ಯುಗಾದಿ ವಿಶೇಷ ಸಂಚಿಕೆ

ಸಂಪಾದಕರ ನುಡಿ…

ವರ್ಷದ ಆದಿಯಲ್ಲಿ ದಕ್ಷಿಣ ಭಾರತದ ಹಿಂದೂಗಳು ಆಚರಿಸುವ ಮೊದಲ ಹಬ್ಬ ಯುಗಾದಿ. ಈ ಹಬ್ಬ ಹೊಸವರ್ಷದ ಆಗಮನದ ಸಂಕೇತ.  ಅಸಂಖ್ಯಾತ ದೇವರು ದೇವತೆಗಳನ್ನೊಳಗೊಂಡ ನಮ್ಮ ಹಿಂದೂ ಧರ್ಮದಲ್ಲಿರುವ ಯಾವುದೇ ಒಂದು ದೇವರನ್ನು ಪ್ರಧಾನವಾಗಿ ಆರಾಧಿಸದೆ ಚೈತ್ರಋತುವನ್ನು ಹರ್ಷದಿಂದ ಆಗಮಿಸಿ ‘ಪ್ರಕೃತಿಯ ಪೂಜೆ’ ಮಾಡುವುದು ಈ ಹಬ್ಬದ ವಿಶೇಷ. ಇದು ಒಂದು ಆರೋಗ್ಯಕರ ಹಾಗು ಸೆಕ್ಕ್ಯುಲರ್ ಹಬ್ಬವೆಂದು ಪರಿಗಣಿಸಬಹುದು. ಹಾಗೆ ನಮ್ಮ ದಿನನಿತ್ಯ ಬದುಕಿನ ಕಷ್ಟ ಸುಖಗಳ ಪ್ರತೀಕವಾದ ಬೇವು ಬೆಲ್ಲವನ್ನು ಸವಿದು ಹಬ್ಬ ಆಚರಿಸುವುದು ಬಹಳ ಅರ್ಥಪೂರ್ಣವಾಗಿದೆ. ಈ ಹಬ್ಬದ ಚೈತನ್ಯ ಮನೆಯೊಳಕ್ಕೆ ಸೀಮಿತವಾಗದೆ ಮನೆ ಹೊರಗೆ ಹಸಿರು ತೋರಣ ಕಟ್ಟುವುದು ರಂಗು ರಂಗಿನ ರಂಗೋಲಿ ಹಾಕುವುದನ್ನು ಒಳಗೊಂಡಿದೆ. ಎಣ್ಣೆ ಸ್ನಾನ ಮಾಡಿ ಹೋಳಿಗೆ ಊಟಮಾಡಿ ಒಬ್ಬರಿಗಿನ್ನೊಬ್ಬರು  ಉಡುಗರೆ ಕೊಡುವುದು ಹೀಗೆ ಅನೇಕಾನೇಕ ಸಂಭ್ರಮಗಳು ಸೇರಿಕೊಂಡಿವೆ.

ಚೈತ್ರಮಾಸದಲ್ಲಿ ಮಬ್ಬು ಸರಿದು, ಪ್ರಕೃತಿಯಲ್ಲಿನ ಜಡತೆ ಕಳೆದು ಎಲ್ಲೆಲ್ಲೂ ಹಸಿರು ಚಿಗುರಿ, ಹೂವು ಅರಳಿ ಹೊಸ ಭರವಸೆಯನ್ನು ಮೂಡಿಸುವ ಸಂಕೇತ ಯುಗಾದಿ ಹಬ್ಬ. ಈ ಹಬ್ಬದ ಒಂದು ಚೈತನ್ಯವನ್ನು ಜಿ.ಎಸ್.ಎಸ್ ಅವರ ‘ಯುಗಾದಿಯ ಹಾಡು’ ಎಂಬ ಕವನದಲ್ಲಿ ಕಾಣಬಹುದು. ಆಯ್ದ ಕೆಲವು ಸಾಲುಗಳು ಹೀಗಿವೆ:

