ಇಂಗ್ಲೆಂಡಿನಲ್ಲಿ ಯುಗಾದಿ 2019 – ೧: ಕಲಿಯುವ, ಕಲಿಸುವ ಕಲರವ

ಈ ವಾರದ ಅನಿವಾಸಿಯಲ್ಲಿ, ಇಂಗ್ಲೆಂಡಿನ ಕನ್ನಡ ಸಂಸ್ಥೆಗಳ ಈ ವರ್ಷದ ಯುಗಾದಿ ಆಚರಣೆಯ ಕೂಡು-ಕೂಟಗಳ ವರದಿಯ ಮೊದಲನೇ ಭಾಗ ಮತ್ತು ಅನಿವಾಸಿಯ ಪರಿಚಿತ ಲೇಖಕ ಹಾಗು ಕವಿ ಸುದರ್ಶನ ಗುರುರಾಜರಾವ್ ಬರೆದ ನುಡಿಪರ್ವ ಕವನ. ಎರಡನ್ನೂ ಓದಿ, ಕಮೆಂಟಿಸಿ. ಧನ್ಯವಾದ.

 

“ಗಜವದನ ಹೇರಂಭ….” ಇದು ಹಯವದನ ನಾಟಕದ ಒಂದು ಪ್ರಸಿದ್ಧ ರಂಗಗೀತೆ. ಬಿ.ವಿ.ಕಾರಂತರಿಂದ ಆದಿಯಾದ ಇದು, ಜಯಶ್ರೀಯವರ ಕಂಠದಲ್ಲಿ ಯು-ಟ್ಯೂಬಿನಿಂದ ಎಲ್ಲೆಡೆ ಹರಿದಿದೆ. ಇಂತಹ ಒಂದು ಗೀತೆಯಿಂದ ಕಾರ್ಯಕ್ರಮವೊಂದರ ಪ್ರಮುಖ ಅಂಕದ ಆರಂಭವಾದರೆ, ಆ ಸಭಿಕರ ಮತ್ತು ಆಯೋಜಕರ ಹೃದಯ ನಾಡು-ನುಡಿ-ಸಂಸ್ಕೃತಿಯ ಮಿಡಿತದಿ೦ದ ತುಂಬಿದೆ ಎನ್ನುವದು ಅತಿಶಯೋಕ್ತಿಯಾಗಲಾರದು. ಇದು ಹದಿನೈದರ ಹರೆಯದ ಕನ್ನಡಿಗರು ಯುಕೆ ಸಂಘಟನೆಯ ಯುಗಾದಿ ಆಚರಣೆಯ ಹದ. ರಂಗಗೀತೆಯಿಂದ ಆರಂಭಿಸಿ ಮತ್ತಷ್ಟು ಹಾಡುಗಳಲ್ಲಿ ಸಭಿಕರನ್ನು ಮನಸೂರೆಗೈದ ಗಾಯಕಿ, ಮೈಸೂರಿನವರೆಂದು ಹೆಮ್ಮೆಯಿಂದ ಹೇಳಿಕೊಂಡ ರಂಗ ಮತ್ತು ಸಿನೆಮಾ ಗಾಯಕಿ ಅನನ್ಯ ಭಟ್.

 

