ಬ್ರಾಡ್ ಫರ್ಡ್ ನಲ್ಲಿ ನಡೆದ ಯುಗಾದಿಯ ಸಂಭ್ರಮ – ವೈಶಾಲಿ ದಾಮ್ಲೆ ಮತ್ತು ನವ್ಯಾ

(ವೈಶಾಲಿ ದಾಮ್ಲೆ ನಮ್ಮ ಕಸಾಸಾವಿವೇಯ ಹೊಸ ಪರಿಚಯ. ಈಗಾಗಲೇ ಈ ಜಾಲಕ್ಕೆ ಬರೆಯಲು ಆರಂಭಿಸಿರುವ ವೈಶಾಲಿ ಈ ಸಲ ಬ್ರಾಡ್-ಫರ್ಡಿನಲ್ಲಿ ನಡೆದ ಕನ್ನಡ ಬಳಗದ ಸಾಂಸ್ಕೃತಿಕ ಕಾರ್ಯಕ್ರಮದ ವರದಿಯನ್ನು ಬರೆದಿದ್ದಾರೆ.

ನವ್ಯಾ, ಎರಡನೇ ತಲಮಾರಿನ ಕನ್ನಡತಿ, ಅವರ ಕನ್ನಡ ಮಾತಾಡುವ ಪರಿ ಕೇಳುತ್ತಿದ್ದರೆ ನಿಮಗೆ ಅವರು ಇಂಗ್ಲಂಡಿನಲ್ಲೇ ಹುಟ್ಟಿ ಬೆಳೆದವರು ಎಂದು ಹೇಳಲು ಸಾಧ್ಯವೇ ಇಲ್ಲ. ಕನ್ನಡ ಬಳಗದ ಯುತ್ ಪ್ರೋಗ್ರಾಂ ಬಗ್ಗೆ ಬರೆದಿದ್ದಾರೆ. ಇದು ಅವರ ಮೊದಲ ಲೇಖನ, ಇನ್ನೂ ಹೆಚ್ಚು ಮೂಡಿಬರಲಿ  – ಸಂ)

IMG_7670[1]ಯುಗಾದಿಯೆಂದರೆ, ಶರತ್ಶಿಶಿರ ಋತುವಿನ ಚುಮುಚುಮು ಚಳಿ ಕಳೆದು ವಸಂತನ ಆಗಮನವಾಗುವ ಕಾಲ. ಯುಕೆ ಯಲ್ಲಿರುವ ನಮಗೆ, ಸ್ಪ್ರಿಂಗ್ ಆರಂಭವಾಗುತ್ತಿದ್ದಂತೆ  ಚಳಿಗಾಲದಲ್ಲಿ ಬೋಳಾಗಿದ್ದ ಗಿಡಮರಗಳೆಲ್ಲ ಚಿಗುರಿ, ಎಲ್ಲೆಲ್ಲೂ ಡ್ಯಾಫೋಡಿಲ್ , ಟ್ಯುಲಿಪ್ ನಂತಹ ಹೂವುಗಳು ನಳನಳಿಸಿವುದನ್ನು ನೋಡುವುದೇ ಕಣ್ಣಿಗೆ ಹಬ್ಬ.ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆಎಂದು ವರಕವಿ ಬೇಂದ್ರೆಯವರು ಹೇಳಿದಂತೆ, ಇಡೀ ದೇಶದ ವಾತಾವರಣಕ್ಕೆ, ಸಸ್ಯ ಹಾಗೂ ಪ್ರಾಣಿ  ಸಂಕುಲಕ್ಕೆ ಹೊಸ ಕಳೆ ಬರುವ ಕಾಲ ಇದು. ಯುಗಾದಿಯ ಸಂಭ್ರಮವನ್ನು ನಮ್ಮನಮ್ಮ ಮನೆಗಳಲ್ಲಿ ಸಣ್ಣಮಟ್ಟಿನಲ್ಲಿ ಆಚರಿಸುವ ಯುಕೆ ಕನ್ನಡಿಗರು, ಯುಗಾದಿಯ ನಂತರ  ಒಂದೆರಡು ವಾರಾಂತ್ಯಗಳೊಳಗೆ ನಡೆಯುವ ಕನ್ನಡ ಬಳಗದ ಯುಗಾದಿ ಉತ್ಸವದಲ್ಲಿ ಭಾಗಿಗಳಾಗಿ,  ಹೊಸ ವರ್ಷವನ್ನು ಸಡಗರದಿಂದ ಸ್ವಾಗತಿಸುತ್ತೇವೆ.