ಹಳೆ ನೆನಪುಗಳುದುರಲಿ ಬಿಡು ಬೀಸುವ ಛಳಿ ಗಾಳಿಗೆ

ತರಗೆಲೆಗಳ ಚಿತೆಯುರಿಯಲಿ ಚೈತ್ರೋದಯ ಜ್ವಾಲೆಗೆ

ಹೊಸ ಭರವಸೆಗಳು ಚಿಗುರುತಲಿವೆ ಎಲೆಉದುರಿದ ಕೊಂಬೆಗೆ

ಅರಳಿನಗುವ ಹೊಗಳಲ್ಲಿ ಪುಟಿಯುತಲಿವೆ ನಂಬಿಕೆ

ಈ ಯುಗಾದಿ ವಿಶೇಷ ಸಂಚಿಕೆಯಲ್ಲಿ ನನ್ನ ಒಂದು ಕವನ, ರಾಮ್ ಶರಣ್ ಅವರು ರಂಗೋಲಿ ಹಾಗೆ ದಾಕ್ಷಾಯಿಣಿ ಅವರು ಒಬ್ಬಟ್ಟಿನ ಮೇಲೆ ಬರೆದ ಕಿರು ಲೇಖನಗಳನ್ನು ಪ್ರಕಟಿಸುತ್ತಿದ್ದೇವೆ. ನಿಮಗೆಲ್ಲ ಯುಗಾದಿಯ ಶುಭಾಶಯಗಳು. ಸಂ

***

ರಂಗೋಲಿ  ರಾಮ್ ಶರಣ್ ಅವರ ಕಿರು ಲೇಖನ 

ಚುಕ್ಕೆ ಚುಕ್ಕೆ ಚಿತ್ತಾರ
ಹೊಸಲೆದುರಿನ ಮಂದಾರ
ಕೊನೆ ಮೊದಲಿಲ್ಲದ ಬಳ್ಳಿ
ಸುತ್ತಿ ಬಿಡಿಸಿದೆವಂದು  ಅಂಗಳದಲ್ಲಿ
ರಂಗವಲ್ಲಿ

ಹಬ್ಬವೆಂದರೆ ಸಡಗರ. ನಸುಕಲ್ಲೆದ್ದು, ಅಂಗಳ ಗುಡಿಸಿ, ಜಳಕ ಮುಗಿಸಿ, ಹೊಸಲು ತೊಳೆದು ಎರೆಯುವ ರಂಗೋಲಿ ಭಾರತೀಯರ ಜನ ಜೀವನದಲ್ಲಿ, ಮಾಡುವ ಶ್ವಾಸೋಚ್ಛಾಸದಷ್ಟೇ ಹಾಸು ಹೊಕ್ಕಾಗಿದೆ. ಇಂದು ನಮಗೆ ರಂಗೋಲಿ ಬಾಲ್ಯದ ಸವಿ ನೆನಪನ್ನು ಮರುಕಳಿಸುವ ಸಾಧನ. ಪ್ರತೀ ವಾರ ಪತ್ರಿಕೆಗಳಲ್ಲಿ ಬರುವ ಚುಕ್ಕೆಯ ಚಿತ್ತಾರಗಳನ್ನು ನೋಟ್ ಪುಸ್ತಕಗಳಲ್ಲಿ ನಕಲು ಮಾಡಿ, ಹಬ್ಬ-ಹರಿದಿನಗಳಂದು ಅಂಗಳದಲ್ಲಿಯೋ, ದೇವರ ಕೋಣೆಯ ಎದುರೋ ಬಿಡಿಸಿ, ಬಣ್ಣ ತುಂಬಿ ಖುಷಿ ಪಟ್ಟಿದ್ದನ್ನು ನೆನೆಸಿದರೆ ಮೈ ಇಂದಿಗೂ ನವಿರೇಳುತ್ತದೆ. ಕೆಲವೇ ಚುಕ್ಕೆಗಳನ್ನಿಟ್ಟು, ಚುಕ್ಕೆಗಳ ಸುತ್ತ ಲೀಲಾಜಾಲವಾಗಿ ರೇಖೆಗಳನ್ನು ಸುತ್ತಿ ಸರಳ ಮಾದರಿಯ ರಂಗೋಲಿ ಬಿಡಿಸುತ್ತಿದ್ದ ಅಜ್ಜಿಯ ಕೈ ಮಂತ್ರ ದಂಡವೋ ಎಂದು ಬೆಕ್ಕಸ ಬೆರಗಾಗುತ್ತಿದ್ದೆ! ಅವಳ ರಂಗೋಲಿಗೆ ಬೇಕಿದ್ದಿದ್ದು ಸೀಮೆಸುಣ್ಣ ಹಾಗು ಒಂದು ತುಂಡು ಜಾಗ ಅಷ್ಟೇ. ಈ ಮಾದರಿಯ ಕಲೆ ನೋಡಿ ಬೆಳೆದ ನನಗೆ ಇಂದಿಗೂ ಚುಕ್ಕೆ ಚಿತ್ತಾರದ ರಂಗೋಲಿಯನ್ನು ಮೀರಿಸಿದ ರಂಗೋಲಿಯೇ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ.