ಕಾರ್ಯಕ್ರಮದ ಒಟ್ಟು ಆರಂಭವೂ ಅಷ್ಟೇ ಆಪ್ತವಾಗಿತ್ತು. ಲಂಡನ್ನಿನ ನೈರುತ್ಯ ಭಾಗದ ಫೆಲ್ಥಮ್ (Feltham)ನ ಶಾಲೆಯೊಂದರ ಸಭಾಂಗಣದಲ್ಲಿ ಕಳೆದ ಭಾನುವಾರ ನಡೆದ ಈ ಹಬ್ಬದಲ್ಲಿ ಶುರುವಿಗೆ ಬೇವು-ಬೆಲ್ಲ, ರುಚಿ-ರುಚಿ ಒಬ್ಬಟ್ಟಿನ ಊಟ; ತುಂಬಿದ ಹೊಟ್ಟೆಗೂ ಹಸಿವು ತರುವ  ಸಮೋಸ, ಉದ್ದಿನ ವಡೆ, ಮಂಗಳೂರು ಬಜ್ಜಿ, ಮತ್ತು ಜೊತೆಗೆ ಚಾ. ಶಾಲೆಯ ಗೇಟಿನಿಂದ ಶುರುವಾದ ದಾರಿ ಗುರುತುಗಳಿಂದ ಹಿಡಿದು, ಅಡಿಕೆ ಹಾಳೆಯ ತಟ್ಟೆ, ಮರದ ಚಮಚ ಉಪಯೋಗಿಸುವಲ್ಲಿ ಆಯೋಜಕರ ಕಾರ್ಯಚತುರತೆ ಮತ್ತು ಕಾಳಜಿ ಎದ್ದು ಕಾಣುತಿತ್ತು. ಈ ಕಾಳಜಿ ಮನರಂಜಿಸಿದ ಗೀತೆ-ನೃತ್ಯಗಳಿಂದ ತುಂಬಿದ ಮಕ್ಕಳ ಮತ್ತು ದೊಡ್ಡವರ ಪ್ರಯತ್ನಗಳಲ್ಲೂ ಮಿಂಚಿತ್ತು.

 

ಈ ಹಾಡು-ನೃತ್ಯ-ಅಭಿನಯಗಳಲ್ಲಿ, ಅತಿ ಮೆಚ್ಚೆನಿಸಿದ್ದು ಕನ್ನಡ ಕಲಿಯುತ್ತಿರುವ ಮಕ್ಕಳ ಕಾರ್ಯಕ್ರಮ. ಭಾಷೆಯಷ್ಟೇ ಅಲ್ಲದೆ, ಕನ್ನಡದ ಸಾಹಿತಿ, ಶರಣ, ಮತ್ತಿತರ ಇತಿಹಾಸ ಪ್ರಸಿದ್ಧರ ವೇಷ ಭೂಷಣ, ಕರ್ನಾಟಕದ ಪ್ರಸಿದ್ಧ ಸ್ಥಳಗಳ ಪರಿಚಯ, ಮತ್ತು ಒಂದಿಷ್ಟು ಹಾಡುಗಳು ಆ ಮಕ್ಕಳಿಗಿರುವ ಶೃದ್ಧೆ , ಅಪ್ಪ-ಅಮ್ಮರ ಭಾಷೆ ಕಲಿಯುವಲ್ಲಿನ ಆಸಕ್ತಿ, ಹಾಗೂ ಆ ಮಕ್ಕಳ ಅಪ್ಪ-ಅಮ್ಮರ ಭಾಷಾ ಪ್ರೀತಿಯನ್ನ ಹಲವು ರೀತಿಯಲ್ಲಿ ವೇದಿಕೆಯ ಮೇಲೆ ಹರಡಿದ್ದವು. Basingstoke, Milton Keynes, London ಹೀಗೆ ಹಲವೆಡೆಯ ‘ಕನ್ನಡ ಕಲಿ’ ತರಗತಿಗಳಲ್ಲಿ ಕೂಡಿ ಕಲಿಯುತ್ತಿರವ ಮಕ್ಕಳಿಗೂ, ಕಲಿಸುತ್ತಿರುವ ಗುರುಗಳಿಗೂ ಮತ್ತೊಮ್ಮೆ ಚಪ್ಪಾಳೆಗಳು.

