ವಾಂಝಿ ಸುಂದರಿಯ ಕುರೂಪ ಚರಿತೆ

ಎರಡನೇ ಮಹಾಯುದ್ಧದ ಕಾಲದಲ್ಲಿ ನಡೆದ ಯಹೂದಿಗಳ ಸಾಮೂಹಿಕ ಹತ್ಯೆ ಚರಿತ್ರೆಯ ಕರಾಳ ಕಾರ್ಯ. ಈ ಹೀನ ಕಾರ್ಯದ ಪ್ರಭಾವ ಇಂದಿಗೂ ಜಗತ್ತಿನ ಎಲ್ಲೆಡೆಯಲ್ಲಿ ಮಾರ್ದನಿಗೊಳ್ಳುತ್ತಿದೆ. ಅರ್ಧ ಶತಮಾನಕ್ಕೂ ಹಿಂದೆ ನಡೆದ ನರಮೇಧಕ್ಕೆ ಜರ್ಮನಿ ಬೆಲೆತೆರುವುದಕ್ಕೆ  ಕೊನೆಯಿಲ್ಲವೇನೋ! ಜನಾಂಗ ಹತ್ಯೆಯ ಕೇಂಬಿಂದುವಾಗಿದ್ದ ಸ್ಥಳವನ್ನು ಸಂದರ್ಶಿಸಿ, ಆ ಅನುಭವವನ್ನು, ಅಲ್ಲಿ ನೋಡಿದ ದೃಶ್ಯಗಳ ಪರಿಣಾಮವನ್ನು ನಮ್ಮ ಮುಂದೆ ಹರಡಿಟ್ಟಿದ್ದಾರೆ ಉಮಾ ವೆಂಕಟೇಶ್…