ಹೇಮಲಂಬಿ ಸಂವತ್ಸರದ ಯುಗಾದಿ ಉತ್ಸವವು ಬಾರಿ ಯಾರ್ಕ್ ಶಯರ್ ಬ್ರಾಡ್ ಫರ್ಡ್ ನಗರದಲ್ಲಿ ೦೮/೦೪/೨೦೧೭ ರಂದು ಅದ್ದೂರಿಯಿಂದ ನಡೆಯಿತು. ಕಾರ್ಯಕ್ರಮ ನಡೆದ ಎಲ್ಶದಾಯಿ ಸಭಾಂಗಣವು ಬಹು ವಿಸ್ತಾರವಾಗಿದ್ದು, ಬ್ರಾಡ್ ಫರ್ಡ್ ಗೆ ಮೊದಲ ಬಾರಿಗೆ ಬಂದವರು ಕೂಡ ಬಹಳ ಸುಲಭವಾಗಿ ಬಂದು ತಲುಪುವಂತಿತ್ತು.

ಬೆಳಗ್ಗೆ ೧೧:೩೦ ಕ್ಕೆ ಮಕ್ಕಳ ಮನರಂಜನಾ ಕಾರ್ಯಕ್ರಮದೊಂದಿಗೆ ದಿನದ ಆರಂಭವಾಯಿತು. ಯುಕೆ ಯಾದ್ಯಂತ ಹಲವು ಊರುಗಳಿಂದ ಬಂದ ಚಿಣ್ಣರು ಬಣ್ಣಬಣ್ಣದ ಉಡುಗೆಯುಟ್ಟು ಅಚ್ಚಕನ್ನಡದ ಹಾಡುಗಳನ್ನು ಹಾಡಿದರು, ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿ ನಮ್ಮನ್ನು ರಂಜಿಸಿದರು. ಪುಟ್ಟ ಮಕ್ಕಳ ಉತ್ಸಾಹವನ್ನು ಕಂಡು  ”ಕನ್ನಡ ಕನ್ನಡ ಕನ್ನಡವೆಂದುಲಿ ಕನ್ನಡ  ನಾಡಿನ ಕಂದ , ಕನ್ನಡ ಭಾಷೆಯ  ಕೀರುತಿ ಹಬ್ಬಿಸು ಕನ್ನಡ ತಾಯಿಗೆ ಆನಂದಎಂದು ಕವಿ ಹಾಡಿದ್ದು ಇವರನ್ನು ನೋಡಿಯೇ ಇರಬಹುದೇನೋ ಅನಿಸಿತು.

ಇದೇ ಸಮಯದಲ್ಲಿ ಕನ್ನಡ  ಬಳಗ ಯುಕೆ ಸರ್ವಸದಸ್ಯರ ವಾರ್ಷಿಕ ಸಭೆ ( Annual General Meeting ) ಸಭಾಂಗಣದ ಇನ್ನೊಂದು ಭಾಗದಲ್ಲಿ ನಡೆಯಿತು. ಕೆಬಿಯುಕೆ ಪ್ರಸ್ತುತ ಪದಾಧಿಕಾರಿಗಳು ಮತ್ತು ಸದಸ್ಯರು ಮಾತ್ರವಲ್ಲದೆ ಹಲವು  ಮಾಜಿ ಪದಾಧಿಕಾರಿಗಳು ಹಾಗೂ ಹಿರಿಯ ಸದಸ್ಯರ ಉಪಸ್ಥಿತಿಯಿಂದ ಇದೊಂದು ಬಹಳ ಅರ್ಥಪೂರ್ಣವಾದ ಸಭೆಯಾಯಿತು. ಸಂಸ್ಥೆಯ ಈವರೆಗಿನ ಸಾಧನೆಗಳು ಹಾಗೂ ಇನ್ನು ಮುಂದಿರುವ ಸವಾಲುಗಳ ಬಗ್ಗೆ ಆರೋಗ್ಯಕರ ಚರ್ಚೆಗಳು ನಡೆದುವು. ಕೆಬಿಯುಕೆ ಯುವ ಸದಸ್ಯರು ಕೂಡಾ ಸಕ್ರಿಯವಾಗಿ ಭಾಗವಹಿಸಿ ಹಲವು ನೂತನ ವಿಚಾರಗಳನ್ನು ಸಭೆಯ ಮುಂದಿಟ್ಟರು.

ಮಕ್ಕಳ ಕಾರ್ಯಕ್ರಮದ ನಂತರ ಊಟದ ಸಮಯ. ಯುಕೆ ಯಲ್ಲಿ ಉಡುಪಿ ಶೈಲಿಯ ಖಾದ್ಯಗಳಿಗೆ ಇನ್ನೊಂದು ಹೆಸರಾದಶಿವಳ್ಳಿರೆಸ್ಟೋರೆಂಟ್ ನವರು ತಯಾರಿಸಿದ, ರುಚಿಕರ  ಭೋಜನವನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ಸವಿದೆವು.

