ಜೇಡರ ಬಲೆ

“ಹೆಲೊ ನಾನು ಡಾ. ರಾವ್ , ಬ್ರಿಟನ್ನಿನಿಂದ  ಮಾತಾಡುತ್ತಿದ್ದೇನೆ, ಡಾ.ಸೂರ್ಯಕಾಂತ್ ಇದ್ದಾರಾ? ಅವರೊಡನೆ ಮಾತಾಡಬೇಕು,” ಇನ್ನೂ ನಿರ್ಮಾಣದ ಹಂತದಲ್ಲಿದ್ದ ನಮ್ಮ ಆಸ್ಪತ್ರೆಯ ಆಗು ಹೋಗು ನೋಡಿಕೊಳ್ಳುತ್ತಿದ್ದ ಸೆಕ್ರೆಟರಿಗೆ ಕರೆ ಮಾಡಿ ಕೇಳಿದೆ.

“ಇಲ್ಲ ಸರ್. ಅವರು ಮೂರು ದಿನಗಳ ಕೆಳಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಟು ಹೋಗಿದ್ದಾರೆ. ಇಲ್ಲಿ ನಿಮಗಿನ್ನು ಅವರು ಸಿಗುವುದಿಲ್ಲ , ಕ್ಷಮಿಸಿ,”  ಎಂದಳು.

ನನಗೆ ದಿಗ್ಭ್ರಮೆಯಾಯ್ತು. ಡಾ. ಸೂರ್ಯಕಾಂತ್ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ . ನಮ್ಮ ಆಸ್ಪತ್ರೆಯಲ್ಲಿ ಮುಂದೆ ಅದರ ಮುಖ್ಯಸ್ತರಾಗಬೇಕಾಗಿದ್ದವರು. ಉತ್ತಮ ಹಿನ್ನೆಲೆ ಹಾಗೂ ಸ್ಥಿತಿವಂತ ಕುಟುಂಬದಿಂದ ಬಂದವರು. ಹೃದಯ ಶಸ್ತ್ರಚಿಕಿತ್ಸಕರು. ಸಾಮಾನ್ಯರು ಪ್ರತಿಷ್ಠೆ ತೊರಿಸುವುದು ಜಾಸ್ತಿ, ಆದರೆ ಸೂರ್ಯಕಾಂತ್ ಹಾಗಿರಲಿಲ್ಲ. ಮೃದು ಹಾಗು ಮಿತ ಭಾಷಿ. ಹಮ್ಮು ಬಿಮ್ಮು ಶ್ರೀಮಂತಿಕೆ ಯಾವುದೂ ತೋರಿಸಿದವರಲ್ಲ. ನನಗಿಂತ ಕೆಲವು ವರ್ಷ ದೊಡ್ಡವರಿರಬಹುದು. ನನಗೆ ಹೆಚ್ಚು ಆಪ್ತರಲ್ಲ, ಆದರೆ ಕೆನಡಾದಲ್ಲಿದ್ದ ನನ್ನ ಆಪ್ತ ಗೆಳೆಯನಿಗೆ ಬಹಳ ಆಪ್ತರು. ನಾನು ಬಹುವಚನದಲ್ಲೆ ಅವರನ್ನು ಕರೆಯುತ್ತಿದ್ದೆ. ಪರಿಚಯಸ್ಥರ ಕಾಯಿಲೆ ಬಗ್ಗೆ ವಿಚಾರಿಸಲು ಅವರ ಮೊಬೈಲ್ಗೆ ಕರೆ ಮಾಡಿದ್ದೆ. ಅದು ಯಾವ ಕರೆ ಸ್ವೀಕರಿಸುತ್ತಿರಲಿಲ್ಲವಾಗಿ ಆಸ್ಪತ್ರೆಗೆ ಕರೆ ಮಾಡಿದಾಗ ಈ ಉತ್ತರ ಬಂತು. ಅವರ ರಾಜಿನಾಮೆಯ ವಿಚಾರದಿಂದ ನಾನು ಚಿಂತೆಗೀಡಾದೆ.

********************

ಒಂದು ವರ್ಷದ ಹಿಂದೆ ಕೆನಡಾದಲ್ಲಿರುವ ನನ್ನ ಸ್ನೇಹಿತ ನಮ್ಮೂರಿಗೆ ಹೋಗಿದ್ದನಂತೆ. ಅಲ್ಲಿ ಸೂರ್ಯಕಾಂತ್ ಹಾಗೂ ಇತರ ಗೆಳೆಯರನ್ನು ಭೇಟಿ ಮಾಡಿದನಂತೆ. ಅವರೆಲ್ಲ `ಸಿಂಧೂ` ಎಂಬ ಹೆಸರಿನ ಆಸ್ಪತ್ರೆಯು ನಿರ್ಮಾಣಗೊಳ್ಳುತ್ತಿರುವುದಾಗಿಯೂ, ತಾವೆಲ್ಲ ಅದರಲ್ಲಿ ಹಣ ಹೂಡಿ ಕೈಜೋಡಿಸುತ್ತಿರುವುದಾಗಿಯೂ ಹೇಳಿದರಂತೆ. ಅದರ ಪ್ರಮುಖ ರೂವಾರಿ ವಿಕ್ರಂ ಹೆಸರಿನ ಮಕ್ಕಳ ವೈದ್ಯನಂತೆ. ಭಾರತದಲ್ಲಿ ಕಲಿತು ಅಮೆರಿಕೆಗೆ ಹಾರಿ ಅಲ್ಲಿಯೂ ಕಲಿತು ಮತ್ತೆ ಮರಳಿದ್ದಾನಂತೆ. ಅಮೆರಿಕದಲ್ಲಿ ಆಗಲೇ ಹೆಲ್ತ್ ಕೇರ್ ಕೇಂದ್ರಗಳನ್ನು ತೆರೆದು ಬಹಳ ಲಾಭದಾಯಕವಾಗಿ ನಡೆಸುತ್ತಿದ್ದಾನಂತೆ. ಭಾರತದಲ್ಲಿ ಆಸ್ಪತ್ರೆ ತೆಗೆದು ನಡೆಸಲೆಂದೇ ಎಮ್.ಬಿ.ಏ ಮಾಡಿದ್ದಾನಂತೆ. ಅವನ ಉದ್ದೇಶ ಹಣ ಮಾಡುವುದಲ್ಲವಂತೆ, ಆದರೆ ಉತ್ತಮ ಸೇವಾ ಸೌಲಭ್ಯ ಕೈಗೆಟಕುವ ದರದಲ್ಲಿ ನಾಗರೀಕರಿಗೆ ಕೊಡುವುದೇ ಅಂತೆ. ಬಹಳ ಉದಾತ್ತ ಧೋರಣೆಗಳುಳ್ಳವನಂತೆ. ನಿಸ್ವಾರ್ಥ ಹಾಗೂ ನಿಸೃಹ ಸೇವೆಯನ್ನು ಕೊಡಲು ಕಂಕಣಬದ್ಧನಾಗಿ ನಿಂತಿರುವನಂತೆ. ಅದಕ್ಕಾಗಿ ಸಕುಟುಂಬ ಸಮೇತ ಭಾರತಕ್ಕೆ ಮರಳಿದ್ದಾನಂತೆ. ಇಷ್ಟೆಲ್ಲ ಆಗಬೇಕಾದರೆ ಸಮಾನಮನಸ್ಕ ಗೆಳೆಯರನ್ನು ಹೂಡಿಕೆಗಾಗಿ ಹುಡುಕುತ್ತಿದ್ದಾನಂತೆ; ಅದರಲ್ಲೂ ವೈದ್ಯರಿಗೆ, ವಿದೇಶದಲ್ಲಿ ಅನುಭವ ಇರುವವರಿಗೆ ಇನ್ನೆರೆಡು ಮೂರು ವರ್ಷಗಳಲ್ಲಿ ಭಾರತಕ್ಕೆ ಮರಳುವ ಆಸ್ಥೆ ಇರುವವರಿಗೆ ಆದ್ಯತೆಯಂತೆ. ಬೇರೆ ಜನಗಳನ್ನು ಹೂಡಿಕೆಗಾಗಿ ಕೋರುತ್ತಿಲ್ಲವಂತೆ. ಅವರಿಂದ ಯೋಜನೆಯ ಧ್ಯೇಯೋದ್ದೇಶಗಳಿಗೆ ಧಕ್ಕೆ ಬರಬಹುದಾದರಿಂದ ಈ ಉಪಾಯವಂತೆ. ಆದರೆ ಬೇರೆ ಹೂಡಿಕೆದಾರರಿಗೇನೂ ಕಡಿಮೆ ಇಲ್ಲವಂತೆ, ಬಕಪಕ್ಷಿಗಳಂತೆ ಕಾಯುತ್ತಿದ್ದಾರಂತೆ. ಅವನ ತಂದೆಯ ಹೆಸರಿನಲ್ಲಿ ಒಂದು ಧರ್ಮದತ್ತಿ ಸಂಸ್ಥೆ ರಚಿಸಿ ನೊಂದಾಯಿಸಿದ್ದಾನಂತೆ. ಅದಕ್ಕೆ ಸರ್ಕಾರದಿಂದ ರಿಯಾಯ್ತಿ ದರದಲ್ಲಿ ಅಸ್ಪತ್ರೆಗಾಗಿ ಭೂಮಿ ಮಂಜೂರಾಗಿ ತಾನೆ ದುಡ್ಡು ಹೊಂದಿಸಿ ಕೆಲಸ ಶುರುಮಾಡಿಬಿಟ್ಟನಂತೆ. ಅವನ ತಂದೆಯ ಕೊನೆಯ ಕೋರಿಕೆ ಮಗ ಭಾರತದಲ್ಲಿ ಉತ್ತಮ ವೈದ್ಯನಾಗಿ ಸೇವೆಸಲ್ಲಿಸುವುದೇ ಆಗಿತ್ತಂತೆ. ಇವನು ಅದಕ್ಕೂ ಮಿಗಿಲಾಗಿ ತನ್ನ ಭಾಷೆಯನ್ನು ಪೂರೈಸಲು ಮುಂದಾಗಿರುವನಂತೆ. ಇನ್ನೊಂದು ವರ್ಷದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆಯಂತೆ. ಅಲ್ಲಿ ಎಲ್ಲವೂ ಪ್ರಜಾಸತ್ತಾತ್ಮಕ ರೀತಿಯ ಆಡಳಿತವಂತೆ. ಹೂಡಿಕೆದಾರರು ವೈದ್ಯರಿರುವುದರಿಂದ ಅವರವರ ವಿಭಾಗಗಳ ಜವಾಬ್ದಾರಿ ಅವರಿಗೇ ಕೊಡುತ್ತನಂತೆ. ಖರ್ಚು ಕಳೆದರೆ ಉಳಿದ ಆದಾಯದ ವಿಲೇವಾರಿ ಆ ವಿಭಾಗಗಳ ವೈದ್ಯತಂಡದ್ದೇ ಅಂತೆ. ಆದರೆ ಲಾಭದ ಸ್ವಲ್ಪ ಪಾಲನ್ನು ಬಡರೋಗಿಗಳ ಆರೈಕೆಗೆ ಮೀಸಲಾಗಿಡಬೇಕಂತೆ. ಕೆಲಸಗಾರರಿಗೂ ಕೂಡ ಅವರ ಸೇವಾವಧಿಗನುಸಾರ ಪಾಲುದಾರಿಕೆ ಕೊಡಲಾಗುವುದಂತೆ. ಭಾರತದಿಂದಷ್ಟೇ ಅಲ್ಲ ವಿದೇಶಗಳಿಂದಲೂ ರೋಗಿಗಳನ್ನು ತರಲಾಗುವುದಂತೆ. ಅವರಿಗೆ ಅತ್ಯುತ್ಕೃಷ್ಟ ಸೇವೆಯನ್ನು ಒದಗಿಸುವ ಮೂಲಕ ಮಾದರಿ ಆಸ್ಪತ್ರೆಯಾಗಿ ಹೆಸರು ಮಾಡಬೇಕೆಂಬ ದಿವ್ಯಾಲೋಚನೆ ಹಾಗೂ ಆದರ್ಶ ಇದೆಯಂತೆ. ನಾವೆಲ್ಲ ಅಪಾರ್ಟ್ಮೆಂಟ್ ಖರೀದಿ ಮಾಡಿರುವ ವಸತಿ ಸಮುಚ್ಚಯದಲ್ಲೇ ತಾನೂ ಖರೀದಿ ಮಾಡಿರುವನಂತೆ. ಎಲ್ಲಾ ಒಟ್ಟಿಗೆ ಇರಲು ಹಾಗೂ ಕೆಲಸ ಮಾಡಲು ಇದೊಂದು ದಿವ್ಯಾವಕಾಶವಂತೆ. ಡಾ.ಸೂರ್ಯಕಾಂತ್ ಅವರ ಸ್ನೇಹಿತನ ಸ್ನೇಹಿತನಂತೆ. ಸೂರ್ಯಕಾಂತ್ ಈ ಯೋಜನೆಗೆ ಕೈ ಜೋಡಿಸಿದ ಕೆಲವೇ ಮೊದಲಿಗರಲ್ಲಿ ಒಬ್ಬರಂತೆ. ಆನಂತರದಲ್ಲಿ ಹಲವಾರು ವೈದ್ಯರು ಬಂದು ಸೇರಿದರಂತೆ.

ಇಷ್ಟು ಹೇಳಿ ತಾನೂ ವಿಕ್ರಂನನ್ನು ಭೇಟಿಯಾಗಿದ್ದಾಗಿಯೂ್ ಅವನ ಕಾರ್ಯಕ್ಷಮತೆ ಮತ್ತು ಚಲನಶೀಲ ವ್ಯಕ್ತಿತ್ವದಿಂದ ಪ್ರಭಾವಿತನಾಗಿದ್ದಾಗಿಯೂ, ತಾನು ಬಂಡವಾಳ ಹೂಡಿಕೆಗೆ ಮುಂಗಡ ಹಣ ಕೊಟ್ಟಿರುವುದಾಗಿಯೂ, ನಾವೆಲ್ಲ ಮುಂದೆ ಒಂದೊಟ್ಟಿಗೆ ಕೆಲಸಮಾಡುವಂತಾದರೆ ಬಹಳ ಚೆನ್ನಾಗಿರುವುದೆಂದೂ, ವಿದೇಶ ತೊರೆದು ಸ್ವದೇಶಕ್ಕೆ ಮರಳಲು ಬಲವಾದ ಕಾರಣ ಸಿಗುವುದೆಂದೂ, ನಮ್ಮ ದೇಶಕ್ಕೆ ಋಣ ತೀರಿಸುವ ಸದವಕಾಶ ಇದೆಂದೂ, ಯಾರ ಹಂಗೂ ಇರದೆ ನಮ್ಮ ಆದರ್ಶಗಳಿಗೆ ಅನುಸಾರ ಕೆಲಸಮಾಡಬಹುದೆಂದೂ, ವಿಕ್ರಂ ಬರೀ ವೈದ್ಯರಿಗೆ ಆದ್ಯತೆ ನೀಡುತ್ತಿರುವುದರಿಂದ ಅದರ ಲಾಭ ನಾನು ಕೂಡಾ ಪಡೆಯುವ ಬಗ್ಗೆ ಗಂಭೀರವಾಗಿ ಯೋಚಿಸಬೇಕೆಂದೂ ಒತ್ತಾಯದ ಅಡಿಗೆರೆ ಎಳೆದು ಸಲಹೆ ಕೊಟ್ಟ. ನನ್ನ ಹೆಂಡತಿಯೂ ಈ ಯೋಜನೆಯ ಅಗಣಿತ ಲಾಭಗಳನ್ನು ಊಹಿಸಿ ಪುಳಕಿತಳಾಗಿದ್ದಳು. ನಾನು ಇದನ್ನು ಕೇಳಿ ನನ್ನ ಉಳಿದ ಸ್ನೇಹಿತರಿಗೆ ಫೋನಾಯಿಸಿದ್ದೆ.