DSC_0059

  1914 ರಿಂದ 1918ರವರೆಗೆ ನಡೆದ ಮಹಾಯುದ್ಧದದಲ್ಲಿ ಅನುಭವಿಸಿದ ಸೋಲಿನ ಅವಮಾನದಲ್ಲಿ ಬೇಯುತ್ತಿದ್ದ ಜರ್ಮನಿಯನ್ನು, ಮತ್ತೊಮ್ಮೆ ತನ್ನ ಉತ್ಸಾಹ ಮತ್ತು ಪ್ರೇರಣೆಗಳಿಂದ ಮೇಲೆತ್ತಿ, ಯೂರೋಪನ್ನು ಮತ್ತೊಂದು ಮಹಾಯುದ್ಧಕ್ಕೆ ತಳ್ಳಿ, ಜಗತ್ತನ್ನೇ ತಲ್ಲಣಗೊಳಿಸಿದ ರಾಕ್ಷಸೀ ಪ್ರವೃತ್ತಿಯ ಅಡಾಲ್ಫ ಹಿಟ್ಲರನನ್ನು ಪ್ರಪಂಚ ಮರೆಯಲಾದೀತೇ? 1939ರಿಂದ 1945ರವರೆಗೆ ನಡೆದ ಎರಡನೆಯ ಮಹಾಯುದ್ಧಕ್ಕೆ ಮುನ್ನಾ, ಸುಮಾರು ಹತ್ತು ಮಿಲಿಯನ್ ಸಂಖ್ಯೆಯ ಯೂರೋಪಿನ ಯಹೂದಿಗಳ ನರಹತ್ಯೆಗೈದ ಕರಾಳ ದಿನಗಳು ಈಗಲೂ ಚರಿತ್ರೆಯ ಅತ್ಯಂತ ದುಃಖಕರ ಅಧ್ಯಾಯಗಳೆನ್ನಬಹುದು. ಇದಕ್ಕೆ ಕಾರಣರಾದ ಹಿಟ್ಲರನ ಆಡಳಿತ ಪಕ್ಷದ ಉನ್ನತಾಧಿಕಾರಿಗಳ ಪಡೆ SS ತಮ್ಮ ನರಹತ್ಯೆಯ ಚಟುವಟಿಕೆಗಳ ಪ್ರಗತಿಯನ್ನು ಚರ್ಚಿಸಲು ಆಗಾಗ ಸಭೆ ಸೇರುತ್ತಿದ್ದರಂತೆ. ಅದಕ್ಕಾಗಿ ರಾಜಧಾನಿ ಬರ್ಲಿನ್ನಿನಲ್ಲಿ ಒಂದು ನಿಗದಿತ ಸ್ಥಳದಲ್ಲಿ ಭೇಟಿಯಾಗುತ್ತಿದ್ದರಂತೆ. ಸಧ್ಯದಲ್ಲಿ ಬರ್ಲಿನ್ನಿನಲ್ಲಿ ವಾಸ್ತವ್ಯ ಹೂಡಿರುವ ನಮಗೆ, ಈ ಅಧಿವೇಶನಗಳು ನಡೆಯುತ್ತಿದ್ದ ಭವನವನ್ನು ನೋಡುವ ಸುವರ್ಣಾವಕಾಶ ದೊರೆಯಿತು. ಬರ್ಲಿನ್ ಎರಡನೆಯ ಮಹಾಯುದ್ಧದಲ್ಲಿ ಬಹುತೇಕವಾಗಿ ಬಾಂಬ್ ದಾಳಿಯಲ್ಲಿ ನಷ್ಟಗೊಂಡಿತ್ತು. ಯುದ್ಧಾನಂತರ ಒಕ್ಕೂಟ ಪಡೆಗಳು ಅದರಲ್ಲೂ ಅಮೆರಿಕಾ ಮತ್ತು ರಷ್ಯಾದ ಸೇನಾ ಪಡೆಗಳು ಜರ್ಮನಿಯ ಪೂರ್ವ ಮತ್ತು ಪಶ್ಚಿಮ ಭಾಗವನ್ನು ಸ್ವತಂತ್ರವಾಗಿ ಕಟ್ಟಿ ಬೆಳೆಸಿದ ಸಂಗತಿಯೂ ಸರ್ವಜನವಿದಿತವಾದ ವಿಷಯ. ಸಧ್ಯದಲ್ಲಿ ಬರ್ಲಿನ್ನಿನ ನೈಋತ್ಯ ದಿಕ್ಕಿನಲ್ಲಿರುವ ಪಾಟ್ಸಡಾಮಿನಲ್ಲಿ ನಮ್ಮ ಮನೆಯಿಂದ ಸುಮಾರು ೫ ಮೈಲಿಗಳ ದೂರದಲ್ಲಿರುವ ವಾಂಝಿ ಸರೋವರವನ್ನು ಸಂದರ್ಶಿಸುವುದು ನಮ್ಮ ಉದ್ದೇಶವಾಗಿತ್ತು. ಬರ್ಲಿನ್ ನಗರ ಮತ್ತು ಆಸುಪಾಸಿನಲ್ಲಿ ಮನೋಹರವಾದ ಸರೋವರಗಳಿದ್ದು, ಅವುಗಳ ಸುತ್ತುಮುತ್ತಲಿನ ಹಸಿರು ಕಾಡು ಮತ್ತು ಉದ್ಯಾನವನಗಳು ನಯನಮನೋಹರವಾಗಿವೆ. ವಾಂಝಿಯ ಸರೋವರವೂ ಅಂತಹ ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದೆನ್ನಬಹುದು. ಇಲ್ಲ ಸರೋವರದ ಸುತ್ತಾ ನಡೆದಾಡಬಹುದಲ್ಲದೇ, ದೋಣಿವಿಹಾರದ ಸೌಲಭ್ಯವೂ ಇದ್ದು, ಪ್ರವಾಸಿಗರಿಗೆ ಅರ್ಧದಿನವನ್ನು ಕಳೆಯುವ ಎಲ್ಲಾ ಅವಕಾಶಗಳು ಇದೆ. ವಾಂಝಿಯ ಸರೋವರದಲ್ಲಿ ದೋಣಿವಿಹಾರ ಕೈಗೊಳ್ಳುವ ಉದ್ದೇಶದಿಂದ ಅತ್ತ ನಡೆದಿದ್ದ ನಮಗೆ, ನಮ್ಮ ಜೊತೆಯಲ್ಲಿದ್ದ ಸ್ನೇಹಿತರೊಬ್ಬರು ಅಲ್ಲೇ ಇರುವ ಈ ಚಾರಿತ್ರಿಕ ಭವನವನ್ನು ನೆನಪಿಸಿದರು. ಸರಿ ಮೊದಲು ಅಲ್ಲಿಗೆ ಭೇಟಿ ನೀಡಿ, ನಂತರ ಮುಂದೆ ದೋಣಿವಿಹಾರ ಮಾಡಿದರಾಯ್ತೆಂದು, ಆ ಭವನದೆಡೆಗೆ ಹೆಜ್ಜೆ ಹಾಕಿದೆವು. ಜೂನ್ ತಿಂಗಳ ಸೌಮ್ಯವಾದ ಬಿಸಿಲು ಮತ್ತು ತಂಪಾಗಿ ಸರೋವರದ ಮೇಲಿಂದ ಬೀಸಿ ಬರುತ್ತಿದ್ದ ತಂಗಾಳಿಯಲ್ಲಿ ನಡೆದಾಡುವುದು ಹಿತವಾಗಿತ್ತು.   ಎರಡನೆಯ ಮಹಾಯುದ್ಧದ ನಂತರ, ಬರ್ಲಿನ್ ಯುದ್ಧದಲ್ಲಿ ಪೂರ್ಣವಾಗಿ ನಷ್ಟಹೊಂದಿತ್ತು ಎನ್ನುವುದನ್ನು ನಂಬಲು ಅಸಾಧ್ಯವೆಂಬಂತಿರುವ ಇಂದಿನ ಬರ್ಲಿನ್ ನಗರದ ವ್ಯವಸ್ಥೆ, ಅಲ್ಲಿನ ಅಚ್ಚುಕಟ್ಟು, ವಿಶಾಲವಾದ ಸ್ವಚ್ಛ ರಸ್ತೆಗಳು ಪ್ರವಾಸಿಗನನ್ನು ನಿಜಕ್ಕೂ ಗೊಂದಲಕ್ಕೀಡಾಗಿಸುತ್ತವೆ. ಭವನವಿರುವ ರಸ್ತೆಯಲ್ಲಿ ನಡೆಯುತ್ತಾ ಅಕ್ಕಪಕ್ಕ ನೆರೆಹೊರೆಯನ್ನು ನೋಡಿದಾಗ, ಅದೊಂದು ಶ್ರೀಮಂತರ ಮತ್ತು ಮೇಲ್ಮಟ್ಟದ ಮಧ್ಯಮವರ್ಗದ ಬಡಾವಣೆಯೆಂದು ಕಂಡುಬಂತು. ಈಗ ಸುಮಾರು ನೂರು ವರ್ಷಗಳ ಹಿಂದೆ ಕಟ್ಟಿರಬಹುದಾದ ಭವ್ಯವಾದ, ಸಣ್ಣ ಅರಮನೆಯಂತಹ ಮನೆಗಳು, ಕೆಲವಂತೂ ಡಿಸ್ನಿಲ್ಯಾಂಡಿನಲ್ಲಿರುವ Sleeping Beauty ದುರ್ಗವನ್ನು ನೆನಪಿಸುವಂತಿದ್ದು, ಆ ಭವನಗಳ ಸುತ್ತಮುತ್ತಲಿದ್ದ ಸೊಗಸಾದ ಉದ್ಯಾನವನಗಳನ್ನು ಕಂಡು ಸೋಜಿಗವೆನಿಸಿತು.

