ಭಾಮೆಯ … ವತ್ಸಲಾ ರಾಮಮೂರ್ತಿ ಬರೆದ ಕವನ

(ಯು ಕೆ ಕನ್ನಡ ಬಳಗದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ (ಕ ಸಾ ಸಾಂ ವಿ ವಿ)ಯವರು ಇತ್ತೀಚೆಗೆ ಹೊರತಂದ ಧ್ವನಿ ಸುರುಳಿಯಲ್ಲಿಯ ಇನ್ನೊಂದು ರಚನೆಯನ್ನು ಈ ವಾರ ಪ್ರಕಟಿಸುತ್ತಿದ್ದೇವೆ. ಈ ಹಾಸ್ಯ-ವಿಡಂಬನೆ ಭರಿತ ಹಾಡಿಗೆ ವತ್ಸಲಾ ಅವರೇ ಈ ಕೆಳಗೆ ಹಿನ್ನೆಲೆ ಕೊಟ್ಟಿದ್ದಾರೆ. CD ಯಲ್ಲಿ ಇದನ್ನು ಕೇಳಿ ನೀವೆಲ್ಲ ಆನಂದಿಸಿ, ’ವಧು ಪರೀಕ್ಷೆ’ ಗೆಂದು ಬಂದ ಆನಂದನ ಪಾಡು ಏನೇ ಇರಲಿ!-ಸಂ)

ನಾವು ಆಗ ತಾನೆ ವ್ಯದ್ಯಕೀಯ ಪರೀಕ್ಷೆ ಮುಗಿಸಿ ಹಾಯಾಗಿ ಇದ್ದೆವು. ಆಗ ಶುರುವಾಯಿತು ಮದುವೆ ಕಾಟ . ನಾನಂತು ನನ್ನ ಅಪ್ಪನಿಗೆ ಹೇಳೇಬಿಟ್ಟೆ “ನೋಡು ನೀನು ತಿಪ್ಪರಲಾಗ ಹಾಕಿದರೂ ನಾನು ಅಮೆರಿಕಾದ ಹುಡುಗನ್ನ ಮದುವೆ ಆಗಲ್ಲ ” ಅಂತ . ಪಾಪ ನನ್ನ ಫ್ರೆಂಡ್ ರಮನಿಗೆ ಅಷ್ಟ್ಟು ಸ್ವಾತಂತ್ರ್ಯ ಮತ್ತು ಧೈರ್ಯ ಇರಲ್ಲಿಲ . ಅವಳು ನನ್ನ ಹತ್ತಿರ ಬಂದು ಗೋಳಾಡಿದಳು .”ನೋಡೇ ,ಯಾರೋ ತಲೆ ಮಾಸಿದವ ಅಮೇರಿಕನ್ನು ಬರುತ್ತಾನಂತ್ತೆ . ಅವನಿಗೆ ಹಳೆಕಾಲದ ಹುಡಿಗಿ ಬೇಕಂತ್ತೆ. ಸೀರೆ ಒಟ್ಟು ಕುಂಕುಮ ಅರಸಿನ ಹಚ್ಚಿ ಹೂವ ಮುಡಿದರಬೇಕೆಂತೆ . ನಾನೇನು ಹಸುವೇ ನೋಡಿ ಮೂಗುದಾರ ಹಾಕಿ ಎಳೆಯುವುದಕ್ಕೆ?,” ಅಂತ ಗೋಗರೆದಳು. ಆಗ ನಾವು ಒಂದು ನಾಟಕ ಆಡಿದೆವು . ಅದೇ ಅದರ ಹಿನ್ನಲೆ. –ವತ್ಸಲಾ ರಾಮಮೂರ್ತಿ

 ಭಾಮೆಯ ನೋಡಲು ಬಂದ ನಮ್ಮ ಆನಂದ!!!!

ಭಾಮೆಯನು ನೋಡಲು ಬಂದ

ಕಚ್ಚೆ ಪಂಚೆ, ಶಾಲು ಹೊದ್ದು ಬಂದ  ಆನಂದ

ಅಮೆರಿಕಾದಲ್ಲಿ ಅಧಿಕಾರಿ ಅವನಾಗಿದ್ದ

ಇಡ್ಲಿ, ದೋಸೆ, ರಾಗಿ ರೊಟ್ಟಿಯೆಂದರೆ ಪ್ರಾಣ ಬಿಡುತ್ತಿದ್ದ

 

ವಧುವನ್ನು ನೋಡಲು ಕಾತುರನಾಗಿದ್ದ

ಹೆಸರು ನಾಗವೇಣಿಯೆಂದ ಭಾವಮೈದುನ

ಪಟ್ಟೆ ಸೀರೆಯುಟ್ಟು ಮಲ್ಲಿಗೆ ಮುಡಿದು

ವಜ್ರದ ಓಲೆ, ಮೂಗು ಬಟ್ಟು ಹೊಳೆಸುತ್ತ ನಾಚುತ್ತಾಳೆಂದುಕೊಂಡ

ಅಂತಿಂತ ಹೆಣ್ಣಲ್ಲ  ಅವಳು ಭಾಗ್ಯವತಿ ಎಂದು ಕನಸುಕಂಡ

 