******************

ಡಾ. ಸೂರ್ಯಕಾಂತ್ ನನಗೆ ಸಿಗಲಿಲ್ಲ. ಯಾವ ಕಾರಣಕ್ಕೊ ಅವರಿಗೆ ಕರೆ ಮಾಡಿದ್ದ ನಾನು ಈಗ ಬೇರೆಯೇ ಕಾರಣಕ್ಕೆ ಅವರನ್ನು ಸಂಪರ್ಕಿಸಲು ತವಕಿಸುತ್ತಿದ್ದೆ. ಅದೇ ಊರಿನಲಿದ್ದ ಹಾಗೂ ಸಹ ಹೂಡಿಕೆದಾರರಾಗಿದ್ದ ಇನ್ನಿಬ್ಬರು ಪರಿಚಯಸ್ಥರಿಗೆ ಕೇಳಿದೆ. ಅವರು ಕೂಡ ತಮಗೆ ತಿಳಿದಿಲ್ಲವೆಂದು ಹೇಳಿದರು. ಡಾ.ಶಿವಮೂರ್ತಿ ಅವರಿಗೆ ಕರೆ ಮಾಡಿದೆ. ಅವರು ಕೂಡ ತಮಗೆ ಹೆಚ್ಚು ತಿಳಿದಿಲ್ಲವೆಂದೂ, ಏನೋ ಭಿನ್ನ್ನಾಭಿಪ್ರಾಯ ಬಂದಿದೆಯೆಂದೂ, ಹೆಚ್ಚು ತಿಳಿದ ಕೂಡಲೆ ನನ್ನನ್ನು ಸಂಪರ್ಕಿಸುವುದಾಗಿಯೂ ಹೇಳಿದರು. ಕೆನಡಾದ ಸ್ನೇಹಿತನಿಗೆ ಕಾಲ್ ಮಾಡಿದೆ. ಅವನಿಗೆ ವಿಷಯ ತಿಳಿದಿತ್ತು. ಡಾ. ಸೂರ್ಯಕಾಂತ್ ಸಿಕ್ಕಿರಲಿಲ್ಲ. ಸಂಪರ್ಕಿಸಲು ಪ್ರಯತ್ನಿಸಿ ಅವನೂ ಹೈರಾಣಾಗಿದ್ದ. ಅವರು ಈ ಗುಂಪಿನಲ್ಲಿದ್ದರೆಂದೆ ಇವನು ಆಸ್ಪತ್ರೆಯ ಸಂಪರ್ಕಕ್ಕೆ ಬಂದಿದ್ದ; ನಮ್ಮನ್ನೂ ಅದರ ಪಾಲುದಾರರನ್ನಗಿಸಿದ್ದ.

*******************

ಮರುದಿನ ವಿಕ್ರಂನ ಈ-ಮೇಲ್ ಬಂದಿತ್ತು. ಅದರಲ್ಲಿ ಆಸ್ಪತ್ರೆಯ ಕಾರ್ಯ ಭರದಿಂದ ಸಾಗಿದೆಯೆಂದೂ, ಇನ್ನೆರೆಡು ತಿಂಗಳಲ್ಲಿ ಎಲ್ಲ ಮುಗಿದು ಉದ್ಘಾಟನೆಗೆ ಸಿದ್ಧವಾಗುವುದೆಂದೂ, ನಮ್ಮ ನಮ್ಮ ಬಾಕಿ ಕಂತುಗಳನ್ನು ತಡ ಮಾಡದೆ ಪಾವತಿಸಬೇಕೆಂದೂ, ಈ ಚಿತ್ರಗಳನ್ನು ನೋಡಿದರೆ ಎಲ್ಲಾ ತಿಳಿಯುವುದೆಂದೂ ಬರೆದು ಒಂದಿಷ್ಟು ಫೋಟೊ ಕಳಿಸಿದ್ದ. ಕಡೆಯಲ್ಲಿ ತಾನು ಬಹು ವಿಷಾದದಿಂದ ತಿಳಿಸಬೇಕಾದ ವಿಚಾರ ಇದೆಯೆಂದೂ, ಅದನ್ನು ಅರುಹಲು ತನ್ನ ಹೃದಯ ಭಾರವಾಗುತ್ತಿದೆಯೆಂದೂ ಮುನ್ನುಡಿ ಬರೆದು, ನಂತರ ಹೃದಯ ಶಸ್ತ್ರ ಚಿಕಿತ್ಸಾ ವಿಭಾಗದ ಸೇವೆ- ಸೌಲಭ್ಯಗಳು ಇರಬೇಕಾದ ಬಗೆಗೆ ಭಿನ್ನಭಿಪ್ರಾಯ ಮೂಡಿದ್ದರಿಂದ ಸೂರ್ಯಕಾಂತ್ ಹೊರನಡೆದಿದ್ದನೆಂದೂ, ತಾನು ಒಲಿಸಲು ಪ್ರಯತ್ನಿಸಿದ್ದಾಗಿಯೂ ಆದರೆ ಫಲಪ್ರದವಾಗಲಿಲ್ಲವೆಂದೂ ಬರೆದು ನಮ್ಮೆಲ್ಲರ ಕ್ಷಮೆಯನ್ನೂ ಸಹಕಾರವನ್ನೂ ಕೋರಿದ್ದ. ಮುಂದೆ ಅಸ್ಪತ್ರೆಯ ಹಿತದೃಷ್ಟಿಯಿಂದ ಮೊದಲೇ ಭಿನ್ನಭಿಪ್ರಾಯ ಬಂದಿದ್ದು ಒಳ್ಳೆಯದೇ ಆಯಿತೆಂದೂ, ಒಗ್ಗಟ್ಟಿನ ಆವಶ್ಯಕತೆ ಮುಂದೆ ಬಹಳ ಇದೆಯೆಂದೂ ಬರೆದಿದ್ದ. ಭಿನ್ನಾಭಿಪ್ರಾಯ ಏನು, ಏಕೆ ವಿವರ ಇರಲಿಲ್ಲ.

ನಾನು ವಿಕ್ರಂಗೆ ಕರೆ ಮಾಡಿದೆ. ಸಿಕ್ಕ. ಏನಿದರ ಒಳ ಮರ್ಮವೆಂದು ಕೇಳಿದೆ. ಅದು ನಮ್ಮಿಬ್ಬರ ನಡುವಿನ ವಾಗ್ವಾದವಾದ್ದರಿಂದ ನನಗೆ ತಿಳಿಯುವ ಪ್ರಮೇಯ ಇಲ್ಲವೆಂದ. ನನಗೆ ಸಿಟ್ಟೇರಿ, ಇದು ಅಸ್ಪತ್ರೆಗೆ ಸಂಬಂಧಿಸಿದ ವಿಚಾರವಾದ್ದರಿಂದ , ನಾವೆಲ್ಲರೂ ಪಾಲುದಾರರಾದ್ದರಿಂದ, ನಮಗೆ ವಿಷಯ ತಿಳಿಯಬೇಕು, ನೀನು ಅದನ್ನು ಸವಿವರವಾಗಿ ಬರೆದು ಎಲ್ಲರಿಗೂ ತಿಳಿಸು ಎಂದು ಆಗ್ರಹಿಸಿ ವಾದಿಸಿದೆ. ಕಡೆಗೆ ಸರಿ ಎಂದ. ಬರಿ ನಿರ್ವಹಣಾ ಮಂದಳಿಯಿಂದ ತೆಗೆದಿದ್ದೀಯೋ ಅಥವಾ ಅವರ ಪಾಲುದಾರಿಕೆಯೂ ವಾಪಸ್ ಕೊಟ್ಟಿದ್ದೀಯೋ ಎಂದೆ. ಪಾಲುದಾರಿಕೆ ಹಣವನ್ನು ವಾಪಸ್ ಬಡ್ಡೀ ಸಮೇತ ಕೊಟ್ಟು ತನ್ನ ಔದಾರ್ಯ ತೋರಿಸಿದ್ದಾಗಿಯೂ ನಾವೆಲ್ಲ ಇರುವಾಗ ಇದೊಂದು ದೊಡ್ಡ ನಷ್ಟವಲ್ಲವೆಂದೂ ಹೇಳಿದ. ಏನೇ ಇದ್ದರೂ ಸರಿ ಕಾರಣವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ತಿಳಿಸಿ ಫೋನು ಕಟ್ ಮಾಡಿದೆ.

******************

ಮನಸ್ಸು ಕಸಿವಿಸಿಗೊಂಡಿತ್ತು. ಇನ್ನೂ ಹೆಚ್ಚಿನ ಹುಳುಕು ಅನಾವರಣಗೊಳ್ಳಲಿದೆಯೆಂದು ಮನಸ್ಸು ಹೇಳುತ್ತಿತ್ತು. ಆಸ್ಪತ್ರೆ  ಪ್ರಾರಂಭಕ್ಕೆ ಇನ್ನೂ ಎರೆಡು ತಿಂಗಳಿರುವಾಗಲೇ ಭಿನ್ನಭಿಪ್ರಾಯಗಳು ಮೂಡಿ ಮನಸ್ಸುಗಳು ಒಡೆದರೆ ಹೇಗೆ ಎಂದು ಚಿಂತೆಯಾಗತೊಡಗಿತು. ಸೂರ್ಯಕಾಂತ್ ಇಲ್ಲದ ನಮ್ಮ ಆಸ್ಪತ್ರೆಯನ್ನು ಕಲ್ಪಿಸಿಕೊಳ್ಳುವುದು ನನ್ನಿಂದ ಕಷ್ಟವಾಗತೊಡಗಿತು.

ಸೂರ್ಯಕಾಂತ್ ಆಸ್ಪತ್ರೆಗೆ ನಮ್ಮ ಪ್ರಥಮ ಕೊಂಡಿ. ಆವರಿದ್ದರೆಂದೇ ನಾವು ಈ ಬೃಹತ್ ಯೋಜನೆಯಲ್ಲಿ ಪಾಲುದಾರರಾಗಿದ್ದೆವು. ಅವರಿಂದ ಕೆನಡಾದವ, ಅವನಿಂದ ನಾನು, ನನ್ನಿಂದ ಬಾಲಂಗೋಚಿಯಂತೆ ಇನ್ನೂ ಮೂರು ಜನ  ಅವರಿಂದ ಇನ್ನು ಕೆಲವರು ಹೀಗೆ. ಎಲ್ಲ ಕೆಳ ಮಧ್ಯಮ ವರ್ಗದ ಉತ್ಪನ್ನಗಳಾದ ನಾವು ಅಚ್ಚುಕಟ್ಟಾಆಗಿ ಓದು ಬರಹ ಮಾಡಿ, ಸ್ಫರ್ಧಾತ್ಮಕ ಜಗತ್ತಿನಲ್ಲಿ ಸೆಣೆಸಿ, ವಿದ್ಯಾಭ್ಯಾಸ ಮಾಡಿ ನಮ್ಮ ನಮ್ಮ ಕ್ಷೇತ್ರಗಳಲ್ಲಿ ನೈಪುಣ್ಯತೆ ಗಳಿಸಿದ್ದವರು. ನಮ್ಮ ಕೆಲಸ ಇದ್ದಲ್ಲಿ ಒಳ್ಳೆಯ ಹೆಸರು ಗಳಿಸಿದ್ದವರು. ವ್ಯವಹಾರ ಕುಶಲತೆ ಅಷ್ಟಕ್ಕಷ್ಟೆ. ಆಸ್ತಿಕ ಹಿನ್ನೆಲೆಯಿಂದ ಬಂದವರು. ತ್ಯಾಗ, ಪ್ರೇಮ, ಪ್ರೀತಿ ಇತ್ಯಾದಿ ಆದರ್ಶಗಳನ್ನು ಕಟ್ಟಿಕೊಂಡು ಬೆಳೆದಿದ್ದವರು. ಹಾಗಾಗಿಯೇ ಗೆಳೆಯರಾಗಿದ್ದವರು. ಕಪಟ ತಟವಟ ಗಳಿಗೆ ಮನಸ್ಸು ಕೊಟ್ಟವರಲ್ಲ.ಅದರ ಅವಶ್ಯಕತೆಯೂ ಬಂದಿರಲಿಲ್ಲ. ೧೦-೨೦ ವರ್ಷಗಳ ದೀರ್ಘ ಸ್ನೇಹದಲ್ಲಿ ನಾವೆಂದೂ ಕೆಟ್ಟದಾಗಿ ಜಗಳಾಡಿದವರಲ್ಲ. ಯಾವುದನ್ನು ಮಾಡಿದರೂ ಉಳಿದವರಿಗೆ ತಿಳಿಸಿ, ಉತ್ಸಾಹ ಇದ್ದಲ್ಲಿ ಅವರನ್ನು ಭಾಗಿಗಳಾಗಿ ಮಾಡಿಕೊಂಡೇ ಮುಂದುವರಿಯುವುದು ನಮ್ಮ ಅಭ್ಯಾಸವಾಗಿತ್ತು. ಇದೇ ಕಾರಣಕ್ಕಾಗಿಯೇ ವಿಕ್ರಂ ಖರೀದಿಸಿದ್ದಲ್ಲಿ ಕಾಕತಾಳೀಯವಾಗಿ ನಾವು ಕೂಡ ಈ ಮುಂಚೆ ಫ಼್ಲಾಟ್ ಗಳನ್ನು ಖರೀದಿಸಿದ್ದೆವು. ನಮ್ಮ ಹೆಂಡತಿಯರು ಕೂಡಾ ಚೆನ್ನಗಿ ಒಬ್ಬರಿಗೊಬ್ಬರು ಹೊಂದಿಕೊಂಡಿದ್ದರು.

ಈಗ ಸೂರ್ಯಕಾಂತ್ ಕೊಂಡಿ ಕಳಚಿಕೊಂಡು ಆಸ್ಪತ್ರೆಯಿಂದಲೇ ಕಳಚಿಕೊಂಡ ಭಾವ ನನ್ನಾವರಿಸಿತ್ತು.