CC - The Wannsee house
CC – The Wannsee house

ಕಡೆಗೊಮ್ಮೆ ವಾಂಝಿ ಭವನದ (House Of Wannsee) ಮುಂದೆ ನಿಂತಾಗ ಅದರ ಸುಂದರತೆಗೆ ಮನಸೋತಿತು. ಆದರೆ ಜೊತೆಯಲ್ಲೇ, ಇಂತಹ ಮನೋಹರವಾದ ಸ್ಥಳದಲ್ಲಿ, ಜಗತ್ತಿನ ಅತ್ಯಂತ ಹೇಯ ಕೃತ್ಯವೊಂದರ ಬೆಳವಣಿಗೆ ಮತ್ತು ಅಭಿವೃದ್ಧಿಗಳನ್ನು ಚರ್ಚಿಸಲಾಗುತ್ತಿತ್ತು ಎಂದು ತಿಳಿದಾಗ ಮನ ನೊಂದಿತು. ವಾಂಝಿ ಸರೋವರದ ಸುತ್ತಲೂ ಇರುವ ಈ ಪ್ರದೇಶ, ಇಂದು ಬರ್ಲಿನ್ನಿನ ಅತ್ಯಂತ ಶ್ರೀಮಂತ ಬಡಾವಣೆಗಳಲ್ಲಿ ಒಂದು. ಈ ಭವ್ಯವಾದ ಕಟ್ಟಡವನ್ನು 1915ರಲ್ಲಿ ಕಟ್ಟಲಾಗಿದ್ದು, ಅದು ಅಂದಿನ ಶ್ರೀಮಂತ ಉದ್ಯಮಿಯೊಬ್ಬನ ವಿಲ್ಲಾ ಆಗಿತ್ತಂತೆ. ಅದನ್ನೇ 1941ರಿಂದ, 1945ರವರೆಗೆ, ಹಿಟ್ಲರನ SS ಪಡೆಯ ಉನ್ನತಾಧಿಕಾರಿಗಳು, ತಮ್ಮ ಸಭೆಗಳಿಗಾಗಿ ಉಪಯೋಗಿಸುತ್ತಿದ್ದರು ಎಂದು ತಿಳಿದುಬರುತ್ತದೆ. ಇಲ್ಲಿ ಅವರು ಯೂರೋಪಿಯನ್ ಯಹೂದ್ಯರ ಗಡೀಪಾರು ಹಾಗೂ ಕಗ್ಗೊಲೆಯ ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಿದ್ದರು. ಯಹೂದ್ಯರನ್ನು ಕೊಲೆಗಯ್ಯುವ ಬಗ್ಗೆ ನಡೆಸುವ ವಿಶೇಷ ಪ್ರಚಾರ, ಮತ್ತು ಅವರನ್ನು ಹತ್ಯೆಗೈಯ್ಯುವ ವಿವಿಧ ವಿಧಾನಗಳ ಬಗ್ಗೆ ಪ್ರತಿನಿಧಿಗಳು ತಮ್ಮ ವರದಿಯನ್ನು  ಸಲ್ಲಿಸುತ್ತಿದ್ದರು.   ಭವನದ ಮುಂದೆ ಇರುವ ಫಲಕದಲ್ಲಿ, House of The Wannsee Conference, Memorial and Educational Trust ಎಂಬ ಬರಹವಿದೆ. ಭವನದ ಮುಂದಿನ ವಿಶಾಲ ಉದ್ಯಾನ ಮತ್ತು ನೀರಿನ ಚಿಲುಮೆಗಳು, ಗತಕಾಲದ ವೈಭವವನ್ನು ತಿಳಿಸುತ್ತದೆ. ಸುಂದರವಾದ ರೋಡೋಡೆಂಡ್ರಾನ್ ಪುಷ್ಪಗಳು, ಹೂಗಳಿಂದ ನಳನಳಿಸುವ ಗುಲಾಬಿ ಗಿಡಗಳು ನಮ್ಮನ್ನು ಸ್ವಾಗತಿಸಿತು. ಪ್ರವೇಶ ದರವಿರದೆ ಉಚಿತವಾಗಿ ಸಂದರ್ಶಿಸಬಹುದಾದ ಈ ಸ್ಥಳದಲ್ಲಿ, ಭಾನುವಾರದಂದು ಜನಸಂದಣಿ ಅಷ್ಟಿರಲಿಲ್ಲ! ಇನ್ನೂ ಪ್ರವಾಸಿಗರ ಋತುಮಾನ ಪ್ರಾರಂಭವಾಗಿಲ್ಲ ಎಂದನಿಸಿತು. ಎರಡು ಅಂತಸ್ತುಗಳ ಈ ಭವನದಲ್ಲಿ, ಮೊದಲ ಹಂತದಲ್ಲಿ ಅಂದಿನ ಯಹೂದ್ಯರ ಸಮುದಾಯ, ಅವರ ಪ್ರಗತಿ, ಅವರ ಸಂಸ್ಕೃತಿಗಳು, ಹಾಗೂ ಅಂದಿನ ಜರ್ಮನಿಯ ಸಮಾಜದಲ್ಲಿ ಅವರಿಗಿದ್ದ ಸ್ಥಾನಮಾನಗಳನ್ನು ಪರಿಚಯಿಸುವ ಅನೇಕ ಛಾಯಾಚಿತ್ರಗಳಿವೆ. ಅವುಗಳನ್ನು ನೋಡುತ್ತಿದ್ದಂತೆಯೇ, ಅವರ ಕುಟುಂಬಗಳನ್ನು ಛಿದ್ರಿಸಿದ ಜರ್ಮನ್ ಪಡೆಗಳ ಹೇಯಕೃತ್ಯಗಳು, ಹಾಗೂ ಆ ಕೃತ್ಯದಲ್ಲಿ ನಾಶವಾದ ಅವರ ಕುಟುಂಬ, ಅದರಲ್ಲಿ ಹಾಗೂ ಹೀಗೂ ಬದುಕುಳಿದ ಬೆರಳೆನಿಸುವಷ್ಟು ಸದಸ್ಯರ ಇಂದಿನ ಜೀವನದ ಬಗ್ಗೆಯೂ ಮಾಹಿತಿಗಳಿವೆ. ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಅಂದಿನ ಜರ್ಮನ್ ಸಮಾಜದ ಪ್ರಮುಖ ಬುದ್ಧಿಜೀವಿಗಳೂ ಕೂಡಾ, ಯಹೂದ್ಯರ ಬಗ್ಗೆ ಎಷ್ಟು ಹೇಯವಾಗಿ ಯೋಚಿಸುತ್ತಿದ್ದರು ಎನ್ನುವುದು, ಅಲ್ಲಿ ಪ್ರದರ್ಶನಕ್ಕಿಟ್ಟಿರುವ ಅವರ ಕಾಗದಗಳು ಮತ್ತು ಲೇಖನಗಳ ತುಣುಕುಗಳಿಂದ ತಿಳಿದುಬರುತ್ತದೆ. ಅಂದಿನ ಜರ್ಮನ್ ಇತಿಹಾಸಕಾರನೊಬ್ಬ (ನನಗೆ ಅವನ ಹೆಸರು ನನಪಾಗುತ್ತಿಲ್ಲ) “ಯಹೂದ್ಯರು ಜರ್ಮನಿ ದೇಶದಲ್ಲಿ ವಾಸವಾಗಿರಬೇಕಾದರೆ, ಅವರು ಜರ್ಮನ್ನರಂತೇ ಜೀವಿಸಬೇಕು. ಅವರ ನಡೆನುಡಿಗಳು ಜರ್ಮನ್ನರಂತೆಯೇ ಇರಬೇಕು. ಇಲ್ಲದಿದ್ದರೆ ಅವರು ನಮ್ಮ ಸಮಾಜದ ಮುಖ್ಯ ಅಂಗವಾಗಲು ಸಾಧ್ಯವಿಲ್ಲ. ಅವರು ಹಾಗೆ ಮಾಡದಿದ್ದಲ್ಲಿ ನಮ್ಮಲ್ಲಿ ಒಬ್ಬರಾಗುವುದು ಹೇಗೆ? ಆದ್ದರಿಂದ ಅವರು ನಮ್ಮ ಜರ್ಮನ್ ಸಮಾಜದಲ್ಲಿ ಹುಣ್ಣುಗಳಿದ್ದಂತೆ. ನಮಗೆ ಒಂದು ರೀತಿಯ ಶಾಪವಿದ್ದಂತೆ. ಅವರು ಈ ದೇಶದಲ್ಲಿರಕೂಡದು” ಎಂದು ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ. ಕೇವಲ ಹಿಟ್ಲರನ ಪಡೆಗಳು ಮತ್ತು ಆಡಳಿತವರ್ಗವೇ ಅಲ್ಲಾ, ಅಲ್ಲಿನ ಸಮಾಜದ ಇತರ ವರ್ಗದವರೂ ಅವರನ್ನು ದ್ವೇಷಿಸುತ್ತಿದ್ದರು ಎಂದು ತಿಳಿದುಬರುತ್ತದೆ.   ಇಲ್ಲಿ ಸಂಗ್ರಹಿಸಿರುವ ಅನೇಕ ದಾಖಲೆಗಳಲ್ಲಿ, ಹಿಟ್ಲರನ ಆಡ್ ಳಿತದವರು, ಅವನ ಮುಖ್ಯ ಅಧಿಕಾರಿಗಳು (ಈ ಅಧಿಕಾರಿಗಳಲ್ಲಿ, ಹಿಮ್ಲರ್, ಗೋಯ್ಥ್, ಗೋಬ್ಬೆಲ್, ಅಡಾಲ್ಫ್ ಐಖ್ ಇನ್ನೂ ಹಲವರು ಮುಖ್ಯರು) ನಡೆಸಿದ ಪತ್ರವ್ಯವಹಾರದ ದಾಖಲೆಗಳನ್ನು ಮೂಲರೂಪದಲ್ಲಿ ನೋಡಿ ಓದಬಹುದು. ಕ್ರಮವಿಹಿತ ನಡುವಳಿಕೆಗಳ ದಾಖಲೆಗಳು (Wannsee Protocol Documents) ಎಂದು ಕರೆಯಲಾಗುವ ಈ ಪತ್ರಗಳನ್ನು ಓದಿದಾಗ, ಯೂರೋಪಿಯನ್ ಯಹೂದ್ಯರ ಸಾಮೂಹಿಕ ಹತ್ಯೆಯ ಪಿತೂರಿ, ಮತ್ತು ಅದರಲ್ಲಿ ಜರ್ಮನ್ ಸಾರ್ವಜನಿಕ ಆಡಳಿತದವರು ಸಕ್ರಿಯವಾಗಿ ಭಾಗಿಯಾಗಿದ್ದರು ಎಂಬ ವಿಷಯ ತಿಳಿದುಬರುತ್ತದೆ. ಈ ಭವನದ ಶಾಶ್ವತ ಪ್ರದರ್ಶನದಂತೆ ಇಟ್ಟಿರುವ ದಾಖಲೆಗಳನ್ನು “ವಾಂಝಿ ಸಮ್ಮೇಳನ, ಹಾಗೂ ಯೂರೋಪಿಯನ್ ಯಹೂದ್ಯರ ನರಹತ್ಯೆ” ಎಂಬ ಶೀರ್ಷಿಕೆಯ ದಾಖಲೆಗಳೆಂದು ಕರೆದಿದ್ದಾರೆ. 