IMG_7549[1]
ಮಾನ್ಯ ಮೈ ಶ್ರೀ ನಟರಾಜ್ – ಮುಖ್ಯ ಅತಿಥಿಗಳ ಭಾಷಣ
ಮಧ್ಯಾಹ್ನದ ಊಟ ಹಾಗೂ ವಿರಾಮದ ನಂತರ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡದ ಖ್ಯಾತ ಸಾಹಿತಿ ಹಾಗೂ ವಿಜ್ಞಾನಿ, ಅಮೆರಿಕನ್ನಡಿಗ ಮೈ ಶ್ರೀ ನಟರಾಜ್ ರವರನ್ನು ವೇದಿಕೆಗೆ ಸ್ವಾಗತಿಸಲಾಯಿತು. ಕನ್ನಡ ಬಳಗ ಯುಕೆ ಅಧ್ಯಕ್ಷರಾದ ವಿವೇಕ್ ತೊಂಟದಾರ್ಯ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಯುಗಾದಿ ಹಬ್ಬದ ಅರ್ಥವನ್ನೂ, ಹೊರದೇಶದಲ್ಲಿರುವ ಕನ್ನಡಿಗರ ಜೀವನದಲ್ಲಿ ಕನ್ನಡ ಬಳಗದಂತಹ ಸಂಸ್ಥೆ ಗಳು ವಹಿಸುವ ಪಾತ್ರವನ್ನೂ  ಬಹಳ ಅರ್ಥಪೂರ್ಣವಾಗಿ ವಿವರಿಸುವುದರೊಂದಿಗೆ, ಕನ್ನಡ ಬಳಗ ಯುಕೆ ನಡೆಸುತ್ತಿರುವ ಸತ್ಕಾರ್ಯಗಳನ್ನೂ ಸಭಿಕರಿಗೆ ತಿಳಿಸಿದರು.