*********************

ಮರುದಿನ ವಿಕ್ರ್ಂನ ಈ ಮೇಲ್ ಬಂತು. ಬೇರೆ ಷೇರುದಾರರೂ ಕಾರಣಕ್ಕಾಗಿ ಆಗ್ರಹಿಸಿ ಈ ಮೇಲ್ ಬರೆದಿದ್ದರು. ಫೋನ್ ಕೂಡಾ ಮಾಡಿದ್ದಿರಬಹುದು.

ಸೂರ್ಯಕಾಂತ್ ಹಾಗೂ ವಿಕ್ರಂ ಇಬ್ಬರೂ ಸೇರಿ ಹೃದ್ರೋಗ ವಿಭಾಗ ಹಾಗೂ ಶಸ್ತ್ರ ಚಿಕಿತ್ಸೆಯ ಸೇವೆ, ಸವಲತ್ತು ಹಾಗೂ ಸೌಲಭ್ಯ ನಮ್ಮಾಸ್ಪತ್ರೆಯಲ್ಲಿ ಹೇಗಿರಬೇಕೆಂದು ಚರ್ಚಿಸುತ್ತಿದ್ದರಂತೆ. ವಿಕ್ರಮ್ ಇಬ್ಬರು ಹಾರ್ಟ್ ಸರ್ಜನ್ಗಳು ಬೇಕು ಒಬ್ಬರಿಗೆ ಆಗದಿದ್ದರೆ ಇನ್ನೊಬ್ಬರು ಇರಬೇಕು ಎಂದು ಹೇಳಿದನಂತೆ. ರೋಗಿಗಳ ಹಿತದೃಷ್ಟಿ ಮತ್ತು ಆಸ್ಪತ್ರೆಯ ಗೌರವಕ್ಕಾಗಿ ಇದು ಅವಶ್ಯವೆಂದು ಹೇಳಿದನಂತೆ. ಇದಕ್ಕೆ ಸೂರ್ಯಕಾಂತ್ ಒಪ್ಪದೆ ತಾನು ಇನ್ನೊಬ್ಬರೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡಲು ತಯಾರಿಲ್ಲವೆಂದೂ, ವಿಭಾಗದ ಗಳಿಕೆ ತನಗೊಬ್ಬನಿಗೇ ಸೇರಬೇಕೆಂದೂ, ಇದಕ್ಕೆ ವ್ಯತಿರಿಕ್ತವಾಗಿ ನಡೆದರೆ ಈ ಆಸ್ಪತ್ರೆಯ ನಂಟು ಕಳಚಿಕೊಳ್ಳುವನೆಂದೂ ಧಮಕಿ ಹಾಕಿದನಂತೆ. ಅವನ ಮನವೊಲಿಸಲು ತಾನು ಭಗೀರಥ ಪ್ರಯತ್ನ ಮಾಡಿದನೆಂದೂ, ಆದರೆ ಸೂರ್ಯಕಾಂತ್ ಬಗ್ಗಲೇ ಇಲ್ಲವೆಂದೂ, ಅದಕ್ಕಾಗಿ ಬೇರೆ ದಾರಿ ಇಲ್ಲದೆ ಎಲ್ಲರ ಒಳಿತಿಗಾಗಿ ಸೂರ್ಯಕಾಂತ್ ನನ್ನು ಹೊರಗೆ ಕಳಿಸಲು ತಾನು ಹಿಂಜರಿಯಲಿಲ್ಲವೆಂದೂ ಬರೆದು ಇದಕ್ಕೆ ತಮ್ಮೆಲ್ಲರ ಸಹಮತ ಇದೆಯೆಂದು ಭಾವಿಸುತ್ತೇನೆಂದು ಕೇಳಿ ಪತ್ರ ಮುಗಿಸಿದ್ದ.

ಇದರ ಸತ್ಯಾಸತ್ಯತೆ ಅರಿಯುವ ಅವಕಾಶ ವಿದೇಶದಲ್ಲಿದ್ದ ನಮಗಿರಲಿಲ್ಲ. ಅವನು ಬರೆದಿದ್ದರಲ್ಲಿ ತಪ್ಪೂ ಕೂಡಾ ಕಾಣಲಿಲ್ಲ, ಆದರೆ ಸೂರ್ಯಕಾಂತ್ ಗೆ ದುಡ್ಡಿನ ಮೇಲಿಷ್ಟು ವ್ಯಾಮೋಹ ಇದೆಯೆಂದು ನನಗೆ ಗೊತ್ತಿರಲಿಲ್ಲ.

ಯಾವ ಹುತ್ತದಲ್ಲಿ ಯಾವ ಹಾವೋ ಕಂಡವರ್ಯಾರು. ಕೈ ಹಾಕಿ ಕಚ್ಚಿಸಿಕೊಂಡಮೇಲೇ ಅರಿವಿಗೆ ಬರುವುದು.

*******************

ವರ್ಷದ ಹಿಂದೆ ಕೆನಡಾ ದ ನನ್ನ ಮಿತ್ರನ ವಿವರಣೆ ಎಷ್ಟು ನಿಚ್ಚಳವಾಗಿತ್ತೆಂದರೆ ಅವನ ನಿರ್ಧಾರವೇ ನನ್ನ ನಿರ್ಧಾರ ಎಂಬ ಮಟ್ಟಕ್ಕೆ ನಾನು ಮುಟ್ಟಿದ್ದೆ. ಅವನು ಅಸ್ಪತ್ರೆಯಲ್ಲಿ ಏಕಾಏಕಿ ಹಣ ತೊಡಗಿಸಿದ್ದರಲ್ಲಿ ನನಗೆ ಯಾವ ಅಳುಕೂ ಕಾಡಲಿಲ್ಲ. ಈ ರೀತಿಯ ಕುರಿಮಂದೆ ನಿರ್ಧಾರ ನಮ್ಮದು ಇದು ಮೊದಲೇನೂ ಅಲ್ಲ. ನಾವೆಲ್ಲ ಒಟ್ಟಿಗೆ ಎಮ್ ಬಿ ಬಿ ಎಸ್ ಕಲಿತವರು, ಒಟ್ಟಿಗೆ ಓದಿ ಉನ್ನತ ದರ್ಜೆಯಲ್ಲಿ ಪಾಸಾದವರು. ಒಟ್ಟಿಗೆ ಸ್ನಾತಕೊತ್ತರ ತರಬೇತಿಗೆ ತಯಾರಿ ನಡೆಸಿ ಒಟ್ಟಿಗೆ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಕಲಿತವರು. ಸೀಟು ಸಿಕ್ಕದವರನ್ನು ನಮ್ಮ ಜೊತೆ ಇಟ್ಟುಕೊಂಡು, ತರಬೇತಿ ಕೊಟ್ಟು ಅವರ ಖರ್ಚು ವೆಚ್ಚಗಳನ್ನು ಲೆಕ್ಕವಿಡದೆ ನಿಭಾಯಿಸಿ ಅವರನ್ನೂ ನಮ್ಮೊಂದಿಗೆ ಎಳೆದುಕೊಂಡವರು, ಜೀವನದ ಸುಖ ದುಃಖ ಗಳಲ್ಲಿ ಸಹಭಾಗಿಯಾದವರು, ಭಿನ್ನಭಿಪ್ರಾಯಗಳು ಬಂದರೂ, ಒಬ್ಬರು ತಪ್ಪು ಮಾಡಿದರೂ ಅದನ್ನು ದೊಡ್ಡದು ಮಾಡದೆ, ಜೊತೆಯಲ್ಲಿ ಮುನ್ನಡೆದವರು.ಇದೇ ರೀತಿ ಮೊದಲು ಒಬ್ಬ ಬ್ರಿಟನ್ನಿಗೆ ಬಂದು ಉಳಿದವರನ್ನು ಒಬ್ಬೊಬ್ಬರಾಗಿ ಕರೆಸಿಕೊಂಡು ತಾನಿರುವಲ್ಲಿ ಹೇಳಿ ಕೆಲಸ ಕೊಡಿಸಿದ್ದ. ಹೀಗಿರುವಲ್ಲಿ, ಈ ಆಸ್ಪತ್ರೆಯ ವಿಷಯದಲ್ಲೂ ಹಾಗೇ ಒಬ್ಬನಿಂದ ಉಳಿದವರೂ ಹಣ ತೊಡಗಿಸಿದ್ದೆವು. ಸೂರ್ಯಕಾಂತನ ಸ್ನೇಹಿತನೆಂದರೆ ನಮ್ಮಂತೆಯೇ ಎಂದು ಅನ್ಯಥಾ ಭಾವಿಸದೆ ಸಹಭಾಗಿಗಳಾಗಿದ್ದೆವು. ನಾನು ವಿಕ್ರಂನನ್ನು ಮುಖತಃ ಭೇಟಿಯಾಗುವ ಯೋಚನೆ ಕೂಡಾ ಮಾಡಲಿಲ್ಲ!. ಫೋನಿನಲ್ಲಿ ಮಾತನಾಡಿ ನನ್ನ ಇಂಗಿತ ತಿಳಿಸಿ ಒಪ್ಪಿಗೆ ಸೂಚಿಸಿದ್ದೆ ಹಾಗೂ ಮಾತು ಕೊಟ್ಟಿದ್ದೆ. ನನ್ನ ಇತರ ನಾಲ್ಕು ಜನ ಸ್ನೇಹಿತರು ಉತ್ಸುಕರಾಗಿರುವರೆಂದೂ ಅವನಿಗೆ ಹೇಳಿದ್ದೆ. ತಾನು ಅಮೇರಿಕೆಗೆ ಹೋಗುವ ಸಮಯದಲ್ಲಿ ಲಂಡನ್ನಿನಲ್ಲಿಳಿದು ನಮ್ಮೆಲ್ಲರನ್ನು ಭೇಟಿಯಾಗುವುದಾಗಿ ಹೇಳಿದ, ಅದರಂತೆ ಎರಡು ದಿನ ನಮ್ಮೊಂದಿಗಿರಲು ಬಂದೂ ಬಂದ. ಇದ್ದಷ್ಟು ಹೊತ್ತು ಚೆನ್ನಾಗಿ ಮಾತನಾಡಿದ, ಜೋಕು ಹೇಳಿದ, ಒಡನಾಡಿದ. ತನ್ನ ಲ್ಯಾಪ್ ಟಾಪೂ ಅದರಲ್ಲೊಂದು ಪವರ್ ಪಾಯಿಂಟ್ ಪ್ರೆಸೆಂಟೇಷನ್ನೂ ತೋರಿಸಿ ವೈದ್ಯಕೀಯ ಕ್ಷೇತ್ರ ಭಾರತದಲ್ಲಿ ಬೆಳೆಯುತ್ತಿರುವ ಬಗೆಯೂ, ಅದರಲ್ಲಿರುವ ಹೊಸ ಹೊಸ ಅವಕಾಶಗಳು, ನಾವೆಲ್ಲ ಒಮ್ಮನಸ್ಕರಾದ ಕಾರಣ ನಮ್ಮ ಈ ಯೊಜನೆ ಒಂದು ವಿಜಯಗಾಥೆ ಆಗುವ ಕನಸೂ ತೋರಿಸಿದ. ಮಧ್ಯೆ ಒಂದು ರಾತ್ರಿ ಡಿಸ್ಕೋ ಕ್ಲಬ್ಬಿಗೂ ಹೋಗಿಬಂದ!!.

ನನ್ನೆಲ್ಲ ಒಡನಾಡಿಗಳು ಸಂತೋಷದಿಂದಲೇ ವ್ಯವಹರಿಸಿದರು ಹಾಗೂ ಉತ್ಸುಕರಾಗಿದ್ದರು. ಅವರಲ್ಲಿ ನಾನೇ ಮೊದಲು ವ್ಯವಹಾರ ಶುರು ಮಾಡಿದ್ದೆ. ಆದರೆ ವಿಕ್ರಂನನ್ನು ಮುಖತಃ ನೋಡಿ ಸಮಯ ಕಳೆದ ಮೇಲೆ ನನಗೆ ಸಮಾಧಾನ ಆಗಲಿಲ್ಲ. ಒಳಗೆ ಎಲ್ಲೋ ಏನೋ ಸರಿಯಿಲ್ಲ ಎಂದೆನಿಸಿತು. ಏನೆಂದು ಸ್ಪಷ್ಟವಾಗಿ ಅರಿವಾಗಲಿಲ್ಲ ಅಥವಾ ಅದಕ್ಕಾಗಿ ನಾನು ಗಂಭೀರ ಪ್ರಯತ್ನ ಮಾಡಲಿಲ್ಲ. ನನ್ನ ಮೂಲಭೂತ ಸಂಶಯ ಪಿಶಾಚಿಯನ್ನು ಪಕ್ಕಕ್ಕೆ ತಳ್ಳಲು ನಾನು ಅವಿರತ ಪ್ರಯತ್ನ ನಡೆಸುತ್ತಲೇ ಇದ್ದೆ. ನಮ್ಮ ಅವನ ಕಕ್ಷೆಗಳು ಬೇರೆಯೇ ಎಂದೆನಿಸತೊಡಗಿತು. ಈ ಆದರ್ಶ ಯೋಜನೆಯಲ್ಲಿ ಅವನ ಮೇಲೆ ಭರವಸೆಯಿಟ್ಟು ಕೈ ಜೊಡಿಸಲು ಅಣಿಯಾದ ನಮ್ಮೆಲ್ಲರಿಗೂ ಧನ್ಯವಾದ ಸಲ್ಲಿಸಿ ತಾನು ಹಾರಿದ.