20ನೆಯ ಜನವರಿ, 1942ರಂದು ನಡೆದ ಈ ಸಮ್ಮೇಳನವನ್ನು, ಈ ಭವನದ ಭೋಜನಶಾಲೆಯಲ್ಲಿ ನಡೆಸಲಾಗಿತ್ತು.Dsc_0056 reduced ಯುದ್ಧಾನಂತರ ಈ ಸ್ಥಳವನ್ನು ಒಕ್ಕೂಟದ ಸೇನೆಯವರು ಬಳಸುತ್ತಿದ್ದರು. ನಂತರ ಇದನ್ನು ವಯಸ್ಕರ ಶಿಕ್ಷಣ ಕೇಂದ್ರವನ್ನಾಗಿ ಮಾರ್ಪಡಿಸಲಾಗಿತ್ತು. ಆದರೆ 1965ರಲ್ಲಿ ಪ್ರಸಿದ್ಧ ಜರ್ಮನ್-ಪೋಲಿಷ್-ಯಹೂದಿ ಇತಿಹಾಸಕಾರನಾದ ಜೋಸೆಫ್ ವುಲ್ಫ಼ನ ಸತತ ಪ್ರಯತ್ನದ ಹೊರತಾಗಿಯೂ, ಇದನ್ನು ದಾಖಲೆಗಳ ಕೇಂದ್ರವನ್ನಾಗಿ ಪರಿವರ್ತಿಸುವ ಕಾರ್ಯ ವಿಫಲಗೊಂಡಿತ್ತು. ಕಡೆಗೆ 1991ರಲ್ಲಿ ಬರ್ಲಿನ್ ಗೋಡೆ ಪತನಗೊಂಡನಂತರ, 1992ರಲ್ಲಿ ವಾಂಝಿ ಸಮ್ಮೇಳನದ 50ನೆಯ ವಾರ್ಷಿಕ ಸಂದರ್ಭದಲ್ಲಿ, ಈ ಭವನವನ್ನು ಶೈಕ್ಷಣಿಕ ಮತ್ತು ಸ್ಮಾರಕವನ್ನಾಗಿ ಉದ್ಘಾಟಿಸಲಾಯಿತು. 2006ರಲ್ಲಿ, ಇಲ್ಲಿ ನೂತನ ಪ್ರದರ್ಶನಗಳನ್ನು ಸ್ಥಾಪಿಸಿ, ಈಗ ಈ ಭವನವನ್ನು ಒಂದು ಪ್ರವಾಸಿಗರ ಸಂದರ್ಶನದ ಸ್ಥಳವನ್ನಾಗಿ ಪರಿವರ್ತಿಸಲಾಗಿದೆ. ಅಷ್ಟೇ ಅಲ್ಲದೇ, ಜೋಸೆಫ್ ವುಲ್ಫ಼ನ ಹೆಸರಿನಲ್ಲಿ ಒಂದು ಗ್ರಂಥಾಲಯವೂ ಇದೆ. ಇಲ್ಲಿರುವ ಪುಸ್ತಕಗಳ ಸಂಗ್ರಹದಲ್ಲಿ, ಮೈಕ್ರೋಫ಼ಿಲ್ಮ್ ದಾಖಲೆಗಳು, ಶ್ರವ್ಯ-ದೃಶ್ಯ ವಸ್ತುಗಳು, ಸಂಶೋಧನಾ ಸಾಹಿತ್ಯ, ಕಣ್ಣಾರೆ ಕಂಡ ಸಾಕ್ಷಿಗಳ ವರದಿಗಳು, ಜೀವನ ಚರಿತ್ರೆಗಳು, ಯಹೂದ್ಯರ ಚರಿತ್ರೆ, ಯಹೂದಿ-ವಿರೋಧಿ, ಶೋಷಣೆ, ಮತ್ತು ನರಹತ್ಯೆ, ನಾಝಿಗಳ ಚರಿತ್ರೆ ಹೀಗೆ ಹಲವು ಹತ್ತು ವಿಷಯಗಳ ಉತ್ತಮ ಸಂಗ್ರಹವಿದೆ.   ಇದನ್ನೆಲ್ಲಾ ನೋಡಿ ಮನಸ್ಸು ಭಾರವೆನಿಸಿತು. ನಾವಿನ್ನೂ ಜನ್ಮತಳೆಯುವ ಮೊದಲೇ ನಡೆದಿದ್ದ ಈ ಹತ್ಯಾಕಾಂಡದ ಬಗ್ಗೆ ಕೇವಲ ಇಲ್ಲಿನ ಚಿತ್ರಗಳಲ್ಲಿ ನೋಡಿಯೇ ಇಷ್ಟು ನೋವುಂಟಾಗುತ್ತದೆ. ಆ ಹತ್ಯಾಕಾಂಡದಲ್ಲಿ ಬೇಯ್ದ ಯಹುದಿಗಳ ಪಾಡು ಹೇಗಿರಬಹುದು ಎನ್ನುವುದನ್ನು ಊಹಿಸಲೂ ಅಸಾಧ್ಯ. ಮನ ಅದರ ಬಗ್ಗೆ ಯೋಚಿಸುತ್ತಾ ಹೊರಗಿನ ತೋಟದೊಳಕ್ಕೆ ನಡೆದಾಗ, ಇಂದಿನ ಈ ಸುಂದರ ವಾತಾವರಣದಲ್ಲಿ ನಿಂತು, ಅಂದಿನ ವಿದ್ಯಮಾನಗಳನ್ನು ಕೇವಲ ಯೋಚಿಸುವಷ್ಟು ಮಾತ್ರಾ ಅವಕಾಶ ಸಿಕ್ಕ ನಮ್ಮ ಪೀಳಿಗೆ ಒಂದು ರೀತಿಯಲ್ಲಿ ಅದೃಷ್ಟವಂತರೆಂದೇ ತಿಳಿಯಬೇಕು. ಭವನದ ಹಿಂದಿನ ಸರೋವರ ಗಂಭೀರವಾಗಿತ್ತು. ಸರೋವರದಲ್ಲಿ ಸೂರ್ಯನ ಬಿಸಿಲಿನಲ್ಲಿ ನಳನಳಿಸುತ್ತಿದ್ದ ಕೆಂಪು ಮತ್ತು