ಇದರ ಬಳಿಕ ಮೈ ಶ್ರೀ ನಟರಾಜ್ ರವರು ಮುಖ್ಯ ಅತಿಥಿಗಳ ಭಾಷಣ ಮಾಡಿದರು. ಭಾರತೀಯರಾದ ನಾವು ಹೊರದೇಶಕ್ಕೆ ಬಂದೊಡನೆ ನಮ್ಮ ಭಾಷೆ, ಆಹಾರ, ಉಡುಗೆತೊಡುಗೆಗಳೆಲ್ಲ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಬದಲಾಗುವುದು ಅನಿವಾರ್ಯವಾಗುತ್ತದೆ, ಆದರೆ ಬಾಲ್ಯದಲ್ಲಿ ಕಲಿತ ನಮ್ಮ ಮೌಲ್ಯಗಳ ಹಾಗೂ ಆಧ್ಯಾತ್ಮದ ಬುನಾದಿ ಭದ್ರವಾಗಿದ್ದರೆ ಹೇಗೆ ನಾವು ಹೊರದೇಶದಲ್ಲಿದ್ದುಕೊಂಡೂ ನಮ್ಮತನವನ್ನು ಉಳಿಸಿಕೊಳ್ಳಬಹುದು ಎಂದು ಮನಮುಟ್ಟುವಂತೆ ವಿವರಿಸಿದರು. ದೂರದೇಶವಾದ ಅಮೇರಿಕಾದಲ್ಲಿ ನೆಲೆಸಿದ್ದು ಹೇಗೆ ಅವರಲ್ಲಿ ಸುಪ್ತವಾಗಿದ್ದ ಕನ್ನಡಪ್ರಜ್ಞೆಯನ್ನು ಜಾಗೃತಗೊಳಿಸಿತು, ತನ್ಮೂಲಕ ಹೇಗೆ ಅವರು ಹಲವಾರು ಕೃತಿಗಳನ್ನು,ಕವನ ಸಂಕಲನಗಳನ್ನು ರಚಿಸಲು ಕಾರಣೀಭೂತವಾಯಿತು ಎಂದು ತಿಳಿಸಿದರು. ಜೀವನದ ನಾಲ್ಕು ಹಂತಗಳ ಮಹತ್ವವನ್ನು ಸರಳ ಭಾಷೆಯಲ್ಲಿ ವಿವರಿಸಿದರು. ಬಹಳಷ್ಟು ಐರೋಪ್ಯ ಭಾಷೆಗಳು ಶೈಶವಾವಸ್ಥೆಯಲ್ಲಿದ್ದ ಕಾಲಕ್ಕೇ ರಚನೆಯಾಗಿದ್ದ, ಸಕಲ ಆಧ್ಯಾತ್ಮ ಸಾರವನ್ನೂ ಒಳಗೊಂಡ ವಚನ ಸಾಹಿತ್ಯದಂತಹ ಅದ್ವಿತೀಯ ಸಾಹಿತ್ಯಕ್ಕೆ ಜನ್ಮ ಕೊಟ್ಟಂತಹ ಭಾಷೆ ಕನ್ನಡವಾಗಿದ್ದರೂ ಕೂಡಾ, ಇಂತಹ ಮಹಾನ್ ಭಾಷೆಯ ಮೇಲೆ ಕನ್ನಡಿಗರಿಗೇ ಅಭಿಮಾನವಿಲ್ಲದಿರುವುದು ಒಂದು ದುರಂತ ಎಂದು ಖೇದ ವ್ಯಕ್ತಪಡಿಸಿದರು. ಹೊರದೇಶದಲ್ಲಿ ನೆಲೆಸಿರುವ ನಾವು, ಮೇಲ್ನೋಟಕ್ಕೆ ಪಾಶ್ಚಾತ್ಯ ಜೀವನಶೈಲಿಯನ್ನು ಅನಿವಾರ್ಯವಾಗಿ ಸ್ವೀಕರಿಸಿದರೂ ಕೂಡಾ, ಆಂತರ್ಯದಲ್ಲಿ ಎಂದಿಗೂ ಭಾರತೀಯರಾಗೇ ಇರುತ್ತೇವೆ ಎಂಬುದನ್ನುನಾನೂ ಅಮೆರಿಕನ್ ಆದೆಎಂಬ ಸ್ವರಚಿತ ಕವನದ ಮೂಲಕ ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದರು. ಮುಂದೊಂದು ದಿನ ಪ್ರಪಂಚದ ಎಲ್ಲಾ ದೇಶಗಳಲ್ಲಿರುವ ಸಾಹಿತ್ಯಾಸಕ್ತ ಅನಿವಾಸಿ ಕನ್ನಡಿಗರೂ ಒಂದೆಡೆ  ಸೇರಬೇಕು, ಕನ್ನಡದಲ್ಲಿ ವಿಚಾರವಿನಿಮಯವನ್ನು ನಡೆಸಬೇಕು, ಎಂಬುದು ತಮ್ಮ ಕನಸು ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಬಳಗದ ಹಿರಿಯ ಸದಸ್ಯರಾದ ರಾಮಮೂರ್ತಿಯವರನ್ನು ಸನ್ಮಾನಿಸಲಾಯಿತು. ಇದರ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಸರದಿ. ಸ್ಥಳೀಯ ಕಲಾವಿದರಿಂದ ಹಾಗೂ ಯುಕೆ ಇತರ ಭಾಗಗಳಿಂದ ಬಂದ ಉತ್ಸಾಹಿ ಕನ್ನಡಿಗರಿಂದ ಹಾಡು, ನೃತ್ಯ ಹಾಗೂ ನಾಟಕಗಳೂ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಬಹಳ ಸುಂದರವಾಗಿ ಮೂಡಿಬಂದುವು.  

ಮಕ್ಕಳ ಉಸ್ತುವಾರಿ ಹಾಗೂ ಮನರಂಜನೆಗೆಂದು ಆಯೋಜಿಸಲಾಗಿದ್ದ crèche ಸವಲತ್ತಿನ ಬಗ್ಗೆ ಇಲ್ಲಿ ಒಂದೆರಡು ವಾಕ್ಯಗಳನ್ನಾದರೂ ಬರೆಯಲೇಬೇಕು. ಅನುಭವಸ್ಥ childminderಗಳ ಸುಪರ್ದಿಯಲ್ಲಿದ್ದ ಮಕ್ಕಳಿಗೆ ತಾವು ಯಾವುದೋ ಪಾರ್ಟಿಯಲ್ಲಿದ್ದುಕೊಂಡು ಮಜಾ ಮಾಡಿದ ಅನುಭವವಾದರೆ, ಚಿಕ್ಕ ಮಕ್ಕಳ ತಂದೆತಾಯಿಯರು ಯಾವುದೇ ಅಡಚಣೆಯಿಲ್ಲದೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸುವ ಅವಕಾಶ ದೊರೆಯಿತು. ಸಣ್ಣ ಮಕ್ಕಳಿರುವ ಬಹಳಷ್ಟು ಪೋಷಕರು, ಇಂತಹ ಒಂದು ಉತ್ತಮ ವ್ಯವಸ್ಥೆಯನ್ನು ಆಯೋಜಿಸಿದ ಕಾರ್ಯಕಾರಿ ಸಮಿತಿಯ ಪ್ರಯತ್ನ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು

IMG_7564[1]
`ಅನಿವಾಸಿ` (ಕೆ ಎಸ್ ಎಸ್ ವಿ ವಿ) ಬಳಗ, ಮೈ ಶ್ರೀ ಅವರೊಂದಿಗೆ
ಇದೇ ಸಮಯದಲ್ಲಿ ಸಭಾಂಗಣದ ಇನ್ನೊಂದು ಭಾಗದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ವಿಚಾರ ವೇದಿಕೆ ( ಕೆ ಎಸ್ ಎಸ್ ವಿ ) ಯ ವತಿಯಿಂದ ‘ಹೊರದೇಶದ ಕನ್ನಡಿಗರು ಮತ್ತು ಕನ್ನಡಪ್ರಜ್ಞೆ’ ಎಂಬ ವಿಚಾರಸಂಕಿರಣ ಮೈ ಶ್ರೀ ನಟರಾಜ್ ರವರ ಉಪಸ್ಥಿತಿಯಲ್ಲಿ ನಡೆಯಿತು. ವೇದಿಕೆಯ ಹಿರಿಯರಾದ  ಡಾ| ಶ್ರೀವತ್ಸ ದೇಸಾಯಿಯವರು ಕಾರ್ಯಕ್ರಮದ ನಿರ್ವಹಣೆ ನಡೆಸಿಕೊಟ್ಟರು. ಕೆ ಎಸ್ ಎಸ್ ವಿ ಯ ಸದಸ್ಯರಾದ ಯುಕೆ ಯ ಸಾಹಿತ್ಯಾಸಕ್ತರು ಕನ್ನಡಪ್ರಜ್ಞೆಯ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು. ಮೈ ಶ್ರೀ ಯವರು ಹೊರದೇಶದ ಕನ್ನಡಿಗರಲ್ಲಿ ಹಾಗೂ ನಮ್ಮ ಮಕ್ಕಳಲ್ಲಿ, ಕನ್ನಡಪ್ರಜ್ಞೆಯನ್ನು ಉಳಿಸಿ-ಬೆಳೆಸುವ ಮಹತ್ವವನ್ನು ವಿಶ್ಲೇಷಿಸಿದರು. ಇದೊಂದು  ಪರಿಣಾಮಕಾರಿ ಹಾಗೂ ಚಿಂತನಾರ್ಹವಾದ ಉತ್ತಮ ಕಾರ್ಯಕ್ರಮವಾಗಿತ್ತುಎಂದು ಅಲ್ಲಿದ್ದ ಬಹುತೇಕ ಜನ ಅಭಿಪ್ರಾಯ ಪಟ್ಟರು.

IMG_7577[1]
ಸಿಂಚನ್ ದೀಕ್ಷಿತ್ ಸಂಗೀತದೌತಣ
ವಿರಾಮದ ಸಮಯದಲ್ಲಿ ಕಾಫಿ ಹಾಗೂ ಚಹಾದೊಂದಿಗೆ ಬಿಸಿಬಿಸಿ ಸಮೋಸಾಗಳು ನಮ್ಮನ್ನು ಕಾದಿದ್ದವು. ಇದಾಗಿ ಜೀಟಿವಿ ಸರೆಗಮಪ ಖ್ಯಾತಿಯ ಸಿಂಚನ್ ದೀಕ್ಷಿತ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ರಾ ಬೇಂದ್ರೆ, ಎಸ್ ಪಿ ಬಾಲಸುಬ್ರಹ್ಮಣ್ಯಮ್, ರಾಜನ್ ನಾಗೇಂದ್ರ, ಸಿ ಅಶ್ವಥ್ ರಂಥ  ಕನ್ನಡದ ಖ್ಯಾತನಾಮರ ಹಲವು ಜನಪ್ರಿಯ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ, ಜೊತೆಗೆ ಪ್ರೇಕ್ಷಕರನ್ನೂ ಹಾಡಿಸಿ, ಕುಣಿಸಿ ಸುಮಾರು ಒಂದೂವರೆ ಗಂಟೆಗಳ ಕಾಲ ನಮ್ಮ ಮನರಂಜಿಸಿದರು. ಪೂರಿ, ಪನೀರ್, ಜಾಮೂನುಗಳನ್ನೊಳಗೊಂಡ ರುಚಿಕರವಾದ ರಾತ್ರೆಯ ಊಟವನ್ನು ಸವಿದು ರಾತ್ರೆ ೦೯:೩೦ ಸುಮಾರಿಗೆ ನಾವು ಮನೆಗೆ ಹೊರಟೆವು.