ವಧು ಬಂದಳು ವರನ ಪರೀಕ್ಷೆಗೆ

ಕೆಂಪು, ಹಸಿರು ಬಣ್ಣ ಬಳಿದು ಕೇಶ ರಾಶಿಗೆ

ತುಟಿಯಲ್ಲಿ ಕೆಂಪು, ಕಣ್ಣಲ್ಲಿ ನೀಲಿ ಬಣ್ಣ

ಮೈಗೆಲ್ಲ ಚಿನ್ನದ ಬಣ್ಣದ ಪುಡಿಯ ಮಿಣ ಮಿಣಿಸುತ್ತ

Bhameya nodalu banda Ananda 1 (3)

ಕಾಲಲ್ಲಿ ಆರಿಂಚಿನ ಮೊಸಳೆ ಚರ್ಮದ ಮೆಟ್ಟು

ತಲೆ ಎತ್ತಿ ಧಿಮಕ್, ಧಿಮಕ್ ಧಾವಂತದಲ್ಲಿ

ಕೈಯಲ್ಲಿ ಮದ್ಯಪಾನದ ಬಟ್ಟಲು ಹಿಡಿದಿದ್ದಳು

ಹೈ  ದೇರ್ !! ಹುಸಿನಗೆ ಬೀರುತ್ತ  ಅಂದಳು

 

ಕಾದಿದ್ದನವ ರೇಶ್ಮೆ ಸೀರೆಯ ನಾಗವೇಣಿಗೆ

ಉಪ್ಪಿಟ್ಟು ಬೋಂಡ ಜಾಮೂನ್ ನಿಪ್ಪಟ್ಟಿಗೆ

ನಾಚುತ್ತ ಮಲ್ಲಿಗೆ ಮುಡಿದು ಬರುವ ಹೆಣ್ಣಿಗೆ

ಕೃಷ್ಣ ನೀ ಬೇಗನೆ ಬಾರೋ ಎನ್ನುವ ಹಾಡಿಗೆ

ಭಾಮೆಯ ನೋಡಲು ಬಂದ ನಮ್ಮ ಆನಂದ!!!!

ಡಾ ವತ್ಸಲಾ ರಾಮಮೂರ್ತಿ 

 

(ವ್ಯಂಗ ಚಿತ್ರ : ಡಾ. ಲಕ್ಷ್ಮಿನಾರಾಯಣ ಗುಡೂರ್)

 

7 thoughts on “ಭಾಮೆಯ … ವತ್ಸಲಾ ರಾಮಮೂರ್ತಿ ಬರೆದ ಕವನ

  1. ಭಾರತೀಯ ಸಾಂಪ್ರದಾಯಿಕ ಮಧ್ಯಮವರ್ಗದ ವಧು ವೀಕ್ಷಣೆಯ ನೈಜ ಚಿತ್ರ ಕಣ್ಣ ಮುಂದೆ ಕಟ್ಟಿಕೊಡುವ ಈ ಹಾಡು ಹಾಸ್ಯಭರಿತವಾಗಿದೆಯಾದರೂ ಒಂದು ಸೂಕ್ಷ್ಮ ಎಳೆಯನ್ನು ಹೊಂದಿದೆ

    Like

  2. ಭಾಮೆಯ ನೋಡಲು ಆನಂದದಿಂದ ಬಂದು ಆನಂದನಿಗೆ ಭ್ರಮ ನಿರಸನವಾದ ವಿನೋದಮಯ ಕವನ.ಆದರೂ ಪಾಪ ಆನಂದನ ಬಗ್ಗೆ ಒಂದು ಕರುಣೆಯ ಎಳೆ ಸುಳಿದು ಹೋಯಿತು ಮನದಲ್ಲಿ. ಮುಂದಿನ ಬಾಳಲ್ಲಾದ್ರೂ ಆತನಿಗೆ ಆತನ ಮನವರಿವ ಬಾಳಗೆಳತಿ ಸಿಗಲಿ ಅಂತ ಹಾರೈಸ್ತೀನಿ. ಮೊಗದಲ್ಲಿ ನಗು ಮೂಡಿಸಿ, ಮನದಲ್ಲಿ ಮುದಬಿರಿಸುವ ಸುಂದರ ಹಾಸ್ಯಮಯ ಕವನ.ಪ್ರತಿಯೊಬ್ಬರ ಬಾಳಲ್ಲಿಯೂ ಒಂದೊಂದು ಸುಂದರ ಅನುಭವದ ಕ್ಷಣದ ಮೋಜನ್ನು ಮೆಲುಕು ಹಾಕಲು ಹಚ್ಚುವ ಸರಳ ಕವನ.ಅಭಿನಂದನೆಗಳು ಡಾ.ವತ್ಸಲಾ ಅವರೇ.
    ಸರೋಜಿನಿ ಪಡಸಲಗಿ

