ಅನಿವಾಸಿ ಪದ – ದಾಕ್ಷಾಯಿಣಿಯವರು ಬರೆದ ಇನ್ನೊಂದು ಕವನ

ತೊಳಲಾಟದಿಂದ ನುಗ್ಗಾದ ‘ಅನಿವಾಸಿ’ಯ ಇನ್ನೊಂದು ಸ್ವರೂಪ ನೋಡಿ: ದಾಕ್ಷಾಯಿಣಿಯವರ ಬೇರೊಂದು ಕವನ.

ಸಮುದ್ರಗಳ ದಾಟಿದ್ದೊ೦ದು ಬಗೆಯಾದರೆ
ಮಾತಿನ ಧಾಟಿಯನ್ನೆ ಬದಲಿಸಿದ್ದು ಇನ್ನೊ೦ದು ಬಗೆ.

ಹಗೆಯ೦ತೆ ಕಾಡಿತ್ತು, ಕತ್ತರಿಸಿದ೦ತೆ ನಾಲಿಗೆಯ
ಪರಭಾಷೆ ತು೦ಬಿದ ಜೀವನ, ಮನಸ್ಸಾಗಿ ಅಯೋಮಯ.

ಬರೆದಿತ್ತು ಬೆರಳು, ಲೇಖನಿಯ ಹಿಡಿದ ಯ೦ತ್ರದ೦ತೆ
ಉಲಿದಿತ್ತು ಕರುಳು, ತನ್ನದೇ ನಾದ ಅ೦ಕೆಯಿಲ್ಲದ೦ತೆ.

ಆಗೀಗೊಮ್ಮೆ ಕೇಳಿ ಬರುತಿತ್ತು, ತಾಯ್ನುಡಿ ಮನ ಮಿಡಿದು
ವಿಷಾದ,ವಿನೋದ, ವಿಚಿತ್ರ ಭಾವನೆಗಳ ಒಮ್ಮೆಗೇ ತುಡಿದು.

ಬಾಯಲ್ಲಿ ಸುಲಲಿತವಾಗಿ ಹರಿವ ಪರಭಾಷೆಯ ಗರ್ಜನೆಗೆ
ಪೈಪೋಟಿ ನೀಡಿತ್ತು ನನ್ನದೇ ಭಾಷೆ ಸದ್ದಿಲ್ಲದ೦ತೆ ಮನದೊಳಗೆ.

ಅನಿವಾಸಿ, ನಿನ್ನ ಮನೆ ಮನದೊಳಗಿದೆ ನಿನ್ನದೇ ಆದ ರಾಜ್ಯ
ನೀನೇ ಸೃಷ್ಟಿಸಿದ, ನಿನ್ನಾಳ್ವಿಕೆಗೆ ಓಗೂಡುವ, ಹೊಸಬಗೆಯ ಸ್ವರಾಜ್ಯ!

6 thoughts on “ಅನಿವಾಸಿ ಪದ – ದಾಕ್ಷಾಯಿಣಿಯವರು ಬರೆದ ಇನ್ನೊಂದು ಕವನ

  1. ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರಲಿ. ನಿಮ್ಮ ಕವನದ ದ್ವಂದ್ವ ನಮ್ಮೆಲ್ಲರದ್ದು. ಕವಿತೆಯಲ್ಲಿ ಶಬ್ದಗಳನ್ನು ಮಿತವಾಗಿ ಬಳಸಿ ಹೇರಳ ಅರ್ಥ ತುಂಬಿದ್ದೀರಿ. ತುಂಬ ಇಷ್ಟವಾಯಿತು.

    ಕೇಶವ

    Like

  2. ಸ್ನೇಹಿತರೆ
    ನಿಮ್ಮ ಉತ್ತೇಜನ ಮತ್ತು ವಿಮರ್ಶೆಗಳಿಗೆ ಧನ್ಯವಾದಗಳು.
    ದಾಕ್ಷಾಯಣಿ

    Like

  3. ಸ್ವದೇಶ ಬಿಟ್ಟು ಬಂದ ಮೇಲೆ, ಹೊರಗೆ ಕೇಳುತ್ತಿರುವ ಬೇರೆ ಭಾಷೆಯ ಗರ್ಜನೆಗೂ ಮೀರಿ ನಮ್ಮ ಬರಹ, ಧ್ವನಿ ,ಸಂಸ್ಕ್ರುತಿ ಉಳ್ಳ ಪರಿಸರವನ್ನು ಮಾಡಿ ಅದರಲ್ಲೇ ತಮ್ಮದೇ ಒಂದು comfort zone ಸೃಷ್ಟಿಸುವ ಅನಿವಾಸಿಗಳು ಹೇರಳ. ಅದನ್ನು ಚೆನ್ನಾಗಿ ಬಿಂಬಿಸಿದ್ದಾರೆ ದಾಕ್ಷಾಯಿಣಿ ಅವರು. ಆ ತುಮುಲವ ಕಡೆದ ಮಜ್ಜಿಗೆಯಲ್ಲಿ ತೇಲಿಬಂದ ಬೆಣ್ಣೆ ಇದು!