ಒಟ್ಟಿನಲ್ಲಿ, ಬಾರಿಯ ಯುಗಾದಿ ಕಾರ್ಯಕ್ರಮ ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂತಹುದಾಗಿತ್ತು. ಕಾರ್ಯಕಾರಿ ಸಮಿತಿಯ ಹಾಗೂ ಸ್ವಯಂಸೇವಕರ ಅವಿರತ ಶ್ರಮ ಕಾರ್ಯಕ್ರಮದ ಪ್ರತಿ ಹಂತದಲ್ಲೂ ಕಾಣಬರುತ್ತಿತ್ತು. ದೇಶದ ವಿವಿಧ ಭಾಗಗಳಿಂದ ಬಂದ ಕನ್ನಡಿಗರೊಂದಿಗೆ ಬಾಂಧವ್ಯ ಬೆಳೆಸಲು, ಕನ್ನಡದ ಶ್ರೀಮಂತ ಸಂಸ್ಕೃತಿಯ ಹಲವು ಮುಖಗಳನ್ನು ಇಲ್ಲಿ ಹುಟ್ಟಿಬೆಳೆಯುತ್ತಿರುವ ನಮ್ಮ ಮಕ್ಕಳಿಗೆ ಪರಿಚಯಿಸಲು ಇದೊಂದು ಉತ್ತಮ ವೇದಿಕೆಯಾಗಿತ್ತು. ಇನ್ನು ಮುಂದೆಯೂ ಕನ್ನಡ ಬಳಗದಿಂದ ಇಂತಹ ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಎಂದು ಯುಕೆ ಎಲ್ಲ ಕನ್ನಡಿಗರ ಪರವಾಗಿ ನನ್ನ ಆಶಯ.

– ವೈಶಾಲಿ ದಾಮ್ಲೆ

ಈ ಬಾರಿ ಕನ್ನಡ ಬಳಗ ಯುಕೆಯ ಯುಗಾದಿಯ ಆಚರಣೆ ಬ್ರಾಡ್ಫೊರ್ಡ್ ನಲ್ಲಿ ಏಪ್ರಿಲ್ ೮ನೇ ತಾರೀಕು ನೆಡೆಯಿತು. ಅದರಲ್ಲಿ ನೆಡೆಸಿದ್ದ ಯೂತ್ ಪ್ರೋಗ್ರಾಮ್ ನಲ್ಲಿ, ನನಗೆ ಚೈತ್ರ ಮತ್ತೆ ರಜತ್ ಸಹಾಯ ಮಾಡಿದರು. ಅವರಿಗೆ ತುಂಬಾ ಧನ್ಯವಾದಗಳು.

ಬಾರಿ ಯೂತ್ ಪ್ರೋಗ್ರಾಮ್ಮಿಗೆ ಹಿಂದಿನ ದೀಪಾವಳಿ ಹಬ್ಬದ ಕಾರ್ಯೆಕ್ರಮ ದಲ್ಲಿ ಭಾಗವಾಯಿಸಿದ್ದಷ್ಟು ಮಕ್ಕಳು ಬಂದಿರಲಿಲ್ಲ! ಹಾಗಾದರಿಂದ, ನನಗೆ, ಚೈತ್ರನಿಗೆ, ಮತ್ತು ರಜತ್ ಗೆ  ಪ್ರತಿ ಮಗು ಜೊತೆ ಜಾಸ್ತಿ ಹೊತ್ತು ಕಳೆಯೋ ಅವಕಾಶ ಸಿಕ್ಕಿತು.

ಮೊದಲಾಗಿ, ಎಲ್ಲರೂ ತನ್ನ ಹೆಸರು ಮತ್ತೆ ಇಷ್ಟವಾದ ಹವ್ಯಾಸವನ್ನು ಹೇಳಿಕೊಂಡ್ವಿ. ಪ್ರತಿ ಒಬ್ಬರು ಪ್ರಯತ್ನ ಪಟ್ಟು, ಕನ್ನಡದಲ್ಲಿ ಮಾತು ಆಡಿದರು. ತನ್ನ ಹೆಸರು ಮತ್ತೆ ಹವ್ಯಾಸ ಹೇಳಕ್ಕೆ ಮೊದಲು, ಹಿಂದಿನ ಮಗು ಹೇಳಿದ್ದ ಹೆಸರು ಮತ್ತೆ ಹವ್ಯಾಸ ಹೇಳೋ ಜ್ಞಾಪಕದ ಆಟ. ಬೇರೆಯವರ ಹೆಸರು ನೆನಪು ಇಟ್ಕೋಳೋದು ಕಷ್ಟ ಆದರೂ, ಎಲ್ಲ ಮಕ್ಕಳು ಎಷ್ಟು ಆಗತ್ತೋ ಅಷ್ಟು ಹೇಳಿದರು. ತುಂಬಾನೇ ಮಜವಾಗಿದ್ದ ಆಟ ಇದು!