ಶ್ವೇತವರ್ಣದ ನೈದಿಲೆಗಳು ಅಲ್ಲಿ ಸುಳಿಯುತ್ತಿದ್ದ ತಂಗಾಳಿಯಲ್ಲಿ ಓಲಾಡುತ್ತಿದ್ದವು. ಸರೋವರದಲ್ಲಿ ಸಂತೋಷವಾಗಿ ಈಜಾಡುತ್ತಿದ್ದ ಮಲ್ಲಾರ್ಡ್ ಬಾತುಕೋಳಿಯ ಸಂಸಾರ !5ಕಣ್ಣಿಗೆ ಬಹಳ ಆಪ್ಯಾಯಮಾನವೆನಿಸಿತು. ಸರೋವರದಲ್ಲಿ ಜಲಕ್ರೀಢೆಯಾಡುತ್ತಿದ್ದ ಮೀನುಗಳು, ಅಲ್ಲೇ ತೇಲಾಡುತ್ತಿದ್ದ ಹತ್ತಾರು ದೋಣಿಗಳು ಮನವನ್ನು ಇನ್ನಾವುದೋ ಪ್ರಪಂಚಕ್ಕೆ ಸೆಳೆದೊಯ್ದಿತ್ತು. ಸುತ್ತಲಿನ ಹಸಿರುತುಂಬಿದ ಮರಗಳಲ್ಲಿ ಚಿಲಿಪಿಲಿಗುಟ್ಟುತ್ತಿದ್ದ ವಿಧವಿಧದ ಹಕ್ಕಿಗಳು ಮನಸ್ಸಿಗೆ ಶಾಂತಿಯಿತ್ತವು. ಅಲ್ಲೇ ಕುಳಿತು ಫೋಟೋ ಕ್ಲಿಕ್ಕಿಸುತ್ತಿದ್ದ ನನ್ನ ಮನ, ಇಂತಹದೊಂದು ಶಾಂತ, ಸುಂದರ ಜಾಗ, ಅಂತಹ ಹೇಯ, ಬೀಭತ್ಸ ಕೃತ್ಯದ ಚರ್ಚೆಗೆ ಕುಳಿತ ರಾಕ್ಷಸ ಜನರ ಸಮ್ಮೇಳನಕ್ಕೆ ಏಕಾದರೂ ಕೇಂದ್ರವಾಗಿತ್ತೋ ಎಂದು ಮರುಗಿತು.   ಹಾಗೇ ನನ್ನ ಯೋಚನೆಗಳಲ್ಲೇ ಮುಳುಗಿದ್ದಾಗ, ನನ್ನ ಸ್ನೇಹಿತರ ಜೊತೆಯಲ್ಲಿ ಮಹಿಳೆಯೊಬ್ಬಳು ಸಂಭಾಷಿಸುವುದು ಕೇಳಿಸಿತು. ಆಕೆಯ ಆಂಗ್ಲ ಉಚ್ಚಾರಣೆಯಿಂದ, ಆಕೆ ಒಬ್ಬ ಯಹೂದಿಯೆಂದು ಅರಿವಾದಾಗ, ಆಸಕ್ತಿಯಿಂದ ಅವರ ಸಂಭಾಷಣೆಯನ್ನೇ ಆಲಿಸಿದೆ. ನನ್ನ ಭಾರತದ ಸ್ನೇಹಿತರು ಯಹೂದಿಗಳ ಹತ್ಯಾಕಾಂಡದ ಬಗ್ಗೆ ಪರಿತಾಪ ವ್ಯಕ್ತಪಡಿಸುತ್ತಾ, ತಾವು ಇತ್ತೀಚೆಗೆ ಪ್ಯಾಲಸ್ಟೈನ್ ಪ್ರದೇಶಕ್ಕೆ ಭೇಟಿಯಿತ್ತಿದ್ದೆ ಎಂದರು. ಒಡನೆಯೇ ಆ ಮಹಿಳೆ, ಅಲ್ಲಿರುವುದು ಕೇವಲ ಇಸ್ರೇಲ್, ಪ್ಯಾಲಸ್ಟೈನ್ ಎಂಬ ಯಾವ ದೇಶವೂ ಇಲ್ಲ ಎನ್ನುತ್ತಾ ಅಲ್ಲಿಂದ ಕಾಲ್ತೆಗೆದಳು. ಅದನ್ನು ನೋಡಿದ ನನಗೆ ಆಘಾತವಾಯಿತು. ಕೇವಲ 70 ವರ್ಷಗಳ ಹಿಂದಷ್ಟೇ ನರಹತ್ಯೆಗೊಳಗಾದ ಈ ಪಂಗಡದವರ ಬಾಯಲ್ಲಿ ಈ ಮಾತು ಬರುತ್ತಿದೆಯಲ್ಲಾ ಎಂದು ಆಶ್ಚರ್ಯವಾಯಿತು. ಅಂದು ತಾವು ಅನುಭವಿಸಿದ ಕಷ್ಟವನ್ನು, ಇಂದು ಇಸ್ರೇಲ್ ತನ್ನ ನೆರೆಯ ಪ್ಯಾಲಸ್ಟೈನ್ ಜನಾಂಗಕ್ಕೆ ಕೊಡುತ್ತಿದೆ. ಆ ಪ್ರದೇಶದ ವಿದ್ಯಮಾನಗಳನ್ನು ದಿನಬೆಳಿಗ್ಗೆದ್ದು ಸುದ್ದಿಯಲ್ಲಿ ಕೇಳುವ ನಮಗೆ, ಜನಪ್ರಿಯ ಆಂಗ್ಲ ನಾಣ್ಣುಡಿಯಾದ Bullied has become a bully ವಾಕ್ಯದ ನೆನಪಾಯಿತು. ಅದೇನೇ ಇರಲಿ, ಹಿಟ್ಲರನ ಆಡ್ಯಳಿತದಲ್ಲಿ ನಡೆದ ಹೇಯಕೃತ್ಯವನ್ನು, ಪ್ರಪಂಚದ ಇನ್ನಾವ ದುಷ್ಟಕಾರ್ಯವೂ ಸರಿಗಟ್ಟಲಾರದು, ಮತ್ತು ಅದಕ್ಕೆ ಯಾವುದೇ ರೀತಿಯ ಸಮರ್ಥನೆಯನ್ನು ನೀಡುವುದು ಮಹಾಪರಾಧ.

