳಿಸಿ, ಬೆಳೆಸಿ, ಹಂಚುತ್ತಿರುವ ಸಭಿಕರ ನಡುವೆ ಹಾಡುಗಳಲ್ಲಿ ನಡೆದ ಸಂವಾದ ಮತ್ತು ಸ್ಪಂದನ, ಬಹಳ ವರ್ಷಗಳ ನಂತರ ತವರಿಗೆ ಮರಳಿದ ಅಕ್ಕ-ತಂಗಿಯರಿಬ್ಬರು ಯಾರಿಗೆ ಅಮ್ಮನ ಮೇಲಿನ ಪ್ರೀತಿ ಹೆಚ್ಚು ಎಂದು ವಾದಿಸಿದಂತಿತ್ತು. ಕಡೆಗೆ ಗೆದ್ದದ್ದು ಕನ್ನಡಮ್ಮನ ಪ್ರೀತಿ.
———————————————–
ಹಾರುವ ಹಕ್ಕಿಗಳು ತೇಲುವ ವಿಮಾನಗಳು
ತನ್ನಿಷ್ಟದ ಪ್ರಪಂಚವನ್ನು ಕಟ್ಟುವಲ್ಲಿ, ಪ್ರಕೃತಿಯೊಂದಿಗಿನ ಸಮರಸವ ಮರೆತು ಮೆರೆಯುತ್ತಿರುವ ಮಾನವ ತನಗೆ ಬಳುವಳಿಯಾಗಿ ದೊರೆತ ತನ್ನ ಸುತ್ತಲಿನ ಸಿರಿಯನ್ನು ಒಂದೊಂದಾಗಿ ನುಂಗುತ್ತಿದ್ದಾನೆ. ಮಾನವನ ಬುದ್ಧಿಗೆ ಯಂತ್ರಗಳ ಶಕ್ತಿ ಸಿಕ್ಕು ಅವು ಹೆಚ್ಚಿದಂತೆ, ಅವನ ಸಾವಿರಾರು ವರ್ಷಗಳ ಕಲ್ಪನೆಗಳಿಗೆ ರೆಕ್ಕೆ-ಪುಕ್ಕ ಸಿಕ್ಕಿ, ಕಳೆದ ಶತಮಾನದ ಆರಂಭಕ್ಕೆ ಮೊದಲು ಹಾರಿದ ಯಂತ್ರದ-ಹಕ್ಕಿ ಆಗಸದ ದಾರಿ ತೆರೆದು ಕೊಟ್ಟಿತು. ಅಲ್ಲಿಗೆ ಹಕ್ಕಿಗಳ ಸ್ವಚ್ಛಂದ ಹಾರಾಟದ ಕೊನೆಗೆ ನಾಂದಿಯಾಯಿತು. ಹಾರುವ ಜನ ಬೆಳೆದಷ್ಟೂ ಹೆಚ್ಚಿದ ವಿಮಾನಗಳು ನುಂಗಿದ ಹಕ್ಕಿಗಳ ಲೆಕ್ಕ ಇಲ್ಲ. ಹಾಗೆಯೇ, ದೊಡ್ಡ-ದೊಡ್ಡ ನಗರಗಳ ಎತ್ತೆತ್ತರದ ಕಟ್ಟಡಗಳು ಕೊಲ್ಲುತ್ತಿರುವ ಹಕ್ಕಿಗಳ ಲೆಕ್ಕವೂ. ಹೀಗೆ, ಮಾನವ ಮತ್ತು ಹಕ್ಕಿಯ ನಡುವಿನ ದ್ವಂದ್ವವನ್ನ ಯಂತ್ರದ-ಹಕ್ಕಿಯ ರೆಕ್ಕೆ ಹಿಡಿದು ಹೇಳುತ್ತಾ ಯೋಗೀಂದ್ರ ಮರವಂತೆ ಮತ್ತೊಮ್ಮೆ ಅನಿವಾಸಿಯತ್ತ ಹಾರಿದ್ದಾರೆ.