 

‘ಕನ್ನಡ ಕಲಿ’ ಆರಂಭವಾದದ್ದು ೨೦೧೧-೧೨ರಲ್ಲಿ. ಆರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರ, ಬೆಂಬಲವಿದ್ದರೂ, ಇದರ ಮೂಲ ಶಕ್ತಿ ಕನ್ನಡಿಗರು-ಯುಕೆಯ ಸಂಘಟಕರು ಮತ್ತು ಅವರೊಂದಿಗೆ ಕೈ ಜೋಡಿಸಿದ ಕೆಲವು ಕನ್ನಡಿಗರು. ಐ ಟಿ ಯ ಬಲದಲ್ಲಿ ಕನ್ನಡಿಗರ ಸಂಖ್ಯೆ ಯುಕೆಯಲ್ಲಿ ಬೆಳೆದಂತೆ, ಬೇರೆ ಬೇರೆ ಊರುಗಳಲ್ಲಿ ಕನ್ನಡಿಗರು-ಯುಕೆ ಮರಿ ಹಾಕಿ, ಅಲ್ಲೆಲ್ಲ ಈಗ ‘ಕನ್ನಡ ಕಲಿ’ಯ ಕಲರವ! ಈಗ ಕನ್ನಡ ಕಲಿ ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶೃದ್ಧಾ ಕಾರ್ತಿಕ್, ಹೊಸ-ಹೊಸ ಆಲೋಚನೆಗಳಲ್ಲಿ ಕನ್ನಡ ಕಲಿ ಯನ್ನ ಬೆಳೆಸುವ ಉತ್ಸಾಹದಲ್ಲಿದ್ದಾರೆ.  ಅಲ್ಲಿ ಕಲಿತದ್ದನ್ನು ಮರೆಯದಂತೆ ಉಪಯೋಗದಲ್ಲಿಡಲು, ಮತ್ತು ಪ್ರದರ್ಶಿಸಲು ಹಬ್ಬಗಳ ನೆಪದಲ್ಲಿ ಕನ್ನಡಿಗರನ್ನು ಕೂಡಿಸುವ ಕೆಲಸ ಮುಂದೆಯೂ – ಇಲ್ಲಿಯೇ ಕನ್ನಡ ಕಲಿತವರು ಬೆಳೆದಂತೆ – ಮುಂದುವರಿಸಿಕೊಂಡು ಹೋದರೆ ಚೆನ್ನ.

 

ಈ ಮುದ್ದಿನ ಮಕ್ಕಳ ಕಾರ್ಯಕ್ರಮದ ನಂತರ, ಹಲವರಿಂದ ಹಾಡು, ವಾದ್ಯ ಸಂಗೀತ, ಭಾರತ ನಾಟ್ಯ, ಸಿನೆಮಾ ನೃತ್ಯ ಹೀಗೆ ಒಂದರಿದ ಹಿಂದೊಂದು ಬಿರುಸಾಗಿ ಸಾಗಿದವು. ವೇದಿಕೆಯ ಮುಂದೆ ಪುಟಾಣಿ ಮಕ್ಕಳ ಹಿಂಡು ಅವರದೇ  ಸಂತಸದ ಲೋಕದಲ್ಲಿ ಕುಣಿಯುತಿತ್ತು. ಚಪ್ಪಾಳೆಗಳಲ್ಲಿ ಸಭಿಕರು ತಾರತಮ್ಯ ತೊರಲಿಲ್ಲ. ಹಾಗಂತ ಸೀಟಿಗಳು ಎಲ್ಲರಿಗೂ ಬೀಳಲಿಲ್ಲ!

 