 

 

(ಓಣಂ ವೈಶಿಷ್ಟ್ಯ ಪೂಕಳಂ)

ಭಾರತೀಯ ಚಿತ್ರಕಲೆಯ ಇತಿಹಾಸದ ಗ್ರಂಥ, ರಂಗೋಲಿಯ ಮೂಲವನ್ನು  ಪುರಾಣ ಕಾಲಕ್ಕೆ ಎಳೆಯುತ್ತದೆ. ಒಂದಾನೊಂದು ಕಾಲದಲ್ಲಿ ರಾಜ ಪುರೋಹಿತನೊಬ್ಬನ ಪುತ್ರಶೋಕವನ್ನು ನಿವಾರಿಸಲು ಬ್ರಹ್ಮ ಆ ಮಗುವಿನ ಚಿತ್ರ ಬರೆಯಲು ಹೇಳುತ್ತಾನೆ. ಆ ಯಥಾವತ್ತಾದ ಚಿತ್ರಕ್ಕೆ ಪುನಶ್ಚೇತನ ಕೊಟ್ಟಿದ್ದೇ  ರಂಗೋಲಿ ಹುಟ್ಟಿಗೆ ಕಾರಣವಾಯಿತಂತೆ. ಇದು ಅಂತೆ-ಕಂತೆಯಾದರೂ, ರಾಮಾಯಣ – ಮಹಾಭಾರತದ ಕಥೆಗಳಲ್ಲಿ ರಂಗೋಲಿಯ ವರ್ಣನೆ ಇದೆ. ರಂಗೋಲಿ – ರಂಗವಲ್ಲಿ ಕನ್ನಡದಲ್ಲಾದರೆ, ರಾಂಗೋಳಿ ಎಂದು ಮರಾಠಿ, ಅಲ್ಪನ ಎಂದು ಬಂಗಾಳದಲ್ಲಿ, ಚೌಕ್ ಪುರ್ ಎಂದು ಛತ್ತೀಸಘಡ್, ಚೌಕ್ ಪೂಜನ್ ಎಂದು ಯು.ಪಿ, ಮುಗ್ಗು ಎಂದು ಆಂಧ್ರದಲ್ಲಿ ಹೆಸರಾಗಿದೆ. ಹೆಸರಿನಲ್ಲಿ ಬಹುರೂಪಿಯಾದಂತೇ, ರಂಗೋಲಿ ಪುರಾತನ ಜಾನಪದ ಕಲೆಯಾಗಿ ನಿಂತ ನೀರಾಗದೆ,  ಚುಕ್ಕೆಯಾಚಿನ ಆಯಾಮವನ್ನಾವರಿಸಿ ತರಹೇವಾರಿ ರೂಪದಗಳಲ್ಲಿ ಬೆಳೆದಿದೆ. ಬಣ್ಣದ ಪುಡಿಯಲ್ಲಿ, ಧಾನ್ಯಗಳಲ್ಲಿ, ಹೂವಿನಲ್ಲಿ, ಹಣ್ಣಿನಲ್ಲಿ, ನೀರಿನಲ್ಲಿ ಹೀಗೆ ವಿವಿಧ  ಮಾಧ್ಯಮಗಳಲ್ಲಿ ಕಣ್ತಣಿಸುತ್ತಿದೆ.
***