ಯೋಗೀಂದ್ರರು, ಬ್ರಿಸ್ಟಲ್ಲಿನ ದೊಡ್ಡ ವಿಮಾನ ತಯಾರಾಕ ಸಂಸ್ಥೆಯೊಂದರ ಉದ್ಯೋಗಿ. ಇವರ ಬರಹಗಳು ಕನ್ನಡದ ಪ್ರತಿಷ್ಠಿತ ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಕೆಂಡಸಂಪಿಗೆ.ಕಾಮ್ ಗಳಲ್ಲಿ ಪ್ರಕಟವಾಗಿವೆ. ಇತ್ತೀಚಿಗೆ, ಉದಯವಾಣಿ ಯುಗಾದಿ ವಿಶೇಷಾಂಕದಲ್ಲಿ ಇವರ ಪ್ರಬಂಧವೊಂದಕ್ಕೆ ಬಹುಮಾನ ಸಿಕ್ಕಿದೆ.
_______________


ಮನುಷ್ಯನಿಗೆ ಹಾರಲು ಕಲಿಸಿದ್ದೇ ಹಕ್ಕಿಗಳು ಅಲ್ಲವೇ? ಅಲ್ಲವೆಂದು ಮನುಷ್ಯರು ಹೇಳಿದರೂ ಹಕ್ಕಿಗಳು ನಂಬಲಿಕ್ಕಿಲ್ಲ. ಶತಮಾನದ ಹಿಂದೆ ಮೊತ್ತಮೊದಲ ಬಾರಿಗೆ ಆಕಾಶಕ್ಕೆ ಹಾರಲು ಯತ್ನಿಸಿದ ಸಾಹಸಿಗಳು ಕನಸುಗಾರರು ದೊಡ್ಡ ರೆಕ್ಕೆಗಳನ್ನು ತಮ್ಮ ಎಡ ಬಲಗಳಿಗೆ ಕಟ್ಟಿಕೊಂಡು ನೆಗೆಯಲು ಯತ್ನಿಸಿದ್ದರು .ಅಂತಹವರಲ್ಲಿ ಹೆಚ್ಚಿನವರು ಹಾರದೇ ಬಿದ್ದರು, ಮತ್ತೆ ಕೆಲವರು ತುಸು ದೂರ ನೆಗೆದು ತೇಲಿದರು. ಕೆಲವು ಕಾಲದವರೆಗೆ ಈ ಪ್ರಯತ್ನ ಮುಂದುವರಿಯಿತು ಕೂಡ. ಇದು ರೈಟ್ ಸಹೋದರರ ಯಂತ್ರಚಾಲಿತ ವಿಮಾನ ಆಕಾಶವನ್ನು ಏರುವುದಕ್ಕಿಂತಲೂ ಮೊದಲಿನ ಕತೆ. ಒಂದು ನೈಸರ್ಗಿಕ ಸೃಷ್ಟಿಯಿಂದ ಸ್ಫೂರ್ತಿ ಪಡೆದ ಮನುಷ್ಯ ಕಷ್ಟಪಟ್ಟು ಹೊಡೆದ ನಕಲು – ವಿಮಾನ. ಎಷ್ಟು ಚಂದದ ನಕಲೇ ಆದರೂ ಅಸಲಿ ಆಗುವುದಿಲ್ಲವಲ್ಲ. ಹಕ್ಕಿಗಳ ಸುಲಲಿತ , ಸರಳ , ಪರಿಸರ-ಸ್ನೇಹಿ ಹಾರಾಟ ವಿಮಾನಗಳಿಗೆ ಎಂದೂ ದಕ್ಕಲಿಕ್ಕಿಲ್ಲ. ಜೊತೆಗೆ ವಿಮಾನಗಳು ಇದ್ದಷ್ಟು ದಿನವೂ ಅದರ ಆಘಾತ, ಸದ್ದು, ಮಾಲಿನ್ಯಗಳಿಗೆ ಅಂಜುತ್ತ ಹಕ್ಕಿಗಳು ಬದುಕಬೇಕಾಗಿರುವುದೂ ಅನಿವಾರ್ಯ. ಆದರೆ ಹಕ್ಕಿಗಳಿಂದಾಗಿ ವಿಮಾನಗಳ ಬದುಕೂ ಸುಭದ್ರ ಆಗಿ ಉಳಿದಿಲ್ಲ. ಹಕ್ಕಿಗಳು ಹಾರುವಷ್ಟು ದಿನವೂ ವಿಮಾನಗಳು ಜೀವ ಭಯದಲ್ಲಿ ತತ್ತರಿಸುತ್ತ ನಿಲ್ದಾಣಗಳಲ್ಲಿ ಏರಿ ಇಳಿಯುತ್ತವೆ. ಹಕ್ಕಿಗಳ ಆಘಾತ (bird strike) ವಿಮಾನಗಳಿಗೆ ಅತ್ಯಂತ ಮಾರಕವಾದದ್ದು. ಅರ್ಧ ಅಥವಾ ಒಂದು ಕೆಜಿ ತೂಕದ ಮಾಂಸದ ಮುದ್ದೆಯೋ ವಸ್ತುವೋ ಘಂಟೆಗೆ ನೂರೈವತ್ತು ಮೈಲಿವೇಗದಲ್ಲಿ ಬಂದು ಗಟ್ಟಿಯ ಲೋಹಕ್ಕೆ ಬಡಿದರೆ ಹಕ್ಕಿ ಸಾಯುವುದರ ಜೊತೆಗೆ ಲೋಹವೂ ಘಾಸಿಗೊಳ್ಳುತ್ತದೆ. ಹಕ್ಕಿಗಳು ಆಕಾಶದಲ್ಲೇ ನಿಂತು ರೆಕ್ಕೆ ಬಡಿಯುತ್ತಿದ್ದರೂ ವೇಗವಾಗಿ ಬರುವ ವಿಮಾನದ ಘಾತ ಹಕ್ಕಿಗೂ ವಿಮಾನಕ್ಕೂ ಎರಡಕ್ಕೂ ಆಪತ್ಕಾರಿಯೇ. ಹೀಗೆ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ ಅಥವಾ ಹಕ್ಕಿಗಳ ಗುಂಪು ಛಿದ್ರವಾಗುವುದರ ಜೊತೆಗೆ ವಿಮಾನಕ್ಕೆ ಬಡಿದ ಜಗದಲ್ಲಿ ತೀವ್ರ ಆಘಾತವಾಗಿರುತ್ತದೆ. ವಿಮಾನಶಾಸ್ತ್ರದಲ್ಲಿ ಹಕ್ಕಿಗಳ ಆಘಾತದ ಅಧ್ಯಯನವೂ ಒಂದು ವಿಭಾಗ. ಹಕ್ಕಿಗಳ ಸಮೂಹ ಆಕಾಶಕ್ಕೆ ಏರುತ್ತಿರುವ ಅಥವಾ ನೆಲಕ್ಕೆ ಇಳಿಯುತ್ತಿರುವ ವಿಮಾನದ ರೆಕ್ಕೆಗೆ, ಎಂಜಿನ್ ಗೆ ಬಡಿದು ಅಪಘಾತಗೊಂಡ ವಿಮಾನಗಳ ಉದ್ದದ ಪಟ್ಟಿಯೇ ಇದೆ. ವಿಮಾನಗಳ ವಿನ್ಯಾಸದಲ್ಲಿ ಹಕ್ಕಿಗಳ ಗಾತ್ರ ತೂಕ ಬಗೆಯನ್ನು ಕಲ್ಪಿಸಿ ಲೆಕ್ಕಾಚಾರ ಮಾಡಿ ಒಂದು ವೇಳೆ ಹಾಗೊಂದು ಆಘಾತ ಆದರೆ ವಿಮಾನ ಎಷ್ಟು ತುರ್ತಾಗಿ ಸುರಕ್ಷಿತವಾಗಿ ನಿಲ್ದಾಣವನ್ನು ಸೇರಬಹುದು ಎನ್ನುವ ಪರಿಗಣನೆ ಇರುತ್ತದೆ .