ಲೇಖನ ಮತ್ತು ವಾಂಝಿ ಚಿತ್ರಗಳು:   ಡಾ ಉಮಾ ವೆಂಕಟೇಶ್

12 thoughts on “ವಾಂಝಿ ಸುಂದರಿಯ ಕುರೂಪ ಚರಿತೆ

  1. ಧನ್ಯವಾದಗಳು ದೇಸಾಯಿ ಅವರೆ. ಲೇಖನಕ್ಕೆ ಪೂರಕವಾದ ಚಿತ್ರಗಳನ್ನು ಮತ್ತೊಮ್ಮೆ ಸೇರಿಸಿ ಲೇಖನಕ್ಕೆ ಹೆಚ್ಚಿನ ಅರ್ಥವನ್ನು ನೀಡಿದ್ದೀರಿ.
    ಉಮಾ

    Like

  2. ಸುದರ್ಶನ್ ಅಲ್ಲಿ ನಾನು ಕಂಡ ಆ ಯಹುದಿ ಮಹಿಳೆಯ ಬಾಯಿಂದ ಹೊರಟ ಮಾತುಗಳನ್ನು ಕೇಳಿ , ಆಘಾತವಾಯಿತು. ಪ್ರಪಂಚದಲ್ಲಿ ನ್ಯಾಯವಿಲ್ಲ ಎಂದು ದೃಢವಾಯಿತು. ಕೇವಲ ೭೦ ವರ್ಷಗಳ ಹಿಂದೆ , ತಾವು ಪಟ್ಟ ಪಾಡನ್ನು ಇಷ್ಟು ಬೇಗ ಮರೆತಿರುವ ಈ ಜನಗಳ ಬಗ್ಗೆ ಏನು ಹೇಳಬೇಕೋ ತಿಳಿಯದಾಗಿದೆ.
    ಉಮಾ

    Like

  3. ನಿಮ್ಮ ಲೇಖನದಲ್ಲಿನ ಚಿತ್ರಗಳನ್ನು ಕಾಣಬಹುದಾಗಿದ್ದಿದ್ದರೆ ಇನ್ನೂ ಚೆನ್ನಾಗಿರುತಿತ್ತು!!

    Like

    • ಪ್ರೇಮಲತಾ, ಲೇಖನಕ್ಕೆ ಪೂರಕವಾಗುವ ಚಿತ್ರಗಳನ್ನೇನೋ ಏರಿಸಿದ್ದಾರೆ. ಆದರೆ ಅವನ್ನು ಲೇಖನದ ಜೊತೆ ನೋಡಲು ಸಾಧ್ಯವಾಗುತ್ತಿಲ್ಲ. ಇಲ್ಲಿರುವ ತಾಂತ್ರಿಕ ತೊಂದರೆ ತಿಳಿಯುತ್ತಿಲ್ಲ. ಈ ಸ್ಥಳದ ಮಹಾತ್ಮೆ ನಿಜಕ್ಕೂ ಹೃದಯ ಕಲಕುವಂತಹದು. ನಂಬಲಾಗದ ಹೇಯ ಕೃತ್ಯದ ಕೇಂದ್ರವಾಗಿದ್ದ ಈ ಜಾಗವನ್ನು ಈಗ ನೋಡಿದರೆ, ಇಲ್ಲಿನ ಸುಂದರ ಮತ್ತು ರಮಣೀಯವಾದ ವಾತಾವರಣದಲ್ಲಿ, ಮನ ಆ ಕೃತ್ಯದ ಪಿತೂರಿ ಇಲ್ಲಿ ನಡೆಯಿತೆಂದು ಒಪ್ಪುವುದಿಲ್ಲ.
      ಉಮಾ

      Like

  4. ವೈಚಾರಿಕ ಪ್ರವಾಸಿ ಲೇಖನ. ಮತ್ತೆ ಮನ ತಟ್ಟಿದ್ದೀರಿ.
    ಮತ್ತೇನು ಬರೆದಿರಿ, ಇನ್ನೆಲ್ಲಿಗೆ ಭೇಟಿಯಿತ್ತಿರಿ ಅಂತ ಇತ್ತೀಚೆಗೆ ನಾನು ಕೇಳಿದ ಪ್ರಶ್ನೆಗೆ ಉತ್ತರವೂ ಸಿಕ್ಕಿತು!!!