ಉಗಾದಿಯ ಸಿಹಿ – ಶ್ರೀಮತಿ ದಾಕ್ಷಾಯಿಣಿ ಅವರ ಲೇಖನ. ಚಿತ್ರ ಗೂಗಲ್ ಕೃಪೆ

ಹಬ್ಬ, ಹಬ್ಬಕ್ಕೂ ಹೋಳಿಗೆ ಮಾಡಲಾಗದಿದ್ದರೂ, ಯುಗಾದಿಯ ಹಬ್ಬಕ್ಕೆ ಮಾತ್ರ ಎಲ್ಲರ ಮನೆಯಲ್ಲಿ ಹಬ್ಬದೂಟಕ್ಕೆ ಹೋಳಿಗೆಯೆ ಆಗಬೇಕು. ಬಡವ, ಶ್ರೀಮ೦ತರೆನ್ನುವ ಭೇಧವಿಲ್ಲದೆ, ಹೋಳಿಗೆ ಅ೦ದು ಎಲ್ಲರ ಅಡಿಗೆಮನೆಯಲ್ಲಿ ಅವತರಿಸುತ್ತದೆ . ಅದರಲ್ಲೂ ಬೆಲ್ಲ, ಬೇಳೆಯ ಹೋಳಿಗೆಯೇ ಆಗಬೇಕು. ಅಮ್ಮ ಬೇಗನೆದ್ದು, ಸ್ನಾನ ಮಾಡಿ ಶುರುಮಾಡುವ ಮೊದಲ ಕೆಲಸವೆ೦ದರೆ ಬೇಳೆ ಬೇಯಿಸಲು ಇಡುವುದು. ಚಿಕ್ಕವರಿದ್ದಾಗ ನಮಗೆ ಸಣ್ಣ ಉ೦ಡೆ ಬೆಲ್ಲವನ್ನು ಕುಟ್ಟಿ ಪುಡಿ ಮಾಡುವ ಕೆಲಸ ಸಿಗುತ್ತಿತ್ತು. ಬಾಯಿ ಸಿಹಿ ಮಾಡಿಕೊ೦ಡು, ಕೈಕೆಲಸ ಮಾಡುತ್ತಾ ಇದ್ದುದು ನೆನಪಿಗೆ ಬರುತ್ತದೆ. ಮಕ್ಕಳು ಏಳುವ ವೇಳೆಗಾಗಲೆ ಯುಗಾದಿಯ ದಿನ ಮನೆ ತು೦ಬಾ ಹೊರಣದ ವಾಸನೆ. ದೇವರ ಪ್ರಸಾದಕ್ಕೆ೦ದು ಸ್ವಲ್ಪ ತೆಗೆದಿಟ್ಟ ನ೦ತರ, ಕಾಯಲು ತಯಾರಿಲ್ಲದ ಮಕ್ಕಳಿಗೆ ಹೊರಣದ ಉ೦ಡೆಗಳು, ಬೇಳೆಬೆಲ್ಲ ತಿನ್ನಲು ಸಿಗುತ್ತಿತ್ತು.

ಹೋಳಿಗೆ ಒ೦ದೇ ಆದರೂ ತಿನ್ನುವ ಪರಿ ಬೇರೆ, ಬೇರೆ. ಕೆಲವರು ತುಪ್ಪ, ಪುಟ್ಟಬಾಳೆಯ ಜೊತೆ ತಿ೦ದರೆ, ತೆ೦ಗಿನ ನಾಡಿನವರಿಗೆ ಹಸಿಕಾಯಿ ರುಬ್ಬಿ ತೆಗೆದ ರಸದ ಜೊತೆ ತಿ೦ದು ಅಭ್ಯಾಸ. ದಾವಣಗೆರೆಯ ಜನರಿಗೆ ಮಾವಿನಹಣ್ಣಿನ ಸೀಕರಣೆ ಜೊತೆಗಿರಲೇ ಬೇಕು.