ವಿಮಾನಗಳು ಆಕಾಶಕ್ಕೆ ಲಗ್ಗೆ ಇಟ್ಟ ಲಾಗಾಯ್ತಿನಿಂದ ವಿಮಾನದ ಆಘಾತಕ್ಕೋ, ಶಬ್ದಕ್ಕೋ ಅಥವಾ ವಿಮಾನ ಉಗುಳುವ ಹೊಗೆಗೋ ಬಲಿಯಾಗಿ ಉರುಳಿದ ಹಕ್ಕಿಗಳ ಲೆಕ್ಕ ಇಟ್ಟವರು ಒಬ್ಬರೂ ಇಲ್ಲ. ಅಥವಾ ಹಕ್ಕಿಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದವರೂ ಯಾರೂ ಇಲ್ಲ. ಹಾರುವ ವಸ್ತು ವಿಷಯಗಳಲ್ಲೇ ಪರಿಪೂರ್ಣ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಹೊಂದಿದ ಹಕ್ಕಿಯೊಂದು ಹುಟ್ಟಲು ಮರದ ರೆಂಬೆಯ ಮೇಲೆ ಕುಳಿತು ಕಣ್ಣು ಮಿಟುಕಿಸಿ ಮಾತಾಡುವ ಒಂದು ಗಂಡು ಇನ್ನೊಂದು ಹೆಣ್ಣು ಹಕ್ಕಿಗಳ ನಡುವಿನ ಪ್ರೀತಿ ಸಾಕು. ಮತ್ತೆ ಅವುಗಳ ಸಹಜ ಸುಂದರ ಹಾರಾಟ ಶುರು ಆಗಲು ಬಲಿತ ರೆಕ್ಕೆಗಳು ಅವುಗಳ ಸುಲಲಿತ ಚಲನೆ ಅಷ್ಟೇ ಬೇಕು. ಹಕ್ಕಿಯೊಂದರ ಸಾಹಸಗಳನ್ನು ತಾನೂ ಮಾಡಬಲ್ಲೆ ಎಂದು ತೋರಿಸುವ ವಿಮಾನವೊಂದು ತಯಾರಾಗಲು ವರ್ಷಗಳ ಸಮಯ ಮತ್ತು ದುಡಿತ ಬೇಕು. ಮತ್ತೆ ಆ ವಿಮಾನಗಳು ನೆಗೆಯಲು ತೇಲಲು ಜ್ಞಾನ ವಿಜ್ಞಾನ ಪರೀಕ್ಷೆ ಲೆಕ್ಕಾಚಾರಗಳೂ ಬೇಕು. ಒಂದೇ ಮನೆತನದಲ್ಲಿ ಹುಟ್ಟಿದ ಹಕ್ಕಿಗಳು ಮತ್ತು ವಿಮಾನಗಳ ನಡುವೆ ಎಷ್ಟು ಹೋಲಿಕೆಗಳು ಹಾಗು ಎಷ್ಟು ವಿರೋಧಗಳು. ತಾವು ಹಾರುವುದನ್ನು ನೋಡುತ್ತಾ ತಮ್ಮಂತೆ ಹಾರುವ ಯಂತ್ರವನ್ನು ಮನುಷ್ಯರು ನಿರ್ಮಿಸುತ್ತಿದ್ದಾಗ ಹಕ್ಕಿಗಳಿಗೆ ಮುಂದೆ ತಮ್ಮ ಸಂಕುಲಕ್ಕೆ ಆ ಯಂತ್ರಗಳಿಂದ ಬರಬಹುದಾದ ಆಪತ್ತು ತಿಳಿದಿರಲಿಲ್ಲ. ವಿಮಾನವನ್ನು ಅಂದು ನಿರ್ಮಿಸಿದವರು ತಾವು ಅನುಕರಿಸಿದ ಗುರು, ಹಕ್ಕಿಗಳೇ ಮುಂದೆ ತಮ್ಮನ್ನು ಆಕಾಶದಲ್ಲಿ ಕಾಡಬಹುದು ಎಂದೂ ಅಂದುಕೊಂಡಿರಲಿಲ್ಲ.
__________________________________________________________________________________
ಕಣ್ಣೋಟ

ಶರಣ್ರೀ
!
ಈ ಜಗತ್ತಿನ ಚಲನ ವಲನ ಎಲ್ಲ ಆ ಸೂರ್ಯಾನ್ಮ್ಯಾಲೇ ನಿರ್ಭರ ಅಲ್ಲರೀ ? ಆ ಸೂರ್ಯಾ ತನ್ನ ಬೆಳ್ಕನಿಂದ ಈ ಭೂಮಿ ಮ್ಯಾಲೇ ಎಷ್ಟ್ ಛಂದ್ ಛಂದ ಬಣ್ಣ ಬಳೀತಾನೋ ಅಷ್ಟ ಛಂದ ಬಣ್ಣದ ಆಟಾ ಮುಗಿಲ್ನ್ಯಾಗ ಆಡ್ತಾನಾ.