ಆ ಸೀಟಿಗಳು, ಅನನ್ಯ ಭಟ್ ಇವರ ಹಾಡಿಗೆ ಬೇಕಾದಷ್ಟು ಬಿದ್ದವು. ಅನನ್ಯ ಭಟ್, ನಾಟಕ ರಂಗದಲ್ಲಿ ಅಭ್ಯಸಿಸಿ, ಹಿನ್ನೆಲೆ ಗಾಯನದಲ್ಲಿ ಈಗೀಗ ಪ್ರಸಿದ್ಧಿಗೆ ಬರುತ್ತಿದ್ದಾರೆ. ಸಿನಿಮಾಗಿಂತ ಯೂಟ್ಯೂಬಿನಲ್ಲಿ ಅವರ ಜನಪ್ರಿಯತೆ ಹೆಚ್ಚು. ಮೇಲೆ ಹೇಳಿದಂತೆ ರಂಗಗೀತೆಯಿಂದ ಆರಂಭವಾದ ಅವರ ಗಾಯನ, ಜಾನಪದ ಹಾಡುಗಳಲ್ಲಿ ಮುಂದುವರೆದು ಕಡೆಗೆ ಐಟಂ ಸಾಂಗ್ ಗಳಲ್ಲಿ ಎಲ್ಲರನ್ನ ಕುಣಿಸಿ ಮುಗಿದಿತ್ತು. ಅಚ್ಚ ಕನ್ನಡದಲ್ಲಿ ಸ್ಫುಟವಾಗಿ ಮಾತನಾಡುವ ಅನನ್ಯರಿಗೆ ಸಭಿಕರೊಂದಿಗೆ ಬೆರೆಯುವ ಕಲೆ ಕರಗತವಾಗಿದೆ ಎನ್ನಿಸಿತು. ಅವರ ಮಾತುಗಳಲ್ಲಿ ಹೆಚ್ಚು ಮನ ಮುಟ್ಟಿದ್ದು, ಜಾನಪದ ಗೀತೆಗಳನ್ನ ಉಳಿಸಿ ಬೆಳೆಸಬೇಕೆಂಬ ಅವರ ಕಾಳಜಿ. ಅನನ್ಯ ಭಟ್ಟರ ಬಗ್ಗೆ ಹೆಚ್ಚು ಮಾಹಿತಿ ಬೇಕಿದ್ದರೆ ಗೂಗಲ್ ಇದೆ. ಅವರ ಹಾಡುಗಳನ್ನು ಯೂಟ್ಯೂಬಿನಲ್ಲಿ ಲಕ್ಷಾಂತರ ಜನ ಕೇಳಿದ್ದಾರೆ. ನೀವೂ ಆ ಲೆಕ್ಕವನ್ನ ಬೆಳೆಸಿ, ಅವರನ್ನ ಪ್ರೋತ್ಸಾಹಿಸಬಹುದು.

 

ಗಮನ ಸೆಳೆದ ಇನ್ನೊಂದು ವಿಚಾರ, ಹದಿನೈದು ವರ್ಷಗಳಲ್ಲಿ ಕನ್ನಡಿಗರು ಯುಕೆ ಗಾಗಿ ದುಡಿದ ವ್ಯಕ್ತಿಗಳನ್ನ ನೆನಪಿಸಿಕೊಂಡಿದ್ದು. ಹುಟ್ಟಿನ ದಿನಗಳಲ್ಲಿ ಇದ್ದ ಸುಮಾರು ಜನ ಬೇರೆ ಬೇರೆ ಕಾರಣಗಳಿಂದ ಸಕ್ರಿಯವಾಗಿಲ್ಲ. ಅವರನ್ನೆಲ್ಲ ನೆನೆಸಿಕೊಂಡು, ಬಂದಿದ್ದ ಕೆಲವರನ್ನು ವೇದಿಕೆಗೆ ಕರೆದು ಮಾತನಾಡಲು ಅವಕಾಶ ಕೊಟ್ಟದ್ದು, ಹದಿನೈದು ವರ್ಷಗಳ ಅನುಭವದ ಹಿರಿತನ. ಮೆಚ್ಚುವಂತದ್ದು. ಆದರೂ ಇದರಲ್ಲಿ ಬೇಸರದ ವಿಚಾರವೊಂದಿತ್ತು.

 

ಅದು, ಕೇವಲ ಸ್ಕ್ರೀನ್ ಮೇಲಷ್ಟೇ ನಮಗೀಗ ಕಾಣಿಸುವ ಪವನ್ ಮೈಸೂರ್ ಅವರ ಸ್ಮರಣೆ. ಇವರು ಕೆಲವು ತಿಂಗಳುಗಳ ಹಿಂದೆ, ತಮ್ಮ ನಲವತ್ತರ ದಶಕದ ಕಿರಿಯದಲ್ಲೇ ಹಠಾತ್ತಾಗಿ ಎಲ್ಲರನ್ನಗಲಿದರು. ಕನ್ನಡಿಗರು ಯುಕೆಯ ಹಲವು ಮೊದಲು ಗಳಲ್ಲಿ ಪವನ್ ಮೈಸೂರರ ಶ್ರಮವನ್ನ ಮತ್ತೊಮ್ಮೆ ನೆನಪಿಗೆ ಈ ಸ್ಮರಣೆ ತಂದಿತು. ಸಭೆಯಲ್ಲಿದ್ದ ಅವರ ಪತ್ನಿ, ಯುಕೆ ಕನ್ನಡಿಗರ ಸಾಂತ್ವನ ಮತ್ತು ಸಹಾಯ ಮನೋಭಾವವನ್ನ ಸ್ಮರಿಸಿದರು.

 

ಕಾರಣ ಏನೇ ಇರಲಿ, ೪೦ರ ದಶಕ ಸಾವಿಗಲ್ಲ. ನಾವು ಕಳೆದ ೫೦-೬೦ ವರ್ಷಗಳಲ್ಲಿ ಸೃಷ್ಟಿಸಿಕೊಂಡ ಸಮಸ್ಯೆಗಳಾದ ನಗರೀಕರಣ, ಮನಸಿನೊತ್ತಡ, ಅನಾರೋಗ್ಯಕರ ಆಹಾರ; ವ್ಯಾಯಾಮ, ನಿದ್ರೆಗಳಿಗೆ ಸಮಯವಿಲ್ಲದ ದುಡಿತ ಇವೆಲ್ಲ ಹೃದಯದ ಆಯಸ್ಸನ್ನು ಕಡಿಮೆಗೊಳಿಸುತ್ತಿವೆ. ಇದಕ್ಕಾಗಿ, ಯುಕೆಯಲ್ಲಿ ೪೦ ದಾಟಿದ ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆಯ ವ್ಯವಸ್ಥೆ ಇದೆ. ನಿಮಗೆ ೪೦ ದಾಟಿದ್ದರೆ, ದಯವಿಟ್ಟು ಬೇಗ ಮಾಡಿಸಿಕೊಳ್ಳಿ. ನಿಮ್ಮ ಸ್ನೇಹಿತರಿಗೂ ಪ್ರೋತ್ಸಾಹಿಸಿ. ಹಾಗೆಯೇ, ತಂಬಾಕು ಸುಡುವ ಅಭ್ಯಾಸವಿದ್ದರೆ, ಆ ಅಭ್ಯಾಸವನ್ನು ಸುಟ್ಟುಬಿಡಿ. ಇನ್ನೂ ತುಂಬಾ ಯುಗಾದಿಗಳಲ್ಲಿ ಹೋಳಿಗೆಗಳನ್ನ ಬಾರಿಸಲಿಕ್ಕಿದೆ.

 

ಈ ವರ್ಷದ ನವೆಂಬರ್ ತಿಂಗಳಲ್ಲಿ – ಬಹುಷ ೯ನೇ ತಾರೀಕು -, ರಾಜ್ಯೋತ್ಸವದ ಕನ್ನಡಿಗರು ಯುಕೆ ಕಾರ್ಯಕ್ರಮ ಲಂಡನ್ನಿನ ಹ್ಯಾರೋ ಎಂಬಲ್ಲಿ ಇರಲಿದೆ ಎಂದು ಘೋಷಿಸಿದ್ದು, ಹಾಗು ಲಾಲಿತ್ಯ ಎನ್ನುವ ಎಳೆಯಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಮೆರವಣಿಗೆ ಇರಲಿದೆ ಎಂದದ್ದು ನಿರೀಕ್ಷೆ ಹುಟ್ಟುಹಾಕಿ, ಆ ಕಾರ್ಯಕ್ರಮವನ್ನ ಎದುರುನೋಡುವಂತೆ ಮಾಡಿದೆ.

