ವೈರುಧ್ಯ – ಡಾ. ಸುದರ್ಶನ ಗುರುರಾಜರಾವ್ ಬರೆದ ಕವಿತೆ

ಹಿರಿಯ ಕವಿಗಳ ವಾಣಿಯಿಂದ ಎರವಲು ಪಡೆದ ಸಾಲುಗಳನ್ನು ಬಳಸಿ ಕನ್ನಡ ನಾಡಿನ ಜನಗಳ ವೈರುಧ್ಯಮಯ ಜೀವನವನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿದ್ದೇನೆ. ಕನ್ನಡ ಶಾಲೆಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಉಳಿಸುವ ಯಾವ ಪ್ರಯತ್ನವೂ ಸರ್ಕಾರದಿಂದಾಗಲೀ ಜನಗಳಿಂದಾಗಲೀ ಆಗುತ್ತಿಲ್ಲ ಎಂಬುದು ಕಳವಳಕಾರೀ ಸಂಗತಿ. ಭಾಷೆಯ ಅವನತಿಯೊಂದಿಗೆ ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಾಹಿತ್ಯ ಅಳಿಯುವುದಲ್ಲದೆ ಜನಪದ, ಅನುಭವ, ಜೀವನ ಮೌಲ್ಯಗಳು,ಜೀವನದಲ್ಲಿ ಬೇಕಾಗಬಹುದಾದ ಬುದ್ಧಿವಂತಿಕೆ,ಹಾಡುಗಳು,ಗಾದೆಗಳು ಎಲ್ಲವೂ ಅವನತಿ ಹೊಂದುವುದು ಅನಿವಾರ್ಯವಾಗುತ್ತದೆ. ದೂರದೃಷ್ಟಿಯಾಗಲೀ ಅಭಿಮಾನವಾಗಲೀ ಇರದ ಆಳುವವರು, ಸರಕಾರೀ ಶಾಲೆಗಳ ದುಸ್ಥಿತಿಯ ಲಾಭ ಪಡೆಯುವ ಖಾಸಗೀ ವಲಯ, ಬದ್ಧತೆ ಇಲ್ಲದ ಶಿಕ್ಷಕರು, ಮೌಲ್ಯ ವಿರದ ಪಠ್ಯಕ್ರಮ, ಇವೆಲ್ಲದರ ನಡುವೆ ಕಳೆದುಹೋದ, ಮತಿಭ್ರಮಣೆಗೊಳಗಾದ ಪೋಷಕರು, ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದಂತಾಗಿರುವ ಮಕ್ಕಳು ಎಲ್ಲರಿಂದ ಕನ್ನಡ ಇಂದು ನಲುಗಿ ಹೋಗುತ್ತಿದೆ. ದೂರದೇಷದಲ್ಲಿರುವ ನಾವು ಕವಿತೆ ಬರೆಯುವುದರ ಹೊರತು ಏನು ಮಾಡಬಹುದು ಎಂಬುದು ನನ್ನನ್ನು ಕಾಡುತ್ತಿರುವ ಪ್ರಶ್ನೆ.

ಕನ್ನಡ ದಿಂಡಿಮ ಬಾರಿಸು ಎನ್ನುವ
ಕವಿ ವಾಣಿಯ ಕರೆ ಕೇಳಿದರು
ತಮಟೆಗೆ ಕಂಗ್ಲೀಷ್ ಕೋಲಲಿ ಬಡಿದು
ಚಮರ ಗೀತೆಯನು ನುಡಿಸಿದರು

ಕನ್ನಡ ಭಾಷೆಗೆ ಹೋರಾಡೆನ್ನುತ
ಜೋಗುಳ ಹಾಡಿದ ತಾಯಿಯರು
ಮುದದಲಿ ತಮ್ಮಯ ಮಕ್ಕಳ ಇಂಗ್ಲಿಷ್
ಶಾಲೆಗೆ ಓದಲು ಕಳಿಸಿದರು