ಹೋಳಿಗೆ ಒ೦ದು ರೀತಿಯಲ್ಲಿ ” ಮುಖ್ಯ ಅಥಿತಿ” ಯ ತರಹ. ಜೊತೆಗೆ ಪಲ್ಯ, ಕೋಸ೦ಬರಿ, ಚಿತ್ರಾನ್ನ, ಅನ್ನಸಾರು, ಹಪ್ಪಳ ಇನ್ನೂ ಮು೦ತಾದ ಅಡಿಗೆಯ ಮಧ್ಯೆ ಎಲೆಯ ಮೇಲೆ ಅದಕ್ಕೆ ಮುಖ್ಯ ಸ್ಥಾನ. ಕೆಲವರಿಗೆ ಹೋಳಿಗೆಗಿ೦ತ, ಹೋಳಿಗೆ ಸಾರಿನ ಮೇಲೆ ಅತಿ ಪ್ರೀತಿ. ಕುದಿಸಿದ ಸಾರನ್ನು ೩-೪ ದಿನ ಒ೦ದೇ ಸಮನೆ ಆಸ್ವಾದಿಸುತ್ತಾರೆ. ಹೋಳಿಗೆಯ ಊಟವಿಲ್ಲದೆ ಉಗಾದಿಯಿಲ್ಲ.

ಈಗೆಲ್ಲ, ಅ೦ಗಡಿಗಳಲ್ಲಿ, ಹೋಟೆಲ್ ಗಳಲ್ಲಿ ವಿವಿಧ ಬಗೆಯ ಹೋಳಿಗೆ ಸಿಗುತ್ತಿದೆ. ಬೆಲ್ಲದ, ಸಕ್ಕರೆಯ, ಕೊಬ್ಬರಿಯ, ಎಳ್ಳಿನ, ಕಡಲೆಬೀಜದ, ಖರ್ಜೂರದ ಇನ್ನೂ ಮು೦ತಾದ ಬಗೆಬಗೆಯ ಹೋಳಿಗೆ ಲಭ್ಯ. ನಗರಗಳಲ್ಲಿ ಬಹಳ ಮನೆಗಳಲ್ಲಿ ಹೋಳಿಗೆ ಮಾಡುವ ತೊ೦ದರೆ ಈಗ ತೆಗೆದುಕೊಳ್ಳುವುದಿಲ್ಲ. ಬೆ೦ಗಳೂರಿನ ನನ್ನ ಸ್ನೇಹಿತೆ ಪೊರ್ತಿ ಹಬ್ಬದ ಅಡಿಗೆಯನ್ನೆ, ಮತ್ತೊಬ್ಬರ ಮನೆಯಿ೦ದ ಖರೀದಿಸಿ ನಮಗೆ ಉಣಬಡಿಸಿದ್ದಳು, ಬಹಳ ಚೆನ್ನಾಗಿಯೆ ಇತ್ತು. ಕಾಲಕ್ಕೆ ತಕ್ಕ೦ತೆ ಬದಲಾಗುವುದು ಜೀವನದಲ್ಲಿ ಅವಶ್ಯಕ ಮತ್ತು ಜಾಣತನ.

ಬೆಳಿಗ್ಗೆ ಎದ್ದಾಗ, ಮನೆ ತು೦ಬಿದ ಬೆಲ್ಲದ ವಾಸನೆ, ರೆಡಿಯೋದಲ್ಲಿ ” ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಎನ್ನುವ ಇ೦ಪಾದ ಗಾನ, ಪೊಜೆ ಮುಗಿಯಲು ಕಾಯ್ವ ಹಸಿದ ಹೊಟ್ಟೆಯ ಸಿಟ್ಟು, ಇದೆಲ್ಲ ನನ್ನ ಬಾಲ್ಯದ ಯುಗಾದಿಯ ನೆನಪು. ನಮ್ಮ ಚಿ೦ತೆಗಳು, ನೆನಪುಗಳು ಎನೇ ಇರಲಿ, ನಾವು ಎಲ್ಲೇ ಇರಲಿ, ಪ್ರತಿವರ್ಷ ಯುಗಾದಿ ಮರಳಿ, ಮರಳಿ ನಮ್ಮ ಜೀವನದಲ್ಲಿ ಹೆಜ್ಜೆಇಡುತ್ತದೆ, ಬನ್ನಿ ಹೊಸ ನೆನಪುಗಳನ್ನು ರಚಿಸೋಣ, ಹಬ್ಬದ ಸಿಹಿ ಸವಿಯೋಣ. ಯುಗಾದಿಯ ಶುಭಾಶಯಗಳು ನಿಮ್ಮೆಲ್ಲರಿಗೆ.