ನನಗೆ ಈ ಸಾಹಸದಿಂದ ಹಿಂದೆ ಸರಿಯುವ ಯೋಚನೆ ಬಂದಿತಾದರೂ ಉಳಿದವರಲ್ಲಿ ಯಾವುದೇ ದುಗುಡ ಕಾಣದ್ದರಿಂದ ನಾನು ನನ್ನ ಆತಂಕವನ್ನು ನಿರ್ಲಕ್ಷಿಸಲು ಹೋರಾಟ ನಡೆಸುತ್ತಲೇ ಹಣ  ಕಳಿಸುವ ವ್ಯವಸ್ಥೆ ಮಾಡತೊಡಗಿದೆ. ಬೇರೆಯವರು ಮುನ್ನಡೆದಾಗ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇರಲಿಲ್ಲ.ಆದರೆ ಒಂದೆರೆಡು ದಿನ ಕಳೆದು ನಮ್ಮಲ್ಲಿ ಕಿರಿಯವನಾದ ಹಾಗೂ ಕಡಿಮೆ ಸ್ಥಿತಿವಂತನಾದ ಇನ್ನೂ ತನ್ನ ಟ್ರೇನಿಂಗ್ ಮುಗಿಸಿರದಿದ್ದ ವಿಠಲನಿಗೆ ಒಂದು ಸಂಜೆ ಭೇಟಿಯಾಗಿ ಈ ಆಸ್ಪತ್ರೆಯಲ್ಲಿ ಈಗಲೇ ಹಣ ತೊಡಗಿಸಬೇಡ ಎಂದೆ. ಅವನು ಆಶ್ಚರ್ಯದಿಂದ ನನ್ನೆಡೆಗೆ ನೋಡಿದನೇ ಹೊರತು ಮಾತನಾಡಲಿಲ್ಲ. ಏಕೆ ಎಂದೂ ಕೇಳಲಿಲ್ಲ; ಸರಿ ಎಂದ. ನಾನೇ ಮುಂದುವರಿದು ಇದು ಲಕ್ಷಾಂತರದ ವ್ಯವಹಾರ, ನೀನಿನ್ನೂ ಟ್ರೇನಿಂಗ್ ಮುಗಿಸಿಲ್ಲ. ಸ್ವಲ್ಪ ತಾಳು, ನಮ್ಮ ಹಣ ಏನಾಗುವುದೋ ನೋಡೋಣ. ನಿನ್ನ ಹಣ ಹಾಗೇ ಇರಲಿ. ಹಾಗೇನಾದರೂ ಈ ನಮ್ಮ ಸಾಹಸ ಫಲಪ್ರದವಾದಲ್ಲಿ, ನಿನಗೆ ಈಗಿನ ಬೆಲೆಯಲ್ಲಿ ನನ್ನ ಪಾಲಿನ ಅರ್ಧ ಷೇರುಗಳನ್ನು ಕೊಡುತ್ತೇನೆ ಅಲ್ಲಿಯವರೆಗೂ ತಡೆದಿರು ಎಂದೆ. ನನ್ನ ಮೇಲಿನ ನಂಬಿಕೆಗೋ ಇಲ್ಲ ಪ್ರೀತಿಗೋ ಒಪ್ಪಿ ಸುಮ್ಮನಾದ. ಅವನ ಹಣದ ವಿಚಾರದಲ್ಲಿ ನಾನು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದೆ.

ಈ ನಮ್ಮ ನಿರ್ಧಾರಗಳೆಲ್ಲ ಸೂರ್ಯಕಾಂತ್ ಎಂದೆಂಬ ಒಂದು ಕೊಂಡಿಯಿಂದ ಆಸ್ಪತ್ರೆಗೆ ನೇತುಹಾಕಿಕೊಂಡಿದ್ದವು. ಈಗ ಆ ಕೊಂಡಿ ಕಳಚಿತ್ತು!!.

***************************

ಇತ್ತ ಆಸ್ಪತ್ರೆಯ ಉದ್ಘಾಟನೆ ಸಮೀಪಿಸುತ್ತಿತ್ತು. ದಿನಾಂಕವೂ ನಿಗದಿಯಾಗಿತ್ತು. ವಿಕ್ರಂ ಧಾಂ ಧೂಮ್ ತಯಾರಿ ನಡೆಸಿದ್ದ. ನಾವುಗಳು ನಡುನಡುವೆ ಊರಿಗೆ ಹೋದಾಗ ಆಸ್ಪತ್ರೆಗೆ ಭೇಟಿಕೊಟ್ಟು ಕಟ್ಟಡವನ್ನು ಕಣ್ತುಂಬಿಕೊಂಡು ಬಂದಿದ್ದೆವು. ಹೀಗೆ ಒಮ್ಮೆ ನಾನು ಭೇಟಿಕೊಟ್ಟಾಗ ವಿಕ್ರಂ ಕೆಲವು ಹೊಸ ಹೂಡಿಕೆದಾರರನ್ನು ಪರಿಚಯಿಸಿದ. ಅವರಲ್ಲಿ ವೈದ್ಯರಾರೂ ಇರಲಿಲ್ಲ. ಅವನಿಗೆ ಅವರು ಪರಿಚಯಸ್ಥರಂತೆಯೂ ಕಂಡುಬಂದರು ನನ್ನ ಮುಖದಲ್ಲಿ ಮೂಡಿದ ಅಚ್ಚರಿಯನ್ನು ಗಮನಿಸಿದಂತೆ ಅವನ ಆಫೀಸಿಗೆ ಹೋದ ಬಳಿಕ ಈ ಹೊಸಬರನ್ನು ತೆಗೆದುಕೊಳ್ಳಲು ತನಗೆ ಅಷ್ಟೇನೂ ಇಷ್ಟವಿರಲಿಲ್ಲ, ಆದರೆ ಹಣಕಾಸಿನ ಮುಗ್ಗಟ್ಟು , ಸೂರ್ಯಕಾಂತನ ಹಣ ವಾಪಸ್ ಕೊಡಬೇಕಾಗಿ ಬಂದದ್ದು, ಅನಿವಾರ್ಯತೆಯ ಸುಳಿಯಲ್ಲಿ ತಾನು ಸಿಕ್ಕಿದ್ದು, ಇವರೆಲ್ಲ ತನಗೆ ಬೆಂಬಲವಾಗಿ ನಿಂತದ್ದು ವಿವರಿಸಿದ. ಬೇರೆ ವೈದ್ಯ ಹೂಡಿಕೆದಾರರು ಮುಂದೆ ಬಾರದೆ ಇದ್ದಿದ್ದೂ ಇನ್ನೊಂದು ಕಾರಣವಾಯ್ತೆಂದು ಹೇಳಿದ. ಆವನು ನಮ್ಮ ಪರವಾಗಿ ಪಡುತ್ತಿದ್ದ ಪರಿಪಾಟ್ಲಿಗೆ ಧನ್ಯವಾದ ಹೇಳಿ ಬಂದೆ. ನಾವೆಲ್ಲ ಆಸ್ಪತ್ರೆಯ ಮಾಲೀಕರಾಗಿ ನಮ್ಮ  ಸಂಸ್ಥೆಗೇ ದುಡಿಯುವ  ಕನಸಿನಿಂದ ನಾನು ಅಲ್ಲಿಂದ ಹೊರಟೆ. ಉದ್ಘಾಟನೆ ಆಯ್ತು ಆದರೆ ನಮ್ಮ ಇಲ್ಲಿನ ಕೆಲಸದ ನಿಮಿತ್ತ ನಾವ್ಯಾರೂ ಪಾಲ್ಗೊಳ್ಳಲಾಗಲಿಲ್ಲ; ನನ್ನ ಕೆನಡಾದ ಗೆಳೆಯ ಹೋಗಿಬಂದ. ಆಸ್ಪತ್ರೆ ಕಾರ್ಯಾರಂಭ ಮಾಡಿತು.

**********

ಈ ಸಾರಿ ಕೆನಡಾದ ಮಿತ್ರ ಊರಿಗೆ ಹೋದಾಗ ಕಡೆಗೂ ಸೂರ್ಯಕಾಂತ್ ಸಿಕ್ಕಿದ್ದರಂತೆ. ಆಸ್ಪತ್ರೆಯ ಯಾವುದೇ ವಿಚಾರ ಮಾತನಾಡಲು ಆಸಕ್ತಿ ತೋರಿಸಲಿಲ್ಲವಂತೆ. ಆದರೂ ನೀವುಗಳು ಆದಷ್ಟು ಬೇಗ ಆಸ್ಪತ್ರೆಯ ನಂಟು  ತೊರೆದರೆ ಕ್ಷೇಮ ಎಂದರಂತೆ. ಹಾಗೆ ಹೇಳಲು ಕಾರಣ ಕೊಡಲು ಇಷ್ಟಪಡಲಿಲ್ಲವಂತೆ. ಕಾಲ ಸರಿದಾಗ ಅದೇ ತಿಳಿಯುವುದೆಂದೂ, ಈಗ ಹೇಳಿದರೆ ನಮ್ಮೆಲ್ಲರ ಮನಶ್ಯಾಂತಿ ಹಾಳಾಗುವುದೆಂದೂ, ಆಸ್ಪತ್ರೆಯ ನಂಟು ತೊರೆದು ಬಂದಾಗ ಉಳಿದ ವಿಚಾರ ಹೇಳುವೆನೆಂದು ಅಂದು ಸುಮ್ಮನಾದರಂತೆ. ಮಿತಭಾಷಿಯಾದ ಅವರನ್ನು ಹೆಚ್ಚು ಒತ್ತಾಯಿಸಲಾಗದೆ ಇವನು ಸುಮ್ಮನೆ ಬಂದನಂತೆ.

***********

ಆಸ್ಪತ್ರೆಯಲ್ಲಿ ಕೆಲಸ ಶುರು ಆಯ್ತು. ಹೇಗೆ ನಡೆಯುತ್ತಿರಬಹುದೆಂದು ನಾವೆಲ್ಲ ತಿಳಿಯಲು ಉತ್ಸುಕರಾಗಿದ್ದೆವು.ಒಂದೆರೆಡು ತಿಂಗಳು ಉರುಳಿದವು. ಮೂರನೇ ತಿಂಗಳಿಗೆ ವಿಕ್ರಂ ನ ಈ ಮೈಲ್ ಬಂತು,.ಆಸ್ಪತ್ರೆ ಚೆನ್ನಾಗಿ ಕೆಲಸ ಮಾಡುತ್ತಿದೆಯೆಂದೂ, ಕೆಲಸಗಾರರ ಉತ್ಸಾಹ ಕಂಡು  ದಾಖಲಾದ ರೋಗಿಗಳೆಲ್ಲ ಬಹಳ ಹರ್ಷ ಚಿತ್ತರಾಗಿರುವರೆಂದೂ, ದಿನದಿಂದ ದಿನಕ್ಕೆ ಒಳ ಮತ್ತು ಹೊರ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆಯೆಂದೂ, ಈ ಜನಪ್ರಿಯತೆಯಿಂದಾಗಿ ಸುತ್ತಲಿನ ಆಸ್ಪತ್ರೆಗಳ ನಿದ್ದೆ ಹಾರಿಹೋಗಿದೆಯೆಂದೂ, ಆದಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೆಂದೂ, ಹೀಗೆಯೇ ನಡೆದರೆ ಒಂದು ವರ್ಷದೊಳಗೆ ನಾವು ಆಯ -ವ್ಯಯ ಸಮತೋಲನ ಸಾಧಿಸಬಹುದೆಂದೂ ನಮ್ಮೆಲ್ಲರ ಸಹಕಾರದಿಂದಷ್ಟೇ ಇದೆಲ್ಲ ಸಾಧ್ಯವಾಗುತ್ತಿದೆಯೆಂದೂ ಅಭಿವಂದಿಸಿ ಬರೆದಿದ್ದ. ನಾವೂ ಓದಿ ಆನಂದತುಂದಿಲರಾದೆವು.

ಪತ್ರದ ಕಟ್ಟ ಕಡೆಗೆ, ನಮ್ಮ ಖರ್ಚು ಆದಾಯದ ಮೂರನೇ ಒಂದು ಭಾಗದಷ್ಟು ಜಾಸ್ತಿ ಇದೆಯಾದರಿಂದ ಅದನ್ನು ಸರಿತೂಗಿಸಲು ನಾವೆಲ್ಲ ಹಣ ಸಹಾಯ ಮಾಡ್ಬೇಕೆಂದು ಕೋರಿದ್ದ. ಸರಿ ಬೇರೆಯವರೆಲ್ಲ ತರಾತುರಿಯಿಂದ ಹಣ ಹೊಂದಿಸಲು ಸಜ್ಜಾದರು. ನನ್ನ ಬಳಿ ಹಣ ಇರಲಿಲ್ಲ. ನನಗೆ ಇದ್ದದ್ದು ಒಂದೇ ಆದಾಯ. ಮನೆಯಲ್ಲಿ ಖರ್ಚು ಹೆಚ್ಚಿತ್ತು. ಹಲವು ಬೋಗಿಗಳನ್ನೆಳೆಯುವ ಏಕೈಕ ಇಂಜಿನ್ ನಾನಾಗಿದ್ದರಿಂದ ಉಳಿತಾಯ ಇರಲಿಲ್ಲ. ಇದ್ದಷ್ಟನ್ನು ಹೊಂದಿಸಿ ಆಗಲೇ ಕೊಟ್ಟಾಗಿತ್ತು. ತಂಗಿಯ ಗಂಡನ ಕೆಲಸ ಹೋಗಿತ್ತು, ಅವಳಿಗೂ ಹುಷಾರಿರಲಿಲ್ಲ, ಅಣ್ಣನ ಮಗಳು , ತಂಗಿಯ ಮಗಳ ವಿದ್ಯಾಭ್ಯಾಸದ ಹೊಣೆ ನನ್ನದೇ, ನನ್ನ ಮಕ್ಕಳೂ ಬೆಳೆಯುತ್ತಿದ್ದರು. ಮರಳಿ ಊರಿಗೆ ಗಂಟೂ ಮೂಟೆ ಕಟ್ಟುವ ಹುನ್ನರ ನಡೆಸುತ್ತಿದ್ದ ನಾನು ಮನೆ ಕೊಂಡಿರಲಿಲ್ಲ. ಬಾಡಿಗೆ ಮನೆಯಲ್ಲಿದ್ದೆ- ಅದೂ ಸಣ್ಣದು. ಮನೆಯ ಸುತ್ತಲಿನ ಪರಿಸರ, ಜನ ಹಿತಕರವಾಗಿರಲಿಲ್ಲ. ತಾತ್ಕಾಲಿಕ ವಾಗಿ ಕಾಲ ನೂಕುತ್ತಿದ್ದೆ. ಆದರೆ ಹಣಕ್ಕಾಗಿ ಬಂದ ಈ ಹೊಸ ಡಿಮ್ಯಾಂಡು ನನ್ನನ್ನು ದಂಗು ಬಡಿಸಿತು.

ಯಾವ ವ್ಯವಹಾರವೇ ಆಗಲಿ ಶುರುವಿನಿಂದ ಲಾಭ ಮಾಡುವುದಿಲ್ಲವೆಂದು ನನಗೂ ತಿಳಿದಿತ್ತು. ಅದಕ್ಕಾಗಿಯೇ ವಹಿವಾಟು ತೂಗಿಸಲು ವಹಿವಾಟಿನ ಪರಿಹಾರ ನಿಧಿ ಇಟ್ಟುಕೊಂಡು ಕೆಲಸ ಪ್ರಾರಂಭಿಸುವುದು. ಅದರಲ್ಲೂ ಆಸ್ಪತ್ರೆಗಳು ಲಾಭ ಕಾಣಲು ೨-೩ ವರ್ಷಗಳೆ ಹಿಡಿಯುತ್ತವೆ. ಇಂತಹದ್ದರಲ್ಲಿ ಇವನು ಮೂರು ತಿಂಗಳಿಗೆ ನಮ್ಮನ್ನು ಹಣಾ ಕೇಳುತ್ತಿದ್ದಾನಲ್ಲ. ಆ ಆಪರೇಟಿಂಗ್ ಫ಼ಂಡ್ ಇರಲಿಲ್ಲವೇ. ಎಂ.ಬಿ.ಏ ಮಾಡಿರುವ ಇವನಿಗೆ ಅಷ್ಟೂ ಗೊತ್ತಿಲ್ಲವೇ.