ಹಿಂದಿನ ಕನ್ನಡ ಬಳಗ ಯುಕೆ ಯೂತ್ ಪ್ರೋಗ್ರಾಮ್ ನಲ್ಲಿ ದಶಾವತಾರದ ಮೊದಲಿನ ಕಥೆ ಗಳು ಕಲಿತಿದ್ವಿ. ಸರ್ತಿ ಕಾರ್ಯೆಕ್ರಮದಲ್ಲಿ ಮಿಕ್ಕಿದ್ದ ಕಥೆಗಳನ್ನೂ ಓದಿ, ಒಂದೆರಡು ಹೊಸದಾದ ಕನ್ನಡ ಶಬ್ಧಗಳನ್ನೂ ಮಕ್ಕಳು ಕಲಿತರು.

ನಂತರ, ಎಲ್ಲರೂ ಸೂರ್ಯ ತಯ್ಯಾರ್ ಮಾಡಿದ ಕರ್ನಾಟಕದ ಆಹಾರದ ಬಗ್ಗೆ ಕ್ವಿಜ್ ಆಟ ಆಡಿದ್ವಿ. ಕೇಳಿಲ್ಲದೆ ಇರೋ ಸ್ವೀಟ್ಗಳು ಮತ್ತೆ ತಿಂಡಿಊಟಗಳ ಬಗ್ಗೆ ಹೇಳಿಕೊಟ್ಟ ಸೂರ್ಯ. ಕ್ವಿಜ್ ಮುಗಿದಮೇಲೆ, ಎಲ್ಲರಿಗೂ ಒಬ್ಬಟ್ಟು ತಿನ್ನೋ ಆಸೆ ಹುಟ್ಟಿತು!

– ನವ್ಯಾ

(ಚಿತ್ರಗಳು: ಕೇಶವ ಕುಲಕರ್ಣಿ)

6 thoughts on “ಬ್ರಾಡ್ ಫರ್ಡ್ ನಲ್ಲಿ ನಡೆದ ಯುಗಾದಿಯ ಸಂಭ್ರಮ – ವೈಶಾಲಿ ದಾಮ್ಲೆ ಮತ್ತು ನವ್ಯಾ

  1. ನವ್ಯಳಿಗೆ
    ಅನಂತ ಧನ್ಯವಾದಗಳು. ನೀನು ಈ ಸಲದ ಯುಗಾದಿ ಕಾರ್ಯಕ್ರಮದ ವರದಿ ಓದಿ ನನಗೆ ಹೇಳದಾರದಷ್ಟು ಹೆಮ್ಮೆ,ಆನಂದವಾಯಿತು. ನಿನ್ನಂತಹ ಎರಡೆನೇ
    ಪೀಳಗಿಯ ಯುವಳು ಇಲ್ಲಿಯ ಎಲ್ಲ ಕನ್ನಡ ಯುವರಿಗೆ ಕಣ್ಣು ತೆರೆಯಿಸಿರುವಿ. ಇನ್ನೂ ನೀನು ಕೈಗೊಳ್ಳುವ ಸಾಧನೆಗಳು ಸಾಕಷ್ಟಿವೆ . ಹೀರಿಯ ಕನ್ನಡ ಅಭಿಮಾನಿಗಳ
    ಪ್ರೋತ್ಸಾಹನೆ,ಮಾರ್ಗದರ್ಶನ ನೀನಗೆ ಸದಾ ಇರಲಿ ಎಂದು ಆಶಿಸುವೆ.

    ಡಾಕ್ಟರ ಅರವಿಂದ ಕುಲ್ಕರ್ಣಿ

    .

    Like

  2. ವೈಶಾಲಿಯವರಿಗೆ
    ಧನ್ಯವಾದಗಳು. ಈ ಸಲದ ಯುಗಾದಿ ಕಾರ್ಯಕ್ರಮದ ಬಗ್ಗೆ ಬರೆದ ನಿಮ್ಮ ವರದಿ ಕಣ್ಮುಂದೆ ಕಟ್ಟುವ ಹಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಬರದೇ ಇದ್ದ ಕನ್ನಡಿಗರಿಗೆ,ಮುಂದಿನ ದೀಪಾವಳಿಯ ಕಾರ್ಯಕ್ರಮದಲ್ಲಿ ತಪ್ಪದೆ ಬರುವ ಆಸೆ ಪ್ರಚೋದಿಸುವ ನಿಮ್ಮ ಲೇಖನ ಶ್ಲಾಘಿಸುವಂತಿದೆ .ಹೀಗೆಯೇ ಬರೆಯುತ್ತಲಿರ್ರಿ .