***

ಇಂಗ್ಲೆಂಡಿನಲ್ಲಿ ಯುಗಾದಿ – ಜಿ. ಎಸ್. ಶಿವಪ್ರಸಾದ್ ಅವರ ಕವನ

 

ಬೇವು ಬೆಲ್ಲಗಳಿಲ್ಲದ ನಾಡಲ್ಲಿ

ಬಿಟ್ಟರ್ ಬೀರ್ ಹೀರಿ,

ಚಾಕ್ಲೇಟ್ ಸಿಹಿಯನು ಸವಿದು

ಸಿಹಿ ಕಹಿಯನುಂಡು,

ನಾವೂ ಆಚರಿಸಿದೆವು ಯುಗಾದಿ

 

ಝಗ್ಗನೆ ಮೂಡುವ ಚೆರ್ರಿ ಹೂಗಳಲಿ

ಡ್ಯಾಫೋ ಡಿಲ್ಸ್ ನಯವಾಗಿ ನರ್ತಿಸುವಲ್ಲಿ

ಚೈತ್ರದ ಚಿಗುರು ಮೂಡುವಲ್ಲಿ ,

ನಾವೂ ಆಚರಿಸಿದೆವು ಯುಗಾದಿ

 

ಪೂಜೆ ಪುನಸ್ಕಾರಗಳು ಬೇಕಿಲ್ಲ

ಕಾಲ,ವಿಧಿ, ನಿಯಮಗಳಿಲ್ಲ

ಪ್ರಕೃತಿಯ ಈ ಉತ್ಸವವೇ

ನಮಗೆ ಯುಗಾದಿ

 

ಯುಗಾದಿ ವೇಳೆಯಲಿ

ಸ್ನೇಹಗಳು ಬೆಸೆಯುವಲ್ಲಿ

ವಾರಾಂತ್ಯದಲಿ  ಒಂದಾಗಿ

ಹೋಳಿಗೆ ಚಿತ್ರಾನ್ನಗಳ ಉಂಡು….

 

‘ಹ್ಯಾಪಿ ಯುಗಾದಿ’ಯೆಂದು ಕೈಕುಲಕಿ

ಮನೆ ದಾರಿ ಹಿಡಿಯುವ ಅನಿವಾಸಿಗಳು

ನಾವೂ ಆಚರಿಸಿದೆವು ಯುಗಾದಿ

***

 

 

 

 

 

 

 

 

 

 

 

4 thoughts on “ಯುಗಾದಿ ವಿಶೇಷ ಸಂಚಿಕೆ

  1. ನಮ್ಮ ಸ೦ಪಾದಕರ ಕವನ ’ ಅನಿವಾಸಿ ಯುಗಾದಿ’ ಯ ಸ೦ಪೊರ್ಣ ಪರಿಚಯ ಮಾಡಿಕೊಡುತ್ತದೆ. ಬಾಲ್ಯದ ಪೂಜೆ, ರ೦ಗೋಲಿ, ಹೋಳಿಗೆಯ ನೆನಪನ್ನು ಕರೆತ೦ದು, ಸ್ನೇಹಿತರೊಡಗೋಡಿ ವಾರ೦ತ್ಯದಲ್ಲಿ ಆಚರಿಸುವ ನಮ್ಮ ಯುಗಾದಿಯೂ ಬಹಳ ಹರುಷದಾಯಕವೆ೦ದು ಹೇಳಬಹುದು. ಚೈತ್ರದ ಸ೦ಭ್ರಮ ಹೊರಗೆ ಕಾಣುವ ಹೊವಿನಲ್ಲಿ, ಬೆಳಕಿನಲ್ಲಿ ಮತ್ತು ಪಕ್ಷಿಗಾನದಲ್ಲಿ ತು೦ಬಿ ಬ೦ದು ನಮ್ಮನ್ನು ಪ್ರತಿ ವರುಷ ಈ ಹಬ್ಬಕ್ಕೆ ಕರೆಗೊಡುತ್ತದೆ.