ಇಂಗ್ಲಿಷ್ ಶಾಲೆಯ ಕಂಗ್ಲಿಷ ಕಲಿತ
ಮುಂದಿನ ಪೀಳಿಗೆ ತಾಯಿಯರು
ಜೋಗುಳ ಹಾಡನು ಹಾಡದೆ ತಮ್ಮಯ
ಮಕ್ಕಳ ಪೀಳಿಗೆ ಬೆಳೆಸಿದರು

ಜೋಗುಳ ಕೇಳದ ಮಕ್ಕಳು ಕನ್ನಡ
ಮಾತನೆ ಆಡದೆ ಬೆಳೆದಿರಲು
ಮನದಲು -ಮನೆಯಲು ಕನ್ನಡ ಭಾಷೆಯ
ಕುರುಹಗಳೆಲ್ಲವು ಅಳಿದಿರಲು

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕನ್ನಡಕಲಿಯದ ಇಂದಿನ ಪೀಳಿಗೆ
ಕನ್ನಡ ಎನೆ ಮೂಗ್ ಮುರಿಯುವುದು

ಕನ್ನಡ ಗೋವಿನ ಮುದ್ದಿನ ಕರುಗಳು
ಕನ್ನಡದಕ್ಷರ ಕಲಿಯಲೆ ಇಲ್ಲ
ಕನ್ನಡ ಗೋವಿನ ಹಾಲನು ಕುಡಿದು
ಕಂಗ್ಲೀಷ್ ಒದರುತಲಿಹರಲ್ಲ

ಕನ್ನಡದಲ್ಲಿಯೆ ಬಿನ್ನಹ ಗೈಯುತ
ಹರನನು ವರಗಳ ಕೇಳಿಲ್ಲ
ಕಂಗ್ಲೀಷ್ ಇಂಗ್ಲೀಷ್ ಎನ್ನುತ
ಎಲ್ಲೆಡೆ ಭಿಕ್ಷೆಯ ಬೇಡುತಲಿಹೆವಲ್ಲ

ಎಂದೆಂದಿಗು ನೀ ಕನ್ನಡವಾಗಿರು
ಎನ್ನುವ ಸತ್ಯದ ಅರಿವಿಲ್ಲ
ಕನ್ನಡ ಪದಸಿರಿ ಬಳಸದೆ ನಿತ್ಯವು
ಕನ್ನಡ ಕೊಲ್ಲುತಲಿಹೆವಲ್ಲ

ಕನ್ನಡಕಾಗಿ ಕೈಯೆತ್ತುತ ದಿನ
ಕಲ್ಪವೃಕ್ಷವ ಬೆಳೆಸಿಲ್ಲ
ಕಂಗ್ಲೀಷ್ ಕೊಡಲಿಯ ಏಟನು
ಹಾಕುತ ವೃಕ್ಷವ ಉರುಳಿಸುತಿಹೆವಲ್ಲ

ಕನ್ನಡದೊಳಗಿಹ ಕಂಪನು ಅರಿಯದೆ
ಬೇರೆಡೆ ಹುಡುಕುತಲಿಹೆವಲ್ಲ
ಸಂಸ್ಕೃತಿಯರಿಯದೆ ಕೀಳರಿಮೆಯಲಿ
ಮಿಡುಕುತ ನೋಡುತಲಿಹೆವಲ್ಲ

ರಾಮಾಯಣದ ರಾಮನ ನೀತಿಯ
ಗಾಳಿಗೆ ತೂರಿದ ಜನರಂತೆ
ಋಷಿ ವಾಲ್ಮೀಕಿಯ ಹೆಸರಲಿ ನಿರತ
ಬೇಳೆಯ ಬೇಯಿಸಿಕೊಳುವಂತೆ

ತಾಯ್ನುಡಿಗಾಗಿ ನುಡಿಯೊಳಗಾಗಿ
ನೆಡೆಯದೆ ಇಂದಿನ ಜನಪದವು
ವೈರುಧ್ಯವೆ ಮೈವೆತ್ತಿದ ತೆರದಲಿ
ಬಾಳುತಲಿಹೆವು ಅನುದಿನವು