ಹೀಗೆ ಸಾವಿರ ಪ್ರಶ್ನೆಗಳು ನನ್ನ ಮನದ ಪಟಲದಲ್ಲಿ ಪದೇ ಪದೇ ಪಲ್ಟಿ ಹೊಡೆಯುತ್ತಿದ್ದವು.

ಕೇಳಿಯೇ ಬಿಡೋಣವೆಂದು ವಿಕ್ರಂಗೆ ಫೋನಾಯಿಸಿದೆ. ಹೀಗೇಕೆ ಮೂರು ತಿಂಗಳಿಗೆ ಹಣ ಮುಗಿಯಿತು. ಫ಼್ಂಡ್ ಇಟ್ಟುಕೊಂಡಲ್ಲವೇ ಕೆಲಸ ಮಾಡುವುದು ? ತೊಂದರೆಯೇನು ಕೇಳಿದೆ. ಖರ್ಚು ತನ್ನ ನಿರೀಕ್ಷೆ ಮೀರಿ ಬೆಳೆಯಿತೆಂದೂ, ಕೊನೆಯ ಕಂತಿನ ಸಾಲ ಬ್ಯಾಂಕ್ ಕೊಡಮಾಡಿಲ್ಲವೆಂದೂ, ಇದರಿಂದ ತೊಂದರೆ ಆಗಿದೆಯೆಂದೂ ಹೇಳಿ ಯಾವ ಭಯ ಪಡಬೇಕಾದ ಅಗತ್ಯ ಇಲ್ಲವೆಂದೂ, ಇನ್ನು ಕೆಲವೇ ತಿಂಗಳಲ್ಲಿ ಎಲ್ಲ ಸರಿ ತೂಗುವುದೆಂದೂ ಹೇಳಿದ. ತಾನು ಗಾಲ್ಫ್ ಆಡುತ್ತಿರುವುದರಿಂದ ಈಗ ಸಮಯ ಇಲ್ಲವೆಂದೂ ನಂತರ ಕರೆ ಮಾಡಬೇಕೆಂದೂ ಹೇಳಿ ಕರೆ ಕತ್ತರಿಸಿದ.

ನನ್ನ ಬಳಿ ಹಣ ಇರದ ಕಾರಣ ನಾನು ಕಳಿಸಲಿಲ್ಲ. ಕೆಲವರು ಕಳಿಸಿದರು. ನನ್ನಿಂದ ಹಣ ಬರದೇ ಇದ್ದುದರಿಂದ ಈ ಮೈಲ್ ಬಂತು. ನಾನು ಉತ್ತರಿಸಲಿಲ್ಲ. ವಿಕ್ರಂನ ಕಾಲ್ ಬಂತು. ನಾನು ನನ್ನಲ್ಲಿ ಇಲ್ಲವೆಂದೂ, ನನಗೆ ಕಷ್ಟಗಳಿರುವುದರಿಂದ ಆಗುವುದಿಲ್ಲವೆಂದೂ ಹೇಳಿದೆ.

ಮೂರು ತಿಂಗಳಿಗೊಮ್ಮೆ  ಅವನ ಬೇಡಿಕೆ ಬರುತ್ತಲೇ ಇತ್ತು.ಬೇರೆ ಅಸ್ಪತ್ರೆಗಳವರು ನಮ್ಮ ಆಸ್ಪತ್ರೆಯ ಕಾರ್ಯವೈಖರಿಗೂ ಹೆಚ್ಚುತ್ತಿರುವ ಜನಪ್ರಿಯತೆಗೂ ಅಕರ್ಷಿತರಾಗಿ, ಪೂರ್ತಿ ಅಸ್ಪತ್ರೆಯನ್ನೇ ಕೊಳ್ಳಲು/ಕಬಳಿಸಲು ಮುಂದೆ ಬರುತ್ತಿದ್ದಾರೆಂದೂ , ಆಸ್ತಿ ಇವತ್ತು ಏನಿಲ್ಲೆಂದರೂ ೮೦-೯೦ ಕೋಟಿಗೆ ಬಾಳುವುದೆಂದೂ ತಾನು ಯಾರಿಗೂ ಮಣೆ ಹಾಕುತ್ತಿಲ್ಲವೆಂದೂ ಬರೆದಿದ್ದ. ನಮಗೆಲ್ಲ ಹರುಷಮೂಡಿತು. .

*******

ನಾವು ಬುಕ್ ಮಾಡಿದ್ದ ಫ಼್ಲ್ಯಾಟುಗಳು ನಮ್ಮ ಸುಪರ್ದಿಗೆ ಬಂದವು. ಅವುಗಳನ್ನ ಸಜ್ಜು ಗೊಳಿಸಲು ನನ್ನಲ್ಲಿ ಹಣವಿರದೆ ಬರೀ ರಿಜಿಸ್ಟರ್ ಮಾಡಿಸಿ ಇಟ್ಟುಕೊಂಡೆ. ಕೆಲವರು ನಿಧಾನವಾಗಿ ಕೆಲಸ ನಡೆಸಿದರು ವಿಕ್ರಂನ ಫ಼್ಲ್ಯಾಟು ಸುಂದರವಾಗಿ ತಯಾರಯ್ತಂತೆ. ಒಳಗೆಲ್ಲ ಅಮೃತಶಿಲೆಯ ಹಾಸಂತೆ. ಒಳಾಂಗಣ ಕಣ್ಣು ಕೋರೈಸುವಂತಿತ್ತಂತೆ. ಗೃಹಪ್ರವೇಶವೂ ವಿಜೃಂಭಣೆಯಿಂದ ಆಯಿತಂತೆ. ವಿಕ್ರಂ ಗಾಲ್ಫ್, ಪಬ್, ಕ್ಲಬ್ ಇಲ್ಲೆಲ್ಲ ಸುತ್ತುತ್ತ ಆರಾಮವಾಗಿದ್ದಾನಂತೆ. ಆಸ್ಪತ್ರೆಯ ಹಣಕಾಸಿನ ಬವಣೆ ಅವನನ್ನು ವಿಚಲಿತಗೊಳಿಸಿಲ್ಲವಂತೆ. ಎಂದಿನಂತೆ  ತುಂಬು ಆತ್ಮವಿಶ್ವಾಸದಿಂದ ಇರುವನಂತೆ. ಕೆಲವು ಡಾಕ್ಟರುಗಳು ಆಸ್ಪತ್ರೆಯಿಂದ ಕೆಲಸ ಬಿಟ್ಟರಂತೆ ಮತ್ತೆ ಕೆಲವರು ಸೇರಿದ್ದಾರಂತೆ, ಬೆಳೆಯುತ್ತಿರುವ ಊರಿನಲ್ಲಿ ಇದೆಲ್ಲ ಸಾಮಾನ್ಯವಂತೆ. ನಮ್ಮ ಆಸ್ಪತ್ರೆಯಲ್ಲಾದ ಶಸ್ತ್ರಚಿಕಿತ್ಸೆಯ ವಿವರಗಳು ಪೇಪರಿನಲ್ಲಿ ಬಂದವಂತೆ. ಸುತ್ತ ಮುತ್ತ ಈ ಆಸ್ಪತ್ರೆಯ ಬಗೆಗೆ ಚರ್ಚೆಗಳಾಗುತ್ತಿವೆಯಂತೆ. ನನ್ನ ಸಹಪಾಠಿಯೊಬ್ಬ ಕೆಲಸ ಕೇಳಲು ಹೋಗಿದ್ದನಂತೆ. ವಿಕ್ರಂ ಅವನು ನಮಗೆ ಪರಿಚಯದವನು ಎಂಬ ಕಾರಣಕ್ಕೆ ಕೆಲಸ ಕೊಡಲು ಮುಂದಾದನಂತೆ, ಆದರೆ ಸಂಬಳದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಿಲ್ಲವಂತೆ. ಹಾಗಾಗಿ ಇವನು ಅಲ್ಲಿ ಕೆಲಸಕ್ಕೆ ಸೇರಲಿಲ್ಲವಂತೆ. ಶಿವಮೂರ್ತಿ ಡಾಕ್ಟರು ಕೆಲಸ ಬಿಡಲು ಸಿದ್ಧತೆ ನಡೆಸುತ್ತಿದ್ದಾರಂತೆ, ಅವರಿಗೆ ಅವರ ಊರಿನಲ್ಲೇ ಕೆಲಸ ಸಿಗಲಿದೆಯಂತೆ, ವಿಕ್ರಮನಿಗೆ ಅಸ್ಪತ್ರೆಯ ಕೆಲವು ಹೆಂಗಳೆಯರೊಡನೆ ಬಹಳ ಸಲಿಗೆಯಂತೆ, ಕೆಲವೊಮ್ಮೆ ಅವರ ಮಾತೇ ನಡೆಯುವುದಂತೆ, ಇದರಿಂದ ಕೆಲವರಿಗೆ ಬೇಸರವಾಗಿದೆಯಂತೆ, ಅವರಲ್ಲಿ ಶಿವಮೂರ್ತಿಯೂ ಒಬ್ಬರಂತೆ, ಈ ರೀತಿಯ ಊಹ ಪೋಹಗಳು ಎಲ್ಲಕಡೆಯೂ ಇರುತ್ತವಂತೆ. ಇದಕ್ಕೆಲ್ಲ ಯಾರೂ ಬೆಲೆಕೊಡ್ಬಾರ್ದಂತೆ, ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡಬೇಕಂತೆ. ಹೀಗೆ ಅಂತೆ ಕಂತೆಗಳ ಸರಮಾಲೆ ದೂರವಾಣಿಯ ಮೂಲಕವೂ, ಅಂತರ್ಜಾಲದ ಅಂತರಂಗವನ್ನು ಭೇದಿಸಿಯೂ ನಮ್ಮ ಬಳಿಗೆ ಬಂದು ಕೆಲವೊಮ್ಮೆ ಸಂತಸವನ್ನೂ ಕೆಲವೊಮ್ಮೆ ದುಗುಡವನ್ನು ಬಳುವಳಿಯಾಗಿ ಕೊಡುತ್ತಿದ್ದವು.

********************

ಇದನ್ನೆಲ್ಲ ಪ್ರಮಾಣಿಸಿ ನೋಡುವ ಅವಕಾಶ ನನಗೆ ಬಂದೇ ಬಿಟ್ಟಿತು. ನನ್ನ ತಂದೆಯ ಶ್ರಾದ್ಧಕ್ಕೆಂದು ನಾನು ಊರಿಗೆ ಹೋಗಿದ್ದೆ. ಹಾಗೇ ನಮ್ಮ ಆಸ್ಪತ್ರೆಯ ಕಡೆಗೂ ಹೋಗಿದ್ದೆ. ಎಲ್ಲ ಜಾಳು ಜಾಳಾಗಿ ಕಾಣುತ್ತಿತ್ತು. ಹೆಚ್ಚಿನ ಜನಸಂದಣಿ ಇರಲಿಲ್ಲ. ಒಳ ರೋಗಿಗಳಂತೂ ಇಬ್ಬರೇ ಇದ್ದರು. ಯಾವುದೋ ಒಂದು ಚಿಕ್ಕ ಆಪರೇಷನ್ ನಡೆಯುತ್ತಿತ್ತು. ವಿಕ್ರಂ ಸಿಕ್ಕಿದ. ಸಂಭ್ರಮವಾಗಲೀ, ಬೆಚ್ಚನೆಯ ಅನುಭವವಾಗಲೀ ಆಗಲಿಲ್ಲ. ಔಪಚಾರಿಕವಾಗಿ ಒಂದೆರೆಡು ಮಾತನಾಡಿದ ನಂತರ ತನ್ನ ಕೆಲಸದಲ್ಲಿ ಮುಳುಗಿದಂತೆ ನಟಿಸುತ್ತಿದ್ದ. ಅವನ ಈ ವರಸೆ ನನಗೆ ಹೊಸದಾಗಿತ್ತು. ಇನ್ನೊಬ್ಬ ವೈದ್ಯನಲ್ಲದ ಹೂಡಿಕೆದಾರ ಬರಲು ತಾನು ಅವರೊಟ್ಟಿಗೆ ಹೋಗಬೇಕಾಗಿದೆಯೆಂದು ಹೇಳಿ ನನ್ನಿಂದ ಕಳಚಿಕೊಂಡ.

ನನಗೆ ಕುಳಿತು ಬೇಸರವಾಯ್ತು. ಹಾಗೇ ಆಸ್ಪತ್ರೆಯ ಸುತ್ತ ಹೋಗಿಬಂದೆ. ಕೆಲಸಗಾರರೂ ಕಡಿಮೆ ಸಂಖ್ಯೆಯಲ್ಲಿದ್ದರು ,ಅವರಲ್ಲಿ ಯಾವ ಹುಮ್ಮಸ್ಸೂ ಇರಲಿಲ್ಲ. ಎಲ್ಲ ಪೇಲವವಾಗಿದೆ ಎನಿಸತೊಡಗಿ ಸೆಕ್ರೆಟರಿಗೆ ಶಿವಮೂರ್ತಿ ಇದ್ದಾರೆಯೇ ಕೇಳಿದೆ. ಇರುವರೆಂದೂ ನಾನು ಬಂದಿರುವುದನ್ನು ತಿಳಿಸುವೆನೆಂದೂ ಹೇಳಿ ಹೋದವಳು ಸ್ವಲ್ಪ ಹೊತ್ತಿನ ಬಳಿಕ ಬಂದು ಇನ್ನು ಐದು ನಿಮಿಷದಲ್ಲಿ ಬರುತ್ತಾರಂತೆ ಎಂದು ಹೋದಳು.

ಕೆಟ್ಟಸುದ್ದಿ ಬರುವುದನ್ನು ನನ್ನ ಮನಸ್ಸು ಶಕುನ ನುಡಿಯುತ್ತಿತ್ತು.