ಹುಟ್ಟಬೇಕಾದ್ರ ಒಂದ್ ಥರಾ ಛಂದ್ಇದ್ರ ಮುಳಗಬೇಕಾದ್ರ ಇನ್ನೊಂದ್ ಥರಾ ಛಂದ್ ನೋಡ್ರಿ. ಇಳಿಯೋ ಸೂರ್ಯ ಒಂದ್ ಅಧ್ಭುತ ಸಂದೇಶ ಕೊಡ್ತಾನ ನಮಗೆಲ್ಲ! ಅದೇನಪಾ ಅಂದ್ರ ‘ಏರಬೇಕಾದ್ರ ಎಷ್ಟ್ ಖುಷಿ ಇರ್ತೇತ್ಯೋ ಇಳಿಬೇಕಾದ್ರು ಅಷ್ಟ ಖುಷಿ ಇರ್ಲಿ ‘ ಅಂತ! ಜೀವನಾ ಅಂದ್ರ ಏರೋದು ಇಳಿಯೂದು ಅಲ್ಲೇನ್ರಿ? 🙂
ಸೂರ್ಯಾಸ್ಥ ನೋಡೂ ಎಷ್ಟ್ ಜಾಗಾ ಅದಾವ್ ಅಲ್ರಿ? – ನಮ್ಮ್ ‘ಆಗುಂಬೆಯಾ ಪ್ರೇಮಸಂಜೆಯಾ’ ಹಾಡ್ ನೆನಪಾತ್ ರೀ 😀 ಅದೂ ವಸಂತ ಋತು ಬಂದ್ರಂತೂ ಹಬ್ಬಾನ ಹಬ್ಬಾ. ಸೂರ್ಯಾಸ್ಥ ಛಂದನೋ ಏನ್ ಸೂರ್ಯ ಮುಗಿಲಿನ ಎತ್ತರಕ್ಕ ಏರಿದ್ದು ನೋಡಿ ಖುಷಿ ಆಗಿ ಅರಳಿದ್ದ ಹೂವು ಹುಲ್ಲು ಛಂದನೋ ಅಂತ ಗೊತ್ತಾಗಂಗಿಲ್ಲ !
ಇದನ್ನ ನಾನು ನನ್ನ ಸೇರಿಹಿಡದೇನಿ ನೋಡ್ರಿ!


__________________________________________________________________________________
ವಿ.ಸೂ: ಇಂದಿಗೆ ನನ್ನ ಲೆಕ್ಕದ ಮೂರು ತಿಂಗಳು ಮುಗಿಯಿತು. ಲೇಖನಗಳು, ಕವನಗಳು, ಅಭಿಪ್ರಾಯಗಳು, ಆಗಾಗ ಮೆಚ್ಚುಗೆಯ ಮಾತು, ಮತ್ತೆ, ಅಪರೂಪಕ್ಕೊಮ್ಮೆ, ಟೀಕೆಯ ಚುಚ್ಚುಗಳಲ್ಲಿ ನನ್ನನ್ನು ಸಲಹಿದ ಅನಿವಾಸಿ ಓದುಗರಿಗೆ ಮತ್ತು ಲೇಖಕ ಬಳಗಕ್ಕೆ ನನ್ನ ವಿನಮ್ರ ನಮನಗಳು. ಹಾಗೆಯೇ, ಈ ಅವಕಾಶ ಕೊಟ್ಟ ಮತ್ತು ಅಲ್ಲಲ್ಲಿ ಕಂಡ ತಪ್ಪುಗಳನ್ನು ಒಪ್ಪಾಗಿಸುವಲ್ಲಿ ತಾಳ್ಮೆಯಿಂದ ತಿದ್ದಿದ ಶ್ರೀವತ್ಸ ದೇಸಾಯಿ ಮತ್ತು ಇತರ ಹಿರಿಯ ಅನಿವಾಸಿ ಸಂಪಾದಕ ತಂಡಕ್ಕೆ ಧನ್ಯತೆಯ ನಮನಗಳು. ಅನಿವಾಸಿಯ ಈ ತಾಣ ಬೆಳೆಯಲಿ; ಬರುವ ದಿನಗಳಲ್ಲಿ ಯುಕೆಯಲ್ಲಿ ಕನ್ನಡವನ್ನು ಮುಂದಿನ ಪೀಳಿಗೆಗೆ ಕಲಿಸಿ, ಉಳಿಸುವಲ್ಲಿ ದೊಡ್ಡ ಪಾತ್ರ ವಹಿಸಲಿ ಎಂದು ಹಾರೈಸುತ್ತ … Good Bye for now.