3 thoughts on “ವೈರುಧ್ಯ – ಡಾ. ಸುದರ್ಶನ ಗುರುರಾಜರಾವ್ ಬರೆದ ಕವಿತೆ

  1. ಸುದರ್ಶನ್ ಅವರ ಕನ್ನಡ ಭಾಷೆಯ ಕಳಕಳಿ ಅವರ ಕವನದಲ್ಲಿ ಸೊಗಸಾಗಿ ವ್ಯಕ್ತವಾಗಿದೆ. ಕನ್ನಡಿಗರು ಇಂದು ಬಹಳ ಎಚ್ಚರಿಕೆಯಿಂದ ಈ ಸವಾಲನ್ನು ಸ್ವೀಕರಿಸಿ ನಮ್ಮ ಭಾಷೆಯ ಉಳಿವಿಗಾಗಿ ಹೋರಾಡಬೇಕಾಗಿದೆ. ಕನ್ನಡ ನಾಡ ಜನ, ನಮ್ಮ ಸಾಹಿತ್ಯಲೋಕದ ಹಲವಾರು ಪ್ರಸಿದ್ಧರು ಆಂಗ್ಲಭಾಷೆಯಲ್ಲಿ ಪ್ರವೀಣರಾಗಿದ್ದವರೆಂದು ನೆನೆಸಿಕೊಳ್ಳಬೇಕು. ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿದ್ದರೂ, ಕನ್ನಡವನ್ನು ಕೈಬಿಡಬೇಕಾಗಿಲ್ಲ. ಕನ್ನಡವನ್ನೂ ಅಷ್ಟೇ ಉತ್ತಮ ಮಟ್ಟದಲ್ಲಿ ಕಲಿತರೆ ನಷ್ಟವೇನು? ಹಲವಾರು ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದ ವ್ಯಕ್ತಿಗೆ ಜೀವನದಲ್ಲಿ ಹೆಚ್ಚಿನ ಯಶಸ್ಸು ದೊರೆಯುವ ಸಂಗತಿ ನಿಜ ಎಂದು ಸಾಬೀತಾಗಿದೆ. ಕನ್ನಡದಷ್ಟು ಶ್ರೀಮಂತ ಭಾಷೆಯ ಪರಂಪರೆ ಇರುವ ನಮ್ಮ ಜನ ಅದನ್ನು ಕಡೆಗಣಿಸುವುದು ನಿಜಕ್ಕೂ ದುರಂತವೇ ಸರಿ! ನಮ್ಮ ಪರಂಪರೆಯನ್ನು ನಾವೇ ಕಾಪಾಡದಿದ್ದರೇ ಅದರ ಗತಿ, ಸುದರ್ಶನರ ಕವನದ ಸಾಲುಗಳಲ್ಲಿರುವಂತೆ ಕನ್ನಡ ಕಲ್ಪವೃಕ್ಷ ಬುಡ ಸಮೇತ ಉರುಳುವುದರಲ್ಲಿ ಸಂದೇಹವಿಲ್ಲ.
    ಉಮಾ ವೆಂಕಟೇಶ್