ಶಿವಮೂರ್ತಿ ನಮ್ಮಂತೆ, ಆದರೆ ನಮಗಿಂತ ಸ್ವಲ್ಪ ಹಿರಿಯ ವೈದ್ಯರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಕಾರಣ ಅವರ ಮಕ್ಕಳು ದೊಡ್ಡವರಿದ್ದರು. ಅವರು ಕೂಡ ಎಂ ಬಿ ಏ ಮಾಡಿ ತಮ್ಮ ಪ್ರಾಕ್ಟೀಸು ನಿಲ್ಲಿಸಿ ಈ ಆಸ್ಪತ್ರೆಯಲ್ಲಿ ಹಣ ಹೂಡಿ ಸಹ ನಿರ್ದೇಶಕರಾಗಿ ಹಾಗೂ ತಮ್ಮ ವಿಭಾಗದ ವೈದ್ಯಕೀಯ ಸೇವೆಗಳನ್ನು ನೋಡಿಕೊಳ್ಳುತ್ತಿದ್ದರು. ವಿಕ್ರಂ ಇಲ್ಲದಾಗ ಮೇಲ್ವಿಚಾರಣೆ ಇವರದ್ದೆ ಎಂದು ಹಿಂದೊಮ್ಮೆ ಈ ಮೇಲ್ ನಲ್ಲಿ ಸಂದೇಶ ಬಂದಿತ್ತು. ನಾನು ಒಂದೆರೆಡು ಬಾರಿ ಅವರೊಡನೆ ಊಟಕ್ಕೆ ಹೋದುದಿತ್ತು. ಹೊಸ ಪರಿಚಯವಾದರೂ ಒಂದು ಬಗೆಯ ಆತ್ಮೀಯತೆ ನಮ್ಮಲ್ಲಿತ್ತು. ನಾನು ವಿಕ್ರಮನಿಗೆ ಮೇಲಿನ ಹಣ ಕೊಡಲು ನಿರಾಕರಿಸಿದ್ದು ಅವರಿಗೆ ತಿಳಿದಿತ್ತು. ನಂಬಿಕೆ ಎನ್ನುವುದು ಕೆಲವೊಮ್ಮೆ ಚೆನ್ನಾಗಿ ಕೆಲಸ ಮಾಡಿದರೆ ಕೆಲವೊಮ್ಮೆ ಕೈಕೊಡುತ್ತದೆ. ಶಿವಮೂರ್ತಿ ನನಗೆ ಹೀಗೆ ಮೊದಲ ಭೇಟಿಯಲ್ಲಿ ಭರವಸೆ ಮೂಡಿಸಿದ ಮನುಷ್ಯ.

ಶಿವಮೂರ್ತಿ ಕೆಲಸ ಮುಗಿಸಿ ಬಂದರು. ಹಲೊ, ಹಾಯ್ ಗಳ ನಂತರ ಊಟ ಆಗಿದೆಯೇ ಎಂದು ಕೇಳಿ, ಇಲ್ಲವೆನ್ನಲು ಬನ್ನಿ ಹೋಗೋಣ ಎಂದು ಅವರ ಕಾರಿನಲ್ಲಿ ಹೋಟೆಲಿಗೆ ಕರೆದೊಯ್ದರು. ಒಂದು ಮೂಲೆ ಹಿಡಿದು ಕುಳಿತು ಊಟಕ್ಕೆಂದು ಆದೇಶ ಕೊಟ್ಟು ಹಾಗೆ ಉಭಯ ಕುಶಲೋಪರಿ ಮಾತಾಡಿದೆವು. ತಮ್ಮ ಮಕ್ಕಳ ಬಗ್ಗೆ, ಹುಶಾರಿಲ್ಲದ ತಮ್ಮ ತಂದೆಯ ಬಗ್ಗೆ ಹೇಳಿಕೊಂಡರು. ನಾನೂ ನನ್ನ ಕಷ್ಟ ಸುಖ ಹಂಚಿಕೊಂಡೆ. ಮಾತು ಕಡೆಗೆ ಆಸ್ಪತ್ರೆಯತ್ತ ಹೊರಳಿತು. ನಾನು ಗಮನಿಸಿದ ಅಂಶಗಳನ್ನು ಅವರಿಗೆ ಹೇಳಿದೆ. ಇದೇ ಮೊದಲ ಬಾರಿಗೆ ಉದ್ಘಾಟನೆಯ ನಂತರ ನಾನು ಆಸ್ಪತ್ರೆಗೆ ಭೇಟಿಕೊಟ್ಟಿದ್ದೆ. ಅವರು ಮೊದಲಿನಿಂದಲೂ ಆಸ್ಪತ್ರೆಯ ಕೆಲಸದ ಪರಿಮಾಣ ಅಷ್ಟೇ ಇದೆಯೆಂದೂ , ಸತತ ನಷ್ಟ ಅನುಭವಿಸುತ್ತಿದೆಯೆಂದೂ ಇದಾವುದೂ ಅವರಿಗೆ ಹೊಸ ವಿಷಯ ಅಲ್ಲವೆಂದೂ ಹೇಳಿದರು. ಮತ್ತೆ ಅವಾಕ್ಕಾಗುವ ಸರದಿ ನನ್ನದಾಗಿತ್ತು. ಆವರೇ ಮುಂದುವರಿದು ಹೇಳಿದರು. ರಾವ್, ಈ ಆಸ್ಪತ್ರೆಯೊಂದು ಮುಳುಗುವ ಹಡಗು,. ನಾವ್ಯಾರೂ ಅದರಿಂದ ತಪ್ಪಿಸಿಕೊಳ್ಳಲಾರೆವು. ಅದರೊಂದಿಗೆ ನಮ್ಮ ಹಣ ಕೂಡಾ ಮುಳುಗಲಿದೆ. ಇದರ ಆಸೆ ಬಿಟ್ಟು ನಿಮ್ಮ ಮುಂದಿನ ನಡೆಯನ್ನು ಗಂಭೀರವಾಗಿ ಆಲೋಚಿಸಿ ಎಂದು ನಿಷ್ಠುರವಾಗಿ ಹೇಳಿದರು. ಊಟ ಮಾಡುತ್ತಿದ್ದ ನನಗೆ ನೆತ್ತಿ ಹತ್ತಿ ಕೆಮ್ಮಿದೆ. ವಿಕ್ರಮ್ ನನ್ನು ಮೊದಲು ನೋಡಿದಾಗಾದ ಅನುಮಾನ ಇಂದು ನಿಜವಾಯ್ತೆನ್ನಿಸಿತು. ಆರ್ಥಿಕವಾಗಿ ಈ ಹೊಡೆತ ತಡೆದುಕೊಳ್ಳುವ ಶಕ್ತಿ ನನಗಿರಲಿಲ್ಲ; ಬೇರೆ ದಾರಿಗಳೂ ಇರಲಿಲ್ಲ. ಚಕ್ರವ್ಯೂಹಕ್ಕೆ ಹೊರಬರುವ ದಾರಿ ತಿಳಿಯದೆ ನುಗ್ಗಿದ ಅಭಿಮನ್ಯುವಿನಂತಾಗಿತ್ತು ನನ್ನ/ನಮ್ಮ ಸ್ಥಿತಿ.

ಈ ಆಘಾತ ನನ್ನೊಳಗಿಳಿದು, ತರಂಗಗಳನ್ನು ಸೃಷ್ಟಿಸಿ  ಮತ್ತೆ ತಿಳಿಯಾಗುವ ವರೆಗೆ ತಮ್ಮ ಊಟ ಮುಂದುವರಿಸಿದ ಶಿವಮೂರ್ತಿ ನಂತರದಲ್ಲಿ ಹೇಳಿದರು. ನೀವೇನೋ ಮುಗ್ಧರು, ವ್ಯವಹಾರ ಕುಶಲತೆ ಇಲ್ಲದವರು. ನೀವು ಮೋಸಹೋದಿರೆಂದರೆ ಅನುಕಂಪವಾದರೂ ಸಿಕ್ಕೀತು;ನಾನು ನೋಡಿ, ಎಮ್.ಬಿ.ಏ ಮಾಡಿ, ಸ್ವಂತಕ್ಕೆ ಪ್ರಾಕ್ಟೀಸೂ ಮಾಡಿ, ಹಲವು  ಆಸ್ಪತ್ರೆಗಳ ವ್ಯವಸ್ಥಾಪ್ರಬಂಧಕರ ಸಂಪರ್ಕ ಎಲ್ಲ ಇದ್ದೂ ಮೋಸದ ಹಳ್ಳಕ್ಕೆ ಬಿದ್ದೆ.  ನನ್ನಂಥ ಅನುಭವಸ್ಥ ಈ ಬಿಳೀ ಕಳ್ಳರ ಬಲಗೆ ಬಿದ್ದ ಮಿಕನಾದೆನೆಂದರೆ ನಾಚಿಕೆಗೇಡು ಅಲ್ಲವೇ. ನೀವು ಧೈರ್ಯ ತಂದುಕೊಳ್ಳಿ ಜೀವನ ಇಲ್ಲಿಗೇ ನಿಲ್ಲದು. ಒಳ್ಳೆಯ ದಿನಗಳೂ ಬರುತ್ತವೆ ಎಂದರು.

ಮೋಸದ ಹಳ್ಳ, ಬಿಳಿಕಳ್ಳ, ಇವೆಲ್ಲ ಏನು? ಎಷ್ಟೋ ಆ ಸ್ಪತ್ರೆಗಳು ಚೆನ್ನಾಗಿ ನಡೆಯುವಾಗ ಇದೇಕೆ ಹೀಗಾಯ್ತು? ನಾನು ಎಡವಿದ್ದೆಲ್ಲಿ? ಹೀಗೆ ನಾನಾ ಪ್ರಶ್ನೆಗಳು ಕುದಿಯುವ ನೀರಿನಿಂದೇಳುವ ಗುಳ್ಳೆಗಳಂತೆ ನನ್ನ ತಲೆಯೆಂಬೋ ಪಾತ್ರೆಯಲ್ಲಿನ ಮನಸ್ಸೆಂಬ ನೀರಿನಲ್ಲಿ ಪುಟಿದೇಳುತ್ತಿದ್ದವು. ನನ್ನ ಮೂಲಕ ಈ ಯೋಜನೆಯ ಭಾಗವಾದ ಮಿತ್ರರೊಂದಿಗಿನ ನನ್ನ ಸಂಬಂಧ ಏನಾಗುವುದೋ ಎಂಬ  ಆತಂಕ ಉಳಿದೆಲ್ಲ ಚಿಂತೆಗಳಿಗಿಂತ ಹೆಚ್ಚಿತ್ತು.ಅವರಿಗೆ ಮುಖ ತೋರಿಸಬಲ್ಲೆನೇ ಇಲ್ಲವೆ ಎನ್ನುವುದು ಕೂಡ ಸ್ಪಷ್ಟವಾಗಿರಲಿಲ್ಲ.ವಾಪಸ್ ಭಾರತಕ್ಕೆ ಬರುವ ನನ್ನ ಕಾರ್ಯಕ್ರಮಕ್ಕೆ ತಿಲಾಂಜಲಿ ಇಡಬೇಕಾಗಿತ್ತು. ಇದ್ದ ಜಾಗ ಉಢಾಳರ ಸಂತೆಯಾದರಿಂದ ಅಲ್ಲಿ ಹೆಚ್ಚು ದಿನ ಇರುವುದು ಸೂಕ್ತಕರವಾಗಿರಲಿಲ್ಲ. ಹೊಸಮನೆಗೆ, ಕೊಳ್ಳಲೂ ಅಥವ ಬಾಡಿಗೆ ಪಡೆಯಲು ಹೋದರೆ ಜೇಬಿಗೆ ಕತ್ತರಿ. ಚಿಂತೆಗಳು ಮಂಥನ ನಡೆಸಿದ್ದವು.

ಶಿವಮೂರ್ತಿ ಮೌನಮುರಿದು, ಸೂರ್ಯಕಾಂತನನ್ನು ಭೆಟ್ಟಿಮಾಡಿದ್ದಿರಾ ಎಂದರು. ಇಲ್ಲವೆಂದು ತಲೆಯಾಡಿಸಿ, ನನ್ನ ಮಿತ್ರನಿಂದ ತಿಳಿದಷ್ಟು ಹೇಳಿದೆ. ನಮ್ಮಾಸ್ಪತ್ರೆಯ ಷೇರುದಾರರ ಪಟ್ಟಿಯನ್ನು ಗಮನಿಸಿದ್ದೀರ- ಹೌದೆಂದೆ. ಅದರ ವೈಶಿಷ್ಟ್ಯ ನೋಡಿದ್ದೀರಾ? ಇಲ್ಲವೆಂದೆ. ತಮ್ಮ ಜೇಬಿನಿಂದ ಉದ್ದನೆ ಪಟ್ಟಿತೆಗೆದು ತೋರಿಸುತ್ತ ಹೇಳಿದರು. ಇಲ್ಲಿರುವವರಲ್ಲಿ, ೩ ಜನ ವೈದ್ಯರು ಮಾತ್ರ ಸಧ್ಯಕ್ಕೆ ಭಾರತದಲ್ಲಿರುವುದು. ಉಳಿದ ವೈದ್ಯರೆಲ್ಲ ವಿದೇಶದಲ್ಲಿರುವವರು. ಇಲ್ಲಿನ ಅಗು ಹೋಗುಗಳು ಸಂಪೂರ್ಣ ವಿಕ್ರಮನ ಕೈಯಲ್ಲಿ, ಅವನು ಹೇಳಿದ್ದು ಮಾತ್ರ ನಿಮ್ಮ ಕಿವಿಯಲ್ಲಿ. ಬಹುತೇಕ ವೈದ್ಯರು ವ್ಯವಹಾರಕುಶಲತೆ ಇಲ್ಲದವರು. ಅವನು ಹೇಳಿದ್ದನ್ನು ಸುಲಭವಾಗಿ ನಂಬುತ್ತಾರೆ. ಇನ್ನು ಉಳಿದವರು ವೈದ್ಯರಲ್ಲದವರು ಅವನ ಬಂಧುಗಳು ಇಲ್ಲ ಅವನ ಪಂಗಡದವರು. ಅವರಿಗೆಲ್ಲ, ಹಣಕಾಸಿನ ಮುಗ್ಗಟ್ಟು ಮುಂದೆ ಮಾಡಿ, ಕಡೆಯಲ್ಲಿ ಬಂದರೂ, ಕಡೆಮೆ ಬೆಲೆಗೆ ಷೇರು ಕೊಟ್ಟಿದ್ದಾನೆ. ಈ ಆಸ್ಪತ್ರೆಯ ಎಲ್ಲ ಸಹ ಗುತ್ತಿಗೆಗಳನ್ನೂ ಅವರುಗಳಿಗೇ ಬಿಟ್ಟಿದ್ದಾನೆ. ಆ ಕಾರಣದಿಂದ ತನ್ನ ಫ಼್ಲಾಟನ್ನು ಸಜ್ಜುಗೊಳಿಸಿಕೊಂಡಿದ್ದಾನೆ. ಇವೆಲ್ಲ ಸ್ವಕಾರ್ಯಗಳು ಸ್ವಾಮಿ ಕಾರ್ಯದ ಜೊತೆಗೆ ಸೇರಿಹೋಗಿವೆ. ನಾನು ಇಲ್ಲಿ ಹೂಡಿಕೆ ಮಾಡಿದ ಕಾರಣಕ್ಕೆ ನನಗೆ ಉಪನಿರ್ದೇಶಕ ಕೆಲಸಕ್ಕೇನೋ ತೆಗೆದುಕೊಂಡ. ಬಹಳ ಬೇಗ ನಾನು ಹರಕೆಯ ಕುರಿ ಅಲ್ಲವೆಂದು ತಿಳಿದು, ನನ್ನಿಂದ ಒಂದೊಂದೇ ಅಧಿಕಾರ ವಾಪಸ್ ಪಡೆದ. ಈಗ ಕತ್ತೆ ಕೆಲಸಕ್ಕೆ ನಾನು, ಶೋಕಿಗೆಲ್ಲ ಅವನು ಅಂತಾಗಿದೆ. ತನ್ನ ಮೋಜು ಮಸ್ತಿ, ಸುತ್ತಾಟ ಇವೆಲ್ಲ ಚೆನ್ನಾಗಿ ನಡೆಸಿಕೊಂಡು ಯಾರ ಕಾಸಿನಲ್ಲೊ ಯೆಲ್ಲಮ್ಮನ ಜಾತ್ರೆ ಮಾಡುತ್ತಿದ್ದಾನೆ.

