ಜೀವನದರ್ಥ – ಬೆಳ್ಳೂರು ಗದಾಧರ ಬರೆದ ಕವಿತೆ

 

ಜೀವನದರ್ಥ

ಹೊರಗಡೆ ಮೋಡ ಕವಿದಿತ್ತು
ಮನದಲಿ ಬೇಸರ ತುಂಬಿತ್ತು
ಯಾರೊಬ್ಬರಲೂ ಮಾತಿಲ್ಲ
ಯಾರ ಮುಖಗಳಲೂ ಕಳೆಯಿಲ್ಲ
ಮಧ್ಯೆ ಮಧ್ಯೆ ಗೊಣಗುವರು
ಏನು ನಮ್ಮೀ ಜೀವನದರ್ಥ
ನಮ್ಮೀ ಇಂದಿನ ಜೀವನ ವ್ಯರ್ಥ

ಆಗ

ಪುಟ್ಟ ಪುಟ್ಟ ಹೆಜ್ಜೆಇಟ್ಟು
ಬಂತು ನಮ್ಮ ಪುಟಾಣಿ

ಪೌಡರ್ ಕ್ರೀಮು ಮೆತ್ತಿದ ಮುಖ
ಬಾಡಿದ ಹೂವು ಸಿಗಿಸಿದ ಶಿಖ
ಮೈಮೇಲೆ ಹುಟ್ಟಿದ ಕ್ಷಣದ ಸೂಟು
ಕಾಲಿಗೆ ಹಾಕಿದೆ ಅಪ್ಪನ ಬೂಟು
ಅಂಟಂಟು ಚಾಕ್ಲೇಟ್ ಒಂದು ಕೈಯಲಿ
ಅಮ್ಮನ ಕೋಟು ಮತ್ತೊಂದರಲಿ
ಬಂತು ಪುಟಾಣಿ
ಮಕ್ಕಳ ರಾಣಿ

ತಕ್ಷಣ

ಎಲ್ಲರ ತುಟಿಯಲಿ ನಗೆ ಮುಗುಳು
ಮುಖದಲಿ ತುಂಬಿತು ಬೆಳದಿಂಗಳು
ತನ್ನಿ ಕ್ಯಾಮೆರಾ ಕೂಗಿದರು ತಾತ
ಗಡಿಬಿಡಿಯಲಿ ಆಯ್ತು ಅಪಘಾತ
ಅಪ್ಪನ ಕೈತಾಕಿತು ಲೋಟ
ಕಾಫಿ ಹೀರಿತು ಅಮ್ಮನ ಕೋಟು
ಕಿರಿಚುತ ಪುಟಾಣಿ ಅಮ್ಮನ ಅಪ್ಪಿತು
ಚಾಕ್ಲೇಟ್ ಪೌಡರ್ ಕ್ರೀಮನು ಮೆತ್ತಿತು
ಬಿದ್ದು ಬಿದ್ದು ನಕ್ಕರು ಅಜ್ಜಿ
ಬೊಚ್ಚುಬಾಯಲಿ ತಿನ್ನುತ ಬಜ್ಜಿ
ಮೋಡ ಚದುರಿತು
ಗೆಲುವು ಮೂಡಿತು
ಜೀವನಕೊಂದು ಬಂದಿತು ಅರ್ಥ.

ಬೆಳ್ಳೂರು ಗದಾಧರ

8 thoughts on “ಜೀವನದರ್ಥ – ಬೆಳ್ಳೂರು ಗದಾಧರ ಬರೆದ ಕವಿತೆ

  1. ಜೀವನದ ಅರ್ಥ ಬಹಳ ಗಹನವಾದ ವಿಚಾರ. ಅದನ್ನು ಯಾವ ರೀತಿಯಿಂದ ನೋಡಬಹುದೆನ್ನುವುದು ವೈಯುಕ್ತಿಕವಾದ ವಿಚಾರ. ಈ ಕವನದಲ್ಲಿ ಗಧಾದರ ಅವರು ಕವಿಯ ಕಣ್ಣಿಂದ ನೋಡಿ, ಸರಳವಾದ ರೀತಿಯಲ್ಲಿ ಅದರ ಅರ್ಥ ನಮಗೆ ತಿಳಿಸಿದ್ದಾರೆ. ಮಕ್ಕಳು ನಮ್ಮೆಲ್ಲರ ಭವಿಷ್ಯ. ಅವರ ಮುಗ್ಧ, ನಿಷ್ಕಳಂಕ ಮನಸ್ಸು ನಮ್ಮೆಲ್ಲರ ಸಂತೋಷಕ್ಕೆ ಕಾರಣವಾಗಬಲ್ಲದು.