    Like

  2. ಶ್ರೀಯುತ ಸುದರ್ಶನ ಅವರೇ ,
    ಕನ್ನಡದ ಬಗೆಗಿನ ನಿಮ್ಮ ಕಳಕಳಿ ಆಪ್ಯಾಯಮಾನವಾಗಿದೆ. ನಮ್ಮ ನೆಲದಲ್ಲಿಯೇ ನಮ್ಮ ಉಳಿವಿಗಾಗಿ ಹೋರಾಟ ದೊಡ್ಡ ಮಾತಾಯ್ತು, ಭಿಕ್ಷೆ ಬೇಡುವ ಪ್ರಸಂಗ. ಪರಿಸ್ಥಿತಿ ಇಷ್ಟು ಶೋಚನೀಯವಾಗಿದೆಯಲ್ಲ, ಕನ್ನಡ ಮಾತನಾಡುವವರು ಹಿಂದುಳಿದವರು, ಯಾತಕ್ಕೂ ಉಪಯೋಗ ಇಲ್ಲದವರು ಎಂಬ ಭಾವ. ಈಗ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಕನ್ನಡ ಮಾತನಾಡುವ ಮಕ್ಕಳು ದಂಡ ತೆರಬೇಕು ಪೋಷಕರು ಒಂದು ಥರ ದ್ವಂದ್ವದಲ್ಲಿ.ಮಕ್ಕಳ ಜೊತೆ ಮನೆಯಲ್ಲಿಯೂ ಇಂಗ್ಲೀಷ್ ಮಾತನಾಡುತ್ತಾರೆ. ನನ್ನ ಮೊಮ್ಮಗು, ಒಂದನೇ ಕ್ಲಾಸ್ನಲ್ಲೋದುವ ಮಗು ನನ್ನ ಕೇಳ್ತದೆ-ಅಜ್ಜಿ ನಿನ್ನ ಜೊತೆ ಕನ್ನಡ ಮಾತನಾಡಬಹುದಾ ಅಂತ. ಪರಿಸ್ಥಿತಿಯ ಅರಿವಾಗಿ ಒಂದು ಗಳಿಗೆ ಮೌನವಾದೆ. ಇಂಗ್ಲೀಷ್ ಹೊರ ಜಗತ್ತಿನ ಸಂಪರ್ಕಕ್ಕೆ ಅನಿವಾರ್ಯ ನಿಜ. ಆದರೆ ನಮ್ಮ ಭಾಷೆಯ ಕೊಲೆ ಮಾಡಿ ಅಲ್ಲ ಅಂತ ಜನತೆ, ಸರ್ಕಾರ ಅರಿಯಬೇಕು. ನಮ್ಮಲ್ಲಿಯೇ ಜಾಗೃತಿ ಉಂಟಾಗಬೇಕು. ಇಂಥ ಕವನಗಳು, ಲೇಖನಗಳು ಸ್ವಲ್ಪ ಮಟ್ಟಿಗಾದರೂ ಕೆಲಸ ಮಾಡೀತಾ ಆ ನಿಟ್ಟಿನಲ್ಲಿ ಅಂತ ಒಂದಾಸೆ ಸುದರ್ಶನ ಅವರೇ ಅಭಿನಂದನೆಗಳು. ಇಂಥ ಬರಹಗಳು ಇನ್ನಷ್ಟು ಬರಲಿ ಅಂತ ಹಾರೈಕೆ.
    ಸರೋಜಿನಿ ಪಡಸಲಗಿ

    Like

  3. ಮಾನ್ಯ ಸುದರ್ಶನ್ ಅವರೆ
    ನಿಮ್ಮ ವೈರುಧ್ಯ ಕವನದಲ್ಲಿ ಕನ್ನಡ ಭಾಷೆಯ ಬಗ್ಗೆ ತಮಗಿರುವ ಕಾಳಜಿ, ಅಭಿಮಾನ ಚೆನ್ನಾಗಿ ಮೂಡಿಬಂದಿದೆ. ಹಿರಿಯ ಕವಿಗಳ ಸ್ಫೂರ್ತಿ ದಾಯಕ ಸಾಲುಗಳನ್ನು ಬಳೆಸಿಕೊಂಡು ಅದಕ್ಕೆ ಭಾವನೆಗಳನ್ನು ತುಂಬಿ ನಿಮ್ಮ ಆತಂಕವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೀರಿ. ಈ ಹಿಂದೆ ಉಮಾ ಅವರ ‘ಒಂದು ಭಾಷೆಯ ಅವನತಿ ಒಂದು ಸಂಸ್ಕೃತಿಯ ಅವನತಿಯೇ ’ ಎಂಬ ಲೇಖನವನ್ನು ನೆನಪಿಗೆ ತರುವಂತಿದೆ. ಕನ್ನಡ ಭಾಷೆಯ ಉಳಿವಿಗೆ ಇಂತಹ ಕವನಗಳು ಬೆಂಬಲವಾಗಲಿ ಎಂದು ಪ್ರಾರ್ಥಿಸುತ್ತೇನೆ.

    Like

Leave a comment

This site uses Akismet to reduce spam. Learn how your comment data is processed.