    ಡಾಕ್ಟರ ಅರವಿಂದ ಕುಲ್ಕರ್ಣಿ

    Like

  3. ಅನಿವಾಸಿ ಕನ್ನಡ ಬಳಗದ ಯುಗಾದಿಯ ಸಂಭ್ರಮದ ಆಚರಣೆಯ ವರದಿ ವೈಶಾಲಿ ಹಾಗೂ ನವ್ಯಾ ಅವರ ಲೇಖನಿಯಿಂದ ಸುಂದರವಾಗಿ ಮೂಡಿ ,ಮನ ಕುಣಿ ಕುಣಿದಾಡುವಂತೆ ಮಾಡಿದೆ. ಉಮಾ ಅವರು ಹೋದ ವಾರ ಬರೆದ ಅನಿವಾಸಿ ಮಕ್ಕಳಲ್ಲಿ ಕನ್ನಡ ಪ್ರಜ್ಞೆ ಬೆಳೆಸುವ ಬಗ್ಗೆ , ಲೇಖನವೂ ಅಷ್ಟೇ ಮನೋಜ್ಞವಾಗಿತ್ತು.ನಿಜಕ್ಕೂ ತಾಯ್ನಾಡಿನ ತುಡಿತ ಮಿಡಿತ ಕನ್ನಡಬಳಗದಲ್ಲಿ ಹರಿದಾಡುವ ಪರಿ ಎಲ್ಲರಲ್ಲೂ ಒಂದು ಹೊಸ ಪ್ರಜ್ಞೆಯನ್ನು ಮೂಡಿಸುವಂತಿದೆ.ನಿಮಗೆಲ್ಲ ನನ್ನ ಅನಂತ ಧನ್ಯವಾದಗಳು ,ಜೊತೆಗೆ ಶುಭ ಹಾರೈಕೆಗಳು.
    ಸರೋಜಿನಿ ಪಡಸಲಗಿ

    Liked by 1 person

  4. ಈ ಬಾರಿಯ ಯುಗಾದಿ ಸಮಾರಂಭ ತಪ್ಪಿದ್ದು ನನ್ನ ದುರದೃಷ್ಟವೇ ಸರಿ! ಆದರೆ ಸಮಾರಂಭ ಬಹಳ ಯಶಸ್ವಿಯಾಗಿ ನಡೆಯಿತು ಎನ್ನುವ ವಿವರಗಳು ನನಗೆ ಅನೇಕರಿಂದ ತಿಳಿದು ಅಷ್ಟೇ ಸಂತೋಷವಾಯಿತು. ವೈಶಾಲಿ ಮತ್ತು ನವ್ಯ ಸೊಗಸಾದ ವರದಿ ತಯಾರಿಸಿ, ಅಂದಿನ ಚಟುವಟಿಕೆಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಭಲೇ ನವ್ಯ! ನಿನ್ನ ಕನ್ನಡ ಬರವಣಿಗೆ ಹೀಗೆ ಮುಂದುವರೆಸು. ಬಿಡಬೇಡ!
    ಉಮಾ ವೆಂಕಟೇಶ್

    Liked by 1 person

  5. ಈ ಸಲದ ಕನ್ನಡ ಬಳಗದ ವೈವಿಧ್ಯಮಯ ಕಾರ್ಯಕ್ರಮಗಳ ವರ್ಣನಾಪೂರಕ ವರದಿ ಮತ್ತು ಯೂತ್ ಪ್ರೋಗ್ರಾಮ್ ಗಳನ್ನೂ ಸಂಕ್ಷಿಪ್ತವಾಗಿ ಬರೆದು ಕೊಟ್ಟ ಇಬ್ಬರು ಬರಹಗಾರ್ತಿಯರಿಗೂ ಅಭಿನಂದನೆಗಳು. ಈ ಸಲ ನವ್ಯ ಕನ್ನಡದಲ್ಲಿ ಬರೆದುದನ್ನು ಹೃತ್ಪೂರ್ವಕ ಸ್ವಾಗತಿಸೋಣ. ನನ್ನಂತೆ ಇನ್ನು ಕೆಲವರು ಎಲ್ಲ ಕಾರ್ಯಕ್ರಮಗಳನ್ನು ವೀಕ್ಷಿಸಲ್ಲಾಗಲಿ ಭಾಗವಹಿಸಲ್ಲಾಗಲಿ ಆಗಲಿಲ್ಲ. ಅವುಗಳ ವಿವರ ತಿಳಿಯಿತು.
    ಶ್ರೀವತ್ಸ

    Liked by 1 person

  6. ವೈಶಾಲಿ ಮತ್ತು ನವ್ಯಾ ಅವರಿಗೆ ಧನ್ಯವಾದಗಳು. ಕನ್ನಡ ಬಳಗದ ಕಾರ್ಯಕ್ರಮದ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. – ಕೇಶವ

    Liked by 1 person

Leave a comment

This site uses Akismet to reduce spam. Learn how your comment data is processed.