ಮುರಲಿಯವರು ಅನಿವಾಸಿಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಪ್ರತಿ ವಾರ ಒಂದು ಲೇಖನ/ಕವನ ಹಾಕುವಷ್ಟರಲ್ಲಿ ಎಲ್ಲ ಶಕ್ತಿ ಕುಂದಿಹೋಗುವ ಸಂದರ್ಭದಲ್ಲಿ ಎರಡು ಲೇಖನಗಳು ಮತ್ತು ಒಂದು ಫೋಟೋ ಸರಣಿ ಶುರು ಮಾಡಿದ ಮುರಲಿಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಮಾರ್ಗದರ್ಶನದಲ್ಲಿ ಅನಿವಾಸಿ ಇನ್ನೂ ಬೆಳೆಯಲಿ. – ಕೇಶವ
LikeLike
ಮನುಷ್ಯ ತನ್ನ ಏಳಿಗೆಗೆ ಮತ್ತು ಅನುಕೂಲಕ್ಕೆ ಕಂಡುಕೊಂಡ ಆಲೋಚನೆಗಳು ಅನಿವಾರ್ಯವಾಗಿ ಅವನ ಸುತ್ತಣ ಪ್ರಪಂಚದಿಂದ, ಪ್ರಕೃತಿಯಿಂದ ಎಂದು ಹೇಳಬಹುದು.
ಮಾನವ, ಹಾರುವುದನ್ನು ಹಕ್ಕಿಯಿಂದ, ಈಜುವುದನ್ನು ಮೀನು ಆಮೆಗಳಿಂದ ಕಲಿತು ವಿಕಾಸಗೊಂಡಿದ್ದಾನೆ, ಗಿಡ ಮೂಲಿಕೆಗಳಿಂದ ಔಷಧಿಗಳನ್ನು ಕಂಡುಕೊಂಡಿದ್ದಾನೆ. ಇನ್ನು ಅನೇಕ ಪ್ರಕೃತಿಯ ರಹಸ್ಯಗಳನ್ನು ಬೇಧಿಸುವುದಿದೆ. ಯೋಗಿಂದ್ರ ಅವರು ಪ್ರಕೃತಿಗೂ ಮತ್ತು ಮಾನವನಿಗೂ ಇರುವ ಸಂಭಂದಗಳನ್ನು ಸೊಗಸಾಗಿ ಸರಳವಾಗಿ ವಿಶ್ಲೇಷಿಸಿದ್ದಾರೆ . ಈ ಕೆಳಗಿನ ಅವರ ಮಾತು ಬಹಳ ಅರ್ಥಪೂರ್ಣವಾಗಿದೆ
” ನಮ್ಮ ಕಲ್ಪನೆ ಏನೇ ಇದ್ದರೂ ಹಕ್ಕಿಗಳು ವಿಮಾನಗಳೂ ಸರಿ ಸುಮಾರಿಗೆ ಒಂದೇ ಸಂತತಿಯವು ಆಗಿ ಕಂಡರೂ ಹಕ್ಕಿಗಳು ವಿಮಾನಗಳನ್ನು ತಮ್ಮ ಗುಂಪಿಗೆ ಎಂದೂ ಸೇರಿಸಿಕೊಳ್ಳಲಿಕ್ಕಿಲ್ಲ ಎಂದು ಅನಿಸುತ್ತದೆ. ಅಥವಾ ವಿಮಾನಗಳು ಹಕ್ಕಿಗಳನ್ನು ತಮ್ಮವು ಎಂದು ಸ್ವೀಕರಿಸಲಿಕ್ಕಿಲ್ಲ ”
ಮಾನವ ತನ್ನ ಜಾಣ್ಮೆ ಯಿಂದ ಪ್ರಕೃತಿಯನ್ನು ಅನುಕರಿಸಿದರೂ ಅದು ಪ್ರಕೃತಿಯ ಮೂಲ ಸೃಷ್ಟಿಗೆ ಸಮಾನವಾಗಿರಲು ಸಾಧ್ಯವಿಲ್ಲ ಎಂಬ ವಿಷಯ ಚೆನ್ನಾಗಿ ಮೂಡಿಬಂದಿದೆ.
ಮನುಷ್ಯನ ಗರ್ವ ಕೂಡ ಅಲ್ಲಿದೆ!
ಒಂದು ಪ್ಲಾಸ್ಟಿಕ್ ಹೂವು ದುಂಬಿಯನ್ನು ಆಕರ್ಷಿಸುವುದು ಸಾಧ್ಯವೇ?
LikeLike
Thumba khushi aatu Kannada vstharisu va neemage Valleyadaagali
LikeLike