    ದಾಕ್ಷಾಯಣಿ

    Like

  2. ಜೀವನದ ಅರ್ಥ ಬಹಳ ಗಹನವಾದ ವಿಚಾರ. ಅದನ್ನು ಯಾವ ರೀತಿಯಿಂದ ನೋಡಬಹುದೆನ್ನುವುದು ವೈಯುಕ್ತಿಕವಾದ ವಿಚಾರ. ಈ ಕವನದಲ್ಲಿ ಗಧಾದರ ಅವರು ಕವಿಯ ಕಣ್ಣಿಂದ ನೋಡಿ, ಸರಳವಾದ ರೀತಿಯಲ್ಲಿ ಅದರ ಅರ್ಥ ನಮಗೆ ತಿಳಿಸಿದ್ದಾರೆ. ಮಕ್ಕಳು ನಮ್ಮೆಲ್ಲರ ಭವಿಷ್ಯ. ಅವರ ಮುಗ್ಧ, ನಿಷ್ಕಳಂಕ ಮನಸ್ಸು ನಮ್ಮೆಲ್ಲರ ಸಂತೋಷಕ್ಕೆ ಕಾರಣವಾಗಬಲ್ಲದು.

    ದಾಕ್ಷಾಯಣಿ

    Like

  3. ನಮ್ಮ ಜೀವನದಲ್ಲಿ ಆಗುವ ಏರಿಳಿತಗಳು ಎಲ್ಲವೂ ತಾತ್ಕಾಲಿಕ , ಬೇಸರ , ನಿರಾಶೆಗಳಿಂದ ಸಂತೋಷದ ಪರಿವರ್ತನಕ್ಕೆ ಒಂದು ಸಣ್ಣ ಘಟನೆಗಿಂತ ಹೆಚ್ಚೇನೂ ಬೇಕಿಲ್ಲ. ಇದನ್ನು ಬರೆಯುವಾಗ ನನ್ನ ಮನಸಿನಲ್ಲಿ ಇದ್ದದ್ದು ಇಷ್ಟೇ

    ಈ ಅಪ್ರೌಢನ ಯತ್ನದಲ್ಲಿ ಇದಕ್ಕೂ ಹೆಚ್ಚಿನ ಅರ್ಥವನ್ನು ಗಮನಿಸಿ ತಮ್ಮ ಮೆಚ್ಚುಗೆ, ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಶ್ರೀ ಶ್ರೀವತ್ಸ ದೇಸಾಯಿ , ಡಾಕ್ಟರ್ ಉಮಾ ವೆಂಕಟೇಶ್ ಹಾಗೂ ಸರೋಜಿನಿ ಪಡಸಲಗಿ ಇವರುಗಳಿಗೆ ನನ್ನ ಅನಂತಾನಂತ ವಂದನೆಗಳು.

    Like

  4. ನಮ್ಮ ಜೀವನದಲ್ಲಿ ಆಗುವ ಏರಿಳಿತಗಳು ಎಲ್ಲವೂ ತಾತ್ಕಾಲಿಕ , ಬೇಸರ , ನಿರಾಶೆಗಳಿಂದ ಸಂತೋಷದ ಪರಿವರ್ತನಕ್ಕೆ ಒಂದು ಸಣ್ಣ ಘಟನೆಗಿಂತ ಹೆಚ್ಚೇನೂ ಬೇಕಿಲ್ಲ. ಇದನ್ನು ಬರೆಯುವಾಗ ನನ್ನ ಮನಸಿನಲ್ಲಿ ಇದ್ದದ್ದು ಇಷ್ಟೇ .
    ಈ ಅಪ್ರೌಢನ ಯತ್ನದಲ್ಲಿ ಇದಕ್ಕೂ ಹೆಚ್ಚಿನ ಅರ್ಥವನ್ನು ಗಮನಿಸಿ ತಮ್ಮ ಮೆಚ್ಚುಗೆ, ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಶ್ರೀ ಶ್ರೀವತ್ಸ ದೇಸಾಯಿ , ಡಾಕ್ಟರ್ ಉಮಾ ವೆಂಕಟೇಶ್ ಹಾಗೂ ಸರೋಜಿನಿ