 

ಊಟ, ತಿಂಡಿ, ಮನರಂಜಿಸುವ ಹಾಡು, ಕುಣಿತಗಳಲ್ಲಿ ಹೊಟ್ಟೆ, ಮನಸು ತುಂಬಿಸಿಕೊಂಡು ಹೊರಡುವಾಗ, ಸಭಾಂಗಣದ ಹೊರಗೆ, ‘ಸಿರಿಗನ್ನಡಂ ಗೆಲ್ಗೆ’ ಎನ್ನುವ ಬ್ಯಾನರ್ ಬಿಚ್ಚುತ್ತಿದ್ದ ಸ್ವಯಂಸೇವಕರಿಗೆ ಧನ್ಯವಾದ ಹೇಳಿ ಮುನ್ನಡೆವಾಗ, ಹೀಗೆ ಯಾವುದೇ ಬಹುಮಾನ ಪದವಿಗಳ ನಿರೀಕ್ಷೆಯಿಲ್ಲದೆ ‘ನಾವಿದ್ದೇವೆ’ ಎನ್ನುವ ಇಂತವರೇ ಯುಕೆಯಲ್ಲಿ ಕನ್ನಡ ಉಳಿಸುವವರು, ಕಲಿಸುವವರು, ಬೆಳೆಸುವವರು ಎನ್ನುವ ಆಲೋಚನೆ ಮೂಡಿ ಮನಸಿನಲ್ಲಿ ಉಳಿಯಿತು. ಕಲಿಯುತ, ಕಲಿಸುತ ಕನ್ನಡದ ಕಲರವವ ಬೆಳೆಸಿ ಮೆರೆಸುತ್ತಿರುವ ಇವರೆಲ್ಲರಿಗೆ ನಮನ.
ಸೂ: ಈ ಕಾರ್ಯಕ್ರಮದ ಫೋಟೋಗಳು ನನ್ನ ಬಳಿ ಇಲ್ಲ. ಇದ್ದವರು ಲಿಂಕ್ ಗಳನ್ನ ಕಮೆಂಟಿನ ಜೊತೆಗೆ ಸೇರಿಸಿ, ಪ್ಲೀಸ್. ಧನ್ಯವಾದ. 
—————————————————————————————————————————————–