    Like

  2. ರಾಂ ರಂಗೋಲಿ, ದಾಕ್ಷಾಯಿಣಿ ಹೋಳಿಗೆ, ಪ್ರಸಾದ ಕವನ – ಯುಗಾದಿಯ ಶುಭಾರಂಭ. ಎಲ್ಲರಿಗೂ ಯುಗಾದಿಯ ಶುಭಾಶಯಗಳು. – ಕೇಶವ

    Like

  3. ಮೊದಲು ನನ್ನ ಹೃದಯಕ್ಕೆ ಹತ್ತಿರವಾದ ಅನಿವಾಸಿ ಬಳಗಕ್ಕೆ ಹೊಸ ಸಂವತ್ಸರದ ,ಹೊಸ ಹೊನಲಿನ ಶುಭಾಶಯಗಳು.ಜೊತೆಗೇ ರಾಮನವಮಿಯ ಶುಭ ಹಾರೈಕೆಗಳು. ದೇಶ ಬಿಟ್ಟು ದೂರ ಇದ್ದರೂ ಬೀರ್ ಚಾಕಲೇಟ್ ಗಳಲ್ಲಿ ಬೇವು ಬೆಲ್ಲ ಕಂಡು ,ಸಾಂಪ್ರದಾಯಿಕ ಹಬ್ಬ ಆಚರಿಸಿದ ಬಗೆ ಮನಕ್ಕೆ ಮುದ ನೀಡಿತು.ರಾಮಶರಣರ ರಂಗೋಲಿ ಬಾಲ್ಯದ ನೆನಪಿನಲಿ ತೇಲಿಸಿದರೆ ,ದಾಕ್ಷಾಯಿಣಿಯವರ ಹೋಳಿಗೆ ಊಟ ಭರಪೂರ ಮಜಾ ತಂತು.” ಎಲ್ಲೇ ಇರಲಿ ಎಂತೇ ಇರಲಿ ನಾನು ಭಾರತೀಯ” ಅಂತ ವ್ಯವಸ್ಥಿತವಾಗಿ ಯುಗಾದಿ ಆಚರಿಸಿ ತಮ್ಮತನವನ್ನು ಮೆರೆದ ಅನಿವಾಸಿ ಬಳಗ ಯಾವಾಗಲೂ ಹೊಸ ಹೊನಲಿನಲ್ಲಿ ತೇಲುತಿರಲಿ ಎಂಬುದೇ ನನ್ನ ಹಾರೈಕೆ ,ಈ ಹೊಸ ವರ್ಷದ ಶುಭ ಸಂದರ್ಭದಲ್ಲಿ.
    ಸರೋಜಿನಿ ಪಡಸಲಗಿ

    Like

  4. ಊರನ್ನು ನೆನಪಿಸುವ, ಹಬ್ಬದ ವಾತಾವರಣವನ್ನು ಸೃಷ್ಟಿಸುವ ಲೇಖನ, ಕವಿತೆ, ಸೊಗಸಾಗಿವೆ. ರಂಗೋಲಿಯನ್ನು ಇಲ್ಲಿಂದಲೇ ಇಳಿಸಿಯಾಗಿದೆ. ಇಲ್ಲಿಯಂತೆ ಹ್ಯಾಪಿ ಯುಗಾದಿ’ಯೆಂದು ಕೈಕುಲಕುವೆ!
    ಶ್ರೀವತ್ಸ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.