    Like

  5. ಉಮಾ ಅವರ ಲೇಖನ ಎಲ್ಲರ ಮನಸ್ಸನ್ನು ತಟ್ಟುವದಲ್ಲದೆ ಎಲ್ಲರ ಕರುಳನ್ನು ಹಿಂಡುವ ಶಕ್ತಿಯುಳ್ಳದ್ದಾಗಿದೆ ಎನ್ನುವದರಲ್ಲಿ ಸಂದೇಹವಿಲ್ಲ. ಈ ಸಾಮೂಹಿಕ ನರಹತ್ಯೆ (holocaust) ಸಂಬಂಧದ ವಿಷಯವೆಲ್ಲ ಹೀಗೇ. ನಾವು ಕೆಲ ವರ್ಷದ ಕೆಳಗೆ Sachsenhausen (ಶಾಕ್ಸೆನ್ಹೋಸೆನ್) ಕ್ಯಾಂಪಿಗೆ ಭೆಟ್ಟ್ ಕೊಟ್ಟಾಗಲೂ ನಮ್ಮ ಮನಸ್ಸು ಭಾರವಾಗಿತ್ತು. ಮನುಷ್ಯನ ಮನಸ್ಸನ್ನು ತಿಳಿಯುವದು ಕಷ್ಟ ಎನ್ನುವದಕ್ಕೆ ಅವರ ಲೇಖನದಲ್ಲಿ ಆ ನರಹತ್ಯೆ ಬಿಟ್ಟು ಇನ್ನೊಂದು ನಿದರ್ಶನವಿದೆ. Now boot is on the other foot ಎನ್ನುವಂತೆ ಲೇಖನದ ಕೊನೆಯಲ್ಲಿ ಬಂದ ಆ ಯಹೂದಿ ಮಹಿಳೆ ಪ್ಯಾಲಸ್ಟೀನಿನ ಅಸ್ತಿತ್ವವನ್ನೇ ಅಲ್ಲಗಳೆದುದು! ಎಂಥ ವಿಪರ್ಯಾಸ. ಮಕ್ಕಳೂ ತಿಳಿದುಕೊಳ್ಳಲೆಂದು ಇವೆಲ್ಲ ಕಾನ್ಸೆಂಟ್ರೇನ್ ಕ್ಯಾಂಪ್ ಗಳಿಗೆ ಪ್ರವೇಶ ಶುಲ್ಕವಿರುವದಿಲ್ಲ. ಮನುಷ್ಯತ್ವಕ್ಕೆ ಎಲ್ಲರ ಹೃನ್ಮನಗಳಲ್ಲಿ ಪ್ರವೇಶವಿರುವದಿಲ್ಲವಲ್ಲ, ಎಂದೆನಿಸುತ್ತದೆ.

    Like

  6. ಶ್ರೀಮತಿ ಉಮಾ ಅವರೇ,
    ನಿಮ್ಮ ಲೇಖನದಿಂದ ನೀವು ಇತ್ತೀಚೆಗೆ ಬರ್ಲಿನ್ನಿಗೆ ಭೇಟಿ ನೀಡಿದಿರೆಂದು ತಿಳಿಯಿತು. ಆ ಪಟ್ಟಣದ ವಾಂಜ಼ೀ ಭವನದ ಚಾರಿತ್ರಿಕ ಸಂಗತಿ ತಿಳಿಯಿತು. ಆ ಭವನದಲ್ಲಿ ಹಿಟ್ಲರ್ ತನ್ನ ಎಸ್ಸೆಸ್ ಅಧಿಕಾರಿಗಳೊಂದಿಗೆ ತನ್ನ ಸಭೆ ನಡೆಸುತ್ತಿದ್ದನೆಂಬುದು ತಿಳಿಯಿತು. ಈ ಹೇಯ ಕೃತ್ಯಗಳನ್ನು ಕಾರ್ಯಗತಮಾಡಲು ಜರ್ಮನಿಯ ಉತ್ತರ ಗಡಿಯ ಸಮೀಪದಲ್ಲಿದ್ದ ಪೋಲೆಂಡಿನ ಕ್ರಾಕೊವ್ ಎಂಬ ಜಿಲ್ಲೆಯ ಆಶ್ವಿಟ್ಸ್ ಮತ್ತು ಬರ್ಕನಾವ್ ಎಂಬಲ್ಲಿ ನಾಜ಼ಿ ಅಧಿಕಾರಿಗಳು ಹೇಯಕೃತ್ಯದ ಕಾರ್ಯಾಗಾರಗಳನ್ನು ನಿರ್ಮಿಸಿ ಅಲ್ಲಿ ಅನೇಕ ಲಕ್ಷಗಟ್ಟಳೆ ಯಹೂದ್ಯರನ್ನೂ, ಜಿಪ್ಸಿ ಜನಾಂಗದವರನ್ನೂ, ರಾಜಕೀಯ ಸೆರೆಯಾಳುಗಳನ್ನೂ ಮತ್ತು ಅಂಗವಿಕಲರನ್ನೂ ವಿಷವಾಯುವಿನಿಂದ ಹತ್ಯಗೊಳಿಸಿ ಅವರ ಶವಗಳನ್ನು ದಹನಗೊಳಿಸುವ ಹತ್ಯಾಗಾರಗಳನ್ನು ನಿರ್ಮಿಸಿದ್ದನೆಂಬುದು ಎಲ್ಲರಿಗೂ ತಿಳಿದ ಅಥವ ತಿಳಿಯಬೇಕಾದ ವಿಶಯ. ಈ ಜಾಗಗಳಿಗೆ ಇತ್ತೀಚೆಗೆ ಹೋದ ತಿಂಗಳು ಜೂನಿನಲ್ಲಿ ನಾನು ನನ್ನ ಪತ್ನಿ ಪದ್ಮಳೊಂದಿಗೆ ಭೇಟಿಮಾಡಿದ್ದೆವು. ಈ ಜಾಗಗಳನ್ನು ಈಗ ಪ್ರದರ್ಶಣಾಲಯಗಳಾಗಿ ಮಾರ್ಪಡಿಸಲಾಗಿವೆ. ಇಲ್ಲಿಗೆ ಬಂದಿದ್ದ ನೂರಾರು ಪ್ರವಾಸಿಗರು (ನಾವೂ ಒಳಗಂಡು) ಅತ್ಯಂತ ಭಾವುಕರಾಗಿ ಅತಿಮೌನದಿಂದ ಆ ಹೇಯಗೃಹಗಳನ್ನು ವೀಕ್ಷಿಸುತ್ತಿದ್ದರು.
    -ರಾಜಾರಾಮ ಕಾವಳೆ.

    Like

  7. Uma awarige Namaskar. Nimma lekhan odidagye naanu kooda nammondige Germany deshakke bhetti kotta hage bhasavaayiti. Yella vivaragalu kanmunde Banda haage bhasavaayitu.
    Dhanyavadagalu.
    Aravind

    Like

Leave a reply to premalatha B Cancel reply

This site uses Akismet to reduce spam. Learn how your comment data is processed.