ನುಡಿಪರ್ವ

ಡಾ. ಸುದರ್ಶನ್ ಗುರುರಾಜರಾವ್ 

ಕತ್ತಲಾದ ಬಾಳಿಗೆ
ಅಕ್ಷರಗಳ ದೀವಿಗೆ
ಹಿಡಿದು ಬೆಳಕ ಕೊಡುವೆ ತಾಯಿ
ನೀನೆ ನಮ್ಮ ಪಾಲಿಗೆ

ಮುದ್ದು ಸುರಿವ ಅಕ್ಷರ
ಮುತ್ತು ಪೋಣಿಸಿಟ್ಟ ಹಾರ
ಕೇಳುತಿರಲು ಇಂಪು ನುಡಿಯ
ಉಳಿದುದೆಲ್ಲ ನಶ್ವರ

ಮಧುರಲಯದ ಪದ್ಯವು
ಬಹುವಿಧಗಳ ಗದ್ಯವು
ನಿಜದಿ ನಿನ್ನ ಸೇವೆಗಾಗಿ
ಪದತಲದಲಿ ನೈವೇದ್ಯವು

ಭಾಷೆಯಿಂದ ಸಂಸ್ಕೃತಿ
ನಾತ್ಯ ಗೀತದುತ್ಕೃತಿ
ಬೆರಕೆ ಇರದ ಭಾಷೆಇರಲು
ಪರಂಪರೆಗೆ ಸುಸ್ಠಿತಿ

ತುತ್ತಲೊಂದು ಕಲ್ಲು ಸಿಗಲು
ಉಗಿಯಬಹುದು ದೂರಕೆ
ತುತ್ತ ತುಂಬ ಕಲ್ಲೆ ಇರಲು
ಒಗ್ಗಲಹುದೆ ದೇಹಕೆ

ಕಲ್ಲು ತುಂಬಿದನ್ನದಂತೆ
ಬೆರಕೆಯಾದ ಭಾಷೆಯು
ಕೀಳರಿಮೆಗೆ ಆಲಸ್ಯವು
ಸೇರಿ ಬೆಳೆದ ಕ್ಲೀಷೆಯು

ಅರಿಯದಾಗಿ ನುಡಿಯ ಸಿರಿ
ಬೆರೆಕೆ ಮಾಡಿ ಬಳಸದಿರಿ
ಬೆರಕೆಯಾದ ಭಾಷೆ ಎಂದು
ಬೇರು ಸತ್ತ ಮರವೆ ಸರಿ

ಹೊಸ ಚಿಗುರಿಗೆ ಹಳೆ ಬೇರು
ಕೂಡಿದಾಗ ಮರವು ಸೊಗಸು
ಪರಂಪರೆಯ ಮರೆತು ನಡೆಯೆ
ನನಸಾಗದು ಕನಸು

ನಮ್ಮ ನಾಡು ನಮ್ಮ ನುಡಿಯ
ಬಗೆಗೆ ಬೆಳೆಯೆ ತಾತ್ಸಾರ
ನಮ್ಮ ನುಡಿಯ ನಾವೆ ಮರೆಯೆ
ಭಾಷೆಯುಳಿವು ದುಸ್ತರ

ಮನೆಯ ಗೆದ್ದು ಮಾರು ಗೆದೆ
ಎಂಬ ಗಾದೆ ಮಾತಿದೆ
ಕನ್ನಡವನು ಕಲಿತು ಉಳಿದ
ಭಾಷೆ ಕಲಿಯಬಾರದೆ

ಮಾಸಕೊಮ್ಮೆ ದೊರೆವ ಹಣವೆ
ಆಂಗ್ಲ ಭಾಷೆ ಪ್ರಕೃತಿ
ಜೀವ ವಿಮೆಯ ಶ್ರೀರಕ್ಷೆಯು
ಕನ್ನಡದ ಸುಸಂಸ್ಕೃತಿ

ಕನ್ನಡವನೆ ನುಡಿಯಿರಿ
ಬಳಸಿ ಅದರ ಪದಸಿರಿ
ಶುದ್ಧವಾದ ಭಾಷೆಯಿಂದ
ಪರಂಪರೆಯ ಉಳಿಸಿರಿ

ಸರ್ವ ಶಕ್ತ ನಮ್ಮ ಭಾಷೆ
ನಮಗೆ ಇರಲಿ ಗರ್ವವು
ಕನ್ನಡವನೆ ಬಳಸಿ ಗೆಲ್ಲು
ಉದಯಿಸಲಿ ಹೊಸ ಪರ್ವವು

 

___________________________________________________________________________________________

2 thoughts on “ಇಂಗ್ಲೆಂಡಿನಲ್ಲಿ ಯುಗಾದಿ 2019 – ೧: ಕಲಿಯುವ, ಕಲಿಸುವ ಕಲರವ

  1. ಕಳೆದ ಒಂದು ದಶಕಕ್ಕೂ ಮೇಲೆ ಕನ್ನಡಿಗರು ಯು ಕೆ ಕನ್ನಡತನವನ್ನು ಬೆಳೆಸುತ್ತಿರುವುದು.ಶ್ಲಾಘನೀಯ. ಅದರಲ್ಲೂ ‘ಕನ್ನಡ ಕಲಿ‘ಸಲು ಅವರು ಮಾಡುತ್ತಿರುವಷ್ಟು ಕೆಲಸ ಬೇರಾರೂ ಈ ನಾಡಿನಲ್ಲಿ ಮಾಡುತ್ತಿರಲಿಕ್ಕಿಲ್ಲ. ಅದನ್ನು ತಿಳಿಸಿದ ಮತ್ತು ಕಾರ್ಯಕಲಾಪಗಳ ಆಪ್ತ ವರದಿ ಇದು. ಮುರಳಿಯವರಿಗೆ ಧನ್ಯವಾದಗಳು. ಶ್ರೀವತ್ಸ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.