ನಿಮಗೆ ಇನ್ನೊಂದು ವಿಚಾರ ಗೊತ್ತೆ, ಈ ಆಸ್ಪತ್ರೆಯಲ್ಲಿ ಯಾವ ನುರಿತ ವೈದ್ಯರೂ ಇಲ್ಲ. ಬಂದವರನ್ನು ಸರಿಯಾಗಿ ಕಾಣದೆ ಅಥವಾ ಅವರಿಗೆ ಸಂಬಳದಲ್ಲಿ ಏರು ಪೇರು ಮಾಡಿ ಸ್ವಲ್ಪದಿನಕ್ಕೇ ಹೊರದೂಡುತ್ತಾನೆ. ಸ್ವಾಭಿಮಾನವಿರುವ ಅಥವಾ ತಮ್ಮ ಕೌಶಲ್ಯದ ಮೇಲೆ ವಿಶ್ವಾಸ ಇರುವ ಯಾವನೂ ಇವನ ಬಳಿ ಕೆಲಸ ಮಾಡಲಾರ. ನಿರಂಕುಶ ಮನೋಧರ್ಮ ಇವನದು. ಹಾಗಾಗಿ ಆಸ್ಪತ್ರಯಲ್ಲಿ ಒಳರೋಗಿಗಳೂ , ಹೊರರೋಗಿಗಳು ಬೆರಳೆಣಿಕೆಯಷ್ಟು ಮಾತ್ರವೆ. ನೀವು ಇಲ್ಲಿಗೆ ಬರುವ ಯೋಚನೆ ಬಿಡಿ, ನಾನು ಕೂಡ ಬೇರೆ ಕೆಲಸ ನೋಡಿದ್ದೇನೆ. ಇಷ್ಟರಲ್ಲೆ ಬಿಡುತ್ತೇನೆ. ನನಗೂ ೨ ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂದರು.

ಹಾಗಾದರೆ ಅವನು ಕಳಿಸಿದ ಅಂಕಿ ಅಂಶಗಳೆಲ್ಲ ಸುಳ್ಳೆ?

ಎಲ್ಲ ಬೋಗಸ್. ತಾನೆ ಸೃಷ್ಟಿಸಿ ಕಳಿಸಿದವು. ಹಾಗೆ ಹೇಳಿದರೆ ತಾನೇ ನಂಬಿಕೆ ಬಂದು ಎಲ್ಲರೂ ಹಣ ಕಳಿಸುವುದು. ಪೂರ್ತಿ ಕೆರೆದು ನಂತರ ಈ ಯೋಜನೆಯನ್ನು ಮುಗಿಸುವುದು ಅವನ ಹುನ್ನಾರ ಎಂದರು.

ತನ್ನ ಕನಸಿನ ಆಸ್ಪತ್ರೆಯನ್ನು ತಾನೇ ಕೊಲ್ಲುವುದೇ? ತಾಯಿಯೇ ಮಗುವನ್ನು ಕೊಲ್ಲುವಂಥ ಇದೆಂಥ ವ್ಯವಹಾರ? ತಿಳಿಯದೆ ತತ್ತರಿಸಿದೆ.

ನೋಡಿ ರಾವ್, ಈ ಯೊಜನೆಯ  ಮೊದಲ ವರದಿಯನ್ನು ಆಸ್ಪತ್ರೆಯ ಚಮರಗೀತೆಯೊಂದಿಗೆ ಶುರು ಮಾಡಿದ್ದಾನೆ. ನಮ್ಮನ್ನು ಹಿಡಿಯಲು ಸೂರ್ಯಕಾಂತ್ ಅವನಿಗೆ ಗಾಳದ ಹುಳು ಅಷ್ಟೆ. ಅವರನ್ನು ಉಪಯೋಗಿಸಿ ವೈದ್ಯರ ಬೇಟೆ ಆಡಿದ. ಅವರನ್ನು ನಂಬಿ ಬಹಳ ಜನ ಬಂದರಷ್ಟೆ. ಅವರಿಗೆಲ್ಲ ತನ ಮನಬಂದಷ್ಟು ಬೆಲೆಗೆ ಷೇರು ಮಾರಿದ. ತನಗಾಗಿ, ತನ್ನ ಹೂಡಿಕೆ ಕಡಿಮೆಯಿದ್ದರೂ ಶೇ.೩೫ ಭಾಗ ಇಟ್ಟುಕೊಂಡ, ಅನಂತರ ಬಂದ ತನ್ನವರಿಗೆ ಕಡಿಮೆ ಬೆಲೆಯಲ್ಲಿ ಶೇರು ಕೊಟ್ಟಿದ್ದಾನೆ. ಅವರಲ್ಲಿ ಬಹಳಷ್ಟು ಅವರಿಗೆ ಕೊಡಬೇಕಾಗಿದ್ದ ಬಾಕಿ ಹಣ – ಕಬ್ಬಿಣಾ ಸಿಮೆಂಟ್, ಗಾಜು ಮುಂತಾದ ಸಾಮಗ್ರಿಗಳ ವ್ಯಾಪಾರಿಗಳು. ಇನ್ನು ಅಸ್ಪತ್ರೆಯ ಕ್ಯಾಂಟೀನು, ಫಾರ್ಮಸಿ, ಗುತ್ತಿಗೆ ಕೆಲಸದವರನ್ನು ಪೂರೈಸುವ ಸಂಸ್ಥೆ, ಕ್ಲೀನಿಂಗ್, ಡ್ರೈವರುಗಳು ಇವರೆಲ್ಲರನ್ನು ಅವನ ಪಂಗಡದ ಜನರೇ ಒದಗಿಸುವುದು ಮತ್ತು ಇವನು ಅವರಿಗೆ ನಮ್ಮ ಹಣ ವಿಲೇವಾರಿ ಮಾಡುವುದು. ಇವನ ಕಮೀಷನ್ ಅದರಲ್ಲೆ ಅಡಗಿರುತ್ತದೆ. ಇದರ ಲೆಕ್ಕ ಪೂರ್ತಿ ಭೇದಿಸುವುದು ಆ  ಚಿತ್ರಗುಪ್ತನಿಗೂ ಸಾಧ್ಯವಾಗದು.

ಇದರಲ್ಲಿ ತಾನು ಗುಳುಂ ಮಾಡಿದ ಮೊತ್ತವೆಷ್ಟೋ ತಿಳಿದವರಾರು.ಈ ಎಲ್ಲ ವ್ಯವಹಾರಗಳು ಮೇಲುನೋಟಕ್ಕೆ ಅಸಹಜವಾಗಿ ಕಾಣುವುದಿಲ್ಲ. ಅದರೆ ಒಳ ಒಪ್ಪಂದಗಳು ಅವರವರ ನಡುವೆ ಬೇರೆಯೇ ಇವೆ. ಇದು ಸೂರ್ಯಕಾಂತ್ ಗೆ ಸ್ವಲ್ಪ ಮುಂಚೆಯೇ ತಿಳಿಯಿತು. ಅವರೇ ಹೇಳಿದಂತೆ, ಒಂದು ದಿನ ಅಕಸ್ಮಾತಾಗಿ ಅವರು ವಿಕ್ರಮನ ಆಫೀಸಿಗೆ ಹೋದರಂತೆ. ಆಲ್ಲಿ ಅವನ ಪರ್ಸನಲ್ ಲ್ಯಾಪ್ ಟಾಪ್ ಇಟ್ಟು ಇವನು ಎಲ್ಲೋ ಹೋಗಿದ್ದನಂತೆ. ಗಡಿಬಿಡಿಯಲ್ಲಿ ಆಫ್ ಮಾಡಿರಲಿಲ್ಲವಂತೆ. ಹಾಗೆಯೇ ಕಣ್ಣಾಡಿಸಿದ ಅವರಿಗೆ ಕೆಲವು ಇಮೈಲ್ ಗಳೂ, ಈ ಅಂಕಿ ಅಂಶಗಳೂ ಕಂಡು ಕುತೂಹಲದಿಂದ ತಮ್ಮ ಮೆಮೋರಿ ಸ್ಟಿಕ್ಕಿಗೆ ವರ್ಗಾಯಿಸಿಕೊಂಡು ಮನೆಗೆ ಹೋಗಿ ಕೂಲಂಕುಶವಾಗಿ ನೋಡಿದಾಗ ಅವರಿಗೆ ಹೃದಯದ ಬಡಿತವೇ ನಿಂತಂತಾಯಿತಂತೆ. ಸಾವರಿಸಿಕೊಂಡು ಸ್ವಲ್ಪ ದಿನಗಳ ನಂತರ ಲೆಕ್ಕ ಪತ್ರಗಳನ್ನು ವಿವರಿಸಲು ಕೇಳಿದರಂತೆ. ಆಗ ಇವನು ಕೆಟ್ಟದಾಗಿ ಮಾತನಾಡಿದನಂತೆ. ಇದಾದ ನಂತರವೇ  ಅವರೊಡನೆ ಶಸ್ತ್ರಚಿಕಿತ್ಸೆಯ ರೂಪು ರೇಷೆಗಳನ್ನು ಚರ್ಚಿಸುವ ನೆಪದಲ್ಲಿ ಜಗಳ ತೆಗೆದು, ಯಾವುದಕ್ಕೂ ರಾಜಿಯಾಗದೆ ಅವರನ್ನು ಹೊರ ಹಾಕಿದ್ದು. ಅಂದಲ್ಲದಿದ್ದರೆ ಮುಂದೊಂದುದಿನ ಅವರನ್ನು ಹೊರ ಹಾಕೇ ಹಾಕುತ್ತಿದ್ದ. ಆ ವಿಚಾರ ಬೇರೆ ಬಿಡಿ. ಅದೇ ದಿನ ಆವರ ಲ್ಯಾಪ್ ಟಾಪೂ ಕಳೆದುಹೋಯ್ತಂತೆ!! ಹಾಗಾಗಿ ಪುರಾವೆಗಳು ಇಲ್ಲವಾಯ್ತಂತೆ. ಅದೇ ಕಾರಣಕ್ಕೆ ಅವರು ಯಾರಿಗೂ ಹೆಚ್ಚಿನ ವಿವರ ಹೇಳಿಲ್ಲ. ನನ್ನ ಬಳಿ ಮಾತ್ರ ವಿವರಿಸಿ, ನಾನು ಆಸ್ಪತ್ರೆಯ ಉಪನಿರ್ದೇಶಕನಾಗಿರುವುದರಿಂದ ಇವನ ಮೋಸದ ಲೇವಾದೇವಿಯಲ್ಲಿ ನನ್ನನ್ನು ಸಿಕ್ಕಿಹಾಕಿಸುವ ಸಾಧ್ಯತೆ ಇರುವುದರಿಂದ ದೂರ ಉಳಿಯಲು ಸೂಚಿಸಿ ವಿವರಿಸಿದರು. ನೀವುಗಳು ಅಲ್ಲಿರುವುದರಿಂದ ಹಾಗು ಈ ಬಗ್ಗೆ ಅಸಹಾಯಕರಾಗಿರುವುದರಿಂದ ಸುಮ್ಮನೆ ನಿಮ್ಮ ನೆಮ್ಮದಿ ಕೆಡಿಸಬಾರದೆಂದು ಅವರು ಮೌನಕ್ಕೆ ಶರಣಾಗಿದ್ದಷ್ಟೆ ಎಂದರು

ಬೇಲಿಯೆ ಎದ್ದು ಹೊಲ ಮೇಯ್ದಂತಾಯ್ತಲ್ಲ. ಇವನು ಹೀಗೆ ಮಾಡುವ ಹಿಂದಿನ ಉದ್ದೇಶವಾದರೂ ಏನು?  ಕೇಳಿದೆ.

ನೀವು ಈ ಯೋಜನೆಯ ದೀರ್ಘ ವರದಿಯನ್ನು ಕೂಲಂಕುಶವಾಗಿ ಓದಿದ್ದೀರಾ? ಕೇಳಿದರು. ಹೌದೆಂದೆ.

ಎಲ್ಲ ಅರ್ಥವಾಗಿದೆಯೋ? ಕೇಳಿದರು

ತಿಳಿದಷ್ಟುಮಟ್ಟಿಗೆ ಅಂತ ಹೇಳಿದೆ

ಹಾಗಾದರೆ ಈ ಯೋಜನೆಯಲ್ಲಿ ನಾವು ಯಾವ ಯಾವ ಆಸ್ಥಿಗೆ ಒಡೆಯರು ಹೇಳಬಲ್ಲಿರಾ? ಕೇಳಿದರು.

ಆಸ್ಪತ್ರೆಯ ಕಟ್ಟಡ, ಅದರ ಒಳ ವಿನ್ಯಾಸ, ಉಪಕರಣಗಳು ಇತ್ಯಾದಿ, ಭೂಮಿಯೊಂದನ್ನು ಬಿಟ್ಟು ಎಲ್ಲ ನಮ್ಮ ಕಂಪನಿಯದೇ..  ಹಾಗೆಂದು ವಿಕ್ರಮನೇ ವಿವರಿಸಿದ್ದ.ನಾನೆಂದೆ.

ಅಲ್ಲೇ ಒಳಗಿನ ಗುಟ್ಟು ಇರುವುದು. ಅವನು ಉಂಡೂ ಹೋದ-ಕೊಂಡೂ ಹೋದ; ಜೊತೆಗೆ ನಮ್ಮನ್ನು ಆರ್ಥಿಕವಾಗಿ ಕೊಂದೂ ಹೋಗುವ ಕೆಲಸವನ್ನು ವ್ಯವಸ್ಥಿತವಾಗಿ ಸಂಚು ರೂಪಿಸಿ ಮಾಡುತ್ತಿದ್ದಾನೆ.