    Like

  5. ಜೀವನವನ್ನು ಬದಲಾಗುತ್ತಿರುವ ಆಕಾಶಕ್ಕೆ ಹೋಲಿಸುತ್ತ (ಮೋಡ ಕವಿದ ಮುಖ, ಬೆಳದಿಂಗಳು), ಇಲ್ಲಿ ಕವಿ ನಿರಾಶೆ, ಬೇಸರ ಇವು ಒಂದು ಕ್ಷಣದಲ್ಲಿ ಹೊಸ ಅರ್ಥದ ಹೊಂಬಿಸಿಲಲ್ಲಿ ಪರಿವರ್ತನಗೊಳ್ಳುವಂಥ ದೃಶ್ಯವನ್ನು ಬಣ್ಣಿಸಿ ಓದುಗರಿಗೆ ಸಂತೋಷವನ್ನು ಕೊಟ್ಟಿದ್ದಾರೆ. ಕಣ್ಣಿಗೆ ಕಟ್ಟುವಂಥ ಚಿತ್ರ. ನಿಜವಾಗಿಯೂ ನಡೆದ ಘಟನೆಯನ್ನೇ ಬಣ್ಣಿಸುತ್ತಿದ್ದಾರೆ ಎಂದೆನಿಸಿತು. ಮಕ್ಕಳು, ಮೊಮ್ಮಕ್ಕಳು ಇದ್ದ ಮನೆಯಲ್ಲಿ ನಡೆಯುವಂಥ ಚಿಕ್ಕ-ಪುಟ್ಟ ಆಕ್ಸಿಡೆಂಟ್ಗಳಲ್ಲೊಂದು.. ತುಂಟ ಮಗು ಎಲ್ಲರ ಮುಖದಲ್ಲಿ ಬೆಳದಿಂಗಳು ಚೆಲ್ಲಿ ನಂತರ ಅತ್ತು-ಕಿರಚಿ ದೊಡ್ಡವರಿಗೆ ಜೀವನದ ಅರ್ಥ ಹೇಳಿಕೊಟ್ಟ ಕ್ಷಣ epiphany ಅಥವಾ ಜ್ಞಾನೋದಯದ ಗಳಿಗೆ ಅನ್ನ ಬಹುದು! ಸುಂದರ ಕವನ, ಗದಾಧರ ಅವರೆ ಅನ್ನುವ ಅನುಭವಿ ಅಜ್ಜ ಇಲ್ಲಿದ್ದಾರೆ!

    Like

  6. ಉದಾಸ ತುಂಬಿದ ಮನದ ಭಾವನೆಯಿಂದ ಪ್ರಾರಂಭಿಸಿರುವ ಕವನದಲ್ಲಿ, ಗದಾಧರ್ ಅವರು ಮುನ್ನಡೆದು ಹಸುಳೆಯ ಮುಗ್ಧ ಮನದ ಚಟುವಟಿಕೆಗಳನ್ನು ಸೊಗಸಾಗಿ ಬಣ್ಣಿಸಿ ವೃದ್ದಾಪ್ಯದ ಮನ ಮತ್ತೊಮ್ಮೆ ಜೀವನದಲ್ಲಿ ಅರ್ಥವಿದೆ, ಸೊಗಸಿದೆ ನಲಿವಿದೆ ಎನ್ನುವುದನ್ನು ಕಂಡುಕೊಳ್ಳುವ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಓದುಗರಿಗೆ ಕವನವನ್ನು ಓದಿದೊಡನೆ ಇದು ಅಜ್ಜ-ಅಜ್ಜಿಯರ ಮನದ ಭಾವನೆಗಳು ಎಂದು ಸಾರಿ ಹೇಳಿ, ಜೀವನದ ಪ್ರತಿಯೊಂದು ಹಂತವೂ ತನ್ನದೇ ಆದ ಸೊಗಸನ್ನು ಹುದುಗಿಸಿಕೊಂಡಿರುತ್ತದೆ ಎನ್ನುವುದನ್ನು ತಿಳಿಸುತ್ತದೆ. ಗದಾಧರ್ ಅವರೆ ಕವನ ಚೆನ್ನಾಗಿದೆ.
    ಉಮಾ ವೆಂಕಟೇಶ್

    Like

  7. ತುಂಬಾ ಅರ್ಥಗರ್ಭಿತ ಕವನ.ನಮ್ಮ ಮಕ್ಕಳು ವಂಶದ ಕುಡಿಗಳಾದರೆ ಆ ಕುಡಿಯ ಚಿಗುರು ಮೊಮ್ಮಕ್ಕಳು.ನಮ್ಮ ಜೀವನದ ಮುಂದುವರೆದ ಭಾಗವೇ ಈ ಕುಡಿಗಳು,ಚಿಗುರುಗಳು.ಅಳಿಸುವ ನಗಿಸುವ ಬಾಳ ಪಲ್ಲವದ ಪುಷ್ಪಗಳು.ಈ ನೋವು ನಲಿವಲಿ ಮೀಯ್ವ ಬದುಕು ಪಕ್ವ ಭಾವಗೀತ ಕೇಳೀಗ ಎಂದರೆ ತಪ್ಪಲ್ಲ.ಜೀವನ ಅರ್ಥ ಸಾರುವ ಗೀತ ನೀಡಿರುವ ಬೆಳ್ಳೂರ ಗದಾಧರ ಅವರಿಗೆ ಅಭಿನಂದನೆಗಳು
    ಸರೋಜಿನಿ ಪಡಸಲಗಿ

    Like

Leave a comment

This site uses Akismet to reduce spam. Learn how your comment data is processed.