    Liked by 1 person

  3. ಕಳೆದ ಏಪ್ರಿಲ್ನಲ್ಲಿ ನಿಮ್ಮ ಕವನವನ್ನು ಹಾಡಾಗಿ ಸವಿತಾರ ಕಂಠದಲ್ಲಿ ಕೇಳಿದಾಗ ಬಲು ನಗು ಬಂದಿತ್ತು; ಮತ್ತೆ ಕೇಳಬೇಕೆನಿಸಿತ್ತು, ಮೋಜಿನ ‘ಆನಂದ’ ಆಗಿತ್ತು! ಬಿ ಆರ್ ಲಕ್ಮಣ ರಾಯರ ಕವನಗಳು, ಹಾಡುಗಳು ನೆನಪಿಗೆ ಬಂದವು. ಒಳ್ಳೆ ಪ್ರಯತ್ನ.
    ವಿನತೆ ಶರ್ಮ

    Like

  4. ಈ ‘ಭಾಮೆಯ…’ ಹಾಡು ಸ್ಕೂಲ್ ಮಾಸ್ಟರ್ ಚಿತ್ರದ ವಿನೋದಮಯ ದೃಶ್ಯವನ್ನು ನೆನಪಿಸುವಂತದು. ( ಇಲ್ಲಿ ನೋಡಬಹುದು: https://youtu.be/xJZR0Oz9gNU, ಮತ್ತು ಸೂಲಮಂಗಲಂ ರಾಜಕುಮಾರಿಯವರ ಅದ್ಭುತ ದನಿಯಲ್ಲಿಯ ಹಾಡನ್ನೂ ಕೇಳಬಹುದು) ಆ ‘ಭಾಮೆಯ ನೋಡಲು’ ಆತ ಬೃಂದಾವನದಿಂದ ಬಂದದ್ದ. ಈತ ಬರಿಗೈಯಲ್ಲಿ ( “ರಮಾ” ಅಂತೂ ಆನಂದನ ಕೈ ಹಿಡಿಯಲಿಲ್ಲ!) USಗೆ ವಾಪಸ್ ಹೋದಂತಿದೆ! ಓದಲು, ಕೇಳಲು, ಗುಡೂರ್ ಅವರ bubble pricking cartoon ನೋಡಲು ಮತ್ತು CDಯಲ್ಲಿ ಹಾಡು ಕೇಳಲು ಆನಂದವೇ ಆನಂದ. ಆ ಅನುಭವವನ್ನು ಕೊಟ್ಟ ಎಲ್ಲ ಕಲಾಕಾರರಿಗೆ ಅಭಿನಂದನೆಗಳು!

    Like

  5. ಅಲ್ಲ, ವತ್ಸಲಾರವರ ಆನಂದ್ ಎಷ್ಟು ಸುಲಭವಾಗಿ ಪೆಗ್ಗಿ ಬಿದ್ದಿದ್ದಾನೆ.
    ಈ ಕವಿತೆ ಇಂದಿನ ಕಾಲದಲ್ಲಿ ವಾಸ್ತವಕ್ಕೆ ಹೆಚ್ಚು ದೂರವಿಲ್ಲ ಅನಿಸುತ್ತದೆ. ಸರಳ ಭಾಷೆಯ ಈ ಕವನ ಓದಲಿಕ್ಕೆ ಸರಾಗ. ಕವಿತೆಯ ಕುಹಕ ಅಮಿತಾ ಕಿರಣ್ ರವರ ಕಂಠದಲ್ಲಿ ಧ್ವನಿಮುದ್ರಿಕೆಯಲ್ಲಿ ಸೊಗಸಾಗಿ ಮೂಡಿಬಂದಿದೆ.

    Like

  6. ವತ್ಸಲಾರವರೆ, ನಿಮ್ಮ ಕವನದಲ್ಲಿನ ಕುಹುಕ ಇoದಿನ ಪರಿಸ್ಥಿತಿಯನ್ನು ಸಾರುತ್ತದೆ. ಆನoದನಿಗೆ ಬೇಕಾದ ಹೆಣ್ಣು ಸಿಗುವ ಕಾಲ ಮುಗಿಯುತ್ತಾ ಬoದಿದೆಯೆoದು ಹೇಳಬಹುದು. ಸುಲಭವಾಗಿ ಓದಿಸಿಕೊoಡು ಹೋಗುವ ಕವಿತೆ. ಚೆನ್ನಾಗಿದೆ.

    Like

Leave a comment

This site uses Akismet to reduce spam. Learn how your comment data is processed.