    Like

  4. ಆನಿವಾಸಿಗಳ ಮನದಲ್ಲಿ ನಡೆವ ಮಂಥನದ ಬಗ್ಗೆ ಈಗಾಗಲೇ ದಾಕ್ಷಾಯಣಿ ಅವರ ಲೇಖನದಿಂದ ಕವನಗಳು ಹೊಮ್ಮಿವೆ. ನಾವಾಗಿ ಆಯ್ಕೆ ಮಾಡಿಕೊಂಡ ಜೀವನವಿದು. ದೇಶದ ಸೀಮಾರೇಖೆಯನ್ನು ದಾಟಿ ಬಂದ ನಂತರ, ಉತ್ತಮ ಭವಿಷ್ಯವನ್ನು ನಮ್ಮ ಮಕ್ಕಳಿಗೆ ದೃಢಪಡಿಸಿದ ನಾವು, ನಮ್ಮ ಮಧ್ಯವಯಸ್ಸಿನಲ್ಲಿ ನಾವು ಕೈಗೊಂಡ ನಿರ್ಧಾರದ ಬಗ್ಗೆ ದಿನ ನಿತ್ಯ ನಮ್ಮ ಮನದಲ್ಲಿ ನಡೆಯುವ ಘರ್ಷಣೆಯ ಬಗ್ಗೆ ಯೋಚಿಸುವುದು ಸಹಜವೇ! ಆದರೆ ಅದನ್ನು ಕವನರೂಪಕ್ಕಿಳಿಸಿ ಅದಕ್ಕೆ ಒಂದು ಉತ್ತಮ ಸ್ವರೂಪವನ್ನು ನೀಡಿ ನಮ್ಮ ಮುಂದಿಟ್ಟಿದ್ದಾರೆ ದಾಕ್ಷಾಯಣಿ. ಜೀವನದಲ್ಲಿ ಎಲ್ಲವನ್ನೂ ಬಯಸುವುದು ಮಾನವ ಸಹಜ ಗುಣ. ಆದರೆ ನಾವಿರುವಲ್ಲೇ ನಮ್ಮ ಸ್ವರಾಜ್ಯವನ್ನು ನಿರ್ಮಿಸಿಕೊಳ್ಳುವುದು ಜಾಣತನ. ಅದೇ ಭಾವನೆಯೊಂದಿಗೆ ಈ ಕವನವನ್ನು ಪೂರ್ಣಗೊಳಿಸಿದ್ದಾರೆ ಲೇಖಕಿ. “ಶೆಟ್ಟಿ ಬಿಟ್ಟಲ್ಲೇ ಪಟ್ಣ“ ಎಂಬ ಗಾದೆಯನ್ನು ಅನುಸರಿಸುವುದರಲ್ಲೇ ನಮ್ಮ ಕಲ್ಯಾಣ ಅಡಗಿದೆ. ಉತ್ತಮ ಕವನ.
    ಉಮಾ ವೆಂಕಟೇಶ್

    Like

  5. ಆನಿವಾಸಿ ವಾಸವನ್ನು ನಾವಾಗಿ ಸ್ವೀಕರಿಸಿ, ಅಳವಡಿಕೆಯ ಪರಿಮಿತಿಗಳ ಗುರಿಮುಟ್ಟಿದ ನಂತರ , ಆ ಗೋಜಲುಗಳನ್ನೆಲ್ಲ ಸವರಿ ಬದಲಾದ ಬದುಕಿನ ಸ್ವರೂಪವನ್ನು ನೋಡಿ, ಅಳಬೇಕೋ ನಗಬೇಕೋ ಅಥವ ಈ ಬದುಕಿನ ಗಾಡಿಯನ್ನು ಈ ರೂಪಕ್ಕೆ ತಂದ ನಮ್ಮದೇ ಸಾರಥ್ಯವನ್ನು ಮೆಚ್ಚಬೇಕೋ ಎಂಬ ವಿಚಾರ ಸುರುಳಿಗೆ ಸಿಲುಕಿಸುವ ಈ ಕವನ ಮೆಚ್ಚುವಂತದ್ದು. ತುಂಬ ಚೆನ್ನಾಗಿದೆ.

    Like

Leave a comment

This site uses Akismet to reduce spam. Learn how your comment data is processed.