ಈಗ ನೋಡಿ, ಈ ಒಕ್ಕಣೆಯನ್ನು. ಇದನ್ನು ಬಹಳ ಜಾಣತನದಿಂದ ಬರೆಸಿದ್ದಾನೆ. ಮೇಲುನೋಟಕ್ಕೆ ಈ ಅಸ್ಪತ್ರೆಯ ಕಟ್ಟಡ ನಮ್ಮ ಕಂಪನಿಯದೆಂದು ಅನಿಸಿದರೂ, ಅದನ್ನು ಗಹನವಾಗಿ ಓದಿದರೆ ಅದು ಧರ್ಮದತ್ತಿ ಸಂಸ್ತೆಗೆ ಸೇರಿದ ಸ್ವತ್ತಾಗಿದೆ. ಅದರ ಮೇಲೆ ನಮಗಾವುದೇ ಹಕ್ಕಿಲ್ಲ. ಪೂರ್ಣ ಸ್ವಾಮ್ಯ ಟ್ರಸ್ಟಿಗಳದ್ದು- ಅಂದರೆ ಅವನ ಅಮ್ಮ, ಅಕ್ಕ,ಭಾವ, ಹೆಂಡತಿ ಹೀಗೆ. ಬ್ಯಾಂಕಿನಿಂದ ತೆಗೆದ ಸಾಲ ಕಂಪನಿಯ ಹೆಸರಲ್ಲಿ. ಅಂದರೆ ನಾವು ಆ ಸಾಲಕ್ಕೆ ಬಾಧ್ಯರು- ವೈಯಕ್ತಿಕವಾಗಿ ಅಲ್ಲ ಆದರೆ ಸಂಸ್ಥೆಯ ಮೂಲಕ. ಈಗ ೪ ತಿಂಗಳಿಂದ ಅವನೇ ಹೇಳಿದಂತೆ ಬ್ಯಾಂಕಿಗೆ ಹಣ ಸಂದಾಯ ಮಾಡಿಲ್ಲ. ಅವರು ಬಂದರೆ ನಮ್ಮ ಕಂಪನಿಗೆ ಸೇರಿರುವ ಒಳಾಂಗಣದ ವಸ್ತುಗಳನ್ನು ಕೊಂಡೊಯ್ದು ಹರಾಜು ಹಾಕಬಹುದೇ ವಿನಹ ಕಟ್ಟಡವನ್ನು ಮುಟ್ಟುವಂತೆ ಇಲ್ಲ. ಸ್ವಲ್ಪದಿನದಲ್ಲಿ ಸಾಲ ಕಟ್ಟದೆ ನಮ್ಮ ಕಂಪನಿ ದಿವಾಳಿಯಾಗುತ್ತದೆ. ಅವರ ಪಾಲಿನ ಕಟ್ಟಡ  ಸುರಕ್ಷಿತ ಆದರೆ ನಮ್ಮ ಪಾಲಿನದೆಲ್ಲ ನೀರಿನಲ್ಲಿ ಹೋಮ.ಅವನು ಹಾಕಿರುವುದಕ್ಕಿಂತ ಹೆಚ್ಚು ಈಗಾಗಲೇ ಕಮೀಷನ್, ಕಳ್ಳಲೆಕ್ಖ ಇತ್ಯಾದಿಗಳಿಂದ ಇಲ್ಲಿಂದ ದೋಚಿಕೊಂಡಿದ್ದಾನೆ ಹಾಗಾಗಿ ಅವನಿಗೆ ವೈಯಕಿಕವಾಗಿ ಯಾವ ನಷ್ಟವಿಲ್ಲ.

ನಾನು ಒಂದು ಗ್ಲಾಸು ನೀರು ಗಟಗಟನೆ ಕುಡಿದು ಈ ವಿಚಾರವನ್ನು ಗಂಟಲಲ್ಲಿ ಇಳಿಸಿಕೊಂಡೆ.

ಹಾಗಾದರೆ ಇದನ್ನು ನಡೆಸಲು ನಮ್ಮ ಹಣಸಹಾಯ ಯಾಕೆ ಕೇಳುತ್ತಿದ್ದಾನೆ. ತಾನು ಎಲ್ಲ ಖರ್ಚು ವೆಚ್ಚ ಸರಿತೂಗಿಸಲು ಹೆಣಗಾಡುತ್ತಿದ್ದೇನೆಂದು ಬರೆದಿದ್ದಾನಲ್ಲ? ಕೇಳಿದೆ.

ಪ್ರಪಂಚದ ಕಣ್ಣಿಗೆ ಮಣ್ಣೆರೆಚುವ ಕೆಲಸ ಅಷ್ಟೆ. ಯಾರಿಗೂ ಇದು ಮೋಸದ ಯೋಜನೆ ಎಂದು ಅನುಮಾನ ಬರಬಾರದು. ಕೆಲಸ ನಡೆಯುತ್ತಿರಬೇಕು, ನಷ್ಟ ಆಗುತ್ತಿರಬೇಕು. ನಾವು ಮೇಲಿಂದ ಮೇಲೆ ಕಳಿಸುವವರೆಗೆ ನಡೆಸುತ್ತಾನೆ. ಅವರಪ್ಪನ ಗಂಟೇನೂ ಹೋಗುವುದಿಲ್ಲವಲ್ಲ. ನಾವು ಕೊಡುವುದನ್ನು ನಿಲ್ಲಿಸಿದಾಗ, ಹೂಡಿಕೆದಾರರ ಸಹಕಾರ ಇಲ್ಲ, ಹಣಕಾಸಿನ ಮುಗ್ಗಟ್ಟು ಬಹಳ ಎಂದು ಹೇಳುತ್ತಾನೆ. ಬ್ಯಾಂಕಿನವರು ಬಂದು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ , ಉಳಿದದ್ದನ್ನು ಕೆಟ್ಟಾ ಸಾಲ ಎಂದು ಈ ವ್ಯವಹಾರವನ್ನು ಮುಗಿಸುತ್ತಾರೆ. ನಾವು ಇದ್ದದ್ದೆಲ್ಲ ಕಳೆದುಕೊಂಡು ಇವನ ಅನ್ಯಾಯ ಸಾಬೀತಾದರೂ ಹೋರಾಡಲು ಶಕ್ತಿಯಿಲ್ಲದೆ ನೆಲ ಕಚ್ಚಿರುತ್ತೇವೆ,. ಅದೇ ಕಾರಣಕ್ಕೆ ಭರವೆಸೆ ಹುಟ್ಟಿಸಿ ಹಣ ಕೀಳುತ್ತಿದ್ದಾನೆ. ನೀವು ನಿಮ್ಮ ಸ್ನೇಹಿತರಿಗೆ ದಯವಿಟ್ಟು ಇದನ್ನು ಮನದಟ್ಟು ಮಾಡಿ. ಹಾಗೇ ಮುಂದುವರಿದು, ಆನಂತರದಲ್ಲಿ, ತಾವೇ ಇನ್ನೊಂದು ಹೊಸ ಕಂಪನಿ ಕಟ್ಟುತ್ತಾರೆ. ಈಗ ಆಸ್ಪತ್ರೆ ಕಟ್ಟಡ  ಸಂಪೂರ್ಣವಾಗಿ ಅವರದ್ದೆ . ಬ್ಯಾಂಕಿನವರು ಸಾಲದ ಮುಟ್ಟುಗೋಲಿಗೆ ಕೊಂಡೊಯ್ದ ಒಳವಿನ್ಯಾಸಕ್ಕೆ ಹೆಚ್ಚಿನ ಖರ್ಚು ಬರುವುದಿಲ್ಲ. ಈಗ  ಅವನು ಯಾರಿಗೂ ಉತ್ತರದಾಯತ್ವನಲ್ಲ. ನಾವು ನೀವು ಮಂಗಗಳಂತೆ  ನೋಡಬಲ್ಲೆವಷ್ಟೆ. ಅವನ ಎಲ್ಲಾ ಹುನ್ನಾರವೂ ಸಂಪೂರ್ಣ ಕಾನೂನುಬದ್ಧವೇ. ಅದಕ್ಕೆಂದೇ ನಾನು ಅವರನ್ನು ಬಿಳೀ ಕಳ್ಳರೆಂದು ಅಂದಿದ್ದು. ನನ್ನ ತಲೆ ಗಿರ್ರೆಂದಿತು.

ಅವರನ್ನು ಬೀಳ್ಕೊಟ್ಟು ನನ್ನ ಕಾರಿನಲ್ಲಿ ಕುಳಿತು ಮನೆ ಕಡೆ ಹೊರಟೆ.

‘ಬಾ ನೊಣವೆ ಬಾ ನೊಣವೆ ಬಾ ನನ್ನ ಮನೆಗೆ

ಬಾನಿನೊಳು ಹಾರಿ ಬಲು ದಣಿವಾಯ್ತು ನಿನಗೆ’

ಪಂಜೆ ಮಂಗೇಶರಾಯರ ಈ ಪದ್ಯದಲ್ಲಿ  ಜೇಡವೊಂದು ಸುಂದರ ಬಲೆ ನೇಯ್ದು, ನೊಣವೊಂದನ್ನು ಹೊಗಳಿ ಆಹ್ವಾನಿಸುತ್ತದೆ , ಅದಕ್ಕೆ ಬೋಳು ತಲೆ ನೊಣ ಉಬ್ಬಿ ಬಲೆಯಲ್ಲಿ ಬಿದ್ದು ಜೇಡನ ಕೈಗೆ ಸಿಕ್ಕು ಅದಕ್ಕೆ ಆಹಾರ ವಾಗುತ್ತದೆ.

ನನ್ನಮ್ಮ ಚಿಕ್ಕವನಿದ್ದ್ದಾಗ ಇದನ್ನು ಹೇಳಿ, ಕಲಿಸಿ, ಅರ್ಥವತ್ತಾ ಗಿ ವಿವರಿಸಿದ್ದಳು. ನಾನು ಅದರಿಂದ ಪಾಠ ಕಲಿಯಲಿಲ್ಲ. ಮುಂದೆ ನಡೆದಿದ್ದು ಶಿವಮೂರ್ತಿಯ ಭವಿಷ್ಯವಾಣಿಗಿಂತ ಬೇರೆ ಆಗಿರಲಿಲ್ಲ!!!

5 thoughts on “ಜೇಡರ ಬಲೆ

  1. ಎಂದಿನಂತೆ ಸುದರ್ಶನ ಅವರ ಕಥೆ ಎಲ್ಲೂ ತಡವರಿಸದೆ ಲೀಲಾಜಾಲವಾಗಿ ಓದಿಸಿಕೊಂಡು ಹೋಗುತ್ತದೆ. ಇದು ಕಥೆಯಾದರೂ ಸುಮಾರು ಓದುಗರಿಗೆ ತಮ್ಮ ಜೀವನದಲ್ಲಿ ಒಂದಲ್ಲ ಒಂದು ರೀತಿ ಮೋಸಗಾರರ ಬಲೆಯ ಅನುಭವದ ಕಹಿ ಪರಿಚಯ ಆಗಿರುತ್ತದೆ. ಜೇಡರ ಬಲೆಗೆ ಬಿದ್ದ ನೊಣವಾಗಲೀ ಗಾಳಕ್ಕೆ ಸಿಕ್ಕ ಮೀನಾಗಲೀ ಆಗುವುದು ಬೇಡ. ಸೊಗಸಾದ ಕಥೆ – ಸುದರ್ಶನರವರಿಗೆ ಅಭಿನಂದನೆಗಳು

    Like

  2. ನಿಜಕ್ಕೂ ಒಂದು ಸುಂದರ ಕತೆ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.ಎಷ್ಟು ಚೆನ್ನಾಗಿ ಯಾಮಾರಿಸಿ ಬಿಟ್ಟನಲ್ಲ ಆ ವಿಕ್ರಂ!! ಜೇಡರ ಬಲೆಯಲ್ಲಿ. ಸಿಕ್ಕಿಕೊಂಡ ಕೀಟ. ಹೊರಗೆ ಬರಲು ಕಷ್ಟ ಎಂಬುದನ್ನು ತುಂಬಾ ಚೆನ್ನಾಗಿ ಬಿಂಬಸಿದ್ದಾರೆ.ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವ ನೊಣಗಳಿರುವ ವರೆಗೂ ಬಲೆ ಹೆಣೇಯುವ ಜೇಡಗಳಿದ್ದೇ ಇರುತ್ತವೆ ಇಲ್ಲಿ ಈಸಬೇಕಾದರೆ ಮೈ ತುಂಬ ಎಚ್ಚರ ಎಂಬ ಸಂದೇಶ .ಎಚ್ಚರಿಕೆ ಗಂಟೆ ಎಂದರೂ ತಪ್ಪಲ್ಲ.ನಿಜವಾಗಿಯೂ ಈ ಪ್ರಯತ್ನ ಸ್ತುತ್ಯ. ಸುದರ್ಶನ ಅವರೇ ಅಭಿನಂದನೆಗಳು
    ಸರೋಜಿನಿ ಪಡಸಲಗಿ

    Like

  3. ಸುಂದರವಾದ ಕಥೆ. ಸದರಿ ಬಿಬಿಸಿ ಯಲ್ಲಿ ಬರುತ್ತಿರುವ Follow the Money ಸರಣಿಯ ಜಾಡು ಇದಕ್ಕಿದೆ. ಯಾವುದು ನಿಜ, ಯಾವುದು ಭ್ರಮೆ? ದೂರದೂರಿಂದ ಕನಸುಗಳ ಏಣಿಯೇರಿ ಫಕ್ಕನೆ ಹಣ ಮಾಡುವ ಮಾನವನ ಆಸೆಯ ಮೀನಿಗೆ ವಿಕ್ರಮನಂಥ ಜನ ಗಾಳ ಹಾಕುತ್ತಲೇ ಇರುತ್ತಾರೆ, ನಾವು ಬಲೆಗೆ ಬೀಳುತ್ತಲೇ ಇರುತ್ತೇವೆ.

    Liked by 1 person

  4. ಎಂದಿನಂತೆ ಸುದರ್ಶನ್ ಓದುಗರನ್ನು ಲೀಲಾಜಾಲವಾಗಿ ಓದಿಸಿಕೊಂಡುಹೋಗಿದ್ದಾರೆ. ಇಂದಿನ ಸಮಾಜದ ಬಿಳಿಯ ಕಳ್ಳರ ಬಗ್ಗೆ ಉತ್ತಮ ಮಾಹಿತಿ ಇದೆ. ಮೋಸಮಾಡಲು ಸ್ನೇಹಿತರಿಗಿಂತ ಉತ್ತಮವಾದ ಮಿಕಗಳು ಬೇರೊಬ್ಬರಿಲ್ಲ. ಒಮ್ಮೆ ಅದರ ಬಲೆಯಲ್ಲಿ ಸಿಕ್ಕರೆಂದರೆ, ಹೊರಬರುವ ಸಾಧ್ಯತೆಗಳು ತೀರಾ ಕಡಿಮೆ. ಅದು ಆಸ್ಪತ್ರೆಯ ವ್ಯವಹಾರವೇ ಆಗಲಿ, ಅದರಲ್ಲಿ ಇರುವವರು ವೈದ್ಯರಾದರೂ ಅಷ್ಟೇ.
    ಉಮಾ

    Like

  5. Good title.
    Good story and story telling.

    Very true that we can be good at what we do, but street smart thugs can deceive us easily.

    Just a coincidence that it is published on 1st of April !

    Like

Leave a comment

This site uses Akismet to reduce spam. Learn how your comment data is processed.